Tuesday, December 30, 2008

ಇವರು ನಮಗೆ ಬೇಕಾ ?

ರಾಜ್ಯ ವಿಧಾನ ಸಭೆಯ ಎಂಟು ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಭಾರತೀಯ ಜನತಾ ಪಾರ್ಟಿ ಎಂಟು ಕ್ಷೇತ್ರಗಳಲ್ಲಿ ಜಯಬೇರಿ ಭಾರಿಸಿದೆ. ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಗೆದ್ದಿದೆ. ಕಾಂಗ್ರೆಸ್ ಸಂಪೂರ್ಣವಾಗ್ತಿ ನೆಲ ಕಚ್ಚಿದೆ. ಈ ಫಲಿತಾಂಶ ಅನಿರೀಕ್ಷಿತವೇನಲ್ಲ. ಫಲಿತಾಂಶ ಬರುವುದಕ್ಕೆ ಮೊದಲು ಈ ಫಲಿತಾಂಶವನ್ನು ಸ್ವೀಕರಿಸಲು ರಾಜಕೀಯ ಪಕ್ಷಗಳು ಮಾನಸಿಕವಾಗಿ ಸಿದ್ಧವಾಗಿದ್ದವು. ಯಾಕೆಂದರೆ ಹಣ ಹೆಂಡ ಮುಖ್ಯವಾದ ಚುನಾವಣೆಯಲ್ಲಿ ಸಿದ್ಧಾಂತ ಮತ್ತು ನಂಬಿಕೆಗಳಿಗೆ ಯಾವ ಬೆಲೆಯೂ ಇರುವುದಿಲ್ಲ.

ಹಿರಿಯ ರಾಜಕೀಯ ನಾಯಕರೊಬ್ಬರು ಈ ಚುನಾವಣೆಯಲ್ಲಾದ ವೆಚ್ಚದ ಬಗ್ಗೆ ಮಾತನಾಡುತ್ತಿದ್ದರು. ಅವರ ಪ್ರಕಾರ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಯೂಬ್ಬ ವೆಚ್ಚ ಮಾಡಿದ ಹಣ ಸುಮಾರು ೨೦ ಕೋಟಿ ! ಈ ೨೦ ಕೋಟಿ ಹಣ ಎಲ್ಲಿಂದ ಬಂತು ? ಇದೇನು ಬೆವರು ಸುರಿದ ದುಡಿದ ಹಣವಾ ? ಸಾಧ್ಯವೇ ಇಲ್ಲ. ಮೋಸ, ವಂಚನೆ ಇಲ್ಲದೇ ಈ ಇಷ್ಟು ಹಣವನ್ನು ವೆಚ್ಚ ಮಾಡುವುದು ಸಾಧ್ಯವಿಲ್ಲ. ಯಾರೋ ಕೋಟ್ಯಾಧಿಪತಿ ಅಭ್ಯರ್ಥಿ ಪರವಾಗಿ ವೆಚ್ಚ ಮಾಡಿದ ಎಂದುಕೊಳ್ಳೋಣ. ಆತನೇನು ಯಾವುದೇ ಲಾಭವಿಲ್ಲದೇ ಹಣವನ್ನು ವ್ಯಯಿಸುತ್ತಾನಾ ? ಇಲ್ಲ. ರಾಜಕಾರಣಿಗಳ ಪರವಾಗಿ ಹಣ ವೆಚ್ಚ ಮಾಡುವವರಿಗೆ ಇದೊಂದು ಬಂಡವಾಳ ಹೂಡಿಕೆ ಅಷ್ಟೇ. ತಾವು ಫೈನಾನ್ಸ್ ಮಾಡಿದ ಅಭ್ಯರ್ಥಿ ಆರಿಸಿ ಬಂದ ಮೇಲೆ ನೂರು ಪಟ್ಟು ಹಣ ಬಾಚಲು ಅವಕಾಶ ಇರುತ್ತದೇ ಎಂಬ ಕಾರಣಕ್ಕೆ ಅವರು ಹಣ ಹೂಡಿಕೆ ಮಾಡುವುದು ಸ್ಪಷ್ಟ.

