Wednesday, September 23, 2009

ಅಂತರ- ಅತ್ಮ- ಕರಕರೆ............!

ನಾನು ಅವರ ಎದುರು ಕುಳಿತಿದ್ದೆ. ಅವರು ಮಾತನಾಡುತ್ತಲೇ ಇದ್ದರು.
"ನನ್ನ ಹೆಂಡತಿಯ ಆರೋಗ್ಯ ಸರಿಯಿಲ್ಲ. ಅವಳು ಮನೆಯಲ್ಲಿ ಒಬ್ಬಳೇ. ನಾವು ಫ್ಲಾಟ್ ಒಂದರಲ್ಲಿ ವಾಸಿಸುತ್ತಿದ್ದೇವೆ. ಇದನ್ನು ಬಿಟ್ಟರೆ ನನಗೆ ಬೇರೆ ಆಸ್ತಿಯಿಲ್ಲ."
ಅವರು ಮಧ್ಯೆ ಮಧ್ಯೆ ತಮಗೆ ಬರುತ್ತಿದ್ದ ದೂರವಾಣಿ ಕರೆಗಳಿಗೆ ಉತ್ತರಿಸುತ್ತಿದ್ದರು. ಹಾಗೆ ಬಾಗಿಲ ಹತ್ತಿರ ನಿಂತಿದ್ದ ಕೆಲವು ಅಧಿಕಾರಿಗಳು ಆಗಾಗ ಬಗ್ಗಿ ನೋಡಿ ಹೋಗುತ್ತಿದ್ದರು.
"ನನಗೆ ಸಕ್ಕರೆ ಕಾಯಿಲೆ ಬಂದು ನಲವತ್ತು ವರ್ಷ ಆಯ್ತು. ಆಗಿನಿಂದ ಈ ರೋಗದ ಜೊತೆ ಬದುಕುತ್ತಿದ್ದೇನೆ. ಉಳಿದಂತೆ ಆರೋಗ್ಯದ ಸಮಸ್ಯೆ ಇಲ್ಲ. ನನ್ನ ದಿನಚರಿಯನ್ನು ನಾನು ಹಾಗೆ ರೂಪಿಸಿಕೊಂಡಿದ್ದೇನೆ. ರಾತ್ರಿ ೧೦ ಗಂಟೆಗೆ ಮಲಗಿ ಬಿಡುತ್ತೇನೆ. ಟೀವಿಯನ್ನು ಹೆಚ್ಚಾಗಿ ನೋಡುವುದಿಲ್ಲ."
ಅವರು ತಮ್ಮ ಮಾತನ್ನು ಹೀಗೆ ಮುಂದುವರಿಸಿದ್ದರು.ತಮ್ಮ ವೈಯಕ್ತಿಕ ಬದುಕಿನಿಂದ ತಮ್ಮ ವೃತ್ತಿಯವರೆಗೆ ಅವರ ಮಾತಿನ ಹರಿವು ಇತ್ತು.
"ನನಗೆ ಮಕ್ಕಳಿಲ್ಲ. ನಾವು ಇಬ್ಬರೇ " ಎಂದರು ಅವರು.
ಇವರು ಸಂತೋಷ ಹೆಗ್ಡೆ. ಕರ್ನಾಟಕದ ಲೋಕಾಯುಕ್ತರು. ನಾನು ಅವರಿಗೆ ಹೇಳಿದೆ.
"ನೀವು ರಾಜ್ಯಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗ ಯಾರೂ ನೀವು ಹೀಗೆ ಕೆಲಸ ಮಾಡುತ್ತೀರಿ ಎಂದುಕೊಂಡಿರಲಿಲ್ಲ. ಅದಕ್ಕೆ ಬಹುಮುಖ್ಯ ಕಾರಣ ನಿಮಗಿಂತ ಮೊದಲು ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ವೆಂಕಟಾಚಲ. ಅವರು ಲೋಕಾಯುಕ್ತರ ಹುದ್ದೆ ಎಂತಹುದು ಎಂಬುದನ್ನು ತೋರಿಸಿಕೊಟ್ಟಿದ್ದರು. ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನರಾಗಿದ್ದ ಅವರು ತಾವೇ ಧಾಳಿಯ ನೇತೃತ್ವ ಒಹಿಸುತ್ತಿದ್ದರು. ಹಲವು ಸಂದರ್ಭಗಳಲ್ಲಿ ಪತ್ರಕರ್ತರನ್ನು ಮಾಧ್ಯಮದವರನ್ನು ಕರೆದೊಯ್ಯುತ್ತಿದ್ದರು. ಹೀಗೆ ತಮ್ಮದೇ ಆದ ಛಾಪು ಮೂಡಿಸಿದ್ದವರು ಅವರು. ಹೀಗಾಗಿ ಅವರ ಸ್ಥಾನಕ್ಕೆ ಬರುವುದು ದೊಡ್ಡ ಸವಾಲೇ ಆಗಿತ್ತು ಅಲ್ಲವಾ ?"
ಅವರು ಸುಮ್ಮನೆ ನಕ್ಕರು. ನನಗೆ ನಾನೇ ಧಾಳಿಯ ನೇತೃತ್ವ ಒಹಿಸಿಕೊಳ್ಳುವುದರಲ್ಲಿ ಅಂತಹ ನಂಬಿಕೆ ಇಲ್ಲ. ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡುವುದು ನಮ್ಮ ಕೆಲಸ ಎಂದರೆ ಹೆಗ್ಡೆ.
"ನಾನು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗ ನನಗೆ ಅನುಕೂಲವಾದ ಹಲವು ಅಂಶಗಳಿದ್ದವು. ಬಹಳ ವರ್ಷ ಕರ್ನಾಟಕದ ಹೊರಗೆ ಇದ್ದುದರಿಂದ ನನಗೆ ಇಲ್ಲಿ ಪರಿಚಯದವರು ಹೆಚ್ಚಾಗಿ ಇರಲಿಲ್ಲ. ಇದು ನನಗೆ ಕೆಲಸ ಮಾಡುವುದಕ್ಕೆ ಅನುಕೂಲವಾಯಿತು. "
