Friday, January 30, 2009

ಸ್ವಾಮಿಗಳನ್ನು ಕುರಿತು..........

ಸಾಧಾರಣವಾಗಿ ಮಠಗಳಿಗೆ ನಾನು ಹೋಗುವುದಿಲ್ಲ. ಸ್ವಾಮೀಜಿಗಳ ಕಾಲಿಗೂ ಬೀಳುವಿದಿಲ್ಲ. ಯಾಕೆಂದರೆ ಕಾಲಿಗೆ ಬೀಳುವುದೆಂದರೆ ಸಂಪೂರ್ಣ ಶರಣಾಗತಿ. ನನಗೆ ಈ ಶರಣಾಗತಿಯಲ್ಲಿ ನಂಬಿಕೆ ಇಲ್ಲ. ಇದಕ್ಕೆ ಬಹುಮುಖ್ಯ ಕಾರಣ ನನ್ನ ಅನುಭವ ಇದ್ದರೂ ಇದ್ದೀತು. ೮೦ ರ ದಶಕದಲ್ಲಿ ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ನಾನು ಊರಿಗೆ ಬಂದಾಗ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿದ್ದು ಬಂಡಾಯ ಮತ್ತಿ ರೈತ ಚಳವಳಿಗಳು. ಈ ಕಾರಣದಿಂದ ನನ್ನ ಮೊದಲು ಹೋರಾಟ ಪ್ರಾರಂಭವಾಗಿದ್ದು ರಾಮಚಂದ್ರಮಠದ ಅಂದಿನ ಸ್ವಾಮೀಜಿಯ ವಿರುದ್ಧ. ಬರವಣಿಗೆಯ ಮೂಲಕ ಪ್ರಾರಂಭವಾದ ಈ ಹೋರಾಟ ಮಠದ ಭಕ್ತರು ನನ್ನ ಮೇಲೆ ಧಾಳಿ ನಡೆಸಲು ಯೋಜನೆಯನ್ನು ರೂಪಿಸುವವರೆಗೆ ಬೆಳೆಯಿತು.


ಆಗ ಆ ಸ್ವಾಮೀಜಿ ನನಗೆ ಶಾಪ ಹಾಕಿದರು. ನನ್ನನ್ನು ಜಾತಿಯಿಂದ ಹೊರಕ್ಕೆ ಹಾಕಿರುವುದಾಗಿ ಘೋಷಿಸಿದರು. ಸ್ವಜಾತಿಯ ಜನ ನನಗೆ ಅನ್ನ ನೀರು ಕೊಡಬಾರದು ಎಂದು ಫರ್ಮಾನು ಹೊರಡಿಸಿದರು. ಅವರ ಈ ಕಿರುಕುಳವನ್ನು ಎದುರಿಸಲಾಗದೇ ನಾನು ಬೆಂಗಳೂರಿಗೆ ಬಂದಿದ್ದು, ಪತ್ರಿಕೋದ್ಯಮಿಯಾಗಿದ್ದು. ಇಲ್ಲದಿದ್ದರೆ ನಾನು ಊರು ಬಿಟ್ಟು ಬರುತ್ತಲೇ ಇರಲಿಲ್ಲ. ನನಗೆ ಶಾಪ ಹಾಕಿ ಊರು ಬಿಡಿಸಿದ ಕಾರಣಕ್ಕಾಗಿ ಮತ್ತು ಅವರು ಶಾಪ ನೀಡಿದ ಮೇಲೆ ನನಗೆ ಒಳ್ಳೆಯದಾಗಿದ್ದಕ್ಕಾಗಿ ನಾನು ಈಗಲೂ ಅವರಿಗೆ ಕೃತಜ್ನನಾಗಿದ್ದೇನೆ.


ಪತ್ರಿಕೋದ್ಯಮಿಯಾದ ಮೇಲೆ ನಾನು ಕರ್ನಾಟಕದ ಬಹುತೇಕ ಪ್ರಮುಖ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದೇನೆ. ಆದರೆ ಯಾಕೋ ನನಗೆ ಗೌರವ ಬರುಂತಹ ಸ್ವಾಮಿಗಳು ನನಗೆ ಸಿಕ್ಕಿಲ್ಲ. ಮಂತ್ರಾಕ್ಷತೆ ನೀಡುವಾಗ ಮಹಿಳೆಯರಾದರೆ ಅವರ ಕೈ ಮುಟ್ಟಿ ನೀಡುವ, ಪುರುಷರಾದರೆ ದೂರದಿಂದ ಒಗೆಯುವ ಸ್ವಾಮಿಗಳನ್ನು ನಾನು ನೋಡಿದ್ಡೇನೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರು, ಬ್ಲೂ ಫಿಲ್ಮ್ ನೋಡುವ ಸ್ವಾಮಿಗಳು ನನಗೆ ಗೊತ್ತು. ಹಾಗೆ ಶೈಕ್ಷಣಿಕ ಸಂಸ್ಥೆಗಳ ಮೂಲಕ ಅಂಗಡಿ ತೆರೆದಿರುವ ಮಠಾಧಿಪತಿಗಳು ನಮ್ಮ ನಡುವೆ ಇದ್ದಾರೆ. ರಾಜಕೀಯ ಮಧ್ಯಸ್ಥಿಕೆ ಮಾಡುವವರು, ಇನ್ನು ಏನೇನೋ ಮಾಡುವವರು ಎಲ್ಲ ಈ ಧರ್ಮದ ಜಗತ್ತಿನಲ್ಲಿ ತುಂಬಿ ಹೋಗಿದ್ದಾರೆ.


ನಾನು ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಸಿದ್ದಗಂಗೆಯ ಡಾ. ಶಿವಕುಮಾರ್ ಸ್ವಾಮಿಯವರನ್ನು ನಾನು ಭೇಟಿ ಮಾಡಿದ ಸಂದರ್ಭವನ್ನು ಹೇಳುವುದಕ್ಕಾಗಿ. ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಈಗ ನೂರಾ ಒಂದು ವರ್ಷ. ಈ ಕಾರಣಕ್ಕಾಗಿ ನಾನು ಅವರನ್ನು ಸಂದರ್ಶಿಸಲು ಮುಂದಾದೆ. ಅವರ ಅಕ್ಷರ ದಾಸೋಹದ ಬಗ್ಗೆ ನನಗಿರುವ ಗೌರವ ಕೂಡ ಇದಕ್ಕೆ ಕಾರಣವಾಗಿತ್ತು. ಪ್ರತಿ ದಿನ ಸುಮಾರು ೧೦ ಸಾವಿರ ಮಕ್ಕಳಿಗೆ ಊಟ ವಸತಿ ಮತ್ತು ವಿದ್ಯಾಭ್ಯಾಸವನ್ನು ಒದಗಿಸುವುದು ಸಾಮಾನ್ಯ ಸಾಧನೆ ಅಲ್ಲ. ಸಿದ್ದಗಂಗಾ ಮಠ ಇರುವುದರಿಂದಲೇ ಕರ್ನಾಟಕದ ಬಹಳಷ್ಟು ದಲಿತ ಮತ್ತು ದುರ್ಬಲ ವರ್ಗದ ಮಕ್ಕಳು ವಿದ್ಯಾವಂತರಾಗುವುದು ಸಾಧ್ಯವಾಗಿದೆ. ಇದೆಲ್ಲ ಕೂಡ ಶ್ಲಾಘನೀಯ ವಿಚಾರವೇ,

ನಾನು ಅವರನ್ನು ಸಂದರ್ಶನ ಮಾಡಿದ ಮೇಲೆ ಕೆಲವರು ಕೇಳಿದರು. ಯಾಕೆ ಸಾರ್, ನಿಮ್ಮ ಒರಿಜಿನಲ್ ಸ್ಟೈಲ್ ಇರಲಿಲ್ಲ. ನಾನು ಅವರಿಗೆ ಹೇಳಿದೆ.

"ಸ್ವಾಮಿಗಳ ಬಗ್ಗೆ ನನಗೆ ಅಂತಹ ಗೌರವ ಇಲ್ಲ ಎಂಬುದು ನಿಜ. ಹಾಗೆ ರಾಜಕಾರಣಿಗಳಿಗೆ ಆಶೀರ್ವಾದ ನೀಡುತ್ತ ಇವರೆಲ್ಲ್ ಮಾಡುವ ಜಾತಿ ರಾಜಕೀಯವೂ ನನಗೆ ಗೊತ್ತು. ಮಾರ್ಗ ದರ್ಶನ ಮಾಡುವವರೇ ಭಕ್ಷಕರಾಗುವುದು ನನಗೆ ತಿಳಿದಿದೆ. ಆದರೆ, ಅಕ್ಷರ ದಾಸೋಹದಂತಹ ಸಾಮಾಜಿಕ ಕಾರ್ಯ ಮಾಡುವವರನ್ನು ನಾನು ಗೌರವಿಸುತ್ತೇನೆ. ಅದಕ್ಕಾಗಿ ಶ್ಲಾಘಿಸುತ್ತೇನೆ. ಆದರೆ ಈ ಮಠ ಕಟ್ಟುವವರನ್ನು ನಾನು ಒಪ್ಪಿಕೊಳ್ಳಲಾರೆ. ಮಠ ಕಟ್ಟುವುದು ಯಾಕಾಗಿ ಎಂಬ ಬಗ್ಗೆ ನನಗೆ ಅನುಮಾನಗಳಿವೆ. ಏನೇ ಇರಲಿ ಶಿವಕುಮಾರ ಸ್ವಾಮಿಗಳು ನೂರು ವರ್ಷ ಪೂರೈಸಿದ್ದಾರೆ. ಎಲ್ಲ ದೌರ್ಬಲ್ಯಗಳ ನಡುವೆಯೂ ಅವರದು ಸಾರ್ಥಕ ಬದುಕು. "

Tuesday, January 27, 2009

ಧರ್ಮದಿಂದ ಬಿಡುಗಡೆ ಬೇಕು.........