ಈ ಬಾರಿ ಆರಿಸಿ ಬಂದ ಅಭ್ಯರ್ಥಿಗಳ ಮುಖವನ್ನು ಒಮ್ಮೇ ನೋಡಿ. ಆಗ ನಿಮಗೆ ಸತ್ಯ ದರ್ಶನವಾಗುತ್ತದೆ. ವಸಂತ ಸ್ನೋಟಿಕರ್ ಮಗ ಆನಂದ ಅಸ್ನೋಟಿಕರ್, ವಿಶ್ವನಾಥ್ ಕತ್ತಿ ಮಗ ಉಮೇಶ್ ಕತ್ತಿ, ಗೋಕಾಕದ ಸಾವುಕಾರ ಜಾರಕೀಹೊಳಿ, ದೇವೇಗೌಡರ ಸೊಸೆ ಅನಿತಾ ಕುಮಾರಸ್ವಾಮಿ, ಸಿದ್ಧರಾಜು ಹೆಂಡತಿ ಕಲ್ಪನಾ ಸಿದ್ಧರಾಜು, ಇವರೆಲ್ಲ ಉಪ ಚುನಾವಣೆಯಲ್ಲಿ ಅಯ್ಕೆಯಾದವರು. ಇವರಲ್ಲಿ ಕೆಲವರಿ ಹಣ ಮಾತ್ರ ಬಂಡವಾಳ. ಇನ್ನೂ ಕೆಲವರಿಗೆ ಹಣದ ಜೊತೆ ಕುಟುಂಬವೇ ಬಂಡವಾಳ.

ಇದನ್ನೆಲ್ಲ ನೋಡಿದರೆ ಭಾರತೀಯ ಜನತಂತ್ರ ವ್ಯವಸ್ಥೆಯ ಬಗ್ಗೆ ಅಪನಂಬಿಕೆ ಬರುವುದಿಲ್ಲವಾ ? ಈಗ ಪಕ್ಷಗಳತ್ತ ನೋಡಿ. ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನೆಹರೂ ಕುಟುಂಬದ ಮೇಲೆ ಅವಲಂಬಿತವಾಗಿದೆ. ಈ ಪಕ್ಷದಲ್ಲಿ ಇರುವವರು ಬಾಲಬಡುಕರು, ಭಟ್ಟಂಗಿಗಳು. ಈ ಪಕ್ಷದ ಬಹುತೇಕ ನಾಯಕರಿಗೆ ಸ್ವಂತ ವ್ಯಕ್ತಿತ್ವವೇ ಇಲ್ಲ. ರಾಜ್ಯದ ಬಹುತೇಕ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಅವರ ಮನೆಯಲ್ಲಿರುವ ಮನುಷ್ಯರ ಅಥವಾ ಸಾಕು ಪ್ರಾಣಿಯ ದರ್ಶನ ಸಿಕ್ಕರೂ ಸಾಕು ಎಂದು ಕಾಯುತ್ತಿರುತ್ತಾರೆ. ಇಡೀ ಪಕ್ಷ ಸೋನಿಯಾ ನಿವಾಸದಲ್ಲಿ ಕಾಲು ಮುರಿದುಕೊಂಡು ಬಿದ್ದಿದೆ.
