Monday, October 20, 2008

ಎಲ್ಲರೂ ಹುಚ್ಚರೆ.............

ಸಾರಿಗೆ ಸಚಿವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು !
ಇದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಆರ್. ವಿ. ದೇಶಪಾಂಡೆ ನೀಡಿದ ಹೇಳಿಕೆ. ಈ ಹೇಳಿಕೆಯನ್ನು ನೀಡುವುದಕ್ಕೆ ಕಾರಣಗಳೇನೇ ಇರಲಿ, ಇಂತಹ ಹೇಳಿಕೆ ನೀಡುವ ಸ್ಥಿತಿಯಲ್ಲಿ ರಾಜಕಾರಣ ಇದೆ ಎಂಬುದು ದುಃಖದ ವಿಷಯ. ದೇಶಪಾಂಡೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ತಕ್ಷಣ ಅವರ ಧ್ವನಿ ಬದಲಾಗಿದೆ. ಮಾತಿನಲ್ಲಿ ಗತ್ತು ಕಾಣಿಸಿಕೊಳ್ಳುತ್ತಿದೆ. ಯಾರನ್ನೂ ಎದುರು ಹಾಕಿಕೊಳ್ಳದೇ ಹೊಂದಾಣಿಕೆಯ ರಾಜಕಾರಣ ಮಾಡುತ್ತ ಬಂದವರು ಈಗ ಬದಲಾಗಿದ್ದಾರೆ. ಪ್ರಾಯಶಃ ಅಧಿಕಾರ ತಂದು ಕೊಡುವ ಅಹಂಕಾರ ಇದು.
ಈ ಸಂದರ್ಭದಲ್ಲಿ ನಾವು ಗಾಂಧೀಜಿಯವರನ್ನು ನೆನಪು ಮಾಡಿಕೊಳ್ಲಬೇಕು. ಗಾಂಧಿ ಹೇಳಿದಂತೆ ಇಡೀ ದೇಶ ಕೇಳುತ್ತಿತ್ತು. ಈಗ ಅಸ್ಥಿಪಂಜರವಾಗಿರುವ ಕಾಂಗ್ರೆಸ್ ಅಂದು ಗಾಂಧೀಜಿಯವರ ಒಂದು ಕರೆಗೆ ಮೈಕೊಡ್ಇ ಎದ್ದು ಬಿಡುತ್ತಿತ್ತು. ಗಾಂಧೀಜಿಯವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ನೆಹರೂ ಕೂಡ ಗಾಂಧೀಜಿಯವರಿಗೆ ಹೆದರುತ್ತಿದ್ದರು. ತಮ್ಮ ಎಲ್ಲ ರಂಗು ರಂಗಿನ ಬದುಕನ್ನು ಗಾಂಧೀಜಿಯವರಿಂದ ಮುಚ್ಚಿಡಲು ಯತ್ನ ನಡೆಸುತ್ತಿದ್ದರು. ಗಾಂಧೀಜಿಯವರಿಗೆ ತಾವು ನಾಯಕ ಎಂಬ ಅಹಂಮಿಕೆ ಇರಲಿಲ್ಲ. ಆದರೆ ಹಠ ಇತ್ತು. ಗಾಂಧೀಜಿಯವರ ಇಂತಹ ವ್ಯಕ್ತಿತ್ವ ಕಾಂಗ್ರೆಸ್ ಪಕ್ಷದ ಇತರ ನಾಯಕರ ಅಹಂಮಿಕೆಗೆ ಕಡಿವಾಣ ಹಾಕುತ್ತಿತ್ತು. ಎಲ್ಲ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಮೀರಿ, ತಾತ್ವಿಕ ರಾಜಕಾರಣದಲ್ಲಿ ಒಂದಾಗಿಸುವ ಶಕ್ತಿ ಗಾಂಧೀಜಿಯವರಿಗೆ ಇತ್ತು. ಗಾಂಧಿ ಎಂಬ ಹಠ ಮಾರಿ ಅಜ್ಜ ಒಂದು ಸತ್ಯಾಗ್ರಹದ ಬೆದರಿಕೆಯಿಂದ ಎಲ್ಲರನ್ನೂ ಬಗ್ಗು ಬಡಿಯಬಲ್ಲವರಾಗಿದ್ದರು. ಎಲ್ಲರು ಮಾತು ಕೇಳುವಂತೆ ಮಾಡಬಲ್ಲವರಾಗಿದ್ದರು.
