Wednesday, November 30, 2011

ನನ್ನೂರಿನ ಸಾಹಿತ್ಯ ಸಮ್ಮೇಳನ; ಸಾಹಿತ್ಯ ದಿಂದ ಬದುಕೇ ಅಥವಾ ಬದುಕಿನಿಂದ ಸಾಹಿತ್ಯವೇ ?

ಬೇಡ್ಕಣಿ ಎಂಬ ಆ ಪುಟ್ಟ ಊರು ಇರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಸುಮಾರು ೬ ಕಿಮೀ ದೂರದಲ್ಲಿ. ಅಲ್ಲಿ ಒಂದು ಕಾಲದಲ್ಲಿ ಕೋಟೆಯಿತ್ತು. ಆ ಕುರುಹುಗಳು ಈಗಲೂ ಇವೆ. ಕೋಟೆ ಆಂಜನೇಯ ಈಗಲೂ ಅಲ್ಲಿ ಕುಳಿತಿದ್ದಾನೆ. ಬೇಡ್ಕಣಿಯಿಂದ ಎರಡು ಕಿಮೀ ದೂರದಲ್ಲಿ ಇರುವುದು ಭುವನಗಿರಿ. ಕನ್ನಡಿಗರ ನಾಡ ದೈವ ಭುವನೇಶ್ವರಿ ಇಲ್ಲಿಯ ಗುಡ್ಡದ ಮೇಲಿದ್ದಾಳೆ. ಪ್ರಾಯಶಃ ಕರ್ನಾಟಕದಲ್ಲಿ ಇಂತಹ ಇನ್ನೊಂದು ಭುವನೇಶ್ವರಿ ದೇವಾಲಯ ಇಲ್ಲ. ಇಲ್ಲಿಂದ ಇನ್ನು ಕೆಲವೇ ಕೀಮೀ ದೂರದಲ್ಲಿ ಬಿಳಗಿ ಇದೆ. ಈ ಬಿಳಗಿ ಸಂಸ್ಥಾನದ ಕುರುಹುಗಳಾಗಿ ಜೈನ ಬಸದಿ, ಗೋಲ್ ಬಾವಿಯೂ ಇದೆ. ಈಗ ಗೋಲ ಬಾವಿ ಶಿತಿಲಗೊಂಡಿದೆ. ಈ ಬೇಡ್ಕಣಿ ಈಗ ಪ್ರಸಿದ್ಧಿ ಹೊಂದುವುದಕ್ಕೆ ಇನ್ನೊಂದು ಕಾರಣ ಇಲ್ಲಿರುವ ಶನಿ ದೇವಾಲಯ. ಈ ಶನಿ ತುಂಬಾ ಫವರ್ ಫುಲ್ ಎಂದು ಉತ್ತರ ಕನ್ನಡದ ಜನ ನಂಬಿದ್ದಾರೆ. ವಾರದ ಕೇಲವು ದಿನಗಳಲ್ಲಿ ಇಲ್ಲಿಗೆ ನೂರಾರು ಭಕ್ತಾದಿಗಳು ಬಂದು ಶನಿ ದೇವರ ಪೂಜೆ ಮಾಡಿಸಿ ಸಮಾಧಾನದಿಂದ ಹಿಂತಿರುಗುತ್ತಾರೆ. ಶನಿದೇವರಿಂದಾಗಿ ಊರಿಗೆ ಇನ್ನಷ್ಟು ಜನಪ್ರಿಯತೆ ಬಂದಿದೆ. ಇದೇ ಊರಿನಲ್ಲಿ ನಡೆದಿದ್ದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ. ಇಲ್ಲಿ ಸಮ್ಮೇಳನ ಯಶಸ್ವಿಯಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಸ್ವತಃ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರೋಹಿದಾಸ್ ನಾಯಕರಿಗೆ ಇಂತಹ ಅನುಮಾನವಿತ್ತು. ಬೆಳಿಗ್ಗೆ ನಡೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ನೋಡಿದಾಗ ನನಗೆ ಮನಸ್ಸು ತುಂಬಿ ಬರುವುದಕ್ಕೆ ಕಾರಣಗಳಿದ್ದವು. ಅಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಹೆಂಗಸರು ರೈತ ಕುಟುಂಬಕ್ಕೆ ಸೇರಿದವರು. ತಮ್ಮ ಬದುಕನ್ನು ನಿರ್ವಹಿಸಲು ಇಡೀ ದಿನ ತೋಟ ಗದ್ದೆಗಳಲ್ಲಿ ದುಡಿಯುವವರು. ಅವರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅಧ್ಯಕ್ಷರ ಪೂರ್ಣ ಕುಂಭ ಸ್ವಾಗತಕ್ಕೆ ಸಿದ್ಧರಾಗಿದ್ದರು. ದುಡಿಯುವ ಕೈಗಳು ಹೀಗೆ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದನ್ನು ನಾನು ನೋಡಿದ್ದು ಕಡಿಮೆ. ಸಾಧಾರಣವಾಗಿ ಮೇಲ್ವರ್ಗದ ಜನ ಇಂಥಹ ಮೆರವಣಿಗೆಯಲ್ಲಿ ಸಾಗುವುದು ಸಾಮನ್ಯ. ಆದರೆ ಇಲ್ಲಿನ ಪರಿಸ್ಥಿತಿಯೇ ಬೇರೆಯಾಗಿತ್ತು. ಅಲ್ಲಿ ನೋಡಿದಾಗ ಇದು ಸಾಹಿತ್ಯ ಸಮ್ಮೇಳನವೇ ಅಥವಾ ರೈತ ಸಮ್ಮೇಳನವೇ ಎನ್ನುವ ಹಾಗೆ. ಎಲ್ಲರ ಮನೆಗಳ ಮುಂದೆ ರಂಗೋಲಿ ಹಾಕಲಾಗಿತ್ತು.. ಗುಡಿಸಿ ಸಾರಿಸಿ ಮಾವಿನ ತೋರಣ ಕಟ್ಟಲಾಗಿತ್ತು. ಸಮ್ಮೇಳನವನ್ನು ಉದ್ಘಾಟಿಸಿದವರು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ. ನನ್ನ ಕೆಲಸ ಸಮಾರೋಪ ಭಾಷಣ ಮಾಡುವುದಾಗಿತ್ತು. ಆದರೆ ಉದ್ಘಾಟನಾ ಸಮಾರಂಭದಲ್ಲಿ ನನ್ನನ್ನು ವೇದಿಕೆಗೆ ಕ್ ಕರೆದು ಪುಸ್ತಕ ಬಿಡುಗಡೆಯ ಕೆಲಸವನ್ನು ಒಹಿಸಲಾಯಿತು. ನಾನು ತುಂಬಾ ಸಂತೋಷದಿಂದ ಹತ್ತು ಪುಸ್ತಕಗಳ ಬಿಡುಗಡೆ ಮಾಡಿದೆ. ಹಾಗೆ ಭಾಷಣ ಮಾಡುವಂತೆ ಸೂಚಿಸಿದರೂ ಸಂಜೆ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡುವುದಾಗಿ ಹೇಳಿದೆ. ನನಗೆ ಅಲ್ಲಿ ಭಾಷಣ ಮಾಡುವುದಕ್ಕಿಂತ ಅವರ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದು ಅನ್ನಿಸಿತ್ತು. ಹಾಗೆ ಅಲ್ಲಿ ನಡೆಯುವ ಚರ್ಚೆ ಮತ್ತು ಸಂವಾದವನ್ನು ಕೇಳುವುದು ಭಾಷಣ ಮಾಡುವುದಕ್ಕಿಂತ ಮುಖ್ಯವಾಗಿತ್ತು. ನನಗೆ ನನ್ನ ಜಿಲ್ಲೆಯ ಬಗ್ಗೆ ಹೆಮ್ಮೆ ಮತ್ತು ಗೌರವ ಇರುವುದಕ್ಕೆ ಹಲವು ಕಾರಣಗಳಿಗಾಗಿ. ಇಲ್ಲಿನ ಸಾಮಾನ್ಯ ಮನುಷ್ಯ ಕೂಡ ಸಾಹಿತ್ಯದ ಬಗ್ಗೆ ಮಾತನಾಡಬಲ್ಲ. ಹೊಸ ಕೃತಿಗಳನ್ನು ವಿಮರ್ಷೆ ಮಾಡಬಲ್ಲ. ಹಾಗೆ ಒಂದು ರಸ್ತೆಯಲ್ಲಿ ಹೋದರೆ ನಿಮಗೆ ಹಲವು ಕವಿಗಳು ಎದುರಾಗುತ್ತಾರೆ.