Tuesday, December 30, 2008

ಇವರು ನಮಗೆ ಬೇಕಾ ?

ರಾಜ್ಯ ವಿಧಾನ ಸಭೆಯ ಎಂಟು ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಭಾರತೀಯ ಜನತಾ ಪಾರ್ಟಿ ಎಂಟು ಕ್ಷೇತ್ರಗಳಲ್ಲಿ ಜಯಬೇರಿ ಭಾರಿಸಿದೆ. ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಗೆದ್ದಿದೆ. ಕಾಂಗ್ರೆಸ್ ಸಂಪೂರ್ಣವಾಗ್ತಿ ನೆಲ ಕಚ್ಚಿದೆ. ಈ ಫಲಿತಾಂಶ ಅನಿರೀಕ್ಷಿತವೇನಲ್ಲ. ಫಲಿತಾಂಶ ಬರುವುದಕ್ಕೆ ಮೊದಲು ಈ ಫಲಿತಾಂಶವನ್ನು ಸ್ವೀಕರಿಸಲು ರಾಜಕೀಯ ಪಕ್ಷಗಳು ಮಾನಸಿಕವಾಗಿ ಸಿದ್ಧವಾಗಿದ್ದವು. ಯಾಕೆಂದರೆ ಹಣ ಹೆಂಡ ಮುಖ್ಯವಾದ ಚುನಾವಣೆಯಲ್ಲಿ ಸಿದ್ಧಾಂತ ಮತ್ತು ನಂಬಿಕೆಗಳಿಗೆ ಯಾವ ಬೆಲೆಯೂ ಇರುವುದಿಲ್ಲ.

ಹಿರಿಯ ರಾಜಕೀಯ ನಾಯಕರೊಬ್ಬರು ಈ ಚುನಾವಣೆಯಲ್ಲಾದ ವೆಚ್ಚದ ಬಗ್ಗೆ ಮಾತನಾಡುತ್ತಿದ್ದರು. ಅವರ ಪ್ರಕಾರ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಯೂಬ್ಬ ವೆಚ್ಚ ಮಾಡಿದ ಹಣ ಸುಮಾರು ೨೦ ಕೋಟಿ ! ಈ ೨೦ ಕೋಟಿ ಹಣ ಎಲ್ಲಿಂದ ಬಂತು ? ಇದೇನು ಬೆವರು ಸುರಿದ ದುಡಿದ ಹಣವಾ ? ಸಾಧ್ಯವೇ ಇಲ್ಲ. ಮೋಸ, ವಂಚನೆ ಇಲ್ಲದೇ ಈ ಇಷ್ಟು ಹಣವನ್ನು ವೆಚ್ಚ ಮಾಡುವುದು ಸಾಧ್ಯವಿಲ್ಲ. ಯಾರೋ ಕೋಟ್ಯಾಧಿಪತಿ ಅಭ್ಯರ್ಥಿ ಪರವಾಗಿ ವೆಚ್ಚ ಮಾಡಿದ ಎಂದುಕೊಳ್ಳೋಣ. ಆತನೇನು ಯಾವುದೇ ಲಾಭವಿಲ್ಲದೇ ಹಣವನ್ನು ವ್ಯಯಿಸುತ್ತಾನಾ ? ಇಲ್ಲ. ರಾಜಕಾರಣಿಗಳ ಪರವಾಗಿ ಹಣ ವೆಚ್ಚ ಮಾಡುವವರಿಗೆ ಇದೊಂದು ಬಂಡವಾಳ ಹೂಡಿಕೆ ಅಷ್ಟೇ. ತಾವು ಫೈನಾನ್ಸ್ ಮಾಡಿದ ಅಭ್ಯರ್ಥಿ ಆರಿಸಿ ಬಂದ ಮೇಲೆ ನೂರು ಪಟ್ಟು ಹಣ ಬಾಚಲು ಅವಕಾಶ ಇರುತ್ತದೇ ಎಂಬ ಕಾರಣಕ್ಕೆ ಅವರು ಹಣ ಹೂಡಿಕೆ ಮಾಡುವುದು ಸ್ಪಷ್ಟ.

ಈ ಬಾರಿ ಆರಿಸಿ ಬಂದ ಅಭ್ಯರ್ಥಿಗಳ ಮುಖವನ್ನು ಒಮ್ಮೇ ನೋಡಿ. ಆಗ ನಿಮಗೆ ಸತ್ಯ ದರ್ಶನವಾಗುತ್ತದೆ. ವಸಂತ ಸ್ನೋಟಿಕರ್ ಮಗ ಆನಂದ ಅಸ್ನೋಟಿಕರ್, ವಿಶ್ವನಾಥ್ ಕತ್ತಿ ಮಗ ಉಮೇಶ್ ಕತ್ತಿ, ಗೋಕಾಕದ ಸಾವುಕಾರ ಜಾರಕೀಹೊಳಿ, ದೇವೇಗೌಡರ ಸೊಸೆ ಅನಿತಾ ಕುಮಾರಸ್ವಾಮಿ, ಸಿದ್ಧರಾಜು ಹೆಂಡತಿ ಕಲ್ಪನಾ ಸಿದ್ಧರಾಜು, ಇವರೆಲ್ಲ ಉಪ ಚುನಾವಣೆಯಲ್ಲಿ ಅಯ್ಕೆಯಾದವರು. ಇವರಲ್ಲಿ ಕೆಲವರಿ ಹಣ ಮಾತ್ರ ಬಂಡವಾಳ. ಇನ್ನೂ ಕೆಲವರಿಗೆ ಹಣದ ಜೊತೆ ಕುಟುಂಬವೇ ಬಂಡವಾಳ.

ಇದನ್ನೆಲ್ಲ ನೋಡಿದರೆ ಭಾರತೀಯ ಜನತಂತ್ರ ವ್ಯವಸ್ಥೆಯ ಬಗ್ಗೆ ಅಪನಂಬಿಕೆ ಬರುವುದಿಲ್ಲವಾ ? ಈಗ ಪಕ್ಷಗಳತ್ತ ನೋಡಿ. ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನೆಹರೂ ಕುಟುಂಬದ ಮೇಲೆ ಅವಲಂಬಿತವಾಗಿದೆ. ಈ ಪಕ್ಷದಲ್ಲಿ ಇರುವವರು ಬಾಲಬಡುಕರು, ಭಟ್ಟಂಗಿಗಳು. ಈ ಪಕ್ಷದ ಬಹುತೇಕ ನಾಯಕರಿಗೆ ಸ್ವಂತ ವ್ಯಕ್ತಿತ್ವವೇ ಇಲ್ಲ. ರಾಜ್ಯದ ಬಹುತೇಕ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಅವರ ಮನೆಯಲ್ಲಿರುವ ಮನುಷ್ಯರ ಅಥವಾ ಸಾಕು ಪ್ರಾಣಿಯ ದರ್ಶನ ಸಿಕ್ಕರೂ ಸಾಕು ಎಂದು ಕಾಯುತ್ತಿರುತ್ತಾರೆ. ಇಡೀ ಪಕ್ಷ ಸೋನಿಯಾ ನಿವಾಸದಲ್ಲಿ ಕಾಲು ಮುರಿದುಕೊಂಡು ಬಿದ್ದಿದೆ.
ಇನ್ನು ಜೆಡಿಎಸ್. ಇದನ್ನು ಪಕ್ಷ ಎನ್ನಬೇಕೋ ಕುಟುಂಬ ಎನ್ನಬೇಕೋ ಅರ್ಥವಾಗುವುದಿಲ್ಲ. ದೇವೇಗೌಡರ ಮಟ್ಟಿಗಂತೂ ಪಕ್ಷ ಬೇರೆ ಅಲ್ಲ ಕುಟುಂಬ ಬೇರೆ ಅಲ್ಲ. ಕುಮಾರಸ್ವಾಮಿ ಅವರಿಗೆ ತಮ್ಮ ಹೆಂಡತಿಯನ್ನು ಚುನಾವಣಾ ಕಣಕ್ಕೆ ಇಳಿಸುವುದು ಒಂದುಸ್ಸ್ಟ್ರಾಟಜಿ ಮಾತ್ರ. ಒಂದು ರಾಜಕೀಯ ಪಕ್ಷ ಒಂದು ಕುಟುಂಬದ ಆಸ್ತಿಯಲ್ಲ ಎಂಬ ಸಾಮಾನ್ಯ ಜ್ನಾನ ಕೂಡ ಅವರಿಗೆ ಇದ್ದಂತಿಲ್ಲ.
ಬಿಜೆಪಿ ಎಂಬ ಪಕ್ಷ. ಇದರ ನಾಯಕರಾದ ಯಡಿಯೂರಪ್ಪ. ತಮ್ಮ ಪಕ್ಷದ ತತ್ವ ಸಿದ್ದಾಂತ ನಂಬಿದವರು ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಹೇಳುತ್ತಾರೆ, ಆದರೆ, ಚೆನ್ನಿಗಪ್ಪ, ಆನಂದ್ ಅಸ್ಣೋಟಿಕರ್ ಮೊದಲಾದವರನ್ನು ಪಕ್ಷಕ್ಕೆ ತೆಗೆದುಕೊಳ್ಳುವಾಗ ಕನಿಷ್ಠ ನಾಚಿಕೆ ಕೂಡ ಆಗುವುದಿಲ್ಲ. ಇವರೆಲ್ಲ ನಿಮ್ಮ ಪಕ್ಷದ ತತ್ವ ಸಿದ್ದಾಂತವನ್ನು ನಂಬಿದವರಾ ಎಂದು ಪ್ರಶ್ನಿಸಿದರೆ ಪೆಚ್ಚು ನಗೆ ನಗುತ್ತಾರೆ.
ಅಧಿಕಾರ ನಮ್ಮನ್ನು ಎಷ್ಟು ನಿರ್ಲಜ್ಜರನ್ನಾಗಿ, ಮುಖೇಡಿಯನ್ನಾಗಿ ಮಾಡುತ್ತದೆ ನೋಡಿ. ಅಧಿಕಾರ ಪಡೆಯಲು ಈ ಜನ ಏನು ಮಾಡುವುದಕ್ಕೂ ಹೇಸರು. ಇವರ ಬಗ್ಗೆ ಮಾತನಾಡವುದಕ್ಕೂ ಬೇಸರವಾಗುತ್ತದೆ.

Tuesday, December 16, 2008

ನಾವು ಮಾತನಾಡುವವರು, ಮಾತನಾಡುತ್ತಲೇ ಇರುತ್ತೇವೆ ....

ಇಂದು ನಾನು ಪತ್ರಿಕೋದ್ಯಮದ ಬಗ್ಗೆ ಮಾತನಾಡುತ್ತೇನೆ. ಹಾಗೆ ಮುಖ್ಯವಾಗಿ ದೃಶ್ಯ ಮಾಧ್ಯಮದ ಬಗ್ಗೆ.
ಮುಂಬೈನ ಉಗ್ರಗಾಮಿಗಳ ಅಟ್ಟಹಾಸದ ನಂತರ ಎಲ್ಲರೂ ಮಾಧ್ಯಮದ ಹೊಣೆಗಾರಿಕೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಆರೋಗ್ಯಪೂರ್ಣ ಬೆಳವಣಿಗೆ. ಆದರೆ ಇಲ್ಲಿ ನಾವು ಗಮನಿಸಬೇಕಾದ ಕೆಲವು ವಿಷಯಗಳಿವೆ. ಯಾಕೆ ಮಾಧ್ಯಮಗಳು ಹೊಣೆ ಅರಿತು ವರ್ತಿಸುತ್ತಿಲ್ಲ ? ಈ ಪ್ರಶ್ನೆಯನ್ನು ಗಮನಿಸಿ. ಮೊದಲನೆಯದಾಗಿ ಮಾಧ್ಯಮ ಇಂದು ಹೊಣೆಗೇಡಿಯಾಗಿದೆ ಎಂಬುದು ಈ ಪ್ರಶ್ನೆಯಲ್ಲೇ ಇರುವ ಹೇಳಿಕೆ. ಈ ಬಗ್ಗೆ ಯಾರ ವಿರೋಧವೂ ಇರಲಾರದು. ಆದರೆ ಯಾಕೆ ಹೀಗಾಗಿದೆ ?
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಇವತ್ತಿನ ಪತ್ರಿಕೋದ್ಯಮಿಗಳಿಗೆ ಬದ್ಧತೆಯ ಕೊರತೆ ಎದ್ದು ಕಾಣುತ್ತಿದೆ. ಅವ್ರಿಗೆ ಪೂರ್ವ ಸಿದ್ಧತೆ ಇಲ್ಲ. ಪತ್ರಿಕೆಯಲ್ಲಿ ಕೆಲಸ ಮಾಡುವುದೆಂದೆಂದರೆ, ಐಟಿ ಬಿಟಿ ಕಂಪೆನಿಯಲ್ಲಿ ಕೆಲಸ ಮಾಡಿದಂತೆ ಅಲ್ಲ. ಇಲ್ಲಿ ಎಲ್ಲವನ್ನೂ ಕಂಪೂಟರುಗಳ ಮೂಲಕ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಪತ್ರಿಕೋದ್ಯಮ ಮನಸ್ಸಿನ ಕೆಲಸ. ಅಲ್ಲಿ ತುಂಬಾ ವಿಭಿನ್ನವಾದ ಕ್ರಿಯಾಶೀಲತೆ ಬೇಕು. ಒಂದು ಘಟನೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ನೋಡುವ ಚಾಕಚಕ್ಯತೆ ಬೇಕು. ಇದು ಅಷ್ಟು ಸುಲಭವಾಗಿ ಧಕ್ಕುವುದಿಲ್ಲ. ನಿರಂತರ ಓದು ಚಿಂತನೆ ಇದ್ದರೆ ಮಾತ್ರ ಇಂಥಹ ಮನಸ್ಥಿತಿ ರೂಪಗೊಳ್ಳುತ್ತದೆ. ಆದರೆ ಇಂದು ಮಾಧ್ಯಮದಲ್ಲಿ ಕೆಲಸ ಮಾಡುವವರಲ್ಲಿ ಇಂತಹ ಮನೋಧರ್ಮವೇ ಇಲ್ಲ..
ನಾನು ನಮ್ಮ ವಾಹಿನಿ ಪ್ರಾರಂಭವಾದ ದಿನದಿಂದ ಕ್ರೆಡಿಬಿಲಿಟಿಯ ಬಗ್ಗೆ ನಮ್ಮ ಹುಡುಗರ ಜೊತೆ ಮಾತನಾಡುತ್ತಲೇ ಇದ್ದೇನೆ. ವಿಶ್ವಾರ್ಹತೆ ಎಷ್ತು ಮುಖ್ಯ ಎಂದು ಹೇಳುತ್ತಲೇ ಇದ್ದೇನೆ. ಆದರೆ ನನ್ನ ಮಾತು ಯಾರಿಗೆ ಅರ್ಥವಾದಂತೆ ಕಾಣುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ನನಗೆ ಅನ್ನಿಸುವುದೆಂದರೆ, ಇಂದು ಮಾಧ್ಯಮ ಉಳಿದೆಲ್ಲ ಮಾಧ್ಯಮದಂತೆ ಬದಲಾಗಿದೆ, ಇಲ್ಲಿ ಕೆಲಸ ಮಾಡುವವರಿಗೂ ಯಾವುದೋ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುವವರಿಗೂ ಯಾವುದೇ ವ್ಯತ್ಯಾಸ ಉಳಿದಿಲ್ಲ ಎಂದು !
ಜೊತೆಗೆ ಇಂದಿನ ಪತ್ರಿಕೋದ್ಯಮಿಗಳಿಗೆ ಓದುವ ಅಭಿರುಚಿ ಕಡಿಮೆ. ಒಬ್ಬ ಪತ್ರಿಕೋದ್ಯಮಿ ಇಪ್ಪತ್ನಾಲ್ಕು ಗಂಟೆ ಪತ್ರಿಕೋದ್ಯಮಿಯೇ. ಆತ ಕನಿಷ್ಟ ದಿನಕ್ಕೆ ಎರಡು ಮೂರು ಗಂಟೆ ಓದಬೇಕು. ಕರ್ನಾಟಕದಲ್ಲಿ ಪತ್ರಿಕೋದ್ಯಮ ಮಾಡುವವರಿಗೆ ಇಲ್ಲಿನ ಬದುಕು, ಸಾಹಿತ್ಯ ಸಂಸ್ಕೃತಿ, ರಾಜಕೀಯ ಇತಿಹಾಸ, ಸಾಮಾಜಿಕ ಸಮಸ್ಯೆ, ಜನಪರ ಚಳವಳಿಗಳ ಬಗ್ಗೆ ಗೊತ್ತಿರಬೇಕು. ಆದರೆ ದೃಶ್ಯ ಮಾಧ್ಯಮದಲ್ಲಿ ಇರುವವರಂತೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮ ಬಾಹ್ಯ ಸೌಂದರ್ಯವೇ ಮುಖ್ಯ ಎಂದುಕೊಂಡಿರುತ್ತಾರೆ. ಸೌಂದರ್ಯದ ಅಹಂಕಾರ ಅವರ ಕ್ರಿಯಾಶೀಲತೆಯನ್ನು ಕೊಂದು ಬಿಡುತ್ತದೆ ಎಂಬ ಸಾಮಾನ್ಯ ಜ್ನಾನವೂ ಅವರಿಗೆ ಇರುವುದಿಲ್ಲ.
ಜೊತೆಗೆ ನಮಗೆ ಮಾತನಾಡುವುದು ಗೊತ್ತಿದೆ. ಕೇಳಿಸಿಕೊಳ್ಳುವುದು ಗೊತ್ತಿಲ್ಲ. ದೃಶ್ಯ ಮಾದ್ಯಮದಲ್ಲಿ ಇರುವವರು ಮಾತನಾಡುವುದೇ ತಮ್ಮ ಕಾಯಕ ಎಂದುಕೊಂಡಿರುತ್ತಾರೆ. ಮೌನ ನಮಗೆ ನೀಡುವ ಕ್ರಿಯಾಶೀಲತೆ ಅರಿವು ಅವರಿಗೆ ಇರುವುದಿಲ್ಲ. ಇದನ್ನು ಯಾರನ್ನೂ ಉದ್ದೇಶಿಸಿ ನಾನು ಹೇಳುತ್ತಿಲ್ಲ. ನನ್ನನ್ನು ಸೇರಿದಂತೆ ಎಲ್ಲರೂ ಈ ಬಗ್ಗೆ ಯೋಚಿಸಬೇಕಾಗಿದೆ.


Thursday, December 4, 2008

ಧರ್ಮವನ್ನು ಬಿಟ್ಟು ಬನ್ನಿ............

ಒಂದೆಡೆ ಬಂದೂಕಿನ ಸದ್ದು. ಮತ್ತೊಂದೆಡೆ ಹರಿಯುವ ರಕ್ತ. ಯಾವುದೋ ಮೂಲೆಯಲ್ಲಿ ಕೇಳುವ ಆಕ್ರಂದನ. ಎಲ್ಲರೂ ಗೋರಿಗಳನ್ನು ಕಟ್ಟಲು ಉತ್ಸಾಹ ತೋರಿಸುತ್ತಿದ್ದಾರೆ. ಜೀವ ಕೊಡಲು ಸಾಧ್ಯವಿಲ್ಲದವರು ಜೀವ ತೆಗೆಯಲು ಮುನ್ನುಗ್ಗುತ್ತಿದ್ದಾರೆ. ಇಂಥಹ ಸ್ಥಿತಿಯಲ್ಲಿ ದೇಶದ ಆರೋಗ್ಯಪೂರ್ಣ ಮನಸ್ಸುಗಳು ಮೌನವಾಗಿ ಅಳುತ್ತಿವೆ.

ನನಗೆ ಎಲ್ಲಿ ಹೋದರೂ ಅಳುವ ಮುಖಗಳೇ ಕಾಣುತ್ತವೆ. ಈ ಮುಖಗಳನ್ನು ನೋಡಿದವನು ಅವರ ಕಣ್ಣುಗಳನ್ನು ನೋಡುತ್ತೇನೆ. ಆ ಕಣ್ಣುಗಳಲ್ಲಿ ಇರುವುದು ಏನು ? ಭಯವೆ ? ಆತಂಕವೆ ? ಹತಾಶೆಯೆ ? ಈ ಪ್ರಶ್ನೆಗಳಿಗೆ ಉತ್ತರಕ್ಕಾಗಿ ನಾನು ತಡಕಾಡುತ್ತೇನೆ. ಆಗ ಮತ್ತೆ ಕಣ್ಣುಗಳನ್ನೇ ನೋಡುತ್ತೇನೆ.

ಆಗ ನನಗೆ ನಾನು ಮಾಡುವ ಕೆಲಸದ ಬಗ್ಗೆ ಜಿಗುಪ್ಸೆ ಮೂಡುತ್ತದೆ. ನಾನು ಪ್ರೀತಿಸುತ್ತ ಬಂದ, ನನಗೆ ಅನ್ನ ನೀಡುವ ಪತ್ರಿಕೋದ್ಯಮ ಪರಕೀಯ ಅನ್ನಿಸತೊಡಗುತ್ತದೆ. ನಾನು ನನ್ನ ಮನಸ್ಸು ಹೇಳುತ್ತಿರುವುದನ್ನು ಕೇಳುತ್ತಿದ್ದೇನೆಯೆ ? ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವತ್ತ ನನ್ನ ಪತ್ರಿಕೋದ್ಯಮ ಕೆಲಸ ಮಾಡುತ್ತಿದೆಯೇ ? ಹೀಗೆ ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತೇನೆ. ಇದಕ್ಕೆ ದೊರಕುವ ಉತ್ತರ ನನ್ನನ್ನು ಇನ್ನಷ್ಟು ಹತಾಶನನ್ನಾಗಿ ಮಾಡುತ್ತದೆ.

ಈ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಯನ್ನು ಇಂದು ವಸ್ತು ನಿಷ್ಠವಾಗಿ ನೋಡುವ ಸ್ಥಿತಿಯಲ್ಲಿ ಮಾಧ್ಯಮ ಇಲ್ಲ. ಭಯೋತ್ಪಾದಕ ಚಟುವಟಿಕೆಯ ಬಗ್ಗೆ ಹೆಚ್ಚು ಕ್ರಿಟಿಕಲ್ ಆಗಿದ್ದರೆ, ಭಾರತೀಯ ಜನತಾ ಪಾರ್ಟಿಯಂತಹ ಪಕ್ಷಕ್ಕೆ ಅನುಕೂಲವಾಗುತ್ತದೆ. ಕ್ರಿಟಿಕಲ್ ಆಗಿರದಿದ್ದರೆ, ಆತ್ಮಧ್ರೋಹ ಮಾಡಿಕೊಂಡಂತೆ ಅನ್ನಿಸುತ್ತದೆ. ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ, ಮುಸ್ಲಿಂ ಭಯೋತ್ಪಾದಕತೆ ವಿಶ್ವವನ್ನೇ ನಡುಗಿಸುತ್ತದೆ. ಲಷ್ಕರೆ ತೊಯ್ಬಾದಂತಹ ಸಂಘಟನೆಗಳು ರಕ್ತದ ಒಕಳಿಯಾಡುತ್ತ ಆ ಅಲ್ಲಾನೇ ತಲೆ ಬಗ್ಗಿಸುವಂತೆ ಮಾಡುತ್ತಿದೆ. ಆದರೆ ಈ ಮಾತನ್ನು ಹೇಳಿದ ತಕ್ಷಣ ಬಿಜೆಪಿ ಸಂತೋಷದಿಂದ ಬೀಗತೊಡಗುತ್ತದೆ. ಆಗ ಬಿಜೆಪಿ ನಮ್ಮ ಮುಂದೆ ತಂದಿಟ್ಟಿರುವ ಅಪಾಯ ಕಾಣತೊಡಗುತ್ತದೆ. ಹಾಗೆ ಮುಸ್ಲಿಂ ಭಯೋತ್ಪಾದಕತೆಯ ಬಗ್ಗೆ ಮೌನವಾಗಿ ಉಳಿದುಬಿಡುವ ಕಾಂಗ್ರೆಸ್ ಮತ್ತು ಎಡ ಪಕ್ಷಗಳು. ಇವರಿಗೆ ಮುಸ್ಲಿ ಮತದ ಬ್ಯಾಂಕನ್ನು ಬಿಟ್ಟು ಆಲೋಚನೆ ಮಾಡಲು ಸಾಧ್ಯವಾಗುವುದೇ ಇಲ್ಲ.
ಈ ನಡುವೆ ದೇಶದಲ್ಲಿ ವೈಚಾರಿಕ ಮತ್ತು ಸಾಹಿತ್ಯಿಕ ವಲಯ ಈ ಬಗ್ಗೆ ದಿವ್ಯ ಮೌನ ಒಹಿಸಿರುವುದು ಆಶ್ಚರ್ಯವನ್ನು ಮತ್ತು ಆಘಾತವನ್ನು ಉಂಟು ಮಾಡುತ್ತದೆ. ಎಡ ಪಂಥೀಯ ವಿಚಾರಧಾರೆಯಿಂದ ಪ್ರಭಾವಿತರಾದ ವೈಚಾರಿಕರು ಮತ್ತು ಸಾಹಿತಿಗಳು ಇಂಥಹ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದರೆ ತಮ್ಮ ವೈಚಾರಿಕತೆಗೆ ಮಂಕು ಕವಿಯುತ್ತದೆ ಎಂದುಕೊಂಡಿದ್ದಾರೆಯೆ ? ಪಾಕಿಸ್ಥಾನ ಪ್ರಚೋದಿತ ಭಯೋತ್ಪಾದಕ ಚಟುವಟಿಕೆಯನ್ನು ಧರ್ಮವನ್ನು ಹೊರತುಪಡಿಸಿ ನೋಡುವುದಕ್ಕೆ ನಮ್ಮ ವೈಚಾರಿಕ ವರ್ಗಕ್ಕೂ ಯಾಕೆ ಸಾಧ್ಯವಾಗುತ್ತಿಲ್ಲ ?
ಈ ಭಯೋತ್ಪಾದಕ ಚಟುವಟಿಕೆಯನ್ನು ಭಯೋತ್ಪಾದಕ ಚಟುವಟಿಕೆಯನ್ನಾಗಿ ನಾವು ನೋಡಬೇಕು. ಇದು ಮುಸ್ಲಿಂ ರಾಷ್ಟ್ರವೊಂದರಿಂದ ಪ್ರಚೋದಿತ ಎಂಬುದು ನಿಜವಾದರೂ ಅದು ಮುಖ್ಯವಲ್ಲ. ಆದರೆ ನಮ್ಮ ರಾಜಕೀಯ ಪಕ್ಷಗಳಿಗೆ ಭಯೋತ್ಪಾದಕ ಚಟುವಟಿಕೆಗಿಂತ ಇದನ್ನು ಮುಸ್ಲಿಂ ರಾಷ್ಟ್ರವೊಂದರಿಂದ ಪ್ರಚೋದಿತರಾದ ಮುಸ್ಲಿಂ ಯುವಕರು ಮಾಡುತ್ತಾರೆ ಎಂಬುದೇ ಮುಖ್ಯವಾಗಿ ಬಿಡುತ್ತದೆ. ಹೀಗಾಗಿ ಇವರು ಈ ಘಟನೆಗೆ ಪ್ರಾಮಾಣಿಕವಾಗಿ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತಿಲ್ಲ. ನಮ್ಮ ವೈಚಾರಿಕ ವರ್ಗಕ್ಕೂ ಹಾಗೆ.
ನಾವು ಧರ್ಮ ಕೋಮು ಭಾವನೆಯನ್ನು ಬಿಟ್ಟು ಸಮಸ್ಯೆಯನ್ನು ನೋಡಬೇಕು. ಹಾಗಾದಾಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.

Saturday, November 29, 2008

ದೇವರ ಬಳಿ ಹೋಗುವುದು ಒಳ್ಳೆಯದು...

ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿ ಒಂದು ಅಧ್ಯಾಯ ಮುಗಿದಿದೆ. ಆದರೆ ಈ ಕಥೆ ಮುಗಿದಿಲ್ಲ. ಸುಮಾರು ೨೦೦ ಜನ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ರಕ್ಷಣಾ ಪಡೆಗಳು ನಡೆಸಿದ ಕಾರ್ಯಾಚರಣೆಯನ್ನು ನಾವು ಶ್ಲಾಘಿಸಲೇಬೇಕು. ಆದರೆ ಸಮಸ್ಯೆ ಇಲ್ಲಿಗೆ ಮುಗಿಯುವುದಿಲ್ಲ.
ಇಲ್ಲಿನ ರಾಜಕಾರಣಿಗಳು. ಇವರಿಗೆ ಮನುಷ್ಯರೆಲ್ಲ ಕಾಣುವುದು ಓಟುಗಳಾಗಿ. ಮತದ ರಾಜಕಾರಣವನ್ನು ಬಿಟ್ಟು ಯೋಚನೆ ಮಾಡದ ಜನ ಇವರು. ನಮ್ಮ ಯಡೀಯೂರಪ್ಪ ಅವರನ್ನೇ ತೆಗೆದುಕೊಳ್ಳಿ. ಇವರು ಇಂದು ಬೆಳಿಗ್ಗೆ ಭಯೋತ್ಪಾದಕರ ಗುಂಡಿಗೆ ಬಲಿಯಾದ ಸಂದೀಪ್ ಉನ್ನಿಕೃಷ್ಣನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಬಂದಿದ್ದರು. ಹೀಗೆ ಬಂದವರು ಅವರ ಶವದ ಮೇಲೆ ಹೂಗುಚ್ಛ ಇರಿಸಿ ಟಿವಿಗಳಿಗೆ ಬೈಟ್ ನೀಡಿ ಹೊರಟು ಬಿಟ್ಟರು. ಕನಿಷ್ಟ ಈ ಯೋಧನ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಯುವವರೆಗೆ ಇರುವ ವ್ಯವಧಾನ ಸಮಯ ಕೂಡ ಅವರಿಗೆ ಇರಲಿಲ್ಲ.
ಇನ್ನು ಶಿವರಾಜ್ ಪಾಟೀಲ್ ಎಂಬ ದೇಶದ ಗೃಹ ಸಚಿವರು. ಇವರಿಗೆ ಸೋನಿಯಾ ಗಾಂಧಿ ಅವರ ಸೆರಗು ಹಿಡಿದುಕೊಂಡು ಓಡಾಡುವುದೇ ಬಹುಮುಖ್ಯ ಕೆಲಸ. ದೇಶದ ಆಂತರಿಕ ಭದ್ರತೆಯ ದೋಷವನ್ನು ಸರಿಪಡಿಸುವುದಕ್ಕೂ ಸಮಯವಿಲ್ಲ. ಜೊತೆಗೆ ಇಂತಹ ಘಟನೆ ನಡೆದಾಗ ಮಾನ ಮರ್ಯಾದಿ ಇರುವ ಸಚಿವರಾಗಿದ್ದರೆ, ರಾಜೀನಾಮೆ ನೀಡಿ ಮನೆಗೆ ಹೋಗುತ್ತಿದ್ದರು. ಇವರು ಆ ಕೆಲಸವನ್ನು ಮಾಡಲಿಲ್ಲ. ಕಾಂಗ್ರೆಸ್ ವರಿಷ್ಠೆ ಏನು ಮಾಡಬಹುದು ಎಂದು ಕಾಯುತ್ತ ಕುಳಿತಿದ್ದಾರೆ. ಇಂತಹ ರಾಜಕಾರಣಿಗಳು ನಮ್ಮ ದೇಶವನ್ನು ಆಳುತ್ತಿದ್ದಾರೆ.
ಈ ಘಟನೆಯನ್ನೇ ನೋಡಿ. ಪಾಕಿಸ್ಥಾನದಲ್ಲಿ ತರಬೇತಿ ಪಡೆದ ಉಗ್ರಗಾಮಿಗಳು ಆರು ತಿಂಗಳ ಹಿಂದೆ ದೋಣಿಯಲ್ಲಿ ಬಂದು ಮುಂಬೈ ಸೇರುತ್ತಾರೆ. ಹೋಟೆಲ್ ನಲ್ಲಿ ತಮ್ಮ ಕೇಂದ್ರ ಸ್ಥಾಪಿಸುತ್ತಾರೆ. ಶಸ್ತ್ರಾಸ್ತ್ರಗಳನ್ನು ಸಲೀಸಾಗಿ ತಂದು ದಾಸ್ತಾನು ಮಾಡುತ್ತಾರೆ. ಇದು ನಮ್ಮ ಬೇಹುಗಾರಿಕಾ ಪಡೆಗೆ ತಿಳಿಯುವುದಿಲ್ಲ.
ನಮ್ಮ ರಾಜಕೀಯ ಪಕ್ಷಗಳಲ್ಲಿ ಬಿಜೆಪಿ ಇಂತಹ ವಿಚಾರಗಳಲ್ಲಿ ಹಿಂದೂ ಮತದ ಬ್ಯಾಂಕ್ ಅನ್ನು ಲಕ್ಶ್ಯದಲ್ಲಿರಿಸಿಕೊಂಡು ಮಾತನಾಡುತ್ತದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟು ವರ್ತಿಸುತ್ತದೆ. ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ, ಬಿಜೆಪಿ ಮುಸ್ಲಿರೆಲ್ಲ ಭಯೋತ್ಪಾದರು ಎಂದು ಹೇಳಿದರೆ, ಯಾವ ಮುಸ್ಲಿಮ್ ನೂ ಭಯೋತ್ಪಾದಕನಲ್ಲ ಎಂದು ಕಾಂಗ್ರೆಸ್ ವಾದಿಸುತ್ತದೆ. ಈ ಮೂಲಕ ಎರಡೂ ಪಕ್ಷಗಳು ಸುಳ್ಳಿನ ಮೇಲೆ ಅರಮನೆ ಕಟ್ಟಲು ಹೊರಡುತ್ತವೆ. ಇವರ ದೃಷ್ಟಿಯಲ್ಲಿ ದೇಶ ಎಂದರೆ ಏನು ಎಂಬುದೇ ತಿಳಿಯುವುದಿಲ್ಲ. ಬಿಜೆಪಿಗೆ ದೇಶ ಎಂದರೆ ಅತೀ ಭಾವುಕತೆ. ಕಾಂಗ್ರೆಸ್ ಪಕ್ಷಕ್ಕೆ ದೇಶ ಎಂದರೆ ಎಲ್ಲರೂ ತಮಗೆ ಬೇಕಾದಂತೆ ವರ್ತಿಸಬಹುದಾದ ಓಪನ್ ಫೀಲ್ಡ್. ಆದರೆ ಅದು ಹಾಗಲ್ಲ. ದೇಶ ಎಂದರೆ ಹಲವು ಭಾಷೆ ಮತ್ತು ಸಂಸ್ಕೃತಿಗಳನ್ನು ಒಳಗೊಂಡ ಒಂದು ವೈವಿದ್ಯಪೂರ್ಣ ಬದುಕಿನ ಮೊತ್ತ. ವಿಭಿನ್ನ ವಿಚಾರಧಾರೆ, ಹಿನ್ನೆಲೆ, ಧರ್ಮಗಳನ್ನು ಒಳಗೊಂಡವರು ಏಕತೆಯಿಂದ ಬದುಕುವ ತಾಣ.
ಮುಂಬೈನಲ್ಲಿ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದ ಉಗ್ರಗಾಮಿಯೊಬ್ಬ ವಾಹಿನಿಯೊಂದಕ್ಕೆ ನೀಡಿದ್ದ ಫೋನೋ ಕೇಳಿದೆ. ಅವನು ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ನಾವು ತಡೆಯುತ್ತೇವೆ ಎಂದು ಹೇಳಿದ್ದ, ಅವನಿಗೆ ಬದುಕಿಗಿಂತ ಇಸ್ಲಾಮ್ ದೊಡ್ದದಾಗಿತ್ತು. ಇಸ್ಲಾಮ್ ಧರ್ಮವನ್ನು ಉಳಿಸುವುದಕ್ಕಾಗಿ ಆತ ಜನರ ಕಗ್ಗೊಲೆ ಮಾಡಲು ಸಿದ್ಧನಾಗಿದ್ದ. ಯಾರು ಬದುಕಿಗಿಂತ ಧರ್ಮ ದೊಡ್ದದು ಎಂದುಕೊಳ್ಳುತ್ತಾರೋ ಅವರು ಅಯೋಗ್ಯರು. ನಮ್ಮ ಕಣ್ಣೆದುರಿಗಿರುವ ಜನರಿಗಿಂತ ಕಾಣದ ಅಲ್ಲಾ, ದೇವರುಗಳು ಮುಖ್ಯರಾದರೆ ಅವರು ಇಲ್ಲಿ ಬದುಕುವುದಕ್ಕೆ ಯೋಗ್ಯರಲ್ಲ. ರಕ್ತದ ಕಲೆಗಳ ಮೇಲೆ ಧರ್ಮವನ್ನು ಉಳಿಸಲು ಹೊರಟರೆ, ಅವರು ಇಲ್ಲಿರುವುದಕ್ಕಿಂತ ಆ ದೇವರ ಹೋಗುವುದು ಒಳ್ಳೆಯದು.

Friday, November 28, 2008

ಇದು ಮೌನದ ಸಮಯ.........


ಈ ಚಿತ್ರವನ್ನು ನೋಡಿ. ಜೀವ ಕೊಡುವ ಶಕ್ತಿ ಇಲ್ಲದ ನಮಗೆ ಜೀವ ತೆಗೆಯುವ ಹಕ್ಕು ಬರುವುದು ಹೇಗೆ ?
ಧರ್ಮ ದೇವರು ನಮಗೆ ಯಾಕೆ ಬೇಕು ?
ಯಾಕೆ ಮನುಷ್ಯ ಇಷ್ಟು ಕ್ರೂರಿ ಯಾಗುತ್ತಿದ್ದಾನೆ ? ಯಾಕೆ ಅವನಿಗೆ ಜೀವ ತೆಗೆಯಲು ಆಸೆ ?
ಇದು ಉತ್ತರ ಗೊತ್ತಿಲ್ಲದ ಪ್ರಶ್ನೆಗಳು.
ನಾವು ಅಪ್ಪಟ ಸುಳ್ಳುಗಾರರು. ನಮ್ಮ ಶಬ್ದಗಳು ಸುಳ್ಳು. ಮಾತುಗಳು ಸುಳ್ಳು. ಇಂತಹ ಸಂದರ್ಭದಲ್ಲಿ ಮಾತನಾಡಲು ಮನಸ್ಸಾಗುವುದಿಲ್ಲ. ಇದು ಮೌನದ ಸಮಯ. ನಮ್ಮ ಮನಸ್ಸುಗಳು ಹೆಪ್ಪುಗಟ್ಟಲಿ. ಮೌನ ಸ್ಥಾಯಿಯಾಗಲಿ. ನಾವೆಲ್ಲ ಮೌನವಾಗಿರೋಣ. ಆಗಲಾದರೂ ನಮ್ಮ ಪ್ರಶ್ನೆಗಳಿಗೆ ಉತ್ತರ ದೊರಕಬಹುದು. ದಯವಿಟ್ಟು ಮಾತನಾಡಬೇಡಿ. ನೀವು ಮಾತನಾಡಿದರೆ ಸುಳ್ಳಾಗುತ್ತೀರಿ. ನಿಮ್ಮ ತರ್ಕದ ಶಕ್ತಿಯನ್ನು ಪ್ರದರ್ಶಿಸಲು ಪ್ರಾರಂಭಿಸುತ್ತೀರಿ. ನಿಮ್ಮ ವೈಚಾರಿಕತೆಯ ಪ್ರದರ್ಶನ ಮಾಡಲು ಮುಂದಾಗುತ್ತೀರು. ತರ್ಕ ಮತ್ತು ವೈಚಾರಿಕತೆ ಸತ್ಯವಲ್ಲ. ಅದು ಸತ್ಯ ಹೀಗೆ ಎಂದು ಹೇಳುವ ಅಹಂಕಾರ. ಆದ್ದರಿಂದ ಇದು ಮೌನದ ಸಮಯ. ಬುದ್ದನಂತೆ ಧ್ಯಾನಿಸುವ ಸಮಯ. ನಾವೆಲ್ಲ ಎಚ್ಚರಗೊಳ್ಳುವ ಸಮಯ. ಎಚ್ಚರಗೊಳಿಸುವ ಸಮಯ.