ಸಂತೋಷ ಹೆಗ್ಡೆ ಅವರು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗ ಅವರು ಅಧಿಕಾರಶಾಹಿಗಳಿಂದ, ರಾಜಕಾರಣಿಗಳಿಂದ ತೊಂದರೆ ಅನುಭವಿಸಬೇಕಾಯಿತು. ಅವರು ಬಯಸಿದ ಅಧಿಕಾರಿಗಳನ್ನು ನೀಡಲು ಸರ್ಕಾರ ಹಿಂದೇಟು ಹಾಕಿತು. ತಾವು ಕೊಟ್ಟ ಅಧಿಕಾರಿಗಳನ್ನೇ ತೆಗೆದುಕೊಳ್ಳುವಂತೆ ಅವರ ಮನವೊಲಿಸಲು ಯತ್ನ ನಡೆಸಿತು. ಆದರೆ ಅವರು ಇದ್ಯಾವುದಕ್ಕೂ ಬಗ್ಗಲಿಲ್ಲ. ತಾವು ಬಯಸಿದ ಅಧಿಕಾರಿಗಳನ್ನೇ ಪಡೆದರು. ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಅವರಿಂದ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದರು. ಹಲವರ ಬಣ್ಣ ಬಯಲಾಯಿತು. ಆದರೆ ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವ ಸರ್ಕಾರದ ಭರವಸೆ ಮಾತ್ರ ಈಡೇರಲಿಲ್ಲ. ಅಧಿಕಾರಕ್ಕೆ ಬರುವುದಕ್ಕೆ ಮೊದಲು ಲೋಕಾಯುಕ್ತರಿಗೆ ಪರಮಾಧಿಕಾರ ಇರಬೇಕು ಎಂದು ಭಾಷಣ ಮಾಡಿದ್ದ ಬಿಜೆಪಿ ನಾಯಕರು ತಮ್ಮ ನಿಲುವು ಬದಲಿಸಿದರು. ಟೊಪ್ಪಿ ತಿರುಗಿ ಹಾಕಿದರು. ಗಣಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿದ ವರದಿಯನ್ನು ತಲೆ ದಿಂಬಾಗಿ ಮಾತ್ರ ಉಪಯೋಗಿಸತೊಡಗಿದರು.
ಹಾಗೆ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದ ಅಧಿಕಾರಿಗಳನ್ನು ಉಳಿಸಲು ಅಧಿಕಾರಶಾಹಿ ಯತ್ನ ನಡೆಸಿದಾಗಲೆಲ್ಲ ಈ ಅಧಿಕಾರಸ್ಥ ರಾಜಕಾರಣಿಗಳು ಜಾಣ ಮೌನ ಪ್ರದರ್ಶಿಸಿದರು.
ಈಗ ನನಗೆ ಲೋಕಾಯುಕ್ತರು ಅಸಹಾಯಕರಾಗಿ ಕಾಣುತ್ತಾರೆ. ಭ್ರಷ್ಟಚಾರದ ವಿರುದ್ಧ ಅವರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರದಿಂದ ಬೆಂಬಲ ದೊರಕುತ್ತಿಲ್ಲ. ಕೋಟ್ಯಾಂತರ ರೂಪಾಯಿ ಹಣ ಹೊಡೆದ ಭಾರಿ ಮನೆ ಆಸ್ತಿ ಮಾಡಿದ ಅಧಿಕಾರಿಗಳ ಭಾವಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾದಾಗ ರಾಜಕಾರಣಿಗಳು ಮತ್ತು ಇತರೇ ಅಧಿಕಾರಿಗಳು ಚೆನ್ನಾಗಿ ಹಣ ಮಾಡಿದ್ದಾನೆ ಎಂದು ಮನಸ್ಸಿನಲ್ಲೇ ಸಂಭ್ರಮಿಸುವ ವಾತಾವರಣ ಈಗ ನಿರ್ಮಾಣವಾಗಿದೆ. ಲೋಕಾಯುಕ್ತರ ಬಲೆಗೆ ಬೀಳುವುದು ಸಂಭ್ರಮ ಪಡುವ ವಿಚಾರವಾಗಿದೆ.
ಒಬ್ಬ ರಾಜಕಾರಣಿಗೆ, ಅಧಿಕಾರಿಗೆ ಸಣ್ಣ ಲಜ್ಜೆ ಎನ್ನುವುದು ಇರಬೇಕಾಗುತ್ತದೆ. ಮಾನ ಮರ್ಯಾದೆಗೆ ಅಂಜುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಆದರೆ ಇಂದು ಲಜ್ಜೆ ಎನ್ನುವುದು ಎಲ್ಲರ ಮನಸ್ಸಿನಿಂದ ಹೊರಟು ಹೋಗಿದೆ. ಜನ ಕೂಡ ಇಂತಹ ಸ್ಥಿತಿಯನ್ನು ತಲುಪಿಬಿಟ್ಟಿದ್ದಾರೆ. ಲಂಚ ತೆಗೆದುಕೊಳ್ಳಲಿ. ನಮ್ಮ ಕೆಲಸ ಮಾಡಿಕೊಡಲಿ ಎಂಬ ಮನಸ್ಥಿತಿ ಸಾರ್ವಜನಿಕರದು. ಒಬ್ಬ ವ್ಯಕ್ತಿಗೆ ಹಾಗೆ ಸಮಾಜಕ್ಕೆ ಅಂತರಾತ್ಮ ಎನ್ನುವುದು ಇರಬೇಕು. ಅದು ಆಗಾಗ ನಮ್ಮನ್ನು ಎಚ್ಚರಿಸುತ್ತಿರಬೇಕು.ತಪ್ಪು ಮಾಡಲು ಹೊರಟಾಗಲೇ ಅಂತರಾತ್ಮ ಕೈ ಹಿಡಿದು ಹಿಂದಕ್ಕೆ ಎಳೆಯಬೇಕು. ಹಾಗೆ ಬದುಕುವುದಕ್ಕೆ ಕನಿಷ್ಟ ನೈತಿಕ ಪ್ರಜ್ನೆಯಾದರೂ ಇರಬೇಕು.
ಈಗ ನಿಮ್ಮ ಮುಂದೆ ನಮ್ಮ ಅಧಿಕಾರಸ್ಥರ ಮುಖ ಬರಲಿ. ಒಂದೊಂದೇ ಮುಖವನ್ನು ನೋಡಿ. ಇವರಿಗೆ ಅತ್ಮ ಎನ್ನುವುದು ಇದೇ ಎಂದು ಅನ್ನಿಸುತ್ತಾ ? ಇವರೆಲ್ಲ ಅಂತರಾತ್ಮದ ಮಾತು ಕೇಳುತ್ತಾರೆ ಎಂದು ಅನ್ನಿಸುತ್ತಾ ?ಇಲ್ಲ, ಇವರಿಗೆ ಅಂತರಾತ್ಮನ ಕರೆ ಬರೀ ಕರಕರೆ. ಇವರೆಲ್ಲ ಕಮೀಷನ್ ಏಜೆಂಟರಂತೆ ಕಾಣುತ್ತಾರೆ. ಕಮೀಷನ್ ಗಾಗಿ ರಾಜಕಾರಣ ಮಾಡುವವರು. ಕಮೀಷನ್ನಿಗಾಗಿ ಬದುಕುವವರು. ಇಂತವರ ನಡುವೆ ಸಂತೋಷ ಹೆಗ್ಡೆ ಅಪರೂಪದವರಾಗಿ ಕಾಣುತ್ತಾರೆ.