ಗಾಂಧೀಜಿ ನಿಧನರಾದ ಮೇಲೆ ಕಾಂಗ್ರೆಸ್ ರೂಪ ಬದಲಾಯಿತು. ನೆಹರೂ ಅವರ ಟೋಪಿ ಮಿಂಚತೊಡಗಿತು. ನೆಹರೂ ಶರ್ಟ್ ಕಾಂಗ್ರೆಸ್ ಪಕ್ಷದ ಎಲ್ಲ ಹುಳುಕುಗಳಿಗೆ, ಸಿಂಬಾಲ್ ಆಯಿತು. ಆಗಲೇ ಈ ಪಕ್ಷ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿತ್ತು.
ಇಂತಹ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಜೀವ ತುಂಬುವಂತೆ ಮಾಡಿದವರು ಶ್ರೀಮತಿ ಇಂದಿರಾ ಗಾಂಧಿ. ತನ್ನ ತಂದೆಯ ಗರಡಿಯಲ್ಲೇ ಬೆಳೆದ ಇಂದಿರಾ ಗಾಂಧಿ ಅವರಿಗೆ ಗಾಂಧೀಜಿ ಬಾಲ್ಯದ ನೆನಪು ಮಾತ್ರ. ಅವರಿಗೆ ಗಾಂಧೀ ಪ್ರಣೀತ ಆರ್ಥಿಕ ನೀತಿಯಾಗಲಿ, ಅವರ ಸತ್ಯ ಮತ್ತು ಅಹಿಂಸೆಯ ಬೋಧನೆಯಾಗಲಿ ನಗೆಪಾಟಲಿನ ವಿಷಯವಾಗಿತ್ತು. ನೆಹರೂ ಅವರು ಕುಡಿಯಾದ ಇಂದಿರಾ ಒಬ್ಬ ಒಳ್ಲೆಯ ಸೆಲ್ಸಮನ್. ಅವರು ಕಾಂಗ್ರೆಸ್ ಪಕ್ಷವನ್ನು ಚುನಾವಣಾ ರಾಜಕೀಯದಲ್ಲಿ ಒಂದುಅತ್ಯುತ್ತಮ ಪ್ರೊಡಕ್ಟ್ ಆಗಿ ಬದಲಿಸಿಬಿಟ್ಟರು. ಹಾಗೆ ಜನರಲ್ಲಿ ಕನಸುಗಳನ್ನು ಬಿತ್ತಿ ಅಧಿಕಾರವನ್ನು ಗಟ್ಟಿಯಾಗಿ ಹಿಡಿದುಕೊಂಡರು.
ಶ್ರೀಮತಿ ಇಂದಿರಾ ಗಾಂಧಿ ಅವರ ನಂತರ ಬಂದ ಗಾಂಧಿಗಳಿಗೆ ಈ ಸೆಲ್ಸಮನ್ ಶಿಪ್ ಕೂಡ ಇರಲಿಲ್ಲ. ಗಾಂಧಿಯನ್ನು ಉದ್ದೇಶಪೂರ್ವಕವಾಗಿ ಮರೆತ ಕಾಂಗ್ರೆಸ್ಗೆ ಈಗ ಆತ್ಮ ಇಲ್ಲ. ಇದು ಕೇವಲ ಅಸ್ಥಿಪಂಜರ ಮಾತ್ರ. ಈ ಅಸ್ಥಿಪಂಜರವನ್ನು ಹಿಡಿದುಕೊಂಡು ಭೂತ ನೃತ್ಯ ಮಾಡುವ ನಾಯಕರ ಪಡೆ ಇದೆ. ಇವರಿಗೆ ಯಾವ ವಿಚಾರದಲ್ಲಿಯೂ ಸ್ಪಷ್ಟತೆ ಇಲ್ಲ. ಸೈದ್ಧಾಂತಿಕ ನೆಲಗಟ್ಟೂ ಇಲ್ಲ.
