Thursday, March 25, 2010

ಲಿವಿಂಗ್ ಟುಗೇದರ್ ಎಂದರೆ ಜೊತೆಯಾಗಿ ಬದುಕುವುದೇ ಅಲ್ಲವೆ ?

ಲಿವಿಂಗ್ ಟುಗೆದರ್. ಹಾಗೆಂದರೆ ಜೊತೆಯಾಗಿ ಬದುಕುವುದು ಎಂದು ಭಾಷಾಂತರಿಸಬಹುದು. ಆದರೆ ಲಿವಿಂಗ್ ಟುಗೆದರ್ ಎಂಬುದು ಕೇವಲ ಜೊತೆಯಾಗಿ ಬದುಕುವುದಲ್ಲ. ಒಂದು ಗಂಡು ಮತ್ತು ಹೆಣ್ಣು ಸಾಂಪ್ರದಾಯಿಕ ಅರ್ಥದಲ್ಲಿ ಮದುವೆಯಾಗದೇ ಸಂಸಾರ ಮಾಡುವುದು ಎಂದು ಹೇಳಬಹುದು.

ನಮ್ಮ ದೇಶಕ್ಕೆ ಈ ಲಿವಿಂಗ್ ಟುಗೆದರ್ ಹೊಸತಲ್ಲ. ಸಾಂಪ್ರದಾಯಿಕವಾಗಿ ಮದುವೆಯಾಗದೇ ಜೊತೆಯಾಗಿ ಬದುಕುವವರು, ಅಂದರೆ ಸಂಸಾರ ನಡೆಸುವವರು ಈ ದೇಶದಲ್ಲಿ ಸಾಕಷ್ಟು ಜನರಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಂತವರ ಸಂಖ್ಯೆ ಹೆಚ್ಚುತ್ತಿದೆ ಈ ರೀತಿ ಸಂಸಾರ ನಡೆಸುವುದು ನೈತಿಕವೇ ಅನೈತಿಕವೇ ಎಂಬ ಪ್ರಶ್ನೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ ತಮಿಳು ಚಿತ್ರ ನಟಿಯೊಬ್ಬಳ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ತೀರ್ಪು ಈ ಬಗ್ಗೆ ಮತ್ತೆ ಚರ್ಚೆಯನ್ನು ಹುಟ್ಟು ಹಾಕಿದೆ, ನ್ಯಾಯಾಲಯದ ಅಭಿಪ್ರಾಯದ ಪ್ರಕಾರ ಜೊತೆಯಾಗಿ ಬದುಕುವುದು ಅನೈತಿಕ ಎಂದೂ ಯಾವ ಕಾನೂನು ಹೇಳಿಲ್ಲ. ಆದ್ದರಿಂದ ಲಿವಿಂಗ್ ಟುಗೇದರ್ ಕಾನೂನು ವಿರೋಧಿಯಲ್ಲ. ಲಿವಿಂಗ್ ಟುಗೆದರ್ ಕಾನೂನಿಗೆ ವಿರುದ್ಧವಾದುದಲ್ಲ ಎಂಬುದು ನಿಜ. ಯಾಕೆಂದರೆ ಕಾನೂನಿನಲ್ಲಿ ಈ ವಿಚಾರದ ಪ್ರಸ್ತಾಪ ಇಲ್ಲ.

ಆದರೆ ಇಲ್ಲಿ ಹಲವಾರು ಸೂಕ್ಷ್ಮ ಪ್ರಶ್ನೆಗಳಿವೆ. ಮೊದಲನೆಯದಾಗಿ ಲಿವಿಂಗ್ ಟುಗೆಡರ್ ಈಗಿನ ಕೌಟುಂಬಿಕ ವ್ಯವಸ್ಥೆಯ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದು. ಇದರಿಂದಾಗಿ ಸಾಮಾಜಿಕ ವ್ಯವಸ್ಥೆಯ ಮೇಲೆ ಉಂಟಾಗುವ ಪರಿಣಾಮ ಯಾವುದು ಎಂಬುದು ಮುಂದಿನ ಪ್ರಶ್ನೆ.

