ನನಗೆ ಇದೆಲ್ಲ ಬೇಕಾಗಿರಲಿಲ್ಲ। ಇದು ಯಾವುದೋ ಒಂದು ಘಟನೆ ನಡೆದ ಮೇಲೆ ನಾನು ಅಂದುಕೊಳ್ಳೋದು। ನನಗೆ ಇದೆಲ್ಲ ಬೇಕಾಗಿರಲಿಲ್ಲ ಅಂತ ಇದುವರೆಗೆ ಸಾವಿರ ಬಾರಿ ನಾನು ಅಂದುಕೊಂಡಿರಬಹುದು। ಆದರೆ ಮತ್ತೆ ಅದೇ, ನನಗೆ ಬೇಕಾಗಿಲ್ಲದಿರುವುದನ್ನೇ ಮತ್ತೆ ಮಾಡುವುದು। ಇದು ಒಂದು ರೀತಿಯಲ್ಲಿ ಖುಷಿ ನೀಡುವ ವಿಚಾರವೇ। ಯಾವುದು ಬೇಕಾಗಿರುವುದು ಮತ್ತು ಯಾವುದು ಬೇಕಿಲ್ಲದುರುವುದು ? ಒಂದು ಸಂದರ್ಭದಲ್ಲಿ ಬೇಕು ಅನ್ನಿಸಿದ್ದು ಇನ್ನೊಂದು ಸಂದರ್ಭದಲ್ಲಿ ಬೇಕಿಲ್ಲದ್ದು ಆಗಬಹುದು। ಅಂದರೆ, ಬೇಕು ಮತ್ತು ಬೇಕಿಲ್ಲದಿರುವುದಕ್ಕೆ ಸ್ಥಾಯಿ ರೂಪ ಇಲ್ಲ। ಅದು ಕಾಯಂ ಆಗಿ ಇರುವಂತಹುದಲ್ಲ।
ಯಾಕೆ ನಮಗೆ ಇದೆಲ್ಲ ಬೇಕಿರಲಿಲ್ಲ ಎಂದು ಅನ್ನಿಸುತ್ತದೆ ? ನಾವು ಒಂದು ತೀರ್ಮಾನ ಕೈಗೊಂಡು ಮುಂದುವರಿಯುದು ಫಲಿತಾಂಶದ ನಿರೀಕ್ಷೆಯ ಮೇಲೆ। ನಮ್ಮ ನಿರೀಕ್ಷೆಯ ಫಲಿತಾಂಶ ಬರದಿದ್ದಾಗ ನಾವು ಅಂದುಕೊಳ್ಳುವುದು ಇದೆಲ್ಲ ನಮಗೆ ಬೇಕಿರಲಿಲ್ಲ ಅಂತ। ಅಂದರೆ, ನಮಗೆ ಇದು ಬೇಕಿರಲಿಲ್ಲ ಅಂದರೆ ಈ ಫಲಿತಾಂಶ ನನಗೆ ಬೇಕಿರಲಿಲ್ಲ ಎಂದು ಮಾತ್ರ। ಈ ಯತ್ನ ಬೇಕಿರಲಿಲ್ಲ ಎಂದು ಅಲ್ಲವೇ ಅಲ್ಲ। ನಾವು ಯತ್ನದ ಮೇಲೆ ಬದುಕುವುದಿಲ್ಲ, ಫಲಿತಾಂಶದ ಮೇಲೆ ಬದುಕುತ್ತೇವೆ।
ಆದರೆ ನಿಜವಾದ ಬದುಕು ಎಂದರೆ ನಿರೀಕ್ಷೆ ಅಲ್ಲ। ಅದು ಕನಸೂ ಅಲ್ಲ। ಭೂತ ಕಾಲವೂ ಅಲ್ಲ। ನಿಜವಾದ ಬದುಕು ಎಂದರೆ ವಾಸ್ತವ। ವಾಸ್ತವಕ್ಕೆ ಭೂತಕಾಲವೂ ಇಲ್ಲ, ಭವಿಷ್ಯತ್ ಕಾಲವೂ ಇಲ್ಲ। ಅದು ವರ್ತಮಾನ। ತಮಾಷೆ ಎಂದರೆ ನಮಗೆ ವರ್ತಮಾನ ಎಂದರೆ ಆಗದು। ನಾವು ಎಂದೂ ವರ್ತಮಾನದಲ್ಲಿ ಬದುಕಲಾರೆವು। ನಮಗೆ ಭೂತಕಾಲ ಭೂತದಂತೆ ಕಾಡುತ್ತಿರುತ್ತದೆ। ಇಲ್ಲವೇ ಭವಿಷ್ಯ ತಲೆ ತಿನ್ನುತ್ತಿರುತ್ತದೆ। ಇದನ್ನು ಇನ್ನೊಂದು ರೀತಿಯಲ್ಲೂ ಹೇಳಬಹುದು। ವರ್ತಮಾನ ಎಂದರೆ ವಾಸ್ತವ। ಅದು ಸತ್ಯ। ನಮಗೆ ಸತ್ಯವನ್ನು ಎದುರಿಸುವುದು ಯಾವಾಗಲೂ ಕಷ್ಟ। ಅಂದರೆ ವರ್ತಮಾನ ಅಥವಾ ವಾಸ್ತವವನ್ನು ನಾವು ಎದುರಿಸಲಾರೆವು।