ಗಾಂಧೀಜಿಯವರನ್ನು ಟೀಕಿಸಲು ನೂರು ಕಾರಣಗಳು ಇರಬಹುದು. ಆದರೆ ಗಾಂಧೀಜಿಯವರನ್ನು ಮೆಚ್ಚಿಕೊಳ್ಳಲು ಸಾವಿರ ಕಾರಣಗಳಿವೆ. ಒಂದು ದೇಶದ ಆತ್ಮವೇ ಆಗಿದ್ದ ಗಾಂಧಿ ಇಂದಿಗೂ ಒಂದು ವಿಸ್ಮಯ. ಆದರೆ ಇತ್ತೀಚಿನ ಗಾಂಧಿಗಳನ್ನು ನೋಡಿ. ಇವರು ದೇಶವನ್ನು ತಿಳಿದುಕೊಳ್ಳಲು ಡಿಸ್ಕವರ್ ಮಾಡುತ್ತಾರೆ. ತಮ್ಮ ಭಟ್ಟಂಗಿಗಳ ಜೊತೆ ಊರು ಸುತ್ತುತ್ತಾರೆ. ಒಬ್ಬ ರಾಜಕಾರಣಿಯಾದವನಿಗೆ ದೇಶವನ್ನು ತಿಳಿದುಕೊಳ್ಲುವುದು ಪ್ರತಿ ನಿಮಿಷದ ಕೆಲಸವಾಗಬೇಕು. ಯಾವುದೋ ಪ್ರವಾಸದ ಮೂಲಕ ದೇಶವನ್ನು ತಿಳಿದುಕೊಳ್ಳುವುದಲ್ಲ.
ಈಗ ಮೊದಲ ವಿಚಾರಕ್ಕೆ ಬರುತ್ತೇನೆ. ಸಚಿವ ಅಶೋಕ್ ಹುಚ್ಚಾಸ್ಪತ್ರೆ ಸೇರುವ ಸ್ಥಿತಿಯಲ್ಲಿ ಇದ್ದಾರೋ ಇಲ್ಲವೋ ನನಗೆ ತಿಳಿಯದು. ನನಗೆ ಅನ್ನಿಸುವ ಹಾಗೆ ಎಲ್ಲ ರಾಜಕಾರಣಿಗಳು ಹುಚ್ಚಾಸ್ಪತ್ರೆ ಸೇರಿದರೆ ಒಳ್ಳೆಯದು ಎಂದು ಮಾತ್ರ ನಾನು ಹೇಳಬಲ್ಲೆ. ಆದರೆ ಇವರು ಅವರನ್ನು ಹುಚ್ಚ ಅನ್ನುತ್ತಾರೆ, ಅವರು ಇವರನ್ನು ಹುಚ್ಚ ಅನ್ನುತ್ತಾರೆ. ಇದರಿಂದ ನಮಗಾಗುವ ಸತ್ಯ ದರ್ಶನ ಎಂದರೆ ಇವರೆಲ್ಲರೂ ಹುಚ್ಚರು ಎಂದು ಮಾತ್ರ. ಇಂತಹ ಹುಚ್ಚರು ನಮ್ಮ ರಾಜಕಾರಣಿಗಳು ಎಂಬ ಬೇಸರ ಮಾತ್ರ ನಮ್ಮದು.

Saturday, October 11, 2008

ಯಡಿಯೂರಪ್ಪ ಬಗ್ಗೆ ಏನು ಅನ್ನಿಸುತ್ತದೆ ?

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಹೇಗೆ ?
ಭಾರತೀಯ ಜನತಾ ಪಾರ್ಟಿಯ ನಾಯಕರೊಬ್ಬರು ಖಾಸಗಿಯಾಗಿ ಈ ಪ್ರಶ್ನೆ ಕೇಳಿದರು. ನನಗೆ ತಕ್ಷಣ ಉತ್ತರ ಹೇಳಲು ಸಾಧ್ಯವಾಗಲಿಲ್ಲ. ಯಾಕೆಂದರೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ನಾನು ಕಲ್ಪಿಸಿಕೊಂಡೇ ಇರಲಿಲ್ಲ. ಈ ಪ್ರಶ್ನೆಯ ಹಿನ್ನೆಲೆಯಲ್ಲಿ ನಾನು ಯಡಿಯೂರಪ್ಪ ಅವರ ಬಗ್ಗೆ ಯೋಚಿಸಿತೊಡಗಿದೆ.
