Friday, August 22, 2008

ಶಬ್ದಗಳು ಮತ್ತು ಪಾವಿತ್ರ್ಯತೆ

ಮಂತ್ರಗಳು ಪವಿತ್ರವಾ ? ಅಪವಿತ್ರವಾ ? ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ಇದನ್ನೆಲ್ಲ ನಾನು ನೋಡುವ ರೀತಿಯೇ ಬೇರೆ. ಪವಿತ್ರ ಅಪವಿತ್ರ ಎಂಬುದು ಅವರವರ ಭಾವಕ್ಕೆ ಭಕುತಿಗೆ ಸಂಬಂಧಿಸಿದ್ದು. ಹೀಗಾಗಿ ಪವಿತ್ರವೋ ಅಲ್ಲವೋ ಅನ್ನುವುದು ನನಗೆ ಅಷ್ಠು ಮುಖ್ಯವಲ್ಲ. ಆದರೆ ನಾನು ಶಬ್ದಗಳನ್ನು ಕೇವಲ ಅಕ್ಷರಗಳ ಸಮೂಹ ಎಂದು ನಾನು ಭಾವಿಸಿಲ್ಲ. ಶಬ್ದಗಳು ಬಳಕೆಯಿಂದ ಅರ್ಥವನ್ನು ಪಡೆಯುತ್ತವೆ. ಹಾಗೆ ಶಬ್ದಕ್ಕೆ ಭಾವ ತುಂಬುವುದು ಎಂದರೆ, ಅದಕ್ಕೆ ಜೀವವನ್ನು ತುಂಬುವುದು. ಜೀವ ಪಡೆದ ಶಬ್ದಗಳು ವಿಭಿನ್ನ ಶಕ್ತಿಯನ್ನು ಹೊಂದುತ್ತವೆ.


ನನಗೆ ಈ ವಿಚಾರದಲ್ಲಿ ಕುತೂಹಲವಿದೆ. ಒಂದು ಶಬ್ದ ಎಂದರೆ ನಾದವೂ ಸಹ. ಹಾಗೆ ಸ್ವರ. ಶಬ್ದದ ಸತತವಾದ ಉಚ್ಚಾರ ಆಶಬ್ದವನ್ನು ಸಬಲಗೊಳಿಸುತ್ತದೆಯಾ ? ಆ ಶಬ್ದಕ್ಕೆ ಉಚ್ಚಾರಣೆ ನೀಡುವಕೊದುಗೆಯಾವರೀತಿಯದು ? ನಾವು ಯಾವುದೇ ಶಬ್ದವನ್ನು ಉಚ್ಚರಿಸಲಿ, ಹೀಗೆ ಉಚ್ಚಾರಣೆ ಮಾಡುವಾಗ ನಾವು ಕೆಲವೊಮ್ಮೆ ಗಾಳಿಯನ್ನು ಒಳಗೆ ಎಳೆದುಕೊಂಡರೆ, ಕೆಲವೊಮ್ಮೆ ಹೊರಕ್ಕೆ ಬಿಡುತ್ತೇವೆ. ಅಂದರೆ ಪ್ರತಿ ಶಬ್ದದ ಉಚ್ಚಾರಣೆ ಕೂಡ ಬೇರೆ ಬೇರೆ ರೀತಿಯ ಉಚ್ವಾಸ ಮತ್ತು ನಿಶ್ವಾಸಕ್ಕೆ ಕಾರಣವಾಗಿರುತ್ತದೆ, ಒಂದು ಶಬ್ದವನ್ನು ಉಚ್ಚರಿಸುವಾಗ ನಾವು ತೆಗೆದುಕೊಳ್ಳುವ ಮತ್ತು ಬಿಡುವ ಶ್ವಾಸದಲ್ಲಿ ವ್ಯತ್ಯಾಸವಿರುತ್ತದೆ. ಒಂದು ಶಬ್ದದ ಉಚ್ಚಾರಣೆ ಮತ್ತು ಸ್ವೀಕಾರದ ಅನುಭವ ಇನ್ನೊಂದು ಶಬ್ದಕ್ಕೆ ಬೇರೆಯಾಗಿರುತ್ತದೆ. ಅಂದರೆ ಪ್ರತಿ ಶಬ್ದಕ್ಕೂ ಪ್ರತ್ಯೇಕವಾದ ಅರ್ಥವಿರುವಂತೆ ಪ್ರತ್ಯೇಕವಾದ ಭಾವ ಶಕ್ತಿಯೂ ಇರುತ್ತದೆ.


ಹೀಗೆ ಪ್ರತ್ಯೇಕ ಅಸ್ಥಿತ್ವವನ್ನು ಹೊಂದಿರುವ ಶಬ್ದಗಳು ಉಂಟು ಮಾಡುವ ಪರಿಣಾಮ ಕೂಡ ಬೇರೆ. ಒಬ್ಬನಿಗೆ ಸೂ.. ಮಗ ಎಂದು ಬೈದರೆ ಆತನಿಗೆ ಸಿಟ್ಟು ಬರುತ್ತದೆ. ಐ ಲವ್ ಯೂ ಎಂದರೆ ಸಂತೋಷವಾಗುತ್ತದೆ. ಯಾಕೆ ? ಈ ಶಬ್ದಗಳು ಬಳಕೆಯಿಂದ ಪಡೆದುಕೊಂಡ ಅರ್ಥ ಇದೆಯಲ್ಲ ಅದು ನಮ್ಮ ಮನಸ್ಸಿನಲ್ಲಿ ಮೂಡಿಸುವ ಪರಿಣಾಮವೇ ಇದಕ್ಕೆ ಕಾರಣ ಅಲ್ಲವೆ ? ಹಾಗಿದ್ದರೆ ಬೇರೆ ಬೇರೆ ಶಬ್ದಗಳು ನಮ್ಮ ಮನಸ್ಸಿನಲ್ಲಿ ಮೂಡಿಸುವ ಭಾವ ತರಂಗಗಳು ಬೇರೆ ಬೇರೆಯಾಗಿರುತ್ತದೆ ಎಂದಂತಾಯಿತು. ಆದರೆ ಈ ವಿಚಾರದಲ್ಲಿಯೂ ಏಕರೂಪತೆ ಅನ್ನುವುದಿಲ್ಲ. ಒಂದು ಶಬ್ದ ಒಬ್ಬನಲ್ಲಿ ಮೂಡಿಸುವ ಭಾವ ಪ್ರತಿಕ್ರಿಯೆ ಇನ್ನೊಬ್ಬನಲ್ಲಿ ಮೂಡಿಸುವ ಪ್ರತಿಕ್ರಿಯೆಗಿಂತ ಬೇರೆ. ಅಂದರೆ ಒಂದು ಶಬ್ದವನ್ನು ಬಳಸುವವ ಒಂದು ಅರ್ಥದಲ್ಲಿ ಬಳಸಿದರೆ ಅದನ್ನು ಕೇಳಿಸಿಕೊಂಡವ ಬೇರೆ ಅರ್ಥದಲ್ಲಿ ಅದನ್ನು ಸ್ವೀಕರಿಸಬಹುದು. ಅಂದರೆ ಒಂದು ಶಬ್ದಕ್ಕೆ ನಿಶ್ಚಿತವಾದ ಅರ್ಥ ಇದೆ ಎಂದುಕೊಂಡರೂ ಅದು ಶಬ್ದವನ್ನು ಕೇಳಿಸಿಕೊಳ್ಳುವವರು ಮತ್ತು ಬಳಸುವವರು ಹೊಸ ಹೊಸ ಅರ್ಥಗಳನ್ನು ನೀಡುತ್ತ ಆ ಶಬ್ದವನ್ನು ಇನ್ನೊಂದು ಸ್ಥರಕ್ಕೆ ಕೊಂಡೊಯ್ಯುತ್ತಲೇ ಇರುತ್ತಾರೆ. ಹೀಗಾಗಿ ಶಬ್ದವನ್ನು ಬಳಸುವವನೆಗೆ ಒಂದು ಶಬ್ದ ನೀಡುವ ಅನುಭವ ಒಂದಾದರೆ, ಅದನ್ನು ಕೇಳಿಸಿಕೊಂಡವನಿಗೆ ನೀಡುವ ಅನುಭವವೇ ಬೇರೆ. ಪ್ರತಿ ಶಬ್ದವನ್ನು ನಾವು ಬಳಸುವುದು ಮತ್ತು ಅರ್ಥೈಸುವುದು ನಮ್ಮ ಅನುಭವದದ ಆಧಾರದ ಮೇಲೆ. ಬೇರೊಬ್ಬರ ಅನುಭವದ ಆಧಾರದ ಮೇಲೆ ಬಳಸಲ್ಪಡುವ ಶಬ್ದ ನಮಗೆ ಅದೇ ಅರ್ಥವನ್ನು ನೀಡಲಾರದು. ಯಾಕೆಂದರೆ ಇನ್ನೊಬ್ಬರ ಅನುಭವ ಎಂದೂ ನಮ್ಮ ಅನುಭವವಾಗಲಾರದು.

