Thursday, December 10, 2009

ಮಾಧ್ಯಮಕ್ಕೆ ನೈತಿಕತೆ ಇದೆಯಾ......?

CªÀgÀÄ £À£ÉßzÀÄgÀÄ PÀĽwzÀÝgÀÄ.

¤ÃªÀÅ £ÀªÀÄä£ÀÄß JzÀÄgÀÄ PÀĽîj¸ÀÄwÛÃj. ¯Éʪï ZÀZÉð £ÀqÉ¢gÀÄwÛzÉ. ¤ÃªÀÅ C¥Ààl ¥ÁæªÀiÁtÂPÀgÀPÀAvÉ ªÀiÁvÀ£ÁqÀÄwÛÃj. ¤ªÀÄä §½ ªÀiÁzsÀåªÀÄ EgÀĪÀÅzÀjAzÀ £ÁªÀÅ ¤ÃªÀÅ ªÀiÁqÀĪÀ nPÉAiÀÄ£Éß®è PÉüÀÄvÀÛ PÀĽvÀÄPÉƼÀî¨ÉÃPÁUÀÄvÀÛzÉ. EAzÀÄ ªÀiÁzsÀåªÀÄPÉÌ »ÃUÉ ªÀiÁvÀ£ÁqÀĪÀ £ÉÊwPÀ ±ÀQÛ EzÉAiÀiÁ ?

CªÀgÀ F ¥Àæ±ÉßUÉ £À£Àß §½ GvÀÛgÀ EgÀ°®è. ªÀiÁzÀåªÀÄzÀ £ÉÊwPÀvÉAiÀÄ ¥Àæ±Éß CµÀÄÖ ¸ÀÄ®¨sÀªÁzÀÄzÀ®è. AiÀiÁPÉAzÀgÉ MAzÀÄ ªÀiÁzsÀåªÀÄ DAiÀiÁ PÁ® ªÀÄvÀÄÛ ¸ÀAzÀ¨sÀðzÀ ¥Àæw©A§ªÁVgÀÄvÀÛzÉ. ºÁUÉ MAzÀÄ ¤¢üðµÀÖ ¸ÀAzÀ¨sÀðzÀ°è M¼ÀUÉ EzÀÆÝ ºÉÆgÀUÉ ¤AvÀÄ £ÉÆÃqÀĪÀ aQvÀìPÀ §Ä¢Þ ªÀiÁzsÀåªÀÄPÉÌ EgÀ¨ÉÃPÁUÀÄvÀÛzÉ. aQvÀìPÀ §Ä¢Þ CAzÀ vÀPÀët C°è ¥ÁæªÀiÁtÂPÀvÉAiÀÄ ¥Àæ±ÉßAiÀÄÆ §gÀÄvÀÛzÉ. £ÀªÀÄä ¤®Ä«£À°è, D¯ÉÆÃZÀ£ÉAiÀÄ°è ¥ÁæªÀiÁtÂPÀvÉ EzÀÝgÉ ªÀiÁvÀæ aQvÀìPÀ ªÀÄ£À¹Üw gÀÆ¥ÀUÉƼÀÄîªÀÅzÀÄ ¸ÁzsÀå.

F ªÀiÁvÀ£ÀÄß CªÀjUÉ £Á£ÀÄ ºÉüÀ°®è. CzÀgÉ EAzÀÄ ªÀiÁzsÀåªÀÄ §zÀ¯ÁVzÉ. ªÀiÁzsÀåªÀÄzÀ°è PÉ®¸À ªÀiÁqÀĪÀªÀgÀÆ §zÀ¯ÁVzÁÝgÉ. ªÀiÁzsÀåªÀÄzÀ°è PÉ®¸À ªÀiÁqÀĪÀªÀgÀÄ ¸ÀA¥ÀÇtðªÁV ªÀiÁzsÀåªÀĪÀ£Éßà £ÀA©PÉÆAqÀÄ §zÀÄPÀÄwÛ®è. §ºÀ¼ÀµÀÄÖ d£ÀjUÉ §zÀÄPÀĪÀÅzÀPÉÌ ¨ÉÃgÉ ¨ÉÃgÉ zÁjUÀ½ªÉ. PÉ®ªÀgÀÄ ªÀiÁzsÀåªÀÄzÀ°è PÉ®¸À ªÀiÁqÀĪÀÅzÀÄ «¹nAUï PÁrðUÁV. E£ÀÆß PÉ®ªÀjUÉ EzÀÄ ¥Ámïð mÉʪÀiï eÁ¨ï.

£ÀªÀÄä £ÀqÀÄªÉ jAiÀįï J¸ÉÖÃmï ªÀåªÀºÁgÀ ªÀiÁqÀĪÀ ¥ÀwæPÉÆÃzÀå«ÄUÀ½zÁÝgÉ. UÀt £ÀqɸÀĪÀ ªÀiÁzsÀåªÀÄzÀ ªÀåQÛUÀ½zÁÝgÉ. ºÉÆÃmÉïï, ¨Ágï £ÀqɸÀĪÀªÀjzÁÝgÉ. ºÁUÉ ¹¤ªÀiÁ zsÁgÁªÁ»UÀ¼À°è PÉ®¸À ªÀiÁqÀÄvÀÛ, F §UÉÎ §gÉAiÀÄĪÀ ¥ÀwæPÉÆÃzÀå«ÄUÀ½zÁÝgÉ. ºÁUÉ avÀæ£ÀlgÁUÀĪÀ ªÉÄnÖ¯ÁV ªÀiÁzsÀåªÀĪÀ£ÀÄß §¼À¹PÉƼÀÄîªÀªÀjzÁÝgÉ. MAzÀÄ §zÀÄPÀĪÀ zÁjAiÀiÁV AiÀiÁªÀ PÉ®¸À ªÀiÁqÀĪÀÅzÀÄ vÀ¥Àà®è. DzÀgÉ vÀªÀÄä §zÀÄPÀĪÀ zÁjAiÀÄ°è ªÀÄÄAzÀĪÀjAiÀÄ®Ä ¥ÀwæPÉÆÃzÀåªÀĪÀ£ÀÄß §¼À¹PÉƼÀÄîªÀÅzÀÄ vÀ¥ÀÅöà.

EzÀ£Éß®è AiÀiÁPÉ ºÉüÀÄwÛzÉÝ£ÉAzÀgÉ ¥ÁæªÀiÁtÂPÀvÉAiÀÄ §UÉÎ ªÀiÁvÀ£ÁqÀÄwÛgÀĪÀÅzÀjAzÀ. £ÀªÀÄä D¯ÉÆÃZÀ£ÉAiÀÄ°è ¥ÁæªÀiÁtÂPÀvÉ §ರ¨ÉÃPÉAzÀgÉ £ÀªÀÄä ¸ÀéAvÀ »vÁ¸ÀQÛ ECgÀPÀÆqÀzÀÄ. £ÀªÀÄä ¸ÀÑAvÀ »vÁ¸ÀQÛ EgÀPÀÆqÀzÀÄ. AiÀiÁªÀÅzÉà «ZÁgÀ CxÀªÁ WÀl£ÉAiÀÄ°è CzÀ£ÀÄß ªÀgÀ¢ ªÀiÁqÀĪÀªÀgÀ, F §UÉÎ ¤zsÁðgÀ vÉUÉzÀÄPÉƼÀÄîªÀªÀgÀ ¥Á®ÄzÁjPÉ, ¸ÀºÀ¨sÁVvÀé EgÀPÀÆqÀzÀÄ. FUÀ ¨Ágï £ÀqɸÀĪÀ ªÀåQÛ ªÀgÀ¢UÁgÀ£ÁVzÀÝgÉ, D «ZÁgÀ §AzÁUÀ DvÀ ¥ÁæªÀiÁtÂPÀ ¤®ÄªÉÄ vÉUÉzÀÄPÉƼÀÄîªÀÅzÀÄ ¸ÁzsÀåªÉ ? UÀt ªÀiÁ°PÀ£ÁzÀ M§â ªÀgÀ¢UÁgÀ, F §UÉÎ JµÀÖgÀ ªÀÄnÖUÉ ¥ÁæªÀiÁtÂPÀ ¤®ÄªÀ£ÀÄß ¥ÀæzÀ²ð¸À§®è ? EzÀgÀ eÉÆvÉUÉ ªÀiÁzsÀåªÀÄzÀ DqÀ½vÀ ªÀUÀð PÀÆqÀ MAzÀ®è MAzÀÄ UÀÄA¥ÀÅ, gÁdQÃAiÀÄ ¥ÀPÀëUÀ¼À eÉÆvÉ vÀ£ÀߣÀÄß UÀÄgÀÄw¹PÉƼÀÄîwÛzÉ.

£ÉÊwPÀvÉAiÀÄ ¸ÀÆPÀë÷äªÀ£ÀÄß ªÀiÁzsÀåªÀÄ CxÀð ªÀiÁrPÉƼÀî¨ÉÃPÀÄ. ªÀiÁzsÀåªÀÄzÀ°è PÉ®¸À ªÀiÁqÀĪÀªÀgÀÄ CxÀð ªÀiÁrPÉƼÀî¨ÉÃPÀÄ. DzÀgÉ EAzÀÄ ªÀiÁzsÀåªÀÄ dUÀvÀÆÛ PÀÆqÀ ¸ÀA¥ÀÇgÀÚªÁV MAzÀÄ GzÀåªÀÄzÀAvÉ PÉ®¸À ªÀiÁqÀÄwÛzÉ. AiÀiÁªÀÅzÀÄ GzÀåªÀĪÁUÀÄvÀÛzÉAiÉÆà C®è ¯Á¨sÀ £ÀµÀÖ ªÀiÁvÀæ UÀt£ÉUÉ §gÀÄvÀÛzÉ. E°èAiÀÄÆ CµÉÖà ¯Á¨sÀ £ÀµÀÖªÉà ¥ÀgÀªÀÄ. ¸ÁªÀðd¤PÀ »vÁ¸ÀQÛ, §ºÀÄd£À »vÁAiÀÄ JA§ ªÀiÁvÀÄUÀ¼ÀÄ CxÀð PÀ¼ÉzÀÄPÉƼÀÄîwÛªÉ. EzÀjAzÀ ¥ÀwæPÉÆÃzÀåªÀÄzÀ £ÉÊwPÀvÉAiÀÄ £É®UÀlÄÖ ²y®UÉƼÀÄîwÛzÉ. ¸ÀªÀiÁd‰zÀ ¥ÉÇÃxÀð J¸ÉÖÃmï, J¸ÉÖÃmï JeÉAlgÀÄUÀ¼À vÁtªÁUÀÄwÛzÉ.

£À£Àß JzÀÄgÀÄ PÀĽvÀªÀgÀÄ E£ÉÆßAzÀÄ ªÀiÁvÀÄ ºÉýzÀgÀÄ.

FUÀ ¥ÀæwAiÉƧâ gÁdPÁgÀt ¯ÉÆÃPÁAiÀÄÄPÀÛgÀ JzÀÄgÀÄ vÀªÀÄä D¹Û WÉÆõÀuÉ ªÀiÁrPÉƼÀî¨ÉÃPÀÄ. ºÁUÉ ¥ÀwæPÉÆÃzÀå«ÄUÀ¼ÀÄ vÀªÀÄä D¹Û WÉÆõÀuÉ ªÀiÁqÀĪÀAvÉ PÁ£ÀÆ£ÀÄ AiÀiÁPÉ ªÀiÁqÀ¨ÁgÀzÀÄ ?

CªÀgÀ ªÀiÁvÀÄ £À£ÀUÉ M¦àUÉAiÀiÁ¬ÄvÀÄ. ¥ÀwæPÉÆÃzÀå«ÄUÀ¼ÀÄ D¹Û WÉÆõÀuÉ ªÀiÁrPÉÆAqÀgÉ ªÀÄgÀÄ¢£À ¥ÀwæPÉUÀ¼À°è vÀªÀÄä ¸ÀºÉÆÃzÉÆåÃVUÀ¼À D¹Û «ªÀgÀªÀ£Éßà ¥ÀæPÀn¸ÀĪÀ ¹ÜwAiÀÄ£ÀÄß H»¹.

Tuesday, December 8, 2009

ಒಂದು ಪೂರ್ವ ಪೀಠಿಕೆ.

ನಾನು ಕಳೆದ ಕೆಲವುದಿನಗಳಿಂದ ಏನನ್ನೂ ಬರೆದಿಲ್ಲ. ಯಾಕೋ ಬರೆಯಬೇಕು ಎಂದು ಅನ್ನಿಸುತ್ತಿರಲಿಲ್ಲ. ಬರೆಯುವುದೆಂದರೆ ಹಾಗೆ. ಅದು ನಮ್ಮ ಹೃದಯವನ್ನು ಬಸಿಯುವ ಕೆಲಸ.ಒಳಗಿರುವುದನ್ನೆಲ್ಲ ಹೊರಕ್ಕೆ ಹಾಕುವ ಕಾಯಕ. ಬರೆಯುವುದೆಂದರೆ ಅದು ಸತ್ಯವನ್ನು ಅನಾವರಣಗೊಳಿಸುವ ಕ್ರಿಯೆ. ಸತ್ಯದೆಡೆಗೆ ತೆರಳುವ ಪಯಣ.
ಈ ದಿನಗಳಲ್ಲಿ ನಾನು ನನ್ನ ಕೆಲಸವನ್ನು ಮಾಡಿಕೊಂಡಿದ್ದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕೆಲಸ ಮಾಡುವುದು ನನ್ನ ಜಾಯಮಾನ.
ಅಂದು ನಾನು ಕಚೇರಿಯಲ್ಲಿ ಕುಳಿತಿದ್ದಾಗ ನನ್ನ ಸ್ನೇಹಿತರೊಬ್ಬರು ಒಂದು ವಾರ ಪತ್ರಿಕೆಯೊಂದನ್ನು ತಂದು ಕೊಟ್ಟರು. ಆ ಪತ್ರಿಕೆಯನ್ನು ಅದುವರೆಗೆ ನಾನು ನೋಡಿರಲಿಲ್ಲ. ಅದರ ಹೆಸರನ್ನು ಕೇಳಿರಲಿಲ್ಲ. ಆ ಪತ್ರಿಕೆಯನ್ನು ನನ್ನ ಬಗ್ಗೆ ಅದೇನನ್ನೂ ಬರೆದಿದ್ದರು. ನಾನು ಅದನ್ನು ನೋಡಿ ನಕ್ಕು ಬಿಟ್ಟೆ. ಇದೆಲ್ಲ ಸಹಜ ಅನ್ನಿಸಿತು.
ಈಗ ಒಂದು ವಾರದ ಹಿಂದಿನ ಮಾತು. ಇನ್ನೊಂದು ವಾರ ಪತ್ರಿಕೆ ನನ್ನ ಟೇಬಲ್ಲಿನ ಮೇಲಿತ್ತು. ಆ ಪತ್ರಿಕೆಯಲ್ಲೂ ನನ್ನ ಬಗ್ಗೆ ಪ್ರಸ್ತಾಪವಿತ್ತು. ಈ ಪ್ತತ್ರಿಕೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಯಾರೋ ಹೇಳಿದರು; ಇದನ್ನೆಲ್ಲ ನಿಮ್ಮ ಜೊತೆ ಕೆಲಸ ಮಾಡುತ್ತಿದ್ದವರೆ ಬರೆಸುತ್ತಿದ್ದಾರೆ !
ನಾನು ಇರಬಹುದು ಇಲ್ಲದೆಯೋ ಇರಬಹುದು ಎಂದು ಸುಮ್ಮನಾದೆ. ಆದರೆ ಮಾಧ್ಯಮ ಜಗತ್ತು ನನ್ನದು. ಇಲ್ಲಿಯೇ ನನ್ನ ಬದುಕನ್ನು ರೂಪಿಸಿಕೊಂಡವನು ನಾನು. ಹೀಗಾಗಿ ಹೇಳಿದ್ದನ್ನೆಲ್ಲ ಹೇಳಿಸಿಕೊಂಡು ಇರುವುದು ಸಾಧ್ಯವಿಲ್ಲ. ನನಗೆ ಗೊತ್ತಿರುವ ಸತ್ಯವನ್ನು ನಾನು ಹೇಳಲೇಬೇಕು. ಯಾಕೆಂದರೆ ಅದು ನನ್ನ ಕರ್ತವ್ಯ. ಈ ಕಾರಣದಿಂದಲೇ ನನ್ನ ಅನುಭವವನ್ನು ಹೇಳಲೇಬೇಕು ಅನ್ನಿಸಿತು. ಹಾಗೆ ನೋಡಿದರೆ ನನ್ನ ಪತ್ರಿಕೋದ್ಯಮದ ಅನುಭವವನ್ನು ನಾನು ಒಂದೆರಡು ವರ್ಷಗಳ ಹಿಂದೆ ಬರೆಯುವುದಕ್ಕೆ ಪ್ರಾರಂಭಿಸಿದ್ದೆ. ಅದು ಸುಮ್ಮಾರು ೧೦೦ ಪುಟಗಳನ್ನು ತಲುಪಿತ್ತು. ಆದರೆ ಕಂಪ್ಯೂಟರ್ ತೊಂದರೆ ಇಂದಾಗಿ ಬರೆದಿದ್ದೆಲ್ಲ ಹೊರಟು ಹೋಯಿತು. ಈಗ ಮತ್ತೊಮ್ಮೆ ಬರೆಯಲು ಪ್ರಾರಂಭಿಸಬೇಕು. ಅದು ನನ್ನೊಬ್ಬನ ಅನುಭವ ಮಾತ್ರ ಆಗಿರದೇ ಒಂದು ಕಾಲ ಘಟ್ಟದ ಪತ್ರಿಕೋದ್ಯಮದ ದಾಖಲೆಯೂ ಆಗಬೇಕು.
ಹೀಗೆ ಯೋಚಿಸುತ್ತಿರುವಾಗ ನನಗೆ ಅನ್ನಿಸಿದ್ದು, ನನ್ನ ಇತ್ತೀಚಿನ ಅನುಭವದಿಂದಲೇ ನನ್ನ ಬರೆಹವನ್ನು ಪ್ರಾರಂಭಿಸಬೇಕು ಎಂದು. ನಾನು ಕಾರ್ಯಕ್ರಮ ಮಾಡಿಕೊಂಡು ಬದುಕುತ್ತಿದ್ದವನು, ಚಾನಲ್ ಒಂದರ ಮುಖ್ಯಸ್ಥನಾಗಿದ್ದು, ಅಲ್ಲಿನ ನನ್ನ ಅನುಭವ ಎಲ್ಲವನ್ನು ದಾಖಲಿಸುತ್ತೇನೆ. ಹಾಗೆ ಇಂದಿನ ಮಾಧ್ಯಮಗಳ ಸ್ಥಿತಿ, ಕೆಲಸ ಮಾಡುವವರ ಮನಸ್ಥಿತಿ ಎಲ್ಲವನ್ನೂ ತೆರೆದಿಡುತ್ತೇನೆ.
ಕತ್ತಲಲ್ಲಿ ನಿಂತು ಕಲ್ಲು ಹೊಡೆಯುವವರಿಗೂ ಉತ್ತರ ನೀಡುತ್ತೇನೆ.

Wednesday, September 23, 2009

ಅಂತರ- ಅತ್ಮ- ಕರಕರೆ............!