ನಾನು ಅವರನ್ನು ಮೊದಲು ನೋಡಿದ್ದು ೧೯೮೩ ರಲ್ಲಿ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಬಂದ ಅವರು ಮೊದ ಮೊದಲು ವಿಧಾನ ಸಭೆಯಲ್ಲಿ ಮಾತನಾಡುತ್ತಿರಲಿಲ್ಲ. ಹಿರಿಯ ನಾಯಕರ ನೆರಳಿನಂತೆ ಓಡಾಡಿಕೊಂಡಿದ್ದ ಅವರು ಮಾತನಾಡಿದರೆ ಅದು ಅರಚಾಟದಂತೆ, ಕೇಳುತ್ತಿತ್ತು. ಯಾವುದರ ಬಗ್ಗೆಯೂ ಆಳವಾಗಿ ಚಿಂತಿಸದೇ ಆ ಕ್ಷಣದಲ್ಲಿ ತಮಗೆ ಅನ್ನಿಸಿದ್ದನ್ನು, ತಮ್ಮ ಭಾಷೆಯಲ್ಲಿ ಹೇಳಿಬಿಡುತ್ತಿದ್ದರು. ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶದಿಂದ ಬಂದವರು ಹೀಗೆ ಇರುತ್ತಾರೆ, ಅವರಿಗೆ ತಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳಲು ಬರುವುದಿಲ್ಲ, ಯಡಿಯೂರಪ್ಪ ಕೂಡ ಹಾಗೆ ಎಂದು ನಾನು ಅಂದುಕೊಂಡಿದ್ದೆ. ಯಡಿಯೂರಪ್ಪನವರ ಸಿಟ್ಟು ಪ್ರಾಮಾಣಿಕ ಸಿಟ್ಟು ಎಂಬ ಭಾವನೆ ಕೂಡ ಕೆಲ ಕಾಲ ನನಗಿತ್ತು. ಆದರೆ ಅವರು ಪ್ರಾಮಾಣಿಕರಲ್ಲ ಎಂಬುದು ನನಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಯಾಕೆಂದರೆ ದಿನದಿಂದ ದಿನಕ್ಕೆ ಅವರ ಆಸ್ತಿ ಹೆಚ್ಚುತ್ತಿತ್ತು. ಶಿವಮೊಗ್ಗದಲ್ಲಿ ಅವರು ಸಂಪಾದಿಸುತ್ತಿದ್ದ ಆಸ್ತಿಯ ಬಗ್ಗೆ ಮಾಹಿತಿ ಬರುತ್ತಿತ್ತು. ಇದನ್ನೆಲ್ಲ ನೋಡುವಾಗ ಅವರ ಸಿಟ್ಟು ಪ್ರಾಮಾಣಿಕವಾದುದಲ್ಲ ಎಂದು ಅನ್ನಿಸುತ್ತಿತ್ತು.
ರಾಜ್ಯ ಬಿಜೆಪಿಯ ಬಹುಮುಖ್ಯ ನಾಯಕರಾಗಿ ಯಡಿಯೂರಪ್ಪ ಆವರ್ಭಿವಿಸಿದ ಮೇಲೆ, ಪಕ್ಷಕ್ಕೆ ರೈತ ಸಮುದಾಯದ ಹೊಸ ಬೇಸ್ ನೀಡುವುದಕ್ಕೆ ಯತ್ನ ನಡೆಸಿದರು. ರೈತರ ಪರವಾಗಿ ಇರುವ ನನ್ನಂತವರಿಗೆ ಬಹಳ ಕಾಲ ಇದು ಸ್ವಾಗತಾರ್ಹ ಎಂದು ಅನ್ನಿಸುತ್ತಿತ್ತು. ಆದರೆ ರೈತರ ಬಗೆಗಿನ ಅವರ ಕಳಕಳಿ ಕೂಡ ರಸ್ತೆಯ ಬದಿಯ ಅರಚಾಟದಂತೆ ಕೇಳತೊಡಗಿತು. ಅವರ ಬಳಿ ರೈತರ ಸಮಸ್ಯೆಗಳಿಗೆ ಪರಿಹಾರ ಇರಲಿಲ್ಲ. ರೈತ ಬೆಳೆದ ಬೆಳೆಗೆ ಕನಿಷ್ಟ ವೈಜ್ನಾನಿಕ ಬೆಲೆ ಸಿಗಬೇಕು ಎಂದು ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಅವರಿದ್ದರು. ಹಾಗೆ ಅವರು ಮಂಡಿಸಿದ ಮುಂಗಡ ಪತ್ರ ಕೂಡ ಸಾಲಮನ್ನಾದಂತಹ ಯೋಜನೆಗೆ ಸೀಮಿತವಾಗಿಬಿಟ್ಟಿತು.