ಇನ್ನು ಜೆಡಿಎಸ್. ಇದನ್ನು ಪಕ್ಷ ಎನ್ನಬೇಕೋ ಕುಟುಂಬ ಎನ್ನಬೇಕೋ ಅರ್ಥವಾಗುವುದಿಲ್ಲ. ದೇವೇಗೌಡರ ಮಟ್ಟಿಗಂತೂ ಪಕ್ಷ ಬೇರೆ ಅಲ್ಲ ಕುಟುಂಬ ಬೇರೆ ಅಲ್ಲ. ಕುಮಾರಸ್ವಾಮಿ ಅವರಿಗೆ ತಮ್ಮ ಹೆಂಡತಿಯನ್ನು ಚುನಾವಣಾ ಕಣಕ್ಕೆ ಇಳಿಸುವುದು ಒಂದುಸ್ಸ್ಟ್ರಾಟಜಿ ಮಾತ್ರ. ಒಂದು ರಾಜಕೀಯ ಪಕ್ಷ ಒಂದು ಕುಟುಂಬದ ಆಸ್ತಿಯಲ್ಲ ಎಂಬ ಸಾಮಾನ್ಯ ಜ್ನಾನ ಕೂಡ ಅವರಿಗೆ ಇದ್ದಂತಿಲ್ಲ.
ಬಿಜೆಪಿ ಎಂಬ ಪಕ್ಷ. ಇದರ ನಾಯಕರಾದ ಯಡಿಯೂರಪ್ಪ. ತಮ್ಮ ಪಕ್ಷದ ತತ್ವ ಸಿದ್ದಾಂತ ನಂಬಿದವರು ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಹೇಳುತ್ತಾರೆ, ಆದರೆ, ಚೆನ್ನಿಗಪ್ಪ, ಆನಂದ್ ಅಸ್ಣೋಟಿಕರ್ ಮೊದಲಾದವರನ್ನು ಪಕ್ಷಕ್ಕೆ ತೆಗೆದುಕೊಳ್ಳುವಾಗ ಕನಿಷ್ಠ ನಾಚಿಕೆ ಕೂಡ ಆಗುವುದಿಲ್ಲ. ಇವರೆಲ್ಲ ನಿಮ್ಮ ಪಕ್ಷದ ತತ್ವ ಸಿದ್ದಾಂತವನ್ನು ನಂಬಿದವರಾ ಎಂದು ಪ್ರಶ್ನಿಸಿದರೆ ಪೆಚ್ಚು ನಗೆ ನಗುತ್ತಾರೆ.
ಅಧಿಕಾರ ನಮ್ಮನ್ನು ಎಷ್ಟು ನಿರ್ಲಜ್ಜರನ್ನಾಗಿ, ಮುಖೇಡಿಯನ್ನಾಗಿ ಮಾಡುತ್ತದೆ ನೋಡಿ. ಅಧಿಕಾರ ಪಡೆಯಲು ಈ ಜನ ಏನು ಮಾಡುವುದಕ್ಕೂ ಹೇಸರು. ಇವರ ಬಗ್ಗೆ ಮಾತನಾಡವುದಕ್ಕೂ ಬೇಸರವಾಗುತ್ತದೆ.

