Saturday, March 27, 2010

ಖಾಸಗಿ ಮಾತುಗಳು; ನಾನು ಯಾರನ್ನೂ ಧ್ವೇಷಿಸಲಾರೆ.....!

ಬಹಳಷ್ಟು ಜನ ನನ್ನನ್ನು ಕೇಳುತ್ತಾರೆ.

"ನಿಮಗೆ ಇಂತವರ ಬಗ್ಗೆ ತುಂಬಾ ಸಿಟ್ಟಿ ಇರಬೇಕಲ್ಲ ? ನೀವು ಈಗ ಸುಮ್ಮನಿರಬಾರದು." ನಾನು ಈ ಮಾತುಗಳನ್ನು ಕೇಳಿ ನಕ್ಕು ಬಿಡುತ್ತೇನೆ. ಧ್ವೇಷ ನನ್ನ ಜಾಯಮಾನವಲ್ಲ. ರಾಜಕಾರಣಿಗಳ ಜೊತೆ ಒಡನಾಡಿದರೂ ನಾನು ರಾಜಕೀಯ ಮಾಡಲಾರೆ. ಪತ್ರಿಕೋದ್ಯಮದಲ್ಲಿ ಇದ್ದರೆ, ನಾನು ಪತ್ರಿಕೋದ್ಯಮವನ್ನು ಮಾತ್ರ ನಂಬಿ ಬದುಕುತ್ತೇನೆ. ಬೇರೆ ವ್ಯವಹಾರ ಮಾಡಲಾರೆ. ಮಾಧ್ಯಮದ ವಿಸಿಟಿಂಗ್ ಕಾರ್ಡ್ ಬಳಸಿ ಬೇರೆ ವ್ಯವಹಾರ ಮಾಡಲು ನನಗೆ ಬರುವುದಿಲ್ಲ. ಆದ್ದರಿಂದ ಇಂತಹ ಮಾತುಗಳನ್ನು ಕೇಳಿದಾಗ ನನಗೆ ಬರುವುದು ಸಣ್ಣ ನಗು ಮಾತ್ರ. ಇದು ನನ್ನ ದೌರ್ಬಲ್ಯ ಎಂದು ಸ್ನೇಹಿತರು ಹೇಳುವುದಿದೆ. ನನ್ನ ಹೆಂಡತಿ ಮಕ್ಕಳು ಸ್ನೇಹಿತರು ಮೂದಲಿಸುವುದಿದೆ. ಆಗಲೂ ನಾನು ನಗುವುದು ಬಿಟ್ಟು ಬೇರೆ ಮಾಡಲಾರೆ. ಯಾಕೆಂದರೆ ಇದು ದೌರ್ಬಲ್ಯವಲ್ಲ. ಇದೇ ನನ್ನ ಶಕ್ತಿ ಎಂಬುದು ನನಗೆ ಗೊತ್ತಿದೆ.