Tuesday, November 25, 2008

ಛಿ....ಥೂ......ರಾಜಕಾರಣ.....!

ಇಂದು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಡಿ. ಸಿ. ತಮ್ಮಣ್ಣ ಭಾರತೀಯ ಜನತಾ ಪಾರ್ಟಿಯನ್ನು ಸೇರಿದರು. ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಿಂದ ತಮ್ಮಣ್ಣ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಪ್ರಕಟಿಸಿತು. ಚುನಾವಣೆಗೆ ಮೊದಲು ಇನ್ನೊಂದು ಅಪೇರೇಷನ್ ಕಮಲ ನಡೆದುಹೋಯಿತು.
ಕರ್ನಾಟಕದ ರಾಜಕಾರಣ ಯಾವ ಹಂತವನ್ನು ತಲುಪಿ ಬಿಟ್ಟಿದೆ ನೋಡಿ. ಬಹುತೇಕ ರಾಜಕಾರಣಿಗಳು ಮಾರಾಟದ ಸರಕುಗಳಾಗಿದ್ದಾರೆ. ರಾಜಕೀಯ ಸಿದ್ಧಾಂತ ಮರೆಯಾಗುತ್ತಿದೆ. ಪಕ್ಷ ಪಕ್ಷಗಳ ನಡುವಿನ ವ್ಯತ್ಯಾಸ ಮರೆಯಾಗುತ್ತಿದೆ. ಇಂಥಹ ಸ್ಥಿತಿಯಲ್ಲಿ ಯಾರನ್ನು ಬೈಯುವುದು ? ಈ ಯಡಿಯೂರಪ್ಪ ಇಷ್ಟು ನಿರ್ಲಜ್ಜರು ಎಂದು ನಾನಂತೂ ಅಂದುಕೊಂಡಿರಲಿಲ್ಲ. ಅವರ ಹುಂಬತನ ಸಿಟ್ಟು ಎಲ್ಲವೂ ಸಹನೀಯ ಎಂದುಕೊಂಡವನು ನಾನು. ಗ್ರಾಮಾಂತರ ಪ್ರದೇಶದಿಂದ ಬಂದ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಈತ ಏನಾದರೂ ಮಾಡ್ತಾನೆ ಕಣ್ರಿ ಎಂದು ನಮ್ಮ ರಾಜಕೀಯ ಸ್ನೇಹಿತರು ಹೇಳಿದ್ದರು. ನಾನೂ ಸಹ ಈತ ಏನಾದರೂ ಮಾಡಬಹುದು ಎಂದು ಅಂದುಕೊಂಡಿದ್ದೆ. ಆದರೆ ಅವರು ಮಾಡಿದ್ದು ಗಣಿ ದೊರೆಗಳ ಯಂಜಲು ರಾಜಕೀಯದ ಆಶ್ರಯದಲ್ಲಿ ತಮ್ಮ ಸಾಮ್ರಾಜ್ಯವನ್ನು ಕಟ್ಟಲು ಹೊರಟಿಬಿಟ್ಟರು. ಎಲ್ಲ ಶಾಸಕರಿಗೆ ಆಸೆ ಆಮೀಷ ಒಡ್ಡಿ ಅವರೆಲ್ಲ ಅಂಗಡಿ ತೆರೆದು ಕುಳಿತುಕೊಳ್ಳುವಂತೆ ಮಾಡಿದರು. ಅಧಿಕಾರ ಹಣ ಮುಖ್ಯ ಎಂದುಕೊಂಡ ಶಾಸಕರು, ತಮ್ಮ ತಮ್ಮ ಹಣೆಯ ಮೇಲೆ ರೇಟಿನ ಪಟ್ತಿ ಹಾಕಿಕೊಂಡು ಅಂಗಡಿಯಲ್ಲಿ ಕುಳಿತುಬಿಟ್ತರು. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಪಕ್ಶೇತರ ಶಾಸಕರನ್ನು ಸೆಳೆದಾಗ ಭ್ರಮನಿರಸನವಾಗಿತ್ತು. ಬೇರೆ ಪಕ್ಷದ ಶಾಸಕರನ್ನು ಸೆಳೆದು ಅವರಿಂದ ರಾಜೀನಾಮೆ ಕೊಡಿಸಿ, ಸಚಿವರನ್ನು ಮಾಡಿದಾಗ ಛೀ ಥೂ ಎಂದು ಉಗಿಯಬೇಕು ಎನ್ನಿಸಿತ್ತು. ಈ ಪ್ರಕ್ರಿಯೆ ಶಾಸಕರ ಮಟ್ಟದಲ್ಲಿ ಮಾತ್ರವಲ್ಲ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನಡೆದಾಗ ಈ ಮನುಷ್ಯನಿಗೆ ಲಜ್ಜೆ ಮಾನ ಮರ್ಯಾದಿ ಇಲ್ಲವೇ ಎಂದು ಅನ್ನಿಸಿತ್ತು.
ಈಗ ಉಪ ಚುನಾವಣೆರ್ ಘೋಷಣೆಯಾದ ಮೇಲೆ ಅವರು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಮಾಜಿ ಶಾಸಕರೊಬ್ಬರನ್ನು ಪಕ್ಷಕ್ಕೆ ಸೆಳೆದುಕೊಂಡು ಅವರಿಗೆ ಟಿಕೆಟ್ ಕೊಡಲಾಗುವುದು ಎಂದು ಪ್ರಕಟಿಸಿದ್ದಾರೆ. ಈ ಬಗ್ಗೆ ಬೈಯುವುದಕ್ಕೂ ಮನಸ್ಸಾಗುತ್ತಿಲ್ಲ. ಯಾಕೆಂದರೆ ಅವರನ್ನು ಬೈಯಲು ಶಬ್ದಗಳೇ ಇಲ್ಲ.
ರಾಜಕಾರಣ ಹೊಲಸು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇಂತಹ ಸ್ಥಿತಿಯಲ್ಲಿ ಪತ್ರಿಕೋದ್ಯಮಿಯಾಗಿ ನಮ್ಮ ಪಾಲೆಷ್ಟು ಎಂದು ಯೋಚಿಸುತ್ತೇನೆ. ಆಗೆಲ್ಲ ಬೇರೆ ಬೇರೆ ರಾಜಕಾರಣಿಗಳ ಮನೆಗಳಲ್ಲಿ ಕಾಣಿಸಿಕೊಳ್ಳುವ ಅವರಿಗೆ ಸಲಹೆ ನೀಡುವ ಪತ್ರಿಕೋದ್ಯಮಿಗಳ ಚಿತ್ರ ಕಣ್ಣು ಮುಂದೆ ಬರುತ್ತದೆ. ಆಗ ನಾನು ನನ್ನ ಬಾಯಲ್ಲಿ ತುಂಬಿಕೊಂಡ ಕವಳವನ್ನು ಉಗಿದು ಬಾಯಿ ತೊಳೆದುಕೊಳ್ಳುತ್ತೇನೆ.

Friday, November 21, 2008

ಮತಾಂತರ - ಹೀಗೊಂದು ಅನಿಸಿಕೆ.


ಮತಾಂತರದ್ ಬಗ್ಗೆ ಎಲ್ಲೆಡೆ ಚರ್ಚೆ ನಡೆದಿದೆ. ಹಾಗೆ ಹಲವು ಪತ್ರಿಕೆಗಳು ಈ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಿವೆ. ಆದರೆ ಇದು ಅಂತಹ ಮಹತ್ವದ ವಿಚಾರವೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಮೊದಲನೆಯದಾಗಿ ಮತ ಅಥವಾ ಧರ್ಮ ಕಾಲು ಕೆದರಿ ಜಗಳ ಮಾಡುವಷ್ಟು ಮುಖ್ಯವೆ ? ನಮಗೆ ಇದಕ್ಕಿಂತ ಮುಖ್ಯವಾದ ಸಮಸ್ಯೆಗಳು ಇಲ್ಲವೆ ?


ಭಾರತದ ಸಂವಿಧಾನ ಇಲ್ಲಿನ ಪ್ರತಿಯೊಬ್ಬ ನಾಗರಿಕನೂ ತಮಗೆ ಬೇಕಾದ ಧರ್ಮವನ್ನು ಅನುಸರಿಸಲು ಅವಕಾಶ ಕಲ್ಪಿಸಿದೆ. ಯಾರಿಗೆ ಧರ್ಮ ಮತಾಚರಣೆಗಳು ಬೇಕೋ ಅವರು ತಮಗೆ ಇಷ್ಟವಾದ ಮತಾಚರಣೆ ಧರ್ಮಾಚರಣೆಯಲ್ಲಿ ಮಾಡಲು ಅವಕಾಶವಿದೆ. ಹೀಗಿರುವಾಗ ಸಮಸ್ಯೆ ಇರುವುದು ಎಲ್ಲಿ ?


ಈಗ ನಾವು ಹಿಂದೂ ಧರ್ಮದತ್ತ ನೋಡೋಣ. ಈ ಧರ್ಮದ ಪರವಾಗಿ ಮಾತನಾಡುವವರು, ಇದು ಪರಮ ಶ್ರೇಷ್ಠವಾದ ಧರ್ಮ ಎಂದು ವಾದಿಸುತ್ತ ಸರ್ವ ಧರ್ಮ ಸಹಿಷ್ಣತೆಯ ಪಾಠ ಮಾಡುತ್ತಾರೆ. ಹಾಗೆ ಇಸ್ಲಾಂ, ಕ್ರಿಶ್ಚಿಯನ್ನರು ತಮ್ಮ ಧರ್ಮವೇ ಪರಮ ಶ್ರೇಷ್ಠವೆಂದು ಕರೆದು ಉಳಿದವರನ್ನು ಪಾಪಿಗಳು, ಕಾಫಿರರು ಎಂದು ಕರೆಯುತ್ತಾರೆ. ಧರ್ಮ ಪ್ರಚಾರ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದ ಭಾಗವೇ ಆದ್ದರಿಂದ ಈ ಕಾರ್ಯದಲ್ಲಿ ಭಯ ಭಕ್ತಿಯಿಂದ ತೊಡಗಿಕೊಳ್ಳುತ್ತಾರೆ. ಒಂದೆಡೆ ತಮ್ಮ ಧರ್ಮವನ್ನು ಉಳಿಸಿಕೊಳ್ಳಬೇಕು ಎಂದು ಹೊರಾಡುವವರು ಇನ್ನೊಂದೆಡೆ ತಮ್ಮ ಧರ್ಮವನ್ನು ವಿಸ್ತರಿಸಲು ಹೊರಟವರು. ಈ ಎರಡು ರೀತಿಯ ಜನರಲ್ಲಿ ಒಬ್ಬರಿಗೂ ಧರ್ಮದ ನೈಜ ಕಲ್ಪನೆಯೇ ಇಲ್ಲ.


ಕಾರಣವಿಷ್ಟೇ, ಧರ್ಮ ಸಾಮಾಜಿಕ ಬದುಕನ್ನು ಕಟ್ಟುವ ಕೆಲಸವನ್ನು ಮಾಡುತ್ತದೆಯೇ ಅಥವಾ ಆಧ್ಯಾತ್ಮಿಕ ಬದುಕನ್ನು ರೂಪಿಸುತ್ತದೆಯೇ ಎಂಬ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕು. ಧರ್ಮದ ಕೆಲಸ, ಆಧ್ಯಾತ್ಮಿಕತೆಯಾಗಿದ್ದರೆ ಅದಕ್ಕೆ ಲೌಕಿಕತೆ ಗೌಣ. ಅಲ್ಲಿ ಮನುಷ್ಯನಿಗೆ ಮನಶ್ಯಾಂತಿ ನೀಡುವ ಕೆಲಸವನ್ನು, ಆತನ ಆಧ್ಯಾತ್ಮಿಕ ಹಸುವನ್ನು ನೀಗಿಸುವ ಕೆಲಸವನ್ನು ಧರ್ಮ ಮಾಡಬೇಕು. ಆದರೆ ಸಮಸ್ಯೆ ಎಂದರೆ, ಆಧ್ಯಾತ್ಮಿಕತೆಯ ಜೊತೆ ಸತತ ಸಂವಾದ ನಡೆಸಬೇಕಾದ ಧರ್ಮ ಸಾಮಾಜಿಕ ಬದುಕಿನ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತದೆ. ಸಮಾಜದಲ್ಲಿ ಹೇಗೆ ಬದುಕಬೇಕು, ಎಂಬುದನ್ನು ನಿರ್ಧರಿಸಬೇಕಾದ್ದು ಸರ್ಕಾರಆ ಸಮಾಜದಲ್ಲಿ ಬದುಕುವವರು. ಇದು ಧರ್ಮದ ಕೆಲಸವಲ್ಲ. ಧರ್ಮ ಬದುಕುವ ಧರ್ಮದ ಬಗ್ಗೆ ಮಾತನಾಡುವುದಾದರೆ ಅದು ಆಯಾ ಕಾಲಕ್ಕೆ ಬದಲಾಗಬೇಕು, ಯಾಕೆಂದರೆ ಬದುಕು ಹೇಗಿರಬೇಕು ಎಂಬುದನ್ನು ಆಯಾ ಕಾಲದಲ್ಲಿ ನಿರ್ಧರಿಸಬೇಕು. ಯಾಕೆಂದರೆ ಬದುಕುವುದಕ್ಕೆ ಸಾರ್ವಕಾಲಿಕವಾದ ನಿಯಮ ಇರುವುದು ಸಾಧ್ಯವಿಲ್ಲ. ಊದಾಹರಣೆಗೆ ವೇದ ಕಾಲದಲ್ಲಿನ ಬದುಕುವ ವಿಧಾನ ಇಂದು ಅಪ್ರಸ್ತುತ. ಹಾಗೆ ಇಸ್ಲಾಮ್ ಧರ್ಮ ಪ್ರಾರಂಭವಾದಗಿನ ಬದುಕುವ ರೀತಿ ನೀತಿ ಇಂದಿನ ಜಗತ್ತಿಗೆ ಸರಿ ಹೊಂದುವುದಿಲ್ಲ. ಜೊತೆಗೆ . ಧರ್ಮಕ್ಕೂ ಸಾಮಾಜಿಕ ಬದುಕಿಗೂ ಸಂಬಂಧ ಇದ್ದರೂ, ಸಾಮಾಜಿಕ ಬದುಕಿನ ಮೇಲೆ ಧರ್ಮ ಸವಾರಿ ಮಾಡಬಾರದು. ಈ ಕೆಲಸವನ್ನು ಸರ್ಕಾರಕ್ಕೆ ಬಿಟ್ಟು ಬಿಡಬೇಕು.


ಹಿಂದೂ ಧರ್ಮ ಸಾಮಾಜಿಕ ಕಟ್ಟು ಪಾಡಿನ ಬಗ್ಗೆ ಮಾತನಾಡಿದ್ದರಿಂದಲೇ ವರ್ಣಾಶ್ರಮ ಧರ್ಮ ಇಲ್ಲಿ ಪ್ರಬಲವಾಗಿ ಬೇರೂರಿತು. ಆದ್ದರಿಂದಲೇ ಇಂದು ಧರ್ಮದ ಪುನರ್ ವ್ಯಾಖ್ಯೆ ನಡೆಯಬೇಕಿದೆ. ಧರ್ಮ ಮತ್ತು ನಮ್ಮ ಸಾಮಾಜಿಕ ಬದುಕಿನ ನಡುವಿನ ಸಂಬಂಧವನ್ನು ಪುನರಾವಲೋಕನ ಮಾಡಬೇಕಿದೆ. ಆದರೆ ಆಧ್ಯಾತ್ಮ ಒಂದು ಹುಡುಕಾಟ. ಹೀಗಾಗಿ ಅದು ಹರಿಯುವ ನದಿಯಂತೆ. ಅದಕ್ಕೆ ಸಾಮಾಜಿಕತೆಯ ಸ್ಪರ್ಷ ಇಲ್ಲ. ಅದು ಸುಮ್ಮನೆ ಹರಿಯುತ್ತಿರುತ್ತದೆ. ಆದರೆ ಇಂದಿನ ದಿನಗಳಲ್ಲಿ ಧರ್ಮ ತನ್ನ ಆಧ್ಯಾತ್ಮಿಕ ಶಕ್ತಿಯನ್ನು ಕಳೆದುಕೊಂಡು ಕೇವಲ ಆಚರಣೆಯಾಗಿ ಉಳಿದಿದೆ. ಧರ್ಮವನ್ನು ಅಂದರೆ ಆಧ್ಯಾತ್ಮಿಕತೆ ಬೋಧನೆ ಮಾಡಬೇಕಾದವರು ಶಿಕ್ಷಣ ದಂಧೆಯಲ್ಲಿ ತೊಡಗಿದ್ದಾರೆ. ಈಗ ಧರ್ಮದಲ್ಲಿ ಆಧ್ಯಾತ್ಮಿಕತೆಯನ್ನು ಹುಡುಕಬೇಕಾಗಿದೆ.

Thursday, November 13, 2008


ಕೆಲವೊಮ್ಮೆ ಮಾತು ಅರ್ಥಹೀನ ಅನ್ನಿಸುತ್ತದೆ. ಅಥವಾ ಮಾತುಗಳಿಗೆ ಅರ್ಥವೇ ಇರುವುದಿಲ್ಲ.

ಮಾತುಗಳನ್ನು ಮೀರಿದ ಸಂಹವನ ನಡೆಯುವುದು ಹೀಗೆ ಇರಬಹುದಾ ?



ಸಂಜಯ್ ಪ್ರಭು ಸಿ ಇ ಓ ಅವರ ಹುಟ್ಟು ಹಬ್ಬದ ಸಂಭ್ರಮ

Monday, October 20, 2008

ಎಲ್ಲರೂ ಹುಚ್ಚರೆ.............

ಸಾರಿಗೆ ಸಚಿವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು !
ಇದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಆರ್. ವಿ. ದೇಶಪಾಂಡೆ ನೀಡಿದ ಹೇಳಿಕೆ. ಈ ಹೇಳಿಕೆಯನ್ನು ನೀಡುವುದಕ್ಕೆ ಕಾರಣಗಳೇನೇ ಇರಲಿ, ಇಂತಹ ಹೇಳಿಕೆ ನೀಡುವ ಸ್ಥಿತಿಯಲ್ಲಿ ರಾಜಕಾರಣ ಇದೆ ಎಂಬುದು ದುಃಖದ ವಿಷಯ. ದೇಶಪಾಂಡೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ತಕ್ಷಣ ಅವರ ಧ್ವನಿ ಬದಲಾಗಿದೆ. ಮಾತಿನಲ್ಲಿ ಗತ್ತು ಕಾಣಿಸಿಕೊಳ್ಳುತ್ತಿದೆ. ಯಾರನ್ನೂ ಎದುರು ಹಾಕಿಕೊಳ್ಳದೇ ಹೊಂದಾಣಿಕೆಯ ರಾಜಕಾರಣ ಮಾಡುತ್ತ ಬಂದವರು ಈಗ ಬದಲಾಗಿದ್ದಾರೆ. ಪ್ರಾಯಶಃ ಅಧಿಕಾರ ತಂದು ಕೊಡುವ ಅಹಂಕಾರ ಇದು.
ಈ ಸಂದರ್ಭದಲ್ಲಿ ನಾವು ಗಾಂಧೀಜಿಯವರನ್ನು ನೆನಪು ಮಾಡಿಕೊಳ್ಲಬೇಕು. ಗಾಂಧಿ ಹೇಳಿದಂತೆ ಇಡೀ ದೇಶ ಕೇಳುತ್ತಿತ್ತು. ಈಗ ಅಸ್ಥಿಪಂಜರವಾಗಿರುವ ಕಾಂಗ್ರೆಸ್ ಅಂದು ಗಾಂಧೀಜಿಯವರ ಒಂದು ಕರೆಗೆ ಮೈಕೊಡ್ಇ ಎದ್ದು ಬಿಡುತ್ತಿತ್ತು. ಗಾಂಧೀಜಿಯವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ನೆಹರೂ ಕೂಡ ಗಾಂಧೀಜಿಯವರಿಗೆ ಹೆದರುತ್ತಿದ್ದರು. ತಮ್ಮ ಎಲ್ಲ ರಂಗು ರಂಗಿನ ಬದುಕನ್ನು ಗಾಂಧೀಜಿಯವರಿಂದ ಮುಚ್ಚಿಡಲು ಯತ್ನ ನಡೆಸುತ್ತಿದ್ದರು. ಗಾಂಧೀಜಿಯವರಿಗೆ ತಾವು ನಾಯಕ ಎಂಬ ಅಹಂಮಿಕೆ ಇರಲಿಲ್ಲ. ಆದರೆ ಹಠ ಇತ್ತು. ಗಾಂಧೀಜಿಯವರ ಇಂತಹ ವ್ಯಕ್ತಿತ್ವ ಕಾಂಗ್ರೆಸ್ ಪಕ್ಷದ ಇತರ ನಾಯಕರ ಅಹಂಮಿಕೆಗೆ ಕಡಿವಾಣ ಹಾಕುತ್ತಿತ್ತು. ಎಲ್ಲ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಮೀರಿ, ತಾತ್ವಿಕ ರಾಜಕಾರಣದಲ್ಲಿ ಒಂದಾಗಿಸುವ ಶಕ್ತಿ ಗಾಂಧೀಜಿಯವರಿಗೆ ಇತ್ತು. ಗಾಂಧಿ ಎಂಬ ಹಠ ಮಾರಿ ಅಜ್ಜ ಒಂದು ಸತ್ಯಾಗ್ರಹದ ಬೆದರಿಕೆಯಿಂದ ಎಲ್ಲರನ್ನೂ ಬಗ್ಗು ಬಡಿಯಬಲ್ಲವರಾಗಿದ್ದರು. ಎಲ್ಲರು ಮಾತು ಕೇಳುವಂತೆ ಮಾಡಬಲ್ಲವರಾಗಿದ್ದರು.
ಗಾಂಧೀಜಿ ನಿಧನರಾದ ಮೇಲೆ ಕಾಂಗ್ರೆಸ್ ರೂಪ ಬದಲಾಯಿತು. ನೆಹರೂ ಅವರ ಟೋಪಿ ಮಿಂಚತೊಡಗಿತು. ನೆಹರೂ ಶರ್ಟ್ ಕಾಂಗ್ರೆಸ್ ಪಕ್ಷದ ಎಲ್ಲ ಹುಳುಕುಗಳಿಗೆ, ಸಿಂಬಾಲ್ ಆಯಿತು. ಆಗಲೇ ಈ ಪಕ್ಷ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿತ್ತು.
ಇಂತಹ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಜೀವ ತುಂಬುವಂತೆ ಮಾಡಿದವರು ಶ್ರೀಮತಿ ಇಂದಿರಾ ಗಾಂಧಿ. ತನ್ನ ತಂದೆಯ ಗರಡಿಯಲ್ಲೇ ಬೆಳೆದ ಇಂದಿರಾ ಗಾಂಧಿ ಅವರಿಗೆ ಗಾಂಧೀಜಿ ಬಾಲ್ಯದ ನೆನಪು ಮಾತ್ರ. ಅವರಿಗೆ ಗಾಂಧೀ ಪ್ರಣೀತ ಆರ್ಥಿಕ ನೀತಿಯಾಗಲಿ, ಅವರ ಸತ್ಯ ಮತ್ತು ಅಹಿಂಸೆಯ ಬೋಧನೆಯಾಗಲಿ ನಗೆಪಾಟಲಿನ ವಿಷಯವಾಗಿತ್ತು. ನೆಹರೂ ಅವರು ಕುಡಿಯಾದ ಇಂದಿರಾ ಒಬ್ಬ ಒಳ್ಲೆಯ ಸೆಲ್ಸಮನ್. ಅವರು ಕಾಂಗ್ರೆಸ್ ಪಕ್ಷವನ್ನು ಚುನಾವಣಾ ರಾಜಕೀಯದಲ್ಲಿ ಒಂದುಅತ್ಯುತ್ತಮ ಪ್ರೊಡಕ್ಟ್ ಆಗಿ ಬದಲಿಸಿಬಿಟ್ಟರು. ಹಾಗೆ ಜನರಲ್ಲಿ ಕನಸುಗಳನ್ನು ಬಿತ್ತಿ ಅಧಿಕಾರವನ್ನು ಗಟ್ಟಿಯಾಗಿ ಹಿಡಿದುಕೊಂಡರು.
ಶ್ರೀಮತಿ ಇಂದಿರಾ ಗಾಂಧಿ ಅವರ ನಂತರ ಬಂದ ಗಾಂಧಿಗಳಿಗೆ ಈ ಸೆಲ್ಸಮನ್ ಶಿಪ್ ಕೂಡ ಇರಲಿಲ್ಲ. ಗಾಂಧಿಯನ್ನು ಉದ್ದೇಶಪೂರ್ವಕವಾಗಿ ಮರೆತ ಕಾಂಗ್ರೆಸ್ಗೆ ಈಗ ಆತ್ಮ ಇಲ್ಲ. ಇದು ಕೇವಲ ಅಸ್ಥಿಪಂಜರ ಮಾತ್ರ. ಈ ಅಸ್ಥಿಪಂಜರವನ್ನು ಹಿಡಿದುಕೊಂಡು ಭೂತ ನೃತ್ಯ ಮಾಡುವ ನಾಯಕರ ಪಡೆ ಇದೆ. ಇವರಿಗೆ ಯಾವ ವಿಚಾರದಲ್ಲಿಯೂ ಸ್ಪಷ್ಟತೆ ಇಲ್ಲ. ಸೈದ್ಧಾಂತಿಕ ನೆಲಗಟ್ಟೂ ಇಲ್ಲ.
ಗಾಂಧೀಜಿಯವರನ್ನು ಟೀಕಿಸಲು ನೂರು ಕಾರಣಗಳು ಇರಬಹುದು. ಆದರೆ ಗಾಂಧೀಜಿಯವರನ್ನು ಮೆಚ್ಚಿಕೊಳ್ಳಲು ಸಾವಿರ ಕಾರಣಗಳಿವೆ. ಒಂದು ದೇಶದ ಆತ್ಮವೇ ಆಗಿದ್ದ ಗಾಂಧಿ ಇಂದಿಗೂ ಒಂದು ವಿಸ್ಮಯ. ಆದರೆ ಇತ್ತೀಚಿನ ಗಾಂಧಿಗಳನ್ನು ನೋಡಿ. ಇವರು ದೇಶವನ್ನು ತಿಳಿದುಕೊಳ್ಳಲು ಡಿಸ್ಕವರ್ ಮಾಡುತ್ತಾರೆ. ತಮ್ಮ ಭಟ್ಟಂಗಿಗಳ ಜೊತೆ ಊರು ಸುತ್ತುತ್ತಾರೆ. ಒಬ್ಬ ರಾಜಕಾರಣಿಯಾದವನಿಗೆ ದೇಶವನ್ನು ತಿಳಿದುಕೊಳ್ಲುವುದು ಪ್ರತಿ ನಿಮಿಷದ ಕೆಲಸವಾಗಬೇಕು. ಯಾವುದೋ ಪ್ರವಾಸದ ಮೂಲಕ ದೇಶವನ್ನು ತಿಳಿದುಕೊಳ್ಳುವುದಲ್ಲ.
ಈಗ ಮೊದಲ ವಿಚಾರಕ್ಕೆ ಬರುತ್ತೇನೆ. ಸಚಿವ ಅಶೋಕ್ ಹುಚ್ಚಾಸ್ಪತ್ರೆ ಸೇರುವ ಸ್ಥಿತಿಯಲ್ಲಿ ಇದ್ದಾರೋ ಇಲ್ಲವೋ ನನಗೆ ತಿಳಿಯದು. ನನಗೆ ಅನ್ನಿಸುವ ಹಾಗೆ ಎಲ್ಲ ರಾಜಕಾರಣಿಗಳು ಹುಚ್ಚಾಸ್ಪತ್ರೆ ಸೇರಿದರೆ ಒಳ್ಳೆಯದು ಎಂದು ಮಾತ್ರ ನಾನು ಹೇಳಬಲ್ಲೆ. ಆದರೆ ಇವರು ಅವರನ್ನು ಹುಚ್ಚ ಅನ್ನುತ್ತಾರೆ, ಅವರು ಇವರನ್ನು ಹುಚ್ಚ ಅನ್ನುತ್ತಾರೆ. ಇದರಿಂದ ನಮಗಾಗುವ ಸತ್ಯ ದರ್ಶನ ಎಂದರೆ ಇವರೆಲ್ಲರೂ ಹುಚ್ಚರು ಎಂದು ಮಾತ್ರ. ಇಂತಹ ಹುಚ್ಚರು ನಮ್ಮ ರಾಜಕಾರಣಿಗಳು ಎಂಬ ಬೇಸರ ಮಾತ್ರ ನಮ್ಮದು.

Saturday, October 11, 2008

ಯಡಿಯೂರಪ್ಪ ಬಗ್ಗೆ ಏನು ಅನ್ನಿಸುತ್ತದೆ ?

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಹೇಗೆ ?
ಭಾರತೀಯ ಜನತಾ ಪಾರ್ಟಿಯ ನಾಯಕರೊಬ್ಬರು ಖಾಸಗಿಯಾಗಿ ಈ ಪ್ರಶ್ನೆ ಕೇಳಿದರು. ನನಗೆ ತಕ್ಷಣ ಉತ್ತರ ಹೇಳಲು ಸಾಧ್ಯವಾಗಲಿಲ್ಲ. ಯಾಕೆಂದರೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ನಾನು ಕಲ್ಪಿಸಿಕೊಂಡೇ ಇರಲಿಲ್ಲ. ಈ ಪ್ರಶ್ನೆಯ ಹಿನ್ನೆಲೆಯಲ್ಲಿ ನಾನು ಯಡಿಯೂರಪ್ಪ ಅವರ ಬಗ್ಗೆ ಯೋಚಿಸಿತೊಡಗಿದೆ.
ನಾನು ಅವರನ್ನು ಮೊದಲು ನೋಡಿದ್ದು ೧೯೮೩ ರಲ್ಲಿ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಬಂದ ಅವರು ಮೊದ ಮೊದಲು ವಿಧಾನ ಸಭೆಯಲ್ಲಿ ಮಾತನಾಡುತ್ತಿರಲಿಲ್ಲ. ಹಿರಿಯ ನಾಯಕರ ನೆರಳಿನಂತೆ ಓಡಾಡಿಕೊಂಡಿದ್ದ ಅವರು ಮಾತನಾಡಿದರೆ ಅದು ಅರಚಾಟದಂತೆ, ಕೇಳುತ್ತಿತ್ತು. ಯಾವುದರ ಬಗ್ಗೆಯೂ ಆಳವಾಗಿ ಚಿಂತಿಸದೇ ಆ ಕ್ಷಣದಲ್ಲಿ ತಮಗೆ ಅನ್ನಿಸಿದ್ದನ್ನು, ತಮ್ಮ ಭಾಷೆಯಲ್ಲಿ ಹೇಳಿಬಿಡುತ್ತಿದ್ದರು. ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶದಿಂದ ಬಂದವರು ಹೀಗೆ ಇರುತ್ತಾರೆ, ಅವರಿಗೆ ತಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳಲು ಬರುವುದಿಲ್ಲ, ಯಡಿಯೂರಪ್ಪ ಕೂಡ ಹಾಗೆ ಎಂದು ನಾನು ಅಂದುಕೊಂಡಿದ್ದೆ. ಯಡಿಯೂರಪ್ಪನವರ ಸಿಟ್ಟು ಪ್ರಾಮಾಣಿಕ ಸಿಟ್ಟು ಎಂಬ ಭಾವನೆ ಕೂಡ ಕೆಲ ಕಾಲ ನನಗಿತ್ತು. ಆದರೆ ಅವರು ಪ್ರಾಮಾಣಿಕರಲ್ಲ ಎಂಬುದು ನನಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಯಾಕೆಂದರೆ ದಿನದಿಂದ ದಿನಕ್ಕೆ ಅವರ ಆಸ್ತಿ ಹೆಚ್ಚುತ್ತಿತ್ತು. ಶಿವಮೊಗ್ಗದಲ್ಲಿ ಅವರು ಸಂಪಾದಿಸುತ್ತಿದ್ದ ಆಸ್ತಿಯ ಬಗ್ಗೆ ಮಾಹಿತಿ ಬರುತ್ತಿತ್ತು. ಇದನ್ನೆಲ್ಲ ನೋಡುವಾಗ ಅವರ ಸಿಟ್ಟು ಪ್ರಾಮಾಣಿಕವಾದುದಲ್ಲ ಎಂದು ಅನ್ನಿಸುತ್ತಿತ್ತು.
ರಾಜ್ಯ ಬಿಜೆಪಿಯ ಬಹುಮುಖ್ಯ ನಾಯಕರಾಗಿ ಯಡಿಯೂರಪ್ಪ ಆವರ್ಭಿವಿಸಿದ ಮೇಲೆ, ಪಕ್ಷಕ್ಕೆ ರೈತ ಸಮುದಾಯದ ಹೊಸ ಬೇಸ್ ನೀಡುವುದಕ್ಕೆ ಯತ್ನ ನಡೆಸಿದರು. ರೈತರ ಪರವಾಗಿ ಇರುವ ನನ್ನಂತವರಿಗೆ ಬಹಳ ಕಾಲ ಇದು ಸ್ವಾಗತಾರ್ಹ ಎಂದು ಅನ್ನಿಸುತ್ತಿತ್ತು. ಆದರೆ ರೈತರ ಬಗೆಗಿನ ಅವರ ಕಳಕಳಿ ಕೂಡ ರಸ್ತೆಯ ಬದಿಯ ಅರಚಾಟದಂತೆ ಕೇಳತೊಡಗಿತು. ಅವರ ಬಳಿ ರೈತರ ಸಮಸ್ಯೆಗಳಿಗೆ ಪರಿಹಾರ ಇರಲಿಲ್ಲ. ರೈತ ಬೆಳೆದ ಬೆಳೆಗೆ ಕನಿಷ್ಟ ವೈಜ್ನಾನಿಕ ಬೆಲೆ ಸಿಗಬೇಕು ಎಂದು ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಅವರಿದ್ದರು. ಹಾಗೆ ಅವರು ಮಂಡಿಸಿದ ಮುಂಗಡ ಪತ್ರ ಕೂಡ ಸಾಲಮನ್ನಾದಂತಹ ಯೋಜನೆಗೆ ಸೀಮಿತವಾಗಿಬಿಟ್ಟಿತು.
ಯಡಿಯೂರಪ್ಪ ಅವರ ರೈತ ಪರ ಕಾಳಜಿಯನ್ನು ಪ್ರಶ್ನಿಸದಿದ್ದರೂ ಅವರ ಬಳಿ ಘೋಷಣೆಗಳನ್ನು ಬಿಟ್ಟು ಬೇರೆನೂ ಇಲ್ಲ ಎಂದು ಅನ್ನಿಸತೊದಗಿದ್ದು ಈ ಕಾರಣಗಳಿಂದಾಗಿ. ಜೊತೆಗೆ ಅವರಲ್ಲಿ ಇದ್ದ ಹುಂಬತನ.
ಯಡಿಯೂರಪ್ಪ ಅವರು ಎಂದು ಮನಸ್ಸು ಬಿಚ್ಚಿ ನಕ್ಕಿದ್ದನ್ನು ನಾನು ನೋಡಿಲ್ಲ. ಯಾವ ವ್ಯಕ್ತಿ ನಗುವಿನ ವಿರೋಧಿಯಾಗಿರುತ್ತಾನೋ ಆತ ಸರ್ವಾಧಿಕಾರಿಯಾಗಿರುತ್ತಾನೆ. ಆತನಿಗೆ ಬೇರೆಯವರ ಮಾತು ಕೇಳುವ ಕನಿಷ್ಥ ಸೌಜನ್ಯ ಕೂಡ ಇರುವುದಿಲ್ಲ.
ಯಡಿಯೂರಪ್ಪ ಮುಖ್ಯಮಂತ್ರಿಯಾದ ತಕ್ಷಣ ಮಾಡಿದ ಮೊದಲ ಕೆಲಸ ಅಂದರೆ ಮಠಗಳಿಗೆ ಬೇಟಿ ನೀಡಿದ್ದು, ಸ್ವಾಮಿಗಳ ಕಾಲಿಗೆ ಬಿದ್ದಿದ್ದು. ಈ ಮೂಲಕ ನಾಡಿನ ಜನರಿಗೆ ಅವರು ನೀಡಿದ ಸಂದೇಶ ಏನು ? ಇದೆಲ್ಲ ಯಾಕೆ ಮುಖ್ಯಮಂತ್ರಿಗಳಿಗೆ ಅರ್ಥವಾಗುವುದಿಲ್ಲ ?
ಈ ಕೆಲವು ಮಾತುಗಳನ್ನು ನಾನು ಹಿರಿಯ ಬಿಜೆಪಿ ನಾಯಕರಿಗೆ ಹೇಳಿದೆ.
ಇದಾದ ಮೇಲೆ ನನ್ನ ಸ್ನೇಹಿತರೊಬ್ಬರು ನೀವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಬೇಕು, ನಿಮಗೆ ಅನ್ನಿಸಿದ್ದನ್ನು ಅವರಿಗೆ ಹೇಳಬೇಕು ಎಂದರು. ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದಕ್ಕೆ ನನ್ನ ಅಭ್ಯಂತರ ಇರಲಿಲ್ಲ.
ನಾನು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದಾಗ ಹೀಗೆ ಹೇಳಿದೆ;
ಸಾರ್ ನನಗೆ ನಿಮ್ಮಿಂದ ಏನೂ ಆಗಬೇಕಿಲ್ಲ. ನೀವು ಇಚ್ಚೆ ಪಟ್ಟಿದ್ದರಿಂದ ನಿಮ್ಮನ್ನು ನೋಡುತ್ತಿದ್ದೇನೆ. ನೀವು ಕರ್ನಾಟಕದ ಮುಖ್ಯಮಂತ್ರಿ ಎಂಬುದನ್ನು ಯಾವ ಸಂದರ್ಭದಲ್ಲಿ ಮರೆಯಬೇಡಿ. ನೀವು ಬಿಜೆಪಿ, ಸಂಘ ಪರಿವಾರದ ಮುಖ್ಯಮಂತ್ರಿಯಲ್ಲ. ನಿಮ್ಮ ಮನಸ್ಸಿನಲ್ಲಿ ಎಲ್ಲಿಯವರೆಗೆ ಬಿಜೆಪಿ ಮುಖ್ಯಮಂತ್ರಿ ಎಂಬುದು ಇರುತ್ತದೆಯೋ ಅಲ್ಲಿಯವರೆಗೆ ನೀವು ಈ ನಾಡಿನ ಮುಖ್ಯಮಂತ್ರಿಯಾಗುವುದಿಲ್ಲ. ಆದರೆ ದುರ್ದೈವ ಎಂದರೆ ಇದುವರೆಗೆ ನೀವು ಕರ್ನಾಟಕದ ಮುಖ್ಯಮಂತ್ರಿಯಂತೆ ವರ್ತಿಸಿಲ್ಲ.
ಒಬ್ಬ ಮುಖ್ಯಮಂತ್ರಿಯಾದವನು ರಾಜನೀತಿಜ್ನನಾಗಿರಬೇಕು. ಆತ ಸ್ಟೇಟ್ಸ್ ಮನ್ ಆಗಿರಬೇಕು. ಆದರೆ ನೀವು ಪಂಚಾಯಿತಿ ಮಟ್ಟದ ರಾಜಕಾರಣಿಯಂತೆ ವರ್ತಿಸುತ್ತಿದ್ದೀರಿ ಎಂದು ಹೇಳಲು ಬೇಸರವಾಗುತ್ತಿದೆ.
ನನಗೆ ನಿಮ್ಮ ಮುಖದಲ್ಲಿ ನಗುವನ್ನು ನೋಡುವುದು ಇಷ್ಟ. ನೀವು ನಗುತ್ತಿದ್ದರೆ ನಿಮ್ಮ ಮನಸ್ಸು ಹಗುರಾಗುತ್ತದೆ. ನಿಮ್ಮ ಮನಸ್ಸು ಹಗುರಾದರೆ ನೀವು ಪ್ರಾಮಾಣಿಕವಾಗಿ ಯೋಚಿಸಬಲ್ಲಿರಿ. ನೀವು ಪ್ರಾಮಾಣಿಕವಾಗಿ ಯೋಚಿಸಿದರೆ ನಾಡಿಗೆ ಒಳ್ಳೆಯದಾಗುತ್ತದೆ.
ಯಡಿಯೂರಪ್ಪ ನಾನು ಹೇಳಿದ್ದನ್ನು ಕೇಳಿಸಿಕೊಂಡರು. ನಾನು ಹೇಳಿದ್ದು ಅವರಿಗೆ ಎಷ್ಟು ಅರ್ಥವಾಯಿತೋ ತಿಳಿಯಲಿಲ್ಲ.