ನಾನು ಅವರ ಎದುರು ಕುಳಿತಿದ್ದೆ. ಅವರು ಮಾತನಾಡುತ್ತಲೇ ಇದ್ದರು.
"ನನ್ನ ಹೆಂಡತಿಯ ಆರೋಗ್ಯ ಸರಿಯಿಲ್ಲ. ಅವಳು ಮನೆಯಲ್ಲಿ ಒಬ್ಬಳೇ. ನಾವು ಫ್ಲಾಟ್ ಒಂದರಲ್ಲಿ ವಾಸಿಸುತ್ತಿದ್ದೇವೆ. ಇದನ್ನು ಬಿಟ್ಟರೆ ನನಗೆ ಬೇರೆ ಆಸ್ತಿಯಿಲ್ಲ."
ಅವರು ಮಧ್ಯೆ ಮಧ್ಯೆ ತಮಗೆ ಬರುತ್ತಿದ್ದ ದೂರವಾಣಿ ಕರೆಗಳಿಗೆ ಉತ್ತರಿಸುತ್ತಿದ್ದರು. ಹಾಗೆ ಬಾಗಿಲ ಹತ್ತಿರ ನಿಂತಿದ್ದ ಕೆಲವು ಅಧಿಕಾರಿಗಳು ಆಗಾಗ ಬಗ್ಗಿ ನೋಡಿ ಹೋಗುತ್ತಿದ್ದರು.
"ನನಗೆ ಸಕ್ಕರೆ ಕಾಯಿಲೆ ಬಂದು ನಲವತ್ತು ವರ್ಷ ಆಯ್ತು. ಆಗಿನಿಂದ ಈ ರೋಗದ ಜೊತೆ ಬದುಕುತ್ತಿದ್ದೇನೆ. ಉಳಿದಂತೆ ಆರೋಗ್ಯದ ಸಮಸ್ಯೆ ಇಲ್ಲ. ನನ್ನ ದಿನಚರಿಯನ್ನು ನಾನು ಹಾಗೆ ರೂಪಿಸಿಕೊಂಡಿದ್ದೇನೆ. ರಾತ್ರಿ ೧೦ ಗಂಟೆಗೆ ಮಲಗಿ ಬಿಡುತ್ತೇನೆ. ಟೀವಿಯನ್ನು ಹೆಚ್ಚಾಗಿ ನೋಡುವುದಿಲ್ಲ."
ಅವರು ತಮ್ಮ ಮಾತನ್ನು ಹೀಗೆ ಮುಂದುವರಿಸಿದ್ದರು.ತಮ್ಮ ವೈಯಕ್ತಿಕ ಬದುಕಿನಿಂದ ತಮ್ಮ ವೃತ್ತಿಯವರೆಗೆ ಅವರ ಮಾತಿನ ಹರಿವು ಇತ್ತು.
"ನನಗೆ ಮಕ್ಕಳಿಲ್ಲ. ನಾವು ಇಬ್ಬರೇ " ಎಂದರು ಅವರು.
ಇವರು ಸಂತೋಷ ಹೆಗ್ಡೆ. ಕರ್ನಾಟಕದ ಲೋಕಾಯುಕ್ತರು. ನಾನು ಅವರಿಗೆ ಹೇಳಿದೆ.
"ನೀವು ರಾಜ್ಯಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗ ಯಾರೂ ನೀವು ಹೀಗೆ ಕೆಲಸ ಮಾಡುತ್ತೀರಿ ಎಂದುಕೊಂಡಿರಲಿಲ್ಲ. ಅದಕ್ಕೆ ಬಹುಮುಖ್ಯ ಕಾರಣ ನಿಮಗಿಂತ ಮೊದಲು ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ವೆಂಕಟಾಚಲ. ಅವರು ಲೋಕಾಯುಕ್ತರ ಹುದ್ದೆ ಎಂತಹುದು ಎಂಬುದನ್ನು ತೋರಿಸಿಕೊಟ್ಟಿದ್ದರು. ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನರಾಗಿದ್ದ ಅವರು ತಾವೇ ಧಾಳಿಯ ನೇತೃತ್ವ ಒಹಿಸುತ್ತಿದ್ದರು. ಹಲವು ಸಂದರ್ಭಗಳಲ್ಲಿ ಪತ್ರಕರ್ತರನ್ನು ಮಾಧ್ಯಮದವರನ್ನು ಕರೆದೊಯ್ಯುತ್ತಿದ್ದರು. ಹೀಗೆ ತಮ್ಮದೇ ಆದ ಛಾಪು ಮೂಡಿಸಿದ್ದವರು ಅವರು. ಹೀಗಾಗಿ ಅವರ ಸ್ಥಾನಕ್ಕೆ ಬರುವುದು ದೊಡ್ಡ ಸವಾಲೇ ಆಗಿತ್ತು ಅಲ್ಲವಾ ?"
ಅವರು ಸುಮ್ಮನೆ ನಕ್ಕರು. ನನಗೆ ನಾನೇ ಧಾಳಿಯ ನೇತೃತ್ವ ಒಹಿಸಿಕೊಳ್ಳುವುದರಲ್ಲಿ ಅಂತಹ ನಂಬಿಕೆ ಇಲ್ಲ. ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡುವುದು ನಮ್ಮ ಕೆಲಸ ಎಂದರೆ ಹೆಗ್ಡೆ.
"ನಾನು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗ ನನಗೆ ಅನುಕೂಲವಾದ ಹಲವು ಅಂಶಗಳಿದ್ದವು. ಬಹಳ ವರ್ಷ ಕರ್ನಾಟಕದ ಹೊರಗೆ ಇದ್ದುದರಿಂದ ನನಗೆ ಇಲ್ಲಿ ಪರಿಚಯದವರು ಹೆಚ್ಚಾಗಿ ಇರಲಿಲ್ಲ. ಇದು ನನಗೆ ಕೆಲಸ ಮಾಡುವುದಕ್ಕೆ ಅನುಕೂಲವಾಯಿತು. "
ಸಂತೋಷ ಹೆಗ್ಡೆ ಅವರು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗ ಅವರು ಅಧಿಕಾರಶಾಹಿಗಳಿಂದ, ರಾಜಕಾರಣಿಗಳಿಂದ ತೊಂದರೆ ಅನುಭವಿಸಬೇಕಾಯಿತು. ಅವರು ಬಯಸಿದ ಅಧಿಕಾರಿಗಳನ್ನು ನೀಡಲು ಸರ್ಕಾರ ಹಿಂದೇಟು ಹಾಕಿತು. ತಾವು ಕೊಟ್ಟ ಅಧಿಕಾರಿಗಳನ್ನೇ ತೆಗೆದುಕೊಳ್ಳುವಂತೆ ಅವರ ಮನವೊಲಿಸಲು ಯತ್ನ ನಡೆಸಿತು. ಆದರೆ ಅವರು ಇದ್ಯಾವುದಕ್ಕೂ ಬಗ್ಗಲಿಲ್ಲ. ತಾವು ಬಯಸಿದ ಅಧಿಕಾರಿಗಳನ್ನೇ ಪಡೆದರು. ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಅವರಿಂದ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದರು. ಹಲವರ ಬಣ್ಣ ಬಯಲಾಯಿತು. ಆದರೆ ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವ ಸರ್ಕಾರದ ಭರವಸೆ ಮಾತ್ರ ಈಡೇರಲಿಲ್ಲ. ಅಧಿಕಾರಕ್ಕೆ ಬರುವುದಕ್ಕೆ ಮೊದಲು ಲೋಕಾಯುಕ್ತರಿಗೆ ಪರಮಾಧಿಕಾರ ಇರಬೇಕು ಎಂದು ಭಾಷಣ ಮಾಡಿದ್ದ ಬಿಜೆಪಿ ನಾಯಕರು ತಮ್ಮ ನಿಲುವು ಬದಲಿಸಿದರು. ಟೊಪ್ಪಿ ತಿರುಗಿ ಹಾಕಿದರು. ಗಣಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿದ ವರದಿಯನ್ನು ತಲೆ ದಿಂಬಾಗಿ ಮಾತ್ರ ಉಪಯೋಗಿಸತೊಡಗಿದರು.
ಹಾಗೆ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದ ಅಧಿಕಾರಿಗಳನ್ನು ಉಳಿಸಲು ಅಧಿಕಾರಶಾಹಿ ಯತ್ನ ನಡೆಸಿದಾಗಲೆಲ್ಲ ಈ ಅಧಿಕಾರಸ್ಥ ರಾಜಕಾರಣಿಗಳು ಜಾಣ ಮೌನ ಪ್ರದರ್ಶಿಸಿದರು.
ಈಗ ನನಗೆ ಲೋಕಾಯುಕ್ತರು ಅಸಹಾಯಕರಾಗಿ ಕಾಣುತ್ತಾರೆ. ಭ್ರಷ್ಟಚಾರದ ವಿರುದ್ಧ ಅವರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರದಿಂದ ಬೆಂಬಲ ದೊರಕುತ್ತಿಲ್ಲ. ಕೋಟ್ಯಾಂತರ ರೂಪಾಯಿ ಹಣ ಹೊಡೆದ ಭಾರಿ ಮನೆ ಆಸ್ತಿ ಮಾಡಿದ ಅಧಿಕಾರಿಗಳ ಭಾವಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾದಾಗ ರಾಜಕಾರಣಿಗಳು ಮತ್ತು ಇತರೇ ಅಧಿಕಾರಿಗಳು ಚೆನ್ನಾಗಿ ಹಣ ಮಾಡಿದ್ದಾನೆ ಎಂದು ಮನಸ್ಸಿನಲ್ಲೇ ಸಂಭ್ರಮಿಸುವ ವಾತಾವರಣ ಈಗ ನಿರ್ಮಾಣವಾಗಿದೆ. ಲೋಕಾಯುಕ್ತರ ಬಲೆಗೆ ಬೀಳುವುದು ಸಂಭ್ರಮ ಪಡುವ ವಿಚಾರವಾಗಿದೆ.
ಒಬ್ಬ ರಾಜಕಾರಣಿಗೆ, ಅಧಿಕಾರಿಗೆ ಸಣ್ಣ ಲಜ್ಜೆ ಎನ್ನುವುದು ಇರಬೇಕಾಗುತ್ತದೆ. ಮಾನ ಮರ್ಯಾದೆಗೆ ಅಂಜುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಆದರೆ ಇಂದು ಲಜ್ಜೆ ಎನ್ನುವುದು ಎಲ್ಲರ ಮನಸ್ಸಿನಿಂದ ಹೊರಟು ಹೋಗಿದೆ. ಜನ ಕೂಡ ಇಂತಹ ಸ್ಥಿತಿಯನ್ನು ತಲುಪಿಬಿಟ್ಟಿದ್ದಾರೆ. ಲಂಚ ತೆಗೆದುಕೊಳ್ಳಲಿ. ನಮ್ಮ ಕೆಲಸ ಮಾಡಿಕೊಡಲಿ ಎಂಬ ಮನಸ್ಥಿತಿ ಸಾರ್ವಜನಿಕರದು. ಒಬ್ಬ ವ್ಯಕ್ತಿಗೆ ಹಾಗೆ ಸಮಾಜಕ್ಕೆ ಅಂತರಾತ್ಮ ಎನ್ನುವುದು ಇರಬೇಕು. ಅದು ಆಗಾಗ ನಮ್ಮನ್ನು ಎಚ್ಚರಿಸುತ್ತಿರಬೇಕು.ತಪ್ಪು ಮಾಡಲು ಹೊರಟಾಗಲೇ ಅಂತರಾತ್ಮ ಕೈ ಹಿಡಿದು ಹಿಂದಕ್ಕೆ ಎಳೆಯಬೇಕು. ಹಾಗೆ ಬದುಕುವುದಕ್ಕೆ ಕನಿಷ್ಟ ನೈತಿಕ ಪ್ರಜ್ನೆಯಾದರೂ ಇರಬೇಕು.
ಈಗ ನಿಮ್ಮ ಮುಂದೆ ನಮ್ಮ ಅಧಿಕಾರಸ್ಥರ ಮುಖ ಬರಲಿ. ಒಂದೊಂದೇ ಮುಖವನ್ನು ನೋಡಿ. ಇವರಿಗೆ ಅತ್ಮ ಎನ್ನುವುದು ಇದೇ ಎಂದು ಅನ್ನಿಸುತ್ತಾ ? ಇವರೆಲ್ಲ ಅಂತರಾತ್ಮದ ಮಾತು ಕೇಳುತ್ತಾರೆ ಎಂದು ಅನ್ನಿಸುತ್ತಾ ?ಇಲ್ಲ, ಇವರಿಗೆ ಅಂತರಾತ್ಮನ ಕರೆ ಬರೀ ಕರಕರೆ. ಇವರೆಲ್ಲ ಕಮೀಷನ್ ಏಜೆಂಟರಂತೆ ಕಾಣುತ್ತಾರೆ. ಕಮೀಷನ್ ಗಾಗಿ ರಾಜಕಾರಣ ಮಾಡುವವರು. ಕಮೀಷನ್ನಿಗಾಗಿ ಬದುಕುವವರು. ಇಂತವರ ನಡುವೆ ಸಂತೋಷ ಹೆಗ್ಡೆ ಅಪರೂಪದವರಾಗಿ ಕಾಣುತ್ತಾರೆ.

Tuesday, September 22, 2009

ಉರುಳಿಬಿದ್ದ ಮುಕುಟ............

ಭಾರತೀಯ ಜನತಾ ಪಾರ್ಟಿಯ ಲೋಹ ಪುರುಷ್ ಎಂದು ಕರೆಸಿಕೊಂಡವರು ಎಲ್. ಕೆ. ಅಡ್ವಾಣಿ. ಕೇಸರಿ ಪಕ್ಷದಲ್ಲಿ ವಾಜಪೇಯಿ ಅವರಿಗಿಂತ ಹೆಚ್ಚಿನ ಅನುಯಾಯಿಗಳನ್ನು ಪಡೆದವರು ಅವರು. ಸಂಘ ಪರಿವಾರದ ಅಚ್ಚು ಮೆಚ್ಚಿನ ನಾಯಕರಾಗಿ ಇದ್ದವರು. ಬಿಜೆಪಿ ಸಿದ್ಧಾಂತದ ಮುಖ ಎಂದೇ ಖ್ಯಾತಿ ಪಡೆದವರು. ಬಿಜೆಪಿ ಎಂದರೆ ಅಡ್ವಾಣಿ ಎಂದು ಹೇಳುವಂತೆ ಪಕ್ಷದ ಜೊತೆ ತಾದ್ಯಾತ್ಮವನ್ನು ಹೊಂದಿದ್ದ ನಾಯಕ.
ಇದು ಹಳೆಯ ಕಥೆ. ಇಂದು ಆಡ್ವಾಣಿ ಬಿಜೆಪಿಗೆ ಬೇಕಾಗಿಲ್ಲ. ಸಣ್ಣ ಪುಟ್ಟ ನಾಯಕರು ಅಡ್ವಾಣಿಯ ವಿರುದ್ಧ ಮಾತನಾಡುವ ಸ್ಥಿತಿ ಈಗ ನಿರ್ಮಾಣವಾಗಿದೆ. ಕಳೆದ ಲೋಕಸಭಾ ಚುನಾವಣೆ ಸೋಲಿನ ನಂತರ ಪಕ್ಷದಲ್ಲೇ ಅವರು ಅಸ್ಪ್ರಶ್ಯರಾಗಿದ್ದಾರೆ. ಬಿಜೆಪಿ ಎಂಬ ಹಿಂದೂ ದೇವಾಲಯದ ಕಳಶ ಉರುಳಿ ಬಿದ್ದಿದೆ. ಯಾಕೆ ಅಡ್ವಾಣಿ ಇಂತಹ ಸ್ಥಿತಿಯನ್ನು ತಲುಪಿದ್ದಾರೆ ? ತಮ್ಮ ಸುದೀರ್ಘ ರಾಜಕೀಯ ಬದುಕಿನ ಕೊನೆಯಲ್ಲಿ ಅವರು ಯಾಕೆ ಈ ಸ್ಥಿತಿಯನ್ನು ತಲುಪಿದ್ದಾರೆ ? ಇದಕ್ಕೆ ಏನು ಕಾರಣ ?
ಅಡ್ವಾಣಿ ಅವರ ರಾಜಕೀಯ ಬದುಕನ್ನು ಒಮ್ಮೆ ಮೆಲಕು ಹಾಕಿ. ನಿಜವಾದ ಅರ್ಥದಲ್ಲಿ ಅವರು ನಾಯಕರಾಗಿದ್ದರೆ ? ನಾಯಕತ್ವದ ಗುಣ ಧರ್ಮ ಅವರಿಗಿತ್ತೆ ? ಯೋಚಿಸಿ ನೋಡಿ.
ಅಡ್ವಾಣಿ ಅವರನ್ನು ಅರ್ಥ ಮಾಡಿಕೊಳ್ಳಲು ಅವರನ್ನು ವಾಜಪೇಯಿ ಅವರ ಜೊತೆ ಹೋಲಿಸಬೇಕು. ಆಗ ಅವರ ವ್ಯಕ್ತಿತ್ವ ಬಿಚ್ಚಿಕೊಳ್ಳುತ್ತದೆ. ವಾಜಪೇಯಿ ಅವರ ವ್ಯಕ್ತಿತ್ವದಲ್ಲಿ ತಾತ್ವಿಕ ಬದ್ಧತೆ ಇತ್ತು. ಆದರೆ ತಾತ್ವಿಕತೆಯನ್ನು ಮೀರಿ ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇತ್ತು. ಅವರು ಎಲ್ಲಕ್ಕಿಂತ ಬದುಕು ಮುಖ್ಯ ಎಂದು ಅರ್ಥ ಮಾಡಿಕೊಳ್ಳುವವರಾಗಿದ್ದರು. ಜೊತೆಗೆ ಅವರಿಗೆ ಕವಿ ಮನಸ್ಸು ಇತ್ತು. ವಾಜಪೇಯಿ ಕವಿಯಾಗಿ ಸಿದ್ಧಾಂತವನ್ನು ಮರೆಯ ಬಲ್ಲವರಾಗಿದ್ದರು. ಪಕ್ಷದ ತತ್ವ ಸಿದ್ಧಾಂತದ ಬೇಲಿಯನ್ನು ದಾಟ ಬಲ್ಲವರಾಗಿದ್ದರು. ಹಾಗೆ ವಾಜಪೇಯಿ ಎಲ್ಲವನ್ನು ಮರೆತು ನಗಬಲ್ಲವರಾಗಿದ್ದರು. ಆ ನಗು ಮಗುವಿನ ಮುಗ್ದ ನಗುವಿನ ಹಾಗೆ. ಬದುಕನ್ನು ಇಡೀಯಾಗಿ ಅನುಭವಿಸುವ ವ್ಯಕ್ತಿ ವಾಜಪೇಯಿ. ಅವರು ಮದುವೆಯಾಗದಿದ್ದರೂ ತಾವು ಬ್ರಹ್ಮಚಾರಿ ಎಂದು ಕೊಚ್ಚಿಕೊಂಡವರಲ್ಲ. ಬಿಜೆಪಿಯಂತಹ ಪಕ್ಷದಲ್ಲಿದ್ದೂ ಮದ್ಯಪಾನ ವಿರೋಧಿಯಾಗಿರಲ್ಲಿಲ್ಲ. ಬದುಕಿನಲ್ಲಿ ಸಿಕ್ಕಿದ್ದನ್ನು ಮೊಗೆದು ಅನುಭವಿಸುವವರಾಗಿದ್ದರು. ವಾಜಪೇಯಿ.
ಆದರೆ ಆಡ್ವಾಣಿ ಹಾಗಲ್ಲ. ಅವರು ತಮ್ಮ ರಾಜಕೀಯ ಬದುಕಿನ ಮೊದಲ ಘಟ್ಟದಲ್ಲಿ ಪಕ್ಷದ ಸಿದ್ಧಾಂತವನ್ನು ಎಷ್ಟು ಬಲವಾಗಿ ನಂಬಿದ್ದರೆಂದರೆ, ಬಾಬ್ರಿ ಮಸೀದಿ ಉರುಳಿದಾಗ ಅದನ್ನು ಎಂಜಾಯ್ ಮಾಡುವಂತಹುದು. ಅವರು ಆಗ ಕಟ್ಟರ್ ಪಂಥೀಯ ಹಿಂದುತ್ವವಾದಿ. ಆದರೆ ಅವರು ಈ ಸಿದ್ಧಾಂತವನ್ನು ಕೊನೆಯವರೆಗೆ ನಂಬಿದ್ದರೆ ಕನಿಷ್ಟ ಸಂಘ ಪರಿವಾರವಾದರೂ ಅವರನ್ನು ಪ್ರೀತಿಸುತ್ತಿತ್ತು. ಗೌರವಿಸುತ್ತಿತ್ತು. ಆದರೆ ಎಲ್ಲರೂ ನಂಬಿಕೊಂಡಂತೆ ಅವರ ಸೈದ್ಧಾಂತಿಕ ನಂಬಿಕೆಯ ಗೋಡೆಯಲ್ಲೂ ಬಿರುಕುಗಳಿದ್ದವು. ಅಲ್ಲಿ ರಾಜಕೀಯ ಮಹತ್ವಾಕಾಂಕ್ಷೆಯ ಹುಲ್ಲು ಬೆಳೆಯತೊಡಗಿತ್ತು. ಇದು ಕಟ್ಟಡವನ್ನೇ ಶಿಥಿಲಗೊಳಿಸುತ್ತಿರುವುದು ಆಡ್ವಾಣಿಯವರಿಗೆ ಅರ್ಥವಾಗಲಿಲ್ಲ.
ಅಡ್ವಾಣಿ ಒಂದು ಅರ್ಥದಲ್ಲಿ ನಮ್ಮ ದೇವೇಗೌಡರ ಹಾಗೆ. ಅವರಿಗೆ ರಾಜಕೀಯವನ್ನು ಬಿಟ್ಟು ಬದುಕುವುದು ಗೊತ್ತಿರಲಿಲ್ಲ. ಎಲ್ಲವನ್ನೂ ಮರೆತು ನಗುವುದು ಗೊತ್ತಿರಲಿಲ್ಲ. ನಮ್ಮ ಜೆ. ಎಚ್. ಪಟೇಲರ ಹಾಗೆ ತಮ್ಮನ್ನೇ ಹಾಸ್ಯಕ್ಕೆ ಒಳಪಡಿಸಿಕೊಂಡು ನೀನು ಇದೆಯಲ್ಲ ಎಂದು ನಕ್ಕು ಬಿಡುವುದು ಗೊತ್ತಿರಲಿಲ್ಲ. ಜೊತೆಗೆ ಆಡ್ವಾಣಿಯವರ ದೌರ್ಬಲ್ಯವನ್ನು ವಿಶ್ಲೇಷಿಸುವ ಕೆಲಸವನ್ನು ಮಾಧ್ಯಮಗಳು ಮಾಡಲಿಲ್ಲ. ಕೆಲವರು ಅವರನ್ನು ಹೊಗಳಿ ಅಟ್ಟಕ್ಕೇರಿಸುವ ಕೆಲಸ ಮಾಡುತ್ತ ಬಂದರು. ಕೆಲವರು ಟೀಕಿಸುವುದಕ್ಕೆ ಸೀಮೀತವಾದರು. ಇದರ ನಡುವೆ ರಥಯಾತ್ರೆ ಮಾಡಿದ ಅಡ್ವಾಣಿ ತಾವು ರಾಮ ಎಂದು ತಮ್ಮನ್ನೇ ತಾವು ನಂಬಿಸಿಕೊಂಡರು. ಅಲ್ಲಿಯೇ ಅವರ ಪಥನದ ಮೊದಲ ಹೆಜ್ಜೆ ಗುರುತುಗಳು ಮೂಡತೊಡಗಿದ್ದವು. ಜೊತೆಗೆ ತಮ್ಮ ಜೊತೆ ಕೆಲವು ಭಟ್ಟಂಗಿಗಳನ್ನು ಇಟ್ಟುಕೊಂಡು ರಾಜಕಾರಣ ಮಾಡತೊಡಗಿದರು. ಕೊನೆಗೆ ಅವರು ಹಿಂದುತ್ವವಾದಿಯಾಗಿಯೂ ಉಳಿಯಲಿಲ್ಲ. ಧರ್ಮನಿರಪೇಕ್ಷವಾದಿ ಎಂದ್ ಜನ ನಂಬುವುದೂ ಸಾಧ್ಯವಿರಲಿಲ್ಲ. ಇಂಥಹ ಸ್ಥಿತಿಯಲ್ಲಿ ಯಶಸ್ಸು ಮಾತ್ರ ಉಳಿಸಬಹುದಾಗಿತ್ತು. ಆದರೆ ಎಂದು ಅವರು ಪಕ್ಷವನ್ನು ಅಧಿಕಾರಕ್ಕೆ ತರಲು ವಿಫಲರಾದರೋ ಎಲ್ಲರೂ ಅವರ ವಿರುದ್ಧ ಎದ್ದು ನಿಂತರು. ಸಿಕ್ಕ ಸಿಕ್ಕವರು ತಲೆಗೊಂದರಂತೆ ಕಲ್ಲು ಹೊಡೆಯತೊಡಗಿದರು.
ಈ ವರ್ಷಾಂತ್ಯಕ್ಕೆ ಅಡ್ವಾಣಿ ರಾಜಕೀಯ ನಿವೃತ್ತಿ ಪಡೆಯುವುದು ಬಹುತೇಕ ಖಚಿತ. ಆದರೆ ನಮ್ಮ ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕಾದ ಹಲವಾರು ಅಂಶಗಳು ಇಲ್ಲಿವೆ. ಒಬ್ಬ ಮಹತ್ವಾಕಾಂಕ್ಷಿ ರಾಜಕಾರಣಿ ಒಬ್ಬ ರಾಜನೀತಿಜ್ನನಾಗಿರಬೇಕಾಗುತ್ತದೆ. ಎಲ್ಲ ಕ್ರಿಯೆಗಳಲ್ಲಿ ಒಳಗೊಂಡು ಅದರಿಂದ ಹೊರಕ್ಕೆ ಬರುವ ಮನಸ್ಥಿತಿಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ರಾಜಕೀಯ ಛಲದ ಜೊತೆಗೆ ಎಲ್ಲವನ್ನೂ ಕ್ಷಮಿಸಿ ಬಿಡುವ ಗುಣವನ್ನೂ ಬೆಳೆಸಿಕೊಳ್ಳಬೇಕಾಗುತ್ತದೆ. ತತ್ವ ಸಿದ್ದಾಂತಗಳಿಗಿಂತ ಬದುಕು ದೊಡ್ದದು ಎಂಬ ಸಾಮಾನ್ಯ ಜ್ನಾನ ಇರಬೇಕಾಗುತ್ತದೆ.
ಅಡ್ವಾಣಿ ಇಂತಹ ನಾಯಕರಾಗಿರಲಿಲ್ಲ. ಅವರು ಒಂದು ಹಂತದ ವರೆಗೆ ಸಂಘಪರಿವಾರದ ಕಟ್ಟಾ ಕಾರ್ಯಕರ್ತನಂತೆ ಬದುಕಿದರು. ನಂತರ ಜಿನ್ನಾ ವಿವಾದದಲ್ಲಿ ಅಧಿಕಾರಕ್ಕಾಗಿ ಎಲ್ಲ ನಂಬಿಕೆಗಳನ್ನು ಗಾಳಿಗೆ ತೂರುವ ಮೂರನೆ ದರ್ಜೆಯ ರಾಜಕಾರಣಿಯಂತೆ ವರ್ತಿಸಿದರು. ಈ ದ್ವಂದವೇ ಅವರನ್ನು ಪಥನದ ಅಂಚಿಗೆ ತಂದು ನಿಲ್ಲಿಸಿತು.