ನಾನು ದೃಶ್ಯ ಮಾಧ್ಯಮಕ್ಕೆ ಬಂದಿದ್ದು ಅಚಾನಕ್ ಆಗಿ. ಅದು ೨೦೦೦ ಇಸ್ವಿ ಜನವರಿ ತಿಂಗಳು. ಏಷ್ಯಾನೆಟ್ ಮತ್ತು ಜೀ ಚಾನಲ್ ಗಳು ಸೇರಿ ಕನ್ನಡಲ್ಲಿ ಚಾನಲ್ ಪ್ರಾರಂಭಿಸಲು ನಿರ್ಧರಿಸಿದ್ದವು. ಅವರಿಗೆ ಸುದ್ದಿ ವಿಭಾಗದ ಮುಖ್ಯಸ್ಥರು ಬೇಕಾಗಿತ್ತು. ಹೀಗಾಗಿ ಅನುಭವಿ ಪತ್ರಕರ್ತರಿಗಾಗಿ ಹುಡುಕುತ್ತಿದ್ದರು. ಆಗ ಸ್ನೇಹಿತರೊಬ್ಬರು ಬೆಂಗಳೂರಿಗೆ ಬಂದಿದ್ದ ಏಷ್ನಾನಟ್ ಚಾನಲ್ ನ ಮಾಲಿಕರಾಗಿದ್ದ ರಾಜೂ ಮೆನನ್ ಅವರನ್ನು ನೋಡುವಂತೆ ಸೂಚಿಸಿದರು. ನಾನಾಗ ಕನ್ನಡ ಪ್ರಭ ಪತ್ರಿಕೆಯ ಮುಖ್ಯವರದಿಗಾರನಾಗಿದ್ದೆ. ನನ್ನ ಜೊತೆ ಎಚ್. ಆರ್. ರಂಗನಾಥ್, ಶಿವಸುಬ್ರಹ್ಮಣ್ಯ. ರವಿ ಪ್ರಕಾಶ, ಶ್ರೀಕಾಂತ್ ನಾಡಿಗೇರ್ ಮೊದಲಾದವರಿದ್ದರು. ಡಿ. ಉಮಾಪತಿ ಆಗಲೇ ದೆಹಲಿಗೆ ವರ್ಗವಾಗಿ ಹೋಗಿದ್ದರು.

ನನಗೆ ಯಾಕೋ ಗೊತ್ತಿಲ್ಲ, ಕನ್ನಡ ಪ್ರಭ ಬಿಡುವುದು ಒಳ್ಳೆಯದು ಎಂದು ಅನ್ನಿಸತೊಡಗಿತ್ತು. ಹಾಗೆ ನೋಡಿದರೆ, ನನ್ನ ಜೊತೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳೆಲ್ಲ ನನ್ನ ಸ್ನೇಹಿತರೇ. ರಂಗನಾಥ್ ಬೆಂಗಳೂರಿಗೆ ಬಂದ ಮೇಲೆ ನನ್ನ ಜೊತೆಗೆ ಇದ್ದವರು. ವಿ. ಎನ್ ,ಸುಬ್ಬರಾಯರ ನಾವು ನೀವು ಪತ್ರಿಕೆಯಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೆವು. ಜೊತೆಗೆ ರಂಗನಾಥ್ ನನ್ನ ರೂಮಿನಲ್ಲೇ ಇದ್ದರು. ಆಗ ಅವರ ಬಳಿ ಒಂದು ಮೊಪೆಡ್ ಇತ್ತು. ರಾತ್ರಿ ಅವರ ಮೊಪೆಡ್ ನಲ್ಲಿ ಹಿಂದೆ ಕುಳಿತು ಮನೆಗೆ ಬರುತ್ತಿದ್ದೆ. ಇಬ್ಬರೂ ಕನಸು ಕಾಣುತ್ತಿದ್ದ ದಿನಗಳು ಅವು.

ನಂತರದ ದಿನಗಳಲ್ಲಿ ರಂಗನಾಥ್ ಬೇರೆ ಮನೆ ಮಾಡಿದರು. ಆದರೆ ಅಷ್ಟರಲ್ಲಿ ನಮ್ಮ ಪತ್ರಿಕೆ ಸೇರಿದ ಶಿವಸುಬ್ರಹ್ಮಣ್ಯ ವಿಜಯನಗರದಲ್ಲಿ ಮನೆ ಮಾಡಿದ್ದರಿಂದ ಅವರು ನನ್ನನ್ನು ಮನೆಗೆ ಡ್ರಾಫ್ ಮಾಡುತ್ತಿದ್ದರು. ನಾನು ಮುಖ್ಯ ವರದಿಗಾರನಾಗುವ ವರೆಗೆ ಎಲ್ಲವೂ ಹೀಗೆ ಇತ್ತು. ಎಲ್ಲರೂ ಸ್ನೇಹಿತರೇ. ಆದರೆ ನಾನು ಮುಖ್ಯ ವರದಿಗಾರನಾದ ಮೇಲೆ ಪರಿಸ್ಥಿತಿ ಬದಲಾಯಿತು. ನನಗೆ ನನ್ನ ಬಗ್ಗೆ ಅನುಮಾನ ಪಡುವ ಸ್ಥಿತಿ.

