Friday, December 17, 2010

ಮುರುಘಾ ಶ್ರೀ,ಪತ್ರಕರ್ತರು ಮತ್ತು ನಾಯಿ ಎಂಬ ಪ್ರಾಣಿ...!

ಚಿತ್ರದುರ್ಗದ ಮುರಘಾಶ್ರೀ ನಾಡಿನ ಕ್ರಾಂತಿಕಾರಿ ಸ್ವಾಮಿಜಿ ಎಂದೇ ಹೆಸರು ಪಡೆದವರು. ಸನ್ಯಾಸದ ಪರಂಪರಾಗತ ಮೌಲ್ಯಗಳನ್ನು ತಿರಸ್ಕರಿಸಿ ಸಮಾನತೆಯ ಕನಸು ಹೊತ್ತವರು. ಪ್ರತಿ ವರ್ಷ ಅವರು ನೀದುವ ಪ್ರಶಸ್ತಿ ಕೂಡ ಇಂತಹ ಸಾಮಾಜಿಕ ಕ್ರಾಂತಿಯ ಅವರ ಕನಸನ್ನು ನನಸು ಮಾಡುವ ದಿಸೆಯಲ್ಲಿ ಇಡುತ್ತಿರುವ ಹೆಜ್ಜೆ ಎಂದೇ ನಾಡಿನ ಜನ ನಂಬಿಕೊಂಡಿದೆ. ಹಾಗೆ ಎಲ್ಲ ಜಾತಿ ಸಮುದಾಯಗಳಿಗೆ ಧಾರ್ಮಿಕ ನಾಯಕತ್ವವನ್ನು ನೀಡುವ ಕೆಲಸವನ್ನು ಅವರು ಮಾಡುತ್ತ ಬಂದಿದ್ದಾರೆ.
ಅವರ ಎಲ್ಲ ರೀತಿಯ ಕ್ರಾಂತಿಯ ಹೆಜ್ಜೆಗಳಿಗೆ ಮಾಧ್ಯಮಗಳು ಬೆಂಬಲ ನೀಡುತ್ತ ಬಂದಿವೆ. ಮಠ ಮಾನ್ಯರನ್ನು ಟೀಕಿಸುವ ಪತ್ರಿಕೆಗಳೂ ಸಹ ಮುರಾಘಾ ಶ್ರೀ ಅವರ ಬಗ್ಗೆ ಟೀಕಿಸಿ ಬರೆದ ಉದಾಹರಣೆಗಳು ಇಲ್ಲ. ಆದರೆ ಕಳೆದ ವಾರ ಸ್ವಾಮೀಜಿ ಅವರಿಗೆ ಮಾಧ್ಯಮದ ಮೇಲೆ ಸಿಟ್ಟು ಬಂದಿತ್ತು. ಅವರು ಪತ್ರಿಕೋದ್ಯಮಿಗಳನ್ನು ಕಾವಲು ನಾಯಿಗಳಾಗಬೇಕಾದವರು ಕೇವಲ ನಾಯಿಗಳಾಗಿದ್ದಾರೆ ಎಂದು ಅಣಿ ಮುತ್ತುಗಳನ್ನು ಉದುರಿಸಿ ಬಿಟ್ಟರು. ಹಾಗೆ ಪತ್ರಿಕೋದ್ಯಮಗಳಿಗೆ ನೀಡಬೇಕಾದ ಆಮಿಷಗಳ ಬಗ್ಗೆ ಪಟ್ಟಿ ನೀಡಿದರು. ಆದರೆ ಅವರ ಈ ಹೇಳಿಕೆಯ ಬಗ್ಗೆ ಪತ್ರಿಕೋದ್ಯಮಿಗಳು ಪ್ರತಿಭಟನೆ ವ್ಯಕ್ತಪಡಿಸಿದಾಗ ಸಾರಿ ಎಂದು ಹೇಳಿ ಕೈತೊಳೆದುಕೊಂಡು ಬಿಟ್ಟರು. ಸ್ವಾಮೀಜಿ ಅವರದೂ ಉಪ್ಪು ಖಾರ ತಿನ್ನುವ ದೇಹವಾದ್ದರಿಂದ ಪಾಪ ಕೋಪ ಬಂದಿತ್ತು ಎಂದು ಸುಮ್ಮನಾಗೋಣ ಎಂದು ಒಮ್ಮೆ ಅನ್ನಿಸಿದರೂ ಹಾಗೆ ಮಾಡಲು ಮನಸ್ಸು ಬರಲಿಲ್ಲ. ಯಾಕೆಂದರೆ ಅವರು ಯಾಕೆ ಪತ್ರಿಕೋದ್ಯಮಿಗಳನ್ನು ನಾಯಿ ಎಂದು ಕರೆದರು ಎಂಬ ಬಗ್ಗೆ ನಾವು ಆಲೋಚನೆ ಮಾಡಲೇಬೇಕಾಗಿದೆ.
ನಾಯಿಯ ನಿಷ್ಟೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಜೊತೆಗೆ ಅದು ಮನೆನಾಯಿ ಆಗಿದ್ದರೆ ಮನೆ ಕಾಯುತ್ತದೆ. ಬೀದಿ ನಾಯಿಯಾಗಿದ್ದರೆ ಬೀದಿಯನ್ನು ಕಾಯುತ್ತದೆ. ಜಾತಿ ನಾಯಿಯಾಗಿದ್ದರೆ ಅದಕ್ಕೆ ಒಳ್ಳೆಯ ಆಹಾರ ದೊರಕುತ್ತದೆ. ಬೀದಿ ನಾಯಿಯಾಗಿದ್ದರೆ ಬೀದಿಯಲ್ಲಿ ಬಿದ್ದಿದ್ದನ್ನು ತಿಂದುಕೊಂದು ಬಿದ್ದಿರುತ್ತದೆ. ಆದರೆ ಕಳ್ಳರನ್ನು ಕಂಡರೆ, ಅಪರಿಚತರು ಬಂದರೆ ಬೊಗಳುವುದನ್ನು ನಿಲ್ಲಿಸುವುದಿಲ್ಲ. ಹೀಗಾಗಿ ಅದು ಕಾವಲು ನಾಯಿಯೆಂಬ ಹಣೆ ಪಟ್ಟಿಯನ್ನು ಪಡೆಯಲಿ ಪಡೆಯದಿರಲಿ ಅದು ಕಾವಲು ಕೆಲಸವನ್ನು ನಿಲ್ಲಿಸುವುದಿಲ್ಲ. ಜೊತೆಗೆ ನಾಯಿಯ ಇನ್ನೊಂದು ಗುಣವೆಂದರೆ ಅದು ಅಪರಿಚತರನ್ನು ನಂಬುವುದಿಲ್ಲ. ಜೊತೆಗೆ ರೊಟ್ಟಿ ತುಂಡನ್ನು ಹಾಕಿ ಅದರ ಸ್ನೇಹ ಗಳಿಸುವುದು ಅಷ್ಟು ಸುಲಭವಲ್ಲ. ಯಾಕೆಂದರೆ ನಾಯಿ ಮನುಷ್ಯರನ್ನು ಅಷ್ಟು ಬೇಗ ನಂಬುವುದಿಲ್ಲ. ಅಪನಂಬಿಕೆಯೇ ನಾಯಿಯ ಮೂಲ ಗುಣ. ಹಾಗೆ ನಂಬಿಕೆ ಕೂಡ.
ಗೌರವಾನ್ವಿತ ಸ್ವಾಮೀಜಿಯವರು ಪತ್ರಕರ್ತರನ್ನು ಯಾವ ನಾಯಿಯ ಸಾಲಿಗೆ ಸೇರಿಸಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಅವರ ಮಾತಿನಲ್ಲಿ ರೊಟ್ಟಿ ಹಾಕಿಯೂ ನಾಯಿ ಕಚ್ಚಿದ ನೋವಿದೆ. ತಾವು ಪತ್ರಕರ್ತರನ್ನು ಕರೆದು ರೊಟ್ಟಿ ಹಾಕಿದರೂ ಅದು ತನ್ನ ಎದುರು ಬಾಲ ಅಲ್ಲಾಡಿಸುತ್ತಿಲ್ಲ ಎಂಬ ವಿಷಾಧವಿದೆ.ಆದರೆ ನಾಯಿಯ ಗುಣವೇ ಹಾಗೆ ಎಂಬುದನ್ನು ಕ್ರಾಂತಿಕಾರಿ ಸ್ವಾಮೀಜಿ ಅರ್ಥ ಮಾಡಿಕೊಳ್ಲದಿರುವುದು ಈ ನಾಡಿನ ದುರ್ದೈವ.