ಯಡಿಯೂರಪ್ಪ ಅವರ ರೈತ ಪರ ಕಾಳಜಿಯನ್ನು ಪ್ರಶ್ನಿಸದಿದ್ದರೂ ಅವರ ಬಳಿ ಘೋಷಣೆಗಳನ್ನು ಬಿಟ್ಟು ಬೇರೆನೂ ಇಲ್ಲ ಎಂದು ಅನ್ನಿಸತೊದಗಿದ್ದು ಈ ಕಾರಣಗಳಿಂದಾಗಿ. ಜೊತೆಗೆ ಅವರಲ್ಲಿ ಇದ್ದ ಹುಂಬತನ.
ಯಡಿಯೂರಪ್ಪ ಅವರು ಎಂದು ಮನಸ್ಸು ಬಿಚ್ಚಿ ನಕ್ಕಿದ್ದನ್ನು ನಾನು ನೋಡಿಲ್ಲ. ಯಾವ ವ್ಯಕ್ತಿ ನಗುವಿನ ವಿರೋಧಿಯಾಗಿರುತ್ತಾನೋ ಆತ ಸರ್ವಾಧಿಕಾರಿಯಾಗಿರುತ್ತಾನೆ. ಆತನಿಗೆ ಬೇರೆಯವರ ಮಾತು ಕೇಳುವ ಕನಿಷ್ಥ ಸೌಜನ್ಯ ಕೂಡ ಇರುವುದಿಲ್ಲ.
ಯಡಿಯೂರಪ್ಪ ಮುಖ್ಯಮಂತ್ರಿಯಾದ ತಕ್ಷಣ ಮಾಡಿದ ಮೊದಲ ಕೆಲಸ ಅಂದರೆ ಮಠಗಳಿಗೆ ಬೇಟಿ ನೀಡಿದ್ದು, ಸ್ವಾಮಿಗಳ ಕಾಲಿಗೆ ಬಿದ್ದಿದ್ದು. ಈ ಮೂಲಕ ನಾಡಿನ ಜನರಿಗೆ ಅವರು ನೀಡಿದ ಸಂದೇಶ ಏನು ? ಇದೆಲ್ಲ ಯಾಕೆ ಮುಖ್ಯಮಂತ್ರಿಗಳಿಗೆ ಅರ್ಥವಾಗುವುದಿಲ್ಲ ?
ಈ ಕೆಲವು ಮಾತುಗಳನ್ನು ನಾನು ಹಿರಿಯ ಬಿಜೆಪಿ ನಾಯಕರಿಗೆ ಹೇಳಿದೆ.
ಇದಾದ ಮೇಲೆ ನನ್ನ ಸ್ನೇಹಿತರೊಬ್ಬರು ನೀವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಬೇಕು, ನಿಮಗೆ ಅನ್ನಿಸಿದ್ದನ್ನು ಅವರಿಗೆ ಹೇಳಬೇಕು ಎಂದರು. ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದಕ್ಕೆ ನನ್ನ ಅಭ್ಯಂತರ ಇರಲಿಲ್ಲ.
