Saturday, December 15, 2012

ಮೋದಿಯ ನಾಡಿನಲ್ಲಿ ಎರಡು ದಿನ- ಕಂಡಿದ್ದು ಕೇಳಿದ್ದು....



ಗುಜರಾತ್ ಕುರುಕ್ಷೇತ್ರ !
ನಾನು ಬೆಂಗಳೂರಿನಿಂದ ಹೊರಟು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದಾಗ ಮಧ್ಯಾನ್ಹ ಒಂದು ಗಂಟೆ.  ನಮ್ಮ ಮಂಗಳೂರನ್ನೋ, ಕರಾವಳಿಯ ಇನ್ಯಾವ್ಯುದೋ ಪಟ್ಟಣವನ್ನು ನೆನಪಿಸುವಷ್ಟು ಉರಿ ಬಿಸಿಲು. ಆಗಲೇ ಮುಂಬೈನ ಕರ್ನಾಟಕ ಸಂಘದ ಗೆಳಯರಿಗೆ ಹೇಳಿ ಒಂದು ಇನ್ನೊವಾ ಕಾರನ್ನು ಗೊತ್ತು ಪಡಿಸಿಕೊಂಡಿದ್ದೆ. ಕಾರಿನ ಚಾಲಕ ನನ್ನ ಹೆಸರಿನ ನೇಮ್ ಪ್ಲೇಟ್ ಹಿಡಿದು ವಿಮಾನ ನಿಲ್ದಾಣದ ಹೊರಗೆ ನಿಂತಿದ್ದ.
ನಾನು ಪ್ರವಾಸ ಹೊರಟಿದ್ದು ಗುಜರಾತಿಗೆ. ಸೂರತ್ ನಗರವನ್ನು ಸಂಜೆಯ ಒಳಗೆ ತಲುಪುವುದು ನನ್ನ ಗುರಿಯಾಗಿತ್ತು. ಮುಂಬೈನಿಂದ ಅಹಮದಾಬಾದ್ ಗೆ ಸುಮಾರು ೫೦೦ ಕಿಮೀ ದೂರ. ಈ ದಾರಿಯನ್ನು ರಸ್ತೆಯ ಮೂಲಕ ಕ್ರಮಿಸಿದರೆ ಗುಜರಾತಿನ ಬಹುಭಾಗವನ್ನು ನೋಡಬಹುದು, ಅಲ್ಲಿನ ಸಾಮಾನ್ಯರ ಜೊತೆ ಮಾತನಾಡಬಹುದು ಎಂದು ನಾನು ಅಂದುಕೊಂಡಿದ್ದೆ. ನನಗೆ ಗುಜರಾಥ್ ಹೆಚ್ಚು ಕುತೂಹಲ ಹುಟ್ಟಿಸಿದ ರಾಜ್ಯ. ಶ್ರೀಕೃಷ್ಣ ದ್ವಾರಕೆ, ಮಹಾತ್ಮಾ ಗಾಂಧಿಜಿಯ ಸಾಬರಮತಿ, ಹತ್ತು ವರ್ಷಗಳಿಂದ ಈ ರಾಜ್ಯವನ್ನು ಆಳುತ್ತಿರುವ ನರೇಂದ್ರ ಮೋದಿ ಎಲ್ಲರೂ ನನ್ನ ಕುತೂಹಲಕ್ಕೆ ಕಾರಣರಾದವರೇ.
ನನ್ನ ಕಾರಿನ ಚಾಲಕನ ಹೆಸರು ಅಮ್ಜದ್. ಆತ ಮುಂಬೈ ಅಹಮದಾಬಾದ್ ರಸ್ತೆಯಲ್ಲಿ ಹಲವು ಬಾರಿ ಕಾರು ಓಡಿಸಿದವನು. ಅವನಿಗೆ ಈ ರಸ್ತೆ ಎಂದರೆ ನೀರು ಕುಡಿದಷ್ಟು ಸಲೀಸು. ಜೊತೆಗೆ ಆತ ಗುಜರಾತ್ ಮೂಲದವನು. ಹೊಟ್ಟೆ ಪಾಡಿಗಾಗಿ ಮುಂಬೈಗೆ ಬಂದು ಇಲ್ಲಿ ಕಾರು ಓಡಿಸಿ ಜೀವನ ಸಾಗಿಸುತ್ತಿದ್ದ.
ಮೋದಿ ಹೈವೇ...

ಮುಂಬೈ ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ ದೇಶದ ಅತ್ಯುತ್ತಮ ಹೆದ್ದಾರಿಗಳಲ್ಲಿ ಒಂದು. ಈ ರಸ್ತೆ ವಿಶಾಲವಾಗಿರುವುದರ ಜೊತೆಗೆ ಎಲ್ಲೂ ಸಹ ಸ್ಪೇಡ್ ಬ್ರೇಕರ್ಸ್ ಅಥವಾ ಹಂಪ್ಸ್ ಇಲ್ಲವೇ ಇಲ್ಲ. ಕಣ್ಣು ಮುಚ್ಚಿಕೊಂಡು ಕಾರನ್ನು ಒಡಿಸುವಷ್ಟು ರಸ್ತೆ ಉತ್ತಮವಾಗಿದೆ.
ಅಮ್ಜದ್ ನನ್ನು ನಾನು ಮೊದಲು ಕೇಳಿದ್ದು ನರೇಂದ್ರ ಮೋದಿಯ ಬಗ್ಗೆ. ನನ್ನ ಪ್ರಶ್ನೆಗೆ ಅವನು ನೀಡಿದ ಉತ್ತರ ಅಚ್ಚಾ ಸಾಬ್ ಎಂದು. ಮುಂದೆ ಆತ ಮಾತನಾಡುವುದಕ್ಕೆ ಸಿದ್ಧನಿರಲಿಲ್ಲ. ಮಹಾರಾಷ್ಟ್ರ ಗಡಿಯನ್ನು ದಾಟಿ ಗುಜರಾತ್ ಅನ್ನು ಪ್ರವೇಶಿಸುತ್ತಿದ್ದಂತೆ ಬದಲಾವಣೆ ಬರೀ ಕಣ್ಣಿಗೆ ಕಾಣತೊಡಗಿತು. ಅಭಿವೃದ್ಧಿ ಅಲ್ಲಿ ನಡೆಯುತ್ತಿದೆ ಎಂದು ಹೇಳುವುದಕ್ಕೆ ಬೇರೆ ಯಾವುದೇ ಸಾಕ್ಷ್ಯ ಬೇಕಾಗಿರಲಿಲ್ಲ.
ನರೇಂದ್ರ ಮೋದಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಈ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ತಂದು ನಿಲ್ಲಿಸಿದ್ದರು. ಆದರೆ ಅದು ಎಂತಹ ಅಭಿವೃದ್ಧಿ ? ಈ ಅಭಿವೃದ್ಧಿಯ ವ್ಯಾಪ್ತಿ ಏನು ? ಅಭಿವೃದ್ಧಿಗೂ ಸಾಮಾಜಿಕ ಬದುಕಿಗೂ ಇರುವ ಸಂಬಂಧ ಎಂತಹುದು ?
ಪಶ್ಚಿಮ ರಾಜ್ಯವಾಗಿರುವ ಗುಜರಾತ್ ೧೬೦೦ ಕಿಮೀ ಸಮುದ್ರ ಕಿನಾರೆಯನ್ನು ಹೊಂದಿದೆ. ಒಂದೆಡೆ ಮಹಾರಾಷ್ತ್ರ, ಇನ್ನೊಂದೆಡೆ ಮಧ್ಯಪ್ರದೇಶ, ಮತ್ತೊಂದೆಡೆ ರಾಜಸ್ಥಾನ ಗಡಿ ರಾಜ್ಯಗಳು. ಗುಜರಾತಿನ ಇನ್ನೊಂದು ವಿಶೇಷ ಎಂದರೆ ಪಾಕಿಸ್ಥಾನದ ಸಿಂದ್ ಪ್ರಾಂತ ಗುಜರಾತಿಗೆ ತಾಗಿಕೊಂಡಿದೆ. ಪಾಕಿಸ್ಥಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾ ಗುಜರಾತಿ ಮುಸ್ಲಿಂ ಕುಟುಂಬಕ್ಕೆ ಸೇರಿದವರು. ಹಿಂದೂ ನದಿ ನಾಗರೀಕತೆಯ ಅವಶೇಷಗಳು ಇಲ್ಲಿ ದೊರಕಿವೆ.
ಗುಜರಾತ್ ಗೆ ಅಭಿವೃದ್ಧಿ ಹೊಸದಲ್ಲ. ನರೇಂದ್ರ ಮೋದಿ ಬಂದ ಮೇಲೆ ಇಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಯಿತು ಎಂಬುದು ಅಪ್ಪಟ ಸುಳ್ಳು. ಗುಪ್ತರು ರಾಷ್ಟ್ರಕೂಟರು ಈ ರಾಜ್ಯವನ್ನು ಆಳುತ್ತಿದ್ದ ಕಾಲದಲ್ಲೇ ಈ ಪ್ರದೇಶ ಅಭಿವೃದ್ಧಿಯನ್ನು ಕಂಡಿತ್ತು. ಮೊದಲಿನಿಂದಲೂ ಅಹಮದಾಬಾದ್, ಸೂರತ್, ಭಾವನಗರ್, ವಡೋದರಾ, ಜಾಮನಗರ್,ಕೈಗಾರಿಕಾ ಕೇಂದ್ರಗಳಾಗಿ ಅಭಿವೃದ್ಧಿ ಹೊಂದುತ್ತಲೇ ಬಂದಿವೆ. ಜೊತೆಗೆ ಗುಜರಾತ್ ಎಂದೂ ವಿದ್ಯುತ್ ಕೊರತೆಯನ್ನು ಹೊಂದಿಲ್ಲ. ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸುವ ರಾಜ್ಯ ಗುಜರಾತ್.

ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಗುಜರಾತ್ ಕರಾವಳಿಯಲ್ಲಿ ೪೧ ಕ್ಕಿಂತ ಹೆಚ್ಚು ಬಂದರುಗಳಿವೆ. ನರ್ಮದಾ, ಸಾಬರಮತಿ, ಮಹಿ ಮತ್ತು ತಾಪಿ ಎಂಬ ದೊಡ್ಡ ನದಿಗಳು ಹಾಗೂ ೩೫ ಕ್ಕೂ ಹೆಚ್ಚು ಸಣ್ನ ನದಿಗಳು ಈ ರಾಜ್ಯದ ನೆಲವನ್ನು ತಂಪಾಗಿರಿಸಿವೆ. ಇಂತಹ ಗುಜರಾತಿನಲ್ಲಿ ನರೇಂದ್ರ ಮೋದಿ ಮಾಡಿದ್ದೇನು ಎಂದು ನಾನು ಯೋಚಿಸುತ್ತಿದ್ದೆ. ಆತ ಇಲ್ಲಿನ ಜನರಿಗೆ ಮಾಡಿದ್ದು ಮೋಡಿಯೇ ಅಥವಾ ಮೋಸವೆ ?
ಆಗಲೇ ಸಂಜೆಯಾಗಿತ್ತು. ರಸ್ತೆ ಪಕ್ಕದ ಹೊಟೇಲ್ ಬಳಿ ಕಾರು ನಿಲ್ಲಿಸಿದ ಅಮ್ಜದ್ ಸಾರ್ ಚಾಯ್ ಪೀಯೆಂಗೆ ಅಂದ. ಸರಿ ಎಂದು ನಾನು ಕಾರಿನಿಂದ ಇಳಿದೆ. ನನಗೆ ಕೆಲವು ಮುಸ್ಲಿಂ ರ ಜೊತೆ ಮಾತನಾಡುವ ಆಸಕ್ತಿ ಇತ್ತು. ಅವರು ನರೇಂದ್ರ ಮೋದಿಯನ್ನು ನೋಡುವ ರೀತಿ ಯಾವುದು ಎಂಬುದು ನನ್ನ ಕುತೂಹಲ. ಜೊತೆಗೆ ಗುಜರಾತಿನ ಜಾತಿ ಸಮೀಕರಣ ಕೂಡ.
ಈ ರಾಜ್ಯದ ಜನಸಂಖ್ಯೆಯಲ್ಲಿ ಪ್ರತಿಶತ ೮೯ ರಷ್ಟು ಜನ ಹಿಂದೂಗಳು. ಮುಸ್ಲಿಂ ಜನಸಂಖ್ಯೆ ಪ್ರತಿಶತ ೯. ಉಳಿದಂತೆ ಮಹಾರಾಷ್ಟ್ರ ಮತ್ತು ರಾಜಸ್ಥಾನವನ್ನು ಹೊರತು ಪಡಿಸಿದರೆ ಅತಿ ಹೆಚ್ಚು ಜೈನರು ಇರುವುದು ಗುಜರಾತಿನಲ್ಲಿ.  ಹಿಂದೂಗಳಲ್ಲಿ ಪಟೇಲರ ಪ್ರಾಬಲ್ಯ ಮೊದಲಿನಿಂದಲೂ ಇದ್ದುದು ನಿಜ. ದೇಶದ ಮೊದಲ ಉಪ ಪ್ರಧಾನಿ, ಗೃಹ ಸಚಿವ ಸರ್ಧಾರ್ ವಲ್ಲಭ್ ಭಾಯ್ ಪಟೇಲ್ ಗುಜರಾತಿನ ಸೌರಾಷ್ಟ್ರ ಪ್ರದೇಶಕ್ಕೆ ಸೇರಿದವರು. ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸಿ ಬಿಜೆಪಿಯಿಂದ ಮುಖ್ಯಮಂತ್ರಿಯಾದ ಕೇಶು ಭಾಯ್ ಪಟೇಲ್ ಕೂಡ ಸೌರಾಷ್ಟ್ರ ಪ್ರದೇಶಕ್ಕೆ ಸೇರಿದವರು.
ಇಲ್ಲಿನ ವ್ಯಾಪಾರಿ ಸಮುದಾಯವನ್ನು ಬನಿಯಾಗಳು ಎಂದು ಕರೆಯುತ್ತಾರೆ. ಪಟೇಲರು ಭೂಮಾಲೀಕರು. ಅವರಿಗೆ ಇಂದಿಗೂ ಸಮಾಜದಲ್ಲಿ ಅತ್ಯುನ್ನತವಾದ ಸ್ಥಾನ. ಆದರೆ ಗುಜರಾತಿನಲ್ಲಿ ಸಿಗುವ ಪಟೇಲರೆಲ್ಲ ನಿಜವಾದ ಪಟೇಲರಲ್ಲ. ಸಮಾಜದಲ್ಲಿ ಗೌರವ ಸಂಪಾದಿಸುವ ಸಲುವಾಗಿ ಪಟೇಲರಾಗಿ ಬದಲಾದ ಕೆಳ ಜಾತಿಯ ಜನ ಕೂಡ ಇದ್ದಾರೆ. ಮೇಲ್ಜಾತಿಯ ವೈದಿಕ ಪರಂಪರೆ ಮತ್ತು ಜೈನ ಸಂಪ್ರದಾಯಗಳು ಇಲ್ಲಿ ಪ್ರಬಲವಾಗಿ ಬೇರೂರಿವೆ.
ಗುಜರಾತಿನ ಬಹುದೂಡ್ಡ ದೇವರೆಂದರೆ ಆತ ಶ್ರೀನಾಥ್ ಜಿ. ಅಂದರೆ ಶ್ರೀಕೃಷ್ಣ.
ರಸ್ತೆಯ ಪಕ್ಕದ ಚಹಾ ದುಖಾನಿನಲ್ಲಿ ಕುಳಿತಾಗ ಅಲ್ಲಿದ್ದ ಕೆಲವರ ಜೊತೆ ಮಾತನಾಡಿದಾಗ ಅನ್ನಿಸಿದ್ದು, ಇಲ್ಲಿನ ಮುಸ್ಲಿಂ ವಿರೋಧಕ್ಕೆ ಸುದೀರ್ಘ ಪರಂಪರೆ ಇದೆ ಎನ್ನುವುದು. ಆದರೆ ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಹಿಂದೂ ಸಂಘರ್ಷ ಚುನಾವಣೆಯ ಮುಖ್ಯ ವಿಷಯವಾಗುವ ಸಂಭವ ಕಡಿಮೆ. ಇಲ್ಲಿನ ಬಹುತೇಕ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳು ಮಹತ್ವದ ಪಾತ್ರವನ್ನು ಒಹಿಸುತ್ತ ಬಂದಿವೆ. ೧೯೬೦ ರಲ್ಲಿ ಗುಜರಾತ್ ರಾಜ್ಯ ರಚನೆಯಾದ ಮೇಲೆ ೮೦ ರ ದಶಕದವರೆಗೂ ಪ್ರತಿಶತ ೪೦ ರಷ್ಟಿರುವ ಹಿಂದುಳಿದ ವರ್ಗದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದರು. ೯೦ ರ ದಶಕದ ಹೊತ್ತಿಗೆ ಸ್ಥಿತಿ ಬದಲಾಯಿತು. ವೈದಿಕ ಮನಸ್ಥಿತಿಯೇ ಪ್ರಬಲವಾಗಿರುವ ಈ ರಾಜ್ಯದ ಹಿಂದುಳಿದ ವರ್ಗಗಳು ಹಿಂದುತ್ವದ ಮೋಹಕ್ಕೆ ಒಳಗಾದರು. ಬಿಜೆಪಿ ಅಧಿಕಾರದ ಗದ್ದುಗೆ ಏರುವಂತಾಯಿತು. ನರೇಂದ್ರ ಮೋದಿ ಮುಖ್ಯಮಂತ್ರಿಯಾದ ಮೇಲೆ ಹಿಂದುಳಿದ ವರ್ಗಗಳ ಮೇಲೆ ನಿಯಂತ್ರಣ ಸಾಧಿಸಿದರು. ಮೋದಿ ಹಿಂದುಳಿದ ಘಾಂಚಿ ಎಂಬ ಜಾತಿಗೆ ಸೇರಿದವರು. ಈ ಜಾತಿಯ ಜನ ಕರ್ನಾಟಕದ ಗಾಣಿಗ ಸಮುದಾಯಕ್ಕೆ ಸಮಾನವಾದ ಜಾತಿ. ಇವರು ಎಣ್ಣೆ ತೆಗೆಯುವವರು.
ಆದರೆ ಹಿಂದುಳಿದ ವರ್ಗದವರಿಗೂ ನರೇಂದ್ರ ಮೋದಿಯವರ ಬಗ್ಗೆ ಕೆಲವೊಂದು ಆಕ್ಷೇಪಗಳಿವೆ. ಅವರೆಂದೂ ತಾವು ಹಿಂದುಳಿದ ವರ್ಗದಿಂದ ಬಂದವರು ಎಂಬುದನ್ನು ತಮ್ಮ ಕಾರ್ಯ ವಿಧಾನದಲ್ಲಿ ತೋರಿಸಿಕೊಟ್ಟಿಲ್ಲ. ಈಗಲೂ ಪ್ರಬಲವಾಗಿರುವ ರಜಪೂತರು ಮತ್ತು ಪಟೇಲರ ಕಪಿಮುಷ್ಟಿಯಲ್ಲಿ ನರೇಂದ್ರ ಮೋದಿ ಇದ್ದಾರೆ. ಅವರ ಅಭಿವೃದ್ಧಿ ಈ ಜನಸಮುದಾಯಗಳನ್ನು ಬಿಟ್ಟರೆ ಕೆಳ ಹಂತದ ಜನರನ್ನು ತಲುಪಿಲ್ಲ ಎಂಬುದು ಹಿಂದುಳಿದ ವರ್ಗಗಳಲ್ಲಿ ಕೇಳಿ ಬರುತ್ತಿರುವ ಮಾತು. ಜೊತೆಗೆ ಹಿಂದುಳಿದ ವರ್ಗಗಳ ಸಂಘಟನೆಗಳು ಈಗ ಪ್ರಬಲವಾಗುತ್ತಿದ್ದು ಅವುಗಳು ಮೋದಿಯವರನ್ನು ಪ್ರಬಲವಾಗಿ ವಿರೋಧಿಸುತ್ತಿವೆ.
ಗುಜರಾತಿನ ೧೮೨ ಒಟ್ಟೂ ಸ್ಥಾನಗಳಲ್ಲಿ ಸುಮಾರು ೭೦ ಸ್ಥಾನಗಳಲ್ಲಿ ಹಿಂದುಳಿದ ವರ್ಗಗಳ ಮತಗಳೇ ನಿರ್ಣಾಯಕ. ಹಾಗೆ ೩೫ ಸ್ಥಾನಗಳಲ್ಲಿ ಮುಸ್ಲಿಂ ರು, ೨೬ ಸ್ಥಾನಗಳಲ್ಲಿ ಆದಿವಾಸಿಗಳು ಮತ್ತು ೧೩ ಸ್ಥಾನಗಳಲ್ಲಿ ದಲಿತರು ನಿರ್ಣಾಯಕ ಪಾತ್ರ ಒಹಿಸುತ್ತಾರೆ. ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲೂ ರಾಜ್ಯದ ಅಧಿಕಾರವನ್ನು ಹಿಡಿಯುವವರು ಎಂಬುದನ್ನು ತೀರ್ಮಾನಿಸುವವರು ಹಿಂದುಳಿದ ವರ್ಗದವರೇ.
ಗಾಂಧಿ ನಾಡಿನಲ್ಲಿ ಅವರ ನೆನಪೇ ಇಲ್ಲ...!

ಗಾಂಧಿಯ ನಾಡು ಗುಜರಾತ್. ಇಲ್ಲಿ ಈಗಲೂ ಮದ್ಯಪಾನ ನಿಷೇಧ. ಇಲ್ಲಿ ಒಂದೇ ಒಂದು ಮದ್ಯದ ಅಂಗಡಿ ಸಿಗುವುದಿಲ್ಲ. ಆದರೆ ಮದ್ಯ ಸಿಗುವುದಿಲ್ಲ ಎಂದುಕೊಂಡರೆ ಅದು ನಿಜವಲ್ಲ. ನಾವು ಕುಳಿತಿದ್ದ ಚಹಾ ದುಖಾನಿನ ಮಾಲೀಕನನ್ನು ಇಲ್ಲಿ ಗುಂಡು ಸಿಗುವುದಿಲ್ಲವೆ ಎಂದು ಪ್ರಶ್ನಿಸಿದೆ. ಆತ ಯಾವುದು ಬೇಕು ? ಹಣ ಕೊಡಿ ಎಂದ ! ಅಂದರೆ ಬಹಿರಂಗವಾಗಿ ನಡೆಯದಿದ್ದುದು ಇಲ್ಲಿ ಗುಪ್ತವಾಗಿ ನಡೆಯುತ್ತದೆ ಅಷ್ಟೇ.
ನರೇಂದ್ರ ಮೋದಿಯವರ ಆಡಳಿತ ಹೇಗಿದೆ ಎಂಬ ಪ್ರಶ್ನೆಗೆ ಅವನ ಉತ್ತರ ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತುಂಬಾ ಅಭಿವೃದ್ಧಿಯಾಗುತ್ತಿದೆ ಎಂಬುದು. ಯಾವ ಅಭಿವೃದ್ಧಿ ? ಯಾವ ರೀತಿಯ ಅಭಿವೃದ್ಧಿ ಎಂಬ ಪ್ರಶ್ನೆಗೆ ಅವರ ಬಳೀ ಸ್ಪಷ್ಟ ಉತ್ತರವಿಲ್ಲ.
ನರೇಂದ್ರ ಮೋದಿ ಒಬ್ಬ ಅತ್ಯುತ್ತಮ ಸೇಲ್ಸ್ ಮನ್. ಅವರಿಗೆ ಯಾವ ವಸ್ತುವನ್ನು ಯಾವಾಗ ಹೇಗೆ ಮಾರಟ ಮಾಡಬೇಕು ಎಂಬುದು ಗೊತ್ತು. ಹಿಂದುತ್ವವನ್ನು ಮಾರಾಟ ಮಾಡಲು ಕೋಮು ಗಲಭೆಯನ್ನು ಮಾರಾಟ ಮಾಡಿದ ಅವರು ಈಗ ಅದೇ ವಸ್ತುವನ್ನು ಮತ್ತೆ ಮಾರಾಟ ಮಾಡುತ್ತಿಲ್ಲ.ಯಾಕೆಂದರೆ ಆ ವಸ್ತುವನ್ನು ಈಗ ಖರೀದಿಸುವವರಿಲ್ಲ ಎಂಬುದು ಅವರಿಗೆ ಗೊತ್ತು. ಕಳಪೆ ವಸ್ತುಗಳನ್ನು ಮಾರಾಟ ಮಾಡುವವರೇ ಹಾಗೆ. ಅವರು ಒಮ್ಮೆ ಮಾರಾಟ ಮಾಡಿದ ವಸ್ತುವನ್ನು ಮತ್ತೆ ಮಾರಾಟಕ್ಕೆ ಇಡುವುದಿಲ್ಲ.
ಮೋದಿಯವರ ಅಭಿವೃದ್ಧಿಯ ಕಲ್ಪನೆಯಲ್ಲಿ ಇಲ್ಲಿಯೇ ಹುಟ್ಟಿದ ಮಹತ್ಮಾ ಗಾಂಧಿಯವರ ಆರ್ಥಿಕ ನೀತಿಗೆ ಅವಕಾಶವಿಲ್ಲ.
ಅವರಿ ಹಿಂದುತ್ವದ ರಾಜಕಾರಣ ಎಲ್ಲ ಕೆಳ ವರ್ಗದ ಜಾತಿ ಸಮುದಾಯಗಳನ್ನು ಬಿಜೆಪಿಯ ತೆಕ್ಕೆಗೆ ತಂದಿದ್ದು ನಿಜ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹಿಂದುಳಿದ ವರ್ಗದ ಜನರಿಗೆ ಈಗ ವಾಸ್ತವದ ಅರಿವಾಗುತ್ತಿದೆ. ಹಾಗೆ ಮೇಲ್ವರ್ಗದ ಪಟೇಲ್ ಸಮುದಾಯ ಕೇಶು ಬಾಯ್ ಪಟೇಲ್ ಅವರ ಹಿಂದೆ ನಿಂತಿರುವುದರಿಂದ ಮೋದಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ನಾವು ರಾತ್ರಿ ೯ ಗಂಟೆ ಹೊತ್ತಿಗೆ ಸೂರತ್ ನಗರವನ್ನು ತಲುಪಿದೆವು. ಸೂರತ್ ಮೊದಲಿನಿಂದಲೂ ಕೈಗಾರಿಕೆಗಳ ನಗರ. ನೇಕಾರಿಕೆ ಇಲ್ಲಿ ಪ್ರದಾನ. ಹಾಗೆ ಜೈನ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಈ ನಗರದಲ್ಲಿ ರಾತ್ರಿ ೯ ಗಂಟೆಯ ಹೊತ್ತಿಗೆ ಎಲ್ಲ ಹೋಟೆಲ್ ಗಳು ಮುಚ್ಚಿರುತ್ತವೆ. ನಾನು ಇಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದು ತ್ರಿತಾರಾ ಹೋಟೆಲ್ ಒಂದರಲ್ಲಿ. ಆ ಹೋಟೆಲ್ ಲಾಬಿಯಲ್ಲಿ ನಿಂತಾಗ ನನ್ನ ಸ್ನೇಹಿತರ ಜೊತೆ ನಾನು ಕನ್ನಡಡದಲ್ಲಿ ಮಾತನಾಡುತ್ತಿದ್ದೆ. ರೆಸೇಪ್ಶನ್ ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ನನ್ನ ಚಾಲಕನ ಬಳಿ ಕೇಳಿದ.
ಇವರು ಮುಸಲ್ಮಾನರೆ ? ಅವರು ಮಾತನಾಡುತ್ತಿರುವ ಭಾಷೆ ಯಾವುದು ? ಅವರು ಮುಸ್ಲೀಮ್ ರಾಗಿದ್ದರೆ ಅವರಿಗೆ ಈ ಹೋಟೆಲ್ಲಿನಲ್ಲಿ ರೂಮು ನೀಡುವುದಿಲ್ಲ.
ನನಗೆ ಆಘಾತವಾಗಿತ್ತು. ನಾನು ನೋಡಲು ಮುಸಲ್ಮಾನಂತೆ ಕಾಣುತ್ತಿದೆ. ಜೊತೆಗೆ ಸ್ವಲ್ಪ ಗಡ್ದವನ್ನು ಬಿಟ್ಟು ಟ್ರಿಮ್ ಮಾಡಿದ್ದೆ. ಹೀಗಾಗಿ ಆತ ನಾನು ಮುಸ್ಲಿಮ್ ಧರ್ಮಕ್ಕೆ ಸೇರಿದವನು ಎಂದು ಆತ ಅಂದುಕೊಂಡಿದ್ದ. ನಾನು ಅವನ ಜೊತೆ ಜಗಳವಾಡಿದೆ. ಕೋಮಿನ ಕಾರಣಕ್ಕಾಗಿ ರುಂಉ ನೀಡದಿರುವುದು ಸರಿಯಲ್ಲ ಎಂದು ವಾದಿಸಿದೆ. ಕೊನೆಗೆ ನನ್ನ ಹೆಅಸು ಕೇಳಿದ ಮೇಲೆ ಆತ ನನಗೆ ರೂಮು ನೀಡಲು ಒಪ್ಪಿದ.
ಆದರೆ ನರೇಂದ್ರ ಮೋದಿಯವರ ಗುಜರಾತಿನ ಸತ್ಯ ದರ್ಶನ ನನಗಾಗಿತ್ತು.. ಗಾಂಧಿಜಿಯವರ ಗುಜರಾತ್ ಸಂಪೂರ್ಣ ವಾಗಿ ಬದಲಾಗಿತ್ತು. ಇದನ್ನು ನನಗೆ ಸಹಿಸಿಕೊಳ್ಳುವುದು ಕಷ್ಟವಾಗಿತ್ತು. ಅಮ್ಜದ್ ಇದೆಲ್ಲ ನನಗೆ ಗೊತ್ತು ಎನ್ನುವಂತೆ ಸಣ್ಣಕ್ಕೆ ನಕ್ಕಿದ್ದು ನನ್ನ ಮನಸ್ಸಿನಲ್ಲಿ ಹಾಗೆ ಉಳಿದಿತ್ತು.
ಮರು ದಿನ ನಾನು ಅಹಮದಾಬಾದಿಗೆ ಭೇಟಿ ನೀಡಿದೆ. ಹಾಗೆ ಗುಜರಾತಿನ ಇನ್ನೂ ಕೆಲವು ಪ್ರದೇಶಗಳಿಗೆ ಬೇಟಿ ನೀಡಿದೆ.
ಅಲ್ಲಿ ನರೇಂದ್ರ ಮೋದಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಜಾತಿ ಲೆಕ್ಕಾಚಾರಗಳು ನಡೆಯುತ್ತಿದ್ದವು. ಆದರೆ ಮುಸ್ಲಿಮ್ ಎನ್ನುವ ಕಾರಣಕ್ಕಾಗಿ ಹೋಟೆಲ್ಲಿನಲ್ಲಿ ರೂಮು ನೀದುವುದಿಲ್ಲ ಎಂಬುದೇ ನನ್ನ ಮನಸ್ಸಿನಲ್ಲಿ ಕಾಡುತ್ತಿತ್ತು. ಇಂಥಹ ರಾಜ್ಯಕ್ಕೆ ದಿಕ್ಕಾರವಿರಲಿ ಎಂದು ನನ್ನ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಲೇ ನಾನು ಗುಜರಾತಿನಲ್ಲಿ ಅಸಹಾಯಕನಂತೆ ನಿಂತು ಬಿಟ್ಟೆ.

Friday, December 7, 2012

ನಿಮ್ಮಂಥ ದೊಡ್ದವರಿಗೆ ನನ್ನಂತಹ ಸಾಮಾನ್ಯನ ಮೇಲೆ ಯಾಕೆ ಅಸಹನೆ ?