ಸ್ವಾಮೀಜಿ ಅವರು ಈ ನಾಯಿಯ ಆರೋಪ ಮಾಡುವುದಕ್ಕಿಂತ ಸ್ವಲ್ಪ ದಿನಗಳ ಮೊದಲು ಇನ್ನೊಂದು ಹೇಳಿಕೆಯನ್ನು ನೀಡಿದ್ದರು. ಅದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಹೇಳಿಕೆಯಾಗಿತ್ತು. ಭೂ ಹಗರಣಕ್ಕೆ ಸಿಕ್ಕು ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಬಂದ ಸಂದರ್ಭದಲ್ಲಿ ಅವರು ಯಡಿಯೂರಪ್ಪ ಈ ನಾಡಿನ ಅತ್ಯುತ್ತಮ ಮುಖ್ಯಮಂತ್ರಿ ಎಂದು ಸರ್ಟಿಫಿಕೇಟ್ ನೀಡಿದ್ದರು. ಅವರಿಗೆ ಮುಖ್ಯಮಂತ್ರಿಗಳ ಅವ್ಯವಹಾರದ ವಾಸನೆ ಬಂದಿರಲಿಲ್ಲ. ಪಾಪ, ಅವರಿಗೆ ಈ ವಾಸನೆ ಹಿಡಿಯುವ ಶಕ್ತಿ ಇರಲಿಲ್ಲ.ಅಂತಹ ಗುಣ ಇರುವುದು ನಾಯಿಗಳಿಗೆ ಮಾತ್ರ. ಆದರೆ ಪತ್ರಕರ್ತರು ನಾಯಿಗಳಾಗಿದ್ದರಿಂದ ನಾಯಿಗಳಿಗಿರುವ ವಾಸನಾ ಶಕ್ತಿ ಇದ್ದುದುರಿಂದ ಅವರು ಬಹುಬೇಗ ಅಕ್ರಮ ವ್ಯವಹಾರಗಳ ವಾಸನೆ ಹಿಡಿದು ಬಿಟ್ಟಿದ್ದರು. ಇದರಿಂದ ಸ್ವಾಮೀಜಿಗಳಿಗೆ ಬೇಸರವಾಗಿದ್ದರೂ ಆಗಿರಬಹುದು. ತಾವು ಮೆಚ್ಚುವ ಮುಖ್ಯಮಂತ್ರಿಗಳನ್ನು ಈ ನಾಡಿನ ಪತ್ರಿಕೋದ್ಯಮಿಗಳು ಮೆಚ್ಚುತ್ತಿಲ್ಲ ಎಂಬ ಬೇಸರ ಅವರಿಗಿದ್ದರೂ ಇರಬಹುದು. ಹೀಗಾಗಿ ಕೋಪ ಬಂದ ಅವರು ಪತ್ರಕರ್ತರನ್ನು ನಾಯಿಗಳು ಎಂದು ಕರೆದು ಬಿಟ್ಟರು. ಆದರೆ ಹೀಗೆ ಹೇಳುವಾಗ ಅವರು ನಾಯಿಗಳ ಬಗ್ಗೆ ಹೆಚ್ಚಿಗೆ ಯೋಚಿಸಿರಲಿಕ್ಕಿಲ್ಲ ಎಂದು ಅನ್ನಿಸುತ್ತದೆ. ಸದಾ ಸಾಮಾಜಿಕ ಕ್ರಾಂತಿಯ ಕನಸು ಕಾಣುತ್ತಿರುವ ಅವರಿಗೆ ಮಠದ ಪಕ್ಕದಲ್ಲೇ ಇರುವ ನಾಯಿಗಳನ್ನು ನೋಡುವುದಕ್ಕೆ ಸಮಯ ಇಲ್ಲದಿರಬಹುದು !
ಧರ್ಮ ಕ್ಷೇತ್ರವಾದ ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಧರ್ಮವಿದೆ. ಅದರಲ್ಲಿ ಸನ್ಯಾಸ ಧರ್ಮವೂ ಒಂದು. ಸನ್ಯಾಸಿಗಳು ರಾಗ ಧ್ವೇಷದಿಂದ ಹೊರಗಿರಬೇಕು. ಅವರು ಸದಾ ಭಗವಂತನ ಧ್ಯಾನ ಮಾಡುತ್ತಿರಬೇಕು. ಪಾರಮಾರ್ಥಿಕ ಚಿಂತನೆ, ಜೀವ ಮತ್ತು ಪರಮಾತ್ನನ ನಡುವಿನ ಸಂಬಂಧದ ಬಗ್ಗೆ ಯೋಚಿಸಬೇಕು. ರಾಜನಾದವನಿಗೆ ಧರ್ಮ ಮಾರ್ಗದಲ್ಲಿ ಪ್ರಜಾ ಪಾಲನೆ ಮಾಡುವಂತೆ ಬೋಧಿಸಬೇಕು. ಪರಸ್ತ್ರಿಯನ್ನು ತಾಯಿಯಂತೆಯೂ ರಾಜ ಧನವನ್ನು ಪ್ರಜಾ ಧನದಂತೆಯೂ ನೋಡುವಂತೆ ಬೋಧಿಸಬೇಕು. ನೆಲಗಳ್ಳತನ ಮಾಡದಂತೆ ಹೇಳಬೇಕು. ಮುಖ್ಯಮಂತ್ರಿ ಯದೀಯೂರಪ್ಪ ಅವರಿಗೆ ಈ ಬೋಧನೆಯನ್ನು ಮುರುಘಾ ಶ್ರೀ ಮಾಡಿದ್ದಾರೆಯೇ ಅಥವಾ ಇಲ್ಲವೆ ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಹೀಗಾಗಿ ಅವರು ತಮ್ಮ ಧರ್ಮವನ್ನು ಪಾಲಿಸಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅನುಮಾನಗಳಿವೆ.
ಇನ್ನು ಮುರುಘಾ ಶ್ರೀಗಳು ಒಪ್ಪಿ ನಡೆಯುವ ಬಸವಣ್ಣ ಕೂಡ ಬಿಜ್ಜಳನ ಆಸ್ಥಾನದಲ್ಲೇ ಇದ್ದುಕೊಂಡೇ ಕ್ರಾಂತಿಕಾರ ನೆನಸಿಕೊಂಡ. ಜಾತಿ ಪದ್ಧತಿಯನ್ನು ವಿರೋಧಿಸಿದ. ವೈದಿಕ ಧರ್ಮದ ಹುಳುಕುಗಳನ್ನು ತೆರೆದಿಟ್ಟ. ಕಳಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ ಎಂದ. ಆತ ಎಂದೂ ಬಿಜ್ಜಳ ರಾಜನಾಗಿದ್ದಾನೆ ಎಂಬ ಕಾರಣಕ್ಕೆ ಅವನ ಬಕೆಟ್ ಹಿಡಿಯುವ ಕೆಲಸ ಮಾಡಲಿಲ್ಲ. ಯಾರನ್ನೂ ನಾಯಿ, ಕುನ್ನಿ ಎಂದು ಕರೆಯಲೇ ಇಲ್ಲ. ಇದೆಲ್ಲ ಮುರುಘಾ ಶ್ರೀಗಳ್ಗೆ ಗೊತ್ತಿದೆ ಎಂದು ನಾನು ನಂಬಿದ್ದೇನೆ. ಆದರೂ ಅವರಿಗೆ ನಾಯಿಗಳು ಇದ್ದಕ್ಕಿದ್ದ ಹಾಗೆ ನೆನಪಾದವು. ಪತ್ರಕರ್ತರ ಮೇಲೆ ಕೋಪವೂ ಬಂತು.
ಇದೆಲ್ಲದವುರಗಳ ನಡುವೆಯೂ ನಾನು ಮುರಾಘಾ ಶ್ರೀಗಳಿಗೆ ಪತ್ರಿಕೋದ್ಯಮಿಯಾಗಿ ಕೃತಜ್ನನಾಗಿದ್ದೇನೆ. ಅವರು ನಮ್ಮನ್ನು ಬೇರೆ ಯಾವ ಪ್ರಾಣಿಗಳಿಗೂ ಹೋಲಿಸಿದೇ ನಾಯಿಗೆ ಹೋಲಿಸಿ ನಮ್ಮನ್ನ್ ಉಪಕೃತರನ್ನಾಗಿ ಮಾಡಿದ್ದಾರೆ. ಯಾಕೆಂದರೆ ನನಗೆ ನಾಯಿಗಳೆಂದರೆ ಇಷ್ಟ. ಪತ್ರಿಕೋದ್ಯಮಿಗಳಿಗೆ ತತ್ವ ಮೌಲ್ಯಗಳ ವಿಚಾರದಲ್ಲಿ ನಾಯಿ ನಿಷ್ಟೆ ಇರಬೇಕು ಎಂದು ನಾನು ನಂಬಿದ್ದೇನೆ. ಇಂತಹ ನಿಷ್ಟೆ ಪತ್ರಿಕೋದ್ಯಮಿಗಳಿಗೆ ಇದೆ, ಇಲ್ಲದಿದ್ದರೆ ಆ ನಿಷ್ಟೆ ಬರಲಿ ಎಂದು ಸ್ವಾಮೀಜಿಯವರು ನಮಗೆಲ್ಲ ಆಶೀರ್ವಚನ ನೀಡಿದ್ದಾರೆ.
ಅವರು ನಮ್ಮನ್ನು ಪ್ರಾಣಿಗಳಿಗೆ ಹೋಲಿಸಿದ್ದಾರೆ ಎಂಬ ಕಾರಣಕ್ಕೆ ರಾಜಕಾರಣ ಮಾಡುತ್ತಿರುವ ಸ್ವಾಮೀಜಿಗಳನ್ನು ನಾನು ಪ್ರಾಣಿಗಳಿಗೆ ಹೋಲಿಸಲಾರೆ. ಆ ಮೂಲಕ ಪ್ರಾಣಿಗಳಿಗೆ ಅವಮಾನ ಮಾಡಲಾರೆ. ನನಗೆ ಪ್ರಾಣಿಗಳ ಬಗ್ಗೆ ವಿಶೇಷ ಗೌರವ ಮತ್ತು ಪ್ರೀತಿ ಇದೆ. ನಾನೊಮ್ಮೆ ಸ್ವಾಮೀಜಿಗಳನ್ನು ಪ್ರಾಣಿಗಳಿಗೆ ಹೋಲಿಸಬೇಕಾದ ಅನಿವಾರ್ಯತೆ ಬಂದರೆ, ಹೋಲಿಕೆಗೆ ಯೋಗ್ಯವಾದ ಪ್ರಾಣಿಗಳು ಸಿಗುವುದು ಕಷ್ಟ. ನಾನು ಈ ಸ್ವಾಮೀಜಿಗಳನ್ನು ಬಕ ಧ್ಯಾನ ನಿರತರು ಎಂದು ಕರೆಯಬೇಕಾಗುತ್ತದೆ. ಮೀನು ಸಿಗಲಿ ಎಂದು ಕಣ್ಣು ಮುಚ್ಚಿ ಧ್ಯಾನ ಮಾಡುವ ಪ್ರಾಣಿ ಬಕ ಪಕ್ಷಿ. ಆದರ ಬಕ ಪಕ್ಷಿಯಂತೆ ಧ್ಯಾನ ಮಾಡುವಷ್ಟು ಶಾಂತಿ ಮತ್ತು ಸಹನೆ ನಮ್ಮ ಸ್ವಾಮೀಜಿಗಳಿಗೆ ಇದೆ ಎಂದು ಹೇಳುವುದು ಕಷ್ಟ. ಹೀಗಾಗಿ ಈ ಹೋಲಿಕೆ ಕೂಡ ಸರಿಯಾಗುವಿದಿಲ್ಲ.
ಯಡೀಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಹೋಗುತ್ತಾರೆ ಎಂದುಕೊಂಡಾಗ ಎದ್ದು ನಿಂತ ಈ ಸ್ವಾಮಿ ಗಣದ ಬಗ್ಗೆ ಪಾಪ ಎಂದು ಅನ್ನಿಸುತ್ತದೆ. ಯಾವುದೋ ಹಣ ಆಸ್ತಿಗಾಗಿ ಇವರೆಲ್ಲ ಪುಂಗಿ ಊದುವುದಕ್ಕೆ ಪ್ರಾರಂಭ ಮಾಡಿದರಲ್ಲ ಎಂದು ನೋವಾಗುತ್ತದೆ. ಇಂತಹ ದೇವ ಮಾನವರನ್ನೆಲ್ಲ ಇಂತಹ ದುಸ್ಥಿಗೆ ತಳ್ಳಿದ ಇಂದಿನ ರಾಜಕಾರಣ, ಬಿಜೆಪಿ ಸರ್ಕಾರ ಮತ್ತು ಯಡಿಯೂರಪ್ಪ ಅವರ ಬಗ್ಗೆ ಬೇಸರವಾಗುತ್ತದೆ.

Saturday, December 11, 2010

ನೆನಪುಗಳ ಜಾಡು ಹಿಡಿದು ಬೆಳಗಾವಿಯಲ್ಲಿ ಸುತ್ತಿದೆ.....!

ನೆನಪುಗಳು ವರವೋ ಶಾಪವೋ ? ಈ ಪ್ರಶ್ನೆಗೆ ಹೀಗೆ ಎಂದು ಉತ್ತರ ನೀಡುವುದು ಕಷ್ಟ. ಕೆಲವು ನೆನಪುಗಳು ನಮ್ಮನ್ನು ಸದಾ ಕಾಡುತ್ತಲೇ ಇರುತ್ತವೆ. ಅವುಗಳಿಂದ ಬಿಡುಗಡೆ ಪಡೆಯಲು ನಾವು ಯತ್ನ ನಡೆಸುತ್ತಲೇ ಇರುತ್ತೇವೆ. ಆದರೆ ಅದು ಅಷ್ಟು ಸುಲಭವಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಇಂಥಹ ನೆನಪುಗಳು ನಮಗೆ ಬೇಡ ಎಂದು ಅಂದುಕೊಂಡರೂ ಆ ನೆನಪುಗಳು ಮನಸ್ಸಿನ ಗೋಡೌನ್ ನಿಂದ ಹೊರಕ್ಕೆ ಬಂದಾಗ ನಮ್ಮ ಮನಸ್ಸು ಸಂತೋಷ ಪಡುತ್ತಿರುತ್ತದೆ.ಹೌದು ನಮಗೆ ನೆನಪುಗಳು ಬೇಕು. ನೆನಪುಗಳ ಜೊತೆ ಬದುಕುತ್ತ, ಅವುಗಳ ಜೊತೆ ಅಟವಾಡುತ್ತ, ಕೀಟಲೆ ಮಾಡುತ್ತ ವರ್ತಮಾನವನ್ನು ಎದುರಿಸಿದರೆ ಬದುಕಿನ ಚಂದವೇ ಬೇರೆ. ಬಹಳಷ್ಟು ಜನ ನಮಗೆ ಇಂತ ನೆನಪುಗಳು ಬೇಡ ಎಂದು ಹೇಳುತ್ತಿರುತ್ತಾರೆ. ಇದು ಪಲಾಯನವಾದ. ನೆನಪುಗಳಿಂದ ಬಿಡುಗಡೆ ಪಡೆಯುವ ಯತ್ನವೇ ಸರಿಯಲ್ಲ.
ನಾನು ಇದನ್ನೆಲ್ಲ ಹೇಳುವುದಕ್ಕೆ ಬಹು ಮುಖ್ಯ ಕಾರಣ ನಾನು ಕಳೆದ ಎರಡು ಮೂರು ದಿನ ಬೆಳಗಾವಿಯಲ್ಲಿ ಇದ್ದುದು. ಬೆಳಗಾವಿ ನಾನು ಓದಿದ ಊರು.ಅಲ್ಲಿಯೇ ನನ್ನ ಕಾಲೇಜು ಜೀವನ ರೂಪ ಪಡೆದಿದ್ದು. ನಾನು ಬೆಳಗಾವಿಗೆ ಹೋಗಿದ್ದು ಒಂದು ವಿಚಿತ್ರ ಪರಿಸ್ಥಿತಿಯಲ್ಲಿ. ಆಗ ನನ್ನ ಹೋರಾಟಗಾರನ ಮನಸ್ಥಿತಿ ತುಂಬಾ ಪ್ರಬಲವಾಗಿತ್ತು. ಪ್ರತಿಯೊಂದು ವಿಚಾರಕ್ಕೂ ಜಗಳ ತರಲೆ. ನನ್ನಪ್ಪ ಮಗ ಊರಿನಲ್ಲಿ ಇದ್ದರೆ ಉದ್ದಾರವಾಗುವುದಿಲ್ಲ ಎಂದು ಬೆಳಗಾವಿಗೆ ಕಳುಹಿಸುವ ತೀರ್ಮಾನ ಕೈಗೊಂಡ. ಇದಕ್ಕೆ ಕಾರಣ ಬೆಳಗಾವಿ ಗೋಗಟೆ ಕಾಲೇಜಿನ ಪ್ರಿನ್ಸಿಪಾಲ್ ಡಿ ಏ ಹೆಗಡೆ ಅಂತ. ಅವರು ಅಪ್ಪನಿಗೆ ತುಂಬಾ ಪರಿಚಿತರು. ಅವರ ನಿಗಾದಲ್ಲಿ ಮಗ ಉದ್ದಾರವಾಗುತ್ತಾನೆ ಎಂಬುದು ಅಪ್ಪನ ನಂಬಿಕೆ.
ನಾನು ಬೆಳಗಾವಿಯಲ್ಲಿ ಇದ್ದುದು ಒಬ್ಬ ಆಂಗ್ಲೋ ಇಂಡಿಯನ್ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ. ನನ್ನ ಜೊತೆಗೆ ಅಪ್ಪಿಕೋ ಚಳವಳಿಯ ಮೂಲಕ ಹೆಸರು ಮಾಡಿದ ಪಾಂಡುರಂಗ ಹೆಗದೆ ಹಾಗೂ ಇಬ್ಬರು ಆಸ್ಟ್ರೇಲಿಯಾದ ಹುಡುಗರಿದ್ದರು.
ಮನೆಯ ಯಜಮಾನ್ತಿಯ ಹೆಸರು ಮಿಸೆಸ್ ಫೆರೆರಾ ಅಂತ ನೆನಪು. ಆಕೆಯ ಒಬ್ಬನೇ ಮಗ ಜ್ಯೂಡಿಿಯರಿಯಲ್ಲಿ ಕೆಲಸ ಮಾಡುತ್ತಿದ್ದ. ಸೊಸೆ ತುಂಬಾ ಸುಂದರಿ. ಅವರಿಗೆ ಒಬ್ಬನೇ ಮಗ.ಯಾವುದೋ ಪರ್ವತವೊಂದು ನಡೆದು ಬಂದಂತೆ ಕಾಣುತ್ತಿದ್ದ ಮಿಸ್ ಫೇರೆರಾ ತುಂಬಾ ಒಳ್ಳೆಯ ಹೆಂಗಸು. ಆಕೆ ಏಷ್ಟು ದಪ್ಪಗಿದ್ದಳೆಂದರೆ, ಆಕೆ ಧರಿಸುತ್ತಿದ್ದ ಸ್ಕರ್ಟ್ ಹೊಟ್ಟೆಯ ಭಾಗವನ್ನು ಮುಚ್ಚುವುದಕ್ಕೆ ತೀವ್ರ ಯತ್ನ ನಡೆಸುತ್ತಿರುವಂತೆ ಕಾಣುತ್ತಿತ್ತು. ಈ ಹೆಂಗಸು ನನಗೆ ದೈರ್ಯವಾಗಿ ಇಂಗ್ಲೀಷ್ ಮಾತನಾಡುವುದನ್ನು ಕಲಿಸಿದಳು. ಯಾಕೆಂದರೆ ಅವಳಿಗೆ ಇಂಗ್ಲೀಷ್ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ.
ಒಮ್ಮೆ ನಾನು ಜ್ವರ ಬಂದು ಮಲಗಿದ್ದೆ. ನಾನು ಮಲಗಿದ್ದನ್ನು ಕಂಡ ಆಕೆ ಬಂದು ವಿಚಾರಿಸಿದಳು. ನಂತರ ಒಳಗೆ ಹೋಗಿ ಬ್ರಾಂಡಿ ಬಾಟಲ್ ತಂದು ಅದನ್ನು ಬಿಸಿ ನೀರಿನಲ್ಲಿ ಬೆರಸಿ ಕುಡಿಸಿದಳು. ಮರುದಿನ ಜ್ವರ ಮಾಯವಾಯಿತು. ಆದರೆ ಇದಾದ ನಂತರ ಆಗಾಗ ನಾನು ಜ್ವರ ಬಂದಂತೆ ಮಲುಗುವುದು ಫೇರೆರಾ ಬಂಡು ಬ್ರಾಂಡಿ ಕೊಡುವುದು ಸಾಮಾನ್ಯವಾಯಿತು. ನನಗೆ ಕುಡಿಯಬೇಕು ಅನ್ನಿಸಿದಾಗಲೆಲ್ಲ ಜ್ವರ ಬರುವುದು ಸಾಮಾನ್ಯವಾಯಿತು.