ಮಂಗಳೂರಿನಲ್ಲಿ ನಡೆದ ಪಬ್ ದಾಳಿಯ ಪ್ರಕರಣ ನಮ್ಮ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿದೆ. ಮೊದಲನೆಯದಾಗಿ ಧಾರ್ಮದ ಹೆಸರಿನಲ್ಲಿ ನಡೆಯುತ್ತಿರುವ ಜನ ವಿರೋಧಿ ಕೃತ್ಯಗಳು. ಇದನ್ನು ನಾನು ತಾಲಿಬಾನೀಕರಣ ಎಂದು ಕರೆಯುತ್ತೇನೆ. ಪ್ರತಿಯೊಬ್ಬರಿಗೂ ಅವರಿಗೆ ಬೇಕಾದಂತೆ ಬದುಕುವ ಹಕ್ಕಿದೆ. ಆದರೆ ಬೇಕಾದಂತೆ ಬದುಕುವುದೆಂದರೆ, ಬೇರೆಯವರಿಗೆ ತೊಂದರೆ ಕೊಟ್ಟು ಬದುಕುವುದಲ್ಲ. ಯಾರಿಗೂ ತೊಂದರೆ ಕೊಡದೇ ನಮಗೆ ಬೇಕಾದಂತೆ ಬದುಕುವುದು. ಇದೇ ಬದುಕುವ ಧರ್ಮ. ಆದರೆ ಇಂದು ನನಗೆ ಧಾರ್ಮಿಕ ಅಸಹನೆ ಕಾಣುತ್ತಿದೆ. ಕಾವಿ ಧರಿಸಿದವರಿಗೆ ಪ್ಯಾಂಟು ಕಂಡರಾಗುವುದಿಲ್ಲ. ಮೀಸೆ ಇಲ್ಲದೇ ದಾಡಿ ಬಿಟ್ಟವರಿಗೆ, ನಾಮ ಧರಿಸಿದವರನ್ನು ಕಂಡರೆ ಅಸಹನೆ. ಇದೆಲ್ಲ ನಡೆಯುತ್ತಿರುವುದು ಧರ್ಮದ ಹೆಸರಿನಲ್ಲಿ. ಧರ್ಮ ಮತ್ತು ನೈತಿಕತೆಯನ್ನು ಉಳಿಸುವ ಹೆಸರಿನಲ್ಲಿ. ಆದರೆ ನೈತಿಕತೆ ಎನ್ನುವುದು ಕಾಲಕ್ಕೆ ಬದ್ದವಾಗಿರುವಂತಹುದು ಅದು ಕಾಲಾತೀತವಾದುದಲ್ಲ. ಅಂದರೆ ವೇದ ಕಾಲದ ನೈತಿಕತೆ ಇಂದೂ ನೈತಿಕತೆ ಆಗಬೇಕಿಲ್ಲ. ಮಹಾ ಭಾರತ ಕಾಲದ ನೈತಿಕತೆ ಈಗಿನ ನೈತಿಕತೆ ಎಂದು ಕೊಳ್ಳುವುದು ತಪ್ಪು. ಹಾಗೆ ಖುರಾನ್ ನಲ್ಲಿ ಬರೆದಿದ್ದು ಎಂದೂ ಸತ್ಯವಾಗಿರಬೇಕು ಎಂದೇನೂ ಇಲ್ಲ.
ನೈತಿಕತೆಯನ್ನು ಬದುಕುವ ನೀತಿ ಎಂದು ಕರೆಯಬಹುದು. ಹಾಗಾದರೆ ಬದುಕುವ ನೀತಿ ಆಯಾ ಕಾಲಕ್ಕೆ ಬದಲಾಗಬೇಕು ಅಲ್ಲವೆ ? ಯಾಕೆಂದರೆ ಆಯಾ ಕಾಲ ಘಟ್ಟದ ಸಮಾಜ ತನ್ನದೇ ಆದ ಬದುಕುವ ನೀತಿಯನ್ನು ಕಟ್ಟಿಕೊಳ್ಳುತ್ತದೆ. ಯಾವಾಗ ಈ ರೀತಿ ನೈತಿಕತೆಗೂ ಚಲನಶೀಲತೆ ಇರುತ್ತದೇಯೋ ಆಗ ಧರ್ಮಕ್ಕೂ ಚಲನಶೀಲತೆ ಬರುತ್ತದೆ. ಆದ ಬದುಕು ಹರಿಯುವ ನದಿಯ ಹಾಗಾಗುತ್ತದೆ.
ಆದರೆ ನಮ್ಮಲ್ಲಿ ಅಪ್ಪ ನೆಟ್ಟ ಆಲದ ಮರಕ್ಕೆ ನೇತು ಹಾಕಿಕೊಳ್ಳುವವರ ಸಂಖ್ಯೆ ಹೆಚ್ಚು. ಅವರು ಧರ್ಮವನ್ನು ಪುನರ್ ವ್ಯಾಖ್ಯೆಗೆ ಒಳಪಡಿಸಲು ಸಿದ್ಧರಿಲ್ಲ. ಒಂದು ಧರ್ಮ ಹುಟ್ಟಿದ ಸಂದರ್ಭದ ಸತ್ಯ ಎಲ್ಲ ಕಾಲಕ್ಕೂ ಸತ್ಯವಾಗಬೇಕು ಎಂದೇನೂ ಇಲ್ಲ. ಹೆಣ್ನು ಮಕ್ಕಳು ಸಾರ್ವಜನಿಕವಾಗಿ ಕುಡಿಯಬಾರದು ಎಂದು ವಾದಿಸುವ, ಈ ಕಾರಣದಿಂದ ಮಹಿಳೆಯರ ಮೇಲೆ ಹಲ್ಲೆ ನಡೆಸುವವರು ಹೆಣ್ನು ಮಕ್ಕಳಿಗೆ ಬುರ್ಖಾ ಹಾಕಿಸಿದವರಿಗಿಂತ ಬೇರೆಯಾಗಿ ನನಗೆ ಕಾಣುವುದಿಲ್ಲ. ಇದನ್ನೇ ನಾನು ತಾಲಿಬಾನೀಕರಣ ಎಂದು ಕರೆದಿದ್ದು.
ಮಹಾ ಭಾರತ ಕಾಲದಲ್ಲಿ ಒಂದು ಹೆಣ್ಣು ಐವರನ್ನು ಮದುವೆಯಾದ ಉದಾಹರಣೆ ಇದೆ. ಅದನ್ನು ಇಂದು ಜಾರಿಗೆ ತರುವುದು ಸಾಧ್ಯವೆ ? ಹಾಗೇ ವೇದ ಕಾಲದಲ್ಲಿ ಇದ್ದ ನಿಯಮಗಳನ್ನು ಇಂದು ಪಾಲಿಸಬೇಕು ಎಂದು ಹೇಳುವವರು ಯಾವ ಕಾಲದಲ್ಲಿದ್ದಾರೆ ? ಮಹಿಳೆಯರನ್ನು ಪರದೆಯ ಒಳಗೆ ಇಟ್ಟವರಿಗಿಂತ ಇವರು ಯಾವ ರೀತಿ ಬೇರೆಯಾಗಿದ್ದಾರೆ ?
ಇಂದು ನಮಗೆ ಹೊಸ ಧರ್ಮ ಬೇಕಾಗಿದೆ. ಈಗಿರುವ ಧರ್ಮದಲ್ಲಿ ಬದಲಾವಣೆ ಬೇಕು. ನನ್ನ ಈ ಮಾತು ವಿಶ್ವದ ಬಹುತೇಕ ಎಲ್ಲ ಧರ್ಮಗಳಿಗೂ ಅನ್ವಯಿಸುತ್ತದೆ. ಆದರೆ ಧರ್ಮವನ್ನು ಮೂಢರಂತೆ ಅನುಸರಿಸುವವರು ಬಂದೂಕು ಹಿಡಿಯುತ್ತಾರೆ ಇಲ್ಲವೇ ಪಬ್ ಗಳಿಗೆ ನುಗ್ಗಿ ಹೆಣ್ಣು ಮಕ್ಕಳ ಮಾನಭಂಗಕ್ಕೆ ಯತ್ನಿಸುತ್ತಾರೆ.
ನಮಗೆ ಈಗ ಧರ್ಮದಿಂದ ಬಿಡುಗಡೆ ಬೇಕು. ನಮಗೆಲ್ಲ ಬದುಕುವ ಧರ್ಮ. ನಾವೆಲ್ಲ ಧಾರ್ಮಿಕ ಲಾಂಛನಗಳಿಂದ, ಆಚರಣೆಗಳಿಂದ ಹೊರಕ್ಕೆ ಬರಬೇಕು. ಧರ್ಮ ಎನ್ನುವುದು ಆಧ್ಯಾತ್ಮಿಕತೆ ಆಗಬೇಕು. ಧರ್ಮ ಸಾಮಾಜಿಕ ನೀತಿ ನಿಯಮಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ಸಾಮಾಜಿಕ ನಡವಳಿಕೆ ಮತ್ತು ಧಾರ್ಮಿಕತೆ ಬೇರೆ ಎಂಬುದನ್ನು ತಾಲಿಬಾನಿಗಳಿಗೆ, ಅವರು ಯಾವ ಧರ್ಮದವರೇ ಇರಬಹುದು ಅವರಿಗೆ ತಿಳಿ ಹೇಳಬೇಕು.
ಹೌದು, ನಮಗೆಲ್ಲ ಈಗ ಧರ್ಮಗಳಿಂದ ಬಿಡುಗಡೆ ಬೇಕಾಗಿದೆ,

Thursday, January 22, 2009

ಬೆಳಗಾವಿಯ ನೆನಪುಗಳು....