Tuesday, October 7, 2008

ಯುವ ಪತ್ರಿಕೋದ್ಯಮಿಗಳಿಗೆ..........

ಬಹಳ ದಿನಗಳಿಂದ ಏನನ್ನೂ ಬರೆದಿಲ್ಲ. ಬರೆಯಬೇಕು ಎನ್ನುವ ಒತ್ತಡ ಇರಲಿಲ್ಲ ಎಂದೇನೂ ಅಲ್ಲ. ಕೆಲಸದ ಗಡಿಬಿಡಿಯಲ್ಲಿ ಬರೆಯಬೇಕು ಎಂದರು ಬರೆಯಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ನಾನು ವಿಸಿಟ್ ಮಾಡಿದ ಹಲವು ಬ್ಲಾಗ್ ಗಳಲ್ಲಿ ನಾನು ಕೆಲಸ ಮಾಡುವ ಮಾಧ್ಯಮದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುವುದನ್ನು ಗಮನಿಸಿದೆ. ಖುಷಿ ಅನ್ನಿಸಿತು.
ಯಾವುದೋ ಒಂದು ಬ್ಲಾಗ್ ನಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸಿದ್ದನ್ನು ನನ್ನ ಹುಡುಗರು ಗಮನಕ್ಕೆ ತಂದರು. ಅದರಲ್ಲಿ ಒಂದು ಬ್ಲಾಗ್ ನಲ್ಲಿ, ಅದು ಒಬ್ಬ ಪತ್ರಕರ್ತರು ಬರೆದಿದ್ದು, ನನ್ನ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ನನ್ನನ್ನು ಏಕವಚನದಲ್ಲಿ ಸಂಬೋಧಿಸಿ ನಾನು ಸಹೋದ್ಯೋಗಿಗಳಿಗೆ ಕಿರುಕುಳ ನೀಡುತ್ತಿದ್ದೇನೆ ಎಂದು ಆರೋಪಿಸಲಾಗಿತ್ತು. ಇದನ್ನು ನೋಡಿ ನಕ್ಕು ಸುಮ್ಮನಾಗಬೇಕು ಎಂದುಕೊಂಡೆ. ಆದರೆ ಇವತ್ತಿನ ಪತ್ರಿಕೋದ್ಯಮಿಗಳ ಬಗ್ಗೆ ನನಗಿರುವ ಪ್ರೀತಿ ಮತ್ತು ಕನಿಕರ ನಾಲ್ಕು ಸಾಲು ಬರೆಯುವಂತೆ ಮಾಡಿತು.
ನಾವೆಲ್ಲ ತುರ್ತು ಪರಿಸ್ಥಿತಿಯ ನಂತರ ಪತ್ರಿಕೋದ್ಯಮಕ್ಕೆ ಬಂದವರು. ಪತ್ರಿಕೋದ್ಯಮವನ್ನು ಅತಿಯಾಗಿ ಪ್ರೀತಿಸಿ ಅದನ್ನು ಅಪ್ಪಿಕೊಂಡವರು. ಜೊತೆಗೆ ನಾವು ಅಂದರೆ ನನ್ನ ತಲೆಮಾರಿನವರು ಪತ್ರಿಕೋದ್ಯಮಕ್ಕೆ ಬರುವಾಗ ಕರ್ನಾಟಕದಲ್ಲಿ ಮೂರು ಜನಪರ ಚಳವಳಿಗಳಿದ್ದವು. ಆ ಚಳವಳಿಯ ಜೊತೆಗೆ ನಾವು ಬೆಳೆದೆವು, ಬೆಳೆಯುವುದಕ್ಕೆ ಯತ್ನ ಮಾಡಿದೆವು. ಜೊತೆಗೆ ನನ್ನಂತವರನ್ನು ಬೆಳೆಸಲು ಬುದ್ದಿ ಹೇಳಲು ಖಾದ್ರಿ ಶಾಮಣ್ಣ, ವೈ ಎನ್ ಕೆ ಲಂಕೇಶ್ ಅವರಂತಹ ಸಂಪಾದಕರಿದ್ದರು. ಅವರು ಬೈದು ಬುದ್ದಿ ಹೇಳಿ ಬೆಳೆಸುತ್ತಿದ್ದರು. ಇಂತಹ ಸಂಪಾದಕರ ಜೊತೆ ಕೆಲಸ ಮಾಡಿ, ಬೈಸಿಕೊಂಡು ಪತ್ರಿಕೋದ್ಯಮದ ಆಳ ಆಗಲವನ್ನು ತಿಳಿದುಕೊಳ್ಳಲು ನಾವು ಯತ್ನ ಮಾಡಿದೆವು. ಈ ಯತ್ನ ಈಗಲೂ ಮುಂದುವರಿದಿದೆ. ಇಂತವರ ಸಹವಾಸ ನನ್ನಂತವರಿಗೆ ನಿಷ್ಠುರ ಮನಸ್ಥಿತಿಯನ್ನು ಬೆಳೆಸಿತು. ಸತ್ಯವನ್ನು ಸತ್ಯ ಎಂದು ಹೇಳುವ ಎದೆಗಾರಿಕೆ ಬರುವಂತೆ ಮಾಡಿತು. ಯಾವುದೇ ಸಂದರ್ಭದಲ್ಲಿ ಭ್ರಷ್ಠರಾಗದಂತೆ ಕಾದಿದ್ದು ಇಂತವರ ಜೊತೆ ಕೆಲಸ ಮಾಡಿದ ಅನುಭವ,
ಇಂದಿನ ಪತ್ರಿಕೋದ್ಯಮಿಗಳಿಗೆ ಇಂತಹ ಅನುಭವ ಇರುವುದು ಸಾಧ್ಯವಿಲ್ಲ. ಇವರೆಲ್ಲ ಜಾಗತೀಕರಣದ ನಂತರ ಪತ್ರಿಕೋದ್ಯಮಕ್ಕೆ ಬಂದವರು. ಪತ್ರಿಕೋದ್ಯಮ ಉಳಿದೆಲ್ಲ ಉದ್ಯಮದಂತೆ ಉದ್ಯಮವಾಗಿ ಪರಿವರ್ತನೆಗೊಂಡಿದ್ದು ನಮಗೆ ಆಫಾತವನ್ನು ಉಂಟು ಮಾಡಿದರೆ, ಹೊಸ ತಲೆ ಮಾರಿನ ಪತ್ರಿಕೋದ್ಯಮಿಗಳಿಗೆ ಇದು ಒಂದು ಸಾಮಾನ್ಯವಾದ ಘಟನೆ. ಜೊತೆಗೆ ಅವರಿಗೆ ಮಾರ್ಗದರ್ಶನ ಮಾಡುವ ಸಂಪಾದಕರೂ ಇಲ್ಲ. ಇರುವ ಬಹುತೇಕ ಸಂಪಾದಕರು, ಪಾರ್ಟ್ ಟೈಮ್ ರಾಜಕಾರಣಿಗಳು. ಜೊತೆಗೆ ಆಡಳಿತ ವರ್ಗ, ರಾಜಕಾರಣಿಗಳು ಮತ್ತು ಉದ್ಯೋಗಿಗಳ ನಡುವೆ ಮಧ್ಯವರ್ತಿಗಳಾಗಿ ಕೆಲಸ ಮಾಡುವವರು. ಇವರ ಗರಡಿಯಲ್ಲಿ ಬೆಳೆಯುತ್ತಿರುವವರು ನಿಜವಾದ ಅರ್ಥದಲ್ಲಿ ಪತ್ರಿಕೋದ್ಯಮಿಗಳಾಗುವುದಿಲ್ಲ. ಕೇವಲ ಏಜೆಂಟರುಗಳಾಗುತ್ತಾರೆ. ಇಂತಹ ಏಜೆಂಟರುಗಳಿಗೆ ಪತ್ರಿಕೋದ್ಯಮದ ಇತಿಹಾಸ ಬದ್ಧತೆ ಇರುವುದಿಲ್ಲ. ತಾವು ಬಳಸುವ ಭಾಷೆಯ ಬಗ್ಗೆ ಜ್ನಾನ ಇರುವುದಿಲ್ಲ.
ಇಂದು ಮಾಧ್ಯಮದಲ್ಲಿ ಇರುವವರಲ್ಲಿ ಬಹಳಷ್ಟು ಜನ ಮಾಧ್ಯಮದ ಗ್ಲಾಮರಿನಿಂದ ಬಂದವರು. ಇವರಿಗ್ಎ ಹೇಳುವುದು ಇಷ್ಟೇ. ಸ್ವಲ್ಪ ಓದಿ, ಆಲೋಚನೆ ಮಾಡಿ. ಆರೋಗ್ಯ ಪೂರ್ಣವಾದ ಮನಸ್ಥಿತಿಯನ್ನು ರೂಪಿಸಿಕೊಳ್ಳಲು ಯತ್ನ ನಡೆಸಿ. ನಿಮ್ಮ ಮನಸ್ಸು ಆರೋಗ್ಯಪೂರ್ಣವಾಗಿರದಿದ್ದರೆ, ಬರವಣಿಗೆ ಆರೋಗ್ಯಪೂರ್ಣವಾಗಿರುವುದಿಲ್ಲ. ಬರವಣಿಗೆ ಆರೋಗ್ಯಪೂರ್ಣವಾಗಿರದಿದ್ದರೆ ಅದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿಬಿಡುತ್ತದೆ. ಜೊತೆಗೆ ಕನಿಷ್ಠ ಮನುಷ್ಯರಿಗೆ ಮನುಷ್ಯ ನೀಡುವ ಕನಿಷ್ಠ ಗೌರವ ನೀಡುವುದನ್ನು ಕಲಿತುಕೊಳ್ಳಿ.

Friday, August 22, 2008

ಶಬ್ದಗಳು ಮತ್ತು ಪಾವಿತ್ರ್ಯತೆ

ಮಂತ್ರಗಳು ಪವಿತ್ರವಾ ? ಅಪವಿತ್ರವಾ ? ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ಇದನ್ನೆಲ್ಲ ನಾನು ನೋಡುವ ರೀತಿಯೇ ಬೇರೆ. ಪವಿತ್ರ ಅಪವಿತ್ರ ಎಂಬುದು ಅವರವರ ಭಾವಕ್ಕೆ ಭಕುತಿಗೆ ಸಂಬಂಧಿಸಿದ್ದು. ಹೀಗಾಗಿ ಪವಿತ್ರವೋ ಅಲ್ಲವೋ ಅನ್ನುವುದು ನನಗೆ ಅಷ್ಠು ಮುಖ್ಯವಲ್ಲ. ಆದರೆ ನಾನು ಶಬ್ದಗಳನ್ನು ಕೇವಲ ಅಕ್ಷರಗಳ ಸಮೂಹ ಎಂದು ನಾನು ಭಾವಿಸಿಲ್ಲ. ಶಬ್ದಗಳು ಬಳಕೆಯಿಂದ ಅರ್ಥವನ್ನು ಪಡೆಯುತ್ತವೆ. ಹಾಗೆ ಶಬ್ದಕ್ಕೆ ಭಾವ ತುಂಬುವುದು ಎಂದರೆ, ಅದಕ್ಕೆ ಜೀವವನ್ನು ತುಂಬುವುದು. ಜೀವ ಪಡೆದ ಶಬ್ದಗಳು ವಿಭಿನ್ನ ಶಕ್ತಿಯನ್ನು ಹೊಂದುತ್ತವೆ.


ನನಗೆ ಈ ವಿಚಾರದಲ್ಲಿ ಕುತೂಹಲವಿದೆ. ಒಂದು ಶಬ್ದ ಎಂದರೆ ನಾದವೂ ಸಹ. ಹಾಗೆ ಸ್ವರ. ಶಬ್ದದ ಸತತವಾದ ಉಚ್ಚಾರ ಆಶಬ್ದವನ್ನು ಸಬಲಗೊಳಿಸುತ್ತದೆಯಾ ? ಆ ಶಬ್ದಕ್ಕೆ ಉಚ್ಚಾರಣೆ ನೀಡುವಕೊದುಗೆಯಾವರೀತಿಯದು ? ನಾವು ಯಾವುದೇ ಶಬ್ದವನ್ನು ಉಚ್ಚರಿಸಲಿ, ಹೀಗೆ ಉಚ್ಚಾರಣೆ ಮಾಡುವಾಗ ನಾವು ಕೆಲವೊಮ್ಮೆ ಗಾಳಿಯನ್ನು ಒಳಗೆ ಎಳೆದುಕೊಂಡರೆ, ಕೆಲವೊಮ್ಮೆ ಹೊರಕ್ಕೆ ಬಿಡುತ್ತೇವೆ. ಅಂದರೆ ಪ್ರತಿ ಶಬ್ದದ ಉಚ್ಚಾರಣೆ ಕೂಡ ಬೇರೆ ಬೇರೆ ರೀತಿಯ ಉಚ್ವಾಸ ಮತ್ತು ನಿಶ್ವಾಸಕ್ಕೆ ಕಾರಣವಾಗಿರುತ್ತದೆ, ಒಂದು ಶಬ್ದವನ್ನು ಉಚ್ಚರಿಸುವಾಗ ನಾವು ತೆಗೆದುಕೊಳ್ಳುವ ಮತ್ತು ಬಿಡುವ ಶ್ವಾಸದಲ್ಲಿ ವ್ಯತ್ಯಾಸವಿರುತ್ತದೆ. ಒಂದು ಶಬ್ದದ ಉಚ್ಚಾರಣೆ ಮತ್ತು ಸ್ವೀಕಾರದ ಅನುಭವ ಇನ್ನೊಂದು ಶಬ್ದಕ್ಕೆ ಬೇರೆಯಾಗಿರುತ್ತದೆ. ಅಂದರೆ ಪ್ರತಿ ಶಬ್ದಕ್ಕೂ ಪ್ರತ್ಯೇಕವಾದ ಅರ್ಥವಿರುವಂತೆ ಪ್ರತ್ಯೇಕವಾದ ಭಾವ ಶಕ್ತಿಯೂ ಇರುತ್ತದೆ.


ಹೀಗೆ ಪ್ರತ್ಯೇಕ ಅಸ್ಥಿತ್ವವನ್ನು ಹೊಂದಿರುವ ಶಬ್ದಗಳು ಉಂಟು ಮಾಡುವ ಪರಿಣಾಮ ಕೂಡ ಬೇರೆ. ಒಬ್ಬನಿಗೆ ಸೂ.. ಮಗ ಎಂದು ಬೈದರೆ ಆತನಿಗೆ ಸಿಟ್ಟು ಬರುತ್ತದೆ. ಐ ಲವ್ ಯೂ ಎಂದರೆ ಸಂತೋಷವಾಗುತ್ತದೆ. ಯಾಕೆ ? ಈ ಶಬ್ದಗಳು ಬಳಕೆಯಿಂದ ಪಡೆದುಕೊಂಡ ಅರ್ಥ ಇದೆಯಲ್ಲ ಅದು ನಮ್ಮ ಮನಸ್ಸಿನಲ್ಲಿ ಮೂಡಿಸುವ ಪರಿಣಾಮವೇ ಇದಕ್ಕೆ ಕಾರಣ ಅಲ್ಲವೆ ? ಹಾಗಿದ್ದರೆ ಬೇರೆ ಬೇರೆ ಶಬ್ದಗಳು ನಮ್ಮ ಮನಸ್ಸಿನಲ್ಲಿ ಮೂಡಿಸುವ ಭಾವ ತರಂಗಗಳು ಬೇರೆ ಬೇರೆಯಾಗಿರುತ್ತದೆ ಎಂದಂತಾಯಿತು. ಆದರೆ ಈ ವಿಚಾರದಲ್ಲಿಯೂ ಏಕರೂಪತೆ ಅನ್ನುವುದಿಲ್ಲ. ಒಂದು ಶಬ್ದ ಒಬ್ಬನಲ್ಲಿ ಮೂಡಿಸುವ ಭಾವ ಪ್ರತಿಕ್ರಿಯೆ ಇನ್ನೊಬ್ಬನಲ್ಲಿ ಮೂಡಿಸುವ ಪ್ರತಿಕ್ರಿಯೆಗಿಂತ ಬೇರೆ. ಅಂದರೆ ಒಂದು ಶಬ್ದವನ್ನು ಬಳಸುವವ ಒಂದು ಅರ್ಥದಲ್ಲಿ ಬಳಸಿದರೆ ಅದನ್ನು ಕೇಳಿಸಿಕೊಂಡವ ಬೇರೆ ಅರ್ಥದಲ್ಲಿ ಅದನ್ನು ಸ್ವೀಕರಿಸಬಹುದು. ಅಂದರೆ ಒಂದು ಶಬ್ದಕ್ಕೆ ನಿಶ್ಚಿತವಾದ ಅರ್ಥ ಇದೆ ಎಂದುಕೊಂಡರೂ ಅದು ಶಬ್ದವನ್ನು ಕೇಳಿಸಿಕೊಳ್ಳುವವರು ಮತ್ತು ಬಳಸುವವರು ಹೊಸ ಹೊಸ ಅರ್ಥಗಳನ್ನು ನೀಡುತ್ತ ಆ ಶಬ್ದವನ್ನು ಇನ್ನೊಂದು ಸ್ಥರಕ್ಕೆ ಕೊಂಡೊಯ್ಯುತ್ತಲೇ ಇರುತ್ತಾರೆ. ಹೀಗಾಗಿ ಶಬ್ದವನ್ನು ಬಳಸುವವನೆಗೆ ಒಂದು ಶಬ್ದ ನೀಡುವ ಅನುಭವ ಒಂದಾದರೆ, ಅದನ್ನು ಕೇಳಿಸಿಕೊಂಡವನಿಗೆ ನೀಡುವ ಅನುಭವವೇ ಬೇರೆ. ಪ್ರತಿ ಶಬ್ದವನ್ನು ನಾವು ಬಳಸುವುದು ಮತ್ತು ಅರ್ಥೈಸುವುದು ನಮ್ಮ ಅನುಭವದದ ಆಧಾರದ ಮೇಲೆ. ಬೇರೊಬ್ಬರ ಅನುಭವದ ಆಧಾರದ ಮೇಲೆ ಬಳಸಲ್ಪಡುವ ಶಬ್ದ ನಮಗೆ ಅದೇ ಅರ್ಥವನ್ನು ನೀಡಲಾರದು. ಯಾಕೆಂದರೆ ಇನ್ನೊಬ್ಬರ ಅನುಭವ ಎಂದೂ ನಮ್ಮ ಅನುಭವವಾಗಲಾರದು.

ಇದನ್ನೆಲ್ಲ ನೋಡಿದರೆ ಒಂದಂತೂ ಸ್ಪಷ್ಟ. ಶಬ್ದಗಳು ಎಂದರೆ ಅದು ಕೇವಲ ಅಕ್ಷರಗಳ ಜೋಡಣೆ ಮಾತ್ರವಲ್ಲ. ಹಾಗೆ ಶಬ್ದಗಳನ್ನು ಪೊಣಿಸಿ ಸಿದ್ದಪಡಿಸುವ ವಾಕ್ಯಗಳು ಕೂಡ. ಇಂತಹ ಶಬ್ದ ಮತ್ತು ವಾಕ್ಯಗಳು ಮನಸ್ಸಿನಲ್ಲಿ ರೂಪಗೊಂಡ ಹೊರಬರುತ್ತವೆ. ಹಾಗಿದ್ದರೆ, ಶಬ್ದ ಮತ್ತು ವಾಕ್ಯವನ್ನು ಜೋಡಿಸುವ ಮನಸ್ಸು ತನ್ನೆಲ್ಲ ಶಕ್ತಿಯನ್ನು ಈ ಕ್ರಿಯೆಯಲ್ಲಿ ತೊಡಗಿಸುವುದಿಲ್ಲವೆ ? ಹಾಗೆ ತೊಡಗಿಸಿದರೆ ಆ ಮನಸ್ಸಿನಲ್ಲಿ ಶಕ್ತಿ, ಶಬ್ದ ಮತ್ತು ವಾಕ್ಯದಲ್ಲಿ ಪ್ರತಿಬಿಂಬಿತವಾಗಬಲ್ಲದೆ ?

ಹೀಗೆ ಮನಸ್ಸಿನಲ್ಲಿ ಆಕಾರ ಪಡೆದು ಮನಸ್ಸಿನ ಎಲ್ಲ ಶಕ್ತಿಯನ್ನು ತುಂಬಿಸಿಕೊಂಡ ಎಲ್ಲ ಶಬ್ದಗಳೂ ಪವಿತ್ರವೇ ಅಲ್ಲವೆ ?

Friday, August 15, 2008

ದೇವರು ದೇವರ ಭಕ್ತರು ಮತ್ತು............

ನನಗೂ ದೇವರಿಗೂ ಅಂತಹ ಒಳ್ಳೆಯ ಸಂಬಂಧ ಇಲ್ಲ. ದೇವರನ್ನು ನಾನು ನೋಡುವ ರೀತಿಯೇ ಬೇರೆ ಆಗಿರುವುದರಿಂದ ಸಾಮಾನ್ಯ ಜನ ನಂಬಿರುವ ದೇವರ ಜೊತೆ ಈ ಹಿಂದೆಯೇ ನಾನೊಂದು ಮಾತನ್ನು ಹೇಳಿದ್ದೆ.
"ನೀನು ನನ್ನ ತಂಟೆಗೆ ಬರಬೇಡ. ನಾನು ನಿನ್ನ ತಂಟೆಗೆ ಬರೋದಿಲ್ಲ "
ನಾನು ಅಷ್ಟಾಗಿ ದೇವರ ತಂಟೆಗೆ ಹೋಗಿಲ್ಲ. ಆತನೂ ಅಷ್ಟೇ. ನನ್ನ ತಂಟೆಗೆ ಬಂದಿಲ್ಲ. ಆದರೆ, ಈ ದೇವರ ಭಕ್ತರ ಸಮಸ್ಯೆ ಮಾತ್ರ ನನಗೆಂದೂ ತಪ್ಪಿಲ್ಲ. ನಮ್ಮ ಮನೆಯ ಸುತ್ತಮುತ್ತ ಮಹಾನ್ ದೈವ ಭಕ್ತರಿದ್ದಾರೆ. ಶನಿವಾರ ರಾತ್ರಿಯೆಲ್ಲ ಹರಿ ಕಥೆಯ ವ್ಯವಸ್ಥೆ ಮಾಡಿ, ದಾಸರು ಹೇಳುವ ಕಥೆ ಇಡೀ ಜಗತ್ತಿಗೆ ಕೇಳಲಿ ಎಂದು ಮೈಕ್ ಹಾಕಿ ಬಿಡುತ್ತಾರೆ. ಹಾಗೆ ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಮಸೀದಿಯಿದೆ. ಅವರು ಬೆಳಿಗ್ಗೆ ಮೈಕ್ ಹಾಕಿಯೇ ದೇವರ ಪ್ರಾರ್ಥನೆ ಮಾಡುತ್ತಾರೆ. ದೇವರು, ದೇವರ ಬಕ್ತರು ಮತ್ತು ಮೈಕಿನ ಸಮಸ್ಯೆ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ.
ದೇವರನ್ನು ದೇವರು ಎಂದು ನಾವು ಒಪ್ಪಿಕೊಳ್ಳುವುದಾದರೆ ಆತ ಶಕ್ತಿವಂತ. ಆತ ಸರ್ವವ್ಯಾಪಿ,ಸರ್ವಶಕ್ತ . ಆತನಿಗೆ ಕಿವಿಯ ಸಮಸ್ಯೆ ಇರುವುದು ಸಾಧ್ಯವಿಲ್ಲ. ಹಾಗೆ ಆತನ ಪ್ರಾರ್ಥನೆಯನ್ನು ಮೈಕಿನ ಮೂಲಕ ಮಾಡುವ ಅಗತ್ಯವಿಲ್ಲ. ನಾವು ಮನಸ್ಸಿನಲ್ಲಿ ಮಾಡಿದ ಪ್ರಾರ್ಥನೆ ಆತನಿಗೆ ತಲುಪಬೇಕು. ಅತನಿಗೆ ನಾವು ಏನು ಯೋಚನೆ ಮಾಡುತ್ತೇವೆ ಎಂಬುದು ಅರ್ಥವಾಗಬೇಕು, ಅದಿಲ್ಲದಿದ್ದರೆ ಆತ ದೇವನಲ್ಲ.
ಆದರೆ ದೇವರ ಭಕ್ತರು ಮಾತ್ರ ಮೈಕಿನ ಮೊರೆ ಹೋಗುತ್ತಾರೆ. ಹಬ್ಬ ಹರಿದಿನಗಳಲ್ಲಿ ಸಿನೆಮಾ ಹಾಡುಗಳನ್ನು ಹಾಕಿ ಶಾಂತಿಪ್ರಿಯರ ತಲೆ ತಿನ್ನುತ್ತಾರೆ. ಮಂತ್ರಗಳ ರಿಕಾರ್ಡ್ ಹಾಕಿ ಅದರ ಪಾವಿತ್ರತೆಯನ್ನು ಹಾಳುಗೆಡವುತ್ತಾರೆ. ಆದರೆ ಧರ್ಮವನ್ನು ಹೀಗೆ ಬೀದಿಗೆ ತಂದು ಬಿಕರಿ ಮಾಡುವುದನ್ನು ನೋಡುತ್ತ ಕುಳಿತುಕೊಳ್ಳುವುದು ನಮ್ಮ ಸರ್ಕಾರ. ಪೊಲೀಸರು ಕೂಡ ಇಂತಹ ಪಬ್ಲಿಕ್ ನ್ಯೂಸೆನ್ಸ್ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುವುದಿಲ್ಲ. ದೇವರಿಗೆ ಹೆದರದ ಈ ರಾಜಕಾರಣಿಗಳು ಮತ್ತು ಅಧಿಕಾರಶಾಹಿ ಪೊಲೀಸ್ ವ್ಯವಸ್ಥೆ ದೇವರ ಭಕ್ತರಿಗೆ ಹೆದರುತ್ತಾರೆ.
ದೇವರು ಅನ್ನುವವನಿದ್ದರೆ ಅತನ ಜೊತೆ ನಮ್ಮ ಸಂವಾದ ಮೌನವಾಗಿ ನಡೆಯಬೇಕು. ಅಲ್ಲಿ ಮಾತಿಗೆ ಶಬ್ದಕ್ಕೆ ಅರ್ಥವಿಲ್ಲ. ಅಲ್ಲಿ ಮೌಕಿಕವಾಗಿ ನಡೆಯುವುದು ಏನೂ ಇಲ್ಲ. ಎಲ್ಲವೂ ಒಂದು ನದಿ ಹರಿಯುವ ಹಾಗೆ ಗಾಳಿ ಬೀಸುವ ಹಾಗೆ, ನಡೆಯಬೇಕು. ಮೌನದ ಸೌಂದರ್ಯ ಅನಾವರಣಗೊಳ್ಳಬೇಕು. ಗದ್ದಲದಲ್ಲಿ ದೇವರು ಇರುವುದು ಸಾಧ್ಯವಿಲ್ಲ.
ದೇವರ ಮುಂದಿರುವ ಈಗಿನ ಮಹತ್ವದ ಕೆಲಸ ಎಂದರೆ ತನ್ನ ಭಕ್ತರಿಗೆ ಬುದ್ದಿ ಹೇಳುವುದು. ನೀವು ನನ್ನ ಪೂಜೆ ಮಾಡುವುದಿದ್ದರೆ ರಸ್ತೆಯಲ್ಲಿ ಮಾಡಬೇಡಿ ಎಂದು ಸ್ಪಷ್ಟವಾಗಿ ಹೇಳಬೇಕು. ನನಗೆ ಮೈಕ್ ಎಂದರೆ ಆಗುವುದಿಲ್ಲ, ನೀವು ಮೈಕ್ ಹಾಕಿದರೆ ನಿಮ್ಮ ಬೇಡಿಕೆಯನ್ನು ಈಡೇರಿಸುವುದಿಲ್ಲ ಎಂದು ಬೆದರಿಕೆ ಒಡ್ಡಬೇಕು. ಆಗಲಾದರೂ ಭಕ್ತರು ಬದಲಾಗಬಹುದು. ಭಕ್ತರು ಬದಲಾದರೆ, ದೇವರಿಗೂ ಒಳ್ಳೆಯದು, ಸಮಾಜಕ್ಕೂ ಒಳ್ಳೆಯದು.

Thursday, August 14, 2008

ಸ್ವಾತಂತ್ರೋತ್ಸವ, ಟೋಪಿ ಮತ್ತು ಪೆಪ್ಪರಮೆಂಟ್ ......

ಸ್ವಾತಂತ್ರೋತ್ಸವ ಎಂದ ತಕ್ಷಣ ನನ್ನ ಮನಸ್ಸು ಹಲವು ವರ್ಷಗಳಷ್ಟು ಹಿಂದಕ್ಕೆ ಓಡುತ್ತದೆ. ಮಲೆನಾಡಿನ ಅ ಮಳೆ. ಅದು ಅಕಾಶವೇ ಕಳಚಿ ಬೀಳುತ್ತದೆಯೇನೊ ಏನ್ನುವ ಹಾಗೆ. ಆ ಮಳೆಯಲ್ಲಿ ಹೊಸ ಬಟ್ಟೆಯನ್ನು ತೊಟ್ಟು ಶಾಲೆಗೆ ಓಡುತ್ತಿದ್ದ ನಾವು. ನಮಗೆ ಆ ಮಳೆಯಲ್ಲಿ ಹೆಜ್ಜೆ ಹಾಕುವುದೇ ಒಂದು ಚಂದ. ರಸ್ತೆಯಲ್ಲಿ ಹರಿಯುತ್ತಿದ್ದ ನೀರನ್ನು ಕಾಲಿನಲ್ಲಿ ಒದ್ದು ಎದೆಯತ್ತರಕ್ಕೆ ಹಾರಿಸಿ ಖುಷಿ ಪಡುತ್ತ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದೆವು. ಶಾಲೆ ತಲುಪಿದ ತಕ್ಷಣ ಮೊದಲು ನಡೆಯುತ್ತಿದ್ದುದು ಪ್ರಭಾತ್ ಪೇರಿ. ಮಳೆಯಲ್ಲಿ ಕೊಡೆ ಹಿಡಿದ ಶಾಲಾ ಮಕ್ಕಳ ಮೆರವಣಿಗೆಯನ್ನು ತಮ್ಮ ತಮ್ಮ ಮನೆಗಳ ಹೆಬ್ಬಾಗಿಲಿನಲ್ಲಿ,. ಅಂಗಡಿಗಳ ಮುಂಭಾಗದಲ್ಲಿ ನಿಂತು ನೋಡುವ ಊರಿನ ಜನ. ಅಂದಿನ ಮಟ್ಟಿಗೆ ನಾವೇ ಹಿರೋಗಳು. ಎಲ್ಲರ ದೃಷ್ಟಿಯೂ ನಮ್ಮ ಮೇಲೆ. ಎಲ್ಲರೂ ನಮ್ಮನ್ನು ನೋಡುತ್ತಿದ್ದಾರೆ ಎಂಬುದೇ ನಮಗೆ ಹಮ್ಮು ಬಿಮ್ಮು ಬರುವಂತೆ ಮಾಡುತ್ತಿತ್ತು.

ಪ್ರಭಾತ್ ಪೇರಿ ಮುಗಿದ ಮೇಲೆ ಸಭಾ ಕಾರ್ಯಕ್ರಮ. ಊರಿನ ಪ್ರಮುಖರು ಬಂದು ಮಾಡುತ್ತಿದ್ದ ಈ ಭಾಷಣ ನಮಗೆ ಅಂತಹ ಸಂತೋಷವನ್ನು ನೀಡುವ ವಿಚಾರ ಆಗಿರಲಿಲ್ಲ. ಆದರೆ ನಾವೆಲ್ಲ ಕಾಯುತ್ತಿದ್ದುದು ಸಭೆ ಮುಗಿದ ಮೇಲೆ ನಮಗೆ ಹಂಚುತ್ತಿದ್ದ ಕೆಂಪನೆಯ ಪೆಪ್ಪರಮೆಂಟಿಗಾಗಿ. ಲಿಂಬು ಎಂದು ಕರೆಯುತ್ತಿದ್ದ ಈ ಪೆಪ್ಪರಮೆಂಟು ಕೈಗೆ ಬಂದ ಮೇಲೆ ನಾವೆಲ್ಲ ಕೂಗುತ್ತ, ಜಿಗಿಯುತ್ತ ಮನೆಗೆ ಹಿಂತಿರುಗುತ್ತಿದ್ದೆವು.

ಬಹಳ ವರ್ಷಗಳ ಕಾಲ ನನಗೆ ಸ್ವಾತಂತ್ರೋತ್ಸವ ಎಂದರೆ ಹುಳಿ ಮತ್ತು ಸಿಹಿಯ ಸೇರಿದ ಪೆಪ್ಪರಮೆಂಟ್ ನೆನಪಾಗುತ್ತಿತ್ತು. ಹಳ್ಳಿಯ ಹೈದರಾದ ನಮಗೆ ಪೆಪ್ಪರಮೆಂಟು ಸಿಗುತ್ತಿದ್ದುದು ಅಪರೂಪವಾದ್ದರಿಂದ, ನಾವೆಲ್ಲ ಇಂತಹ ರಾಷ್ತ್ರೀಯ ಹಬ್ಬಗಳಿಗಾಗಿ ಕಾಯುತ್ತಿದ್ದೆವು. ನಂತರವೂ ಕೂಡ ಈ ಪೆಪ್ಪರಮೆಂಟು ಸ್ವಾತಂತ್ರ್ಯ ಉತ್ಸವದ ಜೊತೆ ತಳಕು ಹಾಕಿಕೊಂಡು ನನ್ನ ಮನಸ್ಸಿನಲ್ಲಿ ಸ್ಥಾಯಿ ಭಾವವಾಗಿ ಉಳಿದುಬಿಟ್ಟಿತು. ಹಾಗೆ ಪೆಪ್ಪರಮೆಂಟನ್ನು ಬಿಟ್ಟು ಸ್ವಾತಂತ್ರೋತ್ಸವನ್ನು ಕಲ್ಪಿಸಿಕೊಳ್ಳುವುದು ನನಗೆ ಸಾಧ್ಯವಾಗದ ಸ್ಥಿತಿಯನ್ನು ನಾನು ತಲುಪಿಬಿಟ್ಟಿದ್ದೆ.

ಈಗಲೂ ನನಗೆ ಸ್ವಾತಂತ್ರ್ಯ ಎಂದ ತಕ್ಷಣ ಪೆಪ್ಪರಮೆಂಟ್ ನೆನಪಾಗುತ್ತದೆ. ಸ್ವಾತಂತ್ರ್ಯದ ಪೆಪ್ಪರಮೆಂಟನ್ನು ಚಪ್ಪರಿಸುವ ಕೆಲವೇ ಕೆಲವು ಜನ ನೆನಪಾಗುತ್ತಾರೆ. ಅವರಲ್ಲಿ ನಮ್ಮ ಜನಪ್ರತಿನಿಧಿಗಳು ಕಣ್ಣ ಮುಂದೆ ಬರುತ್ತಾರೆ. ಹಾಗೆ ಗಾಂಧಿ ಟೋಪಿ ನೆನಪಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಆಸ್ತಿ ಮನೆಯನ್ನು ಕಳೆದುಕೊಂಡ ನನ್ನ ಅಜ್ಜ ಎಂದೂ ತನ್ನ ತಲೆಯ ಮೇಲಿನ ಗಾಂಧಿ ಟೋಪಿಯನ್ನು ತೆಗೆಯುತ್ತಿರಲಿಲ್ಲ. ಸ್ವಾತಂತ್ರ್ಯ ದಿನಾಚರಣೆಯ ದಿನ ನನ್ನ ತಲೆಯ ಮೇಲೂ ಟೋಪಿ ಶಾಲೆಗೆ ಕಳುಹಿಸುತ್ತಿದ್ದ ಅಜ್ಜ. ನಂತರದ ದಿನಗಳಲ್ಲಿ ಕೆಲವು ರಾಜಕಾರಣಿಗಳ ತಲೆಯ ಮೇಲೆ ನಾನು ಈ ಟೋಪಿಯನ್ನು ನೋಡುತ್ತಿದ್ದೆ. ಕೊನೆಗೆ ಗಾಂಧಿ ಎಲ್ಲರ ಮನಸ್ಸಿನಲ್ಲಿ ಮರೆಯಾದ ಹಾಗೆ, ಟೋಪಿ, ಕಾಂಗ್ರೆಸ್ಸಿಗರ ತಲೆಯಿಂದ ಹಾರಿ ಅದೃಶ್ಯವಾಯಿತು. ಅದೃಶ್ಯ ರೂಪದಲ್ಲೆ ಜನರ ತಲೆಯ ಮೇಲೆ ಬಂದು ಕುಳಿತಿತು. ರಾಜಕಾರಣಿಗಳು ಈ ಟೋಪಿಯನ್ನು ಗೊತ್ತಾಗದ ಹಾಗೆ ಜನರ ತಲೆಯ ಮೇಲೆ ಇಟ್ಟು ಬಿಟ್ಟರು. ಈಗ ಕಾಂಗ್ರೆಸ್ಸಿಗರು ಸ್ವಾತಂತ್ರೋತ್ಸ್ವದ ದಿನ ಟೋಪಿಯನ್ನು ಹೊರಕ್ಕೆ ತೆಗೆದು ತಲೆಯ ಮೇಲಿಟ್ಟುಕೊಂಡು ಪಕ್ಷದ ಕಚೇರಿಗೆ ಬಂದು ಧ್ವಜ ವಂದನೆಯಲ್ಲಿ ಪಾಲ್ಗೊಳ್ಳುತ್ತಾರೆ.

