Friday, December 17, 2010

ಮುರುಘಾ ಶ್ರೀ,ಪತ್ರಕರ್ತರು ಮತ್ತು ನಾಯಿ ಎಂಬ ಪ್ರಾಣಿ...!

ಚಿತ್ರದುರ್ಗದ ಮುರಘಾಶ್ರೀ ನಾಡಿನ ಕ್ರಾಂತಿಕಾರಿ ಸ್ವಾಮಿಜಿ ಎಂದೇ ಹೆಸರು ಪಡೆದವರು. ಸನ್ಯಾಸದ ಪರಂಪರಾಗತ ಮೌಲ್ಯಗಳನ್ನು ತಿರಸ್ಕರಿಸಿ ಸಮಾನತೆಯ ಕನಸು ಹೊತ್ತವರು. ಪ್ರತಿ ವರ್ಷ ಅವರು ನೀದುವ ಪ್ರಶಸ್ತಿ ಕೂಡ ಇಂತಹ ಸಾಮಾಜಿಕ ಕ್ರಾಂತಿಯ ಅವರ ಕನಸನ್ನು ನನಸು ಮಾಡುವ ದಿಸೆಯಲ್ಲಿ ಇಡುತ್ತಿರುವ ಹೆಜ್ಜೆ ಎಂದೇ ನಾಡಿನ ಜನ ನಂಬಿಕೊಂಡಿದೆ. ಹಾಗೆ ಎಲ್ಲ ಜಾತಿ ಸಮುದಾಯಗಳಿಗೆ ಧಾರ್ಮಿಕ ನಾಯಕತ್ವವನ್ನು ನೀಡುವ ಕೆಲಸವನ್ನು ಅವರು ಮಾಡುತ್ತ ಬಂದಿದ್ದಾರೆ.
ಅವರ ಎಲ್ಲ ರೀತಿಯ ಕ್ರಾಂತಿಯ ಹೆಜ್ಜೆಗಳಿಗೆ ಮಾಧ್ಯಮಗಳು ಬೆಂಬಲ ನೀಡುತ್ತ ಬಂದಿವೆ. ಮಠ ಮಾನ್ಯರನ್ನು ಟೀಕಿಸುವ ಪತ್ರಿಕೆಗಳೂ ಸಹ ಮುರಾಘಾ ಶ್ರೀ ಅವರ ಬಗ್ಗೆ ಟೀಕಿಸಿ ಬರೆದ ಉದಾಹರಣೆಗಳು ಇಲ್ಲ. ಆದರೆ ಕಳೆದ ವಾರ ಸ್ವಾಮೀಜಿ ಅವರಿಗೆ ಮಾಧ್ಯಮದ ಮೇಲೆ ಸಿಟ್ಟು ಬಂದಿತ್ತು. ಅವರು ಪತ್ರಿಕೋದ್ಯಮಿಗಳನ್ನು ಕಾವಲು ನಾಯಿಗಳಾಗಬೇಕಾದವರು ಕೇವಲ ನಾಯಿಗಳಾಗಿದ್ದಾರೆ ಎಂದು ಅಣಿ ಮುತ್ತುಗಳನ್ನು ಉದುರಿಸಿ ಬಿಟ್ಟರು. ಹಾಗೆ ಪತ್ರಿಕೋದ್ಯಮಗಳಿಗೆ ನೀಡಬೇಕಾದ ಆಮಿಷಗಳ ಬಗ್ಗೆ ಪಟ್ಟಿ ನೀಡಿದರು. ಆದರೆ ಅವರ ಈ ಹೇಳಿಕೆಯ ಬಗ್ಗೆ ಪತ್ರಿಕೋದ್ಯಮಿಗಳು ಪ್ರತಿಭಟನೆ ವ್ಯಕ್ತಪಡಿಸಿದಾಗ ಸಾರಿ ಎಂದು ಹೇಳಿ ಕೈತೊಳೆದುಕೊಂಡು ಬಿಟ್ಟರು. ಸ್ವಾಮೀಜಿ ಅವರದೂ ಉಪ್ಪು ಖಾರ ತಿನ್ನುವ ದೇಹವಾದ್ದರಿಂದ ಪಾಪ ಕೋಪ ಬಂದಿತ್ತು ಎಂದು ಸುಮ್ಮನಾಗೋಣ ಎಂದು ಒಮ್ಮೆ ಅನ್ನಿಸಿದರೂ ಹಾಗೆ ಮಾಡಲು ಮನಸ್ಸು ಬರಲಿಲ್ಲ. ಯಾಕೆಂದರೆ ಅವರು ಯಾಕೆ ಪತ್ರಿಕೋದ್ಯಮಿಗಳನ್ನು ನಾಯಿ ಎಂದು ಕರೆದರು ಎಂಬ ಬಗ್ಗೆ ನಾವು ಆಲೋಚನೆ ಮಾಡಲೇಬೇಕಾಗಿದೆ.
ನಾಯಿಯ ನಿಷ್ಟೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಜೊತೆಗೆ ಅದು ಮನೆನಾಯಿ ಆಗಿದ್ದರೆ ಮನೆ ಕಾಯುತ್ತದೆ. ಬೀದಿ ನಾಯಿಯಾಗಿದ್ದರೆ ಬೀದಿಯನ್ನು ಕಾಯುತ್ತದೆ. ಜಾತಿ ನಾಯಿಯಾಗಿದ್ದರೆ ಅದಕ್ಕೆ ಒಳ್ಳೆಯ ಆಹಾರ ದೊರಕುತ್ತದೆ. ಬೀದಿ ನಾಯಿಯಾಗಿದ್ದರೆ ಬೀದಿಯಲ್ಲಿ ಬಿದ್ದಿದ್ದನ್ನು ತಿಂದುಕೊಂದು ಬಿದ್ದಿರುತ್ತದೆ. ಆದರೆ ಕಳ್ಳರನ್ನು ಕಂಡರೆ, ಅಪರಿಚತರು ಬಂದರೆ ಬೊಗಳುವುದನ್ನು ನಿಲ್ಲಿಸುವುದಿಲ್ಲ. ಹೀಗಾಗಿ ಅದು ಕಾವಲು ನಾಯಿಯೆಂಬ ಹಣೆ ಪಟ್ಟಿಯನ್ನು ಪಡೆಯಲಿ ಪಡೆಯದಿರಲಿ ಅದು ಕಾವಲು ಕೆಲಸವನ್ನು ನಿಲ್ಲಿಸುವುದಿಲ್ಲ. ಜೊತೆಗೆ ನಾಯಿಯ ಇನ್ನೊಂದು ಗುಣವೆಂದರೆ ಅದು ಅಪರಿಚತರನ್ನು ನಂಬುವುದಿಲ್ಲ. ಜೊತೆಗೆ ರೊಟ್ಟಿ ತುಂಡನ್ನು ಹಾಕಿ ಅದರ ಸ್ನೇಹ ಗಳಿಸುವುದು ಅಷ್ಟು ಸುಲಭವಲ್ಲ. ಯಾಕೆಂದರೆ ನಾಯಿ ಮನುಷ್ಯರನ್ನು ಅಷ್ಟು ಬೇಗ ನಂಬುವುದಿಲ್ಲ. ಅಪನಂಬಿಕೆಯೇ ನಾಯಿಯ ಮೂಲ ಗುಣ. ಹಾಗೆ ನಂಬಿಕೆ ಕೂಡ.
ಗೌರವಾನ್ವಿತ ಸ್ವಾಮೀಜಿಯವರು ಪತ್ರಕರ್ತರನ್ನು ಯಾವ ನಾಯಿಯ ಸಾಲಿಗೆ ಸೇರಿಸಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಅವರ ಮಾತಿನಲ್ಲಿ ರೊಟ್ಟಿ ಹಾಕಿಯೂ ನಾಯಿ ಕಚ್ಚಿದ ನೋವಿದೆ. ತಾವು ಪತ್ರಕರ್ತರನ್ನು ಕರೆದು ರೊಟ್ಟಿ ಹಾಕಿದರೂ ಅದು ತನ್ನ ಎದುರು ಬಾಲ ಅಲ್ಲಾಡಿಸುತ್ತಿಲ್ಲ ಎಂಬ ವಿಷಾಧವಿದೆ.ಆದರೆ ನಾಯಿಯ ಗುಣವೇ ಹಾಗೆ ಎಂಬುದನ್ನು ಕ್ರಾಂತಿಕಾರಿ ಸ್ವಾಮೀಜಿ ಅರ್ಥ ಮಾಡಿಕೊಳ್ಲದಿರುವುದು ಈ ನಾಡಿನ ದುರ್ದೈವ.
ಸ್ವಾಮೀಜಿ ಅವರು ಈ ನಾಯಿಯ ಆರೋಪ ಮಾಡುವುದಕ್ಕಿಂತ ಸ್ವಲ್ಪ ದಿನಗಳ ಮೊದಲು ಇನ್ನೊಂದು ಹೇಳಿಕೆಯನ್ನು ನೀಡಿದ್ದರು. ಅದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಹೇಳಿಕೆಯಾಗಿತ್ತು. ಭೂ ಹಗರಣಕ್ಕೆ ಸಿಕ್ಕು ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಬಂದ ಸಂದರ್ಭದಲ್ಲಿ ಅವರು ಯಡಿಯೂರಪ್ಪ ಈ ನಾಡಿನ ಅತ್ಯುತ್ತಮ ಮುಖ್ಯಮಂತ್ರಿ ಎಂದು ಸರ್ಟಿಫಿಕೇಟ್ ನೀಡಿದ್ದರು. ಅವರಿಗೆ ಮುಖ್ಯಮಂತ್ರಿಗಳ ಅವ್ಯವಹಾರದ ವಾಸನೆ ಬಂದಿರಲಿಲ್ಲ. ಪಾಪ, ಅವರಿಗೆ ಈ ವಾಸನೆ ಹಿಡಿಯುವ ಶಕ್ತಿ ಇರಲಿಲ್ಲ.ಅಂತಹ ಗುಣ ಇರುವುದು ನಾಯಿಗಳಿಗೆ ಮಾತ್ರ. ಆದರೆ ಪತ್ರಕರ್ತರು ನಾಯಿಗಳಾಗಿದ್ದರಿಂದ ನಾಯಿಗಳಿಗಿರುವ ವಾಸನಾ ಶಕ್ತಿ ಇದ್ದುದುರಿಂದ ಅವರು ಬಹುಬೇಗ ಅಕ್ರಮ ವ್ಯವಹಾರಗಳ ವಾಸನೆ ಹಿಡಿದು ಬಿಟ್ಟಿದ್ದರು. ಇದರಿಂದ ಸ್ವಾಮೀಜಿಗಳಿಗೆ ಬೇಸರವಾಗಿದ್ದರೂ ಆಗಿರಬಹುದು. ತಾವು ಮೆಚ್ಚುವ ಮುಖ್ಯಮಂತ್ರಿಗಳನ್ನು ಈ ನಾಡಿನ ಪತ್ರಿಕೋದ್ಯಮಿಗಳು ಮೆಚ್ಚುತ್ತಿಲ್ಲ ಎಂಬ ಬೇಸರ ಅವರಿಗಿದ್ದರೂ ಇರಬಹುದು. ಹೀಗಾಗಿ ಕೋಪ ಬಂದ ಅವರು ಪತ್ರಕರ್ತರನ್ನು ನಾಯಿಗಳು ಎಂದು ಕರೆದು ಬಿಟ್ಟರು. ಆದರೆ ಹೀಗೆ ಹೇಳುವಾಗ ಅವರು ನಾಯಿಗಳ ಬಗ್ಗೆ ಹೆಚ್ಚಿಗೆ ಯೋಚಿಸಿರಲಿಕ್ಕಿಲ್ಲ ಎಂದು ಅನ್ನಿಸುತ್ತದೆ. ಸದಾ ಸಾಮಾಜಿಕ ಕ್ರಾಂತಿಯ ಕನಸು ಕಾಣುತ್ತಿರುವ ಅವರಿಗೆ ಮಠದ ಪಕ್ಕದಲ್ಲೇ ಇರುವ ನಾಯಿಗಳನ್ನು ನೋಡುವುದಕ್ಕೆ ಸಮಯ ಇಲ್ಲದಿರಬಹುದು !
ಧರ್ಮ ಕ್ಷೇತ್ರವಾದ ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಧರ್ಮವಿದೆ. ಅದರಲ್ಲಿ ಸನ್ಯಾಸ ಧರ್ಮವೂ ಒಂದು. ಸನ್ಯಾಸಿಗಳು ರಾಗ ಧ್ವೇಷದಿಂದ ಹೊರಗಿರಬೇಕು. ಅವರು ಸದಾ ಭಗವಂತನ ಧ್ಯಾನ ಮಾಡುತ್ತಿರಬೇಕು. ಪಾರಮಾರ್ಥಿಕ ಚಿಂತನೆ, ಜೀವ ಮತ್ತು ಪರಮಾತ್ನನ ನಡುವಿನ ಸಂಬಂಧದ ಬಗ್ಗೆ ಯೋಚಿಸಬೇಕು. ರಾಜನಾದವನಿಗೆ ಧರ್ಮ ಮಾರ್ಗದಲ್ಲಿ ಪ್ರಜಾ ಪಾಲನೆ ಮಾಡುವಂತೆ ಬೋಧಿಸಬೇಕು. ಪರಸ್ತ್ರಿಯನ್ನು ತಾಯಿಯಂತೆಯೂ ರಾಜ ಧನವನ್ನು ಪ್ರಜಾ ಧನದಂತೆಯೂ ನೋಡುವಂತೆ ಬೋಧಿಸಬೇಕು. ನೆಲಗಳ್ಳತನ ಮಾಡದಂತೆ ಹೇಳಬೇಕು. ಮುಖ್ಯಮಂತ್ರಿ ಯದೀಯೂರಪ್ಪ ಅವರಿಗೆ ಈ ಬೋಧನೆಯನ್ನು ಮುರುಘಾ ಶ್ರೀ ಮಾಡಿದ್ದಾರೆಯೇ ಅಥವಾ ಇಲ್ಲವೆ ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಹೀಗಾಗಿ ಅವರು ತಮ್ಮ ಧರ್ಮವನ್ನು ಪಾಲಿಸಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅನುಮಾನಗಳಿವೆ.
ಇನ್ನು ಮುರುಘಾ ಶ್ರೀಗಳು ಒಪ್ಪಿ ನಡೆಯುವ ಬಸವಣ್ಣ ಕೂಡ ಬಿಜ್ಜಳನ ಆಸ್ಥಾನದಲ್ಲೇ ಇದ್ದುಕೊಂಡೇ ಕ್ರಾಂತಿಕಾರ ನೆನಸಿಕೊಂಡ. ಜಾತಿ ಪದ್ಧತಿಯನ್ನು ವಿರೋಧಿಸಿದ. ವೈದಿಕ ಧರ್ಮದ ಹುಳುಕುಗಳನ್ನು ತೆರೆದಿಟ್ಟ. ಕಳಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ ಎಂದ. ಆತ ಎಂದೂ ಬಿಜ್ಜಳ ರಾಜನಾಗಿದ್ದಾನೆ ಎಂಬ ಕಾರಣಕ್ಕೆ ಅವನ ಬಕೆಟ್ ಹಿಡಿಯುವ ಕೆಲಸ ಮಾಡಲಿಲ್ಲ. ಯಾರನ್ನೂ ನಾಯಿ, ಕುನ್ನಿ ಎಂದು ಕರೆಯಲೇ ಇಲ್ಲ. ಇದೆಲ್ಲ ಮುರುಘಾ ಶ್ರೀಗಳ್ಗೆ ಗೊತ್ತಿದೆ ಎಂದು ನಾನು ನಂಬಿದ್ದೇನೆ. ಆದರೂ ಅವರಿಗೆ ನಾಯಿಗಳು ಇದ್ದಕ್ಕಿದ್ದ ಹಾಗೆ ನೆನಪಾದವು. ಪತ್ರಕರ್ತರ ಮೇಲೆ ಕೋಪವೂ ಬಂತು.
ಇದೆಲ್ಲದವುರಗಳ ನಡುವೆಯೂ ನಾನು ಮುರಾಘಾ ಶ್ರೀಗಳಿಗೆ ಪತ್ರಿಕೋದ್ಯಮಿಯಾಗಿ ಕೃತಜ್ನನಾಗಿದ್ದೇನೆ. ಅವರು ನಮ್ಮನ್ನು ಬೇರೆ ಯಾವ ಪ್ರಾಣಿಗಳಿಗೂ ಹೋಲಿಸಿದೇ ನಾಯಿಗೆ ಹೋಲಿಸಿ ನಮ್ಮನ್ನ್ ಉಪಕೃತರನ್ನಾಗಿ ಮಾಡಿದ್ದಾರೆ. ಯಾಕೆಂದರೆ ನನಗೆ ನಾಯಿಗಳೆಂದರೆ ಇಷ್ಟ. ಪತ್ರಿಕೋದ್ಯಮಿಗಳಿಗೆ ತತ್ವ ಮೌಲ್ಯಗಳ ವಿಚಾರದಲ್ಲಿ ನಾಯಿ ನಿಷ್ಟೆ ಇರಬೇಕು ಎಂದು ನಾನು ನಂಬಿದ್ದೇನೆ. ಇಂತಹ ನಿಷ್ಟೆ ಪತ್ರಿಕೋದ್ಯಮಿಗಳಿಗೆ ಇದೆ, ಇಲ್ಲದಿದ್ದರೆ ಆ ನಿಷ್ಟೆ ಬರಲಿ ಎಂದು ಸ್ವಾಮೀಜಿಯವರು ನಮಗೆಲ್ಲ ಆಶೀರ್ವಚನ ನೀಡಿದ್ದಾರೆ.
ಅವರು ನಮ್ಮನ್ನು ಪ್ರಾಣಿಗಳಿಗೆ ಹೋಲಿಸಿದ್ದಾರೆ ಎಂಬ ಕಾರಣಕ್ಕೆ ರಾಜಕಾರಣ ಮಾಡುತ್ತಿರುವ ಸ್ವಾಮೀಜಿಗಳನ್ನು ನಾನು ಪ್ರಾಣಿಗಳಿಗೆ ಹೋಲಿಸಲಾರೆ. ಆ ಮೂಲಕ ಪ್ರಾಣಿಗಳಿಗೆ ಅವಮಾನ ಮಾಡಲಾರೆ. ನನಗೆ ಪ್ರಾಣಿಗಳ ಬಗ್ಗೆ ವಿಶೇಷ ಗೌರವ ಮತ್ತು ಪ್ರೀತಿ ಇದೆ. ನಾನೊಮ್ಮೆ ಸ್ವಾಮೀಜಿಗಳನ್ನು ಪ್ರಾಣಿಗಳಿಗೆ ಹೋಲಿಸಬೇಕಾದ ಅನಿವಾರ್ಯತೆ ಬಂದರೆ, ಹೋಲಿಕೆಗೆ ಯೋಗ್ಯವಾದ ಪ್ರಾಣಿಗಳು ಸಿಗುವುದು ಕಷ್ಟ. ನಾನು ಈ ಸ್ವಾಮೀಜಿಗಳನ್ನು ಬಕ ಧ್ಯಾನ ನಿರತರು ಎಂದು ಕರೆಯಬೇಕಾಗುತ್ತದೆ. ಮೀನು ಸಿಗಲಿ ಎಂದು ಕಣ್ಣು ಮುಚ್ಚಿ ಧ್ಯಾನ ಮಾಡುವ ಪ್ರಾಣಿ ಬಕ ಪಕ್ಷಿ. ಆದರ ಬಕ ಪಕ್ಷಿಯಂತೆ ಧ್ಯಾನ ಮಾಡುವಷ್ಟು ಶಾಂತಿ ಮತ್ತು ಸಹನೆ ನಮ್ಮ ಸ್ವಾಮೀಜಿಗಳಿಗೆ ಇದೆ ಎಂದು ಹೇಳುವುದು ಕಷ್ಟ. ಹೀಗಾಗಿ ಈ ಹೋಲಿಕೆ ಕೂಡ ಸರಿಯಾಗುವಿದಿಲ್ಲ.
ಯಡೀಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಹೋಗುತ್ತಾರೆ ಎಂದುಕೊಂಡಾಗ ಎದ್ದು ನಿಂತ ಈ ಸ್ವಾಮಿ ಗಣದ ಬಗ್ಗೆ ಪಾಪ ಎಂದು ಅನ್ನಿಸುತ್ತದೆ. ಯಾವುದೋ ಹಣ ಆಸ್ತಿಗಾಗಿ ಇವರೆಲ್ಲ ಪುಂಗಿ ಊದುವುದಕ್ಕೆ ಪ್ರಾರಂಭ ಮಾಡಿದರಲ್ಲ ಎಂದು ನೋವಾಗುತ್ತದೆ. ಇಂತಹ ದೇವ ಮಾನವರನ್ನೆಲ್ಲ ಇಂತಹ ದುಸ್ಥಿಗೆ ತಳ್ಳಿದ ಇಂದಿನ ರಾಜಕಾರಣ, ಬಿಜೆಪಿ ಸರ್ಕಾರ ಮತ್ತು ಯಡಿಯೂರಪ್ಪ ಅವರ ಬಗ್ಗೆ ಬೇಸರವಾಗುತ್ತದೆ.

Saturday, December 11, 2010

ನೆನಪುಗಳ ಜಾಡು ಹಿಡಿದು ಬೆಳಗಾವಿಯಲ್ಲಿ ಸುತ್ತಿದೆ.....!

ನೆನಪುಗಳು ವರವೋ ಶಾಪವೋ ? ಈ ಪ್ರಶ್ನೆಗೆ ಹೀಗೆ ಎಂದು ಉತ್ತರ ನೀಡುವುದು ಕಷ್ಟ. ಕೆಲವು ನೆನಪುಗಳು ನಮ್ಮನ್ನು ಸದಾ ಕಾಡುತ್ತಲೇ ಇರುತ್ತವೆ. ಅವುಗಳಿಂದ ಬಿಡುಗಡೆ ಪಡೆಯಲು ನಾವು ಯತ್ನ ನಡೆಸುತ್ತಲೇ ಇರುತ್ತೇವೆ. ಆದರೆ ಅದು ಅಷ್ಟು ಸುಲಭವಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಇಂಥಹ ನೆನಪುಗಳು ನಮಗೆ ಬೇಡ ಎಂದು ಅಂದುಕೊಂಡರೂ ಆ ನೆನಪುಗಳು ಮನಸ್ಸಿನ ಗೋಡೌನ್ ನಿಂದ ಹೊರಕ್ಕೆ ಬಂದಾಗ ನಮ್ಮ ಮನಸ್ಸು ಸಂತೋಷ ಪಡುತ್ತಿರುತ್ತದೆ.ಹೌದು ನಮಗೆ ನೆನಪುಗಳು ಬೇಕು. ನೆನಪುಗಳ ಜೊತೆ ಬದುಕುತ್ತ, ಅವುಗಳ ಜೊತೆ ಅಟವಾಡುತ್ತ, ಕೀಟಲೆ ಮಾಡುತ್ತ ವರ್ತಮಾನವನ್ನು ಎದುರಿಸಿದರೆ ಬದುಕಿನ ಚಂದವೇ ಬೇರೆ. ಬಹಳಷ್ಟು ಜನ ನಮಗೆ ಇಂತ ನೆನಪುಗಳು ಬೇಡ ಎಂದು ಹೇಳುತ್ತಿರುತ್ತಾರೆ. ಇದು ಪಲಾಯನವಾದ. ನೆನಪುಗಳಿಂದ ಬಿಡುಗಡೆ ಪಡೆಯುವ ಯತ್ನವೇ ಸರಿಯಲ್ಲ.
ನಾನು ಇದನ್ನೆಲ್ಲ ಹೇಳುವುದಕ್ಕೆ ಬಹು ಮುಖ್ಯ ಕಾರಣ ನಾನು ಕಳೆದ ಎರಡು ಮೂರು ದಿನ ಬೆಳಗಾವಿಯಲ್ಲಿ ಇದ್ದುದು. ಬೆಳಗಾವಿ ನಾನು ಓದಿದ ಊರು.ಅಲ್ಲಿಯೇ ನನ್ನ ಕಾಲೇಜು ಜೀವನ ರೂಪ ಪಡೆದಿದ್ದು. ನಾನು ಬೆಳಗಾವಿಗೆ ಹೋಗಿದ್ದು ಒಂದು ವಿಚಿತ್ರ ಪರಿಸ್ಥಿತಿಯಲ್ಲಿ. ಆಗ ನನ್ನ ಹೋರಾಟಗಾರನ ಮನಸ್ಥಿತಿ ತುಂಬಾ ಪ್ರಬಲವಾಗಿತ್ತು. ಪ್ರತಿಯೊಂದು ವಿಚಾರಕ್ಕೂ ಜಗಳ ತರಲೆ. ನನ್ನಪ್ಪ ಮಗ ಊರಿನಲ್ಲಿ ಇದ್ದರೆ ಉದ್ದಾರವಾಗುವುದಿಲ್ಲ ಎಂದು ಬೆಳಗಾವಿಗೆ ಕಳುಹಿಸುವ ತೀರ್ಮಾನ ಕೈಗೊಂಡ. ಇದಕ್ಕೆ ಕಾರಣ ಬೆಳಗಾವಿ ಗೋಗಟೆ ಕಾಲೇಜಿನ ಪ್ರಿನ್ಸಿಪಾಲ್ ಡಿ ಏ ಹೆಗಡೆ ಅಂತ. ಅವರು ಅಪ್ಪನಿಗೆ ತುಂಬಾ ಪರಿಚಿತರು. ಅವರ ನಿಗಾದಲ್ಲಿ ಮಗ ಉದ್ದಾರವಾಗುತ್ತಾನೆ ಎಂಬುದು ಅಪ್ಪನ ನಂಬಿಕೆ.
ನಾನು ಬೆಳಗಾವಿಯಲ್ಲಿ ಇದ್ದುದು ಒಬ್ಬ ಆಂಗ್ಲೋ ಇಂಡಿಯನ್ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ. ನನ್ನ ಜೊತೆಗೆ ಅಪ್ಪಿಕೋ ಚಳವಳಿಯ ಮೂಲಕ ಹೆಸರು ಮಾಡಿದ ಪಾಂಡುರಂಗ ಹೆಗದೆ ಹಾಗೂ ಇಬ್ಬರು ಆಸ್ಟ್ರೇಲಿಯಾದ ಹುಡುಗರಿದ್ದರು.
ಮನೆಯ ಯಜಮಾನ್ತಿಯ ಹೆಸರು ಮಿಸೆಸ್ ಫೆರೆರಾ ಅಂತ ನೆನಪು. ಆಕೆಯ ಒಬ್ಬನೇ ಮಗ ಜ್ಯೂಡಿಿಯರಿಯಲ್ಲಿ ಕೆಲಸ ಮಾಡುತ್ತಿದ್ದ. ಸೊಸೆ ತುಂಬಾ ಸುಂದರಿ. ಅವರಿಗೆ ಒಬ್ಬನೇ ಮಗ.ಯಾವುದೋ ಪರ್ವತವೊಂದು ನಡೆದು ಬಂದಂತೆ ಕಾಣುತ್ತಿದ್ದ ಮಿಸ್ ಫೇರೆರಾ ತುಂಬಾ ಒಳ್ಳೆಯ ಹೆಂಗಸು. ಆಕೆ ಏಷ್ಟು ದಪ್ಪಗಿದ್ದಳೆಂದರೆ, ಆಕೆ ಧರಿಸುತ್ತಿದ್ದ ಸ್ಕರ್ಟ್ ಹೊಟ್ಟೆಯ ಭಾಗವನ್ನು ಮುಚ್ಚುವುದಕ್ಕೆ ತೀವ್ರ ಯತ್ನ ನಡೆಸುತ್ತಿರುವಂತೆ ಕಾಣುತ್ತಿತ್ತು. ಈ ಹೆಂಗಸು ನನಗೆ ದೈರ್ಯವಾಗಿ ಇಂಗ್ಲೀಷ್ ಮಾತನಾಡುವುದನ್ನು ಕಲಿಸಿದಳು. ಯಾಕೆಂದರೆ ಅವಳಿಗೆ ಇಂಗ್ಲೀಷ್ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ.
ಒಮ್ಮೆ ನಾನು ಜ್ವರ ಬಂದು ಮಲಗಿದ್ದೆ. ನಾನು ಮಲಗಿದ್ದನ್ನು ಕಂಡ ಆಕೆ ಬಂದು ವಿಚಾರಿಸಿದಳು. ನಂತರ ಒಳಗೆ ಹೋಗಿ ಬ್ರಾಂಡಿ ಬಾಟಲ್ ತಂದು ಅದನ್ನು ಬಿಸಿ ನೀರಿನಲ್ಲಿ ಬೆರಸಿ ಕುಡಿಸಿದಳು. ಮರುದಿನ ಜ್ವರ ಮಾಯವಾಯಿತು. ಆದರೆ ಇದಾದ ನಂತರ ಆಗಾಗ ನಾನು ಜ್ವರ ಬಂದಂತೆ ಮಲುಗುವುದು ಫೇರೆರಾ ಬಂಡು ಬ್ರಾಂಡಿ ಕೊಡುವುದು ಸಾಮಾನ್ಯವಾಯಿತು. ನನಗೆ ಕುಡಿಯಬೇಕು ಅನ್ನಿಸಿದಾಗಲೆಲ್ಲ ಜ್ವರ ಬರುವುದು ಸಾಮಾನ್ಯವಾಯಿತು.
ಪ್ರತಿಯೊಬ್ಬ ಗಂಡಸು ಅಮ್ಮನನ್ನು ಹುಡುಕುತ್ತಿರುತ್ತಾನಂತೆ. ಆತ ತನ್ನ ಹೆಂಡತಿಯಲ್ಲಿ ಕಾಣಲು ಬಯಸುವುದು ಅಮ್ಮನನ್ನೇ. ಯಾಕೆಂದರೆ ನಾವೆಲ್ಲ ಕಣ್ಣು ಬಿಟ್ಟ ತಕ್ಷಣ ಮೊದಲು ನೋಡುವುದು ಅಮ್ಮನನ್ನೇ. ಈ ಫೆರೆರಾ ನನಗೆ ಒಂದು ರೀತಿಯಲ್ಲಿ ಅಮ್ಮನಾಗಿದ್ದಳು. ನಾನು ಈ ಬಾರಿ ಬೆಳಗಾವಿಗೆ ಹೋದಾಗ ಈ ಅಮ್ಮನನ್ನು ಹುಡುಕಿಕೊಂಡು ಹೊರಟೆ. ಆದರೆ ಅವರ ಕುಟುಂಬ ಇರಲಿಲ್ಲ. ಮನೆಯನ್ನು ಬಾಡಿಗೆಗೆ ಕೊಟ್ಟು ಅವರು ಗೋವಾಕ್ಕೆ ಶಿಫ್ಟ್ ಆಗಿದ್ದರು.
ಬೆಳಗಾವಿ ಅಂದ ತಕ್ಷಣ ನನಗೆ ಇಂತಹ ನೋರಾರು ನೆನಪುಗಳು ಬಂದು ಡಿಕ್ಕಿ ಹೊಡೆಯುತ್ತವೆ. ನಾನು ಬೆಳಗಾವಿಯಲ್ಲಿ ಓದಿತ್ತಿದ್ದ ದಿನಗಳಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವಿನ ವಿರಸ ಜೋರಾಗಿತ್ತು. ನಾನು ಓದುತ್ತಿದ್ದುದು ಗೋಗಟೆ ಕಾಲೇಜಿನಲ್ಲಿ.ಗೋಗಟೆ ಒಬ್ಬ ಉದ್ಯಮಿ. ಆದರೆ ಮರಾಠಿಗ. ಆತ ಯಶವಂತರಾವ್ ಚೆವಾಣ್ ಎಂಬ ಹಿರಿಯ ರಾಜಕಾರಣಿಯ ಖಾಸಾ ದೋಸ್ತ. ನಾನು ಕನ್ನಡ ಹೋರಾಟಗಾರರ ಜೊತೆ ಸೇರಿಕೊಂಡು ಗೋಗಟೆಯ ಪ್ರತಿಮೆಯನ್ನು ಕೆಡವುವ ಸಂಚನ್ನು ಮಾಡಿದ್ದೆವು. ಕೊನೆಗೆ ಧೈರ್ಯ ಬರೆದು ಸುಮ್ಮನಾಗಿದ್ದೆವು.
ಇಂಥಹ ಬೆಳಗಾವಿಗೆ ಈ ಬಾರಿ ನಾನು ಹೋಗಿದ್ದು ಬೇರೆ ಉದ್ದೇಶದಿಂದ. ಸುಮ್ಮನೆ ಒಂದೆರಡು ದಿನ ಬೆಂಗಳೂರಿನಿಂದ ಹೊರಕ್ಕೆಇರಬೇಕಾಗಿತ್ತು.ಅದಕ್ಕಾಗಿ ಬೆಳಗಾವಿಗೆ ಹೊರಟು ಬಿಟ್ಟೆ.
ಬೆಳಗಾವಿಯಿಂದ ನಾನು ಹೋಗಿದ್ದು ಗೋಕಾಕಕ್ಕೆ. ಗೋಕಾಕದ ಜಾರಕಿಹೊಳೆ ಸಹೋದರರು ನನಗೆ ಸುಮಾರು ೨೦ ವರ್ಷಗಳ ಸ್ನೇಹಿತರು. ಅವರಿಗೆ ನನ್ನ ಬಗ್ಗೆ ಪ್ರೀತಿ ಮತ್ತು ಗೌರವ. ಗೋಕಾಕಕ್ಕೆ ಹೋದವ ಅವರ ಸತೀಶ್ ಶುಗರ್ಸ್ ಗೆ ಭೇಟಿ ನೀಡಿದೆ. ಸತೀಶ್ ಅವರ ಮನೆಯಲ್ಲಿ ಅವಲಕ್ಕಿ ಚೂಡಾ ತಿಂದೆ. ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಅವರ ಜೊತೆ ಹರಟೆ ಹೊಡೆದು ಬೆಳಗಾವಿಗೆ ಹಿಂತಿರುಗಿದೆ. ಬೆಳಗಾವಿಯ ಹೊಟೆಲ್ ನಲ್ಲಿ ಕುಳಿತಾಗ ಮತ್ತೆ ನನಗೆ ಹಳೆಯ ನೆನಪುಗಳು ಕಾಡತೊಡಗಿದವು. ನಾನು ಬೆಳಗಾವಿಗೆ ಬಂದ ತಕ್ಷಣ ಕಲಿತ ಮೊದಲ ಮರಾಠಿ ಭಾಷೆಯ ಸಾಲು; ಏ ಮುಲಗಿ ಪಾರ್ ಸುಂದರ್ ಆಯೇ...ಅಂದರೆ ಈ ಹುಡುಗಿ ತುಂಬಾ ಸುಂದರವಾಗಿದ್ದಾಳೆ.
ಈ ಬೆಳಗಾವಿ ಕಾಡು ಮನುಷ್ಯನಂತಿದ್ದ ನನ್ನನ್ನು ನಾಗರಿಕನನ್ನಾಗಿ ಮಾಡಿತ್ತು. ಮಾತನಾಡಲು ಹಿಂಜರಿಯುತ್ತಿದ್ದವನಿಗೆ ಮಾತನಾಡಲು ಕಲಿಸಿತ್ತು. ಕುಡಿತ, ಪ್ರೀತಿ, ಪ್ರೇಮ, ಜಗಳ ಹೊರಾಟ ಎಲ್ಲವೂ ಪ್ರಾರಂಭವಾಗಿದ್ದು ಇಲ್ಲಿಯೇ. ನಾವಿದ್ದ ಶ್ರೀಮತಿ ಫೆರೆರಾ ಅವರ ಮನೆಯ ಎದುರು ಲಕ್ಷ್ಮಿ ಬಿಲ್ಡಿಂಗ್ ಎಂಬ ಕಟ್ಟಡವೊಂದಿತ್ತು. ಈ ಕಟ್ಟದಲ್ಲಿ ಉತ್ತರ ಕರ್ನಾಟಕದ ಕಾಲೇಜು ಹುಡುಗರು ರೂಂ ಮಾಡಿಕೊಂಡು ವಾಸವಾಗಿದ್ದರು. ಬಹುತೇಕ ಹುಡುಗರು ಹಣವಂತರು. ಮೋಜು ಮಸ್ತಿ ಅವರ ಬದುಕಿನ ಭಾಗವಾಗಿತ್ತು. ಭಾನುವಾರವಂತೂ ಬೆಳಿಗಿನಿಂದಲೇ ಅಲ್ಲಿ ಗುಂಡಿನ ಸಮಾರಾಧನೆ.
ಅದೊಂದು ಭಾನುವಾರ. ಶ್ರೀಮತಿ ಘೆರೆರಾ ಅವರ ಸೊಸೆ ಮನೆಯ ಮುಂದೆ ಕುಳಿತು ಕೋಳಿ ಮಾಂಸವನ್ನು ಕೊಯ್ದು ಅಡುಗೆಗೆ ಸಿದ್ಧ ಮಾಡುತ್ತಿದ್ದಳು. ಈಕೆ ನಾನು ಮೊದಲು ಹೇಳಿದಂತೆ ತುಂಬಾ ಸುಂದರಿ. ನಿಜವಾದ ಆಂಗ್ಲೋ ಇಂಡಿಯನ್. ಭಾರತ ಮತ್ತು ಬ್ರಿಟೀಷರ ಬಣ್ಣ ಸೇರಿ ಆಕೆಯ ಬಣ್ಣ ಹೆಚ್ಚು ಚಿತ್ತಾಕರ್ಷಕವಾಗಿತ್ತು. ಈ ಲಕ್ಖ್ಶಿ ಬಿಲ್ಡಿಂಗಿನ ಹುಡುಗರು ಒಮ್ಮೆಲೆ ಫೇರೆರಾಳ ಮನೆಯ ಬಳಿ ಬಂದರು. ನೋಡು ನೋಡುತ್ತಿದ್ದಂತೆ ಈ ಸುಂದರ ಸೊಸೆಯನ್ನು ಹೊತ್ತುಕೊಂಡು ಹೊರಟೇ ಬಿಟ್ಟರು. ಅತ್ತೆ, ಮಿಸೆಸ್ ಫೇರೆರಾ ಸೇವ್ ಅಸ್ ಎಂದು ಬೊಬ್ಬೆ ಹೊಡೆಯತೊಡಗಿದಳು. ಯಾರಿಗೆ ಏನು ಮಾಡಬೇಕು ಎಂದು ತಿಳಿಯಲಾಗದ ಸ್ಥಿತಿ.
ನನಗೆ ಆಗ ನೆನಪಾದವರು ಎಸ್. ಜಿ. ಹೆಗಡೆ ಎಂಬ ನಮ್ಮೂರಿನ ಪೋಲೀಸ್ ಇನಸ್ಪೇಕ್ಟರ್. ಅವರು ಬೆಳಗಾವಿಯ ರೈಲ್ವೆ ನಿಲ್ದಾಣದ ಪೋಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಪೊಲೀಸ್ ಠಾಣೆ ಮಿಸೆಸ್ ಪೇರೆರಾಳ ಮನೆಯಿಂದ ಐದು ನಿಮಿಷದ ದಾರಿ. ನಾನು ಅವರಿಗೆ ಫೋನ್ ಮಾಡಿದೆ. ಒಂದೆರಡು ನಿಮಿಷದಲ್ಲಿ ಹೆಗಡೆ ತಮ್ಮ ಪಡೆಯೂಂದಿಗೆ ಹಾಜರಾದರು. ಹುಡುಗರಿಗೆ ಬಡಿದು ಫೆರೆರಾಳ ಸೊಸೆಯನ್ನು ಬಿಡಿಸಿ ತಂದರು. ಜೊತೆಗೆ ಹುಡುಗರನ್ನು ಠಾಣೆಗೆ ಒಯ್ದು ಬೆಂಡೆತ್ತಿದರು.
ಇದಾದ ಮೇಲೆ ಮಿಸ್ ಫೆರೆರಾಳ ಮನೆಯಲ್ಲಿ ನನ್ನ ಗೌರವ ಹೆಚ್ಚಿತು. ನಾನು ಅವರ ಮನೆಯ ಮಗನಂತಾದೆ. ಆಕೆ ನಾನು ನೀಡಬೇಕಾದ ಮಾಸಿಕ ಬಾಡಿಗೆಯನ್ನು ಕೇಳುತ್ತಿರಲಿಲ್ಲ. ನನ್ನ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ಆ ಮಹಾತಾಯಿ ನನ್ನ ಆರೋಗ್ಯದ ಬಗ್ಗೆ ಅಮ್ಮನಂತೆ ಕಾಳಜಿ ಒಹಿಸುತ್ತಿದ್ದಳು. ನಾನು ಸಸ್ಯಾಹಾರಿ ಆಗಿದ್ದರಿಂದ ನನಗೆ ಪ್ರತ್ಯೇಕ ಅಡುಗೆ ಮಾಡತೊಡಗಿದಳು. ನನಗೆ ಗೊತ್ತಿಲ್ಲದಂತೆ ನಾನು ಊರಿನಲ್ಲಿ ಬಿಟ್ಟು ಬಂದಿದ್ದ ನನ್ನ ಅಮ್ಮ ನನಗೆ ಅಲ್ಲಿ ಸಿಕ್ಕಿಬಿಟ್ಟಿದ್ದಳು.
ಹೊಟೆಲ್ ರೂಮಿನಲ್ಲಿ ಕುಳಿತು ನನ್ನೊಳಗೆ ಇರುವ ಬೆಳಗಾವಿಗಾಗಿ ನಾನು ಮತ್ತೆ ಮತ್ತೆ ಹುಡುಕತೊಡಗಿದೆ. ಮನುಷ್ಯ ಸಂಬಂಧಗಳ ನಿಗೂಢತೆ, ಅದು ಪಡೆದುಕೊಳ್ಳುವ ಆಯಾಮ ನನ್ನಲ್ಲಿ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿತ್ತು.

Monday, December 6, 2010

ನಾನು ನನ್ನ ಗೆಟಪ್ಪು ಮತ್ತು ಇಂದಿನ ಆಧುನಿಕ ಜಗತ್ತು....!