ನಾನು ನನ್ನ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದೆ. ರಾಜಕೀಯ ವರದಿಗಾರಿಕೆಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಲು ಯತ್ನಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೂ ದೊರಕಿತು. ಈಗಲೂ ಹಲವಾರು ಹಿರಿಯ ರಾಜಕಾರಣಿಗಳು ಅಂದಿನ ನನ್ನ ವರದಿಗಳನ್ನ ನೆನಪು ಮಾಡಿಕೊಳ್ಳುತ್ತಾರೆ. ಇರಲಿ, ಆದರೆ ನನ್ನ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದ ನಾನು ಎಂದೂ ಮೆನೇಜ್ಮೆಂಟ್ ಜೊತೆ ಸತತ ಸಂಪರ್ಕ ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿದಿರಲಿಲ್ಲ. ಅಷ್ಟರ ಮಟ್ಟಿಗೆ ನಾನು ದಡ್ದನಾಗಿದ್ದೆ. ಆದರೆ ನನ್ನ ಸ್ನೇಹಿತ ಸಹೋದ್ಯೋಗಿಗಳು ಆಗಲೇ ಮೆನೇಜ್ಮೆಂಟ್ ಜೊತೆ ಸಂಪರ್ಕವನ್ನು ಸಾಧಿಸಿಬಿಟ್ಟಿದ್ದರು. ಇಂಥಹ ಸ್ಥಿತಿಯಲ್ಲಿ ನನಗೆ ಅನ್ನಿಸಿದ್ದು ನಾನು ಕೆಲಸ ಬಿಡುವುದು ಒಳ್ಳೆಯದು ಅಂತ.

ನನ್ನ ಇನ್ನೊಂದು ಗುಣವಿದೆ. ನಾನು ಬೇರೆಯವರು ನನ್ನ ಸ್ಥಾನಕ್ಕೆ ಬರುತ್ತಾರೆ ಎಂಬುದು ಗೊತ್ತಾದರೆ, ನಾನೇ ಸ್ಥಾನವನ್ನು ಬಿಟ್ಟು ಹೊರಟು ಬಿಡುತ್ತೇನೆ. ಇಂತಹ ಹಲವು ಉದಾಹರಣೆಗಳು ಇವೆ. ಕೆಲವೊಮ್ಮೆ ನನಗೆ ಗೊತ್ತಾಗದೇ ಬೆಳವಣಿಗೆ ಆದಾಗ ಮಾತ್ರ, ನಾನು ಹೇಳಿದ ಮೇಲೆ ಹೊರಹೋಗಿದ್ದು ಇದೆ.

ನಾನು ಕನ್ನಡ ಪ್ರಭ ಬಿಡಬೇಕು ಎಂದುಕೊಂಡಾಗಲೇ ಏಶ್ಯಾನೆಟ್ ನನ್ನನ್ನು ಆಯ್ಕೆ ಮಾಡಿತು. ಜೊತೆಗೆ ಅವರು ನೀಡಿದ ಸಂಬಳವೂ ಆಕರ್ಷಕವಾಗಿತ್ತು. ಕನ್ನಡ ಪ್ರಭದಲ್ಲಿ ನಾನು ೧೭ ಸಾವಿರ ರೂಪಾಯಿ ಸಂಬಳ ತೆಗೆದುಕೊಳ್ಳುತ್ತಿದ್ದೆ. ಏಷ್ಯಾನೆಟ್ ನನಗೆ ನೀಡಿದ ಸಂಬಳ ೩೫ ಸಾವಿರ ರೂಪಾಯಿ ಜೊತೆಗೆ ಇತರ ಸೌಲಭ್ಯಗಳು.