ಸ್ವಾತಂತ್ರೋತ್ಸವ ಎಂದ ತಕ್ಷಣ ಟೋಪಿ ಮತ್ತು ಪೆಪ್ಪರಮೆಂಟು ಹಲವು ಅರ್ಥಗಳನ್ನು ಮನಸ್ಸಿನಲ್ಲಿ ಮೂಡಿಸುತ್ತದೆ. ಸ್ವಾತಂತ್ರ್ಯಾ ನಂತರದ ಸ್ಥಿತಿಯನ್ನು ಟೋಪಿ ಮತ್ತು ಪೆಪ್ಪರಮೆಂಟು ಅದ್ಭುತವಾಗಿ ವಿವರಿಸುತ್ತದೆ ಎಂದು ಅನ್ನಿಸುತ್ತದೆ. ತಲೆಯ ಮೇಲೆ ಟೋಪಿ ಹಾಕಿ ಬಾಯಲ್ಲಿ ಪೆಪ್ಪರಮೆಂಟು ಇಡುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ನಮ್ಮ ತಲೆಯ ಮೇಲೆ ಇಟ್ಟ ಟೋಪಿಯನ್ನು ಮುಟ್ಟಿ ನೋಡಿಕೊಂಡು, ಈ ಟೋಪಿ ಎಷ್ಟು ಚೆನ್ನಾಗಿದೆ ಎಂದು ನಾವೆಲ್ಲ ಉದ್ಘಾರ ತೆಗೆಯುತ್ತಿದ್ದೇವೆ..

ಕಳೆದ ವರ್ಷ ಸ್ವಾತಂತ್ರೋತ್ವದ ಸಂದರ್ಭದಲ್ಲಿ "ನಿಮಗೆ ಗಾಂಧಿ ಗೊತ್ತಾ ?" ಎಂಬ ಪ್ರಶ್ನೆಯನ್ನು ಸಾರ್ವಜನಿಕರಿಗೆ ಕೇಳುವಂತೆ ನಮ್ಮ ಹುಡುಗರಿಗೆ ಹೇಳಿದ್ದೆ. ಅವರಿಂದ ಬಂದ ಉತ್ತರವನ್ನು ನಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಿದ್ದೆವು. ಬಹಳಷ್ಟು ಜನರಿಗೆ ಗೊತ್ತಿದ್ದ ಗಾಂಧಿಯೇ ಬೇರೆ. ಈ ವರ್ಷ ನಿಮಗೆ ರಾಷ್ಟ್ರ ಗೀತೆ ಗೊತ್ತಾ, ಗೊತ್ತಿದ್ದರೆ ಹಾಡಿ ಎಂದು ಕೇಳಿದ್ದೆವು. ಬಹಳಷ್ಟು ಜನರಿಗೆ ಕರ್ನಾಟಕದ ನಾಡ ಗೀತೆ ಮತ್ತು ರಾಷ್ಟ್ರಗೀತೆಯ ನಡುವಿನ ವ್ಯತ್ಯಾಸವೂ ಗೊತ್ತಿರಲಿಲ್ಲ. ಯಾರೊಬ್ಬರೂ ಸರಿಯಾಗಿ ರಾಷ್ಟ್ರ ಗೀತೆಯನ್ನು ಹಾಡಲೇ ಇಲ್ಲ !

ನಾವು ಗಾಂಧಿ ಎಂದ ತಕ್ಷಣ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಪೂಜಾ ಗಾಂಧಿಯ ಬಗ್ಗೆ ಮಾತನಾಡುವ ಸ್ಥಿತಿಯಲ್ಲಿದ್ದೇವೆ. ಯಾರಾದರೂ ಕುಡಿಯದಿದ್ದರೆ, ಪರಸ್ರ್ತ್ರಿ ಸಂಗ ಮಾಡದಿದ್ದರೆ, ಅವನೋ, ಗಾಂಧಿ ನನಮಗ ಏನಕ್ಕೂ ಪ್ರಯೋಜನ ಇಲ್ಲ ಎಂದು ಮಾತನಾಡುವುದನ್ನು ಕೇಳುತ್ತೇವೆ. ಇವತ್ತಿನ ಯಾವುದೇ ಒಬ್ಬ ಹುಡುಗಿಯ ಮುಂದೆ ಒಂದು ಪ್ರಸ್ತಾವನೆಯನ್ನು ಇಡಿ. ಈ ಹುಡುಗ ತುಂಬಾ ಒಳ್ಳೆಯವ, ಯಾವುದೇ ಚಟವಿಲ್ಲ, ನೀನು ಮದುವೆಯಾಗಬಹುದು ಎಂದರೆ ಆಕೆ ಉತ್ತರ ನೀಡುತ್ತಾಳೆ: ಗಾಂಧಿನಾ ನನಗೆ ಬೇಡ !

ಇದು ಸ್ವಾತಂತ್ರ್ಯ ಬಂದ ಮೇಲೆ ನಾವು ಹಾಕಿಸಿಕೊಂಡ ಟೋಪಿ. ಹಾಗೂ ನಮ್ಮ ಬಾಯಲ್ಲಿ ಚಪ್ಪರಿಸುತ್ತಿರುವ ಪೆಪ್ಪರಮೆಂಟು. ನಾನು ನನ್ನ ಮನಸ್ಸಿನಲ್ಲಿ ಬಂದ ಈ ಮಾತುಗಳನ್ನು ಹೇಳುವಾಗ ಪ್ರಧಾನಿ ಡಾ. ಮನಮೋಹನ್ ಸಿಂಗ್ ಕೆಂಪು ಕೋಟೆಯ ಮೇಲಿನಿಂದ ಭಾಷಣ ಮಾಡಿ ಮುಗಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಮಾಣೇಕ್ ಷಾ ಮೈದಾನದಲ್ಲಿ ಭಾಷಣ ಕುಟ್ಟುತ್ತಿದ್ದರು. ಬೆಂಗಳೂರಿನ ರಸ್ತೆ ನಿರ್ಜನವಾಗಿದ್ದು ಜನ ಸ್ವಾತಂತ್ರ್ಯದ ರಜೆಯ ಸವಿಯನ್ನು ಅನುಭವಿಸುತ್ತಿದ್ದರು.ಆಗಲೂ ನಾನು ಹುಡುಕಿತ್ತಿದ್ದುದು ಅದೇ ಟೋಪಿ ಮತ್ತು ಪೆಪ್ಪರಮೆಂಟ್ ಗಾಗಿ. ಹಾಗೆ ನನ್ನ ಅರ್ಧ ಬೋಳಾದ ತಲೆಯನ್ನು ಮುಟ್ಟಿಕೊಂಡೆ. ಅಲ್ಲಿ ಟೋಪಿ ಬಂದು ಕುಳಿತು ನಗುತ್ತಿತ್ತು. ನನ್ನ ಬಾಯಲ್ಲಿ ಅದೇ ಪೆಪ್ಪರಮೆಂಟು, ಇದನ್ನು ಇಟ್ಟವರು ಯಾರು ಎಂಬುದನ್ನು ಯೋಚಿಸದೇ ನಾನು ಪೆಪ್ಪರಮೇಂಟಿನ ಸವಿಯನ್ನು ಸವಿಯತೊಡಗಿದೆ.

Wednesday, August 6, 2008

............? ..................?...........?...............?

ಅಂದು ನಾನು ಆ ಪ್ರದೇಶವನ್ನು ತಲುಪಿದಾಗ ರಾತ್ರಿ ಬಹಳ ಹೊತ್ತಾಗಿತ್ತು. ಸಮಯದ ಸರಿಯಾದ ಅಂದಾಜು ನನಗೆ ಇರಲಿಲ್ಲ. ಹಾಗೆ ನೋಡಿದರೆ ದಿನವನ್ನು ಮರೆತು ಎಷ್ಟೋ ದಿನಗಳಾಗಿದ್ದವು. ನಾನು ಆ ಕಾಡಿನಂತಹ ಕಾಡಿನಲ್ಲಿ ಸುತ್ತುತ್ತಿದ್ದೆ. ಕಂಡ ಕಂಡವರನ್ನೆಲ್ಲ ನೋಡುತ್ತ ಈತ ನಿಜವಾದ ಸಾಧಕನಿರಬಹುದೇ ? ಎಂದು ನನ್ನನ್ನೆ ನಾನು ಪ್ರಶ್ನಿಸಿಕೊಳ್ಳುತ್ತಿದ್ದೆ. ನಾನು ಯಾರನ್ನೇ ನೋಡಿದರೂ ನೋಡುವುದು ಅವರ ಕಣ್ಣುಗಳನ್ನು. ಯಾಕೆಂದರೆ ಮನುಷ್ಯನ ಎಲ್ಲ ಅಂಗಗಳು ಸುಳ್ಳುಗಳನ್ನು ಹೇಳಿದರೂ ಕಣ್ನು ಮಾತ್ರ ಸುಳ್ಳು ಹೇಳುವುದಿಲ್ಲ. ಕಣ್ಣು ಅತ್ಯಂತ ಪ್ರಾಮಾಣಿಕ.


ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋದವನು ಒಬ್ಬ ಶೇರ್ಪಾ. ನಾನು ಆತನನ್ನು ಕರೆಯುತ್ತಿದ್ದುದು ಬಹದೂರ್ ಅಂತ. ಆತ ನನಗೆ ಒಬ್ಬ ನಿಗೂಢ ವ್ಯಕ್ತಿಯನ್ನು ಪರಿಚಯಿಸುವುದಾಗಿ ಭರವಸೆ ನೀಡಿದ್ದ. ಆದರೆ ಆ ವ್ಯಕ್ತಿ ಯಾರು ಎಂಬುದನ್ನು ಮಾತ್ರ ಆತ ನನಗೆ ಹೇಳಿರಲಿಲ್ಲ. ನಾವು ಆ ಚಳಿಯಲ್ಲಿ ಹೆಜ್ಜೆ ಹಾಕುತ್ತಿದ್ದೆವು. ಮುಂದಿನ ದಾರಿ ಕಾಣುತ್ತಿರಲಿಲ್ಲ. ನಾವು ಸಾಗಿ ಬಂದ ದಾರಿಯ ಹೆಜ್ಜೆ ಗುರುತುಗಳು ಇರಲಿಲ್ಲ. ನಾವು ಹಿಂದೆಯೂ ಇರಲಿಲ್ಲ. ಮುಂದೇನು ಗೊತ್ತಿರಲಿಲ್ಲ. ಹಾಗೆ ಸಾಗುತ್ತಿದ್ದ ನಮಗೆ ಸಮಯ ಎಲ್ಲವನ್ನೂ ಬಿಟ್ಟು ಚಾದರ ಹೊದ್ದು ಮಲಗಿದಂತೆ ಅನ್ನಿಸುತ್ತಿತ್ತು.

ಸುಮಾರು ನಾಲ್ಕು ಗಂಟೆಗಳ ನಂತರ ನಾವು ತಲುಪಿದ್ದು ಒಂದು ಪ್ರಪಾತದಂತಿದ್ದ ಪ್ರದೇಶದ ಸಮೀಪ. ಆ ಪ್ರಪಾತದ ಪಕ್ಕದಲ್ಲಿ ಸಣ್ಣ ಕಾಲುದಾರಿಯಿತ್ತು. ಆ ಕಾಲುದಾರಿಯಲ್ಲಿ ಸಾಗಿದಾಗ ಮುಂದೆ ಕಂಡಿದ್ದು ಒಂದು ಗುಹೆ. ಹೊರಗಿನಿಂದ ನೋಡಿದರೆ ಅಲ್ಲಿ ಗುಹೆ ಇದ್ದುದು ಕಾಣುತ್ತಿರಲಿಲ್ಲ. ಆತ ಒಳ ಪ್ರವೇಶಿಸುವುದಕ್ಕೆ ಮೊದಲು ಬಹಾದೂರ್ ನನಗೆ ಕೊನೆಯ ಮಾತನ್ನು ಹೇಳುವಂತೆ ಹೇಳಿದ.

"ನೋಡಿ ನೀವು ಒಳಗೆ ಹೋದವರು ಸುಮ್ಮನೆ ನೋಡಿ. ಆದರೆ ನೀವು ಅಲ್ಲಿ ಏನನ್ನೂ ನೋಡುವುದಿಲ್ಲ. ಅಲ್ಲಿನ ಮಾತನ್ನು ಕೇಳಿಸಿಕೊಳ್ಳಿ. ಆದರೆ ಅಲ್ಲಿ ಏನೂ ಕೇಳಿಸದಂತೆ ಇದ್ದುಬಿಡಿ"

ಹಲವು ಹುಚ್ಚರನ್ನು, ವಿಚಿತ್ರವಾಗಿ ವರ್ತಿಸುವವರನ್ನು, ಅರ್ಥವಾಗದಂತೆ ಮಾತನಾಡುವವರನ್ನು ಸಾಕಷ್ಟು ನೋಡಿದ್ದರಿಂದ ಈತನ ಮಾತನ್ನು ನಾನು ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಒಪ್ಪಿಗೆ ಸೂಚಿಸುವವನಂತೆ ತಲೆ ಹಾಕಿದೆ. ಆತಗುಹೆಯ ಒಳಗೆ ಹೆಜ್ಜೆಹಾಕಿದ. ನಾನು ಆತನನ್ನು ಹಿಂಬಾಲಿಸಿದೆ.

ಒಳಗಡೆ ಕಪ್ಪು ಕತ್ತಲೆ. ಸ್ವಲ್ಪ ಸಮಯದ ನಂತರ ನನ್ನ ಕಣ್ಣುಗಳು ಆ ಕತ್ತಲೆಗೆ ಹೊಂದಿಕೊಳ್ಳತೊಡಗಿದವು. ನಾನು ಆ ಗುಹೆಯ ಒಳಗೆ ಕಣ್ಣು ಹಾಯಿಸಿದೆ. ತುಂಬಾ ಶುಭ್ರವಾದ ಗುಹೆ. ನೆಲವನ್ನು ಆಗತಾನೆ ನೀರು ಹಾಕಿ ಸಾರಿಸಿದಂತೆ. ಹಾಗೆ ಜೊತೆಗೆ ಅಲ್ಲಿ ವಾತಾವರಣ. ಸ್ವಲ್ಪ ಸಮಯದಲ್ಲಿ ಮನಸ್ಸು ಹೂವಿನಂತೆ ಅನ್ನಿಸತೊಡಗಿತ್ತು. ತುಂಬಾ ಹಗುರ. ಏನೋ ಅರ್ಥವಾಗದ ಸಂತಸ, ಸಂಭ್ರಮ. ಸುಮ್ಮನೆ ಎದ್ದು ಕುಣಿಯೋಣ ಅನ್ನಿಸುವ ಹಾಗೆ. ನಮ್ಮ ಸುತ್ತಮುತ್ತಲಿನ ವಾತಾವರಣ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ನಾನು ಅರಿಯದವನಲ್ಲ. ಸದಾ ನಗು ನಗುತ್ತ ಇರುವವರ ಮಧ್ಯೆ ಇದ್ದರೆ ನಮ್ಮ ಮನಸ್ಸು ಪ್ರಫುಲ್ಲವಾಗುತ್ತದೆ. ಹಾಗೆ ಸದಾ ಆಳುವವರ ನಡುವೆ ಇದ್ದರೆ ನಾವು ಅಳತೊಡಗುತ್ತೇವೆ. ಆದ್ದರಿಂದಲೇ ನಾವು ಎಂತಹ ಜನರ ನಡುವೆ ಇರುತ್ತೇವೆ ಎಂಬುದು ಬಹಳ ಮುಖ್ಯ.

ಆದರೆ ಅಲ್ಲಿ ನನಗಾಗುತ್ತಿದ್ದ ಅನುಭವ ನನ್ನ ಆವರೆಗಿನ ಅನುಭವಕ್ಕಿಂತ ತುಂಬಾ ಭಿನ್ನವಾಗಿತ್ತು. ನಾನು ಒಂದು ರೀತಿಯಲ್ಲಿ ಭಾವ ರಹಿತನಾಗಿದ್ದೆ. ಅಥವಾ ನನ್ನ ಮನಸ್ಸಿನಲ್ಲಿ ಒಡಮೂಡಿದ ಸಂಭ್ರಮ, ಸಂತೋಷ ಸ್ಥಾಯಿ ಭಾವ ವಾಗಿತ್ತು. ಅದನ್ನು ಬಿಟ್ಟು ಬೇರೆ ಭಾವವೇ ನನಗೆ ಬರುತ್ತಿರಲಿಲ್ಲ. ಮೊದಲ ಬಾರಿಗೆ ಬದುಕು ಏಷ್ಟೊಂದು ಸುಂದರ ಎಂದು ಅನ್ನಿಸತೊಡಗಿತ್ತು.

ನಾನು ನನ್ನ ಪಕ್ಕದಲ್ಲಿದ್ದ ಬಹದೂರ್ ನತ್ತ ನೋಡತೊಡಗಿದೆ. ಆತನಲ್ಲಿ ಯಾವ ಬದಲಾವಣೆಯಾದಂತೆ ಕಂಡು ಬರಲಿಲ್ಲ. ಆತ ಆ ಗುಹೆಯ ಮೂಲೆಯಡೆಗೆ ತದೇಕ ಚಿತ್ತದಿಂದ ನೋಡುತ್ತಿದ್ದ. ನಾನು ಅವನ ದೃಷ್ಟಿಯನ್ನು ಅನುಸರಿಸಿ ನೋಡತೊಡಗಿದೆ. ನಾನು ಏನನ್ನೋ ಹೇಳುವುದಕ್ಕೆ ಬಹದೂರ್ ನತ್ತ ನೋಡಿದೆ. ಆದರೆ ಆತ ಈ ಜಗತ್ತನ್ನೇ ಮರೆತವನಂತೆ ಇದ್ದ. ಈ ಮನಸ್ಥಿತಿಯಲ್ಲಿ, ಪರಿಸ್ಥಿತಿಯಲ್ಲಿ ಎಷ್ಟು ಹೊತ್ತು ಕಳೆದೆವೋ ತಿಳಿಯದು. ಒಮ್ಮೆಲೆ ಕತ್ತಲೆಯನ್ನು ಹೊಡೆದೊಡಿಸುವಂತೆ ಒಂದು ಆಕೃತಿ ನಮ್ಮತ್ತ ನಡೆದು ಬಂತು. ಬಹದೂರ್ ನೋಡುತ್ತಿದ್ದ ಗುಹೆಯ ಮೂಲೆಯಿಂದ ನಡೆದು ಬಂದ ಈ ಆಕೃತಿ ನಮ್ಮ ಹತ್ತಿರ ಬರುತ್ತಿದ್ದಂತೆ ನನಗೆ ಶಾಕ್.

ಆಕೆ ಒಬ್ಬ ೨೫ರ ಯುವತಿ. ನೀಳಕಾಯ. ಕಾಲಿನ ಮಧ್ಯಭಾಗದವರೆಗೆ ಇಳಿಬಿಟ್ಟ ಕೂದಲು. ನನಗೆ ತಕ್ಷಣ ಮನಸ್ಸಿನಲ್ಲಿ ಬಂದಿದ್ದು, ನಾನು ಸಣ್ಣಿಂದಲೂ ನೋಡುತ್ತ ಬಂದ ಅಕ್ಕಮಹಾದೇವಿಯ ಕ್ಯಾಲೆಂಡರು. ಹೌದು, ಈಕೆಯೂ ಸಂಪೂರ್ಣವಾಗಿ ನಗ್ನಳಾಗಿದ್ದಳು !ಮುಖದಲ್ಲಿ ಇದ್ದ ಸಣ್ಣ ನಗೆ. ಆ ನಗೆಯಲ್ಲಿ ವಿಚಿತ್ರ ಸೆಳೆತ. ಎಲ್ಲವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಹಾಗೆ.

ನನ್ನ ಬದುಕಿನಲ್ಲಿ ಅಲ್ಲಿಯವರೆಗೆ ನಗ್ನ ವ್ಯಕ್ತಿಗಳನ್ನೇ ನೋಡದಿದ್ದವ ನಾನು. ಆದರೆ ನನಗೆ ಶಾಕ್ ಆಗುವ ಹಾಗೆ ನನ್ನಲ್ಲಿ ಬೇರೆ ರೀತಿಯ ಭಾವನೆಗಳು ಬರುತ್ತಲೇ ಇರಲಿಲ್ಲ. ಅಮ್ಮನ ಬಳಿಗೆ ಒಡುವ ಮಗುವಿನ ಭಾವ ನನ್ನಲ್ಲಿ ತುಂಬಿಕೊಂಡಿತ್ತು. ಇದನ್ನು ಬಿಟ್ಟರೆ ಬೇರೆ ಭಾವವೇ ಇಲ್ಲ ! ತಾಯಿಯ ಮಡಿಲಿನಲ್ಲಿ ಆಶ್ರಯ ಪಡೆಯುವ ಶಿಶುವಿನ ಮನಸ್ಥಿತಿ ನನ್ನದಾಗಿಬಿಟ್ಟಿತ್ತು.

ಆಕೆ ಮಾತನಾಡತೊಡಗಿದಳು.

"ನಾನು ಬದುಕುತ್ತಿದ್ದೇನೆ ಎಂದರೆ ಅದು ಸುಳ್ಳು. ನೀನು ಬದುಕುತ್ತಿದ್ದಿ ಎಂದುಕೊಂಡರೆ ಅದು ಭ್ರಮೆ. ನಾನು ಎಂದರೆ ನನ್ನ ಭಾವನೆ. ನೀನು ಎಂದರೆ ನಿನ್ನ ಭಾವನೆ. ಭಾವನೆ ಇದ್ದಹಾಗೆ ಬದುಕಿರುತ್ತದೆ. ಇದನ್ನು ಬಿಟ್ಟು ಬೇರೆ ಇಲ್ಲ. ನಿನಗೆ ಇಲ್ಲಿ, ನೀನು ಗಂಡಸು ಎಂಬ ಭಾವನೆ ಬರುತ್ತಿಲ್ಲ. ನಿನಗೆ ಶಿಶುವಿನ ಭಾವನೆ ಮಾತ್ರ. ಆದ್ದರಿಂದ ನಿನಗೆ ನಗ್ನ ದೇಹವನ್ನು ನೋಡಿದರೂ ಕಾಮನೆಗಳು ಜಾಗೃತವಾಗುತ್ತಿಲ್ಲ. ನಿನಗೆ ನೀನು ಗಂಡಸು ಎಂದುಕೊಂಡಾಗ ಮಾತೃ ನಿನ್ನ ಕಾಮನೆಗಳು ಜಾಗೃತವಾಗುತ್ತದೆ. ಆದರೆ ನಾನು ನಿನಗೆ ತಾಯಿ. ನಿನ್ನ ಮನಸ್ಸು ಬೇರೆ ರೀತಿ ಯೋಚಿಸುವುದು ಸಾಧ್ಯವೇ ಇಲ್ಲ. "

ನಾನು ಅವಳನ್ನೇ ನೋಡುತ್ತಿದ್ದೆ. ಅವಳು ಹೇಳುತ್ತಿದ್ದುದು ನೂರಕ್ಕೆ ನೂರರಷ್ಟು ಸತ್ಯವಾಗಿತ್ತು. ನನಗೆ ನನ್ನ ಅಮ್ಮ ನೆನಪಾಗುತ್ತಿದ್ದಳು. ಅಮ್ಮ ನನ್ನನ್ನು ಎತ್ತಿಕೊಂಡು ಮುದ್ದಾಡುತ್ತಿದ್ದುದು, ನಾನು ಅವಳ ಜೊತೆ ಹಠ ಮಾಡುತ್ತಿದ್ದುದು ಎಲ್ಲವೂ ಕಣ್ಣು ಮುಂದೆ ಬರುತ್ತಿತ್ತು.

"ಮನುಷ್ಯ ಎಂದರೆ ಆತನ ಮನಸ್ಸು. ಮನಸ್ಸು ಬಿಟ್ಟರೆ ಬೇರೆನೂ ಇಲ್ಲ. ಈಗ ನೀನು ಪುಟ್ಟ ಬಾಲಕ. ನೀನಿನ್ನೂ ಗಂಡಸಾಗಿಲ್ಲ. ನಿನಗೆ ಯೌವನ ಬಂದಿಲ್ಲ. ನೀನು ಯಾವ ಸ್ತ್ರೀಯನ್ನು ಮಾತೃತ್ವದ ಭಾವನೆಯನ್ನು ಬಿಟ್ಟು ಬೇರೆ ರೀತಿ ನೋಡಲಾರೆ."

ಅವಳ ಮಾತಿನಲ್ಲಿ ಎಂತಹ ಆಕರ್ಷಣೆ ಇತ್ತೆಂದರೆ, ಅವಳು ಹೇಳಿದ್ದನ್ನು ಬಿಟ್ಟು ಬೇರೆ ಯೋಚನೆಗಳು ಮನಸ್ಸಿನಲ್ಲಿ ಬರುತ್ತಲೇ ಇರಲಿಲ್ಲ. ನಾನು ಆಗಲೂ ಆಸ್ಥಿತಿಯಲ್ಲಿ ಬೇರೆ ರೀತಿ ನೋಡುವುದಕ್ಕೆ ಯತ್ನಿಸತೊಡಗಿದೆ. ಆಕೆಯ ಸೌಂದರ್ಯ ಎಷ್ಟು ಅದ್ಭುತ ಎಂದು ಯೋಚಿಸಲು ಯತ್ನಿಸಿದೆ. ಹಾಗೆ ಅವಳ ಜೊತೆ ನಾನಿದ್ದಂತೆ ಕಲ್ಪಿಸಿಕೊಳ್ಳಲು ನೋಡಿದೆ. ಆದರೆ ನಾನಾಗ ನಿಸ್ಸಹಾಯಕನಾಗಿದ್ದೆ. ನನ್ನ ಮನಸ್ಸು ಬಾಲ್ಯಕ್ಕೆ ಒಡಿ ಹೋಗಿತ್ತು. ನನ್ನ ಊರಿನ ರಸ್ತೆಗಳಲ್ಲಿ ಗೋಲಿ ಆಡುತ್ತಿದ್ದಂತೆ ಅನ್ನಿಸತೊಡಗಿತು. ತಟ್ಟನೆ ಬಹಾದೂರನತ್ತ ತಿರುಗಿ ಕೇಳಿದೆ.

"ನಾನು ನೀನು ಗೋಲಿ ಆಡೋಣವಾ ?"

ಆಕೆ ನಗುತ್ತಿದ್ದಳು. ನಾನು ಗೋಲಿ ಆಡಲು ರಸ್ತೆ ಹುಡುಕುತ್ತಿದ್ದೆ. ಮುಂದೇನಾಯಿತು ಅನ್ನೋದು ಇನ್ನೊಂದು ಸ್ಟೋರಿ. ಅದನ್ನ ಬಿಡುವಾದಾಗ ಇನ್ನೊಮ್ಮೆ ಹೇಳ್ತೀನಿ.

Sunday, July 27, 2008

ಒಂದು ಸ್ಪೋಟ ಮತ್ತು ಒಂದು ಸಾವು....!

ಗಂಡನನ್ನು ಕರೆದುಕೊಂಡು ಆಸ್ಪತ್ರೆಗೆ ಹೊರಟವಳು. ಬಸ್ ನಿಲ್ದಾಣದಲ್ಲಿ ನಿಂತವಳು ಅಲ್ಲಿಯೇ ಹೆಣವಾಗಿ ಹೋದಳು. ಬಹಳ ಹೊತ್ತು ಅವಳ ಹೆಣವನ್ನು ಕೇಳುವವರೂ ಇರಲಿಲ್ಲ. ಇದು ನಗರದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಅಸು ನೀಗಿದ ಮಧ್ಯಮ ವರ್ಗದ ಹೆಣ್ಣು ಮಗಳ ದುರಂತ ಕಥೆ. ಪ್ರಾಯಶಃ ಆಕೆ ತನ್ನ ಸಾವನ್ನು ಅಲ್ಲಿ ನಿರೀಕ್ಷಿಸರಲಿಲ್ಲ. ಬೆಳಿಗ್ಗೆ ಎದ್ದು ಕೆಲಸಕ್ಕೆ ರಜೆ ಹಾಕಿ, ಎದೆ ನೋವು ಬಂದ ಗಂಡನನ್ನು ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದ ಆಕೆ ದಾರಿಯಲ್ಲೇ ಹೆಣವಾಗಿ ಹೋದಳು.

ಈ ಭಯೋತ್ಪಾದಕತೆಯ ಬಗ್ಗೆ ನಾವು ಮಾತನಾಡೋಣ. ಈ ಬಗ್ಗೆ ಮಾತನಾಡುವಾಗಲೂ ನನ್ನಲ್ಲಿ ಹಿಂಜರಿಕೆ ಇದೆ. ಯಾಕೆಂದರೆ ಮುಸ್ಲಿಂ ಭಯೋತ್ಪಾದಕತೆ ಎಂದ ತಕ್ಷಣ ಬಿಜೆಪಿ ವಾಸನೆ ಹೊಡೆಯಲು ಪ್ರಾರಂಭವಾಗುತ್ತದೆ. ಬಿಜೆಪಿ ರಾಜಕೀಯ ಕಾರಣಕ್ಕಾಗಿ ಇಂತಹ ಮಾತುಗಳನ್ನು ಬಳಸಿಕೊಳ್ಳಲು ಪ್ರಾರಂಭಿಸುತ್ತದೆ. ಬೇರೆ ಧ್ವನಿಯಲ್ಲಿ ಮಾತನಾಡಲು ಪ್ರಾರಂಭಿಸಿದ ತಕ್ಷಣ ಕಾಂಗ್ರೆಸ್ ಪಕ್ಷ ಅಲ್ಲಿ ಗಹಗಹಿಸತೊಡಗುತ್ತದೆ. ಜೆಡಿಎಸ್ ಪಕ್ಕದಲ್ಲಿ ನಿಂತು ನಗುತ್ತದೆ.

ವಿಶ್ವದ ಯಾವುದೇ ಧರ್ಮ ಜೀವವನ್ನು ಕಸಿದುಕೊಳ್ಳುವಂತೆ ಬೋಧಿಸುತ್ತದೆ ಎಂದು ನಾನು ನಂಬಿಲ್ಲ. ಹಾಗೆ ಬೋಧನೆ ಮಾಡುವ ಧರ್ಮವನ್ನು ಧರ್ಮ ಎಂದು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ನನಗೆ ಅನ್ನಿಸುವ ಹಾಗೆ ಯಾವುದೇ ಧರ್ಮದಲ್ಲಿ ಸಮಸ್ಯೆಯಿಲ್ಲ. ಧರ್ಮ ವನ್ನು ವ್ಯಾಖ್ಯಾನಿಸುವವರಲ್ಲಿ, ಇದರ ಆಚರಣೆ ಮಾಡುತ್ತ ಬಂದವರಲ್ಲಿ ಸಮಸ್ಯೆ ಇದೆ. ಈಗ ನಾವು ಮಾತನಾಡಲು ಹೊರಟಿರುವ ಮುಸ್ಲಿಮ್ ಭಯೋತ್ಪಾದಕತೆಯ ವಿಚಾರದಲ್ಲೂ ಅಷ್ಟೇ.

ವಿಶ್ವದ ಮುಸ್ಲಿಮ್ ಸಮುದಾಯ ವಿಚಿತ್ರ ಅಸಹಾಯಕತೆಯಲ್ಲಿದೆ ಎಂಬುದು ನಿಜ. ಕೊಲ್ಲಿ ರಾಷ್ಟ್ರಗಳಲ್ಲಿನ ತೈಲ ರಾಜಕೀಯ , ಆಫ್ರಿಕನ್ ರಾಷ್ಟ್ರಗಳಲ್ಲಿನ ಬಡತನ, ಪಾಕಿಸ್ಥಾನದಂತಹ ಮುಸ್ಲಿಮ್ ರಾಷ್ಟ್ರಗಳಲ್ಲಿನ ರಾಜಕೀಯ ಅಭದ್ರತೆ ಇದಕ್ಕೆ ಕಾರಣವಾಗಿರಬಹುದು. ಆದರೆ ಇದೇ ಭಯೋತ್ಪಾದಕ ಚಟುವಟಿಕೆಯನ್ನು ಸಮರ್ಥಿಸಿಕೊಳ್ಳಲು ಕಾರಣವಾಗಬಾರದು. ಮುಸ್ಲಿಮರಲ್ಲಿ ಇಂತಹ ಸಮಸ್ಯೆ ಇದೆ ಎಂಬ ಕಾರಣಕ್ಕೆ ಅವರು ಭಯೋತ್ಪಾದಕರಾಗುತ್ತಿದ್ದಾರೆ ಎಂಬ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ಈ ಸಮಸ್ಯೆಯನ್ನು ರಾಜಕೀಯ ಪಕ್ಷಗಳು ನೋಡುವ ರೀತಿ ಭಿನ್ನ. ಹಿಂದೂ ದೇಶದ ಕನಸನ್ನು ಬಿತ್ತುತ್ತಿರುವ ಬೆಜೆಪಿ ಮುಸ್ಲೀಮ್ ರನ್ನೆಲ್ಲ ಭಯೋತ್ಪಾದಕರು ಎಂದು ನೋಡುತ್ತದೆ. ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಉಗ್ರಗಾಮಿ ಮುಸ್ಲಿಮರನ್ನು ಉಗ್ರಗಾಮಿಗಳು ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಅಂದರೆ ಬಿಜೆಪಿಗೆ ಮತಗಳಿಸಲು ಹಿಂದೂ ಸೆಂಟಿಮೆಂಟ್ ಅತ್ಯಗತ್ಯ. ಹಾಗೆ ಕಾಂಗ್ರೆಸ್ ಮತ್ತು ಇತರ ಸೋಕಾಲ್ಡ್ ಜಾತ್ಯಾತೀತ ಪಕ್ಷಗಳಿಗೆ ಮುಸ್ಲಿಮ್ ಒಲೈಕೆ ಬೇಕೆ ಬೇಕು.
ಇದೆಲ್ಲ ಎಂತಹ ಹುಚ್ಚುತನ ನೋಡಿ. ಭಯೋತ್ಪಾದಕ ಚಟುವಟಿಕೆಯನ್ನು ಯಾರೇ ಮಾಡಲಿ, ಅದನ್ನು ಖಂಡಿಸುವುದು ಎಲ್ಲರ ಕರ್ತವ್ಯ. ಆದರೆ ನಮ್ಮ ರಾಜಕಾರಣಿಗಳು ಈ ವಿಚಾರವನ್ನು ನೋಡುವ ರೀತಿಯೇ ಬೇರೆ. ಬಿಜೆಪಿಗೆ ಹಿಂದೂ ಭಯೋತ್ಪಾದಕತೆ, ಅದು ಯಾವುದೇ ರೀತಿಯಲ್ಲಿರಲಿ ಅದು ಭಯೋತ್ಪಾದನೆಯಾಗಿ ಕಾಣುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮ್ ಭಯೋತ್ಪಾದಕತೆಯನ್ನು ಒಪ್ಪಿಕೊಳ್ಳಲು ಹಿಂಜರಿಕೆ.
ರಾಜಕಾರಣಿಗಳು ಪ್ರತಿ ವಿಚಾರವನ್ನೂ ಲಾಭ ಮತ್ತು ನಷ್ಠದ ವ್ಯವಹಾರವನ್ನಾಗಿ ನೋಡುತ್ತಾರೆ. ಅವರಿಗೆ ಒಬ್ಬ ವ್ಯಕ್ತಿ ಎಂದರೆ ಒಂದು ಮತ. ಈ ವ್ಯಕ್ತಿಯ ಮನಸ್ಸು, ಹೃದಯ ಯಾವುದೂ ಮುಖ್ಯವಲ್ಲ. ಹೀಗಾಗಿ ಅವರಿಗೆ ಬದುಕು ಎಂಬುದು ಒಂದು ವ್ಯಾಪಾರವಾಗಿದೆ.
ಮೊನ್ನೆ ನಡೆದ ಬಾಂಬ ಸ್ಪೋಟದಲ್ಲಿ ಸತ್ತಳಲ್ಲ, ಆ ಹೆಂಗಸಿನ ಕುಟುಂಬದ ವಿವರವನ್ನು ಸಂಕ್ರಹಿಸುತ್ತಿದ್ದೆ. ಯಾರೋ ಹೇಳಿದರು, ಅವರ ಕುಟುಂಬ ಸಂಪೂರ್ಣವಾಗಿ ಕೂಲಿ ಮಾಡಿ ಬದುಕುವಂತಹುದು. ಅವರಿಗೆ ಬದುಕಲು ಬೇರೆ ದಾರಿ ಇಲ್ಲ. ಈಗ ಆಕೆ ಅಸು ನೀಗಿದ್ದಾಳೆ. ಅವಳ ಗಂಡನ ಆರೋಗ್ಯ ಸರಿಯಿಲ್ಲ. ಬಹುಶಃ ಇವರಿಗೆ ಜೇಹಾದ್ ಎಂದರೆ ಏನು ಎಂಬುದು ತಿಳಿದಿರಲಿಕ್ಕಿಲ್ಲ. ಹಿಂದೂ ರಾಷ್ಟ್ರದ ಕಲ್ಪನೆ ಅವರಿಗೆ ಇದೆಯೋ ಇಲ್ಲವೋ ತಿಳಿಯದು. ಹಾಗೆ ಯಾವ ರಾಜ್ಯದಲ್ಲಿ ಯಾವುದೇ ಸರ್ಕಾರ ಇರಲಿ, ಅದು ಅವರಿಗೆ ಮುಖ್ಯ ವಾಗಿರಲಿಕ್ಕಿಲ್ಲ. ಯಾಕೆಂದರೆ, ಅವರ ಬದುಕಿಗೆ ಇದ್ಯಾವುದೂ ಸಂಬಂಧ ಇರದ ವಿಚಾರ. ಹಿಂದೂವಾದ, ಮುಸ್ಲೀಮರ ಜೇಹಾದಿ ಎಲ್ಲವೂ ಕೂಡ ಸಾಮಾನ್ಯರಿಗೆ ಅನ್ನ ಕೋಡುವುದಿಲ್ಲ. ಅವರ ಮನಸ್ಸಿನಲ್ಲಿ ಕನಿಷ್ಠ ಕನಸುಗಳನ್ನು ತುಂಬುವುದಿಲ್ಲ. ಆದರೆ ಅವರಿಗೆ ಸಂಬಂಧವಿಲ್ಲದ ವಿಚಾರ ಅವರ ಕುಟುಂಬದ ದುರಂತಕ್ಕೆ ಕಾರಣವಾಯಿತು. ಈ ಕುಟುಂಬದ ಹೆಣ್ಣು ಮಗಳ ಬದುಕನ್ನು ಕಸಿದುಕೊಳ್ಳಲು ಕಾರಣವಾಯಿತು.
ನನಗೆ ಅನ್ನಿಸುತ್ತದೆ, ಇದೇ ಇವತ್ತಿನ ಬದುಕಿನ ಬಹುದೊಡ್ಡ ದ್ವಂದ್ವ. ನಮಗೆ ಸಂಬಂಧವಿಲ್ಲದ ವಿಚಾರಗಳು ನಮ್ಮ ಬದುಕನ್ನು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ಇಂತಹ ಸಂಬಂಧವಿಲ್ಲದ ವಿಚಾರಗಳನ್ನು ನಮಗೆ ಜೋಡಿಸುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಾರೆ. ಆಧುನಿಕ ಬದುಕಿನ ಬಹುದೊಡ್ಡ ದುರಂತ ಎಂದರೆ ಇದೇ ಇರಬಹುದೇನೋ. ಇಲ್ಲಿ ನಮ್ಮ ನಮ್ಮ ನಿರ್ಧಾರಗಳನ್ನು ನಾವು ತೆಗೆದುಕೊಳ್ಳುವುದಿಲ್ಲ. ಬೇರೆಯವರು ತೆಗೆದುಕೊಂಡ ತೀರ್ಮಾನಗಳು ನಮ್ಮನ್ನು ನಿಯಂತ್ರಿಸುತ್ತವೆ. ನಮ್ಮನ್ನು ಆಳುತ್ತವೆ. ನಮ್ಮನ್ನು ಸಾವಿನ ಮನೆಗೂ ದೂಡುತ್ತವೆ.
I

Thursday, July 24, 2008

ಬದುಕನ್ನು ನಿರಾಕರಿಸುವುದೇ ಹೋರಾಟ .......!