ಕಳೆದ ಹತ್ತು ದಿನಗಳ ಕಾಲ ನಾನು ಬೆಳಗಾವಿಯಲ್ಲಿದ್ದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಬಿಟ್ತು ಇಷ್ಟು ದಿನ ಹೊರಕ್ಕೆ ಇದ್ದುದು ಇದೇ ಮೊದಲು. ನನಗೆ ಬೆಂಗಳೂರಿನ ಬಗ್ಗೆ ಅಂತಹ ವ್ಯಾಮೋಹವಿಲ್ಲ. ಆದರೆ ಈ ಬೆಂಗಳೂರು ಬಿಟ್ಟು ಓಡಿ ಹೋಗಬೇಕು ಎಂದುಕೊಂಡರೂ ನನಗೆ ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಮೋಹವೇ ಹಾಗೆ.



ಬೆಳಗಾವಿ ನನಗ್ಎ ಹೊಸತಲ್ಲ. ನಾನು ನನ್ನ ಕಾಲೇಜು ದಿನಗಳನ್ನು ಕಳೆದಿದ್ದು ಬೆಳಗಾವಿಯಲ್ಲಿ. ಹಾಗೆ ಕಾಡಿನ ನಡುವೆ ಬದುಕುತ್ತ ಕಾಡು ಜೀವಿಯಾಗಿದ್ದ ನನಗೆ ನಾಗರೀಕತೆ (?) ಮೊದಲ ಪಾಠ ಸಿಕ್ಕಿದ್ದೂ ಇದೇ ಊರಿನಲ್ಲಿ. ಇಲ್ಲಿಯೇ ಟೆಲಿಫೋನಿನಲ್ಲಿ ಮಾತನಾಡುವುದನ್ನು ಕಲಿತೆ. ಇಂಗ್ಲೀಷಿನಲ್ಲಿ ಮಾತನಾಡಲು ಯತ್ನ ನಡೆಸಿದೆ. ನನಗೆ ಇದನ್ನೆಲ್ಲ ಕಲಿಸಿದವಳು ನನ್ನ ಗೆಳತಿ. ನನಗಾಗ ಇಂಗ್ಲೀಷ್ ಸಿನೆಮಾಗಳ ಬಗ್ಗೆ ಮಾಹಿತಿಯೇ ಇರಲಿಲ್ಲ. ನಾನಲ್ಲಿ ನೋಡಿದ್ದು ಹಲವಾರು ಖ್ಯಾತ ಇಂಗ್ಲೀಷ್ ಸಿನೆಮಾಗಳನ್ನು. ನನ್ನ ಬದುಕು ರೂಪಗೊಂಡಿದ್ದು ಒಂದು ಆಕೃತಿಯನ್ನು ಪಡೆದಿದ್ದು ಬೆಳಗಾವಿಯಲ್ಲಿ.

ಬಹಳಷ್ಟು ಜನರಿಗೆ ಬೆಳಗಾವಿಯ ಬಗ್ಗೆ ಗೊತ್ತಿರಲಿಕ್ಕಿಲ್ಲ. ಕರ್ನಾಟಕದ ಗಡಿ ಜಿಲ್ಲೆಯಾದ ಬೆಳಗಾವಿ ಕನ್ನಡ, ಮರಾಠಿ ಮತ್ತು ಗೋವನ್ ಸಂಸ್ಕ್ರಿತಿಗಳು ಹದವಾಗಿ ಬೆರೆತು ಪಾಕಗೊಂಡ ಊರು. ಇಲ್ಲಿ ಭಾಷೆ ನವೆಂಬರ್ ತಿಂಗಳು ಬಿಟ್ಟರೆ ಬೇರೆ ದಿನಗಳಲ್ಲಿ ಮಹತ್ವದ್ದಾಗಿಲ್ಲ. ಕನ್ನಡ, ಮರಾಠಿ ಭಾಷೆಗಳನ್ನು ಇಲ್ಲಿನ ಜನ ಸಮಾನವಾಗಿ ಬಳಸುತ್ತಾರೆ. ನಾನು ಮರಾಠಿಯಲ್ಲಿ ಕಲಿತ ಮೊದಲ ವಾಕ್ಯ ಎಂದರೆ "ಏ ಮುಲಗಿ ಪಾರ್ ಸುಂದರ್ ಆಯೇ." ಅಂದರೆ ಈ ಹುಡುಗಿ ತುಂಬಾ ಸುಂದರವಾಗಿದ್ದಾಳೆ ಎಂದು.

ಇಂತಹ ಬೆಳಗಾವಿಯಲ್ಲಿ ಈ ಬಾರಿ ವಿಧಾನ ಮಂಡಲದ ಅಧಿವೇಶನ ನಡೆಯಿತು. ಇದಕ್ಕಾಗಿ ರಾಜ್ಯದ ರಾಜ್ಯಧಾನಿಯಿಂದ ಸುಮಾರು ೩೦೦ ಪತ್ರಕರ್ತರು ಆಗಮಿಸಿದ್ದರು. ರಾಜ್ಯ ವಾರ್ತಾ ಇಲಾಖೆ ಇವರಿಗೆಲ್ಲ ವಸತಿ, ಗುಂಡು ತುಂಡಿನ ವ್ಯವಸ್ಥೆ ಮಾಡಿತ್ತು. ಜೊತೆಗೆ ಪ್ರತಿ ದಿನ ಸಚಿವರುಗಳ ಪಾನಗೋಷ್ಠಿ. ಇಂಥಹ ಪಾನಗೋಷ್ಟಿಯೊಂದರಲ್ಲಿ ಪತ್ರಕರ್ತರಿಗೆ ಕೈ ಗಡಿಯಾರದ ಉಡುಗೊರೆಯನ್ನು ನೀಡಲಾಯಿತು.

ಸಾಧಾರಣವಾಗಿ ಇಂತಹ ಪಾನಗೋಷ್ಟಿಗಳೆಂದರೆ ನನಗಾಗುವುದಿಲ್ಲ. ನಾನು ಯಾವುದೇ ಪಾನಗೋಷ್ಟಿಯಲ್ಲಿ ಪಾಲ್ಗೊಳ್ಳಲಿಲ್ಲ. ಆದರೆ ನನ್ನ ವಾಹನ ಚಾಲಕ ಮಾತ್ರ ಈ ಗೋಷ್ಟಿಯಲ್ಲಿ ಪಾಲ್ಗೊಳ್ಳುತ್ತಿರುವ ವರ್ತಮಾನ ನನಗೆ ತಲುಪಿತು. ಆತ ಸಚಿವರು ನೀಡಿದ ಕೈಗಡಿಯಾರವನ್ನು ಸ್ವೀಕರಿಸಿದ್ದ. ಅದು ಒಂದಲ್ಲ, ತಾನು ತೆಗೆದುಕೊಂಡಿದ್ದರ ಜೊತೆಗೆ ನಮ್ಮ ಸಾರ್ ಗೆ ಒಂದು ಎಂದು ಹೇಳಿ ಮತ್ತೊಂದನ್ನು ತೆಗೆದುಕೊಂಡಿದ್ದ. ನನಗೆ ಈ ವಿಷಯ ತಿಳಿದಾಗ ಆಘಾತ. ನಾನು ಅವನಿಗೆ ಹೇಳಿದೆ.

"ನಾನು ನನ್ನ ಕಾರ್ಯಕ್ರಮದಲ್ಲಿ ರಾಜಕಾರಣಿಗಳನ್ನು ಟೀಕಿಸುತ್ತೇನೆ. ಅದು ಕೇವಲ ನನ್ನ ಮಾತಲ್ಲ. ಜನರ ಪ್ರತಿನಿಧಿಯಾಗಿ ನಾನು ಅಲ್ಲಿ ಮಾತನಾಡುತ್ತೇನೆ. ಹೀಗಿರುವಾಗ ನನ್ನ ನಡವಳಿಕೆ ಮಾದರಿಯಾಗಿರಬೇಕಾಗುತ್ತದೆ. ಹಾಗೆ ನನ್ನ ವಾಹನ ಚಾಲಕನಾದ ನಿನ್ನ ನಡವಳಿಕೆಕೂಡ. ಇಂದು ನಾನಾಗಲಿ, ನನ್ನ ಸಹಾಯಕನಾದ ನೀನಾಗಲಿ ಮಂತ್ರಿಗಳು ನೀಡಿದ ಗಿಫ್ಟ್ ತೆಗೆದುಕೊಂಡರೆ ಮರು ಕ್ಷಣ ನನ್ನ ಧ್ವನಿ ಬಿದ್ದು ಹೋಗುತ್ತದೆ. ನನ್ನ ಮಾತುಗಳು ಕೃತಕವಾಗುತ್ತದೆ. ನಾನು ಆಡುವ ಮಾತುಗಳು ನೈತಿಕ ಶಕ್ತಿಯನ್ನು ಕಳೆದುಕೊಂಡು ಬಿಡುತ್ತವೆ. ಆದ್ದರಿಂದ ನೀನು ತೆಗೆದುಕೊಂಡ ಉಡುಗೊರೆಯನ್ನು ವಾಪಸ್ಸು ಕೊಟ್ಟು ಬಿಡು."