ನಾನು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದಾಗ ಹೀಗೆ ಹೇಳಿದೆ;
ಸಾರ್ ನನಗೆ ನಿಮ್ಮಿಂದ ಏನೂ ಆಗಬೇಕಿಲ್ಲ. ನೀವು ಇಚ್ಚೆ ಪಟ್ಟಿದ್ದರಿಂದ ನಿಮ್ಮನ್ನು ನೋಡುತ್ತಿದ್ದೇನೆ. ನೀವು ಕರ್ನಾಟಕದ ಮುಖ್ಯಮಂತ್ರಿ ಎಂಬುದನ್ನು ಯಾವ ಸಂದರ್ಭದಲ್ಲಿ ಮರೆಯಬೇಡಿ. ನೀವು ಬಿಜೆಪಿ, ಸಂಘ ಪರಿವಾರದ ಮುಖ್ಯಮಂತ್ರಿಯಲ್ಲ. ನಿಮ್ಮ ಮನಸ್ಸಿನಲ್ಲಿ ಎಲ್ಲಿಯವರೆಗೆ ಬಿಜೆಪಿ ಮುಖ್ಯಮಂತ್ರಿ ಎಂಬುದು ಇರುತ್ತದೆಯೋ ಅಲ್ಲಿಯವರೆಗೆ ನೀವು ಈ ನಾಡಿನ ಮುಖ್ಯಮಂತ್ರಿಯಾಗುವುದಿಲ್ಲ. ಆದರೆ ದುರ್ದೈವ ಎಂದರೆ ಇದುವರೆಗೆ ನೀವು ಕರ್ನಾಟಕದ ಮುಖ್ಯಮಂತ್ರಿಯಂತೆ ವರ್ತಿಸಿಲ್ಲ.
ಒಬ್ಬ ಮುಖ್ಯಮಂತ್ರಿಯಾದವನು ರಾಜನೀತಿಜ್ನನಾಗಿರಬೇಕು. ಆತ ಸ್ಟೇಟ್ಸ್ ಮನ್ ಆಗಿರಬೇಕು. ಆದರೆ ನೀವು ಪಂಚಾಯಿತಿ ಮಟ್ಟದ ರಾಜಕಾರಣಿಯಂತೆ ವರ್ತಿಸುತ್ತಿದ್ದೀರಿ ಎಂದು ಹೇಳಲು ಬೇಸರವಾಗುತ್ತಿದೆ.
ನನಗೆ ನಿಮ್ಮ ಮುಖದಲ್ಲಿ ನಗುವನ್ನು ನೋಡುವುದು ಇಷ್ಟ. ನೀವು ನಗುತ್ತಿದ್ದರೆ ನಿಮ್ಮ ಮನಸ್ಸು ಹಗುರಾಗುತ್ತದೆ. ನಿಮ್ಮ ಮನಸ್ಸು ಹಗುರಾದರೆ ನೀವು ಪ್ರಾಮಾಣಿಕವಾಗಿ ಯೋಚಿಸಬಲ್ಲಿರಿ. ನೀವು ಪ್ರಾಮಾಣಿಕವಾಗಿ ಯೋಚಿಸಿದರೆ ನಾಡಿಗೆ ಒಳ್ಳೆಯದಾಗುತ್ತದೆ.
ಯಡಿಯೂರಪ್ಪ ನಾನು ಹೇಳಿದ್ದನ್ನು ಕೇಳಿಸಿಕೊಂಡರು. ನಾನು ಹೇಳಿದ್ದು ಅವರಿಗೆ ಎಷ್ಟು ಅರ್ಥವಾಯಿತೋ ತಿಳಿಯಲಿಲ್ಲ.

Tuesday, October 7, 2008

ಯುವ ಪತ್ರಿಕೋದ್ಯಮಿಗಳಿಗೆ..........

ಬಹಳ ದಿನಗಳಿಂದ ಏನನ್ನೂ ಬರೆದಿಲ್ಲ. ಬರೆಯಬೇಕು ಎನ್ನುವ ಒತ್ತಡ ಇರಲಿಲ್ಲ ಎಂದೇನೂ ಅಲ್ಲ. ಕೆಲಸದ ಗಡಿಬಿಡಿಯಲ್ಲಿ ಬರೆಯಬೇಕು ಎಂದರು ಬರೆಯಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ನಾನು ವಿಸಿಟ್ ಮಾಡಿದ ಹಲವು ಬ್ಲಾಗ್ ಗಳಲ್ಲಿ ನಾನು ಕೆಲಸ ಮಾಡುವ ಮಾಧ್ಯಮದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುವುದನ್ನು ಗಮನಿಸಿದೆ. ಖುಷಿ ಅನ್ನಿಸಿತು.