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಅತಿ ಹೆಚ್ಚು ಚರ್ಚೆಗೆ ವಸ್ತುವಾಗುತ್ತಿರುವವರು ಕಾಮ್ರೇಡ್ ಗಳು. ಇವರಲ್ಲಿ ಸಿಪಿಎಮ್ ನ ಪ್ರಭಾವಿ ನಾಯಕ ಪ್ರಕಾಶ್ ಕಾರಟ್. ಈ ಪ್ರಕಾಶ್ ಕಾರಟ್ ಅವರನ್ನು ನೋಡಿದಾಗ ನೂರಾರು ವರ್ಷಗಳ ಹಿಂದಿನ ಕಮ್ಯುನಿಸ್ಟ್ ನಾಯಕ ಎಂದು ಅನ್ನಿಸುತ್ತದೆ. ಆತನ ಹೆಂಡತಿ ಬೃಂದಾ ಕಾರಟ್. ಅವರು ಸಹ ತಮ್ಮ ಉಗ್ರ ಎಡಪಂಥೀಯ ವಿಚಾರಧಾರೆಯನ್ನು ಆಗಾಗ ಪ್ರದರ್ಶಿಸುತ್ತಲೇ ಇರುತ್ತಾರೆ.

ಈ ದಂಪತಿಗಳು ಹಲವು ಕಾರಣಗಳಿಗಾಗಿ ಬಾರತೀಯ ಸಾರ್ವಜನಿಕ ಬದುಕಿನಲ್ಲಿ ವಿಶಿಷ್ಠರು ಎನ್ನಿಸುತ್ತದೆ. ಗಂಡ ಹೆಂಡತಿ ಇಬ್ಬರೂ ಕಮ್ಯುನಿಸ್ಟರಾಗುವುದು ಒಂದು ಸೋಜಿಗವೇ. ಆದರೆ ಇವರಿಬ್ಬರ ಹೆಸರನ್ನು ಪ್ರಸ್ತಾಪಿಸುತ್ತಿರುವುದು ಬೇರೆ ಕಾರಣಗಳಿಗಾಗಿ. ನನಗಿದ್ದ ಕುತೂಹಲ ಎಂದರೆ ಈ ಇಬ್ಬರು ಕಟ್ಟಾ ಕಮ್ಯುನಿಸ್ಟರ ಮಕ್ಕಳು ಹೇಗಿರಬಹುದು ? ಅವರೂ ಕಮ್ಯುನಿಸ್ಟರಾಗಬಹುದೆ ? ಎಂಬುದು. ಈ ಕಾರಣದಿಂದಾಗಿ ಅಲ್ಲಿ ಇಲ್ಲಿ ತಡಕಾಡಿದಾಗ ನನಗೆ ದೊರಕಿದ ಮಾಹಿತಿ ಎಂದರೆ, ಇವರಿಗೆ ಮಕ್ಕಳಿಲ್ಲ ಎಂಬುದು. ಅಷ್ಟೇ ಅಲ್ಲ, ತಮ್ಮ ಹೋರಾಟಕ್ಕೆ ಧಕ್ಕೆಯಾಗುತ್ತದೆ ಎಂದು ಅವರು ಮಕ್ಕಳು ಬೇಡ ಎಂದು ನಿರ್ಧರಿಸಿದರಂತೆ ! ಇದು ಎಷ್ಟು ನಿಜವೋ ತಿಳಿಯದು. ಆದರೆ ಇದು ನಿಜವಾಗಿದ್ದರೆ ? ತಕ್ಷಣ ನನಗೆ ಅನ್ನಿಸಿದ್ದು ಇದಕ್ಕಿಂತ ಜೀವವಿರೋಧಿ ನಿಲುಮೆ ಮತ್ತೊಂದು ಇರಲು ಸಾಧ್ಯವಿಲ್ಲ. ಯಾಕೆಂದರೆ ಮಗು ಹುಟ್ಟುವುದೇ ಒಂದು ಅಧ್ಬುತ. ಒಂದು ಜೀವಿಯೊಳಗೆ ಇನ್ನೊಂದು ಜೀವಿ, ಜೀವ ತಳೆಯುವ ಪರಿಯೇ ಹಾಗೆ. ಯೋಚಿಸಿ ನೋಡಿ. ಈ ಬದುಕಿನಲ್ಲಿ ಜೀವ ಕುಡಿಯೊಡೆಯುವ ಸಮಯವೇ ಅಂತಹುದು. ಒಂದು ಹೂವು ಅರಳುವುದನ್ನು ನೀವು ನೋಡಿದ್ದೀರಾ ? ಒಂದು ಸಸಿ ಮೊಳಕೆಯೊಡೆಯುವ ಸಂಭ್ರಮ ನಿಮಗೆ ಗೊತ್ತೆ ? ಮಳೆ ಬಂದ ಮರುದಿನ ಭೂಮಿ ಸಂತೃಪ್ತ ಭಾವದಿಂದ ನಳನಳಿಸುವ ಪರಿ ಹೇಗಿರುತ್ತದೆ ಗೊತ್ತೆ ?

ಇವೆಲ್ಲವನ್ನು ಸಂತೃಪ್ತಿಯ ಮಹಾ ಕ್ಷಣಗಳೆಂದು ನಾನು ಕರೆಯುತ್ತೇನೆ. ಒಂದು ಮಗು ಹೊಟ್ಟೆಯೊಳಗೆ ರೂಪತಳೆಯುವುದು ಹಾಗೆ. ನನಗೆ ಬಹಳಷ್ಟು ಸಂದರ್ಭಗಳಲ್ಲಿ ಹುಡುಗಿಯರನ್ನು ನೋಡಿದಾಗ ಈರ್ಷೆಯಾಗುತ್ತದೆ. ಹೆಣ್ಣು ಜೀವಕ್ಕೆ ಇರುವ ಇಂತಹ ಒಂದು ಅನುಭವ ನನಗಿಲ್ಲವಲ್ಲ ಎಂದೂ ಬೇಸರವಾಗುತ್ತದೆ. ಬದುಕಿನ ಒಂದು ಅನುಭವ ದಕ್ಕುತ್ತಿಲ್ಲವಲ್ಲ ಎಂದು ಮನಸ್ಸು ಹಪಹಪಿಸುತ್ತದೆ. ಆಗ ನೆನಪಾಗುವವರರು ಇದೇ ಉಗ್ರ ಕಮ್ಯುನಿಸ್ಟ್ ದಂಪತಿಗಳು.

ಕಮ್ಯುನಿಸಂ ಬಗ್ಗೆ ನನ್ನ ವಿರೋಧವಿಲ್ಲ. ನನ್ನ ಯೌವನದ ದಿನಗಳಲ್ಲಿ ನಾನೂ ಕಮ್ಯುನಿಸ್ಟನೇ. ಸರ್ವ ಸಮಾನತೆಯ ಸಮಾಜದ ಕನಸು ಕಂಡವನೇ. ಈಗಲೂ ಅಂತಹ ಸಮಾಜ ನಿರ್ಮಾಣವಾಗುವುದಿದ್ದರೆ ಅದಕ್ಕೆ ನನ್ನ ಬೆಂಬಲ ಇದ್ದೇ ಇದೆ. ಆದರೆ ನಮ್ಮ ಹೋರಾಟಕ್ಕೆ ತೊಂದರೆಯಾಗುತ್ತದೆ ಎಂದು ಮಕ್ಕಳೇ ಬೇಡ ಎಂದು ಹೇಳಿದ್ದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಹಾಗೆ ಮಕ್ಕಳಾದರೆ ಹೋರಾಟಕ್ಕೆ ತೊಂದರೆಯಾಗುತ್ತದೆ ಎಂದು ಹೇಳುವವರು ಬದುಕನ್ನೇ ನಿರಾಕರಿಸಿದಂತೆ. ಬದುಕನ್ನು ಹೊರತುಪಡಿಸಿದ ಹೋರಾಟ ಇಲ್ಲ. ಬದುಕನ್ನು ಮೀರಿದ ಹೋರಾಟ ಕೂಡ ಇರುವುದು ಸಾಧ್ಯವಿಲ್ಲ. ಯಾಕೆಂದರೆ, ನಮ್ಮೆಲ್ಲರ ನಂಬಿಕೆ, ಚಿಂತನೆಗಳಿಗಿಂತ ಬದುಕು ದೊಡ್ಡದು. ಯಾರು ಬದಕನ್ನೇ ನಿರಾಕರಿಸುತ್ತಾರೋ ಅವರು ಹೋರಾಟಕ್ಕೆ ಅರ್ಥವಿಲ್ಲ. ಹಾಗೆ ಅವರು ಪ್ರಾಮಾಣಿಕರೂ ಎಂದೂ ಅನ್ನಿಸುವುದಿಲ್ಲ.

ಪ್ರಕಾಶ್ ಕಾರಟ್ ಮತ್ತು ಬೃಂದಾ ಕಾರಟ್ ಅವರ ಬಗ್ಗೆ ನನಗೆ ಪಾಪ ಅನ್ನಿಸುತ್ತದೆ. ಹೋರಾಟದ ಬೃಮೆಯಲ್ಲಿ ಬದುಕನ್ನು ನಿರಾಕರಿಸುವ ಇವರ ಬಗ್ಗೆ ಬೇಸರವಾಗುತ್ತದೆ.

Wednesday, July 23, 2008

ಹೀಗೊಂದು ಕಥೆ, ಅದರೆ ಅಲ್ಲ.............!!

ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಆ ದಿನಗಳಲ್ಲಿ ನನಗೆ ಸುತ್ತುವುದೊಂದು ಹವ್ಯಾಸ. ವರ್ಷದಲ್ಲಿ ಒಂದೆರಡು ತಿಂಗಳು ನಾನು ಕರ್ನಾಟಕದಿಂದ ನಾಪತ್ತೆಯಾಗುತ್ತಿದ್ದೆ. ಕೈಯಲ್ಲಿದ್ದ ಹಣ ಮುಗಿದ ಮೇಲೆ ಬೆಂಗಳೂರಿಗೆ ವಾಪಸಾಗುತ್ತಿದ್ದೆ. ಹೀಗೆ ಒಮ್ಮೆ ನಾನು ಹೋಗಿದ್ದು ನೇಪಾಳಕ್ಕೆ. ಉತ್ತರ ಪ್ರದೇಶವನ್ನು ಸುತ್ತಿ ಹಿಮಾಲಯ ಕಣಿವೆಯ ಮೂಲಕ ಕಠ್ಮಂಡೊಕ್ಕೆ ಹೋದವನು ನಾನು. ಹೀಗೆ ಹೋದ ಸಂದರ್ಭಗಳಲ್ಲಿ ಚಿತ್ರ ವಿಚಿತ್ರ ಜನರನ್ನು ಭೇಟಿ ಮಾಡಿ ಮಾತನಾಡುವುದು ನನ್ನ ದಿನಚರಿಯಾಗಿತ್ತು. ನನ್ನ ನೇಪಾಳದ ಭೇಟಿಯ ಸಂದರ್ಭದಲ್ಲೂ ನಾನು ಹುಡುಕುತ್ತ ಹೊರಟಿದ್ದು ಇಂತಹ ಚಿತ್ರ ವಿಚಿತ್ರ ಜನರನ್ನೇ.
ಬಹಳಷ್ಟು ಜನರಿಗೆ ಹಿಮಾಲಯ ಎಂದರೆ ಯಾವ ಭಾವನೆ ಬರುತ್ತದೆಯೋ ಗೊತ್ತಿಲ್ಲ. ಆದರೆ ಹಿಮಾಲಯ ಎಂದರೆ ನಮ್ಮಲ್ಲೆರ ಮನಸ್ಸಿನ ಹಾಗೆ . ಅಲ್ಲಿ ಹೊರಗೆ ಕಾಣುವುದಕ್ಕಿಂತ ಕಾಣದಿರುವುದೇ ಹೆಚ್ಚು. ನಾನು ಕಠ್ಮಂಡೊದಲ್ಲಿ ಒಂದು ವಾರವಿದ್ದೆ. ಅಲ್ಲಿಂದ ನಾನು ಹೊರಟಿದ್ದು ಪೊಕಾರೋ ಎಂಬ ಭಾರತ ಚೀನಾ ಗಡಿಯ ಸಮೀಪ ಇರುವ ಹಳ್ಲಿಯೊಂದಕ್ಕೆ.
ಅದು ಹಳ್ಲಿ ಎಂದರೆ ಅಂತಹ ಹಳ್ಳಿ ಏನೋ ಅಲ್ಲ. ಕೆಲವೇ ಕೆಲವು ಮನೆಗಳು. ಒಂದಿಷ್ಟು ಅಂಗಡಿಗಳು. ಅಷ್ಟೆ. ಆ ಊರಿನ ಹೊರ ವಲಯದಲ್ಲಿ ನಾನು ಭೇಟಿ ಮಾಡಿದ್ದು ಆ ವಿಚಿತ್ರ ವ್ಯಕ್ತಿಯನ್ನ. ಆತ ೯೦ ರ ಗಡಿ ದಾಟಿದವನಂತಿದ್ದ. ಮುಖದ ಮೇಲೆ ಮಾಸದ ನಗೆ. ತಲೆಯ ತುಂಬ ಬಿಳಿಯ ಕೂದಲು. ಬಿಳಿಯ ಬಟ್ಟೆ ಧರಿಸಿದ್ದ ಆತ. ನಾನು ಅವನನ್ನೆ ನೋಡುತ್ತ ನಿಂತಿದ್ದ ಹಾಗೆ ಹಿಂದಿಯಲ್ಲಿ ಆತ ಹೇಳಿದ.
"ಸತ್ಯ ಮತ್ತು ಸುಳ್ಳಿನ ನಡುವೆ ಹೆಚ್ಚಿನ ವ್ಯತ್ಯಾಸ ಇಲ್ಲ. ಸತ್ಯ ಎಂದುಕೊಂಡಿರುವುದೆಲ್ಲ ಸತ್ಯವಲ್ಲ. ಸುಳ್ಳು ಎಂದುಕೊಂಡಿರುವುದು ಸುಳ್ಳಲ್ಲ"
ಈ ಮಾತು ಕೇಳಿದ ನಾನು ನೀವು ಏನನ್ನು ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದೆ.
"ವಾಸ್ತವ ಮತ್ತು ಭ್ರಮೆಯ ನಡುವೆ ವ್ಯತ್ಯಾಸ ಇಲ್ಲ. ಎರಡೂ ಒಂದೇ. ನೀವು ವಾಸ್ತವ ಎಂದುಕೊಂದಿದ್ದು ಭ್ರಮೆ. ಭ್ರಮೆ ಎಂದುಕೊಂಡಿದ್ದು ವಾಸ್ತವ."
ಇದ್ಯಾಕೋ ಒಂದಕ್ಕೊಂದು ತಾಳೆಯಾಗದಂತೆ ಈತ ಮಾತನಾಡುತ್ತಿದ್ದಾನೆ ಎಂದು ಅನ್ನಿಸತೊಡಗಿತ್ತು. ಆದರೆ ಅವನ ಮುಖದಲ್ಲಿ ಇರುವ ಆಕರ್ಷಣೆ ಮತ್ತು ಒಂದು ರೀತಿಯ ಸೆಳೆತದಿಂದ ತಪ್ಪಿಸಿಕೊಳ್ಳುವುದು ಕಷ್ಟ ಅನ್ನಿಸತೊಡಗಿತು.
"ಇದು ಹಿಮಾಲಯ ಯಾಕೆ ಗೊತ್ತಾ ? ಇದು ಹಿಮಾಲಯ ಎಂದು ಹಿಂದಿನವರು ಕರೆದಿದ್ದರಿಂದ ನೀವು ಹಿಮಾಲಯ ಎಂದುಕೊಂಡಿದ್ದೀರಿ. ಇದನ್ನು ಬೇರೆ ಹೆಸರಿನಿಂದ ಕರೆದಿದ್ದರೆ, ಅದನ್ನೇ ನೀವು ಕರೆಯುತ್ತಿದ್ದೀರಿ. ಅಂದರೆ ಹಸರೇ ವಸ್ತುವಲ್ಲ. ಹೆಸರು ವಸ್ತುವನ್ನು ಗುರುತಿಸುವ ಸಾಧನ ಮಾತ್ರ. ಆದರೆ ನೀವೆಲ್ಲ ಹೆಸರನ್ನೇ ವಸ್ತು ಎಂದುಕೊಳ್ಳುತ್ತೀರಿ. ಉದಾಹರಣೆಗೆ ನಿಮ್ಮ ಹೆಸರು ಏನು ಹೇಳಿ ?"
ನಾನು ನನ್ನ ಹೆಸರು ಹೇಳಿದೆ.
"ಈಗ ನೀವ್ಉ ಯಾರು ಎಂದು ಪ್ರಶ್ನಿಸಿದರೆ ನಿಮ್ಮ ಹೆಸರನ್ನು ನೀವು ಹೇಳುತ್ತೀರಿ. ಆದರೆ ಅದು ನಿಮ್ಮ ಹೆಸರು ಮಾತ್ರ, ಅದೇ ನೀವಲ್ಲ. ನಿಮ್ಮ ಹೆಸರು ಎಂದು ನೀವು, ಈ ಜಗತ್ತು ನಂಬಿರುವುದರಿಂದ ಒಂದು ಅರ್ಥದಲ್ಲಿ ಅದು ನಿಜ. ಆದರೆ, ನಿಜ್ವಾಗಿ ಹೇಳುವುದಾದರೆ ಹೆಸರು ನೀವಲ್ಲವೇ ಅಲ್ಲ. "
ನಾನು ಯಾವ ಪ್ರಶ್ನೆಯನ್ನು ಕೇಳದೇ ಅವರು ಹೇಳುತ್ತಿದ್ದುದನ್ನೇ ಕೇಳುತ್ತಿದ್ದೆ. ಆದರೆ ಇವರು ಯಾರು ಎಂದು ತಿಳಿದುಕೊಳ್ಳಬೇಕು ಎಂದು ಅನ್ನಿಸುತ್ತಿತ್ತು. ಅವರ ಹೆಸರನ್ನು ಕೇಳಬೇಕು ಎಂದು ಬಾಯಿ ತೆರೆಯಬೇಕು ಎಂದುಕೊಳ್ಳುವಷ್ಟರಲ್ಲಿ ಅವರು ಹೇಳತೊಡಗಿದರು.
"ನನಗೆ ನನ್ನ ಹೆಸರು ಮುಖ್ಯವಲ್ಲ. ಯಾಕೆಂದರೆ ಹೆಸರು ನಾನಲ್ಲ. ಆದರೆ ನಿಮಗೆ ಹೆಸರು ಮುಖ್ಯ. ಯಾಕೆಂದರೆ ಹೆಸರನ್ನ್ಜು ಬಿಟ್ಟು ವ್ಯಕ್ತಿಯನ್ನು ಗುರುತಿಸುವ ಮಟ್ಟಕ್ಕೆ ನೀವು ಏರಿಲ್ಲ. ನಿಮಗೆ ಇರುವ ಕುತೂಹಲ ಇರುವ ಕಾರಣಕ್ಕೆ ಹೇಳುತ್ತೇನೆ. ಸುಕೋಮಲ ಸ್ವಾಮಿ ಅಂತ ನನ್ನ ಹೆಸರು "
ಅವರು ಅಷ್ಟೆ. ಹೆಸರಿಗೆ ತಕ್ಕ ಹಾಗೆ ಸುಕೋಮಲ. ಮಾತಿನಲ್ಲಿ ಅದೆಂತಹದೋ ಸೆಳೆತ. ಅವರು ಹಾಗೆ ಮಾತನಾಡುತ್ತಲೇ ಇದ್ದರು.
"ಇಂದಿಗೆ ಇಷ್ಟೇ ಸಾಕು. ನಾಳೆ ಸಾಧ್ಯವಾದರೆ ಮಾತನಾಡೋಣ "
ಹೀಗೆಂದವರೇ ಸರಸರನೇ ಅಲ್ಲಿಂದ ಹೊರಟರು. ಹಾಗೆ ಬಿಳಿಯ ಹಾಲಿನ ಹಾಗಿದ್ದ ಮೋಡಗಳ ನಡುವೆ ಹೆಜ್ಜೆ ಹಾಕುತ್ತಿದ್ದಂತೆ ಕಂಡು ಬಂತು. ನಾನು ಅವರು ಹೋದ ಮೇಲೆ ಬಹಳಷು ಹೊತ್ತು ಅಲ್ಲಿಯೇ ನಿಂತಿದ್ದೆ. ಕೊನೆಗೆ ಹಾಗೆ ಹೆಜ್ಜೆ ಹಾಕುತ್ತ ಪೊಕಾರೋ ಎಂಬ ಹಳ್ಳಿಯತ್ತ ಬಂದೆ. ಆಗಲೇ ಹೊಟ್ಟೆ ತಾಳ ಹಾಕುತ್ತಿತ್ತು. ತಿನ್ನುವುದಕ್ಕೆ ಏನಾದರೂ ಸಿಗಬಹುದಾ ಎಂದು ಹುಡುಕುತ್ತ ಆ ಹಳ್ಳಿಯ ತಟ್ಟಿ ಬಿಡಾರದಂತಹ ಹೋಟೆಲ್ಲ್ಲಿಗೆ ಬಂದೆ. ಆಗಲೂ ನನ್ನ ತಲೆಯಲ್ಲಿ ಕೊರೆಯುತ್ತಿದ್ದುದು ಸುಕೋಮಲ ಸ್ವಾಮಿ ಹೇಳಿದ ಮಾತುಗಳು. ಈ ಚಳಿಯಲ್ಲಿ ಈ ಮನುಷ್ಯ ಎಲ್ಲಿ ಹೋಗಿರಬಹುದು ಎಂದು ಯೋಚಿಸುತ್ತ ಕುಳಿತ್ತಿದ್ದವನ ಮುಂದೆ ಊಟದ ತಟ್ಟೆ ಬಂತು.
ಊಟವನ್ನು ತಂದಿಟ್ಟ ಹೆಣ್ಣು ಮಗಳನ್ನು ಪ್ರಶ್ನಿಸಿದೆ.
ಸುಕೋಮಲ ಸ್ವಾಮಿ ಎಷ್ಟು ವರ್ಷದಿಂದ ಈ ಪ್ರದೇಶದಲ್ಲಿದ್ದಾರೆ ?
ಆಕೆ ನನ್ನತ್ತ ಪ್ರಶ್ನಾರ್ಥಕವಾಗಿ ನೋಡಿದಳು.
"ಸುಕೋಮಲ ಸ್ವಾಮಿಗಳಾ ? ಅವರು ತೀರಿಹೋಗಿ ಹಲವು ವರ್ಷಗಳೇ ಆಗಿರಬಹುದು. ನನ್ನ ಅಜ್ಜ ಆಗಾಗ ಅವರ ಹೆಸರನ್ನು ಪ್ರಸ್ತಾಪಿಸುತ್ತಿದ್ದ. "
ಆ ಚಳಿಯಲ್ಲಿ ನನ್ನ ಮೈ ಬೆವರತೊಡಗಿತು. ಹಾಗೆ ಸುಕೋಮಲ ಸ್ವಾಮಿಯ ಜೊತೆ ನಾನು ನಡೆಸಿದ ಮಾತುಕತೆ ಕಣ್ನು ಮುಂದೆ ಬಂದಂತಾಗಿ ತಲೆಯನ್ನು ಹಿಡಿದುಕೊಂಡು ಹಾಗೆ ಕುಳಿತುಬಿಟ್ಟೆ.

Tuesday, July 22, 2008

ಗಾಂಧಿ ಮತ್ತು ................

ನಿನ್ನೆ ಲೋಕಸಭೆಯಲ್ಲಿ ನಡೆದ ಘಟನೆ ಜನತಂತ್ರಪ್ರೇಮಿಗಳಿಗೆಲ್ಲ ಆಘಾತವನ್ನು ಉಂಟುಮಾಡಿದ್ದರೆ ಅದು ತುಂಬಾ ಸಹಜ. ನಮ್ಮ ಪ್ರತಿನಿಧಿಗಳು, ಎಲ್ಲರ ಎದುರಿಗೆ ಹಣ ಥೈಲಿಯನ್ನು ಪ್ರದರ್ಶಿಸಿದ್ದು ಭಾರತದ ಪ್ರಜಾಪ್ರಭುತ್ವದ ಇತಿಹಾಸಲ್ಲಿ ಒಂದು ಕಪ್ಪು ಚುಕ್ಕೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇದು ಏಕಾಏಕಿ ನಡೆದ ಘಟನೆಯಲ್ಲ. ಕೇಂದ್ರದಲ್ಲಿ ಪಿ.ವಿ. ನರಸಿಂಹರಾವ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನಡೆದ ಜೆ ಎಮ್ ಎಮ್ ಹಗರಣ ಎಲ್ಲರಿಗೂ ನೆನಪಿದೆ. ಹಾಗೆ ಕರ್ನಾಟಕದಲ್ಲಿ ಇತ್ತೀಚಿಗೆ ನಡೆದ ರಾಜಕೀಯ ವಿದ್ಯಮಾನಗಳು. ಅಂದರೆ ಭಾರತದ ರಾಜಕಾರಣ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದೆ. ಇಂತಹ ಸ್ಥಿತಿಗೆ ಏನು ಕಾರಣ ಯೋಚಿಸಿ ನೋಡಿ. ಸ್ವಾತಂತ್ರ್ಯಾನಂತರದ ಮೊದಲ ಹತ್ತು ವರ್ಷಗಳು ದೇಶ ಸ್ವಾತಂತ್ರ್ಯದ ಖುಶಿಇಯಲ್ಲೇ ಸಂಭ್ರಮದಲ್ಲೇ ಕಳೆದು ಹೋಯಿತು. ಹಾಗೆ ಆಗಿನ ರಾಜಕಾರಣಿಗಳು ಮಹಾತ್ಮಾ ಗಾಂಧಿಯವರ ನೆರಳಿನಲ್ಲಿ ಬೆಳೆದವರೂ ಅವರ ಹೆಸರು ಹೇಳಿ ಮತಪಡೆಯುವವರೂ ಆಗಿದ್ದರಿಂದ ಈಗಿನಷ್ಠು ಕೆಟ್ಟಿರಲಿಲ್ಲ. ೭೦ ರ ದಶಕದಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಯುಗ ಪ್ರಾರಂಭವಾಯಿತು. ಮಹಾತ್ಮಾ ಗಾಂಧಿಯವರ ಹೆಸರು ಇಂದಿರಾಗಾಂಧಿಯವರ ಹೆಸರಿನಡಿಯಲ್ಲಿ ಮರೆಯಾಯಿತು. ವ್ಯಕ್ತಿ ಪೂಜೆಯನ್ನು ಇಷ್ಟಪಡುತ್ತಿದ್ದ ಇಂದಿರಾ ಭಟ್ಟಂಗಿಗಳ ಬಹುಫರಾಕ್ ಅನ್ನು ತುಂಬಾ ಇಷ್ಟಪಡುತ್ತಿದ್ದರು. ಹಾಗೆ ಭಾರತದ ರಾಜಕಾರಣದಿಂದ ಗಾಂಧಿ ಟೋಪಿ ರಾಜಕಾರಣವನ್ನು ಹೊರದಬ್ಬಿದ್ದರು. ಇಂದಿರಾ ಈಸ್ ಇಂಡಿಯಾ ಎಂಬ ಸ್ಥಿತಿಯನ್ನು ನಿರ್ಮಿಸಿಬಿಟ್ಟರು. ಆಗಲೆ ರಾಜಕೀಯ ಮಧ್ಯವರ್ತಿಗಳು, ಧಗಾಕೋರರು, ಬೇರೆ ಬೇರೆ ಹಿತಾಸಕ್ತಿಗಳನ್ನು ರಕ್ಷಿಸುವ ಲಾಬಿಗಳ ಏಜೇಂಟರು ರಾಜಕೀಯದಲ್ಲಿ ಪ್ರಾಧಾನ್ಯತೆ ಪಡೆಯತೊಡಗಿದರು. ಮಾಜಿ ಡಕಾಯಿತರು. ಕಳ್ಳರು ಸುಳ್ಳರು ಶಾಸಕರಾಗಿ ವಿಜೃಂಭಿಸತೊಡಗಿದರು. ತಾತ್ವಿಕತೆ ಇಲ್ಲದ ರಾಜಕಾರಣ ಪ್ರಾಧಾನ್ಯತೆ ಪಡೆಯತೊಡಗಿದ ಮೇಲೆ ಕಾಂಚಾಣ ರಾಜಕೀಯದಲ್ಲಿ ಅತಿ ಮುಖ್ಯವಾಗತೊಡಗಿತು.
ಕರ್ನಾಟಕದಲ್ಲಿ ಕಳೆದ ಚುನಾವಣೆಯ ನಂತರದ ಸ್ಥಿತಿಯನ್ನೇ ನೋಡಿ. ಗಣಿ ದೊರೆಗಳು ಯಡೀಯೂರಪ್ಪ ಸರ್ಕಾರದಲ್ಲಿ ಯಾರು ಯಾರು ಸಚಿವರಾಗಬೇಕು ಎಂದು ನಿರ್ಧರಿಸುವ ಸ್ಥಿತಿ ಬಂತು. ಸ್ವತಃ ಯಡಿಯೂರಪ್ಪನವರೆ, ಮುಖ್ಯಮಂತ್ರಿಯಾದರೂ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರ ಅಣತಿಯಂತೆ ನಡೆಯುವಂತಾಯಿತು. ಪಕ್ಷೇತರ ಶಾಸಕರು, ಸರ್ಕಾರಕ್ಕೆ ಬೆಂಬಲ ನೀಡಿದ್ದು, ಜೆಡಿಎಸ್ ಕಾಂಗ್ರೆಸ್ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದು ಗಣಿ ದೊರೆಗಳ ಹಣದ ಥೈಲಿಯ ಪ್ರಭಾವದಿಂದ ಎಂದು ಹೇಳುವ ಅಗತ್ಯವಿಲ್ಲ. ರಾಜ್ಯಕ್ಕೆ ಸುಭದ್ರ ಸರ್ಕಾರ ಬರಲಿ ಎಂಬ ಕಾರಣಕ್ಕೆ ಈ ಶಾಸಕರು ಪಕ್ಷಾಂತರ ಮಾಡಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ನಂಬಿದ್ದರೆ ಅವರಂತಹ ಮೂರ್ಖರು ಇನ್ನೊಬ್ಬರು ಇರಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಹುಮತ ಸಾಧಿಸಲು ಕಾರಣವಾದ ಹಣ, ದೆಹಲಿಯಲ್ಲಿ ಡಾ. ಮನಮೋಹನ್ ಸಿಂಗ್ ಸರ್ಕಾರ ಬಹುಮತ ಸಅಬೀತುಪಡಿಸಲು ಕಾರಣವಾಯಿತು. ಕರ್ನಾಟಕದಲ್ಲಿ ಬಿಜೆಪಿ ಹಣದ ಪ್ರಭಾವ ಬೀರಿ ಶಾಸಕರನ್ನು ಸೆಳೆಯುತ್ತಿದೆ ಎಂದು ಆರೋಪ ಮಾಡಿದ್ದು ಕಾಂಗ್ರೆಸ್. ದೆಹಲಿಯಲ್ಲಿ ಡಾ. ಮನಮೋಹನ್ ಸಿಂಗ್ ಸರ್ಕಾರ ಹಣದ ಪ್ರಭಾವ ಬೀರಿ ವಿಶ್ವಾಸ ಮತ ಗೆದ್ದಿದೆ ಎಂದು ಆರೋಪ ಮಾಡಿದ್ದು ಬಿಜೆಪಿ. ಅಂದರೆ ಹಣದ ಪ್ರಭಾವದಿಂದ ರಾಜಕಾರಣವನ್ನು ರಾಢಿಯನ್ನಾಗಿ ಮಾಡಿದ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ವಿಭಿನ್ನ ಸಂದರ್ಭದಲ್ಲಿ ವಿಭಿನ್ನ ರೂಪದ ನಿಲುಮೆಯನ್ನು ಪ್ರಕಟಿಸಿವೆ. ಕರ್ನಾಟಕದಲ್ಲಿ ಹಣದ ಪ್ರಭಾವದ ಮೂಲಕ ಯಡೀಯೂರಪ್ಪ ಸರ್ಕಾರ ಉಳಿದುಕೊಂಡಿದ್ದು ಕಾಂಗ್ರೆಸ್ ಗೆ ಪಥ್ಯವಲ್ಲ. ದೆಹಲಿಯಲ್ಲಿ ಹಣದ ಪ್ರಭಾವದ ಮೂಲಕ ಡಾ. ಮನಮೋಹನ್ ಸಿಂಗ ಸರ್ಕಾರ ಉಳಿದುಕೊಂಡಿದ್ದು ಬಿಜೆಪಿಗೆ ಪಥ್ಯವಾಗುತ್ತಿಲ್ಲ. ಇದು ನಮ್ಮ ರಾಜಕೀಯ ,ರಾಜಕಾರಣಿಗಳು ಯಾವ ಹಂತ ತಲುಪಿದ್ದಾರೆ ಎಂಬುದನ್ನು ತೋರಿಸುತ್ತದೆ. ಯಾವುದೇ ನೈತಿಕತೆ ಇಲ್ಲದ, ಅಧಿಕಾರವೇ ಪರಮ ಎಂದು ನಂಬಿರುವ ಚಾಂಡಾಲ ರಾಜಕಾರಣಿಗಳು ಇಂದು ದೇಶವನ್ನು ಆಳುತ್ತಿದ್ದಾರೆ. ಅವರಿಗೆಲ್ಲ ರಾಜಕಾರಣ ಎಂದರೆ ವ್ಯಾಪಾರ, ದಂಧೆ. ಇಂಥವರು ನಮ್ಮ ನಾಯಕರು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ಇವರನ್ನೆಲ್ಲ ಹೊರದಬ್ಬಿ ಹೊಸ ರಾಜಕಾರಣದ ಕನಸು ಕಾಣುವುದೊಂದೇ ನಾವು ಈಗ ಮಾಡಬಹುದಾದ ಕೆಲಸ,

Saturday, July 19, 2008

ಸಾಯಿಬಾಬಾ ಕಣ್ಣು ಕಣ್ಣು ಬಿಟ್ಟ....!