"ನನಗೆ ಹಲವು ರಾಜಕೀಯ ಸ್ನೇಹಿತರಿದ್ದಾರೆ. ನಾನು ಅವರ ಜೊತೆ ಊಟ ಮಾಡಿದ್ದೇನೆ. ಕಾಫಿ ಕುಡಿದಿದ್ದೇನೆ. ಆದರೆ ಈ ಸಂಬಂಧ ನೈತಿಕತೆಯ ಗಡಿಯನ್ನು ದಾಟಲು ನಾನು ಅವಕಾಶ ನೀಡಿಲ್ಲ. ಆದಷ್ಟು ಪ್ರಾಮಾಣಿಕವಾಗಿ ಇರಲು ಯತ್ನ ನಡೆಸಿದ್ದೇನೆ. "

ನನ್ನ ಚಾಲಕ ತಪ್ಪನ್ನು ಒಪ್ಪಿಕೊಂಡ. ಉಡುಗೊರೆಯನ್ನು ವಾಪಸು ನೀಡುವುದಾಗಿ ಹೇಳಿದ

ಸುಮಾರು ಎಂಟು ದಿನಗಳ ಕಾಲ ನಾನು ಬೆಳಗಾವಿಯಲ್ಲಿ ಮಹಾಯುದ್ಧ ಕಾರ್ಯಕ್ರಮವನ್ನು ನಡೆಸಿದೆ. ಈ ಸಂದರ್ಭದಲ್ಲಿ ಹೊಟೆಲ್ಲುಗಳಲ್ಲಿ ರಸ್ತೆಗಳಲ್ಲಿ ಸಿಕ್ಕವರು ನನ್ನನ್ನು ಗುರುತಿಸಿದರು. ನೀವು ಬೆಳಗಾವಿಯವರಂತೆ ಹೌದಾ ಎಂದು ಪ್ರಶ್ನಿಸಿದರು. ಈ ಪ್ರಶ್ನೆ ನನಗೆ ನೀಡಿದ ಸಂತೋಷ ಅಷ್ಟಿಷ್ಟಲ್ಲ. ನಾನು ಉತ್ತರ ಕನ್ನಡದವನಾ ? ಬೆಳಗಾವಿಯವನಾ ? ಅಥವಾ ಬೆಂಗಳೂರಿನವನಾ ? ನನಗೆ ಗೊತ್ತಿರಲಿಲ್ಲ. ಆದರ ನನ್ನೊಳಗಿನ ಭಯವನ್ನು ಹೊರ ಹಾಕಿದ ನನ್ನ ಆ ಗೆಳತಿ ನೆನಪಾದಳು. ಅವಳ ಜೊತೆ ಸುತ್ತಿದ ಗಲ್ಲಿಗಳಲ್ಲಿ ಸುತ್ತಿದೆ. ಹಾಗೆ ನಾನು ಇಂಗ್ಲಿಷ್ ಸಿನೆಮಾಗಳನ್ನು ನೋಡಿದ ಥೇಯಟರ್ ಮುಂದೆ ಬಂದು ನಿಂತೆ. ಅಲ್ಲಿ ಶಾಪಿಂಗ್ ಕಾಂಪ್ಲೇಕ್ಸ್ ಬಂದಿತ್ತು.

Monday, January 12, 2009

ಒಂದಿಷ್ಟು ವಿವರಣೆ .............

ನನಗೆ ತುಂಬಾ ಸಂತೋಷ. ನನ್ನ ಖಾಸಗಿ ಅನುಭವವೊಂದು ಗಂಭೀರವಾದ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಈ ಸಂದರ್ಭದ ಮಹತ್ವವ ವಿಚಾರ ಒಂದರ ಚರ್ಚೆಗೆ ಇದು ಗ್ರಾಸವಾಗಿದೆ.

ನಾನು ಜಾತಿಯನ್ನು ಗೃಹಿಸಿದ ಬಗೆ ಯಾವುದು ? ಇದು ಮೊದಲ ಪ್ರಶ್ನೆ. ಜಾತಿ ಎನ್ನುವುದು ನಾವು ಕರೆಯುವ ಬ್ರಾಹ್ಮಣ, ಒಕ್ಕಲಿಗ, ಲಿಂಗಾಯಿತ ಎಂಬ ಶಬ್ದ ಮಾತ್ರವಾ ಅಥವಾ ಮನಸ್ಥಿತಿಯಾ ? ನನ್ನ ದೃಷ್ಟಿಯಲ್ಲಿ ಮನಸ್ಥಿತಿ. ಈ ಮನಸ್ಥಿತಿಯನ್ನು ಕೇಂದ್ರವಾಗಿಟ್ಟುಕೊಂಡು ನಾನು ಜಾತಿಯ ಬಗ್ಗೆ ಮಾತನಾಡುತ್ತೇನೆ, ಮಾತನಾಡಿದ್ದೇನೆ.

ನನ್ನ ಎದುರಿಗೆ ಬಂದ ಹುಡುಗ ಜಾತಿಯ ಪ್ರಸ್ತಾಪ ಮಾಡದಿದ್ದರೆ ಸಮಸ್ಯೆ ಇರಲಿಲ್ಲ. ಅವನು ಪ್ರತಿಭಾವಂತ ಎಂದು ಕೆಲಸ ಕೊಡುವ ಬಗೆ ಯೋಚಿಸಬಹುದಿತ್ತು. ಆದರೆ ನಾನು ನಿಮ್ಮವ ಎಂದು ಹೇಳುವ ಮೂಲಕ ಆತ ಜಾತಿಯ ಲಾಭ ಪಡೆಯಲು ಯತ್ನಿಸಿದ. ಅಂದರೆ ಸ್ವಲಾಭಕ್ಕಾಗಿ ಇಂದು ಜಾತಿಯನ್ನು ಬಳಸಿದವನು ನಾಳೆ ಏನನ್ನಾದರೂ ಬಳಸಬಹುದು. ಇದು ಅಪಾಯಕಾರಿಯಾದದ್ದು. ಆದ್ದರಿಂದ ಆತನ ಜಾತಿಗಿಂತ ಆತನ ಪತ್ರಿಕೋದ್ಯಮ ವಿರೋದಿ ಮನಸ್ಥಿತಿ ನನಗೆ ಭಯವನ್ನು ಉಂಟು ಮಾಡಿತು. ಜೊತೆಗೆ ಹೀಗೆ ಜಾತಿಯನ್ನು ಬಳಸಿಕೊಂಡವ ನಂತರ ರಾಜಕಾರಣಿಗಳ ಬ್ಯಾಗು ಹಿಡಿದು ಓಡಾಡಿದ್ದು. ಇದು ಸಹ ನನಗೆ ಅಘಾತವನ್ನು ಉಂಟು ಮಾಡಿದ್ದು.

ಇನ್ನು ಪತ್ರಿಕೋದ್ಯಮ ಮತ್ತು ಜಾತಿಯ ವಿಚಾರ. ನಾನು ಪತ್ರಿಕೋದ್ಯಮಕ್ಕೆ ಬಂದಾಗ ಬಹುತೇಕ ಪತ್ರಿಕೆಗಳಲ್ಲಿ ಬ್ರಾಹ್ಮಣರೇ ಹೆಚ್ಚಾಗಿದ್ದರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ನಾನು ಕೆಲಸ ಪ್ರಾರಂಭಿಸಿದಾಗ, ಅಲ್ಲಿ ಮಾಧ್ವ ಸ್ವಾಮಿಗಳ ಆಡ್ದ ಪಲ್ಲಕ್ಕಿ ಉತ್ಸವ ಮುಖ ಪುಟದ ಬಹುಮುಖ್ಯ ಸುದ್ದಿಯಾಗಿ ಕಾಣುತ್ತಿತ್ತು. ಆದರೆ, ಜನಪದ ಉತ್ಸವ ಮತ್ತು ನಂಬಿಕೆಗಳು ಅವರಿಗೆ ಮುಖ್ಯ ಎನ್ನುಸುತ್ತಿರಲಿಲ್ಲ. ಅಲ್ಲಿದ್ದ ಬಹುತೇಕ ಕೆಲಸಗಾರರು ಮಧ್ವಾಚಾರ್ಯರು ದೊಡ್ದವರೇ ಅಥವಾ ಶಂಕರಾಚಾರ್ಯರೇ ಎಂಬ ಬಗ್ಗೆ ದಿನಗಟ್ಟಲೇ ಚರ್ಚೆ ನಡೆಸಿ ಜಗಳವಾಡುತ್ತಿದ್ದರು. ಅಲ್ಲಿ ಕೆಲಸ ಮಾಡುವವರಿಗೆ ಇದೇ ಮುಖ್ಯ ವಿಚಾರವಾಗಿತ್ತು. ನಮ್ಮ ಜನರ ಬದುಕು ಜನ ಜೀವನ ಮತ್ತು ನಂಬಿಕೆಗಳ ಬಗ್ಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡ ನನಗೆ ನಮ್ಮ ಶಿಷ್ಟ ದೇವತೆಗಳಿಗೆ ಸಿಗುವ ಪ್ರಾಶಸ್ತ್ಯ ಗ್ರಾಮೀಣ ಶಕ್ತಿ ದೇವತೆಗಳಿಗೆ ಸಿಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿತ್ತು. ಅಂದರೆ ಅದೇ ಮನಸ್ಥಿತಿಯ ಪ್ರಶ್ನೆ. ಇಲ್ಲಿ ನಾನು ಯಾರನ್ನೂ ದೂರುವುದಕ್ಕಾಗಿ ಜಾತಿಯ ಪ್ರಶ್ನೆಯನ್ನು ಎತ್ತುತ್ತಿಲ್ಲ.