ಮನುಷ್ಯರ ಮನಸ್ಸು ಕೆಲಸ ಮಾಡುವ ರೀತಿ ಕೆಲವೊಮ್ಮೆ ಭಯವನ್ನು ಹುಟ್ಟಿಸುತ್ತದೆ. ಕೆಲವೊಮ್ಮೆ ಬೇಸರವಾಗುತ್ತದೆ. ಕೆಲವೊಮ್ಮೆ ಕೋಪವನ್ನು ಉಂಟು ಮಾಡುತ್ತದೆ. ಸುಮಾರು ೨೦ ವರ್ಷಗಳ ಹಿಂದೆ ನಾನು ಹಿಮಾಲಯದಲ್ಲಿ ಭೇಟಿ ಮಾಡಿದ ಸ್ವಾಮೀಜಿ ಒಬ್ಬರು ನೀನು ಎಂದರೆ ನಿನ್ನ ಮನಸ್ಸು ಮತ್ತು ಆಲೋಚನೆ ಬೇರೆ ಏನೂ ಅಲ್ಲ ಎಂದು ಹೇಳಿದ ಮಾತು ನನಗೆ ಆಗಾಗ ನೆನಪಾಗುತ್ತದೆ. ಈ ಮನಷ್ಯನೆಂಬ ಕ್ಷುದ್ರ ಜೀವಿಯ ಮನಸ್ಸು ಅಸಹ್ಯ ಹುಟ್ಟಿಸುತ್ತದೆ.
ಈ ಪೂರ್ವಭಾವಿ ಪೀಠಿಕೆ ನೀಡುವುದಕ್ಕೆ ಬಹುಮುಖ್ಯ ಕಾರಣ ನನ್ನ ಕೆಲವು ಸಹೋದ್ಯೋಗಿಗಳು ನೆನಪಾಗಿದ್ದು. ನಾನು ಪತ್ರಿಕೋದ್ಯಮಕ್ಕೆ ಬಂದು ೨೫ ವರ್ಷಗಳು ಕಳೆದು ಹೋಗಿವೆ. ಇಲ್ಲಿಗೆ ಬಂದ ಮೇಲೆ ಹಲವು ರೀತಿಯ ಜನರನ್ನು ಭೇಟಿ ಮಾಡಿದ್ದೇನೆ. ಹಲವಾರು ಸಹೋದ್ಯೋಗಿಗಳ ಜೊತೆ ಕೆಲಸ ಮಾಡಿದ್ದೇನೆ. ಕೆಲವೇ ಕೆಲವರು ಸ್ನೇಹಿತರಾಗಿದ್ದಾರೆ. ಹಲವರ ಜೊತೆ ವೈಚಾರಿಕ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಆದರೆ ಯಾರ ಬಗ್ಗೆಯೋ ವೈಯಕ್ತಿಕ ದ್ವೇಷ ಸಾಧನೆ ಮಾಡುವುದು ನನ್ನ ಜಾಯಮಾನವಲ್ಲ. ಮನುಷ್ಯ ಗುಣ ಮತ್ತು ದೌರ್ಬಲ್ಯಗಳ ಒಂದು ಮೊತ್ತ ಎಂದು ನಂಬಿದವನು ನಾನು. ಹಾಗೆ ಗುಣಗ್ರಾಹಿಯಾಗಿ ಬದುಕಲು ಯತ್ನ ನಡೆಸಿದವನು ನಾನು. ಆದರೆ ಕೆಲವೊಂದು ವಿಚಾರಗಳ ಬಗ್ಗೆ  ಎಂದೂ  ಹೊಂದಾಣಿಕೆ  ಮಾಡಿಕೊಂಡವನಲ್ಲ.  ಎಂದೂ ಹೊಂದಾಣಿಕೆ ಮಾಡಿಕೊಳ್ಳುವವನು ಅಲ್ಲ.
ನನ್ನ ಸಹೋದ್ಯೋಗಿಗಳಾಗಿದ್ದವರಲ್ಲಿ  ರವಿ ಬೆಳಗೆರೆ, ವಿಶ್ವೇಶ್ವರ ಭಟ್, ಎಚ್. ಆರ್. ರಂಗನಾಥ್ ಎಲ್ಲರೂ ಇದ್ದಾರೆ. ಇವರಲ್ಲಿ ಎಲ್ಲರ ಬಗ್ಗೆಯೂ ನನಗೆ ನನ್ನದೇ ಆದ ಆಭಿಪ್ರಾಯವಿದೆ. ಆದರೆ  ವೈಯಕ್ತಿಕ ಧ್ವೇಷವಿಲ್ಲ. ಅವರಲ್ಲಿರುವ ಒಳ್ಳೆಯ ಗುಣಗಳ ಬಗ್ಗೆ ನನಗೆ ಪ್ರೀತಿ ಮತ್ತು ಗೌರವಗಳಿವೆ.
ರವಿ ಬೆಳಗೆರೆ ಮತ್ತು ವಿಶ್ವೇಶ್ವರ ಭಟ್ ಆತ್ಮೀಯರಾಗಿದ್ದ ದಿನಗಳಲ್ಲಾಗಲೀ, ಜಗಳ ಮಾಡುತ್ತಿರುವ ಇಂದಿನ ದಿನಗಳಲ್ಲಾಗಲಿ ಆ ಬಗ್ಗೆ ಬಹಿರಂಗವಾಗಿ ನಾನು ಮಾತನಾಡಿದವನಲ್ಲ. ಒಬ್ಬರು ಇನ್ನೊಬ್ಬರ ಮೇಲೆ ಕೆಸರು ಎರಚುತ್ತಿರುವಾಗ ನನಗೆ ಬೇಸರವಾಗಿದ್ದುಂಟು. ರವಿಯ ಬಗ್ಗೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿದ್ದಾಗಲೂ ನಾನು ಕೆಲಸ ಮಾಡುತ್ತಿದ್ದ ವಾಹಿನಿಯೊಂದರಲ್ಲಿ ಅವನನ್ನು ಕರೆದು ಕಾರ್ಯಕ್ರಮ ಮಾಡಿಸಿದವನು ನಾನು. ಅವನಿಗೂ ನನ್ನ ಮೇಲೆ ಗೌರವವಿದೆ. ಅವನೆಂದೂ ನನ್ನ ಬಗ್ಗೆ ಸಣ್ಣದಾಗಿ ಮಾತನಾಡಿಲ್ಲ.
ಇನ್ನು ರಂಗನಾಥ್. ಆತ ಮತ್ತು ನಾನು ಹಲವು ವರ್ಷ ಜೊತೆಯಾಗಿ ಇದ್ದವರು. ಜೊತೆಯಾಗಿ ಕೆಲಸ ಮಾಡಿದವರು. ಕೆಲವೊಮ್ಮೆ ಸಿಟ್ಟು ಮಾಡಿಕೊಂಡಿದ್ದೇವೆ. ಮಾತನಾಡದೇ ಕಾಲ ಕಳೇದಿದ್ದೇವೆ. ಆದರೆ ವಾರದಲ್ಲಿ ನಾಲ್ಕಾರು ಬಾರಿಯಾದರೂ ಅವನ ಬಗ್ಗೆ ನಾವು ಮನೆಯಲ್ಲಿ ಮಾತನಾಡುತ್ತೇವೆ. ಈತ ನಮ್ಮ ಸ್ನೇಹಿತ ಎಂಬ ಭಾವ ಎಂದೂ ಹೋಗುವುದಿಲ್ಲ. ಆತನೂ ಅಷ್ಟೇ. ತಾನು ಹೊಸದೊಂದು ಚಾನಲ್ ಮಾಡಿದಾಗ ಪ್ರೀತಿಯಿಂದ ಕರೆದ. ನಾನು ಹೋಗಿ ಬಂದೆ.
ರಂಗನಾಥ್ ಕನ್ನಡ ಪ್ರಭ ಸಂಪಾದಕನಾಗಿದ್ದಾಗ ಸುವರ್ಣದಲ್ಲಿ ರಾಜಕೀಯ ಚರ್ಚೆಗೆ ಕರೆದು ವಿಸ್ಯುವಲ್ ಮೀಡಿಯಾ ಪ್ರವೇಶಕ್ಕೆ ಕಾರಣನಾದವನು ನಾನು. ಈ ಬಗ್ಗೆ ನನಗೆ ಸಂತೋಷವಿದೆ. ಆತ ಪತ್ರಿಕೋದ್ಯಮಿಯಾಗಿ ಮಾಡಿರುವ ಸಾಧನೆಯ ಬಗ್ಗೆ ನನಗೆ ಹೆಮ್ಮೆ ಇದೆ.  ರಂಗನಾಥ್ ಮತ್ತು ರವಿಯ ಜೊತೆ ಯಾವಾಗಲಾದರೂ ಒಮ್ಮೆ ದೂರವಾಣಿಯಲ್ಲಿ ಮಾತನಾಡಿ ಯೋಗಕ್ಷೇಮ ವಿಚಾರಿಸಿಕೊಳ್ಳುವುದಿದೆ.
ನಾಡಿನ ಖ್ಯಾತ ಪತ್ರಕರ್ತರಾದ ವಿಶ್ವೇಶ್ವರ ಭಟ್ ರು ನನ್ನ ಜಿಲ್ಲೆಯವರು. ನಾನು ಮತ್ತು ಅವರು ಕನ್ನಡ ಪ್ರಭದಲ್ಲಿ ಜೊತೆಯಾಗಿ ಕೆಲಸ ಮಾಡಿದವರು. ಅವರು ನನಗೆ ರಂಗನಾಥ್ ಮತ್ತು ರವಿಯಷ್ಟು ಆತ್ಮೀಯರಲ್ಲದಿದ್ದರೂ ಅವರ ಜೊತೆ ನಾನೆಂದೂ ಜಗಳವನ್ನು ಆಡಿಲ್ಲ. ನಾನು ವರದಿಗಾರನಾಗಿ ಕೆಲಸ ಮಾಡುತ್ತಿದ್ದಾಗ ಅವರು ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಏಷ್ಯನ್ ಸ್ಕೂಲ್ ಆಫ್ ಜರ್ನಲಿಸಂ ನಲ್ಲಿ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಆದರೆ ಕನ್ನಡ ಪ್ರಭ ಸಂಪಾದಕರಾದ ವೈ ಎನ್ ಕೆ ಅವರಿಗೆ ಹತ್ತಿರದವರಾದ್ದರಿಂದ ಅವರನ್ನು ಭೇಟಿ ಮಾಡಲು ಬಂದಾಗ ನಾನು ಅವರೊಂದಿಗೆ ಕೆಲವೊಮ್ಮೆ ಮಾತನಾಡಿದ್ದು ಉಂಟು.
ನನ್ನ ಮೇಲೇಕೆ ಅಸಹನೆ ಭಟ್ಟರೆ ?
ನಾನು ಸುವರ್ಣ ನ್ಯೂಸ್ ಸೇರಿದ ಮೇಲೆ ಅವರಿಂದ ವಾಕ್ ದಿ ಟಾಕ್ ಕಾರ್ಯಕ್ರಮ ಮಾಡಿಸಿದೆವು. ನಮ್ಮ ಆಡಳಿತ ಮಂಡಳಿಗೆ ಅವರಿಂದ ಕಾರ್ಯಕ್ರಮ ಮಾಡಿಸಬೇಕು ಅನ್ನಿಸಿದಾಗ ನಾನೇನೂ ಅದಕ್ಕೆ ವಿರೋಧವನ್ನು ವ್ಯಕ್ತಪಡಿಸಲಿಲ್ಲ. ಈ ಕಾರ್ಯಕ್ರಮದ ಸಂಬಂಧ ಅವರು ಕಚೇರಿಗೆ ಬಂದಾಗ ನಾನು ಅವರನ್ನು ಭೇಟಿ ಮಾಡಿತ್ತಿದ್ದುದು ಉಂಟು. ಆದರೆ ಆ ಕಾರ್ಯಕ್ರಮಕ್ಕೆ ನಿರೀಕ್ಷಿತ ಜನಪ್ರಿಯತೆ ಬರದಿದ್ದರಿಂದ ಅದನ್ನು ನಿಲ್ಲಿಸಬೇಕಾಯಿತು. ಇದಾದ ಮೇಲೆ ನಾನೆಂದೂ ಅವರನ್ನೂ ಭೇಟಿ ಮಾಡಲಿಲ್ಲ.
ಆದರೆ ಅವರು ಹಲವಾರು ವಿಚಾರಗಳಲ್ಲಿ ವಿವಾದಕ್ಕೆ ಒಳಗಾದಾಗ ಆ ಬಗ್ಗೆ ಸಹೋದ್ಯೋಗಿಗಳ ಜೊತೆ ನಾನು ಬೇಸರದಿಂದಲೇ ಮಾತನಾಡಿದ್ದಿದೆ. ಅದು ಗಣಿ ಹಗರಣಕ್ಕೆ ಸಂಬಂಧಿಸಿರಬಹುದು, ಲಾಯರ್ ಜೊತೆಗಿನ ಗುದ್ದಾಟವಿರಬಹುದು, ಹಾಯ್ ಬೆಂಗಳೂರಿನಲ್ಲಿ ಬಂದ ವರದಿಯಲ್ಲಿನ ವಿಷಯಕ್ಕೆ ಸಂಬಂಧಿಸಿರಬಹುದು ಆಗೆಲ್ಲ ಖಾಸಗಿಯಾಗಿ ನಾನು ಬೇಸರದಿಂದ ಮಾತನಾಡಿದ್ದಿದ್ದೆ.
ಹಾಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ಕೆಲವರು ವಿಶ್ವೇಶ್ವರ ಭಟ್ಟರ ಬಗ್ಗೆ ಬೇಸರದಿಂದ ಮಾತನಾಡಿದಾಗ ಆ ಜಿಲ್ಲೆಯವನೇ ಆದ ನಾನು ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದೇನೆ. ಇದನ್ನು ಬಿಟ್ಟರೆ ನಾನು ಅವರ ಬಗ್ಗೆ ಎಂದೂ ಎಲ್ಲಿಯೂ ಮಾತನಾಡಿಲ್ಲ. ಯಾಕೆಂದರೆ ನಾನು ಸ್ಟಾರ್ ಪತ್ರಕರ್ತನಲ್ಲ. ಇಡೀ ರಾಜ್ಯದ ರಾಜಕೀಯವನ್ನು ಸಾಮಾಜಿಕ ಬದುಕನ್ನು ಬದಲಿಸುವ ಶಕ್ತಿವಂತನೂ ಅಲ್ಲ. ನಾನು ಹತ್ತರಲ್ಲಿ ಒಬ್ಬ.
ಈ ವಿಚಾರಗಳನ್ನು ನಾನು ಪ್ರಸ್ತಾಪಿಸುವುದಕ್ಕೆ ಕಾರಣ ನನಗೆ ಬಂದ ದೂರವಾಣಿ ಕರೆ. ಕಳೆದ ವಾರ ನಾನು ಮಂಗಳೂರಿನಿಂದ ಹಿಂತಿರುಗಿ ಬಂದ ಮೇಲೆ ಸ್ನೇಹಿತರೊಬ್ಬರು ನನಗೆ ಕರೆ ಮಾಡಿ ಕನ್ನಡ ಪ್ರಭದಲ್ಲಿ ಬಾಣ ಭಟ್ ನಿಮ್ಮ ಬಗ್ಗೆ ಬರೆದಿದ್ದಾರೆ ಎಂದರು. ನಾನು ತಲೆ ಕೆಡಿಸಿಕೊಳ್ಳಲಿಲ್ಲ. ನಾನು ಕಳೆದ ಕೆಲವು ವರ್ಷಗಳಿಂದ ಕನ್ನಡ ಪ್ರಭ ಪತ್ರಿಕೆಯನ್ನು ಮನೆಗೆ ತರಿಸಿಕೊಳ್ಳದೇ ಇರುವುದರಿಂದ ಆ ಬಗ್ಗೆ ನನಗೆ ಗೊತ್ತಾಗಲಿಲ್ಲ. ಇಂದು ಬೆಳಿಗ್ಗೆ ಮತ್ತೆ ಇನ್ನೊಂದು ದೂರವಾಣಿ ಕರೆ. ಅವರೂ ಸಹ ಇಂದಿನ ಕನ್ನಡ ಪ್ರಭ ನೋಡಿ ಎಂದರು. ತಕ್ಷಣ ಅಂಗಡಿಗೆ ಹೋಗಿ ಪತ್ರಿಕೆಯನ್ನು ತಂದು ನೋಡಿದೆ. ಅಲ್ಲಿ ಬಾಣ ಭಟ್ಟನ ಪ್ರಶ್ನೋತ್ತರ ಹೀಗಿತ್ತು.
ಪ್ರಶ್ನೆ; ತುಟಿ ಕೆಂಪಗಿರುವವರೆಲ್ಲೆ ಲಿಪ್ ಸ್ಟಿಕ್ ಹಚ್ಚಿಕೊಳ್ಳುತ್ತಾರೆಯೆ ?
ಉತ್ತರ; ಪೊಕಳೆ ಶಶಿಧರ ಭಟ್ ಎಲೆಅಡಿಕೆ ಮೆತ್ತಿಕೊಂಡಿರುತ್ತಾನೆ.
ಇಲ್ಲಿ ಪ್ರಶ್ನೆ ಮತ್ತು ಉತ್ತರದ ನಡುವೆ ನನಗೆ ಯಾವ ಸಂಬಂಧವೂ ಕಾಣುತ್ತಿಲ್ಲ. ಅಸಹನೆ ಮತ್ತು ಧ್ವೇಷ ಮಾತ್ರ ಇಲ್ಲಿ ತಾಂಡವವಾಡುತ್ತಿದೆ. ಇನ್ನು ನಾನು ಎಲೆ ಅಡಿಕೆ ಹಾಕಿಕೊಳ್ಳುತ್ತೇನೆ ಎಂಬುದು ನಿಜ. ಅದು ನನ್ನ ಜಿಲ್ಲೆಯ ಬಹುತೇಕ ಜನರೂ ಹಾಕಿಕೊಳ್ಳುತ್ತಾರೆ. ವಿಶ್ವೇಶ್ವರ ಭಟ್ ರ ಅಪ್ಪ ಅಮ್ಮ ಕೂಡ ಎಲೆ ಅಡಿಕೆ ಹಾಕಿಕೊಳ್ಳುತ್ತಿರಬಹುದು. ಈಗಲೂ ಅವರ ನೂರಾರು ಸಂಬಂಧಿಕರು ಎಲೆ ಅಡಿಕೆ ಹಾಕಿಕೊಳ್ಳುತ್ತಾರೆ ಎಂದು ನಾನು ಎದೇ ತಟ್ಟಿ ಹೇಳಬಲ್ಲೆ.ಹಾಗಂತ ತಮ್ಮ ಜಿಲ್ಲೆಯ ಸ್ನೇಹಿತರನ್ನು ಜನರನ್ನು ಅವರು ದ್ವೇಷಿಸುತ್ತಾರೆಯೆ ?  ಜೊತೆಗೆ ನಾನು ಎಲೆ ಅಡಿಕೆ ಹಾಕಿಕೊಂಡರೂ ಇನ್ನೂ ಯಾರಿಗೂ ಉಗಿದಿಲ್ಲ. ಕೆಲವೊಮ್ಮೆ ಉಗಿಯಬೇಕು  ಎಂದು ಅನ್ನಿಸಿದರೂ ಹಾಗೆ ಮಾಡಿಲ್ಲ. ನಾನು ಕೆಲವೊಮ್ಮೆ ಹೇಳುವುದಿದೆ. ಎಲೆ ಅಡಿಕೆ ನನ್ನ ಜಿಲ್ಲೆಯನ್ನು ನನ್ನ ಜನರನ್ನು ನನ್ನ ತೋಟವನ್ನು ಕಾಡನ್ನು ಜಲಪಾತವನ್ನು ನೆನಪು ಮಾಡುತ್ತದೆ. ನನ್ನೂರಿನ ನೆನಪನ್ನು ಮರೆತು ನನಗೆ ಜೀವಿಸಲು ಸಾಧ್ಯವಿಲ್ಲ.  ಪ್ರತಿ ಕ್ಷಣದಲ್ಲಿ ನನ್ನನ್ನು ನನ್ನ ನೆಲ ಮತ್ತು ಜನರ  ನೆನಪು ಮಾಡುವುದು ಎಲೆ ಅಡಿಕೆಯೇ. ಇಲ್ಲಿದಿದ್ದರೆ ಯಾರ್ಯಾರೋ ನೆನಪಾಗಿ ಮನಸಿಗೆ ಬೇಸರವಾಗುತ್ತದೆ.
ನಾನು ಏನನ್ನಾದರೂ ಬಿಟ್ಟೇನು, ಎಲೆ ಅಡಿಕೆ ಬಿಡುವಿದಿಲ್ಲ. ಜೊತೆಗೆ ಎಲೆ ಅಡಿಕೆ ಕೋಟಿನ ಹಾಗೆ ಸೂಟಿನ ಹಾಗೆ ಎಲ್ಲಿಂದಲೋ ಬಂದಿದ್ದಲ್ಲ.ವಿದೇಶಗಳಲ್ಲಿ ಸುತ್ತುವವರಿಗೆ ವಿದೇಶಿ ಇಂಗ್ಲೀಷ್ ಕನಸು ಕಾಣುವವರಿಗೆ ಇದೆಲ್ಲ ಬೇಡದಿರಬಹುದು.ಆದರೆ ನನ್ನಂಥಹ ಪಾಮರರಿಗೆ ಸಾಮಾನ್ಯರಿಗೆ ಇದೆಲ್ಲ ಬೇಕು. ಅದು ಬೇರೆ ಯಾವ ಅನುಕರಣೆಯೂ ಅಲ್ಲ. ಅದು ನಮ್ಮ ನೆಲದ್ದು ನಮ್ಮದು.
ಇನ್ನು ಪೊಕಳೆ ಎಂಬ ವಿಶೇಷಣ. ಪೊಕಳೆ ಎಂದು ಸುಳ್ಳು ಹೇಳುವವನು ಎಂಬ ಅರ್ಥವಿದೆ. ಅದಕ್ಕೆ ಬುರುಡೆ ಎಂದು ಹೇಳಬಹುದು. ನಾನು ಎಲ್ಲಿ ಸುಳ್ಳು ಹೇಳಿದ್ದೇನೆ ಎಂಬುದು, ನಾನು ಎಲ್ಲಿ ಬುರುಡೆ ಬಿಡುತ್ತೇನೆ ಎಂಬುದು ನನಗೆ ತಿಳಿಯದು. ಹಾಗೆ ಸುಳ್ಳು ಹೇಳುವವರಿಗೆ ತಾವು ಸುಳ್ಳು ಹೇಳುತ್ತಿದ್ದೇವೆ ಎಂದು ತಿಳಿಯುವುದಿಲ್ಲ. ಜೊತೆಗೆ ಮುಕ್ತವಾಗಿ ಇರುವವರು ಕೆಲವೊಮ್ಮೆ ಒಂದರೆಡು ಹೆಚ್ಚಿಗೆ ಮಾತನಾಡುತ್ತಾರೆ. ಅದರಲ್ಲಿ ಉತ್ಪ್ರೇಕ್ಶೆ ಇರಬಹುದು. ನನ್ನ ಮಾತಿನಲ್ಲೂ ಉತ್ಪ್ರೇಕ್ಶೆ ಇದ್ದರೂ ಇರಬಹುದು. ಜೊತೆಗೆ ಅಪಾಯಕಾರಿಯಲ್ಲದ ಸುಳ್ಳು ಒಳ್ಳೆಯದೇ.
ನಾನು ಉದ್ದೇಶಪೂರ್ವಕವಾಗಿ ಸುಳ್ಳು ಹೇಳುವುದಿಲ್ಲ ಎಂದು ಮಾತ್ರ ಹೇಳಬಲ್ಲೆ.
ಕನ್ನಡ ಪ್ರಭದಲ್ಲಿ ಬಂದ ಪ್ರಶ್ನೋತ್ತರವನ್ನು ನೋಡಿದಾಗ ವಿಶ್ವೇಶ್ವರ ಭಟ್ಟರಿಗೆ ನನ್ನ ಮೇಲೆ ಕೋಪ ಮತ್ತು ಅಸಹನೆ ಇದೆ ಎಂಬುದು ಸ್ಪಷ್ಟ. ಅದು ಯಾಕೆ ಎಂಬುದು ನನಗೆ ನಿಜವಾಗಿ ತಿಳಿಯದು. ಪ್ರೀತಿ ಮತ್ತು ಕೋಪಕ್ಕೆ ಸಕಾರಣಗಳಿರಬೇಕು. ಸಕಾರಣಗಳಿಲ್ಲದ ಪ್ರೀತಿ ಮತ್ತು ಧ್ವೇಷ ಎರಡು ಅಪಾಯಕಾರಿಯೆ. ಇಂತಹ ಅಪಾಯಕಾರಿಯಾದ ಧ್ವೇಷ ಯಾತಕ್ಕೆ ಎಂಬುದು ನನಗೆ ತಿಳಿದರೆ ಒಳ್ಳೆಯದು. ಆದರೆ ಅವರು ಪೊಕಳೆ ಎಂಬ ಶಬ್ದವನ್ನು ಬಳಸಿರುವುದನ್ನು ಗಮನಿಸಿದರೆ ನಾನು ಎಲ್ಲೋ ಹೇಳಿದ ಯಾವುದೋ ಮಾತಿನಿಂದ ಅವರಿಗೆ ಸಿಟ್ಟು ಬಂದಿದೆ ಎಂಬುದು ಸ್ಪಷ್ಟ. ಅದು ಯಾವುದು ಎಂಬುದನ್ನು ಅವರು ಹೇಳಿದರೆ ಆ ಬಗ್ಗೆ ನಾವು ಚರ್ಚೆ ಮಾಡಬಹುದು. ನಾನು ಪೊಕಳೆ ಭಟ್ಟನಾದರೂ ಓಡಿ ಹೋಗುವ ಭಟ್ಟನಲ್ಲ. ಹೊಂದಾಣಿಕೆ ಮಾಡಿಕೊಳ್ಳುವ ಭಟ್ಟನಲ್ಲ. ಗುಂಪು ಕಟ್ಟುವ, ಯೋಧರ ಪಡೆ ಕಟ್ಟುವ ಭಟ್ಟನಲ್ಲ. ನಾನು ಒಬ್ಬಂಟಿಯಾಗಿ ಮಾತನಾಡಬಲ್ಲೆ. ನನ್ನನ್ನು ನಾನು ಸಮರ್ಥಿಸಿಕೊಳ್ಳಬಲ್ಲೆ.  ಆರೋಗ್ಯಪೂರ್ಣ ಚರ್ಚೆಯಲ್ಲಿ ನನಗೆ ನಂಬಿಕೆ ಇದೆ. ಯಾಕೆಂದರೆ ನಾನು ಮೂಲಭೂತವಾಗಿ ಜನತಂತ್ರವಾದಿ.

ಇವರು ನಿಜವಾದ ಜನ ನಾಯಕರೆ ? ಅಥವಾ ಬೇರೆ ಏನೋ ಇದೆಯೆ ?

