Tuesday, March 2, 2010

ಇವರಿಗೆ ಮನುಷ್ಯರೆಲ್ಲ ಬ್ಯಾಲೆಟ್ ಪೇಪರ್ !

ನಿನ್ನೆ ಶಿವಮೊಗ್ಗ ಮತ್ತು ಹಾಸನ ಹೊತ್ತಿ ಉರಿದವು. ಹಲವು ವಾಹನಗಳು ಬೆಂಕಿಗೆ ಆಹುತಿಯಾದವು. ಧರ್ಮ ಎಂಬ ಅಪೀಮು ಎಲ್ಲೆಡೆಗೆ ತಾಂಡವವಾಡಿತು. ಇದಾದ ಮೇಲೆ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿಯಾಗಲು ನಾವು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರಾವೇಶದ ಘೋಷಣೆ ಮಾಡಿದರು. ಯಥಾ ಪ್ರಕಾರ ಪ್ರತಿ ಪಕ್ಷದ ನಾಯಕರು ಇದಕ್ಕೆಲ್ಲ ಕಾರಣವಾದ ಪತ್ರಿಕೆಗಳ ಮೇಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದವು.


ಹೀಗೆ ಧರ್ಮ ಬೀದಿಗೆ ಬಂದು ಬೀಳಲು ಕಾರಣ ದಿನ ಪತ್ರಿಕೆಯೊಂದರಲ್ಲಿ ಪ್ರಕಟವಾದ ವಿವಾದಾತ್ಮಕ ಲೇಖಕಿ ತಸ್ಲಿಮಾ ಅವರ ಒಂದು ಲೇಖನ. ಈ ಲೇಖನದಲ್ಲಿ ಮುಸ್ಲಿಮ್ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುವಂತಹ ಅಂಶಗಳಿವೆ ಎಂಬುದು. ಈ ಲೇಖನದಲ್ಲಿ ಇದ್ದುದು ಸರಿಯೇ ತಪ್ಪೇ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಜನತಂತ್ರ ವ್ಯವಸ್ಥೆಯಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುವ ಅಧಿಕಾರ ಇಲ್ಲವೆ ? ಧರ್ಮ ಎನ್ನುವುದು ಸಾರ್ವಜನಿಕ ಚರ್ಚೆಗೆ ವಸ್ತುವಾಗಬಾರದೆ ? ಧರ್ಮ ಎನ್ನುವುದು ನಿಂತ ನೀರಾಗಿರಬೇಕೆ ? ಈ ಪ್ರಶ್ನೆಗಳು ತುಂಬಾ ಮುಖ್ಯ ಎಂದು ನಾನು ನಂಬಿದ್ದೇನೆ. ಜೊತೆಗೆ ಧರ್ಮ ಮತ್ತು ಸಾಮಾಜಿಕ ನಡವಳಿಕೆಯ ನಡುವಿನ ಸೂಕ್ಷ್ಮ ಸಂಬಂಧದ ಬಗ್ಗೆಯೂ ಚರ್ಚೆಯಾಗಬೇಕಾಗಿದೆ.


