Thursday, March 6, 2008

ನಾನು, ನೀವು ಮತ್ತು ಸಂವಹನ

ಈ ಶತಮಾನದ ಬಹುಮುಖ್ಯವಾದ ಸಮಸ್ಯೆ ಎಂದರೆ, ಸಂವಹನ। ಬಹಳಷ್ಟು ಸಂದರ್ಭಗಳಲ್ಲಿ, ನಾವು ಹೇಳಬೇಕು ಎಂದುಕೊಂಡಿದ್ದನ್ನು ಹೇಳುವುದು ಕಷ್ಟ। ಯಾವುದೋ ಒಂದು ಮಾತನ್ನು ಹೇಳುವುದಕ್ಕೆ ಕೆಲವೊಮ್ಮೆ ಮುಜುಗರವಾಗುತ್ತದೆ। ಕೆಲವೊಮ್ಮೆ ಭಯವಾಗುತ್ತದೆ। ಇನ್ನು ಕೆಲವು ಸಂದರ್ಭಗಳಲ್ಲಿ ನಾವು ಹೇಳಲು ಹೊರಟಿರುವ ವಿಚಾರದ ಪರಿಣಾಮ ಎದೆಗುಂದಿಸಿಬಿಡುತ್ತದೆ। ಹೀಗೆ ಹೇಳಬೇಕು ಎಂಬುದನ್ನು ಹೇಳಲಾಗದೇ ಪರಿತಪಿಸುವವರು ಒಂದು ರೀತಿಯವರಾದರೆ, ಎಲ್ಲವನ್ನು ಹೇಳಿ ಸಮಸ್ಯೆಯನ್ನು ತಂದುಕೊಳ್ಳುವವರು ಇನ್ನೊಂದು ರೀತಿಯ ಜನ। ಎರಡನೆಯ ರೀತಿಯ ಜನರಿಗೆ ಮಾತಿನ ಮಹತ್ವವೇ ಗೊತ್ತಿರುವುದಿಲ್ಲ। ಇವರು ಮಾತನ್ನು ಕಳ್ಳೆಕಾಯಿ ಹಂಚಿದಂತೆ ಹಂಚಿಬಿಡುತ್ತಾರೆ। ಇದನ್ನು ಇನ್ನೊಂದು ರೀತಿಯಲ್ಲೂ ಹೇಳಬಹುದು। ಅತಿಯಾಗಿ ಮಾತಿನ ಬಗ್ಗೆ ಯೋಚಿಸಿ ಮಾತನಾಡದೇ ಉಳಿದುಬಿಡುವವರು ಹಾಗೂ ಮನಸ್ಸಿಗೆ ಬಂದಿದ್ದನ್ನೆಲ್ಲ ಹೇಳಿ ಹೋಗಿಬಿಡುವವರು। ಈ ಎರಡೂ ರೀತಿಯವರಿಂದ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ। ಒಬ್ಬರು ಮಾತನಾಡದೇ ಕೆಟ್ಟರೆ ಇನ್ನೊಂದು ಗುಂಪಿನ ಜನ ಮಾತನಾಡದೇ ಕೆಡುತ್ತಾರೆ।