Tuesday, August 25, 2009

ಸೋಲನ್ನು ಒಪ್ಪದ ಮುಖ್ಯಮಂತ್ರಿ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರಲ್ಲಿ ಒಬ್ಬರು ವಿ. ಸೋಮಣ್ಣ. ಇವರು ಬಿಜೆಪಿಯನ್ನು ಸೇರುವುದಕ್ಕೆ ಮೊದಲೇ ಮುಖ್ಯಮಂತ್ರಿಗಳ ಜೊತೆ ಹನಿಮೂನ್ ಪ್ರಾರಂಭಿಸಿದ್ದರು. ಇದಕ್ಕೆ ಕೆಲವು ಲಿಂಗಾಯಿತ ಮಠಾಧೀಶರ ಅಶೀರ್ವಾದವೂ ಇತ್ತು. ಸೋಮಣ್ಣ ಬಿಜೆಪಿ ಸೇರಿದ್ದು, ಮಂತ್ರಿಯಾದದ್ದು ಮುಂದಿನ ಘಟನೆಗಳು. ಆದರೆ ಸೋಮಣ್ಣ ಉಪ ಚುನಾವಣೆಯಲ್ಲಿ ಸೋಲುತ್ತಾರೆ ಎಂಬುದು ಮಾತ್ರ ಯಾರಿಗೂ ಗೊತ್ತಿರಲಿಲ್ಲ. ದೇವರ ಹೆಸರು ಹೇಳಿ ರಾಜಕಾರಣ ಮಾಡುವ ಮಠಾಧಿಪತಿಗಳು ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ ಸೋಮಣ್ನ ಸೋತರು.
ಸೋಮಣ್ಣ ಯಾಕೆ ಸೋತರು ಎಂಬುದು ಬೇರೆ ವಿಚಾರ. ಈ ಬಗ್ಗೆ ಮಾತನಾಡುವಾಗ ಇಂದಿನ ಚುನಾವಣೆ ಪದ್ಧತಿಯ ಬಗ್ಗೆ ಮಾತನಾಡಬೇಕು. ಈ ಸೋಲಿನ ನಂತರದ ಬೆಳವಣಿಗೆಗಳನ್ನು ಗಮನಿಸಿ. ಸೋಮಣ್ನ ಸೋತ ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಧಾವಿಸುತ್ತಾರೆ. ಅವರಿಗೆ ಸಮಾಧಾನ ಹೇಳುತ್ತಾರೆ. ನೀವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿಲ್ಲ ನಾನಿದ್ದೇನೆ ಎಂದು ಭರವಸೆ niiದಿ ಬರುತ್ತಾರೆ. ಸಂಸದೀಯ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿ ಸಚಿವನಾಗುವುದಿದ್ದರೆ ಆತ ಮೇಲ್ಮನೆ ಅಥವಾ ಕೆಳಮನೆ ಸದಸ್ಯನಾಗಿರಬೇಕು. ಆಗಿರದಿದ್ದರೆ ಸಚಿವರಾಗಿ ಆರು ತಿಂಗಳೊಳಗೆ ಯಾವುದೇ ಮನೆಯ ಸದಸ್ಯರಾಗಬೇಕು. ಈಗ ಸೋಮಣ್ನ ವಿಧಾನ ಪರಿಷತ್ ಅಥವಾ ವಿಧಾನ ಸಭೆಯ ಸದಸ್ಯರಲ್ಲ. ಆರು ತಿಂಗಳೊಳಗೆ ಸದಸ್ಯರಾಗುವ ಅವರ ಕನಸಿಗೆ ಗೋವಿಂದರಾಜ ನಗರದ ಮತದಾರರು ತಣ್ಣೀರು ಎರೆಚಿದ್ದಾರೆ. ಆದರೂ ಅವರನ್ನು ಸಚಿವರನ್ನಾಗಿ ಉಳಿಸಲು ಮುಖ್ಯಮಂತ್ರಿಗಳು ಅಡ್ಡದಾರಿಗಳನ್ನು ಹುಡುಕುತ್ತಿದ್ದಾರೆ.
ಆದರೆ ಈ ಚುನಾವಣೆಯ ಫಲಿತಾಂಶ ಹಲವು ಸೂಕ್ಷ್ನಗಳನ್ನು ಒಳಗೊಂಡಿದೆ. ಇದು ಕೇವಲ ಐದು ಕ್ಷೇತ್ರಗಳಿಗೆ ಮಾತ್ರ ನಡೆದ ಉಪ ಚುನಾವಣೆ ಆಗಿದ್ದರೂ ಇಲ್ಲಿ ರಾಜ್ಯದ ಮತದಾರರ ಮನಸ್ಸಿನ ಒಂದು ಝಲಕ್ ಕಾಣಬಹುದಾಗಿದೆ. ಈಗ್ ನೋಡಿ, ಆಪರೇಷನ್ ಮೂಲಕ ಕಮಲದ ಬಿಜೆಪಿ ತೆಕ್ಕೆಗೆ ಬಂದ ಸೋಮಣ್ಣ ಹಾಗೂ ಚೆನ್ನಪಟ್ಟಣ ಸಿನೆಮಾ ನಟ ಸೋತಿದ್ದಾರೆ.. ಖರ್ಗೆ ಮಗ ನೆಲ ಕಚ್ಚಿದ್ದಾರೆ. ಅನಾಮಧೇಯರನ್ನು ಪಕ್ಷ ಬೇಧ ಮರೆತು ಜನ ಆರಿಸಿಕಳುಹಿಸಿದ್ದಾರೆ. ಅಂದರೆ, ಅಧಿಕಾರಕ್ಕಾಗಿ ನಡೆಸಿದ ಪಕ್ಷಾಂತರ ಜನರಿಂದ ತಿರಸ್ಕೃತವಾಗಿದೆ.
ಇಂತಹ ಸನ್ನಿವೇಶದಲ್ಲಿ ನಿಜವಾದ ನಾಯಕನಾದವನು ಜನರ ತೀರ್ಪನ್ನು ಒಪ್ಪಿಕೊಂಡು ಮನೆಯಲ್ಲಿ ಇರಬೇಕು. ನಿಜವಾದ ಮುಖ್ಯಮಂತ್ರಿ ಹಿಂಬಾಗಿಲ ಮೂಲಕ ಜನ ತಿರಸ್ಕರಿಸಿದವರನ್ನು ತರಲು ಯತ್ನ ನಡೆಸಬಾರದು. ಆದರೆ ತಮಾಷೆ ಎಂದರೆ, ಜನರಿಂದ ಬಡಿಸಿಕೊಂಡವರಿಗೆ ಹೇಗಾದರೂ ಮಾಡಿ ಅಧಿಕಾರ ಪಡೆಯುವ ಉಳಿಸಿಕೊಳ್ಳುವ ತವಕ. ಇವರ ಬೆಂಬಲಕ್ಕೆ ನಿಂತ ಮಠಾಧಿಪತಿಗಳಿಗೆ ತಮ್ಮ ಪರಮ ಶಿಷ್ಯರನ್ನು ಸಿಂಹಾಸನ ಮೇಲೆ ಪ್ರತಿಷ್ಠಾಪಿಸುವ ಹಪಹಪಿಕೆ. ಮುಖ್ಯಮಂತ್ರಿಗಳಿಗೆ ತಮ್ಮ ಛೇಲಾಗಳನ್ನು ಉಳಿಸಿಕೊಳ್ಳುವ ಆಕಾಂಕ್ಷೆ. ಇದರಿಂದಾಗಿಯೇ ಸೋಮಣ್ಣನವರನ್ನು ಸಚಿವರನ್ನಾಗು ಮುಂದುವರಿಸಲು ವಿಧಾನ ಪರಿಷತ್ ಸದಸ್ಯರೊಬ್ಬರಿಂದ ರಾಜೀನಾಮೆ ಪಡೆಯುವ ಯತ್ನ ನಡೆಯುತ್ತಿದೆ. ಈ ಸ್ಥಾನಕ್ಕೆ ಸೋಮಣ್ಣನವರನ್ನು ತಂದು ಅವರ ಸಚಿವ ಸ್ಥಾನ ನಿರಾತಂಕವಾಗಿ ಉಳಿಯುವಂತೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಅವರ ಆಪ್ತ ವರ್ಗ ಚಿಂತಿಸುತ್ತಿದೆ.
ಜನ ತಿರಸ್ಕರಿಸಿದ ಮೇಲೆ ಅಲ್ಲಿರಬಾರದು ಎಂಬ ಸಾಮಾನ್ಯ ನೈತಿಕತೆ ಕೂಡ ಇವರಿಗಿಲ್ಲ. ಸಾಧಾರಣವಾಗಿ ಅಧಿಕಾರಕ್ಕೆ ಹೋದ ತಕ್ಷಣ ಅದು ಶಾಶ್ವತವಾಗಿರಬೇಕು ಎಂಬ ಒತ್ತಡ ಪ್ರಾರಂಭವಾಗುತ್ತದೆ. ಇಂತಹ ಒತ್ತಡದಿಂದ ಹೊರ ಬರುವವನು ಮಾತ್ರ ನಿಜವಾದ ಜನ ನಾಯಕನಾಗುವುದು ಸಾಧ್ಯ. ಜೊತೆಗೆ ಮುಖ್ಯಮಂತ್ರಿಯಾದವನು ಸೋಲನ್ನು ಒಪ್ಪಿಕೊಳ್ಳುವ ಮನಸ್ಸು ಹೊಂದಿರಬೇಕು. ಸೋಲನ್ನು ಯಾರು ಒಪ್ಪಿಕೊಳ್ಳುವುದಿಲ್ಲವೋ ಅವರ ಜಯಕ್ಕೆ ಯಾವ ಅರ್ಥವೂ ಇರುವುದಿಲ್ಲ. ಸೋಮಣ್ಣನನ್ನು ಸೋಲಿಸಿದ್ದು ಅವರ ಕ್ಷೇತ್ರದ ಜನ. ಜನರ ತೀರ್ಪಿಗೆ ತಲೆ ಬಾಗಬೇಕಾದ್ದು ಮುಖ್ಯಮಂತ್ರಿಗಳ ಕರ್ತವ್ಯ. ಜನ ತಿರಸ್ಕರಿಸಿದ ಮೇಲೂ ಅವರನು ಬೇರೆ ಮಾರ್ಗಗಳ ಮೂಲಕ ತರುವುದು ಅಧಿಕಾರ ಅಹಂಕಾರದ ಪರಮಾವಧಿ.
ಮುಖ್ಯಮಂತ್ರಿ ಯಡೀಯೂರಪ್ಪ ಈಗ ಇಂತಹ ಅಹಂಕಾರದ ಮನಸ್ಥಿತಿಯಲ್ಲಿ ಇದ್ದಾರೆ. ಅವರಿಗೆ ಒಂದೆಡೆ ಅಧಿಕಾರವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಆಸೆ. ಮತ್ತೊಂದೆಡೆ ಕಳೆದುಕೊಳ್ಳುವ ಭಯ. ಆಸೆ ಮತ್ತು ಭಯ ಅವರಲ್ಲಿ ನೈತಿಕ ರಾಜಕಾರಣ ಮರೆಯಾಗುವಂತೆ ಮಾಡಿದೆ. ತಾವು ಕರ್ನಾಟಕದ ಮುಖ್ಯಮಂತ್ರಿ ಎಂಬುದನ್ನು ಬಹುತೇಕ ಸಂದರ್ಭದಲ್ಲಿ ಮರೆಯುವ ಅವರು ಒಂದು ಜಾತಿ ಮತ್ತು ಒಂದು ಪಕ್ಷದ ಮುಖ್ಯಮಂತ್ರಿಯಾಗಿ ಮಾತ್ರ ಕಾಣುತ್ತಾರೆ.
ಅವಕಾಶ ಎಲ್ಲ ಸಂದರ್ಭಗಳಲ್ಲೂ ಬರುವುದಿಲ್ಲ. ಯಡೀಯೂರಪ್ಪ ಜನರ ಮುಖ್ಯಮಂತ್ರಿಯಾಗಬೇಕು. ಆದರೆ ಆ ಲಕ್ಷಣ ಸದ್ಯಕ್ಕಂತೂ ಗೋಚರಿಸುವುದಿಲ್ಲ. ಅವರು ದಿನದಿಂದ ದಿನಕ್ಕೆ ಅಧಃಪತನದತ್ತ ಸಾಗುತ್ತಿದ್ದಾರೆ.
ಒಂದು ಜಯ ನಮ್ಮಲ್ಲಿ ವಿನೀತ ಭಾವವನ್ನು ಮೂಡಿಸಬೇಕು. ಒಂದು ಸೋಲು ಆತ್ಮ ನಿರೀಕ್ಷೆಗೆ ಕಾರಣವಾಗಬೇಕು, ಸೋಲನ್ನು ಸೋಲಾಗಿ ಸ್ವೀಕರಿಸುವವನು ಮಾತ್ರ ಮತ್ತೆ ಜಯದತ್ತ ಹೆಜ್ಜೆ ಇಡಬಲ್ಲ.

Thursday, August 20, 2009

ಗಾಂಧಿ, ಜಿನ್ನಾ ಮತ್ತು ಇತಿಹಾಸ

ಭಾರತೀಯ ಜನತಾ ಪಕ್ಷದ ಹನುಮಂತ ಎಂದೇ ಖ್ಯಾತರಾಗಿದ್ದ ಜಸ್ವಂತ್ ಸಿಂಗ್ ಈಗ ರಾವಣರಾಗಿದ್ದಾರೆ. ದಿನ ಬೆಳಗಾಗುವುದರ ಒಳಗೆ ರಾವಣರಾಗಿ ಅವರ ಹತ್ಯೆಯೂ ನಡೆದು ಹೋಗಿದೆ. ರಾಮ ನಾಮ ಜಪದ ಮೂಲಕವೇ ಅಧಿಕಾರ ರಾಜಕಾರಣ ಮಾಡುತ್ತ ಬಂದ ಬಿಜೆಪಿಯ ಸ್ಥಿತ್ಯಂತರದ ಇನ್ನೊಂದು ಘಟ್ಟವನ್ನು ನಾವು ಈ ಬೆಳವಣಿಗೆಗಳಿಂದ ಗುರುತಿಸಬಹುದಾಗಿದೆ. ಆದರೆ ಈ ಬೆಳವಣಿಗೆ ಇಷ್ಟಕ್ಕೆ ಸೀಮಿತವಾಗಿಲ್ಲ. ದೇಶದ ರಾಜಕೀಯ ಪಕ್ಷಗಳ ಬದಲಾಗುವ ಸೈದ್ಧಾಂತಿಕ ನಿಲುವುಗಳು ಇಲ್ಲಿ ಬಟ್ಟಾಬಯಲಾಗಿದೆ. ಜೊತೆಗೆ ರಾಜಕೀಯ ನಾಯಕರ ಅಧಿಕಾರದ ರಾಜಕಾರಣದ ಇನ್ನೊಂದು ಉದಾಹರಣೆ ಕೂಡ ಇದಾಗಿದೆ.
ಜಿನ್ನಾ ಅವರ ವೈಕ್ತಿತ್ವ ಎಂತಹುದಾಗಿತ್ತು ಎಂಬುದು ಐತಿಹಾಸಿಕವಾಗಿ ಬಹಳ ಮುಖ್ಯವಾದುದು. ಗಾಂಧಿ ಅವರನ್ನು ಆರಾಧಿಸುತ್ತಲೇ ಬಂದ ಈ ದೇಶ ಬೇರೆ ನಾಯಕರನ್ನು ಅರ್ಥ ಮಾಡಿಕೊಂಡ ಬಗೆಯಾವುದು ಎಂಬುದು ಕೂಡ ಕಾಲದ ಪರೀಕ್ಷೇಗೆ ಒಳಗಾಗಬೇಕಾದ್ದು ಅತ್ಯಗತ್ಯ. ಗಾಂಧಿ ಹಲವು ಕಾರಣಗಳಿಂದ ನಮಗೆ ಮುಖ್ಯರಾಗಿದ್ದವರು. ಸತ್ಯ ಮತ್ತು ಅಹಿಂಸೆ ಎಂಬ ಅಸ್ತ್ರಗಳನ್ನು ಅವರು ಬಳಸಿದ ರೀತಿ ಕೂಡ ಅನನ್ಯ. ಹಾಗೆ ಅವರಿಗೆ ಭಾರತ ಎಂಬ ಈ ದೇಶ ಅರ್ಥವಾದಂತೆ ಆ ಕಾಲದ ಬೇರೆ ಯಾವ ನಾಯಕರಿಗೂ ಅರ್ಥವಾಗಿರಲಿಲ್ಲ. ಜೊತೆಗೆ ಹಿಂದೂ ಮತ್ತು ಮುಸ್ಲೀಮರು ಜೊತೆಯಾಗಿ ಬದುಕಬೇಕು ಎಂಬ ಆಸೆಯನ್ನು ಯಾರೂ ಸಂಶಯದಿಂದ ನೋಡುವುದು ಸಾಧ್ಯವಿಲ್ಲ. ಆದರೆ ಈ ವಿಚಾರಗಳಿಂದ ಮಾತ್ರ ಅವರನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಈ ಕಾರಣಕ್ಕೆ ಅವರು ಆರಾಧನೆಯ ಮೂರ್ತಿಯಾಗಬೇಕಾಗಿಲ್ಲ. ಅವರನ್ನು ಅರ್ಥ ಮಾಡಿಕೊಳ್ಳುವಾಗ ನಮಗೆ ಜಿನ್ನಾ ಕೂಡ ಮುಖ್ಯ.
ಆದರೆ ಗಾಂಧಿ ಬದುಕಿದ್ದಾಗಲೇ ಅವರ ಮೂರ್ತಿಯನ್ನು ನಿಲ್ಲಿಸಿ ಪೂಜೆ ಮಾಡಲು ಕೆಲವರು ಪ್ರಾರಂಭಿಸಿದ್ದರು. ನೆಹರೂ ಪಟೇಲ್ ಮೊದಲಾದ ಕಾಂಗ್ರೆಸ್ ನಾಯಕರಿಗೆ ನಿಜವಾದ ಗಾಂಧಿಗಿಂತ ಅವರ ಪ್ರತಿಮೆ ಹೆಚ್ಚು ಮುಖ್ಯವಾಗಿತ್ತು. ಯಾಕೆಂದರೆ ಕಾಂಗ್ರೆಸ್ ನಾಯಕರಿಗೆ ಪೂಜೆ ಮತ್ತು ಆರಾಧನೆಯ ಪರಂಪರೆಯಲ್ಲಿ ಬೆಳೆದ ಈ ದೇಶದಲ್ಲಿ ಪ್ರತಿಮೆಗಳ ಮಹತ್ವ ಏನೆಂದು ಗೊತ್ತಿತ್ತು. ಗಾಂಧಿಜಿಯರಿಗೂ ಸತ್ಯ, ಅಹಿಂಸೆ, ಹಿಂದೂ ಮುಸ್ಲಿಮ್ ಬಾಂಧವ್ಯ, ಹರಿಜನೋದ್ಧಾರ, ಶಕ್ತಿಯನ್ನು ಕೊಡುತ್ತಿತ್ತು. ಹೀಗಾಗಿ ಅವರ ಇದನ್ನೆಲ್ಲ ಅಮಲು ಪದಾರ್ಥದ ರೀತಿಯಲ್ಲಿ ಬಳಸಲು ಪ್ರಾರಂಭಿಸಿದರು. ಆಗ ಗಾಂಧಿಯವರನ್ನು ಕಾಡಲು ಪ್ರಾರಂಭಿಸಿದ್ದು ನಂಬಿಕೆಯೆ ಸಮಸ್ಯೆಯೇ. ಅವರು ಈ ಎಲ್ಲ ವಿಚಾರಗಳನ್ನು ಎಷ್ಟು ಪ್ರಬಲವಾಗಿ ನಂಬಿಕೊಂಡಿದ್ದರೆಂದರೆ ಅವರಿಗೆ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯಗಳನ್ನು ಮುಕ್ತವಾಗಿ ನೋಡುವ ಮನಸ್ಸೇ ಉಳಿಯಲಿಲ್ಲ. ನಂಬಿಕೆ ಗಾಂಧಿಯವರನ್ನು ಬಂಧಿಯಾಗಿ ಮಾಡಿತ್ತು. ಹೀಗಾಗಿ ಸುಭಾಷಚಂದ್ರ ಬೋಸ್, ಡಾ. ಅಂಬೇಡ್ಕರ್ ಮೊದಲಾದವರನ್ನು ಅರ್ಥ ಮಾಡಿಕೊಳ್ಳಲು ಗಾಂಧೀಜಿಗೆ ಸಾಧ್ಯವಾಗಲೇ ಇಲ್ಲ. ತುಂಡು ಬಟ್ಟೆಯ ಫಕೀರರಾದ ಗಾಂಧಿಜಿಗೆ ನೆಹರೂ ತುಂಬಾ ಇಷ್ಟವಾಗುತ್ರಿದ್ದರು. ಖಾದಿ ಬಟ್ಟೆ ಧರಿಸುತ್ತಿದ್ದ ನೆಹರೂ ವಿದೇಶಿ ಮನಸ್ಸನ್ನು ಬಚ್ಚಿಟ್ಟುಕೊಂಡಿದ್ದು ಗಾಂಧೀಜಿಯವರಿಗೆ ಕಾಣಲೇ ಇಲ್ಲ. ಆದರೆ ಸೂಟ್ ಧರಿಸಿ, ಸಿಗಾರ್ ಸೇದುತ್ತಿದ್ದ ಜಿನ್ನಾ ಅವರನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಗಾಂಧಿಜಿಯವರ ಸುತ್ತ ಮುತ್ತ ಇದ್ದು ಕೊಡೆ ಹಿಡಿಯುತ್ತಿದ್ದ ನಾಯಕ ಗಣ ಜಿನ್ನಾ ಅವರನ್ನು ಖಳನಾಯಕ ಎಂದೇ ಬಿಂಬಿಸುವ ಕೆಲಸ ಮಾಡುತ್ತಿತ್ತು.
ಜಿನ್ನಾ ಅವರು ಎರಡು ದೇಶಗಳ ಥಿಯರಿಗೆ ಪರವಾಗಿದ್ದರೆ ವಿರೋಧವಾಗಿದ್ದರೆ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಎಡ ಪಂಥೀಯ ಇತಿಹಾಸ ತಜ್ನರು ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ ಬಲ ಪಂಥೀಯ ಇತಿಹಾಸ ತಜ್ನರು ಇನ್ನೊಂದು ರೀತಿಯ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಆದ್ದರಿಂದ ಈ ಬಗ್ಗೆ ಹೀಗೆ ಎಂದು ಹೇಳುವುದು ಕಷ್ಟ,
ಈಗ ಜಿನ್ನಾ ವಿಚಾರಕ್ಕೆ ಬರುತ್ತೇನೆ. ಲಾಲಕೃಷ ಆಡ್ವಾಣಿ ಪಾಕಿಸ್ಥಾನಕ್ಕೆ ಹೋಗಿ ಜಿನ್ನಾ ಅವರ ಬಗ್ಗೆ ನೀಡಿದ ಹೇಳಿಕೆ ಆರ್ ಎಸ್ ಎಸ್ ನಾಯಕರಿಗೆ ಪಥ್ಯವಾಗಲಿಲ್ಲ. ಹೀಗಾಗಿ ಅವರು ಒಮ್ಮೆಲೆ ಖಳನಾಯಕರಾದರು. ಪ್ರಾಯಶ: ಅಡ್ವಾಣಿ ಇದನ್ನು ನಿರೀಕ್ಷಿಸಿರಲಿಲ್ಲ. ನಿರೀಕ್ಷಿಸಿದ್ದರೆ ಅವರು ಈ ಮಾತುಗಳನ್ನು ಹೇಳುತ್ತಿದ್ದರೆ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಹಾಗೆ ಜಿನ್ನಾ ಬಗ್ಗೆ ಅವರ ಆಡಿದ್ದ ಮಾತುಗಳು ಅವರದೇ ನಂಬಿಕೆಯ ಮಾತುಗಳೇ ಅಥವಾ ಸುಧೀಂದ್ರ ಕುಲಕರ್ಣಿ ಅವರ ಮಾತುಗಳೆ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ಈ ನಡುವೆ ಕಳೆದ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಮತ್ತೆ ತನ್ನ ಸೈದ್ಧಾಂತಿಕ ನೆಲಗಟ್ಟಿನ ಹುಡುಕಾಟದಲ್ಲಿ ತೊಡಗಿದೆ. ಹಾಗೆ ಬಿಜೆಪಿ ಹಿರಿಯ ನಾಯಕರು ಸೈದ್ಧಾಂತಿಕ ಗಲಿಬಿಲಿಯನ್ನು ಅನಿಭವಿಸುತ್ತಿದ್ದಾರೆ. ಅವರಿಗೆ ಯಾವ ಸಿದ್ಧಾಂತ ತಮಗೆ ಮತಗಳನ್ನು ತಂದುಕೊಡಬಹುದು ಎಂಬುದೇ ಅರ್ಥವಾಗುತ್ತಿಲ್ಲ. ಈ ವಿಚಾರದಲ್ಲಿ ಪಕ್ಷದಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ತಮ್ಮ ಬದುಕಿನಲ್ಲಿ ಒಮ್ಮೆ ಪ್ರಧಾನಿ ಪಟ್ಟವನ್ನು ಏರಲೇಬೇಕು ಎಂದುಕೊಂಡಿರುವ ಆಡ್ವಾಣಿ ಮತ್ತೆ ಆರ್ ಎಸ್ ಎಸ್ ನ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ. ಹಾಗೆ ಆರ್ ಎಸ್ ಎಸ್ ಕೂಡ ಬಿಜೆಪಿ ಪಕ್ಷವನ್ನು ಸರಿಪಡಿಸುವ ತನ್ನ ಇಂಗಿತವನ್ನು ಈಗಾಗಲೇ ವ್ಯಕ್ತಪಡಿಸಿದೆ. ಆದರೆ ಇನ್ನೂ ವಾಜಪೇಯಿ ರಾಜಕಾರಣದ ಮೋಹ ಮತ್ತು ನೆನಪಿನಲ್ಲೇ ಇರುವ ಕೆಲವು ನಾಯಕರು ಈ ವಿಚಾರದಲ್ಲಿ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ. ಇವರಲ್ಲಿ ಜಸ್ವಂತ್ ಸಿಂಗ ಕೂಡ ಒಬ್ಬರು.
ಜಸ್ವಂತ್ ಸಿಂಗ್ ಜಿನ್ನಾ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಎಷ್ಟರ ಮಟ್ಟಿಗೆ ಸರಿ ಎಂಬುದು ಬೇರೆ ವಿಚಾರ. ಆದರೆ ಅವರು ಬಿಜೆಪಿ ಆಂತರಿಕ ಬೇಗುದಿಯಲ್ಲಿ ಬೇಯುತ್ತಿರುವಾಗಲೇ ಯಾಕೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು, ಪುಸ್ತಕ ಬರೆದರು ಎಂಬುದು ಮುಖ್ಯ. ಇದು ಸಹ ಬಿಜೆಪಿ ನಾಯಕತ್ವಕ್ಕೆ ಸೆಡ್ದು ಹೊಡೆಯುವ ಒಂದು ಯತ್ನವಾಗಿರಬಹುದು. ಜಿನ್ನಾ ಎಂಥವರಾಗಿದ್ದರು ಎಂಬುದಕ್ಕಿಂತ ರಾಜನಾಥ್ ಸಿಂಗ್ ಅವರಿಗೆ ಸೆಡ್ದು ಹೊಡೆಯುವುದು ಅವರಿಗೆ ಮುಖ್ಯವಾಗಿತ್ತು. ಆರ್ ಎಸ್ ಎಸ್ ಹಿಡಿತವನ್ನು ಪರೀಕ್ಷಿಸುವುದು ಪ್ರಮುಖವಾಗಿತ್ತು.
ಈಗ ಜಸ್ವಂತ್ ಸಿಂಗ್ ಅವರ ಹೇಳಿಕೆಯಿಂದ ಒಂದು ಅಂಶ ಸ್ಪಷ್ಟವಾಗಿದೆ. ಆರ್ ಎಸ್ ಎಸ್ ಬಿಜೆಪಿಯ ಮೇಲಿನ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದೆ. ಆಡ್ವಾಣಿ ತಮ್ಮ ಸ್ವಘೋಷಿತ ಮುಖವಾಡವನ್ನು ಕಳಚಿದ್ದಾರೆ. ಹಾಗೆ ತಾವು ವಾಜಪೇಯಿ ಅವರಂತ ನಾಯಕರಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇದರ ಜೊತೆಗೆ ಇನ್ನೊಂದು ಮಾತು. ಜಿನ್ನಾ ಧರ್ಮ ನಿರಪೇಕ್ಷ ವ್ಯಕ್ತಿಯಾಗಿದ್ದರೆ ನಾವು ಬೇಸರ ಪಡುವ ಅಗತ್ಯವಿಲ್ಲ. ನಮ್ಮ ದೇಶದ ಕೆಲವು ನಾಯಕರೇ ದೇಶದ ವಿಭಜನೆಗೆ ಕಾರಣವಾಗಿದ್ದರೆ ಅದನ್ನು ಸ್ವೀಕರಿಸಲು ಹಿಂಜರಿಯಬೇಕಿಲ್ಲ. ಯಾಕೆಂದರೆ ಇತಿಹಾಸ ಎನ್ನುವುದು ಕಾಲಕೋಶದೊಳಗೆ ಸೇರಿಹೋಗಿರುವಂಥಹುದು. ಅದನ್ನು ಈಗ ಬದಲಿಸಲು ಸಾಧ್ಯವಿಲ್ಲ. ಆದರೆ ಇತಿಹಾಸವನ್ನು ಅರ್ಥಮಾಡಿಕೊಂಡರೆ ವರ್ತಮಾನವನ್ನು ಅರ್ಥಮಾಡಿಕೊಳ್ಳಬಹುದು. ಭವಿಷ್ಯದ ಕನಸು ಕಾಣಬಹುದು.