ಈ ದೇಶದಲ್ಲಿ ಎಲ್ಲವೂ ಮಾರಾಟದ ವಸ್ತು. ಎಲ್ಲವೂ ಶೋಷಣೆಯ ವಸ್ತು. ಇದರಲ್ಲಿ ದೇವರೂ ಕೂಡ ಹೊರತಾಗಿಲ್ಲ. ದೇವರು ಇದ್ದರೆ ಆತ ಸರ್ವ ವ್ಯಾಪಿ. ಆತ ಯಾವುದೋ ದೇವಸ್ಥಾನಕ್ಕೆ, ಮಸೀದಿಗೆ, ಚರ್ಚಿಗೆ ಸೀಮಿತವಾಗಿ ಇರಲು ಸಾಧ್ಯವಿಲ್ಲ. ಆದರೆ ದೇವರ ಏಜೆಂಟರು, ದೇವರ ಹೆಸರು ಹೇಳಿಹೊಟ್ಟೆ ಹೊರೆದುಕೊಳ್ಳುವವರು, ದೇವರನ್ನೇ ಮಾರಾಟಕ್ಕೆ ಇಟ್ಟುಬಿಡುತ್ತಾರೆ. ಬೆಂಗಳೂರಿನಂತಹ ನಗರದಲ್ಲಿ ಭೂ ಮಾಫಿಯಾಕ್ಕೂ ದೇವರಿಗೂ ಎಲ್ಲಿಲ್ಲದ ಸಂಬಂಧ. ಯಾವುದೇ ಸಾರ್ವಜನಿಕ ಭೂಮಿ ಹೊಡೆಯಬೇಕೆಂದರೆ, ಅಲ್ಲಿ ಮೊದಲು ಮಾಡುವ ಕೆಲಸ ಎಂದರೆ, ದೇವರ ಮೂರ್ತಿಯನ್ನು ತಂದಿಟ್ಟು ಬಿಡುವುದು. ಃಇಗೆ ಈ ನಗರದ ಬಹುತೇಕ ವೃತ್ತಗಳಲ್ಲಿ ದೇವರು ಬಂದು ಕುಳಿತಿದ್ದಾನೆ. ಆತ ಬಿಸಿಲಿಗೆ ಮಳೆಗೆ ತೊಯ್ಯಬಾರದೆಂದು ಭಕ್ತರು ಕಟ್ಟದ ಕಟ್ಟಿದ್ದಾರೆ. ಅಲ್ಲಿ ಪೂಜಾರಿಯೊಬ್ಬ ಬಂದು ಕುಳಿತಿದ್ದಾನೆ. ಇದರೊಂದಿಗೆ ಸರ್ವಶಕ್ತನಾದ ದೇವರು ಆ ರಸ್ತೆಯಲ್ಲಿ ಬರುವ ವಾಹನಗಳ ಮೇಲೆ ಮತ್ತು ಜನರ ಮೇಲೆ ನಿಗ ಇಡುವ ಪೊಲೀಸನಂತಾಗಿದ್ದಾನೆ. ಅವನನ್ನು ಈ ಸ್ಥಿತಿಗೆ ಇಳಿಸಲಾಗಿದೆ.
ಬಿ.ವಿ. ವೈಕುಂಠರಾಜು ಅವರ ಉದ್ಭವ ನಮಗೆಲ್ಲ ಗೊತ್ತು. ಅದು ಸಿನೆಮಾ ಆಗಿಯೂ ಯಶಸ್ವಿಯಾಗಿದೆ. ರಸ್ತೆಯಾಗದಂತೆ ತಡೆಯಲು ದೇವರಮೂರ್ತಿಯನ್ನು ತಂದಿಟ್ಟು ಅದು ಪಡೆದುಕೊಳ್ಳುವ ಬೇರೆ ಬೇರೆ ಆಯಾಮಗಳು ಅಲ್ಲಿ ಬಿಚ್ಚಿಕೊಳ್ಳುತ್ತದೆ. ಈಗ ಭೂಗಳ್ಳರು ಮಾಡುತ್ತಿರುವುದು ಇದೇ ಕೆಲಸವನ್ನೇ. ಇವರ ಕೃತ್ಯದಿಂದಾಗಿ ಎಲ್ಲ ವೃತ್ತಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ದೇವರು ಬಂದು ಕುಳಿತಿದ್ದಾನೆ. ಕಳ್ಳರಿಂದ ನಮ್ಮನ್ನು ರಕ್ಷಿಸಬೇಕಾದ ದೇವರು, ಭೂಗಳ್ಳರಿಂದಾಗಿ ವಾಹನಗಳ ಹೊಗೆ ಕುಡಿಯುತ್ತ, ಶಬ್ದ ಮಾಲಿನ್ಯದಿಂದ ಬಳಲುವಂತಾಗಿದೆ.
ನಮಗೆಲ್ಲ ದೇವರು ಬೇಕು. ದೇವರಿಗೆ ನಾವು ಬೇಕೋ ಬೇಡವೋ ತಿಳಿಯದು. ಆದರೆ ನಮಗೆ ಬೇಕಾದ ದೇವರನ್ನು ಸರ್ಕಲ್ ಕಾಯುವುದಕ್ಕೆ ಮಕ್ಕಳು ಆಟವಾಡುವ ವೈದಾನದಲ್ಲಿ ಮಧ್ಯ ಕುಳಿತುಕೊಳ್ಳುವುದಕ್ಕೆ ಬಳಸಬಾರದು. ನಮ್ಮ ಹಲ್ಕಾ ವ್ಯವಹಾರಗಳಿಗೆ ದೇವರನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ಇಂತಹ ಸ್ಥಿತಿಯಲ್ಲಿ ಸರ್ಕಾರ ಮತ್ತು ಸ್ಥಳಿಯ ಸಂಸ್ಥೆಗಳ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ. ಸಾರ್ವಜನಿಕ ಸ್ಥಳದಲ್ಲಿ ಬಂದು ಕುಳಿತುಕೊಳ್ಳುವ ದೇವರನ್ನು ಸ್ಥಳಾಂತರಿಸಬೇಕು. ಇದಕ್ಕೆ ಪ್ರಾಯಶಃ ದೇವರೂ ಕೂಡ ವಿರೋಧವನ್ನು ವ್ಯಕ್ತಪಡಿಸಲಾರ.
ಈ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸುತ್ತಿರುವುದಕ್ಕೆ ಪ್ರಮುಖ ಕಾರಣ, ಬೆಂಗಳೂರಿನ ಮನೆಯೊಂದರಲ್ಲಿ ಸಾಯಿಬಾಬು ಮೂರ್ತಿ ತನ್ನ ಎಡಗಣ್ಣನ್ನು ತೆರೆದುಕುಳಿತಿದ್ದು. ಈ ದೇವರಿಗೆ ಬೇರೆ ಕೆಲಸ ಇಲ್ಲವೆ ? ಎಲ್ಲ ಬಿಟ್ಟು ಬೆಂಗಳೂರಿನ ಯಾವುದೋ ಒಂದು ಮನೆಗೆ ಬಂದು ಕಣ್ಣು ಬಿಡುವ ಅಗತ್ಯವಾದರೂ ಏನಿತ್ತು ? ಆತ ಪವಾಡ ಮಾಡುವುದಿದ್ದರೆ ಬೇರೆ ಯಾವುದೋ ರೀತಿಯಲ್ಲಾದರೂ ಪವಾಡ ಮಾಡಬಹುದಿತ್ತು. ಅದನ್ನು ಬಿಟ್ಟು ಕಣ್ಣು ಬಿಟ್ಟು ಕಣ್ಣು ಹೊಡೆದು ಪವಾಡ ಮಾಡುವ ಅಗತ್ಯ ಇರಲಿಲ್ಲ.
ದೇವರು, ಆದ್ಯಾತ್ಮ ಎಲ್ಲವೂ ತುಂಬಾ ಖಾಸಗಿಯಾದದ್ದು. ಅದು ಪ್ರಕೃತಿ ಮತ್ತು ಮನುಷ್ಯರ ನಡುವಿನ ಖಾಸಗಿ ಮಾತುಕತೆ. ಅದು ಪ್ರೇಮಿಸುವ ಎರಡು ಹೃದಯಗಳ ನಡುವಿನ ಪಿಸು ಮಾತಿನ ಹಾಗೆ. ಇದೆಲ್ಲ ಸಾರ್ವಜನಿಕವಾಗಿ ಮಾಡುವ ಕೆಲಸವಲ್ಲ. ದೇವರು ನಮ್ಮ ನಮ್ಮ ಹೃದಯಗಳಲ್ಲಿ ಇರಲಿ. ಆತ ನಮ್ಮ ಜೊತೆ ಮಾತನಾಡುತ್ತ ನಮ್ಮನ್ನು ಎಚ್ಚರಿಸುತ್ತ ಇರಲಿ. ನಾವು ತಪ್ಪು ಮಾಡಲು ಮುಂದಾದಾಗ ಇದು ಸರಿಯಲ್ಲ ಎಂದು ನಮ್ಮ ನಮ್ಮ ಕಿವಿಗಳಲ್ಲಿ ಹಿತವಚನ ನುಡಿಯಲಿ. ಆಗ ದೇವರ ಘನತೆಯೂ ಹೆಚ್ಚುತ್ತದೆ. ಅದನ್ನು ಬಿಟ್ಟು ಕಳ್ಳ ಕಾಕರ ಜೊತೆ, ಸರ್ಕಲ್ ಗಳಲ್ಲಿ ಬಂದು ಕುಳಿತರೆ, ಯಾರದೋ ಮನೆಯಲ್ಲಿ ಕಣ್ಣು ಮೂಗು, ಇನ್ನು ಏನೇನೂ ಬಿಟ್ಟರೆ, ಅದು ಆತನಿಗೂ ಒಳ್ಳೆಯದಲ್ಲ. ದಯಾಮಯನಾದ ದೇವರಿಗೆ ಇದೆಲ್ಲ ಅರ್ಥವಾಗುತ್ತದೆ ಎಂದು ನಂಬೋಣ.

ಬರೆಯುವುದೆಂದರೆ..........

ಬಹಳ ದಿನಗಳಿಂದ ನಾನು ಏನೂ ಬರೆಯಲಿಲ್ಲ। ಬರೆಯುವುದಕ್ಕೆ ಏನೂ ಇರಲಿಲ್ಲವಾ ? ಗೊತ್ತಿಲ್ಲ। ಕಚೇರಿಯ ಕೆಲಸದ ನಡುವೆ ಬರೆಯುವುದಕ್ಕೆ ಮನಸ್ಸಾಗಲಿಲ್ಲ ಎನ್ನುವುದು ಹೆಚ್ಚು ಸರಿ। ಬರೆಯುವುದು ಎಂದರೆ ಹಾಗೆ। ಮನಸ್ಸಿನ ಯಾವುದೋ ಮೂಲೆಯಲ್ಲಿ ಕುಳಿತ ವಿಚಾರ ಮಗು ಹೊಟ್ಟೆಯಲ್ಲಿ ಬೆಳೆದ ಹಾಗೆ ಬೆಳೆಯಬೇಕು। ಹಾಗೆ ಅದು ಹೊರ ಬರುವುದಕ್ಕೆ ಸಿದ್ಧವಾಗಬೇಕು। ಕೆಲವೊಮ್ಮೆ ನಾನು ಹೇಳುವುದಕ್ಕೆ ಏನು ಇಲ್ಲ ಅನ್ನಿಸಿಬಿಡುತ್ತದೆ। ಆಗ ಹೇಳುವುದರಲ್ಲಿ ಅರ್ಥವಿಲ್ಲ। ಜೊತೆಗೆ ಬರೆಯುವುದು ಇದೆಯಲ್ಲ, ಅದು ಬೇರೆಯವರಿಗಾಗಿ ಹೇಳುವುದು ಎಂದು ನಾನು ಅಂದುಕೊಂಡಿಲ್ಲ । ಬರೆಯುವುದು ಎಂದರೆ ನಮ್ಮೊಡನೆ ನಾವು ಮಾತನಾಡಿಕೊಳ್ಳುವುದು। ನಾವು ಯಾವಾಗ ಬೇರೆಯವರಿಗಾಗಿ ಬರೆಯುತ್ತೇವೆ ಎಂದು ಅಂದುಕೊಳ್ಳುತ್ತೇವೆಯೋ ಆಗ ನಮ್ಮ ಬರವಣಿಗೆ ಪ್ರದರ್ಶನ ಪ್ರಿಯತೆಯಿಂದ ಸಾಯುತ್ತದೆ। ಸತ್ಯ ಎಲ್ಲಿಯೋ ಅಡಗಿ ಕುಳಿತುಕೊಂಡು ಬಿಡುತ್ತದೆ। ಆದರೆ ನಮ್ಮ ಜೊತೆಗೆ ನಾವು ಮಾತನಾಡಿಕೊಳ್ಳುವುದು ಹಾಗಲ್ಲ। ಅಲ್ಲಿ ನಡೆಯುವುದು ಸತ್ಯದ ಜೊತೆಗಿನ ಮುಖಾಮುಖಿ। ಸತ್ಯವನ್ನು ಹುಡುಕುವ ನಿರಂತರ ಯತ್ನ।
ಬಹಳಷ್ಟು ಜನ ತಮಗಾಗಿ ತಾವು ಬರೆಯುವುದಿಲ್ಲ। ಬೇರೆಯವರಿಗಾಗಿ ಬರೆಯುತ್ತಾರೆ। ಬೇರೆಯವರ ಪ್ರಶಂಸೆಗಾಗಿ ಬರೆಯುತ್ತಾರೆ। ನಾನು ಎಷ್ಟು ರುಚಿಕಟ್ಟಾಗಿ ಬರೆದಿದ್ದೀನಿ ಗೊತ್ತಾ ಎಂದು ಕೇಳುವವರನ್ನು ನಾನು ನೋಡಿದ್ದೇನೆ। ಬರೆವಣಿಗೆಯನ್ನು ರಚಿಕಟ್ಟಾಗಿ ಮಾಡಲು ಅದು ಅಡುಗೆಯಾ ? ಅಲ್ಲ। ಇಂತಹ ಮಾತುಗಳು ಬರವಣಿಗೆಯ ಮೂಲ ಉದ್ದೇಶವನ್ನೇ ಪ್ರಶ್ನಿಸುವಂತಹುದು। ಬರವಣಿಗೆಯನ್ನ ಒಂದು ಮಾರಾಟದ ವಸ್ತುವನ್ನಾಗಿ ಮಾಡುವುದನ್ನು ನಾನು ಒಪ್ಪಲಾರೆ। ಆದರೆ ಈಗ ಆಗುತ್ತಿರುವುದು ಅದೇ।
ಬರೆಯುವವನಿಗೆ ಒಂದು ಮನಸ್ಥಿತಿ ಬೇಕು। ಅದು ಧ್ಯಾನಸ್ಥ ಸ್ಥಿತಿ। ಎಲ್ಲವನ್ನು ಮುಕ್ತ ಮನಸ್ಸಿನಿಂದ ನೋಡುವ ಸ್ಥಿತಿ। ಏನೇ ಇರಲಿ ನಾನು ಬರೆಯುತ್ತೇನೆ। ನಾನು ನನ್ನ ಜೊತೆ ಮಾತನಾಡುತ್ತೇನೆ। ನನ್ನ ಜೊತೆಗೆ ನಾನು ಆಡುವ ಮಾತುಗಳು ನಿಮಗೂ ಕೇಳುತ್ತವೆ.

Sunday, April 20, 2008

ಓಡಬೇಕು, ಓಡುತ್ತಲೇ ಇರಬೇಕು.

ಓಡಿ ಹೋಗೋದು ? ಹಾಗೆಂದರೇನು ? ಈ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಆದರೆ ನಾನು ಸ್ಪಷ್ಟವಾಗಿ ಹೇಳುತ್ತೇನೆ. ನಮ್ಮಲ್ಲಿ ಬಹಳಷ್ಟು ಜನರಿಗೆ ಓದಿ ಹೋಗುವುದು ಗೊತ್ತಿಲ್ಲ. ನಾವು ಎಲ್ಲಿದ್ದೆವೆಯೋ ಅಲ್ಲಿಯೇ ನಿಂತು ಬಿಡುತ್ತೇವೆ. ಅಲ್ಲಿನ ರಾಡಿಯಲ್ಲಿ ನಮ್ಮ ಕಾಲುಗಳು ಹುಗಿದು ಹೋಗುತ್ತದೆ. ಅಲ್ಲಿಂದ ಕಾಲನ್ನು ಮೇಲೆ ಎತ್ತುವುದು ನಮಗೆ ಗೊತ್ತಿಲ್ಲ. ನಾನು ಹೇಳಿದ್ದು ನಿಮಗೆ ಅರ್ಥವಾಯಿತೆ ?
ಬದುಕು ಅಂದರೆ ಹಾಗೆ . ಅದು ನಿರಂತರ ಚಲನಶೀಲತೆ. ಬದುಕು ನಿಂತಿದೆ ಎಂದು ನಮಗೆ ಅನ್ನಿಸಿದರೆ ನಾವು ಅಪಾಯದಲ್ಲಿ ಇದ್ದೇವೆ ಎಂದೇ ಅರ್ಥ. ಇದನ್ನು ಇನ್ನಷ್ಟು ಸರಳವಾಗಿ ಹೇಳಲು ನಾನು ಯತ್ನಿಸುತ್ತೇನೆ. ಯಾವುದೇ ಮಗುವನ್ನು ನೋಡಿ. ಅದು ಸದಾ ಒಂದಲ್ಲ ಒಂದು ಆಟದಲ್ಲಿ ತೊಡಗಿಕೊಂಡಿರುತ್ತದೆ. ಒಮ್ಮೆ ರಂಗಾಣಿಯ ಜೊತೆ ಆಟವಾಡುತ್ತಿದ್ದರೆ, ಮತ್ತೊಮ್ಮೆ ಇನ್ನೊಂದು ಆಟಿಗೆಯತ್ತ ಅದರ ಮನಸ್ಸು ಹೋಗುತ್ತದೆ. ಯಾವುದೇ ಒಂದು ಆಟದಲ್ಲಿ ಅದು ಸಂತೋಷ ಪಡುವುದಿಲ್ಲ. ಅದಕ್ಕೆ ಮರೆಯುವುದು ಗೊತ್ತು. ಬಿಡುವುದು ಗೊತ್ತು. ಆದರೆ ನಾವು ಹಾಗಲ್ಲ. ನಾವು ಯಾವುದರಲ್ಲಾದರೂ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತೇವೆ. ಅದರಿಂದ ಹೊರಕ್ಕೆ ಬರುವುದು ನಮಗೆ ಗೊತ್ತಿಲ್ಲ. ಹೊರಕ್ಕೆ ಬರುವುದು ನಮಗೆ ಬೇಕಿಲ್ಲ. ಇದೇ ನಮ್ಮ ಸಮಸ್ಯೆ.
ನಾವು ವಿದ್ಯಾರ್ಥಿಯಾಗಿದ್ದರೆ, ನಮಗೆ ಪ್ರಥಮ ಸ್ಥಾನವೇ ಬೇಕು. ಅದೇ ನಮ್ಮ ಗುರಿ. ನಾವು ಅದರಿಂದ ಹೊರಕ್ಕೆ ಬರಲಾರೆವು. ಹಾಗೆ ನಾವು ಉದ್ಯೋಗಸ್ಥರಾಗಿದ್ದರೆ ? ನಮ್ಮ ಬಾಸು, ನಮ್ಮ ಸಹೋದ್ಯೋಗಿಗಳು, ಅವರ ತರಲೆಗಳು, ಪ್ರಮೋಷನ್ನು ಇತ್ಯಾದಿ. ಇದರಿಂದ ನಮಗೆ ಹೊರಕ್ಕೆ ಬರುವುದು ಗೊತ್ತಿಲ್ಲ. ಈ ಪ್ರಪಂಚವನ್ನು ಬಿಟ್ಟು ನಾವು ಹೊರಕ್ಕೆ ಬರಲಾರೆವು. ಇಂತಹ ಜನರ ಬಳಿ ಹೋಗಿ ಬೇರೆ ಯಾವುದೋ ವಿಚಾರದ ಬಗ್ಗೆ ಮಾತನಾಡಿ. ಅವರು ಹೇಳುತ್ತಾರೆ, ನನಗೆ ನನ್ನದೇ ಸಾಕಷ್ಟು, ಹಾಸಿ ಹೊದ್ದುಕೊಳ್ಳುವಷ್ಟಿದೆ. ಅಂದರೆ ಅವರು ತಾವು ಸಿಕ್ಕಿಕೊಂಡ ವರ್ತುಲದಿಂದ ಹೊರಕ್ಕೆ ಬರಲಾರರು. ಅಲ್ಲಿಂದ ಓಡಿ ಹೋಗಲಾರರು.
ನಾನು ಇಂತಹ ಸ್ಥಿತಿಯಲ್ಲಿ ಹಲವಾರು ಬಾರಿ ಸಿಕ್ಕಿಕೊಂಡಿದ್ದೇನೆ. ಆದರೆ ಅಲ್ಲಿಂದ ಓಡಿ ಬರುವುದನ್ನು ಕಲಿತಿದ್ದೇನೆ.
ನಾನು ಪತ್ರಿಕೆಗಳಲ್ಲಿ ಕೆಲಸ ಮಾಡುವಾಗ ಎಷ್ಟೋ ಬಾರಿ, ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಿಡಬೇಕು ಎಂದು ಅನ್ನಿಸಿದ್ದುಂಟು. ಆಗೆಲ್ಲ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದೇನೆ. ಆದರೆ, ಮದುವೆ ಮಕ್ಕಳು ಆದ ಮೇಲೆ ನನಗೆ ಅಷ್ಟು ಸುಲಭವಾಗಿ ಓಡಲು ಸಾಧ್ಯವಾಗಿಲ್ಲ. ಪ್ರತಿ ಸಲ ಇರುವುದರಿಂದ ಇರದಿರುವುದರೆಡೆಗೆ ಓಡಬೇಕು ಎಂದುಕೊಂಡಾಗ, ಮನೆ ಹೆಂಡತಿ ಮಕ್ಕಳು ನೆನಪಾಗುತ್ತರೆ. ಆಗ ಇರುವ ಕೆಲಸವನ್ನು ಬಿಟ್ಟು ಓಡಿ ಹೋಗಲು ಸಾಧ್ಯವಾಗುವುದಿಲ್ಲ. ಪ್ರಾ ಯಶಃ ನಾವು ಬದುಕಿನಲ್ಲಿ ಸುರಕ್ಷತೆಯನ್ನು ಬಯಸುತ್ತೇವೆ. ಸುರಕ್ಷತೆಯ ಆಸೆ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಅದು ನಮ್ಮ ಕಾಲನ್ನು ಕಟ್ಟಿ ಹಾಕುತ್ತದೆ.
ಓದಿ ಹೋಗುವುದು ಎಂದರೆ, ಅದು ಬಿಡುಗಡೆ. ಓಡಿ ಹೋಗದೇ ನಿಂತಲ್ಲಿ ನಿಲ್ಲುವುದು ಎಂದರೆ ಅದು ಬಂಧನ. ಬಂಧನ ನಮ್ಮ ಮನಸ್ಸನ್ನು ಕಟ್ಟಿ ಹಾಕುತ್ತದೆ. ಅಲ್ಲಿ ಕ್ರಿಯಾಶೀಲತೆ ಸಾಯುತ್ತದೆ. ಆದ್ದರಿಂದ ನಾವೆಲ್ಲ ಓಡಬೇಕು ಓಡುತ್ತಲೇ ಇರಬೇಕು.

Sunday, April 6, 2008

ನಮಗೆ ಮಾತನಾಡಲು ಬರುವುದಿಲ್ಲ

ಇಂದು ನಾವೆಲ್ಲ ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆ ಯಾವುದು ? ಈ ಪ್ರಶ್ನೆಯನ್ನು ದಿನಕ್ಕೆ ಒಂದು ಬಾರಿಯಾದರೂ ನನ್ನನ್ನೇ ನಾನೇ ಕೇಳಿಕೊಳ್ಳುತ್ತೇನೆ। ಕೆಲವರಿಗೆ ಅನ್ನದ ಸಮಸ್ಯೆ। ಇನ್ನೂ ಕೆಲವರಿಗೆ ವಸತಿಯ ಸಮಸ್ಯೆ। ಕೆಲವರಿಗೆ, ಹೊಸ್ ಕಾರುಕೊಂಡುಕೊಳ್ಳುವ ಸಮಸ್ಯೆ। ಮಗನಿಗೆ ಅಥವಾ ಮಗಳಿಗೆ ಒಳ್ಳೆಯ ಶಾಲೆಯಲ್ಲಿ ಸೀಟು ದಕ್ಕಿಸಿಕೊಳ್ಳುವ ಸಮಸ್ಯೆ। ಗಂಡನಿಗೆ ಹೆಂಡತಿಯ ಸಮಸ್ಯೆ, ಹೆಂಡತಿಗೆ ಗಂಡನ ಸಮಸ್ಯೆ। ಪ್ರೇಮಿಗೆ ಪ್ರೇಮಿಸುವ ಸಮಸ್ಯೆ। ಪಟ್ಟಿ ಹೀಗೆ ಬೆಳೆಯುತ್ತಲೇ ಹೋಗುತ್ತದೆ। ಪ್ರಾಯಶಃ ಈ ಜಗತ್ತಿನಲ್ಲಿ ಸಮಸ್ಯೆ ಇಲ್ಲ ಎಂದು ಹೇಳುವವರು ಯಾರೂ ಇಲ್ಲ।
ನನಗೆ ಇದ್ಯಾವುದೂ ಸಮಸ್ಯೆ ಎಂದು ಅನ್ನಿಸುವುದಿಲ್ಲ। ಇವೆಲ್ಲವಕ್ಕಿಂತ ಮುಖ್ಯವಾದ ಸಮಸ್ಯೆ ಎಂದರೆ ಸಂವಹನ ಸಮಸ್ಯೆ ಎನ್ನುವುದು ನನಗೆ ಮನದಟ್ಟಾಗಿದೆ। ನಮಗೆ ಬೇರೆಯವರಿಗೆ ಹೇಳಬೇಕಾದ್ದನ್ನು ಹೇಳಲು ಬರುವುದಿಲ್ಲ। ಬೇರೆಯವರು ಹೇಳಿದ್ದನ್ನು ಕೇಳಲು ಬರುವುದಿಲ್ಲ। ಆದ್ದರಿಂದ ಈ ಸಮಸ್ಯೆಯನ್ನು ಹೇಳುವ ಮತ್ತು ಕೇಳುವ ಸಮಸ್ಯೆ ಎಂದು ನಾನು ಕರೆಯುತ್ತೇನೆ।
ಹೇಳುವ ಸಮಸ್ಯೆಯನ್ನೇ ನೋಡಿ। ನಾವು ದಿನವಿಡೀ ಮಾತನಾಡುತ್ತಲೇ ಇರುತ್ತೇವೆ। ನಮಗೆ ಮಾತನಾಡುವುದು ಇಷ್ಟ। ನಾವು ಹೇಳುವುದನ್ನು ಬೇರೆಯವರು ಕೇಳುತ್ತಾರೆಯೇ ಅಥವಾ ಇಲ್ಲವೇ ಎಂಬುದು ನಮಗೆ ಮುಖ್ಯವಲ್ಲ। ನಮಗೆ ನಾವು ಹೇಳುವುದನ್ನು ಹೇಳಲೇ ಬೇಕು। ನಾವು ಹೇಳುವುದನ್ನು ಯಾರಿಗೆ ಹೇಳುತ್ತೇವೆಯೋ ಅವರು ಅದನ್ನು ಕೇಳಿಸಿಕೊಳ್ಳಲೇಬೇಕು। ನಾವೆಂತಹ ಸರ್ವಾಧಿಕಾರಿಗಳು ! ನಮಗೆ ಮನಸ್ಸಿನಲ್ಲಿರುವುದನ್ನು ಕಕ್ಕಲು ಒಂದು ವಾಷ್ ಬೇಸಿನ್ ಬೇಕು। ನಮ್ಮ ದೃಷ್ಠಿಯಲ್ಲಿ ನಮ್ಮ ಎದುರು ಇರುವವರು, ಇಂತಹ ವಾಷ್ ಬೇಸಿನ್ ಗಳು।
ನಮಗೆ ಸಂವಹನ ಕ್ರಿಯೆಯ ಪ್ರಾಥಮಿಕ ಲಕ್ಷಣ ಕೂಡ ಗೊತ್ತಿಲ್ಲ। ನಾವು ಏನನ್ನು ಹೇಳುತ್ತೇವೆ ಎಂಬುದರ ಪ್ರಾಥಮಿಕ ಅರಿವು ನಮಗಿರಬೇಕು। ನಾವು ಹೇಳುವುದನ್ನು ಹೇಳಲು ಬೇಕಾದ ಭಾಷಾ ಸಮರ್ಥ್ಯ ನಮಗಿರಬೇಕು। ನಾವು ಏನನ್ನು ಹೇಳಲು ಹೊರಟಿದ್ದೇವೆಯೋ ಅದನ್ನು ಹೇಳಲು ಸರಿಯಾದ ಶಬ್ದಗಳನ್ನು ಆಯ್ಕೆಮಾಡಿಕೊಳ್ಳಬೇಕು। ಆದರೆಬಹುತೇಕ ಸಂದರ್ಭದಲ್ಲಿ ನಾವು ಈ ಬಗ್ಗೆ ಯೋಚಿಸುವುದೇ ಇಲ್ಲ। ಸುಮ್ಮನೆ ಮಾತನಾಡಿ, ಈ ಮಾತುಗಳಿಗೆ ಪ್ರತಿಕ್ರಿಯೆ ಬರದಿದ್ದಾಗ, ಅವನಿಗೆ ಏನು ಗತ್ತು ಮಾರಾಯಾ ಎಂದು ಪ್ರತಿಕ್ರಿಯೆ ನೀಡಿ ಸುಮ್ಮನಾಗಿ ಬಿಡುತ್ತೇವೆ।
ಏನನ್ನಾದರೂ ಹೇಳುವುದಕ್ಕೆ ಮೊದಲು ನಮಗೆ ನೋಡುವುದು ಗೊತ್ತಿರಬೇಕು। ಆದರೆ ನಮಗೆ ನೋಡುವುದೇ ಗೊತ್ತಿಲ್ಲ। ನಾವು ಏನನ್ನೂ ಸರಿಯಾಗಿ ನೋಡುವುದಿಲ್ಲ। ನಮ್ಮ ಜೊತೆಗೆ ಕೆಲಸ ಮಾಡುವವರನ್ನು, ನಮ್ಮ ಜೊತೆಗೆ ಬದುಕುವವರನ್ನು ನಾವು ನೋಡು ಎಷ್ಟೋ ಕಾಲ ಕಳೆದುಹೋಗಿರುತ್ತದೆ। ನಾವು ಪ್ರಥಮ ಸಲ ಅವರನ್ನು ನೋಡಿದ ಮೇಲೆ ಮತ್ತೆ ಅವರನ್ನು ನೋಡುವುದಿಲ್ಲ। ನಾನು ಹೇಳುವುದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು। ಆದರೆ ಇದು ನಿಜ। ನೋಡುವುದೆಂದರೆ ಪ್ರೆಶ್ ಆಗಿ ನೋಡುವುದು। ಹೊಸದಾಗಿ ನೊಡುವುದು ಇದೆಯಲ್ಲ, ಅದು ನಮಗೆ ಹೊಸದಾಗಿ ಮಾತನಾಡುವುದನ್ನು ಕಲಿಸುತ್ತದೆ। ನಾವು ಹೊಸದಾಗಿ ಮಾತನಾಡಿದರೆ ಹೊಸದಾಗಿ ಕೇಳುವವರು ಸಿಗುತ್ತಾರೆ।

Tuesday, March 18, 2008

ಕಣ್ಣು ಕತ್ತಿಯ ಅಂಚು !

ಕಳೆದ ಎರಡು ವಾರಗಳ ಹಿಂದೆ ಎಲ್ ಆರ್ ಈಶ್ವರಿ ಬೆಂಗಳೂರಿಗೆ ಬಂದಿದ್ದರು। ನಮ್ಮ ಹುಡುಗರ ಬಳಿ ಅವಳ ಬಗ್ಗೆ ವರದಿ ಮಾಡುವಂತೆ ಹೇಳಿ ಸುಮ್ಮನೆ ನನ್ನ ಕೊಠಡಿಯಲ್ಲಿ ಕುಳಿತೆ। ಮನಸ್ಸು ಹಲವು ವರ್ಷಗಳ ಹಿಂದಕ್ಕೆ ಓಡಿತು। ನಾನಾಗ ಹೈಸ್ಕೂಲಿನಲ್ಲಿ ಓದುತ್ತಿದ್ದ ದಿನಗಳು। ಸಿನೆಮಾ ಆಗ ನನ್ನ ಹುಚ್ಚು। ಹೈಸ್ಕೂಲಿಗೆ ಕಳ್ಳ ಬಿದ್ದು ಸಿನೆಮಾ ನೋಡುವ ಖಯಾಲಿ। ಆಗ ಎಲ್ಲ ಕ್ಯಾಬರೆ ಡ್ಯಾನ್ಸರುಗಳಿಗೆ ಧ್ವನಿ ನೀಡುತ್ತಿದ್ದವರು ಎಲ್ ಆರ್ ಈಶ್ವರಿ। ಈಶ್ವರಿ ಧ್ವನಿ ಕೇಳಿದ ತಕ್ಷಣ ಮನಸ್ಸಿನಲ್ಲಿ ಹುಟ್ಟುತ್ತಿದ್ದ ರಾಗ ತರಂಗಗಳು। ಅದೊಂದು ಅಮಲು। ಹಲವು ಸಂದರ್ಭದಲ್ಲಿ ನಾನು ಹೇಳುತ್ತಿದ್ದು, ನನಗೆ ಯೌವನ ಬಂದಿದೆ ಎಂದು ಗೊತ್ತಾದದ್ದೇ ಎಲ್ ಆರ್ ಈಶ್ವರಿಯ ಮಾದಕ ಧ್ವನಿಯನ್ನು ಕೇಳಿದಾಗ ಅಂತ। ಈಶ್ವರಿಯ ಧ್ವನಿಯೇ ಹಾಗೆ। ಅಲ್ಲಿ ಇದ್ದುದು ಮಾದಕತೆ, ಅದು ಆಹ್ವಾನ ನೀಡುವ ಧ್ವನಿ।

ಅವಳ ಬಾಯಲ್ಲಿ, ಕಣ್ಣು ಕತ್ತಿಯ ಅಂಚು ಎಂಬ ಹಾಡು ಬಂದಾಗ, ಕತ್ತಿಯಿಂದ ಹೃದಯವನ್ನು ಇರಿದಂತೆ। ಹಾಡು ಕೇಳುತ್ತಿದ್ದವರು ತಮ್ಮ ಕೈಯನ್ನು ಎತ್ತಿ ಎದೆಯ ಮೇಲೆ ಇಟ್ಟುಕೊಳ್ಳಬೇಕಾದ ಸ್ಥಿತಿ। ಎಲ್ ಆರ್ ಈಶ್ವರಿಯ ಹಾಡಿಗೆ ಹೆಜ್ಜೆ ಹಾಕುತ್ತಿದ್ದ ಜ್ಯೋತಿಲಕ್ಷ್ಮಿಯೂ ಹಾಗೆ। ಆಕೆ ಹೆಜ್ಜೆ ಎತ್ತಿ ಇಡುವ ವೇಗ, ಅದಕ್ಕೆ ತಕ್ಕಂತೆ ಮೈಬಳಕಿಸುತ್ತಿದ್ದ ರೀತಿ ಎಲ್ಲವೂ ಅನನ್ಯ। ಜ್ಯೋತಿ ಲಕ್ಷ್ಮಿಯ ಜೊತೆಗೆ ಅಂದು ಖ್ಯಾತರಾಗಿದ್ದ ಇನ್ನೊಬ್ಬ ಕ್ಯಾಬರೆ ನಟಿ ಹಲಂ। ಹಲಂ ದಕ್ಷಿಣ ಭಾರತದಲ್ಲೆ ಖ್ಯಾತಿಯನ್ನು ಪಡೆದವಳು। ಆದರೆ ಜ್ಯೋತಿಲಕ್ಶ್ಮಿಯ ಹೆಜ್ಜೆ ಮತ್ತು ಎಲ್ ಅರ್ ಈಶ್ವರಿಯ ಧ್ವನಿಯ ಸಂಗಮ ಮಾತ್ರ ಬೇರೆ ರೀತಿಯದು। ಅಲ್ಲಿ ಒಂದು ರೀತಿಯ ತಾದ್ಯಾತ್ಮ। ಶರೀರ ಮತ್ತು ಶಾರೀರ ಬೇರೆ ಅಂತಾ ಅನ್ನಿಸದಷ್ಟು ಹೊಂದಾಣಿಕೆ।
ಜನ ಬದಲಾದ ಹಾಗೆ ಸಿನೆಮಾ ಬದಲಾಯಿತು। ಚಿತ್ರಗಳಲ್ಲಿ ಕ್ಯಾಬರೆ ನರ್ತಕಿಯರ ಕೆಲಸವನ್ನು ನಾಯಕಿಯರೇ ಮಾಡತೊಡಗಿದರು। ಹೀಗಾಗಿ ಕ್ಯಾಬರೆ ನರ್ತಕಿಯರು ಚಿತ್ರರಂಗದಿಂದ ಮರೆಯಾಗತೊಡಗಿದರು। ಕ್ಯಾಬರೆ ನರ್ತಕಿಯರು ಹೋದ ಮೇಲೆ, ಎಲ್ ಆರ್ ಈಶ್ವರಿಯ ಬೇಡಿಕೆಯೂ ಕಡಿಮೆಯಾಯಿತು। ಆಕೆ ಸಾವಕಾಶವಾಗಿ ನೇಪಥ್ಯಕ್ಕೆ ಸರಿಯತೊಡಗಿದಳು। ಮೊನ್ನೆ ಬೆಂಗಳೂರಿಗೆ ಬಂದಿದ್ದ ಆಕೆ ಕಾರ್ಯಕ್ರಮವೊಂದರಲ್ಲಿ ಹಾಡಿದಳು। ಆ ಕಾರ್ಯಕ್ರಮದ ಕ್ಯಾಸೆಟ್ ಕೇಳುತ್ತ ಕುಳಿತೆ। ಅವಳ ಧ್ವನಿ ವಯಸ್ಸಿಗೆ ತಕ್ಕಂತೆ ಸ್ವಲ್ಪ ನಡುಗುತ್ತಿದೆ। ಮೊದಲಿನ ಮಾದಕತೆ ಕಡಿಮೆಯಾಗಿದೆ। ಕಣ್ಣು ಕತ್ತಿಯ ಅಂಚು ಎಂದು ಹೇಳಿದಾಗ ಕತ್ತಿಯ ಮೊನಚು ಮೊದಲಿನಂತಿಲ್ಲ ಎಂದು ಅನ್ನಿಸುತ್ತದೆ।
ಇದನ್ನೆಲ್ಲ ಕುಳಿತು ಯೋಚಿಸುವಾಗ ಮತ್ತೆ ನಾನು ಹಲವಾರು ವರ್ಷಗಳಷ್ಟು ಹಿಂದಕ್ಕೆ ಓಡುತ್ತೇನೆ। ಮೊದಲ ಬಾರಿ ಅವಳ ಹಾಡು ಕೇಳಿದ್ದು ನೆನಪಾಗುತ್ತದೆ। ಆಗಿನ ಹಾಡು ಮತ್ತು ಈಗಿನ ಸಂದರ್ಭವನ್ನು ಹೋಲಿಸಲು ಯತ್ನಿಸುತ್ತೇನೆ। ಆದರೆ ಯಾಕೋ ಹೋಲಿಸುವುದಕ್ಕೂ ಸಾಧ್ಯವಾಗುವುದಿಲ್ಲ। ಆಗ ಸುಮ್ಮನೆ ಮನಸ್ಸಿನಲ್ಲೇ ಹೇಳಿಕೊಂಡೆ। ಈಕೆ ಈಶ್ವರಿಯಲ್ಲ, ಆಗಿನ ಈಶ್ವರಿಯೇ ಬೇರೆ, ಈ ಈಶ್ವರಿಯೇ ಬೇರೆ !
ಮತ್ತೆ ನನ್ನ ಕಚೇರಿಯ ಕಪಾಟಿನಲ್ಲಿ ಈಶ್ವರಿಯ ಹಳೆಯ ಹಾಡಿನ ಕ್ಯಾಸೆಟ್ ಗಾಗಿ ಹುಡುಕಿದೆ। ಸಿಕ್ಕಿದ ಆ ಕ್ಯಾಸೆಟ್ ಅನ್ನು ಹಾಗೆ ಪ್ರೀತಿಯಿಂದ ಮುಟ್ಟಿದೆ। ಏನೋ ಕಳೆದುಕೊಂಡಿದ್ದು ಸಿಕ್ಕಿದ ಹಾಗೆ ಸಮಾಧಾನವಾಯಿತು.

Thursday, March 13, 2008

ವೈಚಾರಿಕತೆ ಮತ್ತು ಭಾವ ಅಭಿವ್ಯಕ್ತಿ.

ನಿನಗೆ ಭಾವನೆಗಳೇ ಇಲ್ಲ !