ನಾವೆಲ್ಲ ಡಾ. ರಾಜಕುಮಾರ್, ರಾಜೇಶ್ ಖನ್ನಾ, ಅಮಿತಾಬ್ ಬಚ್ಚನ್ ಹಾಗೂ ಯಕ್ಷಗಾನ ಬಯಲಾಟವನ್ನು ನೋಡಿ ಬೆಳೆದವರು. ನಮಗೆ ಅಂದರೆ ನನ್ನ ತಲೆ ಮಾರಿನವರಿಗೆ ಇವರೇ ಒಂದು ರೀತಿಯಲ್ಲಿ ಆದರ್ಶವಾಗಿದ್ದರು. ರಾಜೇಶ್ ಖನ್ನಾ ನವಿರಾಗಿ ಮಾತನಾಡುವ ರೀತಿ ಹೆಚ್ಚು ಇಷ್ಟವಾಗುತ್ತಿತ್ತು. ಆತನ ಪ್ರೀತಿ ನಿವೇದನೆಯ ವಿಧಾನ ಮನಸ್ಸಿಗೆ ತಟ್ಟುತ್ತಿತ್ತು. ಪ್ರೀತಿ ನಿವೇದನೆ ಮಾಡುವ ರೀತಿ ಇದೇ ಎಂದು ನಾನು ಬಲವಾಗಿ ನಂಬಿದ್ದ ಕಾಲ ಅದು. ಆದರೆ ಹೈಸ್ಕೂಲಿಗೆ ಹೋಗುತ್ತಿದ್ದ ಆ ದಿನಗಳಲ್ಲಿ ನನಗೆ ಆಗತಾನೇ ಮೀಸೆ ಮೂಡುತ್ತಿತ್ತು. ಆಗ ಬಂದಿದ್ದು ವಿಷ್ಣುವರ್ಧನ ಅಭಿನಯದ ನಾಗರಹಾವು. ಈ ಸಿನೆಮಾ ಪ್ರೀತಿಯ ಬಗೆಗಿನ ನನ್ನ ಕಲ್ಪನೆಯನ್ನು ಬದಲಿಸಿಬಿಟ್ಟಿತು. ಹುಡುಗಿಯರನ್ನು ಪ್ರೀತಿ ಮಾಡಲು ರಾಮಚಾರಿಯ ನಡವಳಿಗೆ ಮನಸ್ಥಿತಿ ಬೇಕು ಎಂದು ನನ್ನ ನಂಬಿಕೆಯಲ್ಲಿ ಸ್ವಲ್ಪ ಮಾರ್ಪಾಟು ಮಾಡಿಕೊಂಡೆ. ಎಲ್ಲರ ಜೊತೆ ನಗುನಗುತ್ತ ಮಾತನಾಡುತ್ತಿದ್ದ ನಾನು ನಗುವುದನ್ನು ಸ್ವಲ್ಪ ಕಡಿಮೆ ಮಾಡಿದೆ. ಸಿಟ್ಟು ಸಿಡುಕು ಜಗಳ ಎಲ್ಲವೂ ನನ್ನ ವ್ಯಕ್ತಿತ್ವದಲ್ಲಿ ಸೇರಿಕೊಂಡವು. ಆದರೆ ನನ್ನ ಈ ಬದಲಾದ ವರ್ತನೆಯಿಂದ ಯಾವ ಬದಲಾವಣೆಯೂ ಅಗಲಿಲ್ಲ. ಯಾವ ಹುಡುಗಿಯೂ ಈ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನನಗೆ ಮಾರ್ಗರೇಟ್ ಆಗಲೀ, ಅಲಮೇಲು ಆಗಲೀ ಸಿಗಲಿಲ್ಲ.
ಆಗ ನನಗೆ ಯಾಕೋ ಈ ರಾಮಾಚಾರಿಯ ಗೆಟ್ ಅಪ್ ಪ್ರೀತಿ ಪ್ರೇಮವನ್ನು ಕೊಡುವುದಿಲ್ಲ ಎಂದು ಅನಿಸಲು ಪ್ರಾರಂಭವಾಯಿತು. ಆಗ ಮತ್ತೆ ನಾನು ರಾಜೇಶ್ ಖನ್ನಾನತ್ತ ಹಿಂತಿರುಗಿದೆ. ರಾಜೇಶ್ ಖನ್ನಾ ಹಾಕುತ್ತಿದ್ದ ಕುತ್ತಿಗೆ ಮುಚ್ಚುವ ಶರ್ಟ್ ಹೊಲಿಸಲು ಊರಿನ ಎಲ್ಲ ಟೈಲರ್ಸ್ ಹತ್ತಿರ ಓಡಾಡಿದೆ. ಕೊನೆಗೆ ಒಬ್ಬನನ್ನು ರಾಜೇಶ್ ಖನ್ನಾನ ಹಾಥಿ ಮೇರೆ ಸಾಥಿ ಸಿನೇಮಾಕ್ಕೆ ನನ್ನ ಖರ್ಚಿನಲ್ಲಿ ಕರೆದೊಯ್ದೆ. ಆತ ಸಿನೇಮಾ ನೋಡಿದವ ಅದೇ ರೀತಿಯ ಶರ್ಟ್ ಹೊಲಿದು ಕೊಟ್ಟ. ಆದರೆ ನನ್ನ ಊರಿನ ಜನ ಇದನ್ನು ನೋಡಿ ನಕ್ಕರು. ಊರಿನ ಪರಿಸರಕ್ಕೂ ಈ ರೀತಿಯ ಉಡುಪಿಗೂ ಹೊಂದಾಣಿಕೆ ಆಗುತ್ತಿರಲಿಲ್ಲ. ಅಷ್ಟರಲ್ಲಿ ಹೈಸ್ಕೂಲು ಮುಗಿಸಿ ಕಾಲೇಜಿಗೆ ಬಂದಿದ್ದೆ. ಕಾಲೇಜಿಗೆ ಹೋಗುವಾಗಲೇ ಉಳಿದವರಿಗಿಂತ ಬೇರೆಯಾಗಿರಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೆ. ಹೀಗಾಗಿ ನನ್ನ ಉಡುಪನ್ನು ಖಾದಿಗೆ ಬದಲಾಯಿಸಿ ಬಿಟ್ಟೆ. ಖಾದಿ ನಮ್ಮ ಮನೆಯ ಉಡುಪು. ನನ್ನ ಅಪ್ಪನಾಗಲೀ, ಅಜ್ಜನಾಗಲೀ ಕಾದಿಯನ್ನು ಬಿಟ್ಟು ಬೇರೆ ಉದುಪನ್ನು ಹಾಕುದವರೇ ಅಲ್ಲ. ಜೊತೆಗೆ ನಮ್ಮದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಎಲ್ಲವನ್ನು ಕಳೆದುಕೊಂಡ ಕುಟುಂಬ. ಹತ್ತಾರು ಎಕರೆ ಅಡಿಕೆ ತೋಟವನ್ನು ಕರ ನಿರಾಕರಣ ಚಳವಳಿಯಲ್ಲಿ ಕಳೆದುಕೊಂಡರೂ ಕಾಂಗ್ರೆಸ್ ಮೋಹವನ್ನು ಬಿಡದ ಕುಟುಂಬ. ಸ್ವಾತಂತ್ರ್ಯ ಬಂದ ಮೇಲೂ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುತ್ತ ಬಂದ ಕುಟುಂಬ.
ನಾನು ಖಾದಿ ಪ್ಯಾಂಟು ಮತ್ತು ಶರ್ಟ್ ಧರಿಸಿ ಕಾಲೇಜಿಗೆ ಹೋಗಲು ಪ್ರಾರಂಭಿಸಿದೆ. ಅಷ್ಟರಲ್ಲಿ ಸಮಾಜವಾದಿ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ ನನ್ನ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದ್ದವು. ಚಂದ್ರಶೇಖರ್ ಪಾಟೀಲ್, ದೇವಯ್ಯ ಹರವೆ, ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ ಮೊದಲಾದವರ ಸಂಪರ್ಕದಿಂದ ನನ್ನ ಡ್ರೆಸ್ ಕೋಡ್ ಬದಲಿಸಿದೆ. ಖಾದಿಯನ್ನು ಬಿಟ್ಟು ನಾರ್ಮಲ್ ಬಟ್ಟೆಯನ್ನು ಧರಿಸಲು ಪ್ರಾರಂಭಿಸಿದೆ. ಜೊತೆಗೆ ಕಾಂಗ್ರೆಸ್ ವಿರೋಧಿ ಮನಸ್ಥಿತಿಯೂ ಬಲವಾಗತೊಡಗಿತು. ಅಪ್ಪ ಅಜ್ಜನ ಜೊತೆ ಕಾಂಗ್ರೆಸ್ ಪಕ್ಷವನ್ನು ಹಿಯಾಳಿಸಲು ಪ್ರಾರಂಭಿಸಿದೆ. ಇದು ಮನೆಯಲ್ಲಿ ದೊಡ್ಡ ಜಗಳಕ್ಕೆ ಕಾರಣವಾಗಿ ಬಿಟ್ಟಿತು. ಅಜ್ಜ ಕಾಂಗ್ರೆಸ್ ಪಕ್ಷವನ್ನು ಬೈದಾಗಲೆಲ್ಲ ರುದ್ರಾವತಾರ ತಾಳಿ ನನ್ನ ಮೇಲೆ ಏರಿ ಬರುತ್ತಿದ್ದ. ಕೆಲವೊಮ್ಮೆ ನನ್ನ ಕಾಂಗ್ರೆಸ್ ವಿರೋಧಿ ಮಾತುಗಳನ್ನು ಕೇಳಿದಾಗ ಪೆಟ್ಟು ನೀಡುತ್ತಿದ್ದ. ಕಾಂಗ್ರೆಸ್ ಪಕ್ಷ ಮತ್ತು ಶ್ರೀಮತಿ ಇಂದಿರಾ ಗಾಂಧಿಯವರನ್ನು ಟೀಕಿಸಿ ಅಜ್ಜನ ಕೈಯಲ್ಲಿ ಹೊಡೆತ ತಿನ್ನುವುದು ಸಾಮಾನ್ಯವಾಯಿತು.
ಆದರೆ ಒಬ್ಬ ಕ್ರಾಂತಿಕಾರಿಯಾಗಲು ನಾನು ತೀರ್ಮಾನಿಸಿ ಆಗಿತ್ತು. ಹೀಗಾಗಿ ಬಟ್ಟೆ ಧಿರಸಿನ ಬಗ್ಗೆ ಲಕ್ಷ ನೀಡುವುದು ಕಡಿಮೆಯಾಯಿತು.ಕ್ರಾಂತಿ ಮಾಡಲು ಹೊರಟವರು ಪ್ರೀತಿಯ ಬಂಧನದಲ್ಲಿ ಬೀಳ ಬಾರದು ಎಂಬ ತೀರ್ಮಾನಕ್ಕೂ ನಾನು ಬಂದಿದ್ದೆ. ಹೀಗಾಗಿ ಪ್ರೀತಿಯನ್ನು ಬಿಟ್ಟು ಊರಿನಲ್ಲಿ ಚಳವಳಿ ಮಾಡಲು ಮುಂದಾದೆ. ನಾನು ಮೊದಲು ಚಳವಳಿ ಪ್ರಾರಂಭಿಸಿದ್ದು ರಾಮಚಂದ್ರಾ ಪುರದ ಸ್ವಾಮೀಜಿಯ ವಿರುದ್ಧ. ಇದು ಉರಿನಲ್ಲಿ ದೊಡ್ ಗಲಾಟೆಗೆ ಕಾರಣವಾಯಿತು. ಹವ್ಯಕ ಸಮಾಜದಿಂದ ನನಗೆ ಭಹಿಷ್ಕಾರ ಹಾಕಲಾಯಿತು. ಈ ಗಲಾಟೆ ಹೊಡೆದಾಟದ ವರೆಗೆ ಹೋದಾಗ ನಾನು ಊರು ಬಿಡಲು ನಿರ್ಧರಿಸಿದೆ. ಬೆಂಗಳೂರಿಗೆ ಬಂದೆ. ಈ ಕಥೆಯನ್ನು ಇನ್ನೊಮ್ಮೆ ಹೇಳುತ್ತೇನೆ.
ಬೆಂಗಳೂರಿಗೆ ಬಂದ ಮೇಲೆ ಪಾನ ಬೀಡಾಕ್ಕು ಕಾಸಿರಲಿಲ್ಲ. ಹೀಗಾಗಿ ಬಟ್ಟೆಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಸ್ಥಿತಿ ಇರಲಿಲ್ಲ. ಆಗ ಇದ್ದುದು ಒಂದೆ ಪ್ಯಾಂಟು ಶರ್ಟು. ಜೊತೆಗೆ ಒಂದು ಹಸಿರು ಜುಬ್ಬಾ ಇತ್ತು. ಈ ಜುಬ್ಬಾದ ಮೇಲೆ ನಾನು ಪಾನ್ ಉಗಿದುಕೊಂಡು ದೊಡ್ಡ ಕಲೆಯಾಗಿತ್ತು. ಅದು ಎಷ್ಟು ತೊಳೆದರೂ ಹೋಗುತ್ತಿರಲಿಲ್ಲ. ನಾನು ಉಷಾಳನ್ನು ಪ್ರೀತಿಸುತ್ತಿದ್ದ ಆ ದಿನಗಳಲ್ಲಿ ಅವಳೂ ಈ ಕಲೆಯ ಬಗ್ಗೆ ಕೇಳಿದಾಗ ಇದು ಕಲೆಯಲ್ಲ ಜುಬ್ಬಾದ ಡಿಸೈನ್ ಎಂದು ಹೇಳಿ ನಂಬಿಸಿ ಬಿಟ್ಟಿದ್ದೆ. ಬಹಳಷ್ಟು ನನ್ನ ಸ್ನೇಹಿತರು ನನ್ನ ಜುಬ್ಬಾದ ಮೇಲಾಗಿದ್ದ ಕಲೆಯನ್ನು ಡಿಸೈನ್ ಎಂದೇ ನಂಬಿದ್ದರು. ಆದರೆ ಆ ದಿನಗಳಲ್ಲಿ ಬಟ್ಟೆಯ ಬಗ್ಗೆ ಅಂತಹ ಆಸಕ್ತಿ ಉಳಿದಿರಲಿಲ್ಲ. ಜೊತೆಗೆ ಒಳ್ಳೆಯ ಬಟ್ಟೆ ಹಾಕಿಕೊಂಡರೆ ಹುಡುಗಿಯರು ಆಕರ್ಷಿತರಾಗುತ್ತಾರೆ ಎಂಬುದನ್ನು ನಾನು ನಂಬುತ್ತಿರಲಿಲ್ಲ. ಬಟ್ಟೆಯ ಮೇಲೆ ಆಕರ್ಷಿತರಾಗುವವರು ವ್ಯಕ್ತಿತ್ವದ ಬಗ್ಗೆ ಏನನ್ನೂ ತಿಳಿದುಕೊಂಡಿರುವುದಿಲ್ಲ. ಇದರಿಂದ ಯಾವ ಪ್ರಯೋಜನವೂ ಆಗದು ಎಂದು ನಾನು ನಂಬಿದ್ದೆ.
ಆದರೆ ಬಟ್ಟೆಯ ಮಹತ್ವ ನನಗೆ ತಿಳಿದಿದ್ದು ನಾನು ಜೀ ನ್ಯೂಸ್ ನ ಬೆಂಗಳೂರು ಬ್ಯುರೋದ ಮುಖ್ಯಸ್ಥನಾದ ಮೇಲೆ. ಒಮ್ಮೆ ಜೀ ಟೀವಿಯ ಮುಖ್ಯಸ್ಥ ಸುಭಾಷ್ ಚಂದ್ರ ಅವರ ಜೊತೆ ಮೀಟಿಂಗ್ ವ್ಯವಸ್ಥೆಯಾಗಿತ್ತು. ನಾನು ಸಭೆಗೆ ಹೋದಾಗ ಸುಭಾಷ್ ಚಂದ್ರ ಅವರ ಸೆಕ್ರೇಟರಿ ನನ್ನ ಕಾಲನ್ನು ಮತ್ತೊಮ್ಮೆ ನನ್ನನ್ನು ನೋಡುತ್ತಿದ್ದಳು. ಅವಳು ಯಾಕೆ ಹೀಗೆ ನೋಡುತ್ತಿದ್ದಾಳೆ ಎಂಬುದು ಆಗ ನನಗೆ ತಿಳಿಯಲಿಲ್ಲ. ಸಭೆ ಮುಗಿಸಿ ಹೊರಕ್ಕೆ ಬಂದಾಗ ಆಕೆ ನನ್ನನ್ನು ಕರೆದಳು. ಇನ್ನು ಮೇಲೆ ಚೆರಮೆನ್ ಮೀಟಿಂಗ್ ಗೆ ಬರುವಾಗ ಸೂಟ್ ಧರಿಸಿ ಬರಬೇಕು ಎಂದು ಸೂಚಿಸಿದಳು. ನಾನು ನನ್ನ ಮದುವೆಯಲ್ಲೂ ಸೂಟ್ ಹಾಕಿದವನಲ್ಲ. ಶೂ ಧರಿಸಿದವನಲ್ಲ. ಶೂ ಧರಿಸಿದರೆ ನನಗೆ ಯಾರೋ ನನ್ನ ಕಾಲು ಹಿಡಿದು ಎಳೆದಂತಾಗುತ್ತದೆ. ಆದರೆ ನಗೆ ಬೇರೆ ದಾರಿಯಿರಲಿಲ್ಲ. ಪ್ರಥಮ ಬಾರಿಗೆ ಬ್ಲೇಸರ್ ಮತ್ತು ಶೂ ಖರೀದಿಸಿದೆ. ನಂತರ ಸುವರ್ಣ ಚಾನಲ್ ಸೇರಿದ ಮೇಲೆ ಇನ್ನೂ ಒಂದೆರಡು ಬ್ಲೇಸರ್ ಖರಿದಿಸಿದೆ.
ಆದರೆ ಈಗ ನನ್ನನ್ನು ಬಟ್ಟೆಗಳು ಹೆದರಿಸುತ್ತವೆ. ಮೈಮೇಲೆ ಕೋಟು ಹೇರಿಕೊಂಡರೆ ಸೇಖೆಯಲ್ಲೂ ಶೂ ಧರಿಸಿದರೆ ನಾನು ಹೈರಾಣಾಗಿ ಹೋಗುತ್ತೇನೆ. ಅದು ನನ್ನ ವ್ಯಕ್ತಿತ್ವಕ್ಕೆ ಹೊಂದುವುದಿಲ್ಲ. ಆದರೆ ಇವತ್ತಿನ ಬದುಕು ಇದೆಯಲ್ಲ, ಅದೂ ಸಹ ಮಾರಾಟದ ವಸ್ತುವೇ.ನಾನು ನನ್ನನ್ನು ಮಾರಾಟ ಮಾಡಿಕೊಳ್ಳಲು ಇದನ್ನೆಲ್ಲ ಮಾಡಲೇಬೇಕು. ಅದಿಲ್ಲದಿದ್ದರೆ ಇಂದಿನ ಕಾರ್ಪುರೇಟ್ ಜಗತ್ತು ನಮ್ಮನ್ನು ತಿರಸ್ಕಿರಿಸಿ ಬಿಡುತ್ತದೆ.
ಇತ್ತೀಚಿಗೆ ಕಾರ್ಪುರೇಟ್ ಮೀಟಿಂಗ್ ಗೆ ಹೋಗುವಾಗ ಸುವರ್ಣ ಬಿಟ್ಟ ಮೇಲೆ ಮೂಲೆ ಸೇರಿದ್ದ ಬ್ಲೇಜರ್ ಅನ್ನು ಹೊರಕ್ಕೆ ತೆಗೆದೆ. ಅದನ್ನು ಹಾಕಿಕೊಂಡು ಹೋಗುವಾಗ ನಾನು ಯಾವುದೋ ಸರ್ಕಸ್ಸಿನ ಜೋಕರ್ ಎಂದು ಅನ್ನಿಸುತ್ತಿತ್ತು. ಆಗ ನಾನು ಹೇಳಿಕೊಂಡಿದ್ದು; ಶಶಿಧರ್ ಭಟ್ ನೀನು ಇದೆಯಲ್ಲ, ಬದುಕುವುದನ್ನು ಕಲಿಯುತ್ತಿದೆಯಲ್ಲೋ ಮಹಾರಾಯಾ ...!

Friday, December 3, 2010

ದೋಸೆ ವರ್ಸಸ್ ಪಿಜ್ಜಾ; ನಮಗೆ ಸಂತೋಷ ನೀಡುವುದು ಯಾವುದು ?

ಬದುಕು ಅರ್ಥಪೂರ್ಣವಾಗುವುದು ಯಾವುದರಿಂದ ? ನಮಗೆ ಬೇಕು ಅನ್ನಿಸಿದ್ದನ್ನೆಲ್ಲ ಪಡೆದುಕೊಳ್ಳುವುದರಿಂದಲೇ ? ಅಥವಾ ನಮಗೆ ಬೇಕು ಅನ್ನಿಸಿದ್ದು ಸಿಗದಿರುವುದರಿಂದಲೇ ?
ನಮಗೆ ಬೇಕು ಅನ್ನಿಸಿದ್ದನ್ನೆಲ್ಲ ಅಲ್ಲಾಉದ್ದೀನನ ಅದ್ಬುತ ದೀಪದಿಂದ ಪಡೆದುಕೊಳ್ಳುವಂತಾಗಿದ್ದರೆ ಬದುಕು ನೀರಸವಾಗಿಬಿಡುತ್ತಿತ್ತು. ಆಗ ಬದುಕಿಗೆ ಸ್ವಾರಸ್ಯವೇ ಉಳಿದಿರುತ್ತಿರಲಿಲ್ಲ. ನಮಗೆ ಬೇಕು ಅನ್ನಿಸಿದ್ದು ಗಗನದೀಪವಾಗಿದ್ದರೆ ನಾವು ಅದನ್ನು ಪಡೆದುಕೊಳ್ಳುವುದಕ್ಕೆ ಯತ್ನ ನಡೆಸುತ್ತೇವೆ. ಪಡೆದುಕೊಳ್ಳುವ ಯತ್ನವೇ ನಮ್ಮ ಬದುಕಿಗೆ ಚೈತನ್ಯವನ್ನು ನೀಡುತ್ತದೆ. ಪಡೆದುಕೊಳ್ಳುವುದು ಎನ್ನುವುದು ಕೊನೆ. ಅಲ್ಲಿಗೆ ಎಲ್ಲವೂ ಮುಗಿಯಿತು. ಉದಾಹರಣೆಗೆ ಪ್ರತಿಯೊಬ್ಬ ಮಧ್ಯ ವರ್ಗದ ವ್ಯಕ್ತಿಯ ಆಸೆ ಸ್ವಂತ ಮನೆ ಮತ್ತು ಓಡಾಡುವುದಕ್ಕೆ ಒಂದು ಕಾರು ಪಡೆಯುವುದು ಆಗಿರುತ್ತದೆ. ಆದರೆ ಮನೆ ಮತ್ತು ಕಾರು ದೊರಕಿದ ಮೇಲೆ ಆತ ಸಂತೋಷವಾಗಿರುತ್ತಾನಾ ? ಬಹುಶಃ ಇಲ್ಲ. ಮನೆ ಕಾರು ಬಂದ ಮೇಲೂ ಆತ ಮೊದಲಿನಂತ ಇರುತ್ತಾನೆ. ಹೊಸ ಸೌಲಭ್ಯ ಅವನ ಬದುಕಿಗೆ ಶಾಂತಿ ಮತ್ತು ಪ್ರೀತಿಯನ್ನು ಎಲ್ಲಿಂದಲೋ ತಂದುಕೊಡುವುದಿಲ್ಲ. ಯಾಕೆಂದರ ಶಾಂತಿ. ಸಮಾಧಾನ ಮತ್ತು ತೃಪ್ತಿ ಎಲ್ಲಿಯೋ ಇರುವ ಎಲ್ಲಿಂದಲೂ ಕೊಂಡು ತರುವ ವಸ್ತುವಲ್ಲ.
ಆದರೆ ನಮಗೆ ಬೇಕು ಅನ್ನಿಸಿದ್ದನ್ನು ಪಡೆದುಕೊಳ್ಳಲು ನಾವು ಯತ್ನ ನಡೆಸುವುದಿದೆಯಲ್ಲ ಅದೇ ಬದುಕು. ಯತ್ನ ಮುಗಿಯಿತೆಂದರೆ ಬದುಕೂ ಮುಗಿಯಿತು.
ದಕ್ಷಿಣ ಭಾರತದ ಖ್ಯಾತ ನಟ, ಪ್ರಕಾಶ್ ರೈ ನಮ್ಮ ಜೊತೆಗೆ ಮಲ್ಲೇಶ್ವರಂ ರೂಮಿನಲ್ಲಿ ಇರುತ್ತಿದ್ದ. ಆತನಿಗೆ ಆಗಲೂ ನಟನಾಗಬೇಕು ಎನ್ನುವ ಅಧಮ್ಯ ಆಸೆ. ಆದರೆ ಆಗ ನಮ್ಮ ಬಳಿ ಹಣ ಇರುತ್ತಿರಲಿಲ್ಲ. ನನಗಾಗ ಆರನೂರು ರೂಪಾಯಿ ಸಂಬಳ. ನನ್ನ ಇನ್ನೊಬ್ಬ ಸ್ನೇಹಿತ ಎಲ್. ಸಿ. ನಾಗರಾಜನಿಗೆ ಸಾವಿರದ ಇನ್ನೂರು ರೂಪಾಯಿ. ಪ್ರಕಾಶ್ ರೈಗೆ ಹೇಳಿಕೊಳ್ಳುವಂತಹ ಕೆಲಸ ಇಲ್ಲದಿದ್ದರಿಂದ ಅವನ ವರಮಾನದ ಬಗ್ಗೆ ಯಾವುದೇ ಮಾತನ್ನು ಆಡುವಂತಿರಲಿಲ್ಲ.
ಪ್ರಕಾಶ್ ಪ್ರತಿ ದಿನ ಒಬ್ಬಿಬ್ಬರು ನಿರ್ಮಾಪಕ ನಿರ್ದೇಶಕರನ್ನು ಭೇಟಿ ಮಾಡುತ್ತಿದ್ದ. ಹಾಗೆ ಹೋಗುವುದಕ್ಕೂ ಅವನ ಬಳಿ ಬಸ್ ಚಾರ್ಜ್ ಗೂ ಹಣ ಇರುತ್ತಿರಲಿಲ್ಲ. ಆಗೆಲ್ಲ ಹಲವು ಬಾರಿ ರಸ್ತೆಯಂಚಿನ ಗಾಡಿಯಲ್ಲಿ ರೈಸ್ ಬಾತ್ ಹಂಚಿಕೊಂಡು ತಿನ್ನುತ್ತಿದ್ದವರು ನಾವು.ಒಂದುವರೆ ರೂಪಾಯಿಯ ಚಿತ್ರಾನ್ನ ನಮ್ಮ ಮೂವರ ಹೊಟ್ಟೆ ತುಂಬುತ್ತಿತ್ತು. ಆಗ ಕ್ವಾರ್ಟರ್ ರಮ್ ಗೆ ಕೇವಲ ೮ ರೂಪಾಯಿ. ಯು ಬಿ ಬೀರಿಗೆ ೯ ರೂಪಾಯಿ. ನಮ್ಮ ತಲಾ ಮೂರು ರೂಪಾಯಿ ಹಾಕಿ ಕ್ವಾರ್ಟರ್ ರಂ ತೆಗೆದುಕೊಂದು ನಾವು ಮಾತನಾಡುತ್ತಿದ್ದೆವು. ಪ್ರಕಾಶ ಖ್ಯಾತ ನಟನಾಗುವ ಕನಸು ಕಾಣುತ್ತಿದ್ದ. ಎಲ್ ಸಿ ನಾಗರಾಜ ಮಾತ್ರ ಹಾಗಲ್ಲ. ಆತನಿಗೆ ಬದುಕಿನಲ್ಲಿ ಅದ್ಭುತ ಸಾಧನೆ ಮಾಡಬೇಕು ಅಂತ ಇತ್ತೋ ಇಲ್ಲವೋ ಆದರೆ ಆತ ಕವನ ಬರೆಯುತ್ತ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತ ಸ್ವಯಂ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತ ಕ್ರಾಂತಿಯ ಕನಸು ಕಾಣುತ್ತಿದ್ದ. ನನಗೆ ಕ್ರಾಂತಿಯ ಬಗ್ಗೆ ಆಗಲೇ ನಂಬಿಕೆ ಹೊರಟು ಹೋಗಿತ್ತು. ನಾನು ಬದುಕನ್ನು ಬಂದ ಹಾಗೆ ಸ್ವೀಕರಿಸುವ ಮನಸ್ಥಿತಿಯನ್ನು ರೂಪಿಸಿಕೊಂಡು ಬಿಟ್ಟಿದ್ದೆ. ಓದು ಬರವಣಿಗೆ, ಸಿನೆಮಾ,ಟ್ರಿಬಲ್ ಎಕ್ಸ್ ರಂ ನಡುವೆ ನನ್ನ ಬದುಕು ಸಾಗುತ್ತಿತ್ತು.
ಬದುಕನ್ನು ಮುಷ್ಟಿಯಲ್ಲಿ ಹಿಡಿದುಕೊಳ್ಳುವ ಚಲ ನನಗಾಗಲೀ ಎಲ್ಸಿ ಗಾಗಲೀ ಇರಲಿಲ್ಲ. ಆದರೆ ಪ್ರಕಾಶ್ ಹಾಗಲ್ಲ. ಆತ ಎಲ್ಲವನ್ನು ತನ್ನ ಮುಷ್ಟಿಯಲ್ಲಿ ಹಿಡಿದುಕೊಳ್ಳಲು ಯತ್ನ ನಡೆಸುವ ಚಲವಂತ. ಆತನ ಶಕ್ತಿ ಇದ್ದುದು ಎಲ್ಲವನ್ನೂ ಪಡೆದುಕೊಳ್ಳಬೇಕು ಎಂಬ ಚಲ ಮತ್ತು ಹೋರಾಟದಲ್ಲಿ. ಬೇಕಾದ್ದನ್ನು ಪಡೆದುಕೊಂಡ ಮೇಲೆ ಆತ ಸುಮ್ಮನೆ ಕುಳಿತುಕೊಳ್ಳುವವನಲ್ಲ. ಮತ್ತೇನನ್ನೋ ಪಡೆದುಕೊಳ್ಳಲು ಮತ್ತೊಂದು ಹೋರಾಟ.
ನನಗೆ ಅನ್ನಿಸುವ ಹಾಗೆ ಅವನ ಬದುಕು ಮತ್ತು ಯಶಸ್ಸು ಇರುವುದು ಈ ಸತತ ಹೋರಾಟದಲ್ಲೇ ಹೊರತೂ ಪಡೆದುಕೊಂಡ ಸಂತೃಪ್ತಿಯಲ್ಲಿ ಅಲ್ಲ. ಅವನಿಗೆ ಪಡೆದುಕೊಳ್ಳುವುದಕ್ಕೆ ನಡೆಸುವ ಹೋರಾಟದಲ್ಲಿ ಸಂತೋಷ ಇದ್ದರೆ, ನನಗೆ ಪಡೆದುಕೊಳ್ಳದೇ ಇರುವುದರಲ್ಲಿಯೇ ಆ ಸಂತೋಷ ಇದೆ. ಎಲ್ಲವನ್ನು ನನಗಾಗಿ ಬಾಚಿಕೊಳ್ಳುವುದರಲ್ಲಿ ನನಗೆ ನಂಬಿಕೆ ಇಲ್ಲ. ಅದು ನನಗೆ ಸಂತೋಷವನ್ನು ನೀಡುವುದಿಲ್ಲ.
ಬದುಕು ಮತ್ತು ಹೋರಾಟ ಎನ್ನುವುದು ಒಂದು ಮನಸ್ಥಿತಿ.ಸಂತೋಷ ಸಮಾಧಾನವೂ ಮನಸ್ಥಿತಿಯೇ. ಈ ಮನಸ್ಥಿತಿಯನ್ನು ರೂಪಿಸಿಕೊಳ್ಳುವುದು ಮುಖ್ಯವೇ ಹೊರತೂ ಅದು ಹೇಗೆ ದಕ್ಕುತ್ತದೆ ಎಂಬುದರಿಂದ ಅಲ್ಲ. ಆದರೆ ನಾವು ಸಂತೋಷ ಪಡುವುದನ್ನು ಕಲಿಯಬೇಕು. ಸಮಾಧಾನದಿಂದ ಬದುಕುವುದನ್ನೂ ರೂಢಿಸಿಕೊಳ್ಳಬೇಕು. ಇಲ್ಲದಿದ್ದರೆ ಬದುಕು ಸದಾ ಚಿಂತೆಯ ಆಗರವಾಗಿ ಬಿಡುತ್ತದೆ. ಇದನ್ನು ಇನ್ನೂ ಸರಳವಾಗಿ ಹೇಳುತ್ತೇನೆ. ನನಗೆ ಬೆಳಿಗ್ಗೆ ನೀರು ದೋಸೆಯನ್ನೋ, ಉಪ್ಪಿಟ್ಟನ್ನೋ ತಿಂದರೆ ಸಾಕು, ಆದರೆ ನನ್ನ ಮಗನಿಗೆ ಬರ್ಗರ್ ಫಿಜ್ಜಾಗಳೆಂದರೆ ಇಷ್ಟ. ಇಲ್ಲಿ ದೋಸೆ ಒಳ್ಳೆಯದೋ ಬರ್ಗರ್ ಫೀಜ್ಜಾ ಹೆಚ್ಚು ಒಳ್ಳೆಯದೋ ಎಂದು ಚರ್ಚೆ ಮಾಡುತ್ತ ಕುಳಿತರೆ ಚರ್ಚೆ ಮಾತ್ರ ಉಳಿಯುತ್ತದೆ ಇದರಿಂದ ಬೇರೆ ಏನೋ ಸಿಗುವುದಿಲ್ಲ. ಆದರೆ ದೋಸೆಯಲ್ಲಿ ನನಗೆ ಸಿಗುವ ಸಂತೋಷ ನನ್ನ ಮಗನಿಗೆ ಬರ್ಗರ್ ಮತ್ತು ಫಿಜ್ಜಾಗಳಲ್ಲಿ ದೊರಕುತ್ತಿದೆ ಎಂಬುದು ಮಾತ್ರ ಮುಖ್ಯ. ಅಂದರೆ ಪ್ರತಿಯೊಬ್ಬರಿಗೂ ಸಂತೋಷ ನೀದುವ ವಸ್ತುಗಳು ಬೇರೆ ಬೇರೆಯಾಗಿರುತ್ತವೆ. ನನಗೆ ಮುಖ್ಯ ಎನ್ನಿಸುವುದು ನಮಗೆ ಸಂತೋಷವನ್ನು ಕೊಡುವುದು ಯಾವುದು ಎಂದು ಗೊತ್ತಿರಬೇಕು. ಅದನ್ನು ತಿಳಿದುಕೊಳ್ಳಲು ಯತ್ನ ನಡೆಸಬೇಕು. ನಾನು ದೋಸೆ ಎಂದರೆ ಬೇರಯವರು ಏನು ಹೇಳುತ್ತಾರೆ ಎಂದು ಚಿಂತಿಸಲು ಪ್ರಾರಂಭಿಸಿದರೆ ಸಮಸ್ಯೆ ಪ್ರಾರಂಭವಾಗುತ್ತದೆ. ಯಾಕೆಂದರೆ ನಮ್ಮ ಸಂತೋಷ ಬೇರೆಯವರ ಮೇಲೆ ಅವಲಂಬಿಸಿರಬಾರದು. ಆಗ ನಮಗೆ ಸಂತೋಷ ದಕ್ಕುವುದಿಲ್ಲ. ನಮ್ಮ ಸಂತೋಷ ನಮ್ಮ ಮೇಲೆ ಮಾತ್ರ ಅವಲಂಬಿಸಿರಬೇಕು. ಆಗ ಮಾತ್ರ ಬದುಕು ಸುಂದರ ವಾಗಿರುತ್ತದೆ.

Saturday, November 27, 2010

ನಾವೇನು ದೇವಲೋಕದಿಂದ ಬಂದವರಲ್ಲ.....!

ನನಗೆ ಮೂರು ಚಕ್ರಗಳಿವೆಯಂತೆ. ತ್ರಿ ಚಕ್ರೇ ಲೋಕ ಸಂಚಾರಿ ಎನ್ನುವುದು ನಂಬಿಕೆ. ಇದನ್ನು ನನ್ನ ಅಮ್ಮ ಮತ್ತು ಮನೆಯ ಪುರೋಹಿತರು ನಾನು ಹೈಸ್ಕೂಲಿಗೆ ಹೋಗುವಾಗಲೇ ಹೇಳಿದ್ದರು. ಈ ಮಾತನ್ನು ನಾನು ಅಗಲೇ ಸಾಬೀತು ಪಡಿಸಿದ್ದೆ. ಹೈಸ್ಕೂಲಿನಲ್ಲಿ ಒಂಬತ್ತನೆ ತರಗತಿಯಲ್ಲಿ ಓದುತ್ತಿರುವಾಗಲೇ ಮನೆಯಿಂದ ಓಡಿ ಹೋಗಿದ್ದೆ. ನಾಲ್ಕು ದಿನ ಬೆಂಗಳೂರಿಗೆ ಓಡಿ ಬಂದವ ಹಾಗೆ ಮನೆಗೆ ಹಿಂತಿರುಗಿದ್ದೆ. ಆಗ ಮನೆಯವರು ಹೇಳಿದ್ದು ಈತ ಕಾಲಿಗೆ ಚಕ್ರ ಕಟ್ಟಿಕೊಂದವನಂತೆ ಓಡಾಡ್ತಾನೆ. ಏನು ಮಾಡುವುದಕ್ಕೆ ಸಾಧ್ಯವಿಲ್ಲ.
ಮೂರು ಚಕ್ರಗಳು ಇರುವುದರಿಂದ ಹಾಗೆ ಓಡಾಡುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಲೋಕ ಸುತ್ತುವುದೆಂದರೆ ನನಗೆ ತುಂಬಾ ಇಷ್ಟ. ಈಗಂತೂ ಯಾರಾದರೂ ಕರೆದರೆ ನಾನು ಹೊರಡುವುದಕ್ಕೆ ರೆಡಿಯಾಗಿ ಬಿಡುತ್ತೇನೆ. ಅದಕ್ಕೆ ಈ ಬೆಂಗಳೂರು ನನ್ನನ್ನು ಹೆದರಿಸುತ್ತಿರುವುದು ಕಾರಣ ಇರಬಹುದು. ಜೊತೆಗೆ ಬೇರೆ ಬೇರೆ ಕಡೆ ಹೋಗುವುದರಿಂದ ಹೊಸ ಜನರ ಪರಚಯವಾಗುತ್ತದೆ. ಹಾಗೆ ಅವರೆಲ್ಲರ ಹತ್ತಿರ ಮಾತನಾಡುವಾಗ ನಮಗೆ ಗೊತ್ತಿಲ್ಲದ ಹಲವರಾರು ವಿಷಯಗಳು ತಿಳಿಯುತ್ತವೆ.
ನಾನು ಈ ವಾರ ಸುಳ್ಯಕ್ಕೆ ಹೋಗಿದ್ದೆ. ಹಾಗೆ ನೋಡಿದರೆ ಈ ಊರು ನನಗೆ ಹೊಸತಲ್ಲ. ಪ್ರಭಾಕರ ಶಿಶಿಲ, ಪುರುಷೋತ್ತಮ ಬಿಳಿಮಲೆ, ಸುಬ್ರಾಯ ಚೊಕ್ಕಾಡಿ ಮೊದಲಾದ ಕನ್ನಡದ ಬರಹಗಾರರನ್ನು ನಾನು ಭೇಟಿ ಮಾಡಿದ್ದು ಇಲ್ಲಿಯೇ. ಅದೂ ಸುಮಾರು ೨೩ ವರ್ಷಗಳ ಹಿಂದೆ. ಇದಾದ ಮೇಲೆ ಸುಳ್ಯಕ್ಕೆ ಹಲವಾರು ಬಾರಿ ಹೋಗಿದ್ದೇನೆ. ಆದರೆ ಅಲಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದು ಇದೇ ಮೊದಲು.
ಸುಳ್ಯ ಹಬ್ಬದ ಮಾಧ್ಯಮ ಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ಅಹ್ವಾನ ಬಂದಾಗ ಸಂತೋಷದಿಂದಲೇ ಒಪ್ಪಿಕೊಂಡೆ. ಸುಳ್ಯ ಹಬ್ಬದ ಹಿಂದಿನ ರೂವಾರಿ ಡಾ. ಶಿವಾನಂದ. ವೈದ್ಯರಾದರೂ ಅವರು ವೈದ್ಯ ವೃತ್ತಿಯನ್ನು ಮಾಡದೇ ಪತ್ರಿಕೋದ್ಯಮಕ್ಕೆ ಬಂದರು. ಸುದ್ದಿ ಬಿಡುಗಡೆ ಎಂಬ ಪತ್ರಿಕಯನ್ನು ಪ್ರಾರಂಭಿಸಿದರು. ಈ ವಾರ ಪತ್ರಿಕೆಗೆ ಈಗ ೨೫ ವರ್ಷ ! ಇದಕ್ಕಾಗಿಯೇ ಅವರು ಸುಳ್ಯ ಹಬ್ಬವನ್ನು ಆಯೋಜಿಸಿದ್ದರು.
ಗ್ರಾಮಾಂತರ ಪ್ರದೇಶದಿಂದ ಪ್ರಕಟಗೊಳ್ಳುವ ಹಲವಾರು ಪತ್ರಿಕೆಗಳನ್ನು ನಾನು ಮನೆಗೆ ತರಿಸಿಕೊಳ್ಳುತ್ತೇನೆ. ಅವುಗಳಲ್ಲಿ ಸುದ್ದಿ ಬಿಡುಗಡೆ ಕೂಡ ಒಂದು. ನನಗೆ ಈ ಪತ್ರಿಕೆ ಇಷ್ಟವಾಗುವುದಕ್ಕೆ ಹಲವಾರು ಕಾರಣಗಳಿವೆ. ಇದು ವಾರ ಪತ್ರಿಕೆಯಾದರೂ ಟಾಬಲೈಡ್ ಗುಣವನ್ನು ಹೊಂದಿಲ್ಲ. ಇದು ದಿನ ನಿತ್ಯದ ಸುದ್ದಿಗಳನ್ನು ನೀಡುವ ವಾರ ಪತ್ರಿಕೆ. ಹಾಗಂತ ಕೇವಲ ವರದಿಗಳನ್ನು ಮಾತ್ರ ನೀಡುವುದಕ್ಕೆ ಪತ್ರಿಕೆ ಸೀಮಿತವಾಗಿಲ್ಲ. ಈ ತಾಲೂಕಿನ ಜನರ ಪರವಾಗಿ ಹಲವಾರು ಬಾರಿ ಹೋರಾಟ ಮಾಡಿದೆ. ಡಾ. ಶಿವಾನಂದ ಅವರೂ ರಸ್ತೆಗೆ ಇಳಿದು ಹೋರಾಟ ಮಾಡಿದ ಹಲವಾರು ಉದಾಹರಣೆಗಳಿವೆ. ಸೋಮವಾರ ಈ ಪತ್ರಿಕೆಬರುವುದನ್ನು ಎರಡು ಮೂರು ತಾಲೂಕಿನ ಜನ ಕಾಯುತ್ತಾರೆ. ರಾಜ್ಯ ಮಟ್ಟದ ದಿನ ಪತ್ರಿಕೆಗಳಲ್ಲಿ ಸುದ್ದಿ ಬಂದರೂ ತಮ್ಮ ಪ್ರೀತಿಯ ಸುದ್ದಿಯಲ್ಲಿ ಅವರಿಗೆ ಸುದ್ದಿ ಬರಲೇ ಬೇಕು. ಹಾಗೆ ಸುಳ್ಯ, ಬೇಳ್ತಂಗಡಿ ಮತ್ತು ಪುತ್ತೂರು ತಾಲೂಕಿನಲ್ಲಿ ಯಾರ ಮನೆಯಲ್ಲಿ ಮಗು ಹುಟ್ಟಲಿ, ಮದುವೆಯಾಗಲಿ< ಯಾರದರೂ ಇಹಲೋಕ ಯಾತ್ರೆಯನ್ನು ಮುಗಿಸಲಿ ಅದರ ಜಾಹಿರಾತು ಸುದ್ದಿಯಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೆ ಈ ಮೂರು ತಾಲೂಕುಗಳಲ್ಲಿ ಪ್ರತಿ ತಾಲೂಕಿಗೆ ಪ್ರತ್ಯೇಕ ಎಡಿಶನ್ ಗಳನ್ನು ಡಾ. ಶಿವಾನಂದ ಪ್ರಕಟಿಸುತ್ತಾರೆ. ಒಂದು ವಾರ ಪತ್ರಿಕೆ ಬೇರೆ ಬೇರೆ ಪ್ರದೇಶಕ್ಕೆ ಬೇರೆ ಬೇರೆ ಎಡಿಶನ್ ಪ್ರಕಟಿಸುವುದು ಬೇರೆಲ್ಲೂ ಇರಲಿಕ್ಕಿಲ್ಲ.
ಅವರು ಯಾವಾಗಲೂ ಹೊಸದರ ಬಗ್ಗೆ ಆಲೋಚಿಸುತ್ತಿರುತ್ತಾರೆ. ಈಗ ಕೆಲವು ವರ್ಷಗಳ ಹಿಂದೆ ಬೆಂಗಳೂರಿನಿಂದ ಸುದ್ದಿಯ ಆವೃತ್ತಿಯನ್ನು ತರಲು ಅವರು ಯತ್ನ ನಡೆಸಿದ್ದರು. ಹಾಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ಸುದ್ದಿ ಸೆಂಟರುಗಳು. ಇವು ಒಂದು ರೀತಿಯಲ್ಲಿ ಮಾಹಿತಿ ಕೇಂದ್ರಗಳು. ಅಲ್ಲಿ ಎಲ್ಲ ರೀತಿಯ ಮಾಹಿತಿಗಳೂ ದೊರಕುತ್ತವೆ.
ಡಾ, ಶಿವಾನಂದ ಅವರ ರಾಜಕೀಯ ನಂಬಿಕೆಗಳೇನೇ ಇರಲಿ, ಅವರು ಸುದ್ದಿಯನ್ನು ಈ ಪ್ರದೇಶದಲ್ಲಿ ಒಂದು ಶಕ್ತಿಯನ್ನಾಗಿ ರೂಪಿಸಿ ಬಿಟ್ಟಿದ್ದಾರೆ. ಹಾಗೆ, ಪ್ರತಿ ಹಳ್ಳಿಯ ಜನ ಕೂಡ ಪತ್ರಿಕೆಯಲ್ಲಿ ಸಹಭಾಗಿಗಳಾಗುವಂತೆ ನೋಡಿಕೊಂಡಿದ್ದಾರೆ.
ಸುಳ್ಯ ಹಬ್ಬ ನಡೆದಿದ್ದು ಎರಡು ದಿನ. ಈ ಎರಡು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾಧಕರನ್ನು ಸನ್ಮಾನಿಸಲಾಯಿತು. ಎಲ್ಲ ಪಕ್ಷಗಳ ರಾಜಕಾರಣಿಗಳು ಬಂದು ಹಬ್ಬದಲ್ಲಿ ಪಾಲ್ಗೊಂಡರು.
ಮಾದ್ಯಮಗೋಷ್ಠಿಯಲ್ಲಿ ನಾನು ಮಾತನಾಡಿದ ಮೇಲೆ ನಡೆದಿದ್ದು ಸಂವಾದ ಕಾರ್ಯಕ್ರಮ. ಪತ್ರಿಕೋದ್ಯಮ ಭ್ರಷ್ಟಾಚಾರ ಮೊದಲಾದ ವಿಚಾರಗಳ ಬಗ್ಗೆ ಹಲವಾರು ಪ್ರಶ್ನೆಗಳು. ಈ ಸಂವಾದ ನಡೆದಿದ್ದು ಸುಮಾರು ಎರಡು ಗಂಟೆ. ಆಗ ಅಲ್ಲಿ ತೂರಿ ಬಂದ ಪ್ರಶ್ನೆಗಳು ಇಲ್ಲಿನ ಜನರ ಆಲೋಚನಾ ಕ್ರಮವನ್ನೇ ಸ್ಪಷ್ಟಪಡಿಸುವಂತಿತ್ತು. ಜೊತೆಗೆ ನನಗೆ ಅನ್ನಿಸಿದ್ದು ಪತ್ರಿಕೆಗಳು ಸೇಕ್ರೆಡ್ ಕೌ ಎಂಬ ನಂಬಿಕೆ ಜನರಿಂದ ಮಾಯವಾಗುತ್ತಿದೆ ಎಂಬುದು.
ನಾವು ಬೆಂಗಳೂರಿನಲ್ಲಿ ಕುಳಿತು ಏನು ಮಾಡುತ್ತೇನೆ ಎಂಬುದು ಬೇರೆ ಬೇರೆ ರೂಪಗಳಲ್ಲಿ ಗ್ರಾಮಾಂತರ ಪ್ರದೇಶವನ್ನು ತಲುಪುತ್ತಿದೆ. ಈ ಸಂಪಾದಕರಿಗೆ ಆಡಳಿತ ವರ್ಗ ನೋಟೀಸು ನೀಡಿದೆಯಂತೆ, ಈ ಸಂಪಾದಕರಿಗೆ ಕುಮಾರಸ್ವಾಮಿ ಇಷ್ಟು ಹಣ ನೀಡಿದರಂತೆ ಹೀಗೆ ಎಲ್ಲವನ್ನು ತಾವು ನೋಡಿದಂತೆ ಜನ ಮಾತನಾಡುತ್ತ್ತಾರೆ. ಯಾವ ಯಾವ ಪತ್ರಿಕೆಗಳಲ್ಲಿ ಎಷ್ಟು ಸಂಬಳ ನೀಡುತ್ತಾರೆ, ಇಷ್ಟು ಸಂಬಳ ಪಡೆಯುವವರು ಎಷ್ಟು ಆಸ್ತಿ ಮಾಡಿದ್ದಾರೆ ಎಂಬ ಬಗ್ಗೆಯೂ ಸಾರ್ವಜನಿಕರು ಮಾತನಾಡುತ್ತಾರೆ. ನಾವು ರಾಜಧಾನಿಯಲ್ಲಿ ಕುಳಿತವರು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ ಹಾಗೇ ಏನೇನನ್ನೋ ಮಾಡುತ್ತಿರುತ್ತೇವೆ. ನಾವು ಮಾಡುತ್ತಿರುವುದು ಯಾರಿಗೂ ತಿಳಿಯುವುದಿಲ್ಲ ಎಂದುಕೊಂಡಿರುತ್ತೇವೆ. ಆದರೆ ಅದು ಯಾವ ಮಾಯೆಯೋ ಎಲ್ಲವೂ ಗ್ರಾಮಾಂತರ ಪ್ರದೇಶದವರೆಗೆ ತಲುಬಿಟ್ಟಿರುತ್ತದೆ. ಅವರು ನಾವು ಮಾತನಾಡುವಾಗ ಮನಸ್ಸಿನಲ್ಲೇ ನಗುತ್ತಿರುತ್ತಾರೆ.
ಈ ಸಂವಾದ ನಂತರ ನನಗೆ ಅನ್ನಿಸಿದ್ದು ನಾವು ಅಹಂಕಾರದಿಂದ ಮಾತನಾಡುತ್ತ ನಮ್ಮ ಎದುರಿಗೆ ಕುಳಿತವರನ್ನು ಜಾಡಿಸುತ್ತಿದ್ದರೆ ನಮ್ಮ ಬಗ್ಗೆ ಅರಿತವರು ತಮ್ಮ ಮನಸ್ಸಿನಲ್ಲೇ ಲೇವಡಿ ಮಾಡುತ್ತಿರುತ್ತಾರೆ.
ಅಲ್ಲಿಯೂ ಅಷ್ಟೇ. ಪತ್ರಿಕೋದ್ಯಮಿಗಳಲ್ಲಿ ಹೆಚ್ಚುತ್ತ್ರಿರುವ ಅಕ್ಷರ ಅಹಂಕಾರ, ಭ್ರಷ್ಟತೆಯ ಬಗ್ಗೆ ಹಲವರು ಪ್ರಶ್ನೆಗಳನ್ನು ಕೇಳಿದರು. ಆಗ ನಾನು ಹೇಳಿದೆ.
ನಾವು ಪತ್ರಿಕೋದ್ಯಮಿಗಳೆಂದರೆ, ದೇವ ಲೋಕದಿಂದ ನೇರವಾಗಿ ಇಳಿದು ಬಂದವರಲ್ಲ. ನಾವೂ ಈ ಸಮಾಜದ ಭಾಗ. ನಾವು ಈ ಸಮಾಜದ ಒಳಗೆ ಇದ್ದೂ ಸಾಕ್ಷಿ ಪ್ರಜ್ನೆಯಾಗಿ ಕೆಲಸ ಮಾಡುತ್ತಿರುತ್ತೇವೆ. ಓಳಗೆ ಇದ್ದು ಹೊರಗಿನವರಾಗಿ ನೋಡುವುದಿದೆಯಲ್ಲ, ಅದಕ್ಕೆ ಸಂತನ ಮನಸ್ಸು ಬೇಕು. ಹೋರಾಟಗಾರನ ಕೆಚ್ಚೆದೆ ಬೇಕು, ಸತ್ಯ ನಿಷ್ಟೆ ಬೇಕು, ಪ್ರಾಮಾಣಿಕತೆ ಬೇಕು. ಇದೆಲ್ಲ ಇದ್ದೂ ನಮಗೆ ನಾವು ಹೆದರುತ್ತಿರಬೇಕು. ನಮ್ಮನ್ನೇ ನಾವು ಲೇವಡಿ ಮಾಡಿಕೊಳ್ಳುವ ಮನಸ್ಥಿತಿ ಬೇಕು. ಒಳಗೆ ಇದ್ದೂ ಹೊರಗಿನವರಾಗುವುದು ಸಣ್ನ ಕೆಲಸ ಅಲ್ಲ. ನಾವು ಒಳಗೆ ಇದ್ದೂ ಒಳಗಿನವರಾಗುವ ಅಪಾಯವೇ ಹೆಚ್ಚು. ಹೀಗಾಗಿಯೇ ನಾವು ರಾಜಕೀಯ ವರದಿ ಮಾಡುವವರು ರಾಜಕಾರಣಿಗಳಾಗಿ ಬಿಡುತ್ತೇವೆ. ಯಾರ ಯಾರ ಪರವಾಗಿ ಕೆಲಸ ಮಾಡಲು ಪ್ರಾರಂಭಿಸಿಬಿಡುತ್ತೇವೆ.
ಇಷ್ಟಕ್ಕೆ ನಾವು ಹತಾಶರಾಗಬೇಕಾಗಿಲ್ಲ. ಇವೆಲ್ಲವುದರ ಜೊತೆಗೆ ಪತ್ರಿಕೋದ್ಯಮ ಇಂದಿಗೂ ಜನರ ನಂಬಿಕೆಯನ್ನು ಉಳಿಸಿಕೊಂಡಿದೆ. ಭ್ರಷ್ಟರಾಗದ ಪ್ರಾಮಾಣಿಕ ಪತ್ರಿಕೋದ್ಯಮಿಗಳು ನಮ್ಮ ನಡುವೆ ಇದ್ದಾರೆ. ಇದರಿಂದಾಗಿಯೇ ಪತ್ರಿಕೋದ್ಯಮ ನಮ್ಮಲ್ಲಿ ಹೊಸ ಸಮಾಜದ ಕನಸನ್ನು ಮೂಡಿಸುತ್ತಲೇ ಇದೆ.
ಹೀಗೆ ಇನ್ನೂ ಕೆಲವು ಮಾತುಗಳನ್ನು ನಾನು ಹೇಳಿದೆ. ಅಲ್ಲಿದ್ದವರು ಚೆಪ್ಪಾಳೆ ತಟ್ಟೀದರು.