ಪತ್ರಿಕೆ ಎನ್ನುವುದು ಒಂದು ವ್ಯಕ್ತಿಯ ಹಾಗೆ. ಅದಕ್ಕೂ ಮನಸ್ಸು ಹೃದಯ ಕಿಡ್ನಿ ಎಲ್ಲವೂ ಇರಬೇಕು. ಪತ್ರಿಕೆಯಲ್ಲಿ ಕೆಲಸ ಮಾಡುವವರು ಇಂಥಹ ಪತ್ರಿಕೆಯನ್ನು ರೂಪಿಸುವಾಗ ಅವರ ಮನಸ್ಸು ಅಲ್ಲಿ ಪ್ರತಿಫಲನವಾಗುತ್ತದೆ. ಹೀಗಾಗಿ ಪತ್ರಿಕೆಯಲ್ಲಿ ಕೆಲಸ ಮಾಡುವವರ ಮನಸ್ಸು ಎಲ್ಲ ಜಾತಿ ಸಮುದಾಯವನ್ನು ಮೀರಿ ಬೆಳೆಯಬೇಕು. ಹಾಗೆ ಎಲ್ಲ ರೀತಿಯ ಜನರ ನಂಬಿಕೆಗಳಿಗೆ ಅಲ್ಲಿ ಅವಕಾಶ ಇರಬೇಕು. ಇದು ಯಾವಾಗ ಸಾಧ್ಯವಾಗುತ್ತದೆ ಎಂದರೆ ಎಲ್ಲ ಜನ ಸಮುದಾಯಗಳ ಮನಸ್ಸುಗಳೂ ಒಂದಾಗಿ ಕೆಲಸ ಮಾಡಿದಾಗ ಮಾತ್ರ. ಈಗ ಇರುವ ಜಾತಿ ಸಮುದಾಯಗಳ ಜೊತೆ ಅವಕಾಶ ವಂಚಿತರಿಗೂ ಅವಕಾಶ ಸಿಕ್ಕರೆ ಆಗ ಒಟ್ಟಾರೆಯಾಗಿ ರೂಪಗೊಳ್ಳುವ ಮನಸ್ಸು ಹೆಚ್ಚು ಸುಂದರವಾಗಿರುತ್ತದೆ. ಆ ಮನಸ್ಸುಗಳ ರೂಪಿಸುವ ಪತ್ರಿಕೆ ಕೂಡ ಸುಂದರವಾಗಿರುತ್ತದೆ. ಇಡೀ ಜನ ಸಮುದಾಯವನ್ನು ಅದು ಪ್ರತಿನಿಧಿಸುತ್ತದೆ. ಇದನ್ನು ಇನ್ನೂ ಸರಳವಾಗಿ ಹೇಳಲು ಪ್ರಯತ್ನಿಸುತ್ತೇನೆ.

ನನ್ನ ಅನುಭವ ನಾನು ಒಪ್ಪಲಿ, ಬಿಡಲಿ ಅದು ಬ್ರಾಹ್ಮಣ ಜಗತ್ತಿನದು. ಹಾಗೆ ನನ್ನ ನೋಟವನ್ನು ನನ್ನ ಈ ಬ್ರಾಹ್ಮಣ ಜಗತ್ತೇ ನಿರ್ಧರಿಸುತ್ತದೆ. ಹಾಗೆ, ಬೇರೆ ಜಾತಿಯವರ ಆಲೋಚನೆಗಳನ್ನೂ ಸಹ. ಹೀಗಾಗಿ ನಾನು ನೋಡಿದ್ದೇ ಸತ್ಯ ಎಂದು ಹೇಳುವ ಎದೆಗಾರಿಕೆ ನನ್ನಗಿಲ್ಲ. ನನ್ನ ನೋಟದಲ್ಲಿ ತಪ್ಪಿರಬಹುದು ಎಂದು ನನಗೆ ಅನ್ನಿಸುತ್ತಿರುತ್ತದೆ. ನನಗೆ ಅನ್ವಯಿಸಿಕೊಳ್ಳುವ ಈ ಮಾತುಗಳು ಬೇರೆ ಜಾತಿಯಿಂದ ಬಂದವರಿಗೂ ಅನ್ವಯವಾಗುತ್ತದೆ. ಆದರೆ ನಾವೆಲ್ಲ ಇಂತಹ ಬದ್ಧ ಆಲೋಚನೆಗಳಿಂದ ಹೊರಕ್ಕೆ ಬರಲು ಯತ್ನ ನಡೆಸಲೇಬೇಕು.

ಈಗ ಪತ್ರಿಕೆಗಳ ಮನಸ್ಥಿತಿಯತ್ತ ನೋಡೋಣ. ನಮ್ಮ ಪತ್ರಿಕೋದ್ಯಮ ಬ್ರಾಹ್ಮಣ ಆಲೋಚನೆಗಳ ಆಧಾರದ ಮೇಲೆ ಬೆಳೆದು ಬಂದಿದೆ. ಯಾಕೆಂದರೆ ಬೇರೆ ಜಾತಿ ಸಮುಧಾಯದ ಜನ ಪತ್ರಿಕೋದ್ಯಮಕ್ಕೆ ಬರದಿದ್ದ ಕಾಲದಲ್ಲಿ ಬ್ರಾಹ್ಮಣರು ಊ ಉದ್ಯಮವನ್ನು ಕಟ್ಟಿದರು, ಬೆಳೆಸಿದರು. ಆದರೆ ಇದಕ್ಕೆ ಒಂದೂ ಸಂಪೂರ್ಣತೆ ಬರಬೇಕಾದರೆ, ಅದು ನಮ್ಮ ಹಳ್ಳಿಗಳ ಹಾಗಿರಬೇಕು. ಹಳ್ಳಿಗಳಲ್ಲಿ ಎಲ್ಲ ಜಾತಿ ಜನ ಸಮುದಾಯದ ಜನ ಬದುಕುವ ಹಾಗೆ. ನಿಜ ಅರ್ಥದಲ್ಲಿ ಭಾರತ ಎಂಬ ಬಹುಸಂಸ್ಕೃತಿಯ ನಾಡು ಇರುವಂತೆ ಬಹು ಸಂಸ್ಕೃತಿ ಪತ್ರಿಕೆಗಳ ಮನಸ್ಥಿತಿಯನ್ನು ನಿರ್ಮಿಸಬೇಕು.

ನಾನು ಉತ್ತರ ಕರ್ನಾಟಕದ ದೀವರನ್ನು ವರದಿಗಾರರನ್ನಾಗಿ ತೆಗೆದುಕೊಂಡ ಬಗ್ಗೆ ಹೇಳಿದ್ದೆ. ನನಗೆ ಉತ್ತರ ಕನ್ನಡ ಎಲ್ಲ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳು ಪತ್ರಿಕೆಗಳಲ್ಲಿ ಪ್ರತಿಬಿಂಬಿತವಾಗುತ್ತಿದ್ದುದು, ಏಕಮುಖವಾದ ನೋಟದ ಮೂಲಕ. ನನಗಿದ್ದ ಕುತೂಹಲ ಎಂದರೆ ಈ ಎಲ್ಲ ಸಮಸ್ಯೆಗಳನ್ನು ಇನ್ನೊಂದು ಜಾತಿ ಸಮುದಾಯದಿಂದ್ ಬಂದವರು ಹೇಗೆ ನೋಡುತ್ತಾರೆ ಎಂಬ ಬಗ್ಗೆ. ಈ ಕುತೂಹಲ ಈಗ ನನಗೆ ತಣಿದಿದೆ.

ಒಂದು ಪತ್ರಿಕೆ ಎಂದರೆ ಮಿನಿ ಭಾರತ ಇದ್ದಂತೆ ಇರಬೇಕು. ಆಗ ಮಾತ್ರ ಅದು ಸಮಾಜವನ್ನು ಪ್ರತಿನಿಧಿಸುತ್ತದೆ, ಅದು ಭ್ರಾಹ್ಮಣರ ಕೇರಿಯೂ ಆಗಬಾರದು. ಲಿಂಗಾಯಿತರ ವಠಾರವೂ ಆಗಬಾರದು, ಹರಿಜನರ ಕೇರಿಯೂ ಆಗಬಾರದು. ಇದೆಲ್ಲ ಸೇರಿದರೆ ಮಾತ್ರ ಅದು ಸಮಾಜವನ್ನು ಪ್ರತಿನಿಧಿಸುತ್ತದೆ. ನನಗೆ ಏನ್ರಿ ಗೌಡ್ರೆ, ಬನ್ರಿ ಪಾಟೀಲರೆ, ಯಾಕ್ರಿ ಬಿರಾದಾರರೇ ಎಂದು ಮಾತನಾಡುವ ವಾತವರಣ ಇಷ್ಟ. ಅದನ್ನು ಬಿಟ್ಟು ಯಾವುದೋ ಜಾತಿಗಳ ಕೇರಿಯನ್ನಾಗಿ ಪತ್ರಿಕೆಗಳನ್ನು ಮಾಡುವುದಕ್ಕೆ ಸಹಮತ ಇಲ್ಲ.

ಇನ್ನು ನನ್ನ ಬಗ್ಗೆ ವೈಯಕ್ತಿಕ ವಾಗಿ ಮಾಡಿದ ಟೀಕೆಗಳ ಕುರಿತು;

ನಾನು ಇದುವರೆಗೆ ವೈಯಕ್ತಿಕ ಕೆಲಸಕ್ಕಾಗಿ ಯಾವ ರಾಜಕಾರಣಿಯ ಬಳಿಯೂ ಹೋಗಿಲ್ಲ. ಆದ್ದರಿಂದ ಕೆಲಸಕ್ಕೆ ಒತ್ತಡ ಹೇರಿಸಲು ರಾಜಕಾರಣಿಗಳ ಬಳಿ ಹೋಗುವ ಅಗತ್ಯ ಇಲ್ಲ. ಯಾವುದೇ ಒಬ್ಬ ರಾಜಕಾರಣಿ ನಾನು ವೈಯಕ್ತಿಕ ಕೆಲಸಕ್ಕೆ ಹೋಗಿದ್ದೇನೆ ಎಂದು ಹೇಳಿದರೇ ಅದೇ ಕ್ಷಣ ನಾನು ಈ ವೃತ್ತಿಯನ್ನು ಬಿಡಲು ಸಿದ್ದನಿದ್ದೇನೆ.