ವರ್ತಮಾನವನ್ನು ಎದುರಿಸಲಾರದವರು, ತಮ್ಮ ಈ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಬೇರೆ ಬೇರೆ ರೀತಿಯ ಮಾರ್ಗವನ್ನು ಅನುಸರಿಸುತ್ತಾರೆ। ಅವರು ಬಹುಮಟ್ಟಿಗೆ ಭೂತಕಾಲದಲ್ಲಿ ಬದುಕುತ್ತಾರೆ। ನಾನು ಏನು ಮಾಡಿದ್ದೆ ಗೊತ್ತಾ ? ಎಂದು ಮಾತನ್ನು ಪ್ರಾರಂಭಿಸುತ್ತಾರೆ। ಇಲ್ಲದಿದ್ದರೆ, ಈ ಸಮಾಜಕ್ಕೆ ನನ್ನ ಯೋಗ್ಯತೆಯನ್ನು ಉಪಯೋಗಿಸುವುದು ಗೊತ್ತಿಲ್ಲ ಎಂದು ಸಮಾಜವನ್ನು ದೂಷಿಸಿ ಸಮಾಧಾನ ಪಟ್ಟುಕೊಳ್ಳುತ್ತಾರೆ। ನೀವು ಯಾವುದೇ ಕಚೇರಿಯನ್ನು ನೋಡಿ, ಅಲ್ಲಿ ಒಬ್ಬರಲ್ಲ ಒಬ್ಬರು ಇಂತಹ ವ್ಯಕ್ತಿ ಸಿಗುತ್ತಾರೆ। ನನ್ನ ಯೋಗ್ಯತೆಯನ್ನು ಗುರಿತುಸುವ ಶಕ್ತಿ ಈ ಬಾಸ್ ಗೆ ಇಲ್ಲ ಕಣ್ರಿ ಅಂತ ಬಾಯಿ ಚಪಲ ತೀರಿಸಿಕೊಳ್ಳುತ್ತಾರೆ। ನಾನು ಬಾಸ್ ಆಗಿದ್ದರೆ ತೋರಿಸುತ್ತಿದ್ದೆ ಎಂದು ತಮ್ಮ ಪೌರುಷವನ್ನು ಕೊಚ್ಚಿಕೊಳ್ಳುತ್ತಾರೆ। ಆದರೆ ಇಂತಹ ಸೆಲ್ಪ್ ಪಿಟಿ ಅಥವಾ ತಮ್ಮ ಬಗ್ಗೆಯೇ ದುಃಖ ಪಡುವ ಜನ ಏನನ್ನೂ ಮಾಡಲಾರರು। ಅವರು ತಮಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಲಾರರು।
ನಮ್ಮ ಬಗ್ಗೆಯೇ ನಾವು ಸಂತಾಪ ಭಾವವನ್ನು ವ್ಯಕ್ತಪಡಿಸುವುದು ಒಂದು ಚಟ। ಅದು ನಮ್ಮ ಸುಪ್ತ ಮನಸ್ಸಿಗೆ ಸಂತೋಷವನ್ನು ಕೊಡುವ ಚಟ। ನನಗೆ ಇದೆಲ್ಲ ಬೇಕಾಗಿರಲಿಲ್ಲ ಎಂದು ಸಂತಾಪ ವ್ಯಕ್ತಪಡಿಸುವುದು ಚಟವೇ.
Subscribe to:
Post Comments (Atom)
ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹ...
-
ಮಹಾರಾಷ್ಟ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಎರಡನೆ ಬಂಡಾಯ.. ಒಂದು ವರ್ಷದ ಹಿಂದೆ ಶಿವಸೇನೆಯಿಂದ ಹೊರಗೆ ಬಂದ ಏಕನಾಥ್ ಶಿಂಧೆ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿ ಮುಖ್ಯ...
-
ಮಳೆ ಹೊಯ್ದು ಹೋದ ಮೇಲೆ ಮಳೆ ಹನಿಗಳು ಬೀಳುತ್ತಲೇ ಇರುತ್ತವೆ,, ಮೋಡ ಮುಚ್ಚಿರುತ್ತದೆ. ಯಾವಾಗ ಮತ್ತೆ ಮಳೆ ಬರುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ.. ಮತ್ತೆ ಗುಡುಗು ಸಿಡಿ...
1 comment:
aadre santapakke iiderada niriikshegalu, satata solu karana agabahudalva? nirikshe iddarashte guri iruvudu sadhya alva? aadru badukannu badukinashtakke bidabeku anno nim theory nange tumba ishta aaytu sir....
Post a Comment