Saturday, August 15, 2009

ಮುಖವಾಡದ ಹಿಂದಿನ ಮುಖಗಳು........

ನಾನು ಸುವರ್ಣ ಮತ್ತು ನನ್ನ ಸಂಬಂಧದ ಬಗ್ಗೆ ಬರೆದ ಕೆಲವು ಮಾತುಗಳಿಗೆ ಹಲವು ಪ್ರತಿಕ್ರಿಯೆಗಳು ಬಂದಿವೆ. ಕೆಲವು ಪ್ರತಿಕ್ರಿಯೆಗಳಲ್ಲಿ ನನ್ನ ಬಗ್ಗೆ ಪ್ರೀತಿ ಮತ್ತು ಗೌರವಗಳಿವೆ. ಅವರಿಗೆ ನಾನು ಕೃತಜ್ನನಾಗಿದ್ದೇನೆ. ಇನ್ನೂ ಕೆಲವು ಪ್ರತಿಕ್ರಿಯೆಗಳನ್ನು ಅನಾಮಿಕರು ಬರೆದಿರುವುದರಿಂದ ಅವರ ಮುಖಗಳು ಕಾಣುವುದಿಲ್ಲ. ಅಂದರೆ ಇದೆಲ್ಲ ಮುಖವಾಡಗಳಿಂದ ಬಂದ ಮಾತುಗಳು. ಆದರೂ ಇಂತಹ ಮುಖಗಳು ನಮ್ಮ ನಡುವಿನ ಮುಖಗಳೇ ಆಗಿರುವುದರಿಂದ ನಾನು ಇದನ್ನು ನಿರ್ಲಕ್ಷಿಸಲಾರೆ. ನಾನು ಸುವರ್ಣದಲ್ಲಿ ಏನು ಮಾಡಿದೆ ಏನು ಮಾಡಿಲ್ಲ ಎಂಬದು ನನಗೆ ಗೊತ್ತಿದೆ. ಆದ್ದರಿಂದ ಈ ಬಗ್ಗೆ ಬೇರೆಯವರ ಹೊಗಳಿಕೆ ನನಗೆ ಬೇಕಿಲ್ಲ. ಇನ್ನು ನಾನು ಮಾಡಿದ ಕಾರ್ಯಕ್ರಮಗಳು ಮಹಾನ್ ಗ್ರೇಟ್ ಎಂದು ನಾನು ಹೇಳಿಕೊಳ್ಳಲಿಲ್ಲ. ನಾನು ಮಾಡುತ್ತಿದ್ದ ಕಾರ್ಯಕ್ರಮಗಳನ್ನು ಇನ್ನು ನಾನು ಮಾಡುತ್ತೇನೆಯೋ ಅಥವಾ ಇಲ್ಲವೋ ಎಂದು ನನಗೆ ನಾನು ಹೇಳಿಕೊಂಡ ಅಂತರಂಗದ ಮಾತುಗಳು ಅವು ಅಷ್ಟೇ. ನಾನು ಮಹಾನ್ ಪತ್ರಕರ್ತ ನಾನು ಮಾಧ್ಯಮದಲ್ಲಿ ಮಹಾನ್ ಸಾಧನೆ ಮಾಡಿದ್ದೇನೆ ಎಂದು ಹೇಳಿಕೊಳ್ಳುವ ವ್ಯಕ್ತಿ ಕೂಡ ನಾನಲ್ಲ. ಇನ್ನು ವಾಹಿನಿಯಲ್ಲಿ ಕೆಲಸ ಮಾಡಿದ ಮಾಡುತ್ತಿರುವ ನನ್ನ ಸಹೋದ್ಯೋಗಿಗಳನ್ನು ಟೀಕೆಯನ್ನು ನಾನು ಮಾಡಿಲ್ಲ. ನಾನು ಪ್ರತಿ ಹಂತದಲ್ಲಿ ನನ್ನ ಹುಡುಗರು ಎಂದು ಹೇಳಿದ್ದೇನೆ. ಹಾಗೆ ಕೆಲವೊಬ್ಬರ ವರ್ತನೆಯ ಬಗ್ಗೆ ವಿಷಾಧದ ಮಾತುಗಳನ್ನು ಆಡಿದ್ದೇನೆ. ಒಂದು ಸಂಸ್ಥೆ ಯಶಸ್ವಿಯಾಗಬೇಕಾದರೆ ಅಲ್ಲಿ ಗುಂಪುಗಾರಿಕೆ ಇರಬಾರದು ಎಂಬ ಕಳಕಳಿಯಿಂದ ಆಡಿದ ಮಾತುಗಳು ಅವು.
ಇದೆಲ್ಲ ನಮ್ಮ ಅನಾಮಿಕ ಅಥವಾ ಮುಖವಾಡದ ಮೂಲಕ ಮಾತನಾಡುವವರಿಗೆ ಅರ್ಥವಾಗುತ್ತದೆ ಎಂದು ನಾನು ನಂಬಿದ್ದೇನೆ. ನನಗೆ ಕುಮ್ರಿಯೇ ಗತಿ ಎಂದು ಒಬ್ಬ ಅನಾಮಿಕರು ಪ್ರತಿಕ್ರಿಯೆ ನೀಡಿದ್ದಾರೆ. ಈ ಮಾತಿನಲ್ಲಿನ ವಿಷ ನನಗೆ ಅರ್ಥವಾಗುತ್ತದೆ. ಆದರೆ ನನಗೆ ಬೇರೆ ಹೊಣೆಗಾರಿಕೆಯನ್ನು ನೀಡಲಾಗಿದೆ ಮತ್ತು ಆ ಹೊಣೆಗಾರಿಕೆಯನ್ನು ನಾನು ನಿರ್ವಹಿಸಲಿದ್ದೇನೆ ಎಂದು ವಿನಯವಾಗಿ ಈ ಮುಖವಾಡ ವ್ಯಕ್ತಿಗೆ ತಿಳಿಸಲು ಬಯಸುತ್ತೇನೆ.
ಮಾಧ್ಯಮದಲ್ಲಿ ಕೆಲಸ ಮಾಡುವಾಗ ನಮ್ಮನ್ನು ವಿರೋಧಿಸುವವರು ಇದ್ದಾರೆ ಎಂದರೆ, ನಮ್ಮನ್ನು ಒಪ್ಪಿಕೊಳ್ಳುವವರೂ ಇದ್ದಾರೆ ಎಂದು ಅರ್ಥ. ಆದರೆ ಮಾತನಾಡುವವರು ತಾವು ಯಾರು ಎಂಬುದನ್ನು ಬಹಿರಂಗಪಡಿಸಿ ಮಾತನಾಡಿದರೆ ಅದಕ್ಕೆ ತೂಕ ಬರುತ್ತದೆ. ಅರ್ಥಪೂರ್ಣವಾಗಿ ಚರ್ಚೆ ಮಾಡಲು ಅವಕಾಶವಾಗುತ್ತದೆ. ಇಂಥಹ ಚರ್ಚೆಗಳಿಗೆ ನಾನು ಸದಾ ಸಿದ್ಧ. ಆದರೆ ಮುಖವಾಡದ ಹಿಂದಿರುವ ಕುರೂಪ ಮುಖಗಳ ಬಗ್ಗೆ ನಾನು ಮಾತನಾಡಲಾರೆ. ಎಲ್ಲಿಯೋ ನಿಂತು ಮನಸ್ಸಿಗೆ ಬಂದ ಹಾಗೆ ಕಿರಿಚುವವರಿಗೆ ಪ್ರತಿಕ್ರಿಯೆ ನೀಡಲಾರೆ.

Tuesday, August 11, 2009

ನಾನು ಹೋಗಿ ಬರಲಾ.........

ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹಿನಿಯನ್ನು ಕಟ್ಿ ಬೆಳೆಸುವ ಕೆಲಸ ಇದೆಯಲ್ಲ ಅದೇ ಹಾಗೆ. ಈ ಕೆಲಸದ ನಡುವೆ ನನ್ನ ಓದು ಕುಂಠಿತವಾಯಿತು. ಒಂದು ನಿಮಿಷ ಎಲ್ಲವನ್ನೂ ಬಿಟ್ಟು ನಿರಾಳವಾಗಿ ಇರದಂತಾಯಿತು. ನಾನು ವಾಹಿನಿಯಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದೆ. ಎಲ್ಲದಕ್ಕೂ ಒಂದು ಬಿಡುಗಡೆಯ ಕಾಲ ಅಂತ ಇರುತ್ತೆ. ಬಿಡುಗಡೆ ಅನ್ನುವುದೇ ನಮ್ಮ ಮನಸ್ಸನ್ನು ಪ್ರಫುಲ್ಲಿತವನ್ನಾಗಿ ಮಾಡುತ್ತದೆ. ಬಹುತೇಕ ಸಂದರ್ಭದಲ್ಲಿ ನಾವು ಬಿಡುಗಡೆಗಾಗಿ ಯತ್ನ ನಡೆಸುತ್ತ ಮತ್ತಷ್ಟು ಬಂಧನಕ್ಕೆ ಒಳಗಾಗಿರುತ್ತೇವೆ.
ಈಗ ನನಗೆ ಬಿಡುಗಡೆಯ ಸಮಯ ಬಂದಿದೆ. ನನ್ನ ವಾಹಿನಿಯನ್ನು ಇದ್ದಲ್ಲಿ ಇದ್ದ ಹಾಗೆ ಬಿಟ್ಟು ಮುಂದಕ್ಕೆ ನಡೆದು ಬಿಡುವ ಸಮಯ. ಈ ಸಮಯ ಮುಂದಕ್ಕೆ ಹೋಗುವಾಗ ಹಿಂದಕ್ಕೆ ನೋಡುವ ಸಮಯ ಕೂಡ. ಈ ಸುದ್ದಿ ವಾಹಿನಿಯನ್ನು ಪ್ರಾರಂಭಿಸಿದಾಗ,ಕೆಲಸಕ್ಕೆ ಬರಲು ಯಾರೂ ಸಿದ್ಧರಿರಲಿಲ್ಲ. ಎಲ್ಲರಿಗೂ ಈ ವಾಹಿನಿ ಉಳಿಯಬಹುದೇ ಎಂಬ ಆತಂಕ. ಇಂಥಹ ಸ್ಥಿತಿಯಲ್ಲಿ ಬಂದ ಹುಡುಗರನ್ನು ಕಟ್ಟಿಕೊಂಡು ವಾಹಿನಿಯನ್ನು ಪ್ರಾರಂಭಿಸಿದೆವು. ಕ್ರೆಡಿಬಿಲಿಟಿಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದುಕೊಂಡೆವು. ಹಾಗೆ ತುಂಬಾ ವಿಭಿನ್ನವಾಗಿ ಸುದ್ದಿಯನ್ನು ನೀಡುವುದಕ್ಕೆ ಯತ್ನ ನಡೆಸಿದೆವು. ಜಿ ಇ ಸಿ ಚಾನಲ್ಲಿನಲ್ಲಿ ಸುದ್ದಿ ಬರುವಾಗ ಒಳ್ಳೆ ರೇಟಿಂಗ್ ಕೂಡ ಇತ್ತು. ಇದನ್ನು ಗಮನಿಸಿ ನಾವು ಸುದ್ದಿ ವಾಹಿನಿಯನ್ನು ಪ್ರಾರಂಭಿಸಿದೆವು. ಸಣ್ಣದಾಗಿದ್ದ ನಮ್ಮ ಕುಟುಂಬ ದೊಡ್ದದಾಯಿತು. ಮನೆಗೆ ಬಂದವರು ಮನೆಯವರಾಗಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಒಂದು ಕುಟುಂಬದ ಯಜಮಾನನಂತೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕು ಎಂದು ನಾನು ಅಂದುಕೊಂಡೆ. ಅದರಂತೆ ಕೆಲಸ ನಿರ್ವಹಿಸಲು ಯತ್ನ ನಡೆಸಿದೆ. ಆದರೆ ಎಲ್ಲೋ ತಪ್ಪಾಗಿತ್ತು. ನನಗೆ ಆ ತಪ್ಪು ತಿಳಿದಿರಲಿಲ್ಲ. ನನಗೆ ಸುದ್ದಿ ಮತ್ತು ವಾಹಿನಿಯ ಬದ್ಧತೆ ಬಿಟ್ಟು ಬೇರೆ ಇರಲಿಲ್ಲ. ಈ ಕಾರಣದಿಂದಾಗಿ ಸಹೋದ್ಯೋಗಿಗಳಿಗೆ ಕೆಲವೊಮ್ಮೆ ರೇಗಿದ್ದು ಉಂಟು ಬೈದಿದ್ದು ಉಂಟು.
ನಮ್ಮ ಬದುಕಿನಲ್ಲಿ ಎಲ್ಲ ಕನಸುಗಳೂ ನನಸಾಗುವುದಿಲ್ಲ. ಅದಕ್ಕಾಗಿಯೇ ಬದುಕಿಗೆ ಒಂದು ಆಕರ್ಷಣೆ ಇದೆ. ನಾನೆಂದುಕೊಂಡಿದ್ದನ್ನು ನಾನು ಮಾಡಲು ಸಾಧ್ಯವಾಗಲಿಲ್ಲ. ನನ್ನ ಸ್ನೇಹ ಶೀಲ ಪ್ರವೃತ್ತಿ ದೌರ್ಬಲ್ಯ ಎಂಬಂತೆ ಪ್ರತಿಬಿಂಬಿತವಾಯಿತು. ಮನುಷ್ಯನ ಬದಲಾವಣೆಯಲ್ಲಿ ನಂಬಿಕೆ ಇಟ್ಟ ನಾನು ಎಲ್ಲರೂ ಬದಲಾಗುತ್ತಾರೆ ಎಂದು ನಂಬಿಕೊಂಡಿದ್ದೆ. ಆದರೆ ಬದಲಾಗಬೇಕಾದ ನಮ್ಮ ಸಹೋದ್ಯೋಗಿಗಳು ಬದಲಾಗಲಿಲ್ಲ. ಬದಲಾಗಿ ಈ ಮೇಲ್ ಗಳಲ್ಲಿ ದೂರುಗಳಲ್ಲಿ ನೀಡುವುದರಲ್ಲಿ ಸಮಯವನ್ನು ವ್ಯಯಿಸತೊಡಗಿದರು. ಇದೆಲ್ಲ ನನ್ನ ಮನಸ್ಸಿಗೆ ತುಂಬಾ ನೋವನ್ನು ಕೊಡುತ್ತಿತ್ತು. ನನ್ನ ಹುಡುಗರು ಹೀಗೆ ಮಾಡುತ್ತಾರಲ್ಲ ಎಂದು ಬೇಸರವಾಗುತ್ತಿತ್ತು. ಆದರೆ ಎಷ್ಟೆಂದರೂ ನನ್ನ ಹುಡುಗರು ತಾನೆ ಎಂದು ನಾನು ಸುಮ್ಮನಾಗುತ್ತಿದ್ದ್ವೆ. ಎಂದೂ ಯಾರ ವಿರುದ್ಧವೂ ನಾನು ದೂರಲಿಲ್ಲ. ದೂರು ನೀಡಲಿಲ್ಲ.
ಈಗ ನಾನು ಹೊಸ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಹೊರಟು ನಿಂತಿದ್ದೇನೆ. ಹೊಸ ಸವಾಲು ನನ್ನ ಮುಂದಿದೆ. ಕಳೆದ ಎರಡು ಮೂರು ವರ್ಷಗಳಿಂದ ನನ್ನ ಜೊತೆ ಕೆಲಸ ಮಾಡಿದ ನನ್ನ ಹುಡುಗರಿಗೆ ಬೈಯಲು ನಾನಿರುವುದಿಲ್ಲ .ತಪ್ಪು ಎಂದು ಅನ್ನಿಸಿದ್ದನ್ನು ಹೇಳಲು ನಾನು ಇರುವುದಿಲ್ಲ. ನಾನು ಕಟ್ಟಿದ ವಾಹಿನಿಯ ಮೆಟ್ಟಿಲುಗಳನ್ನು ಇಳಿದು ಹೊರಟು ಬಿಡುತ್ತೇನೆ. ಈ ಹೊಣೆಗಾರಿಕೆಯನ್ನು ನಿರ್ವಹಿಸಲು ಬೇರೆಯವರು ಬರುತ್ತಾರೆ.
ನಾನು ನಮ್ಮ ಹಿರಿಯ ಸಹೋದ್ಯೋಗಿಗಳ ಜೊತೆ ಮಾತನಾಡುತ್ತ ಒಂದು ಮಾತು ಹೇಳಿದೆ. "ನೀವೆಲ್ಲ ಒಂದು ತಂಡವಾಗಿ ಕೆಲಸ ಮಾಡಿದ್ದರೆ ಇಂದು ನಮ್ಮ ವಾಹಿನಿ ನಂಬರ್ ಒನ್ ವಾಹಿನಿಯಾಗುತ್ತಿತ್ತು. ಆದರೆ ಅದು ಆಗಲಿಲ್ಲ. ನಿಮಗೆಲ್ಲ ನನ್ನ ಬಗ್ಗೆ ಭಯವಿತ್ತು. ನನ್ನ ಸಲಹೆಗಳನ್ನು ಸ್ವೀಕರಿಸುವ ಮುಕ್ತ ಮನಸ್ಸು ಇರಲಿಲ್ಲ. ಇಗೋ ನಿಮ್ಮನ್ನು ಬಂಧಿಸಿತ್ತು. ಇದಕ್ಕಾಗಿ ಗುಂಪುಗಾರಿಕೆ ಮಾಡುವವರು ನನ್ನನ್ನೂ ಗುಂಪುಗಾರಿಕೆ ಮಾಡುವವ ಎಂದು ಪ್ರತಿಬಿಂಬಿಸಲು ಯತ್ನ ನಡೆಸಿದಿರಿ. ಆದರೆ ನನಗೆ ಅಂಟಿಕೊಂದು ಇರುವುದು ಗೊತ್ತಿದೆ. ಹಾಗೆ ಎಲ್ಲವನ್ನು ಬಿಟ್ಟು ತಿರುಗಿ ನೋಡದೇ ಹೋಗುವುದಕ್ಕೂ ಗೊತ್ತಿದೆ. "
ಹಾಗೆ ತಿರುಗಿ ನೋಡದೇ ಹೋಗಿ ಬಿಡುವುದು ಯಾವಾಗಲೂ ಸಂತೋಷವನ್ನು ನೀಡುತ್ತದೆ. ನಾನು ಹಲವಾರು ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಕೆಲಸ ಮಾಡಿ ಹಾಗೆ ಹೊರಟು ಬಂದಿದ್ದೇನೆ. ಬರುವಾಗ ನಾನೆಲ್ಲಿ ತಪ್ಪು ಮಾಡಿದೆ ಎಂದು ಧ್ಯಾನಿಸುತ್ತ ಕುಳಿತುಕೊಳ್ಳುತ್ತೇನೆ. ಕೆಲವೊಮ್ಮೆ ನನ್ನ ತಪ್ಪುಗಳು ನನಗೆ ಅರಿವಾಗುತ್ತದೆ. ಕೆಲವೊಮ್ಮೆ ತಪ್ಪುಗಳು ಎದುರಿಗೆ ಬರುವುದೇ ಇಲ್ಲ. ಈ ಎಲ್ಲ ಅನುಭವಗಳ ನಡುವೆಯೂ ನಾನು ಮನುಷ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿಲ್ಲ. ಕಳೆದುಕೊಳ್ಳುವುದಿಲ್ಲ. ಯಾಕೆಂದರೆ ಮನುಷ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡ ದಿನ ಬದುಕಿನ ಹಾದಿಗೆ ತೆರೆ ಬೀಳುತ್ತದೆ, ಹೀಗೆ ಮನುಷ್ಯರನ್ನು ನಂಬುತ್ತಲೇ ನಮ್ಮಲ್ಲೆರ ಸಣ್ಣತನ, ಗುಂಪುಗಾರಿಕೆಯ ಬಗ್ಗೆ ಸಣ್ನಕ್ಕೆ ನಕ್ಕು ಬಿಡುತ್ತೇನೆ. ಶಶಿಧರ್ ಭಟ್ಟಾ ಇದು ನಿನಗೆ ಇನ್ನೊಂದು ಅನುಭವ ಎಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ.
ಈಗ ಇನ್ನೊಂದು ಜವಾಬ್ದಾರಿಯನ್ನು ನಾನು ಒಹಿಸಿಕೊಳ್ಳಲು ಹೊರಟಿದ್ದೇನೆ. ಮತ್ತೆ ದ್ರುಶ್ಯ ಮಾಧ್ಯಮಕ್ಕೆ ನಾನು ಬರುತ್ತೇನೆಯೋ ಇಲ್ಲವೋ ನನಗೆ ತಿಳಿಯದು. ಮಹಾಯುದ್ಧ, ನ್ಯೂಸ್ ಅಂಡ್ ಯೂಸ್, ನಿಗೂಢ ಜಗತ್ತಿನಂತಹ ಕಾರ್ಯಕ್ರಮಗಳನ್ನು ಮತ್ತೆ ಮಾಡುತ್ತೇನೆಯೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಒಂದು ಮಾತನ್ನು ನಾನು ನಿಮಗೆ ಹೇಳಲೇ ಬೇಕು. ಸುವರ್ಣ ನ್ಯೂಸ್ ನನ್ನ ಮಗು. ಯಾರು ಒಪ್ಪಲಿ ಬಿಡಲಿ ಈ ಮಗುವಿನ ಹೆರಿಗೆ ನೋವನ್ನು ನಾನು ಅನುಭವಿಸಿದ್ದೇನೆ. ಇದು ರಚ್ಚೆ ಹಿಡಿದಾಗ ಸಮಾದಾನ ಮಾಡಿದ್ದೇನೆ. ಮುದ್ದು ಮಾಡಿದ್ದೇನೆ. ಹಾಗೆ ಮಗು ನನಗೆ ಒದ್ದಾಗ ಪ್ರೀತಿಯಿಂದ ತಲೆ ನೇವರಿಸಿದ್ದೇನೆ. ಈ ಮಗುವನ್ನು ಬಿಟ್ಟು ಹೋಗುವ ಘಳಿಗೆಯಲ್ಲಿ ಸ್ವಲ್ಪ ಬೇಸರವಾಗುವುದು ಸಹಜ. ಆದರೆ ಈ ಮಗುವಿನ ಬಗ್ಗೆ ನಿಮಗೆ ಪ್ರೀತಿ ಇರಲಿ. ನಿಮ್ಮ ಮಡಿಲಲ್ಲಿ ಹಾಕಿರುವ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳಿ.