ಪ್ರತಿಯೊಬ್ಬ ಗಂಡಸು ಅಮ್ಮನನ್ನು ಹುಡುಕುತ್ತಿರುತ್ತಾನಂತೆ. ಆತ ತನ್ನ ಹೆಂಡತಿಯಲ್ಲಿ ಕಾಣಲು ಬಯಸುವುದು ಅಮ್ಮನನ್ನೇ. ಯಾಕೆಂದರೆ ನಾವೆಲ್ಲ ಕಣ್ಣು ಬಿಟ್ಟ ತಕ್ಷಣ ಮೊದಲು ನೋಡುವುದು ಅಮ್ಮನನ್ನೇ. ಈ ಫೆರೆರಾ ನನಗೆ ಒಂದು ರೀತಿಯಲ್ಲಿ ಅಮ್ಮನಾಗಿದ್ದಳು. ನಾನು ಈ ಬಾರಿ ಬೆಳಗಾವಿಗೆ ಹೋದಾಗ ಈ ಅಮ್ಮನನ್ನು ಹುಡುಕಿಕೊಂಡು ಹೊರಟೆ. ಆದರೆ ಅವರ ಕುಟುಂಬ ಇರಲಿಲ್ಲ. ಮನೆಯನ್ನು ಬಾಡಿಗೆಗೆ ಕೊಟ್ಟು ಅವರು ಗೋವಾಕ್ಕೆ ಶಿಫ್ಟ್ ಆಗಿದ್ದರು.
ಬೆಳಗಾವಿ ಅಂದ ತಕ್ಷಣ ನನಗೆ ಇಂತಹ ನೋರಾರು ನೆನಪುಗಳು ಬಂದು ಡಿಕ್ಕಿ ಹೊಡೆಯುತ್ತವೆ. ನಾನು ಬೆಳಗಾವಿಯಲ್ಲಿ ಓದಿತ್ತಿದ್ದ ದಿನಗಳಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವಿನ ವಿರಸ ಜೋರಾಗಿತ್ತು. ನಾನು ಓದುತ್ತಿದ್ದುದು ಗೋಗಟೆ ಕಾಲೇಜಿನಲ್ಲಿ.ಗೋಗಟೆ ಒಬ್ಬ ಉದ್ಯಮಿ. ಆದರೆ ಮರಾಠಿಗ. ಆತ ಯಶವಂತರಾವ್ ಚೆವಾಣ್ ಎಂಬ ಹಿರಿಯ ರಾಜಕಾರಣಿಯ ಖಾಸಾ ದೋಸ್ತ. ನಾನು ಕನ್ನಡ ಹೋರಾಟಗಾರರ ಜೊತೆ ಸೇರಿಕೊಂಡು ಗೋಗಟೆಯ ಪ್ರತಿಮೆಯನ್ನು ಕೆಡವುವ ಸಂಚನ್ನು ಮಾಡಿದ್ದೆವು. ಕೊನೆಗೆ ಧೈರ್ಯ ಬರೆದು ಸುಮ್ಮನಾಗಿದ್ದೆವು.
ಇಂಥಹ ಬೆಳಗಾವಿಗೆ ಈ ಬಾರಿ ನಾನು ಹೋಗಿದ್ದು ಬೇರೆ ಉದ್ದೇಶದಿಂದ. ಸುಮ್ಮನೆ ಒಂದೆರಡು ದಿನ ಬೆಂಗಳೂರಿನಿಂದ ಹೊರಕ್ಕೆಇರಬೇಕಾಗಿತ್ತು.ಅದಕ್ಕಾಗಿ ಬೆಳಗಾವಿಗೆ ಹೊರಟು ಬಿಟ್ಟೆ.
ಬೆಳಗಾವಿಯಿಂದ ನಾನು ಹೋಗಿದ್ದು ಗೋಕಾಕಕ್ಕೆ. ಗೋಕಾಕದ ಜಾರಕಿಹೊಳೆ ಸಹೋದರರು ನನಗೆ ಸುಮಾರು ೨೦ ವರ್ಷಗಳ ಸ್ನೇಹಿತರು. ಅವರಿಗೆ ನನ್ನ ಬಗ್ಗೆ ಪ್ರೀತಿ ಮತ್ತು ಗೌರವ. ಗೋಕಾಕಕ್ಕೆ ಹೋದವ ಅವರ ಸತೀಶ್ ಶುಗರ್ಸ್ ಗೆ ಭೇಟಿ ನೀಡಿದೆ. ಸತೀಶ್ ಅವರ ಮನೆಯಲ್ಲಿ ಅವಲಕ್ಕಿ ಚೂಡಾ ತಿಂದೆ. ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಅವರ ಜೊತೆ ಹರಟೆ ಹೊಡೆದು ಬೆಳಗಾವಿಗೆ ಹಿಂತಿರುಗಿದೆ. ಬೆಳಗಾವಿಯ ಹೊಟೆಲ್ ನಲ್ಲಿ ಕುಳಿತಾಗ ಮತ್ತೆ ನನಗೆ ಹಳೆಯ ನೆನಪುಗಳು ಕಾಡತೊಡಗಿದವು. ನಾನು ಬೆಳಗಾವಿಗೆ ಬಂದ ತಕ್ಷಣ ಕಲಿತ ಮೊದಲ ಮರಾಠಿ ಭಾಷೆಯ ಸಾಲು; ಏ ಮುಲಗಿ ಪಾರ್ ಸುಂದರ್ ಆಯೇ...ಅಂದರೆ ಈ ಹುಡುಗಿ ತುಂಬಾ ಸುಂದರವಾಗಿದ್ದಾಳೆ.
ಈ ಬೆಳಗಾವಿ ಕಾಡು ಮನುಷ್ಯನಂತಿದ್ದ ನನ್ನನ್ನು ನಾಗರಿಕನನ್ನಾಗಿ ಮಾಡಿತ್ತು. ಮಾತನಾಡಲು ಹಿಂಜರಿಯುತ್ತಿದ್ದವನಿಗೆ ಮಾತನಾಡಲು ಕಲಿಸಿತ್ತು. ಕುಡಿತ, ಪ್ರೀತಿ, ಪ್ರೇಮ, ಜಗಳ ಹೊರಾಟ ಎಲ್ಲವೂ ಪ್ರಾರಂಭವಾಗಿದ್ದು ಇಲ್ಲಿಯೇ. ನಾವಿದ್ದ ಶ್ರೀಮತಿ ಫೆರೆರಾ ಅವರ ಮನೆಯ ಎದುರು ಲಕ್ಷ್ಮಿ ಬಿಲ್ಡಿಂಗ್ ಎಂಬ ಕಟ್ಟಡವೊಂದಿತ್ತು. ಈ ಕಟ್ಟದಲ್ಲಿ ಉತ್ತರ ಕರ್ನಾಟಕದ ಕಾಲೇಜು ಹುಡುಗರು ರೂಂ ಮಾಡಿಕೊಂಡು ವಾಸವಾಗಿದ್ದರು. ಬಹುತೇಕ ಹುಡುಗರು ಹಣವಂತರು. ಮೋಜು ಮಸ್ತಿ ಅವರ ಬದುಕಿನ ಭಾಗವಾಗಿತ್ತು. ಭಾನುವಾರವಂತೂ ಬೆಳಿಗಿನಿಂದಲೇ ಅಲ್ಲಿ ಗುಂಡಿನ ಸಮಾರಾಧನೆ.
ಅದೊಂದು ಭಾನುವಾರ. ಶ್ರೀಮತಿ ಘೆರೆರಾ ಅವರ ಸೊಸೆ ಮನೆಯ ಮುಂದೆ ಕುಳಿತು ಕೋಳಿ ಮಾಂಸವನ್ನು ಕೊಯ್ದು ಅಡುಗೆಗೆ ಸಿದ್ಧ ಮಾಡುತ್ತಿದ್ದಳು. ಈಕೆ ನಾನು ಮೊದಲು ಹೇಳಿದಂತೆ ತುಂಬಾ ಸುಂದರಿ. ನಿಜವಾದ ಆಂಗ್ಲೋ ಇಂಡಿಯನ್. ಭಾರತ ಮತ್ತು ಬ್ರಿಟೀಷರ ಬಣ್ಣ ಸೇರಿ ಆಕೆಯ ಬಣ್ಣ ಹೆಚ್ಚು ಚಿತ್ತಾಕರ್ಷಕವಾಗಿತ್ತು. ಈ ಲಕ್ಖ್ಶಿ ಬಿಲ್ಡಿಂಗಿನ ಹುಡುಗರು ಒಮ್ಮೆಲೆ ಫೇರೆರಾಳ ಮನೆಯ ಬಳಿ ಬಂದರು. ನೋಡು ನೋಡುತ್ತಿದ್ದಂತೆ ಈ ಸುಂದರ ಸೊಸೆಯನ್ನು ಹೊತ್ತುಕೊಂಡು ಹೊರಟೇ ಬಿಟ್ಟರು. ಅತ್ತೆ, ಮಿಸೆಸ್ ಫೇರೆರಾ ಸೇವ್ ಅಸ್ ಎಂದು ಬೊಬ್ಬೆ ಹೊಡೆಯತೊಡಗಿದಳು. ಯಾರಿಗೆ ಏನು ಮಾಡಬೇಕು ಎಂದು ತಿಳಿಯಲಾಗದ ಸ್ಥಿತಿ.