ನಾನು ಭಾರವಾದ ಹೃದಯದಿಂದ ಕನ್ನಡ ಪ್ರಭ ತ್ಯಜಿಸಿದೆ. ಏಷ್ಯಾನೆಟ್ ಸಮೂಹ ಸೇರಿದೆ. ಅದು ೨೦೦೦ ಇಸ್ವಿ ಜೂನ್ ತಿಂಗಳು. ಹೀಗೆ ಪ್ರಾರಂಭವಾಯಿತು ನನ್ನ ದೃಶ್ಯ ಮಾಧ್ಯಮದ ಉದ್ಯೋಗ. ಏಷ್ಯಾನೆಟ್ ಮತ್ತು ಜೀ, ಕಾವೇರಿ ಎಂಬ ಕನ್ನಡ ಚಾನಲ್ ಅನ್ನು ಆಗಲೇ ಪ್ರಾರಂಭಿಸಿದ್ದರು. ಆದರೆ ಸುದ್ದಿ ಪ್ರಾರಂಭವಾಗಿರಲಿಲ್ಲ. ನಾನು ಸುದ್ದಿ ವಿಭಾಗಕ್ಕೆ ಬೇಕಾದವರನ್ನು ತೆಗೆದುಕೊಳ್ಳಲು ಪ್ರಕ್ರಿಯೆ ಪ್ರಾರಂಭಿಸಿದೆ. ಆದರೆ ಆಗಲೇ ನಡೆದಿದ್ದು ಕನ್ನಡದ ವರನಟ ಡಾ. ರಾಜಕುಮಾರ್ ಅಪಹರಣ. ಇದರಿಂದಾಗಿ ನನಗೆ ತಕ್ಷಣ ಮದ್ರಾಸಿಗೆ ಹೋಗಿ ಸುದ್ದಿಯನ್ನು ಪ್ರಾರಂಭಿಸುವಂತೆ ಸೂಚನೆ ಬಂತು. ಆಗ ಏಷ್ಯಾನೆಟ್ ಅಪ್ ಲಿಂಕಿಂಗ್ ಇದ್ದುದು ಚೆನ್ನೈನಲ್ಲಿ. ನಾನು ಮರು ಮಾತನಾಡದೇ ಮಧ್ಯಾನ್ಹದ ಫ್ಲೈಟ್ ನಲ್ಲಿ ಮದ್ರಾಸಿಗೆ ನಡೆದೆ. ಅಷ್ಟರಲ್ಲಿ ಕಾವೇರಿ ನ್ಯೂಸ್ ವಿಶೇಷ ಸುದ್ದಿ ಪ್ರಸಾರ ಸಂಜೆ ೫. ೩೦ ಕ್ಕೆ ಎಂಬ ಪ್ರಕಟನೆ ಚಾನಲ್ ನಲ್ಲಿ ಪ್ರಸಾರವಾಗುತ್ತಿತ್ತು.