2 comments:

Anil Bharadwaj said...

its true sir. our leaders never learn to build the society. they grew for their selfish needs. thousands of santhosh hedges may come. but these fellows will never change.

http://santasajoy-vasudeva.blogspot.com said...

ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಸರ್.ಕೆಲವು ಅಸಹ್ಯಗಳನ್ನು ಸಾಮಾನ್ಯ ಮೂಕನಾಗಿ ನೋಡುವ ಪರಿಸ್ಥಿತಿ ಇದೆ.ಸಂತೋಷ್ ಹೆಗ್ದೆಯಂತಹ ಅಧಿಕಾರಿಗಳು ಇಂತಹ ಮೌನವನ್ನು ಮಾತಾಗಿಸುವ ಪ್ರಯತ್ನಮಾಡುತ್ತಿರುವುದು ಅತ್ಯಂತ ಖುಷಿ ತರುವ ಸಂಗತಿ.ಅಂತರಾತ್ಮ ಅನ್ನುವುದು ಈಗೀಗ ಎಲ್ಲ ರಂಗದಲ್ಲೂ ತನ್ನ ಅಸ್ತಿತ್ವ ಕಳೆದುಕೊಂಡಿರುವ ಅಂಶವಾಗಿದೆ ಅನ್ನುವುದೇ ಅತ್ಯಂತ ಖೇದದ ವಿಷಯ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...