ಇದನ್ನೆಲ್ಲ ನೋಡಿದರೆ ಒಂದಂತೂ ಸ್ಪಷ್ಟ. ಶಬ್ದಗಳು ಎಂದರೆ ಅದು ಕೇವಲ ಅಕ್ಷರಗಳ ಜೋಡಣೆ ಮಾತ್ರವಲ್ಲ. ಹಾಗೆ ಶಬ್ದಗಳನ್ನು ಪೊಣಿಸಿ ಸಿದ್ದಪಡಿಸುವ ವಾಕ್ಯಗಳು ಕೂಡ. ಇಂತಹ ಶಬ್ದ ಮತ್ತು ವಾಕ್ಯಗಳು ಮನಸ್ಸಿನಲ್ಲಿ ರೂಪಗೊಂಡ ಹೊರಬರುತ್ತವೆ. ಹಾಗಿದ್ದರೆ, ಶಬ್ದ ಮತ್ತು ವಾಕ್ಯವನ್ನು ಜೋಡಿಸುವ ಮನಸ್ಸು ತನ್ನೆಲ್ಲ ಶಕ್ತಿಯನ್ನು ಈ ಕ್ರಿಯೆಯಲ್ಲಿ ತೊಡಗಿಸುವುದಿಲ್ಲವೆ ? ಹಾಗೆ ತೊಡಗಿಸಿದರೆ ಆ ಮನಸ್ಸಿನಲ್ಲಿ ಶಕ್ತಿ, ಶಬ್ದ ಮತ್ತು ವಾಕ್ಯದಲ್ಲಿ ಪ್ರತಿಬಿಂಬಿತವಾಗಬಲ್ಲದೆ ?

ಹೀಗೆ ಮನಸ್ಸಿನಲ್ಲಿ ಆಕಾರ ಪಡೆದು ಮನಸ್ಸಿನ ಎಲ್ಲ ಶಕ್ತಿಯನ್ನು ತುಂಬಿಸಿಕೊಂಡ ಎಲ್ಲ ಶಬ್ದಗಳೂ ಪವಿತ್ರವೇ ಅಲ್ಲವೆ ?

Friday, August 15, 2008

ದೇವರು ದೇವರ ಭಕ್ತರು ಮತ್ತು............