ಕಾವ್ಯದ ಬಗ್ಗೆ ಮಾತನಾಡುತ್ತಾರೆ. ಅವರ ಸಾಹಿತ್ಯ ಪ್ರೀತಿ ದೊಡ್ದದು. ನಾನು ೮೦ ದಶಕದಲ್ಲಿ ನಾವೆಲ್ಲ ಸೇರಿ ವ್ಯವಸ್ಥೆ ಮಾಡಿದ್ದ ಜಿಲ್ಲಾ ಬಂಡಾಯ ಸಾಹಿತ್ಯ ಸಮ್ಮೇಳನದ ನೆನಪು ಮಾಡಿಕೊಂಡು ನನ್ನ ಮಾತು ಪ್ರಾರಂಭಿಸಿದೆ. ಆ ಸಮ್ಮೇಳನದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ನಮ್ಮೂರಿನ ಆಗಿನ ಬಿಡಿಓ ಮುನಿವೆಂಕಟಪ್ಪ ಅವರನ್ನು ನೆನಪು ಮಾಡಿಕೊಂಡೆ. ಅವರು ಆಗಲೇ ಹಲವಾರು ಕವನಗಳನ್ನು ಬರೆದಿದ್ದರು. ಅದನ್ನು ಪ್ರಕಟಿಸುವ ಇರಾದೆ ಅವರದಾಗಿತ್ತು. ಹೀಗಾಗಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ದೇವನೂರು ಮಹಾದೇವ, ದೇವಯ್ಯ ಹರವೆ, ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಯ್ಯ ಅವರಿಗೆ ಮುನಿವೆಂಕಟಪ್ಪ ತೋರಿಸಿದರು. ಅವರೆಲ್ಲ ಕವನ ಸಂಕಲನವನ್ನು ಹೊರ ತರುವಂತೆ ಸಲಹೆ ನೀಡಿದರು. ಆದರೆ ನನಗೆ ಕೆಲವು ಅನುಮಾನಗಳಿದ್ದವು. ಅವರ ಕವನಗಳು ಹೇಳಿಕೆಗಳಂತೆ ಇದ್ದವು. ಹಾಗೆ ಇಂದಿರಾ ಗಾಂಧಿ ಅವರನ್ನು ಕಟುವಾಗಿ ಟೀಕಿಸಿದ ಕವನವೂ ಇತ್ತು. ಇಂತಹ ಕವನವನ್ನು ಒಳಗೊಂಡ ಕವನ ಸಂಕಲನ ಹೊರಕ್ಕೆ ಬಂದರೆ, ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂಬ ಆತಂಕ ನನ್ನದಗಿತ್ತು. ಕೋಲಾರದಲ್ಲಿ ಜೀತದಾಳಾಗಿ ನಂತರ ಸರ್ಕಾರಿ ಕೆಲಸಕ್ಕೆ ಸೇರಿದ್ದ ಅವರು ಕೆಲಸ ಕಳೆದುಕೊಳ್ಳುವುದು ನನಗೆ ಬೇಕಾಗಿರಲಿಲ್ಲ. ಆದರೆ ಎಲ್ಲ ಬಂಡಾಯ ಸಾಹಿತಿಗಳು ಕವನ ಸಂಕಲನನ್ನು ತರುವಂತೆ ಸಲಹೆ ನೀಡಿದರು. ಸಿದ್ದಾಪುರದಲ್ಲಿ ಈ ಬಂಡಾಯ ಸಾಹಿತ್ಯ ಸಮ್ಮೇಳನ ನಡೆದ ಕೆಲವೇ ತಿಂಗಳುಗಳಲ್ಲಿ ಮುನಿವೆಂಕಟಪ್ಪನವರ ಬೆಂಕಿಯ ನಡುವೆ ಎಂಬ ಕವನ ಸಂಕಲನ ಹೊರಕ್ಕೆ ಬಂತು. ಹಾಗೆ ಅಂದಿನ ಗುಂಡೂರಾವ್ ಸರ್ಕಾರ ಮುನಿವೆಂಕಟಪ್ಪ ನವರನ್ನು ಅಮಾನತು ಮಾಡಿತು. ಸುಮಾರು ಒಂದೂವರೆ ವರ್ಷಗಳ ಕಾಲ ಅಮಾನತು ರದ್ದುಪಡಿಸಲು ಮುನಿವೆಂಕಟಪ್ಪ ಯತ್ನ ನಡೆಸಿದರೂ ಸಫಲರಾಗಲಿಲ್ಲ. ನಂತರ ಜನತಾ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಲಂಕೇಶರು ಈ ವಿಚಾರವನ್ನು ನಝೀರ್ ಸಾಬರ ಗಮನಕ್ಕೆ ತಂದರು. ಮುನಿವೆಂಕಟಪ್ಪ ನವರ ಅಮಾನತು ರದ್ದಾಯಿತು. ನಾನು ಇದನ್ನೆಲ್ಲ ಸಮ್ಮೇಳನದಲ್ಲಿ ನೆನಪು ಮಾಡಿಕೊಂಡೆ. ಸಾಹಿತ್ಯ ಮುಖ್ಯವೇ ಅಥವಾ ಬದುಕೆ ? ಸಾಹಿತ್ಯ ಬದುಕಿನ ಮೇಲೆ ಪ್ರಭಾವ ಬೀರುತ್ತದೆಯೆ ಅಥವ ಬದಕಿನ ದಾಖಲೇಯೆ ಸಾಹಿತ್ಯವೆ ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ನಾನು ನನ್ನ ಮಾತನ್ನು ಮುಂದುವರಿಸಿದೆ. ನಮಗೆಲ್ಲ ನಮ್ಮ ಒಳಗಿನ ಜಗತ್ತೊಂದು ಇರುತ್ತದೆ. ಹಾಗೆ ಹೊರಗಿನ ಜಗತ್ತು. ಒಳಗಿನ ಜಗತ್ತನ್ನು ನಾವು ಕಟ್ಟಿಕೊಳ್ಳುವ ರೀತಿಯೇ ಅದ್ಭುತ. ಹೊರ ಜಗತ್ತಿನಿಂದ ಪ್ರೇರಿತವಾಗುವ ಈ ನಮ್ಮೋಳಗಿನ ಜಗತ್ತು ಹಲವು ರೀತಿಯ ದ್ವಂದ್ವಗಳನ್ನು ಹೊಂದಿರುತ್ತವೆ. ಹಾಗೆ ಅಲ್ಲಿ ಕನಸುಗಳು ಇರುತ್ತವೆ. ಆದರೆ ಈ ಒಳ ಜಗತ್ತು ಸಂಪೂರ್ಣವಾಗಿ ಸತ್ಯವಲ್ಲ. ಅದು ನೆನಪು, ಅನುಭವ ಕನಸುಗಳನ್ನು ಎರಕ ಹೊಯ್ದು ಸಿದ್ಧಪಡಿಸಿದ್ದು. ಒಬ್ಬ ಸಾಹಿತಿ ತನ್ನ ಈ ಒಳ ಜಗತ್ತನ್ನು ಹೊರ ಹಾಕುತ್ತಿರುತ್ತಾನೆ. ಆದರೆ ಇಲ್ಲಿನ ಕೌತುಕ ಎಂದರೆ ನಮ್ಮೆಲ್ಲರ ಒಳ ಜಗತ್ತು ಯಾವ ರೀತಿ ಇದೆ ಎಂಬುದು ನಮ್ಮ ಹೊರ ಜಗತ್ತಿನ ಗ್ರಹಿಕೆಯ ಮೇಲೆ ಅವಲಂಬಿತವಾಗಿದೆ. ನಮ್ಮ ಗ್ರಹಿಕೆಯಲ್ಲಿ ದೋಷವಿದ್ದರೆ ನಮ್ಮ ಒಳ ಜಗತ್ತು ಸುಂದರವಾಗಿರುವುದಿಲ್ಲ ಎಂದು ನಾನು ಹೇಳಿದೆ. ಇವತ್ತಿನ ಸಾಹಿತ್ಯ ಲೋಕ ಯಾವುದೋ ರೀತಿಯ ವಿಸ್ಮ್ರುತಿಗೆ ಒಳಗಾಗಿದೆ ಎಂದು ನನಗೆ ಅನ್ನಿಸುತ್ತದೆ. ಯಾಕೆಂದರೆ ಸಾಹಿತಿಗಳು ಸದಾ ವರ್ತಮಾನದ ಜೊತೆ ಮುಖಾಮುಖಿಯಾಗಬೇಕು. ವರ್ತಮಾನದ ಜೊತೆ ಜಗಳವಾಡಬೇಕು. ವರ್ತಮಾನದ ಸತ್ಯಗಳನ್ನು ಗ್ರಹಿಸಲು ಯತ್ನಿಸಬೇಕು. ಆದರೆ ಇವತ್ತಿನ ಸಂದರ್ಭದಲ್ಲಿ ಸಾಹಿತ್ಯ ಲೋಕ ವರ್ತಮಾನದ ಜೊತೆ ಮಾತುಕತೆ ನಡೆಸುತ್ತಿಲ್ಲ. ಜಾಗತೀಕರಣದ ನಂತರ ನಮ್ಮ ಗ್ರಾಮೀಣ ಪ್ರದೇಶ ಹೆಚ್ಚು ಅತಂತ್ರವಾಗಿರುವುದರ ಬಗ್ಗೆ ಸಾಹಿತಿಗಳು ಮಾತನಾಡುತ್ತಿಲ್ಲ. ರೈತರು ಭೂಮಿ ಕಳೆದುಕೊಂಡು ಅತಂತ್ರರಾಗುವುದು ನಮ್ಮ ಸಾಹಿತಿಗಳಿಗೆ ಕಥಾ ವಸ್ತುವಾಗುತ್ತಿಲ್ಲ. ಭ್ರಷ್ಟಾಚಾರದ ಬಗ್ಗೆ ಸಾಹಿತ್ಯ ಲೋಕ ಗಾಢ ಮೌನವನ್ನು ಹೊಂದಿರುವುದು ಸಂಶಯಕ್ಕೆ ಕಾರಣವಾಗಿದೆ. ಈಗ ಉತ್ತರ ಕನ್ನಡ ಜಿಲ್ಲೆಯನ್ನೇ ತೆಗೆದುಕೊಳ್ಳಿ. ಇಲ್ಲಿ ಮದುವೆಗೆ ಬಂದ ಹುಡುಗರಿಗೆ ಹುಡುಗಿಯರು ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಚಹಾ ಅಂಗಡಿ ಇಟ್ಟುಕೊಂಡರೂ ಸರಿ ಅವರನ್ನು ಮದುವೆಯಾಗಲು ಒಪ್ಪುವ ಹುಡುಗಿಯರು ಕೃಷಿ ಮಾಡಿಕೊಂಡಿರುವ ಹುಡುಗನನ್ನು ಮದುವೆಯಾಗುತ್ತಿಲ್ಲ. ಹೀಗಾಗಿ ೪೦ ದಾಟಿದರೂ ಮದುವೆಯಾಗದ ಹುಡುಗರು ಇಲ್ಲಿದ್ದಾರೆ. ಇದಕ್ಕೆ ಯಾಕೆ ಸಾಹಿತ್ಯ ಲೋಕ ಸ್ಪಂದಿಸುತ್ತಿಲ್ಲ. ಇದು ಒಂದು ಕಥೆಗೆ ಯಾಕೆ ವಸ್ತುವಾಗುತ್ತಿಲ್ಲ ? ಗ್ರಹಿಕೆ ಮತ್ತು ಸಂವಹನದ ಬಗ್ಗೆಯೂ ನಾನು ಮಾತನಾಡಿದೆ. ನನ್ನ ಭಾಷಣ ಮುಗಿಯುವ ಹೊತ್ತಿಗೆ ರಾತ್ರಿಯಾಗಿತ್ತು. ಎಲ್ಲರೂ ಭಾಷಣ ಚೆನ್ನಾಗಿತ್ತು ಎಂದರು. ನಾನು ನಮ್ಮ ಜಿಲ್ಲೆಯ ಸಂಸ್ಕೃತಿಯನ್ನು ಉಳಿಸಲು ಏನಾದರೂ ಮಾಡಬೇಕು ಎಂದು ಹೇಳಿದೆ. ಇಲ್ಲಿ ಪ್ರವಾಸೋಧ್ಯಮ ಅಭೀವೃದ್ಧಿಯಾಗಲು ಯೋಜನೆಗಳು ಬರಬೇಕು. ಈ ಬಗ್ಗೆ ಏನಾದರೂ ಮಾಡೋಣ ಎಂದು ಅವರಿಗೆ ಹೇಳಿ ರಾತ್ರಿಯ ಬೆಂಗಳೂರು ಬಸ್ ಹತ್ತಿದೆ. ಸಿದ್ದ್ದ್ಧಧ ಪಡಿ

Wednesday, November 23, 2011

ಮತ್ತೆ ಮತ್ತೆ ಲಂಕೇಶ್ ನೆನಪಾಗುತ್ತಿದ್ದಾರೆ......!