Friday, February 13, 2009

ಪ್ರೀತಿಸುವುದನ್ನು ಕಲಿಸಬೇಕಾಗಿದೆ.....

ಇಂದು ಫೆಬ್ರವರಿ ೧೩, ನಾಳೆ ಫೆಬ್ರವರಿ ೧೪, ವಾಲಂಟನ್ ಡೆ ಅಥವಾ ಪ್ರೇಮಿಗಳ ದಿನ, ಇದು ಇಂದು ವಿವಾದಕ್ಕೆ ಕಾರಣವಾಗಿದೆ. ವಾಲೆಂಟೈನ್ ದಿನವನ್ನು ಮುತಾಲಿಕ್ ಮತ್ತು ಅವರ್ ಉಗ್ರಗಾಮಿ ಬೆಂಬಲಿಗರು ವಿರೋಧಿಸುತ್ತಿದ್ದಾರೆ. ಸೀರೆಬಾಗೀನವನ್ನು ಕೊಡಲು ಅವರು ಸಿದ್ಧರಾಗುತ್ತಿದ್ದಾರೆ. ವಾಲೆಂಟೈನ್ ದಿನದ ಪರವಾಗಿರುವವರು ಪಿಂಕ್ ಚಡ್ದಿಯನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಜೊತೆಗೆ ಪ್ರೇಮಿಗಳ ದಿನಾಚರಣೆಗಾಗಿ ಬೆಂಗಳೂರಿನ ಹೊಟೆಲ್ ಗಳು ಬುಕ್ಕಾಗಿವೆ.
ಇಲ್ಲಿ ಮುತಾಲಿಕ್ ಮತ್ತು ಅವರ ಬೆಂಬಲಿಗರೂ ತಾವು ಪ್ರೇಮಿಗಳಿಗೆ ವಿರೋಧಿಗಳಲ್ಲ ಎಂದು ಹೇಳುತ್ತಾರೆ. ಹಾಗೆ ಮುತಾಲಿಕ್ ಅವರನ್ನು ವಿರೋಧಿಸುವ ಆಧುನಿಕ ಮಹಿಳಾವಾದಿಗಳು ಕೆಂಪು ಕಾಚಾವನ್ನು ಅವನಿಗೆ ಕಳುಹಿಸಿ ವಿಜ್ರಂಭಿಸಲು ಸನ್ನದ್ಧರಾಗುತ್ತಿದ್ದಾರೆ.
ಇವರ ಮಾತುಗಳನ್ನು ನಂಬುವುದಾದರೆ ಇವರೆಲ್ಲ ಪ್ರೇಮಿಗಳ ಪರವಾಗಿರುವವರು. ಹಾಗಿದ್ದರೆ ಇವರ ನಡುವೆ ಯಾಕೆ ಜಗಳ ? ನಿಜವಾಗಿ ಹೇಳುವುದಾದರೆ ಇವರಲ್ಲಿ ಯಾರಿಗೂ ಪ್ರೇಮ ಎಂದರೇನು ಎಂಬುದು ತಿಳಿದಿಲ್ಲ. ಯಾಕೆಂದರೆ ಪ್ರೇಮ ಎನ್ನುವುದು ಒಂದು ಉತ್ಕಟ ಭಾವನೆ. ಅದು ಮನಸ್ಸುಗಳ ಎಲ್ಲೆಯನ್ನು ಮೀರಿದ್ದು. ಪ್ರೇಮದಲ್ಲಿ ಇರುವುದು ಸಮರ್ಪಣಾ ಮನೋಭಾವನೆ. ಅಲ್ಲಿ ಎರಡು ಮನಸ್ಸುಗಳು ದೇಹಗಳು ಸಂಪೂರ್ಣವಾಗಿ ಪ್ರತ್ಯೇಕ ಅಸ್ಥಿತ್ವವನ್ನೇ ಕಳೆದುಕೊಂಡಿರುತ್ತವೆ. ಎರಡು ದೇಹ ಮತ್ತು ಮನಸ್ಸು ಒಂದಾಗುವ, ಅನೇಕದಲ್ಲಿ ಏಕವಾಗುವ ಅಧ್ಬುತ ಇದು. ಪ್ರೇಮಕ್ಕೆ ಕಾಲವಿಲ್ಲ, ಪ್ರೇಮಕ್ಕೆ ಯಾವುದೇ ಬಂಧನ ಇಲ್ಲ. ಬಂಧನದಲ್ಲಿ ಪ್ರೇಮ ಹುಟ್ಟಲಾರದು.
ಮುತಾಲಿಕ್ ಅವರಂತಹ ಕಟ್ಟಾ ಹಿಂದೂವಾದಿಗಳಿಗೆ ರಾಮ ಆದರ್ಶನೇ ಹೊರತೂ ಕೃಷ್ಣನಲ್ಲ. ಹಾಗೆ ನೋಡಿದರೆ ಶ್ರೀರಾಮನ ವ್ಯಕ್ತಿತ್ವ ತುಂಬಾ ಸೀಮಿತವಾದದ್ದು. ಆತ ಎಂದೂ ಜನರಿಗಾಗಿ ಬದುಕಲಿಲ್ಲ. ತನ್ನ ಸುತ್ತಲಿನವರಿಗಾಗಿ ಬದುಕಲಿಲ್ಲ. ತನ್ನ ಹಿಂದೆ ನೆರಳಿನಂತೆ ಹೆಜ್ಜೆ ಹಾಕುವ ಸೀತೆಯನ್ನು ಆತ ಅರ್ಥ ಮಾಡಿಕೊಳ್ಳಲಿಲ್ಲ. ಹೀಗಾಗಿ ಆತ ಆಕೆಯನ್ನು ಅಗ್ನಿ ಕುಂಡಕ್ಕೆ ದಬ್ಬಲು ಹಿಂಜರಿಯಲಿಲ್ಲ. ಆದರೆ ಕೃಷ್ಣ ಹಾಗಲ್ಲ. ಆತ ಅದ್ಭುತ ಪ್ರೀತಿಯ ಸಂಕೇತ. ಇಡೀ ಮಹಾಭಾರತದಲ್ಲಿ ಕೃಷ್ಣನಿಗೆ ಸಿಟ್ಟು ಬಂದಿದ್ದೇ ಕಡಿಮೆ. ಹಾಗೆ ಅವನ ಮುಖದ ಮೇಲಿರುವ ಕಿರು ನಗೆ. ರಾಧೆಯ ಬಳಿ ಇರಲಿ, ರುಕ್ಮಿಣೀಯ ಬಳಿ ಇರಲಿ, ಸತ್ಯ ಭಾಮೆಯ ಬಳಿ ಇರಲಿ ಕೃಷ್ಣ ಕೃಷ್ಣನೇ. ಜೊತೆಗೆ ಅವನ ವ್ಯಕ್ತಿತ್ವಕ್ಕೆ ಇರುವ ಬೇರೆ ಬೇರೆ ಆಯಾಮಗಳು. ಕೃಷ್ಣನನ್ನು ಅರ್ಥಮಾಡಿಕೊಳ್ಳುವುದೆಂದರೆ ಅದು ರಾಜ್ಯಶಾಸ್ತ್ರವನ್ನು ಕಲಿತಂತೆ. ಪ್ರೇಮ ಕಾವ್ಯವನ್ನು ಮನನ ಮಾಡಿದಂತೆ. ಆತ ಎಲ್ಲಿಯೇ ಇರಲಿ, ಅಲ್ಲಿ ಇರದಿರುವುದು ಕೃಷ್ಣನಿಗ್ಎ ಗೊತ್ತಿತ್ತು.
ಇಂತಹ ಕೃಷ್ಣನನ್ನು ಅರ್ಥಮಾಡಿಕೊಳ್ಳದವರು ಪ್ರೇಮವನ್ನು ಅರ್ಥಮಾಡಿಕೊಳ್ಳಲಾರರು. ರಾಮಜಪ ಜಪಿಸುವವರು ಎಂದೂ ಮಹಿಳಾ ವಿರೋಧಿಗಳೇ.
ಇನ್ನು ಪಿಂಕ್ ಚೆಡ್ದಿಯನ್ನು ಕಳುಹಿಸುವವರ ಮನಸ್ಥಿತಿಯನ್ನು ನೋಡಿ. ಇದೂ ಅಪಾಯಕಾರಿಯೇ. ಇವರಿಗೂ ಪ್ರೇಮದ ಗಂಧಗಾಳಿಯೂ ಇಲ್ಲ. ನಿಜವಾಗಿ ಪ್ರೀತಿಸುವವರು ಚಡ್ದಿಯನ್ನು ಕಳಿಹಿಸುತ್ತಿರಲಿಲ್ಲ. ಚೆಡ್ದಿ ನಮ್ಮ ಗುಪ್ತಾಂಗವನ್ನು ಮುಚ್ಚುತ್ತದೆ. ಅದಕ್ಕೆ ಇರುವ ವಾಸನೆ ಪ್ರೀತಿಯದಲ್ಲ, ಅದು ಕಾಮದ ವಾಸನೆ. ಕಾಮ ಬಯಕೆಯಲ್ಲಿ ಹುಟ್ಟುತ್ತದೆ, ಪ್ರೀತಿ ನಿಸ್ವಾರ್ಥದಲ್ಲಿ, ಅರ್ಪಿಸಿಕೊಳ್ಳುವವದಲ್ಲಿ ತಮ್ಮನ್ನೆ ನಾವೆ ಮರೆಯುವದಲ್ಲಿ ಹುಟ್ಟಿ ಬೆಳೆಯುತ್ತದೆ. ಕಾಮದಲ್ಲಿ ಸ್ವಾರ್ಥ ಮತ್ತು ಬಯಕೆ ಇರುವುದರಿಂದ ಅದಕ್ಕೆ ಬೆಳವಣಿಗೆ ಇಲ್ಲ. ಪ್ರೀತಿ ಹಾಗಲ್ಲ, ಅದು ಬೆಳೆಯುತ್ತಲೇ ಇರುತ್ತದೆ, ಯಾಕೆಂದರೆ ಅದಕ್ಕೆ ಎಲ್ಲೆಯೇ ಇಲ್ಲ.
ನನ್ನನ್ನು ಇನ್ನೊಂದು ಅಂಶ ಕಾಡುತ್ತದೆ. ನಮ್ಮ ಕಾವ್ಯದಲ್ಲಿ ಸಾಹಿತ್ಯದಲ್ಲಿ, ಇತಿಹಾಸದಲ್ಲಿ ಪ್ರೀತಿಯ ಹಲವು ಉದಾಹರಣೆಗಳು ಸಿಗುತ್ತವೆ. ಕಾಳಿದಾಸನ ಮೇಘಧೂತ ಒಂದು ಮಹಾನ ಪ್ರೀತಿ, ವಿರಹದ ಕಾವ್ಯ. ಹಾಗೆ ಸಲಿಂ ಅನಾರ್ಕಲಿಯಂತಹ ಪ್ರೀತಿಗೆ ಇಲ್ಲಿ ವಿಜೃಂಭಿಸಿದೆ. ಆದರೆ ನಮಗೆಂದೂ ಪ್ರೀತಿಗಾಗಿ ಒಂದು ದಿನ ಬೇಕು ಎಂದು ಅನ್ನಿಸಲೇ ಇಲ್ಲ.
ಜಾಗತೀಕರಣದ ನಂತರ ವಿದೇಶಿಯರನ್ನು ಅತಿಯಾಗಿ ಅನುಕರಿಸಲು ಪ್ರಾರಂಭಿಸಿದ ನಾವು ಪ್ರೀತಿಯ ವಿಚಾರದಲ್ಲೂ ಅವರನ್ನು ಅನುಕರಣೆ ಮಾಡಲು ಪ್ರಾರಂಭಿಸಿದೆವು. ಪ್ರೀತಿಯಲ್ಲೂ ಮಾರು ಕಟ್ಟೆ ಸಂಸ್ಕೃತಿ ಬಂತು. ಈ ಮಾತನ್ನು ನಾನು ಹೇಳುದಕ್ಕೂ ಬಯಪಡುತ್ತೇನೆ. ಯಾಕೆಂದರೆ ಈ ಮಾತು ಹೇಳಿದ ತಕ್ಷಣ ಕಪಿ ಸೈನ್ಯ ಇದನ್ನು ಬಳಸಿಕೊಳ್ಳುತ್ತದೆ. ರಾಮನ ವಂಶಜರು ವಿಕಟ ನಗೆ ನಗುತ್ತಾರೆ. ಆಗ ಪ್ರೀತಿಸುವ ಹೃದಯಗಳು ರೋಧಿಸಲು ಪ್ರಾರಂಭಿಸುತ್ತವೆ.
ಪ್ರೀತಿ ಗೊತ್ತಿಲ್ಲದವರ ಬಳಿ ಪ್ರೀತಿಯ ಬಗ್ಗೆ ಮಾತನಾಡಿದರೆ ಪ್ರಯೋಜನ ಇಲ್ಲ. ಪ್ರೀತಿ ಎಂದರೆ ಮಾರುಕಟ್ಟೆಯ ಸರುಕು ಎಂದುಕೊಂಡವರಿಗೂ ಇದು ಅರ್ಥವಾಗದು.
ಹೀಗಾಗಿ ಎಲ್ಲರಿಗೂ ಪ್ರೀತಿ ಎಂದರೆ ಏನು ಎಂದು ತಿಳಿಸಬೇಕಾಗಿದೆ. ಪ್ರೀತಿಸುವುದನ್ನು ಕಲಿಸಬೇಕಾಗಿದೆ.

Friday, January 30, 2009

ಸ್ವಾಮಿಗಳನ್ನು ಕುರಿತು..........

ಸಾಧಾರಣವಾಗಿ ಮಠಗಳಿಗೆ ನಾನು ಹೋಗುವುದಿಲ್ಲ. ಸ್ವಾಮೀಜಿಗಳ ಕಾಲಿಗೂ ಬೀಳುವಿದಿಲ್ಲ. ಯಾಕೆಂದರೆ ಕಾಲಿಗೆ ಬೀಳುವುದೆಂದರೆ ಸಂಪೂರ್ಣ ಶರಣಾಗತಿ. ನನಗೆ ಈ ಶರಣಾಗತಿಯಲ್ಲಿ ನಂಬಿಕೆ ಇಲ್ಲ. ಇದಕ್ಕೆ ಬಹುಮುಖ್ಯ ಕಾರಣ ನನ್ನ ಅನುಭವ ಇದ್ದರೂ ಇದ್ದೀತು. ೮೦ ರ ದಶಕದಲ್ಲಿ ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ನಾನು ಊರಿಗೆ ಬಂದಾಗ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿದ್ದು ಬಂಡಾಯ ಮತ್ತಿ ರೈತ ಚಳವಳಿಗಳು. ಈ ಕಾರಣದಿಂದ ನನ್ನ ಮೊದಲು ಹೋರಾಟ ಪ್ರಾರಂಭವಾಗಿದ್ದು ರಾಮಚಂದ್ರಮಠದ ಅಂದಿನ ಸ್ವಾಮೀಜಿಯ ವಿರುದ್ಧ. ಬರವಣಿಗೆಯ ಮೂಲಕ ಪ್ರಾರಂಭವಾದ ಈ ಹೋರಾಟ ಮಠದ ಭಕ್ತರು ನನ್ನ ಮೇಲೆ ಧಾಳಿ ನಡೆಸಲು ಯೋಜನೆಯನ್ನು ರೂಪಿಸುವವರೆಗೆ ಬೆಳೆಯಿತು.


ಆಗ ಆ ಸ್ವಾಮೀಜಿ ನನಗೆ ಶಾಪ ಹಾಕಿದರು. ನನ್ನನ್ನು ಜಾತಿಯಿಂದ ಹೊರಕ್ಕೆ ಹಾಕಿರುವುದಾಗಿ ಘೋಷಿಸಿದರು. ಸ್ವಜಾತಿಯ ಜನ ನನಗೆ ಅನ್ನ ನೀರು ಕೊಡಬಾರದು ಎಂದು ಫರ್ಮಾನು ಹೊರಡಿಸಿದರು. ಅವರ ಈ ಕಿರುಕುಳವನ್ನು ಎದುರಿಸಲಾಗದೇ ನಾನು ಬೆಂಗಳೂರಿಗೆ ಬಂದಿದ್ದು, ಪತ್ರಿಕೋದ್ಯಮಿಯಾಗಿದ್ದು. ಇಲ್ಲದಿದ್ದರೆ ನಾನು ಊರು ಬಿಟ್ಟು ಬರುತ್ತಲೇ ಇರಲಿಲ್ಲ. ನನಗೆ ಶಾಪ ಹಾಕಿ ಊರು ಬಿಡಿಸಿದ ಕಾರಣಕ್ಕಾಗಿ ಮತ್ತು ಅವರು ಶಾಪ ನೀಡಿದ ಮೇಲೆ ನನಗೆ ಒಳ್ಳೆಯದಾಗಿದ್ದಕ್ಕಾಗಿ ನಾನು ಈಗಲೂ ಅವರಿಗೆ ಕೃತಜ್ನನಾಗಿದ್ದೇನೆ.


ಪತ್ರಿಕೋದ್ಯಮಿಯಾದ ಮೇಲೆ ನಾನು ಕರ್ನಾಟಕದ ಬಹುತೇಕ ಪ್ರಮುಖ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದೇನೆ. ಆದರೆ ಯಾಕೋ ನನಗೆ ಗೌರವ ಬರುಂತಹ ಸ್ವಾಮಿಗಳು ನನಗೆ ಸಿಕ್ಕಿಲ್ಲ. ಮಂತ್ರಾಕ್ಷತೆ ನೀಡುವಾಗ ಮಹಿಳೆಯರಾದರೆ ಅವರ ಕೈ ಮುಟ್ಟಿ ನೀಡುವ, ಪುರುಷರಾದರೆ ದೂರದಿಂದ ಒಗೆಯುವ ಸ್ವಾಮಿಗಳನ್ನು ನಾನು ನೋಡಿದ್ಡೇನೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರು, ಬ್ಲೂ ಫಿಲ್ಮ್ ನೋಡುವ ಸ್ವಾಮಿಗಳು ನನಗೆ ಗೊತ್ತು. ಹಾಗೆ ಶೈಕ್ಷಣಿಕ ಸಂಸ್ಥೆಗಳ ಮೂಲಕ ಅಂಗಡಿ ತೆರೆದಿರುವ ಮಠಾಧಿಪತಿಗಳು ನಮ್ಮ ನಡುವೆ ಇದ್ದಾರೆ. ರಾಜಕೀಯ ಮಧ್ಯಸ್ಥಿಕೆ ಮಾಡುವವರು, ಇನ್ನು ಏನೇನೋ ಮಾಡುವವರು ಎಲ್ಲ ಈ ಧರ್ಮದ ಜಗತ್ತಿನಲ್ಲಿ ತುಂಬಿ ಹೋಗಿದ್ದಾರೆ.