ನನಗೂ ದೇವರಿಗೂ ಅಂತಹ ಒಳ್ಳೆಯ ಸಂಬಂಧ ಇಲ್ಲ. ದೇವರನ್ನು ನಾನು ನೋಡುವ ರೀತಿಯೇ ಬೇರೆ ಆಗಿರುವುದರಿಂದ ಸಾಮಾನ್ಯ ಜನ ನಂಬಿರುವ ದೇವರ ಜೊತೆ ಈ ಹಿಂದೆಯೇ ನಾನೊಂದು ಮಾತನ್ನು ಹೇಳಿದ್ದೆ.
"ನೀನು ನನ್ನ ತಂಟೆಗೆ ಬರಬೇಡ. ನಾನು ನಿನ್ನ ತಂಟೆಗೆ ಬರೋದಿಲ್ಲ "
ನಾನು ಅಷ್ಟಾಗಿ ದೇವರ ತಂಟೆಗೆ ಹೋಗಿಲ್ಲ. ಆತನೂ ಅಷ್ಟೇ. ನನ್ನ ತಂಟೆಗೆ ಬಂದಿಲ್ಲ. ಆದರೆ, ಈ ದೇವರ ಭಕ್ತರ ಸಮಸ್ಯೆ ಮಾತ್ರ ನನಗೆಂದೂ ತಪ್ಪಿಲ್ಲ. ನಮ್ಮ ಮನೆಯ ಸುತ್ತಮುತ್ತ ಮಹಾನ್ ದೈವ ಭಕ್ತರಿದ್ದಾರೆ. ಶನಿವಾರ ರಾತ್ರಿಯೆಲ್ಲ ಹರಿ ಕಥೆಯ ವ್ಯವಸ್ಥೆ ಮಾಡಿ, ದಾಸರು ಹೇಳುವ ಕಥೆ ಇಡೀ ಜಗತ್ತಿಗೆ ಕೇಳಲಿ ಎಂದು ಮೈಕ್ ಹಾಕಿ ಬಿಡುತ್ತಾರೆ. ಹಾಗೆ ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಮಸೀದಿಯಿದೆ. ಅವರು ಬೆಳಿಗ್ಗೆ ಮೈಕ್ ಹಾಕಿಯೇ ದೇವರ ಪ್ರಾರ್ಥನೆ ಮಾಡುತ್ತಾರೆ. ದೇವರು, ದೇವರ ಬಕ್ತರು ಮತ್ತು ಮೈಕಿನ ಸಮಸ್ಯೆ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ.
ದೇವರನ್ನು ದೇವರು ಎಂದು ನಾವು ಒಪ್ಪಿಕೊಳ್ಳುವುದಾದರೆ ಆತ ಶಕ್ತಿವಂತ. ಆತ ಸರ್ವವ್ಯಾಪಿ,ಸರ್ವಶಕ್ತ . ಆತನಿಗೆ ಕಿವಿಯ ಸಮಸ್ಯೆ ಇರುವುದು ಸಾಧ್ಯವಿಲ್ಲ. ಹಾಗೆ ಆತನ ಪ್ರಾರ್ಥನೆಯನ್ನು ಮೈಕಿನ ಮೂಲಕ ಮಾಡುವ ಅಗತ್ಯವಿಲ್ಲ. ನಾವು ಮನಸ್ಸಿನಲ್ಲಿ ಮಾಡಿದ ಪ್ರಾರ್ಥನೆ ಆತನಿಗೆ ತಲುಪಬೇಕು. ಅತನಿಗೆ ನಾವು ಏನು ಯೋಚನೆ ಮಾಡುತ್ತೇವೆ ಎಂಬುದು ಅರ್ಥವಾಗಬೇಕು, ಅದಿಲ್ಲದಿದ್ದರೆ ಆತ ದೇವನಲ್ಲ.
ಆದರೆ ದೇವರ ಭಕ್ತರು ಮಾತ್ರ ಮೈಕಿನ ಮೊರೆ ಹೋಗುತ್ತಾರೆ. ಹಬ್ಬ ಹರಿದಿನಗಳಲ್ಲಿ ಸಿನೆಮಾ ಹಾಡುಗಳನ್ನು ಹಾಕಿ ಶಾಂತಿಪ್ರಿಯರ ತಲೆ ತಿನ್ನುತ್ತಾರೆ. ಮಂತ್ರಗಳ ರಿಕಾರ್ಡ್ ಹಾಕಿ ಅದರ ಪಾವಿತ್ರತೆಯನ್ನು ಹಾಳುಗೆಡವುತ್ತಾರೆ. ಆದರೆ ಧರ್ಮವನ್ನು ಹೀಗೆ ಬೀದಿಗೆ ತಂದು ಬಿಕರಿ ಮಾಡುವುದನ್ನು ನೋಡುತ್ತ ಕುಳಿತುಕೊಳ್ಳುವುದು ನಮ್ಮ ಸರ್ಕಾರ. ಪೊಲೀಸರು ಕೂಡ ಇಂತಹ ಪಬ್ಲಿಕ್ ನ್ಯೂಸೆನ್ಸ್ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುವುದಿಲ್ಲ. ದೇವರಿಗೆ ಹೆದರದ ಈ ರಾಜಕಾರಣಿಗಳು ಮತ್ತು ಅಧಿಕಾರಶಾಹಿ ಪೊಲೀಸ್ ವ್ಯವಸ್ಥೆ ದೇವರ ಭಕ್ತರಿಗೆ ಹೆದರುತ್ತಾರೆ.
ದೇವರು ಅನ್ನುವವನಿದ್ದರೆ ಅತನ ಜೊತೆ ನಮ್ಮ ಸಂವಾದ ಮೌನವಾಗಿ ನಡೆಯಬೇಕು. ಅಲ್ಲಿ ಮಾತಿಗೆ ಶಬ್ದಕ್ಕೆ ಅರ್ಥವಿಲ್ಲ. ಅಲ್ಲಿ ಮೌಕಿಕವಾಗಿ ನಡೆಯುವುದು ಏನೂ ಇಲ್ಲ. ಎಲ್ಲವೂ ಒಂದು ನದಿ ಹರಿಯುವ ಹಾಗೆ ಗಾಳಿ ಬೀಸುವ ಹಾಗೆ, ನಡೆಯಬೇಕು. ಮೌನದ ಸೌಂದರ್ಯ ಅನಾವರಣಗೊಳ್ಳಬೇಕು. ಗದ್ದಲದಲ್ಲಿ ದೇವರು ಇರುವುದು ಸಾಧ್ಯವಿಲ್ಲ.
ದೇವರ ಮುಂದಿರುವ ಈಗಿನ ಮಹತ್ವದ ಕೆಲಸ ಎಂದರೆ ತನ್ನ ಭಕ್ತರಿಗೆ ಬುದ್ದಿ ಹೇಳುವುದು. ನೀವು ನನ್ನ ಪೂಜೆ ಮಾಡುವುದಿದ್ದರೆ ರಸ್ತೆಯಲ್ಲಿ ಮಾಡಬೇಡಿ ಎಂದು ಸ್ಪಷ್ಟವಾಗಿ ಹೇಳಬೇಕು. ನನಗೆ ಮೈಕ್ ಎಂದರೆ ಆಗುವುದಿಲ್ಲ, ನೀವು ಮೈಕ್ ಹಾಕಿದರೆ ನಿಮ್ಮ ಬೇಡಿಕೆಯನ್ನು ಈಡೇರಿಸುವುದಿಲ್ಲ ಎಂದು ಬೆದರಿಕೆ ಒಡ್ಡಬೇಕು. ಆಗಲಾದರೂ ಭಕ್ತರು ಬದಲಾಗಬಹುದು. ಭಕ್ತರು ಬದಲಾದರೆ, ದೇವರಿಗೂ ಒಳ್ಳೆಯದು, ಸಮಾಜಕ್ಕೂ ಒಳ್ಳೆಯದು.

Thursday, August 14, 2008

ಸ್ವಾತಂತ್ರೋತ್ಸವ, ಟೋಪಿ ಮತ್ತು ಪೆಪ್ಪರಮೆಂಟ್ ......

ಸ್ವಾತಂತ್ರೋತ್ಸವ ಎಂದ ತಕ್ಷಣ ನನ್ನ ಮನಸ್ಸು ಹಲವು ವರ್ಷಗಳಷ್ಟು ಹಿಂದಕ್ಕೆ ಓಡುತ್ತದೆ. ಮಲೆನಾಡಿನ ಅ ಮಳೆ. ಅದು ಅಕಾಶವೇ ಕಳಚಿ ಬೀಳುತ್ತದೆಯೇನೊ ಏನ್ನುವ ಹಾಗೆ. ಆ ಮಳೆಯಲ್ಲಿ ಹೊಸ ಬಟ್ಟೆಯನ್ನು ತೊಟ್ಟು ಶಾಲೆಗೆ ಓಡುತ್ತಿದ್ದ ನಾವು. ನಮಗೆ ಆ ಮಳೆಯಲ್ಲಿ ಹೆಜ್ಜೆ ಹಾಕುವುದೇ ಒಂದು ಚಂದ. ರಸ್ತೆಯಲ್ಲಿ ಹರಿಯುತ್ತಿದ್ದ ನೀರನ್ನು ಕಾಲಿನಲ್ಲಿ ಒದ್ದು ಎದೆಯತ್ತರಕ್ಕೆ ಹಾರಿಸಿ ಖುಷಿ ಪಡುತ್ತ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದೆವು. ಶಾಲೆ ತಲುಪಿದ ತಕ್ಷಣ ಮೊದಲು ನಡೆಯುತ್ತಿದ್ದುದು ಪ್ರಭಾತ್ ಪೇರಿ. ಮಳೆಯಲ್ಲಿ ಕೊಡೆ ಹಿಡಿದ ಶಾಲಾ ಮಕ್ಕಳ ಮೆರವಣಿಗೆಯನ್ನು ತಮ್ಮ ತಮ್ಮ ಮನೆಗಳ ಹೆಬ್ಬಾಗಿಲಿನಲ್ಲಿ,. ಅಂಗಡಿಗಳ ಮುಂಭಾಗದಲ್ಲಿ ನಿಂತು ನೋಡುವ ಊರಿನ ಜನ. ಅಂದಿನ ಮಟ್ಟಿಗೆ ನಾವೇ ಹಿರೋಗಳು. ಎಲ್ಲರ ದೃಷ್ಟಿಯೂ ನಮ್ಮ ಮೇಲೆ. ಎಲ್ಲರೂ ನಮ್ಮನ್ನು ನೋಡುತ್ತಿದ್ದಾರೆ ಎಂಬುದೇ ನಮಗೆ ಹಮ್ಮು ಬಿಮ್ಮು ಬರುವಂತೆ ಮಾಡುತ್ತಿತ್ತು.