Tuesday, December 16, 2008

ನಾವು ಮಾತನಾಡುವವರು, ಮಾತನಾಡುತ್ತಲೇ ಇರುತ್ತೇವೆ ....

ಇಂದು ನಾನು ಪತ್ರಿಕೋದ್ಯಮದ ಬಗ್ಗೆ ಮಾತನಾಡುತ್ತೇನೆ. ಹಾಗೆ ಮುಖ್ಯವಾಗಿ ದೃಶ್ಯ ಮಾಧ್ಯಮದ ಬಗ್ಗೆ.
ಮುಂಬೈನ ಉಗ್ರಗಾಮಿಗಳ ಅಟ್ಟಹಾಸದ ನಂತರ ಎಲ್ಲರೂ ಮಾಧ್ಯಮದ ಹೊಣೆಗಾರಿಕೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಆರೋಗ್ಯಪೂರ್ಣ ಬೆಳವಣಿಗೆ. ಆದರೆ ಇಲ್ಲಿ ನಾವು ಗಮನಿಸಬೇಕಾದ ಕೆಲವು ವಿಷಯಗಳಿವೆ. ಯಾಕೆ ಮಾಧ್ಯಮಗಳು ಹೊಣೆ ಅರಿತು ವರ್ತಿಸುತ್ತಿಲ್ಲ ? ಈ ಪ್ರಶ್ನೆಯನ್ನು ಗಮನಿಸಿ. ಮೊದಲನೆಯದಾಗಿ ಮಾಧ್ಯಮ ಇಂದು ಹೊಣೆಗೇಡಿಯಾಗಿದೆ ಎಂಬುದು ಈ ಪ್ರಶ್ನೆಯಲ್ಲೇ ಇರುವ ಹೇಳಿಕೆ. ಈ ಬಗ್ಗೆ ಯಾರ ವಿರೋಧವೂ ಇರಲಾರದು. ಆದರೆ ಯಾಕೆ ಹೀಗಾಗಿದೆ ?
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಇವತ್ತಿನ ಪತ್ರಿಕೋದ್ಯಮಿಗಳಿಗೆ ಬದ್ಧತೆಯ ಕೊರತೆ ಎದ್ದು ಕಾಣುತ್ತಿದೆ. ಅವ್ರಿಗೆ ಪೂರ್ವ ಸಿದ್ಧತೆ ಇಲ್ಲ. ಪತ್ರಿಕೆಯಲ್ಲಿ ಕೆಲಸ ಮಾಡುವುದೆಂದೆಂದರೆ, ಐಟಿ ಬಿಟಿ ಕಂಪೆನಿಯಲ್ಲಿ ಕೆಲಸ ಮಾಡಿದಂತೆ ಅಲ್ಲ. ಇಲ್ಲಿ ಎಲ್ಲವನ್ನೂ ಕಂಪೂಟರುಗಳ ಮೂಲಕ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಪತ್ರಿಕೋದ್ಯಮ ಮನಸ್ಸಿನ ಕೆಲಸ. ಅಲ್ಲಿ ತುಂಬಾ ವಿಭಿನ್ನವಾದ ಕ್ರಿಯಾಶೀಲತೆ ಬೇಕು. ಒಂದು ಘಟನೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ನೋಡುವ ಚಾಕಚಕ್ಯತೆ ಬೇಕು. ಇದು ಅಷ್ಟು ಸುಲಭವಾಗಿ ಧಕ್ಕುವುದಿಲ್ಲ. ನಿರಂತರ ಓದು ಚಿಂತನೆ ಇದ್ದರೆ ಮಾತ್ರ ಇಂಥಹ ಮನಸ್ಥಿತಿ ರೂಪಗೊಳ್ಳುತ್ತದೆ. ಆದರೆ ಇಂದು ಮಾಧ್ಯಮದಲ್ಲಿ ಕೆಲಸ ಮಾಡುವವರಲ್ಲಿ ಇಂತಹ ಮನೋಧರ್ಮವೇ ಇಲ್ಲ..