ಈ ಮಾತನ್ನು ನಾನು ಹಲವು ಬಾರಿ ಕೇಳಿದ್ದೇನೆ। ಹಾಗೆ ನೀವು ಸಹ ಹಲವು ಸಂದರ್ಭಗಳಲ್ಲಿ ಇಂತಹ ಮಾತುಗಳನ್ನು ಕೇಳಿರಬಹುದು। ಬೇರೆಯವರಿಗೆ ಈ ಮಾತನ್ನು ಹೇಳಿರಲೂಬಹುದು। ಹಾಗಿದ್ದರೆ, ಭಾವನೆ ಎಂದರೆ ಏನು ? ಅದು ನಾವು ಇನ್ನೊಬ್ಬರಿಗೆ ನೀಡುವ ಪ್ರತಿಕ್ರಿಯೆಯೆ ? ಅಥವಾ ಬೇರೆಯವರು ಬಯಸುವ ಪ್ರತಿಕ್ರಿಯೆಯೆ ? ಭಾವನೆ ಇಲ್ಲ ಎಂದು ಹೇಳುವವರು, ಯಾರಿಗೆ ಈ ಮಾತನ್ನು ಹೇಳುತ್ತಾರೋ ಅವರಿಂದ ಎಂತಹ ಪ್ರತಿಕ್ರಿಯೆಯನ್ನು ಬಯಸುತ್ತಾರೆ ?ಈ ಪ್ರಶ್ನೆಯನ್ನು ಒಂದು ಉದಾಹರಣೆಯ ಮೂಲಕ ನೋಡಲು ಯತ್ನಿಸೋಣ। ನಾವು ನಮ್ಮ ಕ್ರಿಯೆ ಮತ್ತು ಮಾತುಗಳೆಗೆ ಬೇರೆಯವರಿಂದ ಪ್ರತಿಕ್ರಿಯೆಯನ್ನು ಬಯುಸುತ್ತೇವೆ। ಜೊತೆಗೆ ಈ ಪ್ರತಿಕ್ರಿಯೆ ತನ್ನ ಮಾತಿಗೆ ಕೃತಿಗೆ ಪೂರಕವಾಗಿರಬೇಕು ಎಂಬ ಆಶಯವನ್ನು ಹೊಂದಿರುತ್ತೇವೆ। ಯಾವಾಗ ಪ್ರತಿಕ್ರಿಯೆಯೇ ಇರುವುದಿಲ್ಲವೋ ಆಗ ನಮಗೆ ಆಘಾತವಾಗುತ್ತದೆ। ಈ ಆಘಾತವಾಗುವುದು ಬೇರೊಬ್ಬರು ಪ್ರತಿಕ್ರಿಯೆ ನೀಡಿಲ್ಲ ಎಂಬುದಕ್ಕಾಗಿ ಅಲ್ಲ, ನಮ್ಮ ಪ್ರತಿಕ್ರಿಯೆಯ ನಿರೀಕ್ಷೆ ಹುಸಿಯಾಯಿತಲ್ಲ ಎಂಬುದೇ ಈ ಆಘಾತಕ್ಕೆ ಕಾರಣ।

ಒಂದು ಮಗು ಪ್ರತಿಕ್ರಿಯೆಯಾಗಿ ಹಠ ಮಾಡುತ್ತದೆ, ರಂಪ ಮಾಡುತ್ತದೆ। ಈ ಮೂಲಕ ತನ್ನ ತಾಯಿ ಅಥವಾ ತಂದೆಯ ಲಕ್ಶ್ಯವನ್ನು ತನ್ನತ್ತ ಸೆಳೆಯುತ್ತದೆ। ಅಳುತ್ತಿರುವ ಮಗುವಿಗೆ ಅಳಬೇಡ, ಮರಿ ನಿನಗೆ ಚಾಕಲೇಟ್ ಕೊದ್ತೀನಿ ಎಂದು ಹೇಳಿದ ತಕ್ಷಣ ಮಗು ಅಳುವುದನ್ನು ನಿಲ್ಲಿಸುತ್ತದೆ। ಚಾಕಲೇಟು ಕೊಡುವುದು ಮುಂದಿನ ಮಾತು। ಆದರೆ ನಿನಗೆ ಚಾಕಲೇಟ್ ಕೊಡ್ತೀನಿ ಎಂದು ನೀಡುವ ಭರವಸೆ ಮಗುವಿಗೆ ಸಾಕು। ಇಂಥಹ ಒಂದು ಭರವಸೆಗಾಗಿ ಮಗು ಮಾತ್ರವಲ್ಲ, ಎಲ್ಲರೂ ಕಾಯುತ್ತಿರುತ್ತಾರೆ। ಹಾಗಿದ್ದರೆ ಭರವಸೆ ಅನ್ನುವುದಿದೆಯಲ್ಲ, ಅದು ಎಲ್ಲರೂ ಬೇರೆಯವರಿಂದ ಬಯಸುವಂತಹುದು। ತಮಾಷೆ ಎಂದರೆ, ಬೇರೆಯವರಿಂದ ಭರವಸೆಯನ್ನು ಬಯಸುವ ನಮಗೆ ಬರವಸೆ ನೀಡುವುದು ಗೊತ್ತಿರುವುದಿಲ್ಲ। ಹಠ ಮಾಡುವ ಮಗುವಿಗೆ ಸಾಂತ್ವನ ಹೇಳುವ, ಆ ಮಗುವಿನಲ್ಲಿ ಭರವಸೆ ಹುಟ್ಟಿಸುವುದಕ್ಕೆ ಬದಲಾಗಿ ಮಗುವನ್ನು ಗದರಿಸಿ ಬಾಯಿಮುಚ್ಚಿಸಲು ನಾವೆಲ್ಲ ಯತ್ನ ನಡೆಸುತ್ತೇವೆ।

ನನಗೆ ಈಗಲೂ ನೆನಪಿದೆ। ನಾನು ಸಣ್ಣವನಿದ್ದಾಗ ಗಲಾಟೆ ಮಾಡಿದಾಗ ಅಪ್ಪನಿಂದ ಬಡಿತ ತಿಂದಾಗ, ನನ್ನ ಅಜ್ಜಿ ನನ್ನನ್ನು ಬಾಚಿ ತಬ್ಬಿಕೊಂಡು ತನ್ನ ಸೀರೆಯ ಸೆರಗಿನಡಿಯಲ್ಲಿ ನನ್ನನ್ನು ಬಚ್ಚಿಟ್ತುಕೊಳ್ಳುತ್ತಿದ್ದಳು। ಆಗೆಲ್ಲ ಅಪ್ಪ ಹೊಡೆದ ನೋವು ಮರೆಯಾಗಿ ಒಂದು ರೀತಿಯ ರಕ್ಷಣೆಯ ಭಾವ ನನ್ನಲ್ಲಿ ಮೂಡಿ ಬಿಡುತ್ತಿತ್ತು। ಸ್ವಲ್ಪ ಸಮಯದಿಂದ ಅಜ್ಜಿಯ ಸೆರಗಿನಡಿಯಿಂದ ಹೊರಕ್ಕೆ ಬಂದು ಆಡಲು ಅಂಗಳಕ್ಕೆ ನಾನು ಒಡಿಬಿಡುತ್ತಿದ್ದೆ। ಹೀಗೆ ಬಾಲ್ಯದಲ್ಲಿ ನಾವು ಪಡೆಯುವ ಇಂಥಹ ಭರವಸೆ ಮತ್ತು ರಕ್ಷಣೆಯ ಅಭಯ ಹಸ್ತ ದೊಡ್ಡವರಾದ ಮೇಲೆ ಕಡಿಮೆಯಾಗುತ್ತದೆ। ಆಗ ನಾವು ಬೇರೆ ಬೇರೆಯವರಿಂದ ಇಂಥಹ ಭರವಸೆಯನ್ನು ಪಡೆಯಲು ಮುಂದಾಗುತ್ತೇವೆ। ನಮ್ಮ ಸಂಪರ್ಕಕ್ಕೆ ಬರುವ, ನಮಗೆ ಆತ್ಮೀಯರಾದವರಿಂದ ಈಂತಹ ಭರವಸೆಗಾಗಿ, ಭರವಸೆಯ ಭಾವನೆಗಾಗಿ ನಾವು ಕಾಯುತ್ತಿರುತ್ತೇವೆ। ಹಾಗಿದ್ದರೆ ಈ ಭಾವನೆ ಎಂದರೇನು ? ಅದು ನಾವು ಬಹಿರಂಗವಾಗಿ ಹೇಳುವ ಮಾತೇ ?ಮಾತೇ ಭಾವನೆ ಅಲ್ಲ। ಮಾತು ಭಾವನೆಯನ್ನು ಸಂವಹನ ಮಾಡುವ ಒಂದು ವಾಹಕ ಮಾತ್ರ। ಈ ವಾಹಕಕ್ಕೆ ಸ್ವಂತ ಅಸ್ಥಿತ್ವ ಇಲ್ಲ। ಮಾತಿನಲ್ಲಿ ನಾವು ಏನನ್ನು ತುಂಬುತ್ತೇವೆ ಎಂಬುದರ ಮೇಲೆ ಆ ಮಾತಿನ ಜೀವಂತಿಕೆ ತೀರ್ಮಾನವಾಗುತ್ತದೆ। ಅಂದರೆ ಭಾವನೆ ಇಲ್ಲದ ಮಾತು ಏನೂ ಅಲ್ಲ। ಮಾತಿಗೆ ಭಾವನೆ ಬೇಕು। ಭಾವನೆಯನ್ನು ಸಂವಹನ ಮಾಡಲು ಮಾತು ಬೇಕು। ಈಗ ಮತ್ತೆ ಭಾವನೆ ಹೇಗೆ ಉದ್ಭವಿಸುತ್ತದೆ ? ಎಂಬುದನ್ನು ನೋಡೋಣ।ನಾವು ಬೇರೆಯವರ ಮಾತು ಕೇಳಿದ ತಕ್ಷಣ ಅದು ಕಿವಿಯ ಮೂಲಕ ಮೆದುಳಿಗೆ ತಲುಪುತ್ತದೆ। ಮೆದುಳು ಈ ಮಾತಿಗೆ ಪ್ರತಿಕ್ರಿಯೆ ಹೇಗೆ ನೀಡಬೇಕು ಎಂದು ನಿರ್ಧರಿಸುತ್ತದೆ। ಈ ಪ್ರತಿಕ್ರಿಯೆಯಲ್ಲಿ ವೈಚಾರಿಕತೆ ಮಹತ್ವವನ್ನು ಪಡೆಯಬಹುದು, ಇಲ್ಲವೇ ಭಾವನಾತ್ಮಕತೆ ಹೆಚ್ಚಿನ ಮಹತ್ವವನ್ನು ಪಡೆಯಬಹುದು। ಯಾವಾಗಲೂ ಈ ಪ್ರತಿಕ್ರಿಯೆ ತಕ್ಷಣ ಬಂದರೆ, ಅಲ್ಲಿ ಭಾವನಾತ್ಮಕತೆ ಹೆಚ್ಚಿನ ಮಹತ್ವಪಡೆಯುತ್ತದೆ। ಮೆದುಳು ಈ ಬಗ್ಗೆ ವಿಚಾರ ಮಾಡಲು ಪ್ರಾರಂಭಿಸಿದರೆ ಆಗ ಅಲ್ಲಿ ವೈಚಾರಿಕತೆಯದೇ ಪ್ರಾಧಾನ್ಯ। ಆದರೆ ಭಾವನೆ ಎನ್ನುವುದಿದೆಯಲ್ಲ, ಅದು ಕಾರ್ಯ ಕಾರಣ ಸಂಬಂಧವನ್ನು ವಿಶ್ಲೇಷಿಸುವುದಿಲ್ಲ। ಅದು ಇನಸ್ಟೆಂಟ್ ಆಗಿ ಬರುವಂತಹುದು। ಬಹುಮಟ್ಟಿಗೆ ವಿಚಾರ ಬಹುತೇಕ ಸಂದರ್ಭದಲ್ಲಿ ನಮ್ಮನ್ನು ದಾರಿ ತಪ್ಪಿಸುತ್ತದೆ। ಯಾಕೆಂದರೆ ವಿಚಾರ ಹುಟ್ಟುವುದು ನಮ್ಮ ಭೂತಕಾಲದ ನೆನಪುಗಳ ಮೇಲೆ। ನಮ್ಮ ಮೆದುಳಿನಲ್ಲಿ ಶೇಖರಣೆಯಾದ ವಿಷಯಗಳನ್ನು ವರ್ತಮಾನದ ಮಾತು ವರ್ತನೆಯ ಜೊತೆ ತುಲನೆ ಮಾಡಿ ಒಂದು ನಿರ್ಧಾರಕ್ಕೆ ಬರುವಂತೆ ಮಾಡುವುದು ವಿಚಾರ, ಚಿಂತನೆ। ಕೆಲವೊಮ್ಮೆ ನಾನು ವಿಚಾರ ಮಾಡುವುದನ್ನೇ ವಿರೋಧಿಸುತ್ತೇನೆ। ಯಾಕೆಂದರೆ ವಿಚಾರವೇ ನಮ್ಮನ್ನು ಹಾದಿ ತಪ್ಪಿಸುತ್ತದೆ। ಪ್ರೆಶ್ ಆಗಿ ನೋಡುವುದಕ್ಕೆ ಅವಕಾಶ ನೀಡುವುದಿಲ್ಲ। ಆದರೆ ವಿಚಾರ ಮಾಡದೇ ಇರುವುದಕ್ಕೂ ನಮಗೆ ಸಾಧ್ಯವಾಗುವುದಿಲ್ಲ। ನಮಗೆ ವಿಚಾರವಂತರು ಎಂದು ಹೇಳಿಸಿಕೊಳ್ಳುವ ಚಟ।

ಈಗ ಮತ್ತೆ ಮೂಲ ವಿಷಯಕ್ಕೆ ಬರುತ್ತೇನೆ। ಅದು ಭಾವನೆಗಳೇ ಇಲ್ಲ ಎಂಬ ಹೇಳಿಕೆಯ ಬಗ್ಗೆ। ಭಾವನೆಯನ್ನು ವ್ಯಕ್ತಪಡಿಸದೇ ಇರುವುದು ಭಾವನೆಗಳೇ ಇಲ್ಲ ಎಂಬುದಲ್ಲ। ಭಾವನೆಗಳನ್ನು ವ್ಯಕ್ತಪಡಿಸಿದರೆ ಇದೇ ಎಂದೂ ಅಲ್ಲ। ಆದರೆ ಮೂಲಭೂತವಾಗಿ ಮುಜುಗರದ ಮನುಷ್ಯನಾದ ನಾನು ಭಾವನೆಗಳನ್ನು ವ್ಯಕ್ತಪಡಿಸುವುದು ಕಡಿಮೆ। ಜೊತೆಗೆ ನಾನು ಹೇಳುವ ಮಾತುಗಳು, ವ್ಯಕ್ತಪಡಿಸುವ ಅಭಿಪ್ರಾಯಗಳು ಬೇರೆಯವರ ಬೇಸರಕ್ಕೆ ಕಾರಣವಾಗಬಾರದು ಎಂಬುದು ಭಾವನೆಗಳು ಇಲ್ಲದಂತೆ ಇರುವುದಕ್ಕೆ ಕಾರಣವಾಗಿರಬಹುದು.









Thursday, March 6, 2008

ನಾನು, ನೀವು ಮತ್ತು ಸಂವಹನ

ಈ ಶತಮಾನದ ಬಹುಮುಖ್ಯವಾದ ಸಮಸ್ಯೆ ಎಂದರೆ, ಸಂವಹನ। ಬಹಳಷ್ಟು ಸಂದರ್ಭಗಳಲ್ಲಿ, ನಾವು ಹೇಳಬೇಕು ಎಂದುಕೊಂಡಿದ್ದನ್ನು ಹೇಳುವುದು ಕಷ್ಟ। ಯಾವುದೋ ಒಂದು ಮಾತನ್ನು ಹೇಳುವುದಕ್ಕೆ ಕೆಲವೊಮ್ಮೆ ಮುಜುಗರವಾಗುತ್ತದೆ। ಕೆಲವೊಮ್ಮೆ ಭಯವಾಗುತ್ತದೆ। ಇನ್ನು ಕೆಲವು ಸಂದರ್ಭಗಳಲ್ಲಿ ನಾವು ಹೇಳಲು ಹೊರಟಿರುವ ವಿಚಾರದ ಪರಿಣಾಮ ಎದೆಗುಂದಿಸಿಬಿಡುತ್ತದೆ। ಹೀಗೆ ಹೇಳಬೇಕು ಎಂಬುದನ್ನು ಹೇಳಲಾಗದೇ ಪರಿತಪಿಸುವವರು ಒಂದು ರೀತಿಯವರಾದರೆ, ಎಲ್ಲವನ್ನು ಹೇಳಿ ಸಮಸ್ಯೆಯನ್ನು ತಂದುಕೊಳ್ಳುವವರು ಇನ್ನೊಂದು ರೀತಿಯ ಜನ। ಎರಡನೆಯ ರೀತಿಯ ಜನರಿಗೆ ಮಾತಿನ ಮಹತ್ವವೇ ಗೊತ್ತಿರುವುದಿಲ್ಲ। ಇವರು ಮಾತನ್ನು ಕಳ್ಳೆಕಾಯಿ ಹಂಚಿದಂತೆ ಹಂಚಿಬಿಡುತ್ತಾರೆ। ಇದನ್ನು ಇನ್ನೊಂದು ರೀತಿಯಲ್ಲೂ ಹೇಳಬಹುದು। ಅತಿಯಾಗಿ ಮಾತಿನ ಬಗ್ಗೆ ಯೋಚಿಸಿ ಮಾತನಾಡದೇ ಉಳಿದುಬಿಡುವವರು ಹಾಗೂ ಮನಸ್ಸಿಗೆ ಬಂದಿದ್ದನ್ನೆಲ್ಲ ಹೇಳಿ ಹೋಗಿಬಿಡುವವರು। ಈ ಎರಡೂ ರೀತಿಯವರಿಂದ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ। ಒಬ್ಬರು ಮಾತನಾಡದೇ ಕೆಟ್ಟರೆ ಇನ್ನೊಂದು ಗುಂಪಿನ ಜನ ಮಾತನಾಡದೇ ಕೆಡುತ್ತಾರೆ।

ಮಾತು ಎನ್ನುವುದಿದೆಯಲ್ಲ,, ಅದು ನಮ್ಮ ಸಂವಹನದ ಪ್ರಮುಖ ಅಂಗ। ಇದಕ್ಕಾಗಿ ನಾವು ಬಳಸಿಕೊಳ್ಳುವುದು ಭಾಷೆ, ಆದರೆ ಯಾವುದೇ ಭಾಷೆ ಇರಲಿ, ಅದರ ಅರ್ಥ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಬದಲಾಗಿರುತ್ತದೆ। ಒಂದು ಮೂಲ ಶಬ್ದ ಒಂದು ಅರ್ಥವನ್ನು ನೀಡುತ್ತಿದ್ದರೆ, ಅದನ್ನು ಬಳಸುವ ವ್ಯಕ್ತಿ ತನ್ನ ಅನುಭವ ಮತ್ತು ಗ್ರಹಿಕೆಯ ಹಿನ್ನೆಲ್ಲೆಯಲ್ಲಿ ಬೇರೊಂದು ಅರ್ಥದಲ್ಲಿ ಆ ಶಬ್ದವನ್ನು ಬಳಸುತ್ತಾನೆ। ಹಾಗೆ ಅದನ್ನು ಕೇಳುವವ ತನ್ನ ಅನುಭವ ಮತ್ತು ಗ್ರಹಿಕೆಯ ಹಿನ್ನೆಲೆಯಲ್ಲಿ ಬೇರೊಂದು ಅರ್ಥದಲ್ಲಿ ಅದನ್ನು ಸ್ವೀಕರಿಸುತ್ತಾನೆ। ಹೀಗಾಗಿ ಒಂದು ಶಬ್ದ ಮೂರು ಸ್ಥರಗಳಲ್ಲಿ ಮೂರು ವಿಭಿನ್ನ ಅರ್ಥವನ್ನು ಪಡೆದುಕೊಂಡು ಬಿಡುತ್ತದೆ। ಹೀಗೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಬದಲಾಗುವ ಬೇರೆ ಬೇರೆ ಅರ್ಥಗಳನ್ನು ನೀಡುವ ಶಬ್ದಗಳನ್ನು ಒಳಗೊಂಡ ಒಂದು ವಾಕ್ಯ ಯಾವ ರೀತಿಯ ಸಂವಹನ ಮಾಡಬಹುದು ? ಅದು ಒಟ್ಟಾರೆಯಾಗಿ ಯಾವ ಪರಿಣಾಮ ನೀಡಬಹುದು ? ಸ್ವಲ್ಪ ಯೋಚಿಸಿ। ನಾನು ಹೇಳಬೇಕು ಎಂದುಕೊಂಡಿದ್ದು ಹೀಗೆ ರೂಪಾಂತರಗೊಂಡು ಬೇರೆಯದಾದ ಅರ್ಥವನ್ನೇ ನೀಡಿದರೆ ಅದರ ಪರಿಣಾಮ ಏನಿರಬಹುದು ?

ಸಾಧಾರಣವಾಗಿ ನಾವು ಭಾಷೆಯನ್ನು ಕಲಿಯುವಾಗ ಒಂದು ಶಬ್ದದ ಅರ್ಥ ಹೀಗೆ ಎಂದು ಡಿಕ್ಷನರಿಯ ಮೂಲಕ ತಿಳಿದುಕೊಳ್ಳಬಹುದು। ಆದರೆ ಅದೇ ಅಂತಿಮ ಅರ್ಥ ಎಂದು ನಾನು ಅಂದುಕೊಂಡಿಲ್ಲ। ಯಾಕೆಂದರೆ ಕಾಲಕ್ರಮದಲ್ಲಿ ಬಳಕೆಯಿಂದಾಗಿ ಈ ಶಬ್ದ ಬೇರೆ ಅರ್ಥ ಸ್ವರೂಪವನ್ನು ಪಡೆದುಕೊಂಡಿರಬಹುದು। ಅಂದರೆ ಶಬ್ದ, ಬಳಕೆ ಮತ್ತು ಆ ಕಾಲ ಘಟ್ಟದ ಜೊತೆ ನಿಕಟ ಸಂಬಂಧವನ್ನು ಹೊಂದಿದೆ ಎಂಬುದು ಸ್ಪಷ್ಟ। ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ, ಈಗ ಹತ್ತು ಇಪ್ಪತ್ತು ವರ್ಷಗಳ ಹಿಂದೆ ಒಂದು ಶಬ್ದ ನೀಡುತ್ತಿದ್ದ ಅರ್ಥಕ್ಕೂ ಇಂದು ನೀಡುತ್ತಿರುವ ಅರ್ಥಕ್ಕೂ ವ್ಯತ್ಯಾಸವಿದೆ। ಕಾಲದ ಜೊತೆ ನಂಟನ್ನು ಹೊಂದಿರುವ ಶಬ್ದ, ಆ ಕಾಲ ಘಟ್ಟದ ವ್ಯಕ್ತಿಯ ಜೊತೆಗೂ ಸಂಬಂಧವನ್ನು ಹೊಂದಿರುತ್ತದೆ।ಶಬ್ದವನ್ನು ಬಳಸುವ ವ್ಯಕ್ತಿ, ಆತನ ಕಾಲ ಸೇರಿಯೇ ಒಂದು ಶಬ್ದದ ಅರ್ಥ ನಿರ್ಧಾರವಾಗುತ್ತದೆ। ಈಗ ಒಬ್ಬ ಮಾತನಾಡುವವ ಮತ್ತು ಇನ್ನೊಬ್ಬ ಕೇಳಿಸಿಕೊಳ್ಳುವವರ ನಡುವೆ ಮಾತುಕತೆ ನಡೆಯುವ ಸಂದರ್ಭವನ್ನು ನೋಡಿ। ಇವರಿಬ್ಬರು ಬೇರೆ ಬೇರೆ, ಕಾಲಘಟ್ಟಕ್ಕೆ ಸೇರಿದವರು, ಬೇರೆ ಬೇರೆ ಅನುಭವಗಳನ್ನು ಪಡೆದವರು। ಹಾಗಿದ್ದರೆ ಇವರಿಬ್ಬರ ನಡುವಿನ ಸಂವಹನಕ್ಕೆ ಕಾರಣವಾಗುವ ಶಬ್ದದ ಅರ್ಥ ಬೇರೆ ಬೇರೆಯಾಗಿರುತ್ತದೆಯೆ ? ಹಾಗೆ ಒಂದು ಶಬ್ದಕ್ಕೆ ನಿಖರವಾದ ಅರ್ಥ ಎಂಬುದು ಇಲ್ಲವೆ ?

ಮನುಷ್ಯನ ನಾಗರೀಕತೆಯ ಭಾಗವಾಗಿ ಬೆಳೆದ ಭಾಷೆ, ಮನುಷ್ಯನ ಸಂವಹನ ಕ್ರಿಯೆಯನ್ನು ಸುಲಭಗೊಳಿಸುವ ಕೆಲಸ ಮಾಡಬೇಕಿತ್ತು। ಆದರೆ ಇಂದು ಶಬ್ದ ಮತ್ತು ಭಾಷೆಯೇ ಸಂವಹನ ಕ್ರಿಯೆಯನ್ನು ಇನ್ನಷ್ಟು ಕ್ಲಿಷ್ಟವನ್ನಾಗಿ ಮಾಡುತ್ತದೆ। ನಾವು ಹೇಳಬೇಕು ಎಂದುಕೊಂಡಿದ್ದು, ನಾವು ಹೇಳಿದ್ದು, ಮತ್ತು ಹೇಳಿದ್ದನ್ನು ಕೇಳಿ ಅರ್ಥಮಾಡಿಕೊಂಡಿದ್ದು, ಇವುಗಳ ನಡುವೆ ಇರುವ ಅಗಾಧ ವ್ಯತ್ಯಾಸ, ಸಂವಹನವನ್ನು ದುರ್ಬಲಗೊಳಿಸುತ್ತದೆ। ಇದೇ ಕಾರಣದಿಂದಾಗಿ ರಾಜಕಾರಣಿಗಳಿಂದ ಸಾಮಾನ್ಯರವರೆಗೆ ಎಲ್ಲರೂ ನಾನು ಹಾಗೆ ಹೇಳಿಲ್ಲ, ಮಾರಾಯ ಅಂತಲೋ, ನಾನು ಹೇಳಿದ್ದರ ಅರ್ಥ ಅದಲ್ಲ ಅಂತಲೋ ಸಮಜಾಯಿಷಿ ನಿಡುವ ಪ್ರಸಂಗ ಹಲವು ಬಾರಿ ಬರುತ್ತದೆ।ಆದರೆ, ಬಹುತೇಕ ಸಂದರ್ಭಗಳಲ್ಲಿ ನಂತರ ನೀಡುವ ಸಮಜಾಯಿಷಿ ಯಾವುದೇ ಪರಿಣಾಮವನ್ನು ಬೀರುವುದಿಲ್ಲ। ಮೊದಲು ಹೇಳಿದ ಅಥವಾ ಹೇಳಿದರೆಂದು ಭಾವಿಸಲಾದ ಮಾತುಗಳೇ ಕೊನೆಯವರೆಗೂ ಉಳಿದು ಬಿಡುತ್ತದೆ।
ನಾನು ಹಲವು ಬಾರಿ ಇಂತಹ ಸಂವಹನ ಸಮಸ್ಯೆಯನ್ನು ಎದುರಿಸಿದ್ದೇನೆ। ನಾನು ಹೇಳಬೇಕೆಂದುಕೊಂಡಿದ್ದು, ಹೇಳಿದರೂ ಅದು ಬೇರೆ ಅರ್ಥವನ್ನು ನೀಡಿ ಪೇಚಾಡಿಕೊಂಡಿದ್ದೇನೆ। ನಾನು ಮಾತನಾಡಿದ ಉದ್ದೇಶ ಇದು ಎಂದು ಸ್ಪಷ್ಟಪಡಿಸಲು ಯತ್ನಿಸಿದ್ದೇನೆ। ಆದರೆ ಹೀಗೆ ಸಮಜಾಯಿಷಿ ನೀಡಿದಾಗಲೆಲ್ಲ, ಈ ನನ್ನ ಮಗ ಹೇಗೆ ಪ್ಲೇಟು ಬದಲಿಸುತ್ತಿದ್ದಾನೆ ನೋಡು ಎಂದು ಮನಸ್ಸಿನಲ್ಲೇ ಬೈದುಕೊಂಡಿದ್ದನ್ನು ನೋಡಿದ್ದೇನೆ। ಆಗೆಲ್ಲ ನನಗೆ ಮೊದಲು ಸಿಟ್ಟು ಬರುವುದು ಭಾಷೆಯ ಮೇಲೆ। ನಂತರ ನಾನು ಸಿಟ್ಟು ಮಾಡಿಕೊಳ್ಳುವುದು ನನ್ನ ಮೇಲೆ। ನಾನು ಭಾಷೆ ಬಳಸುವುದರಲ್ಲಿ ಇನ್ನಷ್ಟು ನಿಸ್ಸೀಮನಾಗಬೇಕಿತ್ತು ಎಂದು ಅಂದುಕೊಂಡು ಸುಮ್ಮನಾಗುವುದು ಸಾಮಾನ್ಯ।
ಆದರೂ ನನಗೆ ಭಾಷೆ ಒಂದು ಸಮಸ್ಯೆ। ಸಂವಹನ ಸಮಸ್ಯೆ। ನಾನು ಹೇಳಿದ್ದನ್ನು ಬೇರೆ ರೀತಿ ಅರ್ಥ ಮಾಡಿಕೊಂಡರಲ್ಲ ಎಂದು ನೋವನ್ನು ಅನುಭವಿಸುವುದು ಇನ್ನೊಂದು ಸಮಸ್ಯೆ। ಒಟ್ಟಿನಲ್ಲಿ, ನಾನು ನೀವು ಮತ್ತು ಸಂವಹನ ಎಲ್ಲವೂ ಸಮಸ್ಯೆಯೇ.

Monday, February 25, 2008

ಬಾಗಿಲು ಮತ್ತು ಕಿಡಕಿ

ನನಗೆ ಮೊದಲಿನಿಂದಲೂ ಬಾಗಿಲು ಮತ್ತು ಕಿಡಕಿ ಎಂದರೆ ತುಂಬಾ ಇಷ್ಟ। ನನ್ನೂರಿನ ಮನೆಯಲ್ಲಿ ಇದ್ದ ಪ್ರಧಾನ ಬಾಗಿಲು ನನಗಿನ್ನೂ ನೆನಪಿದೆ। ಅದು ಯಾವ ಕಾಲದ್ದು ಎಂಬುದು, ನನ್ನ ಅಪ್ಪ ಅಜ್ಜ ಯಾರಿಗೂ ನೆನಪಿರಲಿಲ್ಲ। ಯಾವಾಗಲೂ ತೆರೆದುಕೊಂದು ಇರುತ್ತಿದ್ದ ಈ ಪ್ರಧಾನ ಬಾಗಿಲನ್ನು ಹಾಕುತ್ತಿದ್ದುದು ರಾತ್ರಿ ಎಲ್ಲರೂ ಮಲಗಿದ ಮೇಲೆ। ಈ ಬಾಗಿಲು ಯಾವುದೋ ಪುರಾತನ ಕೋಟೆಯ ಬಾಗಿಲನನ್ನು ನೆನಪಿಸಿವಂತೆ ಇತ್ತು। ಅದನ್ನು ತೆಗೆದಾಗ ಅದು ಕಿರ್ ಎಂದು ಶಬ್ದ ಮಾಡುತ್ತಿತ್ತು। ಹಾಗೆ ಹಾಕುವಾಗಲೂ ಅದೇ ಶಬ್ದ। ಈ ಬಾಗಿಲಿನ ತಿರುಗುಣಿಗೆ ಎಣ್ಣೆ ಹಾಕಬೇಕು ಎಂದು ನನ್ನ ಅಮ್ಮ ಆವಾಗಾವಾಗ ಹೇಳ್ತಾ ಇದ್ದಳು। ಆದರೆ ಅಮ್ಮ ಎಣ್ಣೆ ಹಚ್ಚಿದಳೋ ಬಿಟ್ಟಳೋ ಆ ಬಾಗಿಲು ಮಾತ್ರ ಶಬ್ದ ಮಾಡುವುದನ್ನು ನಿಲ್ಲಿಸಲಿಲ್ಲ। ರಾತ್ರಿ ೧೦ ಗಂಟೆ ಆಯಿತು ಎಂಬುದನ್ನು ನಾವು ತಿಳಿಯುತ್ತಿದ್ದುದು, ಭಾಗಿಲು ಕಿರಕ್ ಎಂದಾಗ। ಹಾಗೆ ಬೆಳಿಗ್ಗೆ ಐದು ಗಂಟೆ ಆಯಿತು ಎಂಬುದು ಕೂಡ ಬಾಗಿಲ ಕಿರಕ್ ಶಬ್ದದಿಂದಲೇ ನಾವು ತಿಳಿದುಕೊಳ್ಳುತ್ತಿದ್ದೆವು।

ಈ ಬಾಗಿಲ ಪಕ್ಕದಲ್ಲಿ ಸಣ್ಣ ಕಿಡಕಿಯೊಂದಿತ್ತು। ಆ ಕಿಡಕಿಯ ಮೂಲಕ ನೋಡಿದರೆ, ಮನೆಯ ಎದುರಿನ ಅಂಗಳ, ಅಡಿಕೆತೋಟ ಕಾಣುತ್ತಿತ್ತು ಈ ಕಿಡಕಿಯ ಪಕ್ಕದಲ್ಲಿ ಮೆತ್ತಿನ ಮೇಲೆ ಹೋಗಲು ಮರದ ಮೆಟ್ಟಿಲುಗಳಿದ್ದವು। ಒಮ್ಮೆ ನಾನು ಮಹಡಿಯಿಂದ ಕೆಳಕ್ಕೆ ಇಳಿಯುವಾಗ ಬಿದ್ದು ಬಿಟ್ಟೆ। ಕಿಡಕಿಯು ಹಣೆಗೆ ಬಡಿದು ಗಾಯವಾಗಿ ರಕ್ತ ಸುರಿಯಿತು। ಆದರೆ, ಕಿಡಕಿಯ ಮೇಲೆ ನನಗೆ ಸಿಟ್ಟು ಬರಲಿಲ್ಲ। ಹೊರಗಿನ ಬೆಳಕನ್ನು ನೋಡುವ ಕಿಡಕಿಯ ಮೇಲಿನ ಮೋಹ ಮರೆಯಾಗಲಿಲ್ಲ। ಅಪ್ಪ ಹೊಡೆದಾಗ, ಅಜ್ಜ ಬೈದಾಗ ನಾನು ಬಂದು ನಿಲ್ತಾ ಇದ್ದುದು ಇದೇ ಕಿಡಕಿಯ ಪಕ್ಕ। ಹಾಗೆ ಈ ಪ್ರಧಾನ ಬಾಗಿಲ ಕಥೆ। ನಮ್ಮ ಮನೆಯ ಈ ಪ್ರಧಾನ ಬಾಗಿಲಿನ ಬಗ್ಗೆ ನನಗೆ ಎಂತಹ ಮೋಹ ಬೆಳೆದಿತ್ತೆಂದರೆ, ಇಂಥಹ ಪ್ರಧಾನ ಬಾಗಿಲು ಬೇರೆ ಯಾರ ಮನೆಯಲ್ಲೂ ಇಲ್ಲ ಎಂದು ನಾನು ಬಹಳ ಕಾಲ ನಂಬಿದ್ದೆ। ಹಾಗೆ ಬೇರೆಯವರ ಮನೆಗಳಿಗೆ ಹೋದಾಗಲೆಲ್ಲ, ಅವರ ಮನೆಯ ಪ್ರಧಾನ ಬಾಗಿಲನ್ನು ನಮ್ಮ ಮನೆಯ ಪ್ರಧಾನ ಬಾಗಿಲ ಜೊತೆ ಹೋಲಿಸಿ ನಮ್ಮ ಮನೆಯ ಪ್ರಧಾನ ಬಾಗಿಲೇ ಅತ್ಯುತ್ತಮ ಎಂದು ಸಂತೋಷ ಪಡುತ್ತಿದ್ದೆ।

ನಮ್ಮ ಮನೆಯ ಪ್ರಧಾನ ಬಾಗಿಲನ್ನು ತೆರೆದಿಟ್ಟರೆ, ಅದು ಮನೆಯ ಹೊರಗಿನ ಜಗತ್ತನ್ನು ತೆರೆದಿಡುತ್ತಿದ್ದುದು ಮಾತ್ರವಲ್ಲ, ಮನೆಯ ಒಳಗಿನ ಗುಟ್ಟುಗಳನ್ನು ಬಟ್ಟಾ ಬಯಲು ಮಾಡುತ್ತಿತ್ತು. ಪ್ರಧಾನ ಬಾಗಿಲ ಪಕ್ಕದಲ್ಲಿ ನಿಂತರೆ, ಹೊರಗಿನ ಅಂಗಳ, ಅಡಿಕೆ ತೋಟ, ರಸ್ತೆ ಕಾಣುತ್ತಿದ್ದಂತೆ, ತಿರುಗಿದರೆ, ಮನೆಯ ಒಳಗೆ ಅಡಿಗೆ ಮನೆಯ ವರೆಗೆ ನೋಡಬಹುದಾಗಿತ್ತು. ಪ್ರಧಾನ ಬಾಗಿಲ ಹತ್ತಿರ ನಿಂತು ಮನೆಯ ಒಳಗೆ ಹೊರಗೆ ನೋಡುವುದೆಂದರೆ ನನಗೆ ಎಲ್ಲಿಲ್ಲದ ಸಂತೋಷ।

ಊರು ಬಿಟ್ಟು ಬೆಂಗಳೂರಿಗೆ ಬಂದ ಮೇಲೆ ನನಗೆ ಕಾಣತೊಡಗಿದ್ದು ಮುಚ್ಚಿದ ಕಿಡಕಿ, ಬಾಗಿಲುಗಳು। ಯಾರ ಮನೆಗೆ ಹೋದರು ಮೊದಲು ಸ್ವಾಗತಿಸುವುದು ಮುಚ್ಚಿದ ಬಾಗಿಲುಗಳೇ। ಕಾಲಿಂಗ್ ಬೆಲ್ ಒತ್ತಿದರೆ ಹಾಗೆ ತೆರೆದುಕೊಂಡು। ಬಂದವರು ಯೋಗ್ಯರು ಅನ್ನಿಸಿದರೆ, ಅವರನ್ನು ಮತ್ತೆ ಒಳಗೆ ಎಳೆದುಕೊಂಡು ಮತ್ತೆ ಹಾಗೆ ಮುಚ್ಚಿಕೊಳ್ಳುವ ಬಾಗಿಲುಗಳು। ಹೀಗೆ ಮುಚ್ಚಿಕೊಂಡ ಬಾಗಿಲುಗಳನ್ನು ನೋಡಿದ ತಕ್ಷಣ ನನಗೆ ಅಸಹನೆ। ಅದು ಇವತ್ತು ಕೂಡ ಹಾಗೆ ಮುಂದಿವರಿದಿದೆ।

ಬಾಗಿಲು ಮತ್ತು ಕಿಡಕಿಗಳೆಂದರೆ ಅವು ಕೇವಲ ಮರದ ವಸ್ತುಗಳಲ್ಲ। ಅವು ನಮ್ಮ ಹೊರ ಮನಸ್ಸು ಮತ್ತು ಒಳ ಮನಸ್ಸನ್ನು ಪ್ರತಿನಿಧಿಸುತ್ತವೆ। ನಮ್ಮ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುತ್ತವೆ। ತೆರೆದ ಬಾಗಿಲು ನಮಗೆ ಹೊರ ಜಗತ್ತು ಕಾಣುವಂತೆ ಮಾಡುತ್ತದೆ। ಹಾಗೆ ನಮ್ಮ ಒಳ ಜಗತ್ತನ್ನು ತೆರೆದಿಡುತ್ತದೆ। ಹೊರಗಿನ ಗಾಳಿ ಮತ್ತು ಬಿಸಿಲು ಒಳಗೆ ಬರುವುದು ಇದೇ ಕಿಡಕಿ ಮತ್ತು ಬಾಗಿಲುಗಳ ಮೂಲಕ। ನಾವು ಮನೆಯ ಒಳಗೆ ನಾಲ್ಕುಗೋಡೆಗಳ ನಡುವೆ ಕಟ್ಟಿಕೊಂಡ ನಮ್ಮ ಪ್ರಪಂಚವನ್ನು ಹೊರಜಗತ್ತಿಗೆ ಪರಿಚಯ ಮಾಡಿಕೊಡುತ್ತವೆ।

ಆದರೆ ಆಧುನಿಕ ಬದುಕು ನಮಗೆ ಕಿಡಕಿ ಮತ್ತು ಬಾಗಿಲುಗಳನ್ನು ಮುಚ್ಚಿಕೊಳ್ಳುವುದನ್ನು ಕಲಿಸಿದೆ। ನಾವು ಬೆಳಗಿನ ಎಳೆ ಬಿಸಲನ್ನು ನೋಡಲಾರೆವು। ನಮ್ಮೊಳಗಿನದನ್ನು ತೆರೆದಿಡಲಾರೆವು। ನಮಗೆ ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದು ಹೆಚ್ಚು ಮುಖ್ಯ। ಯಾಕೆಂದರೆ ನಮಗೆ ನಮ್ಮೊಳಗಿನದನ್ನು ಬಿಚ್ಚಿಡಲು ಭಯ। ಹೊರಗಿನದನ್ನು ನೋಡುವ ಕನಿಷ್ಠ ಆಸಕ್ತಿಯೂ ನಮಗಿಲ್ಲ। ನಾವು ನಮ್ಮ ನಡುವೆ ಗೋಡೆಯನ್ನು ಕಟ್ಟಿಕೊಳ್ಳಲು ಬಯಸುತ್ತೇವೆ। ಹಾಗೆ ಕಿಡಕಿ ಮತ್ತು ಬಾಗಿಲುಗಳನ್ನು ಮುಚ್ಚಿಕೊಳ್ಳುತ್ತೇವೆ। ಈಗಲೂ ನನ್ನ ಬೆಂಗಳೂರಿನ ನನ್ನ ಮನೆಯಲ್ಲಿ ಕಿಡಕಿ ಬಾಗಿಲು ಮುಚ್ಚಿದ್ದನ್ನು ನೋಡಿದ ತಕ್ಷಣ ನನಗೆ ಅಸಹನೆ ಪ್ರಾರಂಭವಾಗುತ್ತದೆ। ಅದರೆ ಬೆಂಗಳೂರಿನಂತ ನಗರದಲ್ಲಿ ಮನೆಯ ಬಾಗಿಲನ್ನು ತೆರೆದಿಡುವುದು ಕಷ್ಟ। ಜೊತೆಗೆ ಭಯ। ಇದೇ ನಮ್ಮ ಅಧುನಿಕ ಬದುಕು ಎಂದು ನನಗೆ ಅನ್ನಿಸುತ್ತದೆ। ಇಲ್ಲಿ ನಾವು ಕಿಡಕಿ ಬಾಗಿಲನ್ನು ತೆರೆಯಲಾರೆವು। ಬೆಳಕನ್ನು ನೋಡಲಾರೆವು। ನಾಲ್ಕು ಗೋಡೆಗಳ ನಡುವೆ, ಕುಳಿತುಕೊಳ್ಳುವ ಕರ್ಮ ನಮ್ಮದು.