ಪ್ರಭಾತ್ ಪೇರಿ ಮುಗಿದ ಮೇಲೆ ಸಭಾ ಕಾರ್ಯಕ್ರಮ. ಊರಿನ ಪ್ರಮುಖರು ಬಂದು ಮಾಡುತ್ತಿದ್ದ ಈ ಭಾಷಣ ನಮಗೆ ಅಂತಹ ಸಂತೋಷವನ್ನು ನೀಡುವ ವಿಚಾರ ಆಗಿರಲಿಲ್ಲ. ಆದರೆ ನಾವೆಲ್ಲ ಕಾಯುತ್ತಿದ್ದುದು ಸಭೆ ಮುಗಿದ ಮೇಲೆ ನಮಗೆ ಹಂಚುತ್ತಿದ್ದ ಕೆಂಪನೆಯ ಪೆಪ್ಪರಮೆಂಟಿಗಾಗಿ. ಲಿಂಬು ಎಂದು ಕರೆಯುತ್ತಿದ್ದ ಈ ಪೆಪ್ಪರಮೆಂಟು ಕೈಗೆ ಬಂದ ಮೇಲೆ ನಾವೆಲ್ಲ ಕೂಗುತ್ತ, ಜಿಗಿಯುತ್ತ ಮನೆಗೆ ಹಿಂತಿರುಗುತ್ತಿದ್ದೆವು.

ಬಹಳ ವರ್ಷಗಳ ಕಾಲ ನನಗೆ ಸ್ವಾತಂತ್ರೋತ್ಸವ ಎಂದರೆ ಹುಳಿ ಮತ್ತು ಸಿಹಿಯ ಸೇರಿದ ಪೆಪ್ಪರಮೆಂಟ್ ನೆನಪಾಗುತ್ತಿತ್ತು. ಹಳ್ಳಿಯ ಹೈದರಾದ ನಮಗೆ ಪೆಪ್ಪರಮೆಂಟು ಸಿಗುತ್ತಿದ್ದುದು ಅಪರೂಪವಾದ್ದರಿಂದ, ನಾವೆಲ್ಲ ಇಂತಹ ರಾಷ್ತ್ರೀಯ ಹಬ್ಬಗಳಿಗಾಗಿ ಕಾಯುತ್ತಿದ್ದೆವು. ನಂತರವೂ ಕೂಡ ಈ ಪೆಪ್ಪರಮೆಂಟು ಸ್ವಾತಂತ್ರ್ಯ ಉತ್ಸವದ ಜೊತೆ ತಳಕು ಹಾಕಿಕೊಂಡು ನನ್ನ ಮನಸ್ಸಿನಲ್ಲಿ ಸ್ಥಾಯಿ ಭಾವವಾಗಿ ಉಳಿದುಬಿಟ್ಟಿತು. ಹಾಗೆ ಪೆಪ್ಪರಮೆಂಟನ್ನು ಬಿಟ್ಟು ಸ್ವಾತಂತ್ರೋತ್ಸವನ್ನು ಕಲ್ಪಿಸಿಕೊಳ್ಳುವುದು ನನಗೆ ಸಾಧ್ಯವಾಗದ ಸ್ಥಿತಿಯನ್ನು ನಾನು ತಲುಪಿಬಿಟ್ಟಿದ್ದೆ.

ಈಗಲೂ ನನಗೆ ಸ್ವಾತಂತ್ರ್ಯ ಎಂದ ತಕ್ಷಣ ಪೆಪ್ಪರಮೆಂಟ್ ನೆನಪಾಗುತ್ತದೆ. ಸ್ವಾತಂತ್ರ್ಯದ ಪೆಪ್ಪರಮೆಂಟನ್ನು ಚಪ್ಪರಿಸುವ ಕೆಲವೇ ಕೆಲವು ಜನ ನೆನಪಾಗುತ್ತಾರೆ. ಅವರಲ್ಲಿ ನಮ್ಮ ಜನಪ್ರತಿನಿಧಿಗಳು ಕಣ್ಣ ಮುಂದೆ ಬರುತ್ತಾರೆ. ಹಾಗೆ ಗಾಂಧಿ ಟೋಪಿ ನೆನಪಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಆಸ್ತಿ ಮನೆಯನ್ನು ಕಳೆದುಕೊಂಡ ನನ್ನ ಅಜ್ಜ ಎಂದೂ ತನ್ನ ತಲೆಯ ಮೇಲಿನ ಗಾಂಧಿ ಟೋಪಿಯನ್ನು ತೆಗೆಯುತ್ತಿರಲಿಲ್ಲ. ಸ್ವಾತಂತ್ರ್ಯ ದಿನಾಚರಣೆಯ ದಿನ ನನ್ನ ತಲೆಯ ಮೇಲೂ ಟೋಪಿ ಶಾಲೆಗೆ ಕಳುಹಿಸುತ್ತಿದ್ದ ಅಜ್ಜ. ನಂತರದ ದಿನಗಳಲ್ಲಿ ಕೆಲವು ರಾಜಕಾರಣಿಗಳ ತಲೆಯ ಮೇಲೆ ನಾನು ಈ ಟೋಪಿಯನ್ನು ನೋಡುತ್ತಿದ್ದೆ. ಕೊನೆಗೆ ಗಾಂಧಿ ಎಲ್ಲರ ಮನಸ್ಸಿನಲ್ಲಿ ಮರೆಯಾದ ಹಾಗೆ, ಟೋಪಿ, ಕಾಂಗ್ರೆಸ್ಸಿಗರ ತಲೆಯಿಂದ ಹಾರಿ ಅದೃಶ್ಯವಾಯಿತು. ಅದೃಶ್ಯ ರೂಪದಲ್ಲೆ ಜನರ ತಲೆಯ ಮೇಲೆ ಬಂದು ಕುಳಿತಿತು. ರಾಜಕಾರಣಿಗಳು ಈ ಟೋಪಿಯನ್ನು ಗೊತ್ತಾಗದ ಹಾಗೆ ಜನರ ತಲೆಯ ಮೇಲೆ ಇಟ್ಟು ಬಿಟ್ಟರು. ಈಗ ಕಾಂಗ್ರೆಸ್ಸಿಗರು ಸ್ವಾತಂತ್ರೋತ್ಸ್ವದ ದಿನ ಟೋಪಿಯನ್ನು ಹೊರಕ್ಕೆ ತೆಗೆದು ತಲೆಯ ಮೇಲಿಟ್ಟುಕೊಂಡು ಪಕ್ಷದ ಕಚೇರಿಗೆ ಬಂದು ಧ್ವಜ ವಂದನೆಯಲ್ಲಿ ಪಾಲ್ಗೊಳ್ಳುತ್ತಾರೆ.