Wednesday, November 24, 2010

ಜಾತಿ ರಾಜಕಾರಣವನ್ನು ತಿರಸ್ಕರಿಸಿದ ಬಿಹಾರದ ಜನತೆ: ಜಾತಿ ರಾಜಕಾರಣವನ್ನು ಪುರಸ್ಕರಿಸಿದ ಬಿಜೆಪಿ !

ಇಂದು ದೇಶದ ರಾಜಕಾರಣದಲ್ಲಿ ಎರಡು ಮಹತ್ತರ ಘಟನೆಗಳು ನಡೆದವು. ಒಂದು ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ. ಮತ್ತೊಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೊರಕಿದ ಜೀವದಾನ. ಬಿಹಾರದಲ್ಲಿ ಲಾಲೂ ಪ್ರಸಾದ್ ನೆಲ ಕಚ್ಚಿದ್ದಾರೆ. ನಿತೀಶ್ ಕುಮಾರ ನಿರೀಕ್ಷೆ ಮೀರಿದ ಜಯಗಳಿಸಿದ್ದಾರೆ. ಈ ಎರಡೂ ಘಟನೆಗಳೂ ಹಲವು ದೃಷ್ಟಿಯಿಂದ ಮಹತ್ವದ್ದಾಗಿವೆ. ಹಾಗೆ ಭಾರತೀಯ ರಾಜಕಾರಣ ಸಾಗುತ್ತಿರುವ ದಾರಿಯ ಬಗ್ಗೆಯೂ ಸುಳಿವು ನೀಡುತ್ತವೆ.
ಬಿಹಾರ ಒಂದು ಕಾಲದಲ್ಲಿ ಜಂಗಲ್ ರಾಜ್ ಆಗಿತ್ತು. ಮಗದ ಸಾಮ್ರಾಜ್ಯದ ವೈಭವನ್ನು ಕಂಡು ಬಿಹಾರ, ಜಯಪ್ರಕಾಶ್ ನಾರಾಯಣ ಅವರ ಕ್ರಾಂತಿಯ ನೆಲ ಕೂಡ. ಹಾಗೆ ಕರ್ಪೂರಿ ಠಾಕೂರ್ ಎಂಬ ಸಮಾಜವಾದಿ ನಾಯಕನ ರಾಜ್ಯ. ಅವರ ಶಿಷ್ಯರು ಮೆರದಾಡಿದ ನೆಲ. ಇಲ್ಲಿ ಲಾಲೂ ನಾಟಕವಾಡಿದರು. ಜಾತಿ ರಾಜಕಾರಣದ ಬೀಜ ಭಿತ್ತಿ ಫಲವನ್ನು ಉಂಡರು. ಹಸುವಿನ ಹಾಲು ಕರೆದರು. ಹಸುವಿನ ಮೇವನ್ನು ತಾವೇ ತಿಂದರು. ತಮ್ಮ ನಂತರ ಮನೆಯಲ್ಲಿ ಹಾಲು ಕರೆಯುತ್ತ ಅಡಿಗೆ ಮಾಡಿಕೊಂಡಿದ್ದ ಹೆಂಡತಿ ರಾಬ್ಡಿ ದೇವಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಕಳೆದ ಚುನಾವಣೆಯಲ್ಲಿ ತಮ್ಮ ಮಗನನ್ನು ಅಖಾಡಕ್ಕೆ ಇಳಿಸಿದರು. ಹಾಗೆ ಯಾದವ, ದಲಿತ ಮಸ್ಲಿಂ ಮತ ಬ್ಯಾಂಕಿನ ಮೇಲೆ ಕಣ್ಣಿಟ್ಟು ರಾಜಕೀಯ ಮಾಡುತ್ತಿದ್ದ ಅವರು ಈಗತಾನೆ ಮುಗಿದ ಚುನಾವಣೆಯಲ್ಲಿ ಮೇಲ್ಜಾತಿಯ ಮತಗಳನ್ನು ಪಡೆಯುವುದಕ್ಕೆ ಯತ್ನ ನಡೆಸಿದರು. ಆದರೆ ಅಷ್ಟರಲ್ಲಿ ಬಿಹಾರದ ಮತದಾರರು ಬದಲಾಗಿದ್ದರು. ಇದು ಲಾಲೂ ಪ್ರಸಾದ್ ಯಾದವ್ ಅವರ ಗಮನಕ್ಕೆ ಬಂದಂತಿರಲಿಲ್ಲ. ಬಂದರೂ ಏನು ಮಾಡುವ ಸ್ಥಿತಿಯಲ್ಲಿ ಅವರು ಇರಲಿಲ್ಲ.
ಕಳೆದ ಐದು ವರ್ಷಗಳ ಆಡಳಿತ ನಡೆಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರಿಗಳಿಗೆ ಸ್ವಾಭಿಮಾನದ ಪಾಠ ಹೇಳಿದ್ದರು. ಎಲ್ಲೆಡೆಗೂ ಅಭಿವೃದ್ಧಿಗೆ ಅಡಿಗಲ್ಲು ಹಾಕಿದರು. ರಾಜಕಾರಣದ ಭಾಗವಾಗಿದ್ದ ಕ್ರಿಮಿನಲ್ಸ್ ಗಳನ್ನು ಹಿಡಿದು ಜೈಲಿಗೆ ಅಟ್ಟಿದರು. ಬಿಹಾರದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಾಮಾನ್ಯ ಜನ ಯಾರ ಹೆದರಿಕೆಯೂ ಇಲ್ಲದೇ ಓಡಾಡುವಂತೆ ಮಾಡಿದರು. ಹೆಂಗಸರಂತೂ ಸಮಾಧಾನ ನಿಟ್ಟುಸಿರು ಬಿಟ್ಟರು. ಬಿಹಾರವನ್ನು ಅವರು ಬದಲಿಸಿಬಿಟ್ಟಿದ್ದರು. ಇದರಿಂದಾಗಿ ಲಾಲೂ ಅವರ ನಾಟಕ ನೋಡಿದವರು ಈ ಬಾರಿ ಅದೇ ನಾಟಕವನ್ನು ನೋಡಿ ನಕ್ಕರು. ಒಬ್ಬ ಸಮಾಜವಾದಿ ನಾಯಕ ತಮ್ಮ ಜನರಿಂದಲೇ ಅಪಹಾಸ್ಯದ ವಸ್ತುವಾಗಿ ಬಿಟ್ಟಿದ್ದರು. ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವುದನ್ನು ಜನ ಬಿಟ್ಟುಬಿಟ್ಟರು.
ಈ ಚುನಾವಣೆಯ ಮತ್ತೊಂದು ಮಹತ್ವದ ಅಂಶ ಎಂದರೆ ಯಾದವರ ಭದ್ರ ಕೋಟೆಯನ್ನು ನಿತೀಶ್ ಕುಮಾರ ಪ್ರವೇಶಿಸಿದ್ದು.ಹಾಗೆ ಪಕ್ಕದಲ್ಲಿ ಬಿಜೆಪಿ ಎಂಬ ಮುಸ್ಲಿಂ ವಿರೋಧಿ ಪಕ್ಷವನ್ನು ಇಟ್ಟುಕೊಂಡೂ ಪ್ರತಿಶತ ೨೦ ರಷ್ಟು ಮುಸ್ಲಿಂ ಮತಗಳನ್ನು ಮೈತ್ರಿ ಕೂಟಕ್ಕೆ ದೊರಕಿಸಿಕೊಟ್ಟರು.
ಬಿಹಾರದಲ್ಲಿ ಜಾತಿ ಆಧಾರಿತ ರಾಜಕಾರಣಕ್ಕೆ ಮಂಗಳ ಹಾಡಿದವರು ನಿತೀಶ್ ಕುಮಾರ್. ಎಲ್ಲ ಕಾಲದಲ್ಲಿಯೂ ಜಾತಿ ರಾಜಕಾರಣ ಫಲ ನೀಡುವುದಿಲ್ಲ. ಅಂತಿಮವಾಗಿ ಜನರಿಗೆ ಸಹ್ಯವಾಗುವ ಬದುಕು ಮತ್ತು ರಾಜಕಾರಣ ಬೇಕು, ಈ ದೇಶದ ಜನ ಜಾತಿವಾದಿಗಳಲ್ಲ. ಆದರೆ ಅವರನ್ನು ತಮ್ಮ ಲಾಭಕ್ಕಾಗಿ ಜಾತಿವಾದಿಗಳನ್ನಾಗಿ ಮಾಡಿದವರು ರಾಜಕಾರಣಿಗಳು. ಈ ಬೆಳವಣಿಗೆ ಸಂತಸ ನೀಡುವಂತಹುದು.
ಬಿಹಾರದ ಈ ಫಲಿತಾಂಶ ಬಿಜೆಪಿಗೆ ಸಂತಸ ನೀಡಿದ್ದರೆ ಅದು ತುಂಬಾ ಸಹಜ, ಎನ್ ಡಿ ಏ ಗೆ ಇದೊಂದು ಅದ್ಭುತ ವಿಜಯವೇ. ಜೊತೆಗೆ ರಾಷ್ಟ್ರದ ರಾಜಕಾರಣಕ್ಕೆ ದಿಕ್ಸೂಚಿ ಕೂಡ. ಆದರೆ ಇವತ್ತಿನ ಬೆಳವಣಿಗೆ ಇಷ್ಟಕ್ಕೆ ಸೀಮಿತವಾಗಿಲ್ಲ. ಒಂದೆಡೆ ಜಾತಿ ರಾಜಕಾರಣವನ್ನು ತಿರಸ್ಕರಿಸಿದ ಸಂತಸ ಬಿಜೆಪಿಗಾದರೆ ಇನ್ನೊಂದೆಡೆ ಜಾತಿ ರಾಜಕಾರಣಕ್ಕೆ ಮಣೆ ಹಾಕುವ ಕೆಲಸವನ್ನೂ ಈ ಪಕ್ಷ ಮಾಡಿತು. ಬಿಹಾರದಲ್ಲಿ ಅಲ್ಲಿನ ಜನ ಜಾತಿ ರಾಜಕಾರಣವನ್ನು ತಿರಸ್ಕರಿಸಿದ ದಿನವೇ ಕರ್ನಾಟಕದಲ್ಲಿ ಜಾತಿ ರಾಜಕಾರಣಕ್ಕೆಮಣೆ ಹಾಕಿದ್ದು ಬಿಜೆಪಿ. ಲಿಂಗಾಯಿತರಿಗೆ ಬೇಸರವಾಗುತ್ತದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಯಡೀಯೂರಪ್ಪ ಅವರನ್ನು ಮುಂದುವರಿಸುವ ತೀರ್ಮಾನವನ್ನು ಪಕ್ಷ ಕೈಗೊಂಡಿತು.
ಇದೆಲ್ಲ ನಡೆದ ಮೇಲೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೀಡಿದ ಹೇಳಿಕೆ ಗಮನಾರ್ಹ.
"ಬಿಹಾರದಲ್ಲಿ ಅಭೂತಫೂರ್ವ ವಿಜಯ ಸಾಧಿಸಿದ ನಿತೀಶ್ ಕುಮಾರ್ ಅವರನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಪಕ್ಷ ಬಿಹಾರದಲ್ಲಿ ಬೆಳೆಯ ಬೇಕಾಗಿದೆ. ಅದನ್ನು ಬೆಳೆಸುತ್ತೇವೆ. ಆದರೆ ಕರ್ನಾಟಕದಲ್ಲಿ ಭ್ರಷ್ಟತೆಯ ಆರೋಪ ಹೊತ್ತಿರುವ ಮುಖ್ಯಮಂತ್ರಿಯನ್ನು ಬಿಜೆಪಿ ಮುಂದುವರಿಸುವ ತೀರ್ಮಾನವನ್ನು ಕೈಗೊಂಡಿದೆ. ನಾವು ಇಂತಹ ಆರೋಪ ಬಂದ ತಕ್ಷಣ ಮುಖ್ಯಮಂತ್ರಿಗಳನ್ನು ಬದಲಿಸಿದ್ದೇವೆ. ಇದೇ ನಮ್ಮ ಪಕ್ಷ ಮತ್ತು ಬಿಜೆಪಿಯ ನಡುವೆ ಇರುವ ವ್ಯತ್ಯಾಸ. " ಇದು ಸೋನಿಯಾ ಹೇಳಿದ ಮಾತು.
ಸೋನಿಯಾ ಪಕ್ವ ರಾಜಕಾರಣಿಯಾಗುತ್ತಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಭ್ರಷ್ಟಾಚಾರವನ್ನು ತೊಡೆದು ಹಾಕಬೇಕು ಎಂಬ ಮನಸ್ಸು ಅವರಿಗಿದೆ ಎಂದು ಅನ್ನಿಸುತ್ತದೆ. ಅದು ಸಾಧ್ಯವೆ ಎಂಬುದು ಬೇರೆ ಮಾತು. ಎಲ್ಲಿಂದಲೋ ಬಂದು ಇಲ್ಲಿ ತಮ್ಮ ಬದುಕನ್ನು ಕಟ್ತಿಕೊಂಡ ಅವರನ್ನ್ ನೋಡಿದಾಗ ಅವರು ಅಪ್ರಮಾಣಿಕರು ಎಂದು ಅನ್ನಿಸುವುದಿಲ್ಲ > ಆದರೆ ಈ ದೇಶದ ಸಂಸ್ಕೃತಿಯನ್ನು ಗುತ್ತಿಗೆಗೆ ತೆಗೆದುಕೊಂಡಂತೆ ಮಾತನಾಡುವ ಬಿಜೆಪಿಯನ್ನು ನೋಡಿದಾಗ ಹಾಗೆ ಅನ್ನಿಸುವುದಿಲ್ಲ. ಆ ಪಕ್ಷದ ಹೈಕಮಾಂಡ್ ಎಲ್ಲ ರೀತಿಯ ಒತ್ತಡ ಮತ್ತು ಬ್ಲಾಕ್ ಮೇಲೆ ಒತ್ತಡಕ್ಕೆ ಮಣಿಯುತ್ತಿದೆ. ಭೂ ಸ್ವಾಹಾ ಪ್ರಕರಣದಲ್ಲಿ ನಿರತರಾದ ತಮ್ಮ ಮುಖ್ಯಮಂತ್ರಿಯನ್ನು ಕೆಳಗಿಳಿಸುವ ಶಕ್ತಿ ಕೂಡ ಬಿಜೆಪಿ ಹೈಕಮಾಂಡ್ ಗೆ ಇಲ್ಲ. ಪಕ್ಷದ ಮುಖ್ಯಮಂತ್ರಿ ಎಲ್ಲ ಸೂಚನೆಯನ್ನು ಉಲ್ಲಂಘಿಸಿ ಭೂಗತರಾದರೂ ಅವರಿಗೆ ಎಚ್ಚರಿಕೆಯ ಮಾತುಗಳನ್ನು ಹೇಳುವ ಶಕ್ತಿ ಕೂಡ ಬಿಜೆಪಿ ಹೈಕಮಾಂಡಿಗೆ ಇಲ್ಲ.
ಇವತ್ತಿನ ಬೆಳವಣಿಗೆಯನ್ನು ಗಮನಿಸಿ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸುವ ತೀರ್ಮಾನವನ್ನು ಪ್ರಕಟಿಸುವುದಕ್ಕೆ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಹೆದರಿಕೆ. ಹೀಗಾಗಿ ಅವರು ಲಿಖಿತ ಹೇಳಿಕೆಯನ್ನು ನೀಡುತ್ತಾರೆ. ಪಕ್ಷದ ಎಲ್ಲ ಹಿರಿಯ ನಾಯಕರೂ ಕರ್ನಾಟಕದ ಬೆಳವಣಿಗೆಯ ಬಗ್ಗೆ ಮಾತನಾಡದೇ ತಪ್ಪಿಸಿಕೊಳ್ಳುತ್ತಾರೆ. ತಮ್ಮ ನಿರ್ಣಯವನ್ನು ಪ್ರಕಟಿಸುವ ನೈತಿಕ ಶಕ್ತಿ ಕೂಡ ಅವರಿಗೆ ಇಲ್ಲ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸರ್ವಾಧಿಕಾರಿಯಂತೆ ವರ್ತಿಸುತ್ತದೆ. ಹೀಗಾಗಿ ಆ ಪಕ್ಷದಲ್ಲಿ ಜನತಾಂತ್ರಿಕ ಮೌಲ್ಯಗಳಿಗೆ ಬೆಲೆ ಇಲ್ಲ. ಒಬ್ಬ ಮುಖ್ಯಮಂತ್ರಿ ಅಧಿಕಾರದಿಂದ ಇಳಿಯಬೇಕು ಎಂದು ಹೈಕಮಾಂಡ್ ನಿರ್ಧರಿಸಿದರೆ ದೂಸರಾ ಮಾತಿಲ್ಲದೇ ಎಲ್ಲರೂ ಒಪ್ಪಿಕೊಳ್ಳಬೇಕು.ಆದರೆ ಬಿಜೆಪಿಯಲ್ಲಿ ಕರ್ನಾಟಕದ ಯಡಿಯೂರಪ್ಪ, ಗುಜರಾತಿನ ನರೇಂದ್ರ ಮೋದಿ, ಮಧ್ಯ ಪ್ರದೇಶದ ಶಿವರಾಜ್ ಚವಾಣ್ ಯಾರು ಬೇಕಾದರೂ ಹೈಕಮಾಂಡ್ ಅನ್ನು ಬೆದರಿಸಬಹುದು. ಬ್ಲಾಕ್ ಮೇಲ್ ಮಾಡಬಹುದು. ಮುಖ್ಯಮಂತ್ರಿಯಾಗಿ ಮುಂದುವರಿಯಬಹುದು.
ಈ ಎರಡು ರೀತಿಯ ಹೈಕಮಾಂದ್ ನಿಂದ ದೇಶದಲ್ಲಿ ಜನತಂತ್ರ ಉಳಿಯುವುದಿಲ್ಲ. ಜನತಾಂತ್ರಿಕ ಮೌಲ್ಯಗಳು ಉಳಿಯುವುದಿಲ್ಲ. ಆದರೆ ದುರ್ದವ ಎಂದರೆ ನಮ್ಮಲ್ಲಿರುವ ರಾಜಕೀಯ ಪಕ್ಷಗಳ ಮಾದರಿಗಳು ಇವು.

Tuesday, November 23, 2010

ಸ್ವಾಮಿಗಳೇ ಎಲ್ಲ ಬಿಟ್ಟು ಬನ್ನಿ, ಪೆಗ್ ಹಾಕಿ ಚರ್ಚೆ ಮಾಡೋಣ...!

ಭಾರತೀಯರ ಬದುಕಿನಲ್ಲಿ ಧರ್ಮ ಎನ್ನುವುದು ಬದುಕುವ ವಿಧಾನ. ಧರ್ಮ ಎನ್ನುವ ಶಬ್ದದ ಮೂಲಧಾತು ದೃ. ದೃ ಎಂದರೆ ಬದುಕನ್ನು ಎತ್ತರಿಸು ಎಂದರ್ಥ. ಬದುಕನ್ನು ಯಾವುದು ಎತ್ತರಿಸುತ್ತದೆಯೋ ಅದೇ ಧರ್ಮ. ಆದರೆ ಈ ಬದುಕನ್ನು ಎತ್ತರಿಸುವುದು ಆಯಾ ಕಾಲಕ್ಕೆ ಬೇರೆ ಬೇರೆಯಾಗಿದೆ. ಆದರೆ ನಮ್ಮ ಬದುಕನ್ನು ಎತ್ತರಿಸುವುದು ಯಾವುದು ? ಅಂತಹ ಸಾರ್ವಕಾಲಿಕ ನಂಬಿಕೆ ಎನ್ನುವುದು ಇದೆಯೆ ? ಸಾರ್ವಕಾಲಿಕ ಬದುಕುವ ವಿಧಾನ ಇದೆಯೆ ?
ನೋಡಿ. ಎಲ್ಲ ಕಾಲದಲ್ಲಿಯೂ ಎಲ್ಲರೂ ಒಪ್ಪಬೇಕಾದ ಕೆಲವು ನಂಬಿಕೆಗಳಿವೆ, ಬದುಕುವ ವಿಧಾನವಿದೆ ನಾವು ನಮ್ಮ ಬದುಕಿನಲ್ಲಿ ಬೇರೆಯವರಿಗೆ ಮೋಸ ಮಾಡಬಾರದು, ಸಮಾಜಕ್ಕೆ ಒಳ್ಳೆಯದಾಗುವಂತೆ ಬದುಕಬೇಕು, ಬೇರೆಯವರಿಗೆ ಧ್ರೋಹವೆಸಗಬಾರದು, ಎಂಬುದು ಎಲ್ಲರೂ ಒಪ್ಪಬೇಕಾದ ಸಾರ್ವಕಾಲಿಕ ನಂಬಿಕೆಯೇ. ಹಾಗೆ ರಾಜ ಧರ್ಮ, ಗ್ರಹಸ್ಥಧರ್ಮ, ಸನ್ಯಾಸಿಗಳ ಧರ್ಮ ಇತ್ಯಾದಿ. ಈ ಸಮಾಜದಲ್ಲಿ ಬೇರೆ ಬೇರೆ ಸ್ಥರಗಳಲ್ಲಿ ಕೆಲಸ ಮಾಡುವವರು ತಮ್ಮ ತಮ್ಮ ಧರ್ಮದ ಪಾಲನೆ ಮಾಡಬೇಕಾಗುತ್ತದೆ. ಆಗಲೇ ಧರ್ಮ ಎಂಬ ಶಬ್ದಕ್ಕೆ ಬೆಲೆ. ಸಮಾಜ ಕೂಡ ಬದುಕುವುದಕ್ಕೆ ಯೋಗ್ಯವಾಗುತ್ತದೆ. ಇಂಥಹ ಸಾರ್ವಕಾಲಿಕ ಧರ್ಮ ಚ್ಯುತಿಯಾಗದಂತೆ ನೋಡಿಕೊಳ್ಳುವುದು ಧರ್ಮ ಪೀಠಗಳ ಕೆಲಸ.
ಈ ಮಾತುಗಳನ್ನು ನಾನು ಹೇಳುವುದಕ್ಕೆ ಮೂಲ ಕಾರಣ, ಕಳೆದ ಎರಡು ದಿನಗಳಿಂದ ಕೆಲವು ಮಠಾಧೀಶರು ರಸ್ತೆಗೆ ಇಳಿದಿದ್ದು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಬಾರದು ಎಂದು ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದು. ಹಾಗೆ ಬಿಜೆಪಿ ವರಿಷ್ಟರನ್ನು ಸಂಪರ್ಕಿಸಿ ಯಡಿಯೂರಪ್ಪ ಅವರ ಪರವಾಗಿ ವಕಾಲತ್ತು ಒಹಿಸಿದ್ದು. ಇದಕ್ಕೆಲ್ಲ ಈ ಮಠಾಧೀಶರು ಕೊಡುತ್ತಿರುವ ಕಾರಣ ಯಡಿಯೂರಪ್ಪ ಅವರ ಸರ್ಕಾರ ಲೋಕ ಕಲ್ಯಾಣ ಮಾಡುತ್ತಿದೆ, ಅವರು ಮಾಡಿದ ಅಪರಾಧ ದೊಡ್ಡದಲ್ಲ !
ಈಗ ಯಡಿಯೂರಪ್ಪ ಅವರ ಮೇಲೆ ಬಂದ ಭೂಹಗರಣಗಳ ಆರೋಪ ಸಣ್ಣದಲ್ಲ. ಕನಿಷ್ಠ ೧೦ ಪ್ರಕರಣಗಳಿವೆ.ಇವುಗಳಲ್ಲಿ ಬಹುತೇಕ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳು ಬಹಿರಂಗವಾಗಿವೆ. ಮೇಲ್ನೋಟಕ್ಕೆ ಯಡಿಯೂರಪ್ಪಾಪರಾಧಿ ಎಂಬುದು ಸಾಬೀತಾಗಿದೆ. ಸ್ವಜನ ಪಕ್ಷಪಾತದ ಆರೋಪವನ್ನು ಮುಖ್ಯಮಂತ್ರಿಗಳು ಒಪ್ಪಿಕೊಂಡು ಭೂಮಿಯನ್ನು ಹಿಂತಿರುಗಿಸಿದ್ದಾರೆ. ಯಡಿಯೂರಪ್ಪ ಅವರು ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡರೂ ಈ ಮಠಾದೀಶರು ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರ ಮೇಲೆ ತನಿಖೆಯಾಗಿ ಅವರು ತಪ್ಪಿತಸ್ಥರಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಈ ಮಠಾಧೀಶರು ಹೇಳುತ್ತಾರೆ. ಸಾಧಾರಣವಾಗಿ ಯಾವ ವ್ಯಕ್ತಿಯ ಮೇಲೆ ಆರೋಪ ಬರಲಿ ಆತ ತನಿಖೆ ಮುಗಿಯುವ ವರೆಗೆ ಅಧಿಕಾರದಿಂದ ದೂರವಿರಬೇಕು ಎಂಬುದು ನ್ಯಾಯ ಸಮ್ಮತ. ಆರೋಪ ಒಳಗಾದ ವ್ಯಕ್ತಿ ಅಧಿಕಾರದಲ್ಲಿ ಇದ್ದರೆ ಆತ ದಾಖಲಗಳನ್ನು ನಾಶ ಪಡಿಸುವ ಸಾಧ್ಯತೆ ಇದ್ದೇ ಇರುತ್ತದೆ. ಜೊತೆಗೆ ಆರೋಪ ಮಾಡಿದವರ ಮೇಲೆ ಅಧಿಕಾರದ ಬಲ ಪ್ರಯೋಗವಾಗುವ ಸಾಧ್ಯತೆ ಇರುತ್ತದೆ. ಆಗ ನ್ಯಾಯ ಸಮ್ಮತ ವಿಚಾರಣೆ ನಡೆಯುವುದು ಸಾಧ್ಯವಿಲ್ಲ.
ಇದೆಲ್ಲ ನಮ್ಮ ಸ್ವಾಮೀಜಿಗಳಿಗೆ ಗೊತ್ತಿಲ್ಲವೆ ? ಗೊತ್ತಿದೆ, ಆದರೆ ತಮ್ಮ ಸಮಾಜಕ್ಕೆ ಸೇರಿದ ಮುಖ್ಯಮಂತ್ರಿ ಎಂಬುದೇ ಅವರ ಈ ನಿಲುಮೆಗೆ ಕಾರಣ.
ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿ ಎಂದು ನಾವೆಲ್ಲ ನಂಬಿದ್ದೆವು. ಕರ್ನಾಟಕದ ಲಿಂಗಾಯಿತರಿಗೆ ಮಾತ್ರ ಅವರು ಮುಖ್ಯಮಂತ್ರಿಯಲ್ಲ. ಆದರೆ ಯಡಿಯೂರಪ್ಪ ಅವರ ಪರವಾಗಿ ಧರಣಿ ಸತ್ಯಾಗ್ರಹ ನಡೆಸಿದ ಮಠಾಧೀಶರು ನಮ್ಮೆಲ್ಲರ, ಕರ್ನಾಟಕದ ಐದು ಕೋಟಿ ಕನ್ನಡಿಗರ ಮುಖ್ಯಮಂತ್ರಿಯನ್ನು ಬರೇ ಲಿಂಗಾಯಿತರ ಮುಖ್ಯಮಂತ್ರಿಯನ್ನಾಗಿ ಮಾಡಿಬಿಟ್ಟರು. ಕರ್ನಾಟಕದಲ್ಲಿ ೧೧ ನೆಯ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡಿದ ವಿಶ್ವ ಮಾನ್ಯ ಬಸವಣ್ಣವರನ್ನು ಲಿಂಗಾಯಿತರಿಗೆ ಸೀಮಿತಗೊಳಿಸಿದವರಿಗೆ ಇದು ದೊಡ್ದ ವಿಚಾರ ಆಗಿರಲಿಕ್ಕಿಲ್ಲ. ಆದರೆ ಕರ್ನಾಟಕದ ಪ್ರಜ್ನಾವಂತರು ಇದನ್ನೆಲ್ಲ ವಿರೋಧಿಸಲೇ ಬೇಕು. ಯಾವುದೇ ಒಬ್ಬ ಮುಖ್ಯಮಂತ್ರಿ ಒಂದು ಜಾತಿಯನ್ನು ಪ್ರತಿನಿಧಿಸುವುದು ಜನತಂತ್ರ ವ್ಯವಸ್ಥೆಯಲ್ಲಿ ಅಪಾಯಕಾರಿ. ಇಂಥಹ ಅಪಾಯಕ್ಕೆ ಕರ್ನಾಟಕವನ್ನು ಒಡ್ದುತ್ತಿರುವುವರು ಮಠಾಧೀಶರು.
ಇದೆಲ್ಲ ಇವರಿಗೆ ಬೇಕಾಗಿತ್ತೆ ?
ಉಡುಪಿಯ ವಿಶ್ವೇಶ ತೀರ್ಥ ಸ್ವಾಮೀಜಿ ಯಡಿಯೂರಪ್ಪ ಅವರ ಪರವಾಗಿ ವಕಾಲತ್ತು ಒಹಿಸುತ್ತಾರೆ. ಅಡ್ವಾಣಿ, ಗಡ್ಕರಿ ಅವರಿಗೆ ಫೋನ್ ಮಾಡಿ ಮುಖ್ಯಮಂತ್ರಿ ಸ್ಥಾನದಲ್ಲಿ ಯಡಿಯೂರಪ್ಪ ಅವರನ್ನು ಮುಂದುವರಿಸಿ ಎನ್ನುತ್ತಾರೆ. ನೂರರ ಗಡಿ ದಾಟಿರುವ ಸಿದ್ದಗಂಗಾ ಸ್ವಾಮೀಜಿ ಯಡಿಯೂರಪ್ಪ ಅವರ ಸರ್ಕಾರ ಅತ್ಯುತ್ತಮ ಸರ್ಕಾರ ಎಂದು ಸರ್ಟಿಫಿಕೇಟ್ ನೀಡುತ್ತಾರೆ. ದಯಾನಂದ ಸ್ವಾಮಿಯವರಂತಹ ಸಣ್ಣ ಪುಟ್ಟ ಸ್ವಾಮಿಗಳು ಪುರ ಭವನದ ಎದುರು ಸುಡು ಬಿಸಿಲಿನಲ್ಲಿ ಧರಣಿ ಕುಳಿತುಕೊಳ್ಳುತ್ತಾರೆ. ಟೀವಿ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡ ಕೊಳದ ಮಠದ ಶಾಂತವೀರ ಸ್ವಾಮಿಜಿ ಮಠಾಧೀಶರನ್ನು ಎಮ್ ಎಲ್ ಸಿ ಮಾಡಿದರೆ ಸಮಾಜದ ಎಲ್ಲ ಸಮಸ್ಯೆಗಳು ಬಗೆ ಹರಿಯುತ್ತವೆ ಎಂದು ಅಪ್ಪಣೆ ಕೊಡುತ್ತಾರೆ ! ಇವರಿಗೆಲ್ಲ ಇಂಥಹ ಉಮೇದಿ ಬರಲು ಏನು ಕಾರಣ ? ಯಡಿಯೂರಪ್ಪ ಇವರ ಕಾಲಿಗೆ ಬೀಳುತ್ತಾರೆ ಎಂಬುದೇ ? ಅಥವಾ ಸಾರ್ವಜನಿಕ ಹಣವನ್ನು ಮಠಗಳಿಗೆ ಬೇಕಾಬಿಟ್ಟಿ ಹಂಚುತ್ತಾರೆ ಎಂಬುದೇ ?
ಮಠಾಧೀಶರಿಗೆ ಅವರದೇ ಆದ ಕರ್ತವ್ಯಗಳಿವೆ. ಭ್ರಾಹ್ಮಣ ಮಠಾಧೀಶರು ಲೌಕಿಕದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಲಿಂಗಾಯಿತ ಮಠಾಧೀಶರು ಸಾಮಾಜಿಕ ಕ್ರಾಂತಿಯ ಬಗ್ಗೆ ಚಿಂತನೆ ಮಾಡಬೇಕು.ಸಮಾಜದಲ್ಲಿ ಧರ್ಮ ಭ್ರಷ್ತವಾಗದಂತೆ ನೋಡಿಕೊಳ್ಳಬೇಕು. ತಮ್ಮ ತಮ್ಮ ಶಿಷ್ಯರಿಗೆ ಧರ್ಮ ಮಾರ್ಗದಲ್ಲಿ ನಡೆಯುವಂತೆ ಉಪದೇಶ ಮಾಡಬೇಕು. ಪರ ಸ್ಥ್ರೀಯರನ್ನು ಕಣ್ಣೆತ್ತಿ ನೋಡದಂತೆ ಬುದ್ದಿ ಮಾತು ಹೇಳಬೇಕು.ಹಣ ಹೊಡೆಯದಂತೆ ನ್ಯಾಯವಾಗಿ ನಡೆದುಕೊಳ್ಳುವಂತೆ ಉಪದೇಶ ಮಾಡುವ ಹೊಣೆಗಾರಿಕೆ ಈ ಮಠಾಧೀಶರಿಗೆ ಇದೆ. ಅದನ್ನು ಬಿಟ್ಟ ಬಹಿರಂಗವಾಗಿ ರಾಜಕೀಯ ಮಾಡಲು ಪ್ರಾರಂಭಿಸಿದರೆ ವೃತ್ತಿ ನಿರತ ರಾಜಕಾರಣಿಗಳಿಗೆ ಏನು ಕೆಲಸ ?
ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತವನ್ನು ವಿರೋಧಿಸುವುದು ಮಠಾಧೀಶರ ಕರ್ತವ್ಯ. ಈ ಮಠಾಧೀಶರು ತಮ್ಮ ಶಿಷ್ಯರು ಹಾದಿ ತಪ್ಪಿದರೆ ಮಾತನಾಡುವುದಿಲ್ಲ. ರೇಣುಕಾಚಾರ್ಯ ಬಹಿರಂಗವಾಗಿ ಕಿಸ್ ನೀಡಿದ್ದು ಈ ಸ್ವಾಮಿಗಳಿಗೆ ಕಾಣುವಿದಿಲ್ಲ. ಯಡಿಯೂರಪ್ಪ ಗ್ರಹಸ್ಥರಾಗಿದ್ದವರು ಗ್ರಹಸ್ಥಶ್ರಮ ಧರ್ಮವನ್ನು ಉಲ್ಲಂಘಿಸಿದ್ದು ಇವರಿಗೆ ಮಹತ್ವದ್ದಾಗುವುದಿಲ್ಲ. ಇದು ಅವರಿಗೆ ಕಾಣಬೇಕಾಗಿತ್ತು. ಯಾಕೆಂದರೆ ಅದೇ ಅವರ ಪೋರ್ಟ್ ಫೋಲಿಯೋ. ಆದರೆ ತಮ್ಮ ಖಾತೆಯ ನಿರ್ವಹಣೆ ಮಾಡಬೇಕಾದವರು ಬೇರೆ ಖಾತೆಗಳಿಗೆ ಕೈ ಹಾಕತೊಡಗಿದ್ದಾರೆ.
ಕೆಲವೊಮ್ಮೆ ಈ ಮಠಾಧೀಶರನ್ನು ನೋಡಿದರೆ ಸಹಾನುಭೂತಿ ಉಂಟಾಗುತ್ತದೆ. ಅವರು ಏನನ್ನೂ ಬಹಿರಂಗವಾಗಿ ಮಾಡುವಂತಿಲ್ಲ. ಎಲ್ಲವನ್ನೂ ಕದ್ದು ಮುಚ್ಚಿ ಮಾಡಬೇಕು. ಹೊರಗಡೆಯ ಇಮೇಜ್ ಅನ್ನೂ ಉಳಿಸುಕೊಳ್ಳಬೇಕು, ಆಸೆಯನ್ನು ತೀರಿಸಿಕೊಳ್ಳಬೇಕು. ಜೊತೆಗೆ ವೇಷಭೂಷಣ. ಮಳೆಯಾಗಲಿ ಬಿಸಿಲಾಗಲಿ, ವೇಷ ಭೂಷಣವನ್ನು ಬದಲಿಸುವಂತಿಲ್ಲ. ಸಂಸ್ಕೃತ ಶ್ಲೋಕ ಮತ್ತು ವಚನಗಳನ್ನು ಬಾಯಿ ಪಾಠ ಮಾಡಿಕೊಂಡಿರಬೇಕು,. ಜನರ ಎದುರು ಭಾಷಣ ಮಾಡುವಾಗ ಬಾಯಿ ಪಾಠ ಮಾಡಿದ್ದನ್ನು ತಪ್ಪಿಲ್ಲದೇ ಹೇಳಬೇಕು. ಇದೆಲ್ಲ ಕಷ್ಟದ ಕೆಲಸವೇ...!
ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಭ್ರಷ್ಟರಾಗಿದ್ದು ಮಾತ್ರವಲ್ಲ, ಪತ್ರಿಕೋದ್ಯಮಿಗಳನ್ನು ಭ್ರಷ್ಟರನ್ನಾಗಿ ಮಾಡಿದರು. ಅಧಿಕಾರಶಾಹಿಯನ್ನು ಭ್ರಷ್ಟರನ್ನಾಗಿಸಿದರು. ಎಲ್ಲೆಡೆ ಲಂಚ ಪ್ರಪಂಚವನ್ನು ಸೃಷ್ಟಿಸಿದರು. ಈಗ ಮಠಾದೀಶರನ್ನು ಭ್ರಷ್ಟ್ರನ್ನಾಗಿ ಮಾಡಿ ಕೈತೊಳೆದುಕೊಂಡರು. ಕೊನೆಗೆ ಎಲ್ಲರೂ ಭ್ರಷ್ಟರೆ, ಅದರಂತೆ ನಾನೂ ಭ್ರಷ್ಟನಾಗಿರಬಹುದು ಎಂದು ಹೇಳಿಕೊಂಡು ಓಡಾಡತೊಡಗಿದರು. ಇದಾದ ಮೇಲೆ ಕೊನೆಯದಾಗಿ ಬಿಜೆಪಿಯ ವರಿಷ್ಠರನ್ನು ಭ್ರಷ್ಟರನ್ನಾಗಿ ಮಾಡಲು ಹೊರಟಿದ್ದಾರೆ. ಅಡ್ವಾಣಿಯಂಥವರ ಕೈ ಬಾಯಿಯನ್ನು ಮುಚ್ಚಿಸಲು ಯತ್ನ ನಡೆಸುತ್ತಿದ್ದಾರೆ.
ಇಂಥವರು ನಮಗೆ ಬೇಕೆ ?
ಧರ್ಮದ ಹೆಸರಿನಲ್ಲಿ ಜಾತಿ ಮತ್ತು ಪಕ್ಷ ರಾಜಕಾರಣ ಮಾಡುತ್ತಿರುವ ಮಠಾದೀಶರು ಈ ಬಗ್ಗೆ ಯೋಚಿಸಬೇಕು. ದೇಶದ ಸಾಮಾನ್ಯ ಜನರೇ ಮಠಾಧೀಶರಿಗೆ ಧರ್ಮ ಮತ್ತು ನೀತಿಬೋಧನೆ ಮಾಡಬೇಕಾದ ಸ್ಥಿತಿಯನ್ನು ನಿರ್ಮಿಸಬಾರದು.
ಕೊನೆಯ ಮಾತು: ಸ್ವಾಮಿಗಳೇ, ನಿಮಗೆ ರಾಜಕೀಯ ಮಾಡಬೇಕೆಂದಿದ್ದರೆ, ಕಾವಿಯನ್ನು ಕಳಚಿ ಬನ್ನಿ. ಮಠವನ್ನು ತೊರೆದು ಬನ್ನಿ. ರಾಜಕೀಯ ಅಖಾಡಕ್ಕೆ ನೇರವಾಗಿ ಇಳಿದು ಬಿಡಿ. ಸ್ವಾಮೀಜಿಯಾದವರು ಬರೀ ಸ್ವಾಮಿಯಾಗಿ (ಕುಮಾರಸ್ವಾಮಿಯಂತೆ, ಪುಟ್ಟಸ್ವಾಮಿಯಂತೆ !) ನಾವು ನೀವು ಒಂದು ಪೆಗ್ ಹಾಕಿ ಯಡೀಯೂರಪ್ಪ ಇರಬೇಕೆ ಇರಬಾರದೆ ಎಂಬ ಬಗ್ಗೆ ಚರ್ಚೆ ಮಾಡೋಣ. ಓಕೆ ನಾ ?

Friday, November 19, 2010

ಹೋಗಿ ಬನ್ನಿ ಯಡಿಯೂರಪ್ಪ... !