ಕಮಲ ಈಗ  ದೂರ ದೂರ 

ಇತ್ತೀಚಿನ ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಇಡೀ ಬೆಳವಣಿಗೆಗಳ ಕೇಂದ್ರ ಬಿಂದುವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡೀಯೂರಪ್ಪನವರು ಕಾಣುತ್ತಾರೆ ಅಥವಾ ಅವರು ಹಾಗೆ ಬಿಂಬಿತರಾಗುತ್ತಿದ್ದಾರೆ. ಇದಕ್ಕೆ ಬಹುಮುಖ್ಯಕಾರಣ ಕಳೆದ ಆರೆಳು ವರ್ಷಗಳ ರಾಜ್ಯ ರಾಜಕಾರಣದಲ್ಲಿ ಅವರು ಒಹಿಸಿದ ಪಾತ್ರ ಎಂಬುದು ನಿಜ. ಬಿಜೆಪಿ ,ಮತ್ತು ಜೆಡಿಎಸ್ ಸರ್ಕಾರ ಪತನಗೊಂಡ ಮೇಲೆ ಅವರು ಒಬ್ಬ ಷಡ್ಯಂತ್ರಕ್ಕೆ ಬಲಿಯಾದ ರಾಜಕಾರಣಿಯಾಗಿ ಕಾಣಿಸಿಕೊಂಡರು.. ಜೊತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ತಮ್ಮ ರಾಜಕೀಯ ಅಪಕ್ವತೆಯಿಂದಾಗಿ ದುರಂತ ನಾಯಕನೊಬ್ಬನನ್ನು ಸೃಷ್ಟಿಸಿ ಬಿಟ್ಟರು. ನಮ್ಮಲ್ಲಿ ಸಾಧಾರಣವಾಗಿ ದುರಂತ ನಾಯಕರಿಗೆ ಜನ ಮನ್ನಣೆ ಹೆಚ್ಚು. ಕಥೆಯ ನಾಯಕರಿಗಿಂತ ದುರಂತ ನಾಯಕರನ್ನು ಮೆಚ್ಚುವ ಆರಾಧಿಸುವ ಮನಸ್ಥಿತಿ ನಮ್ಮದು.
ನೀವು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಭಾಗದವರಾಗಿದ್ದರೆ, ಗಧಾಯುದ್ಧ ಯಕ್ಷಗಾನ ಪ್ರಸಂಗವನ್ನು ನೋಡಿಯೇ ನೋಡಿರುತ್ತೀರಿ. ಈ ಪ್ರಸಂಗದಲ್ಲಿ ಎಲ್ಲವನ್ನು ಕಳೆದುಕೊಂಡ ದುರ್ಯೋಧನ ಕುರುಕ್ಷೇತ್ರ ಎಂಬ ಯುದ್ಧಭೂಮಿಯಲ್ಲಿ ಒಬ್ಬನೇ ಬರುತ್ತಿರುತ್ತಾನೆ. ಆಗ ಬರುವ ಹಾಡು ಹೀಗಿದೆ.
ಕುರುರಾಯನಿದನೆಲ್ಲ ಕಂಡು ಸಂತಾಪದಲಿ
ತನ್ನೆಲ ಭಾಗ್ಯವೆನುತ...
ಹೆಣದ ಪರ್ವತವನೇರಿಳುದು...
ಬೆಳಗಿನ ಜಾವ ಈ ಪದವನ್ನು ಭಾಗವತರು ಹೇಳುತ್ತಿದ್ದಂತೆ ಮಲಗಿದವರೆಲ್ಲೆ ಎದ್ದು ಕುಳಿತು ಬಿಡುತ್ತಾರೆ. ಹಾಗೆ ಕುರುರಾಯನ ದುರಂತ ಎಲ್ಲರ ಎದೆಯನ್ನು ತಟ್ಟಿ ಅಲ್ಲಿಯೇ ಉಳಿದುಬಿಡುತ್ತದೆ. ಕೊನೆಗೆ ಆಟ ಮುಗಿಸಿ ಮನೆಗೆ ಹೋಗುವವರು ಕುರುರಾಯನ ಪಾತ್ರದ ಬಗ್ಗೆಯೇ ಮಾತನಾಡುತ್ತಾರೆಯೇ ಹೊರತೂ ಭೀಮನ ಬಗ್ಗೆ ಯಾರೂ ಮಾತನಾಡುವುದಿಲ್ಲ. ಈ ಪ್ರಸಂಗದಲ್ಲಿ ನಾಯಕನೆಂದರೆ ಕುರುರಾಯನೇ..ಆತ ಎನೇ ತಪ್ಪು ಮಾಡಿದರೂ ಕೊನೆಗೆ ಏನೇ ಇರಲಿ  ಕೌರವ ಮಾಡಿದ್ದರಲ್ಲಿ ತಪ್ಪೇನು ಇಲ್ಲ ಎಂದು ಜನ ಮಾತನಾಡುತ್ತ ಮನೆ ಸೇರುತ್ತಾರೆ.
ದುರಂತ ನಾಯಕರಿಗೆ ಇರುವ ಗೌರವ ಅಂತಹುದು. ಯಾವತ್ತೂ ದುರಂತ ನಮ್ಮ ಎದೆಯ ಬಾಗಿಲನ್ನು ಬಡಿದ ಕಂಪನವನ್ನು ಉಂಟು ಮಾಡುತ್ತದೆ. ಅವರು ಮಾಡಿದ ತಪ್ಪುಗಳನ್ನೆಲ್ಲ ಮರೆಯುವಂತೆ ಮಾಡುತ್ತದೆ. ಜೆಡಿಎಸ್ ಪಕ್ಷದ ನಾಯಕರ ತಪ್ಪಿನಿಂದ ಯಡಿಯೂರಪ್ಪ ದುರಂತ ನಾಯಕರಾಗಿ ಕನ್ನಡಿಗರ ಮನಸ್ಸಿನಲ್ಲಿ ಉಳಿದು ಬಿಟ್ಟರು. ಆಗ ಅವರು ಸೇರಿದ ಪ್ರಬಲ ಲಿಂಗಾಯಿತ ಜಾತಿಯವರು ಮಾತ್ರವಲ್ಲ, ಇಡೀ ಕರ್ನಾಟಕದ ಜನ ಯಡಿಯೂರಪ್ಪನವರ ಬಗ್ಗೆ ಮರುಕಪಟ್ಟರು. ಅವರಿಗೆ ಹೀಗೆ ಮೋಸವಾಗಬಾರದಿತ್ತು ಎಂದರು. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿಯನ್ನು ಅಧಿಕಾರದ ಗದ್ದುಗೆಯ ಹತ್ತಿರ ತಂದು ಬಿಟ್ಟರು. ೧೧೦ ಸ್ಥಾನಗಳನ್ನು ಪಡೆದ ಬಿಜೆಪಿ ಸದನದ ಬಹುಮತಪಡೆಯಲು ಕೇವಲ ಎರಡು ಸ್ಥಾನಗಳು ಮಾತ್ರ ಕಡಿಮೆಯಾಗಿತ್ತು.
ಇದಾದ ಮೇಲೆ ಯಡಿಯೂರಪ್ಪನವರ ದುರಂತ ನಾಯಕನ ಸ್ಥಾನ ಹೊರಟು ಹೋಯಿತು. ಅವರು ದುರಂತ ನಾಯಕನ ಸ್ಥಾನದಿಂದ ರಾಜ್ಯದ ನಾಯಕನ ಸ್ಥಾನವನ್ನು ಏರಿ ಕುಳಿತರು. ಆಗಲೇ ಯಡಿಯೂರಪ್ಪ ಬದಲಾಗತೊಡಗಿದರು. ಜನ ಬೆಂಬಲ ಅವರನ್ನು ಒಬ್ಬ ಸರ್ವಾಧಿಕಾರಿ ರಾಜಕಾರಣಿಯನ್ನಾಗಿ ಬದಲಿಸಿಬಿಟ್ಟಿತ್ತು. ಅವರು ಆಪರೇಷನ್ ಕಮಲದ ಮೂಲಕ ಕಂಡ ಕಂಡವರನ್ನು ಅವಕಾಶವಾದಿಗಳನ್ನು, ಅಧಿಕಾರದಾಹಿಗಳನ್ನು ತಂದು ತಮ್ಮ ಪಕ್ಕದಲ್ಲಿ ಕೂಡ್ರಿಸಿಕೊಂಡರು. ಬಿಜೆಪಿಯ ತತ್ವ ಸಿದ್ಧಾಂತಗಳ ಅರಿವಿಲ್ಲದ ಅಧಿಕಾರ ರಾಜಕಾರಣವನ್ನೇ ನಂಬಿರುವ ತುಂಡು ದೋರೆಗಳಿಂದ ಅವರು ಬಹುಪರಾಕ್ ಹೇಳಿಸಿಕೊಳ್ಳತೊಡಗಿದರು.
ಯಡಿಯೂರಪ್ಪ ಅಧಿಕಾರ ರಾಜಕಾರಣದ ಎಲ್ಲ ಪಟ್ಟುಗಳನ್ನು ಕರಗತ ಮಾಡಿಕೊಳ್ಳತೊಡಗಿದರು. ಒಬ್ಬ ರಾಜನೀತಿಜ್ನನಿಗೂ ಮೂರನೆಯ ದರ್ಜೆ ರಾಜಕಾರಣಿಗೂ ಇರುವ ವ್ಯತ್ಯಾಸವನ್ನು ಅವರು ಅರ್ಥ ಮಾಡಿಕೊಳ್ಳಲೇ ಇಲ್ಲ. ಈ ನಾಡಿನ ರೈತರ ಪರವಾಗಿ ಹೋರಾಡಿ ಬೆಳೆದ ನಾಯಕ ರೈತರ ಮೂಲಭೂತ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಪರಿಹಾರ ಒದಗಿಸುವ ಯತ್ನ ಮಾಡಲಿಲ್ಲ. ರೈತರ ಬೆಳೆಗಳಿಗೆ ವೈಜ್ನಾನಿಕ ಬೆಲೆ ದೊರಕಿಸುವ ಬಗ್ಗೆ ಯೋಚಿಸಲಿಲ್ಲ. ಕೃಷಿ ಉತ್ಪನ್ನಗಳನ್ನು ಮೌಲ್ಯ ವರ್ಧಿತ ವಸ್ತುವನ್ನಾಗಿ ಪರಿವರ್ತಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಯೋಚಿಸಲಿಲ್ಲ. ಕೃಷಿ ಮಧ್ಯವರ್ತಿಗಳನ್ನು ನಿಯಂತ್ರಿಸಲು ಅವರು ಯೋಚಿಸಲಿಲ್ಲ. ಬದಲಾಗಿ ಶಾಲಾ ಮಕ್ಕಳಿಗೆ ಸೈಕಲ್ ನೀಡುವಲ್ಲಿ ಸಂತೋಷ ಪಡತೊಡಗಿದರು. ಕೃಷಿ ಸಾಲ ಮನ್ನಾ ಮಾಡಿ ಮಹಾನ್ ಸಾಧನೆ ಮಾಡಿದ್ದೇನೆ ಎಂದು ಬೀಗತೊಡಗಿದರು. ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿ ದಾಖಲೆ ಮಾಡುತ್ತೇನೆ ಎಂದು ಗುಡುಗತೊಡಗಿದರು.
ಈ ನಡುವೆ ರೆಡ್ದಿ ಸಹೋದರರು ಮಾಡಿದ ಬಂಡಾಯದಿಂದ ಕೆರಳಿದ ಅವರು ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಹಪಹಪಿಸತೊಡಗಿದರು. ಶೋಭಾ ಕರಂದ್ಲಾಜೆ ವಿರುದ್ಧ ಕೂಗು ಎದ್ದಾಗ ಬಹಿರಂಗವಾಗಿ ಕಣ್ಣೀರು ಹಾಕಿ ಸಾಮಾಜಿಕ ಬದುಕಿಗಿಂತ ತಮಗೆ ವೈಯಕ್ತಿಕ ಬದುಕು ಮತ್ತು ಸಂಬಂಧ ಮುಖ್ಯ ಎಂಬ ಸಂದೇಶವನ್ನು ಸಾರಿ ಬಿಟ್ಟರು. ಈ ಮೂಲಕ ಜನರ ನಡುವಿನಿಂದ ಎದ್ದು ಬಂದ ನಾಯಕ ಎಂದು ನಂಬಿದವರಿಗೆ ತಾವು ಎದ್ದು ಬಂದಿದ್ದು ಎಲ್ಲಿಂದ ಮತ್ತು ಈಗ ಇರುವುದು ಎಲ್ಲಿ ಎಂಬುದನ್ನು ನಿರೂಪಿಸಿ ಬಿಟ್ಟರು.
ಭ್ರಷ್ಠಾಚಾರದ ಪ್ರಕರಣಗಳಲ್ಲಿ ಸಿಲುಕಿ ಅಧಿಕಾರ ಕಳೆದುಕೊಂಡ ಮೇಲೂ ಇದು ತಮ್ಮ ವಿರುದ್ಧದ ಪಿತೂರಿ ಎಂದು ಕರ್ನಾಟಕದ ಜನರನ್ನು ನಂಬಿಸುವ ಯತ್ನ ಮಾಡಿದರು. ಅದರೆ ಅವರು ಅರ್ಥ ಮಾಡಿಕೊಳ್ಳದ ವಿಚಾರ ಎಂದರೆ ರಾಜಕಾರಣದಲ್ಲಿ ಪಿತೂರಿ ಎಂಬುದು ಆ ಅಟದ ಒಂದು ನಿಯಮ ಎಂಬುದನ್ನು. ಯಾಕೆಂದರೆ ಒಂದು ಪಕ್ಷದಲ್ಲಿ ಇರುವ ಹಲವಾರು ನಾಯಕರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುತ್ತಾರೆ. ಅವರು ಷಡ್ಯಂತ್ರಗಳನ್ನು ನಡೆಸುತ್ತಲೇ ಇರುತ್ತಾರೆ. ಜೊತೆಗೆ ಕರ್ನಾಟಕದಲ್ಲಿ ಷ್ಯಡಂತ್ರ ನಡೆದಿರುವುದು ಯಡೀಯೂರಪ್ಪ ಅವರ ಮೇಲೆ ಮಾತ್ರ ಅಲ್ಲ. ಮುಖ್ಯಮಂತ್ರಿಗಳಾದ ಎಲ್ಲ ನಾಯಕರೂ ಷಡ್ಯಂತ್ರಗಳನ್ನು ಎದುರಿಸಿದ್ದಾರೆ. ಆದರೆ ಅವರಲ್ಲಿ ಯಾರೂ ಈ ರೀತಿ ಬೀದಿ ರಂಪ ಮಾಡಲಿಲ್ಲ. ದೇವರಾಜ ಅರಸು, ರಾಮಕೃಷ್ಣ ಹೆಗಡೆ, ವೀರಪ್ಪ ಮೊಯ್ಲಿ, ಎಸ್. ಬಂಗಾರಪ್ಪ, ವೀರೇಂದ್ರ ಪಾಟೀಲ್ ಎಲ್ಲರೂ ರಾಜಕೀಯ ಪಿತೂರಿಗಳಿಗೆ ಬಲಿಯಾದವರೇ. ಇವರಲ್ಲಿ ಎಲ್ಲರಿಗೂ ಮುಖ್ಯಮಂತ್ರಿ ಗಾದಿ ಮುಳ್ಳಿನ ಹಾಸಿಗೆಯೇ ಆಗಿತ್ತು. ಆದರೆ ಈ ಎಲ್ಲ ಮಾಜಿ ಮುಖ್ಯಮಂತ್ರಿಗಳಿಗೆ ಸಿಗದ ಅನುಕಂಪ ಯಡಿಯೂರಪ್ಪನವರಿಗೆ ಸಿಗುತ್ತಿದೆಯೆ ? ಈ ಎಲ್ಲ ಮಾಜಿ ಮುಖ್ಯಮಂತ್ರಿಗಳು ಮಾಡದ ಮಹಾನ್ ಸಾಧನೆಯನ್ನು ಯಡೀಯೂರಪ್ಪ ಮಾಡಿದ್ದಾರೆಯೆ ? ಕರ್ನಾನಟಕವನ್ನು ರಾಮ ರಾಜ್ಯವನ್ನಾಗಿ ಅವರು ಮಾಡಲು ಹೊರಟಿದ್ದರೆ ?
ಈಗ ಹಾಗೆ ಬಿಂಬಿಸುವ ಯತ್ನವಂತೂ ನಡೆಯುತ್ತಿದೆ. ಕನ್ನಡ ಖಾಸಗಿ ವಾಹಿನಿಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷ ಎರಡನೆಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಇದೇ ಮಾತನ್ನು ಬಹಳಷ್ಟು ಜನ ಹೇಳುತ್ತಾರೆ.
ಹಾಗಾದರೆ ಯಡಿಯೂರಪ್ಪ ಎಂತಹ ನಾಯಕ ಎಂದು ಅರ್ಥ ಮಾಡಿಕೊಳ್ಳಲು ನಾವೆಲ್ಲ ವಿಫಲರಾಗಿದ್ದೇವೆಯೆ ? ನನಗೆ ಗೊತ್ತಿಲ್ಲ. ಯಡೀಯೂರಪ್ಪ ಮಾಡಿರುವ ಅಭಿವೃದ್ಧಿ ಕಾರ್ಯಗಳು ಯಾವವು ಎಂದು ಪಟ್ಟಿ ಮಾಡಲು ಹೊರಟರೆ ಹೆಸರಿಸಬಹುದಾದ ಯಾವ ಕಾರ್ಯಕ್ರಮವೂ ಕಾಣುವುದಿಲ್ಲ. ಜೊತೆಗೆ ಭ್ರಷ್ಟಾಚಾರ ಅವರ ಆಡಳಿತಾವಧಿಯಲ್ಲಿ ಯಾವ ರೀತಿಯಲ್ಲಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಮುಖ್ಯಮಂತ್ರಿಯಾದವರು ತಮ್ಮ ಕುಟುಂಬಕ್ಕೆ ಸೇರಿದ ಶಿಕ್ಷಣ ಸಂಸ್ಥೆಗೆ ಚೆಕ್ ಮೂಲಕ ಕಮೀಷನ್ ಕೊಡಿಸಿದರು ಎಂದು ಆಪಾದಿಸಲಾದ ಪ್ರಕರಣ ನಡೆದಿದೆ. ಅಂದರೆ ಭ್ರಷ್ಟಾಚಾರ ಮತ್ತು ಕಮೀಷನ್ ವ್ಯವಹಾರವನ್ನು ಸರಿಯಾಗಿ ಮಾಡಲಾಗದ ಕಾಲ..
ಹಾಗಿದ್ದರೆ ಯಡಿಯೂರಪ್ಪನವರಿಗೆ ಈ ರೀತಿಯ ಬೆಂಬಲ ಸಿಗುತ್ತಿರುವುದಕ್ಕೆ ಕಾರಣವಾದರೂ ಏನು ? ಅವರು ತಮ್ಮ ಕಾಲದಲ್ಲಿ ಮಾಡಿದ ಅಭಿವೃದ್ಧಿ ಜನ ಬೆಂಬಲಕ್ಕೆ ಕಾರಣವಲ್ಲದಿದ್ದರೆ ಬೇರೆ ಯಾವುದೋ ಕಾರಣವಿರಬೇಕು . ಅದು ಯಾವುದು ?
ಒಂದೊಮ್ಮೆ ಈಗ ಬಿಂಬಿಸಲಾಗುತ್ತಿರುವ ರೀತಿಯಲ ಜನ ಬೆಂಬಲ ಅವರಿಗಿಲ್ಲ ಎಂದಾದರೆ ಹೀಗೆ ಅವರನ್ನು ಬಿಂಬಿಸುತ್ತಿರುವವರೂ ಸಹ ಒಟ್ಟಾರೆ ನಾಟಕದ ಪ್ರಮುಖ ಪಾತ್ರಧಾರಿಗಳು ಎಂದೇ ಅರ್ಥ. ಜೊತೆಗೆ ಹೀಗೆ ಯಡಿಯೂರಪ್ಪ ಕರ್ನಾಟಕ ಕಂಡರಿಯದ ಮಹಾನ್ ನಾಯಕ ಎಂದು ಬಿಂಬಿಸುತ್ತಿರುವುದರ ಹಿಂದಿನ ಸತ್ಯ ಯಾವುದು ?
ಬಹಳಷ್ಟು ಜನ ಖಾಸಗಿಯಾಗಿ ಮಾತನಾಡುವಾಗ ಯಡಿಯೂರಪ್ಪ ಅವರು ಸೇರಿದ ಲಿಂಗಾಯಿತ ಜಾತಿಯ ಮಾತನಾಡುತ್ತಾರೆ. ಲಿಂಗಾಯತರು ಸಂಫೂರ್ಣವಾಗಿ ಯಡಿಯೂರಪ್ಪನವರ ಬೆಂಬಲಕ್ಕೆ ನಿಂತು ಬಿಡುತ್ತಾರೆ ಎಂದು ಹೇಳುತ್ತಾರೆ. ಯಡಿಯೂರಪ್ಪ ಲಿಂಗಾಯಿತರಿರಬಹುದು. ಲಿಂಗಾಯಿತ ಧರ್ಮದ ಕೆಲವು ಮಠಾಧಿಪತಿಗಳು ಅವರ ಬೆಂಬಲಲ್ಲೆ ಇರಬಹುದು. ಆದರೆ ಲಿಂಗಾಯತ ಧರ್ಮವೇ ನ್ಯಾಯ ಪಕ್ಷಪಾತಿಯಾದುದು. ಸಾಮಾಜಿಕ ನ್ಯಾಯವನ್ನು ಎಲ್ಲರಿಗಿಂತ ಮೊದಲು ಪ್ರತಿಪಾದಿಸಿದವನು ಬಸವಣ್ಣ. ಜೊತೆಗೆ ಲಿಂಗಾಯಿತರು ಜಾತಿವಾದಿಗಳಾಗಿದ್ದರೆ ರಾಮಕೃಷ್ಣ ಹೆಗಡೆ ಎಂಬ ಬ್ರಾಹ್ಮಣನಿಗೆ ಬೆಂಬಲ ನೀಡುತ್ತಿರಲಿಲ್ಲ.
ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತ ಮುಕ್ಕಾಲು ಪಾಲು ನಾಯಕರು ಲಿಂಗಾಯಿತರು ಎಂಬುದು ನಿಜ. ಆದರೆ ಆ ಮಾತ್ರಕ್ಕೆ ಲಿಂಗಾಯಿತ ಜನ ಸಮುದಾಯವೇ ಯಡಿಯೂರಪ್ಪನವರನ್ನು ಬೆಂಬಲಿಸುತ್ತಿದೆ ಎಂದು ಹೇಳುವುದು ಸರಿಯಲ್ಲ.
ನಾವೆಲ್ಲ ಮಾಡುವ ತಪ್ಪೆಂದರೆ ಯಡಿಯೂರಪ್ಪ ಅವರ ಪಕ್ಕದಲ್ಲಿರುವ ರೇಣುಕಾಚಾರ್ಯ ಮತ್ತು ಹರೀಶ್ ಅಂತವರನ್ನು ಅವರ ಸಮುದಾಯದ ಜಹಗೀರು ಪಡೆದವರು ಎಂದು ಭಾವಿಸಿಬಿಡುವುದು. ಅದರಂತೆ ಪ್ರಚಾರ ಮಾಡುತ್ತ ಸಾಗುವುದು.
ಇಂದು ಬೆಳಿಗ್ಗೆ ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಬೆಳಗಿನ ಉಪಹಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲು ಸುಮಾರು ೧೦ ಸಚಿವರು ೩೦ ಶಾಸಕರು ಪಾಲ್ಗೊಂಡಿದ್ದರು. ಇದಾದ ನಂತರ ನನ್ನ ಬೆಂಬಲವನ್ನು ತೋರಿಸಲು ಇಲ್ಲಿಗೆ ಬಂದಿದ್ದೆ ಎಂದು ಅವರು ರಾಜಕೀಯ ಮೈಲೇಜ್ ಪಡೆಯಲು ಯತ್ನ ನಡೆಸಿದರು.. ಆದರೆ ಇಂತಹ ಚಹಾಕೂಟಗಳು ಮತ್ತು ಪಾನಗೋಷ್ಠಿಯಲ್ಲಿ ಪಾಲ್ಗೊಂಡವರು ಕೊನೆಯ ವರೆಗೆ ಅವರ ಜೊತೆಗೆ ಇರುತ್ತಾರೆಯೆ ಎಂಬುದು ಪ್ರಶ್ನೆ. ಒಂದೊಮ್ಮೆ ಇದ್ದರೂ ಸಚಿವರು ಶಾಸಕರು ಜೊತೆಗಿದ್ದರೆ ಜನ ಕೂಡ ಅವರ ಜೊತೆಗಿದ್ದಾರೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.
ಹೀಗಿದ್ದರೂ ಮಾಧ್ಯಮವಂತೂ ಯಡಿಯೂರಪ್ಪನವರ ಪರವಾಗಿ ನಿಂತಿದೆ ಎಂದು ಹೇಳುವುದು ಕಷ್ಟವಾದರೂ ಯಡಿಯೂರಪ್ಪನವರಿಗೆ ಮಾಧ್ಯಮದಲ್ಲಿ ಭಾರಿ ಪ್ರಚಾರ ದೊರಕುತ್ತಿರುವುದಂತೂ ನಿಜ. ಯಡಿಯೂರಪ್ಪನವರನ್ನು ಸೌಜನ್ಯಕ್ಕಾಗಿ ಭೇಟಿ ಮಾಡಿದವರೂ ಅವರ ಬೆಂಬಲಿಗರಾಗಿ ಬಿಂಬಿತರಾಗುತ್ತಿದ್ದಾರೆ.
ಯಾರು ಅರಿಯಲು ನಿಮ್ಮ ಭುಜ ಬಲದ ಪರಾಕ್ರಮ ? 
ಇಷ್ಟೆಲ್ಲ ಹೇಳಿದ ಮೇಲೂ ಯಡಿಯೂರಪ್ಪನವರು ನಿಜವಾಗಿ ಅಭಿವೃದ್ಧಿ ಕೆಲಸ ಮಾಡಿ ಜನರ ಮನಸ್ಸಿನಲ್ಲಿ ಉಳಿದಿದ್ದಾರೆಯೇ ಎಂಬ ಪ್ರಶ್ನೆ ಹಾಗೆ ಉಳಿದು ಬಿಡುತ್ತದೆ. ನನ್ನ ಪ್ರಕಾರ ಯಡೀಯೂರಪ್ಪ ಯಾವುದೇ ಕನಸುಗಳಿಲ್ಲದ, ಕರ್ನಾಟಕವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ನಾಯಕ. ಅವರ ಸುತ್ತ ಮುತ್ತ ಕಾಣಿಸಿಕೊಳ್ಳುತ್ತಿರುವವರು ಅವಕಾಶವಾದಿಗಳು, ಭ್ರಷ್ಟರು ಮತ್ತು ಲಂಪಟರು. ಇಂತವರನ್ನೇ ಕರ್ನಾಟಕದ ಜನ ಬಯಸುತ್ತಾರೆ ಎಂದಾದರೆ, ನಾವು ರಾಜಕಾರಣವನ್ನು ಬದುಕಿನ ಮೌಲ್ಯ ಪ್ರತಿಪಾದನೆಯನ್ನು ಪುನರ್ ವ್ಯಾಖ್ಯೆಗೆ ಒಳಪಡಿಸಬೇಕಾಗುತ್ತದೆ. ಮತ್ತು ರಾಜಕಾರಣದ ಉದ್ದೇಶ ಏನು ಎಂಬುದನ್ನು ಮತ್ತೆ ಮತ್ತೆ ಪ್ರಶ್ನಿಸಬೇಕಾಗುತ್ತದೆ.
ಕೊನೆಯ ಮಾತು;
ದೇವರಾಜ ಅರಸು ಅವರು ಅಧಿಕಾರ ಕಳೆದುಕೊಳ್ಳುವ ಹಿಂದಿನ ದಿನ ಅವರ ಜೊತೆ ಇದ್ದು ಬೆಂಬಲ ವ್ಯಕ್ತಪಡಿಸಿದವರಲ್ಲಿ ಕೆ. ಎಚ್. ಶ್ರೀನಿವಾಸ್ ಕೂಡ ಒಬ್ಬರು. ಮರುದಿನ ಮಾತ್ರ ಅವರು ಅರಸು ಅವರಿಗೆ ಕೈಕೊಟ್ಟು ವಿರೋಧಿ ಪಾಳೆಯದಲ್ಲಿ ಕಾಣಿಸಿಕೊಂಡಿದ್ದರು. ಈಗ ಕಳೆದ ಕೆಲವು ದಿನಗಳಿಂದ ಅವರು ಯಡಿಯೂರಪ್ಪನವರ ಪಕ್ಕ ಕಾಣಿಸಿಕೊಳ್ಳುತ್ತಿದ್ದಾರೆ. ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ರಾಜಕೀಯವಾಗಿ ಮೂಲೆ ಗುಂಪಾಗಿದ್ದ ಶ್ರೀನಿವಾಸರನ್ನು ಅದೇ ಈಶ್ವರಪ್ಪನವರ ವಿರುದ್ಧ ಯಡೀಯೂರಪ್ಪ ನಿಲ್ಲಿಸಬಹುದೆ ?

Monday, August 13, 2012

ಗಾಂಧಿ, ಹಜಾರೆ ಮತ್ತು ತಲೆಯ ಮೇಲಿನ ಟೋಪಿ......!