ಸ್ವಾತಂತ್ರೋತ್ಸವ ಎಂದ ತಕ್ಷಣ ಟೋಪಿ ಮತ್ತು ಪೆಪ್ಪರಮೆಂಟು ಹಲವು ಅರ್ಥಗಳನ್ನು ಮನಸ್ಸಿನಲ್ಲಿ ಮೂಡಿಸುತ್ತದೆ. ಸ್ವಾತಂತ್ರ್ಯಾ ನಂತರದ ಸ್ಥಿತಿಯನ್ನು ಟೋಪಿ ಮತ್ತು ಪೆಪ್ಪರಮೆಂಟು ಅದ್ಭುತವಾಗಿ ವಿವರಿಸುತ್ತದೆ ಎಂದು ಅನ್ನಿಸುತ್ತದೆ. ತಲೆಯ ಮೇಲೆ ಟೋಪಿ ಹಾಕಿ ಬಾಯಲ್ಲಿ ಪೆಪ್ಪರಮೆಂಟು ಇಡುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ನಮ್ಮ ತಲೆಯ ಮೇಲೆ ಇಟ್ಟ ಟೋಪಿಯನ್ನು ಮುಟ್ಟಿ ನೋಡಿಕೊಂಡು, ಈ ಟೋಪಿ ಎಷ್ಟು ಚೆನ್ನಾಗಿದೆ ಎಂದು ನಾವೆಲ್ಲ ಉದ್ಘಾರ ತೆಗೆಯುತ್ತಿದ್ದೇವೆ..

ಕಳೆದ ವರ್ಷ ಸ್ವಾತಂತ್ರೋತ್ವದ ಸಂದರ್ಭದಲ್ಲಿ "ನಿಮಗೆ ಗಾಂಧಿ ಗೊತ್ತಾ ?" ಎಂಬ ಪ್ರಶ್ನೆಯನ್ನು ಸಾರ್ವಜನಿಕರಿಗೆ ಕೇಳುವಂತೆ ನಮ್ಮ ಹುಡುಗರಿಗೆ ಹೇಳಿದ್ದೆ. ಅವರಿಂದ ಬಂದ ಉತ್ತರವನ್ನು ನಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಿದ್ದೆವು. ಬಹಳಷ್ಟು ಜನರಿಗೆ ಗೊತ್ತಿದ್ದ ಗಾಂಧಿಯೇ ಬೇರೆ. ಈ ವರ್ಷ ನಿಮಗೆ ರಾಷ್ಟ್ರ ಗೀತೆ ಗೊತ್ತಾ, ಗೊತ್ತಿದ್ದರೆ ಹಾಡಿ ಎಂದು ಕೇಳಿದ್ದೆವು. ಬಹಳಷ್ಟು ಜನರಿಗೆ ಕರ್ನಾಟಕದ ನಾಡ ಗೀತೆ ಮತ್ತು ರಾಷ್ಟ್ರಗೀತೆಯ ನಡುವಿನ ವ್ಯತ್ಯಾಸವೂ ಗೊತ್ತಿರಲಿಲ್ಲ. ಯಾರೊಬ್ಬರೂ ಸರಿಯಾಗಿ ರಾಷ್ಟ್ರ ಗೀತೆಯನ್ನು ಹಾಡಲೇ ಇಲ್ಲ !

ನಾವು ಗಾಂಧಿ ಎಂದ ತಕ್ಷಣ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಪೂಜಾ ಗಾಂಧಿಯ ಬಗ್ಗೆ ಮಾತನಾಡುವ ಸ್ಥಿತಿಯಲ್ಲಿದ್ದೇವೆ. ಯಾರಾದರೂ ಕುಡಿಯದಿದ್ದರೆ, ಪರಸ್ರ್ತ್ರಿ ಸಂಗ ಮಾಡದಿದ್ದರೆ, ಅವನೋ, ಗಾಂಧಿ ನನಮಗ ಏನಕ್ಕೂ ಪ್ರಯೋಜನ ಇಲ್ಲ ಎಂದು ಮಾತನಾಡುವುದನ್ನು ಕೇಳುತ್ತೇವೆ. ಇವತ್ತಿನ ಯಾವುದೇ ಒಬ್ಬ ಹುಡುಗಿಯ ಮುಂದೆ ಒಂದು ಪ್ರಸ್ತಾವನೆಯನ್ನು ಇಡಿ. ಈ ಹುಡುಗ ತುಂಬಾ ಒಳ್ಳೆಯವ, ಯಾವುದೇ ಚಟವಿಲ್ಲ, ನೀನು ಮದುವೆಯಾಗಬಹುದು ಎಂದರೆ ಆಕೆ ಉತ್ತರ ನೀಡುತ್ತಾಳೆ: ಗಾಂಧಿನಾ ನನಗೆ ಬೇಡ !

ಇದು ಸ್ವಾತಂತ್ರ್ಯ ಬಂದ ಮೇಲೆ ನಾವು ಹಾಕಿಸಿಕೊಂಡ ಟೋಪಿ. ಹಾಗೂ ನಮ್ಮ ಬಾಯಲ್ಲಿ ಚಪ್ಪರಿಸುತ್ತಿರುವ ಪೆಪ್ಪರಮೆಂಟು. ನಾನು ನನ್ನ ಮನಸ್ಸಿನಲ್ಲಿ ಬಂದ ಈ ಮಾತುಗಳನ್ನು ಹೇಳುವಾಗ ಪ್ರಧಾನಿ ಡಾ. ಮನಮೋಹನ್ ಸಿಂಗ್ ಕೆಂಪು ಕೋಟೆಯ ಮೇಲಿನಿಂದ ಭಾಷಣ ಮಾಡಿ ಮುಗಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಮಾಣೇಕ್ ಷಾ ಮೈದಾನದಲ್ಲಿ ಭಾಷಣ ಕುಟ್ಟುತ್ತಿದ್ದರು. ಬೆಂಗಳೂರಿನ ರಸ್ತೆ ನಿರ್ಜನವಾಗಿದ್ದು ಜನ ಸ್ವಾತಂತ್ರ್ಯದ ರಜೆಯ ಸವಿಯನ್ನು ಅನುಭವಿಸುತ್ತಿದ್ದರು.ಆಗಲೂ ನಾನು ಹುಡುಕಿತ್ತಿದ್ದುದು ಅದೇ ಟೋಪಿ ಮತ್ತು ಪೆಪ್ಪರಮೆಂಟ್ ಗಾಗಿ. ಹಾಗೆ ನನ್ನ ಅರ್ಧ ಬೋಳಾದ ತಲೆಯನ್ನು ಮುಟ್ಟಿಕೊಂಡೆ. ಅಲ್ಲಿ ಟೋಪಿ ಬಂದು ಕುಳಿತು ನಗುತ್ತಿತ್ತು. ನನ್ನ ಬಾಯಲ್ಲಿ ಅದೇ ಪೆಪ್ಪರಮೆಂಟು, ಇದನ್ನು ಇಟ್ಟವರು ಯಾರು ಎಂಬುದನ್ನು ಯೋಚಿಸದೇ ನಾನು ಪೆಪ್ಪರಮೇಂಟಿನ ಸವಿಯನ್ನು ಸವಿಯತೊಡಗಿದೆ.