ಮಾತು ಎನ್ನುವುದಿದೆಯಲ್ಲ,, ಅದು ನಮ್ಮ ಸಂವಹನದ ಪ್ರಮುಖ ಅಂಗ। ಇದಕ್ಕಾಗಿ ನಾವು ಬಳಸಿಕೊಳ್ಳುವುದು ಭಾಷೆ, ಆದರೆ ಯಾವುದೇ ಭಾಷೆ ಇರಲಿ, ಅದರ ಅರ್ಥ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಬದಲಾಗಿರುತ್ತದೆ। ಒಂದು ಮೂಲ ಶಬ್ದ ಒಂದು ಅರ್ಥವನ್ನು ನೀಡುತ್ತಿದ್ದರೆ, ಅದನ್ನು ಬಳಸುವ ವ್ಯಕ್ತಿ ತನ್ನ ಅನುಭವ ಮತ್ತು ಗ್ರಹಿಕೆಯ ಹಿನ್ನೆಲ್ಲೆಯಲ್ಲಿ ಬೇರೊಂದು ಅರ್ಥದಲ್ಲಿ ಆ ಶಬ್ದವನ್ನು ಬಳಸುತ್ತಾನೆ। ಹಾಗೆ ಅದನ್ನು ಕೇಳುವವ ತನ್ನ ಅನುಭವ ಮತ್ತು ಗ್ರಹಿಕೆಯ ಹಿನ್ನೆಲೆಯಲ್ಲಿ ಬೇರೊಂದು ಅರ್ಥದಲ್ಲಿ ಅದನ್ನು ಸ್ವೀಕರಿಸುತ್ತಾನೆ। ಹೀಗಾಗಿ ಒಂದು ಶಬ್ದ ಮೂರು ಸ್ಥರಗಳಲ್ಲಿ ಮೂರು ವಿಭಿನ್ನ ಅರ್ಥವನ್ನು ಪಡೆದುಕೊಂಡು ಬಿಡುತ್ತದೆ। ಹೀಗೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಬದಲಾಗುವ ಬೇರೆ ಬೇರೆ ಅರ್ಥಗಳನ್ನು ನೀಡುವ ಶಬ್ದಗಳನ್ನು ಒಳಗೊಂಡ ಒಂದು ವಾಕ್ಯ ಯಾವ ರೀತಿಯ ಸಂವಹನ ಮಾಡಬಹುದು ? ಅದು ಒಟ್ಟಾರೆಯಾಗಿ ಯಾವ ಪರಿಣಾಮ ನೀಡಬಹುದು ? ಸ್ವಲ್ಪ ಯೋಚಿಸಿ। ನಾನು ಹೇಳಬೇಕು ಎಂದುಕೊಂಡಿದ್ದು ಹೀಗೆ ರೂಪಾಂತರಗೊಂಡು ಬೇರೆಯದಾದ ಅರ್ಥವನ್ನೇ ನೀಡಿದರೆ ಅದರ ಪರಿಣಾಮ ಏನಿರಬಹುದು ?