ನನಗೆ ಆಗ ನೆನಪಾದವರು ಎಸ್. ಜಿ. ಹೆಗಡೆ ಎಂಬ ನಮ್ಮೂರಿನ ಪೋಲೀಸ್ ಇನಸ್ಪೇಕ್ಟರ್. ಅವರು ಬೆಳಗಾವಿಯ ರೈಲ್ವೆ ನಿಲ್ದಾಣದ ಪೋಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಪೊಲೀಸ್ ಠಾಣೆ ಮಿಸೆಸ್ ಪೇರೆರಾಳ ಮನೆಯಿಂದ ಐದು ನಿಮಿಷದ ದಾರಿ. ನಾನು ಅವರಿಗೆ ಫೋನ್ ಮಾಡಿದೆ. ಒಂದೆರಡು ನಿಮಿಷದಲ್ಲಿ ಹೆಗಡೆ ತಮ್ಮ ಪಡೆಯೂಂದಿಗೆ ಹಾಜರಾದರು. ಹುಡುಗರಿಗೆ ಬಡಿದು ಫೆರೆರಾಳ ಸೊಸೆಯನ್ನು ಬಿಡಿಸಿ ತಂದರು. ಜೊತೆಗೆ ಹುಡುಗರನ್ನು ಠಾಣೆಗೆ ಒಯ್ದು ಬೆಂಡೆತ್ತಿದರು.
ಇದಾದ ಮೇಲೆ ಮಿಸ್ ಫೆರೆರಾಳ ಮನೆಯಲ್ಲಿ ನನ್ನ ಗೌರವ ಹೆಚ್ಚಿತು. ನಾನು ಅವರ ಮನೆಯ ಮಗನಂತಾದೆ. ಆಕೆ ನಾನು ನೀಡಬೇಕಾದ ಮಾಸಿಕ ಬಾಡಿಗೆಯನ್ನು ಕೇಳುತ್ತಿರಲಿಲ್ಲ. ನನ್ನ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ಆ ಮಹಾತಾಯಿ ನನ್ನ ಆರೋಗ್ಯದ ಬಗ್ಗೆ ಅಮ್ಮನಂತೆ ಕಾಳಜಿ ಒಹಿಸುತ್ತಿದ್ದಳು. ನಾನು ಸಸ್ಯಾಹಾರಿ ಆಗಿದ್ದರಿಂದ ನನಗೆ ಪ್ರತ್ಯೇಕ ಅಡುಗೆ ಮಾಡತೊಡಗಿದಳು. ನನಗೆ ಗೊತ್ತಿಲ್ಲದಂತೆ ನಾನು ಊರಿನಲ್ಲಿ ಬಿಟ್ಟು ಬಂದಿದ್ದ ನನ್ನ ಅಮ್ಮ ನನಗೆ ಅಲ್ಲಿ ಸಿಕ್ಕಿಬಿಟ್ಟಿದ್ದಳು.
ಹೊಟೆಲ್ ರೂಮಿನಲ್ಲಿ ಕುಳಿತು ನನ್ನೊಳಗೆ ಇರುವ ಬೆಳಗಾವಿಗಾಗಿ ನಾನು ಮತ್ತೆ ಮತ್ತೆ ಹುಡುಕತೊಡಗಿದೆ. ಮನುಷ್ಯ ಸಂಬಂಧಗಳ ನಿಗೂಢತೆ, ಅದು ಪಡೆದುಕೊಳ್ಳುವ ಆಯಾಮ ನನ್ನಲ್ಲಿ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿತ್ತು.

Monday, December 6, 2010

ನಾನು ನನ್ನ ಗೆಟಪ್ಪು ಮತ್ತು ಇಂದಿನ ಆಧುನಿಕ ಜಗತ್ತು....!

ನಾವೆಲ್ಲ ಡಾ. ರಾಜಕುಮಾರ್, ರಾಜೇಶ್ ಖನ್ನಾ, ಅಮಿತಾಬ್ ಬಚ್ಚನ್ ಹಾಗೂ ಯಕ್ಷಗಾನ ಬಯಲಾಟವನ್ನು ನೋಡಿ ಬೆಳೆದವರು. ನಮಗೆ ಅಂದರೆ ನನ್ನ ತಲೆ ಮಾರಿನವರಿಗೆ ಇವರೇ ಒಂದು ರೀತಿಯಲ್ಲಿ ಆದರ್ಶವಾಗಿದ್ದರು. ರಾಜೇಶ್ ಖನ್ನಾ ನವಿರಾಗಿ ಮಾತನಾಡುವ ರೀತಿ ಹೆಚ್ಚು ಇಷ್ಟವಾಗುತ್ತಿತ್ತು. ಆತನ ಪ್ರೀತಿ ನಿವೇದನೆಯ ವಿಧಾನ ಮನಸ್ಸಿಗೆ ತಟ್ಟುತ್ತಿತ್ತು. ಪ್ರೀತಿ ನಿವೇದನೆ ಮಾಡುವ ರೀತಿ ಇದೇ ಎಂದು ನಾನು ಬಲವಾಗಿ ನಂಬಿದ್ದ ಕಾಲ ಅದು. ಆದರೆ ಹೈಸ್ಕೂಲಿಗೆ ಹೋಗುತ್ತಿದ್ದ ಆ ದಿನಗಳಲ್ಲಿ ನನಗೆ ಆಗತಾನೇ ಮೀಸೆ ಮೂಡುತ್ತಿತ್ತು. ಆಗ ಬಂದಿದ್ದು ವಿಷ್ಣುವರ್ಧನ ಅಭಿನಯದ ನಾಗರಹಾವು. ಈ ಸಿನೆಮಾ ಪ್ರೀತಿಯ ಬಗೆಗಿನ ನನ್ನ ಕಲ್ಪನೆಯನ್ನು ಬದಲಿಸಿಬಿಟ್ಟಿತು. ಹುಡುಗಿಯರನ್ನು ಪ್ರೀತಿ ಮಾಡಲು ರಾಮಚಾರಿಯ ನಡವಳಿಗೆ ಮನಸ್ಥಿತಿ ಬೇಕು ಎಂದು ನನ್ನ ನಂಬಿಕೆಯಲ್ಲಿ ಸ್ವಲ್ಪ ಮಾರ್ಪಾಟು ಮಾಡಿಕೊಂಡೆ. ಎಲ್ಲರ ಜೊತೆ ನಗುನಗುತ್ತ ಮಾತನಾಡುತ್ತಿದ್ದ ನಾನು ನಗುವುದನ್ನು ಸ್ವಲ್ಪ ಕಡಿಮೆ ಮಾಡಿದೆ. ಸಿಟ್ಟು ಸಿಡುಕು ಜಗಳ ಎಲ್ಲವೂ ನನ್ನ ವ್ಯಕ್ತಿತ್ವದಲ್ಲಿ ಸೇರಿಕೊಂಡವು. ಆದರೆ ನನ್ನ ಈ ಬದಲಾದ ವರ್ತನೆಯಿಂದ ಯಾವ ಬದಲಾವಣೆಯೂ ಅಗಲಿಲ್ಲ. ಯಾವ ಹುಡುಗಿಯೂ ಈ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನನಗೆ ಮಾರ್ಗರೇಟ್ ಆಗಲೀ, ಅಲಮೇಲು ಆಗಲೀ ಸಿಗಲಿಲ್ಲ.
ಆಗ ನನಗೆ ಯಾಕೋ ಈ ರಾಮಾಚಾರಿಯ ಗೆಟ್ ಅಪ್ ಪ್ರೀತಿ ಪ್ರೇಮವನ್ನು ಕೊಡುವುದಿಲ್ಲ ಎಂದು ಅನಿಸಲು ಪ್ರಾರಂಭವಾಯಿತು. ಆಗ ಮತ್ತೆ ನಾನು ರಾಜೇಶ್ ಖನ್ನಾನತ್ತ ಹಿಂತಿರುಗಿದೆ. ರಾಜೇಶ್ ಖನ್ನಾ ಹಾಕುತ್ತಿದ್ದ ಕುತ್ತಿಗೆ ಮುಚ್ಚುವ ಶರ್ಟ್ ಹೊಲಿಸಲು ಊರಿನ ಎಲ್ಲ ಟೈಲರ್ಸ್ ಹತ್ತಿರ ಓಡಾಡಿದೆ. ಕೊನೆಗೆ ಒಬ್ಬನನ್ನು ರಾಜೇಶ್ ಖನ್ನಾನ ಹಾಥಿ ಮೇರೆ ಸಾಥಿ ಸಿನೇಮಾಕ್ಕೆ ನನ್ನ ಖರ್ಚಿನಲ್ಲಿ ಕರೆದೊಯ್ದೆ. ಆತ ಸಿನೇಮಾ ನೋಡಿದವ ಅದೇ ರೀತಿಯ ಶರ್ಟ್ ಹೊಲಿದು ಕೊಟ್ಟ. ಆದರೆ ನನ್ನ ಊರಿನ ಜನ ಇದನ್ನು ನೋಡಿ ನಕ್ಕರು. ಊರಿನ ಪರಿಸರಕ್ಕೂ ಈ ರೀತಿಯ ಉಡುಪಿಗೂ ಹೊಂದಾಣಿಕೆ ಆಗುತ್ತಿರಲಿಲ್ಲ. ಅಷ್ಟರಲ್ಲಿ ಹೈಸ್ಕೂಲು ಮುಗಿಸಿ ಕಾಲೇಜಿಗೆ ಬಂದಿದ್ದೆ. ಕಾಲೇಜಿಗೆ ಹೋಗುವಾಗಲೇ ಉಳಿದವರಿಗಿಂತ ಬೇರೆಯಾಗಿರಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೆ. ಹೀಗಾಗಿ ನನ್ನ ಉಡುಪನ್ನು ಖಾದಿಗೆ ಬದಲಾಯಿಸಿ ಬಿಟ್ಟೆ. ಖಾದಿ ನಮ್ಮ ಮನೆಯ ಉಡುಪು. ನನ್ನ ಅಪ್ಪನಾಗಲೀ, ಅಜ್ಜನಾಗಲೀ ಕಾದಿಯನ್ನು ಬಿಟ್ಟು ಬೇರೆ ಉದುಪನ್ನು ಹಾಕುದವರೇ ಅಲ್ಲ. ಜೊತೆಗೆ ನಮ್ಮದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಎಲ್ಲವನ್ನು ಕಳೆದುಕೊಂಡ ಕುಟುಂಬ. ಹತ್ತಾರು ಎಕರೆ ಅಡಿಕೆ ತೋಟವನ್ನು ಕರ ನಿರಾಕರಣ ಚಳವಳಿಯಲ್ಲಿ ಕಳೆದುಕೊಂಡರೂ ಕಾಂಗ್ರೆಸ್ ಮೋಹವನ್ನು ಬಿಡದ ಕುಟುಂಬ. ಸ್ವಾತಂತ್ರ್ಯ ಬಂದ ಮೇಲೂ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುತ್ತ ಬಂದ ಕುಟುಂಬ.