ನಾನು ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಸಿದ್ದಗಂಗೆಯ ಡಾ. ಶಿವಕುಮಾರ್ ಸ್ವಾಮಿಯವರನ್ನು ನಾನು ಭೇಟಿ ಮಾಡಿದ ಸಂದರ್ಭವನ್ನು ಹೇಳುವುದಕ್ಕಾಗಿ. ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಈಗ ನೂರಾ ಒಂದು ವರ್ಷ. ಈ ಕಾರಣಕ್ಕಾಗಿ ನಾನು ಅವರನ್ನು ಸಂದರ್ಶಿಸಲು ಮುಂದಾದೆ. ಅವರ ಅಕ್ಷರ ದಾಸೋಹದ ಬಗ್ಗೆ ನನಗಿರುವ ಗೌರವ ಕೂಡ ಇದಕ್ಕೆ ಕಾರಣವಾಗಿತ್ತು. ಪ್ರತಿ ದಿನ ಸುಮಾರು ೧೦ ಸಾವಿರ ಮಕ್ಕಳಿಗೆ ಊಟ ವಸತಿ ಮತ್ತು ವಿದ್ಯಾಭ್ಯಾಸವನ್ನು ಒದಗಿಸುವುದು ಸಾಮಾನ್ಯ ಸಾಧನೆ ಅಲ್ಲ. ಸಿದ್ದಗಂಗಾ ಮಠ ಇರುವುದರಿಂದಲೇ ಕರ್ನಾಟಕದ ಬಹಳಷ್ಟು ದಲಿತ ಮತ್ತು ದುರ್ಬಲ ವರ್ಗದ ಮಕ್ಕಳು ವಿದ್ಯಾವಂತರಾಗುವುದು ಸಾಧ್ಯವಾಗಿದೆ. ಇದೆಲ್ಲ ಕೂಡ ಶ್ಲಾಘನೀಯ ವಿಚಾರವೇ,

ನಾನು ಅವರನ್ನು ಸಂದರ್ಶನ ಮಾಡಿದ ಮೇಲೆ ಕೆಲವರು ಕೇಳಿದರು. ಯಾಕೆ ಸಾರ್, ನಿಮ್ಮ ಒರಿಜಿನಲ್ ಸ್ಟೈಲ್ ಇರಲಿಲ್ಲ. ನಾನು ಅವರಿಗೆ ಹೇಳಿದೆ.

"ಸ್ವಾಮಿಗಳ ಬಗ್ಗೆ ನನಗೆ ಅಂತಹ ಗೌರವ ಇಲ್ಲ ಎಂಬುದು ನಿಜ. ಹಾಗೆ ರಾಜಕಾರಣಿಗಳಿಗೆ ಆಶೀರ್ವಾದ ನೀಡುತ್ತ ಇವರೆಲ್ಲ್ ಮಾಡುವ ಜಾತಿ ರಾಜಕೀಯವೂ ನನಗೆ ಗೊತ್ತು. ಮಾರ್ಗ ದರ್ಶನ ಮಾಡುವವರೇ ಭಕ್ಷಕರಾಗುವುದು ನನಗೆ ತಿಳಿದಿದೆ. ಆದರೆ, ಅಕ್ಷರ ದಾಸೋಹದಂತಹ ಸಾಮಾಜಿಕ ಕಾರ್ಯ ಮಾಡುವವರನ್ನು ನಾನು ಗೌರವಿಸುತ್ತೇನೆ. ಅದಕ್ಕಾಗಿ ಶ್ಲಾಘಿಸುತ್ತೇನೆ. ಆದರೆ ಈ ಮಠ ಕಟ್ಟುವವರನ್ನು ನಾನು ಒಪ್ಪಿಕೊಳ್ಳಲಾರೆ. ಮಠ ಕಟ್ಟುವುದು ಯಾಕಾಗಿ ಎಂಬ ಬಗ್ಗೆ ನನಗೆ ಅನುಮಾನಗಳಿವೆ. ಏನೇ ಇರಲಿ ಶಿವಕುಮಾರ ಸ್ವಾಮಿಗಳು ನೂರು ವರ್ಷ ಪೂರೈಸಿದ್ದಾರೆ. ಎಲ್ಲ ದೌರ್ಬಲ್ಯಗಳ ನಡುವೆಯೂ ಅವರದು ಸಾರ್ಥಕ ಬದುಕು. "

Tuesday, January 27, 2009

ಧರ್ಮದಿಂದ ಬಿಡುಗಡೆ ಬೇಕು.........

ಮಂಗಳೂರಿನಲ್ಲಿ ನಡೆದ ಪಬ್ ದಾಳಿಯ ಪ್ರಕರಣ ನಮ್ಮ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿದೆ. ಮೊದಲನೆಯದಾಗಿ ಧಾರ್ಮದ ಹೆಸರಿನಲ್ಲಿ ನಡೆಯುತ್ತಿರುವ ಜನ ವಿರೋಧಿ ಕೃತ್ಯಗಳು. ಇದನ್ನು ನಾನು ತಾಲಿಬಾನೀಕರಣ ಎಂದು ಕರೆಯುತ್ತೇನೆ. ಪ್ರತಿಯೊಬ್ಬರಿಗೂ ಅವರಿಗೆ ಬೇಕಾದಂತೆ ಬದುಕುವ ಹಕ್ಕಿದೆ. ಆದರೆ ಬೇಕಾದಂತೆ ಬದುಕುವುದೆಂದರೆ, ಬೇರೆಯವರಿಗೆ ತೊಂದರೆ ಕೊಟ್ಟು ಬದುಕುವುದಲ್ಲ. ಯಾರಿಗೂ ತೊಂದರೆ ಕೊಡದೇ ನಮಗೆ ಬೇಕಾದಂತೆ ಬದುಕುವುದು. ಇದೇ ಬದುಕುವ ಧರ್ಮ. ಆದರೆ ಇಂದು ನನಗೆ ಧಾರ್ಮಿಕ ಅಸಹನೆ ಕಾಣುತ್ತಿದೆ. ಕಾವಿ ಧರಿಸಿದವರಿಗೆ ಪ್ಯಾಂಟು ಕಂಡರಾಗುವುದಿಲ್ಲ. ಮೀಸೆ ಇಲ್ಲದೇ ದಾಡಿ ಬಿಟ್ಟವರಿಗೆ, ನಾಮ ಧರಿಸಿದವರನ್ನು ಕಂಡರೆ ಅಸಹನೆ. ಇದೆಲ್ಲ ನಡೆಯುತ್ತಿರುವುದು ಧರ್ಮದ ಹೆಸರಿನಲ್ಲಿ. ಧರ್ಮ ಮತ್ತು ನೈತಿಕತೆಯನ್ನು ಉಳಿಸುವ ಹೆಸರಿನಲ್ಲಿ. ಆದರೆ ನೈತಿಕತೆ ಎನ್ನುವುದು ಕಾಲಕ್ಕೆ ಬದ್ದವಾಗಿರುವಂತಹುದು ಅದು ಕಾಲಾತೀತವಾದುದಲ್ಲ. ಅಂದರೆ ವೇದ ಕಾಲದ ನೈತಿಕತೆ ಇಂದೂ ನೈತಿಕತೆ ಆಗಬೇಕಿಲ್ಲ. ಮಹಾ ಭಾರತ ಕಾಲದ ನೈತಿಕತೆ ಈಗಿನ ನೈತಿಕತೆ ಎಂದು ಕೊಳ್ಳುವುದು ತಪ್ಪು. ಹಾಗೆ ಖುರಾನ್ ನಲ್ಲಿ ಬರೆದಿದ್ದು ಎಂದೂ ಸತ್ಯವಾಗಿರಬೇಕು ಎಂದೇನೂ ಇಲ್ಲ.
ನೈತಿಕತೆಯನ್ನು ಬದುಕುವ ನೀತಿ ಎಂದು ಕರೆಯಬಹುದು. ಹಾಗಾದರೆ ಬದುಕುವ ನೀತಿ ಆಯಾ ಕಾಲಕ್ಕೆ ಬದಲಾಗಬೇಕು ಅಲ್ಲವೆ ? ಯಾಕೆಂದರೆ ಆಯಾ ಕಾಲ ಘಟ್ಟದ ಸಮಾಜ ತನ್ನದೇ ಆದ ಬದುಕುವ ನೀತಿಯನ್ನು ಕಟ್ಟಿಕೊಳ್ಳುತ್ತದೆ. ಯಾವಾಗ ಈ ರೀತಿ ನೈತಿಕತೆಗೂ ಚಲನಶೀಲತೆ ಇರುತ್ತದೇಯೋ ಆಗ ಧರ್ಮಕ್ಕೂ ಚಲನಶೀಲತೆ ಬರುತ್ತದೆ. ಆದ ಬದುಕು ಹರಿಯುವ ನದಿಯ ಹಾಗಾಗುತ್ತದೆ.
ಆದರೆ ನಮ್ಮಲ್ಲಿ ಅಪ್ಪ ನೆಟ್ಟ ಆಲದ ಮರಕ್ಕೆ ನೇತು ಹಾಕಿಕೊಳ್ಳುವವರ ಸಂಖ್ಯೆ ಹೆಚ್ಚು. ಅವರು ಧರ್ಮವನ್ನು ಪುನರ್ ವ್ಯಾಖ್ಯೆಗೆ ಒಳಪಡಿಸಲು ಸಿದ್ಧರಿಲ್ಲ. ಒಂದು ಧರ್ಮ ಹುಟ್ಟಿದ ಸಂದರ್ಭದ ಸತ್ಯ ಎಲ್ಲ ಕಾಲಕ್ಕೂ ಸತ್ಯವಾಗಬೇಕು ಎಂದೇನೂ ಇಲ್ಲ. ಹೆಣ್ನು ಮಕ್ಕಳು ಸಾರ್ವಜನಿಕವಾಗಿ ಕುಡಿಯಬಾರದು ಎಂದು ವಾದಿಸುವ, ಈ ಕಾರಣದಿಂದ ಮಹಿಳೆಯರ ಮೇಲೆ ಹಲ್ಲೆ ನಡೆಸುವವರು ಹೆಣ್ನು ಮಕ್ಕಳಿಗೆ ಬುರ್ಖಾ ಹಾಕಿಸಿದವರಿಗಿಂತ ಬೇರೆಯಾಗಿ ನನಗೆ ಕಾಣುವುದಿಲ್ಲ. ಇದನ್ನೇ ನಾನು ತಾಲಿಬಾನೀಕರಣ ಎಂದು ಕರೆದಿದ್ದು.
ಮಹಾ ಭಾರತ ಕಾಲದಲ್ಲಿ ಒಂದು ಹೆಣ್ಣು ಐವರನ್ನು ಮದುವೆಯಾದ ಉದಾಹರಣೆ ಇದೆ. ಅದನ್ನು ಇಂದು ಜಾರಿಗೆ ತರುವುದು ಸಾಧ್ಯವೆ ? ಹಾಗೇ ವೇದ ಕಾಲದಲ್ಲಿ ಇದ್ದ ನಿಯಮಗಳನ್ನು ಇಂದು ಪಾಲಿಸಬೇಕು ಎಂದು ಹೇಳುವವರು ಯಾವ ಕಾಲದಲ್ಲಿದ್ದಾರೆ ? ಮಹಿಳೆಯರನ್ನು ಪರದೆಯ ಒಳಗೆ ಇಟ್ಟವರಿಗಿಂತ ಇವರು ಯಾವ ರೀತಿ ಬೇರೆಯಾಗಿದ್ದಾರೆ ?
ಇಂದು ನಮಗೆ ಹೊಸ ಧರ್ಮ ಬೇಕಾಗಿದೆ. ಈಗಿರುವ ಧರ್ಮದಲ್ಲಿ ಬದಲಾವಣೆ ಬೇಕು. ನನ್ನ ಈ ಮಾತು ವಿಶ್ವದ ಬಹುತೇಕ ಎಲ್ಲ ಧರ್ಮಗಳಿಗೂ ಅನ್ವಯಿಸುತ್ತದೆ. ಆದರೆ ಧರ್ಮವನ್ನು ಮೂಢರಂತೆ ಅನುಸರಿಸುವವರು ಬಂದೂಕು ಹಿಡಿಯುತ್ತಾರೆ ಇಲ್ಲವೇ ಪಬ್ ಗಳಿಗೆ ನುಗ್ಗಿ ಹೆಣ್ಣು ಮಕ್ಕಳ ಮಾನಭಂಗಕ್ಕೆ ಯತ್ನಿಸುತ್ತಾರೆ.
ನಮಗೆ ಈಗ ಧರ್ಮದಿಂದ ಬಿಡುಗಡೆ ಬೇಕು. ನಮಗೆಲ್ಲ ಬದುಕುವ ಧರ್ಮ. ನಾವೆಲ್ಲ ಧಾರ್ಮಿಕ ಲಾಂಛನಗಳಿಂದ, ಆಚರಣೆಗಳಿಂದ ಹೊರಕ್ಕೆ ಬರಬೇಕು. ಧರ್ಮ ಎನ್ನುವುದು ಆಧ್ಯಾತ್ಮಿಕತೆ ಆಗಬೇಕು. ಧರ್ಮ ಸಾಮಾಜಿಕ ನೀತಿ ನಿಯಮಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ಸಾಮಾಜಿಕ ನಡವಳಿಕೆ ಮತ್ತು ಧಾರ್ಮಿಕತೆ ಬೇರೆ ಎಂಬುದನ್ನು ತಾಲಿಬಾನಿಗಳಿಗೆ, ಅವರು ಯಾವ ಧರ್ಮದವರೇ ಇರಬಹುದು ಅವರಿಗೆ ತಿಳಿ ಹೇಳಬೇಕು.
ಹೌದು, ನಮಗೆಲ್ಲ ಈಗ ಧರ್ಮಗಳಿಂದ ಬಿಡುಗಡೆ ಬೇಕಾಗಿದೆ,

Thursday, January 22, 2009

ಬೆಳಗಾವಿಯ ನೆನಪುಗಳು....

ಕಳೆದ ಹತ್ತು ದಿನಗಳ ಕಾಲ ನಾನು ಬೆಳಗಾವಿಯಲ್ಲಿದ್ದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಬಿಟ್ತು ಇಷ್ಟು ದಿನ ಹೊರಕ್ಕೆ ಇದ್ದುದು ಇದೇ ಮೊದಲು. ನನಗೆ ಬೆಂಗಳೂರಿನ ಬಗ್ಗೆ ಅಂತಹ ವ್ಯಾಮೋಹವಿಲ್ಲ. ಆದರೆ ಈ ಬೆಂಗಳೂರು ಬಿಟ್ಟು ಓಡಿ ಹೋಗಬೇಕು ಎಂದುಕೊಂಡರೂ ನನಗೆ ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಮೋಹವೇ ಹಾಗೆ.



ಬೆಳಗಾವಿ ನನಗ್ಎ ಹೊಸತಲ್ಲ. ನಾನು ನನ್ನ ಕಾಲೇಜು ದಿನಗಳನ್ನು ಕಳೆದಿದ್ದು ಬೆಳಗಾವಿಯಲ್ಲಿ. ಹಾಗೆ ಕಾಡಿನ ನಡುವೆ ಬದುಕುತ್ತ ಕಾಡು ಜೀವಿಯಾಗಿದ್ದ ನನಗೆ ನಾಗರೀಕತೆ (?) ಮೊದಲ ಪಾಠ ಸಿಕ್ಕಿದ್ದೂ ಇದೇ ಊರಿನಲ್ಲಿ. ಇಲ್ಲಿಯೇ ಟೆಲಿಫೋನಿನಲ್ಲಿ ಮಾತನಾಡುವುದನ್ನು ಕಲಿತೆ. ಇಂಗ್ಲೀಷಿನಲ್ಲಿ ಮಾತನಾಡಲು ಯತ್ನ ನಡೆಸಿದೆ. ನನಗೆ ಇದನ್ನೆಲ್ಲ ಕಲಿಸಿದವಳು ನನ್ನ ಗೆಳತಿ. ನನಗಾಗ ಇಂಗ್ಲೀಷ್ ಸಿನೆಮಾಗಳ ಬಗ್ಗೆ ಮಾಹಿತಿಯೇ ಇರಲಿಲ್ಲ. ನಾನಲ್ಲಿ ನೋಡಿದ್ದು ಹಲವಾರು ಖ್ಯಾತ ಇಂಗ್ಲೀಷ್ ಸಿನೆಮಾಗಳನ್ನು. ನನ್ನ ಬದುಕು ರೂಪಗೊಂಡಿದ್ದು ಒಂದು ಆಕೃತಿಯನ್ನು ಪಡೆದಿದ್ದು ಬೆಳಗಾವಿಯಲ್ಲಿ.

ಬಹಳಷ್ಟು ಜನರಿಗೆ ಬೆಳಗಾವಿಯ ಬಗ್ಗೆ ಗೊತ್ತಿರಲಿಕ್ಕಿಲ್ಲ. ಕರ್ನಾಟಕದ ಗಡಿ ಜಿಲ್ಲೆಯಾದ ಬೆಳಗಾವಿ ಕನ್ನಡ, ಮರಾಠಿ ಮತ್ತು ಗೋವನ್ ಸಂಸ್ಕ್ರಿತಿಗಳು ಹದವಾಗಿ ಬೆರೆತು ಪಾಕಗೊಂಡ ಊರು. ಇಲ್ಲಿ ಭಾಷೆ ನವೆಂಬರ್ ತಿಂಗಳು ಬಿಟ್ಟರೆ ಬೇರೆ ದಿನಗಳಲ್ಲಿ ಮಹತ್ವದ್ದಾಗಿಲ್ಲ. ಕನ್ನಡ, ಮರಾಠಿ ಭಾಷೆಗಳನ್ನು ಇಲ್ಲಿನ ಜನ ಸಮಾನವಾಗಿ ಬಳಸುತ್ತಾರೆ. ನಾನು ಮರಾಠಿಯಲ್ಲಿ ಕಲಿತ ಮೊದಲ ವಾಕ್ಯ ಎಂದರೆ "ಏ ಮುಲಗಿ ಪಾರ್ ಸುಂದರ್ ಆಯೇ." ಅಂದರೆ ಈ ಹುಡುಗಿ ತುಂಬಾ ಸುಂದರವಾಗಿದ್ದಾಳೆ ಎಂದು.

ಇಂತಹ ಬೆಳಗಾವಿಯಲ್ಲಿ ಈ ಬಾರಿ ವಿಧಾನ ಮಂಡಲದ ಅಧಿವೇಶನ ನಡೆಯಿತು. ಇದಕ್ಕಾಗಿ ರಾಜ್ಯದ ರಾಜ್ಯಧಾನಿಯಿಂದ ಸುಮಾರು ೩೦೦ ಪತ್ರಕರ್ತರು ಆಗಮಿಸಿದ್ದರು. ರಾಜ್ಯ ವಾರ್ತಾ ಇಲಾಖೆ ಇವರಿಗೆಲ್ಲ ವಸತಿ, ಗುಂಡು ತುಂಡಿನ ವ್ಯವಸ್ಥೆ ಮಾಡಿತ್ತು. ಜೊತೆಗೆ ಪ್ರತಿ ದಿನ ಸಚಿವರುಗಳ ಪಾನಗೋಷ್ಠಿ. ಇಂಥಹ ಪಾನಗೋಷ್ಟಿಯೊಂದರಲ್ಲಿ ಪತ್ರಕರ್ತರಿಗೆ ಕೈ ಗಡಿಯಾರದ ಉಡುಗೊರೆಯನ್ನು ನೀಡಲಾಯಿತು.

ಸಾಧಾರಣವಾಗಿ ಇಂತಹ ಪಾನಗೋಷ್ಟಿಗಳೆಂದರೆ ನನಗಾಗುವುದಿಲ್ಲ. ನಾನು ಯಾವುದೇ ಪಾನಗೋಷ್ಟಿಯಲ್ಲಿ ಪಾಲ್ಗೊಳ್ಳಲಿಲ್ಲ. ಆದರೆ ನನ್ನ ವಾಹನ ಚಾಲಕ ಮಾತ್ರ ಈ ಗೋಷ್ಟಿಯಲ್ಲಿ ಪಾಲ್ಗೊಳ್ಳುತ್ತಿರುವ ವರ್ತಮಾನ ನನಗೆ ತಲುಪಿತು. ಆತ ಸಚಿವರು ನೀಡಿದ ಕೈಗಡಿಯಾರವನ್ನು ಸ್ವೀಕರಿಸಿದ್ದ. ಅದು ಒಂದಲ್ಲ, ತಾನು ತೆಗೆದುಕೊಂಡಿದ್ದರ ಜೊತೆಗೆ ನಮ್ಮ ಸಾರ್ ಗೆ ಒಂದು ಎಂದು ಹೇಳಿ ಮತ್ತೊಂದನ್ನು ತೆಗೆದುಕೊಂಡಿದ್ದ. ನನಗೆ ಈ ವಿಷಯ ತಿಳಿದಾಗ ಆಘಾತ. ನಾನು ಅವನಿಗೆ ಹೇಳಿದೆ.

"ನಾನು ನನ್ನ ಕಾರ್ಯಕ್ರಮದಲ್ಲಿ ರಾಜಕಾರಣಿಗಳನ್ನು ಟೀಕಿಸುತ್ತೇನೆ. ಅದು ಕೇವಲ ನನ್ನ ಮಾತಲ್ಲ. ಜನರ ಪ್ರತಿನಿಧಿಯಾಗಿ ನಾನು ಅಲ್ಲಿ ಮಾತನಾಡುತ್ತೇನೆ. ಹೀಗಿರುವಾಗ ನನ್ನ ನಡವಳಿಕೆ ಮಾದರಿಯಾಗಿರಬೇಕಾಗುತ್ತದೆ. ಹಾಗೆ ನನ್ನ ವಾಹನ ಚಾಲಕನಾದ ನಿನ್ನ ನಡವಳಿಕೆಕೂಡ. ಇಂದು ನಾನಾಗಲಿ, ನನ್ನ ಸಹಾಯಕನಾದ ನೀನಾಗಲಿ ಮಂತ್ರಿಗಳು ನೀಡಿದ ಗಿಫ್ಟ್ ತೆಗೆದುಕೊಂಡರೆ ಮರು ಕ್ಷಣ ನನ್ನ ಧ್ವನಿ ಬಿದ್ದು ಹೋಗುತ್ತದೆ. ನನ್ನ ಮಾತುಗಳು ಕೃತಕವಾಗುತ್ತದೆ. ನಾನು ಆಡುವ ಮಾತುಗಳು ನೈತಿಕ ಶಕ್ತಿಯನ್ನು ಕಳೆದುಕೊಂಡು ಬಿಡುತ್ತವೆ. ಆದ್ದರಿಂದ ನೀನು ತೆಗೆದುಕೊಂಡ ಉಡುಗೊರೆಯನ್ನು ವಾಪಸ್ಸು ಕೊಟ್ಟು ಬಿಡು."