ಕರ್ನಾಟಕದ ರಾಜಕಾರಣದ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ, ಹೊಲಸು ಎಂದು ಹೇಳಿ ಬಿಡಬಹುದು. ಇದು ಕೇವಲ ಹೊಲಸು ಮಾತ್ರವಲ್ಲ ರಾಜಕಾರಣ ಕೊಳೆತು ನಾರುತ್ತಿದೆ. ಅಧಿಕಾರದಲ್ಲಿ ಇರುವವರು ಎಷ್ಟು ನೀಚರಾಗಬಹುದು ಎಂಬುದನ್ನು ಇವತ್ತಿನ ರಾಜಕಾರಣ ಬಯಲು ಮಾಡಿದೆ. ಒಬ್ಬ ರಾಜಕಾರಣಿಗೆ ಕನಿಷ್ಟ ನೈತಿಕತೆ ಇರದಿದ್ದರೆ ಆಗುವ ಅನಾಹುತ.
ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡುತ್ತಿರುವುದನ್ನು ಗಮನಿಸಿದರೆ ಹೇಸಿಗೆಯಾಗುತ್ತದೆ. ಹೇಗಾದರೂ ಮಾಡಿ ನನ್ನನ್ನು ಅಧಿಕಾರದಲ್ಲಿ ಉಳಿಸಿ ಎಂದು ಅವರು ಕಂಡ ಕಂಡವರನ್ನೆಲ್ಲ ಗೋಗರೆಯುತ್ತಿದ್ದಾರೆ. ನಾನು ತಪ್ಪು ಮಾಡಿದ್ದೇನೆ, ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ಶಿಕ್ಷಕರ ಮುಂದೆ ನಿಂತು ಗೋಗರೆಯುವ ಶಾಲಾ ಬಾಲಕನಂತೆ ಅವರು ಕಾಣುತ್ತಾರೆ. ಅವರೀಗ ಪಕ್ಷದ ಹೈಕಮಾಂದ್ ಮುಂದೆ ಕೈಯೊಡ್ಡಿ ಚಡಿ ಏಟು ನೀಡಿ ಎಂದು ಮನವಿ ಮಾಡುತ್ತಿದ್ದಾರೆ.
ಒಬ್ಬ ವ್ಯಕ್ತಿ ನೈತಿಕವಾಗಿ ಅಧಃಪತನಿಕ್ಕೆ ಇಳಿದರೆ ಆಗುವುದು ಹೀಗೆ. ತಮ್ಮ ಕುಟುಂಬದ ಸದಸ್ಯರಿಗೆಲ್ಲ ಭೂ ದಾನ ಮಾಡಿ ಅದು ತಪ್ಪಲ್ಲ ಎಂದು ಸಮರ್ಥಿಸಿಕೊಳ್ಳುತ್ತಿರುವ ಅವರ ಮುಖ ನೋಡುವುದಕ್ಕೂ ಭೇಸರವಾಗುತ್ತದೆ. ಗ್ರಾಮಾಂತರ ಪ್ರದೇಶದಿಂದ ಬಂದು, ಹೋರಾಟದ ಮೂಲಕವೇ ಅಧಿಕಾರ ಹಿಡಿದ ನಾಯಕನೊಬ್ಬನ ದುರಂತ ಇದು. ಇದನ್ನು ನೋಡಿದಾಗ ಅವರಿಗೆ ಬೈಯುವುದಕ್ಕೂ ಮನಸ್ಸಾಗುವುದಿಲ್ಲ.
ಯಡಿಯೂರಪ್ಪ ತಪ್ಪಿದ್ದೆಲ್ಲಿ ಎಂದು ಹುಡುಕಲು ಹೋರಟರೆ, ಅವರು ತಪ್ಪದಿರುವುದೆಲ್ಲಿ ಎಂದು ಹುಡುಕುವುದೇ ಸುಲಭ ಎಂದು ಅನ್ನಿಸಿಬಿಡುತ್ತದೆ. ಯಾಕೆಂದರೆ ಅವರ ತಪ್ಪು ಒಂದೆರಡಲ್ಲ, ಮಹಾಭಾರತದ ಕೃಷ್ಟ ಶಿಶುಪಾಲನ ನೂರು ತಪ್ಪಿಗಾಗಿ ಕಾಯುತ್ತಿದ್ದನಂತೆ. ಇಲ್ಲಿ ನಮ್ಮ ಯಡಿಯೂರಪ್ಪ ಸಾವಿರಾರು ತಪ್ಪುಗಳನ್ನು ಮಾಡಿ, ಇವೆಲ್ಲ ಏನು ಅಲ್ಲ ಎಂದು ಮುಖ ಎತ್ತಿಕೊಂಡು ಓಡಾಡುತ್ತಿರುವುದೇ ಒಂದು ಸೋಜಿಗ.
ಯಡಿಯೂರಪ್ಪ ಅವರ ವ್ಯಕ್ತಿತ್ವದಲ್ಲಿ ಇರುವ ದೋಷವೇ ಇದಕ್ಕೆಲ್ಲ ಕಾರಣ. ಅವರಿಗೆ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಒಂದು ಪ್ರಮುಖ ವಿಚಾರ ಎಂದು ಅನ್ನಿಸುವುದೇ ಇಲ್ಲ. ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕ ನಡವಳಿಕೆಯ ಮಹತ್ವ ಅವರನ್ನು ತಟ್ಟುವುದಿಲ್ಲ. ಯಾಕೆಂದರೆ ಶಿಕಾರಿಪುರದಿಂದ ರಾಜಕಾರಣ ಮಾಡುತ್ತ ಬಂದ ಅವರು ವಿಧಾನಸೌಧದ ಮೆಟ್ಟಿಲು ಏರುವ ಹೊತ್ತಿಗೆ ಆರ್ಥಿಕವಾಗಿ ಸಬಲರಾಗಿ ಬಿಟ್ಟಿದ್ದರು. ಪ್ರತಿ ಪಕ್ಷದ ನಾಯಕನಾಗಿ ಕೆಲಸ ಮಾಡುತ್ತಿದ್ದಾಗಲೇ ಶಿವಮೊಗ್ಗ ಮತ್ತು ಶಿಕಾರಿಪುರದಲ್ಲಿ ಅವರ ಆಸ್ತಿ ಹಿಗ್ಗುತ್ತಲೇ ಇತ್ತು. ಅದು ಮುಖ್ಯಮಂತ್ರಿಯಾದ ಮೇಲೆ ಇನ್ನಷ್ಟು ಹೆಚ್ಚಿತು. ಅವರಿಗೆ ಇದೆಲ್ಲ ತಪ್ಪು ಎಂದು ಎಂದೂ ಅನ್ನಿಸಲೇ ಇಲ್ಲ. ತಮ್ಮ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದ ವಿರುದ್ಧ ಮಾತನಾಡುವವರೆಲ್ಲ ತಮ್ಮ ಷಡ್ಯಂತ್ರ ನಡೆಸುವವರು ಎಂದು ಭಾವಿಸತೊಡಗಿದರು. ಈಗಲೂ ಅಷ್ಟೇ.
ತಾವು ರಾಜ್ಯದ ಅಧಿಕಾರ ಹಿಡಿಯಲು ತಾವು ರೈತ ಪರವಾಗಿ ನಡೆಸಿದ ಹೋರಾಟವೇ ಕಾರಣ ಎಂಬುದನ್ನು ಅವರು ಮರೆತು ಬಿಟ್ಟರು. ಹಣ ಮತ್ತು ಜಾತಿ ಬೆಂಬಲ ತಮ್ಮನ್ನು ಸಾಯುವವರೆಗೆ ಅಧಿಕಾರದಲ್ಲಿ ಇಡುತ್ತವೆ ಎಂಬ ಭ್ರಮೆಗೆ ಒಳಗಾದರು. ಇದಕ್ಕಾಗಿ ತಮ್ಮ ಜಾತಿಯ ಸ್ವಾಮಿಗಳಿಗೆ ಕಂಡ ಕಂಡಲ್ಲಿ ಕಾಲಿಗೆ ಬೀಳತೊಡಗಿದರು. ಮಠಗಳಿಗೆ ಸಾರ್ವಜನಿಕ ಹಣವನ್ನು ನೀಡಿ ಅವರ ಆಶೀರ್ವಾದ ಪಡೆಯತೊಡಗಿದರು. ಇದೆಲ್ಲ ತಪ್ಪು ಎಂದು ಯಾವೊಬ್ಬ ಸ್ವಾಮಿಯೂ ಅವರಿಗೆ ಹೇಳಲಿಲ್ಲ. ಇನ್ನೊಂದೆಡೆ ಹಣ ಮತ್ತು ಆಸ್ತಿ ಸಂಗ್ರಹದಲ್ಲಿ ತೊಡಗಿದರು. ತಾವು ಇನ್ನೂ ಹಲವು ವರ್ಷಗಳ ಕಾಲ ಅಧಿಕಾರ ನಡೆಸುವ ಕನಸು ಕಾಣತೊಡಗಿದರು.
ತಮ್ಮ ವೈಯಕ್ತಿಕ ಬದುಕಿನ ಸಮಸ್ಯೆಗಳನ್ನು, ತಮ್ಮ ವಿವಾಹೇತರ ಸಂಬಂಧದ ಸಮಸ್ಯೆಯನ್ನು ಅವರು ಮುಚ್ಚಿಟ್ಟುಕೊಳ್ಲಬೇಕಾಗಿತ್ತು ತಮ್ಮ ಕುಟುಂಬದಿಂದ ಮಕ್ಕಳಿಂದ ಪ್ರತಿರೋಧ ಉಂಟಾಗಬಾರದು ಎಂದು ಮಕ್ಕಳಿಗೆ ಆಸ್ತಿ ಮಾಡಿಕೊಳ್ಳಲಿ ರೆಡ್ ಕಾರ್ಪೆಟ್ ಹಾಸಿದರು. ಯಾವುದೇ ರಾಜಕೀಯ ಸಾಮಾಜಿಕ ಬದುಕಿನ ಗಂಧ ಗಾಳಿ ಇಲ್ಲದ ಇಬ್ಬರು ಪುತ್ರ ರತ್ನರು ಭೂ ಸ್ವಾಹಾ ಯಜ್ನವನ್ನು ನಡೆಸತೊಡಗಿದರು. ತಮ್ಮ ವೈಯಕ್ತಿಕ ದೌರ್ಬಲ್ಯವನ್ನು ಮುಚ್ಚಿಟ್ಟುಕೊಳ್ಳುವುದಕ್ಕಾಗಿ ಇದನ್ನೆಲ್ಲ ನೋಡಿದರೆ ನೋಡದಂತೆ ಯಡಿಯೂರಪ್ಪ ಕಣ್ನು ಮುಚ್ಚಿ ಕುಳಿತರು. ಹಣ ಮತ್ತು ಅಧಿಕಾರ ಯಡೀಯೂರಪ್ಪನವರ ಒಳಗೆ ಇದ್ದ ಹೋರಾಟಗಾರನನ್ನು ಆಗಲೇ ಹತ್ಯೆ ಮಾಡಿಯಾಗಿತ್ತು. ಅಧಿಕಾರ ಅಮಲಾಗಿ ಅವರ ವ್ಯಕ್ತಿತ್ವವನ್ನು ಆಗಲೇ ಆವರಿಸಿಕೊಂಡು ಬಿಟ್ಟಿತ್ತು.
ಈಗ ಪಕ್ಷದ ವರಿಷ್ಟರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನಿಡುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿ ಆಗಿದೆ. ಆದರೆ ಅವರು ಅಧಿಕಾರ ಬಿಡುವುದಿಲ್ಲ ಎಂದು ಹಠ ಮಾಡತೊಡಗಿದ್ದಾರೆ. ಪಕ್ಷದ ವರಿಷ್ಟರಿಗೆ ಷರತ್ತುಗಳನ್ನು ವಿಧಿಸತೊಡಗಿದ್ದಾರೆ. ಹಾಗೆ ನಾನು ಮುಖ್ಯಮಂತ್ರಿಯಾಗಿರಬೇಕು, ರಾಜ್ಯದ ಅಭಿವೃದ್ಧಿ ಮಾಡಬೇಕು ಎಂದು ಅಳುತ್ತಾರೆ. ಅವರ ಈ ಹತಾಶ ಹೇಳಿಕೆಗಳನ್ನು ಗಮನಿಸಿದಾಗ ಈ ದುರಂತ ನಾಯಕ ತಲುಪಿರುವ ಸ್ಥಿತಿಯ ಬಗ್ಗೆ ಬೇಸರವಾಗುತ್ತದೆ. ಅವರು ಮೊದಲ ಬಾರಿ ಮಾಧ್ಯಮದ ಎದುರು ಅತ್ತಾಗ ಇದು ಭಾವೋದ್ವೇಗದ ಪರಮಾವಧಿ ಎಂದು ಅನ್ನಿಸಿತ್ತು. ಆದರೆ ಈಗ ಅವರಿಗೆ ಅಳುವುದೇ ಚಟವಾಗಿ ಬಿಟ್ಟಿದೆ. ಏನೇ ಆದರೂ ಅವರು ಅಳುವುದನ್ನು ನೋಡಿದರೆ ಅವರಿಗೆ ಯಾವುದೋ ರೀತಿಯ ಸಮಸ್ಯೆ ಇರಬೇಕು ಎಂದು ಅನ್ನಿಸುತ್ತದೆ.
ಯಡಿಯೂರಪ್ಪ ಹುಂಬ. ಆದರೆ ಗ್ರಾಮಾಂತರ ಪ್ರದೇಶದ ಅಭಿವೃದ್ಧಿಯ ಬಗ್ಗೆ ಅವರಿಗಿರುವ ಬದ್ಧತೆಯನ್ನು ಪ್ರಶ್ನಿಸುವುದು ಸಾಧ್ಯವಿಲ್ಲ ಎಂಬುದು ನನ್ನ ನಂಬಿಕೆಯಾಗಿತ್ತು. ಆದರೆ ನನ್ನ ನಂಬಿಕೆ ಸುಳ್ಳು ಎಂದು ಈಗ ಅನ್ನಿಸತೊಡಗಿದೆ. ಅವರಿಗೆ ರಾಜ್ಯದ ಅಭಿವೃದ್ಧಿ ಎಂದರೆ ತಮ್ಮ ಮತ್ತು ತಮ್ಮ ಕುಟುಂಬದ ಅಭಿವೃದ್ಧಿ ಮಾತ್ರ.
ರಾಜಕಾರಣದವನ್ನು ಅರ್ಥಮಾಡಿಕೊಳ್ಳದವರು, ನೈತಿಕ ಮತ್ತು ಸಾಮಾಜಿಕ ಬದ್ಧತೆ ಇಲ್ಲದವರು ಅಧಿಕಾರದ ಗದ್ದುಗೆ ಹಿಡಿಯುವುದರ ಸಮಸ್ಯೆ ಇದು. ಒಬ್ಬ ರಾಜಕಾರಣಿ, ಒಬ್ಬ ಮುಖ್ಯಮಂತ್ರಿ ಹಾಗೂ ಸಚಿವರು ಎಂದರೆ ಅವರು ಸಮಾಜದ ದರ್ಮದರ್ಶಿಗಳು. ಅವರು ಸಾರ್ವಜನಿಕ ಹಣವನ್ನು ಜತನದಿಂದ ಕಾಪಾಡಬೇಕಾಗುತ್ತದೆ. ಅವರಿಗೆಲ್ಲ ಉತ್ತರದಾಯಿತ್ವ ಎನ್ನುವುದು ಇರುತ್ತದೆ. ಇವರು ನಿರ್ವಹಣೆ ಮಾಡುವುದು ಸಾರ್ವಜನಿಕರ ಹಣವನ್ನು. ಈ ಅರಿವು ಪ್ರತಿಯೊಬ್ಬ ರಾಜಕಾರಣಿಗೂ ಇರಬೇಕು. ಇದನ್ನು ಅರ್ಥ ಮಾಡಿಕೊಳ್ಳದವರು ರಾಜಕಾರಣಿಯಾಗುವುದಕ್ಕೆ ಅರ್ಹರಲ್ಲ.
ಯಡಿಯೂರಪ್ಪ ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಅವರಿಗೆ ರಾಜಕೀಯ ಬದುಕಿನಲ್ಲಿ ಇರಬೇಕಾದ ಪ್ರಾಮಾಣಿಕತೆ ಇರಲಿಲ. ಅವರು ಪ್ರಾಮಾಣಿಕತೆ ಮತ್ತು ಮೌಲಿಕ ರಾಜಕಾರಣವನ್ನು ನಂಬುವುದಕ್ಕೆ ಬದಲಾಗಿ ಕಾವಿ ಧರಿಸಿದ ಸ್ವಾಮಿಗಳನ್ನು ನಂಬಿದರು. ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರೆ ದೇವರು ತನ್ನ ಕೈ ಬಿಡುವುದಿಲ್ಲ ಎಂದು ನಂಬಿದರು. ಹಣೆಯ ಮೇಲೆ ಕುಂಕುಮದ ಬಟ್ಟು ಇಟ್ಟುಕೊಂಡರೆ, ತಮ್ಮ ಹಣೆ ಬರೆಹ ಚೆನ್ನಾಗಿರುತ್ತದೆ ಎಂದುಕೊಂಡರು. ಆದರೆ ಆ ದೇವರು ಎನ್ನುವವನಿದ್ದರೆ ಆತ ಕೇವಲ ಯಡಿಯೂರಪ್ಪ, ರಾಘವೇಂದ್ರ, ವಿಜೇಂದ್ರ, ಶೋಭಾ ಕರಂದ್ಲಾಜೆ ಎಂಬ ಅವನ ಆಪ್ತ ವರ್ಗದ ರಕ್ಷಣೆಗಾಗಿ ಇದ್ದವನಲ್ಲ. ಅವನು ಈ ಸಮಾಜದಲ್ಲಿ ಇರುವ ಎಲ್ಲರನ್ನೂ ರಕ್ಷಿಸುವಂತಾದರೆ ಮಾತ್ರ ಆತ ದೇವರಾಗಿ ಉಳಿಯುತ್ತಾನೆ. ಆತ ಯಡಿಯೂರಪ್ಪ ಅವರ ಬಾಡಿ ಗಾರ್ಡ್ ಆಗಿ ಮಾತ್ರ ಉಳಿಯಲು ಸಾಧ್ಯವಿಲ್ಲ.
ಈಗ ಯಡಿಯೂರಪ್ಪ ಅವರಿಗೆ ನಾವೆಲ್ಲ ಸೇರಿ ಬೀಳ್ಕೊಡುಗೆ ನೀಡಬೇಕಾಗಿದೆ. ಅವರನ್ನು ಬೀಳ್ಕೊಡುವಾಗ ಕೆಲವೊಂದು ಒಳ್ಳೆಯ ಮಾತುಗಳನ್ನು ಹೇಳಬೇಕು. ಭಾರತೀಯ ಜನತಾ ಪಾರ್ಟಿಗೆ ಮಾಸ್ ಬೇಸ್ ನೀಡಿದವರು ಅವರು. ರೈತರನ್ನು ಸಂಘಟಿಸಿ ಅವರನ್ನು ಪಕ್ಷದ ತೆಕ್ಕೆಗೆ ಎಳೆದು ತಂದವರು ಅವರು.
ಆದರೆ ರಾಜಕಾರಣದಲ್ಲಿ ಇಷ್ಟೇ ಸಾಕಾಗುವುದಿಲ್ಲ ಮಾಡಿದ ಒಳ್ಳೆಯ ಕೆಲಸಗಳು ಕೊನೆಯವರೆಗೂ ಕೈ ಹಿಡಿಯುವುದಿಲ್ಲ. ಇದು ಅವರಿಗೆ ಅರ್ಥವಾಗಲಿ.
ಹೋಗಿ ಬನ್ನಿ ಯಡಿಯೂರಪ್ಪ.

Thursday, November 18, 2010

ನಾನು ನನ್ನ ಜಿಲ್ಲೆಗೆ ಹೋಗಿದ್ದೆ.......

ಕಳೆದ ಎರಡು ಮೂರು ದಿನಗಳ ಕಾಲ ಉತ್ತರ ಕನ್ನಡಜಿಲ್ಲೆಯಲ್ಲಿದ್ದೆ. ಅದು ನನ್ನ ಜಿಲ್ಲೆ. ನಾನು ಹುಟ್ಟಿ ಬೆಳೆದ ಜಿಲ್ಲೆ. ಅಲ್ಲಿನ ಕಾಡು, ನದಿಗಳು ಗುಡ್ಡ ಬೆಟ್ಟಗಳು ಎಲ್ಲವೂ ನನ್ನವು ಎಂದು ಅನ್ನಿಸುತ್ತದೆ. ಬೆಂಗಳೂರು ಎಂಬ ಮಾಯಾನಗರಿ ನನ್ನನ್ನು ತಲ್ಲಣಗೊಳಿಸಿದಾಗ ಅಲ್ಲಿಗೆ ಓಡಿ ಹೋಗಬೇಕು ಎಂದು ಅನ್ನಿಸುತ್ತದೆ. ಇಷ್ಟು ವರ್ಷಗಳ ನಂತರವೂ ಬೆಂಗಳೂರು ನನ್ನದು ಎಂದು ಅನ್ನಿಸಿಲ್ಲ. ಹಾಗೆ ಊರು ಬಿಟ್ಟು ಮೂರು ದಶಕಗಳು ಕಳೆದರೂ ಉತ್ತರ ಕನ್ನಡ ಪರಕೀಯವಾಗಿಲ್ಲ.
ಈ ಬಾರಿ ನಾನು ಹೋಗಿದ್ದು ಪತ್ರಕರ್ತ ಗಂಗಾಧರ್ ಕೊಳಗಿಯ ಪುಸ್ತಕ ಬಿಡುಗಡೆಗಾಗಿ. ಆತ ಈಗ ಸಿದ್ಧಾಪುರದಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರನಾಗಿದ್ದಾನೆ. ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಆತನ ವಿಶೇಷ ಲೇಖನಗಳ ಸಂಗ್ರಹ ಸಮಯದ ನಿಜ ವನ್ನು ಹೊರತಂದಿದ್ದಾನೆ. ಅದನ್ನು ನಾನೇ ಬಿಡುಗಡೆ ಮಾದಬೇಕು ಎನ್ನುವುದು ಅವನ ಒತ್ತಾಸೆಯಾಗಿತ್ತು. ಹೀಗಾಗಿ ನಾನು ಉತ್ತರ ಕನ್ನಡಕ್ಕೆ ಹೋಗಿದ್ದು. ಆತನಿಗೆ ನನ್ನ ಮೇಲೆ ಎಷ್ಟು ಪ್ರೀತಿ ಎಂದರೆ ನನ್ನನ್ನು ಆತ ಪತ್ರಿಕೋದ್ಯಮದ ಗುರು ಎಂದು ಕರೆಯುತ್ತಾನೆ. ಆದರೆ ಗುರು ಪರಂಪರೆಯಲ್ಲಿ ಅಷ್ಟಾಗಿ ನಂಬಿಕೆ ನನ್ನಲ್ಲಿ ಇಲ್ಲದಿರುವುದರಿಂದ ಗುರು ಎಂದು ತಕ್ಷಣ ಏನೇನೋ ನೆನಪಾಗುತ್ತದೆ. ರಾಜಕಾರಣಿಗಳ ಭಟ್ಟಂಗಿಗಳಾದ ಗುರುಗಳು, ಕಾವಿಯ ಅಡಿಯಲ್ಲಿ ಕಾಮವನ್ನು ಸಲಹುವ ಗುರುಗಳು. ಆಧ್ಯಾತ್ಮವನ್ನು ಬಿಟ್ಟು ಆತ್ಮವನ್ನು ಮಾರಾಟಕ್ಕೆ ಇಟ್ಟುಕೊಂಡವರು ಎಲ್ಲರೂ ಕಣ್ಣ ಮುಂದೆ ಬರುತ್ತಾರೆ. ಆದರೆ ಯಾರೋ ಪ್ರೀತಿಯಿಂದ ನನ್ನ ಗುರುಗಳು ಎಂದು ಕರೆದರೆ ಅವರ ಮನಸ್ಸನ್ನು ನೋಯಿಸಲು ಮನಸ್ಸಾಗುವುದಿಲ್ಲ. ಹೀಗಾಗಿ ಗುರು ಪಟ್ಟವನ್ನು ಮೌನವಾಗಿ ಒಪ್ಪಿಕೊಳ್ಳಬೇಕಾಗುತ್ತದೆ.
ಅಲ್ಲಿ ನಡೆದಿದ್ದು ರಾಜ್ಯ ಮಟ್ಟದ ಪೌರಾಣಿಕ ನಾಟಕೋತ್ಸವ. ಈ ನಾಟಕೋತ್ಸವದಲ್ಲಿಯೇ ಗಂಗಾಧರನ ಪುಸ್ತಕ ಬಿಡುಗಡೆಯಾಗಿದ್ದು. ನನ್ನ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಶ್ರೀನಿವಾಸ್ ಜಿ ಕಪ್ಪಣ್ಣ. ಅಲ್ಲಿ ನಾನು ಏನು ಮಾತನಾಡಿದೆ ಎಂಬುದು ಅಷ್ಟು ಮುಖ್ಯವಲ್ಲ. ಇವತ್ತಿನ ಪತ್ರಿಕೋದ್ಯಮದ ಬಗ್ಗೆ, ಎಲ್ಲೆಡೆ ಭ್ರಷ್ಟತೆ ಆವರಿಸಿರುವ ಬಗ್ಗೆ ನಾನು ಕೆಲವು ಮಾತುಗಳನ್ನು ಹೇಳಿದೆ. ಆದರೆ ಅಲ್ಲಿ ನಾನು ಸಣ್ಣಿಂದ ನೋಡಿದ ಹಲವರು ಪ್ರೇಕ್ಷಕರಲ್ಲಿ ಕಾಣುತ್ತಿದ್ದರು. ಅಲ್ಲಿ ನನ್ನ ಅಪ್ಪ, ಅಮ್ಮ,ತಮ್ಮ, ನನ್ನ ಜೊತೆ ಓದಿದವರು, ಹಿರಿಯರು, ಸ್ಥಳೀಯ ಪತ್ರಕರ್ತರು ಎಲ್ಲರೂ ಇದ್ದರು. ಅವರೆಲ್ಲರನ್ನು ನೋದುವಾಗ ಅವರಲ್ಲಿ ನನ್ನ ಬಗ್ಗೆ ಇದ್ದ ಪ್ರೀತಿಯ ಬಗ್ಗೆ ಹೆಮ್ಮೆ ಅನ್ನಿಸುತ್ತಿತ್ತು.
ಕಾರ್ಯಕ್ರಮ ನಡೆದ ಶಂಕರ ಮಠದ ಧರ್ಮಾಧಿಕಾರಿ ವಿಜಯ್ ಹೆಗಡೆ ತಮ್ಮದೇ ಕಾರ್ಯಕ್ರಮ ಎನ್ನುವಂತೆ ನೋಡಿಕೊಂಡಿದ್ದರು. ವಿಜಯ ಹೆಗಡೆ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಕುಟುಂಬದ ಸದಸ್ಯರು. ಅವರೆಂದೂ ರಾಜಕೀಯದ ಬೆನ್ನು ಬಿದ್ದವರಲ್ಲ. ಚಿಕ್ಕಪ್ಪ ರಾಮಕೃಷ್ಣ ಹೆಗಡೆಯವರ ಹೆಸರು ಹೇಳಿಕೊಂಡು ಬದುಕಲು ಯತ್ನ ನಡೆಸಿದವರಲ್ಲ. ಇಂದು ಸಿದ್ಧಾಪುರದ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾದ ಶಂಕರ ಮಠವನ್ನು ಕಟ್ಟಿ ಬೆಳೆಸಿದವರು ಅವರು.
ಅವರ ಜೊತೆ ನಾನು ಕಳೆದ ಒಂದೆರಡು ತಾಸು ಓಷೋ, ರವಿಶಂಕರ್, ಸ್ವಾಮಿ ರಾಮದೇವ್ ಹೀಗೆ, ಆಧ್ಯಾತ್ಮ, ಯೋಗದ ಬಗ್ಗೆ ಮಾತನಾಡಿದೆವು. ಸಿದ್ಧಾಪುರಕ್ಕೆ ಹೋಗುವುದಕ್ಕೂ ಮೊದಲು ನನ್ನ ಮನಸ್ಸಿನಲ್ಲಿದ್ದುದು ಉತ್ತರ ಕನ್ನಡ ಜಿಲ್ಲೆಗೆ ಏನಾದರೂ ಮಾಡಬೇಕು ಎಂಬ ಹಪಹಪಿಕೆ. ಈ ನನ್ನ ಜಿಲ್ಲೆ ನಮ್ಮ ಆಧುನಿಕ ಪರಿಭಾಷೆಯಲ್ಲಿ ಹೇಳುವಂತೆ ಅಭಿವೃದ್ಧಿಯಾಗಿಲ್ಲ. ಐಟಿ ಬಿಟಿ ಕಂಪೆನಿಗಳು, ನೈಟ್ ಕ್ಲಬ್ ಗಳು ಪಿಜ್ಜಾ ಭರ್ಗರ್ ಧಾಳಿ ಮಾಡಿಲ್ಲ. ಇಲ್ಲಿನ ಜನ ತಮಗೆ ದೊರಕಿದ್ದಕ್ಕೆ ಸಂತೋಷ ಪಡುತ್ತ ಬದುಕುವವರು. ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯ ಜನರಂತೆ ಸಾಹಿಸಿಗರೂ ಅಲ್ಲ. ಆದರೆ ಇಲ್ಲಿ ಈಗಲೂ ಪ್ರವಾಸೋದ್ಯಮಕ್ಕೆ ವಿಫುಲವಾದ ಅವಕಾಶಗಳಿವೆ. ಪ್ರವಾಸೋದ್ಯಮ ಒಂದು ಕೈಗಾರಿಕೆಯಾಗಿ ಬೆಳೆದರೆ ಇಲ್ಲಿನ ಆರ್ಥಿಕತೆಯ ರೂಪವೇ ಬದಲಾಗಿ ಬಿಡುತ್ತದೆ. ಪಕ್ಕದ ಗೋವಾಕ್ಕೆ ಬರುವ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುವಂತಾದರೆ ಸಾಕು ಇಲ್ಲಿನ ಚಿತ್ರವೇ ಬದಲಾಗಿ ಹೋಗುತ್ತದೆ.
ನಾನು ಈ ಬಗ್ಗೆ ಸಿರ್ಸಿಯಲ್ಲಿ ಕೆಲವು ಸ್ನೇಹಿತರ ಜೊತೆ ಚರ್ಚೆ ನಡೆಸಿದೆ. ಬೆಂಗಳೂರಿನಲ್ಲಿ ಹಲವು ವರ್ಷ ಮಣ್ಣು ಹೊತ್ತು ಈಗ ಊರಿಗೆ ಹಿಂತಿರುಗಿರುವ ಶಶಿಧರ್ ಭಟ್ ಕೂಡ ಅವರಲ್ಲಿ ಒಬ್ಬರು. ಸುನಿಲ್ ಕುಮಾರ್ ದೇಸಾಯಿ ಅವರ ಜೊತೆ ಹಲವು ವರ್ಷಗಳ ಕಾಲ ಮಣ್ನು ಹೊತ್ತ ಅವರು ನನ್ನ ಹೆಸರನ್ನು ಇಟ್ಟುಕೊಂಡು ನನ್ನನ್ನೇ ಫಝೀತಿಗೆ ಸಿಕ್ಕಿಸಿದವರು. ಅವರು ಮಠ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಹಾಗೇ ಮಠ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಹೆಸರು ನನ್ನ ಹೆಸರು ಒಂದೇ ಆದ್ದರಿಂದ ಬೆಂಗಳೂರಿನಿಂದ ಹೊರಗೆ ಹೋದಾಗ ಹಲವರು ನಾನೇ ಅವರೆಂದು ಮಾತನಾಡಿಸಿದ ಹಲವು ಉದಾಹರಣೆಗಳೂ ಉಂಟು.
ಈ ಶಶಿಧರ್ ಭಟ್ ಊರಿನಲ್ಲಿ ಅಜ್ಜಿ ಮನೆ ಎಂಬ ಹೋಮ್ ಸ್ಟೇ ನಡೆಸುತ್ತಿದ್ದಾರೆ. ಹಾಗೆ ಸಚಿವ ವಿಶ್ವೇಶ್ವರ ಹೆಗಡೆ ಅವರ ಹತ್ತಿರದ ಸಂಬಂಧಿ ಸುಹಾಸ್ ಹೆಗಡೆ ಕೂಡ ಹೊಂ ಸ್ಟೇ ನಡೆಸುತ್ತಿದ್ದಾರೆ. ನಾವು ಉತ್ತರ ಕನ್ನಡದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದೆವು.ಶಶಿಧರ್ ಭಟ್ಟರ ಮನೆಯ ಹಿಂದೆ ಸೂರ್ಯಾಸ್ಥದ ಗುಡ್ಡದ ಮೇಲೆ ಕುಳಿತು ಮಾತನಾಡಿದೆವು. ಆಗ ನಮ್ಮ ಮನಸ್ಸಿನಲ್ಲಿ ಬಂದ ಆಲೋಚನೆಗಳು ಹಲವು. ಅದನ್ನೆಲ್ಲ ಕಾರ್ಯ ರೂಪಕ್ಕೆ ಇಳಿಸಬೇಕಾಗಿದೆ. ಅದಕ್ಕಾಗಿ ಕಾರ್ಯ ಯೋಜನೆಯನ್ನು ರೂಪಿಸಬೇಕಾಗಿದೆ, ನಾನು ಕಾರ್ಯ ಯೋಜನೆಯನ್ನು ರೂಪಿಸಿ ಕೋದುವುದಾಗಿ ಅವರಿಗೆ ಹೇಳಿದ್ದೇನೆ. ಇನ್ನೊಂದೆರಡು ದಿನಗಳಲ್ಲಿ ನಾನು ಈ ಕೆಲಸ ಮಾಡಬೇಕಾಗಿದೆ.
ನನ್ನ ಉತ್ತರ ಕನ್ನಡ ಜಿಲ್ಲೆ ಮೊದಲಿನಂತಿಲ್ಲ. ಕಾಡು ಕಡಿಮೆಯಾಗಿದೆ. ಮಳೆ ಮನಸ್ಸಿಗೆ ಬಂದಾಗ ಬರುತ್ತದೆ. ಅಡಿಕೆ ಬೆಲೆಯನ್ನು ನಂಬಿಕೊಳ್ಳುವಂತಿಲ್ಲ. ಆದರೂ ಇಲ್ಲಿನ ಜನ ಯಕ್ಷಗಾನ, ತಾಳ ಮದ್ದಲೆ, ಸಂಗೀತ ಕಚೇರಿಗಳ ನಡುವೆ ಸಂತೃಪ್ತರಾಗಿಯೇ ಬದುಕುತ್ತಿದ್ದಾರೆ. ಇದೇ ಪರಿಸರ, ಇದೇ ಯಕ್ಷಗಾನ, ಸಂಗೀತ ಕಚೇರಿಗಳು ನನ್ನಂಥವನನ್ನು ಬೆಳೆಸಿವೆ. ನಾನು ಅಲ್ಲಿ ಹೇಳಿದೆ;
ನಗೆ ಇಂದು ಸ್ವಲ್ಪ ಮಾತನಾಡಲು ಬರೆಯಲು ಬರುತ್ತಿದ್ದರೆ, ಟೀವಿಯಲ್ಲಿ ಕಾರ್ಯಕ್ರಮ ನಡೆಸಲು, ಧಾರಾವಾಹಿಗಳನ್ನು ನಿರ್ಮಿಸಲು ಸಾಧ್ಯವಾಗಿದ್ದರೆ ಅದಕ್ಕೆ ಕಾರಣ ನನ್ನ ಜಿಲ್ಲೆ ಮತ್ತು ಅಲ್ಲಿನ ಪರಿಸರ. ಕಾಡಿನ ಮಧ್ಯೆ ಇದ್ದರೂ ಮಾತನಾಡಲು ಕಲಿಸಿದ್ದೇ ಈ ಜಿಲ್ಲೆ. ನಾನು ಈ ಜಿಲ್ಲೆಗೆ ಇಲ್ಲಿನ ಪರಿಸರಕ್ಕೆ ಇಲ್ಲಿನ ಜನರಿಗೆ ಹೇಗೆ ತಾನೇ ಕೃತಜ್ನತೆ ಸಲ್ಲಿಸಲು ಸಾಧ್ಯ ?

Sunday, November 14, 2010

ಮಾಧ್ಯಮಗಳು ಮತ್ತು ಚೆಡ್ಡಿ ಪುರಾಣ.....!

ಕಳೆದ ವಾರ ನಡೆಯಬಾರದ ಘಟನೆಯೊಂದು ನಡೆದು ಹೋಯಿತು. ಖ್ಯಾತ ನಟಿ ರಾಖಿ ಸಾವಂತ್ ನಡೆಸಿಕೊಡುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ. ಆತನನ್ನು ಆಕೆ ಕರೆದಿದ್ದು ನಪುಂಸಕ ಎಂದು. ಈ ಮಾತು ಅವನ ಮೇಲೆ ಎಂತಹ ಪರಿಣಾಮ ಬೀರಿತೆಂದರೆ ಆತ ಆತ್ಮಹತ್ಯೆಗೆ ಮುಂದಾಗಿ ಬಿಟ್ಟ. ಆದರೆ ಈ ಸಾವು ಯಾರನ್ನೂ ಕಾಡಲಿಲ್ಲ. ಚಾನಲ್ಲಿನವರು ಹೇಳಿಕೆಯೊಂದನ್ನು ನೀಡಿ ಕೈತೊಳೆದುಕೊಂಡರು. ರಾಖಿ ಸಾವಂತ್ ಹಿಂದಿನ ರೀತಿಯಲ್ಲೇ ತನ್ನ ಕಾರ್ಯಕ್ರಮವನ್ನು ಮುಂದುವರಿಸಿದಳು.
ನಾನು ಸಂಪೂರ್ಣವಾಗಿ ರಾಖಿ ಸಾವಂತ್ ಅವರ ಕಾರ್ಯಕ್ರಮವನ್ನು ನೋಡಲಿಲ್ಲ. ಆದರೆ ಆತ ಆಕೆಯ ಜೊತೆ ಮಾತನಾಡುತ್ತಿರುವ ಕೆಲವು ಭಾಗಗಳನ್ನು ಮಾತ್ರ ನೋಡಿದೆ. ಆಗ ನನಗೆ ಅನ್ನಿಸಿದ್ದು ಈ ವ್ಯಕ್ತಿ ತುಂಬಾ ಎಮೋಷನಲ್ ಎಂದು. ರಾಖಿ ತನ್ನ ಇನ್ಸಾಫ್ ನಲ್ಲಿ ಇದನ್ನು ಗಮನಿಸಲಿಲ್ಲ. ತನ್ನ ಮುಂದೆ ಕುಳಿತವರನ್ನು ಝಾಡಿಸುವುದು ತನ್ನ ಕರ್ತವ್ಯ ಎಂಬಂತೆ ಅವನ ಮೇಲೆ ಧಾಳಿ ನಡೆಸುತ್ತಿದ್ದಳು. ಆತ ನಪುಂಸಕ ಎಂಬುದು ರಾಖಿಗೆ ಹೇಗೆ ಗೊತ್ತಾಯಿತು ? ಆಕೆ ಆತನ ಪುರುಷತ್ವವನ್ನು ಪರೀಕ್ಷೆ ಮಾಡಿದ್ದಳೆ ? ಅಥವಾ ಆತನ ಹೆಂದತಿ ತನ್ನ ಗುಂಡ ನಪುಂಸಕ ಎಂದು ಹೇಳಿದ್ದಳೆ ? ಒಂದೊಮ್ಮೆ ಡೈವೋರ್ಸ್ ಗೆ ಮುಂದಾದ ಹೆಂಡತಿ ಇಂತಹ ಆರೋಪ ಮಾಡಿದ್ದರೂ ಜವಾಬ್ದಾರಿಯುತ ಚಾನಲ್ಲಿನ ನಿರೂಪಕರು ಅದನ್ನು ನಂಬುವುದು ಸಾಧ್ಯವೆ ? ನಂಬಿದರೂ ಬಹಿರಂಗವಾಗಿ ಹೇಳುವುದು ಎಷ್ಟು ಸರಿ ?
ರಾಖಿಯಲ್ಲಿ ಒಬ್ಬ ಕಾರ್ಯಕ್ರಮ ನಿರೂಪಕನಿಗೆ ಬೇಕಾದ ಸೂಕ್ಷ್ಮತೆಯ ಕೊರತೆ ಎದ್ದು ಕಾಣುತ್ತಿತ್ತು.
ಕಾರ್ಯಕ್ರಮವನ್ನು ನಿರೂಪಿಸುವವರಿಗೆ ಎದುರಿಗೆ ಕುಳಿತವರ ಮನಸ್ಸನ್ನು ಓದುವ ಸೂಕ್ಷ್ಮತೆ ಇರಬೇಕಾಗುತ್ತದೆ. ಮನುಷ್ಯ ಎಲ್ಲವನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಾಗುವುದಿಲ್ಲ. ಶಬ್ದಗಳಿಗೆ ಮೀರಿದ್ದನ್ನು ಆತ ತನ್ನ ಬಾಡಿ ಲ್ಯಾಂಗ್ವೇಜ್ ನಲ್ಲಿ ಹೇಳುತ್ತಿರುತ್ತಾನೆ. ಇದನ್ನು ನಿರೂಪಕ ಗೃಹಿಸಬೇಕು. ಪ್ರಾಮಾಣಿಕತೆ, ಸತ್ಯ ಎಲ್ಲವೂ ಶಬ್ದಗಳಲ್ಲಿ ಹಿಡಿದಿಡುವುದು ಸುಲಭವಲ್ಲ. ಯಾಕೆಂದರೆ ಶಬ್ದಗಳು ಕೆಲವೊಮ್ಮೆ ಮುಖವಾಡ ಧರಿಸುತ್ತಿರುತ್ತವೆ.ಆದರೆ ಆತನ ಆಂಗಿಕ ಚಲನೆ ಸತ್ಯವನ್ನು ಹೊರಹಾಕುತ್ತಲೇ ಇರುತ್ತದೆ. ಇದನ್ನು ಒಬ್ಬ ನಿರೂಪಕ ಗೃಹಿಸಬೇಕು.
ರಾಖಿಗೆ ಈ ಕಾರ್ಯಕ್ರಮ ಕೂಡ ಯಾವುದೋ ಚಲನಚಿತ್ರದ ನಟನೆ. ಆಕೆ ಸಿನೆಮಾಗಳಲ್ಲಿ ನಟಿಸುವಂತೆ ಇಲ್ಲಿಯೂ ನಟಿಸುತ್ತಾಳೆ. ಆದರೆ ಇವಳ ಎದುರು ಕುಳಿತವರು ತಮ್ಮ ಬದುಕನ್ನು, ಅಲ್ಲಿನ ಒಳಗುಟ್ಟುಗಳನ್ನು ಬಿಚ್ಚಿಡುತ್ತಿರುತ್ತಾರೆ. ಒಂದೆಡೆ ನಟನೆ ಇನ್ನೊಂದೆಡೆ ತೆರೆದುಕೊಳ್ಳುವ ಸತ್ಯ.
ಸಮಸ್ಯೆ ಪ್ರಾರಂಭವಾಗುವುದು ಇಲ್ಲೇ.
ಈ ಸಾವಿನ ಬಗ್ಗೆ ಯೋಚಿಸುತ್ತಲೇ ರಾಖಿ ಸಾವಂತ್ ಳ ಇನ್ನೊಂದು ಎಪಿಸೋಡ್ ನೋಡಿದೆ. ಈ ಎಪಿಸೋಡಿನಲ್ಲಿ ಜಗಳವಾಡುವ ಗಂಡ ಹೆಂದತಿ ಬಂದು ಕುಳಿತಿದ್ದರು. ಅವರ ಸಂಬಂಧ ಡೈವೋರ್ಸ್ ವರೆಗೆ ಬಂದು ನಿಂತಿತ್ತು. ಆಕೆ ತನ್ನ ಗಂಡನ ಚೆಡ್ದಿಯ ವಿಚಾರವನ್ನು ಪ್ರಸ್ತಾಪಿಸಿದಳು. ನಂತರ ಆತನ ಓಳ ಉಡುಪು ಹರಿದಿದೆಯೇ ಅಥವಾ ಇಲ್ಲವೆ ಎಂಬ ಬಗ್ಗೆ ಅಲ್ಲಿ ಬಹಳ ಹೊತ್ತು ಚರ್ಚೆ ನಡೆಯಿತು. ಇದನ್ನು ನೋಡಿ ತಲೆ ಚಿಟ್ತು ಹಿಡಿದು ಕನ್ನಡ ಚಾನಲ್ ಗಳತ್ತ ತಿರುಗಿದೆ. ಅಲ್ಲಿನ ಒಂದು ಕಾರ್ಯಕ್ರಮದಲ್ಲಿ ಕಾಡಿಗೆ ಹೋದ ಪೇಟೆ ಮಂದಿ ಕಷ್ಟಕ್ಕೆ ಸಿಲುಕಿಕೊಂಡಿದ್ದರು. ಅವರ ಬಟ್ಟೆಯೆಲ್ಲ ಒದ್ದೆಯಾಗಿತ್ತು. ಕಾರ್ಯಕ್ರಮದ ನಿರೂಪಕರುಹೊಸ ಬಟ್ಟೆ ಕೊಡಲು ಸಿದ್ಧರಿರಲಿಲ್ಲ. ಆಗ ಅವರು ಪ್ರಸ್ತಾಪಿಸಿದ್ದು ಚಡ್ಡಿಯ ಸಮಸ್ಯೆಯನ್ನೇ ! ತಮ್ಮ ಚಡ್ದಿಯೆಲ್ಲ ಒದ್ದೆಯಾಗಿ ಒಳಗೆ ತುರಿಕೆಯಾಗುತ್ತಿದೆ ಎಂದು ಅವರು ಅಲವತ್ತುಗೊಳ್ಳುತ್ತಿದ್ದರು. ಹುಡುಗಿಯೊಬ್ಬಳು ತನಗೆ ತುರಿಸಿಕೊಳ್ಳುವುದೇ ಕೆಲಸವಾಗಿದೆ ಎಂದರು. ಇನ್ನೊಬ್ಬ ಹುಡುಗ ತನ್ನ ಬಳಿ ಹಿಚ್ ಗಾರ್ಡ್ ಇಲ್ಲದೆ ತೊಂದರೆಯಾಗಿದೆ ಎಂದು ವಿವರಿಸತೊಡಗಿದ. ಒಟ್ಟಿನಲ್ಲಿ ಕನ್ನಡ ಚಾನಲ್ಲಿನಲ್ಲೂ ಇದೇ ಚಡ್ಡಿಯ ಸಮಸ್ಯೆ ! ನಮ್ಮ ಗುಪ್ತಾಂಗಗಳಲ್ಲಿ ಸಂರಕ್ಷಿಸುವ ಚೆಡ್ದಿ ಒಳಕ್ಕೆ ಇರುವಂತಹುದು. ಹೊರಕ್ಕೆ ಕಾಣುವಂತಹುದಲ್ಲ. ಹಾಗೆ ಚಡ್ಡಿಯ ಆಸ್ಥಿತ್ವ ಇರುವುದು ಗುಪ್ತವಾಗಿ ಇರುವುದರಿಂದಲೇ,ಅದಕ್ಕೆ ಬಹಿರಂಗ ಅಸ್ಥಿತ್ವ ಇಲ್ಲ. ಚೆಡ್ದಿಯನ್ನು ಮುಚ್ಚಲು ಏನಾದರೂ ಬೇಕು. ಆಗಲೇ ಚಡ್ದಿಗೂ ಬೆಲೆ, ಚೆಡ್ಡಿಯನ್ನು ಹಾಕಿಕೊಂಡವರಿಗೂ ಬೆಲೆ. ಆದರೆ ನಮ್ಮ ಚಾನಲ್ ಗಳು ಚೆಡ್ಡಿಯನ್ನು ಪ್ರದರ್ಶನಕ್ಕೆ ಇಡುತ್ತಿವೆ !
ಒಂದು ಸಾವು ನಮ್ಮನ್ನೆಲ್ಲ ತಲ್ಲಣಗೊಳಿಸುವುದಿಲ್ಲ. ಸಾವಿಗಿಂತ ಚಡ್ದಿ ಒದ್ದೆಯಾಗಿ ಉಂಟಾಗುವ ತುರಿಕೆ ನಮಗೆ ಮುಖ್ಯವಾಗುತ್ತಿದೆ. ತುರಿಕೆಯಿಂದ ಉಪಶಮನಕ್ಕಾಗಿ ನಾವು ಹಿಚ್ ಗಾರ್ಡ್ ಹುಡುಕಾಟ ನಡೆಸುತ್ತೇವೆ. ಹಾಗೆ ಚಾನಲ್ಲುಗಳೂ ಸಾವಿನಿಂದ ತಲ್ಲಣಗೊಳ್ಳುವುದಿಲ್ಲ. ಅವರಿಗೆ ಟಿಆರ್ ಪಿ ಎಂಬ ತುರಿಕೆಗಾಗಿ ಇಂತಹ ಕಾರ್ಯಕ್ರಮಗಳ ಹಿಚ್ ಗಾರ್ಡ್ ಬೇಕು.
ಕರ್ನಾಟಕದಲ್ಲಿ ಹಲವಾರು ರೈತರು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಂದು ಆತ್ಮಹತ್ಯೆ ಅಲ್ಲಲ್ಲಿ ಸುದ್ದಿಯಾದರೂ ಕಥೆ ಹುಟ್ಟಿಕೊಳ್ಳುವುದು ಬೇರೆ ಬೇರೆ ಆಯಾಮ ಪಡೆಯುವುದು, ಆತ್ಮಹತ್ಯೆ ನಡೆದ ಮೇಲೆ. ಒಂದು ಸಾವು ಬೀರುವ ಪರಿಣಾಮ ಅಂಥಹುದು. ಸಾವಿನ ನಂತರದ ಕಥೆಯಿದೆಯಲ್ಲ, ಅದರ ಬಗ್ಗೆ ಯಾವ ವಾಹಿನಿಯೂ ತಲೆ ಕೆಡೆಸಿಕೊಳ್ಳುತ್ತಿಲ್ಲ.
ಒಂದು ಸಾವು ನಾಗರಿಕ ಮನುಷ್ಯನನ್ನು ತಲ್ಲಣಗೊಳಿಸದಿದ್ದರೆ, ಅದು ಅಪಾಯಕಾರಿ. ಹಾಗೆ ಸಮೂಹ ಮಾಧ್ಯಮಗಳೂ ಸಹ. ಒಬ್ಬ ವ್ಯಕ್ತಿಗಿಂತ ಒಂದು ವಾಹಿನಿಗೆ ಹೆಚ್ಚಿನ ಸೂಕ್ಷ್ಮತೆ ಬೇಕಾಗುತ್ತದೆ. ಯಾಕೆಂದರೆ ಒಬ್ಬ ವ್ಯಕ್ತಿ ಸೂಕ್ಶ್ಮತೆ ಕಳೆದುಕೊಂಡರೆ ಉಂಟಾಗುವ ಅಪಾಯಕ್ಕಿಂತ ಸಾವಿರ ಪಟ್ಟು ಅಪಾಯ ಮಾಧ್ಯಮ ಸೂಕ್ಷ್ಮತೆ ಕಳೆದುಕೊಂಡರೆ ಉಂಟಾಗುತ್ತದೆ.

ಪತ್ರಿಕೋದ್ಯಮ ಮತ್ತು ರಾಜಕಾರಣ.......