ಯಾಕೋ ಗೊತ್ತಿಲ್ಲ. ಬಳ್ಳಾರಿಯಲ್ಲಿರುವ ನನ್ನ ಯುವ ಸ್ನೇಹಿತ ಆದಿತ್ಯ ಭಾರದ್ವಾಜ್ ಕಳುಹಿಸಿದ ಒಂದು ಎಸ್ ಎಮ್ ಎಸ್ ನನ್ನನ್ನು ಕಾಡುತ್ತಿದೆ. ಅವರು ಕಳುಹಿಸಿದ ಎಸ್ ಎಮ್ ಎಸ್ ನ ಸಾರ ಇಷ್ಟೇ. ನನಗೆ ಈಗ ಲಂಕೇಶ್ ನೆನಪಾಗುತ್ತಾರೆ.. ಅವರು ಕಳುಹಿಸಿದ ಈ ಎಸ್ ಎಂ ಎಸ್ ಓದಿದ ಮೇಲೆ ನನಗೂ ಲಂಕೇಶ್ ಕಾಡತೊಡಗಿದ್ದಾರೆ. ಪ್ರಾಯಶ: ಲಂಕೇಶ್ ಪತ್ರಿಕೆಯ ಎರಡನೆಯ ಸಂಚಿಕೆ ಹೊರ ಬಂದ ವಾರ ಅದು. ನಾನು ಕೈಯಲ್ಲಿ ಒಂದು ಲೇಖನವನ್ನು ಹಿಡಿದುಕೊಂಡು ಬಸವನಗುಡಿಯಲ್ಲಿರುವ ಅವರ ಕಚೇರಿಗೆ ಹೋದೆ. ಲಂಕೇಶ್ ತುಂಬಾ ಪ್ರೀತಿಯಿಂದ ಒಳಗೆ ಕರೆದು ಮಾತನಾಡಿದರು. ನಾನು ಬರೆದು ತಂದಿದ್ದ ಲೇಖನವನ್ನು ಸ್ವಲ್ಪ ಅಳುಕಿನಿಂದಲೇ ಅವರಿಗೆ ನೀಡಿದೆ. ಅದು ರಾಮಚಂದ್ರಾಪುರದ ಅಂದಿನ ಸ್ವಾಮಿ ರಾಘವೇಂದ್ರ ಭಾರತಿ ಸ್ವಾಮಿಗಳಿಗೆ ಸಂಬಂಧಿಸಿದ್ದಾಗಿತ್ತು. ಆ ದಿನಗಳಲ್ಲಿ ಬಂಡಾಯ ಸಂಘಟನೆಯಲ್ಲಿ ಇದ್ದ ನಾನು ಈ ಸ್ವಾಮಿಯ ವಿರುದ್ಧ ಊರಿನಲ್ಲಿ ಹೋರಾಟವನ್ನು ಸಂಘಟಿಸಿದ್ದೆ. ಇದಕ್ಕೆ ಪ್ರತಿಯಾಗಿ ಅವರು ನನ್ನನ್ನು ಹೈವ್ಯಕ ಭ್ರಾಹ್ಮಣರ ಜಾತಿಯಿಂದ ನನ್ನನ್ನು ಹೊರ ಹಾಕಿದ್ದರು. ಯಾವ ಹವ್ಯಕರೂ ನನಗೆ ಅನ್ನ ನೀರು ಕೊಡಬಾರದು ಎಂದು ಫರ್ಮಾನು ಹೊರಡಿಸಿದ್ದರು.ಅವರ ಮೇಲೆ ಒಂದು ಲೇಖನ ಬರೆದುಕೊಂಡು ಬಂದಿದ್ದ ನಾನು ಲಂಕೇಶ್ ಪತ್ರಿಕೆಯ ಕಚೇರಿಯ ಬಾಗಿಲು ಬಡಿದಿದ್ದೆ. ಲಂಕೇಶ್ ನನ್ನ ಲೇಖನವನ್ನು ಓದಿದರು. ಲೇಖನ ಚೆನ್ನಗಿದೆ. ಆದರೆ ನಿಮಗೆ ಕನ್ನಡ ಕಲಿಸಿದ ಮಹಾತ್ಮ ಯಾರು ಎಂದು ಪ್ರಶ್ನಿಸಿದರು. ನೋಡಯ್ಯ ಲೇಖನ ಬರೆಯುವುದಕ್ಕಿಂತ ಮೊದಲು ಕನ್ನಡದ ವ್ಯಾಕರಣವನ್ನು ಕಲಿತಿರಬೇಕು ಎಂದರು ಲಂಕೇಶ್. ನನಗೆ ಅವಮಾನವಾಗಿತ್ತು. ಕೋಪ ಬಂದಿತ್ತು. ನಾನು ತಿರುಗಿ ಮಾತನಾಡದೇ ಅಲ್ಲಿಂದ ಹೊರಟು ಬಿಟ್ಟೆ. ಮುಂದಿನ ವಾರ ಲಂಕೇಶ್ ಪತ್ರಿಕೆಯಲ್ಲಿ ನನ್ನ ಲೇಖನ ಪ್ರಕಟವಾಗಿತ್ತು. ಜೊತೆಗೆ ೧೫೦ ರೂಪಾಯಿ ಸಂಭಾವನೆ.! ಇದಾದ ಮೇಲೆ ಲಂಕೇಶ್ ಜೊತೆ ನನ್ನ ಸಂಪರ್ಕ ಬೆಳೆಯಿತು. ಹಾಗೆ ಊರಿನಿಂದ ಬೆಂಗಳೂರಿಗೆ ಬಂದ ನಾನು ಬೇರೆ ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡತೊಡಗಿದೆ. ಮೊದಲು ಕೆಲಸಕ್ಕೆ ಸೇರಿದ್ದ್ಉ ಸಂಯುಕ್ತ ಕರ್ನಾಟಕ ಪತ್ರಿಕೆಗೆ. ಅಲ್ಲಿ ಆಗ ನನಗೆ ಸಿಗುತ್ತಿದ್ದುದು ತಿಂಗಳಿಗೆ ೮೦ ರೂಪಾಯಿ ಸಂಬಳ. ಆಗಲೇ ನಾನು ಲಂಕೇಶ್ ಪತ್ರಿಕೆಯ ಕಾಯಂ ಓದುಗನಾಗಿದ್ದೆ. ಲಂಕೇಶ್ ಪತ್ರಿಕೆ ನನಗೆ ಓದುವುದನ್ನು ಕಲಿಸಿತ್ತು. ಒಳನೋಟವನ್ನು ನೀಡಿತ್ತು. ಈಗಲೂ ಆಗಾಗ ನಾನು ಲಂಕೇಶ್ ಅವರ ಟೀಕೆ ಟಿಪ್ಪಣಿಯನ್ನು ಓದುವುದುಂಟು. ಆಗೆಲ್ಲ ಒಂದು ವಸ್ತು ಮತ್ತು ವಿಚಾರವನ್ನ ಅವರು ಗ್ರಹಿಸುತ್ತಿದ್ದ ರೀತಿ ಅಚ್ಚರಿಯನ್ನು ಉಂಟು ಮಾಡುತ್ತದೆ. ಇವತ್ತಿಗೂ ಕೂಡ ಅವರ ಬಹಳಷ್ಟು ಬರಹಗಳು ಪ್ರಸ್ತುತ ಅನ್ನಿಸುತ್ತದೆ. ಲಂಕೇಶ್ ಅವರ ಅತಿ ದೊಡ್ಡ ಗುಣವೆಂದರೆ, ಯಾವುದೇ ರೀತಿಯ ಕ್ರೈಸಿಸ್ ನಲ್ಲಿ- ಅದು ರಾಜಕೀಯ ಬಿಕ್ಕಟ್ಟಿರಬಹುದು, ಸಾಮಾಜಿಕ ಬಿಕ್ಕಟ್ಟು ಇರಬಹುದು, ಅವರು ತೆಗೆದುಕೊಳ್ಳುತ್ತಿದ್ದ ಜನಪರ ನಿಲುವು. ಅವರ ನಿಲುವಿನಲ್ಲಿ ಕೆಲವೊಮ್ಮೆ ತಪ್ಪುಗಳು ಇದ್ದರೂ ಅವು ಉದ್ದೇಶಪೂರ್ವಕ ತಪ್ಪುಗಳಾಗಿರಲಿಲ್ಲ. ಅವರ ಬದ್ಧತೆ ಮತ್ತು ಸಾಮಾಜಿಕ ಕಳಕಳಿಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿರಲಿಲ್ಲ. ಲಂಕೇಶ್ ನಿಜವಾದ ಅರ್ಥದಲ್ಲಿ ಪತ್ರಿಕೋದ್ಯಮಿಯಾಗಿದ್ದರು. ಲಂಕೇಶ್ ಅವರಿಗೆ ೬೦ ತುಂಬಿದ ಸಂದರ್ಭದಲ್ಲಿ ಮೈಸೂರಿನಲ್ಲಿ ಮೂರು ದಿನಗಳ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲ ಘಟಾನುಘಟಿಗಳಿದ್ದ ಆ ಕಾರ್ಯಕ್ರಮದಲ್ಲಿ ಲಂಕೇಶ್ ಪತ್ರಿಕೆ ಮತ್ತು ಕನ್ನಡ ಪತ್ರಿಕೋದ್ಯಮ ಎಂಬ ವಿಚಾರದ ಬಗ್ಗೆ ಭಾಷಣ ಮಾಡುವ ಅವಕಾಶ ನನಗೆ ಲಭ್ಯವಾಗಿತ್ತು. ಲಂಕೇಶ್ ನಾನೇ ಆ ವಿಚಾರದ ಮೇಲೆ ಉಪನ್ಯಾಸ ನೀಡಬೇಕು ಎಂದು ಸೂಚಿಸಿದ್ದರು. ಅಂದಿನ ನನ್ನ ಭಾಷಣವನ್ನು ಅವರು ಮೆಚ್ಚಿಕೊಂಡಿದ್ದರು. ಇದಾದ ಮೇಲೆ ನಾನು ಅವರನ್ನು ನೋಡಿದ್ದು ಅವರು ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಾಗ. ನನ್ನ ಸ್ಣೇಹಿತರಾದ ಭರತಾದ್ರಿ ಮತ್ತು ಪತ್ರಕರ್ತ ಮಹದೇವ್ ಪ್ರಕಾಶ್ ಮೇಷ್ಟ್ರು ನಿಮ್ಮನ್ನು ನೋಡಬೇಕಂತೆ ಎಂದು ಹೇಳಿದಾಗ ಮರುದಿನವೇ ನಾನು ಆಸ್ಪತ್ರೆಗೆ ಹೋದೆ. ಲಂಕೇಶ್ ಹಾಸಿಗೆಯ ಮೇಲೆ ಮಲಗಿದ್ದರು. ಅವರ ಹೊಟ್ಟೆ ಗುಡಾಣದಂತೆ ಕಾಣುತ್ತಿತ್ತು. ಬಾರಯ್ಯ ಎಂದವರೆ ನನ್ನ ಜೊತೆಗೆ ಮಾತನಾಡತೊಡಗಿದರು. ನಾನು ಸತ್ತು ಹೋಗ್ತೀನೇನೋ ಗೊತ್ತಿಲ್ಲ..