ಮೋಹನ ದಾಸ್ ಕರಮಚಂದ್ ಗಾಂಧಿ. ಈ ಹೆಸರು ಈಗ ಅಷ್ಟು ಪ್ರಚಾರದಲ್ಲಿ ಇರುವ ಹೆಸರಲ್ಲ. ಇಂದಿನ ಯುವ ಜನಾಂಗಕ್ಕೆ ಗಾಂಧಿ ಎಂಬ ಹೆಸರು ಅಂಥ ಪ್ರಭಾವ ಬೀರುತ್ತದೆ ಎಂಬ ಭ್ರಮೆ ಕೂಡ ನನಗಿಲ್ಲ. ನಾನು ಚಾನಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ಅಕ್ಟೋಬರ್ 2 ರಂದು ಎಲ್ಲ ಕಾಲೇಜುಗಳಿಗೆ ನಮ್ಮ ಹುಡುಗರನ್ನು ಕಳುಹಿಸಿ ಗಾಂಧಿ ನಿಮಗೆ ಗೊತ್ತಾ ಎಂದು ಪ್ರಶ್ನೆ ಕೇಳುವಂತೆ ಸೂಚಿಸಿದ್ದೆ. ನಮ್ಮ ಹುಡುಗರು ಸಂದರ್ಶಿಸಿದ ಪ್ರತಿ ಶತ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೋನಿಯಾ ಗಾಂಧಿಯಿಂದ ಪೂಜಾ ಗಾಂಧಿಯವರೆಗೆ ತಮಗೆ ಗೊತ್ತಿದ್ದ ಎಲ್ಕ ಡುಪ್ಲಿಕೇಟ್ ಗಾಂಧಿಗಳ ಹೆಸರು ಹೇಳಿದ್ದರು ! ಆದರೆ ಮೋಹನದಾಸ್ ಕರಮಚಂದ್ ಗಾಂಧಿಯ ಹೆಸರು ಹೇಳಿದವರು ಕೆಲವೇ ಕೆಲವರು. ಇದರಿಂದ ನನಗೆ ಆಗ ಆಶ್ಚರ್ಯವಾಗಿರಲಿಲ್ಲ. ಮನಸ್ಸಿನ ಮೂಲೆಯಲ್ಲಿ ಸಣ್ಣ ನೋವು, ವೇದನೆ ಉಂಟಾಗಿತ್ತು.
ಈಗ ನಾನು ಮತ್ತೆ ಅದ್ಸೇ ಹಳೆಯ ಪ್ರಶ್ನೆಯನ್ನು ಮತ್ತೆ ಕೇಳುವ ಸಾಹಸ ಮಾಡುವುದಿಲ್ಲ. ಯಾಕೆಂದರೆ ಮಹಾತ್ಮಾ ಗಾಂಧಿ ರಸ್ತೆ ಎನ್ನುವುದೇ ಎಂ.ಜಿ. ರಸ್ತೆಯಾದ ಕಾಲ ಇದು. ಇದನ್ನು ನಾನು ಮರೆಯುವಿಕೆ ಮತ್ತು ಬದಲಾವಣೆಯ  ಪರಿ ಎಂದು ಭಾವಿಸುತ್ತೇನೆ.
ಇದು ಒಂದು ರೀತಿಯ ವಿಸ್ಮೃತಿ. ಎಲ್ಲ ಕಾಲಘಟ್ಟದಲ್ಲಿಯೂ ಸ್ದಮಾಜ ಇಂತಹ ವಿಸ್ಮೃತಿಗೆ ಒಳಗಾಗುತ್ತದೆ. ಇತಿಹಾಸ ಎನ್ನುವುದು ಕಾಲಕ್ಕೆ ಸಂಬಂಧಿಸಿರುವುದರಿಂದ ಅದು ಪ್ರತಿ ಕ್ಷಣದಲ್ಲೂ ಸೃಷ್ಟಿಯಾಗುತ್ತಲೇ ಇರುತ್ತದೆ, ಇತಿಹಾಸದ ಸಮಾಧಿಯ ಮೇಲೆ ಹೊಸ ಇತಿಹಾಸ ಸೃಷ್ಟಿಯಾಗುತ್ತದೆ. ಹಾಗೆ ಇತಿಹಾಸ ನಮಗೆ ಪಾಠ ಹೇಳುತ್ತ ವರ್ತಮಾನವನ್ನು ಹೆಚ್ಚು ಅರ್ಥಪೂರ್ಣವಾಗಿ ಮಾಡಲು ಶ್ರಮಿಸುತ್ತಿರುತ್ತದೆ. ಹಾಗೆ ಇತಿಹಾಸ ಹೊಸ ಅಂಗಿ ಧರಿಸಿ ವರ್ತಮಾನದಲ್ಲಿ ಪ್ರಕಟವಾಗುವ ರೀತಿ ಕೂಡ ಕುತೂಹಲಕರ. ಇತಿಹಾಸವನ್ನು ನಾವು ಬಾಷೆಯ ಮೂಲಕ ಅರ್ಥ ಮಾಡಿಕೊಳ್ಳಲು ಯತ್ನಿಸಿದರೂ ಅಕ್ಷರಗಳನ್ನು ಮೀರಿದ ಸಂಕೇತಗಳು ಅದರೊಳಗೆ ಅವಿತಿರುತ್ತವೆ. ಇತಿಹಾಸ ನಮಗೆ ಸಂಪೂರ್ಣವಾಗಿ ಅರ್ಥವಾಗುವುದು ಈ ಸಂಕೇತಗಳ ಒಗಟನ್ನು ಬಿಡಿಸಲು ನಮಗೆ ಸಾಧ್ಯವಾದಾಗ ಮಾತ್ರ. ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ ಇತಿಹಾಸ ಎನ್ನುವುದು ಯಾರೋ ದಾಖಲೆ ಮಾಡಿದ ಘಟನೆಗಳ ಅಕ್ಷರ ರೂಪ ಮಾತ್ರ ಆಗಿರುವುದಿಲ್ಲ. ಈ ಅಕ್ಷರಗಳು ಒಂದಾಗಿ ಹೊರಬಂದ ಶಬ್ದ ಮತ್ತು ಶಬ್ದದೊಳಗೆ ಇರುವ ಸಂಕೇತಗಳು ಬಹಳ ಮುಖ್ಯ.
ನನಗೆ ಮಹಾತ್ಮಾ ಗಾಂಧಿ ಗೊತ್ತಾಗುವುದಕ್ಕೆ ಮೊದಲು ಗಾಂಧಿ ಟೋಪಿ ಗೊತ್ತಿತ್ತು. ನನ್ನ ಅಪ್ಪ ಮತ್ತು ಅಜ್ಜ ಎಲ್ಲಿಗೆ ಹೋಗುವುದಿದ್ದರೂ ತಲೆಯ ಮೇಲೆ ಗಾಂಧಿ ಟೋಪಿ ಇಲ್ಲದೇ ಹೋಗುತ್ತಿರಲಿಲ್ಲ. ಮನೆಯಲ್ಲಿ ಅವರು ಇರುವಾಗ ಟೋಪಿ ಮನೆಯ ಒಳಗಿನ ಗಿಳಿ ಗೂಟದ ಮೇಲೆ ನೇತಾಡುತ್ತಿತ್ತು. ಹೀಗಾಗಿ ಗಿಳಿ ಗೂಟದ ಮೇಲೆ ಟೋಪಿ ಇದ್ದರೆ ಅಪ್ಪ ಅಜ್ಜ ಮನೆಯಲ್ಲಿ ಇದ್ದಾರೆ ಎಂಬುದು ನಮಗೆ ಸ್ಪಷ್ತವಾಗುತ್ತಿತ್ತು.  ಅಜ್ಜ ಮತ್ತು ಅಪ್ಪನ ಟೋಪಿಗೆ ನಮ್ಮ ಮನೆಯಲ್ಲಿ ಗಾಂಧಿ ಟೋಪಿ ಎಂದು ಕರೆಯುತ್ತಿರಲಿಲ್ಲ. ಅದು ಬರೀ ಟೋಪಿ. ಇದಕ್ಕೆ ಬಹು ಮುಖ್ಯ ಕಾರಣ ಸ್ವಾತಂತ್ಯ್ರ ಹೋರಾಟಗಾರನಾಗಿದ್ದ ನನ್ನ ಅಜ್ಜನಿಗೆ ಗಾಂಧಿಯ ಬಗ್ಗೆ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಆತ ಗಾಂದ್ಘಿಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿರಲಿಲ್ಲ. ಮಹಾನ ಜಗಳ ಗಂಟನಾಗಿದ್ದ ಅಜ್ಜನಿಗೆ ಸುಭಾಷಚಂದ್ರ ಭೋಸ್ ಎಂದರೆ ಇಷ್ತವಾಗಿತ್ತು. ಜೊತೆಗೆ ಸ್ವಾತಂತ್ರ್ಯ ಹೋರಾಟದ ಸಂಪೂರ್ಣ ಕ್ರೆಡಿಟ್  ಅನ್ನು ಸಂಪೂರ್ಣವಾಗಿ ಗಾಂಧೀಜಿಗೆ ಕೊಡಲು ನನ್ನ ಅಜ್ಜ ಸಿದ್ದನಿರಲಿಲ್ಲ.  ನನ್ನ ಅಪ್ಪ ಮತ್ತು ಅಜ್ಜ ನಾವೆಲ್ಲ ದೊಡ್ಡವರಾಗುವ ಹೊತ್ತಿಗೆ ಟೊಪಿ ಹಾಕುವುದನ್ನು ನಿಲ್ಲಿಸಿದ್ದರು. ಆದರೆ ಖಾದಿಯನ್ನು ಮಾತ್ರ ಅವರು ಸಾಯುವವರೆಗೂ ಬಿಡಲಿಲ್ಲ.
ನನಗೆ ಅನ್ನಿಸುವ ಹಾಗೆ ಟೊಪಿ ಹಾಕುವುದು ಬೇರೆ ಬೇರೆ ಅರ್ಥಗಳನ್ನು ಪಡೆದು ಬಿಟ್ಟಿತ್ತು. ಯಾರಿಗಾದರೂ ಮೋಸ ಮಾಡಿದರೆ ಆತ ಟೊಪಿ ಹಾಕಿದ ಎಂಬ ನಾಣ್ನುಡಿ ಪ್ರಚಲಿತಕ್ಕೆ ಬಂದಿದ್ದರಿಂದ ಅವರು ಟೋಪಿ ಹಾಕುವುದನ್ನು ನಿಲ್ಲಿಸಿರಬಹುದು ಎಂದು ನನಗೆ ಈಗ ಅನ್ನಿಸುತ್ತದೆ.
ಅಪ್ಪ ಯಾವಾಗಲೂ ಖಾದಿ ಹಾಕುತ್ತಿದ್ದವ ಅದು ಗರಿ ಗರಿಯಾಗಿ ಇರುವಂತೆ ನೋಡಿಕೊಳ್ಲುತ್ತಿದ್ದ, ಅದಕ್ಕೆ ಅಮ್ಮ ಗಂಜಿ ಹಾಕಿ ತೊಳದ ಮೇಲೆ ದೋಬಿಯ ಹತ್ತಿರ ಇಸ್ತ್ರಿ ಹಾಕಿಸಿಯೇ ಧರಿಸುತ್ತಿದ್ದ. ಹೀಗೆ ಬಟ್ಟೆಯನ್ನು ಇಸ್ತ್ರಿಗೆ ಕೊಡುವಾಗ ಟೋಪಿಯನ್ನು ಜೊತೆಗೆ ಕಳುಹಿಸುತ್ತಿದ್ದ. ಇಸ್ತ್ರಿ ಮಾಡಿಸಿ ತಂದ ಟೊಪಿಅಯನ್ನು ಆತ ವಿಶೇಷ ಸಂದರ್ಭಗಳಲ್ಲಿ ಮಾತ್ರ ಧರಿಸತೊಡಗಿದ. ಅಷ್ಟರಲ್ಲಿ ಟೋಪಿ ಮರೆಯಾಗತೊಡಗಿತ್ತು. ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದವರು ಕಾಂಗ್ರೆಸ್ ಆಡಳಿತವನ್ನು ನೋಡೀ ಬೇಸತ್ತು ಖಾದಿಯನ್ನು ಟೋಪಿಯನ್ನು ಧ್ವೇಷಿಸಲು ಪ್ರಾರಂಭಿಸಿದ್ದರು.
ನಾನು ಬೆಂಗಳೂರಿಗೆ ಬಂದು ಪತ್ರಿಕೋದ್ಯಮಿ ಆದ ಮೇಲೆ ಊರಿಗೆ ಹೋಗುವುದು ಕಡಿಮೆಯಾಯಿತು. ಅಪರೂಪಕ್ಕೆ ಊರಿಗೆ ಹೋದರೂ ಅಪ್ಪ ಟೋಪಿ ಧರಿಸಿದ್ದನ್ನು ಮತ್ತೆ ನೋಡಲಿಲ್ಲ. ಆದರೆ ಅಜ್ಜ ಮಾತ್ರ ಸಾಯುವವರೆಗೂ ಟೋಪಿ ಧರಿಸುವುದನ್ನು ಬಿಟ್ಟರಲಿಲ್ಲ.
ನನ್ನ ವಿಚಾರಕ್ಕೆ ಬರುವುದಾದರೆ ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ವದ ದಿನದಂದು ಮಾತ್ರ ಟೋಪಿ ಧರಿಸುತ್ತಿದ್ದೆ. ಕೊನೆಗೆ ಅಪ್ಪ ಅಜ್ಜನ ಜೊತೆ ಜಗಳವಾಡಲು ಶುರು ಮಾಡಿದ ಮೇಲೆ ಟೋಪಿಯನ್ನು ವಿರೋಧಿಸತೊಡಗಿದೆ. ಯಾಕೆಂದರೆ ಟೋಪಿ ಎನ್ನುವುದು ಅಪ್ಪ ಮತ್ತು ಅಜ್ಜನನ್ನು ಸಂಕೇತಸುತ್ತಿತ್ತು. ನನಗೆ ಈ ಟೋಪಿ ಯಾವ ರೀತಿ ಕಾಡಲು ತೊಡಗಿತ್ತೆಂದರೆ, ಹೊರಗೆ ಯಾರಾದರೂ ಟೋಪಿ ಧರಿಸಿದವರು ಕಂಡರೆ ಅಪ್ಪ ಅಜ್ಜನನ್ನು ನೋಡ್ಫಿದಂತೆ ಭಾಸವಾಗುತ್ತಿತ್ತು.
ಅಪ್ಪ ಅಜ್ಜನ ನಡುವಿನ ಇನ್ನೊಂದು ವ್ಯತ್ಯಾಸ ಎಂದರೆ ಅಜ್ಜ ಎಂದೂ ಖಾದಿ ಬಟ್ಟೆಗೆ ಇಸ್ತ್ರಿ ಹಾಕಿಸುತ್ತಿರಲಿಲ್ಲ, ಅವನ ತಲೆಯ ಮೇಲಿನ ಟೋಪಿ ಕೂಡ ಇಸ್ತ್ರಿ ಇಲ್ಲದೇ ತಲೆಯ ಬೋಡಿಗೆ ಅಂಟಿಕೊಂಡು ಬಿಡುತ್ತಿತ್ತು. ಹಾಗೆ ಟೋಪಿಯ ಮುಂಭಾಗ ಕಣ್ಣ ಮೇಲಿನ ಹುಬ್ಬಿನವರೆಗೆ ಬಂದು ಮಗುಚಿ ಮಲಗಿ ಬಿಡುತ್ತಿತ್ತು. ಕೆಲವಮ್ಮೊ ಅದು ಕಣ್ಣುಗಳ ಮೇಲೆ ಬಂದು ಅದನ್ನು ಮುಚ್ಚಿದಂತೆ ಕಂಡು ಅಜ್ಜ ಬೇರೆಯವರನ್ನು ಹೇಗೆ ನೋಡುತ್ತಾನೆ ಎಂಬ ಪ್ರಶ್ನೆ ನನಗೆ ಕಾಡುತ್ತಿತ್ತು.
ಅಪ್ಪ ಮಾತ್ರ ಇಸ್ತ್ರಿ ಇಲ್ಲದೇ ಟೋಪಿಯನ್ನಾಗಲೀ, ಬಟ್ಟೆಯನ್ನಾಗಲಿ ಧರಿಸುತ್ತಿರಲಿಲ್ಲ. ಅಪ್ಪ ದಿ ಹಿಂದೂ ಪತ್ರಿಕೆಯನ್ನು ಖಾದಿ ಬಟ್ಟೆಯಷ್ಟೇ ಅಗಾಧವಾಗಿ ಪ್ರೀತಿಸುತ್ತಿದ್ದರೆ ಅಜ್ಜ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಓದುತ್ತಿದ್ದ. ನನ್ನ ಅಜ್ಜ ನೋಡುವುದಕ್ಕೆ ಸ್ವಲ್ಪ ಮಟ್ಟಿಗೆ ಅಣ್ಣಾ ಹಜಾರೆಯಂತೆ ಕಾಣುತ್ತಿದ್ದ. ಆದರೆ ಅಣ್ಣ ಹಜಾರೆಗೆ ಇರುವ ಮುಗ್ದತೆ ನನ್ನ ಅಜ್ಜನಿಗೆ ಇರಲಿಲ್ಲ. ಆತ ಗಡಸು ಎಂದರೆ ಗಡಸು. ಜೊತೆಗೆ ಮಹಾನ್ ಜಗಳ ಗಂಟ. ಆತನಿಗೆ ಜಗಳವಾಡಲು ಯಾರಾದರೂ ಬೇಕಿತ್ತು. ಯಾರೂ ಸಿಗದಿದ್ದರೆ ಮನೆಯವರ ಜೊತೆಗೆ ಜಗಳಕ್ಕೆ ಇಳಿದು ಬಿಡುತ್ತಿದ್ದ. ಅಷ್ಟರಲ್ಲಿ ಇಂದಿರಾ ಗಾಂಧಿಯ ಕಟ್ಟಾ ಅಭಿಮಾನಿಗಿದ್ದ ಅಜ್ಜ ತುರ್ತು ಪರಿಸ್ಥಿಯನ್ನು ಸಮರ್ಥಿಸುವ ಹಂತಕ್ಕೆ ತಲುಪಿ ಬಿಟ್ಟಿದ್ದ. ಬಂಡಾಯ ಮತ್ತು ಸಮಾಜವಾದಿ ಚಳವಳಿಯ ಪ್ರಭಾವಕ್ಕೆ ಒಳಗಾಗಿದ್ದ ನಾನು ಇಂದಿರಾ ಗಾಂಧಿಯವರನ್ನು ಟೀಕಿಸಲು ಪ್ರಾರಂಬಿಸಿದ್ದೆ. ಹಲವು ಬಾರಿ ಇಂದಿರಾ ಗಾಂಧಿಯವರನ್ನು ಬೈಯುವ ನನ್ನನ್ನು ಹೊಡ್ಫೆಯಲು ಅಟ್ಟಿಸಿಕೊಂಡು ಬಂದಿದ್ದು ಇದೆ. ನಾನು ಅಜ್ಜನ ಹೊಡೆತವನ್ನು ತಪ್ಪಿಸಿಕೊಳ್ಳಲು ಮನೆಯಿಂದಲೇ ಓಡೀ ಹೋಗುತ್ತಿದ್ದೆ.
ಹೀಗೆ ಟೋಪಿಯ ಜೊತೆ ಇಂತಹ ಸಂಬಂಧ ಹೊಂದಿರುವ ನನಗೆ ಅಣ್ಣಾ ಹಜಾರೆಯ ಚಳವಳಿ ಪ್ರಾರಂಭವಾದ ಮೇಲೆ ಮತ್ತೆ ಟೋಪಿ ಕಾಡತೊಡಗಿತು. ಅಣ್ಣಾ ಹಜಾರೆಯ ಜೊತೆ ಉಪವಾಸ ಕುಳಿತ ನಮ್ಮ ಹುಡೂಗ ಹುಡುಗಿಯರ ತಲೆಯ ಮೇಲೆ ಟೋಪಿ ಕಂಡಾಗ ಇವರಿಗೆ ಟೊಪಿ ಎನ್ನುವುದು ಏನು ಎಂಭ ಪ್ರಶ್ನೆ ಕಾಡತೊಡಗಿತು. ಆಗ ನಾನು ನನ್ನ ಸ್ನೇಹಿತರಿಗೆ ಹೇಳಿದೆ ಟೋಪಿ ಹಾಕಿದವರೆಲ್ಲ ಮಹಾತ್ಮಾ ಗಾಂಧಿ ಆಗುವುದಿಲ್ಲ !
ಗಾಂಧಿ ಟೋಪಿಗೂ ಅಣ್ಣಾ ಹಜಾರೆ ಟೋಪಿಗೂ ವ್ಯತ್ಯಾಸವಿದೆ. ಹಾಗೆ ಅಣ್ಣಾ ಹಜಾರೆ ಮೋಹನದಾಸ್ ಕರಮಚಂದ್ ಗಾಂಧಿ ಅಲ್ಲ. ಗಾಂಧೀಜಿ ಸತ್ಯದ ಅನ್ವೇಷಕ. ಅವರ ಬದುಕು ಸತ್ಯದ ಅನ್ವೇಷಣೆಗಾಗಿ ನಡೆಸಿದ ಸುದೀರ್ಘ ಪಯಣ. ಗಾಂಧೀಜಿ ಸತ್ಯವನ್ನು ಹುಡುಕುತ್ತಲೇ ಮುಂದಕ್ಕೆ ನಡೆಯುತ್ತಿದ್ದರು. ತಮ್ಮ ತಪುಗಳನ್ನು ಒಪ್ಪಿಕೊಳ್ಳುವದರ ಜೊತೆಗೆ  ತಾವು ನಂಬಿದ್ದನ್ನು ಪ್ರಬಲವಾಗಿ ಪ್ರತಿಪಾದಿಸುವ ದೃಡತೆ ಅವರಲ್ಲಿ ಇತ್ತು. ಸತ್ಯ ಮತ್ತು ಅಹಿಂಸೆಯನ್ನು ಅವರು ನಂಬಿದ್ದರು. ಬಹಳಷ್ಟು ಜನರು ಈಗ ಗಾಂಧಿಯವರನ್ನು ವಿರೋಧಿಸುತ್ತಿರಬಹುದು. ಆದರೆ ಆ ಕಾಲಘಟ್ಟದಲ್ಲಿ ನಿಂತು ಗಾಂಧಿಜಿಯವರನ್ನು ನೋಡಬೇಕೆ ಹೊರತೂ ಈ ಕಾಲಘಟ್ಟದಲ್ಲಿ ನಿಂತು ಅಲ್ಲ.
ದಕ್ಷಿಣ ಅಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿದೆ ಗಾಂಧಿ ಈ ದೇಶವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದರು. ಹರಿಜನ ಮತ್ತು ಯಂಗ್ ಇಂಡಿಯಾ ಪತ್ರಿಕೆಗಳಲ್ಲಿ ಅವರು ಬರೆಯುತ್ತಿದ್ದ ಲೇಖನಗಳು ದೇಶವನ್ನು ಅರ್ಥಮಾಡಿಕೊಳ್ಲಲು ಅವರು ನಡೆಸುತ್ತಿದ್ದ ಯತ್ನದ ಪ್ರತಿರೂಪಗಳಾಗಿದ್ದವು. ಜೊತೆಗೆ ಅವರು ತಮ್ಮ ಜೊತೆ ತಾವೇ ನಡೆಸುತ್ತಿದ್ದ ಅಂತರಂಗದ ಸಂವಾದವೂ ಆಗಿತ್ತು.
ಅಂದಿನ ಸಂದರ್ಭದಲ್ಲಿ ಈ ದೇಶ ಎದುರಿಸುತ್ತಿದ್ದ ಸಮಸ್ಯೆಗಳಿಗೆ ಗಾಂಧೀಜಿಯವರ ಅವರದೇ ಆದ ಪರಿಹಾರಗಳಿದ್ದವು.
ಆದರೆ ಅಣ್ಣಾ ಹಜಾರೆ ಅವರು ಭಾರತವನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ನನಗೆ ನನ್ನದೇ ಆದ ಅನುಮಾನಗಳಿವೆ. ಗಾಂಧಿ ಬದುಕ್ಲಿದ್ದ ಕಾಲದಲ್ಲಿ ಅವರು ಸಮಾಜಕ್ಕೆ  ಮುಖಾಮುಖಿಯಾಗಿ ಸಂವಾದ ನಡೆಸುತ್ತಿದ್ದಂತೆ, ಅಣ್ಣಾ ಹಜಾರೆ ಇವತ್ತೀನ ಸಮಾಜದ ಜೊತೆ ಮುಖಾಮುಖಿಯಾಗಿ ಸಂವಾದ ನಡೆಸುತ್ತಿದ್ದಾರೆಯೇ ? ಇಲ್ಲ.. ಅವರು ಭಾರತವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಷ್ಟು ಮುಗ್ದರು. ಹೀಗಾಗಿ ತಮ್ಮ ಜೊತೆ ಇರುವವರ ಪ್ರಭಾವಕ್ಕೆ ಅವರು ಬಹುಬೇಗ ಒಳಗಾಗಿ ಬಿಡುತ್ತಾರೆ. ಗಾಂಧಿ ಹಾಗಿರಲಿಲ್ಲ. ಅವರು ಯಾರ ಪ್ರಭಾವಕ್ಕು ಒಳಗಾಗುತ್ತಿರಲಿಲ್ಲ. ಹೀಗಾಗಿ ಅವರು ಬೇರೆಯವರನ್ನು ತಮ್ಮ ಪ್ರಭಾವಳಿಯ ಓಳಗೆ ಸೇಳೆದುಕೊಂಡು ಬಿಡುತ್ತಿದ್ದರು. ಅಂತಹ ಶಕ್ತಿ ಅಣ್ಣಾ ಹಜಾರೆ ಅವರಿಗೆ ಇಲ್ಲ.
ಮತ್ತೆ ಗಾಂಧಿ ಟೋಪಿ ನನ್ನನ್ನು ಕಾಡುತ್ತಿದೆ. ಜೊತೆಗೆ ಟೋಪಿಯಲ್ಲಾದ ರೂಪಾಂತರ ನನ್ನನ್ನು ಬೆದರಿಸುತ್ತಿದೆ,

ಕಳೆದ ವರ್ಷ ನನ್ನ ಅಪ್ಪ ತೀರಿಕೊಂಡಾಗ ನಾನು ಊರಿಗೆ ಹೋಗಿ 21 ದಿನ ಊರಿನಲ್ಲೇ ಇದ್ದೆ. ಅಪ್ಪನ ಟೋಪಿಗಾಗಿ ಮನೆಯ ತುಂಬಾ ಹುಡುಕಿದೆ. ಟೋಪಿ ಸಿಗಲಿಲ್ಲ. ಅಪ್ಪ ಇತ್ತೀಚಿನ ವರ್ಷಗಳಲ್ಲಿ ಹೊಸ ಟೋಪಿಯನ್ನು ಖರೀದಿಸಿರಲಿಲ್ಲ. ಆತ ಟೋಪಿ ಹಾಕುವುದನ್ನು ನಿಲ್ಲಿಸಿ ಹಲವಾರು ವರ್ಷಗಳೇ ಕಳೆದು ಹೋಗಿದ್ದವಂತೆ !

Sunday, August 12, 2012

ಮುತ್ತಿನ ನಗರಿಯಲ್ಲಿ ನಾಲ್ಕು ದಿನ.......


ನನಗಾಗ ವಯಸ್ಸು ಆರೆಂಟು ವರ್ಷ ಇರಬಹುದು. ನಮ್ಮ ಮನೆಗೆ ಬಂದಿದ್ದ ಜ್ಯೋತಿಷಿಯೊಬ್ಬರು ನನ್ನ ಹಸ್ತವನ್ನು ನೋಡಿ, ಏನ್ ಮಾರಾಯಾ ನಿನಗೆ ಮೂರು ಚಕ್ರಗಳಿವೆ, ಹೀಗಾಗಿ ನೀನು ತ್ರಿಲೋಕ ಸಂಚಾರಿ ಎಂದು ಹೇಳಿದ್ದರು. ಆಗ ನನಗೆ ಈ ತ್ರಿಲೋಕ ಸಂಚಾರದ ಬಗ್ಗೆ ಹೆಚ್ಚಿಗೆ ತಿಳಿದಿರಲಿಲ್ಲ. ಆದರೆ ಆಗಲೇ ಯಕ್ಷಗಾನ ತಾಳಮದ್ದಳೆಗಳನ್ನು ನೋಡಿ ಪುರಾಣಗಳ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿದ್ದ ನನಗೆ ನೆನಪಾಗಿದ್ದು ತ್ರಿಲೋಕ ಸಂಚಾರಿ ನಾರದ. ನಾರದ ಮಹರ್ಷಿ, ಬೇಕೆಂದಾಗಲೆಲ್ಲೆ ಎಲ್ಲ ಲೋಕಗಳಲ್ಲಿ ಪ್ರತ್ಯಕ್ಷವಾಗುವ ಪರಿ ನನಗೆ ತುಂಬಾ ಇಷ್ಟವಾಗಿದ್ದರಿಂದ ನಾನೂ ಸಹ ನಾರದ ಮಹರ್ಷಿಯಂತೆ ಬೇಕೆಂದಾಗ, ಬೇಕಾದಲ್ಲಿ ಪ್ರತ್ಯಕ್ಷವಾಗುವ ಕನಸನ್ನು ಕಂಡು ಸಂತಸ ಪಟ್ಟಿದ್ದೆ.
ಪ್ರಾಯಶಃ ಊರು ಸುತ್ತುವ ಆಸೆ ಆಗಲೇ ನನ್ನ ಮನಸ್ಸಿನಲ್ಲಿ ಮೊಳಕೆ ಒಡೆದಿರಬೇಕು. ಇದಾದ ಮೇಲೆ ನಾನು ಕಾಲೇಜು ವಿದ್ಯಾಭ್ಯಾಸಕ್ಕೆ ಬೆಳಗಾವಿಗೆ ಹೋದಮೇಲೆ ತ್ರಿಲೋಕ ಸಂಚಾರಿ ಆಗದಿದ್ದರೂ ಸಂಚಾರಿಯಂತೂ ಆಗಿದ್ದೆ. ಬೆಳಗಾವಿಗೆ ಹೋದ ತಕ್ಷಣ ಮನೆಯ ನೆನಪಾಗಿ ಹಾಗೆ ಬಸ್ಸು ಹತ್ತು ಊರಿಗೆ ಹೋಗಿ ಬಿಡುವುದು, ಎರಡು ದಿನ ಕಳೆಯುವಷ್ಟ್ರಲ್ಲಿ ಬೆಳಗಾವಿಯ ಆಕರ್ಷಣೆ ಹೆಚ್ಚಾಗಿ ಮತ್ತೆ ಅಲ್ಲಿಗೆ ಹಿಂತಿರುಗುವುದು ನಡದೇ ಇತ್ತು. ನನ್ನ ಈ ಸಂಚಾರಿಯ ಮನಸ್ಸು ಈ ರೀತಿ ರೂಪಗೊಂಡು ನಾನು ಪತ್ರಿಕೋದ್ಯಮಕ್ಕೆ ಬರುವಷ್ಟರಲಿ ಸ್ಪಷ್ಟ ರೂಪ ಪಡೆದಿತ್ತು. ಹೀಗಾಗಿ ಕೆಲಸ ಇರಲಿ ಇಲ್ಲದಿರಲಿ, ಕೈಯಲ್ಲಿ ಹಣ ಇರಲಿ ಇಲ್ಲದಿರಲಿ ನಾನು ಊರು ಸುತ್ತುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡೆ. ಮದುವೆಯಾಗಿ ಸಂಸಾರಸ್ಥನಾಗುವುದಕ್ಕೆ ಮೊದಲು ಪ್ರತಿ ವರ್ಷ ಕನಿಷ್ಟ ಒಂದು ತಿಂಗಳು ಉತ್ತರ ಭಾರತವನ್ನು ಸುತ್ತಿ ಬರುತ್ತಿದ್ದೆ. ಈ ತಿರುಗಾಟದಲ್ಲಿ ಯಾವ ರೀತಿಯ ಶಿಸ್ತು, ಪ್ಲಾನು ಏನೂ ಇರುತ್ತಿರಲಿಲ್ಲ  ಕೈಯಲ್ಲಿ ದುಡ್ಡು ಹಿಡಿದುಕೊಂಡು ರೈಲು ಹತ್ತಿ ಕುಳಿತುಕೊಳ್ಳುವುದು, ಊರೂರು ಸುತ್ತಿ ದುಡ್ಡು ಮುಗಿದ ಮೇಲೆ ಹಿಂತಿರುಗುವುದು ನನ್ನ ಜಾಯಮಾನವಾಗಿತ್ತು.
ನಾನು ಕೆಲವರ್ಷಗಳ ಕಾಲ ಡಿಫೆನ್ಸ್ ವರದಿಗಾರನಾಗಿಯೂ ಕೆಲಸ ಮಾಡಿದ್ದರಿಂದ, ಟೂ ಸೀಟರ್ ಯುದ್ಧವಿಮಾನದಲ್ಲಿ, ಸಬ್ ಮೆರಿನ್ ನಲ್ಲಿ ಪ್ರಯಾಣ ಮಾಡುವ ಅವಕಾಶವೂ ನನಗೆ ಲಭ್ಯವಾಗಿತ್ತು. ಬಹುತೇಕ ಎಲ್ಲ ರೀತಿಯ ವಿಮಾನ ಹಡಗುಗಳಲ್ಲಿ ಪ್ರಯಾಣ ಮಾಡಿದ್ದರೂ ರೈಲು ಪ್ರಯಾಣ ನನಗೆ ನೀಡುವ ಖುಷಿಯನ್ನು ಬೇರೆ ಯಾವ ರೀತಿಯ ಪ್ರಯಾಣವೂ ಖುಷಿ ನೀಡಿದ್ದಿಲ್ಲ. ರೈಲಿನಲ್ಲಿ ಪ್ರಯಾಣ ಮಾಡುವಾಗ ನಾವು ನೋಡುವುದು ಮಿನಿ ಇಂಡಿಯಾವನ್ನು. ನಮಗೆ ಗೊತ್ತಿ;ಲ್ಲದ ಹಾಗೆ ಈ ಮಿನಿ ಇಂಡಿಯಾ ಎಂಬ ದೊಡ್ಡ ಸಂಸಾರದ ಸದಸ್ಯರಾಗುವ ಪವಾಡ ನಡೆಯುವುದು ರೈಲಿನಲ್ಲಿ. ಸಮಯವಿದ್ದರೆ ರೈಲು ಸಂಚಾರದ ಸಂತೋಷ ಬೇರೆ ಯಾವ ಪ್ರಯಾಣದಲ್ಲೂ ದೊರಕುವುದಿಲ್ಲ.
ನಾನು ಕಳೆದ ವಾರ ಹೈದರಾಬಾದಿಗೆ ಹೊರಟು ನಿಂತಿದ್ದೆ. ನನ್ನ ಸ್ನೇಹಿತಇಓಗ್ರು ವಿಮಾನದಲ್ಲಿ ಹೋಗಿ ಬಂದು ಬಿಡೋಣ ಎಂದರು. ಆದರೆ ನನಗೆ ವಿಮಾನಕ್ಕಿಂತ ರೈಲಿನಲ್ಲಿ ಹೋಗುವುದು ಒಳ್ಳೆಯದು ಎಂದು ಅನ್ನಿಸತೊಡಗಿತ್ತು. ಅದಕ್ಕೆ ಬಹುಮುಖ್ಯ ಕಾರಣ ವಿಮಾನದಲ್ಲಿ ಹೋಗುವ ತುರ್ತು ಕೆಲಸವೇನೂ ನನಗೆ ಇರಲಿಲ್ಲ. ನಾನು ಕೆಲವರನ್ನು ಭೇಟಿ ಮಾಡಿ ಅವರ ಜೊತೆ ಮಾತನಾಡುವ ಕೆಲಸವಿದ್ದರೂ ರಾತ್ರಿ ರೈಲಿನಲ್ಲಿ ಹೊರಟು ಗಡದ್ ಆಗಿ ನಿದ್ರೆ ಮಾಡಿ ಮರುದಿನ ಪ್ರೆಷ್ ಆಗಿ ಮಾತನಾಡಬಹುದು ಎಂದುಕೊಂಡೆ.
ನಾವು  ಟಿಕೆಟ್  ಬುಕ್ ಮಾಡಿದ್ದು ಕಾಚಿಗುಡಾ ಎಕ್ಸಪ್ರೆಸ್ ರೈಲಿನ ಎಸಿ ಕ್ಲಾಸ್ ನ ಸೀಟನ್ನು. ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನಿಂದ ಹೊರಡುವ ಈ ರೈಲು ಹೈದರಾಬಾದ್ ತಲುಪುವುದು ಮರುದ್ಸಿನ ಬೆಳಿಗ್ಗೆ 5 ಗಂಟೆ ಮೂವತ್ತು ನಿಮಿಷಕ್ಕೆ. ಕರ್ನಾಟಕ ಮತ್ತು ಆಂದ್ರದ ನಡುವೆ ಅಲ್ಲಿಂದಿಲ್ಲಿಗೆ ಓಡಾಡಿ ಕೊನೆಗೆ ಹೈದರಾಬಾದನ್ನು ತಲುಪುವ ರೈಲು. ವಿಮಾನದಲ್ಲಾದರೆ ಕೇವಲ ಮೂವತ್ತೈದು ನಿಮಿಷದಕ್ಕೆ ಹೈದರಾಬಾದನ್ನು  ಸೇರಿ ಬಿಡಬ್ವಹುದು. ಕಣ್ನು ಮುಚ್ಚಿ ಬಿಡುವುದಕ್ಕೆ ಮೊದಲು ಪ್ರಯಾಣ  ಹೀಗಾಗಿ ಪ್ರವಾಸದ ಸಂತೋಷ ವಿಮಾನದಲ್ಲಿ ಸಿಗುವುದಿಲ್ಲ.
ಇದು ಯಶವಂತಪುರ- ಕಾಚಿಗುಡಾ ನಡುವೆ ಸಂಚರಿಸುವ ರೈಲಾದರೂ ಇದರ ಉಪಯೋಗ ಹೆಚ್ಚಾಗಿ ಆಗುವುದು ಆಂದ್ರದವರಿಗೆ. ಈ ರೈಲಿನ ಬಹುತೇಕ ಸೀಟಿಗಳಿಗೆ ಪುಟಪರ್ತಿ, ಅನಂತಪುರದಿಂದ ರಿಸರ್ವೇಷನ್ ಇದೆ. ಹೀಗಾಗಿ ಬೆಂಗಳೂರಿನಿಂದ ಹೈದರಾಬಾದಿಗೆ ಹೋಗ್ಫುವವರಿಗೆ ರಿಸರ್ವೇಶನ್ ಸಿಗುವುದಿಲ್ಲ. ಗುಂತಕಲ್ ವರೆಗೆ ಖಾಲಿ ಸಾಗುವ ರೈಲು ಬೆಂಗಳೂರಿನ ಪ್ರಯಾಣಕರಿಗೆ ಬರ್ತ್ ನೀಡದೇ ತೆಲುಗರಿಗಾಗಿ ಕಾಯುತ್ತದೆ.  ಹಾಗೆ ಇದು ಯಶವಂತಪುರ ಎಂಬ ಕರ್ನಾಟಕದ ರಾಜಧಾನಿಯ ಒಂದು ಭಾಗದಿಂದ ಹೊರಡುವ ರೈಲಾದರೂ ಇಲ್ಲಿನ ಆಡಳಿತ ಭಾಷೆ ತೆಲುಗು ಮತ್ತು ಹಿಂದಿ ! ನೀರು ಕೊಡುವ ಪೋರನಿಂದ, ಕಾಫಿ ಕೊಡುವ ಹೈದನ ವರೆಗೆ ಯಾರಿಗೂ ಕನ್ನಡ ಬರುವಿದಿಲ್ಲ. ಬಂದರೂ ಅವರು ಕನ್ನಡದಲ್ಲಿ ಮಾತನಾಡುವುದಿಲ್ಲ.
ಒಂದು ಕಾಲದಲ್ಲಿ ದಕ್ಷಿಣ ರಲ್ವೆ ಎಂದರೆ ತಮಿಳು ಬಾಷಿಕರ ನೆಲವೀಡಾಗಿತ್ತು. ಅಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶ ಇದ್ದುದು ಬಹಳ ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಈ ಪರಿಸ್ಥಿತಿ ಬದಲಾಗಿದೆ. ತಮಿಳರು ರಲ್ವೆಯಲಿ ಕೆಲಸ ಮಾಡುವುದನ್ನು ಕಡಿಮೆ ಮಾಡಿ  ಬೇರೆ ಬೇರೆ ಕ್ಷೇತ್ರಗಳತ್ತ ಹೋಗುತ್ತಿದ್ದಾರೆ. ಜೊತೆಗ್ಫೆ ಬಿಹಾರಿಗಳು ಮತ್ತು ಓರಿಸ್ಸಾದವರು ರೈಲ್ವೆಯಲ್ಲಿ ತುಂಬಿ ತುಳುಕುತ್ತಿದ್ದಾರೆ. ಬೆಂಗಾಲಿಗಳಿಗೂ ಉದ್ಯೋಗ ದೊರಕುತ್ತಿದೆ. ಲಾಲೂ ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ ಎಲ್ಲೆಡೆ ಬಿಹಾರಿಗಳನ್ನು ತುಂಬಿದರೆ, ಮಮತಾ ದಿದಿ ಬೆಂಗಾಲಿಗಳನ್ನು ತುಂಬಿದರು. ಆದರೆ ಅತಿ ಹೆಚ್ಚು ರೈಲ್ವೆ ಸಚಿವರನ್ನು ನೀಡಿದ ಕನ್ನಡ ನಾಡಿನ ಮಕ್ಕಳಿಗೆ ಮಾತ್ರ ಅಲ್ಲಿ ಉದ್ಯೋಗ ಅವಕಾಶ ಇಲ್ಲ !
ನಾವು ಹೈದರಾಬಾದ್ ತಲುಪಿದಾಗ ಅಲ್ಲಿ ಮಳೆರ್ ಇರಲಿಲ್ಲ. ಆಗಾಗ ಕಳ್ಳ ಬೆಕ್ಕಿನಂತೆ ನುಸುಳಿ ಬಂದು ಹಾಗೆ ಕದ್ದು ಮರೆಯಾಗುವ್ದ ಮಳೆ. ಎನೇ ಇರಲಿ ಈ ಹೈದರಾಬಾದ್ ಎಂಬ ಮುತ್ತಿನ ನಗರಿ ಎಂದರೆ ನನಗೆ ಇಷ್ಟ, ಇದು ಬೆಂಗಳೂರಿನಂತೆ ಇಲ್ಲ. ಬೆಂಗಳೂರು ಎಂದರೆ, ತಳಕು ಬಳಕಿನ ಮಾಯಾಂಗನೆ ಆದರೆ, ಹೈದರಾಬಾದ್ ತನ್ನ ಸಂಪ್ರದಾಯಿಕ ಸೌಂದರ್ಯವನ್ನು ಕಳೆದುಕೊಳ್ಳದ ಸುಂದರಿ. ಜೊತೆಗೆ ಬೆಂಗಳೂರಿನಷ್ಟು ದುಬಾರಿಯ ನಗರವೂ ಅದಲ್ಲ. ತೆಲುಗು ಮತ್ತು ಮುಸ್ಲಿಮ್ ಸಂಸ್ಕೃತಿಯ ಹದವಾದ ಮಿಶ್ರಣವನ್ನು ಇಲ್ಲಿ ಕಾಣಬಹುದು.
ನಾನು ನಾಲ್ಕು ದಿನಗಳ ಕಾಲ ಹೈದರಾಬಾದಿನಲ್ಲಿದ್ದೆ. ನಾನು ಉಳಿದುಕೊಂಡಿದ್ದು  ವೈಷ್ಣೋವಿ ಎಂಬ ಹೋಟೆಲ್ಲಿನಲ್ಲಿ. ಈ ಹೊಟೆಲ್ಲು ಒಂದೆರಡು ಸ್ಟಾರಿನ ಹೋಟೆಲ್ಲಾಗಿದ್ದರೂ ಅಂತಹ ದುಬಾರಿಯಲ್ಲ. ಊಟ ತಿಂಡಿ ಎಲ್ಲವೂ ಅತ್ಯುತ್ತಮ.
ತೆಲುಗಿನಲ್ಲ ಒಟ್ಟು 22 ಕ್ಕೂ ಹೆಚ್ಚು ಸುದ್ದಿ ವಾಹಿನಿಗಳಿವೆ. ಅದಕ್ಕಿಂತ ಹೆಚ್ದ್ಚು ಮನರಂಜನಾ ಚಾನಲ್ ಗಳಿವೆ. ತೆಲುಗಿನಲ್ಲಿರುವ ಒಟ್ಟೂ ಟಿವಿ ಚಾನಲ್ ಗಳ ಸಂಖ್ಯೆ 60 ಕ್ಕೂ ಹೆಚ್ಚು. ಬಹುತೇಕ ಚಾನಲ್ ಗಳಿಗೆ ಸಿನೆಮಾನೇ ಆಹಾರ. ತೆಲುಗರ ಸಿನೆಮಾ ಮೋಹ ಕೂಡ ಅಂತಹುದು. ಅವರು ಸಿನೆಮಾವನ್ನೇ ಉಣ್ಣುತ್ತಾರೆ, ಉಸಿರಾಡುತ್ತಾರೆ. ಜೊತೆಗೆ ತೆಲುಗು ಟೀವಿ ವಾಹಿನಿಗಳ ವಾರ್ಷಿಕ ಒಟ್ಟೂ ವಹಿವಾಟು 1000 ಕೋಟಿಗೂ ಹೆಚ್ಚು. ಕನ್ನಡ ವಾಹಿನಿಗಳ ಒಟ್ಟೂ ವಹಿವಾಟು ಇದರ ಅರ್ಧದಷ್ಟು ಮಾತ್ರ !
ನಾನು ಹೈದರಾಬಾದಿನಲ್ಲಿ ಕೆಲವು ಟೀವಿ ವಾಹಿನಗಳ ಕಚೇರಿಗೆ ಭೇಟಿ ನೀಡಿದೆ. ಸ್ನೇಹಿತ ಪತ್ರಿಕೋದ್ಯಮಿಗಳ ಜೊತೆ ಮಾತುಕತೆ ನಡೆಸಿದೆ.
ಹೊಟೆಲ್ ರೂಮಿನಲ್ಲಿ ಕುಳಿತು ತೆಲುಗು ಚಾನಲ್ ಗಳನ್ನು ವಿಕ್ಷಿಸಿದೆ. ಬಹುತೇಕ ಕೆಬಲ್ ಆಫರೆಟರುಗಳು ಎಲ್ಲ ತೆಲುಗು ವಾಹಿನಿಗಳನ್ನು ಪ್ರಮ್ ಬಾಂಡಿನಲ್ಲೇ ನೀಡುತ್ತಾರೆ. ಉಳಿದ ರಾಷ್ಟ್ಷ್ಟ್ರೀಯ ಮತ್ತು ಪ್ರಾದೇಶಿಕ ವಾಹಿನಿಗಳಿಗೆ ಅಲ್ಲಿ ಅವಕಾಶ ಕಡಿವೆ. ಅಲ್ಲಿ ನನಗೆ ನೋಡಲು ಸಿಕ್ಕ ಏಕಮೇವ ಕನ್ನಡ ವಾಹಿನಿ ಎಂದರೆ ಟೀವಿ ನೈನ್ ಮಾತ್ರ. ನನಗೆ ಅಲ್ಲಿ ಬೇರೆ ಯಾವ ಕನ್ನಡ ವಾಹಿನಿಯೂ ನೋಡಲು ಸಿಗಲಿಲ್ಲ. ಹೈದರಾಬಾದಿನಲ್ಲಿ ಸಾಕ್ಷಷ್ತು ಕನ್ನಡಿಗರಿದ್ದರೂ ಪ್ರಮುಖ ಕನ್ನಡ ವಾಹಿನಿಗಳು ಅಲ್ಲಿ ನೋಡಲು ಸಿಗುವುದಿಲ್ಲ. ಇದನ್ನು ಕರ್ನಾಟಕದ ಜೊತೆ ಬೆಂಗಳೂರಿನ್ಜ ಜೊತೆ ಹೋಲಿಸಿ ನೋಡಿ. ಇಲ್ಲಿ ಕನ್ನಡ ವಾಹಿನ್ಗಳನ್ನು ಪ್ರಸಾರ ಮಾಡುವಂತೆ ಕೇಬಲ್ ಆಫರೇಟರುಗಳಿಗೆ ಮನವಿ ಮಾಡಬೇಕು, ಕ್ಯಾರೇಜ್ ಫಿ ನೀಡಬೇಕು. ಆದರೂ ಕನ್ನಡದ ವಾಹಿನಿಗಳು ಪ್ರೈಮ್ ಬ್ಯಾಂಡಿನಲ್ಲಿ ಸಿಗುವುದಿಲ್ಲ. ಬೆಂಗಳೂರಿನಲ್ಲಿ ಈಗಲೂ ನಂಬರ್ ಒನ್ ಸ್ಥಾನದಲ್ಲಿ ಇರುವುದು ತಮಿಳಿನ ಸನ್ ಟೀವಿ..