ಯಾವುದೋ ಒಂದು ಬ್ಲಾಗ್ ನಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸಿದ್ದನ್ನು ನನ್ನ ಹುಡುಗರು ಗಮನಕ್ಕೆ ತಂದರು. ಅದರಲ್ಲಿ ಒಂದು ಬ್ಲಾಗ್ ನಲ್ಲಿ, ಅದು ಒಬ್ಬ ಪತ್ರಕರ್ತರು ಬರೆದಿದ್ದು, ನನ್ನ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ನನ್ನನ್ನು ಏಕವಚನದಲ್ಲಿ ಸಂಬೋಧಿಸಿ ನಾನು ಸಹೋದ್ಯೋಗಿಗಳಿಗೆ ಕಿರುಕುಳ ನೀಡುತ್ತಿದ್ದೇನೆ ಎಂದು ಆರೋಪಿಸಲಾಗಿತ್ತು. ಇದನ್ನು ನೋಡಿ ನಕ್ಕು ಸುಮ್ಮನಾಗಬೇಕು ಎಂದುಕೊಂಡೆ. ಆದರೆ ಇವತ್ತಿನ ಪತ್ರಿಕೋದ್ಯಮಿಗಳ ಬಗ್ಗೆ ನನಗಿರುವ ಪ್ರೀತಿ ಮತ್ತು ಕನಿಕರ ನಾಲ್ಕು ಸಾಲು ಬರೆಯುವಂತೆ ಮಾಡಿತು.
ನಾವೆಲ್ಲ ತುರ್ತು ಪರಿಸ್ಥಿತಿಯ ನಂತರ ಪತ್ರಿಕೋದ್ಯಮಕ್ಕೆ ಬಂದವರು. ಪತ್ರಿಕೋದ್ಯಮವನ್ನು ಅತಿಯಾಗಿ ಪ್ರೀತಿಸಿ ಅದನ್ನು ಅಪ್ಪಿಕೊಂಡವರು. ಜೊತೆಗೆ ನಾವು ಅಂದರೆ ನನ್ನ ತಲೆಮಾರಿನವರು ಪತ್ರಿಕೋದ್ಯಮಕ್ಕೆ ಬರುವಾಗ ಕರ್ನಾಟಕದಲ್ಲಿ ಮೂರು ಜನಪರ ಚಳವಳಿಗಳಿದ್ದವು. ಆ ಚಳವಳಿಯ ಜೊತೆಗೆ ನಾವು ಬೆಳೆದೆವು, ಬೆಳೆಯುವುದಕ್ಕೆ ಯತ್ನ ಮಾಡಿದೆವು. ಜೊತೆಗೆ ನನ್ನಂತವರನ್ನು ಬೆಳೆಸಲು ಬುದ್ದಿ ಹೇಳಲು ಖಾದ್ರಿ ಶಾಮಣ್ಣ, ವೈ ಎನ್ ಕೆ ಲಂಕೇಶ್ ಅವರಂತಹ ಸಂಪಾದಕರಿದ್ದರು. ಅವರು ಬೈದು ಬುದ್ದಿ ಹೇಳಿ ಬೆಳೆಸುತ್ತಿದ್ದರು. ಇಂತಹ ಸಂಪಾದಕರ ಜೊತೆ ಕೆಲಸ ಮಾಡಿ, ಬೈಸಿಕೊಂಡು ಪತ್ರಿಕೋದ್ಯಮದ ಆಳ ಆಗಲವನ್ನು ತಿಳಿದುಕೊಳ್ಳಲು ನಾವು ಯತ್ನ ಮಾಡಿದೆವು. ಈ ಯತ್ನ ಈಗಲೂ ಮುಂದುವರಿದಿದೆ. ಇಂತವರ ಸಹವಾಸ ನನ್ನಂತವರಿಗೆ ನಿಷ್ಠುರ ಮನಸ್ಥಿತಿಯನ್ನು ಬೆಳೆಸಿತು. ಸತ್ಯವನ್ನು ಸತ್ಯ ಎಂದು ಹೇಳುವ ಎದೆಗಾರಿಕೆ ಬರುವಂತೆ ಮಾಡಿತು. ಯಾವುದೇ ಸಂದರ್ಭದಲ್ಲಿ ಭ್ರಷ್ಠರಾಗದಂತೆ ಕಾದಿದ್ದು ಇಂತವರ ಜೊತೆ ಕೆಲಸ ಮಾಡಿದ ಅನುಭವ,