ನನ್ನ ಕಚೇರಿಯಲ್ಲಿ ಯಾರನ್ನೂ ನಾನು ಜಾತಿಯ ಕಾರಣದಿಂದ ತೆಗೆದುಕೊಂಡಿಲ್ಲ. ಪ್ರತಿಭೆಯನ್ನು ಗಣನೆಗೆ ತೆಗೆದುಕೊಳ್ಳಲು ಯತ್ನಿಸಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲ ಜಾತಿ ಜನಸಮುದಾಯಗಳನ್ನು ಪ್ರೀತಿಸುವ ಅರೋಗ್ಯಪೂರ್ಣ ಮನಸ್ಸುಗಳನ್ನು ತೆಗೆದುಕೊಳ್ಳಲು ಯತ್ನಿಸಿದ್ದೇನೆ.

ಹಾಗೆ ಇಂತಹ ಆರೋಗ್ಯಪೂರ್ಣ ಮನಸ್ಸುಗಳು ಯಾವುದೇ ಒಂದು ಜಾತಿಯ ಜಹಗೀರು ಅಲ್ಲ ಎಂಬ ಅರಿವು ನನಗಿದೆ.

Friday, January 9, 2009

ಹೀಗೊಂದು ಖಾಸಗಿ ಮಾತು.......

ಆತ ಅಂದು ಬೆಳಿಗ್ಗೆ ಬಂದು ನನ್ನ ಮುಂದೆ ಕುಳಿತ.
ಕುಳಿತವನೇ "ನಾನು ನಿಮ್ಮ ಪಕ್ಕದ ತಾಲೂಕಿನವನು" ಎಂದ. ಹವ್ಯಕ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿದ. ಇನ್ನೊಬ್ಬ ಪತ್ರಕರ್ತರ ಹೆಸರು ಹೇಳಿ ತನಗೊಂದು ಕೆಲಸ ಬೇಕು ಎಂದು ಅಹವಾಲು ಮಂಡಿಸಿದ. ಸುಮ್ಮನೆ ಮಾತನಾಡುತ್ತಲೇ ಇರುವ ಈ ವ್ಯಕ್ತಿ ನಾನು ಪಕ್ಕದ ತಾಲೂಕಿನವನು ಎಂದು ಹೇಳಿದ್ದು, ಹವ್ಯಕಭಾಷೆಯಲ್ಲಿ ಮಾತನಾಡಿ ಕೆಲಸ ಕೇಳಿದ್ದು ನನಗೆ ಸರಿ ಬರಲಿಲ್ಲ.
ನಾನು ಅವನಿಗೆ ಹೇಳಿದೆ;
"ನಮ್ಮಲ್ಲಿ ತಕ್ಷಣ ಕೆಲಸ ಇಲ್ಲ. ಹಾಗೆ ನಾನು ನನ್ನ ಊರಿನವನು ನನ್ನ ಜಾತಿಯವನು ಎಂಬ ಕಾರಣಕ್ಕೆ ಯಾರನ್ನೂ ಕೆಲಸಕ್ಕೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ನಾನು ಈ ವಿಚಾರದಲ್ಲಿ ಹೆಚ್ಚು ಜಾಗರೂಕನಾಗಿರುತ್ತೇನೆ. ಈಗ ನಮ್ಮ ಸಂಸ್ಥೆಯಲ್ಲಿ ಎಲ್ಲ ಜಾತಿ ಜನ ಸಮುದಾಯದ ಜನ ಇದ್ದಾರೆ. ಅವರಲ್ಲಿ ಬಹಳಷ್ಟು ಜನರ ಜಾತಿ ನನಗೆ ಗೊತ್ತಿಲ್ಲ. ಅದರ ಅಗತ್ಯವೂ ನನಗಿಲ್ಲ. ಆದರೆ ಕೆಲವೊಮ್ಮೆ ಎಲ್ಲ ಜಾತಿ ಸಮುದಾಯದವರಿಗೆ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಜಾತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾನು ಕೆಲಸಕ್ಕೆ ತೆಗೆದುಕೊಂಡು ಇಬ್ಬರು ಹುಡುಗರು ದೀವರು ಜಾತಿಗೆ ಸೇರಿದವರು. ನಾನು ಉದ್ದೇಶಪೂರ್ವಕವಾಗಿ ಅವರನ್ನು ಕೆಲಸಕ್ಕೇ ತೆಗೆದುಕೊಂಡಿದ್ದೇನೆ. ಯಾಕೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇಲ್ಜಾತಿಯವರ ಕೈಯಲ್ಲಿ ಪತ್ರಿಕೋದ್ಯಮ ಇದೆ. ಇದು ಎಲ್ಲರಿಗೂ ತಲುಪಲಿ ಎಂಬ ಕಾರಣಕ್ಕೆ ನಾನು ಹಿಂದುಳಿದ ವರ್ಗದ ಹುಡುಗರನ್ನು ತೆಗೆದುಕೊಂಡಿದ್ದು. ಈಗ ಈ ಇಬ್ಬರೂ ಹುಡುಗರು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾರೆ. ಯಾರ ಒತ್ತಡಕ್ಕೂ ಅವರು ಮಣಿಯುತ್ತಿಲ್ಲ."
ಈ ಹುಡುಗ ಬಂದವನು, ನೇರವಾಗಿ ನಾನು ನಿಮ್ಮ ಜಾತಿಯವನು ಎಂದು ಹೇಳಿದ್ದು ನನಗೆ ಸರಿ ಕಾಣಲಿಲ್ಲ. ಹೀಗಾಗಿ ನಾನು ಅವನನ್ನು ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ.
ಇದಾದ ಮೇಲೆ ಆತ ಗೆಳೆಯ ರವೀಂದ್ರ ರೇಷ್ನೆ ಅವರ ಪತ್ರಿಕೆಯಲ್ಲಿ ಯಾವುದೊ ಕೆಲಸ ಮಾಡಿಕೊಂಡಿದ್ದ. ನಿನ್ನೆ ನನ್ನ ನ್ಯೂಸ್ ಮತ್ತು ವ್ಯೂಸ್ ಕಾರ್ಯಕ್ರಮಕ್ಕೆ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ನ ಬಂದಿದ್ದರು. ಅವರ ಪಕ್ಕದಲ್ಲಿ ಈ ಆಸಾಮಿ. ಅವನ ಕೈಯಲ್ಲಿ ಯಾವುದೋ ಪತ್ರಿಕೆಗಳ ಕಟ್ಟು. ಅದನ್ನು ನನಗೆ ಕೊಟ್ಟವನೇ, ನಾನು ಇಂಡಿಯನ್ ಎಕ್ಸಪ್ರೆಸ್ಸಿನಲ್ಲಿದ್ದೇನೆ. ಈ ಪತ್ರಿಕೆಯನ್ನು ತರುತ್ತಿದ್ದೇನೆ ಅಂದ. ನಾನು ಸ್ಟುಡಿಯೋ ಓಳಕ್ಕೆ ಹೋಗುವ ಆತುರದಲ್ಲಿ ಇದ್ದುದರಿಂದ ಪತ್ರಿಕೆಯನ್ನು ನೋಡಲಿಲ್ಲ. ಆದರೆ ಆತ ಬಿಡಲಿಲ್ಲ.
''ನಾನು ನಿಮ್ಮ ಬಗ್ಗೆ ಬರೆದಿದ್ದೇನೆ. ನೋಡಿ" ಎಂದು ಪುಟ ತೆಗೆದು ತೋರಿಸಿದ.
ಅಲ್ಲಿ ತಾನು ಕೆಲಸಕ್ಕಾಗಿ ಪಡುತ್ತಿರುವ ಪಡಪಾಟಲನ್ನು ವಿವರಿಸಿದ್ದ. ಹಾಗೆ ಜಾತಿಯ ಕಾರಣಕ್ಕೆ ಶಶಿಧರ್ ಭಟ್ಟರು ನನಗೆ ಕೆಲಸ ಕೊಡಲಿಲ್ಲ ಎಂದು ಬರೆದಿದ್ದ. ಹಾಗೆ ಆ ಸಾಲು ನಾನು ಜಾತಿಯವಾದಿ ಎಂಬಂತೆ ಅರ್ಥವನ್ನು ಕೊಡುತ್ತಿತ್ತು. ನಾನು ಇದನ್ನು ನೋಡಿದವನು ಯಾವ ಪ್ರತಿಕ್ರಿಯೆಯನ್ನು ನೀಡಲಿಲ್ಲ.
ನಾನು ಸ್ಟುಡಿಯೋದ ಒಳಕ್ಕೆ ಹೋದ ಮೇಲೆ ನನ್ನ ಸಹಾಯಕರಿಗೆ ಅವನ ಪತ್ರಿಕೆಯ ಪ್ರತಿಗಳನ್ನು ನೀಡಿ ಅದನ್ನು ಕಚೇರಿಯಲ್ಲಿ ಹಂಚಿ ಎಂದನಂತೆ !
ಇಂದು, ಅಂದರೆ ಶುಕ್ರವಾರ ಮಧ್ಯಾನ್ಹದ ಊಟಕ್ಕೆ ಪ್ರೆಸ್ ಕ್ಲಬ್ಬಿಗೆ ಹೋಗಿದ್ದೆ. ಅಲ್ಲಿ ಇದೇ ಬೇಳೂರು ಗೋಪಾಲಕೃಷ್ಣ, ಮತ್ತು ರೇಣುಕಾಚಾರ್ಯ ಇದ್ದರು. ಪತ್ರಿಕಾಗೋಷ್ಟಿ ಮುಗಿದ ಮೇಲೆ ಗೋಪಾಲಕೃಷ್ಣ ನನ್ನ ಬಳಿ ಬಂದು ಮಾತನಾಡಿದರು. ಪಕ್ಕದಲ್ಲಿ ಇದೇ ಮನುಷ್ಯ !
ನನ್ನ ಜೊತೆಗಿದ್ದ ಇನ್ನೊಬ್ಬ ಪತ್ರಕರ್ತರು ಹೇಳಿದರು. ಈ ವ್ಯಕ್ತಿ ಸಾಗರ ಮತ್ತು ಸೊರಬದ ಶಾಸಕರ ಜೊತೆ ಸದಾ ಇರುತ್ತಾನೆ ಅಂತ. ಪತ್ರಿಕೋದ್ಯಮಿಯಾದವನು ರಾಜಕಾರಣಿಗಳ ಚೇಲಾ ಆದರೆ ಆತ ಪತ್ರಿಕೋದ್ಯಮಿಯಾಗಿ ಮುಂದುವರಿಯಬಾರದು ಎಂದು ನಂಬಿದವನು ನಾನು. ಆದರೆ ಈಗ ನಮ್ಮ ಪತ್ರಿಕೋದ್ಯಮಿಗಳು ರಾಜಕಾರಣಿಗಳ ಜೊತೆ ಸಂಬಂಧ ಬೆಳೆಸುತ್ತಿದ್ದಾರೆ. ಒಮ್ಮೆ ಸಂಬಂಧ ಬೆಳಸಿದ ಮೇಲೆ ಪತ್ರಿಕೋದ್ಯಮವನ್ನು ಬಿಟ್ಟು ಹೋಗುವುದಿಲ್ಲ. ಈ ಕಾರಣದಿಂದಲೇ ತುಂಬಾ ವೈಯಕ್ತಿಕವಾದ ಈ ಠಿಪ್ಪಣಿಯನ್ನು ಬರೆದಿದ್ದೇನೆ.
ಈಗ ನಾನು ಹೇಳಿದ ಹುಡುಗನ ಹೆಸರು ವೆಂಕಟೇಶ ಸಂಪ. ಆತ ಸಾಗರದವನು.