ನಾನು ನಮ್ಮ ವಾಹಿನಿ ಪ್ರಾರಂಭವಾದ ದಿನದಿಂದ ಕ್ರೆಡಿಬಿಲಿಟಿಯ ಬಗ್ಗೆ ನಮ್ಮ ಹುಡುಗರ ಜೊತೆ ಮಾತನಾಡುತ್ತಲೇ ಇದ್ದೇನೆ. ವಿಶ್ವಾರ್ಹತೆ ಎಷ್ತು ಮುಖ್ಯ ಎಂದು ಹೇಳುತ್ತಲೇ ಇದ್ದೇನೆ. ಆದರೆ ನನ್ನ ಮಾತು ಯಾರಿಗೆ ಅರ್ಥವಾದಂತೆ ಕಾಣುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ನನಗೆ ಅನ್ನಿಸುವುದೆಂದರೆ, ಇಂದು ಮಾಧ್ಯಮ ಉಳಿದೆಲ್ಲ ಮಾಧ್ಯಮದಂತೆ ಬದಲಾಗಿದೆ, ಇಲ್ಲಿ ಕೆಲಸ ಮಾಡುವವರಿಗೂ ಯಾವುದೋ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುವವರಿಗೂ ಯಾವುದೇ ವ್ಯತ್ಯಾಸ ಉಳಿದಿಲ್ಲ ಎಂದು !
ಜೊತೆಗೆ ಇಂದಿನ ಪತ್ರಿಕೋದ್ಯಮಿಗಳಿಗೆ ಓದುವ ಅಭಿರುಚಿ ಕಡಿಮೆ. ಒಬ್ಬ ಪತ್ರಿಕೋದ್ಯಮಿ ಇಪ್ಪತ್ನಾಲ್ಕು ಗಂಟೆ ಪತ್ರಿಕೋದ್ಯಮಿಯೇ. ಆತ ಕನಿಷ್ಟ ದಿನಕ್ಕೆ ಎರಡು ಮೂರು ಗಂಟೆ ಓದಬೇಕು. ಕರ್ನಾಟಕದಲ್ಲಿ ಪತ್ರಿಕೋದ್ಯಮ ಮಾಡುವವರಿಗೆ ಇಲ್ಲಿನ ಬದುಕು, ಸಾಹಿತ್ಯ ಸಂಸ್ಕೃತಿ, ರಾಜಕೀಯ ಇತಿಹಾಸ, ಸಾಮಾಜಿಕ ಸಮಸ್ಯೆ, ಜನಪರ ಚಳವಳಿಗಳ ಬಗ್ಗೆ ಗೊತ್ತಿರಬೇಕು. ಆದರೆ ದೃಶ್ಯ ಮಾಧ್ಯಮದಲ್ಲಿ ಇರುವವರಂತೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮ ಬಾಹ್ಯ ಸೌಂದರ್ಯವೇ ಮುಖ್ಯ ಎಂದುಕೊಂಡಿರುತ್ತಾರೆ. ಸೌಂದರ್ಯದ ಅಹಂಕಾರ ಅವರ ಕ್ರಿಯಾಶೀಲತೆಯನ್ನು ಕೊಂದು ಬಿಡುತ್ತದೆ ಎಂಬ ಸಾಮಾನ್ಯ ಜ್ನಾನವೂ ಅವರಿಗೆ ಇರುವುದಿಲ್ಲ.
ಜೊತೆಗೆ ನಮಗೆ ಮಾತನಾಡುವುದು ಗೊತ್ತಿದೆ. ಕೇಳಿಸಿಕೊಳ್ಳುವುದು ಗೊತ್ತಿಲ್ಲ. ದೃಶ್ಯ ಮಾದ್ಯಮದಲ್ಲಿ ಇರುವವರು ಮಾತನಾಡುವುದೇ ತಮ್ಮ ಕಾಯಕ ಎಂದುಕೊಂಡಿರುತ್ತಾರೆ. ಮೌನ ನಮಗೆ ನೀಡುವ ಕ್ರಿಯಾಶೀಲತೆ ಅರಿವು ಅವರಿಗೆ ಇರುವುದಿಲ್ಲ. ಇದನ್ನು ಯಾರನ್ನೂ ಉದ್ದೇಶಿಸಿ ನಾನು ಹೇಳುತ್ತಿಲ್ಲ. ನನ್ನನ್ನು ಸೇರಿದಂತೆ ಎಲ್ಲರೂ ಈ ಬಗ್ಗೆ ಯೋಚಿಸಬೇಕಾಗಿದೆ.