ಆದರೆ ನಾನು ಸಾವಿಗೆ ಹೆದರುವುದಿಲ್ಲ ಎಂದರು ಲಂಕೇಶ್. ನನ್ನ ಪತ್ರಿಕೆ ಹೇಗಿದೆಯಯ್ಯ ಎಂದೂ ಪ್ರಶ್ನಿಸಿದರು. ಸಾರ್, ಒಬ್ಬ ಮನುಷ್ಯನಂತೆ ಪತ್ರಿಕೆಗೂ ಒಂದು ಆಯಸ್ಸು ಅಂತ ಇರುತ್ತದೆ. ಲಂಕೇಶ್ ಪತ್ರಿಕೆ ಎಷ್ಟು ಎತ್ತರಕ್ಕೆ ಏರಬಹುದಿತ್ತೋ ಅಷ್ಟು ಎತ್ತರಕ್ಕೆ ಏರಿ ಆಗಿದೆ. ಇನ್ನು ಏನಿದ್ದರೂ ಅದು ಕೆಳಕ್ಕೆ ಬರಲೇಬೇಕು. ಮೇಲೆ ಹೋದವರೂ ಕೆಳಕ್ಕೆ ಬೀಳುವಂತೆ ಪತ್ರಿಕೆ ಕೂಡ. ನೀವು ದಯವಿಟ್ಟು ತಪ್ಪು ತಿಳಿಯಬಾರದು. ನೀವು ಬೈದರೇ ಎಲ್ಲರೂ ಕೇಳುತ್ತಾರೆ. ನೀವು ಕ್ಷಮಿಸಿ ಎಂದು ಲೇಖನವನ್ನು ಪ್ರಾರಂಭಿಸಿದರೆ ಅದು ನೀವು ಬರೆಯುವ ವಿಧಾನ ಅದು ನಮಗೆಲ್ಲ ಖುಷಿ ನೀಡುತ್ತದೆ. ಆದರೆ ನಿಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುವರೆಲ್ಲ ಬೈಯುವುದೇ ಪತ್ರಿಕೋದ್ಯಮ ಎಂದುಕೊಂಡರೆ ಅದು ಅಪಾಯ. ಜೊತೆಗೆ ಸಣ್ನ ಪುಟ್ಟ ಹುಡುಗರು ನಿಮ್ಮದೇ ದಾಟಿಯಲ್ಲಿ ಬೈಯಲು ಪ್ರಾರಂಭಿಸಿದರೆ ಯಾರೂ ಕೇಳುವುದಿಲ್ಲ. ಬೈಯುವವನಿಗೂ ಒಂದು ಯೋಗ್ಯತೆ ಬೇಕಾಗುತ್ತದೆ ಎಂದೇ ನಾನು. ಲಂಕೇಶ್ ಎಲ್ಲವನ್ನೂ ಕೇಳಿಸಿಕೊಂಡರು. ಹಾಗೆ ಮಧ್ಯಾನ್ಹದವರೆಗೆ ಹತ್ತಿರಕ್ಕೆ ಕೂಡ್ರಿಸಿಕೊಂಡು ಮಾತನಾಡಿದರು. ನಮ್ಮಂಥಹ ಲಕ್ಶಾಂತರ ಜನರನ್ನು ಮಾನಸಿಕವಾಗಿ ಬೆಳೆಸಿದ ಲಂಕೇಶ್ ಹಾಗೆ ಹಾಸಿಗೆಯ ಮೇಲೆ ಮಲಗಿದ್ದನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಅಗ ನಾನು ಕನ್ನಡ ಪ್ರಭದಲ್ಲಿ ಬರೆಯುತ್ತಿದ್ದ ರಾಜಕೀಯ ವರದಿಗಳನ್ನು ಮೆಚ್ಚಿಕೊಂಡಿದ್ದ ಅವರು ಪತ್ರಿಕೋದ್ಯಮಿಗೆ ನ್ಯಾಯ ನಿಷ್ಠುರತೆ ಬೇಕು ಅದು ನಿನಗೆ ಇದೆ ಎಂದು ನನ್ನ ಬೆನ್ನು ತಟ್ಟಿದ್ದನ್ನು ನಾನು ಹೇಗೆ ತಾನೆ ಮರೆಯಲಿ ? ಈಗ ಪ್ರತಿದಿನ ಪತ್ರಿಕೆ ಓದುವಾಗ ಲಂಕೇಶ್ ನೆನಪಾಗುತ್ತಾರೆ. ಅವರ ಜೊತೆ ಬೇರೆ ಸಂಪಾದಕರನ್ನು ಪತ್ರಿಕೋದ್ಯಮಿಗಳನ್ನು ಹೋಲಿಸಲು ಯತ್ನಿಸುತ್ತೇನೆ. ಮನಸ್ಸಿಗೆ ಬೇಸರವಾಗುತ್ತದೆ. ಕೆಲವೊಮ್ಮೆ ಈ ಪತ್ರಿಕೋದ್ಯಮವೇ ಬೇಡ ಎಂದು ಅನ್ನಿಸುತ್ತದೆ. ಅದರೆ ಬದುಕಲು ಬೇರೆ ದಾರಿ ಯಾವುದು ಎಂದು ತಿಳಿಯದೇ ಸುಮ್ಮನಾಗುತ್ತೇನೆ. ಇಂದಿನ ಪತ್ರಿಕೋದ್ಯಮವನ್ನು ನೋಡಿ ನಾನು ಸಿನಿಕನಾಗಲಾರೆ. ಎಲ್ಲವೂ ಎಲ್ಲರೂ ಕೆಟ್ಟವರು ಎಂದು ಹೇಳಲಾರೆ. ಆದರೆ ಪತ್ರಿಕೋದ್ಯಮ ಸಾಗುತ್ತಿರುವ ದಾರಿ ಬೇಸರವನ್ನು ಉಂಟು ಮಾಡುತ್ತದೆ. ಆಗೆಲ್ಲ ಲಂಕೇಶ್ ನೆನಪಾಗಿ ಹೊಸ ಹುಮ್ಮಸು ಮೂಡುತ್ತದೆ. ಇದೆಲ್ಲ ಬದಲಾಗುತ್ತದೆ ಎಂದು ಅನ್ನಿಸುತ್ತದೆ.

Sunday, November 20, 2011

ನನ್ನ ಶಾಲೆ ಮತ್ತು ಮೋಟು ಕಾನಿನ ಭೂತ...!

ನಾನು ಓದಿದ ಶಾಲೆಗೆ ನೂರು ವರ್ಷ !
ಈ ಶಾಲೆ ಇರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಸುಮಾರು ನಾಲ್ಕು ಕಿಮೀ ದೂರದಲ್ಲಿ. ಸಿದ್ಧಾಪುರದಿಂದ ಸಿರ್ಸಿ ಮಾರ್ಗದಲ್ಲಿ ಬಂದು ಹಾರ್ಸಿಕಟ್ಟಾಗೆ ಹೋಗುವ ದಾರಿಯಲ್ಲಿ ತಿರುಗಿಕೊಂಡರೆ ಸಿಗುತ್ತದೆ, ಕೋಲಸಿರ್ಸಿ. ಆದರೆ ಆ ಊರನ್ನು ಕೋಲಸಿರ್ಸಿ ಎಂದು ಸಂಬೋಧಿಸುವುದು ತುಂಬಾ ಕಡಿಮೆ. ಜನರ ಬಾಯಲ್ಲಿ ಇದು ಕೋಲ್ಸೆ. ಈ ಊರಿಗೆ ಕೋಲಸಿರ್ಸಿ ಎಂಬ ಹೆಸರು ಯಾಕೆ ಬಂತು ಎಂಬುದು ಯಾರಿಗೂ ತಿಳಿಯದು. ಬಹುಶಃ ಸಿರ್ಸಿ ಸಿದ್ದಾಪುರದ ದಾರಿಯಲ್ಲಿ ಈ ಹೆಸರು ಬಂದರೂ ಬಂದಿರಬಹುದು.
ನಾನು ಆ ಶಾಲೆಗೆ ಹೋಗುವಾಗ ನಡೆದುಕೊಂಡೇ ಹೋಗಬೇಕಗಿತ್ತು. ಸುಮಾರು ಮೂರು ಕಿಮೀ ಕಾಡಿನ ದಾರಿ. ಆ ಕಾಡಿನ ದಾರಿಯಲ್ಲಿ ನನ್ನ ಜೊತೆಗೆ ಶಾಲೆಗೆ ಬರುತ್ತಿದ್ದ ನನ್ನ ಚಿಕ್ಕಪ್ಪ ಬಾಲಚಂದ್ರ ಹಾಗೂ ನಾನು ಹಲವು ಸಲ ಹುಲಿಯನ್ನು ನೋಡಿದ್ದುಂಟು. ಮಲಗಿರುವ ಹುಲಿಯನ್ನು ಕಲ್ಲು ಹೊಡೆದು ಎಬ್ಬಿಸುವ ಬಗ್ಗೆ ಮಾತನಾಡಿದ್ದು ಉಂಟು. ಆದರೆ ಅಲ್ಲಿ ಇಂದು ಹುಲಿಯೂ ಇಲ್ಲ, ಆಗಿನ ಕಾಡು ಇಲ್ಲ.
ಅದರ ಜೊತೆಗೆ ಅರ್ಧ ದಾರಿಯಲ್ಲಿ ಇದ್ದ ಮೋಟ ಕಾನಿನ ಭೂತ..