Sunday, June 10, 2012

ನನ್ನೂರಿನ ಮಳೆ ಮತ್ತು ನನ್ನ ಬಣ್ಣದ ಕೊಡೆ.

ಜೂನ್ ತಿಂಗಳ ಮೊದಲ ವಾರ. ಆಕಾಶದಲ್ಲಿ ಮೋಡಗಳು  ಎಲ್ಲಿಂದಲೋ ಬಂದು ಇನ್ನೆಲ್ಲಿಗೋ ಹೋಗಲು ಪ್ರಾರಂಭಿಸುತ್ತಿದ್ದವು. ಅಷ್ಟರಲ್ಲಿ ಮಳೆಗಾಲವನ್ನು ಎದುರಿಸಲು ಎಲ್ಲ ಸಿದ್ಧತೆಯೂ ಆಗುತ್ತಿತ್ತು. ಮನೆಗೆ ಹೊಸ ಸೋಗೆಯನ್ನು ಹಾಕಿ ಮುಗಿದಿರುತ್ತಿತ್ತು. ಗದ್ದೆ ನೆಟ್ಟಿಯ ಕೆಲಸವೂ ನಡೆಯುತ್ತಿತ್ತು. ಇನ್ನೊಂದೆಡೆ ಕೊನೆಗೆ ಔಷಧ ಹೊಡೆಯಬೇಕು, ಇಲ್ಲದಿದ್ದರೆ ಕೊಳೆ ರೋಗ ಬಂದು ಅಡಿಕೆಯೆಲ್ಲ ಉದುರಿ ಹೋಗುವುದು ಗ್ಯಾರಂಟಿ.
ಹಿರಿಯರು ಹೀಗೆ ಮಳೆಯನ್ನು ಎದುರಿಸಲು ಸಿದ್ಧರಾಗುತ್ತಿದ್ದರೆ, ಹುಡುಗರಿಗೆ ಅಂತಹ ಕೆಲಸವೇನಿಲ್ಲ. ಆಗ ತಾನೆ ಶಾಲೆ ಪ್ರಾರಂಭವಾಗಿ ಇನ್ನು ಪಾಠ ಪ್ರವಚನಗಳಿಗೆ ರಂಗು ಬಂದಿರುತ್ತಿರಲಿಲ್ಲ.  ಶಾಲೆಯ ಕಟ್ಟಡದ ಮೇಲಿನ ಒಡೆದ ಹಂಚುಗಳನ್ನು ಬದಲಿಸುವ ಕೆಲಸನ್ನು ಮಾಸ್ತರು ನಮಗೆ ಹಚ್ಚುತ್ತಿದ್ದರು. ನಾವು ಕಟ್ಟಡವನ್ನು ಏರಿ ಒಡೆದು ಹೋದ ಹಂಚುಗಳನ್ನು ತೆಗೆದು ಹೊಸ ಹಂಚುಗಳನ್ನು ಹಾಕುತ್ತಿದ್ದವು. ಇನ್ನೊಂದೆಡೆ ಹೊಸ ವರ್ಷಕ್ಕಾಗಿ ಬರಲಿರುವ ಮಳೆಗಾಲವನ್ನು ಎದುರಿಸುವುದಕ್ಕಾಗಿ ನಮಗೆ ಮನೆಯಲ್ಲಿ ಹೊಸ ಕಂಬಳಿ ತರುತ್ತಿದ್ದರು. ಈ ಕಂಬಳಿಯ ಕೊಪ್ಪೆಗೆ ಮಧ್ಯದಲ್ಲಿ ಪ್ಲಾಸ್ಟಿಕ್ ಹಾಕಿ ನೀರು ಒಳಗೆ ಬರದಂತೆ ನಾವೆಲ್ಲ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು.
ಮನೆಯಲ್ಲಿ ಅಮ್ಮ ಅಮ್ಮಮ್ಮ  ಅತ್ತೆಯರು ಮಳೆಗಾಲವನ್ನು ಎದುರಿಸುವ ಸಿದ್ಧತೆಯಲ್ಲಿ ತೊಡಗುತ್ತಿದ್ದರು. ಮಳೆಗಾಲದಲ್ಲಿ ಸುಟ್ಟು ತಿನ್ನುವುದಕ್ಕಾಗಿ ಹಪ್ಪಳ ಸಂಡಿಗೆಯ ರಾಶಿ ಸಿದ್ಧವಾಗಿ ಅಟ್ಟವನ್ನು ಸೇರಿರುತ್ತಿತ್ತು. ಹಾಗೆ ಗೇರು ಭೀಜ, ಹಲಸಿನ ಬೀಜದ ಮೂಟೆಯೂ ಅಟ್ಟದ ಮೇಲೆ ವಿರಾಜಮಾನವಾಗಿರುತ್ತಿತ್ತು.
ಶಾಲೆಗೆ ಹೋಗುತ್ತಿದ್ದ ನಾವು ಗದ್ದ ಮತ್ತು ತೋಟಕ್ಕೆ  ಊಟ ಮತ್ತು ತಿಂಡಿಯನ್ನು ಕೊಟ್ಟು ಬರುವ ಕೆಲಸವನ್ನು ಮಾಡಲೇಬೇಕಾಗಿತ್ತು. ಅದು ನಮ್ಮ ದಿನಚರಿಯ ಭಾಗ. ಬೀಳುತ್ತಿರುವ ಮಳೆಯಲ್ಲೇ ತಿಂಡಿ ಮತ್ತು ಊಟದ ಗಂಟನ್ನು ನೆನೆಯದಂತೆ ಹಿಡಿದುಕೊಂಡು ಎರಡು ಕಿಮೀ ದೂರ ನಡೆದು ಕೊಟ್ಟು ಬಂದ ಮೇಲೆ ಮನೆಯ ಜವಾಬ್ದಾರಿ ಮುಗಿದಂತೆ. ನಂತರ ಪಾಟಿ ಚೀಲವನ್ನು ಹಿಡಿದು ಶಾಲೆಗೆ ಓಡುತ್ತಿದ್ದೆವು.
ಜೂನ್ ಮೊದಲವಾದ ಆಕಾಶದಲ್ಲಿ ಮೋಡಗಳ ನರ್ತನ ಪ್ರಾರಂಭವಾಗುತ್ತಿದ್ದಂತೆ ಇನ್ನು ಒಂದೆರಡು ದಿನಗಳಲ್ಲಿ ಮಳೆ ಹಿಡೀತು ಎಂದು ಅಜ್ಜ ಹೇಳುವುದು ಮಾಮೂಲು. ಅದರಂತೆ ಮುಂದಿನ ಒಂದೆರಡು ದಿನಗಳಲ್ಲಿ ಮಳೆ ಹಿಡಿದು ಬಿಡುತ್ತಿತ್ತು. ನಾವು ತಲೆಯ ಮೇಲೆ ಕಂಬಳಿ ಕೊಪ್ಪೆಯನ್ನು ಹಾಕಿಕೊಂಡು ಶಾಲೆಗೆ ಹೊರಟರೆ ಅಜ್ಜ, ತೋಟಕ್ಕೆ ಹೊರಟು ಬಿಡುತ್ತಿದ್ದ. ತೋಟದ ಎರಡು ಬದಿಗಳಲ್ಲಿ  ಕುಸಿದು ಬೀಳುತ್ತಿದ್ದ ಧರೆಯ ಮಣ್ಣನ್ನು ಹೊಳೆಯ ನೀರಿನಲ್ಲಿ ಕಡಡುವುದು ಅವನ ಕಾಯಕ. ಹಾಗೆ ಧರೆಯನ್ನೇ ಕದಡು ಉಂಟಾದ ಜಾಗದಲ್ಲಿ ಮಳೆಗಾಲ ಮುಗಿದ ಮೇಲೆ ಅಡಿಕೆ ಸಸಿಗಳನ್ನು ಅಜ್ಜ ನೆಡುತ್ತಿದ್ದ. ಹೀಗೆ ಪ್ರತಿ ವರ್ಷ ಮಳೆಗಾಲ ಮುಗಿಯುವ ಹೊತ್ತಿಗೆ ತೋಟ ವಿಸ್ತಾರವಾಗುತ್ತಿತ್ತು.
ಜೂನ್ ತಿಂಗಳಿನಲ್ಲಿ ಮನೆಯ ಬರುವ ಹೊಸ ಅತಿಥಿಯಂತೆ ಮುಜುಗರದಿಂದ ಬರುತ್ತಿತ್ತು. ಆರಿದ್ರ ಮಳೆ ಬರುವ ಹೊತ್ತಿಗೆ ಅದರ ರೂಪವೇ ಬದಲಾಗಿ ಬಿಡುತ್ತಿತ್ತು. ಮನೆ ಬಂದ ಹಳೆಯ ಅತಿಥಿಯಂತೆ, ಯಾವ ಮುಜುಗರವೂ ಇಲ್ಲದೇ ಝಾಡಿಸಲು ಪ್ರಾರಂಬಿಸಿ ಬಿಡುತ್ತಿತ್ತು.  ಇಂತಹ ಮಳೆಯಲ್ಲೂ ಅಜ್ಜ ಧರೆ ಕರಡುವುದನ್ನು ನಿಲ್ಲಿಸುತ್ತಿರಲಿಲ್ಲ. ಆತ ನಾವು ಶಾಲೆಯಿಂದ ತಿರುಗಿ ಬಂದ ಮೇಲೂ ಆತ ಬರದಿದ್ದರೆ ನಾವು ಆತನನ್ನು ಹುಡುಕಿಕೊಂಡು ಬರಲು ತೋಟದತ್ತ ಹೋಗುತ್ತಿದ್ದೆವು. ಅಜ್ಜನನ್ನು ಹುಡೂಕಲು ನಮ್ಮನ್ನು ಕಳುಹಿಸುತ್ತಿದ್ದ ಅಮ್ಮಮ್ಮ ಅದಕ್ಕಾಗಿ ಬೇರೆ ಬೇರೆ ರೀತಿಯ ಆಮಿಷವನ್ನು ಒಡ್ಡಬೇಕಾಗುತ್ತಿತ್ತು. ಅಜ್ಜನ ಕೆಟ್ಟ ಬಾಯಿಗೆ ಹೆದರುತ್ತಿದ್ದ ನಾನು  ಈ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಕೊನೆಯ ತನಕ ಯತ್ನ ನಡೆಸುತ್ತಿದ್ದೆ. ಆದರೆ ಯಾವುದೇ ರೀತಿಯ ಯತ್ನವೂ ಫಲಿಸದಿದ್ದಾಗಿ ಮಳೆಯಲ್ಲಿ ಬ್ಯಾಟರಿ ಹಿಡಿದು ಅಜ್ಜನನ್ನು ಹುಡುಕಿಕೊಂಡು ಬರಲು ತೋಟಕ್ಕೆ ನಡೆಯುತ್ತಿದ್ದೆ.
ಆಕಾಶವೇ ಕಳಚಿ ಬೀಳುವ ಹಾಗೆ ಸುರಿಯುತ್ತಿದ್ದ ಮಳೆಯಲ್ಲಿ, ಸಂಜೆಯ ಕತ್ತಲೆಯಲ್ಲಿ ಧರೆ ಕರಡುತ್ತಿದ್ದ ಅಜ್ಜ ನನ್ನನ್ನು ನೋಡುತ್ತಿದ್ದ ಹಾಗೆ ಬೈಯಲು ಪ್ರಾರಂಭಿಸುತ್ತಿದ್ದ.
ಮಳೆ ನೀರಲ್ಲಿ ಕೊಚ್ಚಿಕಂಡು ಹೊದ್ನೋ ಇಲ್ಲವೋ ನೋಡದಕ್ಕೆ ಬಂದ್ಯಾ ಎಂದು ಸ್ವಾಗತ ಕೋರುತ್ತಿದ್ದ. ನಿಮಗೆ ಯಾಕೆ ಸಂಸಾರ ಬೇಕು ? ಜವಾಬ್ದಾರಿನೇ ಇಲ್ಲ ಎಂದು ತನ್ನ ಸಹಸ್ರನಾಮವನ್ನು ಮುಂದುವರಿಸುತ್ತಿದ್ದ. ಆತ ಇಷ್ಟೆಲ್ಲ ಬೈದರೂ ಆತನ ಬಗ್ಗೆ ನನಗೆ ಪಾಪ ಅನ್ನಿಸುತ್ತಿತ್ತು. ಕಂಪನೆಯ ಮಣ್ಣು ನೀರಿನಲ್ಲಿ ಪೂರ್ಣ ಒದ್ದೆಯಾಗಿರುತ್ತಿದ್ದ ಅಜ್ಜನನ್ನು ಗುರುತಿಸುವುದೇ ಸಾಧ್ಯವಾಗುತ್ತಿರಲಿಲ್ಲ. ಆತನ ಈ ವಿಚಿತ್ರನ್ ರೂಪವನ್ನು ನೋಡುತ್ತಲೇ ನಾವು ಮನೆಗೆ ಹಿಂತಿರುಗುತ್ತಿದ್ದೆವು.
ನಮ್ಮ ಕೋಲಸಿರ್ಸಿ ಶಾಲೆಗೆ ಬರುತ್ತಿದ್ದ ಎಲ್ಲ ಹುಡುಗರೂ ಕಂಬಳಿ ಕೊಪ್ಪೆಯನ್ನು ಹಾಕಿಕೊಂಡೇ ಬರುತ್ತಿದ್ದರು. ಬಡವರ ಮಕ್ಕಳಿಗೆ ಕೊಡೆ ಅಪರಿಚಿತ. ಜೊತೆಗೆ ಭಾರಿ ಮಳೆಗೆ ಕಂಬಳಿ ಹೆಚ್ಚು ಸುರಕ್ಷಿತ. ಆದರೆ ಆಗಲೇ ನಾಗರಿಕ ನಾಗುತ್ತಿದ್ದ ನಾನು ನನಗೆ ಕೊಡೆಯನ್ನು ಕೊಡಿಸಲೇ ಬೇಕು ಎಂದು ಗಂಟ್ಉ ಬೀಳುತ್ತಿದ್ದೆ. ಆದರೆ ಅಪ್ಪ ಇದಕ್ಕೆ ಸೊಪ್ಪು ಹಾಕಿರಲಿಲ್ಲ.ಕೊನೆಗೆ ಕೊಡೆ ಕೊಡಿಸದಿದ್ದರೆ ನಾನು ಶಾಲೆಗೆ ಹೋಗುವುದೇ ಇಲ್ಲ ಎಂದು ಹಠ ಹಿಡಿದೆ. ಕೊನೆಗೆ ಅಮ್ಮಮ್ಮನ ಮಧ್ಯಸ್ಥಿಕೆಯಲ್ಲಿ ಅಪ್ಪ ಕೊಡೆ ಕೊಡಿಸಲು ಒಪ್ಪಿಕೊಂಡ. ಮರುದಿನವೇ ಸಿದ್ದಾಪುರದಿಂಡ ಕೆಂಪನೆಯ ಬಣ್ಣದ ಕೊಡೆಯನ್ನು ತಂಡು ಕೊಟ್ಟ.
ಕೊಡೆ ಬಂದ ಮೇಲೆ ನನ್ನ ಗೈರತ್ತೆ ಬದಲಾಗಿ ಹೋಗಿತ್ತು. ಸುಮಾರು 300 ಹುಡುಗರಿದ್ದ ಆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಡೆ ಹಿಡಿದುಕೊಂಡು ಬಂದ ಮೊದಲ ವಿದ್ಯಾರ್ಥಿ ನಾನಾಗಿದ್ದೆ. ಮಾಸ್ತರು ಮತ್ತು ಅಕ್ಕೋರನ್ನು ಬಿಟ್ಟರೆ ಶಾಲೆಗೆ ಕೊಡೆ ತಂದ ಮೊದಲ ವಿದ್ಯಾರ್ಥಿ ನಾನಾಗಿದ್ದೆ.
ಮೊದಲ ದಿನ ಕೊಡೆ ಹಿಡಿದು ಶಾಲೆಗೆ ಹೋದ ದಿನ ಭಾರಿ ಮಳೆ ಬೀಳುತ್ತಿತ್ತು. ಜೊತೆಗೆ ಗಾಳಿ.  ಮನೆಯಿಂದ ನಾಲ್ಕು ಕಿಮೀ ದೂರವಿದ್ದ ಶಾಲೆಗೆ ತಲುಪುವಷ್ಟರಲ್ಲಿ ನಾನು ಸಂಪೂರ್ಣವಾಗಿ ತೊಯ್ದು ಹೋಗಿದ್ದೆ. ಆದರೆ ಕೊಡೆ ಹಿಡಿದು ಬಂದ ಸಂತೋಷದಲ್ಲಿ ಮಳೆಯಲ್ಲಿ ತೊಯ್ದಿದ್ದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅವತ್ತಿನ ಮಟ್ಟಿಗಂತೂ ನನ್ನ ಕೆಂಪನೆಯ ಕೊಡೆ ಆಕರ್ಷಣೆಯ ಕೇಂದ್ರವಾಗಿತ್ತು. ಸವಿತಾ ಮತ್ತು ಸುಮಿತ್ರಾ ಅಕ್ಕೋರು ನನ್ನ ಬಳಿ ಬಂದು ಕೊಡೆಯನ್ನು ಮುಟ್ಟಿ ಮುಟ್ಟಿ ನೋಡಿದರು. ಅದರ ಬಣ್ಣ ಆಕ್ರತಿ ಎಲ್ಲವನ್ನೂ ಮೆಚ್ಚಿಕೊಂಡರು. ಜೊತೆಗೆ ಸಿದ್ದಾಪುರದ;ಲ್ಲಿ  ಯಾವ ಅಂಗಡಿಯಲ್ಲಿ ಈ ರೀತಿಯ ಕೊಡೆ ಸಿಗುತ್ತದೆ ಅದರ ಬೆಲೆ  ಎಷ್ತು ಎಂದೆಲ್ಲ ವಿಚಾರಿಸಿಕೊಂಡರು.
ರೀಸಸ್ ಹೊತ್ತಿನಲ್ಲಿ  ಹೊರಕ್ಕೆ ಬಂದ ಹುಡುಗರಿಗೆ ನನ್ನ ಕೊಡೆ ಆಕರ್ಷಣೆಯ ಕೇಂದ್ರವಾಯಿತು. ಬಹಳಷ್ಟು ಹುಡೂಗರು, ಭಾರಿ ಮಳೆಗೆ ಈ ಕೊಡೆ ಉಪಯೋಗ ಇಲ್ಲ ಎಂದು ತೀರ್ಪಿತ್ತರು. ಕಂಬಳಿ ಕೊಡುವ ಬೆಚ್ಚನೆಯ ಸುಖವನ್ನು ಕೊಡೆ ಕೊಡುವುದಿಲ್ಲ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿತ್ತು. ಇಂತಹ ಅಭಿಪ್ರಾಯ್ಗಗಳು ನನ್ನ ಮೇಲೆ ಯಾವ ಪರಿಣಾಮವನ್ನೂ ಬೀರರಲಿಲ್ಲ. ನನ್ನ ಸಹಪಾಠಿಗಳಿಗೆ ನನ್ನ ಮೇಲೆ ಈರ್ಷೆ, ಮತ್ಸರ/ ಹೀಗಾಗಿ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂಬ ತೀರ್ಮಾನಕ್ಕೆ ನಾನು ಬಂದಿದ್ದೆ.
ಮಧ್ಯಾಹದ ಹೊತ್ತಿಗೆ ಮಳೆ ಜೋರಾಯಿತು. ಶಾಲೆಯ ಎದುರಿಗಿದ್ದ ಗದ್ದೆ ಬೈಲು ಕೆರೆಯ ಹಾಗೆ ಕಾಣುತ್ತಿತ್ತು. ಸಾಧಾರಣವಾಗಿ ದೊಡ್ಡ ಮಳೆ ಬಂದರೆ ಅವತ್ತು ಶಾಲೆಗೆ ರಜಾ ಕೊಡುವುದು ಸಾಮಾನ್ಯವಾಗಿತ್ತು. ಮಳೆಗಾಲದಲ್ಲಿ ವಾರದಲ್ಲಿ ಎರಡು ಮೂರು ದಿನ ಮಳೆಯ ಕಾರಣದಿಂದ ನಾವು ರಜೆಯ ಮಜಾ ಅನುಭವಿಸುತ್ತಿದ್ದೆವು. ನಮ್ಮ ಕೋಲಸಿರ್ಸಿ  ಶಾಲೆಯಿಂದ ಬಳಗುಳಿಯ ನಮ್ಮ ಮನೆಗೆ ಸುಮಾರು 3 ಕಿಮೀ ದೂರ. ಶಾಲೆಯ ಎದುರಿಗಿನ ದೊಡ್ದ ಗದ್ದೆ ಬೈಲು ದಾಟಿ ಮೋಟು ಕಾನು ಹಾದು ನಡೆಯಬೇಕು. ಗದ್ದೆ ಬೈಲಿನ ನಡುವೆ ಇದ್ದ ಎರಡು ಹೊಳೆಗಳು ತುಂಬಿ ಸಂಕ ನೀರಿನಲ್ಲಿ ಮುಳುಗಿ ಹೋಗುತ್ತಿತ್ತು. ಆಗೆಲ್ಲ ಸಂಕ ಎಲ್ಲಿದೆ ಎಂದು ಗೊತ್ತಾಗದೇ ದೊಡ್ದವರು ಬರುವುದಕ್ಕಾಗಿ ನಾವು ಅಲ್ಲಿಯೇ ಕಾದು ನಿಲ್ಲುತ್ತಿದ್ದೆವು. ಹಾದಿಯಲ್ಲಿ ಬರುವ ದೊಡ್ದವರು ಕೈ ಹಿಡಿದೋ ಎತ್ತಿಕೊಂಡೋ ನಮ್ಮನ್ನು ಹೊಳೆ ದಾಟಿಸುತ್ತಿದ್ದರು. ಹೊಳೆ ದಾಟಿ ಮೊಟು ಕಾನಿನ ದಾರಿಯಲ್ಲಿ ಸಾಗುವುದು ಮಜವೋ ಮಜ.
ಅವತ್ತು ಶಾಲೆ ಬಿಟ್ಟ ಮೇಲೆ ಖುಷಿಯಿಂದ ನಾನು ಮನೆಗೆ ಹೊರಟೆ. ಜೊತೆಗೆ ಸಹಪಾಠಿಯಾಗಿದ್ದ ಪಕ್ಕದ ಮನೆ ಭಾಲಚಂದ್ರ.. ಆತನಿಗೂ ನನ್ನ ಕೊಡೆಯ ಬಗ್ಗೆ ಸ್ವಲ್ಪ ಬೇಸರವಿದ್ದಂತಿತ್ತು. ಯಾಕೆಂದರೆ ಅವನಿಗಿಲ್ಲದ ಕೊಡೆ ನನ್ನ ಬಳಿ ಇತ್ತು.  ನಾನುಅ ನನ್ನ ಬಣ್ಣದ ಕೊಡೆಯನ್ನು ಹಿಡಿದು ಗತ್ತಿನಲ್ಲಿ ಮನೆಗೆ ಹೊರಟೆ. ಕೋಲಸಿರ್ಸಿಯ ಹಿರಿಯೊಬ್ಬರು ನಮ್ಮ ಜೊತೆಗೆ ಬಂದು ಸಣ್ಣ ಹೆಗಡೆರನ್ನು ಹಳ್ಳ ದಾಟಿಸಿ ಬಿಟ್ಟರು. ಹುಷಾರಿಂದ ಮನೆಗೆ ಹೋಗಿ ಹೆಗ್ಡೆರೇ ಎಂದು ಬುದ್ದಿ ಮಾತು ಹೇಳಿ ಅವರು ಹಿಂತಿರುಗಿದರು.ಅಷ್ಟರಲ್ಲಿ  ಮಳೆ ಗಾಳಿ ಇನ್ನಷ್ಟು ಜೋರಾಯಿತು.  ಅಕ್ಕ ಪಕ್ಕ ಇದ್ದರು ಆ ಮಳೆಯಲ್ಲಿ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣುತ್ತಿರಲಿಲ್ಲ. ಜೊತೆಗೆ ಎಂತಹ ಗಾಳಿ ಬೀಸುತ್ತಿತ್ತೆಂದರೆ ನನಗೆ ಕೊಡೆ ಹಿಡಿಯುವುದು ಸಾಧ್ಯವೇ ಇಲ್ಲ ಎಂದು ಅನ್ನಿಸತೊಡಗಿತ್ತು. ನಾನು ಹರ ಸಾಹಸ ಮಾಡಿ ಕೊಡೆ ಹಿಡಿದುಕೊಳ್ಳಲು ಯತ್ನ ನಡೆಸುತ್ತಿದ್ದೆ.  ಬಾಲಚಂದ್ರ ಮಾತ್ರ ಕಂಬಳಿ ಕೊಪ್ಪೆಯ ಒಳಗೆ ಬೆಚ್ಚಗಿದ್ದ. ಅವನ ಮುಖವನ್ನು ಬಿಟ್ಟರೆ ಬೇರೆ ಎಲ್ಲಿಗೂ ನೀರು ತಾಗುತ್ತಿರಲಿಲ್ಲ.
ನಾವು ಗದ್ದೆ ಬೈಲನ್ನು ದಾಟಿ ಮೋಟು ಕಾನಿನ ಸಮೀಪ ಬಂದೆವು. ಅಲ್ಲಿ ನೀರು ಹರಿದು ಕಾಲು ಜಾರುತ್ತಿತ್ತು. ಮರ ಗಿಡಗಳು ಗಾಳಿಗೆ ಅತ್ತಿಂದಿತ್ತ ಒಲಾಡುತ್ತಿದ್ದವು.  ಪ್ರಕೃತಿ ಸೆಟೆದು ನಿಂತಿತ್ತು.  ಒಮ್ಮೆಲೆ ಗಾಳಿ ಜೋರಾಗಿ ಬೀಸಿ ನನ್ನ ಕೈಯಲ್ಲಿದ್ದ ಕೊಡೆಯನ್ನು ಹಾರಿಸಿಕೊಂಡು ಹೋಯಿತು.  ನನ್ನ ಕೆಂಪು ಬಣ್ಣದ ಕೊಡೆ ಅಕಾಶದಲ್ಲಿ ಹಾರುತ್ತ  ದೊಡ್ಡ ನೇರಲೆ ಮರದ ತುದಿಗೆ ಹೋಗಿ ವಿರಾಜ ಮಾನವಾಯಿತು. ಆ ಮರ ಎಷ್ತು ದೊಡ್ದದೆಂದರೆ ಅದನ್ನು ಹತ್ತುವ ಮಾತಿರಲಿ ತಲೆ ಎತ್ತಿ ನೋಡುವುದು ಕಷ್ಟವಾಗಿತ್ತು.
ನಾನು ಅಳತೊಡಗಿದೆ. ಮಳೆಯಲ್ಲಿ ನೆನಯುತ್ತಿರುವುದಕ್ಕಿಂತ ನನ್ನ ಬಣ್ಣದ ಕೊಡೆ ಕೈತಪ್ಪಿ ಹೋದ ದುಃಖ ನನನ್ನು ಹೆಚ್ಚಾಗಿ ಕಾಡುತ್ತಿತ್ತು.  ಸುರಿಯುತ್ತಿರುವ ಮಳೆಯಲ್ಲಿ ಅಸಹಾಯಕನಾದ ನಾನು ಅಳುತ್ತಲೇ ಮನೆಗೆ ಬಂದೆ. ಅಮ್ಮಮ್ಮ ತನ್ನ ಸೀರೆಯ ಸೆರಗಿನಲ್ಲಿ ತಲೆ ಒರೆಸಿದಳು. ಬಿಸಿಯಾಗಿ ಖಷಾಯ ಮಾಡಿಕೊಟ್ಟಳು. ಕೊಡೆ ಕಳೆದಿದ್ದನ್ನ ಅಪ್ಪಂಗೆ ಹೇಳಡಾ ಅವ ಬೈತಾ ಎಂದು ಬುದ್ದಿ ಮಾತು ಹೇಳಿದಳು. ಆದರೂ ನಾನು ಅಳುತ್ತಲೇ ಮೆತ್ತಿಗೆ ಹೋಗಿ ಚಾದರ ಹೊದ್ದು ಮಲಗಿದೆ. ಆ ರಾತ್ರಿ ಕನಸಿನಲ್ಲಿ ಬಣ್ಣದ ಕೊಡೆ ಬಂದು ನನ್ನ ಜೊತೆ ಮಾತನಾಡಿತು. ಮರುದಿನ ನಾನು ಜ್ವರ ಬಂದು ಮಲಗಿದೆ. ನಾಲ್ಕು ದಿನ ಶಾಲೆಗೆ ಹೋಗಲಿಲ್ಲ.