Thursday, December 4, 2008

ಧರ್ಮವನ್ನು ಬಿಟ್ಟು ಬನ್ನಿ............

ಒಂದೆಡೆ ಬಂದೂಕಿನ ಸದ್ದು. ಮತ್ತೊಂದೆಡೆ ಹರಿಯುವ ರಕ್ತ. ಯಾವುದೋ ಮೂಲೆಯಲ್ಲಿ ಕೇಳುವ ಆಕ್ರಂದನ. ಎಲ್ಲರೂ ಗೋರಿಗಳನ್ನು ಕಟ್ಟಲು ಉತ್ಸಾಹ ತೋರಿಸುತ್ತಿದ್ದಾರೆ. ಜೀವ ಕೊಡಲು ಸಾಧ್ಯವಿಲ್ಲದವರು ಜೀವ ತೆಗೆಯಲು ಮುನ್ನುಗ್ಗುತ್ತಿದ್ದಾರೆ. ಇಂಥಹ ಸ್ಥಿತಿಯಲ್ಲಿ ದೇಶದ ಆರೋಗ್ಯಪೂರ್ಣ ಮನಸ್ಸುಗಳು ಮೌನವಾಗಿ ಅಳುತ್ತಿವೆ.

ನನಗೆ ಎಲ್ಲಿ ಹೋದರೂ ಅಳುವ ಮುಖಗಳೇ ಕಾಣುತ್ತವೆ. ಈ ಮುಖಗಳನ್ನು ನೋಡಿದವನು ಅವರ ಕಣ್ಣುಗಳನ್ನು ನೋಡುತ್ತೇನೆ. ಆ ಕಣ್ಣುಗಳಲ್ಲಿ ಇರುವುದು ಏನು ? ಭಯವೆ ? ಆತಂಕವೆ ? ಹತಾಶೆಯೆ ? ಈ ಪ್ರಶ್ನೆಗಳಿಗೆ ಉತ್ತರಕ್ಕಾಗಿ ನಾನು ತಡಕಾಡುತ್ತೇನೆ. ಆಗ ಮತ್ತೆ ಕಣ್ಣುಗಳನ್ನೇ ನೋಡುತ್ತೇನೆ.

ಆಗ ನನಗೆ ನಾನು ಮಾಡುವ ಕೆಲಸದ ಬಗ್ಗೆ ಜಿಗುಪ್ಸೆ ಮೂಡುತ್ತದೆ. ನಾನು ಪ್ರೀತಿಸುತ್ತ ಬಂದ, ನನಗೆ ಅನ್ನ ನೀಡುವ ಪತ್ರಿಕೋದ್ಯಮ ಪರಕೀಯ ಅನ್ನಿಸತೊಡಗುತ್ತದೆ. ನಾನು ನನ್ನ ಮನಸ್ಸು ಹೇಳುತ್ತಿರುವುದನ್ನು ಕೇಳುತ್ತಿದ್ದೇನೆಯೆ ? ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವತ್ತ ನನ್ನ ಪತ್ರಿಕೋದ್ಯಮ ಕೆಲಸ ಮಾಡುತ್ತಿದೆಯೇ ? ಹೀಗೆ ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತೇನೆ. ಇದಕ್ಕೆ ದೊರಕುವ ಉತ್ತರ ನನ್ನನ್ನು ಇನ್ನಷ್ಟು ಹತಾಶನನ್ನಾಗಿ ಮಾಡುತ್ತದೆ.