ನಾನು ಖಾದಿ ಪ್ಯಾಂಟು ಮತ್ತು ಶರ್ಟ್ ಧರಿಸಿ ಕಾಲೇಜಿಗೆ ಹೋಗಲು ಪ್ರಾರಂಭಿಸಿದೆ. ಅಷ್ಟರಲ್ಲಿ ಸಮಾಜವಾದಿ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ ನನ್ನ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದ್ದವು. ಚಂದ್ರಶೇಖರ್ ಪಾಟೀಲ್, ದೇವಯ್ಯ ಹರವೆ, ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ ಮೊದಲಾದವರ ಸಂಪರ್ಕದಿಂದ ನನ್ನ ಡ್ರೆಸ್ ಕೋಡ್ ಬದಲಿಸಿದೆ. ಖಾದಿಯನ್ನು ಬಿಟ್ಟು ನಾರ್ಮಲ್ ಬಟ್ಟೆಯನ್ನು ಧರಿಸಲು ಪ್ರಾರಂಭಿಸಿದೆ. ಜೊತೆಗೆ ಕಾಂಗ್ರೆಸ್ ವಿರೋಧಿ ಮನಸ್ಥಿತಿಯೂ ಬಲವಾಗತೊಡಗಿತು. ಅಪ್ಪ ಅಜ್ಜನ ಜೊತೆ ಕಾಂಗ್ರೆಸ್ ಪಕ್ಷವನ್ನು ಹಿಯಾಳಿಸಲು ಪ್ರಾರಂಭಿಸಿದೆ. ಇದು ಮನೆಯಲ್ಲಿ ದೊಡ್ಡ ಜಗಳಕ್ಕೆ ಕಾರಣವಾಗಿ ಬಿಟ್ಟಿತು. ಅಜ್ಜ ಕಾಂಗ್ರೆಸ್ ಪಕ್ಷವನ್ನು ಬೈದಾಗಲೆಲ್ಲ ರುದ್ರಾವತಾರ ತಾಳಿ ನನ್ನ ಮೇಲೆ ಏರಿ ಬರುತ್ತಿದ್ದ. ಕೆಲವೊಮ್ಮೆ ನನ್ನ ಕಾಂಗ್ರೆಸ್ ವಿರೋಧಿ ಮಾತುಗಳನ್ನು ಕೇಳಿದಾಗ ಪೆಟ್ಟು ನೀಡುತ್ತಿದ್ದ. ಕಾಂಗ್ರೆಸ್ ಪಕ್ಷ ಮತ್ತು ಶ್ರೀಮತಿ ಇಂದಿರಾ ಗಾಂಧಿಯವರನ್ನು ಟೀಕಿಸಿ ಅಜ್ಜನ ಕೈಯಲ್ಲಿ ಹೊಡೆತ ತಿನ್ನುವುದು ಸಾಮಾನ್ಯವಾಯಿತು.
ಆದರೆ ಒಬ್ಬ ಕ್ರಾಂತಿಕಾರಿಯಾಗಲು ನಾನು ತೀರ್ಮಾನಿಸಿ ಆಗಿತ್ತು. ಹೀಗಾಗಿ ಬಟ್ಟೆ ಧಿರಸಿನ ಬಗ್ಗೆ ಲಕ್ಷ ನೀಡುವುದು ಕಡಿಮೆಯಾಯಿತು.ಕ್ರಾಂತಿ ಮಾಡಲು ಹೊರಟವರು ಪ್ರೀತಿಯ ಬಂಧನದಲ್ಲಿ ಬೀಳ ಬಾರದು ಎಂಬ ತೀರ್ಮಾನಕ್ಕೂ ನಾನು ಬಂದಿದ್ದೆ. ಹೀಗಾಗಿ ಪ್ರೀತಿಯನ್ನು ಬಿಟ್ಟು ಊರಿನಲ್ಲಿ ಚಳವಳಿ ಮಾಡಲು ಮುಂದಾದೆ. ನಾನು ಮೊದಲು ಚಳವಳಿ ಪ್ರಾರಂಭಿಸಿದ್ದು ರಾಮಚಂದ್ರಾ ಪುರದ ಸ್ವಾಮೀಜಿಯ ವಿರುದ್ಧ. ಇದು ಉರಿನಲ್ಲಿ ದೊಡ್ ಗಲಾಟೆಗೆ ಕಾರಣವಾಯಿತು. ಹವ್ಯಕ ಸಮಾಜದಿಂದ ನನಗೆ ಭಹಿಷ್ಕಾರ ಹಾಕಲಾಯಿತು. ಈ ಗಲಾಟೆ ಹೊಡೆದಾಟದ ವರೆಗೆ ಹೋದಾಗ ನಾನು ಊರು ಬಿಡಲು ನಿರ್ಧರಿಸಿದೆ. ಬೆಂಗಳೂರಿಗೆ ಬಂದೆ. ಈ ಕಥೆಯನ್ನು ಇನ್ನೊಮ್ಮೆ ಹೇಳುತ್ತೇನೆ.
ಬೆಂಗಳೂರಿಗೆ ಬಂದ ಮೇಲೆ ಪಾನ ಬೀಡಾಕ್ಕು ಕಾಸಿರಲಿಲ್ಲ. ಹೀಗಾಗಿ ಬಟ್ಟೆಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಸ್ಥಿತಿ ಇರಲಿಲ್ಲ. ಆಗ ಇದ್ದುದು ಒಂದೆ ಪ್ಯಾಂಟು ಶರ್ಟು. ಜೊತೆಗೆ ಒಂದು ಹಸಿರು ಜುಬ್ಬಾ ಇತ್ತು. ಈ ಜುಬ್ಬಾದ ಮೇಲೆ ನಾನು ಪಾನ್ ಉಗಿದುಕೊಂಡು ದೊಡ್ಡ ಕಲೆಯಾಗಿತ್ತು. ಅದು ಎಷ್ಟು ತೊಳೆದರೂ ಹೋಗುತ್ತಿರಲಿಲ್ಲ. ನಾನು ಉಷಾಳನ್ನು ಪ್ರೀತಿಸುತ್ತಿದ್ದ ಆ ದಿನಗಳಲ್ಲಿ ಅವಳೂ ಈ ಕಲೆಯ ಬಗ್ಗೆ ಕೇಳಿದಾಗ ಇದು ಕಲೆಯಲ್ಲ ಜುಬ್ಬಾದ ಡಿಸೈನ್ ಎಂದು ಹೇಳಿ ನಂಬಿಸಿ ಬಿಟ್ಟಿದ್ದೆ. ಬಹಳಷ್ಟು ನನ್ನ ಸ್ನೇಹಿತರು ನನ್ನ ಜುಬ್ಬಾದ ಮೇಲಾಗಿದ್ದ ಕಲೆಯನ್ನು ಡಿಸೈನ್ ಎಂದೇ ನಂಬಿದ್ದರು. ಆದರೆ ಆ ದಿನಗಳಲ್ಲಿ ಬಟ್ಟೆಯ ಬಗ್ಗೆ ಅಂತಹ ಆಸಕ್ತಿ ಉಳಿದಿರಲಿಲ್ಲ. ಜೊತೆಗೆ ಒಳ್ಳೆಯ ಬಟ್ಟೆ ಹಾಕಿಕೊಂಡರೆ ಹುಡುಗಿಯರು ಆಕರ್ಷಿತರಾಗುತ್ತಾರೆ ಎಂಬುದನ್ನು ನಾನು ನಂಬುತ್ತಿರಲಿಲ್ಲ. ಬಟ್ಟೆಯ ಮೇಲೆ ಆಕರ್ಷಿತರಾಗುವವರು ವ್ಯಕ್ತಿತ್ವದ ಬಗ್ಗೆ ಏನನ್ನೂ ತಿಳಿದುಕೊಂಡಿರುವುದಿಲ್ಲ. ಇದರಿಂದ ಯಾವ ಪ್ರಯೋಜನವೂ ಆಗದು ಎಂದು ನಾನು ನಂಬಿದ್ದೆ.
ಆದರೆ ಬಟ್ಟೆಯ ಮಹತ್ವ ನನಗೆ ತಿಳಿದಿದ್ದು ನಾನು ಜೀ ನ್ಯೂಸ್ ನ ಬೆಂಗಳೂರು ಬ್ಯುರೋದ ಮುಖ್ಯಸ್ಥನಾದ ಮೇಲೆ. ಒಮ್ಮೆ ಜೀ ಟೀವಿಯ ಮುಖ್ಯಸ್ಥ ಸುಭಾಷ್ ಚಂದ್ರ ಅವರ ಜೊತೆ ಮೀಟಿಂಗ್ ವ್ಯವಸ್ಥೆಯಾಗಿತ್ತು. ನಾನು ಸಭೆಗೆ ಹೋದಾಗ ಸುಭಾಷ್ ಚಂದ್ರ ಅವರ ಸೆಕ್ರೇಟರಿ ನನ್ನ ಕಾಲನ್ನು ಮತ್ತೊಮ್ಮೆ ನನ್ನನ್ನು ನೋಡುತ್ತಿದ್ದಳು. ಅವಳು ಯಾಕೆ ಹೀಗೆ ನೋಡುತ್ತಿದ್ದಾಳೆ ಎಂಬುದು ಆಗ ನನಗೆ ತಿಳಿಯಲಿಲ್ಲ. ಸಭೆ ಮುಗಿಸಿ ಹೊರಕ್ಕೆ ಬಂದಾಗ ಆಕೆ ನನ್ನನ್ನು ಕರೆದಳು. ಇನ್ನು ಮೇಲೆ ಚೆರಮೆನ್ ಮೀಟಿಂಗ್ ಗೆ ಬರುವಾಗ ಸೂಟ್ ಧರಿಸಿ ಬರಬೇಕು ಎಂದು ಸೂಚಿಸಿದಳು. ನಾನು ನನ್ನ ಮದುವೆಯಲ್ಲೂ ಸೂಟ್ ಹಾಕಿದವನಲ್ಲ. ಶೂ ಧರಿಸಿದವನಲ್ಲ. ಶೂ ಧರಿಸಿದರೆ ನನಗೆ ಯಾರೋ ನನ್ನ ಕಾಲು ಹಿಡಿದು ಎಳೆದಂತಾಗುತ್ತದೆ. ಆದರೆ ನಗೆ ಬೇರೆ ದಾರಿಯಿರಲಿಲ್ಲ. ಪ್ರಥಮ ಬಾರಿಗೆ ಬ್ಲೇಸರ್ ಮತ್ತು ಶೂ ಖರೀದಿಸಿದೆ. ನಂತರ ಸುವರ್ಣ ಚಾನಲ್ ಸೇರಿದ ಮೇಲೆ ಇನ್ನೂ ಒಂದೆರಡು ಬ್ಲೇಸರ್ ಖರಿದಿಸಿದೆ.