ನಾನು ಇತ್ತೀಚೆಗೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆ. ಮೊದಲನೆಯದು ಸಂಯುಕ್ತ ಕರ್ನಾಟಕದಲ್ಲಿ ನಡೆದ ತರಬೇತಿ ಕಾರ್ಯಕ್ರಮ. ಅಲ್ಲಿ ವರದಿಗಾರಿಕೆಯ ಬಗ್ಗೆ ಭಾಷಣ ಮಾಡಲು ಆಹ್ವಾನ ಬಂದಾಗ ನನ್ನಲ್ಲಿ ಮೂಡಿದ್ದು ಧನ್ಯತಾ ಭಾವ. ನಾನು ನನ್ನ ಪತ್ರಿಕೋದ್ಯಮವನ್ನು ಪ್ರಾರಂಭಿಸಿದ್ದು ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ. ಆ ಪತ್ರಿಕೆ ನನಗೆ ಪತ್ರಿಕೋದ್ಯಮದ ಆ ಆ ಇ ಕಲಿಸಿದ ಪತ್ರಿಕೆ. ಜೊತೆಗೆ ಸಂಯುಕ್ತ ಕರ್ನಾಟಕ ಪತ್ರಿಕೆ ಇತಿಹಾಸವೂ ಕೂಡ ಹಾಗೆ.
ಆದರೆ ಅಲ್ಲಿ ಹೋದಾಗ ಏನು ಮಾತನಾಡುವುದು ? ಇವತ್ತಿನ ಪತ್ರಿಕೋದ್ಯಮದ ಬಗ್ಗೆ ಮಾತನಾಡೋಣವೆ ? ಪತ್ರಕರ್ತರ ಬಗ್ಗೆ ಮಾತನಾಡೋಣವೆ ? ಎಂಬ ಗೊಂದಲ. ನಾನು ಹೇಳಿದೆ;
ಪತ್ರಿಕೋದ್ಯಮ ಎನ್ನುವುದರ ಬಗ್ಗೆಯೇ ನನ್ನ ಆಕ್ಷೇಪವಿದೆ. ನಾನು ಇದನ್ನು ಪತ್ರಿಕಾ ವ್ಯವಸಾಯ ಎಂದು ಕರೆಯುತ್ತೇನೆ. ಭಾರತೀಯ ಪತ್ರಿಕಾವೃತ್ತಿ ಉದ್ಯಮ ವಾಗುವ ಉದ್ದೇಶದಿಂದ ಹುಟ್ಟಿದ್ದಲ್ಲ. ಉದ್ಯಮ ಎಂದರೆ ಲಾಭ ನಷ್ಟದ ಮೇಲೆ ನಡೆಯುವಂತಹುದು. ಹೇಗಾದರೂ ಲಾಭ ಗಳಿಸುವುದು ಉದ್ಯಮದ ಗುಣದರ್ಮ. ಆದರೆ ನಮ್ಮಲ್ಲಿ ಪತ್ರಿಕೋದ್ಯಮಕ್ಕೆ ಒಂದು ಪಾವಿತ್ರ್ಯತೆ ಇದೆ. ಸ್ವಾತಂತ್ರ್ಯಪೂರ್ವದಲ್ಲಿ ಸ್ವಾತಂತ್ರ್ಯ ಚಳವಳಿಗೆ ಬೆಂಬಲ ನೀಡುವುದು ಪತ್ರಿಕಾ ವ್ಯವಸಾಯದ ಉದ್ದೇಶವಾಗಿತ್ತು. ನಂತರ ಕೆಲವು ವರ್ಷಗಳ ಕಾಲ ಸ್ವಾತಂತ್ರ್ಯದ ನೆನಪಿನಲ್ಲಿ ಕಾಲ ಕಳೆದ ಪತ್ರಿಕೋದ್ಯಮ ನಂತರದ ದಿನಗಳಲ್ಲಿ ಕಾಂಗ್ರೆಸ್ ವಿರೋಧಿ ಭೂಮಿಕೆಯನ್ನು ನಿರ್ವಹಿಸಿತು. ಕಾಂಗ್ರೆಸ್ ಅಧಿಕಾರ ನಡೆಸುತ್ತಿದ್ದಾಗ ನಿಜವಾದ ಪ್ರತಿ ಪಕ್ಷವಾಗಿ, ಪೋರ್ಥ್ ಎಸ್ಟೇಟ್ ಆಗಿ ಕಾರ್ಯನಿರ್ವಹಿಸಿತು. ಕರ್ನಾಟಕದಲ್ಲಂತೂ ೮೦ ದಶಕದಲ್ಲಿ ಮೂರು ಜನಪರ ಚಳವಳಿಗಳಿಗೆ ಬೆನ್ನೆಲುಬಾಗಿ ನಿಂತಿದ್ದು ಮಾಧ್ಯಮಗಳು. ಆದರೆ ೯೦ ರ ದಶಕದಲ್ಲಿ ಪತ್ರಿಕೋದ್ಯಮ ಬದಲಾಯಿತು. ಹಾಗೆ ಪತ್ರಿಕೋದ್ಯಮಿಗಳು ಬದಲಾದರು.
ಪತ್ರಿಕೋದ್ಯಮದಿಂದ ಈ ಸಮಾಜದಲ್ಲಿ ಇಲ್ಲದಿರುವುದನ್ನು ನಿರೀಕ್ಷಿಸಲಾಗದು. ಅದೂ ಸಹ ಈ ಸಮಾಜದ ಒಂದು ಭಾಗವೇ. ಆದರೆ ಸಮಾಜದ ಭಾಗವಾಗಿಯೂ ಸಮಾಜದ ಹೊರಗೆ ನಿಂತು ನೋಡುವ ಮನಸ್ಥಿತಿ ಪತ್ರಿಕೋದ್ಯಮಕ್ಕೆ ಇರಬೇಕು ಒಂದು ರೀತಿಯಲ್ಲಿ ಪತ್ರಿಕೋದ್ಯಮ ಸಮಾಜದ ಸಾಕ್ಷಿ ಪ್ರಜ್ನೆಯಾಗಿ ಕೆಲಸ ಮಾಡಬೇಕು. ಆದರೆ ಇಂದು ಪತ್ರಿಕೋದ್ಯಮ ಈ ಕಾರ್ಯವನ್ನು ನಿರ್ವಹಿಸುತ್ತಿಲ್ಲ.
ನಾನು ಇನ್ನೊಂದು ಮಾತನ್ನು ಹೇಳಿದೆ. ಲೋಕಾಯುಕ್ತದಂತಹ ಸಂಸ್ಥೆಗಳು ಎಲ್ಲ ಪತ್ರಿಕೋದ್ಯಮಿಗಳ ಮತ್ತು ಪತ್ರಿಕಾ ಸಂಪಾದಕರ ಆಸ್ತಿಯ ಬಗ್ಗೆ ತನಿಖೆ ನಡೆಸಬೇಕು.
ಈ ಮಾತು ಏಷ್ಟು ಜನರಿಗೆ ಇಷ್ಟವಾಯಿತೋ ಗೊತ್ತಿಲ್ಲ. ಆದರೆ ಅಂತಹ ಒಂದು ವ್ಯವಸ್ಥೆ ಬೇಕು ಎಂದು ಹೇಳುವವನು ನಾನು. ಬೇರೆಯವರ ಭ್ರಷ್ಟತೆಯ ಬಗ್ಗೆ ಬರೆಯುವ ನಾನು ಭ್ರಷ್ಟರಾಗಕೂಡದು. ನಾವು ಭ್ರಷ್ಟರಾದರೆ ಬೇರೆಯವರ ಭ್ರಷ್ಟತೆಯ ಬಗ್ಗೆ ಬರೆಯುವ ನೈತಿಕ ಹಕ್ಕು ನಮಗೆ ಬರಲಾರದು. ಆದರೆ ಇಂದು ಒಬ್ಬ ಪತ್ರಿಕೋದ್ಯಮಿ ಮತ್ತು ರಾಜಕಾರಣಿಗಳ ನಡುವಿನ ವ್ಯತ್ಯಾಸ ನನಗೆ ಕಾಣುತ್ತಿಲ್ಲ. ಬಹಳಷ್ಟು ಪತ್ರಿಕೋದ್ಯಮಿಗಳು ರಾಜಕಾರಣಿಗಳಾಗಿದ್ದಾರೆ. ರಾಜಕಾರಣಿಗಳು ಪತ್ರಿಕೋದ್ಯಮಿಗಳಾಗಿದ್ದಾರೆ. ರಾಜಕಾರಣಿಗಳ ಪರವಾಗಿ ಮಧ್ಯಸ್ಥಿಕೆ ನಡೆಸುವ ಪತ್ರಿಕೋದ್ಯಮಿಗಳು ನಮ್ಮ ನಡುವೆ ಇದ್ದಾರೆ. ರಾಜಕಾರಣಿಗಳಿಗೆ ಭಾಷಣ ಮಾಡಲು ಕಲಿಸಿದ್ದೇನೆ ಎಂದು ಹೇಳಿಕೊಳ್ಳುವ ಪತ್ರಿಕಾ ಮಹಾಶಯರು ಕಾಣಸಿಗುತ್ತಾರೆ.
ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ಆರೋಗ್ಯಪೂರ್ಣವಾಗಿರಲು ಪತ್ರಿಕೆಗಳು ನಿಷ್ಪಕ್ಷಪಾತ ಮತ್ತು ನಿಷ್ಠುರವಾದ ನಿಲುಮೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಸತ್ಯವನ್ನು ಹೇಳುವ ಎದೆಗಾರಿಕೆಯನ್ನು ಪ್ರದರ್ಶಿಸಬೇಕಾಗುತ್ತದೆ. ಸುಳ್ಳನ್ನು ಸತ್ಯ ಎಂದು ಹೇಳುವ ಎದೆಗಾರಿಕೆ ಅಲ್ಲ.
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾದಾಗ ಸ್ನೇಹಿತರೊಬ್ಬರು ಹೇಳಿದರು. ಇದು ಪತ್ರಕರ್ತರಿಗೆ ಬಿಜೆಪಿ ಸರ್ಕಾರ ನೀಡಿದ ಬೆಂಬಲ ಬೆಲೆ. ಈ ಮಾತು ಸುಳ್ಳಾಗಲಿ ಎಂದು ನಾನು ಆಶಿಸುತ್ತೇನೆ. ಆದರೆ ನಾವು ಆಶಿಸಿದ್ದೆಲ್ಲ ಸುಳ್ಳಾಗುವುದಿಲ್ಲ. ಜೊತೆಗೆ ಬೆಂಬಲ ಬೆಲೆ ಪಡೆದವರ ನಡುವೆ ಕುಳಿತುಕೊಳ್ಳುವ ಪ್ರಾಮಾಣಿಕ ಪತ್ರಕರ್ತರೂ ಮುಸುಕಾಗುತ್ತಾರೆ.
ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಟೀವಿ ವಾಹಿನಿಗಳಲ್ಲಿ ಪತ್ರಕರ್ತರ ಅಥವಾ ತೆರೆಯ ಮೇಲೆ ಬರುವವರಲ್ಲಿ ಅಹಂಕಾರ ಹೆಚ್ಚುತ್ತಿದೆ. ಇದು ಮಾಧ್ಯಮದ ಅಹಂಕಾರ. ಅಕ್ಷರ ಅಹಂಕಾರ. ನಮ್ಮ ಮುಂದೆ ಕುಳಿತವನು ಯಕಶ್ಚಿತ ವ್ಯಕ್ತಿ ಮತ್ತು ಅವನಿಗೆ ಬುದ್ದಿ ಹೇಳುವುದಕ್ಲಾಗಿಯೇ ನಾನು ಈ ಭರತ ಭೂಮಿಯಲ್ಲಿ ಜನ್ಮವೆತ್ತಿ ಈ ಟೀವಿ ಸ್ಟುಡೀಯೋದಲ್ಲಿ ಬಂದು ಕುಳಿತಿದ್ದೇನೆ ಎಂಬ ವರ್ತನೆ.
ಯಾವನು ಇನ್ನೊಬ್ಬನ ಮಾತನ್ನು ಕೇಳಿಸಿಕೊಳ್ಳಲಾರನೋ ಅವನು ಸರ್ವಾಧಿಕಾರಿಯಾಗಿರುತ್ತಾನೆ. ಪತ್ರಿಕೋದ್ಯಮಿ ಸರ್ವಾಧಿಕಾರಿಯಲ್ಲ. ಆತ ಜನರ ಪ್ರತಿನಿಧಿಯಾಗಿರುತ್ತಾನೆ. ಸಮಾಜದ ಸಾಕ್ಷಿ ಪ್ರಜ್ನೆಯಾಗಿರುತ್ತಾನೆ. ಸತ್ಯವನ್ನು ಹೇಳುವ ಪ್ರವಾದಿಯಾಗಿರುತ್ತಾನೆ. ದೊಡ್ಡ ಗಂಟಲಿನಲ್ಲಿ ಕೂಗುವವರು, ಬೇರೆಯವರನ್ನು ಹೀಗಳಿಯುತ್ತ ಚರ್ಚೆ ನಡೆಸುವವರು ಉತ್ತಮ ಪತ್ರಿಕೋದ್ಯಮಿಯಾಗಲಾರರು. ಇಂತವರು ಒಳಗೆ ಠೊಳ್ಳಾಗಿರುತ್ತಾರೆ. ತಮ್ಮ ಠೊಳ್ಳುತನವನ್ನು ಮುಚ್ಚಿಕೊಳ್ಳುವುದಕ್ಕಾಗಿ ಹೊರಗೆ ಇಂಥಹ ಮುಖವಾಡ ಧರಿಸುತ್ತಿರುತ್ತಾರೆ. ಉಪದೇಶಗಳ ಮೂಲಕ ತಮ್ಮ ಭ್ರಷ್ಟತೆಯನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿರುತ್ತಾರೆ.
ಇವೆಲ್ಲ ನಾನು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ನಾನು ಆಡಿದ ಮಾತುಗಳು. ಈ ಮಾತುಗಳನ್ನು ಹೇಳುವಾಗ ನನ್ನಲ್ಲಿ ವಿಷಾಧ ಭಾವವೇನೂ ಇರಲಿಲ್ಲ. ಒಂದು ಸಮಾಜ ತನಗೆ ಬೇಕಾದ್ದನ್ನು ಪಡೆದುಕೊಳ್ಳುತ್ತದೆ. ಗಟ್ಟಿಯಾದದ್ದು ಉಳಿಯುತ್ತದೆ. ಪೊಳ್ಳಾಗಿದ್ದು ಉದುರಿ ಹೋಗುತ್ತದೆ.

Friday, July 30, 2010

ಬರವಣಿಗೆ ಎಂದರೆ ಶೋಧನೆ..........

ಕಳೆದ ನಾಲ್ಕು ತಿಂಗಳಿನಿಂದ ನಾನು ಏನನ್ನೂ ಬರೆದಿಲ್ಲ.ನನ್ನಹಲವು ಸ್ನೇಹಿತರು ಫೋನ್ ಮಾಡಿ, ಯಾಕೆ ಬರೆಯುತ್ತಿಲ್ಲ ಎಂದು ಕೇಳುತ್ತಲೇ ಇದ್ದರು. ಆದರೆ ಬರೆಯುವ ಉಮೇದು ನನ್ನಲ್ಲಿ ಇರಲಿಲ್ಲ. ಇದಕ್ಕೆ ಕಾರಣವೇನು ಎಂಬುದು ನನಗೂ ತಿಳಿಯದು. ಕೆಲವೊಮ್ಮೆ ಹಾಗೆ ಆಗುತ್ತದೆ. ಯಾರ ಜೊತೆಗೂ ಮಾತನಾಡಬೇಕು ಎಂದು ಅನ್ನಿಸುವುದಿಲ್ಲ. ಏನನ್ನೂ ಬರೆಯಬೇಕು ಎಂದು ಅನ್ನಿಸುವುದಿಲ್ಲ. ಸುಮ್ಮನೆ ಬದುಕುತ್ತಿರಬೇಕು ಎಂದು ಅನ್ನಿಸುತ್ತದೆ.
ಬರವಣೆಗೆ ಎಂದರೆ ಹಾಗೆ. ಯಾವುದೋ ವಿಚಾರ ಮನಸ್ಸಿನಲ್ಲಿ ಗರ್ಭ ಕಟ್ಟಬೇಕು. ಭ್ರೂಣ ಬೆಳೆಯಬೇಕು. ಸರಿಯಾದ ಸಮಯಕ್ಕೆ ಸುಖ ಪ್ರಸವವಾಗಬೇಕು.
ಆದರೆ ಇದೆಲ್ಲ ಇರಲಿ. ಬರೆಯುವುದು ಎಂದರೆ ತುಂಬಾ ಸಂತೋಷವನ್ನು ನೀದುವಂತಹುದು. ಅದು ನಮ್ಮ ಮನಸ್ಸನ್ನು ತೆರೆದಿಡುವ ಕೆಲಸ. ಅಲ್ಲಿ ಪ್ರಾಮಾಣಿಕತೆ ಬೇಕು. ಮುಕ್ತ ಮನಸ್ಸು ಬೇಕು. ಮನಸ್ಸಿಗೆ ಬಂದಿದ್ದನ್ನು ತರ್ಕ ಮತ್ತು ವೈಚಾರಿಕತೆಯ ಪರಿಶೆಗೆ ಒಡ್ಡಿ ಸತ್ಯ ಅನ್ನಿಸ್ಸಿದ್ದನ್ನು ಹೇಳಬೇಕು. ಹೀಗೆ ಮಾತನಾಡುವುದಕ್ಕೆ ಧೈರ್ಯ, ಎದೆಗಾರಿಕೆ ಬೇಕು.
ಆದರೆ ಬಹಳಷ್ಟು ಜನರಿಗೆ ಬರವಣಿಗೆ ಎಂದರೆ ಅದೊಂದು ಕಸುಬು. ಈ ಕಸುಬನ್ನು ತುಂಬಾ ಚೆನ್ನಾಗಿ ಮಾಡುವವರು ನಮ್ಮ ನಡುವೆ ಇದ್ದಾರೆ. ತಾವು ಬರೆದಿದ್ದನ್ನು ಮಾರಾಟ ಮಾಡುವ, ಮಾರಾಟ ಮಾಡುವುದಕ್ಕಾಗಿಯೇ ಬರೆಯುವವರ ಗುಂಪೇ ಇದೆ. ಕೆಲವರು ಬರೆಯುವುದರಲ್ಲಿ ಫ್ಯಾಕ್ಟರಿ. ಅವರ ಫ್ಯಾಕ್ಟರಿಯಿಂದ ಉತ್ಪನ್ನಗಳು ಬರುತ್ತಲೇ ಇರುತ್ತವೆ. ಇವರು ತಮ್ಮ ಉತ್ಪನ್ನವನ್ನು ಮಾರುಕಟ್ಟೆಯಲ್ಲು ಉತ್ತಮ ಬೇಲೆಗೆ ಮಾರಾಟ ಮಾಡಬಲ್ಲವರು. ಜೊತೆಗೆ ನನ್ನ ಬರವಣಿಗೆ ಓದುಗರಿಗೆ ಮಜಾ ಕೊಡಬೇಕು ಎಂದು ಹೇಳುತ್ತಲೇ ಬರೆಯುವವರೂ ಇದ್ದಾರೆ. ಆದರೆ ಬರವಣಿಗೆಯ ಉದ್ದೇಶ ಮಜಾ ಕೊಡುವುದಲ್ಲ.
ಬರೆಯುವುದು ಒಂದು ರೀತಿಯಲ್ಲಿ ಸತ್ಯದ ಶೋಧನೆಯೇ. ಈ ವಿಚಾರದಲ್ಲಿ ಬೇರೆ ಬೇರೆ ಪ್ರಕಾರಗಳ ಬರವಣಿಗೆಯಲ್ಲಿ ವ್ಯತ್ಯಾಸವಿಲ್ಲ. ವ್ಯತ್ಯಾಸ ಇದ್ದರೆ ಅದರ ಫಾರ್ಮ್ ನಲ್ಲಿ ಮಾತ್ರ. ಒಂದು ಕಥೆ ಕಾಲ್ಪನಿಕವಾದರೂ ಅದು ಏನನ್ನೋ ಶೋಧಿಸುತ್ತಿರುತ್ತದೆ. ಒಬ್ಬ ಪತ್ರಕರ್ತನ ವರದಿ ಕೂಡ ಸತ್ಯಶೋಧನೆ ಅಥವಾ ಸತ್ಯವನ್ನು ಹೇಳುವ ಕೆಲಸವನ್ನು ಮಾಡುತ್ತಿರುತ್ತದೆ. ಒಂದು ಅತ್ಯುತ್ತುಮ ನಾಟಕ, ಸಿನೆಮಾ, ಹೀಗೆ ಎಲ್ಲ ಪ್ರಕಾರದ ಕಲಾ ಮಾರ್ಗಗಳೂ ಇದೇ ಕೆಲಸವನ್ನು ವಿಭಿನ್ನ ರೂಪಗಳಲ್ಲಿ ಮಾಡುತ್ತಿರುತ್ತವೆ.
ತಾವು ನಂಬಿದ್ದನ್ನು ಪ್ರಚಾರ ಮಾಡುವುದು ಉತ್ತಮ ಬರವಣಿಗೆ ಅನ್ನಿಸಲಾರದು. ಆದರೆ ಇಂದು ಶೋಧನೆಯ ಕೆಲಸವನ್ನು ಬರವಣಿಗೆ ಮಾಡುತ್ತಿಲ್ಲ. ಪತ್ರಿಕೋದ್ಯಮ ಕೂಡ ಪ್ರಚಾರ ಮಾಧ್ಯಮವಾಗಿ ಬದಲಾಗಿದೆ. ಹಾಗೆ ನಮ್ಮ ಸಾಹಿತ್ಯ, ಕಥೆ ಕಾದಂಬರಿಗಳೂ ಈಗ ಹೆಚ್ಚು ಹೆಚ್ಚು ಪ್ರಚಾರದ ಕೆಲಸವನ್ನೆ ಮಾಡುತ್ತಿವೆ. ಇತ್ತೀಚಿಗೆ ಬಾರಿ ಚರ್ಚೆಗೆ ಕಾರಣವಾಗಿರುವ ಎಸ್. ಎಲ್. ಬೈರಪ್ಪ ಅವರ ಕವಲು ಕಾದಂಬರಿಯನ್ನೇ ತೆಗೆದುಕೊಳ್ಳಿ. ಈ ಕಾದಂಬರಿ, ಬೈರಪ್ಪನವರು ನಂಬಿದ ಪರಂಪರಾಗತ ನಂಬಿಕೆಗಳ ಪ್ರಚಾರ ಸಾಮಗ್ರಿಯ ಹಾಗೆ ಕಾಣುತ್ತದೆ. ಅದು ಕಾದಂಬರಿ ಎಂದು ಅನ್ನಿಸಿಕೊಳ್ಳುವುದಿಲ್ಲ. ಈ ಮಾತನ್ನು ಹೇಳಿದರೆ, ಭೈರಪ್ಪನವರ ಪರವಾಗಿ ವಕಾಲತ್ತು ಒಹಿಸಿಕೊಳ್ಳುವವರು ಕೋಪಗೊಳ್ಳುತ್ತಾರೆ. ಹಾಗೆ ಭೈರಪ್ಪನವರ ವಿರೋಧಿಗಳು ಅವರನ್ನು ವಿರೋಧಿಸಬೇಕು ಎಂದು ವಿರೋಧಿಸುತ್ತಾರೆ. ಆದರೆ ಇಲ್ಲಿ ಇರುವ ಬಹುಮುಖ್ಯವಾದ ಪ್ರಶ್ನೆ ಎಂದರೆ ಕಾದಂಬರಿ ಎಂದರೇನು ? ಅದರ ಉದ್ದೇಶ ಯಾವುದು ? ಅದರ ಸಾರ್ಥಕತೆ ಇರುವುದು ಎಲ್ಲಿ ?
ಪರಂಪರಾಗತ ಮೌಲ್ಯಗಳು ಮತ್ತು ಆಧುನಿಕ ನಂಬಿಕೆಯ ನಡುವಿನ ಸಂಘರ್ಷದ ಮೂಲಕವೇ ಭೈರಪ್ಪನವರು ಶೋಧಿಸುವ ಕೆಲಸವನ್ನು ಮಾಡಬೇಕಿತ್ತು. ಹಾಗೆ ಅವರ ಕಾದಂಬರಿಯ ಪಾತ್ರಗಳು ತನ್ನಿಂದ ತಾನೇ ಬೆಳೆಯಬೇಕಿತ್ತು. ಆದರೆ ಕವಲಿನಲ್ಲಿ ಎಲ್ಲ ಪಾತ್ರಗಳೂ ಭೈರಪ್ಪನವರ ಅಣತಿಯಂತೆ ವರ್ತಿಸುತ್ತವೆ. ಅದನ್ನು ಮೀರಿದ ಇನ್ನೊಂದು ಸಾಧ್ಯತೆ ಎಲ್ಲಿಯೂ ಕಾಣುವುದಿಲ್ಲ. ಬೇರೆ ಸಾಧ್ಯತೆಗಳತ್ತ ಯಾವುದೇ ಪಾತ್ರಗಳೂ ನೋಡದಂತೆ ಬೈರಪ್ಪನವರು ಎಚ್ಚರಿಕೆ ಒಹಿಸುತ್ತಾರೆ. ಹೀಗೆ ಈ ಕಾದಂಬರಿ, ಕಾದಂಬರಿಕಾರ ವಿಧಿಸಿದ ಮಿತಿಯ ಒಳಗೆ ಪಲ್ಟಿ ಹೊಡೆಯುತ್ತವೆ. ಹೀಗಾಗಿ ಇದು ಸಾಮಾನ್ಯ ಕಾದಂಬರಿಯ ಮಟ್ಟದಲ್ಲೇ ಉಳಿದು ಬಿಡುತ್ತದೆ. ಇದು ಏನನ್ನೂ ಶೋಧಿಸುವುದೇ ಇಲ್ಲ. ಬದಲಾಗಿ ಪೂರ್ವ ನಿರ್ಧಾರಿತ ಹೇಳಿಕೆಗಳು ಕಾದಂಬರಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.
ಮನುಷ್ಯನ ಮನಸ್ಸಿಗೆ ಬೇಲಿ ಇಲ್ಲ. ಸಮಾಜ ನಿರ್ಮಿತ ಸಂಬಂಧಗಳಿಗೆ ಮನಸ್ಸು ಹೀಗೆ ವರ್ತಿಸುತ್ತದೆ ಎಂದು ಹೇಳಲಾಗದು. ಮನುಷ್ಯನ ವರ್ತನೆ ಹೀಗೆ ಎಂದು ಹೇಳಲಾಗದು. ಇದು ಯಾಕೆ ಎಂದು ಶೋಧಿಸುವುದು ಇದೆಯಲ್ಲ, ಅದೇ ಬಹಳ ಮುಖ್ಯವಾದುದು. ಯಾವುದೇ ಬರೆಹ ಈ ಕೆಲಸವನ್ನು ಮಾಡಬೇಕು. ಇಲ್ಲದಿದ್ದರೆ ಅದು ಕೇವಲ ಪ್ರಚಾರ ಸಾಮಗ್ರಿಯಾಗುತ್ತದೆ.

Tuesday, March 30, 2010

ಮೂಗುತಿ ಸುಂದರಿ ಪಾಕ್ ಸೊಸೆ; ಶೊಯೇಬ್ ಭಾರತದ ಅಳಿಯ !


ಸಾನಿಯಾ ಎಂಬ ಈ ಮೂಗುತಿ ಸುಂದರಿ ಈಗ ಮದುವೆಯಾಗುತ್ತಿದ್ದಾಳೆ. ಅತಿ ಚಿಕ್ಕ ವಯಸ್ಸಿನಲ್ಲಿ ಜನಪ್ರಿಯತೆ ಹಣ ಎಲ್ಲವನ್ನೂ ಗಳಿಸಿದ ಈಕೆಗೆ ಮದುವೆಯ ಬಗ್ಗೆ ಎಂತಹ ಕಲ್ಪನೆ ಇದೆ ಎಂದು ಹೇಳುವುದು ಕಷ್ಟ. ಇವಳು ಆಟದಲ್ಲಿ ಅಂತಹ ಎಗ್ರೆಸ್ಸಿವ್ ಅಲ್ಲ. ಆದರೆ ವೈಯಕ್ತಿಕ ಬದುಕಿನಲ್ಲಿ ಮಾತ್ರ ತುಂಬಾ ಎಗ್ರೆಸ್ಸಿವ್. ಈಕೆ ತುಂಡು ಲಂಗದ ಬಗ್ಗೆ ಸಂಪ್ರದಾಯಸ್ಥ ಮುಸ್ಲಿಮ್ ರಿಂದ ವಿರೋಧ ಬಂದಾಗ ಈಕೆ ಕ್ಯಾರೇ ಅಲ್ಲಲಿಲ್ಲ. ತುಂಡು ಲಂಗ ಧರಿಸಿ ಮೈದಾನದಲ್ಲಿ ಕುಣಿದು ಕುಪ್ಪಳಿಸಿದಳು. ಗೆಲುವಿನತ್ತ ನಾಗಾಲೋಟದಲ್ಲಿ ಸಾಗಲು ಯತ್ನಿಸಿದಳು. ಆದರೆ ಅವಳು ಬಯಸಿದಷ್ಟು ಯಶಸ್ಸು ಅವಳಿಗೆ ದೊರಕಲಿಲ್ಲ.
ವಿಶ್ವದ ಖ್ಯಾತ ಟೆನಿಸ್ ಆಟಗಾರ್ತಿಯರಿಗೆ ಹೋಲಿಸಿದರೆ ಈಕೆ ಸ್ವಲ್ಪ. ಮೃದು. ವಿಲಿಯಮ್ಸ್ ಸಹೋದರಿಯರಿಗೆ ಇರುವ ಆಕ್ರಮಣಕಾರಿ ಪ್ರವೃತ್ತಿ ಇವಳ ಆಟದಲ್ಲಿ ಕಾಣಲಾರದು. ಸರ್ವ್ ನಲ್ಲಿ ಇರಬೇಕಾದ ಕರಾರುವಾಕ್ಕಾದ ಧಾಳಿ, ಪರಫೆಕ್ಷನ್ ಇವಳಲ್ಲಿ ಇಲ್ಲ. ಈಕೆ ಟೆನಿಸ್ ಅಂಗಳದಲ್ಲಿ ಅತ್ತಿತ್ತ ಓಡಾಡುವಾಗ ನಮ್ಮ ಮನೆಯ ಪುಟ್ಟ ಮಗುವೊಂದು ರಚ್ಚೆ ಹಿಡಿದು ಹಠ ಮಾಡುತ್ತಿರುವಂತೆ ಕಾಣುತ್ತದೆ. ಹಾಗೆ ಮುಖವನ್ನು, ಮೂಗನ್ನು ಕೆಂಪಗೆ ಮಾಡಿಕೊಂಡು ಒಂದೋ ಎರಡನೆ ಸುತ್ತಿನಲ್ಲೇ ನಿರ್ಗಮಿಸುವಾಗ ಪಾಪ ಎಂದು ಅನ್ನಿಸುತ್ತದೆ. ಎದುರಾಳಿಗೆ ಸರಿ ಸಾಟಿಯಾದ ಆಟಗಾರ್ತಿ ಎಂದು ಯಾವಾಗಲೂ ಅನ್ನುಸುವುದಿಲ್ಲ. ಏನೆ ಇರಲಿ ಈಕೆ ನಮ್ಮ ಮನೆಯ ಹುಡುಗಿ.
ಟೆನಿಸ್ ನಂತಹ ಕ್ರೀಡೆಯಲ್ಲಿ ಜಯ ಗಳಿಸಲು ಈಕೆ ನಮ್ಮ ಮನೆಯ ಹುಡುಗಿ ಎಂಬುದು ಮಾತ್ರ ಸಾಕಾಗುವುದಿಲ್ಲ. ಅಲ್ಲಿ ಅತಿಯಾದ ಪರಿಶ್ರಮ ಬೇಕು.ಅದಕ್ಕೆ ಪೂರಕವಾದ ದೈಹಿಕ ಬಲ ಬೇಕು. ಚಿಗುರೆಯ ಹಾಗೆ ಮಿಂಚಿನ ಓಟ ಬೇಕು. ಸಿಂಹ ಗರ್ಜನೆ ಬೇಕು. ಆಕ್ರಮಣಶೀಲ ಪ್ರವೃತ್ತಿ ಬೇಕು. ಗೆಲ್ಲವ ಛಲ ಬೇಕು. ಮೈದಾನಕ್ಕೆ ಇಳಿಯುವಾಗ ಒಂದು ರೀತಿಯ ಸಮರ್ಪಣಾ ಭಾವ ಬೇಕು. ಇದಕ್ಕೆಲ್ಲ ಮುಖ್ಯವಾಗಿ ನಾನು ಕ್ರೀಡೆಗಿಂತ ದೊಡ್ಡವಳಲ್ಲ ಎಂಬ ವಿನೀತ ಭಾವ ಬೇಕು. ಆದರೆ ಸಾನಿಯಾಳ ದೈಹಿಕ ಚಲನೆಯನ್ನು, ಅಂದರೆ ಬಾಡಿ ಲ್ಯಾಂಗ್ವೇಜ್ ಅನ್ನು ಗಮನಿಸಿದರೆ ಅಂತಹ ಸಮರ್ಪಣಾ ಭಾವ ಅಲ್ಲಿ ಕಾಣುವುದಿಲ್ಲ. ವಿನೀತ ಮನೋಭಾವ ಕಾಣುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಬಂದ ಕೀರ್ತಿ ಮತ್ತು ಹಣ ಆಕೆಯಲ್ಲಿ ಅಹಂಭಾವವನ್ನು ಮೂಡಿಸಿದಂತೆ ಕಾಣುತ್ತದೆ.
ಈಕೆ ಬಾಲ್ಯದ ಸ್ನೇಹಿತನನ್ನು ಮದುವೆಯಾಗಲು ಮುಂದಾಗಿದ್ದಳು. ನಿಶ್ಚಿತಾರ್ಥವೂ ಆಗಿತ್ತು. ಈಗ ಅದು ಮುರಿದು ಬಿದ್ದು ಪಾಕಿಸ್ಥಾನದ ಕ್ಯಾತ ಕ್ರಿಕೆಟ್ ಆಟಗಾರ ಶೋಯಿಬ್ ಮಲ್ಲಿಕ್ ನನ್ನು ಮದುವೆಯಾಗುತ್ತಿದ್ದಾಳೆ. ಶೋಯಿಬ್ ಪಾಕಿಸ್ಥಾನದ ಅತ್ಯುತ್ತಮ ಕ್ರಿಕೆಟ್ ಆಟಗಾರರಲ್ಲಿ ಒಬ್ಬ. ಅದಕ್ಕಿಂತ ಮುಖ್ಯವಾಗಿ ಸಹೃದಯಿ, ಸ್ವಲ್ಪ ತುಂಟ. ಆತ ಎಲ್ಲಿಯೋ ಅಹಂಕಾರದಿಂದ ವರ್ತಿಸಿದ ಉದಾಹರಣೆ ಇಲ್ಲ. ಒಂದೆರಡು ಏಪೇರ್ ಗಳಲ್ಲಿ ಸಿಕ್ಕಿಕೊಂಡು ಈಗ ಅವುಗಳಿಂದ ಹೊರಕ್ಕೆ ಬಂದಿದ್ದಾನೆ. ಸಾನಿಯಾಳನ್ನು ಎರಡು ಮೂರು ತಿಂಗಳುಗಳ ಹಿಂದೆ ನೋಡಿದಾಗ ಪ್ರೇಮ ಅಂಕುರಿಸಿದೆ. ಮಾರೋ ಗೋಲಿ ಎಂದು ಆಕೆಯ ಹಿಂದೆ ಬಿದ್ದಿದ್ದಾನೆ. ಸಾನಿಯಾ ಕೂಡ ಈತನನ್ನು ಮೆಚ್ಚಿದ್ದಾಳೆ. ಆಕೆಯ ನಿಶ್ಚಿತಾರ್ಥ ವಾಗಿದ್ದ ಸಂಬಂಧ ಮುರಿದು ಬೀಳಲು ಈ ಹೊಸ ಪ್ರೇಮವೇ ಕಾರಣ ಎಂಬ ಮಾತೂ ಕೇಳಿ ಬರುತ್ತಿದೆ. ಏನೇ ಇರಲಿ, ಭಾರತದ ಹೆಮ್ಮೆಯ ಮೂಗುತಿ ಸುಂದರಿ ಪಾಕಿಸ್ಥಾನ ಆಲ್ ರೌಂಡರ್ ನನ್ನು ಮದುವೆಯಾಗುತ್ತಿದ್ದಾಳೆ. ಇಬ್ಬರೂ ಹಳೆಯ ನೆನಪುಗಳನ್ನು ಮರೆಯಲಿ. ಹೊಸ ಪ್ರೇಮದ ಬೆನ್ನು ಬೀಳದೇ ದುಬೈನಲ್ಲಿ ಸಂತೋಷವಾಗಿ ಬದುಕಲಿ.

Sunday, March 28, 2010

ಡಾ. ರಾಜ್ ಮತ್ತು ಬಂಗಾರದ ಮನುಷ್ಯ




ಇಂದು ಭಾನುವಾರ. ನಾನು ಡಾ. ರಾಜಕುಮಾರ್ ಅವರ ಯಶಸ್ವಿ ಸಿನೆಮಾಗಳಲ್ಲಿ ಒಂದಾದ ಬಂಗಾರದ ಮನುಷ್ಯ ಚಿತ್ರವನ್ನು ನೋಡಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ನೋಡಿದ ಸಿನೆಮಾ ಇದು. ಆಗ ಒಂದಕ್ಕಿಂತ ಹೆಚ್ಚು ಬಾರಿ ಈ ಚಿತ್ರವನ್ನು ನೋಡಿದ್ದೆ. ಆಗ ನನಗೆ ತುಂಬಾ ಇಷ್ಟವಾದ ಈ ಸಿನೆಮಾ ಇಂದು ನನ್ನ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಕುತೂಹಲ ನನಗೇ ಇತ್ತು.


ಜೊತೆಗೆ ಡಾ. ರಾಜ್ ಜೊತೆ ನಾನು ಒಂದೆರಡು ಬಾರಿ ನಡೆಸಿದ ಸಂದರ್ಶನ ಕೂಡ ನೆನಪಿಗೆ ಬಂತು. ನಾನು ಸಿನೆಮಾ ಪತ್ರಿಕೋದ್ಯಮವನ್ನು ಮಾಡುತ್ತಿದ್ದ ಕಾಲವದು. ನಾನು ಆಗ ಕೆಲಸ ಮಾಡುತ್ತಿದ್ದುದು ಸುದ್ದಿ ಸಂಗಾತಿ ಎಂಬ ವಾರ ಪತ್ರಿಕೆಯಲ್ಲಿ. ಸಂಪಾದಕರಾಗಿದ್ದ ಇಂದೂಧರ ಹೊನ್ನಾಪುರ,ಎನ್. ಎಸ್. ಶಂಕರ್ ಮತ್ತು ಕೆ. ರಾಮಯ್ಯ, ವಿಶೇಷ ಸಂಚಿಕೆಗೆ ಡಾ. ರಾಜಕುಮಾರ್ ಅವರ ಸಂದರ್ಶನ ಮಾಡುವ ಹೊಣೆಗಾರಿಕೆಯನ್ನು ನನಗೆ ಒಪ್ಪಿಸಿದರು. ಡಾ. ರಾಜ್ ಅವರ ಸಿನೆಮಾಗಳನ್ನು ನೋಡುತ್ತಲೇ ಸಿನಿಮಾ ಹುಚ್ಚು ಬೆಳಸಿಕೊಂಡ ನನಗೆ ಇದೊಂದು ಅಪೂರ್ವ ಅವಕಾಶ.
ಸದಾಶಿವನಗರದ ಅವರ ಮನೆಯಲ್ಲಿ ನಡೆದ ಸಂದರ್ಶನ ಅದು.
"ನಿಮಗೆ ಗೊತ್ತಾ ? ನಾನು ಶಾಲೆಗೆ ಹೋಗುವಾಗ ಕೋಟ್ ಹಾಕಿಕೊಂಡು ಹೋಗುತ್ತಿದ್ದೆ. ಕೋಟಿನ ಒಳಗೆ ಅಂಗಿಯೇ ಇರುತ್ತಿರಲಿಲ್ಲ. ಯಾಕೆಂದರೆ ನನ್ನ ಬಳಿ ಅಂಗಿ ಇರಲಿಲ್ಲ. "
ಡಾ. ರಾಜಕುಮಾರ್ ಅವರ ನೆನಪಿನ ಬುತ್ತಿ ಹೀಗೆ ಬಿಚ್ಚಿಕೊಳ್ಳತೊಡಗಿತ್ತು.
ನೀವು ಮೊದಲಿನಿಂದ ಯೋಗ, ವ್ಯಾಯಾಮ ಮಾಡುತ್ತಿದ್ದಿರಾ ?
"ಎಲ್ಲಿಯ ಯೋಗ ? ಎಲ್ಲಿಯ ವ್ಯಾಯಾಮ ? ನನಗೆ ತಿನ್ನುವುದಕ್ಕೆ ಸರಿಯಾಗಿ ಇಲ್ಲದ ಕಾಲ ಅದು. ನಾನು ಯೋಗವನ್ನು ಪ್ರಾರಂಭಿಸಿದ್ದು ೫೦ ವರ್ಷ ಆದ ಮೇಲೆ."
ಕೀರ್ತಿ ಹಣ ಯಾವುದೂ ಅವರನ್ನು ಬದಲಿಸಿರಲಿಲ್ಲ. ಅವರು ಹೇಳಿದ ಇನ್ನೊಂದು ಮಾತು;
ನನಗೆ ಒಬ್ಬನೇ ರಸ್ತೆಗಳಲ್ಲಿ ಸುತ್ತಬೇಕು ಅನ್ನಿಸುತ್ತದೆ. ಆದರೆ ಅದು ಸಾಧ್ಯವಿಲ್ಲ. ಹಾಗೆ ನನ್ನ ಕಿಸೆಯಲ್ಲಿ ಹಣವೇ ಇರುವುದಿಲ್ಲ. ಯಾಕೆಂದರೆ ನನಗೆ ಹಣದ ಅವಶ್ಯಕತೆ ಇಲ್ಲ
ಅವರ ಮಾತು ಹೀಗೆ ಸಾಗಿತ್ತು. ನನಗೆ ಡಾ. ರಾಜಕುಮಾರ್ ಅವರ ಸಂಪರ್ಕ್ ಬಂದಿದ್ದು ನಾನು ಮುಂಜಾನೆ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ. ಈ ಪತ್ರಿಕೆ ನಿಂತ ಮೇಲೆ, ಇಂದೂಧರ್ ಹೊನ್ನಾಪುರ ಸಂಪಾದಕತ್ವದಲ್ಲಿ ಪ್ರಾರಂಭವಾದ ಸುದ್ದಿ ಸಂಗಾತಿಯನ್ನು ನಾನು ಸೇರಿದ್ದೆ. ಅಲ್ಲಿ ಸಿನೆಮಾ, ರಾಜಕೀಯ ಮತ್ತು ವಿಶೇಷ ವರದಿಗಳನ್ನು ಬರೆಯುತ್ತಿದ್ದೆ. ನಾನು ಬಹಳ ಕಾಲದ ನಂತರ, ಸಂದರ್ಶನಕ್ಕೆ ಡಾ. ರಾಜ್ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು ಅದೇ ಮಾತು.
"ನಿಮ್ಮ ಮುಂಜಾನೆ ಪತ್ರಿಕೆ ತುಂಬಾ ಚೆನ್ನಾಗಿ ಬರುತ್ತಿದೆ."
ನಾನು ಆ ಪತ್ರಿಕೆ ನಿಂತು ಎರಡು ವರ್ಷವಾಗಿದೆ ಎಂಬುದನ್ನು ಅವರ ಗಮನಕ್ಕೆ ತಂದೆ. ಅವರಿಗೆ ಮುಂಜಾನೆ ನಿಂತಿದ್ದು ಗೊತ್ತಿರಲೇ ಇಲ್ಲ ! ಅಂತಹ ಮುಗ್ದತೆ.
ನಾನು ಡಾ. ರಾಜ್ ಅವರನ್ನು ಇನ್ನೊಮ್ಮೆ ನೋಡಿದ್ದು ಅವರ ಪುತ್ರ ಶಿವರಾಜ್ ಕುಮಾರ್ ಅವರ ಮೊದಲ ಚಿತ್ರ ಆನಂದ ಬಿಡುಗಡೆಯ ಔತಣಕೂಟದಲ್ಲಿ. ಆನಂದ್ ಸಿನೆಮಾ ಹೇಗಿದೆ ಎಂದು ಅವರು ನನ್ನನ್ನು ಪ್ರಶ್ನಿಸಿದರು. ಆಗ ನಾನು ಹೇಳಿದ್ದು;ನಿಮ್ಮ ಅತಿ ದೊಡ್ದ ಶಕ್ತಿ ಎಂದರೆ ಡೈಲಾಗ್ ಪ್ರಸೆಂಟೇಷನ್. ಅಂತಹ ಸ್ಪಷ್ಟತೆ ಕನ್ನಡದಲ್ಲಿ ಇನ್ಯಾರಿಗೂ ಇಲ್ಲ. ಆದರೆ ಶಿವರಾಜಕುಮಾರ್ ಅವರು ಸಂಭಾಷಣೆಯನ್ನು ಹೇಳುವ ರೀತಿಯಲ್ಲಿ ಶಕ್ತಿಯೇ ಇಲ್ಲ. ಯಾವುದೋ ಭಾಷೆಯನ್ನು ಕೇಳಿದಂತೆ ಆಗುತ್ತದೆ.
ಡಾ. ರಾಜ್ ನಾನು ಹೇಳಿದ ಮಾತಿಗೆ ಸಹಮತ ವ್ಯಕ್ತಪಡಿಸಿದರು. ನಾಟಕ ಕಂಪೆನಿಗಳಲ್ಲಿ ತಮಗೆ ದೊರಕಿದ ಅನುಭವವೇ ಇದಕ್ಕೆ ಕಾರಣ ಎಂದರು. ಹಾಗೆ ಶಿವರಾಜಕುಮಾರ್ ವಿದ್ಯಾರ್ಥಿ ಜೀವನವನ್ನು ಮದ್ರಾಸಿನಲ್ಲಿ ಕಳೆದಿದ್ದು ಇದಕ್ಕೆ ಕಾರಣ ಎಂದರು.ಇದೆಲ್ಲ ಬಂಗಾರದ ಮನುಷ್ಯ ನೋಡಿದಾಗ ನೆನಪಾಯಿತು.

ಬಂಗಾರದ ಮನುಷ್ಯ ಸಿನೆಮಾ ಒಂದು ನೀಟ್ ಆದ ಸಿನೆಮಾ. ಜೊತೆಗೆ ಅಲ್ಲಿ ತ್ಯಾಗವಿದೆ. ಒಕ್ಕಲುತನದ ವೈಭವೀಕರಣವಿದೆ. ಭಾರತೀಯ ಕೌಟುಂಬಿಕ ವ್ಯವಸ್ಥೆಯ ಪರವಾದ ಧ್ವನಿಯಿದೆ. ಅಂದಿನ ಕಾಲಘಟ್ಟದಲ್ಲಿ ಎಲ್ಲರೂ ಒಪ್ಪಿ, ಅಪ್ಪಿಕೊಳ್ಳುವ ಸಿನೆಮಾ ಅದು. ಆದರೆ ಇಂದು ನಿಂತು ನೋಡಿದರೆ ಈ ಸಿನೆಮಾ ನಮ್ಮ ಮೇಲೆ ಬೀರುವ ಪರಿಣಾಮವೇ ಬೇರೆ. ಅಂದು ನಮಗೆ ಈ ಸಿನೆಮಾ ಇಷ್ಟವಾದಷ್ಟು ಇಂದು ಇಷ್ಟವಾಗುವುದಿಲ್ಲ. ಯಾಕೆಂದರೆ ಈ ಸಿನೆಮಾ ಹೇಳಲು ಹೊರಟಿರುವ ವಸ್ತು, ಇಂದು ವಸ್ತು ಅಲ್ಲ. ಇಂದು ನಮ್ಮ ಮುಂದಿರುವ ಸವಾಲುಗಳೇ ಬೇರೆ. ನಮ್ಮನ್ನು ಕಾಡುವ ವಿಚಾರಗಳೇ ಬೇರೆ. ನಗರ ಮತ್ತು ಗ್ರಾಮೀಣ ಬದುಕಿನ ಆಯ್ಕೆಯ ನಡುವಿನ ಸಂಘರ್ಷ ಇಂದು ಬೇರೆ ರೂಪವನ್ನು ಪಡೆದಿದೆ. ಅದು ಬಂಗಾರದ ಮನುಷ್ಯ ಸಿನೆಮಾ ಹೇಳುವಷ್ಟು ಸರಳವಾಗಿಲ್ಲ. ಜೊತೆಗೆ ತ್ಯಾಗ, ಇಂದು ಬದುಕಿನ ಮೌಲ್ಯವಾಗಿ ಉಳಿದಿಲ್ಲ.

ಒಂದು ಸಾರ್ವಕಾಲಿಕ ಉತ್ತಮ ಸಿನೆಮಾ ಮತ್ತು ಒಂದು ಕಾಲಘಟ್ಟದ ಉತ್ತಮ ಸಿನೆಮಾದ ನಡುವಿನ ವ್ಯತ್ಯಾಸ ಇದೇ. ಒಂದು ಸಿನೆಮಾ ಯಾವಾಗ ಸಾರ್ವಕಾಲಿಕ ಸಿನೆಮಾ ಆಗುತ್ತದೆ ಎಂದರೆ, ಅದು ಕಾಲವನ್ನು ಮೀರಿ ಮನುಷ್ಯನ ಅನುಭವಗಳ ಮೇಲಿನ ಭಾಷ್ಯವಾಗಬೇಕು. ಕಾಲವನ್ನು ಮೀರಿ ನಿಲ್ಲುವ ಸಿನೆಮಾವೇ ಅತ್ಯುತ್ತಮ ಸಿನೆಮಾ ಎಂದು ನಾನು ನಂಬಿದ್ದೇನೆ.

ಬಂಗಾರದ ಮನುಷ್ಯ ಕಾಲವನ್ನು ಮೀರಿದ ಅತ್ಯುತ್ತಮ ಸಿನೆಮಾ ಆಗದಿದ್ದರೂ ಅದು ನಮ್ಮನ್ನು ಭೂತಕಾಲಕ್ಕೆ ಕರೆದೊಯ್ಯುತ್ತದೆ. ಅಂದಿನ ಸಿನೆಮಾಗಳ ವ್ಯಾಕರಣ, ಬದುಕಿನ ದೃಷ್ಟಿ ಎಲ್ಲವನ್ನೂ ನೆನಪು ಮಾಡಿಕೊಡುತ್ತದೆ. ಇದಕ್ಕಾದರೂ ಈ ಸಿನೆಮಾವನ್ನು ಇನ್ನೊಮ್ಮೆ ನೋಡಬೇಕು.

Saturday, March 27, 2010

ಖಾಸಗಿ ಮಾತುಗಳು; ನಾನು ಯಾರನ್ನೂ ಧ್ವೇಷಿಸಲಾರೆ.....!

ಬಹಳಷ್ಟು ಜನ ನನ್ನನ್ನು ಕೇಳುತ್ತಾರೆ.

"ನಿಮಗೆ ಇಂತವರ ಬಗ್ಗೆ ತುಂಬಾ ಸಿಟ್ಟಿ ಇರಬೇಕಲ್ಲ ? ನೀವು ಈಗ ಸುಮ್ಮನಿರಬಾರದು." ನಾನು ಈ ಮಾತುಗಳನ್ನು ಕೇಳಿ ನಕ್ಕು ಬಿಡುತ್ತೇನೆ. ಧ್ವೇಷ ನನ್ನ ಜಾಯಮಾನವಲ್ಲ. ರಾಜಕಾರಣಿಗಳ ಜೊತೆ ಒಡನಾಡಿದರೂ ನಾನು ರಾಜಕೀಯ ಮಾಡಲಾರೆ. ಪತ್ರಿಕೋದ್ಯಮದಲ್ಲಿ ಇದ್ದರೆ, ನಾನು ಪತ್ರಿಕೋದ್ಯಮವನ್ನು ಮಾತ್ರ ನಂಬಿ ಬದುಕುತ್ತೇನೆ. ಬೇರೆ ವ್ಯವಹಾರ ಮಾಡಲಾರೆ. ಮಾಧ್ಯಮದ ವಿಸಿಟಿಂಗ್ ಕಾರ್ಡ್ ಬಳಸಿ ಬೇರೆ ವ್ಯವಹಾರ ಮಾಡಲು ನನಗೆ ಬರುವುದಿಲ್ಲ. ಆದ್ದರಿಂದ ಇಂತಹ ಮಾತುಗಳನ್ನು ಕೇಳಿದಾಗ ನನಗೆ ಬರುವುದು ಸಣ್ಣ ನಗು ಮಾತ್ರ. ಇದು ನನ್ನ ದೌರ್ಬಲ್ಯ ಎಂದು ಸ್ನೇಹಿತರು ಹೇಳುವುದಿದೆ. ನನ್ನ ಹೆಂಡತಿ ಮಕ್ಕಳು ಸ್ನೇಹಿತರು ಮೂದಲಿಸುವುದಿದೆ. ಆಗಲೂ ನಾನು ನಗುವುದು ಬಿಟ್ಟು ಬೇರೆ ಮಾಡಲಾರೆ. ಯಾಕೆಂದರೆ ಇದು ದೌರ್ಬಲ್ಯವಲ್ಲ. ಇದೇ ನನ್ನ ಶಕ್ತಿ ಎಂಬುದು ನನಗೆ ಗೊತ್ತಿದೆ.