Friday, June 8, 2012

ನಿತ್ಯಾನಂದ ಪ್ರಕರಣ; ನಮಗೆ ಮಠಾಧಿಪತಿಗಳು ಯಾಕೆ ಬೇಕು ?

ನಾನು ಈ ಲೇಖನವನ್ನು ಪ್ರಾರಂಭಿಸುವುದಕ್ಕೆ ಮೊದಲು ಒಂದು ಅಂಶವನ್ನು ಸ್ಪಷ್ಟ ಪಡಿಸುತ್ತೇನೆ. ನನಗೆ ದೇವ ಮಾನವರ ಬಗ್ಗೆಯಾಗಲೀ, ಈ ಮಠಾಧಿಪತಿಗಳ ಬಗ್ಗೆಯಾಗಲಿ ಅಂತಹ ಗೌರವ ಇಲ್ಲ. ಧರ್ಮದ ಹೆಸರಿನಲ್ಲಿ ಸಿಂಹಾಸನದ ಮೇಲೆ ವಿರಾಜಮಾನರಾಗುವ, ತಲೆಯ ಮೇಲೆ ಕಿರೀಟ ಇಟ್ಟು ಕೊಳ್ಳುವ ಸ್ವಾಮಿಗಳು ನನಗೆ ವಿಧೂಷಕರಂತೆ ಕಾಣುತ್ತಾರೆ. ಹಾಗೆ ನನಗೆ ಗೌರವ ನೀಡಬೇಕು ಎಂದು ಅನ್ನಿಸಿದ   ಯಾವುದೇ ಸ್ವಾಮೀಜಿ ಇನ್ನೂ ದೊರಕಿಲ್ಲ. ಜೊತೆಗೆ ನಾನು ಹುಟ್ಟಿದ ಜಾತಿಯ ಮಠ ಈಗ ೨೫ ವರ್ಷಗಳ ಹಿಂದೆ ನನ್ನನ್ನು ಜಾತಿಯಿಂದ ಹೊರಗೆ ಹಾಕಿದ್ದರಿಂದ ಅವರ ಹಂಗು ನನಗೆ ಇಲ್ಲ. ನನಗೆ ಮೊದಲಿನಿಂದಲೂ ಈ ಸ್ವಾಮೀಜಿಗಳ ಬಗ್ಗೆ ಸಣ್ಣ ಅನುಮಾನ. ಇವರೆಲ್ಲ ನಮ್ಮ ಹಾಗೆ ಹುಲು ಮಾನವರೇ ಆಗಿರುವುದರಿಂದ ನಮಗೆ ಇರುವ ಎಲ್ಲ ರೀತಿಯ ರಾಗ ಧ್ವೇಷಗಳೂ ಅವರಿಗೂ ಇವೆ. ಆದ್ದರಿಂದ ಅವರನ್ನು ನಮಗಿಂತ ಮೇಲು ಎಂದು ಒಪ್ಪಲು ನಾನು ಸಿದ್ಧನಿಲ್ಲ.
ಸ್ವಾಮೀಜಿಗಳ ಜೊತೆಗಿನ ಈ ಸಣ್ಣ ಭಿನ್ನಾಭಿಪ್ರಾಯಕ್ಕೆ ಇರುವ ಕಾರಣಗಳು ಸರಳವಾದವುಗಳು. ಮನುಷ್ಯನ ಬದುಕಿನ ಸತ್ಯವನ್ನು ಹುಡುಕಲು ಹೊರಟವರಿಗೆ ಅರಮನೆಯಂತಹ ಮಠದ ಅಗತ್ಯ ಇಲ್ಲ.ಅಡ್ಡಪಲ್ಲಕ್ಕಿ ಬೇಕಾಗಿಲ್ಲ. ಸಮಾಜದಲ್ಲಿ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುವವರು ರಾಜಕಾರಣಿಗಳ ಏಜೆಂಟರಂತೆ ವರ್ತಿಸಕೂಡದು  ಆದರೆ ಆಗಿಹೋದ ಕೆಲವು ಆಧ್ಯಾತ್ಮಿಕ ವಾದಿಗಳು ನನ್ನ ಮೇಲೆ ಪರಿಣಾಮ  ಬೀರಿದ್ದಾರೆ. ಜಿದ್ದು ಕೃಷ್ಣಮೂರ್ತಿ ಮತ್ತು ಓಷೋ ಚಿಂತನೆಗಳು ನನ್ನ ಮೇಲೆ ಪರಿಣಾಮ ಬೀರಿವೆ. ಹಾಗೆ ಧ್ಯಾನ ನಮ್ಮ ಮನಸ್ಸನ್ನು ನಿಯಂತ್ರಣಕ್ಕೆ ತರುತ್ತದೆ ಎಂಬುರಲ್ಲಿ ನನಗೆ ಯಾವ ಅನುಮಾನವೂ ಇಲ್ಲ. ಯಾಕೆಂದರೆ ಇವತ್ತಿಗೂ ನಾನು ದಿನದಲ್ಲಿ ಕನಿಷ್ಟ ಅರ್ಧ ಗಂಟೆ ಧ್ಯಾನ ಮಾಡುತ್ತೇನೆ
ಭಾರತೀಯ ಆಧ್ಯಾತ್ಮಿಕ ಜಗತ್ತಿನಲ್ಲಿ  ಸಾಧನೆ ಮಾಡಿದ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಕೃಷ್ಣ ಪರಮಹಂಸ, ವಿವೇಕಾನಂದ ಅವರ ಚಿಂತನೆಗಳ ಪರಿಚಯವನ್ನು ನಾನು ಮಾಡಿಕೊಂಡಿದ್ದೇನೆ. ಇವಷ್ಟು ಪೂರ್ವ ಪೀಠಿಕೆ ಸಾಕು ಎಂದು ಅನ್ನಿಸುತ್ತದೆ. ಈಗ ನಾನು ಪ್ರಸ್ತಾಪಿಸಲು ಹೊರಟಿರುವ ವಿಚಾರಕ್ಕೆ ಪ್ರೇರಣೆಯಾಗಿರುವುದು ನಿತ್ಯಾನಂದ ಸ್ವಾಮೀಜಿ ಅವರ ಪ್ರಕರಣ.
ನಿತ್ಯಾನಂದ ಸ್ವಾಮೀಜಿಯವರ ಬಗ್ಗೆ ಹೇಳುವುದಾದರೆ ಅವರು ರವಿಶಂಕರ್ ಸ್ವಾಮಿ ಅವರಂತೆ ವಿದೇಶಿ ಭಕ್ತರನ್ನು ಆಕರ್ಷಿಸಿ ಅವರಿಂಿ ಹಣ ಸಂಗ್ರಹಿಸಿ ಸಾಮ್ರಾಜ್ಯ ಕಟ್ಟಲು ಹೊರಟವರು. ಈ ವಿಚಾರದಲ್ಲಿ ರವಿಶಂಕರ್ ಸ್ವಾಮೀಜಿಗೆ ತೀವ್ರ ಪೈಪೋಟಿಯನ್ನು ನೀಡುತ್ತಿರುವವರು ನಿತ್ಯಾನಂದ ಸ್ವಾಮೀಜಿ. ಅವರು ಬಿಡದಿ ಬಳಿ ಸ್ಥಾಪಿಸಿದ ಆಶ್ರಮ ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿಯುವ ಬಹುತೇಕ ವಿದೇಶಿಯರು ಬಿಡದಿ ಆಶ್ರಮಕ್ಕೆ ಭೇಟಿ ನೀಡತ್ತಾರೆ.
ಯೋಗ ಮತ್ತು ಧ್ಯಾನಕ್ಕೆ ವಿದೇಶಗಳಲ್ಲಿ ಭಾರಿ ಬೇಡಿಕೆ ಬಂದ ತಕ್ಷಣ ಅದನ್ನು ಮಾರಾಟ ಮಾಡುವ ನೂರಾರು ಬಾಬಾಗಳು ಹುಟ್ಟಿಕೊಂಡರು. ಸಂವಹನ ಶಕ್ತಿ ಹೊಂದಿದವರು ಯಶಸ್ವಿಯೂ ಆದರು. ಇದು ಸ್ವಲ್ಪ ಮಟ್ಟಿಗೆ ದೇಶಿ ಸ್ವಾಮಿಗಳ ವಿರೋಧಕ್ಕೆ ಕಾರಣವಾಯಿತು. ಜಾತಿಯತೆಯನ್ನು ರಕ್ಷಿಸಿಕೊಂಡು ಬರುತ್ತಿದ್ದ ಈ ಸಾವಿರಾರು ಮಠಾಧಿಪತಿಗಳನ್ನು ವಿದೇಶದಿಂದ ಹರಿದು ಬರುತ್ತಿರುವ ಹಣ ಕಂಗಾಲಾಗಿ ಮಾಡಿತು. ಇದೆಲ್ಲ ಉತ್ತುಂಗಕ್ಕೆ ತಲುಪಿದ್ದು ಆಚಾರ್ಯ ರಜನೀಶ್ ವಿದೇಶಗಳಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಾಗ. ಆಚಾರ್ಯ ರಜನೀಶ್ ಅಥವಾ ಓಷೋ ಯೋಗ ಧ್ಯಾನ ಮತ್ತು ಸೆಕ್ಸ್ ಅನ್ನು ಮಿಳಿತಗೊಳಿಸಿದರು. ಜೊತೆಗೆ ಅದ್ಬುತ ವಾಗ್ಮಿಯೂ ಚಿಂತಕರೂ ಆಗಿದ್ದ ಓಷೋ ಸೆಕ್ಸ್ ಅನ್ನು ಸೆಲಿಬ್ರೇಷನ್ ಎಂದು ಕರೆಯುವ ಮೂಲಕ ಸಂಚಲನವನ್ನು ಉಂಟು ಮಾಡಿ ಬಿಟ್ಟಿದ್ದರು. ಇದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಸಂಪ್ರದಾಯವಾದಿ ಮಠಾಧಿಪತಿಗಳಿಗೆ ಇರಲಿಲ್ಲ. ಆಗ ಈ ಜನ ಎತ್ತಿದ್ದು ನೈತಿಕತೆಯ ಪ್ರಶ್ನೆ. ಒಷೋ ಸೆಕ್ಸ್ ಮೂಲಕವೇ ಆಧ್ಯಾತ್ಮಿಕ ದಾರಿಯನ್ನು ಹುಡುಕುವ ವ್ಯಕ್ತಿಯಾಗಿದ್ದರು. ಆದರೆ ಕೊನೆಗೆ ಅವರು ದೇಶವನ್ನೇ  ತೊರೆದು ಹೋಗಬೇಕಾಯಿತು. ಆದರೆ ರಜನೀಶ್ ಮಹೇಶ್ ಯೋಗಿಯಂಥವರು ಭಾರತೀಯ ಆಧ್ಯಾತ್ಮಕ ಜಗತ್ತನ್ನು ಬೇರೆ ಬೇರೆ ರೀತಿಯಲ್ಲಿ ವಿದೇಶದಲ್ಲಿ ಮಾರಾಟ ಮಾಡಿ ಬಿಟ್ಟಿದ್ದರು. ಭಾರತೀಯ ಆಧ್ಯಾತ್ಮಿಕತೆಗೆ ಬಹು ದೊಡ್ಡ ಮಾರುಕಟ್ಟೆ ಆಗಲೇ ದೊರಕಿ ಬಿಟ್ಟಿತ್ತು.
ಈ ಮಾರುಕಟ್ಟೆಯನ್ನು ಯಶಸ್ವಿಯಾಗಿ ಬಳಸಿಕೊಂಡವರು ಮೂರು ಸಲ ಶ್ರೀ ಎಂಬುದನ್ನು ತಮ್ಮ ಹೆಸರಿನ ಜೊತೆ ಸೇರಿಸಿಕೊಂಡಿರುವ ರವಿಶಂಕರ್ ಸ್ವಾಮೀಜಿ. ಅವರು ಯೋಗವನ್ನು ಹಿಡಿದುಕೊಂಡರೂ ಸೆಕ್ಸ್ ಅನ್ನು ಮುಟ್ಟಲು ಹೋಗಲಿಲ್ಲ. ಅವರಿಗೆ ಸಂಪ್ರದಾಯವಾದಿ ಮಠಾಧಿಪತಿಗಳ ವಿರೋಧವನ್ನು ಎದುರಿಸುವ ಶಕ್ತಿ ಇರಲಿಲ್ಲ. ಜೊತೆಗೆ ಓಷೋ ಅವರಂತೆ ಆಧ್ಯಾತ್ಮಿಕ ಚಿಂತಕರೂ ಆಗಿಲ್ಲದ, ಒಳನೋಟಗಳೂ ಇಲ್ಲದ ರವಿಶಂಕರ್ ಅವರಿಗೆ ತಮ್ಮ ದೌರ್ಬಲ್ಯದ ಅರಿವು ಇತ್ತು. ಆದರೆ ನಿತ್ಯಾನಂದ ಸ್ವಾಮೀಜಿ ಹಾಗಿರಲಿಲ್ಲ. ಅವರು ರವಿಶಂಕ್ರ್ ಗುರೂಜಿ ಬಿಟ್ಟಿದ್ದ ಸೆಕ್ಸ್ ಅನ್ನು ಆಧ್ಯಾತ್ಮಿಕ ಸಾಧನೆಯ ದಾರಿಯಾಗಿ ಬಳಸಿಕೊಳ್ಳಲು ಮುಂದಾದರು. ಹೀಗಾಗಿ ವಿದೇಶಗಳಲ್ಲಿ ಅವರ ಪ್ರಭಾವ ಹೆಚ್ಚತೊಡಗಿತು. ವಿದೇಶಿ ಹಣ ನಿತ್ಯಾನಂದ ಸ್ವಾಮಿಗಳತ್ತ ಹರಿದು ಬರತೊಡಗಿತು. ಜೊತೆಗೆ ಹಿಂದುಳಿದ ವರ್ಗಕ್ಕೆ ಸೇರಿದ ನಿತ್ಯಾನಂದ ಈ ರೀತಿಯ ಜನಪ್ರಿಯತೆ ಪಡೆದಿದ್ದು ಮೇಲ್ಜಾತಿಯ ಮಠಾಧಿಪತಿಗಳ ಕೆಂಗಣ್ಣಿಗೆ ಗುರಿಯಾದದ್ದು ನಿಜ.
ಈ ನಡುವೆ ಬಿಡದಿ ಬಳಿಯ ನಿತ್ಯಾನಂದ ಆಶ್ರಮದ ಭೂಮಿಯ ಮೇಲೆ ಕಣ್ಣಿಟ್ಟಿದ್ದ ನೆಲ ಗಳ್ಳರು ಭೂಗತ ಲೋಕದ ದೊರೆಗಳು ಅಖಾಡಕ್ಕೆ ಇಳಿದರು. ಕೆಲವು ರಾಜಕಾರಣಿಗಳು ಇದಕ್ಕೆ ಕೈಜೋಡಿಸಿದರು. ನಿತ್ಯಾನಂದ ಆಶ್ರಮದ ಭೂಮಿಯ ಮೇಲೆ ಕಣ್ಣಿದೆ ಎಂದು ಭಹಿರಂಗವಾಗಿ ಹೇಳುವ  ಸ್ಠಿತಿಯಲ್ಲಿ ಅವರು ಇರಲಿಲ. ಹೀಗಾಗಿ ನೈತಿಕತೆ ಮತ್ತು ಭಾಷಾ ವಿವಾದವನ್ನು ಎಳೆದು ತಂದರು. ಯಾವತ್ತೂ ನೈತಿಕತೆ ಮತ್ತು ಭಾಷೆಯಂತಹ ಭಾವನಾತ್ಮಕ ವಿಚಾರಗಳು ಬಹುಬೇಗ ಜನರನ್ನು ತಲುಪುತ್ತವೆ. ಹಾಗೆ ಇವುಗಳು ಅಮಲು ಹುಟ್ಟಿಸುವಂತಹುಗಳು. ಅಮಲು ಹುಟ್ಟಿಸುವಂತಹುಗಳ ಮೂಲ ಗುಣ ದರ್ಮ ಎಂದರೆ ಅದು ಸತ್ಯದ ಮೇಲೆ ತಾತ್ಮಾಲಿಕ ಮರೆವಿನ ಪರದೆಯನ್ನು ಬಿಟ್ಟು ಬಿಡುತ್ತದೆ. ನಿತ್ಯಾನಂದ ಸ್ವಾಮೀಜಿಯನ್ನು ಬೇರೆ ಬೇರೆ ಕಾರಣಕ್ಕಾಗಿ ವಿರೋಧಿಸುವವರು ಮೊದಲು ಎತ್ತಿರುವ ನೈತಿಕತೆಯ ಪ್ರಶ್ನೆಯನ್ನೇ ತೆಗೆದುಕೊಳ್ಳಿ. ಆಶ್ರಮದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಬೊಬ್ಬೆ ಹಾಕುತ್ತಿರುವ ಅವರು ಅಲ್ಲಿ ನಡೆಯುತ್ತಿರುವ ಅನೈತಿಕ ಚಟವಟಿಕೆ ಯಾವುದು ಎಂದು ಹೇಳುವುದಿಲ್ಲ.  ನಿತ್ಯಾನಂದ ಸ್ವಾಮೀಜಿ ಮುಕ್ತ ಲೈಂಗಿಕತೆಯ ವಿರೋಧಿ ಅಲ್ಲದಿದ್ದರೆ ಅಲ್ಲಿ ಅದೇ ನಡೆಯುತ್ತಿದ್ದರೆ ಅದನ್ನು ಸಾಬೀತು ಮಾಡಬೇಕಾದ ಹೊಣೆಗಾರಿಕೆ ಆರೋಪ ಮಾಡಿದವರ ಮೇಲೆ ಇರುತ್ತದೆ.
ಜೊತೆಗೆ  ಯಾವುದು ನೈತಿಕ ಯಾವುದು ಅನೈತಿಕ ? ಈ ಬಗ್ಗೆ ಮೊದಲು ಸ್ಪಷ್ಟತೆ ಬೇಕು. ಇನ್ನು ನಿತ್ಯಾನಂದ ಸ್ವಾಮೀಜಿ ಅಮೇರಿಕದ ಹೆಂಗಸೊಬ್ಬಳನ್ನು ಬಳಸಿಕೊಂಡ ಎಂಬ ಆರೋಪ. ಬಳಸಿಕೊಳ್ಳುವುದು   ಎಂದರೇನು ? ಅತ್ಯಾಚಾರ ಎನ್ನುವುದು ಐದು ವರ್ಷಗಳ ಕಾಲ ನಡೆದರೆ ಅದು ಅತ್ಯಾಚಾರ ಹೇಗಾಗುತ್ತದೆ ? ಅದು ಇಬ್ಬರ ಒಪ್ಪಿಗೆಯ ಮೇಲೆ ನಡೆದಿರಬಹುದಾದ ಸಾಮಾನ್ಯ ಕ್ರಿಯೆ ಆಗಿರಬಹುದಲ್ಲವೆ ?
ಈ ರಾಜ್ಯದ  ಮಠಗಳ ಇತಿಹಾಸವನ್ನು ಗಮನಿಸಿದರೆ, ಲೈಂಗಿಕ ಆರೋಪವನ್ನು ಹೊತ್ತ ಹಲವಾರು ಸ್ವಾಮೀಜಿಗಳು ಆಗಿ ಹೋಗಿದ್ದಾರೆ. ಇಂತಹ ಲೈಂಗಿಕ ಪ್ರಕರಣಗಳ ಬಗ್ಗೆ ವಿಧಾನ ಸಭೆಯಲ್ಲಿ ಚರ್ಚೆ ನಡೆದಿದ್ದು ಇದೆ. ನನಗೆ ಗೊತ್ತಿರುವ ಪ್ರಕರಣವೊಂದರಲ್ಲಿ ಸ್ವಾಮೀಜಿ ಒಬ್ಬರು ಭಕ್ತರೊಬ್ಬರು ಕೊಟ್ಟ ಬಂಗಾರದ ಸರವೊಂದನ್ನು ಭಕ್ತರ ಹೆಂಡತಿಗೆ ಕೊಟ್ಟು ಬಿಟ್ಟಿದ್ದರು. ಭಕ್ತರ ಹೆಂದತಿಗೂ ಸ್ವಾಮೀಜಿಗೂ ಇರುವ ಸಂಬಂಧ ಬಹಿರಂಗಗೊಂಡಿತ್ತು. ಇನ್ನೊಂದು ಪ್ರಕರಣದಲ್ಲಿ ಮಠ ಬಿಟ್ತು ಹೊರಟ  ಸ್ವಾಮೀಜಿ ಒಬ್ಬರಿಗೆ ಅವರು ಗುರುವಾಗಿದ್ದ ದೊಡ್ಡ ಸ್ವಾಮೀಜಿ ಮಠವನ್ನು ಬಿಡದಂತೆ ಬೇಕಾದರೆ ಗಂಡ ಸತ್ತ ಹೆಂಗಸೊಬ್ಬಳನ್ನು ಇಟ್ಟುಕೊಳ್ಳುವಂತೆಯೂ ಸೂಚಿಸಿದ್ದರು !  ಇನ್ನೊಬ್ಬ ದೊಡ್ದ ಸ್ವಾಮೀಜಿ  ಚಿತ್ರ ನಟಿಯೊಬ್ಬರ ತಂದೆ ಎಂಬ ಗುಸು ಗುಸು ಇದೆ.
ಈ ಸ್ವಾಮಿಗಳು ಇಂದು ಸಮಾಜದಲ್ಲಿ ಗೌರವದ ಸ್ಥಾನ ಹೊಂದಿದ್ದಾರೆ. ಅವರ ಬಗ್ಗೆ ಏಕ ವಚನದಲ್ಲಿ ಮಾತನಾಡುವ ಧೈರ್ಯವನ್ನು ಯಾರೂ ಮಾಡುವುದಿಲ್ಲ. ಮಾಧ್ಯಮಗಳ ಕಚೇರಿಗೂ ಬಂದು ಪಾದ ಪೂಜೆ ಮಾಡಿಸಿಕೊಳ್ಳುವಷ್ಟ್ಉ ಪ್ರಭಾವಿಗಳು ಅವರು. ಆದರೆ ನಿತ್ಯಾನಂದ ಅವರ ಬಗ್ಗೆ ಹಾಗಲ್ಲ. ಅವರು ಇನ್ನು ಕೇವಲ ಆಪಾದಿತರಾದರೂ ಅವರನ್ನು  ಏಕ ವಚನದಲ್ಲಿ ಬೈಯ ಬಹುದು. ಲೇವಡಿ ಮಾಡಬಹುದು. ಯಾಕೆಂದರೆ ಅವರನ್ನು ಬೆಂಬಲಿಸುವ ಪ್ರಬಲ ಜಾತಿ ಅವರ ಹಿಂದೆ ಇಲ್ಲ.
ನಿತ್ಯಾನಂದ ಬೇರೆ ಸ್ವಾಮಿಗಳು ಮಾಡದಿರುವ ತಪ್ಪನ್ನು ಮಾಡಿಲ್ಲ. ಬೇರೆ ಸ್ವಾಮೀಜಿಗಳಂತೆ ಅವರೂ ಬದುಕಿದ್ದಾರೆ. ಹಾಗಿದ್ದರೆ ಅವರನ್ನು ಗುರಿಯಾಗಿಸಿಕೊಂಡು ಯಾಕೆ ಅವರ ಹಿಂದೆ ಬೀಳಲಾಗುತ್ತಿದೆ ಎಂಬುದು ಬಹು ಮುಖ್ಯ ಪ್ರಶ್ನೆ.
ನಿತ್ಯಾನಂದ ಸ್ವಾಮೀಜಿ ಕೆಲವು ವಿಚಾರಗಳಲ್ಲಿ ಬೇರೆ ಸ್ವಾಮಿಗಳಿಗಿಂತ ಭಿನ್ನವಾಗಿದ್ದಾರೆ. ಅವರ ಆಶ್ರಮದಲ್ಲಿ ಫಂಕ್ತಿ ಬೇಧ ಇಲ್ಲ. ಜಾತಿಯತೆ ಇಲ್ಲ. ತಮ್ಮ ಜಾತಿಯ ರಾಜಕಾರಣಿ ಜೈಲಿಗೆ ಹೋದ ಎಂಬ ಕಾರಣಕ್ಕಾಗಿ ಅವರು ಜೈಲಿಗೆ ಹೋಗಿ ಸಾಂತ್ವನ ಹೇಳಿಲ್ಲ.  ಸ್ವಜಾತಿಯ ರಕ್ಷಣೆಗಾಗಿ ಬೀದಿಗೆ ಇಳಿದು ಪ್ರತಿಭಟನೆ ಮಾಡಿಲ್ಲ. ಈ ವಿಚಾರಗಳು ನಮ್ಮ  ಕಣ್ಣಿಗೆ ಕಾಣುತ್ತಿಲ್ಲ.
ಬಹುತೇಕ ಸ್ವಾಮೀಜಿಗಳು ಒಂದೇ ತಕ್ಕಡಿಯಲ್ಲಿ ತೂಗುವಂಥವರು. ಇವರ ನಡುವೆ ಯಾವ ವ್ಯತ್ಯಾಸವೂ ಇಲ್ಲ.
ಇನ್ನು ಇವರೆಲ್ಲ ಎತ್ತಿರುವ ನೈತಿಕತೆಯ ಪ್ರಶ್ನೆ ಎಂಬುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ. ನೈತಿಕತೆ ಎನ್ನುವುದು ಆಯಾ ಕಾಲಕ್ಕೆ ಬದ್ಧವಾದ ಬದುಕುವ ರೀತಿ. ಇಲ್ಲಿ ವೈಯಕ್ತಿಕತೆಗಿಂತ ಸಾಮಾಜಿಕ ನಿಲುವುಗಳು ಬಹಳ ಮುಖ್ಯ. ಲೈಂಗಿಕತೆಯ ಕಟ್ಟುಪಾಡುಗಳು ಸಮಾಜದಿಂದ ಸಮಾಜಕ್ಕೆ ಬದಲಾಗುವಂತೆ ಕಾಲದಿಂದ ಕಾಲಕ್ಕೆ ಬದಲಾಗುತ್ತವೆ. ಆದ್ದರಿಂದ ಸಾವಿರಾರು ವರ್ಷಗಳ ಹಿಂದಿನ ನೈತಿಕತೆ ಇವತ್ತಿನ ಜರೂರತ್ತು ಆಗಿರಬೇಕಿಲ್ಲ. ಅದು ಬದಲಾಗಿರಬಹುದು, ಬದಲಾಗುತ್ತಿರುತ್ತದೆ.
ಇದನ್ನು ಸರಳವಾಗಿ ಹೇಳುವುದಾದರೆ ಇಬ್ಬರು ಪರಸ್ಪರ ಒಪ್ಪಿಗೆಯ ಮೇಲೆ ನಡೆಸುವ ಲೈಂಗಿಕ ಕ್ರಿಯೆ ಅದು ಖಾಸಗಿಯಾಗಿದ್ದರೆ ಅದನ್ನು ಸಾಮಾಜಿಕವಾಗಿ ಪ್ರಶ್ನಿಸುವುದು ಸರಿಯಲ್ಲ.  ನಿತ್ಯಾನಂದ ಸ್ವಾಮೀಜಿ ಯಾರ ಜೊತೆ ಎನನ್ನೂ ನಡೆಸಿದರೋ ಬಿಟ್ಟರೂ ಅದನ್ನು ಒಂದು ಮಿತಿಯನ್ನು ಮೀರಿ ಚರ್ಚಿಸಬೇಕಾದ ವಿಚಾರ ಎಂದೂ ನನಗೆ ಅನ್ನಿಸುತ್ತಿಲ್ಲ.
ನನಗೆ ಅನ್ನಿಸುವ ಹಾಗೆ ನಮಗೆಲ್ಲ ಧರ್ಮ ಬೇಕಾಗಿಲ್ಲ, ಧಾರ್ಮಿಕತೆ ಬೇಕಾಗಿದೆ. ಈ ಧಾರ್ಮಿಕತೆ ಇಡೀ ಮಾನವ ಜನಾಂಗದ ಒಳಿತಿನ ಧರ್ಮ ಆಗಿರಬೇಕು.
ಹಾಗೆ ಸೋಗಿನ ಧಾರ್ಮಿಕ ಮುಖಂಡರು ಮತ್ತು ಮಠಾಧಿಪತಿಗಳ ನಮಗೆ ಬೇಕಾಗಿಲ್ಲ. ಸಮಾಜದಲ್ಲಿ ಮಠಾಧಿಪತಿಗಳನ್ನು ಇಟ್ಟುಕೊಂಡು ಅವರ ಅಧರ್ಮವನ್ನು ನೋಡುವ ಕರ್ಮ ನಮಗೆ ಯಾಕೆ ?

Tuesday, June 5, 2012

ಬಿಜೆಪಿ ಸ್ವರೂಪ ಬದಲಾವಣೆ; ಇತ್ತ ಹಳೆ ಸೀರೆಯೂ ಇಲ್ಲ, ಅತ್ತ ಹೊಸ ಸೀರೆಯೂ ಇಲ್ಲ !