ಈ ಭೂತ ಸ್ಥಾನದ ಹಿಂದೆ ಸ್ಮಶಾನವಿತ್ತು. ಹೀಗಾಗಿ ಈ ಭೂತಕ್ಕೆ ಭಯಾನಕತೆ ಕೂಡ ಬಂದಿತ್ತು. ಈ ದಾರಿಯಲ್ಲಿ ಸಾಗುವವರು ಭೂತನಿಗೆ ಭಯ ಭಕ್ತಿಯಿಂದ ಕೈಮುಗಿದು ಸಾಗುತ್ತಿದ್ದರು. ಹಾಗೆ ಅಮಾವಾಸ್ಯೆಯೆಂದು ಹಲವರು ಅಲ್ಲಿ ಕುರಿ ಕೊಯ್ಯುತ್ತಿದ್ದರು. ಕೊಯ್ದ ಕುರಿಯ ರಕ್ತವನ್ನು ಭೂತದ ಕಲ್ಲಿಗೆ ಅಭಿಷೇಕ ಮಾಡುತ್ತಿದ್ದರು. ಇದರಿಂದ ಕೆಲವು ದಿನಗಳ ಕಾಲ ಭೂತನ ಕಲ್ಲು ರಕ್ತದಿಂದಾಗಿ ಕೆಂಪಗೆ ಕಾಣುತ್ತಿತ್ತು. ಮೋಟಕಾನಿನ ಈ ಭೂತ ತುಂಬಾ ಶಕ್ತಿವಂತ ಎಂದು ನನ್ನ ಅಜ್ಜ ಆಗಾಗ ಹೇಳುತ್ತಿದ್ದುದುಂಟು. ಆದರೆ ನಮ್ಮ ಮನೆಯವರು ಈ ಭೂತನಿಗೆ ನಡೆದುಕೊಳ್ಳುತ್ತಿರಲಿಲ್ಲ. ಹಾಗೆ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಇರುವ ಹವ್ಯಕರಿಗೂ ಈ ಭೂತನಿಗೂ ಅಂತಹ ಸಂಬಂಧ ಇರಲಿಲ್ಲ. ಕೋಳಿ ಕೊಯ್ಯುವುದನ್ನು ನೋಡಬಾರದು ಎಂದು ಅಮ್ಮ ಶಾಲೆಗೆ ಹೋಗುವಾಗ ಹೇಳಿ ಕಳಿಸುತ್ತಿದ್ದರು. ಆದರೆ ಭಯದಿಂದ ತಲೆ ಬಗ್ಗಿಸಿ ಆ ಬೂತನ ಸ್ಥಾನವನ್ನು ದಾಟಿ ಹೋಗಬೇಕು ಎಂದುಕೊಂಡರೂ ಆ ಸ್ಥಳಕ್ಕೆ ಬಂದ ತಕ್ಷಣ ಕಣ್ನು ಮೇಲೆ ಹೋಗುತ್ತಿತ್ತು. ಆಗೆಲ್ಲ ಕೋಳಿ ಕೊಯ್ದ ಮೇಲೆ ಅದರ ತಲೆ ಚಡಪಡಿಸುವುದು ಕಾಣುತ್ತಿತ್ತು. ಹಾಗೆ ಸ್ವಲ್ಪ ಹೊತ್ತು ಮೇಲಕ್ಕೆ ಹಾರಿದ ಕೋಳಿಯ ದೇಹ ನಂತರ ನಿಸ್ತೇಜವಾಗುತ್ತಿತ್ತು.
ನಮ್ಮ ಕೋಲ್ಸೆ ಶಾಲೆಯ ಪಕ್ಕದಲ್ಲಿ ಒಂದು ಅರಳಿ ಮರವಿತ್ತು. ಆ ಮರ ಈಗ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಆರಿದ್ರಾ ಮಳೆಯ ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿದ್ದುದು ಅದ್ರೆ ಮಳೆ ಹಬ್ಬ. ನಡು ಮಳೆಗಾಲದಲ್ಲಿ ನಡೆಯುವ ಈ ಹಬ್ಬದಲ್ಲಿ ಒಂದೇ ದಿನ ನೂರಾರು ಕುರಿಗಳನ್ನು ಬಲಿ ಕೊಡಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ನಾವು ಶಾಲೆಗೆ ಹೋಗುತ್ತಿರಲಿಲ್ಲ. ಕಡಿದ ಕುರಿಯನ್ನು ನೋಡಬಾರದು ಎಂಬ ಕಾರಣಕ್ಕೆ ನಮ್ಮ ಶಾಲೆಯ ಮೇಸ್ತ್ರು ನಮಗೆ ರಜೆ ಕೊಟ್ಟು ಬಿಡುತ್ತಿದ್ದರು. ನೂರಾರು ಕುರಿ ಕೋಳಿಯ ರಕ್ತಾಭಿಷೇಕಕ್ಕೆ ಸಾಕ್ಷಿಯಾಗಿರುತ್ತಿದ್ದ ಈ ಮರ ಉಳಿದ ದಿನಗಳಲ್ಲಿ ಎಲ್ಲ ಮರಗಳಂತೆ ಇರುತ್ತಿತ್ತು. ನಮ್ಮ ಶಾಲೆಯಲ್ಲಿ ಅಗ ಶೌಚಾಲಯ ಇರದಿದ್ದರಿಂದ ನಾವು ಶಾಲೆ ಮಕ್ಕಳು ಮೂತ್ರ ವಿಸರ್ಜೆನೆಗೆ ಈ ಸ್ಥಳವನ್ನು ಬಳಸುತ್ತಿದ್ದೆವು. ಆ ಮರದ ಮರೆಯಲ್ಲಿ ನಿಂತರೆ ಯಾರೂ ಕಾಣುತ್ತಿರಲಿಲ್ಲ. ಅಲ್ಲಿ ಮೂತ್ರ ವಿಸರ್ಜನೆಗೆ ಉಚ್ಚೆ ಕುಣಿಗಳನ್ನು ನಾವು ನಿರ್ಮಿಸುತ್ತಿದ್ದೆವು.
ನಮ್ಮದು ಏಳನೆಯ ತರಗತಿಯವರೆಗಿನ ಶಾಲೆ. ಅಲ್ಲಿ ಬರುವ ಮಕ್ಕಳಲ್ಲಿ ಬಹುತೇಕರು ಈಡಿಗರು ಮತ್ತು ಹಿಂದುಳಿದ ವರ್ಗದವರ ಮಕ್ಕಳು. ಇವರನ್ನು ಬಿಟ್ಟರೆ ಹತ್ತಾರು ಲಿಂಗಾಯಿತರ ಮಕ್ಕಳು. ನಾವು ಎರಡು ಮೂರು ಮಕ್ಕಳು ಮಾತ್ರ ಹವ್ಯಕರು.
ಮಳೆಗಾಲ ಬಂದರೆ ಶಾಲೆ ಸೋರುತ್ತಿತ್ತು. ಹೀಗಾಗಿ ಮಳೆಗಾಲಕ್ಕೆ ಮೊದಲು ನಾವು ಶಾಲೆಯ ಮೇಲೆ ಏರಿ ಒಡೆದ ಹೆಂಚುಗಳನ್ನು ತೆಗೆದು ಹೊಸ ಹೆಂಚು ಹಾಕುತ್ತಿದ್ದೆವು. ಹಾಗೆ ಶಾಲೆಯ ಎದರು ಎಲ್ಲ ರೀತಿಯ ತರಕಾರಿಗಳನ್ನು ನಾವು ಬೆಳೆಸಿದ್ದೆವು. ಎಲ್ಲೂ ಬೆಳೆಯದಂತೆ ಬೆಳೆದ ಆ ತರಕಾರಿ ಎಲ್ಲಿಗೆ ಹೋಗುತ್ತದೆ ಎಂಬುದು ಮಾತ್ರ ನಮಗೆ ತಿಳಿಯುತ್ತಿರಲಿಲ್ಲ. ಶಾಲೆಯಲ್ಲಿರುವ ಎಲ್ಲ ಟೀಚರುಗಳ ಮನೆಗೆ ಇದೇ ತರಕಾರಿ ಹೋಗುತ್ತದೆ ಎಂಬ ಮಾತು ಕೇಳಿ ಬಂದಿದ್ದವು. ಆದರೆ ಈ ಮಾತಿಗೆ ನಮ್ಮ ಬಳಿ ಯಾವ ಪುರಾವೆಯೂ ಇರಲಿಲ್ಲ.
ನಮ್ಮ ಶಾಲೆಯಲ್ಲಿ ಇದ್ದ ಟೀಚರುಗಳಲ್ಲಿ ಎಂಟು ಜನ ಮಿಸ್ ಗಳು. ನಾವು ಅವರನ್ನು ಅಕ್ಕೋರೆ ಎಂದು ಸಂಬೊಂಧಿಸುತ್ತಿದ್ದೆವು. ಇವರಲ್ಲಿ ಸುಮಿತ್ರಾ ಅಕ್ಕೋರಿಗೆ ನನ್ನ ಬಗ್ಗೆ ತುಂಬಾ ಪ್ರೀತಿ. ನಾನು ಅವರಿಗೆ ನಮ್ಮ ಮನೆಯಲ್ಲಿ ಬೆಳೆಯುತ್ತಿದ್ದ ದೊಡ್ದ ದೊಡ್ದ ಡೇರೆ ಹೂವುಗಳನ್ನು ಕೊಡುತ್ತಿದ್ದೆ. ಅವರು ಅದನ್ನು ಮುಡಿದುಕೊಂಡು ಶಶಿ ತಂದು ಕೊಟ್ಟಿದ್ದು ಎಂದು ಹೆಮ್ಮೆಯಿಂದ ಹೇಳುತ್ತಿದ್ದರು.
ನಾಲ್ಕನೆ ತರಗತಿಯಲ್ಲಿ ಓದುತ್ತಿದ್ದ ನಾನು ಎಲ್ಲರಿಗಿಂತ ಸಣ್ಣಗಿದ್ದೆ. ಕುಳ್ಳ ಬೇರೆ. ಕೆಂಪಗಿನ ಒಂದು ಮುದ್ದೆಯ ಹಾಗಿದ್ದ ನನ್ನನ್ನು ಕಂಡರೆ ಎಲ್ಲ ಶಿಕ್ಷರಿಗೂ ಪ್ರೀತಿ. ಅದೊಂದು ದಿನ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ತಲೆ ತಿರುಗಿ ಬಿದ್ದು ಬಿಟ್ಟೆ. ಪಟಗಾರ್ ಮಾಸ್ತರು ಮತ್ತು ಸುಮಿತ್ರಾ ಅಕ್ಕೋರು ನನ್ನನ್ನು ಕಳುಹಿಸಿ ಕೊಡಲು ನನ್ನ ಜೊತೆಗೆ ನಮ್ಮ ಮನೆಗೆ ಬಂದರು. ಕಾಡಿನ ಹಾದಿಯಲ್ಲಿ ಸುಮಾರು ಅರ್ಧ ಗಂಟೆ ನಡೆದು ಮನೆಗೆ ಬಂದ ಮೇಲೆ ನಾನು ತಲೆ ತಿರುಗಿ ಬಿದ್ದಿದ್ದನ್ನು ಹೇಳಿದ ಮಾಸ್ತರು ನಾನು ತುಂಬಾ ವೀಕ್ ಇರುವುದರಿಂದ ಹೀಗಾಗಿದೆ ಎಂದು ಹೇಳಿ ಅವನು ಒಂದೆರದು ದಿನ ರಜಾ ತೆಗೆದುಕೊಳ್ಳಲಿ ಎಂದು ಸ್ಯಾಂಕ್ಷನ್ ಮಾಡಿಯೇ ಬಿಟ್ಟರು.