ನಾನು ಮದ್ರಾಸಿಗೆ ಬಂದವನು ಅಲ್ಲಿಂದ ೫೦ ಕಿಮೀ ದೂರದಲ್ಲಿರುವ ಸ್ಟುಡಿಯೋಕ್ಕೆ ನಡೆದ. ಆಗಲೇ ೩. ೩೦ ಆಗಿತ್ತು. ೫.೩೦ ಕ್ಕೆ ಲೈವ್ ಸುದ್ದಿ ಪ್ರಸಾರ ಆಗಬೇಕು. ಸ್ಟುಡಿಯೊಕ್ಕೆ ಹೋದವನಿಗೆ ಶಾಕ್. ಅಲ್ಲಿದ್ದ ಬಹುತೇಕರಿಗೆ ಮಲೆಯಾಳಿ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಹೀಗಾಗಿ ಅವರ ಜೊತೆ ನನಗೆ ಸಂವಾದವೇ ಸಾಧ್ಯವಾಗಲಿಲ್ಲ. ನಾನು ಅಲ್ಲಿದ್ದ ವಿಸ್ಯುವಲ್ಸ್ ಗಳನ್ನು ನೋಡಿದೆ. ನನಗೆ ಗೊತ್ತಿದ್ದ ಮಾಹಿತಿಯನ್ನು ಆಧರಿಸಿ, ಸುದ್ದಿಯನ್ನು ಬರೆದು ಎಡಿಟ್ ಮಾಡಿಸಿದೆ. ಕೊನೆಗೆ ಸ್ಟುಡೀಯೋದ ಒಳಗೂ ಪ್ರವೇಶಿಸಿದೆ. ಸುದ್ದಿ ವಾಚಕನಾಗಿ. ಅಲ್ಲಿ ನಾನು ಮಾಡಲು ಹೊರಟಿದ್ದು ಒನ್ ಮ್ಯಾನ್ ಶೋ. ಅಂತೂ ಯಾವುದೇ ತೊಂದರೆ ಇಲ್ಲದೇ ಲೈವ್ ನ್ಯೂಸ್ ಪ್ರಸಾರ ಆಯಿತು. ಮರುದಿನ ಚೈನೈನಲ್ಲಿರುವ ಕೆಲವರನ್ನು ಸಂಪರ್ಕಿಸಿದೆ. ಕೆಲವರು ಉದಯ ಟೀವಿಯಲ್ಲಿ ಕೆಲಸ ಮಾಡಿದವರೂ ಅಲ್ಲಿದ್ದರು. ಇಂತಹ ಮೂವರನ್ನು ತೆಗೆದುಕೊಂಡು ಪ್ರತಿ ದಿನ ಸುದ್ದಿ ಬರುವಂತೆ ಮಾಡಿದೆ. ಸುಮಾರು ೧೫ ದಿನಗಳ ಕಾಲ ಅಲ್ಲಿ ನನ್ನ ಈ ಶೋ ನಡೆಯಿತು. ಇದರಿಂದ ಏಷ್ಯಾನೆಟ್ ನವರಿಗೆ ನನ್ನ ಬಗ್ಗೆ ಪ್ರೀತಿ ಗೌರವ ಮೂಡಿತು. ಈಗಲೂ ಅದೇ ಪ್ರೀತಿ ಗೌರವ ಅವರಿಗೆ ನನ್ನ ಮೇಲಿದೆ.

ನನ್ನ ಕೆಲವು ಸ್ಣೇಹಿತರು ನೀವು ಈಗ ಸುಮ್ಮನಿರಬಾರದು ಎಂದು ಹೇಳಿದಾಗ ಇದೆಲ್ಲ ನನಗೆ ನೆನಪಾಗುತ್ತಿದ್ದೆ. ಬದುಕಿನಲ್ಲಿ ನಮ್ಮನ್ನು ಇಷ್ಟಪಡುವರೂ ಇರುತ್ತಾರೆ. ಇಷ್ಟಪಡುವವರು ಇರುವುದರಿಂದ ಧ್ವೇಷಿಸುವವರೂ ಇರುತ್ತಾರೆ. ನಾನು ನೋಡಿದ ಹಾಗೆ ಒಬ್ಬ ವ್ಯಕ್ತಿ ಪರಿಸ್ಥಿತಿಗೆ ತಕ್ಕಂತೆ ವರ್ತಿಸುತ್ತಾನೆ. ತನ್ನ ಎಜೇಂಡಾಕ್ಕೆ ತಕ್ಕಂತೆ ಕೆಲಸ ಮಾಡುತ್ತಿರುತ್ತಾನೆ. ಆದ್ದರಿಂದ ಮನುಷ್ಯರನ್ನು ಒಳ್ಳೆಯವರು ಕೆಟ್ಟವರು ಎಂದು ವಿಭಾಗ ಮಾಡುವುದರಲ್ಲಿ ನನಗೆ ನಂಬಿಕೆಯಿಲ್ಲ.