ಇಲ್ಲಿ ಕುಟುಂಬ, ಹಲವು ಕುಟುಂಬಗಳಿಂದ ನಿರ್ಮಾಣವಾದ ಸಮಾಜ, ಈ ಸಮಾಜದಲ್ಲಿ ಇರಬೇಕಾದ ನೀತಿ ನಿಯಮಗಳು, ಈ ನೀತಿ ನಿಯಮಗಳನ್ನು ರೂಪಿಸಲು ವೇದಿಕೆಯಾದ ಧರ್ಮ ಮತ್ತು ಇದೆಲ್ಲ ಸರಿಯಾಗಿ ನಡೆಯಲು ರೂಪಿತವಾದ ಕಾನೂನು ಇವುಗಳ ನಡುವಿನ ಸಂಬಂಧವನ್ನು ತಿಳಿದುಕೊಳ್ಳಬೇಕಾಗಿದೆ. ಅಂದರೆ ಒಂದು ಸಮಾಜದ ಭಾಗವಾಗಿರುವವರು ಹೇಗೆ ಬದುಕಬೇಕು ಎಂಬುದೇ ನೀತಿ. ಈ ನೀತಿಯಂತೆ ಬದುಕಿದರೆ ಅದು ನೈತಿಕ. ಹಾಗೆ ಬದುಕದಿದ್ದರೆ ಅದು ಅನೈತಿಕ. ಬದುಕು ಅನೈತಿಕವಾದರೆ ಅದನ್ನು ತಡೆಯಲು ಇರುವುದೇ ಕಾನೂನು. ಈಗ ನಮ್ಮ ಕಾನೂನಿನಲ್ಲಿ ಲಿವಿಂಗ್ ಟುಗೆದರ್ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದರಿಂದ ಅದು ಅನೈತಿಕ ಅಲ್ಲ. ಅನೈತಿಕ ಅಲ್ಲವಾದ್ದರಿಂದ ಅದು ನೈತಿಕ.

ವಯಸ್ಸಿಗೆ ಬಂದಿರುವ ಒಂದು ಗಂಡು ಮತ್ತು ಹೆಣ್ಣು, ಜೊತೆಯಾಗಿ ಬದುಕುವುದಿದ್ದರೆ, ಅದಕ್ಕೆ ಅಗ್ನಿ ಸಾಕ್ಷಿಯಾಗಬೇಕು, ಸಮಾಜ ಸಾಕ್ಷಿಯಾಗಬೇಕು, ಇಲ್ಲವೇ ಅದು ನೊಂದಣಿಯಾಗಬೇಕು. ಯಾಕೆಂದರೆ ಒಂದು ಗಂಡು ಹೆಣ್ಣಿನ ಸಂಬಂಧದಿಂದ ಇನ್ನೊಂದು ಜೀವೆ ಹುಟ್ಟಿ ಬರುತ್ತದೆ. ಹೀಗೆ ಹುಟ್ಟಿ ಬಂದ ಜೀವದ ಪಾಲನೆ ಪೋಷಣೆ ಮಾಡುವ ಹೊಣೆಗಾರಿಕೆಯ ನಿರ್ಧಾರ ಕೂಡ ಆಗಬೇಕು. ಇದು ಮದುವೆಯ ಬಗ್ಗೆ ಈ ಸಮಾಜ ಮತ್ತು ಇದಕ್ಕೆ ಪೂರಕವಾಗಿ ರಚಿತವಾಗಿರುವ ಕಾನೂನುಗಳು ಸ್ಪಷ್ಟವಾಗಿ ಹೇಳುವ ಮಾತು.

ನಾವು ಅನುಸರಿಸಿಕೊಂಡು ಬಂದ ಧರ್ಮ ನಮ್ಮ ಮದುವೆಯ ಬಗ್ಗೆ ಮಾತನಾಡುತ್ತದೆ. ಇದನ್ನೇ ಕಾನೂನನ್ನಾಗಿ ರೂಪಿಸಲಾಗಿದೆ. ಅಂದರೆ, ಹಿಂದೂ ಲಾ, ಮೊಹಮ್ಮಡಿಯನ್ ಲಾ ಇಲ್ಲಿ ಜಾರಿಯಲ್ಲಿವೆ. ಇವು ಮದುವೆಯ ಬಗ್ಗೆ ಕೆಲವೊಂದು ನೀತಿಯನ್ನು ನಿರೂಪಿಸಿವೆ. ಇದಕ್ಕೆ ಆಯಾ ಧರ್ಮವೇ ಆಧಾರ. ಅಂದರೆ ನಮ್ಮ ಸಾಮಾಜಿಕ ನಡವಳಿಕೆ ಮತ್ತು ಕೌಂಟುಂಬಿಕ ಹೊಣೆಗಾರಿಕೆಯ ಬಗ್ಗೆ ಕಾನೂನು ಸ್ಪಷ್ಟವಾಗಿ ಹೇಳುತ್ತದೆ.