ಎಲ್ಲ ಧರ್ಮಗಳು ಮೂಲಭೂತವಾಗಿ ಮನುಷ್ಯನ ಒಳತನ್ನು ಬಯಸುತ್ತವೆ ಎನ್ನುವುದರಲ್ಲಿ ನನಗೆ ಅನುಮಾನಗಳಿಲ್ಲ. ಧರ್ಮಕ್ಕೆ ಜನ ಮನ್ನಣೆಯನ್ನು ದೊರಕಿಸಿಕೊಡಲು ಸಾಮಾಜಿಕ ನಡುವಳಿಕೆಯ ಬಗ್ಗೆ ಧರ್ಮಗಳು ಮಾತನಾಡತೊಡಗಿದವು. ಈ ಧರ್ಮಗಳು ಹುಟ್ಟಿದ ಸಂದರ್ಭದಲ್ಲಿ ಇದ್ದ ನಂಬಿಕೆಗಳು, ಸಾಮಾಜಿಕ ಪರಿಸ್ಥಿತಿಯ ಆಧಾರದ ಮೇಲೆ ಧರ್ಮ ಸಾಮಾಜಿಕ ನಡುವಳಿಕೆಯ ಬಗ್ಗೆ ಮಾತನಾಡಿತು. ಇದಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಮತ್ತು ಸಾಮಾಜಿಕ ನಡವಳಿಕೆಗಳು ಬೆಳೆದವು. ಅಂದಿನ ಸಂದರ್ಭದಲ್ಲಿ ಪ್ರಸ್ತುತವಾಗಿದ್ದ ಇಂತಹ ನಡವಳಿಕೆ ಮತ್ತು ಆಚರಣೆಗಳು ಇಂದು ಪ್ರಸ್ತುತತೆಯನ್ನು ಕಳೆದುಕೊಂಡಿವೆ. ಸಮಸ್ಯೆ ಇರುವುದು ಇಲ್ಲಿಯೆ. ಧರ್ಮವನ್ನು ಧರ್ಮವನ್ನಾಗಿ ನೋಡದೇ ಅಂಧ ಅನುಕರಣೆ ಮಾಡುತ್ತ ಬರುವವರು ಧರ್ಮವನ್ನು ಆಯಾ ಕಾಲ ಘಟ್ಟದ ಸತ್ಯಕ್ಕೆ ಒಡ್ಡಿಕೊಳ್ಳುವುದಕ್ಕೆ ಅವಕಾಶವನ್ನೇ ಕೊಡುವುದಿಲ್ಲ. ಸಾವಿರಾರು ವರ್ಷಗಳ ಹಿಂದೆ ಬರೆದ ಧರ್ಮ ಗ್ರಂಥಗಳನ್ನೇ ಬಾಯಿ ಪಾಠ ಮಾಡಿಕೊಂಡು ಅದರ ಬಗ್ಗೆ ಮಾತನಾಡುವವರ ವಿರುದ್ಧ ದೈಹಿಕ ಹಲ್ಲೆ ನಡೆಸುವವರೆಗೆ ಮುಂದುವರಿಯುತ್ತಾರೆ. ಇದೇ ಬಹುದೊಡ್ಡ ದುರಂತ.


ಧರ್ಮ ಮತ್ತು ಸಾಮಾಜಿಕ ನಡುವಳಿಕೆ ನಡುವಿನ ಸಂಬಂಧವನ್ನು ಪುನರ್ ವಿಶ್ಲೇಷಿಸಬೇಕಾದ ಅಗತ್ಯ ಇಂದು ಹೆಚ್ಚಾಗಿದೆ. ಧರ್ಮ ಉತ್ತಮ ಬದುಕನ್ನು ಕಟ್ಟಿಕೊಡಲು ಸಹಕಾರಿಯಾಗಿದ್ದರೂ ಅದು ಸಾಮಾಜಿಕ ನಡವಳಿಕೆಯ ಬಗ್ಗೆ ಹೆಚ್ಚು ಮಾತನಾಡಬೇಕಾದ ಅಗತ್ಯ ಇಲ್ಲ. ಧರ್ಮ ಆಧ್ಯಾತ್ಮಿಕತೆಯ ತಳಿಹದಿಯ ಮೇಲೆ ನಿಲ್ಲಬೇಕು. ಬದುಕಿಗೊಂದು ಗಟ್ಟಿಯಾದ ತಳಪಾಯವನ್ನು ನೀಡಬೇಕು. ಇದಕ್ಕೆ ಬದಲಾಗಿ ನೀನು ನಿಜವಾದ ಧಾರ್ಮಿಕನಾಗಿದ್ದರೆ, ಇದೇ ಆಚರಣೆ ಮಾಡಬೇಕು ಎಂದು ಹೇಳುವುದು ಸಮಂಜಸ ಅಲ್ಲ. ಜೊತೆಗೆ ಧಾರ್ಮಿಕ ಲಾಂಛನಗಳನ್ನು ಬಹಿರಂಗವಾಗಿ ಧರಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆಯೂ ಸಂವಾದ, ಚರ್ಚೆ ನಡೆಯುವುದು ಅತ್ಯಗತ್ಯ.