"ನನಗೆ ಹಲವು ರಾಜಕೀಯ ಸ್ನೇಹಿತರಿದ್ದಾರೆ. ನಾನು ಅವರ ಜೊತೆ ಊಟ ಮಾಡಿದ್ದೇನೆ. ಕಾಫಿ ಕುಡಿದಿದ್ದೇನೆ. ಆದರೆ ಈ ಸಂಬಂಧ ನೈತಿಕತೆಯ ಗಡಿಯನ್ನು ದಾಟಲು ನಾನು ಅವಕಾಶ ನೀಡಿಲ್ಲ. ಆದಷ್ಟು ಪ್ರಾಮಾಣಿಕವಾಗಿ ಇರಲು ಯತ್ನ ನಡೆಸಿದ್ದೇನೆ. "

ನನ್ನ ಚಾಲಕ ತಪ್ಪನ್ನು ಒಪ್ಪಿಕೊಂಡ. ಉಡುಗೊರೆಯನ್ನು ವಾಪಸು ನೀಡುವುದಾಗಿ ಹೇಳಿದ

ಸುಮಾರು ಎಂಟು ದಿನಗಳ ಕಾಲ ನಾನು ಬೆಳಗಾವಿಯಲ್ಲಿ ಮಹಾಯುದ್ಧ ಕಾರ್ಯಕ್ರಮವನ್ನು ನಡೆಸಿದೆ. ಈ ಸಂದರ್ಭದಲ್ಲಿ ಹೊಟೆಲ್ಲುಗಳಲ್ಲಿ ರಸ್ತೆಗಳಲ್ಲಿ ಸಿಕ್ಕವರು ನನ್ನನ್ನು ಗುರುತಿಸಿದರು. ನೀವು ಬೆಳಗಾವಿಯವರಂತೆ ಹೌದಾ ಎಂದು ಪ್ರಶ್ನಿಸಿದರು. ಈ ಪ್ರಶ್ನೆ ನನಗೆ ನೀಡಿದ ಸಂತೋಷ ಅಷ್ಟಿಷ್ಟಲ್ಲ. ನಾನು ಉತ್ತರ ಕನ್ನಡದವನಾ ? ಬೆಳಗಾವಿಯವನಾ ? ಅಥವಾ ಬೆಂಗಳೂರಿನವನಾ ? ನನಗೆ ಗೊತ್ತಿರಲಿಲ್ಲ. ಆದರ ನನ್ನೊಳಗಿನ ಭಯವನ್ನು ಹೊರ ಹಾಕಿದ ನನ್ನ ಆ ಗೆಳತಿ ನೆನಪಾದಳು. ಅವಳ ಜೊತೆ ಸುತ್ತಿದ ಗಲ್ಲಿಗಳಲ್ಲಿ ಸುತ್ತಿದೆ. ಹಾಗೆ ನಾನು ಇಂಗ್ಲಿಷ್ ಸಿನೆಮಾಗಳನ್ನು ನೋಡಿದ ಥೇಯಟರ್ ಮುಂದೆ ಬಂದು ನಿಂತೆ. ಅಲ್ಲಿ ಶಾಪಿಂಗ್ ಕಾಂಪ್ಲೇಕ್ಸ್ ಬಂದಿತ್ತು.

Monday, January 12, 2009

ಒಂದಿಷ್ಟು ವಿವರಣೆ .............

ನನಗೆ ತುಂಬಾ ಸಂತೋಷ. ನನ್ನ ಖಾಸಗಿ ಅನುಭವವೊಂದು ಗಂಭೀರವಾದ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಈ ಸಂದರ್ಭದ ಮಹತ್ವವ ವಿಚಾರ ಒಂದರ ಚರ್ಚೆಗೆ ಇದು ಗ್ರಾಸವಾಗಿದೆ.

ನಾನು ಜಾತಿಯನ್ನು ಗೃಹಿಸಿದ ಬಗೆ ಯಾವುದು ? ಇದು ಮೊದಲ ಪ್ರಶ್ನೆ. ಜಾತಿ ಎನ್ನುವುದು ನಾವು ಕರೆಯುವ ಬ್ರಾಹ್ಮಣ, ಒಕ್ಕಲಿಗ, ಲಿಂಗಾಯಿತ ಎಂಬ ಶಬ್ದ ಮಾತ್ರವಾ ಅಥವಾ ಮನಸ್ಥಿತಿಯಾ ? ನನ್ನ ದೃಷ್ಟಿಯಲ್ಲಿ ಮನಸ್ಥಿತಿ. ಈ ಮನಸ್ಥಿತಿಯನ್ನು ಕೇಂದ್ರವಾಗಿಟ್ಟುಕೊಂಡು ನಾನು ಜಾತಿಯ ಬಗ್ಗೆ ಮಾತನಾಡುತ್ತೇನೆ, ಮಾತನಾಡಿದ್ದೇನೆ.

ನನ್ನ ಎದುರಿಗೆ ಬಂದ ಹುಡುಗ ಜಾತಿಯ ಪ್ರಸ್ತಾಪ ಮಾಡದಿದ್ದರೆ ಸಮಸ್ಯೆ ಇರಲಿಲ್ಲ. ಅವನು ಪ್ರತಿಭಾವಂತ ಎಂದು ಕೆಲಸ ಕೊಡುವ ಬಗೆ ಯೋಚಿಸಬಹುದಿತ್ತು. ಆದರೆ ನಾನು ನಿಮ್ಮವ ಎಂದು ಹೇಳುವ ಮೂಲಕ ಆತ ಜಾತಿಯ ಲಾಭ ಪಡೆಯಲು ಯತ್ನಿಸಿದ. ಅಂದರೆ ಸ್ವಲಾಭಕ್ಕಾಗಿ ಇಂದು ಜಾತಿಯನ್ನು ಬಳಸಿದವನು ನಾಳೆ ಏನನ್ನಾದರೂ ಬಳಸಬಹುದು. ಇದು ಅಪಾಯಕಾರಿಯಾದದ್ದು. ಆದ್ದರಿಂದ ಆತನ ಜಾತಿಗಿಂತ ಆತನ ಪತ್ರಿಕೋದ್ಯಮ ವಿರೋದಿ ಮನಸ್ಥಿತಿ ನನಗೆ ಭಯವನ್ನು ಉಂಟು ಮಾಡಿತು. ಜೊತೆಗೆ ಹೀಗೆ ಜಾತಿಯನ್ನು ಬಳಸಿಕೊಂಡವ ನಂತರ ರಾಜಕಾರಣಿಗಳ ಬ್ಯಾಗು ಹಿಡಿದು ಓಡಾಡಿದ್ದು. ಇದು ಸಹ ನನಗೆ ಅಘಾತವನ್ನು ಉಂಟು ಮಾಡಿದ್ದು.

ಇನ್ನು ಪತ್ರಿಕೋದ್ಯಮ ಮತ್ತು ಜಾತಿಯ ವಿಚಾರ. ನಾನು ಪತ್ರಿಕೋದ್ಯಮಕ್ಕೆ ಬಂದಾಗ ಬಹುತೇಕ ಪತ್ರಿಕೆಗಳಲ್ಲಿ ಬ್ರಾಹ್ಮಣರೇ ಹೆಚ್ಚಾಗಿದ್ದರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ನಾನು ಕೆಲಸ ಪ್ರಾರಂಭಿಸಿದಾಗ, ಅಲ್ಲಿ ಮಾಧ್ವ ಸ್ವಾಮಿಗಳ ಆಡ್ದ ಪಲ್ಲಕ್ಕಿ ಉತ್ಸವ ಮುಖ ಪುಟದ ಬಹುಮುಖ್ಯ ಸುದ್ದಿಯಾಗಿ ಕಾಣುತ್ತಿತ್ತು. ಆದರೆ, ಜನಪದ ಉತ್ಸವ ಮತ್ತು ನಂಬಿಕೆಗಳು ಅವರಿಗೆ ಮುಖ್ಯ ಎನ್ನುಸುತ್ತಿರಲಿಲ್ಲ. ಅಲ್ಲಿದ್ದ ಬಹುತೇಕ ಕೆಲಸಗಾರರು ಮಧ್ವಾಚಾರ್ಯರು ದೊಡ್ದವರೇ ಅಥವಾ ಶಂಕರಾಚಾರ್ಯರೇ ಎಂಬ ಬಗ್ಗೆ ದಿನಗಟ್ಟಲೇ ಚರ್ಚೆ ನಡೆಸಿ ಜಗಳವಾಡುತ್ತಿದ್ದರು. ಅಲ್ಲಿ ಕೆಲಸ ಮಾಡುವವರಿಗೆ ಇದೇ ಮುಖ್ಯ ವಿಚಾರವಾಗಿತ್ತು. ನಮ್ಮ ಜನರ ಬದುಕು ಜನ ಜೀವನ ಮತ್ತು ನಂಬಿಕೆಗಳ ಬಗ್ಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡ ನನಗೆ ನಮ್ಮ ಶಿಷ್ಟ ದೇವತೆಗಳಿಗೆ ಸಿಗುವ ಪ್ರಾಶಸ್ತ್ಯ ಗ್ರಾಮೀಣ ಶಕ್ತಿ ದೇವತೆಗಳಿಗೆ ಸಿಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿತ್ತು. ಅಂದರೆ ಅದೇ ಮನಸ್ಥಿತಿಯ ಪ್ರಶ್ನೆ. ಇಲ್ಲಿ ನಾನು ಯಾರನ್ನೂ ದೂರುವುದಕ್ಕಾಗಿ ಜಾತಿಯ ಪ್ರಶ್ನೆಯನ್ನು ಎತ್ತುತ್ತಿಲ್ಲ.

ಪತ್ರಿಕೆ ಎನ್ನುವುದು ಒಂದು ವ್ಯಕ್ತಿಯ ಹಾಗೆ. ಅದಕ್ಕೂ ಮನಸ್ಸು ಹೃದಯ ಕಿಡ್ನಿ ಎಲ್ಲವೂ ಇರಬೇಕು. ಪತ್ರಿಕೆಯಲ್ಲಿ ಕೆಲಸ ಮಾಡುವವರು ಇಂಥಹ ಪತ್ರಿಕೆಯನ್ನು ರೂಪಿಸುವಾಗ ಅವರ ಮನಸ್ಸು ಅಲ್ಲಿ ಪ್ರತಿಫಲನವಾಗುತ್ತದೆ. ಹೀಗಾಗಿ ಪತ್ರಿಕೆಯಲ್ಲಿ ಕೆಲಸ ಮಾಡುವವರ ಮನಸ್ಸು ಎಲ್ಲ ಜಾತಿ ಸಮುದಾಯವನ್ನು ಮೀರಿ ಬೆಳೆಯಬೇಕು. ಹಾಗೆ ಎಲ್ಲ ರೀತಿಯ ಜನರ ನಂಬಿಕೆಗಳಿಗೆ ಅಲ್ಲಿ ಅವಕಾಶ ಇರಬೇಕು. ಇದು ಯಾವಾಗ ಸಾಧ್ಯವಾಗುತ್ತದೆ ಎಂದರೆ ಎಲ್ಲ ಜನ ಸಮುದಾಯಗಳ ಮನಸ್ಸುಗಳೂ ಒಂದಾಗಿ ಕೆಲಸ ಮಾಡಿದಾಗ ಮಾತ್ರ. ಈಗ ಇರುವ ಜಾತಿ ಸಮುದಾಯಗಳ ಜೊತೆ ಅವಕಾಶ ವಂಚಿತರಿಗೂ ಅವಕಾಶ ಸಿಕ್ಕರೆ ಆಗ ಒಟ್ಟಾರೆಯಾಗಿ ರೂಪಗೊಳ್ಳುವ ಮನಸ್ಸು ಹೆಚ್ಚು ಸುಂದರವಾಗಿರುತ್ತದೆ. ಆ ಮನಸ್ಸುಗಳ ರೂಪಿಸುವ ಪತ್ರಿಕೆ ಕೂಡ ಸುಂದರವಾಗಿರುತ್ತದೆ. ಇಡೀ ಜನ ಸಮುದಾಯವನ್ನು ಅದು ಪ್ರತಿನಿಧಿಸುತ್ತದೆ. ಇದನ್ನು ಇನ್ನೂ ಸರಳವಾಗಿ ಹೇಳಲು ಪ್ರಯತ್ನಿಸುತ್ತೇನೆ.

ನನ್ನ ಅನುಭವ ನಾನು ಒಪ್ಪಲಿ, ಬಿಡಲಿ ಅದು ಬ್ರಾಹ್ಮಣ ಜಗತ್ತಿನದು. ಹಾಗೆ ನನ್ನ ನೋಟವನ್ನು ನನ್ನ ಈ ಬ್ರಾಹ್ಮಣ ಜಗತ್ತೇ ನಿರ್ಧರಿಸುತ್ತದೆ. ಹಾಗೆ, ಬೇರೆ ಜಾತಿಯವರ ಆಲೋಚನೆಗಳನ್ನೂ ಸಹ. ಹೀಗಾಗಿ ನಾನು ನೋಡಿದ್ದೇ ಸತ್ಯ ಎಂದು ಹೇಳುವ ಎದೆಗಾರಿಕೆ ನನ್ನಗಿಲ್ಲ. ನನ್ನ ನೋಟದಲ್ಲಿ ತಪ್ಪಿರಬಹುದು ಎಂದು ನನಗೆ ಅನ್ನಿಸುತ್ತಿರುತ್ತದೆ. ನನಗೆ ಅನ್ವಯಿಸಿಕೊಳ್ಳುವ ಈ ಮಾತುಗಳು ಬೇರೆ ಜಾತಿಯಿಂದ ಬಂದವರಿಗೂ ಅನ್ವಯವಾಗುತ್ತದೆ. ಆದರೆ ನಾವೆಲ್ಲ ಇಂತಹ ಬದ್ಧ ಆಲೋಚನೆಗಳಿಂದ ಹೊರಕ್ಕೆ ಬರಲು ಯತ್ನ ನಡೆಸಲೇಬೇಕು.

ಈಗ ಪತ್ರಿಕೆಗಳ ಮನಸ್ಥಿತಿಯತ್ತ ನೋಡೋಣ. ನಮ್ಮ ಪತ್ರಿಕೋದ್ಯಮ ಬ್ರಾಹ್ಮಣ ಆಲೋಚನೆಗಳ ಆಧಾರದ ಮೇಲೆ ಬೆಳೆದು ಬಂದಿದೆ. ಯಾಕೆಂದರೆ ಬೇರೆ ಜಾತಿ ಸಮುಧಾಯದ ಜನ ಪತ್ರಿಕೋದ್ಯಮಕ್ಕೆ ಬರದಿದ್ದ ಕಾಲದಲ್ಲಿ ಬ್ರಾಹ್ಮಣರು ಊ ಉದ್ಯಮವನ್ನು ಕಟ್ಟಿದರು, ಬೆಳೆಸಿದರು. ಆದರೆ ಇದಕ್ಕೆ ಒಂದೂ ಸಂಪೂರ್ಣತೆ ಬರಬೇಕಾದರೆ, ಅದು ನಮ್ಮ ಹಳ್ಳಿಗಳ ಹಾಗಿರಬೇಕು. ಹಳ್ಳಿಗಳಲ್ಲಿ ಎಲ್ಲ ಜಾತಿ ಜನ ಸಮುದಾಯದ ಜನ ಬದುಕುವ ಹಾಗೆ. ನಿಜ ಅರ್ಥದಲ್ಲಿ ಭಾರತ ಎಂಬ ಬಹುಸಂಸ್ಕೃತಿಯ ನಾಡು ಇರುವಂತೆ ಬಹು ಸಂಸ್ಕೃತಿ ಪತ್ರಿಕೆಗಳ ಮನಸ್ಥಿತಿಯನ್ನು ನಿರ್ಮಿಸಬೇಕು.

ನಾನು ಉತ್ತರ ಕರ್ನಾಟಕದ ದೀವರನ್ನು ವರದಿಗಾರರನ್ನಾಗಿ ತೆಗೆದುಕೊಂಡ ಬಗ್ಗೆ ಹೇಳಿದ್ದೆ. ನನಗೆ ಉತ್ತರ ಕನ್ನಡ ಎಲ್ಲ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳು ಪತ್ರಿಕೆಗಳಲ್ಲಿ ಪ್ರತಿಬಿಂಬಿತವಾಗುತ್ತಿದ್ದುದು, ಏಕಮುಖವಾದ ನೋಟದ ಮೂಲಕ. ನನಗಿದ್ದ ಕುತೂಹಲ ಎಂದರೆ ಈ ಎಲ್ಲ ಸಮಸ್ಯೆಗಳನ್ನು ಇನ್ನೊಂದು ಜಾತಿ ಸಮುದಾಯದಿಂದ್ ಬಂದವರು ಹೇಗೆ ನೋಡುತ್ತಾರೆ ಎಂಬ ಬಗ್ಗೆ. ಈ ಕುತೂಹಲ ಈಗ ನನಗೆ ತಣಿದಿದೆ.

ಒಂದು ಪತ್ರಿಕೆ ಎಂದರೆ ಮಿನಿ ಭಾರತ ಇದ್ದಂತೆ ಇರಬೇಕು. ಆಗ ಮಾತ್ರ ಅದು ಸಮಾಜವನ್ನು ಪ್ರತಿನಿಧಿಸುತ್ತದೆ, ಅದು ಭ್ರಾಹ್ಮಣರ ಕೇರಿಯೂ ಆಗಬಾರದು. ಲಿಂಗಾಯಿತರ ವಠಾರವೂ ಆಗಬಾರದು, ಹರಿಜನರ ಕೇರಿಯೂ ಆಗಬಾರದು. ಇದೆಲ್ಲ ಸೇರಿದರೆ ಮಾತ್ರ ಅದು ಸಮಾಜವನ್ನು ಪ್ರತಿನಿಧಿಸುತ್ತದೆ. ನನಗೆ ಏನ್ರಿ ಗೌಡ್ರೆ, ಬನ್ರಿ ಪಾಟೀಲರೆ, ಯಾಕ್ರಿ ಬಿರಾದಾರರೇ ಎಂದು ಮಾತನಾಡುವ ವಾತವರಣ ಇಷ್ಟ. ಅದನ್ನು ಬಿಟ್ಟು ಯಾವುದೋ ಜಾತಿಗಳ ಕೇರಿಯನ್ನಾಗಿ ಪತ್ರಿಕೆಗಳನ್ನು ಮಾಡುವುದಕ್ಕೆ ಸಹಮತ ಇಲ್ಲ.

ಇನ್ನು ನನ್ನ ಬಗ್ಗೆ ವೈಯಕ್ತಿಕ ವಾಗಿ ಮಾಡಿದ ಟೀಕೆಗಳ ಕುರಿತು;

ನಾನು ಇದುವರೆಗೆ ವೈಯಕ್ತಿಕ ಕೆಲಸಕ್ಕಾಗಿ ಯಾವ ರಾಜಕಾರಣಿಯ ಬಳಿಯೂ ಹೋಗಿಲ್ಲ. ಆದ್ದರಿಂದ ಕೆಲಸಕ್ಕೆ ಒತ್ತಡ ಹೇರಿಸಲು ರಾಜಕಾರಣಿಗಳ ಬಳಿ ಹೋಗುವ ಅಗತ್ಯ ಇಲ್ಲ. ಯಾವುದೇ ಒಬ್ಬ ರಾಜಕಾರಣಿ ನಾನು ವೈಯಕ್ತಿಕ ಕೆಲಸಕ್ಕೆ ಹೋಗಿದ್ದೇನೆ ಎಂದು ಹೇಳಿದರೇ ಅದೇ ಕ್ಷಣ ನಾನು ಈ ವೃತ್ತಿಯನ್ನು ಬಿಡಲು ಸಿದ್ದನಿದ್ದೇನೆ.

ನನ್ನ ಕಚೇರಿಯಲ್ಲಿ ಯಾರನ್ನೂ ನಾನು ಜಾತಿಯ ಕಾರಣದಿಂದ ತೆಗೆದುಕೊಂಡಿಲ್ಲ. ಪ್ರತಿಭೆಯನ್ನು ಗಣನೆಗೆ ತೆಗೆದುಕೊಳ್ಳಲು ಯತ್ನಿಸಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲ ಜಾತಿ ಜನಸಮುದಾಯಗಳನ್ನು ಪ್ರೀತಿಸುವ ಅರೋಗ್ಯಪೂರ್ಣ ಮನಸ್ಸುಗಳನ್ನು ತೆಗೆದುಕೊಳ್ಳಲು ಯತ್ನಿಸಿದ್ದೇನೆ.

ಹಾಗೆ ಇಂತಹ ಆರೋಗ್ಯಪೂರ್ಣ ಮನಸ್ಸುಗಳು ಯಾವುದೇ ಒಂದು ಜಾತಿಯ ಜಹಗೀರು ಅಲ್ಲ ಎಂಬ ಅರಿವು ನನಗಿದೆ.

Friday, January 9, 2009

ಹೀಗೊಂದು ಖಾಸಗಿ ಮಾತು.......