Friday, January 2, 2009

ಬದುಕು ಮತ್ತು ಆತ್ಮಹತ್ಯೆಯ ಸುತ್ತ.....!


ಹೊಸ ವರ್ಷದ ಮೊದಲ ದಿನ. ನಮ್ಮ ಸ್ನೇಹಿತರೊಬ್ಬರು ಹೇಳಿದರು,
ನಿಮಗೆ ಗೊತ್ತಲ್ಲ, ಅವರು ನಿನ್ನೆ ಆತ್ಮಹತ್ಯೆಗೆ ಯತ್ನ ನಡೆಸಿದರಂತೆ !
ನನಗೆ ಈ ಸುದ್ದಿಯಿಂದ ಆಘಾತವಾಗಲಿಲ್ಲ. ಬದಲಾಗಿ ಪಾಪ ಅನ್ನಿಸಿತು. ಯಾಕೆ ಹೀಗೆ, ಅವರು ಆತ್ಮಹತ್ಯೆಗೆ ಕಾರಣಗಳೇ ಇರಲಿಲ್ಲವಿಲ್ಲ ಎಂದು ಅನ್ನಿಸಿತು. ಈ ಸುದ್ದಿಯನ್ನು ತಿಳಿಸಿದವರು, ಆವರು ಆತ್ಮಹತ್ಯೆಗೆ ಯತ್ನ ನಡೆಸಿದ್ದಕ್ಕೆ ತಮ್ಮದೇ ಆದ ಕಾರಣಗಳನ್ನು ನೀಡತೊಡಗಿದರು. ಆಗ ನಾನು ಅವರಿಗೆ ಹೇಳಿದೆ.
"ನೋಡಿ ನಿಜವಾಗಿ ಹೇಳುವುದಾದರೆ ಆತ್ಮಹತ್ಯೆಗೆ ಕಾರಣಗಳೇ ಇರುವುದಿಲ್ಲ. ಯಾರು ಇಂತಹ ಕೃತ್ಯಕ್ಕೆ ಯತ್ನ ನಡೆಸುತ್ತಾರೋ ಅವರು ಕಾರಣಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ತಾವು ಸೃಷ್ಟಿಸಿಕೊಂಡ ಕಾರಣಗಳನ್ನು ಸತ್ಯ ಎಂದು ನಂಬಿ ಇಂಥಹ ಕೃತ್ಯಕ್ಕೆ ಕೈಹಾಕುತ್ತಾರೆ. ಹಾಗೆ ಇಂಥಹ ಘಟನೆ ನಡೆದ ಮೇಲೆ, ಜನ ಸುಮ್ಮನಿರುವುದಿಲ್ಲ. ಅವರೂ ಸಹ ಕಾರಣಗಳನ್ನು ಸೃಷ್ಟಿಸುತ್ತ ಅದನ್ನು ನಂಬುತ್ತ ಅದನ್ನೇ ಪ್ರಚಾರ ಮಾಡುತ್ತ ಇರುತ್ತಾರೆ."
ಪ್ರಾಯಶಃ ಪ್ರತಿಯೊಬ್ಬರಿಗೂ ಬದುಕಿನಿಂದ ವಿಮುಖವಾಗುವ, ಓಡಿ ಹೋಗುವ ಮನಸ್ಥಿತಿ ಇದ್ದೇ ಇರುತ್ತದೆ. ಒಂದಲ್ಲ ಒಂದು ಕ್ಷಣದಲ್ಲಿ ಪ್ರತಿಯೊಬ್ಬರೂ ಆತ್ಮಹತ್ಯೆಯ ಬಗ್ಗೆ ಯೋಚಿಸಿಯೇ ಇರುತ್ತಾರೆ. ಆದರೆ ದುರ್ಬಲ ಕ್ಷಣದಲ್ಲಿ ಬರುವ ಇಂತಹ ಆಲೋಚನೆಗಳಿಂದ ಹೊರಬರುವ ಶಕ್ತಿ ಬಹಳಷ್ಟು ಜನರಿಗೆ ಇರುತ್ತದೆ. ಬಹಳಷ್ಟು ಜನರಿಗೆ ಇರುವುದಿಲ್ಲ. ಈ ಸಂದರ್ಭದಲ್ಲಿ ಕವಿ ರಾಮಯ್ಯ ಬಹಳ ವರ್ಷಗಳ ಹಿಂದೆ ಬರೆದ್ ಸಣ್ಣ ಕವನವೊಂದು ನೆನಪಾಗುತ್ತದೆ.
ನಾನು ಆತ್ಮ ಹತ್ಯೆಗೆ ಕೊಟ್ಟುಕೊಳ್ಳುವ ಕಾರಣಗಳು
ಕಾರಣಗಳೇ ಅಲ್ಲ ಎಂಬ ಸಂಶಯ
ನನ್ನನ್ನು ಬದುಕಿ ಉಳಿಸಿದೆ
ಬಹಳಷ್ಟು ಜನರನ್ನು ಅತ್ಮಹತ್ಯೆ ಒತ್ತಡದಿಂಡ ಇಂಥಹ ಸಂಶಯವೇ ಬದುಕಿ ಉಳಿಸಿರಬಹುದು. ಆದರೆ ಬದುಕಿನ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಾ ? ಖಂಡಿತ ಅಲ್ಲ. ಆತ್ಮಹತ್ಯೆ ಎನ್ನುವುದು ಪಲಾಯನ ಎಂದು ಹೇಳಲಾಗುತ್ತದೆ. ಇದು ಪಲಾಯನ ಮಾತ್ರವಲ್ಲ, ಇರುವುದನ್ನು ಎದುರಿಸಲಾಗದೇ ಗೊತ್ತಿಲ್ಲದೆಡೆಗೆ ಹೋಗುವ ಷಂಡತನ ಕೂಡ.
ನಮಗೆ ಬದುಕುವುದು ಗೊತ್ತಿಲ್ಲ, ಅನುಭವಿಸುವುದು ಗೊತ್ತಿಲ್ಲ. ಯಾಕೆಂದರೆ ಬದುಕುವುದೆಂದರೆ ಪ್ರತಿ ಕ್ಷಣವನ್ನು ನಮ್ಮದಾಗಿಸಿಕೊಳ್ಳುವುದು. ಹಾಗೆ ಸದಾ ವರ್ತಮಾನದಲ್ಲಿ ಇರುತ್ತಲೇ, ವರ್ತಮಾನದ ಭಾಗವಾಗುತ್ತ ಹೋಗುವುದು. ಆದರೆ ನಮಗೆ ವರ್ತಮಾನ ಎಂಬುದೇ ಇಲ್ಲ. ಯಾಕೆಂದರೆ ನಾವು ವರ್ತಮಾನದಲ್ಲಿ ಇರುವುದೇ ಇಲ್ಲ.
ನಮ್ಮ ಊರಿನಲ್ಲಿ ಗಡ್ಲಾ ರಾಮ ಎಂಬ ವ್ಯಕ್ತಿಯೊಬ್ಬನಿದ್ದ. ಆತ ಮಂತ್ರವಾದಿ. ಊರಿನಲ್ಲಿ ಭೂತ ಬಿಡಿಸುವುದು, ಮಾಟಾ ಮಂತ್ರ ಮಾಡುವುದು ಅವನ ಬದುಕು. ಆತ ಹಣೆಯ ಮೇಲೆ ದೊಡ್ಡ ಇಟ್ಟುಕೊಂಡಿರುತ್ತಿದ್ದ. ಹಾಗೆ ದೊಡ್ಡನೆಯ ಮುಂಡಾಸು. ಮಂತ್ರವಾದಿಯಾದ ಈತ ಮದುವೆಯಾಗಿರಲಿಲ್ಲ.
ಮಂತ್ರ ತಂತ್ರ ಮಾಡೋರು ಮದುವೆಯಾಗಬಾರದು ಓಡೇರೆ ಎನ್ನುತ್ತಿದ್ದ ಗಡ್ಲಾ ರಾಮ. ಆದರೆ ಆತನಿಗೆ ಬೇರೆ ಬೇರೆ ಊರುಗಳಲ್ಲಿ ಪ್ರೇಯಸಿಯರು ಇದ್ದ ಸುದ್ದಿಗಳಿದ್ದವು. ಈ ಬಗ್ಗೆ ಪ್ರಶ್ನಿಸಿದರೆ ಆತ ಸುಮ್ಮನೆ ನಗುತ್ತಿದ್ದ. ಹಾಗೆ ಖಾಸಗಿಯಾಗಿ ಆತ ಮಾತನಾಡುತ್ತಿದ್ದುದು ಸೊಂಟದ ಕೆಳಗಿನ ವಿಷಯಗಳೇ. ಆತ ತನ್ನ ಬಟ್ಟೆಯನ್ನು ತಾನೇ ಒಗೆದುಕೊಳ್ಳುತ್ತಿದ್ದ. ಅಡುಗೆಯನ್ನು ತಾನೇ ಮಾಡಿಕೊಳ್ಳುತ್ತಿದ್ದ.
ಆತನ ಜೀವನ ಪ್ರೀತಿ ನನಗೆ ನೆನಪಾಗುತ್ತಿದೆ. ಎಂದೂ ಆತ ಸಿಟ್ಟು ಮಾಡಿಕೊಂಡಿದ್ದು, ಬೇಸರ ಪಟ್ಟಿದ್ದು ನಾನು ನೋಡಿಯೇ ಇಲ್ಲ. ಆತ ಸಾಯುವವರೆಗೂ ಹಾಗೆ ಇದ್ದ. ಸಾಯುವ ದಿನವೂ ಆತ ತನ್ನ ಬಟ್ಟೆಯನ್ನು ತಾನೇ ಒಗೆದುಕೊಂಡ. ಅಂದೂ ಸಹ ಟೋಮೆಟೋ ಸಾರು ಅನ್ನ ಮಾಡಿ ಊಟ ಮಾಡಿದ. ಎಲ್ಲರ ಜೊತೆ ನಕ್ಕ, ನಗುತ್ತಲೇ ಹೊರಟೂ ಹೋದ,
ಈಗಲೂ ಪ್ರತಿ ಕ್ಷಣವನ್ನೂ ಆತ ಅನುಭವಿಸುತ್ತಿದ್ದ ರೀತಿ ನನಗೆ ನೆನಪಾಗುತ್ತದೆ. ನಿನ್ನೆಯ ಬಗ್ಗೆ ಯೋಚಿಸದ, ನಾಳೆಯ ಬಗ್ಗೆ ತಲೆ ಕೆಡಿಸಿಕೊಳ್ಳದ ವ್ಯಕ್ತಿ ಆತ. ಬದುಕಿನ ಬಹುದೊಡ್ದ ಆಧ್ಯಾತ್ಮಿಕತೆ ಎಂದರೆ ಇದೇ ಇರಬಹುದೆ ? ಗೊತ್ತಿಲ್ಲ.
ನನ್ನ ಮುಂದಿರುವ ಸ್ನೇಹಿತರು ಆತ್ಮಹತ್ಯೆಗೆ ಯತ್ನ ನಡೆಸಿದವರ ಬಗ್ಗೆ ಇನ್ನಷ್ಟು ಕೊರೆಯುತ್ತಿದ್ದರು. ಬದುಕಿನಲ್ಲಿ ಶಿಸ್ತು ಇರಲಿಲ್ಲ ಸಾರ್, ಯೋಚನೆಯಲ್ಲೂ ಶಿಸ್ತು ಇರಲಿಲ್ಲ, ಹೀಗೆ ಅವರ ಮಾತು ಮುಂದುವರಿಯುತ್ತಿತ್ತು. ಹಾಗೆ ಆತ್ಮಹತ್ಯೆಯ ಯತ್ನದ ಸುತ್ತ ಮಾತುಗಳೇ ಮಾತುಗಳು !
ನಾನು ಗಡ್ಲಾ ರಾಮ ಎಂಬ ಮಲೇನಾಡಿನ ಸಾಮಾನ್ಯ ಮಂತ್ರವಾದಿಯ ಬಗ್ಗೆಯೋಚಿಸುತ್ತಿದ್ದೆ. ಆತನೇ ನನಗೆ ಗೊತ್ತಿಲ್ಲದ ಹಾಗೆ ಬದುಕುವುದನ್ನು ಕಲಿಸರಬೇಕು, ಜೀವನ ಪ್ರೀತಿಯನ್ನು ತುಂಬಿರಬೇಕು ಎಂದು ಅನ್ನಿಸತೊಡಗಿತು....