Friday, February 22, 2008

ಮುಖ, ಕಣ್ಣು ಮತ್ತು ಬುರ್ಖಾ

ನಾನು ಮೂಲಭೂತವಾಗಿ ಮುಜುಗರದ ಮನುಷ್ಯ। ಜನರ ನಡುವೆ ಇರುವುದೆಂದರೆ ನನಗೆ ಸಮಸ್ಯೆಯೇ। ಆದರೆ ಕೆಲವೊಮ್ಮೆ ಅನಿವಾರ್ಯವಾಗಿ ಜನರ ನಡುವೆ ಇರಬೇಕಾಗುತ್ತದೆ। ಮೊನ್ನೆ ಆಗಿದ್ದು ಹಾಗೆ। ಮಂಗಳೂರಿನ ಮುಸ್ಲಿಮ್ ಲೇಖಕರು ಮತ್ತು ಪತ್ರಕರ್ತರ ಸಂಘ ನನ್ನನ್ನು ಅವರ ರಾಜ್ಯ ಮಟ್ಟದ ವಿಚಾರಗೋಷ್ಟಿಗೆ ಅಹ್ವಾನಿಸಿದಾಗ ನಾನು ಮಂಗಳೂರಿಗೆ ಹೊರಟು ನಿಂತೆ। ಈ ತೀರ್ಮಾನಕ್ಕೆ ಬಹುಮುಖ್ಯ ಕಾರಣ ಮುಸ್ಲಿಮ್ ಒಳ ಜಗತ್ತನ್ನು ತಿಳಿದುಕೊಳ್ಳಬೇಕು ಎಂಬ ನನ್ನ ಹಂಬಲ। ಮುಸ್ಲಿಮ್ ಜಗತ್ತನ್ನು ಸಾಹಿತ್ಯದ ಮೂಲಕ ತಿಳಿದುಕೊಂಡಿದ್ದರು ಅದರ ನೇರ ಸಂಪರ್ಕ ಇಲ್ಲದ ನನಗೆ ಅವರನ್ನು ನಾವು ನೆನಪು ಮಾಡಿಕೊಳ್ಳುವುದು ಬುರ್ಖಾದ ಮೂಲಕ। ಬುರ್ಖಾದ ಒಳಗಿನ ಮುಖಗಳು ನಮಗೆ ಕಾಣುವುದಿಲ್ಲ। ನಾವು ಒಳಗಿರುವ ಮುಖ, ಆ ಮುಖದಲ್ಲಿ ಇರುವ ಭಾವ ಎಂತಹದಿರಬಹುದು ? ಅಲ್ಲಿ ದುಃಖ ಇರಬಹುದೆ ? ನೋವು ಇರಬಹುದೆ ? ಅಸಹಾಯಕತೆ ಇರಬಹುದೆ ? ಅಥವಾ ನಮ್ಮಲ್ಲ ಕಲ್ಪನೆಗಳು ಅಲ್ಲಿ ಹುಸಿಯಾಗಿರಬಹುದೆ ? ಈ ಪ್ರಶ್ನೆಗಳು ನನ್ನನ್ನು ಕಾಡಿದರೂ ಇದ್ಯಾವವೂ ನನ್ನ ಕುತೂಹಲವನ್ನು ತಣಿಸುವದಾಗಿರಲಿಲ್ಲ॥

ಈ ಕಾರ್ಯಕ್ರಮದ ಅಹ್ವಾನ ಪತ್ರಿಕೆ ಬಂದಾಗ ನನಗೆ ಎಲ್ಲಿಲ್ಲದ ಮುಜುಗರದ ಭಾವ। ಯಾಕೆಂದರೆ ಅಲ್ಲಿ ಅಹ್ವಾನಿತರಾದ ಇಬ್ಬರು ಮುಸ್ಲೀಮೇತರರು ಎಂದರೆ, ನಾನು ಮತ್ತು ಪತ್ರಕರ್ತ ರವೀಂದ್ರ ರೇಷ್ಮೆ ಮಾತ್ರ। ಮುಸ್ಲಿಮ್ ಜನಾಂಗದ ಸಮಸ್ಯೆ, ಅವರು ಎದುರಿಸುತ್ತಿರುವ ದ್ವಂದ್ವಗಳು, ಮುಸ್ಲಿಮ್ ಪತ್ರಕರ್ತರ ಸವಾಲುಗಳ ಬಗ್ಗೆ ಚರ್ಚೆ ನಡೆಯುವ ಸಮಾವೇಶದಲ್ಲಿ ಹೊರಗಿನವರಾದ ನಮಗೇನು ಕೆಲಸ ? ಸಂಘಟಕರು ನಮಗೆ ಮಾತನಾಡಲು ವಿಷಯವೊಂದನ್ನು ನೀಡಿದ್ದರು। ಅದೆಂದರೆ, ಪ್ರಸಕ್ತ ರಾಜಕೀಯ ಪರಿಸ್ಥಿತಿ ಮತ್ತು ಸಾರ್ವಜನಿಕರ ಜವಾಬ್ದಾರಿ।

ಕಾರ್ಯಕ್ರಮ ನಡೆಯುತ್ತಿದ್ದ ಮಂಗಳೂರಿನ ಪುರಭವನಕ್ಕೆ ಹೋದಾಗ ನನಗೆ ಅಲ್ಲಿ ಕಂಡಿದ್ದು ಕನ್ನಡ ವಾತಾವರಣ। ಆ ಕಾರ್ಯಕ್ರಮ ನಡೆದಿದ್ದು, ಸಂಪೂರ್ಣವಾಗಿ ಕನ್ನಡಲ್ಲಿ। ಭಾಷೆ ಎನ್ನುವುದರ ಬಗ್ಗೆ ಉಗ್ರ ಹೋರಾಟಗಾರರಂತೆ ಅತಿ ಭಾವುಕತೆಯಿಂದ ನೋಡುವ ಅಗತ್ಯ ನನಗಿಲ್ಲ। ಆದರೆ ಭಾಷೆ, ನಮ್ಮನ್ನು ಒಂದುಗೂಡಿಸುವ ಕೆಲಸವನ್ನು ಮಾಡುತ್ತದೆ, ಅದೇ ಸಮಯದಲ್ಲಿ ಬೇರ್ಪಡಿಸುವ ಕೆಲಸವನ್ನೂ ಮಾಡುತ್ತದೆ। ಉರ್ದುವಿನಂತಹ ಒಂದು ಶ್ರೀಮಂತ ಭಾಷೆ ಮುಸ್ಲಿಮ್ ರ ಭಾಷೆ ಎಂಬಂತಾಗಿದೆ। ಇದರಿಂದಾಗಿ ಉರ್ದು ಕೂಡ ಧಾರ್ಮಿಕ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ। ಜೊತೆಗೆ ಕನ್ನಡ ನಾಡಿನಲ್ಲಿ ಇರುವ ಮುಸ್ಲಿಮ್ ರು ಇಲ್ಲಿನ ಭಾಷೆಯನ್ನು ಮಾತನಾಡದೇ ಬೇರೆ ಭಾಷೆ ಮಾತನಾಡುವುದೂ ಕೂಡ ಅವರನ್ನು ಪ್ರತ್ಯೇಕವಾಗಿ ನೋಡುವುದಕ್ಕೆ ಒಂದು ಕಾರಣ। ಅದೇ ಮುಸ್ಲಿಮರು ಕನ್ನಡ ಮಾತನಾಡಿದರೆ ಪ್ರತ್ಯೇಕತೆಯ ಒಂದು ಕಂದಕ ಮುಚ್ಚಿದಂತೆಯೇ।

ಭಾಷೆ ಮತ್ತು ಧರ್ಮ ಒಂದೇ ನೆಲೆಯಲ್ಲಿ ಕೆಲಸ ಮಾಡುತ್ತವೆ। ಭಾಷೆ ಇವ ನಮ್ಮವ ಇವ ನಮ್ಮವ ಎಂಬ ಭಾವವನ್ನು ಮೂಡಿಸಿದಂತೆಯೇ ಧರ್ಮ ಕೂಡ ಇದೆ ಕೆಲಸ ಮಾಡುತ್ತದೆ। ಆದರೆ ಭಾಷೆ ಸಮುದಾಯದ ಜೊತೆಗಿನ ಸಂವಹನ ಕ್ರಿಯೆಯಾಗಿರುವುದರಿಂದ ಅದಕ್ಕೆ ಸಾಮುದಾಯಿಕವಾದ ಆಯಾಮ ಇದೆ। ಧರ್ಮ ಎನ್ನುವುದು ಹಾಗಲ್ಲ। ಅದು ವೈಯಕ್ತಿಕ ನೆಲೆಗಟ್ಟಿನಲ್ಲಿಯೇ ನಡೆಯಬೇಕಾದದ್ದು। ಧರ್ಮ ಎನ್ನುವುದು ಸಾಮುದಾಯಿಕ ಮತ್ತು ಬಹಿರಂಗ ರೂಪ ಪಡೆದಾಗ ಅದು ಇನ್ನೊಂದು ರೀತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ। ಅಲ್ಲಿ ನಂಬಿಕೆ ಮತ್ತು ಶ್ರೇಷ್ಠತೆಯ ಪ್ರಶ್ನೆ ಉದ್ಭವವಾಗುತ್ತದೆ। ಹಾಗೆ ಭಿನ್ನಾಭಿಪ್ರಾಯ ಮತ್ತು ಹಿಂಸೆ ಕೂಡ ತಲೆ ಎತ್ತಬಹುದು।

ಮಂಗಳೂರಿನ ಮುಸ್ಲಿಂರು ಕನ್ನಡವನ್ನು ತಮ್ಮ ಮಾತೃ ಭಾಷೆಯಂದೇ ಒಪ್ಪಿಕೊಂಡಿರುವುದು, ತಮ್ಮ ಎಲ್ಲ ಕಾರ್ಯಕ್ರಮಗಳನ್ನು ಕನ್ನಡದಲ್ಲೇ ನಡೆಸಿದ್ದು, ನನಗೆ ಸಂತೋಷವನ್ನು ಉಂಟು ಮಾಡಿದ್ದಕ್ಕೆ ಕಾರಣವಿದೆ। ಕನ್ನಡ ಭಾಷೆಯೇ ಇಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ಕರೆತರುವ ಕೆಲಸ ಮಾಡುತ್ತಿದೆ ಎಂಬುದೇ ಈ ಕಾರಣ।

ಈ ಕಾರ್ಯಕ್ರಮದಲ್ಲಿ ಭಾರಿ ಸಂಖ್ಯಯಲ್ಲಿ ಮುಸ್ಲಿಮ್ ಹೆಂಗಸರು ಯುವತಿಯರು ಪಾಲ್ಗೊಂಡಿದ್ದರು। ಬುರ್ಖಾ ಧರಿಸಿದ್ದ ಅವರ ಮುಖಗಳು ಕಾಣುತ್ತಿರಲಿಲ್ಲ। ಮನುಷ್ಯನ ಮುಖ ನೋಡದೇ ಇರುವುದು ನನಗಂತೂ ಅಸಹನೀಯ। ನಾನು ಮುಖವನ್ನು ನೋಡಲು ಬಯಸುವುದು ಕಣ್ಣುಗಳನ್ನು ನೋಡುವುದಕ್ಕಾಗಿ। ಕಣ್ಣು, ಮನುಷ್ಯನ ಅಂಗಗಳಲ್ಲೇ ಹೆಚ್ಚು ಪ್ರಾಮಾಣಿಕವಾದ ಅಂಗ। ಅದು ಸುಳ್ಳು ಹೇಳುವುದಿಲ್ಲ। ಸುಳ್ಳನ್ನು ಬಚ್ಚಿಟ್ಟುಕೊಂಡು ನಾಟಕ ಮಾಡಲು ಕಣ್ನಿಗೆ ಬಾರದು। ಹೀಗಾಗಿ ಕಣ್ಣುಗಳನ್ನು ನೋಡುವುದು ನನಗೆ ಇಷ್ಠ। ಕಣ್ಣುಗಳ ಮೂಲಕ ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವ ಕುತೂಹಲವನ್ನು ಮುಚ್ಚಿಟ್ಟುಕೊಳ್ಳುವುದು ನನಗೆ ಸಾಧ್ಯವಾಗುವುದಿಲ್ಲ।

ಮಂಗಳೂರಿನ ಮುಸ್ಲಿಮ್ ಸಮಾವೇಶದಲ್ಲಿ ಸುಮಾರು ಅರ್ಧ ಗಂಟೆಯ ಕಾಲ ನಾನು ಮಾತನಾಡಿದೆ। ಭಾರತದ ರಾಜಕಾರಣದ ವೈರುಧ್ಯಗಳನ್ನು ತೆರೆದಿಡಲು ಯತ್ನಿಸಿದೆ। ಭಾರತದಲ್ಲಿ ನಿಜವಾದ ಅರ್ಥದಲ್ಲಿ ರಾಜಕೀಯ ಪಕ್ಷಗಳೇ ಇಲ್ಲ। ಕಾಂಗ್ರೆಸ್ ಪಕ್ಷ ಮೂಲಭೂತವಾಗಿ ಒಂದು ಸಂಘಟನೆ। ಅದಕ್ಕೆ ಪಕ್ಷದ ರೂಪ ಬಂದಿದ್ದು, ಸ್ವಾತಂತ್ರ್ಯ ಬಂದ ಮೇಲೆ। ಹೀಗೆ ಪಕ್ಷದ ರೂಪ ಬರುವ ಕಾಲಕ್ಕೆ, ಕಾಂಗ್ರೆಸ್ ಮಹಾತ್ಮಾ ಗಾಂಧಿಯನ್ನು ಹೊರಹಾಕಿ, ನೆಹರೂ ಅವರ ತೆಕ್ಕೆಗೆ ಬಿದ್ದಾಗಿತ್ತು। ನೆಹರೂ ಮತ್ತು ಅವರ ಸುತ್ತಮುತ್ತ ಇದ್ದ ನಾಯಕರು ಸ್ವಾತಂತ್ರ್ಯ ಹೋರಾಟದ ವಿಜಯದ ಗುಂಗಿನಲ್ಲಿ ಕಾಲ ಕಳೆದರು। ಅದರ ನಂತರ ಹಲವಾರು ಗಾಂಧಿಗಳು ಬಂದು ಹೋದರು। ಕಾಂಗ್ರೆಸ್ ಪಕ್ಷ ಆಂತರಿಕವಾಗಿ ಕುಸಿಯುತ್ತಲೇ ಹೋಯಿತು। ಸಮುದಾಯದ ಸಂಘಟನೆಯ ಮೂಲಕ ಒಂದು ಚಳವಳಿಯ ಮೂಲಕ ಹುಟ್ಟಿದ ಕಾಂಗ್ರೆಸ್ ಒಂದು ಕುಟುಂಬದ ಪದತಲದಲ್ಲಿ ಬಿದ್ದು ಒದ್ದಾಡತೊಡಗಿತು। ಅದಕ್ಕೆ ಸಂಘಟನೆಯ ಶಕ್ತಿಯೂ ಉಳಿಯಲಿಲ್ಲ, ಪಕ್ಷ ರಾಜಕಾರಣದ ಬದ್ಧತೆಯೂ ಬರಲಿಲ್ಲ॥ ಹಾಗೆ ಬಿಜೆಪಿ ಎಂಬ ಸಂಘ ಪರಿವಾರದ ಪಕ್ಷ ಮತ್ತು ದೇವೇಗೌಡರ ಕುಟುಂಬ ಪಕ್ಷದ ಬಗ್ಗೆಯೂ ನಾನು ಮಾತನಾಡಿದೆ।

ಜನಸಾಮಾನ್ಯರ ಹೊಣೆಗಾರಿಕೆಯ ಬಗ್ಗೆ ಮಾತನಾಡುವಕ್ಕಿಂತ ನಮ್ಮ ನಮ್ಮ ಹೊಣೆಗಾರಿಕೆಯ ಬಗ್ಗೆ ಮಾತನಾಡುವುದು ಸೂಕ್ತ ಎಂದು ನಂಬಿದವ ನಾನು। ಯಾವುದೇ ಬದಲಾವಣೆ, ಒಬ್ಬ ವ್ಯಕ್ತಿಯಿಂದ ಪ್ರಾರಂಭವಾಗಬೇಕು। ಹೀಗೆ ಒಬ್ಬೊಬ್ಬರಲ್ಲಿ ಆಗುವ ಬದಲಾವಣೆ ಒಟ್ಟಾರೆ ಬದಲಾವಣೆಗೆ ಕಾರಣವಾಗುತ್ತದೆ। ಇಂಥಹ ಸ್ಥಿತಿಯಲ್ಲಿ ನಾವು ಹತಾಶರಾಗಬೇಕಿಲ್ಲ ಎಂದೆ।

ನಾನು ಮಾತನಾಡುವಾಗ ಕೇಳುತ್ತಿದ್ದವರ ಮನಸ್ಸಿನಲ್ಲಿ ಏನಿತ್ತು ಎಂಬುದು ನನಗೆ ತಿಳಿಯಲಿಲ್ಲ। ಅವರ ಬುರ್ಖಾದ ಹಿಂದಿರುವ ಕಣ್ಣುಗಳಲ್ಲಿ ಯಾವ ಭಾವವಿರಬಹುದು ಎಂಬುದು ನನಗೆ ತಿಳಿಯಲಿಲ್ಲ। ಕಣ್ಣುಗಳು ಮತ್ತು ಮುಖಗಳೇ ಮರೆಯಾಗಿರುವುದು ನನ್ನನ್ನು ಕಾಡತೊಡಗಿತು। ಇವತ್ತು ನಾವು ಬುರ್ಖಾಗಳ ಅಡಿಯಲ್ಲಿ ಅಡಗಿಕೊಳ್ಳುತ್ತಿದ್ದೇವೆ ಎಂದು ಅನ್ನಿಸಿತು। ಮುಖ ಮತ್ತು ಕಣ್ಣುಗಳನ್ನು ಮುಚ್ಚಿಕೊಳ್ಳುವುದು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿರದೇ ಅದು ಸರ್ವವ್ಯಾಪಿ ಎಂದು ಅನ್ನಿಸಿತು। ನಾನು ಮತ್ತೆ ಅಸಮಾಧಾನದ ನಿಟ್ಟುಸಿರು ಬಿಟ್ಟೆ.

Wednesday, February 20, 2008

ಪ್ರೀತಿಯನ್ನು ಪಡೆಯುವುದು ಕಷ್ಟ, ನೀಡುವುದು ಇಷ್ಟ

ಐ ಲವ್ ಯು ಎಂದು ಮೊದಲ ಬಾರಿ ಕೇಳಿದಾಗ ನನಗಾದ ರೋಮಾಂಚನ ನನಗಿನ್ನು ನೆನಪಿನಲ್ಲಿದೆ। ಇಂಥಹ ಒಂದು ಮಾತಿಗಾಗಿ ನಾನು ಕಾದಿದ್ದು, ಕನಸು ಕಂಡಿದ್ದು, ತಪಸ್ಸು ಮಾಡಿದ್ದು ಎಲ್ಲವೂ ನಿಜ। ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂಬ ಮಾತನ್ನು ಕೇಳುವ ತವಕದಲ್ಲಿ ಕಾತುರದಲ್ಲಿ ಬದುಕುತ್ತಿದ್ದಾಗಲೇ, ಈ ಮಾತನ್ನು ಹೇಳಲು ಒದ್ದಾಡಿದ್ದು ಒಂದೆರಡು ಬಾರಿಯಲ್ಲ। ಹಳ್ಳಿಯ ಮೂಲೆಯೊಂದರಲ್ಲಿ, ಅಡಕೆ ತೋಟ, ಗುಡ್ಡ ಬೆಟ್ಟಗಳ ನಡುವೆ ಓಡಾಡಿಕೊಂಡಿದ್ದ ನನಗೆ ಪ್ರೀತಿ ಒಂದು ಅನೂಹ್ಯವೇ। ಪ್ರೀತಿಯ ಬೆನ್ನು ಹತ್ತಿ ಹೋಗುವುದು ಒಂದು ಚಟ। ಪ್ರಾಯಶಃ ನನ್ನನ್ನು ಯಾರಾದರೂ ಪ್ರೀತಿಸಬೇಕು ಎಂದು ನಾನು ಆಸೆ ಪಟ್ಟಿದ್ದೆನೆ ಹೊರತೂ ಈ ಪ್ರೀತಿಯಲ್ಲಿ ನನ್ನದೇ ಆಯ್ಕೆ ಇರಲಿಲ್ಲವೇನೋ। ಯಾಕೆಂದರೆ ಬಾಲ್ಯದಲ್ಲಿ ವಿಚಿತ್ರ ಒಂಟಿತನದಿಂದ ಕಳೆದ ನನಗೆ ಒಂದು ಪುಟ್ಟ ಸಾಂತ್ವನ ಬೇಕಾಗಿತ್ತು। ಯಾರಾದರೂ ತಮ್ಮ ಸೀರೆಯ ಸೆರಗಿನಡಿಯಲ್ಲಿ ನನ್ನನ್ನು ಬಚ್ಚಿಟ್ಟುಕೊಳ್ಳಬೇಕಾಗಿತ್ತು। ಹಾಗೆ ನನ್ನನ್ನು ಒರಗಿಸಿಕೊಂಡು ನೀನು ಸಣ್ಣವಲ್ಲ, ದೊಡ್ಡವನು ಎಂದು ಹೇಳಬೇಕಾಗಿತ್ತು। ಹೀಗೆ ಹೇಳುವ, ನನ್ನ ಮನಸ್ಸಿನ ಜೊತೆ ಮಾತನಾಡುವ ಹೃದಯ ಸಾನ್ನಿಧ್ಯ ನನಗೆ ಬೇಕಾಗಿತ್ತು।
ನಾನು ಮಹಾಭಾರತ ಮತ್ತು ರಾಮಾಯಣವನ್ನು ಓದುತ್ತ ಬೆಳೆದವನು। ಯಕ್ಷಗಾನ , ನಾಟಕಗಳಲ್ಲಿ ಈ ಮಹಾ ಕಾವ್ಯದ ಪಾತ್ರಗಳನ್ನು ನೋಡಿ, ನನ್ನೊಳಗೆ ಅಹ್ವಾನಿಸಿಕೊಂಡು ಸಂತಸಪಟ್ಟವನು। ಈಗಲೂ ಸಹ ಮಹಾಭಾರತದ ಯಾವುದೋ ಒಂದು ಪಾತ್ರ ನಾನೇ ಎಂದು ನನಗೆ ಹಲವು ಭಾರಿ ಅನ್ನಿಸುವುದುಂಟು। ನನಗೆ ಹೆಚ್ಚು ಹತ್ತಿರವಾಗುವ ಮಹಾಭಾರತದ ಪಾತ್ರ ಎಂದರೆ ಕರ್ಣನದು। ಅರ್ಜುನನನ್ನು ಕಂಡರೆ ನನಗಾಗುವುದಿಲ್ಲ। ಸೂತಪುತ್ರನಾದ ಕರ್ಣನನ್ನು ಜರಿದಾಗ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ। ಅರ್ಜುನನ್ನು ಹೀಗಳಿದರೆ ಆತ ಮತ್ತಷ್ಟು ಶಕ್ತಿಯುತನಾಗಿ ಹೊರಹೊಮ್ಮುತ್ತಾನೆ। ನನಗೂ ಹಾಗೆ। ನನ್ನನ್ನು ಹೀಗಳಿದರೆ ನನ್ನ ಶಕ್ತಿ ಅಳಿದು ಹೋಗುತ್ತದೆ। ನಾನು ನಿಶಕ್ತನಾಗುತ್ತೇನೆ। ನನಗೆ ನೀನು ದೊಡ್ದವನು ಎಂದು ಹೇಳುವವರು ಬೇಕು। ಹಾಗೆ ಹಲವರನ್ನು ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದರೂ ನನಗೆ ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳುವವರಿಗಾಗಿ ಕಾದಿದ್ದು, ಅದೆಷ್ಟು ಕಾಲ ?
ಆದರೆ ಈ ಪ್ರೀತಿಯ ಜಗತ್ತು, ಇಲ್ಲಿ ನಮ್ಮ ಸಮಸ್ಯೆ ಎಂದರೆ, ನಾವು ಪ್ರೀತಿಯನ್ನು ಅಪೇಕ್ಷಿಸುತ್ತೇವೆಯೇ ಹೊರತೂ ಪ್ರೀತಿಯನ್ನು ನೀಡುವುದಿಲ್ಲ ಎಂಬುದು ನನಗೆ ಅರ್ಥವಾಗಿದ್ದು ಇತ್ತೀಚೆಗೆ॥ ನಮ್ಮನ್ನು ಪ್ರೀತಿಸುವರಿಗಾಗಿ ನಾವು ಕಾಯುತ್ತೇವೆ, ಹಪಹಪಿಸುತ್ತೇವೆ, ಆದರೆ ನಾವು ಯಾರನ್ನೂ ಪ್ರೀತಿಸುವುದಿಲ್ಲ। ನಮಗೆ ನಮ್ಮನ್ನು ಪ್ರೀತಿಸಿಕೊಳ್ಳುವುದು ಇಷ್ಟವೇ ಹೊರತೂ ಬೇರೆಯವರನ್ನು ಪ್ರೀತಿಸುವುದಲ್ಲ। ಪ್ರೀತಿ ಎಂದರೆ ಅದು ಪಡೆಯುವುದಲ್ಲ, ಅದನ್ನು ನೀಡುವುದು ಎಂಬ ಮಾತು ನಿಜ। ಪ್ರೀತಿಯನ್ನು ನೀಡುವುದರಲ್ಲಿ ಸಂತೋಷವಿದೆ। ಪಡೆಯುವುದರಲ್ಲಿ ಅಲ್ಲ। ಯಾಕೆಂದರೆ ಪಡೆದಿದ್ದನ್ನು ಸಂಭಾಳಿಸುವುದು ಕಷ್ಟ।ಪ್ರೀತಿ ನಮ್ಮಿಂದ ಎಲ್ಲವನ್ನೂ ಅಪೇಕ್ಷಿಸುತ್ತದೆ। ಪ್ರೀತಿ ಅಪೇಕ್ಷಿಸಿದ್ದನ್ನು ನೀಡುತ್ತ ಅದನ್ನು ಮಗುವಿನ ಹಾಗೆ ಸಂಬಾಳಿಸಬೇಕು। ಅದಿಲ್ಲದಿದ್ದರೆ, ಪ್ರೀತಿ ಆ ಕ್ಷಣವೇ ಕಾಲು ಕಿತ್ತು ಬಿಡುತ್ತದೆ। ಇಲ್ಲವೆ ಹಠ ಮಾಡುತ್ತದೆ। ಬೀದಿ ರಂಪ ಮಾಡಿ, ರಚ್ಚೆ ಹಿಡಿದು ಕುಳಿತು ಬಿಡುತ್ತದೆ। ಪಡೆದ ತಕ್ಷಣ ಅದನ್ನು ಉಳಿಸಿಕೊಳ್ಳುವ ಸಮಸ್ಯೆ ಪ್ರಾರಂಭವಾಗುತ್ತದೆ। ಹಾಗೆ ಕಳೆದುಕೊಳ್ಳುವ ಭಯದಲ್ಲೇ ನಾವು ಬದುಕುತ್ತಿರುತ್ತೇವೆ। ಯಾವಾಗಲೂ ಕಳೆದುಕೊಳ್ಳುವ ನೋವಿಗಿಂತ ಪಡೆಯದಿರುವ ಬೇಸರವೇ ಹೆಚ್ಚು ಒಳ್ಳೆಯದು ಎಂದು ನನಗೆ ಅನೇಕ ಸಲ ಅನ್ನಿಸುವುದುಂಟು। ಈ ಕಾರಣಕ್ಕಾಗಿಯೇ ಪ್ರೀತಿಯನ್ನು ಬಯಸುವುದಕ್ಕಿಂತ ನೀಡುವುದು ಒಳ್ಳೆಯದು ಎಂಬ ತೀರ್ಮಾನಕ್ಕೆ ನಾನು ಬಂದಿದ್ದು। ಯಾಕೆಂದರೆ ನೀಡುವವನಲ್ಲಿ ಸಣ್ಣ ಅಹಮಿಕೆ ಇರುತ್ತದೆ। ನೀಡುವವನ ಕೈ ಮೇಲಿರುವ ಹಾಗೆ। ನೀಡುವವನಿಗೆ ಕಳೆದುಕೊಳ್ಳುವ ಭಯ ಇರುವುದಿಲ್ಲ। ಹಾಗೆ ಕಳೆದುಕೊಂಡ ನೋವು ಅವನನ್ನು ಬಾಧಿಸಲಾರದು। ಈ ಕಾರಣಗಳಿಂದಾಗಿಯೇ ಪ್ರೀತಿಯನ್ನು ಪಡೆಯುವದರಲ್ಲಿ ನನಗೆ ಆಸಕ್ತಿ ಇಲ್ಲ। ಪ್ರೀತಿಯನ್ನು ನೀಡುವುದರಲ್ಲಿ ಮಾತ್ರ ನನಗೆ ಆಸಕ್ತಿ। ಹೀಗೆ ಪ್ರೀತಿ ನೀಡುವಲ್ಲಿ ನಾನೇ ಸಾರ್ವಬೌಮ। ನನನ್ನು ಯಾರೂ ಪ್ರಶ್ನಿಸಲಾರು। ಹಾಗೇ ಪ್ರೀತಿ ಪಡೆಯುವಲ್ಲಿ ಇರುವ ಪೈಪೋಟಿ, ಪ್ರೀತಿ ನೀಡುವಲ್ಲಿ ಇಲ್ಲ। ಹೀಗಾಗಿ ನಾನು ಯಾರಿಂದಲೂ ಪ್ರೀತಿಯನ್ನು ನಾನು ಅಪೇಕ್ಷಿಸಲಾರೆ। ಪ್ರೀತಿಯನ್ನು ಎಲ್ಲರಿಗೂ ನೀಡುವುದು ಮಾತ್ರ ನನಗೆ ಇಷ್ಟ.

Tuesday, February 19, 2008

ತಮ್ಮ ಬಗ್ಗೆಯೇ ಸಂತಾಪ ಪಡುವವರು !

ನನಗೆ ಇದೆಲ್ಲ ಬೇಕಾಗಿರಲಿಲ್ಲ। ಇದು ಯಾವುದೋ ಒಂದು ಘಟನೆ ನಡೆದ ಮೇಲೆ ನಾನು ಅಂದುಕೊಳ್ಳೋದು। ನನಗೆ ಇದೆಲ್ಲ ಬೇಕಾಗಿರಲಿಲ್ಲ ಅಂತ ಇದುವರೆಗೆ ಸಾವಿರ ಬಾರಿ ನಾನು ಅಂದುಕೊಂಡಿರಬಹುದು। ಆದರೆ ಮತ್ತೆ ಅದೇ, ನನಗೆ ಬೇಕಾಗಿಲ್ಲದಿರುವುದನ್ನೇ ಮತ್ತೆ ಮಾಡುವುದು। ಇದು ಒಂದು ರೀತಿಯಲ್ಲಿ ಖುಷಿ ನೀಡುವ ವಿಚಾರವೇ। ಯಾವುದು ಬೇಕಾಗಿರುವುದು ಮತ್ತು ಯಾವುದು ಬೇಕಿಲ್ಲದುರುವುದು ? ಒಂದು ಸಂದರ್ಭದಲ್ಲಿ ಬೇಕು ಅನ್ನಿಸಿದ್ದು ಇನ್ನೊಂದು ಸಂದರ್ಭದಲ್ಲಿ ಬೇಕಿಲ್ಲದ್ದು ಆಗಬಹುದು। ಅಂದರೆ, ಬೇಕು ಮತ್ತು ಬೇಕಿಲ್ಲದಿರುವುದಕ್ಕೆ ಸ್ಥಾಯಿ ರೂಪ ಇಲ್ಲ। ಅದು ಕಾಯಂ ಆಗಿ ಇರುವಂತಹುದಲ್ಲ।

ಯಾಕೆ ನಮಗೆ ಇದೆಲ್ಲ ಬೇಕಿರಲಿಲ್ಲ ಎಂದು ಅನ್ನಿಸುತ್ತದೆ ? ನಾವು ಒಂದು ತೀರ್ಮಾನ ಕೈಗೊಂಡು ಮುಂದುವರಿಯುದು ಫಲಿತಾಂಶದ ನಿರೀಕ್ಷೆಯ ಮೇಲೆ। ನಮ್ಮ ನಿರೀಕ್ಷೆಯ ಫಲಿತಾಂಶ ಬರದಿದ್ದಾಗ ನಾವು ಅಂದುಕೊಳ್ಳುವುದು ಇದೆಲ್ಲ ನಮಗೆ ಬೇಕಿರಲಿಲ್ಲ ಅಂತ। ಅಂದರೆ, ನಮಗೆ ಇದು ಬೇಕಿರಲಿಲ್ಲ ಅಂದರೆ ಈ ಫಲಿತಾಂಶ ನನಗೆ ಬೇಕಿರಲಿಲ್ಲ ಎಂದು ಮಾತ್ರ। ಈ ಯತ್ನ ಬೇಕಿರಲಿಲ್ಲ ಎಂದು ಅಲ್ಲವೇ ಅಲ್ಲ। ನಾವು ಯತ್ನದ ಮೇಲೆ ಬದುಕುವುದಿಲ್ಲ, ಫಲಿತಾಂಶದ ಮೇಲೆ ಬದುಕುತ್ತೇವೆ।

ಆದರೆ ನಿಜವಾದ ಬದುಕು ಎಂದರೆ ನಿರೀಕ್ಷೆ ಅಲ್ಲ। ಅದು ಕನಸೂ ಅಲ್ಲ। ಭೂತ ಕಾಲವೂ ಅಲ್ಲ। ನಿಜವಾದ ಬದುಕು ಎಂದರೆ ವಾಸ್ತವ। ವಾಸ್ತವಕ್ಕೆ ಭೂತಕಾಲವೂ ಇಲ್ಲ, ಭವಿಷ್ಯತ್ ಕಾಲವೂ ಇಲ್ಲ। ಅದು ವರ್ತಮಾನ। ತಮಾಷೆ ಎಂದರೆ ನಮಗೆ ವರ್ತಮಾನ ಎಂದರೆ ಆಗದು। ನಾವು ಎಂದೂ ವರ್ತಮಾನದಲ್ಲಿ ಬದುಕಲಾರೆವು। ನಮಗೆ ಭೂತಕಾಲ ಭೂತದಂತೆ ಕಾಡುತ್ತಿರುತ್ತದೆ। ಇಲ್ಲವೇ ಭವಿಷ್ಯ ತಲೆ ತಿನ್ನುತ್ತಿರುತ್ತದೆ। ಇದನ್ನು ಇನ್ನೊಂದು ರೀತಿಯಲ್ಲೂ ಹೇಳಬಹುದು। ವರ್ತಮಾನ ಎಂದರೆ ವಾಸ್ತವ। ಅದು ಸತ್ಯ। ನಮಗೆ ಸತ್ಯವನ್ನು ಎದುರಿಸುವುದು ಯಾವಾಗಲೂ ಕಷ್ಟ। ಅಂದರೆ ವರ್ತಮಾನ ಅಥವಾ ವಾಸ್ತವವನ್ನು ನಾವು ಎದುರಿಸಲಾರೆವು।

ವರ್ತಮಾನವನ್ನು ಎದುರಿಸಲಾರದವರು, ತಮ್ಮ ಈ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಬೇರೆ ಬೇರೆ ರೀತಿಯ ಮಾರ್ಗವನ್ನು ಅನುಸರಿಸುತ್ತಾರೆ। ಅವರು ಬಹುಮಟ್ಟಿಗೆ ಭೂತಕಾಲದಲ್ಲಿ ಬದುಕುತ್ತಾರೆ। ನಾನು ಏನು ಮಾಡಿದ್ದೆ ಗೊತ್ತಾ ? ಎಂದು ಮಾತನ್ನು ಪ್ರಾರಂಭಿಸುತ್ತಾರೆ। ಇಲ್ಲದಿದ್ದರೆ, ಈ ಸಮಾಜಕ್ಕೆ ನನ್ನ ಯೋಗ್ಯತೆಯನ್ನು ಉಪಯೋಗಿಸುವುದು ಗೊತ್ತಿಲ್ಲ ಎಂದು ಸಮಾಜವನ್ನು ದೂಷಿಸಿ ಸಮಾಧಾನ ಪಟ್ಟುಕೊಳ್ಳುತ್ತಾರೆ। ನೀವು ಯಾವುದೇ ಕಚೇರಿಯನ್ನು ನೋಡಿ, ಅಲ್ಲಿ ಒಬ್ಬರಲ್ಲ ಒಬ್ಬರು ಇಂತಹ ವ್ಯಕ್ತಿ ಸಿಗುತ್ತಾರೆ। ನನ್ನ ಯೋಗ್ಯತೆಯನ್ನು ಗುರಿತುಸುವ ಶಕ್ತಿ ಈ ಬಾಸ್ ಗೆ ಇಲ್ಲ ಕಣ್ರಿ ಅಂತ ಬಾಯಿ ಚಪಲ ತೀರಿಸಿಕೊಳ್ಳುತ್ತಾರೆ। ನಾನು ಬಾಸ್ ಆಗಿದ್ದರೆ ತೋರಿಸುತ್ತಿದ್ದೆ ಎಂದು ತಮ್ಮ ಪೌರುಷವನ್ನು ಕೊಚ್ಚಿಕೊಳ್ಳುತ್ತಾರೆ। ಆದರೆ ಇಂತಹ ಸೆಲ್ಪ್ ಪಿಟಿ ಅಥವಾ ತಮ್ಮ ಬಗ್ಗೆಯೇ ದುಃಖ ಪಡುವ ಜನ ಏನನ್ನೂ ಮಾಡಲಾರರು। ಅವರು ತಮಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಲಾರರು।

ನಮ್ಮ ಬಗ್ಗೆಯೇ ನಾವು ಸಂತಾಪ ಭಾವವನ್ನು ವ್ಯಕ್ತಪಡಿಸುವುದು ಒಂದು ಚಟ। ಅದು ನಮ್ಮ ಸುಪ್ತ ಮನಸ್ಸಿಗೆ ಸಂತೋಷವನ್ನು ಕೊಡುವ ಚಟ। ನನಗೆ ಇದೆಲ್ಲ ಬೇಕಾಗಿರಲಿಲ್ಲ ಎಂದು ಸಂತಾಪ ವ್ಯಕ್ತಪಡಿಸುವುದು ಚಟವೇ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...