ಆತ ಅಂದು ಬೆಳಿಗ್ಗೆ ಬಂದು ನನ್ನ ಮುಂದೆ ಕುಳಿತ.
ಕುಳಿತವನೇ "ನಾನು ನಿಮ್ಮ ಪಕ್ಕದ ತಾಲೂಕಿನವನು" ಎಂದ. ಹವ್ಯಕ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿದ. ಇನ್ನೊಬ್ಬ ಪತ್ರಕರ್ತರ ಹೆಸರು ಹೇಳಿ ತನಗೊಂದು ಕೆಲಸ ಬೇಕು ಎಂದು ಅಹವಾಲು ಮಂಡಿಸಿದ. ಸುಮ್ಮನೆ ಮಾತನಾಡುತ್ತಲೇ ಇರುವ ಈ ವ್ಯಕ್ತಿ ನಾನು ಪಕ್ಕದ ತಾಲೂಕಿನವನು ಎಂದು ಹೇಳಿದ್ದು, ಹವ್ಯಕಭಾಷೆಯಲ್ಲಿ ಮಾತನಾಡಿ ಕೆಲಸ ಕೇಳಿದ್ದು ನನಗೆ ಸರಿ ಬರಲಿಲ್ಲ.
ನಾನು ಅವನಿಗೆ ಹೇಳಿದೆ;
"ನಮ್ಮಲ್ಲಿ ತಕ್ಷಣ ಕೆಲಸ ಇಲ್ಲ. ಹಾಗೆ ನಾನು ನನ್ನ ಊರಿನವನು ನನ್ನ ಜಾತಿಯವನು ಎಂಬ ಕಾರಣಕ್ಕೆ ಯಾರನ್ನೂ ಕೆಲಸಕ್ಕೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ನಾನು ಈ ವಿಚಾರದಲ್ಲಿ ಹೆಚ್ಚು ಜಾಗರೂಕನಾಗಿರುತ್ತೇನೆ. ಈಗ ನಮ್ಮ ಸಂಸ್ಥೆಯಲ್ಲಿ ಎಲ್ಲ ಜಾತಿ ಜನ ಸಮುದಾಯದ ಜನ ಇದ್ದಾರೆ. ಅವರಲ್ಲಿ ಬಹಳಷ್ಟು ಜನರ ಜಾತಿ ನನಗೆ ಗೊತ್ತಿಲ್ಲ. ಅದರ ಅಗತ್ಯವೂ ನನಗಿಲ್ಲ. ಆದರೆ ಕೆಲವೊಮ್ಮೆ ಎಲ್ಲ ಜಾತಿ ಸಮುದಾಯದವರಿಗೆ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಜಾತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾನು ಕೆಲಸಕ್ಕೆ ತೆಗೆದುಕೊಂಡು ಇಬ್ಬರು ಹುಡುಗರು ದೀವರು ಜಾತಿಗೆ ಸೇರಿದವರು. ನಾನು ಉದ್ದೇಶಪೂರ್ವಕವಾಗಿ ಅವರನ್ನು ಕೆಲಸಕ್ಕೇ ತೆಗೆದುಕೊಂಡಿದ್ದೇನೆ. ಯಾಕೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇಲ್ಜಾತಿಯವರ ಕೈಯಲ್ಲಿ ಪತ್ರಿಕೋದ್ಯಮ ಇದೆ. ಇದು ಎಲ್ಲರಿಗೂ ತಲುಪಲಿ ಎಂಬ ಕಾರಣಕ್ಕೆ ನಾನು ಹಿಂದುಳಿದ ವರ್ಗದ ಹುಡುಗರನ್ನು ತೆಗೆದುಕೊಂಡಿದ್ದು. ಈಗ ಈ ಇಬ್ಬರೂ ಹುಡುಗರು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾರೆ. ಯಾರ ಒತ್ತಡಕ್ಕೂ ಅವರು ಮಣಿಯುತ್ತಿಲ್ಲ."
ಈ ಹುಡುಗ ಬಂದವನು, ನೇರವಾಗಿ ನಾನು ನಿಮ್ಮ ಜಾತಿಯವನು ಎಂದು ಹೇಳಿದ್ದು ನನಗೆ ಸರಿ ಕಾಣಲಿಲ್ಲ. ಹೀಗಾಗಿ ನಾನು ಅವನನ್ನು ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ.
ಇದಾದ ಮೇಲೆ ಆತ ಗೆಳೆಯ ರವೀಂದ್ರ ರೇಷ್ನೆ ಅವರ ಪತ್ರಿಕೆಯಲ್ಲಿ ಯಾವುದೊ ಕೆಲಸ ಮಾಡಿಕೊಂಡಿದ್ದ. ನಿನ್ನೆ ನನ್ನ ನ್ಯೂಸ್ ಮತ್ತು ವ್ಯೂಸ್ ಕಾರ್ಯಕ್ರಮಕ್ಕೆ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ನ ಬಂದಿದ್ದರು. ಅವರ ಪಕ್ಕದಲ್ಲಿ ಈ ಆಸಾಮಿ. ಅವನ ಕೈಯಲ್ಲಿ ಯಾವುದೋ ಪತ್ರಿಕೆಗಳ ಕಟ್ಟು. ಅದನ್ನು ನನಗೆ ಕೊಟ್ಟವನೇ, ನಾನು ಇಂಡಿಯನ್ ಎಕ್ಸಪ್ರೆಸ್ಸಿನಲ್ಲಿದ್ದೇನೆ. ಈ ಪತ್ರಿಕೆಯನ್ನು ತರುತ್ತಿದ್ದೇನೆ ಅಂದ. ನಾನು ಸ್ಟುಡಿಯೋ ಓಳಕ್ಕೆ ಹೋಗುವ ಆತುರದಲ್ಲಿ ಇದ್ದುದರಿಂದ ಪತ್ರಿಕೆಯನ್ನು ನೋಡಲಿಲ್ಲ. ಆದರೆ ಆತ ಬಿಡಲಿಲ್ಲ.
''ನಾನು ನಿಮ್ಮ ಬಗ್ಗೆ ಬರೆದಿದ್ದೇನೆ. ನೋಡಿ" ಎಂದು ಪುಟ ತೆಗೆದು ತೋರಿಸಿದ.
ಅಲ್ಲಿ ತಾನು ಕೆಲಸಕ್ಕಾಗಿ ಪಡುತ್ತಿರುವ ಪಡಪಾಟಲನ್ನು ವಿವರಿಸಿದ್ದ. ಹಾಗೆ ಜಾತಿಯ ಕಾರಣಕ್ಕೆ ಶಶಿಧರ್ ಭಟ್ಟರು ನನಗೆ ಕೆಲಸ ಕೊಡಲಿಲ್ಲ ಎಂದು ಬರೆದಿದ್ದ. ಹಾಗೆ ಆ ಸಾಲು ನಾನು ಜಾತಿಯವಾದಿ ಎಂಬಂತೆ ಅರ್ಥವನ್ನು ಕೊಡುತ್ತಿತ್ತು. ನಾನು ಇದನ್ನು ನೋಡಿದವನು ಯಾವ ಪ್ರತಿಕ್ರಿಯೆಯನ್ನು ನೀಡಲಿಲ್ಲ.
ನಾನು ಸ್ಟುಡಿಯೋದ ಒಳಕ್ಕೆ ಹೋದ ಮೇಲೆ ನನ್ನ ಸಹಾಯಕರಿಗೆ ಅವನ ಪತ್ರಿಕೆಯ ಪ್ರತಿಗಳನ್ನು ನೀಡಿ ಅದನ್ನು ಕಚೇರಿಯಲ್ಲಿ ಹಂಚಿ ಎಂದನಂತೆ !
ಇಂದು, ಅಂದರೆ ಶುಕ್ರವಾರ ಮಧ್ಯಾನ್ಹದ ಊಟಕ್ಕೆ ಪ್ರೆಸ್ ಕ್ಲಬ್ಬಿಗೆ ಹೋಗಿದ್ದೆ. ಅಲ್ಲಿ ಇದೇ ಬೇಳೂರು ಗೋಪಾಲಕೃಷ್ಣ, ಮತ್ತು ರೇಣುಕಾಚಾರ್ಯ ಇದ್ದರು. ಪತ್ರಿಕಾಗೋಷ್ಟಿ ಮುಗಿದ ಮೇಲೆ ಗೋಪಾಲಕೃಷ್ಣ ನನ್ನ ಬಳಿ ಬಂದು ಮಾತನಾಡಿದರು. ಪಕ್ಕದಲ್ಲಿ ಇದೇ ಮನುಷ್ಯ !
ನನ್ನ ಜೊತೆಗಿದ್ದ ಇನ್ನೊಬ್ಬ ಪತ್ರಕರ್ತರು ಹೇಳಿದರು. ಈ ವ್ಯಕ್ತಿ ಸಾಗರ ಮತ್ತು ಸೊರಬದ ಶಾಸಕರ ಜೊತೆ ಸದಾ ಇರುತ್ತಾನೆ ಅಂತ. ಪತ್ರಿಕೋದ್ಯಮಿಯಾದವನು ರಾಜಕಾರಣಿಗಳ ಚೇಲಾ ಆದರೆ ಆತ ಪತ್ರಿಕೋದ್ಯಮಿಯಾಗಿ ಮುಂದುವರಿಯಬಾರದು ಎಂದು ನಂಬಿದವನು ನಾನು. ಆದರೆ ಈಗ ನಮ್ಮ ಪತ್ರಿಕೋದ್ಯಮಿಗಳು ರಾಜಕಾರಣಿಗಳ ಜೊತೆ ಸಂಬಂಧ ಬೆಳೆಸುತ್ತಿದ್ದಾರೆ. ಒಮ್ಮೆ ಸಂಬಂಧ ಬೆಳಸಿದ ಮೇಲೆ ಪತ್ರಿಕೋದ್ಯಮವನ್ನು ಬಿಟ್ಟು ಹೋಗುವುದಿಲ್ಲ. ಈ ಕಾರಣದಿಂದಲೇ ತುಂಬಾ ವೈಯಕ್ತಿಕವಾದ ಈ ಠಿಪ್ಪಣಿಯನ್ನು ಬರೆದಿದ್ದೇನೆ.
ಈಗ ನಾನು ಹೇಳಿದ ಹುಡುಗನ ಹೆಸರು ವೆಂಕಟೇಶ ಸಂಪ. ಆತ ಸಾಗರದವನು.

Friday, January 2, 2009

ಬದುಕು ಮತ್ತು ಆತ್ಮಹತ್ಯೆಯ ಸುತ್ತ.....!


ಹೊಸ ವರ್ಷದ ಮೊದಲ ದಿನ. ನಮ್ಮ ಸ್ನೇಹಿತರೊಬ್ಬರು ಹೇಳಿದರು,
ನಿಮಗೆ ಗೊತ್ತಲ್ಲ, ಅವರು ನಿನ್ನೆ ಆತ್ಮಹತ್ಯೆಗೆ ಯತ್ನ ನಡೆಸಿದರಂತೆ !
ನನಗೆ ಈ ಸುದ್ದಿಯಿಂದ ಆಘಾತವಾಗಲಿಲ್ಲ. ಬದಲಾಗಿ ಪಾಪ ಅನ್ನಿಸಿತು. ಯಾಕೆ ಹೀಗೆ, ಅವರು ಆತ್ಮಹತ್ಯೆಗೆ ಕಾರಣಗಳೇ ಇರಲಿಲ್ಲವಿಲ್ಲ ಎಂದು ಅನ್ನಿಸಿತು. ಈ ಸುದ್ದಿಯನ್ನು ತಿಳಿಸಿದವರು, ಆವರು ಆತ್ಮಹತ್ಯೆಗೆ ಯತ್ನ ನಡೆಸಿದ್ದಕ್ಕೆ ತಮ್ಮದೇ ಆದ ಕಾರಣಗಳನ್ನು ನೀಡತೊಡಗಿದರು. ಆಗ ನಾನು ಅವರಿಗೆ ಹೇಳಿದೆ.
"ನೋಡಿ ನಿಜವಾಗಿ ಹೇಳುವುದಾದರೆ ಆತ್ಮಹತ್ಯೆಗೆ ಕಾರಣಗಳೇ ಇರುವುದಿಲ್ಲ. ಯಾರು ಇಂತಹ ಕೃತ್ಯಕ್ಕೆ ಯತ್ನ ನಡೆಸುತ್ತಾರೋ ಅವರು ಕಾರಣಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ತಾವು ಸೃಷ್ಟಿಸಿಕೊಂಡ ಕಾರಣಗಳನ್ನು ಸತ್ಯ ಎಂದು ನಂಬಿ ಇಂಥಹ ಕೃತ್ಯಕ್ಕೆ ಕೈಹಾಕುತ್ತಾರೆ. ಹಾಗೆ ಇಂಥಹ ಘಟನೆ ನಡೆದ ಮೇಲೆ, ಜನ ಸುಮ್ಮನಿರುವುದಿಲ್ಲ. ಅವರೂ ಸಹ ಕಾರಣಗಳನ್ನು ಸೃಷ್ಟಿಸುತ್ತ ಅದನ್ನು ನಂಬುತ್ತ ಅದನ್ನೇ ಪ್ರಚಾರ ಮಾಡುತ್ತ ಇರುತ್ತಾರೆ."
ಪ್ರಾಯಶಃ ಪ್ರತಿಯೊಬ್ಬರಿಗೂ ಬದುಕಿನಿಂದ ವಿಮುಖವಾಗುವ, ಓಡಿ ಹೋಗುವ ಮನಸ್ಥಿತಿ ಇದ್ದೇ ಇರುತ್ತದೆ. ಒಂದಲ್ಲ ಒಂದು ಕ್ಷಣದಲ್ಲಿ ಪ್ರತಿಯೊಬ್ಬರೂ ಆತ್ಮಹತ್ಯೆಯ ಬಗ್ಗೆ ಯೋಚಿಸಿಯೇ ಇರುತ್ತಾರೆ. ಆದರೆ ದುರ್ಬಲ ಕ್ಷಣದಲ್ಲಿ ಬರುವ ಇಂತಹ ಆಲೋಚನೆಗಳಿಂದ ಹೊರಬರುವ ಶಕ್ತಿ ಬಹಳಷ್ಟು ಜನರಿಗೆ ಇರುತ್ತದೆ. ಬಹಳಷ್ಟು ಜನರಿಗೆ ಇರುವುದಿಲ್ಲ. ಈ ಸಂದರ್ಭದಲ್ಲಿ ಕವಿ ರಾಮಯ್ಯ ಬಹಳ ವರ್ಷಗಳ ಹಿಂದೆ ಬರೆದ್ ಸಣ್ಣ ಕವನವೊಂದು ನೆನಪಾಗುತ್ತದೆ.
ನಾನು ಆತ್ಮ ಹತ್ಯೆಗೆ ಕೊಟ್ಟುಕೊಳ್ಳುವ ಕಾರಣಗಳು
ಕಾರಣಗಳೇ ಅಲ್ಲ ಎಂಬ ಸಂಶಯ
ನನ್ನನ್ನು ಬದುಕಿ ಉಳಿಸಿದೆ
ಬಹಳಷ್ಟು ಜನರನ್ನು ಅತ್ಮಹತ್ಯೆ ಒತ್ತಡದಿಂಡ ಇಂಥಹ ಸಂಶಯವೇ ಬದುಕಿ ಉಳಿಸಿರಬಹುದು. ಆದರೆ ಬದುಕಿನ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಾ ? ಖಂಡಿತ ಅಲ್ಲ. ಆತ್ಮಹತ್ಯೆ ಎನ್ನುವುದು ಪಲಾಯನ ಎಂದು ಹೇಳಲಾಗುತ್ತದೆ. ಇದು ಪಲಾಯನ ಮಾತ್ರವಲ್ಲ, ಇರುವುದನ್ನು ಎದುರಿಸಲಾಗದೇ ಗೊತ್ತಿಲ್ಲದೆಡೆಗೆ ಹೋಗುವ ಷಂಡತನ ಕೂಡ.
ನಮಗೆ ಬದುಕುವುದು ಗೊತ್ತಿಲ್ಲ, ಅನುಭವಿಸುವುದು ಗೊತ್ತಿಲ್ಲ. ಯಾಕೆಂದರೆ ಬದುಕುವುದೆಂದರೆ ಪ್ರತಿ ಕ್ಷಣವನ್ನು ನಮ್ಮದಾಗಿಸಿಕೊಳ್ಳುವುದು. ಹಾಗೆ ಸದಾ ವರ್ತಮಾನದಲ್ಲಿ ಇರುತ್ತಲೇ, ವರ್ತಮಾನದ ಭಾಗವಾಗುತ್ತ ಹೋಗುವುದು. ಆದರೆ ನಮಗೆ ವರ್ತಮಾನ ಎಂಬುದೇ ಇಲ್ಲ. ಯಾಕೆಂದರೆ ನಾವು ವರ್ತಮಾನದಲ್ಲಿ ಇರುವುದೇ ಇಲ್ಲ.
ನಮ್ಮ ಊರಿನಲ್ಲಿ ಗಡ್ಲಾ ರಾಮ ಎಂಬ ವ್ಯಕ್ತಿಯೊಬ್ಬನಿದ್ದ. ಆತ ಮಂತ್ರವಾದಿ. ಊರಿನಲ್ಲಿ ಭೂತ ಬಿಡಿಸುವುದು, ಮಾಟಾ ಮಂತ್ರ ಮಾಡುವುದು ಅವನ ಬದುಕು. ಆತ ಹಣೆಯ ಮೇಲೆ ದೊಡ್ಡ ಇಟ್ಟುಕೊಂಡಿರುತ್ತಿದ್ದ. ಹಾಗೆ ದೊಡ್ಡನೆಯ ಮುಂಡಾಸು. ಮಂತ್ರವಾದಿಯಾದ ಈತ ಮದುವೆಯಾಗಿರಲಿಲ್ಲ.
ಮಂತ್ರ ತಂತ್ರ ಮಾಡೋರು ಮದುವೆಯಾಗಬಾರದು ಓಡೇರೆ ಎನ್ನುತ್ತಿದ್ದ ಗಡ್ಲಾ ರಾಮ. ಆದರೆ ಆತನಿಗೆ ಬೇರೆ ಬೇರೆ ಊರುಗಳಲ್ಲಿ ಪ್ರೇಯಸಿಯರು ಇದ್ದ ಸುದ್ದಿಗಳಿದ್ದವು. ಈ ಬಗ್ಗೆ ಪ್ರಶ್ನಿಸಿದರೆ ಆತ ಸುಮ್ಮನೆ ನಗುತ್ತಿದ್ದ. ಹಾಗೆ ಖಾಸಗಿಯಾಗಿ ಆತ ಮಾತನಾಡುತ್ತಿದ್ದುದು ಸೊಂಟದ ಕೆಳಗಿನ ವಿಷಯಗಳೇ. ಆತ ತನ್ನ ಬಟ್ಟೆಯನ್ನು ತಾನೇ ಒಗೆದುಕೊಳ್ಳುತ್ತಿದ್ದ. ಅಡುಗೆಯನ್ನು ತಾನೇ ಮಾಡಿಕೊಳ್ಳುತ್ತಿದ್ದ.
ಆತನ ಜೀವನ ಪ್ರೀತಿ ನನಗೆ ನೆನಪಾಗುತ್ತಿದೆ. ಎಂದೂ ಆತ ಸಿಟ್ಟು ಮಾಡಿಕೊಂಡಿದ್ದು, ಬೇಸರ ಪಟ್ಟಿದ್ದು ನಾನು ನೋಡಿಯೇ ಇಲ್ಲ. ಆತ ಸಾಯುವವರೆಗೂ ಹಾಗೆ ಇದ್ದ. ಸಾಯುವ ದಿನವೂ ಆತ ತನ್ನ ಬಟ್ಟೆಯನ್ನು ತಾನೇ ಒಗೆದುಕೊಂಡ. ಅಂದೂ ಸಹ ಟೋಮೆಟೋ ಸಾರು ಅನ್ನ ಮಾಡಿ ಊಟ ಮಾಡಿದ. ಎಲ್ಲರ ಜೊತೆ ನಕ್ಕ, ನಗುತ್ತಲೇ ಹೊರಟೂ ಹೋದ,
ಈಗಲೂ ಪ್ರತಿ ಕ್ಷಣವನ್ನೂ ಆತ ಅನುಭವಿಸುತ್ತಿದ್ದ ರೀತಿ ನನಗೆ ನೆನಪಾಗುತ್ತದೆ. ನಿನ್ನೆಯ ಬಗ್ಗೆ ಯೋಚಿಸದ, ನಾಳೆಯ ಬಗ್ಗೆ ತಲೆ ಕೆಡಿಸಿಕೊಳ್ಳದ ವ್ಯಕ್ತಿ ಆತ. ಬದುಕಿನ ಬಹುದೊಡ್ದ ಆಧ್ಯಾತ್ಮಿಕತೆ ಎಂದರೆ ಇದೇ ಇರಬಹುದೆ ? ಗೊತ್ತಿಲ್ಲ.
ನನ್ನ ಮುಂದಿರುವ ಸ್ನೇಹಿತರು ಆತ್ಮಹತ್ಯೆಗೆ ಯತ್ನ ನಡೆಸಿದವರ ಬಗ್ಗೆ ಇನ್ನಷ್ಟು ಕೊರೆಯುತ್ತಿದ್ದರು. ಬದುಕಿನಲ್ಲಿ ಶಿಸ್ತು ಇರಲಿಲ್ಲ ಸಾರ್, ಯೋಚನೆಯಲ್ಲೂ ಶಿಸ್ತು ಇರಲಿಲ್ಲ, ಹೀಗೆ ಅವರ ಮಾತು ಮುಂದುವರಿಯುತ್ತಿತ್ತು. ಹಾಗೆ ಆತ್ಮಹತ್ಯೆಯ ಯತ್ನದ ಸುತ್ತ ಮಾತುಗಳೇ ಮಾತುಗಳು !
ನಾನು ಗಡ್ಲಾ ರಾಮ ಎಂಬ ಮಲೇನಾಡಿನ ಸಾಮಾನ್ಯ ಮಂತ್ರವಾದಿಯ ಬಗ್ಗೆಯೋಚಿಸುತ್ತಿದ್ದೆ. ಆತನೇ ನನಗೆ ಗೊತ್ತಿಲ್ಲದ ಹಾಗೆ ಬದುಕುವುದನ್ನು ಕಲಿಸರಬೇಕು, ಜೀವನ ಪ್ರೀತಿಯನ್ನು ತುಂಬಿರಬೇಕು ಎಂದು ಅನ್ನಿಸತೊಡಗಿತು....

Thursday, January 1, 2009

ಬಾ ಬಂದುಬಿಡು ಸುಮ್ಮನೆ......


ಕಳೆದ ಹೋದ ನೀನು ಮತ್ತೆ ಇಲ್ಲಿ ಬರುವೆಯಾ ?
ಹಳೆಯ ಕನಸು, ಕ್ರೂರ ನೆನಪು ಎಲ್ಲ ಹೊತ್ತು ತರುವೆಯಾ ?
ನೀನು ಬಿಟ್ಟು ಹೋದುದೆಲ್ಲ ಇಲ್ಲಿ ಉಳಿಯಬಲ್ಲದೆ ?
ನೀನು ಕೊಟ್ಟು ಹೋದುದೆಲ್ಲ, ಇಲ್ಲಿ ತೆರೆಯಬಲ್ಲುದೆ ?
ಹೋಗು ಮತ್ತೆ ಬರಬೇಡ ಗೆಳತಿ,
ನನಗೆ ನಿನ್ನ ನೆನಪು ಮಾಸುವುದಿಲ್ಲ. ಎದೆಯಲ್ಲಿ ನೋವು ಮಡುಗಟ್ಟಿದೆ. ಹೀಗೆ ಬಂದವಳು ಬಂದಂತೆ ಹೊರಟೆ. ಆದರೆ ಬಂದು ಹೋಗುವುದರ ನಡುವೆ ? ನೀನು ಬರುವುದು ಗೊತ್ತಿತ್ತು. ಹೋಗುವುದು ತಿಳಿದಿತ್ತು. ಆದರೆ ಬಂದು ಹೋಗುವುದರ ನಡುವೆ ಎಲ್ಲವೂ ನಡೆದು ಹೋಯಿತು !
ನಿನ್ನನ್ನು ಎಷ್ಟೂ ಪ್ರೀತಿಯಿಂದ ನಿನ್ನನ್ನು ನಾವು ಸ್ವಾಗತಿಸಿದ್ದೆವು. ನಿನ್ನ ಸ್ವಾಗತಕ್ಕೆ ಕನಸುಗಳ ಚಪ್ಪರ ಹಾಕಿದ್ದೆವು. ಈ ಚಪ್ಪರದ ಸುತ್ತ ಪ್ರೀತಿ ಪ್ರೇಮದ ಬೇಲಿ ಹಾಕಿದ್ದೆವು. ಆದರೆ ನೀನು ಬಂದವಳು ಬಂದಂತೆ ಹೋಗಲಿಲ್ಲ. ಹೋಗುವಾಗ ಚೆಪ್ಪರವನ್ನೇ ಕೆಡವಿಬಿಟ್ಟೆ. ಬೇಲಿಯನ್ನೇ ಮುರಿದು ಬಿಟ್ಟೆ. ನಿನ್ನ ಹೆಜ್ಜೆಯ ಗುರುತಿನಲ್ಲಿ ರಕ್ತದ ಕಲೆ. ಮಾಸದ ಗುರುತುಗಳು.
ಯಾರನ್ನೂ ಕಳುಹಿಸುವುದಿದ್ದರೂ ಹೋಗಿ ಬಾ ಎಂದು ಹೇಳುವುದು ನಮ್ಮ ವಾಡಿಕೆ. ಆದರೆ ನೀನಗೆ ಹೋಗಿ ಬಾ ಎಂದು ನಾನು ಹೇಗೆ ಹೇಳಲಿ ?
ಅಲ್ಲಿ ನೋಡು ಅಲ್ಲಿ ಬರುತ್ತಿದ್ದಾಳೆ. ಇನ್ನೊಬ್ಬ ಗೆಳತಿ. ಬಾ ನಿನಗೆ ಸ್ವಾಗತ. ಆದರೆ ನನ್ನದೊಂದು ಮನವಿ. ದಯವಿಟ್ಟು ಕನಸುಗಳ ಚೆಪ್ಪರವನ್ನು ಕಡವಬೇಡ. ಪ್ರೀತಿ ಪ್ರೇಮದ ಬೇಲಿಯನ್ನು ಮುರಿಯಬೇಡ. ಬಾ ಬಂದು ಬಿಡು ಸುಮ್ಮನೆ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...