ನನ್ನ ಮುತ್ತಜ್ಜ ಜುಟ್ಟು ಬಿಟ್ಟಿದ್ದನಂತೆ. ನನ್ನ ಅಜ್ಜ ಮತ್ತು ಅಪ್ಪ, ಸ್ವಾತಂತ್ರ್ಯ ಚಳವಳಿಯ ಸಂಪರ್ಕದಿಂದಾಗಿ ಖಾದಿ ಧರಿಸಿದರು. ಜುಟ್ಟು ಬಿಡಲಿಲ್ಲ. ಅವರು ಯಾಕೆ ಜುಟ್ಟು ಬಿಡಲಿಲ್ಲ ಎಂದರೆ, ತಾವು ಇಂತಹ ಜಾತಿಗೆ ಸೇರಿದವರು ಎಂದು ಬಹಿರಂಗವಾಗಿ ಪ್ರದರ್ಶನ ಮಾಡುವುದು ಅವರಿಗೆ ಬೇಕಾಗಿರಲಿಲ್ಲ. ಜೊತೆಗೆ ಬ್ರಾಹ್ಮಣಿಕೆಯ ಸಂಕೇತವಾದ ಜುಟ್ಟು ಅವರ ಸಾಮಾಜಿಕ ಬದುಕಿಗೆ ಅಡ್ಡಿಯನ್ನು ಉಂಟು ಮಾಡುವ ಸಾಧ್ಯತೆ ಇತ್ತು. ಬ್ರಾಹ್ಮಣ್ಯವನ್ನು ವಿರೋಧಿಸುವವರು ಈ ಜುಟ್ಟಿನ ಕಾರಣದಿಂದಾಗಿ ಅವರನ್ನು ಧ್ವೇಷಿಸುವ ಸಾಧ್ಯತೆ ಇತ್ತು. ಇದೆಲ್ಲ ಅವರಿಗೆ ಒಂದು ಚಳವಳಿ ಕಲಿಸಿಕೊಟ್ಟಿತು. ಒಂದು ಕಾಲ ಘಟ್ಟದ ಸಾಮಾಜಿಕ ಚಳವಳಿಗಳು ಆ ಕಾಲದ ಬದುಕಿನ ಪ್ರತಿಕ್ರಿಯೆಯೂ ಆಗಿರುತ್ತದೆ. ಧರ್ಮ ಮತ್ತು ಸಮಾಜ ಮುಖಾಮುಖಿಯಾಗುವುದು ಹೀಗೆಯೇ. ಆದ್ದರಿಂದ ಧರ್ಮ ಮತ್ತು ಸಮಾಜದ ನಡುವಿನ ಇಂತಹ ಮುಖಾಮುಖಿ, ಧರ್ಮಕ್ಕೆ ಹೆಚ್ಚಿನ ಪ್ರಸ್ತುತತೆಯನ್ನು ನೀಡುತ್ತದೆ. ಆದರೆ ಧಾರ್ಮಿಕ ಅಂಧಾಭಿಮಾನಿಗಳು ಇಂತಹ ಮುಖಾಮುಖಿ ನಡೆಯದಂತೆ ತಡೆಯಲು ಯತ್ನಿಸುತ್ತಾರೆ. ಅವರಿಗೆ ಇಂಥಹ ಮುಖಾಮುಖಿಗಳು ಬೇಕಾಗಿಲ್ಲ. ಯಾಕೆಂದರೆ ಸಮಾಜದ ಜೊತೆ ಮುಖಾಮುಖಿಯಾಗಿ ಸಂಘರ್ಷದ ಭಾಗವಾಗುವ ಧರ್ಮ ಹೆಚ್ಚು ಪಕ್ವವಾಗುತ್ತದೆ. ಇಂತಹ ಸಂದರ್ಭದಲ್ಲಿ ಧಾರ್ಮಿಕ ಅಂಧಾಭಿಮಾನಿಗಳ ಮಹತ್ವ ಕಡಿಮೆಯಾಗುತ್ತದೆ. ತಾವು ದೇವರ ಪ್ರತಿನಿಧಿಗಳು ಎಂದು ಕೊಚ್ಚಿಕೊಳ್ಳುವವರಿಗೆ ಅಲ್ಲಿ ಕೆಲಸ ಇರುವುದಿಲ್ಲ. ಯಾಕೆಂದರೆ ಧರ್ಮ ದೇವಾಲಯದಿಂದ ಚರ್ಚು, ಮಸೀದಿಗಳಿಂದ ಹೊರಬಂದು ಆಚರಣೆಯ ಪೊರೆಯನ್ನು ಕಳೆದುಕೊಂಡು ನಿಂತು ಬಿಡುತ್ತದೆ. ಧರ್ಮ ಕೇವಲ ಆಧ್ಯಾತ್ಮಿಕವೂ ಆಗದೇ, ಬದುಕಿನ ಧರ್ಮವೂ ಆಗುತ್ತದೆ. ಇದು ಸಾಧ್ಯವಾಗುವುದು ಧರ್ಮ ಸದಾ ಸಾಮಾಜಿಕ ಸಂಘರ್ಷದ ಭಾಗವಾಗುವುದರಿಂದ ಮಾತ್ರ.