ಇಂದಿನ ಪತ್ರಿಕೋದ್ಯಮಿಗಳಿಗೆ ಇಂತಹ ಅನುಭವ ಇರುವುದು ಸಾಧ್ಯವಿಲ್ಲ. ಇವರೆಲ್ಲ ಜಾಗತೀಕರಣದ ನಂತರ ಪತ್ರಿಕೋದ್ಯಮಕ್ಕೆ ಬಂದವರು. ಪತ್ರಿಕೋದ್ಯಮ ಉಳಿದೆಲ್ಲ ಉದ್ಯಮದಂತೆ ಉದ್ಯಮವಾಗಿ ಪರಿವರ್ತನೆಗೊಂಡಿದ್ದು ನಮಗೆ ಆಫಾತವನ್ನು ಉಂಟು ಮಾಡಿದರೆ, ಹೊಸ ತಲೆ ಮಾರಿನ ಪತ್ರಿಕೋದ್ಯಮಿಗಳಿಗೆ ಇದು ಒಂದು ಸಾಮಾನ್ಯವಾದ ಘಟನೆ. ಜೊತೆಗೆ ಅವರಿಗೆ ಮಾರ್ಗದರ್ಶನ ಮಾಡುವ ಸಂಪಾದಕರೂ ಇಲ್ಲ. ಇರುವ ಬಹುತೇಕ ಸಂಪಾದಕರು, ಪಾರ್ಟ್ ಟೈಮ್ ರಾಜಕಾರಣಿಗಳು. ಜೊತೆಗೆ ಆಡಳಿತ ವರ್ಗ, ರಾಜಕಾರಣಿಗಳು ಮತ್ತು ಉದ್ಯೋಗಿಗಳ ನಡುವೆ ಮಧ್ಯವರ್ತಿಗಳಾಗಿ ಕೆಲಸ ಮಾಡುವವರು. ಇವರ ಗರಡಿಯಲ್ಲಿ ಬೆಳೆಯುತ್ತಿರುವವರು ನಿಜವಾದ ಅರ್ಥದಲ್ಲಿ ಪತ್ರಿಕೋದ್ಯಮಿಗಳಾಗುವುದಿಲ್ಲ. ಕೇವಲ ಏಜೆಂಟರುಗಳಾಗುತ್ತಾರೆ. ಇಂತಹ ಏಜೆಂಟರುಗಳಿಗೆ ಪತ್ರಿಕೋದ್ಯಮದ ಇತಿಹಾಸ ಬದ್ಧತೆ ಇರುವುದಿಲ್ಲ. ತಾವು ಬಳಸುವ ಭಾಷೆಯ ಬಗ್ಗೆ ಜ್ನಾನ ಇರುವುದಿಲ್ಲ.
ಇಂದು ಮಾಧ್ಯಮದಲ್ಲಿ ಇರುವವರಲ್ಲಿ ಬಹಳಷ್ಟು ಜನ ಮಾಧ್ಯಮದ ಗ್ಲಾಮರಿನಿಂದ ಬಂದವರು. ಇವರಿಗ್ಎ ಹೇಳುವುದು ಇಷ್ಟೇ. ಸ್ವಲ್ಪ ಓದಿ, ಆಲೋಚನೆ ಮಾಡಿ. ಆರೋಗ್ಯ ಪೂರ್ಣವಾದ ಮನಸ್ಥಿತಿಯನ್ನು ರೂಪಿಸಿಕೊಳ್ಳಲು ಯತ್ನ ನಡೆಸಿ. ನಿಮ್ಮ ಮನಸ್ಸು ಆರೋಗ್ಯಪೂರ್ಣವಾಗಿರದಿದ್ದರೆ, ಬರವಣಿಗೆ ಆರೋಗ್ಯಪೂರ್ಣವಾಗಿರುವುದಿಲ್ಲ. ಬರವಣಿಗೆ ಆರೋಗ್ಯಪೂರ್ಣವಾಗಿರದಿದ್ದರೆ ಅದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿಬಿಡುತ್ತದೆ. ಜೊತೆಗೆ ಕನಿಷ್ಠ ಮನುಷ್ಯರಿಗೆ ಮನುಷ್ಯ ನೀಡುವ ಕನಿಷ್ಠ ಗೌರವ ನೀಡುವುದನ್ನು ಕಲಿತುಕೊಳ್ಳಿ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...