ಸಾಧಾರಣವಾಗಿ ನಾವು ಭಾಷೆಯನ್ನು ಕಲಿಯುವಾಗ ಒಂದು ಶಬ್ದದ ಅರ್ಥ ಹೀಗೆ ಎಂದು ಡಿಕ್ಷನರಿಯ ಮೂಲಕ ತಿಳಿದುಕೊಳ್ಳಬಹುದು। ಆದರೆ ಅದೇ ಅಂತಿಮ ಅರ್ಥ ಎಂದು ನಾನು ಅಂದುಕೊಂಡಿಲ್ಲ। ಯಾಕೆಂದರೆ ಕಾಲಕ್ರಮದಲ್ಲಿ ಬಳಕೆಯಿಂದಾಗಿ ಈ ಶಬ್ದ ಬೇರೆ ಅರ್ಥ ಸ್ವರೂಪವನ್ನು ಪಡೆದುಕೊಂಡಿರಬಹುದು। ಅಂದರೆ ಶಬ್ದ, ಬಳಕೆ ಮತ್ತು ಆ ಕಾಲ ಘಟ್ಟದ ಜೊತೆ ನಿಕಟ ಸಂಬಂಧವನ್ನು ಹೊಂದಿದೆ ಎಂಬುದು ಸ್ಪಷ್ಟ। ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ, ಈಗ ಹತ್ತು ಇಪ್ಪತ್ತು ವರ್ಷಗಳ ಹಿಂದೆ ಒಂದು ಶಬ್ದ ನೀಡುತ್ತಿದ್ದ ಅರ್ಥಕ್ಕೂ ಇಂದು ನೀಡುತ್ತಿರುವ ಅರ್ಥಕ್ಕೂ ವ್ಯತ್ಯಾಸವಿದೆ। ಕಾಲದ ಜೊತೆ ನಂಟನ್ನು ಹೊಂದಿರುವ ಶಬ್ದ, ಆ ಕಾಲ ಘಟ್ಟದ ವ್ಯಕ್ತಿಯ ಜೊತೆಗೂ ಸಂಬಂಧವನ್ನು ಹೊಂದಿರುತ್ತದೆ।ಶಬ್ದವನ್ನು ಬಳಸುವ ವ್ಯಕ್ತಿ, ಆತನ ಕಾಲ ಸೇರಿಯೇ ಒಂದು ಶಬ್ದದ ಅರ್ಥ ನಿರ್ಧಾರವಾಗುತ್ತದೆ। ಈಗ ಒಬ್ಬ ಮಾತನಾಡುವವ ಮತ್ತು ಇನ್ನೊಬ್ಬ ಕೇಳಿಸಿಕೊಳ್ಳುವವರ ನಡುವೆ ಮಾತುಕತೆ ನಡೆಯುವ ಸಂದರ್ಭವನ್ನು ನೋಡಿ। ಇವರಿಬ್ಬರು ಬೇರೆ ಬೇರೆ, ಕಾಲಘಟ್ಟಕ್ಕೆ ಸೇರಿದವರು, ಬೇರೆ ಬೇರೆ ಅನುಭವಗಳನ್ನು ಪಡೆದವರು। ಹಾಗಿದ್ದರೆ ಇವರಿಬ್ಬರ ನಡುವಿನ ಸಂವಹನಕ್ಕೆ ಕಾರಣವಾಗುವ ಶಬ್ದದ ಅರ್ಥ ಬೇರೆ ಬೇರೆಯಾಗಿರುತ್ತದೆಯೆ ? ಹಾಗೆ ಒಂದು ಶಬ್ದಕ್ಕೆ ನಿಖರವಾದ ಅರ್ಥ ಎಂಬುದು ಇಲ್ಲವೆ ?