ಧರ್ಮ ಮತ್ತು ಸಮಾಜದ ನಡುವಿನ ಮುಖಾಮುಖಿಗೆ ನಮ್ಮ ವೈಚಾರಿಕರು, ಧಾರ್ಮಿಕ ಅಂಧಾಭಿಮಾನಿಗಳು, ರಾಜಕಾರಣಿಗಳು ಆಡ್ಡಿಯನ್ನು ಉಂಟು ಮಾಡುತ್ತಲೇ ಬಂದಿದ್ದಾರೆ. ನಮ್ಮ ವೈಚಾರಿಕರು ಒಂದು ಧರ್ಮವನ್ನು ಟೀಕೆಗೆ ಒಳಪಡಿಸುತ್ತ ಇನ್ನೊಂದು ಧರ್ಮದಲ್ಲಿ ಇರುವ, ಇಂದಿನ ಬದುಕಿಗೆ ವ್ಯತಿರಿಕ್ತವಾದ ನಡವಳಿಕೆಗಳ ಬಗ್ಗೆ ದಿವ್ಯ ಮೌನವನ್ನು ಒಹಿಸುತ್ತಾರೆ. ಪ್ರಾಮಾಣಿಕತೆ ಇಲ್ಲದ ವೈಚಾರಿಕತೆಗೆ ಬೆಲೆ ಇಲ್ಲ ಎಂಬುದು ಅವರಿಗೆ ಅರ್ಥವಾಗುವುದಿಲ್ಲ. ಧಾರ್ಮಿಕ ಲಾಂಛನದ ಪ್ರದರ್ಶನದ ಬಗ್ಗೆ ಟೀಕಿಸುವಾಗ ಹಣೆಯ ಮೇಲಿನ ವಿಭೂತಿ ಮತ್ತು ಮೀಸೆ ಇಲ್ಲದ ಗಡ್ಡದ ನಡುವೆ ವ್ಯತ್ಯಾಸ ಮಾಡಬಾರದು. ಆದರೆ ನಮ್ಮ ವೈಚಾರಿಕ ಜಗತ್ತಿಗೆ ವಿಭೂತಿಯನ್ನು ಟೀಕಿಸುವುದಕ್ಕೆ ಹೆಚ್ಚು ಇಷ್ಟ.

ಧಾರ್ಮಿಕ ಅಂಧಾಭಿಮಾನಿಗಳು ಬೇರೆಯಾಗಿಲ್ಲ. ಅವರದು ಮೂಲಭೂತವಾಗಿ ಸರ್ವಾಧಿಕಾರಿ ಮನಸ್ಥಿತಿ. ತಾವು ನಂಬಿದ ಧರ್ಮವೇ ದೊಡ್ಡದು ಎಂದು ನಂಬಿಕೊಂಡರೆ ಅದು ಅವರ ಹಣೆ ಬರೆಹ. ಆದರೆ ಇವರು ತಮ್ಮ ನಂಬಿಕೆಯನ್ನು ಬಲಾತ್ಕಾರದ ಮೂಲಕ ಬೇರೆಯವರ ಮೇಲೆ ಹೇರಲು ಹೊರಡುತ್ತಾರೆ. ಇದಕ್ಕೆ ಅವರು ಹಿಂಸಾಚಾರಕ್ಕೂ ಹಿಂಜರಿಯರು. ಈ ವಿಚಾರದಲ್ಲಿ ಎಲ್ಲ ಜಾತಿ ಧರ್ಮಗಳ ಅಂಧಾಭಿಮಾನಿಗಳು ಒಂದೇ.

ಇನ್ನು ನಮ್ಮ ರಾಜಕಾರಣಿಗಳು. ಅವರು ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಕಣ್ಣುಗಳನ್ನೆ ಕಳೆದುಕೊಂಡು ಬಿಟ್ಟಿದ್ದಾರೆ. ಅವರಿಗೆ ಪ್ರತಿ ಮನುಷ್ಯನೂ ನಿರ್ಜೀವವಾದ ಬ್ಯಾಲೆಟ್ ಪೇಪರ್ ! ನಿನ್ನೆಯ ಘಟನೆಯನ್ನೇ ತೆಗೆದುಕೊಳ್ಳಿ. ಇಲ್ಲಿ ಕನ್ನಡದ ದಿನಪತ್ರಿಕೆಯೊಂದು ಬೇರೆ ಭಾಷೆಯಲ್ಲಿ ಬರೆದ ಲೇಖನವನ್ನು ಅನುವಾದ ಮಾಡಿ ಪ್ರಕಟಿಸಿದೆ. ಅದು ಮುಸ್ಲಿಮ್ ಮಹಿಳೆಯೊಬ್ಬಳು ಬರೆದ ಲೇಖನ. ಇದರಲ್ಲಿ ತಪ್ಪೇನಿದೆ ? ಆದರೆ, ನಮ್ಮ ಸಿದ್ದರಾಮಯ್ಯ ಹಾಗೂ ಇತರ ಪ್ರತಿ ಪಕ್ಷಗಳ ನಾಯಕರು ಪತ್ರಿಕೆಯ ಮೇಲೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸುತ್ತಾರೆ. ಸರ್ಕಾರ ಪತ್ರಿಕೆಯ ಮೇಲೆ ಕೇಸು ಜಡಿಯುತ್ತದೆ.