Wednesday, August 6, 2008

............? ..................?...........?...............?

ಅಂದು ನಾನು ಆ ಪ್ರದೇಶವನ್ನು ತಲುಪಿದಾಗ ರಾತ್ರಿ ಬಹಳ ಹೊತ್ತಾಗಿತ್ತು. ಸಮಯದ ಸರಿಯಾದ ಅಂದಾಜು ನನಗೆ ಇರಲಿಲ್ಲ. ಹಾಗೆ ನೋಡಿದರೆ ದಿನವನ್ನು ಮರೆತು ಎಷ್ಟೋ ದಿನಗಳಾಗಿದ್ದವು. ನಾನು ಆ ಕಾಡಿನಂತಹ ಕಾಡಿನಲ್ಲಿ ಸುತ್ತುತ್ತಿದ್ದೆ. ಕಂಡ ಕಂಡವರನ್ನೆಲ್ಲ ನೋಡುತ್ತ ಈತ ನಿಜವಾದ ಸಾಧಕನಿರಬಹುದೇ ? ಎಂದು ನನ್ನನ್ನೆ ನಾನು ಪ್ರಶ್ನಿಸಿಕೊಳ್ಳುತ್ತಿದ್ದೆ. ನಾನು ಯಾರನ್ನೇ ನೋಡಿದರೂ ನೋಡುವುದು ಅವರ ಕಣ್ಣುಗಳನ್ನು. ಯಾಕೆಂದರೆ ಮನುಷ್ಯನ ಎಲ್ಲ ಅಂಗಗಳು ಸುಳ್ಳುಗಳನ್ನು ಹೇಳಿದರೂ ಕಣ್ನು ಮಾತ್ರ ಸುಳ್ಳು ಹೇಳುವುದಿಲ್ಲ. ಕಣ್ಣು ಅತ್ಯಂತ ಪ್ರಾಮಾಣಿಕ.


ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋದವನು ಒಬ್ಬ ಶೇರ್ಪಾ. ನಾನು ಆತನನ್ನು ಕರೆಯುತ್ತಿದ್ದುದು ಬಹದೂರ್ ಅಂತ. ಆತ ನನಗೆ ಒಬ್ಬ ನಿಗೂಢ ವ್ಯಕ್ತಿಯನ್ನು ಪರಿಚಯಿಸುವುದಾಗಿ ಭರವಸೆ ನೀಡಿದ್ದ. ಆದರೆ ಆ ವ್ಯಕ್ತಿ ಯಾರು ಎಂಬುದನ್ನು ಮಾತ್ರ ಆತ ನನಗೆ ಹೇಳಿರಲಿಲ್ಲ. ನಾವು ಆ ಚಳಿಯಲ್ಲಿ ಹೆಜ್ಜೆ ಹಾಕುತ್ತಿದ್ದೆವು. ಮುಂದಿನ ದಾರಿ ಕಾಣುತ್ತಿರಲಿಲ್ಲ. ನಾವು ಸಾಗಿ ಬಂದ ದಾರಿಯ ಹೆಜ್ಜೆ ಗುರುತುಗಳು ಇರಲಿಲ್ಲ. ನಾವು ಹಿಂದೆಯೂ ಇರಲಿಲ್ಲ. ಮುಂದೇನು ಗೊತ್ತಿರಲಿಲ್ಲ. ಹಾಗೆ ಸಾಗುತ್ತಿದ್ದ ನಮಗೆ ಸಮಯ ಎಲ್ಲವನ್ನೂ ಬಿಟ್ಟು ಚಾದರ ಹೊದ್ದು ಮಲಗಿದಂತೆ ಅನ್ನಿಸುತ್ತಿತ್ತು.

ಸುಮಾರು ನಾಲ್ಕು ಗಂಟೆಗಳ ನಂತರ ನಾವು ತಲುಪಿದ್ದು ಒಂದು ಪ್ರಪಾತದಂತಿದ್ದ ಪ್ರದೇಶದ ಸಮೀಪ. ಆ ಪ್ರಪಾತದ ಪಕ್ಕದಲ್ಲಿ ಸಣ್ಣ ಕಾಲುದಾರಿಯಿತ್ತು. ಆ ಕಾಲುದಾರಿಯಲ್ಲಿ ಸಾಗಿದಾಗ ಮುಂದೆ ಕಂಡಿದ್ದು ಒಂದು ಗುಹೆ. ಹೊರಗಿನಿಂದ ನೋಡಿದರೆ ಅಲ್ಲಿ ಗುಹೆ ಇದ್ದುದು ಕಾಣುತ್ತಿರಲಿಲ್ಲ. ಆತ ಒಳ ಪ್ರವೇಶಿಸುವುದಕ್ಕೆ ಮೊದಲು ಬಹಾದೂರ್ ನನಗೆ ಕೊನೆಯ ಮಾತನ್ನು ಹೇಳುವಂತೆ ಹೇಳಿದ.

"ನೋಡಿ ನೀವು ಒಳಗೆ ಹೋದವರು ಸುಮ್ಮನೆ ನೋಡಿ. ಆದರೆ ನೀವು ಅಲ್ಲಿ ಏನನ್ನೂ ನೋಡುವುದಿಲ್ಲ. ಅಲ್ಲಿನ ಮಾತನ್ನು ಕೇಳಿಸಿಕೊಳ್ಳಿ. ಆದರೆ ಅಲ್ಲಿ ಏನೂ ಕೇಳಿಸದಂತೆ ಇದ್ದುಬಿಡಿ"

ಹಲವು ಹುಚ್ಚರನ್ನು, ವಿಚಿತ್ರವಾಗಿ ವರ್ತಿಸುವವರನ್ನು, ಅರ್ಥವಾಗದಂತೆ ಮಾತನಾಡುವವರನ್ನು ಸಾಕಷ್ಟು ನೋಡಿದ್ದರಿಂದ ಈತನ ಮಾತನ್ನು ನಾನು ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಒಪ್ಪಿಗೆ ಸೂಚಿಸುವವನಂತೆ ತಲೆ ಹಾಕಿದೆ. ಆತಗುಹೆಯ ಒಳಗೆ ಹೆಜ್ಜೆಹಾಕಿದ. ನಾನು ಆತನನ್ನು ಹಿಂಬಾಲಿಸಿದೆ.