ಒಂದು ಸರ್ಕಾರದ ಐದು ವರ್ಷಗಳ ಆಡಳಿತಾವಧಿಯಲ್ಲಿ ಮೊದಲ ನಾಲ್ಕು ವರ್ಷಗಳನ್ನು ನಿರ್ಣಾಯಕ ವರ್ಷಗಳು ಎಂದೇ ಹೇಳಬೇಕಾಗುತ್ತದೆ. ಹಲವು ರೀತಿಯ ಭರವಸೆಗಳನ್ನು ನೀಡಿ ಅಧಿಕಾರದ ಗದ್ದುಗೆ ಏರಿದ ಪಕ್ಷದ ಸತ್ವ ಪರೀಕ್ಷೆ ಈ ಅವಧಿಯಲ್ಲೇ ನಡೆದು ಹೋಗುತ್ತದೆ. ಕೊನೆಯ ಒಂದು ವರ್ಷ ಚುನಾವಣೆಗೆ ಸಿದ್ಧವಾಗಬೇಕಾದ ಸಮಯವಾಗಿರುವುದರಿಂದ ಅದು ಸರ್ಕಾರದ ವಿಶ್ವಾಸಾರ್ಹತೆಯನ್ನು ಅಭಿವೃದ್ಧಿಪರ ನಿಲುವನ್ನು ಸಾಬೀತು ಪಡಿಸುವ ಅವಧಿ ಅಲ್ಲ. ಜೊತೆಗೆ ನಾಲ್ಕು ವರ್ಷಗಳ ಅವಧಿಯಲ್ಲಿ ಮಾಡಲಾಗದ್ದನ್ನು ಒಂದು ವರ್ಷದ ಅವಧಿಯಲ್ಲಿ ಮಾಡಬಹುದು ಎಂಬುದನ್ನು ನಂಬಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ಸಾಧನೆ ಮತ್ತು ವೈಫಲ್ಯವನ್ನು ಚರ್ಚಿಸಲು ಇದು ಸಕಾಲ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ  ನಡೆದ ಘಟನಾವಳಿಗಳನ್ನು ಒಮ್ಮೆ ನೆನಪು ಮಾಡಿಕೊಂಡರೆ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರಯಾವುದು ? ಆ ಚಿತ್ರದಲ್ಲಿ ಕಾಣುವ ಬಣ್ನಗಳು ಯಾವವು ?ಈ ಚಿತ್ರವನ್ನು ಬಿಡಿಸಿದವರು ತೆರೆದಿಟ್ಟ ಸತ್ಯ ಯಾವುದು ? ಒಟ್ಟ್ಇನಲ್ಲಿ ಇದು ಸಫಲ ಯತ್ನವೇ ಅಥವಾ ವಿಫಲತೆಯ ಇತಿಹಾಸವೆ ?
ಒಂದು ಸರ್ಕಾರ ಎಂದ  ತಕ್ಷಣ  ಅದರ ಹಿಂದೆ ಪಕ್ಷದ ನೆರಳು ಇದ್ದೇ ಇರುತ್ತವೆ. ನಮ್ಮ ಜನತಂತ್ರ ವ್ಯವಸ್ಥೆಯಲ್ಲಿ ಪಕ್ಷ ರಹಿತವಾದ ಸರ್ಕಾರಕ್ಕೆ ಅಸ್ಥಿತ್ವ ಇಲ್ಲ. ಹೀಗಾಗಿ ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವಾಗ ಬಿಜೆಪಿ ಸರ್ಕಾರ ಎಂದೇ ನಾವು  ಹೇಳಬೇಕಾಗುತ್ತದೆ. ಜೊತೆಗೆ ಸರ್ಕಾರದ ಆಗುಹೋಗುಗಳ ನೇರವಾದ ಪರಿಣಾಮ ಜನರ ಮೇಲೆ ಆಗುತ್ತದೆ ಎಂಬುದು ನಿಜವಾದರೂ ಇದರ ಪರಿಣಾಮ ಪಕ್ಷದ ಮೇಲೆ ಆಗುವುದನ್ನು ನಿರಾಕರಿಸಲಾಗದು. ಹಾಗಿದ್ದರೆ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತೀಯ ಜನತಾ ಪಕ್ಷದ ಮೇಲೆ ಆದ ಪರಿಣಾಮ ಯಾವುದು ಮತ್ತು  ಯಾವ ರೀತಿಯದು ?
ಭಾರತದಲ್ಲಿ ನಿಜವಾದ ಅರ್ಥದಲ್ಲಿ ಪಕ್ಷ ಎಂಬುದು ಇಲ್ಲ. ಇಲ್ಲಿರುವುದು ರಾಜಕೀಯ ನಾಯಕರ ಗುಂಪುಗಳು. ಕಾಂಗ್ರೆಸ್ ಒಂದು ಚಳವಳಿಯಾಗಿ ನಂತರ ಪಕ್ಷವಾದರೂ ಅದನ್ನು ಒಂದು ಪಕ್ಷ ಎಂದು ಪರಿಗಣಿಸುವುದು ಸಾಧ್ಯವಿಲ್ಲ.  ಯಾಕೆಂದರೆ ಒಂದು ಪಕ್ಷಕ್ಕೆ ಸ್ಪಷ್ಟವಾದ ಸೈದ್ಧಾಂತಿಕ ತಳಹದಿ, ನೈತಿಕ ಬದ್ಧತೆ ಮತ್ತು ಪ್ರಾಮಾಣಿಕತೆ ಬೇಕಾಗುತ್ತದೆ. ಕೆಳ ಹಂತದಿಂದ ಜನತಾಂತ್ರಿಕ ಮೌಲ್ಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಸ್ವಾತಂತ್ರ್ಯ ಇರಬೇಕು. ಸ್ಥಳೀಯ ನಾಯಕತ್ವ ಬೆಳೆಯಲು ಅನುವು ಮಾಡಿಕೊಡುವ ವಾತಾವರಣ ಇರಬೇಕು. ಚುನಾವಣೆ ಬಂದಾಗ ಗೆಲ್ಲುವುದೊಂದೇ ಪಕ್ಷದ ಗುಣಧರ್ಮ ಅಲ್ಲ. ಹಾಗಾದರೆ ಪಕ್ಷ ಆಂತರಿಕವಾಗಿ ಕ್ಶಯಿಸತೊಡಗುತ್ತದೆ.
ಕಾಂಗ್ರೆಸ್ ಪಕ್ಷಕ್ಕಿಂತ ಭಾರತೀಯ ಜನತಾ ಪಕ್ಶಕ್ಕೆ ಇಂತಹ ಪಕ್ಷದ  ಗುಣಗಳಿದ್ದವು. ಬಿಜೆಪಿಯ ಸಿದ್ಧಾಂತವನ್ನು ಒಪ್ಪದವರೂಅದಕ್ಕೊಂದ್ಉ ಸಿದ್ಧ್ಹಾಂತವಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿರಲಿಲ್ಲ. ಆ ಪಕ್ಷದ ಬಲ ಪಂಥೀಯನಿಲುವುಗಳನ್ನು ಎಲ್ಲರೂ ಒಪ್ಪಿಕೊಳ್ಳುವುದು ಸಾಧ್ಯವಿಲ್ಲದವರೂ ಅ ಪಕ್ಷ ನಿಲುವುರಹಿತವಾಗಿದೆ ಎಂದು ಹೇಳುವಂತಿರಲಿಲ್ಲ.
ಹಾಗೆ ವಾಜಪೇಯಿ ಮತ್ತು ಆಡ್ವಾಣಿಯವರ ನಿಲುವನ್ನು ಒಪ್ಪದವರೂ ಅವರ ಬಗ್ಗೆ ವೈಯಕ್ತಿಕ ಗೌರವವನ್ನು ಉಳಿಸಿಕೊಂಡು ಬರುವಂತಹ ನಾಯಕತ್ವದ ಗುಣ ಅವರಿಗಿತ್ತು. ಹಾಗೆ ಕರ್ನಾಟಕದಲ್ಲಿ ಸಹ, ಬಿಜೆಪಿಯ ನಾಯಕರ ಪಕ್ಷದ ಮತ್ತು ಸೈದ್ಧಾಂತಿಕ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ.
ರಾಜ್ಯದಲ್ಲಿ ಬಿಜೆಪಿ  ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಆದ ಮೊದಲ ಪರಿಣಾಮ ಎಂದರೆ ಅದರ ಸ್ವರೂಪದಲ್ಲಾದ ಮೂಲಭೂತ ಬದಲಾವಣೆ. ಅಧಿಕಾರವನ್ನು ಭದ್ರ ಪಡಿಸಿಕೊಳ್ಳು ಭರದಲ್ಲಿ ಕಂದ ಕಂಡವರಿಗೆಲ್ಲ ಪಕ್ಷ  ಬಾಗಿಲು ತೆರೆಯಿತು. ಪಕ್ಶ ಬದಲಿಸುವುದನ್ನೇ ರಾಜಕಾರಣ ಎಂದು ನಂಬಿರುವ ಹಲವರು ಬಿಜೆಪಿ ಸೇರಿದರು.; ಅಧಿಕಾರದ ಗದ್ದುಗೆ ಹಿಡಿದು ವಿಜ್ರಂಭಿಸತೊಡಗಿದರು.ಬಿಜೆಪಿ ಸರ್ಕಾರದ ಬುಡ ಗಟ್ಟಿಯಾಯಿತು ಎಂದು ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಬೀಗುತ್ತಿರುವಾಗಲೇ ಬಿಜೆಪಿ  ಒಂದು ರಾಜಕೀಯ ಪಕ್ಷವಾಗಿ  ದುರ್ಬಲವಾಗತೊಡಗಿತ್ತು. ಅಧಿಕಾರ ರಾಜಕಾರಣದಲ್ಲಿ ಬಿಜೆಪಿ ಎಂಬ ಪಾರ್ಟಿ ವಿಥ್ ಡಿಫರೆನ್ಸ್  ಕಳೆದು ಹೋಗತೊಡಗಿದ್ದು ಪಕ್ಷದ ನಾಯಕತ್ವದ ಅರಿವಿಗೆ ಬರಲೇ ಇಲ್ಲ.
ಭಾರತೀಯ ಜನತಾ ಪಾರ್ಟಿ ಮೊದಲಿನಿಂದಲೂ ಪ್ರತಿಪಾದಿಸುತ್ತ ಬಂದ ತತ್ವ ಮತ್ತು ಮೌಲ್ಯಗಳನ್ನು  ಪಕ್ಷದ ಸರ್ಕಾರವೇ ಗಾಳಿಗೆ ತೂರುತ್ತಲೇ ಬಂತು. ಬಿಜೆಪಿ  ನಂಬಿಕೊಂಡು ಬಂದ ವ್ಯಕ್ತಿಗತ ನೈತಿಕತೆಯನ್ನು  ಸಚಿವ ರೇಣುಕಾಚಾರ್ಯ ಗಾಳಿಗೆ ತೂರಿದರು.  ಕೆಲವು ಸಚಿವರು ಸದನದಲ್ಲೇ ನೀಲಿ ಚಿತ್ರ ವೀಕ್ಷಣೆ ಮಾಡಿದರು. ಭ್ರಷ್ಟತೆಯ ಪಿಡುಗು ಮೂಲವ್ಯಾಧಿಯಂತೆ ಕಾಡತೊಡಗಿತು. ಪಕ್ಷದಲ್ಲಿ ಆದ ಈ ಬದಲಾವಣೆ ಅಥವಾ ಪಕ್ಷ ಧರಿಸತೊಡಗಿದ ಹೊಸ ಸ್ವರೂಪದ ಬಗ್ಗೆ ಯಾವ ರೀತಿಯ ಪ್ರತಿರೋಧವೂ ವ್ಯಕ್ತವಾಗಲಿಲ್ಲ.  ಅಂದರೆ ಬಿಜೆಪಿಯ ನಾಯಕತ್ವಕ್ಕೆ ಪಕ್ಷದ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆ  ಅನಿವಾರ್ಯ ಎಂದು ಅನ್ನಿಸುತ್ತಿರಬೇಕು.  ಇಲ್ಲದಿದ್ದರೆ  ನೈತಿಕ ಬದ್ಧತೆ  ಮತ್ತು  ಸೈದ್ಧಾಂತಿಕ  ನಿಲುವುಗಳ ಬಗ್ಗೆ ಪಕ್ಷ ರಾಜೀ ಮಾಡಿಕೊ:ಳ್ಳುವುದು ಸಾಧ್ಯವೇ ಇರಲಿಲ್ಲ.
ಬಿಜೆಪಿಯಲ್ಲಿ  ಆದ ಆಗುತ್ತಿ ರುವ ಬದಲಾವಣೆಗೆ ಬೇರೆ ಬೇರೆ ರೀತಿಯ ಆಯಾಮಗಳೂ ಇವೆ.  ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದ್ಏಶ ದೊಡ್ದದು ಎಂಬ ಬಿಜೆಪಿಯ ಸಿದ್ಧಾಂತವೂ ಈಗ ಉಳಿದಂಅತೆ ಕಾಣುತ್ತಿಲ್ಲ. ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಪಕ್ಷಕ್ಕಿಂತ ದೊಡ್ಡದಾಗಿ ಬೆಳೆದವರು  ಯಡಿಯೂರಪ್ಪ. ಅವರು ಹೀಗೆ ಬೆಳೆಅಯುವಾಗ ಸುಮ್ಮನಿದ್ದ ನಾಯಕತ್ವಕ್ಕೆ ಈಗ ಯಡಿಯೂರಪ್ಪನವರೇ ನುಂಗಲಾರದ ತುತ್ತಾಗಿದ್ದಾರೆ. ಅವರನ್ನು ಇಟ್ಟು ಕೊಳ್ಳಲೂ ಆಗದೇ ಕಳಿಹಿಸಿಕೊಡಲೂ ಸಾಧ್ಯವಾಗದ ಅಸಹಾಯಕ ಸ್ಥಿತಿಗೆ ಬಿಜೆಪಿ ತಲುಪಿ ಬಿಟ್ಟಿದೆ. ಈಗ ಯಡೀಯೂರಪ್ಪ ಪಕ್ಷದಲ್ಲಿ ಇದ್ದರೂಸಮಸ್ಯೆ. ಪಕ್ಷ ಬಿಟ್ಟರೂ ಸಮಸ್ಯ.
ಯಡಿಯೂರಪ್ಪನವರಿಗೆ ಭಸ್ಮಾಸುರ ಹಸ್ತವನ್ನು ನೀಡಿದ್ದೇ ಬಿಜೆಪಿ ನಾಯಕತ್ವ.ಪಕ್ಷದ ಸ್ವರೂಪಕ್ಕೆ ಕೊಡಲಿ ಪೆಟ್ಟು ಬೀಳುವಂತಾ ಬೆಳವಣಿಗೆ ಆಗುತ್ತಿದ್ದರೂ ಅದನ್ನು ನೋಡಿಕೊಂಡು ಸುಮ್ಮನೆ ಕುಳಿತವರು ಬಿಜೆಪಿ ವರಿಷ್ಠರು. ಹೀಗಾಗಿ ಈ ಹಸ್ತ ತನ್ನ ತಲೆಯ ಮೇಲೆ ಬಂದರೂ ಏನು ಮಾಡಲಾಗದ ಹಂತವನ್ನು ಬಿಜೆಪಿ ತಲುಪಿ ಬಿಟ್ಟಿದೆ.
ಸೈದ್ಧಾಂತಿಕ ರಾಜಕಾರಣದಿಂದ ಅಧಿಕಾರ ರಾಜಕಾರಣಕ್ಕೆ ಸರಿಯುತ್ತಿರುವ ಬಿಜೆಪಿ, ವಿಚಿತ್ರ ತೊಳಲಾಟದಲ್ಲಿದೆ. ಅಧಿಕಾರ ರಾಜಕಾರಣದ ಪಟ್ಟುಗಳು ಪಕ್ಷಕ್ಕೆ ಕರಗತವಾಗಿಲ್ಲ.  ಹೀಗಾಗಿ ಯಡಿಯೂರಪ್ಪನಂತವರು ಎಡವುತ್ತಾರೆ. ಸರ್ಕಾರವನ್ನು ಉಳಿಸಿಕೊಳ್ಳುವ ಭರದಲ್ಲಿ  ಭ್ರಷ್ಟಾಚಾರದ ಕೂಪದಲ್ಲಿ ಕಳೆದು ಹೋಗುವ  ಸ್ಥಿತಿ ನಿರ್ಮಾಣವಾಗುತ್ತದೆ. ಅಧಿಕಾರ ರಾಜಕಾರಣದಲ್ಲಿ ಸೈದ್ಧಾಂತಿಕ ರಾಜಕಾರಣ ಎಷ್ಟರ ಮಟ್ಟಿಗೆ ಇರಬೇಕು  ಇವೆರಡರ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುಫುದು ಹೇಗೆ ಎಂಬದು ತಿಳಿಯದೇ ಪಕ್ಷ  ಗೊಂದಲಕ್ಕೆ ಸಿಕಲುಕಿಕೊಳ್ಳುತ್ತದೆ.
ಕಳೆದು ನಾಲ್ಕು ವರ್ಷಗಳಲ್ಲಿ ಬಿಜೆಪಿ ಎಂಬ ಪಕ್ಷದಲ್ಲಿ ಆದ ಆಗುತ್ತಿರುವ ಬದಲಾವಣೆಗಳು ಈ ಪಕ್ಷಕ್ಕೆ  ಮತ್ತೆ ಅಧಿಕಾರವನ್ನು ನೀಡುತ್ತದೆ ಎಂದು ಹೇಳುವುದು ಕಷ್ಟ, ಗಂಡ ತರುವ ಹೊಸ ಸೀರೆಗಾಗಿ ಹಳೆಯ ಸೀರೆಯನ್ನು ಸುಟ್ಟುಕೊಂಡ ಗೃಹಿಣಿಯ ದುರಂತ ಸ್ಥಿತಿಗೆ ಬಿಜೆಪಿ ಬಂದು ನಿಂತಿದೆ. ಅತ್ತ ಹೊಸ ಸೀರೆಯೂ ಇಲ್ಲ. ಇತ್ತ ಹಳೆಯ ಸೀರೆಯೂ ಇಲ್ಲ. ಎಲ್ಲರ ಎದುರು ನಗ್ನವಾಗುವ   ದುರಂತ ಬಿಜೆಪಿಯದು.

Wednesday, April 4, 2012

ತಟ್ಟು ತಪ್ಪಾಳೆ ಕೆಟ್ಟ ಮಗು.....!






ಕಳೆದ ಕೆಲವುಗಳಿಂದ ನಾನು ಸುಮ್ಮನೆ ಉಳಿದು ಬಿಟ್ಟೆ. ಏನನ್ನು ಬರೆಯಬೇಕು ಎಂದು ಅನ್ನಿಸುತ್ತಿರಲಿಲ್ಲ. ಬರೆಯಲು ಏನೂ ಇರಲಿಲ್ಲ ಅಂತಾನೂ ಅಲ್ಲ. ಕೆಲವೊಮ್ಮೆ ನಮಗೆ ಏನನ್ನಾದರೂ ಮಾಡಬೇಕು ಎಂದು ಅನ್ನಿಸುವುದಿಲ್ಲ. ನನಗೆ ಆಗಿದ್ದು ಹಾಗೆ.
ನಾನು ಬೆಂಗಳೂರಿನಿಂದ ಹೊರಗಡೆ ಒಂದೆರಡು ದಿನ ಇದ್ದೆ. ನಂತರ ಬೆಂಗಳೂರಿಗೆ ಹಿಂತಿರುಗಿದ ಮೇಲೂ ಬೇಸರ.
ಒಂದೆಡೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಟಾಟೋಪ. ನಾನು ನ್ಯಾಯಾಲಯದಲ್ಲಿ ಇರುವ ಪ್ರಕರಣಗಳಿಂದ ಹೊರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಮಾಡುವುದಾಗಿ ವರಿಷ್ಠರು ಭರವಸೆ ನೀಡಿದ್ದರು, ಅದನ್ನು ಅವರು ಈಡೇರಿಸಬೇಕು ಎಂಬ ಒತ್ತಾಯ. ಇದಕ್ಕೆ ಪೂರಕವಾಗಿ ಹಲವು ಸಭೆ ಸಮಾರಂಭಗಳು. ಆ ಸಮಾರಂಭಗಳಲ್ಲಿ ಅವರ ಗುಣ ಗಾನ ಮಾಡುವ ಭಟ್ಟಂಗಿಗಳು.
ನಾನು ಬಹಳಷ್ಟು ವರ್ಷಗಳಿಂದ ನೋಡುತ್ತಲೇ ಬಂದಿರುವ ಯಡಿಯೂರಪ್ಪ, ಮುಗ್ದ ಮತ್ತು ದಡ್ಡ ಎಂಬುದು ನನ್ನ ನಂಬಿಕೆಯಾಗಿತ್ತು. ಸಾಧಾರಣವಾಗಿ ಗ್ರಾಮಾಂತರ ಪ್ರದೇಶಗಳಿಂದ ಬಂದವರಿಗೆ ಇಂತಹ ಹುಂಬತನ ಇರುತ್ತದೆ. ಅವರು ತಮ್ಮ ಮನಸ್ಸಿಗೆ ಅನ್ನಿಸಿದ್ದನ್ನು ಕದ್ದು ಮುಚ್ಚಿ ಇಟ್ಟುಕೊಳ್ಳಲಾರರು. ಹೋರಾಟಗಳಿಂದಲೇ ಬಂದ ಯಡಿಯೂರಪ್ಪನವರಲ್ಲಿ ಇಂತಹ ಹುಂಬತನ ಇದೆ ಎಂದು ನಾನು ನಂಬಿದ್ದೆ.
ಹುಂಬತನ ಅಂತಹ ದೊಡ್ಡ ದೊಷವಲ್ಲ. ಯಾಕೆಂದರೆ ಹುಂಬತನದ ಹಿಂದೆ ಕಪಟ ಇರುವುದಿಲ್ಲ. ಷಡ್ಯಂತ್ರ ಇರುವುದಿಲ್ಲ. ಮುಗ್ದವಾದ ಮನಸ್ಸುಗಳಲ್ಲಿ ಮಾತ್ರ ಹುಂಬತನ ಇರುತ್ತದೆ. ಆದ್ದರಿಂದ ಹುಂಬರು ಮತ್ತು ಮುಗ್ದರು ಅಪಾಯಕಾರಿಯಲ್ಲ. ಜೊತೆಗೆ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ನನಗೆ ಸಂತೋಷವಾಗಿದ್ದು ಅವರ ಬಗ್ಗೆ ಎಂದು ಹೇಳುವುದಕ್ಕಿಂತ ನಮ್ಮ ಡೆಮಾಕ್ರಸಿಯ ಬಗ್ಗೆ ನನಗೆ ಇನ್ನಷ್ಟು ಗೌರವ ಪ್ರೀತಿ ಉಂಟಾಗಿದ್ದು ನಿಜ.
ಯಾಕೆಂದರೆ ದೇವೇಗೌಡರು ಪ್ರಧಾನಿಯಾಗುವುದು ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಡೆಮಾಕ್ರಸಿಯ ಪವಾಡ ಎಂದು ನನಗೆ ಅನ್ನಿಸಿದ್ದುಂಟು. ಈಗಲೂ ಹಾಗೆ ಅನ್ನಿಸುತ್ತದೆ. ಗ್ರಾಮಾಂತರ ಪ್ರದೇಶದಿಂದ ಬಂದು ಇಂಗ್ಲೀಷ ಎಂಬ ಮಾಯಾಂಗನೆಯ ಸ್ಪರ್ಶವೂ ಇಲ್ಲದೇ ಎತ್ತರಕ್ಕೆ ಏರುವುದು ಸಾಮಾನ್ಯ ಸಾಧನೆಯಲ್ಲ.
ಆದರೆ ಈಗ ಯಡಿಯೂರಪ್ಪ ಅವರ ವರ್ತನೆಯನ್ನು ಗಮನಿಸಿದಾಗ ನನ್ನ ಮನಸ್ಸಿನಲ್ಲಿ ಚಿತ್ರವೊಂದು ಮೂಡುತ್ತದೆ. ಅದು ಮನೆಯ ಅಂಗಳದಲ್ಲಿ ಕುಳಿತ ಪುಟ್ಟ ಮಗುವಿನ ಚಿತ್ರ. ಮೈಮೇಲೆ ಬಟ್ಟೆಯೂ ಇಲ್ಲದೇ ಅಂಗಳದಲ್ಲಿ ಕುಳಿತ ಮಗು ಉಚ್ಚೆ ಕಕ್ಕಸು ಮಾಡಿಕೊಂಡಿದೆ. ಉಚ್ಚೆಯ ಜೊತೆಗೆ ಆಡುತ್ತ ಕಕ್ಕಸನ್ನು ಮೈ ಕೈಗೆ ಬಡಿದುಕೊಂಡು ಅಳುತ್ತಿರುವ ಮಗು.
ಈ ಮಗುವಿನ ಜಾಗದಲ್ಲಿ ನನಗೆ ಯಡಿಯೂರಪ್ಪ ಕಾಣುತ್ತಾರೆ. ಅವರು ಬೆತ್ತಲಾಗಿದ್ದಾರೆ. ಮೈ ಕೈಗೆ ಕಕ್ಕಸು ಮೆತ್ತಿಕೊಂಡಿದೆ. ಅವರು ಅಳುತ್ತಲೇ ಇದ್ದಾರೆ. ಆದರೆ ಅವರ ಅಳುವಿಗೆ ಸಾಂತ್ವನ ಹೇಳುವ ಅಮ್ಮ ಕಾಣುತ್ತಿಲ್ಲ. ಮೈ ಕೈ ತೊಳೆಸಿ ಹೊಸ ಬಟ್ಟೆ ಹಾಕಿ ಆಡಲು ಗೊಂಬೆಗಳನ್ನು ನೀಡಬೇಕಾದ ಅಮ್ಮ ನಾಪತ್ತೆ.
ಪುಟ್ಟ ಮಗುವಿಗೆ ಉಚ್ಚೆ ಮತ್ತು ಕಕ್ಕಸು ಹೊಲಸು ಎಂಬುದು ತಿಳಿದಿರುವುದಿಲ್ಲ ಕಕ್ಕಸಿನ ದುರ್ವಾಸನೆ ಮಗುವನ್ನು ವಿಚಲಿತವಗಿ ಮಾಡುವುದಿಲ್ಲ. ಕಕ್ಕಸನ್ನು ಮೈ ಕೈ ಗೆ ಬಡಿದುಕೊಂಡರೂ ಅದರ ಹೊಲಸಿನಿಂದ ಮಗುವಿಗೆ ತೊಂದರೆಯಾಗುತ್ತಿದ್ದರೂ ಅದರಿಂದ ಹೊರಕ್ಕೆ ಬರಬೇಕು ಎಂಬುದು ಅದಕ್ಕೆ ತಿಳಿಯದು.
ನನಗೆ ಈಗ ಮನೆಯ ಅಂಗಳದಲ್ಲಿ ಕುಳಿತ ಯಡಿಯೂರಪ್ಪ ಕಾಣುತ್ತಿದ್ದಾರೆ. ಅವರ ಮೈ ಮೇಲೂ ಬಟ್ಟೆಯಿಲ್ಲ. ಮೈ ಕೈ ರಾಡಿಯಾಗಿದೆ. ಅವರೂ ಅಳುತ್ತಿದ್ದಾರೆ ರಚ್ಚೆ ಹಿಡಿಯುತ್ತಿದ್ದಾರೆ. ಅದರೆ ಈ ಎರಡೂ ಚಿತ್ರಗಳಲ್ಲಿ ಇರುವ ವ್ಯತ್ಯಾಸ ಎಂದರೆ ಮಗಿವಿಗೆ ಇರುವ ಮುಗ್ದತೆ ಯಡಿಯೂರಪ್ಪ ಅವರಲ್ಲಿ ಇರುವುದು ಸಾಧ್ಯವಿಲ್ಲ. ಮಗುವಿನ ಅಳುವಿನ ಹಿಂದೆ ತಾಯಿಯ ಲಕ್ಶ್ಯ ಸೆಳೆಯುವ ಉದ್ದೇಶವಿದೆ. ಅದನ್ನು ಮೀರಿ ಮಗು ಏನನ್ನೂ ಬಯಸುವುದಿಲ್ಲ. ಆದರೆ ಅಳುತ್ತಿರುವ ಯಡಿಯೂರಪ್ಪ ಮಗುವಾಗಿ ದೊಡ್ದವರಾದವರು. ಹೀಗೆ ದೊಡ್ದವರಾಗುವ ಮೂಲಕ ಅವರು ಮುಗ್ದತೆಯನ್ನು ಕಳೆದುಕೊಂಡಿದ್ದಾರೆ. ಹಾಗೆ ಅವರಿಗೆ ತಾಯಿಯ ಲಕ್ಶ್ಯವನ್ನು ಸೆಳೆಯುವುದು ಮಾತ್ರ ಉದ್ದೇಶವಲ್ಲ. ಅಮ್ಮನನ್ನು ಹತ್ತಿರಕ್ಕೆ ಕರೆದು ಆಕೆಯ ಮೊಲೆ ಹಾಲು ಕುಡಿಯುವ ದೊಡ್ಡವರ ದುಷ್ಟ ಆಸೆಯೂ ಅವರ ಮನಸ್ಸಿನಲ್ಲಿ ಇರುವಂತೆ ನನಗೆ ಕಾಣುತ್ತದೆ. ಹಾಗೆ ದೊಡ್ದವನಾದವನು ಮೊಲೆಯ ಹಾಲನ್ನು ಹೀರಿ ತಾಯಿಯನ್ನೇ ಕೊಲ್ಲಲು ಯತ್ನ ನಡೆಸುವ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ.
ಯಡಿಯೂರಪ್ಪ ಅವರು ಮಾತನಾಡುವ ರೀತಿಯನ್ನು ಗಮನಿಸಿದರೆ ನಾನು ಮೇಲೆ ಹೇಳಿದ ಮಾತುಗಳಿಗೆ ಇನ್ನಷ್ಟು ಪುಷ್ಟಿ ದೊರಕುತ್ತದೆ.
ಅವರ ಹೇಳಿಕೆಗಳ ಹಿಂದಿನ ಮನಸ್ಥಿತಿಯನ್ನು ನೋಡಿ.
೧. ನನ್ನನ್ನು ಮುಖ್ಯಮಂತ್ರಿ ಮಾಡಬೇಕು ಅದು ನನ್ನ ಆಸ್ತಿ.
೨. ನನ್ನಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಅಧಿಕಾರ ನನ್ನ ಬಳಿಯೇ ಇರಬೇಕು.
೩. ನಾನೇ ಕರ್ನಾಟಕದ ಅಭಿವೃದ್ಧಿ. ನನ್ನಿಂದಲೇ ಅಭಿವೃದ್ಧಿ. ನಾನು ಅಭಿವೃದ್ಧಿಯಾದರೆ ಕರ್ನಾಟಕದ ಅಭಿವೃದ್ಧಿಯಾದಂತೆ.
೪. ಸದಾನಂದ ಗೌಡರನ್ನು ನಾನೇ ಮುಖ್ಯಮಂತ್ರಿ ಮಾಡಿದ್ದರಿಂದ ಅವರು ಮಾತುಕೊಟ್ಟಂತೆ ಮುಖ್ಯಮಂತ್ರಿ ಸ್ಥಾನವನ್ನು ನನಗೆ ಬಿಟ್ಟುಕೊಡಬೇಕು. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು.
ಅವರ ಮನಸ್ಥಿತಿಯಲ್ಲಿ ಪ್ರಧಾನ ಅಂಶ ಎಂದರೆ ನಾನು. ನನ್ನಿಂದಲೇ ಎಲ್ಲ ಎಂಬುದು. ಇದನ್ನು ಗಮನಿಸಿದಾಗ ಮೂರನೆಯ ದರ್ಜೆಯ ರಾಜಕಾರಣಿಯೊಬ್ಬ ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದರೆ ಇಂದಿರಾ ಎಂದು ಹೇಳಿದ ಮಾತು ನೆನಪಾಗುತ್ತದೆ. ಯಡಿಯೂರಪ್ಪ ಕೂಡ ಕರ್ನಾಟಕ ಎಂದರೆ ನಾನು, ನಾನು ಎಂದರೆ ಕರ್ನಾಟಕ ಎಂದು ಅಂದುಕೊಂಡಂತೆ ಅನ್ನಿಸುತ್ತದೆ. ದೇವಕಾಂತ್ ಬರೂವಾ ಇಂದಿರಾ ಎಂದರೆ ಇಂಡಿಯಾ ಎಂಬ ಮಾತನ್ನು ಹೇಳಿದಾಗ ಇಂದಿರಾ ಗಾಂಧಿ ಈ ಬಗ್ಗೆ ಸಣ್ಣ ಪ್ರತಿರೋಧವನ್ನೂ ವ್ಯಕ್ತಪಡಿಸಲಿಲ್ಲ. ಈಗ ಯಡಿಯೂರಪ್ಪ ಕೂಡ ತಾವೇ ಕರ್ನಾಟಕ ಎಂಬುದನ್ನು ನಂಬಿಕೊಂಡಂತಿದೆ. ಇದು ಹೇಗಿದೆ ಎಂದರೆ ಕೆಲವು ದೇವ ಮಾನವರು ಎಂದು ಹೇಳಿಕೊಂಡು ಜನರಿಗೆ ಮೋಸ ಮಾಡುವವರು ತಾವೇ ದೇವರು ಎಂದು ನಂಬಿಕೊಳ್ಳುವಂತೆ. ಹೀಗಾಗಿ ಯಡಿಯೂರಪ್ಪ ನಮ್ಮ ರಾಜಕಾರಣದ ದೇವ ಮಾನವ. ಹಾಗೆ ಅವರ ಭಟ್ಟಿಂಗಿತನಕ್ಕೆ ಮೆಚ್ಚಿರುವ ಕೆಲವು ದೈವ ಪುತ್ರರು. ದೈವತ್ವದ ಗುಣಗಳನ್ನು ಕಳೆದುಕೊಂಡ ಕೆಲವು ನಡೆದಾಡುವ ದೇವರುಗಳು ಅವರ ಈ ಭ್ರಮೆ ಎಂಬ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತಿದ್ದಾರೆ. ಭ್ರಮೆಯ ಬೆಂಕಿ ಇನ್ನಷ್ಟು ಜ್ವಾಜಲ್ಯಮಾನವಾಗಿ ಉರಿಯುವಂತೆ ಮಾಡುತ್ತಿದ್ದಾರೆ.
ಯಡಿಯೂರಪ್ಪ ಈಗ ಬರಗಾಲದ ಪರಿಸ್ಥಿತಿಯನ್ನು ಅಧ್ಯಯನ ಮಾಡುವುದಕ್ಕೆ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದಲ್ಲಿ ಅವರು ಮಾಡುತ್ತಿರುವ ಘನ ಕಾರ್ಯ ಎಂದರೆ ಅಧಿಕಾರಿಗಳ ಮೇಲೆ ಧಾಳಿ. ಮುಖ್ಯಮಂತ್ರಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಆದರೆ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳುತ್ತಿರುವ ಅವರು ಯಾವ ಸಂದೇಶವನ್ನು ನೀಡುತ್ತಿದ್ದಾರೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ಅವರು ಅಧಿಕಾರಿಗಳ ಮೇಲೆ ಧಾಳಿ ಮಾಡಿದರೂ ಅವರ ಗುರಿ ಸದಾನಂದ ಗೌಡರೇ ಎಂಬುದು ಸ್ಪಷ್ಟ.
ಸದಾನಂದ ಗೌಡರು ಮುಖ್ಯಮಂತ್ರಿಯಾದ ಮೇಲೆ ಒಬ್ಬರೆ ಒಬ್ಬ ಅಧಿಕಾರಿಯನ್ನು ಬದಲಿಸುವುದಕ್ಕೂ ಅವಕಾಶ ನೀಡದೇ ತಡೆ ಹಾಕುತ್ತಿರುವ ಯಡಿಯೂರಪ್ಪ ತಮ್ಮ ವಂದಿ ಮಾಗದರೇ ಮುಂದುವರಿಯುವಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕೆಲವು ಅಪವಾದಗಳು ಇರಬಹುದಾದರೂ ಪ್ರಮುಖ ಸ್ಥಾನಗಳಲ್ಲಿ ಇರುವವರು ಯಡಿಯೂರಪ್ಪನವರಿಗೆ ಬೇಕಾದ ಅಧಿಕಾರಿಗಳೇ. ಹೀಗಿರುವಾಗ ಅವರು ಬೈಯುತ್ತಿರುವ ಅಧಿಕಾರಿಗಳು ಯಾರು ? ಈ ಅಧಿಕಾರಿಗಳ ವೈಫಲ್ಯ ಎಂದರೆ ಅವರ ಆಪ್ತ ಅಧಿಕಾರಿಗಳ ವೈಫಲ್ಯವೇ ಅಲ್ಲವೆ ? ಅಂದರೆ ಅಪ್ರತ್ಯಕ್ಷವಾಗಿ ಯಡಿಯೂರಪ್ಪನವರ ವಿಫಲ್ಯವೇ ಅಲ್ಲವೆ ?
ಪ್ರಾಯಶಃ ಯಡಿಯೂರಪ್ಪ ಇದನ್ನೆಲ್ಲ ಅರ್ಥ ಮಾಡಿಕೊಂಡಿರಲಾರರು. ಮತ್ತೆ ಮುಖ್ಯಮಂತ್ರಿಯಾಗಲು ಎಲ್ಲ ರೀತಿಯ ಯತ್ನಗಳನ್ನು ನಡೆಸುತ್ತಿರುವ ಅವರಿಗೆ ಇಂತಹ ಸೂಕ್ಷ್ಮಗಳೂ ಅರ್ಥವಾಗಿರಲಾರದು. ನಾನು ಈ ಮೊದಲು ಹೇಳಿದಂತೆ ಯಡಿಯೂರಪ್ಪ ಮನೆಯ ಅಂಗಳದಲ್ಲಿ ಕಕ್ಕಸು ಉಚ್ಚೆ ಮಾಡಿಕೊಂಡು ಅದರ ಜೊತೆ ಆಟವಾಡುತ್ತಿರುವ ಮಗು. ಹಠ ಮಾಡುವುದು ಅದರ ಗುಣ. ಆದರೆ ಈ ಮಗು ಒಳ್ಳೆಯ ಮಗುವಲ್ಲ. ಕೆಟ್ಟ ಮಗು. ಈ ಕೆಟ್ಟ ಮಗು ಮಾಡಬಾರದ್ದನ್ನೆಲ್ಲ ಮಾಡಿ, ಹೊಲಸಿನಲ್ಲೇ ಹೊರಳಾಡುತ್ತ ತಪ್ಪಾಳೆ ತಟ್ಟುತ್ತಿದೆ. ಅದಕ್ಕೆ ನಾವು ಹೇಳಬಹುದ್ದಾದ್ದೆಂದರೆ ತಟ್ಟು ತಪ್ಪಾಳೆ ಕೆಟ್ಟ ಮಗು.....!