ಒಂದು ನಿಮಿಷ ಯೋಚಿಸಿ. ಇಂಥಹ ಕಾನೂನುಗಳ ಮೂಲ ಉದ್ದೇಶ ಈಗಿರುವ ಕೌಂಟುಂಬಿಕ ವ್ಯವಸ್ಥೆ ತೊಂದರೆ ಇಲ್ಲದೇ ನಡೆಯಲಿ ಎಂಬುದು. ಆ ಮೂಲಕ ಸಮಾಜದಲ್ಲಿ ಅರ್ಥಪೂರ್ಣವಾದ ಮನುಷ್ಯ ಸಂಬಂಧ ಇರಲಿ ಎಂಬ ಆಶಯ ಕೂಡ ಇಲ್ಲಿದೆ. ಆದರೆ, ಈ ಧರ್ಮಾಧಾರಿತ ಕಾನೂನು ರಚಿತವಾದ ಕಾಲ ಘಟ್ಟ ಯಾವುದು ? ಆ ಕಾಲ ಘಟ್ಟದಲ್ಲಿನ ಬದುಕಿನ ನೀತಿ ಈಗಲೂ ನೀತಿಯಾಗಿ ಉಳಿದಿದೆಯೆ ? ಅಥವಾ ಬದಲಾಗಿದೆಯೆ ? ನೋಡಿ, ಬದುಕುವ ನೀತಿ ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ. ಒಂದು ಕುಟುಂಬ ಮತ್ತು ಕುಟುಂಬದ ಸದಸ್ಯರ ನಡುವಿನ ಸಂಬಂಧ ಕಾಲದ ನಿಕಷಕ್ಕೆ ಒಳಗಾಗಿ ಬದಲಾಗುತ್ತಲೇ ಇದೆ. ಉದಾಹರಣೆಗೆ ಮಹಾ ಭಾರತದ ಕಾಲದಲ್ಲಿ ಪಾಂಡವರು ಒಬ್ಬಳನ್ನೇ ಮದುವೆಯಾಗಿದ್ದು ಅನೈತಿಕವಾಗಿರಲಿಲ್ಲ. ಆದರೆ ಇಂದು ಈ ಬಗ್ಗೆ ಯೋಚಿಸುವುದಕ್ಕೂ ಸಾಧ್ಯವಿಲ್ಲ ಅಲ್ಲವೆ ?
ಅಂದರೆ ನಾವು ಕಾಲ ಕಾಲಕ್ಕೆ ಸಂವಿಧಾನಕ್ಕೆ ತಿದ್ದುಪಡಿ ಮಾಡುವಂತೆ ಬದುಕಿನ ಸಂವಿಧಾನಕ್ಕೂ ತಿದ್ದುಪಡಿಯಾಗುತ್ತದೆ. ನಾವು ಬದುಕು ಮತ್ತು ಮಾನವೀಯ ಸಂಬಂಧಗಳನ್ನು ನೋಡುವಂತೆ ನಮ್ಮ ಮುಂದಿನ ಪೀಳೀಗೆಯವರು ನೋಡುವುದಿಲ್ಲ. ಮದುವೆಯ ಮುಂಚಿನ ಲೈಂಗಿಕತೆ ಇಂದು ಅನೈತಿಕ ಎಂದು ಹೇಳಿದವರೇ, ನಗೆಪಾಟಲಿಗೆ ಈಡಾಗುವ ಕಾಲದಲ್ಲಿ ನಾವು ಬದುಕಿದ್ದೇವೆ. ಬದುಕು ಮಾತ್ತು ಗಂಡು ಹೆಣ್ಣಿನ ಸಂಬಂಧದ ವ್ಯಾಖ್ಯೆಯೇ ಈಗ ಬದಲಾಗಿದೆ.
ಈ ವಿಚಾರವನ್ನು ನಾನು ಸಿನಿಕನಾಗಿ ಸಂಪ್ರದಾಯವಾದಿಯಾಗಿ ಹೇಳುತ್ತಿಲ್ಲ. ವಸ್ತುಸ್ಥಿತಿಯನ್ನು ನಿರೂಪಿಸುತ್ತಿದ್ದೇನೆ ಅಷ್ಟೇ.