ನನ್ನ ಜೊತೆ ಕೆಲಸ ಮಾಡಿದ ಎಲ್ಲ ಸ್ನೇಹಿತರೂ ಒಳ್ಳೆಯವರೇ. ಎಲ್ಲರೂ ಜೆಂಟಲ್ ಮ್ಯಾನ್ ಗಳೇ. ಆದ್ದರಿಂದ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಲು ಸಿದ್ಧನಿಲ್ಲ. ಹಾಗೆ ನಾನು ಕೆಲಸ ಮಾಡಿದ ಪತ್ರಿಕೆಗಳು. ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ ಮೊದಲಾದ ಪತ್ರಿಕೆಗಳು ನನಗೆ ಬದುಕು ನೀಡಿದ ಪತ್ರಿಕೆಗಳು. ನನಗೆ ಬರೆಯುವುದನ್ನು ಕಲಿಸಿದ ಪತ್ರಿಕೆಗಳು. ಇಂದಿಗೂ ಬೆಳಿಗ್ಗೆ ನಾನು ಎದ್ದ ತಕ್ಷಣ ನೋಡುವುದು ಈ ಪತ್ರಿಕೆಗಳನ್ನು. ನಾನು ಎಂದೂ ಈ ಪತ್ರಿಕೆಗಳ ಬಗ್ಗೆ ಕೆಟ್ಟದಾಗಿ ಮಾತನಾಡಲಾರೆ. ಅವುಗಳ ಬಗ್ಗೆ ನನ್ನ ಹೃದಯದಲ್ಲಿ ಇರುವುದು ಕೃತಜ್ನತೆಯ ಭಾವ. ಆದರೆ ಎಲ್ಲರೂ ಹೀಗೆ ಇರಬೇಕು ಎಂದು ಹೇಳುವ ಹಕ್ಕು ನನಗಿಲ್ಲ. ಕೆಲವರಿಗೆ ಇಂತಹ ಭಾವ ಇರದಿರಬಹುದು. ಇದೆಲ್ಲ ವ್ಯಕ್ತಿಗತವಾದ ನಡವಳಿಕೆಗಳು.

ಕೆಲವೊಂದು ನೆನಪುಗಳೇ ಹಾಗೆ. ಮರೆಯಬೇಕು ಎಂದುಕೊಂಡರೂ ಮರೆಯಲು ಸಾಧ್ಯವಾಗುವುದಿಲ್ಲ. ಅವು ಸದಾ ನನ್ನನ್ನು ಕಾಡುತ್ತಿರುತ್ತವೆ. ನಾವು ಕಳೆದ ಸುಂದರ ಕ್ಷಣಗಳು ನಮ್ಮನ್ನು ಕಾಡುತ್ತಿರಬೇಕು. ಕಹಿ ಅನುಭವಗಳಲ್ಲ. ಹಾಗಿದ್ದರೆ ಮಾತ್ರ ನಾವು ಆರೋಗ್ಯಪೂರ್ಣವಾಗಿ ಇರಲು ಸಾಧ್ಯ.

ಹೀಗಿರುವ ನಾನು ಯಾರನ್ನಾದರೂ ಧ್ವೇಷಿಸುವುದು ಸಾಧ್ಯವಾ ? ಖಂಡಿತ ಇಲ್ಲ. ಸ್ನೇಹಿತರ ದುಷ್ಟತನವನ್ನು ಮರೆತರೆ ನಾವು ಆರೋಗ್ಯಪೂರ್ಣವಾಗಿರುತ್ತೇವೆ. ಅವರು ಹಪಹಪಿಸುತ್ತಾರೆ. ಇದು ನಾನು ಕಂಡುಕೊಂಡ ಸತ್ಯ.
ಇರಲಿ, ಇನ್ನು ಮೇಲೆ ಬಿಡುವಾದಾಗಲೆಲ್ಲ, ಪತ್ರಿಕೋದ್ಯಮದ ನನ್ನ ನೆನಪುಗಳಿಗೆ ಅಕ್ಷರದ ರೂಪ ಕೊಡುತ್ತೇನೆ. ಇದು ಇಂದು ನಾನು ತೆಗೆದುಕೊಂಡ ತೀರ್ಮಾನ.

1 comment:

ಕೈ. ವೆ. ಆದಿತ್ಯ ಭಾರದ್ವಾಜ said...

ii kelasa endo aagabekittu, igalaadaroo shuruvittukondiddakke dhanyavaadagalu

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...