ನಾನು ದೃಶ್ಯ ಮಾಧ್ಯಮಕ್ಕೆ ಬಂದಿದ್ದು ಅಚಾನಕ್ ಆಗಿ. ಅದು ೨೦೦೦ ಇಸ್ವಿ ಜನವರಿ ತಿಂಗಳು. ಏಷ್ಯಾನೆಟ್ ಮತ್ತು ಜೀ ಚಾನಲ್ ಗಳು ಸೇರಿ ಕನ್ನಡಲ್ಲಿ ಚಾನಲ್ ಪ್ರಾರಂಭಿಸಲು ನಿರ್ಧರಿಸಿದ್ದವು. ಅವರಿಗೆ ಸುದ್ದಿ ವಿಭಾಗದ ಮುಖ್ಯಸ್ಥರು ಬೇಕಾಗಿತ್ತು. ಹೀಗಾಗಿ ಅನುಭವಿ ಪತ್ರಕರ್ತರಿಗಾಗಿ ಹುಡುಕುತ್ತಿದ್ದರು. ಆಗ ಸ್ನೇಹಿತರೊಬ್ಬರು ಬೆಂಗಳೂರಿಗೆ ಬಂದಿದ್ದ ಏಷ್ನಾನಟ್ ಚಾನಲ್ ನ ಮಾಲಿಕರಾಗಿದ್ದ ರಾಜೂ ಮೆನನ್ ಅವರನ್ನು ನೋಡುವಂತೆ ಸೂಚಿಸಿದರು. ನಾನಾಗ ಕನ್ನಡ ಪ್ರಭ ಪತ್ರಿಕೆಯ ಮುಖ್ಯವರದಿಗಾರನಾಗಿದ್ದೆ. ನನ್ನ ಜೊತೆ ಎಚ್. ಆರ್. ರಂಗನಾಥ್, ಶಿವಸುಬ್ರಹ್ಮಣ್ಯ. ರವಿ ಪ್ರಕಾಶ, ಶ್ರೀಕಾಂತ್ ನಾಡಿಗೇರ್ ಮೊದಲಾದವರಿದ್ದರು. ಡಿ. ಉಮಾಪತಿ ಆಗಲೇ ದೆಹಲಿಗೆ ವರ್ಗವಾಗಿ ಹೋಗಿದ್ದರು.

ನನಗೆ ಯಾಕೋ ಗೊತ್ತಿಲ್ಲ, ಕನ್ನಡ ಪ್ರಭ ಬಿಡುವುದು ಒಳ್ಳೆಯದು ಎಂದು ಅನ್ನಿಸತೊಡಗಿತ್ತು. ಹಾಗೆ ನೋಡಿದರೆ, ನನ್ನ ಜೊತೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳೆಲ್ಲ ನನ್ನ ಸ್ನೇಹಿತರೇ. ರಂಗನಾಥ್ ಬೆಂಗಳೂರಿಗೆ ಬಂದ ಮೇಲೆ ನನ್ನ ಜೊತೆಗೆ ಇದ್ದವರು. ವಿ. ಎನ್ ,ಸುಬ್ಬರಾಯರ ನಾವು ನೀವು ಪತ್ರಿಕೆಯಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೆವು. ಜೊತೆಗೆ ರಂಗನಾಥ್ ನನ್ನ ರೂಮಿನಲ್ಲೇ ಇದ್ದರು. ಆಗ ಅವರ ಬಳಿ ಒಂದು ಮೊಪೆಡ್ ಇತ್ತು. ರಾತ್ರಿ ಅವರ ಮೊಪೆಡ್ ನಲ್ಲಿ ಹಿಂದೆ ಕುಳಿತು ಮನೆಗೆ ಬರುತ್ತಿದ್ದೆ. ಇಬ್ಬರೂ ಕನಸು ಕಾಣುತ್ತಿದ್ದ ದಿನಗಳು ಅವು.

ನಂತರದ ದಿನಗಳಲ್ಲಿ ರಂಗನಾಥ್ ಬೇರೆ ಮನೆ ಮಾಡಿದರು. ಆದರೆ ಅಷ್ಟರಲ್ಲಿ ನಮ್ಮ ಪತ್ರಿಕೆ ಸೇರಿದ ಶಿವಸುಬ್ರಹ್ಮಣ್ಯ ವಿಜಯನಗರದಲ್ಲಿ ಮನೆ ಮಾಡಿದ್ದರಿಂದ ಅವರು ನನ್ನನ್ನು ಮನೆಗೆ ಡ್ರಾಫ್ ಮಾಡುತ್ತಿದ್ದರು. ನಾನು ಮುಖ್ಯ ವರದಿಗಾರನಾಗುವ ವರೆಗೆ ಎಲ್ಲವೂ ಹೀಗೆ ಇತ್ತು. ಎಲ್ಲರೂ ಸ್ನೇಹಿತರೇ. ಆದರೆ ನಾನು ಮುಖ್ಯ ವರದಿಗಾರನಾದ ಮೇಲೆ ಪರಿಸ್ಥಿತಿ ಬದಲಾಯಿತು. ನನಗೆ ನನ್ನ ಬಗ್ಗೆ ಅನುಮಾನ ಪಡುವ ಸ್ಥಿತಿ.

ನಾನು ನನ್ನ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದೆ. ರಾಜಕೀಯ ವರದಿಗಾರಿಕೆಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಲು ಯತ್ನಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೂ ದೊರಕಿತು. ಈಗಲೂ ಹಲವಾರು ಹಿರಿಯ ರಾಜಕಾರಣಿಗಳು ಅಂದಿನ ನನ್ನ ವರದಿಗಳನ್ನ ನೆನಪು ಮಾಡಿಕೊಳ್ಳುತ್ತಾರೆ. ಇರಲಿ, ಆದರೆ ನನ್ನ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದ ನಾನು ಎಂದೂ ಮೆನೇಜ್ಮೆಂಟ್ ಜೊತೆ ಸತತ ಸಂಪರ್ಕ ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿದಿರಲಿಲ್ಲ. ಅಷ್ಟರ ಮಟ್ಟಿಗೆ ನಾನು ದಡ್ದನಾಗಿದ್ದೆ. ಆದರೆ ನನ್ನ ಸ್ನೇಹಿತ ಸಹೋದ್ಯೋಗಿಗಳು ಆಗಲೇ ಮೆನೇಜ್ಮೆಂಟ್ ಜೊತೆ ಸಂಪರ್ಕವನ್ನು ಸಾಧಿಸಿಬಿಟ್ಟಿದ್ದರು. ಇಂಥಹ ಸ್ಥಿತಿಯಲ್ಲಿ ನನಗೆ ಅನ್ನಿಸಿದ್ದು ನಾನು ಕೆಲಸ ಬಿಡುವುದು ಒಳ್ಳೆಯದು ಅಂತ.

ನನ್ನ ಇನ್ನೊಂದು ಗುಣವಿದೆ. ನಾನು ಬೇರೆಯವರು ನನ್ನ ಸ್ಥಾನಕ್ಕೆ ಬರುತ್ತಾರೆ ಎಂಬುದು ಗೊತ್ತಾದರೆ, ನಾನೇ ಸ್ಥಾನವನ್ನು ಬಿಟ್ಟು ಹೊರಟು ಬಿಡುತ್ತೇನೆ. ಇಂತಹ ಹಲವು ಉದಾಹರಣೆಗಳು ಇವೆ. ಕೆಲವೊಮ್ಮೆ ನನಗೆ ಗೊತ್ತಾಗದೇ ಬೆಳವಣಿಗೆ ಆದಾಗ ಮಾತ್ರ, ನಾನು ಹೇಳಿದ ಮೇಲೆ ಹೊರಹೋಗಿದ್ದು ಇದೆ.

ನಾನು ಕನ್ನಡ ಪ್ರಭ ಬಿಡಬೇಕು ಎಂದುಕೊಂಡಾಗಲೇ ಏಶ್ಯಾನೆಟ್ ನನ್ನನ್ನು ಆಯ್ಕೆ ಮಾಡಿತು. ಜೊತೆಗೆ ಅವರು ನೀಡಿದ ಸಂಬಳವೂ ಆಕರ್ಷಕವಾಗಿತ್ತು. ಕನ್ನಡ ಪ್ರಭದಲ್ಲಿ ನಾನು ೧೭ ಸಾವಿರ ರೂಪಾಯಿ ಸಂಬಳ ತೆಗೆದುಕೊಳ್ಳುತ್ತಿದ್ದೆ. ಏಷ್ಯಾನೆಟ್ ನನಗೆ ನೀಡಿದ ಸಂಬಳ ೩೫ ಸಾವಿರ ರೂಪಾಯಿ ಜೊತೆಗೆ ಇತರ ಸೌಲಭ್ಯಗಳು.

ನಾನು ಭಾರವಾದ ಹೃದಯದಿಂದ ಕನ್ನಡ ಪ್ರಭ ತ್ಯಜಿಸಿದೆ. ಏಷ್ಯಾನೆಟ್ ಸಮೂಹ ಸೇರಿದೆ. ಅದು ೨೦೦೦ ಇಸ್ವಿ ಜೂನ್ ತಿಂಗಳು. ಹೀಗೆ ಪ್ರಾರಂಭವಾಯಿತು ನನ್ನ ದೃಶ್ಯ ಮಾಧ್ಯಮದ ಉದ್ಯೋಗ. ಏಷ್ಯಾನೆಟ್ ಮತ್ತು ಜೀ, ಕಾವೇರಿ ಎಂಬ ಕನ್ನಡ ಚಾನಲ್ ಅನ್ನು ಆಗಲೇ ಪ್ರಾರಂಭಿಸಿದ್ದರು. ಆದರೆ ಸುದ್ದಿ ಪ್ರಾರಂಭವಾಗಿರಲಿಲ್ಲ. ನಾನು ಸುದ್ದಿ ವಿಭಾಗಕ್ಕೆ ಬೇಕಾದವರನ್ನು ತೆಗೆದುಕೊಳ್ಳಲು ಪ್ರಕ್ರಿಯೆ ಪ್ರಾರಂಭಿಸಿದೆ. ಆದರೆ ಆಗಲೇ ನಡೆದಿದ್ದು ಕನ್ನಡದ ವರನಟ ಡಾ. ರಾಜಕುಮಾರ್ ಅಪಹರಣ. ಇದರಿಂದಾಗಿ ನನಗೆ ತಕ್ಷಣ ಮದ್ರಾಸಿಗೆ ಹೋಗಿ ಸುದ್ದಿಯನ್ನು ಪ್ರಾರಂಭಿಸುವಂತೆ ಸೂಚನೆ ಬಂತು. ಆಗ ಏಷ್ಯಾನೆಟ್ ಅಪ್ ಲಿಂಕಿಂಗ್ ಇದ್ದುದು ಚೆನ್ನೈನಲ್ಲಿ. ನಾನು ಮರು ಮಾತನಾಡದೇ ಮಧ್ಯಾನ್ಹದ ಫ್ಲೈಟ್ ನಲ್ಲಿ ಮದ್ರಾಸಿಗೆ ನಡೆದೆ. ಅಷ್ಟರಲ್ಲಿ ಕಾವೇರಿ ನ್ಯೂಸ್ ವಿಶೇಷ ಸುದ್ದಿ ಪ್ರಸಾರ ಸಂಜೆ ೫. ೩೦ ಕ್ಕೆ ಎಂಬ ಪ್ರಕಟನೆ ಚಾನಲ್ ನಲ್ಲಿ ಪ್ರಸಾರವಾಗುತ್ತಿತ್ತು.

ನಾನು ಮದ್ರಾಸಿಗೆ ಬಂದವನು ಅಲ್ಲಿಂದ ೫೦ ಕಿಮೀ ದೂರದಲ್ಲಿರುವ ಸ್ಟುಡಿಯೋಕ್ಕೆ ನಡೆದ. ಆಗಲೇ ೩. ೩೦ ಆಗಿತ್ತು. ೫.೩೦ ಕ್ಕೆ ಲೈವ್ ಸುದ್ದಿ ಪ್ರಸಾರ ಆಗಬೇಕು. ಸ್ಟುಡಿಯೊಕ್ಕೆ ಹೋದವನಿಗೆ ಶಾಕ್. ಅಲ್ಲಿದ್ದ ಬಹುತೇಕರಿಗೆ ಮಲೆಯಾಳಿ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಹೀಗಾಗಿ ಅವರ ಜೊತೆ ನನಗೆ ಸಂವಾದವೇ ಸಾಧ್ಯವಾಗಲಿಲ್ಲ. ನಾನು ಅಲ್ಲಿದ್ದ ವಿಸ್ಯುವಲ್ಸ್ ಗಳನ್ನು ನೋಡಿದೆ. ನನಗೆ ಗೊತ್ತಿದ್ದ ಮಾಹಿತಿಯನ್ನು ಆಧರಿಸಿ, ಸುದ್ದಿಯನ್ನು ಬರೆದು ಎಡಿಟ್ ಮಾಡಿಸಿದೆ. ಕೊನೆಗೆ ಸ್ಟುಡೀಯೋದ ಒಳಗೂ ಪ್ರವೇಶಿಸಿದೆ. ಸುದ್ದಿ ವಾಚಕನಾಗಿ. ಅಲ್ಲಿ ನಾನು ಮಾಡಲು ಹೊರಟಿದ್ದು ಒನ್ ಮ್ಯಾನ್ ಶೋ. ಅಂತೂ ಯಾವುದೇ ತೊಂದರೆ ಇಲ್ಲದೇ ಲೈವ್ ನ್ಯೂಸ್ ಪ್ರಸಾರ ಆಯಿತು. ಮರುದಿನ ಚೈನೈನಲ್ಲಿರುವ ಕೆಲವರನ್ನು ಸಂಪರ್ಕಿಸಿದೆ. ಕೆಲವರು ಉದಯ ಟೀವಿಯಲ್ಲಿ ಕೆಲಸ ಮಾಡಿದವರೂ ಅಲ್ಲಿದ್ದರು. ಇಂತಹ ಮೂವರನ್ನು ತೆಗೆದುಕೊಂಡು ಪ್ರತಿ ದಿನ ಸುದ್ದಿ ಬರುವಂತೆ ಮಾಡಿದೆ. ಸುಮಾರು ೧೫ ದಿನಗಳ ಕಾಲ ಅಲ್ಲಿ ನನ್ನ ಈ ಶೋ ನಡೆಯಿತು. ಇದರಿಂದ ಏಷ್ಯಾನೆಟ್ ನವರಿಗೆ ನನ್ನ ಬಗ್ಗೆ ಪ್ರೀತಿ ಗೌರವ ಮೂಡಿತು. ಈಗಲೂ ಅದೇ ಪ್ರೀತಿ ಗೌರವ ಅವರಿಗೆ ನನ್ನ ಮೇಲಿದೆ.

ನನ್ನ ಕೆಲವು ಸ್ಣೇಹಿತರು ನೀವು ಈಗ ಸುಮ್ಮನಿರಬಾರದು ಎಂದು ಹೇಳಿದಾಗ ಇದೆಲ್ಲ ನನಗೆ ನೆನಪಾಗುತ್ತಿದ್ದೆ. ಬದುಕಿನಲ್ಲಿ ನಮ್ಮನ್ನು ಇಷ್ಟಪಡುವರೂ ಇರುತ್ತಾರೆ. ಇಷ್ಟಪಡುವವರು ಇರುವುದರಿಂದ ಧ್ವೇಷಿಸುವವರೂ ಇರುತ್ತಾರೆ. ನಾನು ನೋಡಿದ ಹಾಗೆ ಒಬ್ಬ ವ್ಯಕ್ತಿ ಪರಿಸ್ಥಿತಿಗೆ ತಕ್ಕಂತೆ ವರ್ತಿಸುತ್ತಾನೆ. ತನ್ನ ಎಜೇಂಡಾಕ್ಕೆ ತಕ್ಕಂತೆ ಕೆಲಸ ಮಾಡುತ್ತಿರುತ್ತಾನೆ. ಆದ್ದರಿಂದ ಮನುಷ್ಯರನ್ನು ಒಳ್ಳೆಯವರು ಕೆಟ್ಟವರು ಎಂದು ವಿಭಾಗ ಮಾಡುವುದರಲ್ಲಿ ನನಗೆ ನಂಬಿಕೆಯಿಲ್ಲ.

ನನ್ನ ಜೊತೆ ಕೆಲಸ ಮಾಡಿದ ಎಲ್ಲ ಸ್ನೇಹಿತರೂ ಒಳ್ಳೆಯವರೇ. ಎಲ್ಲರೂ ಜೆಂಟಲ್ ಮ್ಯಾನ್ ಗಳೇ. ಆದ್ದರಿಂದ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಲು ಸಿದ್ಧನಿಲ್ಲ. ಹಾಗೆ ನಾನು ಕೆಲಸ ಮಾಡಿದ ಪತ್ರಿಕೆಗಳು. ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ ಮೊದಲಾದ ಪತ್ರಿಕೆಗಳು ನನಗೆ ಬದುಕು ನೀಡಿದ ಪತ್ರಿಕೆಗಳು. ನನಗೆ ಬರೆಯುವುದನ್ನು ಕಲಿಸಿದ ಪತ್ರಿಕೆಗಳು. ಇಂದಿಗೂ ಬೆಳಿಗ್ಗೆ ನಾನು ಎದ್ದ ತಕ್ಷಣ ನೋಡುವುದು ಈ ಪತ್ರಿಕೆಗಳನ್ನು. ನಾನು ಎಂದೂ ಈ ಪತ್ರಿಕೆಗಳ ಬಗ್ಗೆ ಕೆಟ್ಟದಾಗಿ ಮಾತನಾಡಲಾರೆ. ಅವುಗಳ ಬಗ್ಗೆ ನನ್ನ ಹೃದಯದಲ್ಲಿ ಇರುವುದು ಕೃತಜ್ನತೆಯ ಭಾವ. ಆದರೆ ಎಲ್ಲರೂ ಹೀಗೆ ಇರಬೇಕು ಎಂದು ಹೇಳುವ ಹಕ್ಕು ನನಗಿಲ್ಲ. ಕೆಲವರಿಗೆ ಇಂತಹ ಭಾವ ಇರದಿರಬಹುದು. ಇದೆಲ್ಲ ವ್ಯಕ್ತಿಗತವಾದ ನಡವಳಿಕೆಗಳು.

ಕೆಲವೊಂದು ನೆನಪುಗಳೇ ಹಾಗೆ. ಮರೆಯಬೇಕು ಎಂದುಕೊಂಡರೂ ಮರೆಯಲು ಸಾಧ್ಯವಾಗುವುದಿಲ್ಲ. ಅವು ಸದಾ ನನ್ನನ್ನು ಕಾಡುತ್ತಿರುತ್ತವೆ. ನಾವು ಕಳೆದ ಸುಂದರ ಕ್ಷಣಗಳು ನಮ್ಮನ್ನು ಕಾಡುತ್ತಿರಬೇಕು. ಕಹಿ ಅನುಭವಗಳಲ್ಲ. ಹಾಗಿದ್ದರೆ ಮಾತ್ರ ನಾವು ಆರೋಗ್ಯಪೂರ್ಣವಾಗಿ ಇರಲು ಸಾಧ್ಯ.

ಹೀಗಿರುವ ನಾನು ಯಾರನ್ನಾದರೂ ಧ್ವೇಷಿಸುವುದು ಸಾಧ್ಯವಾ ? ಖಂಡಿತ ಇಲ್ಲ. ಸ್ನೇಹಿತರ ದುಷ್ಟತನವನ್ನು ಮರೆತರೆ ನಾವು ಆರೋಗ್ಯಪೂರ್ಣವಾಗಿರುತ್ತೇವೆ. ಅವರು ಹಪಹಪಿಸುತ್ತಾರೆ. ಇದು ನಾನು ಕಂಡುಕೊಂಡ ಸತ್ಯ.
ಇರಲಿ, ಇನ್ನು ಮೇಲೆ ಬಿಡುವಾದಾಗಲೆಲ್ಲ, ಪತ್ರಿಕೋದ್ಯಮದ ನನ್ನ ನೆನಪುಗಳಿಗೆ ಅಕ್ಷರದ ರೂಪ ಕೊಡುತ್ತೇನೆ. ಇದು ಇಂದು ನಾನು ತೆಗೆದುಕೊಂಡ ತೀರ್ಮಾನ.

Friday, March 26, 2010

ಇಲ್ಲಿ ಎಲ್ಲವೂ ಈಗ ಪೇಡ್, ಪೇಡ್ : ಈ ಬಗ್ಗೆ ಆತ್ಮ ವಿಮರ್ಶೆ ನಡೆಯಲಿ.


ನಮ್ಮ ಬಗ್ಗೆ ನಾವು ಬರೆದುಕೊಳ್ಳುವುದು ಕಷ್ಟದ ಕೆಲಸ. ನಾವು ಪ್ರೀತಿಸುವ, ನಮ್ಮ ಬದುಕಿನ ಭಾಗವೇ ಆಗಿರುವ, ನಮ್ಮ ವೃತ್ತಿಯ ಬಗ್ಗೆ ಮಾತನಾಡುವುದು ಇನ್ನೂ ಕಷ್ಟ. ಆದರೆ ನಾವು ಮಾತನಾಡಲೇ ಬೇಕು. ಹೇಳುವುದನ್ನು ಹೇಳಲೇ ಬೇಕು. ಯಾಕೆಂದರೆ ನಾವೆಲ್ಲ ಪತ್ರಿಕೋದ್ಯಮಿಗಳು.
ಮಹಾನಗರ ಪಾಲಿಕೆಯ ಚುನಾವಣೆಯ ಕಾವು ಏರುತ್ತಿದ್ದ ಹಾಗೆ ನಾನು ಪತ್ರಿಕೆಗಳನ್ನು ಅಭ್ಯಸಿಸುವನಂತೆ ಓದತೊಡಗಿದೆ. ಚುನಾವಣಾ ಸಮೀಕ್ಷೆಗಳನ್ನು ಓದುವ ಮೂಲಕ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಯತ್ನಿಸಿದೆ.
ಪ್ರಾಯಶ: ನೀವೆಲ್ಲ ಗಮನಿಸಿರಬಹುದು. ಒಂದು ಪತ್ರಿಕೆಯಲ್ಲಿ ಒಂದೇ ದಿನ ಒಂದು ವಾರ್ಡಿನ ಬಗ್ಗೆ ಎರಡು ರೀತಿಯ ವರದಿಗಳು ಇದ್ದವು. ಒಂದರಲ್ಲಿ ಒಂದು ಪಕ್ಷದ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ ಎಂದಿದ್ದರೆ ಇನ್ನೊಂದು ವರದಿಯಲ್ಲಿ ಇನ್ನೊಬ್ಬ ಅಭ್ಯರ್ಥಿ ಗೆಲ್ಲುತ್ತಾನೆ ಎಂದಿತ್ತು ! ಆ ವರದಿಗಳ ಪಕ್ಕದಲ್ಲಿ ಅವರು ಪ್ರತಿನಿಧಿಸುವ ಪಕ್ಷದ ಜಾಹೀರಾತುಗಳಿದ್ದವು. ಅಂದರೆ ಅದು ಸಮೀಕ್ಷೆಯಲ್ಲ. ಪೇಡ್ ಸಮೀಕ್ಷೆ ! ಹೀಗಾಗಿ ಒಂದೇ ಪತ್ರಿಕೆ ಒಂದು ವಾರ್ಡಿನ ಬಗ್ಗೆ ಎರಡು ರೀತಿಯ ಸಮೀಕ್ಷೆಗಳನ್ನು ಪ್ರಕಟಿಸಿತ್ತು.
ಹಾಗೆ, ಟಿವಿ ವಾಹಿನಿಗಳಲ್ಲೂ ಪೇಡ್ ವರದಿಗಳು ಬರುತ್ತಿವೆ ಎಂದು ಯಾರೋ ಸ್ನೇಹಿತರು ಹೇಳಿದರು. ಆದರೆ ನಾನು ಹೆಚ್ಚಿನ ಸುದ್ದಿಗಳನ್ನು ಗಮನವಿಟ್ಟು ನೋಡಿಲ್ಲದಿರುವುದರಿಂದ ಈ ಹೇಳಿಕೆಯನ್ನು ಒಪ್ಪುವುದಾಗಲೀ ನಿರಾಕರಿಸುವುದಾಗಲಿ ಮಾಡುವುದಿಲ್ಲ. ಆದರೆ ಇಂದು ಪತ್ರಿಕೋದ್ಯಮ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಅಂದರೆ ನಾವು ಎತ್ತ ಸಾಗುತ್ತಿದ್ದೇವೆ ಅಂತ.
ನಿಜ, ಇಂದು ಮಾಧ್ಯಮ ಕೇವಲ ಪತ್ರಿಕೆಗಳ ಮಾರಾಟದ ಮೇಲೆ ಆಗಲೀ, ಕಾರ್ಯಕ್ರಮಗಳ ಬದ್ಧತೆಯಿಂದಾಗಲಿ ಉಳಿಯಲಾರದು. ಹಾಗೆ ಜಾಹೀರಾತುಗಳು ಸಹ ಮಾಧ್ಯಮವನ್ನು ಉಳಿಸುವುದು ಕಷ್ಟ. ಆದರೆ, ಈಗ ಅನುಸರಿಸುತ್ತಿರುವ ಮಾರ್ಗ ಎಷ್ಟು ಸರಿ ?
ಈಗ ಕೆಲವು ದಿನಗಳ ಹಿಂದೆ ಟೀವಿಯ ದಿಗ್ಗಜರೆಲ್ಲ ದೆಹಲಿಯಲ್ಲಿ ಒಂದು ವಿಚಾರ ಸಂಕಿರಣವನ್ನು ನಡೆಸಿದರು. ಈ ವಿಚಾರ ಸಂಕಿರಣದಲ್ಲಿ ರಾಜದೀಪ್ ಸರ್ದೇಸಾಯಿ ಸೇರಿದಂತೆ ಎಲ್ಲ ದಿಗ್ಗಜರೆಲ್ಲ ಪಾಲ್ಗೊಂಡಿದ್ದರು. ಅಲ್ಲಿ ಅವರು ಈ ಪೇಡ್ ನ್ಯೂಸ್ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದು ಸ್ವಾಗತಾರ್ಹ. ಆದರೆ ಎಷ್ಟು ರಾಷ್ಟೀಯ ವಾಹಿನಿಗಳು ಪೇಡ್ ನ್ಯೂಸ್ ನಿಂದ ಹೊರತಾಗಿವೆ ಎಂದು ಕೇಳಿದರೆ ಉತ್ತರ ನೀದುವುದು ಸುಲಭವಲ್ಲ.
ಪತ್ರಿಕೋದ್ಯಮ ಬದಲಾಗುತ್ತಿದೆ. ಪತ್ರಿಕೋದ್ಯಮಿಗಳು ಬದಲಾಗುತ್ತಿದ್ದಾರೆ. ಎಲ್ಲೆಡೆ ಕುರುಡು ಕಾಂಚಾಣದ ಭೂತ ನರ್ತನ ನಡೆಯುತ್ತಿದೆ. ಪತ್ರಿಕೋದ್ಯಮಿಗಳು ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದರೂ ( ಹೊಟ್ಟೆಪಾಡಿಗಾಗಿ ! ) ಬೇರೆ ಬೇರೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ರಿಯಲ್ ಎಸ್ಟೇಟ್ ಎಜೆಂಟರಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರಿದ್ದಾರೆ. ತಮ್ಮ ತಮ್ಮ ಜಾತಿಯ ರಾಜಕಾರಣಿಗಳ ಹಿತ ಕಾಯಲು ಸಂಕಲ್ಪ ಮಾಡಿದ ಗುಂಪುಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಪತ್ರಿಕೋದ್ಯಮದ ಆತ್ಮ ಸತ್ತರೆ ಆ ಸಮಾಜದ ಆತ್ಮವೇ ಸತ್ತು ಹೋಗುತ್ತದೆ.
ಮೊದಲು ಎಲ್ಲ ಮಾಧ್ಯಮಗಳ ಮುಖ್ಯಸ್ಥರು ಸೇರಿ ಈ ಬಗ್ಗೆ ಚಿಂತನೆ ನಡೆಸಬೇಕು. ನಾವು ಯಾಕೆ ಪತ್ರಿಕೆಗಳನ್ನು ಮಾಡುತ್ತಿದ್ದೇವೆ, ಯಾಕೆ ಟೀವಿ ಚಾನಲ್ ಗಳನ್ನು ನಡೆಸುತ್ತಿದ್ದೇವೆ ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಳ್ಳಬೇಕು. ಒಂದೊಮ್ಮೆ ಇದು ಹಣ ಮಾಡುವುದಕ್ಕಾಗಿ ಎಂದಾದರೆ ಸಮಾಜದ ಹಿತದೃಷ್ಟಿಯಿಂದ ಅದನ್ನು ಮಾಡದಿರುವುದೇ ಒಳ್ಳೆಯದು. ಲಾಭ ಮಾಡಲು ಬೇರೆ ಬೇರೆ ಉದ್ಯಮಗಳಿವೆ. ಆದರೆ ಪತ್ರಿಕೋದ್ಯಮ ಹಾಗಲ್ಲ. ಅದು ಉಳಿಯಲು ಹಣ ಬೇಕು ಎಂಬುದು ನಿಜವಾದರೂ ಹೇಗಾದರೂ ಹಣ ಮಾಡುವುದೇ ಅದರ ಕೆಲಸವಲ್ಲ. ಈ ಬಗ್ಗೆ ಪತ್ರಿಕಾ ಮಾಧ್ಯಮದ ದಿಗ್ಗಜರು ಯೋಚಿಸಲಿ.

Thursday, March 25, 2010

ಲಿವಿಂಗ್ ಟುಗೇದರ್ ಎಂದರೆ ಜೊತೆಯಾಗಿ ಬದುಕುವುದೇ ಅಲ್ಲವೆ ?

ಲಿವಿಂಗ್ ಟುಗೆದರ್. ಹಾಗೆಂದರೆ ಜೊತೆಯಾಗಿ ಬದುಕುವುದು ಎಂದು ಭಾಷಾಂತರಿಸಬಹುದು. ಆದರೆ ಲಿವಿಂಗ್ ಟುಗೆದರ್ ಎಂಬುದು ಕೇವಲ ಜೊತೆಯಾಗಿ ಬದುಕುವುದಲ್ಲ. ಒಂದು ಗಂಡು ಮತ್ತು ಹೆಣ್ಣು ಸಾಂಪ್ರದಾಯಿಕ ಅರ್ಥದಲ್ಲಿ ಮದುವೆಯಾಗದೇ ಸಂಸಾರ ಮಾಡುವುದು ಎಂದು ಹೇಳಬಹುದು.

ನಮ್ಮ ದೇಶಕ್ಕೆ ಈ ಲಿವಿಂಗ್ ಟುಗೆದರ್ ಹೊಸತಲ್ಲ. ಸಾಂಪ್ರದಾಯಿಕವಾಗಿ ಮದುವೆಯಾಗದೇ ಜೊತೆಯಾಗಿ ಬದುಕುವವರು, ಅಂದರೆ ಸಂಸಾರ ನಡೆಸುವವರು ಈ ದೇಶದಲ್ಲಿ ಸಾಕಷ್ಟು ಜನರಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಂತವರ ಸಂಖ್ಯೆ ಹೆಚ್ಚುತ್ತಿದೆ ಈ ರೀತಿ ಸಂಸಾರ ನಡೆಸುವುದು ನೈತಿಕವೇ ಅನೈತಿಕವೇ ಎಂಬ ಪ್ರಶ್ನೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ ತಮಿಳು ಚಿತ್ರ ನಟಿಯೊಬ್ಬಳ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ತೀರ್ಪು ಈ ಬಗ್ಗೆ ಮತ್ತೆ ಚರ್ಚೆಯನ್ನು ಹುಟ್ಟು ಹಾಕಿದೆ, ನ್ಯಾಯಾಲಯದ ಅಭಿಪ್ರಾಯದ ಪ್ರಕಾರ ಜೊತೆಯಾಗಿ ಬದುಕುವುದು ಅನೈತಿಕ ಎಂದೂ ಯಾವ ಕಾನೂನು ಹೇಳಿಲ್ಲ. ಆದ್ದರಿಂದ ಲಿವಿಂಗ್ ಟುಗೇದರ್ ಕಾನೂನು ವಿರೋಧಿಯಲ್ಲ. ಲಿವಿಂಗ್ ಟುಗೆದರ್ ಕಾನೂನಿಗೆ ವಿರುದ್ಧವಾದುದಲ್ಲ ಎಂಬುದು ನಿಜ. ಯಾಕೆಂದರೆ ಕಾನೂನಿನಲ್ಲಿ ಈ ವಿಚಾರದ ಪ್ರಸ್ತಾಪ ಇಲ್ಲ.

ಆದರೆ ಇಲ್ಲಿ ಹಲವಾರು ಸೂಕ್ಷ್ಮ ಪ್ರಶ್ನೆಗಳಿವೆ. ಮೊದಲನೆಯದಾಗಿ ಲಿವಿಂಗ್ ಟುಗೆಡರ್ ಈಗಿನ ಕೌಟುಂಬಿಕ ವ್ಯವಸ್ಥೆಯ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದು. ಇದರಿಂದಾಗಿ ಸಾಮಾಜಿಕ ವ್ಯವಸ್ಥೆಯ ಮೇಲೆ ಉಂಟಾಗುವ ಪರಿಣಾಮ ಯಾವುದು ಎಂಬುದು ಮುಂದಿನ ಪ್ರಶ್ನೆ.

ಇಲ್ಲಿ ಕುಟುಂಬ, ಹಲವು ಕುಟುಂಬಗಳಿಂದ ನಿರ್ಮಾಣವಾದ ಸಮಾಜ, ಈ ಸಮಾಜದಲ್ಲಿ ಇರಬೇಕಾದ ನೀತಿ ನಿಯಮಗಳು, ಈ ನೀತಿ ನಿಯಮಗಳನ್ನು ರೂಪಿಸಲು ವೇದಿಕೆಯಾದ ಧರ್ಮ ಮತ್ತು ಇದೆಲ್ಲ ಸರಿಯಾಗಿ ನಡೆಯಲು ರೂಪಿತವಾದ ಕಾನೂನು ಇವುಗಳ ನಡುವಿನ ಸಂಬಂಧವನ್ನು ತಿಳಿದುಕೊಳ್ಳಬೇಕಾಗಿದೆ. ಅಂದರೆ ಒಂದು ಸಮಾಜದ ಭಾಗವಾಗಿರುವವರು ಹೇಗೆ ಬದುಕಬೇಕು ಎಂಬುದೇ ನೀತಿ. ಈ ನೀತಿಯಂತೆ ಬದುಕಿದರೆ ಅದು ನೈತಿಕ. ಹಾಗೆ ಬದುಕದಿದ್ದರೆ ಅದು ಅನೈತಿಕ. ಬದುಕು ಅನೈತಿಕವಾದರೆ ಅದನ್ನು ತಡೆಯಲು ಇರುವುದೇ ಕಾನೂನು. ಈಗ ನಮ್ಮ ಕಾನೂನಿನಲ್ಲಿ ಲಿವಿಂಗ್ ಟುಗೆದರ್ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದರಿಂದ ಅದು ಅನೈತಿಕ ಅಲ್ಲ. ಅನೈತಿಕ ಅಲ್ಲವಾದ್ದರಿಂದ ಅದು ನೈತಿಕ.

ವಯಸ್ಸಿಗೆ ಬಂದಿರುವ ಒಂದು ಗಂಡು ಮತ್ತು ಹೆಣ್ಣು, ಜೊತೆಯಾಗಿ ಬದುಕುವುದಿದ್ದರೆ, ಅದಕ್ಕೆ ಅಗ್ನಿ ಸಾಕ್ಷಿಯಾಗಬೇಕು, ಸಮಾಜ ಸಾಕ್ಷಿಯಾಗಬೇಕು, ಇಲ್ಲವೇ ಅದು ನೊಂದಣಿಯಾಗಬೇಕು. ಯಾಕೆಂದರೆ ಒಂದು ಗಂಡು ಹೆಣ್ಣಿನ ಸಂಬಂಧದಿಂದ ಇನ್ನೊಂದು ಜೀವೆ ಹುಟ್ಟಿ ಬರುತ್ತದೆ. ಹೀಗೆ ಹುಟ್ಟಿ ಬಂದ ಜೀವದ ಪಾಲನೆ ಪೋಷಣೆ ಮಾಡುವ ಹೊಣೆಗಾರಿಕೆಯ ನಿರ್ಧಾರ ಕೂಡ ಆಗಬೇಕು. ಇದು ಮದುವೆಯ ಬಗ್ಗೆ ಈ ಸಮಾಜ ಮತ್ತು ಇದಕ್ಕೆ ಪೂರಕವಾಗಿ ರಚಿತವಾಗಿರುವ ಕಾನೂನುಗಳು ಸ್ಪಷ್ಟವಾಗಿ ಹೇಳುವ ಮಾತು.

ನಾವು ಅನುಸರಿಸಿಕೊಂಡು ಬಂದ ಧರ್ಮ ನಮ್ಮ ಮದುವೆಯ ಬಗ್ಗೆ ಮಾತನಾಡುತ್ತದೆ. ಇದನ್ನೇ ಕಾನೂನನ್ನಾಗಿ ರೂಪಿಸಲಾಗಿದೆ. ಅಂದರೆ, ಹಿಂದೂ ಲಾ, ಮೊಹಮ್ಮಡಿಯನ್ ಲಾ ಇಲ್ಲಿ ಜಾರಿಯಲ್ಲಿವೆ. ಇವು ಮದುವೆಯ ಬಗ್ಗೆ ಕೆಲವೊಂದು ನೀತಿಯನ್ನು ನಿರೂಪಿಸಿವೆ. ಇದಕ್ಕೆ ಆಯಾ ಧರ್ಮವೇ ಆಧಾರ. ಅಂದರೆ ನಮ್ಮ ಸಾಮಾಜಿಕ ನಡವಳಿಕೆ ಮತ್ತು ಕೌಂಟುಂಬಿಕ ಹೊಣೆಗಾರಿಕೆಯ ಬಗ್ಗೆ ಕಾನೂನು ಸ್ಪಷ್ಟವಾಗಿ ಹೇಳುತ್ತದೆ.

ಒಂದು ನಿಮಿಷ ಯೋಚಿಸಿ. ಇಂಥಹ ಕಾನೂನುಗಳ ಮೂಲ ಉದ್ದೇಶ ಈಗಿರುವ ಕೌಂಟುಂಬಿಕ ವ್ಯವಸ್ಥೆ ತೊಂದರೆ ಇಲ್ಲದೇ ನಡೆಯಲಿ ಎಂಬುದು. ಆ ಮೂಲಕ ಸಮಾಜದಲ್ಲಿ ಅರ್ಥಪೂರ್ಣವಾದ ಮನುಷ್ಯ ಸಂಬಂಧ ಇರಲಿ ಎಂಬ ಆಶಯ ಕೂಡ ಇಲ್ಲಿದೆ. ಆದರೆ, ಈ ಧರ್ಮಾಧಾರಿತ ಕಾನೂನು ರಚಿತವಾದ ಕಾಲ ಘಟ್ಟ ಯಾವುದು ? ಆ ಕಾಲ ಘಟ್ಟದಲ್ಲಿನ ಬದುಕಿನ ನೀತಿ ಈಗಲೂ ನೀತಿಯಾಗಿ ಉಳಿದಿದೆಯೆ ? ಅಥವಾ ಬದಲಾಗಿದೆಯೆ ? ನೋಡಿ, ಬದುಕುವ ನೀತಿ ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ. ಒಂದು ಕುಟುಂಬ ಮತ್ತು ಕುಟುಂಬದ ಸದಸ್ಯರ ನಡುವಿನ ಸಂಬಂಧ ಕಾಲದ ನಿಕಷಕ್ಕೆ ಒಳಗಾಗಿ ಬದಲಾಗುತ್ತಲೇ ಇದೆ. ಉದಾಹರಣೆಗೆ ಮಹಾ ಭಾರತದ ಕಾಲದಲ್ಲಿ ಪಾಂಡವರು ಒಬ್ಬಳನ್ನೇ ಮದುವೆಯಾಗಿದ್ದು ಅನೈತಿಕವಾಗಿರಲಿಲ್ಲ. ಆದರೆ ಇಂದು ಈ ಬಗ್ಗೆ ಯೋಚಿಸುವುದಕ್ಕೂ ಸಾಧ್ಯವಿಲ್ಲ ಅಲ್ಲವೆ ?
ಅಂದರೆ ನಾವು ಕಾಲ ಕಾಲಕ್ಕೆ ಸಂವಿಧಾನಕ್ಕೆ ತಿದ್ದುಪಡಿ ಮಾಡುವಂತೆ ಬದುಕಿನ ಸಂವಿಧಾನಕ್ಕೂ ತಿದ್ದುಪಡಿಯಾಗುತ್ತದೆ. ನಾವು ಬದುಕು ಮತ್ತು ಮಾನವೀಯ ಸಂಬಂಧಗಳನ್ನು ನೋಡುವಂತೆ ನಮ್ಮ ಮುಂದಿನ ಪೀಳೀಗೆಯವರು ನೋಡುವುದಿಲ್ಲ. ಮದುವೆಯ ಮುಂಚಿನ ಲೈಂಗಿಕತೆ ಇಂದು ಅನೈತಿಕ ಎಂದು ಹೇಳಿದವರೇ, ನಗೆಪಾಟಲಿಗೆ ಈಡಾಗುವ ಕಾಲದಲ್ಲಿ ನಾವು ಬದುಕಿದ್ದೇವೆ. ಬದುಕು ಮಾತ್ತು ಗಂಡು ಹೆಣ್ಣಿನ ಸಂಬಂಧದ ವ್ಯಾಖ್ಯೆಯೇ ಈಗ ಬದಲಾಗಿದೆ.
ಈ ವಿಚಾರವನ್ನು ನಾನು ಸಿನಿಕನಾಗಿ ಸಂಪ್ರದಾಯವಾದಿಯಾಗಿ ಹೇಳುತ್ತಿಲ್ಲ. ವಸ್ತುಸ್ಥಿತಿಯನ್ನು ನಿರೂಪಿಸುತ್ತಿದ್ದೇನೆ ಅಷ್ಟೇ.
ಈಗ ಲಿವಿಂಗ್ ಟುಗೆದರ್ ನತ್ತ ಬರೋಣ. ಇದು ಕೌಟುಂಬಿಕ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಸಾಧ್ಯತೆ ಹೆಚ್ಚು. ಅಂದರೆ ಗಂಡ, ಹೆಂಡತಿ, ಮಕ್ಕಳು ಎಂಬ ಸಂಬಂಧ ಏನಿದೆ ಅದು ಬೇರೆಯದಾದ ಅರ್ಥವನ್ನು ಪಡೆಯುತ್ತದೆ. ಜೊತೆಗೆ ಹೊಣೆಗಾರಿಕೆಯ ಪ್ರಶ್ನೆ ಕೂಡ ಪೆಡಂಭೂತವಾಗಿ ಕಾಡಬಹುದು. ಇಂಥಹ ಸ್ಥಿತಿಯಲ್ಲಿ ಹೊಸ ಕಾನೂನಿನ ರಚನೆಯ ಅಗತ್ಯವಿದೆ. ಆಂದರೆ ಒಂದು ಗಂಡು ಮತ್ತು ಹೆಣ್ಣು ಜೊತೆಯಾಗಿ ಸಂಸಾರ ಮಾಡಲಿ. ಆದರೆ ಅವರಿಗೆ ಮಗುವಾದರೆ, ಅದರ ಹೊಣೆಗಾರಿಕೆ ಯಾರದ್ದು ? ಕೇವಲ ಹೆಣ್ಣು ಮಾತ್ರ ಈ ಹೋಣೆಗಾರಿಕೆಯನ್ನು ಹೊರಬೇಕೆ ? ಜೊತೆಯಾಗಿ ಬದುಕುವ ಜೊತೆಗಾರ ಕೈಕೊಟ್ಟರೆ ?
ಈ ಪ್ರಶ್ನೆಗಳಿಗೆ ಕಾನೂನು ಉತ್ತರ ಕೊಡುವಂತಾಗಬೇಕು. ಮದುವೆಯಾಗದೇ ಜೊತೆಯಾಗಿ ಬದುಕುವುದು ಅನೈತಿಕವಲ್ಲ ಎಂದು ನ್ಯಾಯಾಲಯ ಹೇಳಿದ ಮೇಲೆ, ಈ ಅನೈತಿಕವಲ್ಲದ ಚಟುವಟಿಕೆ ಮತ್ತು ಇದರಿಂದ ಉಂಟಾಗಿವ ಪರಿಣಾಮದ ಮೇಲೆ ನಿಗಾ ಇಡುವ ಮತ್ತು ನೀತಿ ರೂಪಿಸುವ ಕಾನೂನು ಬರಬೇಕು. ಇದು ಆಗ ಬೇಕಾದ ಕೆಲಸ.
ಯಾಕೆಂದರೆ ಬದುಕು ಎನ್ನುವುದು ಎಲ್ಲದಕ್ಕಿಂತ ಮುಖ್ಯ. ಹೀಗಿರುವಾಗ ಕೌಟುಂಬಿಕ ವ್ಯವಸ್ಥೆಯಲ್ಲ ಬದಲಾವಣೆ ಆಗುವುದು ಸಹಜ. ಆದರೆ ಒಂದು ವ್ಯವಸ್ಥೆ ಬದಲಾವಣೆಯಾಗಿ ಇನ್ನೊಂದು ವ್ಯವಸ್ಥೆ ಬಂದಾಗ ಅದರ ರಕ್ಷಣೆಗೂ ಕಾನೂನು ಬೇಕು.
ಈಗ ನನಗೆ ಅನ್ನಿಸುವುದೆಂದರೆ ಲಿವಿಂಗ್ ಟುಗೆದರ್ ಸಂಸ್ಕೃತಿಯನ್ನು ವಿರೋಧಿಸಿ ಅರ್ಥವಿಲ್ಲ. ಈ ವ್ಯವಸ್ಥೆ ಸರಿಯಾಗಿ ನಡೆಯಲು ಅದಕ್ಕೆ ಪೂರಕವಾದ ಕಾನೂನು ಬೇಕು. ಅಂತಹ ಕಾನೂನು ರಚನೆಯ ಬಗ್ಗೆ ವಿಸ್ತ್ರುತ ಚರ್ಚೆ ನಡೆಯಬೇಕು.


Tuesday, March 23, 2010

ನಮ್ಮ ಕಿರಿಯ ಮಗಳು ಚುಕ್ಕಿ...!


ಇವಳು ನಮ್ಮ ಮನೆಯ ಚುಕ್ಕಿ. ನಮ್ಮ ಕಿರಿಯ ಮಗಳು. ಪ್ರೀತಿಗೆ ಇನ್ನೊಂದು ಹೆಸರೇ ಇವಳು. ಇವಳಿಗೆ ಕೆಲವೊಮ್ಮೆ ನಿದ್ರೆ. ಕೆಲವೊಮ್ಮೆ ಈಕೆ ಧ್ಯಾನಸ್ಥೆ. ಈಕೆಗೆ ಈಗ ಕನ್ನಡವೂ ಬರುತ್ತೆ. ಬಿಸ್ಕೀಟು, ಸ್ನಾನ, ವಾಕಿಂಗ್ ಎಲ್ಲವೂ ಗೊತ್ತಾಗುತ್ತೆ. ಈಕೆ ಪತ್ರಕರ್ತರ ಮನೆಯ ಮಗಳಾಗಿರುವುದರಿಂದ ದಿನಾ ಬೆಳಿಗ್ಗೆ ಪತ್ರಿಕೆ ಓದುತ್ತಾಳೆ. ಈ ಜಗತ್ತು ಯಾಕೆ ಹೀಗಿದೆ ಎಂಬ ಚಿಂತೆ ಅವಳದು. ಇಲ್ಲಿ ಆಕೆ ಸುದ್ದಿಗಳನ್ನು ಓದಿ ಬೇಸರದಿಂದ ಎಲ್ಲಿಯೋ ನೋಡುತ್ತಿದ್ದಾಳೆ.

Saturday, March 13, 2010

ಮಹಿಳಾ ಮೀಸಲಾತಿ: ಮೊದಲು ಮಹಿಳೆಯರು ಸದನದಲ್ಲಿ ಕಾಣುವಂತಾಗಲಿ......

ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಪ್ರತಿಶತ ೩೩ ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ವಿಧೇಯಕಕ್ಕೆ ರಾಜ್ಯ ಸಭೆ ಅನುಮೋದನೆ ನೀಡಿದೆ. ಇದೊಂದು ಐತಿಹಾಸಿಕ ವಿಧೇಯಕ ಎನ್ನುವದರಲ್ಲಿ ಎರಡು ಮಾತಿಲ್ಲ. ಎರಡನೆ ಧರ್ಜೆ ಪ್ರಜೆಯಾಗಿರುವ ಮಹಿಳೆಯರಿಗೆ ಈ ವಿಧೇಯಕ ರಾಜಕೀಯ ಪ್ರಾತಿನಿಧ್ಯವನ್ನು ನೀಡುವುದರಲ್ಲಿ ಅನುಮಾನವಿಲ್ಲ. ಆದರೆ ಈ ವಿಧೇಯಕದ ಬಗ್ಗೆ ಯಾದವ ತೃಯರು ಎತ್ತಿದ್ದ ಆಕ್ಷೇಪಗಳ ಬಗ್ಗೆ ಸದನದಲ್ಲಾಗಲೀ, ಸಾರ್ವಜನಿಕವಾಗಿ ಆಗಲೀ ಚರ್ಚೆ ನಡೆದಿಲ್ಲ. ನಮ್ಮ ಮಾಧ್ಯಮಗಳೂ ಸಹ ಯಾದವ ತ್ರಯರನ್ನು ಜೋಕರರನ್ನಾಗಿ ನೋಡಿ ಕೈತೊಳೆದುಕೊಂಡಿವೆ. ಆದರೆ ಅವರು ಎತ್ತಿರುವ ಕೆಲವು ತಾತ್ವಿಕ, ವಾಸ್ತವಿಕ ಸತ್ಯಗಳು ಚರ್ಚೆಗೆ ಗ್ರಾಸವನ್ನು ಒದಗಿಸಿದ್ದು ಮಾತ್ರ ನಿಜ.
ಮಹಿಳೆಯ ಮೀಸಲಾತಿಯಲ್ಲಿ ಒಳಮೀಸಲಾತಿ ಬೇಕೇ ಬೇಡವೆ ಎಂಬುದು ಈ ವಿವಾದದ ಕೇಂದ್ರ ಬಿಂದು. ಈಗಿನ ಮೀಸಲಾತಿಯಲ್ಲಿ ಮಹಿಳೆಯರಲ್ಲಿ ಲಾಭ ಪಡೆಯುವವರು, ಮೇಲ್ವರ್ಗದವರು ಮತ್ತು ಈಗಿನ ಖ್ಯಾತ ರಾಜಕಾರಣಿಗಳ ಕುಟುಂಬದ ಜನ ಎನ್ನುವುದು ಪ್ರಮುಖ ಆರೋಪ. ಇದು ಸ್ವಲ್ಪ ಮಟ್ಟಿಗೆ ನಿಜ. ನಮ್ಮ ಬಹುತೇಕ ರಾಜಕಾರಣಿಗಳು ನಂಬಿದರೆ ತಮ್ಮ ಕುಟುಂಬದವರನ್ನು ಮಾತ್ರ. ದೇವೇಗೌಡರಿಗೆ ತಮ್ಮ ಮಕ್ಕಳನ್ನು ಯಶಸ್ವಿ ರಾಜಕಾರಣಿಗಳನ್ನಾಗಿ ಮಾಡುವುದು ಮೊದಲ ಆದ್ಯತೆ. ಸೋನಿಯಾ ಗಾಂಧಿ ಅವರಿಗೆ ರಾಹುಲ್ ಗಾಂಧಿಯನ್ನು ಪಟ್ಟಕ್ಕೇರಿಸುವದೇ ಬದುಕಿನ ಧ್ಯೇಯ. ಯಡಿಯೂರಪ್ಪ ಅವರಿಗೆ ರಾಘವೇಂದ್ರನನ್ನು ಎಮ್. ಪಿ. ಮಾಡಿದ ಮೇಲೆ ವಿಜಯೇಂದ್ರನಿಗೆ ಹೇಗೆ ರಾಜಕೀಯ ಆಶ್ರಯ ನೀಡಬೇಕು ಎಂಬ ಚಿಂತೆ. ಇನ್ನು ನಮ್ಮ ಯಾದವ ನಾಯಕರು. ಲಾಲೂ ಪ್ರಸಾದ್ ಯಾದವ್ ಅವರಿಗೆ ಬಿಹಾರದಲ್ಲಿ ಮಹಿಳಾ ಮುಖ್ಯಮಂತ್ರಿ ಮಾಡಿದ ಕೀರ್ತಿಯ ಕಿರೀಟ. ಆದರೆ ಯಾರನ್ನೂ ನಂಬದ ಈ ಯಾದವ ನಾಯಕ, ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಿದ್ದು ಮಾತ್ರ ತಮ್ಮ ಧರ್ಮ ಪತ್ನಿಯನ್ನು. ಅದನ್ನು ಬಿಟ್ಟರೆ ಬೇರೆ ಮಹಿಳೆಯರಿಗೆ ಅವರು ಅಧಿಕಾರ ನೀಡಿ ಬೆಳೆಸಿದ ಉದಾಹರಣೆ ನೆನಪಿಗೆ ಬರುತ್ತಿಲ್ಲ. ಇನ್ನು ಮುಲಾಯಮ್ ಸಿಂಗ ಯಾದವ್. ಇವರಿಗೆ ಹಿಂದಿ ಚಿತ್ರ ರಂಗದ ನಟಿಯರೆಂದರೆ ಪ್ರೀತಿ. ಅವರು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದು ಜಯಾ ಬಚ್ಚನ್ ಎಂಬ ಮಾಜಿ ನಟಿಯನ್ನು !
ಇವರಿಬ್ಬರ ವರ್ತನೆಯಲ್ಲಿ ಮಹಿಳೆಯರ ಬಗ್ಗೆ ಕಾಳಜಿ ಕಾಣುತ್ತಿಲ್ಲ. ಹೀಗಾಗಿ ಅವರು ಪ್ರಸ್ತಾಪ ಮಾಡಿದ ಗಂಭೀರವಾದ ವಿಚಾರ ಹೆಚ್ಚಿನ ಮಹತ್ವವನ್ನು ಪಡೆಯಲೇ ಇಲ್ಲ. ಭೂತದ ಬಾಯಿಯಲ್ಲಿ ಭಗವದ್ಘೀತೆ ಬಂದಂತೆ ಎಂದು ಎಲ್ಲರೂ ನಿರ್ಧರಿಸಿಬಿಟ್ಟರು.
ಎರಡು ದಿನಗಳ ಹಿಂದೆ ನಾನು ನನ್ನ ಕೆಲವು ಸಮಾಜವಾದಿ ಗೆಳಯರ ಜೊತೆ ಮಾತನಾಡುತ್ತಿದ್ದೆ. ಅವರು ಎತ್ತಿದ ಪ್ರಶ್ನೆಗಳು ತುಂಬಾ ಗಂಭೀರವಾಗಿದ್ದವು. ಯಾದವ ತ್ರಯರು ಎತ್ತಿದ ಪ್ರಶ್ನೆ ಎನಿದೆ ಅದು ಮುಖ್ಯ ಅಲ್ಲವಾ ಎಂದು ಅವರು ಪ್ರಶ್ನಿಸಿದಾಗ ನಾನು ಆ ಬಗ್ಗೆ ಯೋಚಿಸತೊಡಗಿದೆ. ಮುಲಾಯಂ ಮತ್ತು ಲಾಲೂ ಈ ವಿಚಾರದಲ್ಲಿ ಮಾಡುತ್ತಿರುವ ಒಳ ಮೀಸಲಾತಿಯ ಪ್ರಶ್ನೆ ತುಂಬಾ ಪ್ರಸ್ತುತ. ಈ ಮೀಸಲಾತಿಯಿಂದ ಮೇಲ್ವರ್ಗದ ಮಹಿಳೆಯರಿಗೆ ಮತ್ತು ರಾಜಕಾರಣಿಗಳ ಕುಟುಂಬದ ಮಹಿಳೆಯರಿಗೆ ಹೆಚ್ಚಿನ ಲಾಭವಾಗುತ್ತದೆ ಎಂಬುದರಲ್ಲಿ ನನಗಂತೂ ಅನುಮಾನ ಇಲ್ಲ. ಎಲ್ಲ ಖ್ಯಾತ ರಾಜಕಾರಣಿಗಳು ತುಮ್ಮ ಕುಟುಂಬದ ಮಹಿಳೆಯರನ್ನು ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಯ ಸದಸ್ಯರನ್ನಾಗಿ ಮಾಡುತ್ತಾರೆ ಎಂಬುದೂ ನಿಜ. ಆದರೆ ಈಗ ಒಳ ಮೀಸಲಾತಿಯ ಬಗ್ಗೆ ಮಾತನಾಡುವವರ ಪ್ರಾಮಾಣಿಕತೆ ಮತ್ತು ಬದ್ಧತೆಯೇ ಪ್ರಶ್ನಾರ್ಹವಾಗಿದೆ. ಇಂಥಹ ಸ್ಥಿತಿಯಲ್ಲಿ ಅವರ ವಾದಕ್ಕೆ ಸಮರ್ಥನೆಯೇ ದೊರಕುತ್ತಿಲ್ಲ.
ಕ್ರಾಂತಿ ಅಥವಾ ಬದಲಾವಣೆ ಪವಾಡದಂತೆ ನಡೆಯುವುದಿಲ್ಲ. ಈ ದೇಶದಲ್ಲಿ ಮಹಿಳೆಯರೆಲ್ಲ ಶೋಷಿತರೇ. ಮೇಲ್ವರ್ಗದ ಮಹಿಳೆಯರು ಇದಕ್ಕೆ ಹೊರತಲ್ಲ. ಆದ್ದರಿಂದ ಮಹಿಳೆ ಮೀಸಲಾತಿಯನ್ನು ಮೊದಲು ಸ್ವಾಗತಿಸೋಣ. ನಂತರ ಒಳ ಮೀಸಲಾತಿಯ ಬಗ್ಗೆ ಹೋರಾಟ ನಡೆಸೋಣ ಎಂದು ಯಾದವ ತ್ರಯರು ಯೋಚಿಸಬಹುದಿತ್ತು. ಆದರೆ ಅವರು ಹಾಗೆ ಯೋಚನೆ ಮಾಡಲಿಲ್ಲ. ಬದಲಾಗಿ ಸರ್ಕಾರಕ್ಕೆ ನೀಡದ ಬೆಂಬಲವನ್ನು ಹಿಂದಕ್ಕೆ ತೆಗೆದುಕೊಳ್ಳುವ ಬೆದರಿಕೆಯನ್ನು ಅವರು ಒಡ್ಡಿದರು. ಇಲ್ಲಿಯೂ ರಾಜಕೀಯ ಮಾಡಿದರು.
ಈ ಮೀಸಲಾತಿಯಿಂದ ಸದನಗಳಲ್ಲಿ ಹೆಚ್ಚಿನ ಮಹಿಳೆಯರು ಕಾಣುತ್ತಾರೆ. ಜೊತೆಗೆ ರಾಜಕಾರಣಿಗಳ ಕುಟುಂಬದ ಮಹಿಳೆಯರು ಅ ಮನೆಯ ಪುರುಷ ರಾಜಕಾರಣಿಗಳಿಗಿಂತೆ ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ ಎಂದು ನಾನು ನಂಬಿದ್ದೇನೆ. ದೇವೇಗೌಡರ ಜಾಗದಲ್ಲಿ ಚೆನ್ನಮ್ಮ ಲೋಕಸಭೆ ಸದಸ್ಯರಾದರೆ ? ಬಂಗಾರಪ್ಪ ಬದಲಿಗೆ ಅವರ ಹೆಂಡತಿ ಸದನದಲ್ಲಿ ಕಾಣುವಂತಾದರೆ ? ಯಡಿಯೂರಪ್ಪ ಅವರ ಮಕ್ಕಳಿಗಿಂತ ಅವರ ಹೆಣ್ಣು ಮಕ್ಕಳು ಸದನಕ್ಕೆ ಬಂದರೆ, ಹೆಚ್ಚು ಪ್ರಾಮಾಣಿಕರಾಗಿರಲಾರರೆ ?
ಇದನ್ನೆಲ್ಲ ಗಮನಿಸಿದರೆ, ಈ ಮಹಿಳಾ ಮೀಸಲಾತಿ ಮಸೂದೆ ಮೊದಲು ಬರಲಿ. ನಂತರ ಒಳ ಮೀಸಲಾತಿಯ ಬಗ್ಗೆ ಹೋರಾಟ ನಡೆಸಬಹುದು. ಎಲ್ಲ ಕೆಳ ವರ್ಗದ ಮಹಿಳೆಯರು ಸದನದಲ್ಲಿ ಕಾಣುವಂತಾದರೆ, ನಮ್ಮ ರಾಜಕಾರಣದ ಅನೈತಿಕತೆಯ ಪಯಣಕ್ಕೆ ಒಂದಿಷ್ಟು ತಡೆಯಾದರೂ ಬಿದ್ದೀತು. ಇದನ್ನು ಯಾದವ ತ್ರಯರು ಅರ್ಥ ಮಾಡಿಕೊಳ್ಳಲಿ.

Saturday, March 6, 2010

ನಿತ್ಯಾನಂದ ಸ್ವಾಮಿ ಪ್ರಕರಣ; ಕೆಲವೊಂದು ಸಂಶಯಗಳು...!

ಬೆಂಗಳೂರು ಹೊರವಲಯದಲ್ಲಿ ಬಿಡಾರ ಹೂಡಿದ್ದ ನಿತ್ಯಾನಂದ ಸ್ವಾಮಿಯ ಮಾನ ಹರಾಜಾಗಿದೆ. ಆತ ಮಹಿಳೆಯೊಬ್ಬಳ ಜತೆ ಬೆಡ್ ರೂಂನಲ್ಲಿ ನಡೆಸಿದ ಎನ್ನಲಾದ ದೃಶ್ಯಗಳು ಟೀವಿ ಸುದ್ದಿ ವಾಹಿನಿಗಳಲ್ಲಿ ದಿನವಿಡಿ ಪ್ರಸಾರವಾಗಿವೆ. ಅವರ ಆಶ್ರಮ ಸಮೀಪ ಇರುವ ಜನ ರೊಚ್ಚಿಗೆದ್ದು ಆಶ್ರಮವನ್ನು ನಾಶಪಡಿಸಿದ್ದಾರೆ.
ಈ ದೃಶ್ಯವನ್ನು ಮೊದಲು ಪ್ರಸಾರ ಮಾಡಿದ್ದು ತಮಿಳುನಾಡಿನ ಸನ್ ಸುದ್ದಿ ವಾಹಿನಿ. ಇದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಕುಟುಂಬಕ್ಕೆ ಸೇರಿದ್ದು. ನನಗೆ ನೆನಪಿರುವ ಹಾಗೆ ಸನ್ ಎಂದೂ ಸಹ ಈ ರೀತಿ ಸ್ಟಿಂಗ್ ಆಪರೇಶನ್ ನಡೆಸಿಲ್ಲ. ಅಂದರೆ ನಿತ್ಯಾನಂದ ಸ್ವಾಮಿಯ ಅನಾಚಾರವನ್ನು ಬಯಲಿಗೆಳೆಯಲು ಸನ್ ನೆಟ್ ವರ್ಕ್ ವಿಶೇಷ ಕಾಳಜಿಯನ್ನು ಒಹಿಸಿತು. ಇದೂ ಸಹ ಸನ್ ನೆಟ್ ವರ್ಕ್ ನ ಅಘೋಷಿತ ನೀತಿಗೆ ವಿರುದ್ಧವಾಗಿ. ಇದನ್ನೆಲ್ಲ ಗಮನಿಸಿದರೆ, ಸಣ್ ನೆಟ್ ವರ್ಕ್ ನಿತ್ಯಾನಂದ ಸ್ವಾಮಿಯ ಅನಾಚಾರವನ್ನು ಬಯಲಿಗೆಳೆಯಲು ಬೇರೆಯದೇ ಆದ ವಿಶೇಷ ಕಾರಣಗಳು ಇದ್ದಿರಬೇಕು.
ಸನ್ ನೆಟ್ ವರ್ಕ್ ಇದನ್ನು ಪ್ರಸಾರ ಮಾಡಿದ ಮರುದಿನ ಕನ್ನಡದ ಸುದ್ದಿ ವಾಹಿನಿಗಳು ಸನ್ ನೆಟ್ ವರ್ಕ್ ನ ದೃಶ್ಯಗಳನ್ನು ಎರವಲು ಪಡೆದು ಚಚ್ಚಿ ಬಿಸಾಕಿದವು. ಈ ವಿಚಾರ ವಿಧಾನಸಭೆಯಲ್ಲೂ ಪ್ರಸ್ತಾಪವಾಗಿ ಕ್ರಮ ಕೈಗೊಳ್ಳುವ ಭರವಸೆಯನ್ನು ಸರ್ಕಾರ ನೀಡಿತು. ನಿತ್ಯಾನಂದ ಸ್ವಾಮಿ ಸಂಪೂರ್ಣವಾಗಿ ಬೆತ್ತಲಾಗಿ ತಲೆ ಮರೆಸಿಕೊಂಡರು.
ಈಗ ಈ ದೃಶ್ಯಗಳತ್ತ ಗಮನ ಹರಿಸಿ.
ಪ್ರಸಾರವಾದ ದೃಶ್ಯಗಳಲ್ಲಿ ನಿತ್ಯಾನಂದ ಸ್ವಾಮಿ ಮಂಚದ ಮೇಲೆ ಮಲಗಿದ್ದಾನೆ. ಅದೂ ಸಹ ಆತನಲ್ಲಿ ಉದ್ವೇಗವಾಗಲೀ ಸೆಳೆತವಾಗಲಿ ಕಾಣುತ್ತಿಲ್ಲ. ಯಾವುದೋ ಅಮಲು ಪದಾರ್ಥವನ್ನು ಆತ ಸೇವಿಸಿದಂತೆ, ನಿತ್ರಾಣನಾದಂತೆ ಕಾಣುತ್ತದೆ. ಅಲ್ಲಿ ಒಬ್ಬ ಚೂಡಿದಾರ್ ಧರಿಸಿದ ಹುಡುಗಿ ಅತ್ತಿತ್ತ ಓಡಾಡುತ್ತಾಳೆ. ಆತನಿಗೆ ಕುಡಿಯುವುದಕ್ಕೆ ಏನನ್ನೋ ಕೊಡುತ್ತಾಳೆ. ನಿತ್ಯಾನಂದ ಅದನ್ನು ಕುಡಿಯುತ್ತಾಳೆ. ನಂತರ ಯಾವುದೋ ಮಾತ್ರೆಯೊಂದನ್ನು ಅವನಿಗೆ ಕೊಡುತ್ತಾಳೆ. ಆತ ಮಾತ್ರೆಯನ್ನು ಬಾಯಿಗೆ ಹಾಕಿಕೊಳ್ಳುತ್ತಾನೆ. ನಂತರ ಆಕೆಯೇ ಮಂಚವೇರುತ್ತಾಳೆ. ಆತನಪಕ್ಕದಿಂದ ಮೈಮೇಲಿ ಏರಿ ಹೋಗುತ್ತಾಳೆ. ಆತನ ಒಂದು ಕೈ ಅವಳ ಬೆನ್ನಮೇಲೆ ಬರುತ್ತದೆ. ನಂತರ ತನ್ನ ಎಡ ಗಾಲನ್ನು ಎತ್ತಿ ಆಕೆಯ ದೇಹದ ಮೇಲೆ ಹಾಕುತ್ತಾನೆ.
ಇನ್ನೊಬ್ಬಳು ಸೀರೆ ಒಟ್ಟವಳು. ಅವಳು ಚೂಡಿದಾರ್ ಧರಿಸಿದವಳೇ ಅಥವಾ ಬೇರೆಯವಳೇ ಎಂಬುದು ಗೊತ್ತಾಗುವುದಿಲ್ಲ. ಅವಳೂ ಸಹ ತಾನಾಗಿಯೇ ಸ್ವಾಮಿಒಯ ಮೇಲೆ ಏರಿ ಹೋಗುತ್ತಾಳೆ.
ಈ ದೃಶ್ಯಾವಳಿಗಳನ್ನು ನೋಡಿದಾಗ ಕೆಲವೊಂದು ಸಂಶಯಗಳು ಬರುತ್ತವೆ. ನಲವತ್ತರ ಹರೆಯದ ಸ್ವಾಮಿ ತಾನಾಗಿಯೇ ಆ ಯುವತಿಯನ್ನು ಕರೆಸಿಕೊಂಡಿದ್ದರೆ, ನಿರಾಸಕ್ತಿಯಿಂದ ಹೀಗೆ ಮಂಚದ ಮೇಲೆ ಮಲಗಿರುತ್ತಿದ್ದನೆ ? ತಾನಾಗಿಯೇ ಮೂವ್ ಮಾಡುತ್ತಿರಲಿಲ್ಲವೆ ?
ಯಾಕೆ ಆತ ಯಾವುದೋ ಅಮಲು ಪದಾರ್ಥವನ್ನು ಸೇವಿಸಿದಂತೆ ಏಕಿದ್ದ ? ಆತ ಗುಂಡು ಹಾಕಿದ್ದರೆ ಇನ್ನೂ ಉಮೇದಿಯಿಂದ ರತಿ ಕ್ರೀಡೆಯಲ್ಲಿ ತೊಡಗಬಹುದಿತ್ತು. ಆದರೆ, ಆತ ತೆಗೆದುಕೊಂಡ ಅಮಲು ಪದಾರ್ಥ ಡ್ರಗ್ಸ್ ಆಗಿದ್ದರೆ ಮಾತ್ರ ಹೀಗೆ ನಿತ್ರಾಣವಾಗಿ ಬಿಳಲು ಸಾಧ್ಯ ಅಲ್ಲವೆ ?
ಆತನಿಗೆ ಕುಡಿಯಲು ಯುವತಿ ಕೊಟ್ಟಿರುವುದು ಏನಿರಬಹುದು ? ಆತನಿಗೆ ಆಕೆ ಯಾಕೆ, ಯಾವ ಮಾತ್ರೆಯನ್ನು ಕೊಟ್ಟಿರಬಹುದು ?
ಈ ಪ್ರಶ್ನೆಗಳ ಬಗ್ಗೆ ಮಾಧ್ಯಮದಲ್ಲಿ ಚರ್ಚೆ ನಡೆಯಬೇಕಿತ್ತು. ಯಾಕೆಂದರೆ ಇಲ್ಲಿ ಸಂಶಯಪಡುವುದಕ್ಕೆ ಹಲವು ಕಾರಣಗಳಿವೆ. ಇಂಥಹ ಸಂಶಯಗಳು ಸತ್ಯವನ್ನು ಅನಾವರಣಗೊಳಿಸಲು ಸಹಾಯ ಮಾಡುತ್ತವೆ. ಮಾಧ್ಯಮಗಳು ಮಾಡಬೇಕಾದ್ದು ಇದೇ.
ಈ ನಡುವೆ ತಮಿಳುನಾಡಿನಲ್ಲಿ ಹಬ್ಬಿರುವ ಸುದ್ದಿಗಳ ಪ್ರಕಾರ (ಗಾಳಿ ಸುದ್ದಿ ಇದ್ದರೂ ಇರಬಹುದು) ತಮಿಳುನಾಡಿನ ಅಧಿಕಾರಸ್ಥರಿಗೂ ಈ ಸ್ವಾಮಿಗೂ ಜಗಳ ಇದೆಯಂತೆ. ಅದು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ನಿತ್ಯಾನಂದನನ್ನು ಟ್ರಾಫ್ ಮಾಡಲಾಯಿತು ಎಂದೂ ಹೇಳಲಾಗುತ್ತಿದೆ.
ಮಾಧ್ಯಮವನ್ನು ಸೆಕ್ರೇಡ್ ಕೌ ಎಂದು ಪರಿಗಣಿಸಲಾಗಿರುವ ಈ ದೇಶದಲ್ಲಿ ಅದು ಪವಿತ್ರ ಹಸುವಾಗಿಯೇ ಇರಬೇಕು ಎಂದು ಬಯಸುವವನು ನಾನು. ಬದಲಾಗಿ ಪಕ್ಕದ ಮನೆ ಬೇಲಿ ಹಾರುವ ಊರಿಗೆ ಬಿಟ್ಟ ಹೋರಿ ಅದಾಗದಿರಲಿ ಎಂದು ನಾನು ಆಶಿಸುತ್ತೇನೆ.
ಇಲ್ಲಿ ನಾನು ನಿತ್ಯಾನಂದ ಸ್ವಾಮಿಯನ್ನಾಗಲೀ ಬೇರೆ ಯಾವುದೇ ಸ್ವಾಮಿಯನ್ನಾಗಲೀ ಸಮರ್ಥಿಸುತ್ತಿಲ್ಲ. ಬಹುತೇಕ ಕಾವಿಧಾರಿಗಳು ತಮ್ಮ ಆಶ್ರಮಗಳನ್ನು ಲೈಂಗಿಕೆ ಚಟುವಟಿಕೆಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಇದರ ನಡುವೆಯೂ ಸಂತರೂ, ನಿಜವಾದ ಸನ್ಯಾಸಿಗಳು ನಮ್ಮ ನಡುವೆ ಇದ್ದಾರೆ. ಇದನ್ನು ನಾವು ಮರೆಯಬಾರದು.
ನಿತ್ಯಾನಂದ ಸ್ವಾಮಿ ಪ್ರಕರಣದಲ್ಲಿ ಹೀಗೆ ಸಂಶಯಕ್ಕೆ ಕಾರಣವಾದ ಕೆಲವೊಂದು ಅಂಶಗಳಿವೆ. ಇದು ಆತ ಟ್ರಾಪ್ ಆಗಿದ್ದರೂ ಆಗಿರಬಹುದು ಎಂಬ ಸಂಶಯಕ್ಕೆ ಕಾರಣವಾಗಿದೆ. ಆದರೆ ಈಗಾಗಲೇ ಆತ ಅಪರಾಧಿ ಎಂದು ಜನ ನಂಬಿಯಾಗಿದೆ. ಆತನ ಮೇಲೆ ಪ್ರಹಾರ ಮಾಡಿಯಾಗಿದೆ. ಆತ ಈಗ ಜನರ ಮುಂದೆ ಬಂದು ನಿಲ್ಲುವ ಸ್ಥಿತಿಯಲ್ಲೂ ಇಲ್ಲ. ಒಂದೊಮ್ಮೆ ಆತ ಟ್ರಾಪ್ ಆಗಿದ್ದರೆ ? ನಿಜವಾಗಿ ಈ ಕೃತ್ಯವನ್ನು ಯಾರದೂ ಷಡ್ಯಂತ್ರದ ಭಾಗವಾಗಿ, ಮಾದಕ ವಸ್ತುವಿನ ಪ್ರಭಾವದಲ್ಲಿ ಮಾಡಿದ್ದರೆ ?
ಏನೂ ಪ್ರಯೋಜನ ಇಲ್ಲ. ಮಾಧ್ಯಮಗಳು ಅವನ ಬಗ್ಗೆ ತೀರ್ಪು ನೀಡಿ, ಮಾನ ಹರಾಜು ಮಾಡಿ ಮುಗಿದಿದೆ. ಇನ್ನು ಆತ ಮಾಡಿರಲಿ ಮಾಡದೇ ಇರಲಿ, ಮಾಡಿದ್ದೆ ಎಂದು ಸುಮ್ಮನೆ ಶಿವ ನಾಮ ಜಪ ಮಾಡುವುದೊಂದೇ ಈ ಸ್ವಾಮಿಗೆ ಉಳಿದ ಮಾರ್ಗ.

Tuesday, March 2, 2010

ಇವರಿಗೆ ಮನುಷ್ಯರೆಲ್ಲ ಬ್ಯಾಲೆಟ್ ಪೇಪರ್ !

ನಿನ್ನೆ ಶಿವಮೊಗ್ಗ ಮತ್ತು ಹಾಸನ ಹೊತ್ತಿ ಉರಿದವು. ಹಲವು ವಾಹನಗಳು ಬೆಂಕಿಗೆ ಆಹುತಿಯಾದವು. ಧರ್ಮ ಎಂಬ ಅಪೀಮು ಎಲ್ಲೆಡೆಗೆ ತಾಂಡವವಾಡಿತು. ಇದಾದ ಮೇಲೆ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿಯಾಗಲು ನಾವು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರಾವೇಶದ ಘೋಷಣೆ ಮಾಡಿದರು. ಯಥಾ ಪ್ರಕಾರ ಪ್ರತಿ ಪಕ್ಷದ ನಾಯಕರು ಇದಕ್ಕೆಲ್ಲ ಕಾರಣವಾದ ಪತ್ರಿಕೆಗಳ ಮೇಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದವು.


ಹೀಗೆ ಧರ್ಮ ಬೀದಿಗೆ ಬಂದು ಬೀಳಲು ಕಾರಣ ದಿನ ಪತ್ರಿಕೆಯೊಂದರಲ್ಲಿ ಪ್ರಕಟವಾದ ವಿವಾದಾತ್ಮಕ ಲೇಖಕಿ ತಸ್ಲಿಮಾ ಅವರ ಒಂದು ಲೇಖನ. ಈ ಲೇಖನದಲ್ಲಿ ಮುಸ್ಲಿಮ್ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುವಂತಹ ಅಂಶಗಳಿವೆ ಎಂಬುದು. ಈ ಲೇಖನದಲ್ಲಿ ಇದ್ದುದು ಸರಿಯೇ ತಪ್ಪೇ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಜನತಂತ್ರ ವ್ಯವಸ್ಥೆಯಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುವ ಅಧಿಕಾರ ಇಲ್ಲವೆ ? ಧರ್ಮ ಎನ್ನುವುದು ಸಾರ್ವಜನಿಕ ಚರ್ಚೆಗೆ ವಸ್ತುವಾಗಬಾರದೆ ? ಧರ್ಮ ಎನ್ನುವುದು ನಿಂತ ನೀರಾಗಿರಬೇಕೆ ? ಈ ಪ್ರಶ್ನೆಗಳು ತುಂಬಾ ಮುಖ್ಯ ಎಂದು ನಾನು ನಂಬಿದ್ದೇನೆ. ಜೊತೆಗೆ ಧರ್ಮ ಮತ್ತು ಸಾಮಾಜಿಕ ನಡವಳಿಕೆಯ ನಡುವಿನ ಸೂಕ್ಷ್ಮ ಸಂಬಂಧದ ಬಗ್ಗೆಯೂ ಚರ್ಚೆಯಾಗಬೇಕಾಗಿದೆ.


ಎಲ್ಲ ಧರ್ಮಗಳು ಮೂಲಭೂತವಾಗಿ ಮನುಷ್ಯನ ಒಳತನ್ನು ಬಯಸುತ್ತವೆ ಎನ್ನುವುದರಲ್ಲಿ ನನಗೆ ಅನುಮಾನಗಳಿಲ್ಲ. ಧರ್ಮಕ್ಕೆ ಜನ ಮನ್ನಣೆಯನ್ನು ದೊರಕಿಸಿಕೊಡಲು ಸಾಮಾಜಿಕ ನಡುವಳಿಕೆಯ ಬಗ್ಗೆ ಧರ್ಮಗಳು ಮಾತನಾಡತೊಡಗಿದವು. ಈ ಧರ್ಮಗಳು ಹುಟ್ಟಿದ ಸಂದರ್ಭದಲ್ಲಿ ಇದ್ದ ನಂಬಿಕೆಗಳು, ಸಾಮಾಜಿಕ ಪರಿಸ್ಥಿತಿಯ ಆಧಾರದ ಮೇಲೆ ಧರ್ಮ ಸಾಮಾಜಿಕ ನಡುವಳಿಕೆಯ ಬಗ್ಗೆ ಮಾತನಾಡಿತು. ಇದಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಮತ್ತು ಸಾಮಾಜಿಕ ನಡವಳಿಕೆಗಳು ಬೆಳೆದವು. ಅಂದಿನ ಸಂದರ್ಭದಲ್ಲಿ ಪ್ರಸ್ತುತವಾಗಿದ್ದ ಇಂತಹ ನಡವಳಿಕೆ ಮತ್ತು ಆಚರಣೆಗಳು ಇಂದು ಪ್ರಸ್ತುತತೆಯನ್ನು ಕಳೆದುಕೊಂಡಿವೆ. ಸಮಸ್ಯೆ ಇರುವುದು ಇಲ್ಲಿಯೆ. ಧರ್ಮವನ್ನು ಧರ್ಮವನ್ನಾಗಿ ನೋಡದೇ ಅಂಧ ಅನುಕರಣೆ ಮಾಡುತ್ತ ಬರುವವರು ಧರ್ಮವನ್ನು ಆಯಾ ಕಾಲ ಘಟ್ಟದ ಸತ್ಯಕ್ಕೆ ಒಡ್ಡಿಕೊಳ್ಳುವುದಕ್ಕೆ ಅವಕಾಶವನ್ನೇ ಕೊಡುವುದಿಲ್ಲ. ಸಾವಿರಾರು ವರ್ಷಗಳ ಹಿಂದೆ ಬರೆದ ಧರ್ಮ ಗ್ರಂಥಗಳನ್ನೇ ಬಾಯಿ ಪಾಠ ಮಾಡಿಕೊಂಡು ಅದರ ಬಗ್ಗೆ ಮಾತನಾಡುವವರ ವಿರುದ್ಧ ದೈಹಿಕ ಹಲ್ಲೆ ನಡೆಸುವವರೆಗೆ ಮುಂದುವರಿಯುತ್ತಾರೆ. ಇದೇ ಬಹುದೊಡ್ಡ ದುರಂತ.


ಧರ್ಮ ಮತ್ತು ಸಾಮಾಜಿಕ ನಡುವಳಿಕೆ ನಡುವಿನ ಸಂಬಂಧವನ್ನು ಪುನರ್ ವಿಶ್ಲೇಷಿಸಬೇಕಾದ ಅಗತ್ಯ ಇಂದು ಹೆಚ್ಚಾಗಿದೆ. ಧರ್ಮ ಉತ್ತಮ ಬದುಕನ್ನು ಕಟ್ಟಿಕೊಡಲು ಸಹಕಾರಿಯಾಗಿದ್ದರೂ ಅದು ಸಾಮಾಜಿಕ ನಡವಳಿಕೆಯ ಬಗ್ಗೆ ಹೆಚ್ಚು ಮಾತನಾಡಬೇಕಾದ ಅಗತ್ಯ ಇಲ್ಲ. ಧರ್ಮ ಆಧ್ಯಾತ್ಮಿಕತೆಯ ತಳಿಹದಿಯ ಮೇಲೆ ನಿಲ್ಲಬೇಕು. ಬದುಕಿಗೊಂದು ಗಟ್ಟಿಯಾದ ತಳಪಾಯವನ್ನು ನೀಡಬೇಕು. ಇದಕ್ಕೆ ಬದಲಾಗಿ ನೀನು ನಿಜವಾದ ಧಾರ್ಮಿಕನಾಗಿದ್ದರೆ, ಇದೇ ಆಚರಣೆ ಮಾಡಬೇಕು ಎಂದು ಹೇಳುವುದು ಸಮಂಜಸ ಅಲ್ಲ. ಜೊತೆಗೆ ಧಾರ್ಮಿಕ ಲಾಂಛನಗಳನ್ನು ಬಹಿರಂಗವಾಗಿ ಧರಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆಯೂ ಸಂವಾದ, ಚರ್ಚೆ ನಡೆಯುವುದು ಅತ್ಯಗತ್ಯ.


ನನ್ನ ಮುತ್ತಜ್ಜ ಜುಟ್ಟು ಬಿಟ್ಟಿದ್ದನಂತೆ. ನನ್ನ ಅಜ್ಜ ಮತ್ತು ಅಪ್ಪ, ಸ್ವಾತಂತ್ರ್ಯ ಚಳವಳಿಯ ಸಂಪರ್ಕದಿಂದಾಗಿ ಖಾದಿ ಧರಿಸಿದರು. ಜುಟ್ಟು ಬಿಡಲಿಲ್ಲ. ಅವರು ಯಾಕೆ ಜುಟ್ಟು ಬಿಡಲಿಲ್ಲ ಎಂದರೆ, ತಾವು ಇಂತಹ ಜಾತಿಗೆ ಸೇರಿದವರು ಎಂದು ಬಹಿರಂಗವಾಗಿ ಪ್ರದರ್ಶನ ಮಾಡುವುದು ಅವರಿಗೆ ಬೇಕಾಗಿರಲಿಲ್ಲ. ಜೊತೆಗೆ ಬ್ರಾಹ್ಮಣಿಕೆಯ ಸಂಕೇತವಾದ ಜುಟ್ಟು ಅವರ ಸಾಮಾಜಿಕ ಬದುಕಿಗೆ ಅಡ್ಡಿಯನ್ನು ಉಂಟು ಮಾಡುವ ಸಾಧ್ಯತೆ ಇತ್ತು. ಬ್ರಾಹ್ಮಣ್ಯವನ್ನು ವಿರೋಧಿಸುವವರು ಈ ಜುಟ್ಟಿನ ಕಾರಣದಿಂದಾಗಿ ಅವರನ್ನು ಧ್ವೇಷಿಸುವ ಸಾಧ್ಯತೆ ಇತ್ತು. ಇದೆಲ್ಲ ಅವರಿಗೆ ಒಂದು ಚಳವಳಿ ಕಲಿಸಿಕೊಟ್ಟಿತು. ಒಂದು ಕಾಲ ಘಟ್ಟದ ಸಾಮಾಜಿಕ ಚಳವಳಿಗಳು ಆ ಕಾಲದ ಬದುಕಿನ ಪ್ರತಿಕ್ರಿಯೆಯೂ ಆಗಿರುತ್ತದೆ. ಧರ್ಮ ಮತ್ತು ಸಮಾಜ ಮುಖಾಮುಖಿಯಾಗುವುದು ಹೀಗೆಯೇ. ಆದ್ದರಿಂದ ಧರ್ಮ ಮತ್ತು ಸಮಾಜದ ನಡುವಿನ ಇಂತಹ ಮುಖಾಮುಖಿ, ಧರ್ಮಕ್ಕೆ ಹೆಚ್ಚಿನ ಪ್ರಸ್ತುತತೆಯನ್ನು ನೀಡುತ್ತದೆ. ಆದರೆ ಧಾರ್ಮಿಕ ಅಂಧಾಭಿಮಾನಿಗಳು ಇಂತಹ ಮುಖಾಮುಖಿ ನಡೆಯದಂತೆ ತಡೆಯಲು ಯತ್ನಿಸುತ್ತಾರೆ. ಅವರಿಗೆ ಇಂಥಹ ಮುಖಾಮುಖಿಗಳು ಬೇಕಾಗಿಲ್ಲ. ಯಾಕೆಂದರೆ ಸಮಾಜದ ಜೊತೆ ಮುಖಾಮುಖಿಯಾಗಿ ಸಂಘರ್ಷದ ಭಾಗವಾಗುವ ಧರ್ಮ ಹೆಚ್ಚು ಪಕ್ವವಾಗುತ್ತದೆ. ಇಂತಹ ಸಂದರ್ಭದಲ್ಲಿ ಧಾರ್ಮಿಕ ಅಂಧಾಭಿಮಾನಿಗಳ ಮಹತ್ವ ಕಡಿಮೆಯಾಗುತ್ತದೆ. ತಾವು ದೇವರ ಪ್ರತಿನಿಧಿಗಳು ಎಂದು ಕೊಚ್ಚಿಕೊಳ್ಳುವವರಿಗೆ ಅಲ್ಲಿ ಕೆಲಸ ಇರುವುದಿಲ್ಲ. ಯಾಕೆಂದರೆ ಧರ್ಮ ದೇವಾಲಯದಿಂದ ಚರ್ಚು, ಮಸೀದಿಗಳಿಂದ ಹೊರಬಂದು ಆಚರಣೆಯ ಪೊರೆಯನ್ನು ಕಳೆದುಕೊಂಡು ನಿಂತು ಬಿಡುತ್ತದೆ. ಧರ್ಮ ಕೇವಲ ಆಧ್ಯಾತ್ಮಿಕವೂ ಆಗದೇ, ಬದುಕಿನ ಧರ್ಮವೂ ಆಗುತ್ತದೆ. ಇದು ಸಾಧ್ಯವಾಗುವುದು ಧರ್ಮ ಸದಾ ಸಾಮಾಜಿಕ ಸಂಘರ್ಷದ ಭಾಗವಾಗುವುದರಿಂದ ಮಾತ್ರ.


ಧರ್ಮ ಮತ್ತು ಸಮಾಜದ ನಡುವಿನ ಮುಖಾಮುಖಿಗೆ ನಮ್ಮ ವೈಚಾರಿಕರು, ಧಾರ್ಮಿಕ ಅಂಧಾಭಿಮಾನಿಗಳು, ರಾಜಕಾರಣಿಗಳು ಆಡ್ಡಿಯನ್ನು ಉಂಟು ಮಾಡುತ್ತಲೇ ಬಂದಿದ್ದಾರೆ. ನಮ್ಮ ವೈಚಾರಿಕರು ಒಂದು ಧರ್ಮವನ್ನು ಟೀಕೆಗೆ ಒಳಪಡಿಸುತ್ತ ಇನ್ನೊಂದು ಧರ್ಮದಲ್ಲಿ ಇರುವ, ಇಂದಿನ ಬದುಕಿಗೆ ವ್ಯತಿರಿಕ್ತವಾದ ನಡವಳಿಕೆಗಳ ಬಗ್ಗೆ ದಿವ್ಯ ಮೌನವನ್ನು ಒಹಿಸುತ್ತಾರೆ. ಪ್ರಾಮಾಣಿಕತೆ ಇಲ್ಲದ ವೈಚಾರಿಕತೆಗೆ ಬೆಲೆ ಇಲ್ಲ ಎಂಬುದು ಅವರಿಗೆ ಅರ್ಥವಾಗುವುದಿಲ್ಲ. ಧಾರ್ಮಿಕ ಲಾಂಛನದ ಪ್ರದರ್ಶನದ ಬಗ್ಗೆ ಟೀಕಿಸುವಾಗ ಹಣೆಯ ಮೇಲಿನ ವಿಭೂತಿ ಮತ್ತು ಮೀಸೆ ಇಲ್ಲದ ಗಡ್ಡದ ನಡುವೆ ವ್ಯತ್ಯಾಸ ಮಾಡಬಾರದು. ಆದರೆ ನಮ್ಮ ವೈಚಾರಿಕ ಜಗತ್ತಿಗೆ ವಿಭೂತಿಯನ್ನು ಟೀಕಿಸುವುದಕ್ಕೆ ಹೆಚ್ಚು ಇಷ್ಟ.

ಧಾರ್ಮಿಕ ಅಂಧಾಭಿಮಾನಿಗಳು ಬೇರೆಯಾಗಿಲ್ಲ. ಅವರದು ಮೂಲಭೂತವಾಗಿ ಸರ್ವಾಧಿಕಾರಿ ಮನಸ್ಥಿತಿ. ತಾವು ನಂಬಿದ ಧರ್ಮವೇ ದೊಡ್ಡದು ಎಂದು ನಂಬಿಕೊಂಡರೆ ಅದು ಅವರ ಹಣೆ ಬರೆಹ. ಆದರೆ ಇವರು ತಮ್ಮ ನಂಬಿಕೆಯನ್ನು ಬಲಾತ್ಕಾರದ ಮೂಲಕ ಬೇರೆಯವರ ಮೇಲೆ ಹೇರಲು ಹೊರಡುತ್ತಾರೆ. ಇದಕ್ಕೆ ಅವರು ಹಿಂಸಾಚಾರಕ್ಕೂ ಹಿಂಜರಿಯರು. ಈ ವಿಚಾರದಲ್ಲಿ ಎಲ್ಲ ಜಾತಿ ಧರ್ಮಗಳ ಅಂಧಾಭಿಮಾನಿಗಳು ಒಂದೇ.

ಇನ್ನು ನಮ್ಮ ರಾಜಕಾರಣಿಗಳು. ಅವರು ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಕಣ್ಣುಗಳನ್ನೆ ಕಳೆದುಕೊಂಡು ಬಿಟ್ಟಿದ್ದಾರೆ. ಅವರಿಗೆ ಪ್ರತಿ ಮನುಷ್ಯನೂ ನಿರ್ಜೀವವಾದ ಬ್ಯಾಲೆಟ್ ಪೇಪರ್ ! ನಿನ್ನೆಯ ಘಟನೆಯನ್ನೇ ತೆಗೆದುಕೊಳ್ಳಿ. ಇಲ್ಲಿ ಕನ್ನಡದ ದಿನಪತ್ರಿಕೆಯೊಂದು ಬೇರೆ ಭಾಷೆಯಲ್ಲಿ ಬರೆದ ಲೇಖನವನ್ನು ಅನುವಾದ ಮಾಡಿ ಪ್ರಕಟಿಸಿದೆ. ಅದು ಮುಸ್ಲಿಮ್ ಮಹಿಳೆಯೊಬ್ಬಳು ಬರೆದ ಲೇಖನ. ಇದರಲ್ಲಿ ತಪ್ಪೇನಿದೆ ? ಆದರೆ, ನಮ್ಮ ಸಿದ್ದರಾಮಯ್ಯ ಹಾಗೂ ಇತರ ಪ್ರತಿ ಪಕ್ಷಗಳ ನಾಯಕರು ಪತ್ರಿಕೆಯ ಮೇಲೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸುತ್ತಾರೆ. ಸರ್ಕಾರ ಪತ್ರಿಕೆಯ ಮೇಲೆ ಕೇಸು ಜಡಿಯುತ್ತದೆ.

ಬಾಂಗ್ಲಾ ದೇಶದ ಈ ಲೇಖಕಿ ಭಾರತಕ್ಕೆ ಬಂದರು. ತಮ್ಮ ಧರ್ಮದಲ್ಲಿನ ಲೋಪಗಳ ಬಗ್ಗೆ ಮಾತನಾಡಿದರು. ಆದರೆ ಪಶ್ಚಿಮ ಬಂಗಾಲದ ಕಮ್ಯುನಿಸ್ಟ್ ಸರ್ಕಾರವೇ ಅವರಿಗೆ ಬೆಂಬಲ ನೀಡಲಿಲ್ಲ. ಧಾರ್ಮಿಕ ಮೂಲಭೂತವಾದಿಗಳು ಅವರ ವಿರುದ್ಧ ತಿರುಗಿ ಬಿದ್ದಾಗ ಈ ಸೆಕ್ಯುಲರ್ ದೇಶದ ಯಾವ ಧರ್ಮ ನಿರಪೇಕ್ಷವಾದಿಯೂ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಯಾಕೆಂದರೆ ಎಲ್ಲರಿಗೂ ಒಂದಿಲ್ಲ ಒಂದು ರೀತಿಯ ಭಯ.

ಈಗ ಧಾರ್ಮಿಕ ಆಚರಣೆಗಳಿಗಿಂತ ಆಧ್ಯಾತ್ಮಿಕ ಮನಸ್ಸು ಬೇಕಾಗಿದೆ. ಅದು ಕೇವಲ ಸಂಕೇತಗಳ ಮೇಲೆ ನಿಲ್ಲುವುದಿಲ್ಲ. ಶಬ್ದಗಳು ಮಂತ್ರಗಳಿಗಿಂತ ಅದರ ಧ್ವನಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ನೀವು ಗಮನಿಸಿರಬಹುದು. ಮುಸ್ಲೀಮರು ಬೆಳಿಗ್ಗೆ ಮತ್ತು ಸಂಜೆ ಮಸೀದಿಗಳಲ್ಲಿ ಹೇಳುವ ಅಲ್ಲಾ ಹೋ ಅಕ್ಬರ್ ಇದೆಯಲ್ಲ ಅದರ ಧ್ವನಿ ನನಗೆ ಯಾವುದೋ ವೇದ ಮಂತ್ರದ ಧ್ವನಿಯ ಹಾಗೆ ಕೇಳುತ್ತದೆ. ಆ ಸ್ವರದ ಏರಿಳಿತ ಒಂದು ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟೀಸುತ್ತದೆ. ಆದ್ದರಿಂದ ಮಾತು ಶಬ್ದಕ್ಕಿಂತ ಸ್ವರ ಮುಖ್ಯ. ಈ ಸ್ವರ ಮತ್ತು ಸ್ವರದ ಏರಿಳಿತ ಸೃಷ್ಟಿಸುವ ವಾತವಾರಣ ಧರ್ಮದಿಂದ ಧರ್ಮಕ್ಕೆ ಬೇರೆಯಾಗಿಲ್ಲ.

Saturday, February 20, 2010

ಮಲೇನಾಡಿನ ಅರಣ್ಯದ ಮೇಲೆ ಗಣಿ ಧಣಿಗಳ ಹೆಲಿಕಾಪ್ಟರು.....!

ನಮಗಿರುವುದು ಒಂದೇ ಭೂಮಿ. ಇಲ್ಲಿ ನಮ್ಮ ಜೊತೆ ಪಶು ಪಕ್ಷಿಗಳಿವೆ. ಅಸಂಖ್ಯಾತ ಜೀವ ಜಂತುಗಳಿವೆ. ಗುಡ್ಡ ಬೆಟ್ಟಗಳಿವೆ. ಪರ್ವತ ಶ್ರೇಣಿಗಳಿವೆ. ನದಿಗಳಿವೆ, ಕೆರೆ ಕೊತ್ತಲಗಳಿವೆ. ಮರಭೂಮಿಯಿದೆ. ನಿತ್ಯ ಹರಿದ್ವರ್ಣ ಕಾಡುಗಳಿವೆ. ಇಲ್ಲಿ ರಾತ್ರಿಯಾಗುತ್ತದೆ, ಹಗಲಾಗುತ್ತದೆ. ಮಳೆಗಾಲ, ಚಳಿಗಾಲ, ಬೇಸಿಗೆಕಾಲವಿದೆ.