ಆದರೆ ಈಗ ನನ್ನನ್ನು ಬಟ್ಟೆಗಳು ಹೆದರಿಸುತ್ತವೆ. ಮೈಮೇಲೆ ಕೋಟು ಹೇರಿಕೊಂಡರೆ ಸೇಖೆಯಲ್ಲೂ ಶೂ ಧರಿಸಿದರೆ ನಾನು ಹೈರಾಣಾಗಿ ಹೋಗುತ್ತೇನೆ. ಅದು ನನ್ನ ವ್ಯಕ್ತಿತ್ವಕ್ಕೆ ಹೊಂದುವುದಿಲ್ಲ. ಆದರೆ ಇವತ್ತಿನ ಬದುಕು ಇದೆಯಲ್ಲ, ಅದೂ ಸಹ ಮಾರಾಟದ ವಸ್ತುವೇ.ನಾನು ನನ್ನನ್ನು ಮಾರಾಟ ಮಾಡಿಕೊಳ್ಳಲು ಇದನ್ನೆಲ್ಲ ಮಾಡಲೇಬೇಕು. ಅದಿಲ್ಲದಿದ್ದರೆ ಇಂದಿನ ಕಾರ್ಪುರೇಟ್ ಜಗತ್ತು ನಮ್ಮನ್ನು ತಿರಸ್ಕಿರಿಸಿ ಬಿಡುತ್ತದೆ.
ಇತ್ತೀಚಿಗೆ ಕಾರ್ಪುರೇಟ್ ಮೀಟಿಂಗ್ ಗೆ ಹೋಗುವಾಗ ಸುವರ್ಣ ಬಿಟ್ಟ ಮೇಲೆ ಮೂಲೆ ಸೇರಿದ್ದ ಬ್ಲೇಜರ್ ಅನ್ನು ಹೊರಕ್ಕೆ ತೆಗೆದೆ. ಅದನ್ನು ಹಾಕಿಕೊಂಡು ಹೋಗುವಾಗ ನಾನು ಯಾವುದೋ ಸರ್ಕಸ್ಸಿನ ಜೋಕರ್ ಎಂದು ಅನ್ನಿಸುತ್ತಿತ್ತು. ಆಗ ನಾನು ಹೇಳಿಕೊಂಡಿದ್ದು; ಶಶಿಧರ್ ಭಟ್ ನೀನು ಇದೆಯಲ್ಲ, ಬದುಕುವುದನ್ನು ಕಲಿಯುತ್ತಿದೆಯಲ್ಲೋ ಮಹಾರಾಯಾ ...!

Friday, December 3, 2010

ದೋಸೆ ವರ್ಸಸ್ ಪಿಜ್ಜಾ; ನಮಗೆ ಸಂತೋಷ ನೀಡುವುದು ಯಾವುದು ?

ಬದುಕು ಅರ್ಥಪೂರ್ಣವಾಗುವುದು ಯಾವುದರಿಂದ ? ನಮಗೆ ಬೇಕು ಅನ್ನಿಸಿದ್ದನ್ನೆಲ್ಲ ಪಡೆದುಕೊಳ್ಳುವುದರಿಂದಲೇ ? ಅಥವಾ ನಮಗೆ ಬೇಕು ಅನ್ನಿಸಿದ್ದು ಸಿಗದಿರುವುದರಿಂದಲೇ ?
ನಮಗೆ ಬೇಕು ಅನ್ನಿಸಿದ್ದನ್ನೆಲ್ಲ ಅಲ್ಲಾಉದ್ದೀನನ ಅದ್ಬುತ ದೀಪದಿಂದ ಪಡೆದುಕೊಳ್ಳುವಂತಾಗಿದ್ದರೆ ಬದುಕು ನೀರಸವಾಗಿಬಿಡುತ್ತಿತ್ತು. ಆಗ ಬದುಕಿಗೆ ಸ್ವಾರಸ್ಯವೇ ಉಳಿದಿರುತ್ತಿರಲಿಲ್ಲ. ನಮಗೆ ಬೇಕು ಅನ್ನಿಸಿದ್ದು ಗಗನದೀಪವಾಗಿದ್ದರೆ ನಾವು ಅದನ್ನು ಪಡೆದುಕೊಳ್ಳುವುದಕ್ಕೆ ಯತ್ನ ನಡೆಸುತ್ತೇವೆ. ಪಡೆದುಕೊಳ್ಳುವ ಯತ್ನವೇ ನಮ್ಮ ಬದುಕಿಗೆ ಚೈತನ್ಯವನ್ನು ನೀಡುತ್ತದೆ. ಪಡೆದುಕೊಳ್ಳುವುದು ಎನ್ನುವುದು ಕೊನೆ. ಅಲ್ಲಿಗೆ ಎಲ್ಲವೂ ಮುಗಿಯಿತು. ಉದಾಹರಣೆಗೆ ಪ್ರತಿಯೊಬ್ಬ ಮಧ್ಯ ವರ್ಗದ ವ್ಯಕ್ತಿಯ ಆಸೆ ಸ್ವಂತ ಮನೆ ಮತ್ತು ಓಡಾಡುವುದಕ್ಕೆ ಒಂದು ಕಾರು ಪಡೆಯುವುದು ಆಗಿರುತ್ತದೆ. ಆದರೆ ಮನೆ ಮತ್ತು ಕಾರು ದೊರಕಿದ ಮೇಲೆ ಆತ ಸಂತೋಷವಾಗಿರುತ್ತಾನಾ ? ಬಹುಶಃ ಇಲ್ಲ. ಮನೆ ಕಾರು ಬಂದ ಮೇಲೂ ಆತ ಮೊದಲಿನಂತ ಇರುತ್ತಾನೆ. ಹೊಸ ಸೌಲಭ್ಯ ಅವನ ಬದುಕಿಗೆ ಶಾಂತಿ ಮತ್ತು ಪ್ರೀತಿಯನ್ನು ಎಲ್ಲಿಂದಲೋ ತಂದುಕೊಡುವುದಿಲ್ಲ. ಯಾಕೆಂದರ ಶಾಂತಿ. ಸಮಾಧಾನ ಮತ್ತು ತೃಪ್ತಿ ಎಲ್ಲಿಯೋ ಇರುವ ಎಲ್ಲಿಂದಲೂ ಕೊಂಡು ತರುವ ವಸ್ತುವಲ್ಲ.
ಆದರೆ ನಮಗೆ ಬೇಕು ಅನ್ನಿಸಿದ್ದನ್ನು ಪಡೆದುಕೊಳ್ಳಲು ನಾವು ಯತ್ನ ನಡೆಸುವುದಿದೆಯಲ್ಲ ಅದೇ ಬದುಕು. ಯತ್ನ ಮುಗಿಯಿತೆಂದರೆ ಬದುಕೂ ಮುಗಿಯಿತು.
ದಕ್ಷಿಣ ಭಾರತದ ಖ್ಯಾತ ನಟ, ಪ್ರಕಾಶ್ ರೈ ನಮ್ಮ ಜೊತೆಗೆ ಮಲ್ಲೇಶ್ವರಂ ರೂಮಿನಲ್ಲಿ ಇರುತ್ತಿದ್ದ. ಆತನಿಗೆ ಆಗಲೂ ನಟನಾಗಬೇಕು ಎನ್ನುವ ಅಧಮ್ಯ ಆಸೆ. ಆದರೆ ಆಗ ನಮ್ಮ ಬಳಿ ಹಣ ಇರುತ್ತಿರಲಿಲ್ಲ. ನನಗಾಗ ಆರನೂರು ರೂಪಾಯಿ ಸಂಬಳ. ನನ್ನ ಇನ್ನೊಬ್ಬ ಸ್ನೇಹಿತ ಎಲ್. ಸಿ. ನಾಗರಾಜನಿಗೆ ಸಾವಿರದ ಇನ್ನೂರು ರೂಪಾಯಿ. ಪ್ರಕಾಶ್ ರೈಗೆ ಹೇಳಿಕೊಳ್ಳುವಂತಹ ಕೆಲಸ ಇಲ್ಲದಿದ್ದರಿಂದ ಅವನ ವರಮಾನದ ಬಗ್ಗೆ ಯಾವುದೇ ಮಾತನ್ನು ಆಡುವಂತಿರಲಿಲ್ಲ.