Thursday, January 1, 2009

ಬಾ ಬಂದುಬಿಡು ಸುಮ್ಮನೆ......


ಕಳೆದ ಹೋದ ನೀನು ಮತ್ತೆ ಇಲ್ಲಿ ಬರುವೆಯಾ ?
ಹಳೆಯ ಕನಸು, ಕ್ರೂರ ನೆನಪು ಎಲ್ಲ ಹೊತ್ತು ತರುವೆಯಾ ?
ನೀನು ಬಿಟ್ಟು ಹೋದುದೆಲ್ಲ ಇಲ್ಲಿ ಉಳಿಯಬಲ್ಲದೆ ?
ನೀನು ಕೊಟ್ಟು ಹೋದುದೆಲ್ಲ, ಇಲ್ಲಿ ತೆರೆಯಬಲ್ಲುದೆ ?
ಹೋಗು ಮತ್ತೆ ಬರಬೇಡ ಗೆಳತಿ,
ನನಗೆ ನಿನ್ನ ನೆನಪು ಮಾಸುವುದಿಲ್ಲ. ಎದೆಯಲ್ಲಿ ನೋವು ಮಡುಗಟ್ಟಿದೆ. ಹೀಗೆ ಬಂದವಳು ಬಂದಂತೆ ಹೊರಟೆ. ಆದರೆ ಬಂದು ಹೋಗುವುದರ ನಡುವೆ ? ನೀನು ಬರುವುದು ಗೊತ್ತಿತ್ತು. ಹೋಗುವುದು ತಿಳಿದಿತ್ತು. ಆದರೆ ಬಂದು ಹೋಗುವುದರ ನಡುವೆ ಎಲ್ಲವೂ ನಡೆದು ಹೋಯಿತು !
ನಿನ್ನನ್ನು ಎಷ್ಟೂ ಪ್ರೀತಿಯಿಂದ ನಿನ್ನನ್ನು ನಾವು ಸ್ವಾಗತಿಸಿದ್ದೆವು. ನಿನ್ನ ಸ್ವಾಗತಕ್ಕೆ ಕನಸುಗಳ ಚಪ್ಪರ ಹಾಕಿದ್ದೆವು. ಈ ಚಪ್ಪರದ ಸುತ್ತ ಪ್ರೀತಿ ಪ್ರೇಮದ ಬೇಲಿ ಹಾಕಿದ್ದೆವು. ಆದರೆ ನೀನು ಬಂದವಳು ಬಂದಂತೆ ಹೋಗಲಿಲ್ಲ. ಹೋಗುವಾಗ ಚೆಪ್ಪರವನ್ನೇ ಕೆಡವಿಬಿಟ್ಟೆ. ಬೇಲಿಯನ್ನೇ ಮುರಿದು ಬಿಟ್ಟೆ. ನಿನ್ನ ಹೆಜ್ಜೆಯ ಗುರುತಿನಲ್ಲಿ ರಕ್ತದ ಕಲೆ. ಮಾಸದ ಗುರುತುಗಳು.
ಯಾರನ್ನೂ ಕಳುಹಿಸುವುದಿದ್ದರೂ ಹೋಗಿ ಬಾ ಎಂದು ಹೇಳುವುದು ನಮ್ಮ ವಾಡಿಕೆ. ಆದರೆ ನೀನಗೆ ಹೋಗಿ ಬಾ ಎಂದು ನಾನು ಹೇಗೆ ಹೇಳಲಿ ?
ಅಲ್ಲಿ ನೋಡು ಅಲ್ಲಿ ಬರುತ್ತಿದ್ದಾಳೆ. ಇನ್ನೊಬ್ಬ ಗೆಳತಿ. ಬಾ ನಿನಗೆ ಸ್ವಾಗತ. ಆದರೆ ನನ್ನದೊಂದು ಮನವಿ. ದಯವಿಟ್ಟು ಕನಸುಗಳ ಚೆಪ್ಪರವನ್ನು ಕಡವಬೇಡ. ಪ್ರೀತಿ ಪ್ರೇಮದ ಬೇಲಿಯನ್ನು ಮುರಿಯಬೇಡ. ಬಾ ಬಂದು ಬಿಡು ಸುಮ್ಮನೆ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...