ಇದೆಲ್ಲ ಎಷ್ಟು ವ್ಯವಸ್ಥಿತವಾಗಿ ನಡೆಯುತ್ತದೆ ನೋಡಿ. ಯಾರದೋ ನಿರ್ದೇಶನದಲ್ಲಿ ನಡೆಯುವಂತೆ ಎಲ್ಲವೂ ನಡೆದುಹೋಗುತ್ತದೆ. ಒಮ್ಮೊಮ್ಮೆ ಈ ಪ್ರಕೃತಿಯಲ್ಲಿ ನಡೆಯುವ ಈ ವಿದ್ಯಮಾನಗಳು ನಮಗೆ ಅಚ್ಚರಿಯನ್ನು ಮೂಡಿಸುತ್ತವೆ. ಮತ್ತೊಮ್ಮೆ ಈ ಪ್ರಕೃತಿಯ ಮುಂದೆ ನಾವೆಷ್ಟು ಸಣ್ಣವರು ಎಂಬ ವಿನೀತಭಾವ ನಮ್ಮನ್ನು ಆವರಿಸಿಬಿಡುತ್ತದೆ. ಪ್ರಕೃತಿ ಮತ್ತು ಮನುಷ್ಯರ ನಡುವಿನ ಸಹಭಾಳ್ವೆಯೇ ಬದುಕು ಎಂಬ ಪಾಠವನ್ನು ಕೇಳುತ್ತಲೇ ಬೆಳೆದ ನಮ್ಮ ನಾಗರೀಕತೆ ನಮ್ಮದು. ಆದರೆ ಈ ಪ್ರಕೃತಿಯ ಮೇಲೆ ಮನುಷ್ಯ ನಡೆಸುತ್ತಿರುವ ಧಾಳಿ, ಪ್ರಾಕೃತಿಕ ಸಮತೋಲನವನ್ನೇ ಹಾಳು ಮಾಡುತ್ತಿರುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ.

ಇದನ್ನೆಲ್ಲ ನಾನು ನೆನಪಿಸಿಕೊಳ್ಳುತ್ತಿರುವುದಕ್ಕೆ ಕಾರಣ ರಾಜ್ಯ ಸಚಿವ ಸಂಪುಟ ನಿನ್ನೆ ತೆಗೆದುಕೊಂಡ ತೀರ್ಮಾನ. ರಾಜ್ಯದ ಮೂರು ಜಿಲ್ಲೆಗಳ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಯ ಮೇಲಿದ್ದ ನಿಷೇಧವನ್ನು ರಾಜ್ಯ ಸರ್ಕಾರ ತೆಗೆದು ಹಾಕಿದೆ. ಬಳ್ಳಾರಿ, ಶಿವಮೊಗ್ಗ ಮತ್ತು ಮೈಸೂರಿನ ಸಂರಕ್ಷಿತ ಅರಣ್ಯದಲ್ಲಿ ಇನ್ನು ಮುಂದೆ ಗಣಿಗಾರಿಕೆ ಮಾಡಬಹುದು.

ಈ ಜನ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಏನನ್ನು ಮಾಡಲು ಹೊರಟಿದ್ದಾರೆ ? ಇವರಿಗೆ ನಮ್ಮ ಮುಂದಿನ ಜನಾಂಗದ ಭವಿಷ್ಯದ ಬಗ್ಗೆ ಕನಿಷ್ಟ ಕಳಕಳಿ ಇದೆಯಾ ? ಇಲ್ಲ. ಮಠಗಳಿಗೆ ಹಣ ನೀಡುವುದನ್ನೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿರುವ ಯಡಿಯೂರಪ್ಪ ಈ ನಿರ್ಧಾರದ ಮೂಲಕ ಸಂಪೂರ್ಣವಾಗಿ ಬೆತ್ತಲಾಗಿದ್ದಾರೆ. ಅಧಿಕಾರ ರಾಜಕಾರಣದ ಮುಂದೆ ಉಳಿದಿದ್ದೆಲ್ಲ ಗೌಣ ಎಂಬುದನ್ನು ಅವರು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ. ಹಾಗೆ ಬಳ್ಳಾರಿಯ ಗಣಿ ಧಣಿಗಳು ಸರ್ಕಾರದ ಮೇಲೆ ತಮಗಿರುವ ನಿಯಂತ್ರವಣನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.

ಯಾವುದೇ ಒಂದು ಸರ್ಕಾರಕ್ಕೆ ಸಾಮಾಜಿಕ ಬದ್ಧತೆ ಇರಬೇಕಾಗುತ್ತದೆ. ಒಬ್ಬ ಮುಖ್ಯಮಂತ್ರಿ ಜನರ ನಡುವಿನ ನಾಯಕನಾಗಬೇಕು. ಅದರೆ ಯಡಿಯೂರಪ್ಪ ಅವರಲ್ಲಿ ಈಗ ಅಧಿಕಾರದಲ್ಲಿ ಸದಾ ಇರಬೇಕು ಅನ್ನುವುದನ್ನು ಬಿಟ್ಟರೆ ಬೇರೆ ಬದ್ಧತೆ ಉಳಿದಿಲ್ಲ. ನಾಲ್ಕಾರು ಭಟ್ಟಂಗಿಗಳನ್ನು ನೂರಾರು ಮಠಾಧೀಶರನ್ನು ಇಟ್ಟುಕೊಂಡು ಅವರು ಅಧಿಕಾರ ನಡೆಸುತ್ತಿದ್ದಾರೆ. ಅಧಿಕಾರವನ್ನು ಉಳಿಸಿಕೊಳ್ಳಲು ಏನನ್ನೂ ಮಾಡಲು ಅವರು ಈಗ ಸಿದ್ಧ.

ಇಂತಹ ಜನ ವಿರೋಧಿ ತೀರ್ಮಾನಗಳನ್ನು ಕೈಗೊಳ್ಳುತ್ತಿರುವ ರಾಜ್ಯ ಸರ್ಕಾರಕ್ಕೆ ಬುದ್ಧಿ ಹೇಳುವ ಸ್ಥಿತಿಯಲ್ಲೂ ಪಕ್ಷದ ನಾಯಕತ್ವ ಇಲ್ಲ. ಈಗಾಗಲೇ ಸೋಲಿನ ಮೇಲೆ ಸೋಲನ್ನು ಅನುಭವಿಸಿ ಹತಾಶವಾಗಿರುವ ಬಿಜೆಪಿ ವರಿಷ್ಠರಿಂದ ಹಿತವಚನವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಆದರೆ, ಬಿಜೆಪಿ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡಿರುವ ಸಂಘ ಪರಿವಾರ ಏನು ಮಾಡುತ್ತಿದೆ. ಸದಾ ವತ್ಸಲೆ ಮಾತೃಭೂಮಿ ಎಂದು ಹೇಳುತ್ತಲೇ ದಿನಚರಿಯನ್ನು ಪ್ರಾರಂಭಿಸುವ ಆರ್ ಎಸ್ ಎಸ್ ನಾಯಕರಿಗೆ ಇಂತಹ ತೀರ್ಮಾನಗಳಿಂದ ಮಾತೃಭೂಮಿ ಸದಾ ವತ್ಸಲೆಯಾಗಿ ಉಳಿಯುವುದಿಲ್ಲ, ಎಲ್ಲವನ್ನೂ ಕಳೆದುಕೊಂಡ ವಿಧವೆಯಾಗುತ್ತಾಳೆ ಎಂಬ ಅರಿವು ಇರಬೇಕಿತ್ತು. ಇದನ್ನು ಯಡಿಯೂರಪ್ಪ ಅವರಿಗೆ ಹೇಳಬೇಕಿತ್ತು. ಆದರೆ ಆರ್ ಎಸ್ ಎಸ್ ನಾಯಕರೂ ಸಹ, ಗಣಿ ಹಣಕ್ಕೆ ಬಲಿಯಾದಂತೆ ಕಾಣುತ್ತಿದೆ.

ಭಾರತೀಯ ಜನತಾ ಪಾರ್ಟಿಯಲ್ಲೂ ಪ್ರಕೃತಿಯನ್ನು ಪ್ರೀತಿಸುವವರು ಇದ್ದಾರೆ ಎಂದು ನಾನು ನಂಬಿದ್ದೇನೆ. ಅವರೆಲ್ಲ ಈಗ ಈ ತೀರ್ಮಾನದ ವಿರುದ್ಧ ಧ್ವನಿ ಎತ್ತಬೇಕು. ಹಾಗೆ ಮುಖ್ಯಮಂತ್ರಿಗಳ ಕೃಪಾಶೀರ್ವಾದದಿಂದ ಗೂಟದ ಕಾರು ಪಡೆದಿರುವ ಪರಿಸರವಾದಿ, ಅನಂತ ಹೆಗಡೆ ಅಶೀಸರ, ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಹಾಗೆ ಸಾಹಿತಿಗಳು ಕಲಾವಿದರು, ರೈತ ಸಂಘಟನೆಗಳು ಈ ತೀರ್ಮಾನದ ವಿರುದ್ಧ ಧ್ವನಿ ಎತ್ತಬೇಕಾದ ಅಗತ್ಯವಿದೆ.

ನನಗಿನ್ನೂ ಸರಿಯಾಗಿ ನೆನಪಿದೆ. ನಾವು ಶಾಲೆಗೆ ಹೋಗುವ ದಿನಗಳು ಅವು. ಅಗಸ್ಟ್ ತಿಂಗಳಿನಲ್ಲಿ ಜಲ ಒಡೆಯುತ್ತಿತ್ತು.ನೀರಿನ ಬುಗ್ಗೆಗಳು ಸುಮಾರು ಒಂದು ತಿಂಗಳುಗಳ ಕಾಲ ಹಾಗೆ ಚಿಮ್ಮುತ್ತಲೇ ಇರುತ್ತಿದ್ದವು. ಈಗ ನಾನು ಮಳೆಗಾಲದ ದಿನಗಳಲ್ಲಿ ಊರಿಗೆ ಹೋದರೆ ಜಲ ಇಡೆಯುವುದನ್ನು ನೋಡುವುದಕ್ಕಾಗಿ ಎಲ್ಲೆಡೆ ಹುಡುಕುತ್ತೇನೆ. ಆದರೆ ಕಳೆದ ಹಲವಾರು ವರ್ಷಗಳಿಂದ ನಾನು ಜಲ ಒಡೆದಿದ್ದನ್ನು ನೋಡಿಯೇ ಇಲ್ಲ. ನಾವು ಶಾಲೆಗೆ ಹೋಗುವಾಗ ಕಾಣುತ್ತಿದ್ದ ಹುಲಿ, ಜಿಂಕೆಗಳು ಕಾಣಬಹುದೇ ಎಂದು ನೋಡುತ್ತೇನೆ. ಆದರೆ ಈ ಪ್ರಾಣಿಗಳು ಕಾಣುವುದಿಲ್ಲ. ಉತ್ತರ ಕನ್ನಡದ ಬಹುತೇಕ ಕಡೆ, ನೀಲಗಿರಿ ಆಕೇಶಿಯಾ ಗಿಡಗಳು ನಮ್ಮನ್ನು ಅಣಕಿಸುವುದನ್ನು ನಾನು ನೋಡುತ್ತೇನೆ. ನಾಗರೀಕತೆ, ಜೋಗ ಜಲಪಾತದ ಸೌಂದರ್ಯವನ್ನು ಕಸಿದುಕೊಂಡಿತು. ತಮ್ಮಿಷ್ಟದಂತೆ ಹರಿಯುತ್ತಿದ್ದ ನದಿಗಳು ಆಣೆ ಕಟ್ಟುಗಳಿಂದ ನಿಂತಲ್ಲೇ ನಿಲ್ಲಬೇಕಾಯಿತು. ನಾಗರೀಕತೆ ಇಲ್ಲಿನ ಬದುಕನ್ನೇ ನಾಶಪಡಿಸಿತು. ಈಗ ಮಲೇನಾಡಿನ ಅರಣ್ಯ ಪ್ರದೇಶಗಳಲ್ಲಿ ಗಣಿ ಧೂಳು ಆವರಿಸಿಕೊಳ್ಳಲಿದೆ. ಗಣಿ ಧಣಿಗಳ ಹೆಲಿಕಾಪ್ಟರ್ ಈ ಪ್ರದೇಶದಲ್ಲೂ ಹಾರಾಟ ನಡೆಸಲು ಪ್ರಾರಂಭಿಸಲಿವೆ.

ಜನ ಸಂಘಟಿತರಾದರೆ ಏನನ್ನೂ ಬೇಕಾದರೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ಮಹಾತ್ಮಾ ಗಾಂಧಿ. ಅವರಿಗೆ ಅಭಿವೃದ್ಧಿ ಮತ್ತು ನಾಗರೀಕತೆಯ ಬಗ್ಗೆ ಸ್ಪಷ್ಟ ಕಲ್ಪನೆಗಳಿದ್ದವು. ಹೀಗಾಗಿ ಅವರು ಗ್ರಾಮ ಸ್ವರಾಜ್ಯದ ಮಾತನಾಡಿದ್ದರು. ಸ್ವಾವಲಂಬನೆಯ ಮಾತನಾಡಿದ್ದರು. ವಿದೇಶಿ ವಸ್ತುಗಳ ವಿರುದ್ಧ ಸಮರ ಸಾರಿದ್ದರು. ತಮ್ಮ ಅಹಿಂಸಾತ್ಮಕ ಹೋರಾಟದ ಶಕ್ತಿಯನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದರು.

ನಾವಿಂದು ಗಾಂಧಿಯನ್ನ ನೆನಪು ಮಾಡಿಕೊಳ್ಳಬೇಕು, ಹಾಗೆ ನಮ್ಮ ಅಭೀವೃದ್ಧಿ ಕಲ್ಪನೆ ಬದಲಾಗಬೇಕು. ನಾಗರಿಕತೆಯ ಹುಚ್ಚು ಕನಸಿನ ಬೆನ್ನ ಹಿಂದೆ ಬಿದ್ದು, ಎಲ್ಲವನ್ನು ನಾಶಪಡಿಸುವ ಮನಸ್ಥಿತಿಯಿಂದ ಹೊರಕ್ಕೆ ಬರಬೇಕು. ಇಲ್ಲದಿದ್ದರೆ ಮುಂದಿನ ತಲೆ ಮಾರು ನಮ್ಮನ್ನು ಕ್ಷಮಿಸುವುದಿಲ್ಲ.

Sunday, February 14, 2010

ಪ್ರೀತಿಸುವ ಹುಡುಗ ಹುಡುಗಿಯರಿಗೆ...........

ಇಂದು ವಾಲೆಂಟೈನ್ ಡೇ. ಹುಡುಗ ಹುಡುಗಿಯರಿಗೆ ತಮ್ಮ ಪ್ರೀತಿಯನ್ನ, ತಮ್ಮ ಮನಸ್ಸಿನ ಆಳದಲ್ಲಿ ಹುಡುಗಿಟ್ಟುಕೊಂಡ ಭಾವನೆಗಳನ್ನ ಹೇಳುವ ಅವಕಾಶ. ಗಿಫ್ಟ್ ಕೊಟ್ಟು ಸಂತೋಷ ಪಡುವ ಸಂದರ್ಭ.

ಆದರೆ ಪ್ರೀತಿ ಎಂದರೇನು ? ಅದೊಂದು ದೈವಿಕವಾದ ಭಾವನೆಯಾ ? ದೈಹಿಕ ಆಕರ್ಷಣೆಯಾ ? ಅದೊಂದು ಮನಸ್ಥಿತಿಯಾ ? ಗಂಡು ಹೆಣ್ಣಿನ ನಡುವಿನ ಸಹಜ ಸಂಬಂಧವಾ ? ಈ ಬಗ್ಗೆ ನಾವು ಬಹುತೇಕ ಸಂದರ್ಭದಲ್ಲಿ ಯೋಚಿಸುವುದಿಲ್ಲ. ಒಂದು ಕ್ಷಣ ಎಲ್ಲವನ್ನು ಬಿಟ್ಟು ಯೋಚಿಸಿ. ಪ್ರೀತಿ ಎಂದರೆ ಹರಿಯುವ ನದಿಯಂತೆ ಎಂದು ಹೇಳಿದವರು ದಾರ್ಶನಿಕ ಜಿಡ್ಡು ಕೃಷ್ಣಮೂರ್ತಿ. ಪ್ರೀತಿ ಎನ್ನುವುದು ಕೇವಲ ಶಬ್ದವಲ್ಲ, ಅದು ಎಲ್ಲವನ್ನೂ ಮೀರಿದ ಸ್ಥಿತಿ ಎಂದವರು ಓಷೋ. ಹೀಗೆ ಪ್ರೀತಿಯ ಬಗ್ಗೆ ಮಾತನಾಡಿದವರು ನೂರಾರು. ಯಾರನ್ನಾದರೂ ಪ್ರೀತಿಸಬೇಕು ಎಂದು ಹಪಹಪಿಸಿವವರು ಎಲ್ಲರೂ. ಆದರೆ ನಮಗೆ ಪ್ರೀತಿಯ ಬಗ್ಗೆ ಸರಿಯಾಗಿ ತಿಳಿದಿಲ್ಲ. ನಾವು ಪೊಸೇಸೀವ್ ಆಗಿರುವುದೇ ಪ್ರೀತಿ ಎಂದುಕೊಳ್ಳುತ್ತಿರುತ್ತೇವೆ. ನನಗೆ ಅವನೋ ಅವಳೋ ಉತ್ಕಟವಾಗಿ ಬೇಕು ಎಂದುಕೊಂಡ ತಕ್ಷಣ ಅದಕ್ಕೆ ಪ್ರೀತಿ ಎಂದು ಕರೆದು ಬಿಡುತ್ತೇವೆ. ಆದರೆ ಪ್ರೀತಿ ಅದಲ್ಲ. ಪ್ರೀತಿ ಎನ್ನುವುದು ಕೊಡುವುದು, ತೆಗೆದುಕೊಳ್ಳುವುದಲ್ಲ. ಪ್ರೀತಿ ಎಂದರೆ ಶಬ್ದವಲ್ಲ. ಅದನ್ನೂ ಮೀರಿದ್ದು. ಪ್ರೀತಿ ಎಂದರೆ ಮಾತಲ್ಲ, ಅದೊಂದು ಮೌನ. ಪ್ರೀತಿ ಎಂದರೆ ಹೇಳುವುದಲ್ಲ, ಕೇಳಿಸಿಕೊಳ್ಳುವುದು.

ಭಾರತದಲ್ಲಿ ನಾವು ಪ್ರೀತಿಯ ಬಗ್ಗೆ ಮಾತನಾಡುವಾಗ ಹಲವರು ಸಿಗುತ್ತಾರೆ. ಪ್ರೀತಿಗಾಗಿ ಜೀವವನ್ನೇ ಬಲಿ ಕೊಟ್ಟ ಸಲೀಮ್ ಅನಾರ್ಕಲಿಯಂತಹ ಕಥೆಗಳು ನಮಗೆ ಸಿಗುತ್ತವೆ. ಆದರೆ ಇಂದಿಗೂ ಪ್ರೀತಿ ಎಂದ ತಕ್ಷಣ ನಮ್ಮ ಕಣ್ಣು ಮುಂದೆ ಬರುವವನು ಮಹಾಭಾರತದ ಕೃಷ್ಣ. ಆತ ಎಲ್ಲವನ್ನೂ ಕೇಳಿಸಿಕೊಳ್ಳಬಲ್ಲವನಾಗಿದ್ದ. ಎಲ್ಲರನ್ನೂ ಪ್ರೀತಿಸಬಲ್ಲವನಾಗಿದ್ದ. ಯಾವ ಸಂದರ್ಭದಲ್ಲೂ ಆತನಿಗೆ ಸಿಟ್ಟೇ ಬರುತ್ತಿರಲಿಲ್ಲ. ಆತ ರುಕ್ಮಿಣಿಗೆ ಹೆದರುತ್ತಲೇ ಆಕೆಯನ್ನು ಪ್ರೀತಿಸುತ್ತಿದ್ದ. ಸತ್ಯಭಾಮಾಳ ಅಹಂಕಾರಕ್ಕೆ ಪೆಟ್ಟು ನೀಡುತ್ತಲೇ ಅವಳನ್ನು ಒಪ್ಪಿಕೊಳ್ಳಬಲ್ಲವನಾಗಿದ್ದ. ಜಾಂಬವತಿಯ ಆರಾಧನೆಗೆ ತನ್ನು ಒಪ್ಪಿಸಿಕೊಂಡು ಅವಳನ್ನು ಪ್ರೀತಿಸುತ್ತಿದ್ದ. ಹಾಗೆ ಕೃಷ್ಣ ಮತ್ತು ದ್ರೌಪದಿಯ ನಡುವಿನ ಸಂಬಂಧ. ಕೃಷ್ಣನ ಹೃದಯದಲ್ಲಿ ದ್ರೌಪದಿಗೆ ತುಂಬಾ ವಿಶಿಷ್ಟವಾದ ಸ್ಥಾನವಿತ್ತು. ಅತ ಅವಳ ಎದುರು ಮೌನವಾಗಿಬಿಡುತ್ತಿದ್ದ.

ಅವನಿಗೆ ಪ್ರೀತಿ ಎಂದರೆ ಯಮುನೆ. ಯಮುನಾ ನದಿಯ ದಂಡೆಯ ಮೇಲೆ ಆಟವಾಡಿ ಬೆಳೆದ ಆತ ಗೋಪಿಕೆಯರ ಸೀರೆ ಕದ್ದಿದ್ದು ಇದೇ ನದಿಯ ದಂಡೆಯ ಮೇಲೆ. ಹಾಗೆ ತನ್ನ ಮುರಳಿಗಾನಕ್ಕೆ ಆತ ಆಯ್ಕೆ ಮಾಡಿಕೊಂಡಿದ್ದು ಯಮುನಾ ನದಿಯ ದಂಡೆಯನ್ನ. ಆತ ಅಲ್ಲಿಂದ ಧ್ವಾರಕೆಗೆ ಬಂದ ಮೇಲೆ ಮುರಳಿಯನ್ನು ಬಿಟ್ಟ. ಆದರೆ ತನ್ನೊಳಗಿನ ಪ್ರೀತಿ ಆರಿ ಹೋಗದಂತೆ ನೋಡಿಕೊಂಡ. ನನಗೆನ್ನಿಸುವ ಹಾಗೆ ಕೃಷ್ಣನ ಪ್ರೀತಿಗೆ ಹಲವು ಮುಖಗಳಿದ್ದವು. ಬೇರೆ ಬೇರೆ ಆಯಾಮಗಳಿದ್ದವು. ಆತ ಪ್ರೀತಿಯ ಅತಿ ದೊಡ್ಡ ಸಂಕೇತ.

ಭಾರತದಲ್ಲಿ ಪ್ರೀತಿಗೆ ಸಂಬಂಧಿಸಿದ ಮಹಾಕಾವ್ಯಗಳಿವೆ. ಕಾಳಿದಾಸನ ಮೇಘಧೂತ ಇಂತಹ ಕಾವ್ಯಗಳಲ್ಲಿ ಒಂದು. ಉರ್ದು ಶಾಯರಿಗಳು ಘಝಲ್ ಗಳು ಪ್ರೀತಿಯ ಸಮುದ್ರ. ಹಾಗೆ ಕನ್ನಡಕ್ಕೆ ಬಂದರೆ ಇಲ್ಲಿ ಪ್ರೀತಿಯನ್ನು ಆರಾಧಿಸುವ ಕವಿಗಳಿದ್ದಾರೆ. ಪ್ರೀತಿ ಇಲ್ಲದ ಮೇಲೆ ಹೂವು ಅರಳುವುದು ಹೇಗೆ ಎಂಬ ಕವಿವಾಣಿ ಪ್ರೀತಿಯನ್ನ ಅತ್ಯದ್ಭುತವಾಗಿ ವಿವರಿಸುತ್ತದೆ. ಬಿ. ಆರ್‍. ಲಕ್ಷಣರಾವ್ ಅವರಂಥಹ ಪ್ರೀತಿಯ ತುಂಟ ಕವಿಗಳಿದ್ದಾರೆ. ದಾಂಪತ್ಯ ಬದುಕಿನ ಪ್ರೀತಿಯನ್ನ ಕಟ್ಟಿಟ್ಟ ಕೆ. ಎಸ್. ನರಸಿಂಹಸ್ವಾಮಿ ಅವರ ಗೀತೆಗಳು ನಮ್ಮ ನಡುವೆ ಇವೆ. ಇಂದು ಪ್ರೀತಿಯ ಬಗ್ಗೆ ಮಾತನಾಡುವ ಹುಡೂಗ ಹುಡುಗಿಯರಿಗೆ ಇದೆಲ್ಲ ಗೊತ್ತಿರಲಿಕ್ಕಿಲ್ಲ. ಇಂದು ನಮ್ಮ ನಡುವೆ ಗಟ್ಟಿಯಾಗಿ ಬೇರೂರಿರುವುದು ಸಿನೆಮಾ ಪ್ರೀತಿ. ಇದು ಶಾರೂಖ್ ಖಾನ್ ನ ಪ್ರೀತಿಯೂ ಆಗಿರಬಹುದು, ಕನ್ನಡದ ಗಣೇಶನ ಪ್ರೀತ್ಇಯೂ ಆಗಿರಬಹುದು. ಆದರೆ ಇದು ನಿಜವಾದ ಪ್ರೀತಿ ಅಲ್ಲ.

ಪ್ರೀತಿ ಎನ್ನುವುದಕ್ಕೆ ನದಿಯ ಹಾಗೆ ಯಾವುದೇ ಕಟ್ಟು ಪಾಡುಗಳಿಲ್ಲ. ಅದಕ್ಕೆ ಯಾವುದೇ ಹಂಗೂ ಇಲ್ಲ. ಪ್ರೀತಿ ನದಿಯಂತೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇಹರಿಯುತ್ತಲೇ ಇರುತ್ತದೆ.

ವಾಲೆಂಟೈನ್ ಡೇ ದಿನ ಈ ಮಾತುಗಳನ್ನು ಹೇಳಬೇಕು ಎಂದು ಅನ್ನಿಸಿತು. ಹಾಗೆ, ಈ ಬಗ್ಗೆ ಎದ್ದಿರುವ ವಿವಾದ. ಪ್ರಮೋದ್ ಮುತಾಲಿಕ್ ಅಂತವರಿಗೆ ಪ್ರೀತಿ ಅರ್ಥವಾಗುವುದು ಸಾಧ್ಯವೇ ಇಲ್ಲ. ಯಾಕೆಂದರೆ ನಿಜವಾದ ಪ್ರೀತಿಯನ್ನು ಅರ್ಥಮಾಡಿಕೊಂಡವ, ಸಂತ ವಾಲೆಂಟನ್ ನನ್ನು ಧ್ವೇಷಿಸುವುದು, ವಿರೋಧಿಸುವುದು ಸಾಧ್ಯವೇ ಇಲ್ಲ. ಆದರೆ ನಿಮಗೊಂದು ಮಾತು ಹೇಳುತ್ತೇನೆ. ನಿಮಗೆ ಮಹಾಭಾರತದ ಕೃಷ್ಣ ಅರ್ಥವಾಗದಿದ್ದರೆ ನೀವು ಯಾರನ್ನೂ ಪ್ರೀತಿಸಲಾರಿರಿ. ಕಾಳಿದಾಸನ ಮೇಘಧೂತ ತಿಳಿಯದಿದ್ದರೆ, ಪ್ರೀತಿಯ ಉತ್ಕಟತೆಯ ಅನುಭವ ನಿಮಗೆ ಬರಲಾರದು. ಬಿ. ಆರ್. ಲಕ್ಷಣರಾವ್ ಅವರ ಕವನಗಳನ್ನು ಓದದಿದ್ದರೆ, ಪ್ರೀತಿಯ ಜೊತೆಗಿನ ತುಂಟತನ ನಿಮ್ಮನ್ನು ತಟ್ಟುವುದಿಲ್ಲ. ಪ್ರೀತಿ ಇಲ್ಲದ ಮೇಲೆ ಹೂವು ಅರಳುವುದು ಹೇಗೆ ಎಂದು ಕೇಳಿದ ಜಿಎಸ್ ಶಿವರುದ್ರಪ್ಪನವನ ಕವನವನ್ನು ಓದದಿದ್ದರೆ ಈ ಬದುಕಿನಲ್ಲಿ ಪ್ರೀತಿಯ ಮಹತ್ವ ಏನು ಎಂಬುದು ನಿಮಗೆ ತಿಳಿಯುವುದಿಲ್ಲ. ಕೆ. ಎಸ್. ನರಸಿಂಹಸ್ವಾಮಿಯವರ ದಾಂಪತ್ಯದ ಪ್ರೀತಿಯನ್ನ ನೀವು ತಿಳಿದರೆ ಪ್ರೀತಿ ಇನ್ನಷ್ಟು ಸಮೃದ್ಧವಾಗುತ್ತದೆ. ಇದೆಲ್ಲವನ್ನೂ ಮಾಡಿದರೆ ನಿಮ್ಮ ಹೃದಯವೇ ಪ್ರೀತಿಯ ನಿಲ್ದಾಣವಾಗುತ್ತದೆ. ಆಗ ನಿಮಗೆ ನಿಮ್ಮ ಪ್ರೀತಿಗಾಗಿ ವಾಲೆಂಟೈನ್ ಡೇ ಬೇಕಾಗುವುದಿಲ್ಲ. ವರ್ಷದಲ್ಲಿ ಒಮ್ಮೆ ಪ್ರೀತಿಸುವುದಕ್ಕಾಗಿ ಕಾಯುವ ಅಗತ್ಯವೂ ಇರುವುದಿಲ್ಲ. ಪ್ರೀತಿ ಸದಾ ನಿಮ್ಮ ಜೊತೆ ಇರುತ್ತದೆ. ನೀವೇ ಪ್ರೀತಿಯಾಗುತ್ತೀರಿ. ನಿಮ್ಮ ಪ್ರೀತಿ ನದಿಯಂತೆ ಹರಿಯುತ್ತಿರುತ್ತದೆ. ನಿಮ್ಮ ಬಳಿ ಸದಾ ಗುಲಾಬಿ ಅರಳುತ್ತದೆ.

Friday, February 12, 2010

ನಾವು ಹೀಗೆ ಮಾಡಬೇಕು......

ನಾನು ಕಳೆದ ಕೆಲವು ದಿನಗಳ ಹಿಂದೆ ಉತ್ತರ ಕರ್ನಾಟಕದ ಪ್ರವಾಸ ಕೈಗೊಂಡಿದ್ದೆ. ಈ ಪ್ರವಾಸದ ಮೂಲ ಉದ್ದೇಶ ಒಂದೆರಡು ಕಡೆ ಪತ್ರಿಕೊದ್ಯಮ ಮತ್ತು ಸಾಮಾಜಿಕ ಬದ್ಧತೆಯ ಬಗ್ಗೆ ಮಾತನಾಡುವುದು. ಅಲ್ಲಿ ನಾನು ಏನು ಮಾತನಾಡಿದೆ ಎನ್ನುವುದನ್ನು ಮೊದಲು ಹೇಳಿ ಬಿಡುತ್ತೇನೆ.
ಪತ್ರಿಕೋದ್ಯಮಕ್ಕೆ ನಮ್ಮಲ್ಲಿ ತುಂಬಾ ಗೌರವವಿದೆ. ಜೊತೆಗೆ ಸಾಮಾನ್ಯ ಜನರಿಗೆ ಇಂದಿಗೂ ಪತ್ರಿಕೆಗಳ ಬಗ್ಗೆ, ಮಾಧ್ಯಮದ ಬಗ್ಗೆ ನಂಬಿಕೆ ಇದೆ. ಇದಕ್ಕೆ ಬಹುಮುಖ್ಯ ಕಾರಣ ಮಾಧ್ಯಮಗಳು ಬಹುಸಂಖ್ಯಾತರ ಜನರ ಧ್ವನಿಯಾಗಿರುತ್ತವೆ ಎಂಬುದು. ಜೊತೆಗೆ ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ, ಮಾಧ್ಯಮಗಳು ಯಾವುದೇ ವ್ಯಕ್ತಿಗಾಗಲಿ, ಪಕ್ಷಕ್ಕಾಗಲಿ, ಸಿದ್ಧಾಂತಕ್ಕಾಗಲಿ ಬದ್ಧವಾಗಿರದೇ, ಸಮಾಜಕ್ಕೆ ಬದ್ಧವಾಗಿರುತ್ತವೆ ಎಂಬುದು ಜನರ ನಂಬಿಕೆ. ಈ ನಂಬಿಕೆಯನ್ನು ಗಳಿಸಲು ಭಾರತೀಯ ಪತ್ರಿಕೋದ್ಯಮ, ಸ್ವಾತಂತ್ರ್ಯ ಫೂರ್ವ ಕಾಲದಿಂದ ಕೆಲಸ ಮಾಡುತ್ತ ಬಂದಿವೆ.
ಮಹಾತ್ಮ ಗಾಂಧಿ, ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿದ ಮೇಲೆ ಮಾಡಿದ ಕೆಲಸ ಎಂದರೆ ಪತ್ರಿಕೆಯನ್ನು ಪ್ರಾರಂಭಿಸಿದ್ದು. ಅವರು ಜನರನ್ನು ತಲುಪಲು ಅತ್ಯುತ್ತಮ ಮಾರ್ಗ ಎಂದರೆ ಪತ್ರಿಕೆಗಳು ಎಂದು ಅವರು ನಂಬಿದ್ದರು. ಅವರ ನಂಬಿಕೆ ಹುಸಿಯಾಗಲಿಲ್ಲ. ಅವರು ತಮ್ಮ ಪತ್ರಿಕೆಯ ಮೂಲಕವೇ ಜನ ಜಾಗೃತಿ ಮೂಡಿಸಿದರು. ಸ್ವಾತಂತ್ರ್ಯ ಚಳವಳಿಯನ್ನು ಕಟ್ಟಿದರು. ಹಾಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಪತ್ರಿಕೆಗಳು ಒಹಿಸಿದ ಪಾತ್ರ ತುಂಬ ಮುಖ್ಯವಾದುದು.
ನನಗೆ ಕಳೆದ ಎರಡು ದಿನಗಳಿಂದ ನಾನು ಅಂದು ಆಡಿದ ಮಾತುಗಳು ನೆನಪಾಗುತ್ತಿವೆ. ಮಾಧ್ಯಮ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರ್ಸಶ್ನೆ ಇಂದು ಹಿಂದೆಂದಿಗಿಂತಲು ಹೆಚ್ಚು ಮುಖ್ಯ ಅನ್ನಿಸುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ನಾನು ಜಿ ನ್ಯೂಸ್ ನ ಬೆಂಗಳೂರು ಬ್ಯುರೋದ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ ಸಂದರ್ಭ. ಅದೊಂದು ದಿನ ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಮತ್ತು ಗೋವಿಂದಾಚಾರ್ಯ ಮೈಸೂರಿನಲ್ಲಿ ಮದುವೆಯಾದರು ಎಂಬ ಸುದ್ದಿ ರಾತ್ರಿಯ ಸುದ್ದಿಯಲ್ಲಿ ಬಂತು. ಆಗ ಜಿ ನ್ಯೂಸ್ ನ ಮುಖ್ಯಸ್ಥರಾಗಿದ್ದ ಸಂಜಯ ಪುಗಲಿಯಾ ನನ್ನನ್ನು ಸಂಪರ್ಕಿಸಿ, ನೋಡಿ, ಇವರಿಬ್ಬರ ಮದುವೆ ಮೈಸೂರಿನಲ್ಲಿ ನಡೆದಿದೆ. ನನಗೆ ಮದುವೆಯ ಫೋಟೋಗಳು ಬೇಕು. ಹಾಗೆ ತಕ್ಷಣ ವೈಸೂರಿಗೆ ಟೀಂ ಕಳುಹಿಸಿ ಪೂಜಾರಿಯಬೈಟ್ ತನ್ನಿ ಎಂದರು. ನನಗೆ ತಕ್ಷಣ ಕೋಪ ಬಂತು.
ಸಾರ್, ಈ ಮದುವೆ ಮೈಸೂರಿನಲ್ಲಿ ನಡೆದಿದೆ ಎಂದು ಹೇಳುತ್ತೀರಿ. ಆದರೆ ಸುದ್ದಿಯನ್ನು ಪ್ರಸಾರ ಮಾಡುವುದಕ್ಕಿಂತ ಮೊದಲು ನನನ್ನುಒಂದು ಮಾತು ಕೇಳಿಲ್ಲ. ಈಗ ಬೈಟ್ ತನ್ನಿ ಎನ್ನುತ್ತಿದ್ದೀರಿ ಎಂದೆ. ಅಷ್ಟರಲ್ಲಿ ಈ ಸುದ್ದಿಯನ್ನು ನೋಡಿ ಕೆಂಡಾಮಂಡಲವಾದ ಉಮಾ ಭಾರತಿ, ಚಾನಲ್ ಗೆ ಹಿಗ್ಗಾಮುಗ್ಗಾ ಝಾಡಿಸಿದ್ದರು. ಹೀಗಾಗಿ ತಾವು ಪ್ರಸಾರ ಮಾಡಿದ ಸುದ್ದಿ ನಿಜವಾದುದು ಎಂದು ಸಾಬೀತು ಪಡಿಸಲು ಸಂಜಯ ಪುಗಲಿಯಾ ಯತ್ನ ನಡೆಸುತ್ತಿದ್ದರು. ನಾನು ವರದಿಗಾರ ಮತ್ತು ಕ್ಯಾಮರ ಮನ್ ಅನ್ನು ಮೈಸೂರಿಗೆ ಕಳುಹಿಸಿದೆ. ಹಾಗೆ ಮೈಸೂರಿನ ಶಾಸಕರನ್ನು ಈ ಬಗ್ಗೆ ಪ್ರಶ್ನಿಸಿದೆ. ಅವರಿಗೆ ಈ ಬಗ್ಗೆ ತಿಳಿದಿರಲಿಲ್ಲ. ಮೈಸೂರಿನ ಪೊಲೀಸ್ ಕಮೀಷನರ್ ಅವರನ್ನು ಸಂಪರ್ಕಿಸಿ, ಕಳೆದ ಎರಡು ದಿನಗಳಿಂದ ಈಚೆಗೆ ಯಾರಾದರೂ ವಿಐಪಿ ಗಳು ಬಂದಿದ್ದರಾ ಎಂದು ಪ್ರ್ಷ್ನಶ್ನಿಸಿದೆ. ಅವರಿಂದ ಬಂದ ಉತ್ತರ ಇಲ್ಲ. ಮೈಸೂರಿಗೆ ಹೋಗಿದ್ದ ನಮ್ಮ ಹುಡುಗರು ಅಲ್ಲಿ ಯಾವ ಮದುವೆ ನಡೆದಿಲ್ಲ ಎಂಬ ಸುದ್ದಿಯನ್ನು ತಂದರು.
ಈ ಸುದ್ದಿ ಬೇಜವಾಬ್ದಾರಿಯದಾಗಿತ್ತು. ದೆಹಲಿಯ ವರದಿಗಾರನೊಬ್ಬ, ಯಾರದೋ ಮಾತು ಕೇಳಿ ಗಾಳಿ ಪಟ ಹಾರಿಸಿದ್ದ. ಈ ಸುದ್ದಿ ತಮಗೆ ಮೊದಲು ಸಿಕ್ಕಿತು ಎಂದು ಚಾನಲ್ಹ್ ಹಿಂದೆ ಮುಂದೆ ನೋಡದೆ ಪ್ರಸಾರ ಮಾಡಿ ಬಿಟ್ಟಿತ್ತು. ಯಾಕೆಂದರೆ ಆಗ ಜೀ ನ್ಯೂಸ್ ಮತ್ತು ಆಗತಾನೆ ಬಂದ ಆಜ್ ತಕ್ ನಡುವೆ ತೀವ್ರ ಪೈಪೋಟಿ ಇತ್ತು. ಈ ಪೈಪೋಟಿ ಎಷ್ಟೂ ಅನಾರೋಗ್ಯಕರವಾಗಿ ನಡೆಯುತ್ತಿತ್ತು ಎಂಬುದಕ್ಕೆ ಇದೊಂದು ಉದಾಹರಣೆ. ಇದಾದ ಮೇಲೆ ಜೀ ನ್ಯೂಸ್ ಉಮಾ ಭಾರತಿ ಅವರ ಕ್ಷಮೆ ಕೇಳಿತು.
ಈ ಘಟನೆಯ ನಂತರ ನಾನು ಜೀ ನ್ಯೂಸ್ ಕೆಲಸಕ್ಕೆ ರಾಜೀನಾಮೆ ನೀಡಿದೆ. ಎರಡು ಚಾನಲ್ ಗಳ ನಡುವಿನ ಪೈಪೋಟಿ ಹೇಗೆ ಸತ್ಯದ ಮೇಲೆ ಕಲ್ಲು ಹಾಕುವ ಕೆಲಸ ಮಾಡಿಸುತ್ತದೆ ಎಂಬುದು ನನಗೆ ಮೊದಲ ಬಾರಿ ಅರ್ಥವಾಗಿತ್ತು. ಜೊತೆಗೆ ಬೇಸರವೂ ಆಗಿತ್ತು.
ಚಾನಲ್ ಗಳಲ್ಲಿ ಸುದ್ದಿಗಳನ್ನು ಸೆನ್ಸೇಶನಲೈಸ್ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ನನ್ನನ್ನು ಅಂದಿನಿಂದ ಕಾಡುತ್ತಲೇ ಇದೆ. ಆದರೆ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿಲ್ಲ.
ನಾನು ಜೀ ಕನ್ನಡ ವಾಹಿನಿಗೆ ಅಖಾಡಾ ಕಾರ್ಯಕ್ರಮವನ್ನು ಮಾಡುತ್ತಿದ್ದಾಗ ನಂತರ ಮಹಾಯುದ್ಧ್ ಮಾಡುತ್ತಿದ್ದಾಗ ಹಲವೆಡೆ ಮಾರಾಮಾರಿಗಳೇ ನಡೆದು ಹೋದವು. ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಸಭ್ಯ ರಾಜಕಾರಣಿ ಎಂದು ಹೇಳಿದ್ದಕ್ಕೆ ಕಾಂಗ್ರೆಸ್ ನ ಅನಿಲ್ ಪಾಟೀಲ್ ಬೆಂಬಲಿಗರು ನನ್ನ ಮೇಲೆ ಏರಿ ಬಂದರು. ದಾವಣಗೆರೆಯಲ್ಲಿ ಚಿತ್ರೀಕರಣ ಮಾಡುವಾಗ ಈ ನಗರವನ್ನು ಶೈಕ್ಷಣಿಕ ಕೇಂದ್ರವನ್ನಾಗಿ ಮಾಡಿದ ಹೆಗ್ಗಳಿಕೆ, ಶಾಮನೂರು ಶಿವಶಂಕರಪ್ಪ ಅವರದ್ದು ಎಂದೆ. ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ನಡೆಸುವುದಕ್ಕೆ ಬಂದು ಪೋಲೀಸರನ್ನು ಕರೆಸಬೇಕಾಯಿತು.
ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಕ್ಸಲಿಸಮ್ ಬಗ್ಗೆ ಚರ್ಚೆ ನಡೆಸುತ್ತಿದ್ದೆ. ಆಗ ಅಲ್ಲಿನ ಪತ್ರಕರ್ತರೊಬ್ಬರು, ನಕ್ಸ್ಲಲ್ ಚಳವಳಿಯಲ್ಲಿ ಇರುವ ಬಹುತೇಕರು ದಲಿತರು ಎಂದರು. ಆಗ ದಲಿತ ಸಂಘಟನೆಯ ನಾಯಕರು ವೇದಿಕೆಯ ಮೇಲೆ ಏರಿ ಬಂದು ರಂಪಾಟ ಮಾಡಿಬಿಟ್ಟರು. ನಾನು, ನನ್ನ ಮತ್ತು ದಲಿತ ಚಳವಳಿಯ ನಡುವಿನ ಸಂಬಂಧವನ್ನು ಹೇಳಿ ಪರಿಸ್ಥಿಯನ್ನು ತಿಳಿಗೊಳಿಸಲು ಸುಮಾರು ಮುಕ್ಕಾಲು ಗಂಟೆ ತೆಗೆದುಕೊಂಡಿತು. ಆದರೆ ಈ ವಿವಾದ ಇಲ್ಲಿಗೆ ನಿಲ್ಲಲಿಲ್ಲ. ಈ ಪತ್ರಕರ್ತರ ವಿರುದ್ಧ ಪಾವಗಡ ಬಂದ್ ಗೆ ದಲಿತ ಸಂಘಟನೆಗಳು ಕರೆ ನೀಡಿದವು. ಯಾವ ಕಾರಣಕ್ಕೂ ಆ ಪತ್ರಕರ್ತರು ಹೇಳಿದ ಮಾತುಗಳನ್ನು ಪ್ರಸಾರ ಮಾಡಬಾರದು ಎಂದು ನಮ್ಮ ಮೇಲೆ ಒತ್ತಡ ಹೇರತೊಡಗಿದರು. ನಾನು ಅವರಿಗೆ ಒಂದು ಮಾತು ಹೇಳಿದೆ. ಈ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಹೇಳುವ ಹಕ್ಕಿದೆ. ಅದನ್ನು ಯಾರೂ ಮೋಟಕುಗೊಳಿಸಲು ಸಾಧ್ಯವಿಲ್ಲ. ನಾನು ಅವರು ಹೇಳಿದ್ದನ್ನು ಪ್ರಸಾರ ಮಾಡಿಯೇ ಮಾಡುತ್ತೇನೆ. ನಾನು ಹೇಳಿದಂತೆ ಪ್ರಸಾರ ಮಾಡಿದೆ. ಆ ಪತ್ರಕರ್ತರು ಕೆಲವು ದಿನ ಪಾವಗಡದಿಂದ ತಲೆ ಮರೆಸಿಕೊಂಡಿದ್ದರು. ನಂತರ ಎಲ್ಲರ ಜೊತೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದೆ.
ಈ ಸಂದರ್ಭದಲ್ಲಿ ಈ ಸುದ್ದಿಯನ್ನು ವೈಭವೀಕರಿಸಬಾರದು ಎಂದು ನಾನು ನಿರ್ಧರಿಸಿದೆ. ಹೀಗಾಗಿ ನನ್ನ ಕಾರ್ಯಕ್ರಮದಲ್ಲಿ ನಡೆದ ಯಾವುದೇ ಘಟನೆಗೆ ನಮ್ಮ ಚಾನಲ್ಲಿನಲ್ಲಿ ಹೆಚ್ಚಿನ ಪ್ರಚಾರ ನೀಡಲಿಲ್ಲ. ಹಾಗೆ ಮಾಡಿದ್ದರೆ ಜನಸಮುದಾಯದ ನಡುವಿನ ವೈಮನಸ್ಸು ಇನ್ನಷ್ಟು ದೊಡ್ದದಾಗುತ್ತಿತ್ತು. ಬಸ್ಸು ಲಾರಿಗೆ ಬೆಂಕಿಬೀಳುತ್ತಿತ್ತು. ಸಾರ್ವಜನಿಕ ಆಸ್ತಿಗೆ ಹಾನಿಯಾಗುತ್ತಿತ್ತು. ಆದರೆ ಚಾನಲ್ ನ ವೀಕ್ಷಕರ ಸಂಖ್ಯೆ ಹೆಚ್ಚುವುದಕ್ಕಿಂತ ಸಾರ್ವಜನಿಕರ ನಡುವೆ ಸೌಹಾರ್ಧ ಸಂಬಂಧ ಉಳಿಯುವುದು ಮುಖ್ಯ ಎಂದು ನಾನು ಅಂದುಕೊಂಡೆ.
ಇಂದಿನ ವ್ಯಾವಹಾರಿಕ ಜಗತ್ತಿನಲ್ಲಿ ನಾನು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಒಪ್ಪುವುದು ಕಷ್ತವಾಗಬಹುದು. ಆದರೆ ಮಾಧ್ಯಮ ಸಾಮಾಜಿಕ ಹೊಣೆಗಾರಿಕೆಯನ್ನು ಬಿಡಬಾರದು ಎಂದು ನಂಬಿದವನು ನಾನು. ಹೀಗಾಗಿ ಬೇರೆ ರೀತಿ ವರ್ತಿಸುವುದು ನನಗೆ ಸಾಧ್ಯವೇ ಇಲ್ಲ.
ಕಳೆದ ಎರಡು ಮೂರು ದಿನಗಳಿಂದ ಇದೆಲ್ಲ ನನಗೆ ನೆನಪಾಗುತ್ತದೆ. ಹಾಗೆ ನಾನು ರಾಜ್ಯದ ಬೇರೆ ಬೇರೆ ಕಡೆ ಪತ್ರಿಕೋದ್ಯಮದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದು ಮನಸ್ಸಿಗೆ ಬರುತ್ತದೆ. ಅವರ ಮುಖಗಳನ್ನು ಕಣ್ಣುಮುಂದೆ ತಂದುಕೊಳ್ಳಲು ಯತ್ನಿಸುತ್ತೇನೆ. ಇವರು ನಾಳೆ ಎಂತಹ ಪತ್ರಿಕೋದ್ಯಮಿಗಳಾಗಬಹುದು ಎಂಬ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಲು ಯತ್ನಿಸುತ್ತ್ಣೇನೆ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...