ಪ್ರಕಾಶ್ ಪ್ರತಿ ದಿನ ಒಬ್ಬಿಬ್ಬರು ನಿರ್ಮಾಪಕ ನಿರ್ದೇಶಕರನ್ನು ಭೇಟಿ ಮಾಡುತ್ತಿದ್ದ. ಹಾಗೆ ಹೋಗುವುದಕ್ಕೂ ಅವನ ಬಳಿ ಬಸ್ ಚಾರ್ಜ್ ಗೂ ಹಣ ಇರುತ್ತಿರಲಿಲ್ಲ. ಆಗೆಲ್ಲ ಹಲವು ಬಾರಿ ರಸ್ತೆಯಂಚಿನ ಗಾಡಿಯಲ್ಲಿ ರೈಸ್ ಬಾತ್ ಹಂಚಿಕೊಂಡು ತಿನ್ನುತ್ತಿದ್ದವರು ನಾವು.ಒಂದುವರೆ ರೂಪಾಯಿಯ ಚಿತ್ರಾನ್ನ ನಮ್ಮ ಮೂವರ ಹೊಟ್ಟೆ ತುಂಬುತ್ತಿತ್ತು. ಆಗ ಕ್ವಾರ್ಟರ್ ರಮ್ ಗೆ ಕೇವಲ ೮ ರೂಪಾಯಿ. ಯು ಬಿ ಬೀರಿಗೆ ೯ ರೂಪಾಯಿ. ನಮ್ಮ ತಲಾ ಮೂರು ರೂಪಾಯಿ ಹಾಕಿ ಕ್ವಾರ್ಟರ್ ರಂ ತೆಗೆದುಕೊಂದು ನಾವು ಮಾತನಾಡುತ್ತಿದ್ದೆವು. ಪ್ರಕಾಶ ಖ್ಯಾತ ನಟನಾಗುವ ಕನಸು ಕಾಣುತ್ತಿದ್ದ. ಎಲ್ ಸಿ ನಾಗರಾಜ ಮಾತ್ರ ಹಾಗಲ್ಲ. ಆತನಿಗೆ ಬದುಕಿನಲ್ಲಿ ಅದ್ಭುತ ಸಾಧನೆ ಮಾಡಬೇಕು ಅಂತ ಇತ್ತೋ ಇಲ್ಲವೋ ಆದರೆ ಆತ ಕವನ ಬರೆಯುತ್ತ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತ ಸ್ವಯಂ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತ ಕ್ರಾಂತಿಯ ಕನಸು ಕಾಣುತ್ತಿದ್ದ. ನನಗೆ ಕ್ರಾಂತಿಯ ಬಗ್ಗೆ ಆಗಲೇ ನಂಬಿಕೆ ಹೊರಟು ಹೋಗಿತ್ತು. ನಾನು ಬದುಕನ್ನು ಬಂದ ಹಾಗೆ ಸ್ವೀಕರಿಸುವ ಮನಸ್ಥಿತಿಯನ್ನು ರೂಪಿಸಿಕೊಂಡು ಬಿಟ್ಟಿದ್ದೆ. ಓದು ಬರವಣಿಗೆ, ಸಿನೆಮಾ,ಟ್ರಿಬಲ್ ಎಕ್ಸ್ ರಂ ನಡುವೆ ನನ್ನ ಬದುಕು ಸಾಗುತ್ತಿತ್ತು.
ಬದುಕನ್ನು ಮುಷ್ಟಿಯಲ್ಲಿ ಹಿಡಿದುಕೊಳ್ಳುವ ಚಲ ನನಗಾಗಲೀ ಎಲ್ಸಿ ಗಾಗಲೀ ಇರಲಿಲ್ಲ. ಆದರೆ ಪ್ರಕಾಶ್ ಹಾಗಲ್ಲ. ಆತ ಎಲ್ಲವನ್ನು ತನ್ನ ಮುಷ್ಟಿಯಲ್ಲಿ ಹಿಡಿದುಕೊಳ್ಳಲು ಯತ್ನ ನಡೆಸುವ ಚಲವಂತ. ಆತನ ಶಕ್ತಿ ಇದ್ದುದು ಎಲ್ಲವನ್ನೂ ಪಡೆದುಕೊಳ್ಳಬೇಕು ಎಂಬ ಚಲ ಮತ್ತು ಹೋರಾಟದಲ್ಲಿ. ಬೇಕಾದ್ದನ್ನು ಪಡೆದುಕೊಂಡ ಮೇಲೆ ಆತ ಸುಮ್ಮನೆ ಕುಳಿತುಕೊಳ್ಳುವವನಲ್ಲ. ಮತ್ತೇನನ್ನೋ ಪಡೆದುಕೊಳ್ಳಲು ಮತ್ತೊಂದು ಹೋರಾಟ.
ನನಗೆ ಅನ್ನಿಸುವ ಹಾಗೆ ಅವನ ಬದುಕು ಮತ್ತು ಯಶಸ್ಸು ಇರುವುದು ಈ ಸತತ ಹೋರಾಟದಲ್ಲೇ ಹೊರತೂ ಪಡೆದುಕೊಂಡ ಸಂತೃಪ್ತಿಯಲ್ಲಿ ಅಲ್ಲ. ಅವನಿಗೆ ಪಡೆದುಕೊಳ್ಳುವುದಕ್ಕೆ ನಡೆಸುವ ಹೋರಾಟದಲ್ಲಿ ಸಂತೋಷ ಇದ್ದರೆ, ನನಗೆ ಪಡೆದುಕೊಳ್ಳದೇ ಇರುವುದರಲ್ಲಿಯೇ ಆ ಸಂತೋಷ ಇದೆ. ಎಲ್ಲವನ್ನು ನನಗಾಗಿ ಬಾಚಿಕೊಳ್ಳುವುದರಲ್ಲಿ ನನಗೆ ನಂಬಿಕೆ ಇಲ್ಲ. ಅದು ನನಗೆ ಸಂತೋಷವನ್ನು ನೀಡುವುದಿಲ್ಲ.
ಬದುಕು ಮತ್ತು ಹೋರಾಟ ಎನ್ನುವುದು ಒಂದು ಮನಸ್ಥಿತಿ.ಸಂತೋಷ ಸಮಾಧಾನವೂ ಮನಸ್ಥಿತಿಯೇ. ಈ ಮನಸ್ಥಿತಿಯನ್ನು ರೂಪಿಸಿಕೊಳ್ಳುವುದು ಮುಖ್ಯವೇ ಹೊರತೂ ಅದು ಹೇಗೆ ದಕ್ಕುತ್ತದೆ ಎಂಬುದರಿಂದ ಅಲ್ಲ. ಆದರೆ ನಾವು ಸಂತೋಷ ಪಡುವುದನ್ನು ಕಲಿಯಬೇಕು. ಸಮಾಧಾನದಿಂದ ಬದುಕುವುದನ್ನೂ ರೂಢಿಸಿಕೊಳ್ಳಬೇಕು. ಇಲ್ಲದಿದ್ದರೆ ಬದುಕು ಸದಾ ಚಿಂತೆಯ ಆಗರವಾಗಿ ಬಿಡುತ್ತದೆ. ಇದನ್ನು ಇನ್ನೂ ಸರಳವಾಗಿ ಹೇಳುತ್ತೇನೆ. ನನಗೆ ಬೆಳಿಗ್ಗೆ ನೀರು ದೋಸೆಯನ್ನೋ, ಉಪ್ಪಿಟ್ಟನ್ನೋ ತಿಂದರೆ ಸಾಕು, ಆದರೆ ನನ್ನ ಮಗನಿಗೆ ಬರ್ಗರ್ ಫಿಜ್ಜಾಗಳೆಂದರೆ ಇಷ್ಟ. ಇಲ್ಲಿ ದೋಸೆ ಒಳ್ಳೆಯದೋ ಬರ್ಗರ್ ಫೀಜ್ಜಾ ಹೆಚ್ಚು ಒಳ್ಳೆಯದೋ ಎಂದು ಚರ್ಚೆ ಮಾಡುತ್ತ ಕುಳಿತರೆ ಚರ್ಚೆ ಮಾತ್ರ ಉಳಿಯುತ್ತದೆ ಇದರಿಂದ ಬೇರೆ ಏನೋ ಸಿಗುವುದಿಲ್ಲ. ಆದರೆ ದೋಸೆಯಲ್ಲಿ ನನಗೆ ಸಿಗುವ ಸಂತೋಷ ನನ್ನ ಮಗನಿಗೆ ಬರ್ಗರ್ ಮತ್ತು ಫಿಜ್ಜಾಗಳಲ್ಲಿ ದೊರಕುತ್ತಿದೆ ಎಂಬುದು ಮಾತ್ರ ಮುಖ್ಯ. ಅಂದರೆ ಪ್ರತಿಯೊಬ್ಬರಿಗೂ ಸಂತೋಷ ನೀದುವ ವಸ್ತುಗಳು ಬೇರೆ ಬೇರೆಯಾಗಿರುತ್ತವೆ. ನನಗೆ ಮುಖ್ಯ ಎನ್ನಿಸುವುದು ನಮಗೆ ಸಂತೋಷವನ್ನು ಕೊಡುವುದು ಯಾವುದು ಎಂದು ಗೊತ್ತಿರಬೇಕು. ಅದನ್ನು ತಿಳಿದುಕೊಳ್ಳಲು ಯತ್ನ ನಡೆಸಬೇಕು. ನಾನು ದೋಸೆ ಎಂದರೆ ಬೇರಯವರು ಏನು ಹೇಳುತ್ತಾರೆ ಎಂದು ಚಿಂತಿಸಲು ಪ್ರಾರಂಭಿಸಿದರೆ ಸಮಸ್ಯೆ ಪ್ರಾರಂಭವಾಗುತ್ತದೆ. ಯಾಕೆಂದರೆ ನಮ್ಮ ಸಂತೋಷ ಬೇರೆಯವರ ಮೇಲೆ ಅವಲಂಬಿಸಿರಬಾರದು. ಆಗ ನಮಗೆ ಸಂತೋಷ ದಕ್ಕುವುದಿಲ್ಲ. ನಮ್ಮ ಸಂತೋಷ ನಮ್ಮ ಮೇಲೆ ಮಾತ್ರ ಅವಲಂಬಿಸಿರಬೇಕು. ಆಗ ಮಾತ್ರ ಬದುಕು ಸುಂದರ ವಾಗಿರುತ್ತದೆ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...