ಅಮ್ಮ ಅವತ್ತೆ ಮಾಡಿದ್ದ ತೊಡೆದೆಳ್ಳವು ಅನ್ನು ಪ್ರೀತಿಯಿಂದ ನಮ್ಮ ಮಾಸ್ತರು ಮತ್ತು ಅಕ್ಕೋರಿಗೆ ಕೊಟ್ಟರು. ಮಲೇನಾಡಿನಲ್ಲಿ ಕಬ್ಬಿನ ಹಾಲಿನಿಂದ ಮಾಡುವ ಈ ತೊಡೆದೆಳ್ಳವು ಕರಾವಳಿಯವರಾದ ಅವರಿಗೆ ಅಪರಿಚಿತವಾಗಿತ್ತು. ದೊಡ್ಡ ಮಡಿಕೆಯನ್ನು ಮಗಚಿ ಒಲೆಯ ಮೇಲಿಟ್ಟು ಅದರ ಮೇಲೆ ದೂಸೆಯಂತೆ ಹಾಕುವ ವಿಶಿಷ್ಟವಾದದ್ದು ತೊಡೆದೆಳ್ಳವು. ಅದನ್ನು ಬಾಯಿಯಲ್ಲಿ ಇಟ್ಟ ಕೆಲವೇ ಸೆಕೆಂಡುಗಳಲ್ಲಿ ಅದು ಕರಗಿ ಹೋಗುತ್ತದೆ. ಇದು ಯಾವ ರೀತಿಯ ತಿಂಡಿ ಎಂಬುದು ಪಟಗಾರ್ ಮಾಸ್ತರಿಗೆ ಅರ್ಥವಾಗಲಿಲ್ಲ. ಆದರೆ ಅವರಿಗೆ ಅದರ ಮೋಹ ಮಾತ್ರ ಹೋಗಲಿಲ್ಲ. ಅಮ್ಮ ಅವರಿಗಾಗಿ ನಾಲ್ಕಾರು ತೊಡೆದೆಳ್ಲವುಗಳನ್ನು ಪ್ರೀತಿಯಿಂದ ಕಟ್ಟಿ ಕೊಟ್ಟಳು.
ಇದಾದ ಮೇಲೆ ಕಂಡಾಗಲೆಲ್ಲ ನಿಮ್ಮ ಮನೆಯ ತೊಡೆದೆಳ್ಳವು ಅದ್ಭುತ ಅತ್ಯದ್ಭುತ ಎಂದು ಅವರು ಹೇಳುತ್ತಿದ್ದರು. ಜೊತೆಗೆ ಇದೇ ಕಾರಣಕ್ಕೆ ಅವರ ದೃಷ್ಟಿಯಲ್ಲಿ ನನ್ನ ಗೌರವವೂ ಹೆಚಾಯಿತು. ಆದರೆ ನಾನು ಇಡೀ ಘಟನೆಯನ್ನು ಅರ್ಥ ಮಾಡಿಕೊಂಡಿದ್ದೇ ಬೇರೆ ರೀತಿಯಲ್ಲಿ. ನಾನು ತಲೆ ತಿರುಗಿ ಬಿದ್ದರೆ ನನಗೆ ರಜೆ ನೀಡುತ್ತಾರೆ ಎಂಬ ಸತ್ಯದ ದರ್ಶನ ನನಗಾಗಿತ್ತು. ಹೀಗಾಗಿ ವಾರಕ್ಕೆ ಒಮ್ಮೆ ಪ್ರಾರ್ಥನೆಯ ವೇಳೆಯಲ್ಲಿ ತಲೆ ತಿರುಗಿ ಬಿದ್ದು ಬಿಡುತ್ತಿದ್ದೆ. ಇದು ನಾಟಕವೋ ಅಥವಾ ನಿಜವೂ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳದ ಪಟಗಾರ್ ಮಾಸ್ತರು ನನ್ನನ್ನು ಮನೆಗೆ ಕಳುಹಿಸಿಕೊಡಲು ಸಿದ್ಧವಾಗುತ್ತಿದ್ದರು. ನಮ್ಮ ಮನೆಗೆ ಬಂದು ವಿಶೇಷ ತಿಂಡಿಗಳನ್ನು ತಿಂದು ಅವರು ಶಾಲೆಗೆ ಹಿಂತಿರುಗುತ್ತಿದ್ದರು. ನಾನು ರಜಾದ ಸುಖವನ್ನು ಅನುಭವಿಸುತ್ತಿದ್ದೆ. ಕಾಡುಮೇಡುಗಳಲ್ಲಿ ಅಲೆದು ರಜಾವನ್ನು ಸಾರ್ಥಕವನ್ನಾಗಿ ಮಾಡಿಕೊಳ್ಳುತ್ತಿದ್ದೆ. ಮಳೆಗಾಲದಲ್ಲಿ ಬಹಳಷ್ಟು ದಿನ ಶಾಲೆಯೇ ನಡೆಯುತ್ತಿರಲಿಲ್ಲ. ದೊಡ್ಡ ಮಳೆ ಬಂದರೆ ನೀರು ಒಳಗೆ ಬರುತ್ತಿದ್ದರಿಂದ ಶಾಲೆಗೆ ರಜಾ ಘೋಷಿಸಲಾಗುತ್ತಿತ್ತು. ಹಾಗೆ ನಮ್ಮ ಮನೆ ಮತ್ತು ಶಾಲೆಯ ನಡುವೆ ಕಾಡಿನ ಜೊತೆಗೆ ಸಣ್ಣ ಸಣ್ನ ಹಳ್ಳಗಳೂ ಇದ್ದವು. ಈ ಹಳ್ಳಗಳು ತುಂಬಿದರೆ ಅದಕ್ಕೆ ದಾಟಲು ಹಾಕಿದ ಸಂಕ ಕೊಚ್ಚಿ ಹೋಗುತ್ತಿತ್ತು. ಹೀಗಾಗಿ ನಾವು ಹಳ್ಳದ ಬಳಿ ಬಂದು ಸಂಕ ಇಲ್ಲ ಎಂದು ಮನೆಗೆ ಹೋಗಿ ಬಿಡುತ್ತಿದ್ದವು.
ಈ ಶಾಲೆಯಲ್ಲಿನ ನನ್ನ ಆನುಭವದ ಭುತ್ತಿ ದೊಡ್ದದು. ಅದನ್ನು ಇನ್ನೊಮ್ಮೆ ಹೇಳುತ್ತೇನೆ. ನಾನು ಮೊದಲು ಹೇಳಿದ ಮೋಟು ಕಾನಿನ ಭೂತ ಮತ್ತು ನನಗೂ ಇರುವ ಸಂಬಂಧದ ಬಗ್ಗೆ ಒಂದೆರಡು ಮಾತುಗಳನ್ನು ಹೇಳಲೇ ಬೇಕು.
ನನ್ನಲ್ಲಿ ಭಯ ಹುಟ್ಟಿಸಿದ್ದ ಈ ಭೂತ ನನಗೆ ತೀವ್ರವಾಗಿ ಕಾಡುತ್ತಿದ್ದುದು ಪರೀಕ್ಷೆ ಬಂದಾಗ ಮಾತ್ರ. ಆಗ ಮಾತ್ರ ಭೂತನ ಎದುರು ನಿಂತು ನಾನು ಪರೀಕ್ಷೆಯಲ್ಲಿ ಪಾಸಾದರೆ ೫೦ ತೆಂಗಿನ ಕಾಯಿ ಒಡೆಸುತ್ತೇನೆ ಎಂದು ಹೇಳುತ್ತಿದ್ದೆ. ಪರೀಕ್ಷೆಯಲ್ಲಿ ಪಾಸಾದ ಮೇಲೆ ನನಗೆ ಈ ಭೂತನ ಬಗ್ಗೆ ಗೌರವ ಉಳಿಯುತ್ತಿರಲಿಲ್ಲ. ಹೀಗಾಗಿ ಭೂತಪ್ಪನಿಗೆ ತೆಂಗಿನ ಕಾಯಿಯೂ ಸಿಗುತ್ತಿರಲಿಲ್ಲ. ಎಳು ವರ್ಷ ಕೋಲ್ಸೆ ಶಾಲೆಗೆ ಹೋದವ, ಪ್ರತಿ ವರ್ಷ ೫೦ ತೆಂಗಿನ ಕಾಯಿ ಹರಿಕೆ ಹೇಳಿಕೊಂಡಿದ್ದೇನೆ. ಒಂದೇ ಒಂದು ತೆಂಗಿನ ಕಾಯಿ ಹರಿಕೆಯನ್ನು ತೀರಿಸಿಲ್ಲ. ಆದರೆ ಮೋಟುಕಾನಿನ ಭೂತ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ, ನನ್ನನ್ನು ಸಲಹುತ್ತಲೇ ಇದ್ದಾನೆ.
ಕಳೆದ ಶನಿವಾರ ಊರಿನವರೆಲ್ಲ ಸೇರಿ ಈ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನನ್ನನ್ನು ಕರೆಯಲು ಬೆಂಗಳೂರಿಗೆ ಬಂದು ಮಾತನಾಡಿ ಹೋಗಿದ್ದರು. ನಾನು ನನ್ನ ಶಾಲೆಯ ಶತಮನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಲಬೇಕು ಎಂದುಕೊಂಡಿದ್ದೆ. ಆದರೆ ಊರಿಗೆ ಹೋದರೂ ಶಾಲೆಗೆ ಃಓಗಲು ಆಗಲಿಲ್ಲ. ಯಾಕೆಂದರೆ ಅನಿರೀಕ್ಷಿತವಾಗಿ ನನ್ನ ಅಪ್ಪ ತೀರಿಕೊಂಡಿದ್ದ.
ಹೀಗಿದ್ದರೂ ಊರಿನ ಹಿರಿಯಲು ಶಾಲು ಸ್ಮರಣ ಫಲಕ ಹಿಡಿಕೊಂಡು ನನ್ನ ಮನೆಗೆ ಬಂದು ಸತ್ಕಾರ ಮಾಡಿದರು. ಈ ಶಾಲೆಯಲ್ಲಿ ಕಲಿತ ನೀನು ದೊಡ್ಡ ಮನುಷ್ಯನಗಿದ್ದೀಯಾ ಎಂದು ಪ್ರೀತಿಯ ಮಾತನಾಡಿದರು. ಅಪ್ಪನನ್ನು ಕಳೆದುಕೊಂಡ ಆ ಸಂದರ್ಭದಲ್ಲೂ ನನಗೆ ಮನಸ್ಸಿನಲ್ಲಿ ಮೂಡಿದ್ದು ಕೃತಜ್ನತೆ. ನೆನಪಾಗಿದ್ದು ಅದೇ ನನ್ನ ಶಾಲಾ ದಿನಗಳು.

Sunday, November 13, 2011

ನನ್ನ ಅಪ್ಪ ಇನ್ನಿಲ್ಲ.....!

ನನ್ನ ಅಪ್ಪ ಕಳೆದ ಮಂಗಳವಾರ ಇಹಲೋಕ ಯಾತ್ರೆ ಮುಗಿಸಿದ. ಅಪ್ಪನಿಗೆ ಹುಷಾರಿಲ್ಲ ಎಂಬುದು ದೂರದ ಬೆಂಗಳೂರಿನಲ್ಲಿರುವ ನನಗೆ ತಿಳಿದಿತ್ತು. ಆದರೆ ಇಷ್ಟು ಬೇಗ ಆತ ಜೈ ಎಂದು ಹೊರಟಿ ಬಿಡುತ್ತಾನೆ ಎಂದು ನಾನು ಅಂದುಕೊಂಡಿರಲಿಲ್ಲ.