ಈಗ ಲಿವಿಂಗ್ ಟುಗೆದರ್ ನತ್ತ ಬರೋಣ. ಇದು ಕೌಟುಂಬಿಕ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಸಾಧ್ಯತೆ ಹೆಚ್ಚು. ಅಂದರೆ ಗಂಡ, ಹೆಂಡತಿ, ಮಕ್ಕಳು ಎಂಬ ಸಂಬಂಧ ಏನಿದೆ ಅದು ಬೇರೆಯದಾದ ಅರ್ಥವನ್ನು ಪಡೆಯುತ್ತದೆ. ಜೊತೆಗೆ ಹೊಣೆಗಾರಿಕೆಯ ಪ್ರಶ್ನೆ ಕೂಡ ಪೆಡಂಭೂತವಾಗಿ ಕಾಡಬಹುದು. ಇಂಥಹ ಸ್ಥಿತಿಯಲ್ಲಿ ಹೊಸ ಕಾನೂನಿನ ರಚನೆಯ ಅಗತ್ಯವಿದೆ. ಆಂದರೆ ಒಂದು ಗಂಡು ಮತ್ತು ಹೆಣ್ಣು ಜೊತೆಯಾಗಿ ಸಂಸಾರ ಮಾಡಲಿ. ಆದರೆ ಅವರಿಗೆ ಮಗುವಾದರೆ, ಅದರ ಹೊಣೆಗಾರಿಕೆ ಯಾರದ್ದು ? ಕೇವಲ ಹೆಣ್ಣು ಮಾತ್ರ ಈ ಹೋಣೆಗಾರಿಕೆಯನ್ನು ಹೊರಬೇಕೆ ? ಜೊತೆಯಾಗಿ ಬದುಕುವ ಜೊತೆಗಾರ ಕೈಕೊಟ್ಟರೆ ?
ಈ ಪ್ರಶ್ನೆಗಳಿಗೆ ಕಾನೂನು ಉತ್ತರ ಕೊಡುವಂತಾಗಬೇಕು. ಮದುವೆಯಾಗದೇ ಜೊತೆಯಾಗಿ ಬದುಕುವುದು ಅನೈತಿಕವಲ್ಲ ಎಂದು ನ್ಯಾಯಾಲಯ ಹೇಳಿದ ಮೇಲೆ, ಈ ಅನೈತಿಕವಲ್ಲದ ಚಟುವಟಿಕೆ ಮತ್ತು ಇದರಿಂದ ಉಂಟಾಗಿವ ಪರಿಣಾಮದ ಮೇಲೆ ನಿಗಾ ಇಡುವ ಮತ್ತು ನೀತಿ ರೂಪಿಸುವ ಕಾನೂನು ಬರಬೇಕು. ಇದು ಆಗ ಬೇಕಾದ ಕೆಲಸ.
ಯಾಕೆಂದರೆ ಬದುಕು ಎನ್ನುವುದು ಎಲ್ಲದಕ್ಕಿಂತ ಮುಖ್ಯ. ಹೀಗಿರುವಾಗ ಕೌಟುಂಬಿಕ ವ್ಯವಸ್ಥೆಯಲ್ಲ ಬದಲಾವಣೆ ಆಗುವುದು ಸಹಜ. ಆದರೆ ಒಂದು ವ್ಯವಸ್ಥೆ ಬದಲಾವಣೆಯಾಗಿ ಇನ್ನೊಂದು ವ್ಯವಸ್ಥೆ ಬಂದಾಗ ಅದರ ರಕ್ಷಣೆಗೂ ಕಾನೂನು ಬೇಕು.
ಈಗ ನನಗೆ ಅನ್ನಿಸುವುದೆಂದರೆ ಲಿವಿಂಗ್ ಟುಗೆದರ್ ಸಂಸ್ಕೃತಿಯನ್ನು ವಿರೋಧಿಸಿ ಅರ್ಥವಿಲ್ಲ. ಈ ವ್ಯವಸ್ಥೆ ಸರಿಯಾಗಿ ನಡೆಯಲು ಅದಕ್ಕೆ ಪೂರಕವಾದ ಕಾನೂನು ಬೇಕು. ಅಂತಹ ಕಾನೂನು ರಚನೆಯ ಬಗ್ಗೆ ವಿಸ್ತ್ರುತ ಚರ್ಚೆ ನಡೆಯಬೇಕು.


No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...