ಮನುಷ್ಯನ ನಾಗರೀಕತೆಯ ಭಾಗವಾಗಿ ಬೆಳೆದ ಭಾಷೆ, ಮನುಷ್ಯನ ಸಂವಹನ ಕ್ರಿಯೆಯನ್ನು ಸುಲಭಗೊಳಿಸುವ ಕೆಲಸ ಮಾಡಬೇಕಿತ್ತು। ಆದರೆ ಇಂದು ಶಬ್ದ ಮತ್ತು ಭಾಷೆಯೇ ಸಂವಹನ ಕ್ರಿಯೆಯನ್ನು ಇನ್ನಷ್ಟು ಕ್ಲಿಷ್ಟವನ್ನಾಗಿ ಮಾಡುತ್ತದೆ। ನಾವು ಹೇಳಬೇಕು ಎಂದುಕೊಂಡಿದ್ದು, ನಾವು ಹೇಳಿದ್ದು, ಮತ್ತು ಹೇಳಿದ್ದನ್ನು ಕೇಳಿ ಅರ್ಥಮಾಡಿಕೊಂಡಿದ್ದು, ಇವುಗಳ ನಡುವೆ ಇರುವ ಅಗಾಧ ವ್ಯತ್ಯಾಸ, ಸಂವಹನವನ್ನು ದುರ್ಬಲಗೊಳಿಸುತ್ತದೆ। ಇದೇ ಕಾರಣದಿಂದಾಗಿ ರಾಜಕಾರಣಿಗಳಿಂದ ಸಾಮಾನ್ಯರವರೆಗೆ ಎಲ್ಲರೂ ನಾನು ಹಾಗೆ ಹೇಳಿಲ್ಲ, ಮಾರಾಯ ಅಂತಲೋ, ನಾನು ಹೇಳಿದ್ದರ ಅರ್ಥ ಅದಲ್ಲ ಅಂತಲೋ ಸಮಜಾಯಿಷಿ ನಿಡುವ ಪ್ರಸಂಗ ಹಲವು ಬಾರಿ ಬರುತ್ತದೆ।ಆದರೆ, ಬಹುತೇಕ ಸಂದರ್ಭಗಳಲ್ಲಿ ನಂತರ ನೀಡುವ ಸಮಜಾಯಿಷಿ ಯಾವುದೇ ಪರಿಣಾಮವನ್ನು ಬೀರುವುದಿಲ್ಲ। ಮೊದಲು ಹೇಳಿದ ಅಥವಾ ಹೇಳಿದರೆಂದು ಭಾವಿಸಲಾದ ಮಾತುಗಳೇ ಕೊನೆಯವರೆಗೂ ಉಳಿದು ಬಿಡುತ್ತದೆ।
ನಾನು ಹಲವು ಬಾರಿ ಇಂತಹ ಸಂವಹನ ಸಮಸ್ಯೆಯನ್ನು ಎದುರಿಸಿದ್ದೇನೆ। ನಾನು ಹೇಳಬೇಕೆಂದುಕೊಂಡಿದ್ದು, ಹೇಳಿದರೂ ಅದು ಬೇರೆ ಅರ್ಥವನ್ನು ನೀಡಿ ಪೇಚಾಡಿಕೊಂಡಿದ್ದೇನೆ। ನಾನು ಮಾತನಾಡಿದ ಉದ್ದೇಶ ಇದು ಎಂದು ಸ್ಪಷ್ಟಪಡಿಸಲು ಯತ್ನಿಸಿದ್ದೇನೆ। ಆದರೆ ಹೀಗೆ ಸಮಜಾಯಿಷಿ ನೀಡಿದಾಗಲೆಲ್ಲ, ಈ ನನ್ನ ಮಗ ಹೇಗೆ ಪ್ಲೇಟು ಬದಲಿಸುತ್ತಿದ್ದಾನೆ ನೋಡು ಎಂದು ಮನಸ್ಸಿನಲ್ಲೇ ಬೈದುಕೊಂಡಿದ್ದನ್ನು ನೋಡಿದ್ದೇನೆ। ಆಗೆಲ್ಲ ನನಗೆ ಮೊದಲು ಸಿಟ್ಟು ಬರುವುದು ಭಾಷೆಯ ಮೇಲೆ। ನಂತರ ನಾನು ಸಿಟ್ಟು ಮಾಡಿಕೊಳ್ಳುವುದು ನನ್ನ ಮೇಲೆ। ನಾನು ಭಾಷೆ ಬಳಸುವುದರಲ್ಲಿ ಇನ್ನಷ್ಟು ನಿಸ್ಸೀಮನಾಗಬೇಕಿತ್ತು ಎಂದು ಅಂದುಕೊಂಡು ಸುಮ್ಮನಾಗುವುದು ಸಾಮಾನ್ಯ।
ಆದರೂ ನನಗೆ ಭಾಷೆ ಒಂದು ಸಮಸ್ಯೆ। ಸಂವಹನ ಸಮಸ್ಯೆ। ನಾನು ಹೇಳಿದ್ದನ್ನು ಬೇರೆ ರೀತಿ ಅರ್ಥ ಮಾಡಿಕೊಂಡರಲ್ಲ ಎಂದು ನೋವನ್ನು ಅನುಭವಿಸುವುದು ಇನ್ನೊಂದು ಸಮಸ್ಯೆ। ಒಟ್ಟಿನಲ್ಲಿ, ನಾನು ನೀವು ಮತ್ತು ಸಂವಹನ ಎಲ್ಲವೂ ಸಮಸ್ಯೆಯೇ.

3 comments:

Shree said...

kkgI too keep realizing the value of communication once again recently. Very Meaningful Peace :)

Sir u seem to have some problem with typing, not able to type fullstops? Using Baraha/unicode with typewriter-2 keyboard, or Windows XP built-in Kannada with inscript keyboard, might solve the problem.

ಆಲಾಪಿನಿ said...

eshtondu confident aagi maathaadthiri matte. aameloo ishtondu gondalagalu nimmalli ulidukondirutta?

ಆಲಾಪಿನಿ said...

nimma profile nalli heliddiralla sir, maathanaaduvudakkintha keluvudu ishta antha. parichitharru idannu aragisikolluvudu chooru kashtaane.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...