ಅಪ್ಪನನ್ನು ಕಳುಹಿಸಿಕೊಟ್ಟ ಮೇಲೆ ನಾನು ಅವನ ಬಗ್ಗೆ ಯೋಚಿಸುತ್ತೇನೆ. ನನ್ನ ಅಪ್ಪ ಹೇಗಿದ್ದ ? ಆತ ಏನನ್ನು ನಂಬಿದ್ದ ? ಆತ ಹೇಗೆ ಬದುಕಿದ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತೇನೆ.
ನನ್ನ ಅಪ್ಪ ಎಂದ ತಕ್ಷಣ ನನಗೆ ನೆನಪಾಗುವುದು ಆತನ ನೆಹರೂ ಶರ್ಟು ಮತ್ತು ಬಿಳಿಯ ಲುಂಗಿ. ಆತ ಎಂದೂ ಖಾದಿಯನ್ನು ಬಿಟ್ಟು ಬೇರೆ ಬಟ್ಟೆ ಹಾಕಲಿಲ್ಲ. ಸದಾ ಗರಿ ಗರಿಯಾದ ಇಸ್ತ್ರೀ ಮಾಡಿದ ಶರ್ಟು ಲುಂಗಿ. ಹೆಗಲ ಮೇಲೆ ಒಂದು ಶಾಲು. ಆತ ಹತ್ತಿರದ ಸಿದ್ದಾಪುರಕ್ಕೆ ಹೊರಟನೆಂದರೆ ಅವನ ಸುತ್ತ ಇರುತ್ತಿದ್ದ ನಾಲ್ಕಾರು ಜನ. ಅವರ ಜೊತೆ ಅವನ ಮೆರವಣಿಗೆ ಪೇಟೆಯಲ್ಲಿ ಹೊರಟಿತೆಂದರೆ ಅದನ್ನು ನೋದುವುದೇ ಚಂದ. ಮನೆಯಿಂದ ಹೊರಟ ಮೊದಲು ಬರುತ್ತಿದ್ದುದು ಕನ್ಸುಮರ್ಸ್ ಸೊಸೈಟಿಗೆ. ಅಲ್ಲಿಂದ ಚೌದರಿಯ ಪ್ರದೀಪ್ ಸ್ಟೋರ್ಸ್. ಅಲ್ಲೆಲ್ಲ ಸ್ನೇಹಿತರ ಜೊತೆ ಮಾತನಾಡಿ ಮಹಾಲಸಾ ಹೋಟೆಲ್ ಗೆ ಬಂದು ಒಂದು ಕಪ್ ಬಿಸಿ ಬಿಸಿ ಚಹ ಕುಡಿದು ಜೊತೆಗಿದ್ದವರಿಗೆಲ್ಲ ಚಹಾ ಸಮಾರಾಧನೆ.
ಬೆಳಿಗ್ಗೆ ಹತ್ತಕ್ಕೋ ಹನ್ನೊಂದಕ್ಕೋ ಪೇಟೆಗೆ ಹೋದರೆ ಅವನು ತಿರುಗಿ ಮನೆಗೆ ಬರುತ್ತಿದ್ದುದು ರಾತ್ರಿ ೮ ಗಂಟೆ ಸುಮಾರಿಗೆ. ಬರುವಾಗ ಅವನ ಕೈಯಲ್ಲಿ ಇರುತ್ತಿದ್ದ ಉದ್ದನೆಯ ಜೋಲು ಚೀಲದಲ್ಲಿ ಎಲ್ಲ ದಿನ ಪತ್ರಿಕೆಗಳು ಮಾಸಿಕಗಳು ಇರುತ್ತಿದ್ದವು. ಶಿವರಾಮ ಕಾರಂತ್, ಕುವೆಂಪು, ತೇಜಸ್ವಿ, ಮೊದಲಾದವರ ಯಾವುದೇ ಹೊಸ ಪುಸ್ತಕ ಬರಲಿ, ಅದು ಮೊದಲು ಅಪ್ಪನ ಕೈಚೀಲದಲ್ಲಿ ನುಸುಳಿಕೊಂಡು ಮನೆಯ ಲೈಬ್ರರಿ ಸೇರುತ್ತಿದ್ದವು. ಆತ ಅತಿಯಾಗಿ ಇಷ್ಟ ಪಡುತ್ತಿದ್ದ ದಿನ ಪತ್ರಿಕೆ ಎಂದರೆ ದಿ ಹಿಂದೂ. ಸಿ ರಾಜಗೋಪಾಲಾಚಾರಿ ಅವರು ತರುತ್ತಿದ್ದ ಸ್ವರಾಜ್ ಪತ್ರಿಕೆಯನ್ನು ಅವನು ತರಿಸುತ್ತಿದ್ದ. ಹಾಗೆ ಜರ್ಮನ್ ನ್ಯೂಸ್, ಸೋವಿಯತ್ ಲ್ಯಾಂಡ್ ಪತ್ರಿಕೆಗಳು ಮನೆಗೆ ಬರುತ್ತಿದ್ದವು.
ರಾತ್ರಿ ಮನೆಗೆ ಬಂದವ ಹಿಂದೂ ಪತ್ರಿಕೆಯನ್ನು ತೆಗೆದುಕೊಂಡು ದೊಡ್ಡ ದ್ವನಿಯಲ್ಲಿ ಪಠಣ ಮಾಡುತ್ತಿದ್ದ. ಹಾಗೆ ಸುಧಾ ಕಸ್ತೂರಿ, ಸಂಗಮ, ಮೊದಲಾದ ಪತ್ರಿಕೆಗಳನ್ನು ತರಿಸುತ್ತಿದ್ದ ಅಪ್ಪ ತಾನು ಓದಿ ಮುಗಿಸಿದ ಹೊರತೂ ಅ ಪತ್ರಿಕೆಗಳನ್ನು ಬೇರೆಯವರಿಗೆ ಕೊಡುತ್ತಿರಲಿಲ್ಲ. ಆತ ಒಂದು ರೀತಿಯಲ್ಲಿ ಹುಟ್ಟಾ ಕಾಂಗ್ರೆಸ್ಸಿಗ. ಆದರೆ ಹಳೆಗನ್ನಡ ಮತ್ತು ಹೊಸ ಗನ್ನಡ ಸಾಹಿತ್ಯದ ಬಗ್ಗೆ ಅವನಿಗೆ ಪ್ರೀತಿ ಇದ್ದಂತೆ ಇಂಗ್ಲೀಷ್ ಸಾಹಿತ್ಯದ ಬಗ್ಗೆಯೂಅ ಅಪಾರವಾದ ಪ್ರೀತಿ ಇತ್ತು.
ಷೇಕ್ಶಫಿಯರ್ ನಾಟಕಗಳನ್ನು ಆರಾಧಿಸುತ್ತಿದ್ದ ಅಪ್ಪ ಅವುಗಳನ್ನು ಓದಲು ನೀಡುತ್ತಿದ್ದ. ಹಾಗೆ ಸಮರ್ ಸೆಟ್ ಮಾಂ ನ ಕಾದಂಬರಿಗಳು. ನನಗೆ ಇಂಗ್ಲೀಷ್ ಸಾಹಿತ್ಯವನ್ನು ಓದಲು ನೀಡುತ್ತಿದ್ದ ಆತ ಅವುಗಳ ಬಗ್ಗೆ ವಿಮರ್ಷೆ ಮಾಡುತ್ತಿದ್ದ. ಆದರೆ ನನಗೆ ಸರಿಯಾದ ಇಂಗ್ಲೀಷ್ ಬರುವುದಿಲ್ಲ ಎಂಬ ಸಿಟ್ಟಿ ಅವನಿಗೆ ಕೊನೆಯವರೆಗೆ ಇತ್ತು. ನಾನು ಬೆಳಗಾವಿಯಲ್ಲಿ ಕಾಲೇಜಿಗೆ ಹೋಗುವಾಗ ಇಂಗ್ಲೀಷ್ ನಲ್ಲೇ ಪತ್ರ ಬರೆಯುವಂತೆ ಅದೇಶ ನೀಡಿದ್ದ. ನಾನು ಬರೆದ ಇಂಗ್ಲೀಷ್ ಪತ್ರಗಳಲ್ಲಿ ಇರುವ ತಪ್ಪುಗಳನ್ನು ಮಾರ್ಕ್ ಮಾಡಿ ನನಗೆ ಕಳುಹಿಸುತ್ತಿದ್ದ. ನಾನು ಅಪ್ಪನ ಈ ಅವತಾರಕ್ಕೆ ಹೆದರಿ ಅವನಿಗೆಪತ್ರ ಬರೆಯುವುದನ್ನೇ ನಿಲ್ಲಿಸಿ ಬಿಟ್ಟೆ.
ಹಳೆಗನ್ನಡ ಸಹಿತ್ಯವೂ ಕೂಡ ಅವನನ್ನು ಸೆಳೆದಿತ್ತು. ರನ್ನ ಹರಿಹರ ರಾಘವಾಂಕ, ಜನ್ನ ಪೊನ್ನ ಮೊದಲಾದವರ ಕೃತಿಗಳು ಅವನಿಗೆ ಬಾಯಿ ಪಾಠ. ಕುಮಾರವ್ಯಾಸ ಭಾರತವನ್ನು ಅವರು ದೊಡ್ದ ಧ್ವನಿಯಲ್ಲಿ ಓದುತ್ತಿದ್ದ.
ಅಪ್ಪನಿಗೆ ಸಾಕಷ್ಟು ಸಿಟ್ಟು ಬರುತ್ತಿತ್ತು. ಸಿಟ್ಟು ಬಂದಾಗ ಮುಖ ಮುಸಡಿ ನೋಡದೇ ಭಾರಿಸಿ ಬಿಡುತ್ತಿದ್ದ. ಹಲವು ಬಾರಿ ತಪ್ಪುಗಳನ್ನು ಮಾಡಿ ಅವನಿಂದ ನಾನು ಹೊಡೆತ ತಿಂದಿದ್ದೇನೆ. ಒಮ್ಮೆಯಂತೂ ಮನೆಯ ಅಂಗಳದ ಕಂಬಕ್ಕೆ ನನ್ನನ್ನು ಕಟ್ಟಿ ದನಕ್ಕೆ ಬಡಿಯುವಂತೆ ನನಗೆ ಬಡಿದಿದ್ದ. ಆತ ಊಟ ಮಾಡಿ ಮಲಗಿದಾಗ ಯಾರಾದರೂ ಗಲಾಟೆ ಮಾಡಿದರೆ ಆತ ಸಹಿಸುತ್ತಿರಲಿಲ್ಲ. ಪಕ್ಕದ ಮನೆಯ ಚಿಕ್ಕಪ್ಪಂದಿರು ಗಲಾಟೆ ಮಾಡಿದರೂ ಹೊಡತ ಮಾತ್ರ ನನಗೆ ಬೀಳುತ್ತಿತು. ನನಗೆ ಹೊಡೆದರೆ ಅವರು ಬುದ್ದಿ ಕಲಿಯುತ್ತಾರೆ ಎಂಬ ನಂಬಿಕೆ ಅವನದಾಗಿತ್ತು.