ಬಾಂಗ್ಲಾ ದೇಶದ ಈ ಲೇಖಕಿ ಭಾರತಕ್ಕೆ ಬಂದರು. ತಮ್ಮ ಧರ್ಮದಲ್ಲಿನ ಲೋಪಗಳ ಬಗ್ಗೆ ಮಾತನಾಡಿದರು. ಆದರೆ ಪಶ್ಚಿಮ ಬಂಗಾಲದ ಕಮ್ಯುನಿಸ್ಟ್ ಸರ್ಕಾರವೇ ಅವರಿಗೆ ಬೆಂಬಲ ನೀಡಲಿಲ್ಲ. ಧಾರ್ಮಿಕ ಮೂಲಭೂತವಾದಿಗಳು ಅವರ ವಿರುದ್ಧ ತಿರುಗಿ ಬಿದ್ದಾಗ ಈ ಸೆಕ್ಯುಲರ್ ದೇಶದ ಯಾವ ಧರ್ಮ ನಿರಪೇಕ್ಷವಾದಿಯೂ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಯಾಕೆಂದರೆ ಎಲ್ಲರಿಗೂ ಒಂದಿಲ್ಲ ಒಂದು ರೀತಿಯ ಭಯ.

ಈಗ ಧಾರ್ಮಿಕ ಆಚರಣೆಗಳಿಗಿಂತ ಆಧ್ಯಾತ್ಮಿಕ ಮನಸ್ಸು ಬೇಕಾಗಿದೆ. ಅದು ಕೇವಲ ಸಂಕೇತಗಳ ಮೇಲೆ ನಿಲ್ಲುವುದಿಲ್ಲ. ಶಬ್ದಗಳು ಮಂತ್ರಗಳಿಗಿಂತ ಅದರ ಧ್ವನಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ನೀವು ಗಮನಿಸಿರಬಹುದು. ಮುಸ್ಲೀಮರು ಬೆಳಿಗ್ಗೆ ಮತ್ತು ಸಂಜೆ ಮಸೀದಿಗಳಲ್ಲಿ ಹೇಳುವ ಅಲ್ಲಾ ಹೋ ಅಕ್ಬರ್ ಇದೆಯಲ್ಲ ಅದರ ಧ್ವನಿ ನನಗೆ ಯಾವುದೋ ವೇದ ಮಂತ್ರದ ಧ್ವನಿಯ ಹಾಗೆ ಕೇಳುತ್ತದೆ. ಆ ಸ್ವರದ ಏರಿಳಿತ ಒಂದು ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟೀಸುತ್ತದೆ. ಆದ್ದರಿಂದ ಮಾತು ಶಬ್ದಕ್ಕಿಂತ ಸ್ವರ ಮುಖ್ಯ. ಈ ಸ್ವರ ಮತ್ತು ಸ್ವರದ ಏರಿಳಿತ ಸೃಷ್ಟಿಸುವ ವಾತವಾರಣ ಧರ್ಮದಿಂದ ಧರ್ಮಕ್ಕೆ ಬೇರೆಯಾಗಿಲ್ಲ.

1 comment:

Govinda Nelyaru said...

ಹಿಂದೆ ಪ್ರಜಾವಾಣಿ ಮಲೆಯಾಳ ಕಥೆ ಬಾಷಾಂತರ ಪ್ರಕಟಿಸಿದಾಗಲೂ ದೊಂಬಿ ಅನುಭವಿಸಿತ್ತು. ಅದರಲ್ಲಿ ಮಹಮದ್ ಎಂಬವ ಕೆಟ್ಟ ನಡುವಳಿಕೆಯವ ಎನ್ನುವುದೇ ಸಾಕಾಗಿತ್ತು ಗಲಾಟೆಗೆ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...