Sunday, March 4, 2012

ಮಾಧ್ಯಮ ವರ್ಸೆಸ್ ವಕೀಲರು; ಇದಕ್ಕೆಲ್ಲ ಯಾರು ಹೊಣೆ ?





ಇಂದು ಬೆಳಿಗ್ಗೆ ದೂರವಾಣಿಯ ಮೂಲಕ ಮಾತನಾಡಿದ ಪತ್ರಕರ್ತ ಮಿತ್ರರೊಬ್ಬರು ಹೇಳಿದರು;
ನಾವು ಸಹ ಕೋರ್ಟ್ ಬೀಟ್ ಮಾಡಿದ್ದೇವೆ. ಆದರೆ ಎಂದೂ ಸಹ ಗಲಾಟೆಯಾಗಿಲ್ಲ. ಕೆಲವೊಮ್ಮೆ ಸಣ್ಣದಾಗಿ ಬೇಸರವಾದಾಗ ವಕೀಲರ ಸಂಘದ ಅಧ್ಯಕ್ಷರ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದೇವೆ. ಆದರೆ ಇಂದು ಯಾಕೆ ಹೀಗೆ ಆಗುತ್ತಿದೆ ?
ಅವರ ಈ ಪ್ರಶ್ನೆಗೆ ತಕ್ಷಣ ನನಗೆ ಅನ್ನಿಸಿದ್ದು ಹೌದು ಎಂದು ಆಗದಿದ್ದುದು ಇಂದು ಯಾಕೆ ಆಗುತ್ತಿದೆ ?
ನನಗೆ ಅನ್ನಿಸುವ ಹಾಗೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಇಡೀ ಸಮಾಜದಲ್ಲಿ ಅದರಲ್ಲೂ ಮುಖ್ಯವಾಗಿ ಪತ್ರಿಕೋದ್ಯಮ ಮತ್ತು ವಕೀಲ ವೃತ್ತಿಯಲ್ಲಿ ಅದ ಆಗುತ್ತಿರುವ ಬದಲಾವಣೆಯನ್ನು ಗಮನಿಸಬೇಕಾಗುತ್ತದೆ. ಅದು ಒಟ್ಟಾರೆಯಾಗಿ ಈ ವೃತ್ತಿಗಳ ಸ್ವರೂಪ ಮತ್ತು ಮೌಲ್ಯ ನಂಬಿಕೆಗಳಲ್ಲಿ ಆದ ಬದಲಾವಣೆ.
ಒಂದು ವೃತ್ತಿ ಅಂದ ತಕ್ಷಣ ಒಂದು ಸಿದ್ಧಾಂತದ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಈ ಸಿದ್ಧಾಂತಕ್ಕೆ ಮೌಲ್ಯದ ತಳಹದಿ ಇರಬೇಕು. ಒಬ್ಬ ವ್ಯಾಪಾರಿ ಕೂಡ ವ್ಯಾಪಾರ ನಡೆಸುವಾಗ ತಾನು ಹೀಗೆ ನಡೆದುಕೊಳ್ಳಬೇಕು ಮತ್ತು ಹೀಗೆ ನಡೆದುಕೊಳ್ಳಬಾರದು ಎಂದು ತನ್ನದೇ ಅದ ಲಕ್ಷ್ಮಣ ರೇಖೆಯನ್ನು ಹಾಕಿ ಕೊಳ್ಳುತ್ತಾನೆ. ಈ ಲಕ್ಷ್ಮಣ ರೇಖೆ ಒಟ್ಟಾರೆಯಾಗಿ ಅವನ ವ್ಯಾಪಾರವನ್ನು ವೃದ್ಧಿಸುವುದರ ಜೊತೆಗೆ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಒಳಗೊಂಡಿರುತ್ತದೆ. ಅಂದರೆ ತನ್ನ ವ್ಯಾಪಾರವನ್ನು ಹೆಚ್ಚಿಸಿಕೊಂಡು ಲಾಭ ಮಾಡುವುದರ ಜೊತೆಗೆ ಆತನಿಗೆ ತನ್ನ ಗಿರಾಕಿಗಳಿಗೆ ಹೆಚ್ಚಿನ ಮೋಸವಾಗಕೂಡದು ಎಂಬ ನಂಬಿಕೆ ಕೂಡ ಇರಬೇಕು. ಈ ಎಲ್ಲ ಅಂಶಗಳನ್ನು ಒಳಗೊಂಡ ತನ್ನದೇ ಆದ ವ್ಯಾಪಾರಿ ಧರ್ಮವನ್ನು ಅವನು ರೂಢಿಸಿಕೊಂಡಿರುತ್ತಾನೆ. ಈ ವ್ಯಾಪಾರಿ ಧರ್ಮದಲ್ಲಿ ಲಾಭದ ಜೊತೆ ಸಮಾಜದ ಹಿತದ ಅಂಶ ಕೂಡ ಇರಲೇಬೇಕು. ಅದಿಲ್ಲದಿದ್ದರೆ ವ್ಯಾಪಾರಿಯ ಮನಸ್ಸು ಧ್ರೋಹ ಚಿಂತನೆಯ ಅಂಗಳವಾಗಿ ಬಿಡುತ್ತದೆ. ಅಂದರೆ ವ್ಯಾಪಾರ ಕೂಡ ಬಹುಜನ ಹಿತದ ಸಾಮಾನ್ಯ ತಳಹದಿಯನ್ನು ಹೊಂದಿರಬೇಕು.
ಈಗ ನಾವು ಪತ್ರಿಕೋದ್ಯಮ ಮತ್ತು ವಕೀಲೀ ವೃತ್ತಿಯ ಬಗ್ಗೆ ಮಾತನಾಡೋಣ. ಈ ಎರಡೂ ವೃತ್ತಿಗಳಿಗೆ ಸಮಾಜದಲ್ಲಿ ಅತಿ ಉಚ್ಛವಾದ ಸ್ಥಾನ ಮಾನಗಳಿವೆ. ಸಾಮಾನ್ಯ ಮನುಷ್ಯನೊಬ್ಬ ಪತ್ರಕರ್ತರಿಗೆ ಮತ್ತು ವಕೀಲರಿಗೆ ಹೆಚ್ಚಿನ ಗೌರವವನ್ನು ಕೊಡುತ್ತಾನೆ. ಒಬ್ಬ ವ್ಯಾಪಾರಿಗಿಂತ ವಕೀಲರು ಮತ್ತು ಮಾಧ್ಯಮದವರಿಗೆ ಹೆಚ್ಚಿನ ಗೌರವವಿದೆ.
ನಾವೆಲ್ಲ ನೆನಪಿಸಿಕೊಳ್ಳಲೇ ಬೇಕಾದ ಮಹಾತ್ಮಾ ಗಾಂಧಿ ವಕೀಲರೂ ಆಗಿದ್ದರು. ಪತ್ರಕರ್ತರೂ ಅಗಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ ವಕೀಲೀ ವೃತ್ತಿಯನ್ನು ಮಾಡಿದವರು. ರಾಜ್ಯದ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ ಕಡಿದಾಳ ಮಂಜಪ್ಪ ಮುಖ್ಯಮಂತ್ರಿ ಸ್ಥಾನ ಹೋದ ಮೇಲೆ ಕರೀ ಕೋಟು ಹಾಕಿಕೊಂಡು ವಕೀಲಿ ವೃತ್ತಿಯನ್ನು ಮುಂದುವರಿಸಿದ್ದರು. ಹಲವು ಮಂತ್ರಿಗಳಲ್ಲಿ ಮನೆಗೆ ಕಳುಹಿಸಿದ ಏ. ಕೆ. ಸುಬ್ಬಯ್ಯ ಈಗಲೂ ವಕೀಲೀ ವೃತ್ತಿಯನ್ನು ಮಾಡುತ್ತಾರೆ.
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಹಲವಾರು ನಾಯಕರು ವಕೀಲಿ ವೃತ್ತಿಯನ್ನು ಮಾಡಿ ನಂತರ ಚಳವಳಿಗೆ ದುಮುಖಿದವರು. ಹಾಗೆ ಸ್ವಾತಂತ್ರ್ಯಾ ನಂತರ ಬಹಳಷ್ಟು ನಾಯಕರು ವಕೀಲರಾಗಿ ನಂತರ ರಾಜಕಾರಣಕ್ಕೆ ಇಳಿದು ಯಶಸ್ವಿಯಾಗಿದ್ದಾರೆ. ಹಾಗೆ ಪತ್ರ ಕರ್ತರಾಗಿಯೂ ಕೆಲಸ ಮಾಡಿದ್ದಾರೆ. ವಕೀಲೀ ವೃತ್ತಿ ಮತ್ತು ಪತ್ರಿಕೋದ್ಯಮ ಎರಡೂ ಸಹ ಸಾಮಾನ್ಯ ಜನರ ಜೊತೆ ನೇರವಗಿ ಸಂವಹನ ಮಾಡುವ ಅವರ ಜೊತೆ ಸದಾ ಮುಖಾಮುಖಿಯಾಗುವ ವೃತ್ತಿಗಳೇ ಅಗಿವೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಎರಡೂ ವೃತ್ತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪತ್ರಕರ್ತರು ಸಾಮಾಜಿಕ ಬದ್ಧತೆಯ ಪ್ರಶ್ನೆಯನ್ನು ಮರೆಯುತ್ತಿದ್ದಾರೆ. ಮಾಧ್ಯಮ ಕೂಡ ವ್ಯಾಪಾರವಗಿ ಮಧ್ಯವರ್ತಿಗಳು ವಿಜೃಂಭಿಸತೊಡಗಿದ್ದಾರೆ. ಹಾಗೆ ವಕೀಲಿ ವೃತ್ತಿ ಕೂಡ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಂಡಿದೆ. ರಾಜಕಾರಣಕ್ಕೆ ಇಳಿಯಬಯಸುವವರು ಯಾವುದೇ ಬದ್ಧತೆ ಇಲ್ಲದೆ ಎಲ್ ಎಲ್ ಬಿ ಮಾಡಿ ಕರಿ ಕೋಟು ಹಾಕಿಕೊಂಡು ಓಡಾಡ ತೊಡಗಿದ್ದಾರೆ. ಬಹಳಷ್ಟು ವಕೀಲರು ಎಂದೂ ನ್ಯಾಯಾಧೀಶರ ಎದುರು ವಾದವನ್ನು ಮಾಡಿದವರಲ್ಲ. ಅವರು ಕೋರ್ಟಿನ ಅಂಗಳದಲ್ಲಿ ಓಡಾಡಿಕೊಂಡು ವ್ಯಾಪಾರಿಯಾಗಿ ಕೆಲಸ ಮಾಡುತ್ತಾರೆ. ರಾಜಕಾರಣಕ್ಕೆ ವಕೀಲಿ ವೃತ್ತಿ ಸೋಪಾನವಾಗಿತ್ತು. ವಕೀಲರಾದವರು ಜನ ಸಾಮಾನ್ಯರ ನೋವುಗಳಿಗೆ ಸ್ಪಂದಿಸುವವರು ಮಾತ್ರವಲ್ಲ, ನ್ಯಾಯವನ್ನು ಕೊಡಿಸುವ ಪವಿತ್ರ ವೃತ್ತಿ. ಆದರೆ ಇಂದು ವಕೀಲಿ ವೃತ್ತಿ ಅಂತಹ ಪಾವಿತ್ರ್ಯವನ್ನು ಉಳಿಸಿಕೊಂಡಿದೆ ಎಂದು ಹೇಳುವುದು ಕಷ್ಟ. ಅದಕ್ಕೆ ಬಹು ಮುಖ್ಯವಾದ ಕಾರಣ ನೈತಿಕತೆಯ ಪ್ರಶ್ನೆ ಈ ವೃತ್ತಿಯಲ್ಲಿ ಮೊದಲಿನಷ್ಟು ಮುಖ್ಯವಾಗದೇ ಇರುವುದು ಎಂದು ಅನ್ನಿಸುತ್ತದೆ.
ಇದೇ ಮಾತನ್ನು ಪತ್ರಿಕೋದ್ಯಮದ ಕುರಿತೂ ಹೇಳಬಹುದು. ಹಾಗೆ ರಾಜಕಾರಣ ಕೂಡ. ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ಕಂಡುಕೊಳ್ಳಲು, ಪತ್ರಿಕೋದ್ಯಮ, ವಕೀಲೀ ವೃತ್ತಿ ಮತ್ತು ರಾಜಕಾರಣದ ನಡುವಿನ ಸೂಕ್ಷ್ಮ ಸಂಬಂಧವನ್ನು ಅವಲೋಕಿಸಬೇಕು. ಈ ಮೂರು ವೃತ್ತಿಗಳೂ ಆಂತರಿಕವಾದ ಮತ್ತು ಬಾಹ್ಯವಾದ ಸಂಬಂಧವನ್ನು ಹೊಂದಿವೆ. ಒಂದು ರೀತಿಯಲ್ಲಿ ಅಂತರಿಕ ಅವಲಂಬನೆ ಇವುಗಳ ನಡುವೆ ಇದೆ. ಜೊತೆಗೆ ಒಂದು ವೃತ್ತಿ ಇನ್ನೊಂದು ವೃತ್ತಿಯ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತಲೇ ಇವೆ. ರಾಜಕಾರಣಿಗಳು, ಪತ್ರಿಕೋದ್ಯಮಿಗಳು ಮತ್ತು ವಕೀಲರು ದಿನ ನಿತ್ಯದ ಒಡನಾಡಿಗಳು. ಪತ್ರಿಕೋದ್ಯಮಿ ರಾಜಕಾರಣವನ್ನು ದೂರದಿಂದ ನಿಂತು ನೋಡುವ ಸಾಕ್ಷಿ ಪ್ರಜ್ನೆ. ವಕೀಲ ವೃತ್ತಿಯಲ್ಲಿರುವವರು ರಾಜಕೀಯ ಮಹತ್ವಾಕಾಂಕ್ಷೆಯ ಜೊತೆಗೆ ರಾಜಕಾರಣಿಗಳ ರಕ್ಷಕರಾಗಿ ಕೆಲಸ ಮಾಡುವವರು. ರಾಜಕಾರಣಿಗಳಿಗೆ ತಮ್ಮ ಮಾತುಗಳನ್ನು ಜನರಿಗೆ ತಲುಪಿಸಲು, ತಮ್ಮ ಸತ್ಯ ಮತ್ತು ಸುಳ್ಳುಗಳನ್ನು ಪರಿಣಾಮಕಾರಿಯಾಗಿ ಹೇಳಲು ಮಾಧ್ಯಮ ಬೇಕು. ಹಾಗೆ ಅವರ ಸುಳ್ಳುಗಳನ್ನು ಮರೆಮಾಚಲು ತಮ್ಮ ಕೃತ್ಯವನ್ನು ನ್ಯಾಯಬದ್ಧಗೊಳಿಸಲು ವಕೀಲರು ಬೇಕು. ವಕೀಲರಿಗೆ ತಮ್ಮ ಮೇಲೆ ರಾಜಕಾರಣಿಗಳು ಅವಲಂಬಿಸಿದ್ದಾರೆ ಎಂಬುದು ಅಹಂ ಅನ್ನು ಜಾಗ್ರತಗೊಳಿಸುತ್ತಲೇ ಇರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಪತ್ರಿಕೋದ್ಯಮ ಕೂಡ ರಾಜಕಾರಣಿಗಳ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ನಿಯಂತ್ರಣಕ್ಕೆ ಒಳಗಾಗಿದೆ. ರಾಜಕಾರಣಿಗಳು ಮಾಧ್ಯಮದ ಮಾಲೀಕರಾಗುತ್ತಿದ್ದಾರೆ. ಈ ಮೂಲಕ ಪತ್ರಿಕೋದ್ಯಮದ ಮೇಲೆ ನಿಯಂತ್ರಣ ಸಾಧಿಸಲು ರಾಜಕಾರಣ ಯತ್ನ ನಡೆಸುತ್ತಿದೆ. ಹಾಗೆ ಪತ್ರಿಕೋದ್ಯಮಿಗಳಲ್ಲಿ ಅಧ್ಯಯನ ಮತ್ತು ನಿಷ್ಟೆಯ ಕೊರತೆ ಎದ್ದು ಕಾಣುತ್ತಿದೆ. ತಾರತಮ್ಯ ಜ್ನಾನ ಕಡಿಮೆಯಾಗುತ್ತಿದೆ. ಜೊತೆಗೆ ಪತ್ರಿಕೋದ್ಯಮಿಯಾದವನು ಪದ್ಮ ಪತ್ರದ ಮೇಲಿನ ಜಲ ಬಿಂಧುವಿನಂತೆ ಯಾವುದಕ್ಕೂ ಅಂಟಿಕೊಳ್ಳದೇ, ಕೆಲಸ ಮಾಡುವ ಸ್ಥಿತಿ ಇಲ್ಲ.
ಇಂತಹ ಸ್ಥಿತಿಯಲ್ಲಿ ಅರಾಜಕತೆ ಉಂಟಾಗುವುದು ತುಂಬಾ ಸಹಜ. ಇಂತಹ ಅರಾಜಕತೆಯಿಂದಲೇ ಕಳೆದ ವಾರ ಕೋರ್ಟ್ ಆವರಣದಲ್ಲಿ ನಡೆದಂತಹ ಅಹಿತಕರ ಘಟನೆಗಳು ನಡೆಯುತ್ತವೆ. ಬದ್ಧತೆ, ಶಿಸ್ತು ಇಲ್ಲದ ವಾತಾವರಣದಲ್ಲಿ ಕಲ್ಲುಗಳು ಹಾರಾಡುತ್ತವೆ. ಕುರ್ಚಿಗಳು ಮೇಲಿನಿಂದ ಪೊಲೀಸರ ತಲೆಯ ಮೇಲೆ ಬೀಳುತ್ತವೆ. ಅಧಿಕಾರಸ್ಥರ ಅಣತಿಯಂತೆ ನಡೆಯುವ ಪೊಲೀಸರು ಷಡ್ಯಂತ್ರಗಳ ರೂಪಗೊಳ್ಳುತ್ತವೆ.ಹಾಗೆ ಮಾಧ್ಯಮ ತನ್ನ ನೈತಿಕತೆಯ ಮೂಲ ಸಿದ್ಧಾಂತವನ್ನು ಮರೆತು ವ್ಯಕ್ತಿಗತ ರಾಜಕಾರಣದ ಅಂಗಳವಾಗುತ್ತದೆ.
ಈಗ ಮತ್ತೆ ಕೋರ್ಟ್ ಆವರಣದಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ಮಾತನಾಡೋಣ. ಈ ಘಟನೆಯಲ್ಲಿ ಪಾಲುದಾರರಾದವರು ಹೊರಗಿನಿಂದ ಬಂದವರು ಎಂದು ವಕೀಲರ ಸಂಘದ ಅಧ್ಯಕ್ಷ ಸುಬ್ಬಾ ರೆಡ್ಡಿ ವಾದಿಸುತ್ತಾರೆ. ಹಾಗಿದ್ದರೆ ಅವರನ್ನು ಗುರುತಿಸಿ ಕ್ರಮ ಕೈಗೊಳ್ಳುವ ಕೆಲಸವನ್ನು ವಕೀಲರ ಸಂಘ ಯಾಕೆ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಹಾಗೆ ವಕೀಲಿ ವೃತ್ತಿ ಮಾಡುವವರು ಈ ದೇಶದ ಸಂವಿಧಾನ, ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನಂಬಿಕೆಯನ್ನು ಇಟ್ಟುಕೊಂಡಿರಬೇಕು. ನಮಗಾದ ಎಲ್ಲ ಅನ್ಯಾಯಗಳಲ್ಲಿ, ಅದು ಮಾಧ್ಯಮ ಮಾಡಿದೆ ಎಂದು ಹೇಳಲಾದ ಅನ್ಯಾಯವೂ ಸೇರಿದಂತೆ ನ್ಯಾಯವನ್ನು ಒದಗಿಸುವ ಹೊಣೆ ನ್ಯಾಯಾಂಗಕ್ಕೆ ಇದೆ. ಹಾಗೆ ನಮ್ಮ ಅನ್ಯಾಯವನ್ನು ನಾವು ನ್ಯಾಯಾಂಗ ವ್ಯವಸ್ಥೆಯ ಗಮನಕ್ಕೆ ತರಬೇಕು. ಅಲ್ಲಿ ಪರಿಹಾರವನ್ನು ಪಡೆದುಕೊಳ್ಳಬೇಕು. ಆದರೆ ಕೆಲವು ವಕೀಲ ಮಿತ್ರರು ತಮಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ ಎನ್ನುವುದನ್ನು ಹಲವು ಬಾರಿ ಸಾಬೀತು ಪಡಿಸಿದ್ದಾರೆ. ಪೊಲಿಸನೊಬ್ಬ ಲೈಸೆನ್ಸ್ ಇಲ್ಲದೇ ದ್ವಿಚಕ್ರ ವಾಹನ ಓಡಿಸಿದ ಪ್ರಕರಣದಲ್ಲಿ ಒಂದು ದಿನ ಬೆಂಗಳೂರಿನ ಸಾಮಾನ್ಯ ಜನರಿಗೆ ಬದುಕು ನರಕವಾಗುವಂತೆ ಮಾಡಿದವರು ಇದೇ ವಕೀಲರಲ್ಲವೆ ? ಯಾಕೆ ಇಂತಹ ಪ್ರಕರಣಗಳನ್ನು ಅವರು ನ್ಯಾಯಾಸ್ಥಾನದ ಮುಂದೆ ಒಯ್ಯುವುದಿಲ್ಲ ? ಇದಕ್ಕೆ ಬದಲಾಗಿ ರಸ್ತೆಗೆ ಇಳಿಯುವುದು ಯಾಕೆ ? ಇವರಿಗೆ ದೇಶದ ನ್ಯಾಯ ವ್ಯವಸ್ಥೆಯ ಬಗ್ಗೆ ನಂಬಿಕೆ ಇಲ್ಲವೆ ? ಒಂದೊಮ್ಮೆ ವಕೀಲರಿಗೆ ನ್ಯಾಯಾಲಯಗಳ ಮೇಲೆ ನಂಬಿಕೆ ಇಲ್ಲ ಎಂದಾದರೆ ಅದಕ್ಕಿಂತ ದೊಡ್ದ ದುರಂತ ಬೇಕೆ ಇಲ್ಲ. ಒಂದೊಮ್ಮೆ ನ್ಯಾಯಾಲಯಗಳ ಬಗ್ಗೆ ನಂಬಿಕೆ ಇದ್ದೂ ಹೀಗೆ ಮಾಡುತ್ತಾರೆ ಎಂದಾದರೆ ಅವರು ಈ ವೃತ್ತಿಗೆ ಅರ್ಹರಲ್ಲ. ಜೊತೆಗೆ ಅವರು ಜನತಂತ್ರ ವ್ಯವಸ್ಥೆಯ ವಿರೋಧಿಗಳೂ ಆಗುತ್ತಾರೆ. ಈ ಎರಡು ಸಾಧ್ಯತೆಗಳಲ್ಲಿ ಯಾವುದು ಸರಿ ಎಂಬುದನ್ನು ವಕೀಲರ ಸಂಘದ ಅಧ್ಯಕ್ಷರೇ ಹೇಳಬೇಕು.
ಈ ಘಟನೆಯಲ್ಲಿ ತಪ್ಪು ಯಾರದು ಎಂಬುದನ್ನು ನಾನು ಹೇಳುವುದಿಲ್ಲ. ಯಾಕೆಂದರೆ ನನಗೆ ತಪ್ಪು ಯಾರದು ಎಂಬುದು ತಿಳಿದಿಲ್ಲ. ಇಡೀ ಘಟನೆಯನ್ನು ನಾನು ಮಾಧ್ಯಮದ ಮೂಲಕವೇ ತಿಳಿದುಕೊಂಡಿದ್ದೇನೆ. ಹೀಗಾಗಿ ಘಟನೆಗೆ ಇನ್ನೊಂದು ಮುಖವೂ ಇರಬಹುದು ಮತ್ತು ಇರುತ್ತದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇದನ್ನು ಗಮನಿಸಿ ಮಾಧ್ಯಮದಿಂದ ಆಗಿರುವ ಆಗುತ್ತಿರುವ ತಪ್ಪುಗಳನ್ನು ಸಮರ್ಥಿಸಿಕೊಳ್ಳಲು ನಾನು ಹೋಗುವುದಿಲ್ಲ. ಅದು ಸರಿಯಾದ ಕ್ರಮ ಕೂಡ ಅಲ್ಲ. ಮಾಧ್ಯಮದವರ ಅತಿಯಾದ ಪ್ರತಿಕ್ರಿಯೆ ರಸ್ತೆಗಿಳಿದು ನಡೆಸುತ್ತಿರುವ ಪ್ರತಿಭಟನೆಯನ್ನು ಸಂಪೂರ್ಣವಗಿ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಮಾಧ್ಯಮ ಕೂಡ ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚು ಹೊಣೆಗಾರಿಕೆಯಿಂದ ವರ್ತಿಸಬೇಕಾಗಿತ್ತು. ಘಟನೆಯನ್ನು ಅತಿ ರಂಜಿತವಾಗಿ ವರದಿ ಮಾಡಿದ ಹಲವು ಉದಾಹರಣೆಗಳೂ ಇದ್ದು ಅದು ಬೇಜವಾಬ್ದಾರಿಯ ವರ್ತನೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಘಟನೆಯಲ್ಲಿ ಪೊಲೀಸನೊಬ್ಬ ಅಸು ನೀಗಿದ ಎಂದು ವರದಿ ಮಾಡಿದ್ದಕ್ಕೆ ಮಾಧ್ಯಮದವರಾದ ನಾವೆಲ್ಲ ಕ್ಶಮೆ ಕೇಳಲೇ ಬೇಕು.
ನಮ್ಮ ನಮ್ಮ ತಪ್ಪುಗಳನ್ನು ನಾವು ಒಪ್ಪಿಕೊಂಡರೆ ನಾವು ಸಣ್ಣವರಾಗುವುದಿಲ್ಲ. ತಪ್ಪುಗಳನ್ನು ಒಪ್ಪಿಕೊಳ್ಳುವ ಮೂಲಕ ನಾವು ದೊಡ್ಡವರಾಗುತ್ತೇವೆ. ನಮ್ಮ ವೃತ್ತಿಗೆ ಜೊತೆಗೆ ನಮ್ಮ ಬದುಕಿಗೆ ನಾವು ನ್ಯಾಯವನ್ನು ಒದಗಿಸುತ್ತೇವೆ. ಆದರೆ ಅಕ್ಷರ ಅಹಂಕಾರದ ಪತ್ರಕರ್ತರು, ಧಿರಸಿನ ಅಹಂಕಾರ ವಕೀಲರು ತಮ್ಮ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ತಪ್ಪುಗಳನ್ನು ಒಪ್ಪಿಕೊಳ್ಳಲು ಇಬ್ಬರಿಗೂ ಅಹಂ ಅಡ್ಡಿಯಾಗುತ್ತಿದೆ. ಆದರೆ ತಮ್ಮ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದವರು ಮತ್ತೊಂದು ತಪ್ಪನ್ನು ಮಾಡುತ್ತಾರೆ ಎಂಬುದು ನಿಜ. ಹೀಗೆ ಒಂದು ತಪ್ಪು ಇನ್ನೊಂದು ತಪ್ಪನ್ನು ಸರಿ ಮಾಡುವುದಿಲ್ಲ. ಇದನ್ನು ವಕೀಲರೂ ಅರ್ಥ ಮಾಡಿಕೊಳ್ಳಬೇಕು, ಪತ್ರಕರ್ತರೂ ಅರ್ಥ ಮಾಡಿಕೊಳ್ಳಬೇಕು.
ಇವತ್ತಿನ ಬಹುಮುಖ್ಯವಾದ ಸಮಸ್ಯೆ ಎಂದರೆ ರಾಜಕಾರಣ ನ್ಯಾಯಾಂಗ ಮತ್ತು ಮಾಧ್ಯಮ ರಂಗಗಳ ಅಹಂ. ಯಾರೂ ಸೋಲಲು ಸಿದ್ಧರಿಲ್ಲ. ಈ ಮೂರು ಅಂಗಗಳು ಪರಸ್ಪರ ಮೇಲಾಟ ನಡೆಸುತ್ತಿವೆ. ಮತ್ತು ತಮ್ಮ ತಮ್ಮ ಹಿತಾಸಕ್ತಿಗಾಗಿ ಇನ್ನೊಂದು ಅಂಗವನ್ನು ಬಳಸಿಕೊಂಡು ಷಡ್ಯಂತ್ರ ರೂಪಿಸುತ್ತಿವೆ. ಯಶಸ್ಸು ಹಣ ಮತ್ತು ಅಧಿಕಾರ ಮುಖ್ಯವಾದಾಗ ಮೌಲ್ಯಗಳು ಪಾತಾಳಕ್ಕೆ ಕುಸಿಯುತ್ತವೆ. ಸಾಮಾನ್ಯ ಮನುಷ್ಯ ಇದಕ್ಕೆ ಬಲಿ ಪಶು ಆಗುತ್ತಾನೆ. ಈಗ ಆಗುತ್ತಿರುವುದು ಅದೇ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...