ಅಪ್ಪ ತನ್ನ ಮನಸ್ಸಿನಲ್ಲಿ ಇದ್ದುದನ್ನು ಯಾರ ಬಳಿಯೂ ಹೇಳಿಕೊಂಡವನಲ್ಲ. ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದಾಗಲೂ ಆತ ಕೊಡು ಗೈ ದೊರೆಯೇ. ಯಾರು ಏನು ಕೇಳಿದರೂ ಇಲ್ಲ ಎಂದು ಹೇಳುವುದು ಅವನಿಗೆ ಗೊತ್ತೇ ಇರಲಿಲ್ಲ. ನಾನು ಊರು ಬಿಟ್ಟು ಬೆಂಗಳೂರಿಗೆ ಬಂದ ಮೇಲೂ ಶಶಿಧರ್ ಬೆಂಗಳೂರಿನಲ್ಲಿ ಹ್ಯಾಂಗೆ ಜೀವನ ಮಾಡ್ತೇನೋ ಎಂದು ತಲೆ ಕೆಡಿಸಿಕೊಂಡಿದ್ದನೇ ಹೊರತೂ ನನ್ನಿಂದ ಯಾವ ನಿರೀಕ್ಷೆಯನ್ನೂ ಇಟ್ತುಕೊಂಡವನಲ್ಲ. ನಾನು ವರ್ಷಕ್ಕೆ ಎರಡು ವರ್ಷಕ್ಕೇ ಮನೆಗೆ ಹೋದರೂ ಯಾಕೆ ಬಂದಿಲ್ಲ ಎಂದು ಒಮ್ಮೆಯೂ ಕೇಳಿದವನಲ್ಲ.
ಇನ್ನೊಂದು ಘಟನೆಯೂ ನನಗೆ ನೆನಪಾಗುತ್ತದೆ. ಅದು ನನ್ನ ಮದುವೆಯ ಸಂದರ್ಭದ್ದು. ನಾನು ಮದುವೆಯಾದ ಹುಡುಗಿ ಸ್ವಜಾತಿಯವಳಲ್ಲ ಎಂದು ತಿಳಿದರೂ ಒಂದೇ ಒಂದು ಮಾತನ್ನೂ ಆತ ಆಡಲಿಲ್ಲ. ಜೊತೆಗೆ ಹೆಣ್ಣು ಒಪ್ಪಿಸಿಕೊಳ್ಳುವ ಸಂದರ್ಭದಲ್ಲಿ ತನ್ನ ಜನೀವಾರವನ್ನೇ ತೆಗೆದು ಬಿಟ್ಟ. ಯಾಕೆಂದರೆ ನನ್ನ ಹೆಂಡತಿಯಾಗುವ ಹುಡುಗಿಯ ನೆಂಟರಿಷ್ಟರಿಗೆ ನಾವು ಬ್ರಾಹ್ಮಣರು ಎಂಬುದು ತಿಳಿದಿರಲಿಲ್ಲ. ಆ ಸಂದರ್ಭದಲ್ಲಿ ಅದು ಗೊತ್ತಾದರೆ ತೊಂದರೆಯಾಗಬಹುದು ಎಂಬ ಭಯ. ಆಗ ಅಪ್ಪ ಹೇಳಿದ್ದು. ಮಗನೇ ನೀನು ಮದುವೆಯಾಗುವುದು ಮುಖ್ಯ. ನನ್ನ ಜನಿವಾರವಲ್ಲ...!
ಅಪ್ಪ ಮಗೇಗಾರಿನ ಮಹಾ ಗಣಪತಿ ನಾಟಕ ಸಂಘದ ಸಂಸ್ಥಾಪಕ ಸದಸ್ಯನಾಗಿದ್ದ. ಹಲವಾರು ನಾಟಕಗಳಲಿ ಅಭಿನಯಿಸಿದ್ದ. ಪ್ರಚಂಡ ರಾವಣ ಮತ್ತು ಕೌಶಿಕ ಅವನು ಬರೆದ ಎರಡು ನಾಟಕಗಳು. ಈ ನಾಟಕಗಳು ಹಲವಾರು ಬಾರಿ ಪ್ರದರ್ಶನ ಕಂಡವು. ಹಾಗೆ ಎರಡು ಯಕ್ಷಗಾನವನ್ನು ಅವನು ಬರೆದಿದ್ದ.
ನಾನು ಬೆಂಗಳೂರಿಗೆ ಬಂದಿ ಇಲ್ಲಿಯೇ ಕಳೆದು ಹೋದ ಮೇಲೆ ಅವನು ನನಗೆ ಎಂದೂ ಬೈಯಲಿಲ್ಲ. ನನ್ನ ಬಗ್ಗೆ ಅವನಿಗೆ ಅಪಾರವಾದ ಪ್ರೀತಿ ಇತ್ತು. ಮಗನ ಬಗ್ಗೆ ಹೆಮ್ಮೆಯಿತ್ತು. ಮಗನ ಪ್ರಾಮಾಣಿಕತೆ ಮತ್ತು ಸಾಧನೆಯಿಂದ ಸಂತೋಷಗೊಂಡಿದ್ದ ಅತ ತನ್ನ ಕೊನೆಯ ದಿನಗಳಲ್ಲಿ ನಾನು ಅವನಿಗೆ ಏನೂ ಮಾಡಲಿಲ್ಲ ಎಂದು ಹೇಳುತ್ತಿದ್ದನಂತೆ. ನನ್ನನ್ನು ನೋಡಬೇಕು ಎಂದು ತಮ್ಮ ಮತ್ತು ಅಮ್ಮನ ಹತ್ತಿರ ಹೇಳುತ್ತಿದ್ದನಂತೆ. ನಾನು ಕಳೆದ ಸೋಮವಾರ ಊರಿಗೆ ದೌಡಾಯಿಸಿದೆ. ಆಗ ಅಪ್ಪ ಅರೆ ಪ್ರಜ್ನಾವಸ್ತೆಯಲ್ಲಿದ್ದ. ಆದರೆ ಅವನಿಗೆ ನಾನು ಬಂದಿದ್ದು ತಿಳಿದಿತ್ತು. ನಾಲ್ಕಾರು ದಿನಗಳಿಂದ ನಿದ್ರೆ ಮಾಡದೇ ಏನೇನೂ ಮಾತನಾಡುತ್ತಿದ್ದ ಅತ ನನ್ನನ್ನು ನೋಡಿದ. ಕೈ ಎತ್ತಿ ಆಶೀರ್ವಾದ ಮಾಡಿದ. ನಿನಗೆ ಗುಣವಾಗುವ ವರೆಗೆ ಆನು ಇಲ್ಲೇ ಇರ್ತಿ ಎಂದಾಗ ಸಮಾಧಾನದಿಂದ ಹಾಗೆ ಮಲುಗಿದ. ರಾತ್ರಿ ಗಂಜಿ ಕುಡಿದ. ಔಷಧ ಸೇವಿಸಿದ. ಆದರೆ ಮರು ದಿನ ಬೆಳಿಗ್ಗೆ ನೋಡಿದಾದ ಅವನಿರಲಿಲ್ಲ.
ಹಾಸಿಗೆ ಹಿಡಿದ ಮೇಲೂ ಆತ ನಾಟಕ ಬರೆಯಲು ಮುಂದಾಗಿದ್ದ. ಆಗ ಅವನ ಕೈ ಕೂಡ ಸ್ವಾದೀನದಲ್ಲಿ ಇರಲಿಲ್ಲ. ಹೀಗಾಗಿ ಮೊಮ್ಮಗ ಕಾರ್ತೀಕನಿಗೆ ಹೇಳಿ ಬರೆಸುತ್ತಿದ್ದನಂತೆ. ನಾಲ್ಕಾರು ದೃಶ್ಯಗಳನ್ನು ಬರೆದು ಮುಗಿಸುವಷ್ಟರಲ್ಲಿ ಅವನು ಅರೆ ಪ್ರಜ್ನಾವಸ್ತೆಗೆ ಸರಿದು ಹೋದ. ಆತನ ನಾಟಕದ ಅಂಕದ ಪರದೆಯೂ ಜಾರಿ ಹೋಗಿತ್ತು.
ನನಗೆ ಅಪ್ಪ ಎಂದಾಕ್ಷಣ ಹೀಗೆ ಹಲವರು ಘಟನೆಗಳು ನೆನಪಾಗುತ್ತವೆ. ನನಗೆ ಓದುವ ಅಭಿರುಚಿಯನ್ನು ಮೂಡಿಸಿದ. ಬದುಕುವುದನ್ನು ಕಲಿಸಿದ. ಬದುಕಿನಲ್ಲಿ ಮೌಲ್ಯಗಳು ಮುಖ್ಯ, ಹಣವಲ್ಲ ಎಂದು ಪಾಠ ಹೇಳಿದ. ಜಾತ್ಯಾತೀತ ಮೌಲ್ಯಗಳನ್ನು ನನ್ನೊಳಗೆ ತುಂಬಿದ. ಬೆರೆಯವರ ಅಭಿಪ್ರಾಯಗಳಿಗೆ ಮನ್ನಣೆ ನೀಡುವ ವ್ಯಕ್ತಿತ್ವ ರೂಪಗೊಳ್ಳುವಂತೆ ಮಾಡಿದ. ಬೇರೆಯವರಿಂದ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳದೇ ಬದುಕುವ ದಾರಿ ತೋರಿಸಿದ.
ಹಾಗೆ ನನ್ನೊಳಗೆ ಒಬ್ಬ ಪತ್ರಿಕೋದ್ಯಮಿಯನ್ನು ಹುಟ್ಟು ಹಾಕಿದವನೂ ಅವನೇ. ನಾನು ಸಣ್ಣವನಿರುವಾಗಲೇ ಸ್ಥಳೀಯ ಪತ್ರಿಕೆಗಳಲ್ಲಿ ರಾಜಕೀಯ ವಿಶ್ಲೇಷಣೆ ಹಾಗೂ ಲೇಖನಗಳನ್ನು ಬರೆಯುತ್ತಿದ್ದ ಆತ ನನಗೆ ಬರೆಯುವ ಅಭಿರುಚಿ ಬೆಳೆಯುವಂತೆ ಮಾಡಿದ.
ಅಪ್ಪ ನನ್ನಿಂದ ಏನನ್ನೂ ನಿರೀಕ್ಷಿಸಲಿಲ್ಲ. ನಾನು ಅವನಿಗೆ ಏನನ್ನೂ ಕೊಡಲಿಲ್ಲ. ಆದರೆ ಅವನು ನನಗೆ ನೀಡಿದ್ದನ್ನು ನಾನು ಈ ಜನ್ಮದಲ್ಲಿ ಮರೆಯಲಾರೆ. ಆ ಋಣವನ್ನು ನಾನು ತೀರಿಸಲಾರೆ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...