ಒಳಗಡೆ ಕಪ್ಪು ಕತ್ತಲೆ. ಸ್ವಲ್ಪ ಸಮಯದ ನಂತರ ನನ್ನ ಕಣ್ಣುಗಳು ಆ ಕತ್ತಲೆಗೆ ಹೊಂದಿಕೊಳ್ಳತೊಡಗಿದವು. ನಾನು ಆ ಗುಹೆಯ ಒಳಗೆ ಕಣ್ಣು ಹಾಯಿಸಿದೆ. ತುಂಬಾ ಶುಭ್ರವಾದ ಗುಹೆ. ನೆಲವನ್ನು ಆಗತಾನೆ ನೀರು ಹಾಕಿ ಸಾರಿಸಿದಂತೆ. ಹಾಗೆ ಜೊತೆಗೆ ಅಲ್ಲಿ ವಾತಾವರಣ. ಸ್ವಲ್ಪ ಸಮಯದಲ್ಲಿ ಮನಸ್ಸು ಹೂವಿನಂತೆ ಅನ್ನಿಸತೊಡಗಿತ್ತು. ತುಂಬಾ ಹಗುರ. ಏನೋ ಅರ್ಥವಾಗದ ಸಂತಸ, ಸಂಭ್ರಮ. ಸುಮ್ಮನೆ ಎದ್ದು ಕುಣಿಯೋಣ ಅನ್ನಿಸುವ ಹಾಗೆ. ನಮ್ಮ ಸುತ್ತಮುತ್ತಲಿನ ವಾತಾವರಣ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ನಾನು ಅರಿಯದವನಲ್ಲ. ಸದಾ ನಗು ನಗುತ್ತ ಇರುವವರ ಮಧ್ಯೆ ಇದ್ದರೆ ನಮ್ಮ ಮನಸ್ಸು ಪ್ರಫುಲ್ಲವಾಗುತ್ತದೆ. ಹಾಗೆ ಸದಾ ಆಳುವವರ ನಡುವೆ ಇದ್ದರೆ ನಾವು ಅಳತೊಡಗುತ್ತೇವೆ. ಆದ್ದರಿಂದಲೇ ನಾವು ಎಂತಹ ಜನರ ನಡುವೆ ಇರುತ್ತೇವೆ ಎಂಬುದು ಬಹಳ ಮುಖ್ಯ.

ಆದರೆ ಅಲ್ಲಿ ನನಗಾಗುತ್ತಿದ್ದ ಅನುಭವ ನನ್ನ ಆವರೆಗಿನ ಅನುಭವಕ್ಕಿಂತ ತುಂಬಾ ಭಿನ್ನವಾಗಿತ್ತು. ನಾನು ಒಂದು ರೀತಿಯಲ್ಲಿ ಭಾವ ರಹಿತನಾಗಿದ್ದೆ. ಅಥವಾ ನನ್ನ ಮನಸ್ಸಿನಲ್ಲಿ ಒಡಮೂಡಿದ ಸಂಭ್ರಮ, ಸಂತೋಷ ಸ್ಥಾಯಿ ಭಾವ ವಾಗಿತ್ತು. ಅದನ್ನು ಬಿಟ್ಟು ಬೇರೆ ಭಾವವೇ ನನಗೆ ಬರುತ್ತಿರಲಿಲ್ಲ. ಮೊದಲ ಬಾರಿಗೆ ಬದುಕು ಏಷ್ಟೊಂದು ಸುಂದರ ಎಂದು ಅನ್ನಿಸತೊಡಗಿತ್ತು.

ನಾನು ನನ್ನ ಪಕ್ಕದಲ್ಲಿದ್ದ ಬಹದೂರ್ ನತ್ತ ನೋಡತೊಡಗಿದೆ. ಆತನಲ್ಲಿ ಯಾವ ಬದಲಾವಣೆಯಾದಂತೆ ಕಂಡು ಬರಲಿಲ್ಲ. ಆತ ಆ ಗುಹೆಯ ಮೂಲೆಯಡೆಗೆ ತದೇಕ ಚಿತ್ತದಿಂದ ನೋಡುತ್ತಿದ್ದ. ನಾನು ಅವನ ದೃಷ್ಟಿಯನ್ನು ಅನುಸರಿಸಿ ನೋಡತೊಡಗಿದೆ. ನಾನು ಏನನ್ನೋ ಹೇಳುವುದಕ್ಕೆ ಬಹದೂರ್ ನತ್ತ ನೋಡಿದೆ. ಆದರೆ ಆತ ಈ ಜಗತ್ತನ್ನೇ ಮರೆತವನಂತೆ ಇದ್ದ. ಈ ಮನಸ್ಥಿತಿಯಲ್ಲಿ, ಪರಿಸ್ಥಿತಿಯಲ್ಲಿ ಎಷ್ಟು ಹೊತ್ತು ಕಳೆದೆವೋ ತಿಳಿಯದು. ಒಮ್ಮೆಲೆ ಕತ್ತಲೆಯನ್ನು ಹೊಡೆದೊಡಿಸುವಂತೆ ಒಂದು ಆಕೃತಿ ನಮ್ಮತ್ತ ನಡೆದು ಬಂತು. ಬಹದೂರ್ ನೋಡುತ್ತಿದ್ದ ಗುಹೆಯ ಮೂಲೆಯಿಂದ ನಡೆದು ಬಂದ ಈ ಆಕೃತಿ ನಮ್ಮ ಹತ್ತಿರ ಬರುತ್ತಿದ್ದಂತೆ ನನಗೆ ಶಾಕ್.

ಆಕೆ ಒಬ್ಬ ೨೫ರ ಯುವತಿ. ನೀಳಕಾಯ. ಕಾಲಿನ ಮಧ್ಯಭಾಗದವರೆಗೆ ಇಳಿಬಿಟ್ಟ ಕೂದಲು. ನನಗೆ ತಕ್ಷಣ ಮನಸ್ಸಿನಲ್ಲಿ ಬಂದಿದ್ದು, ನಾನು ಸಣ್ಣಿಂದಲೂ ನೋಡುತ್ತ ಬಂದ ಅಕ್ಕಮಹಾದೇವಿಯ ಕ್ಯಾಲೆಂಡರು. ಹೌದು, ಈಕೆಯೂ ಸಂಪೂರ್ಣವಾಗಿ ನಗ್ನಳಾಗಿದ್ದಳು !ಮುಖದಲ್ಲಿ ಇದ್ದ ಸಣ್ಣ ನಗೆ. ಆ ನಗೆಯಲ್ಲಿ ವಿಚಿತ್ರ ಸೆಳೆತ. ಎಲ್ಲವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಹಾಗೆ.