ಈ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಯನ್ನು ಇಂದು ವಸ್ತು ನಿಷ್ಠವಾಗಿ ನೋಡುವ ಸ್ಥಿತಿಯಲ್ಲಿ ಮಾಧ್ಯಮ ಇಲ್ಲ. ಭಯೋತ್ಪಾದಕ ಚಟುವಟಿಕೆಯ ಬಗ್ಗೆ ಹೆಚ್ಚು ಕ್ರಿಟಿಕಲ್ ಆಗಿದ್ದರೆ, ಭಾರತೀಯ ಜನತಾ ಪಾರ್ಟಿಯಂತಹ ಪಕ್ಷಕ್ಕೆ ಅನುಕೂಲವಾಗುತ್ತದೆ. ಕ್ರಿಟಿಕಲ್ ಆಗಿರದಿದ್ದರೆ, ಆತ್ಮಧ್ರೋಹ ಮಾಡಿಕೊಂಡಂತೆ ಅನ್ನಿಸುತ್ತದೆ. ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ, ಮುಸ್ಲಿಂ ಭಯೋತ್ಪಾದಕತೆ ವಿಶ್ವವನ್ನೇ ನಡುಗಿಸುತ್ತದೆ. ಲಷ್ಕರೆ ತೊಯ್ಬಾದಂತಹ ಸಂಘಟನೆಗಳು ರಕ್ತದ ಒಕಳಿಯಾಡುತ್ತ ಆ ಅಲ್ಲಾನೇ ತಲೆ ಬಗ್ಗಿಸುವಂತೆ ಮಾಡುತ್ತಿದೆ. ಆದರೆ ಈ ಮಾತನ್ನು ಹೇಳಿದ ತಕ್ಷಣ ಬಿಜೆಪಿ ಸಂತೋಷದಿಂದ ಬೀಗತೊಡಗುತ್ತದೆ. ಆಗ ಬಿಜೆಪಿ ನಮ್ಮ ಮುಂದೆ ತಂದಿಟ್ಟಿರುವ ಅಪಾಯ ಕಾಣತೊಡಗುತ್ತದೆ. ಹಾಗೆ ಮುಸ್ಲಿಂ ಭಯೋತ್ಪಾದಕತೆಯ ಬಗ್ಗೆ ಮೌನವಾಗಿ ಉಳಿದುಬಿಡುವ ಕಾಂಗ್ರೆಸ್ ಮತ್ತು ಎಡ ಪಕ್ಷಗಳು. ಇವರಿಗೆ ಮುಸ್ಲಿ ಮತದ ಬ್ಯಾಂಕನ್ನು ಬಿಟ್ಟು ಆಲೋಚನೆ ಮಾಡಲು ಸಾಧ್ಯವಾಗುವುದೇ ಇಲ್ಲ.
ಈ ನಡುವೆ ದೇಶದಲ್ಲಿ ವೈಚಾರಿಕ ಮತ್ತು ಸಾಹಿತ್ಯಿಕ ವಲಯ ಈ ಬಗ್ಗೆ ದಿವ್ಯ ಮೌನ ಒಹಿಸಿರುವುದು ಆಶ್ಚರ್ಯವನ್ನು ಮತ್ತು ಆಘಾತವನ್ನು ಉಂಟು ಮಾಡುತ್ತದೆ. ಎಡ ಪಂಥೀಯ ವಿಚಾರಧಾರೆಯಿಂದ ಪ್ರಭಾವಿತರಾದ ವೈಚಾರಿಕರು ಮತ್ತು ಸಾಹಿತಿಗಳು ಇಂಥಹ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದರೆ ತಮ್ಮ ವೈಚಾರಿಕತೆಗೆ ಮಂಕು ಕವಿಯುತ್ತದೆ ಎಂದುಕೊಂಡಿದ್ದಾರೆಯೆ ? ಪಾಕಿಸ್ಥಾನ ಪ್ರಚೋದಿತ ಭಯೋತ್ಪಾದಕ ಚಟುವಟಿಕೆಯನ್ನು ಧರ್ಮವನ್ನು ಹೊರತುಪಡಿಸಿ ನೋಡುವುದಕ್ಕೆ ನಮ್ಮ ವೈಚಾರಿಕ ವರ್ಗಕ್ಕೂ ಯಾಕೆ ಸಾಧ್ಯವಾಗುತ್ತಿಲ್ಲ ?
ಈ ಭಯೋತ್ಪಾದಕ ಚಟುವಟಿಕೆಯನ್ನು ಭಯೋತ್ಪಾದಕ ಚಟುವಟಿಕೆಯನ್ನಾಗಿ ನಾವು ನೋಡಬೇಕು. ಇದು ಮುಸ್ಲಿಂ ರಾಷ್ಟ್ರವೊಂದರಿಂದ ಪ್ರಚೋದಿತ ಎಂಬುದು ನಿಜವಾದರೂ ಅದು ಮುಖ್ಯವಲ್ಲ. ಆದರೆ ನಮ್ಮ ರಾಜಕೀಯ ಪಕ್ಷಗಳಿಗೆ ಭಯೋತ್ಪಾದಕ ಚಟುವಟಿಕೆಗಿಂತ ಇದನ್ನು ಮುಸ್ಲಿಂ ರಾಷ್ಟ್ರವೊಂದರಿಂದ ಪ್ರಚೋದಿತರಾದ ಮುಸ್ಲಿಂ ಯುವಕರು ಮಾಡುತ್ತಾರೆ ಎಂಬುದೇ ಮುಖ್ಯವಾಗಿ ಬಿಡುತ್ತದೆ. ಹೀಗಾಗಿ ಇವರು ಈ ಘಟನೆಗೆ ಪ್ರಾಮಾಣಿಕವಾಗಿ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತಿಲ್ಲ. ನಮ್ಮ ವೈಚಾರಿಕ ವರ್ಗಕ್ಕೂ ಹಾಗೆ.
ನಾವು ಧರ್ಮ ಕೋಮು ಭಾವನೆಯನ್ನು ಬಿಟ್ಟು ಸಮಸ್ಯೆಯನ್ನು ನೋಡಬೇಕು. ಹಾಗಾದಾಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...