ನನ್ನ ಬದುಕಿನಲ್ಲಿ ಅಲ್ಲಿಯವರೆಗೆ ನಗ್ನ ವ್ಯಕ್ತಿಗಳನ್ನೇ ನೋಡದಿದ್ದವ ನಾನು. ಆದರೆ ನನಗೆ ಶಾಕ್ ಆಗುವ ಹಾಗೆ ನನ್ನಲ್ಲಿ ಬೇರೆ ರೀತಿಯ ಭಾವನೆಗಳು ಬರುತ್ತಲೇ ಇರಲಿಲ್ಲ. ಅಮ್ಮನ ಬಳಿಗೆ ಒಡುವ ಮಗುವಿನ ಭಾವ ನನ್ನಲ್ಲಿ ತುಂಬಿಕೊಂಡಿತ್ತು. ಇದನ್ನು ಬಿಟ್ಟರೆ ಬೇರೆ ಭಾವವೇ ಇಲ್ಲ ! ತಾಯಿಯ ಮಡಿಲಿನಲ್ಲಿ ಆಶ್ರಯ ಪಡೆಯುವ ಶಿಶುವಿನ ಮನಸ್ಥಿತಿ ನನ್ನದಾಗಿಬಿಟ್ಟಿತ್ತು.

ಆಕೆ ಮಾತನಾಡತೊಡಗಿದಳು.

"ನಾನು ಬದುಕುತ್ತಿದ್ದೇನೆ ಎಂದರೆ ಅದು ಸುಳ್ಳು. ನೀನು ಬದುಕುತ್ತಿದ್ದಿ ಎಂದುಕೊಂಡರೆ ಅದು ಭ್ರಮೆ. ನಾನು ಎಂದರೆ ನನ್ನ ಭಾವನೆ. ನೀನು ಎಂದರೆ ನಿನ್ನ ಭಾವನೆ. ಭಾವನೆ ಇದ್ದಹಾಗೆ ಬದುಕಿರುತ್ತದೆ. ಇದನ್ನು ಬಿಟ್ಟು ಬೇರೆ ಇಲ್ಲ. ನಿನಗೆ ಇಲ್ಲಿ, ನೀನು ಗಂಡಸು ಎಂಬ ಭಾವನೆ ಬರುತ್ತಿಲ್ಲ. ನಿನಗೆ ಶಿಶುವಿನ ಭಾವನೆ ಮಾತ್ರ. ಆದ್ದರಿಂದ ನಿನಗೆ ನಗ್ನ ದೇಹವನ್ನು ನೋಡಿದರೂ ಕಾಮನೆಗಳು ಜಾಗೃತವಾಗುತ್ತಿಲ್ಲ. ನಿನಗೆ ನೀನು ಗಂಡಸು ಎಂದುಕೊಂಡಾಗ ಮಾತೃ ನಿನ್ನ ಕಾಮನೆಗಳು ಜಾಗೃತವಾಗುತ್ತದೆ. ಆದರೆ ನಾನು ನಿನಗೆ ತಾಯಿ. ನಿನ್ನ ಮನಸ್ಸು ಬೇರೆ ರೀತಿ ಯೋಚಿಸುವುದು ಸಾಧ್ಯವೇ ಇಲ್ಲ. "

ನಾನು ಅವಳನ್ನೇ ನೋಡುತ್ತಿದ್ದೆ. ಅವಳು ಹೇಳುತ್ತಿದ್ದುದು ನೂರಕ್ಕೆ ನೂರರಷ್ಟು ಸತ್ಯವಾಗಿತ್ತು. ನನಗೆ ನನ್ನ ಅಮ್ಮ ನೆನಪಾಗುತ್ತಿದ್ದಳು. ಅಮ್ಮ ನನ್ನನ್ನು ಎತ್ತಿಕೊಂಡು ಮುದ್ದಾಡುತ್ತಿದ್ದುದು, ನಾನು ಅವಳ ಜೊತೆ ಹಠ ಮಾಡುತ್ತಿದ್ದುದು ಎಲ್ಲವೂ ಕಣ್ಣು ಮುಂದೆ ಬರುತ್ತಿತ್ತು.

"ಮನುಷ್ಯ ಎಂದರೆ ಆತನ ಮನಸ್ಸು. ಮನಸ್ಸು ಬಿಟ್ಟರೆ ಬೇರೆನೂ ಇಲ್ಲ. ಈಗ ನೀನು ಪುಟ್ಟ ಬಾಲಕ. ನೀನಿನ್ನೂ ಗಂಡಸಾಗಿಲ್ಲ. ನಿನಗೆ ಯೌವನ ಬಂದಿಲ್ಲ. ನೀನು ಯಾವ ಸ್ತ್ರೀಯನ್ನು ಮಾತೃತ್ವದ ಭಾವನೆಯನ್ನು ಬಿಟ್ಟು ಬೇರೆ ರೀತಿ ನೋಡಲಾರೆ."

ಅವಳ ಮಾತಿನಲ್ಲಿ ಎಂತಹ ಆಕರ್ಷಣೆ ಇತ್ತೆಂದರೆ, ಅವಳು ಹೇಳಿದ್ದನ್ನು ಬಿಟ್ಟು ಬೇರೆ ಯೋಚನೆಗಳು ಮನಸ್ಸಿನಲ್ಲಿ ಬರುತ್ತಲೇ ಇರಲಿಲ್ಲ. ನಾನು ಆಗಲೂ ಆಸ್ಥಿತಿಯಲ್ಲಿ ಬೇರೆ ರೀತಿ ನೋಡುವುದಕ್ಕೆ ಯತ್ನಿಸತೊಡಗಿದೆ. ಆಕೆಯ ಸೌಂದರ್ಯ ಎಷ್ಟು ಅದ್ಭುತ ಎಂದು ಯೋಚಿಸಲು ಯತ್ನಿಸಿದೆ. ಹಾಗೆ ಅವಳ ಜೊತೆ ನಾನಿದ್ದಂತೆ ಕಲ್ಪಿಸಿಕೊಳ್ಳಲು ನೋಡಿದೆ. ಆದರೆ ನಾನಾಗ ನಿಸ್ಸಹಾಯಕನಾಗಿದ್ದೆ. ನನ್ನ ಮನಸ್ಸು ಬಾಲ್ಯಕ್ಕೆ ಒಡಿ ಹೋಗಿತ್ತು. ನನ್ನ ಊರಿನ ರಸ್ತೆಗಳಲ್ಲಿ ಗೋಲಿ ಆಡುತ್ತಿದ್ದಂತೆ ಅನ್ನಿಸತೊಡಗಿತು. ತಟ್ಟನೆ ಬಹಾದೂರನತ್ತ ತಿರುಗಿ ಕೇಳಿದೆ.

"ನಾನು ನೀನು ಗೋಲಿ ಆಡೋಣವಾ ?"

ಆಕೆ ನಗುತ್ತಿದ್ದಳು. ನಾನು ಗೋಲಿ ಆಡಲು ರಸ್ತೆ ಹುಡುಕುತ್ತಿದ್ದೆ. ಮುಂದೇನಾಯಿತು ಅನ್ನೋದು ಇನ್ನೊಂದು ಸ್ಟೋರಿ. ಅದನ್ನ ಬಿಡುವಾದಾಗ ಇನ್ನೊಮ್ಮೆ ಹೇಳ್ತೀನಿ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...