Monday, August 13, 2012

ಗಾಂಧಿ, ಹಜಾರೆ ಮತ್ತು ತಲೆಯ ಮೇಲಿನ ಟೋಪಿ......!

ಮೋಹನ ದಾಸ್ ಕರಮಚಂದ್ ಗಾಂಧಿ. ಈ ಹೆಸರು ಈಗ ಅಷ್ಟು ಪ್ರಚಾರದಲ್ಲಿ ಇರುವ ಹೆಸರಲ್ಲ. ಇಂದಿನ ಯುವ ಜನಾಂಗಕ್ಕೆ ಗಾಂಧಿ ಎಂಬ ಹೆಸರು ಅಂಥ ಪ್ರಭಾವ ಬೀರುತ್ತದೆ ಎಂಬ ಭ್ರಮೆ ಕೂಡ ನನಗಿಲ್ಲ. ನಾನು ಚಾನಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ಅಕ್ಟೋಬರ್ 2 ರಂದು ಎಲ್ಲ ಕಾಲೇಜುಗಳಿಗೆ ನಮ್ಮ ಹುಡುಗರನ್ನು ಕಳುಹಿಸಿ ಗಾಂಧಿ ನಿಮಗೆ ಗೊತ್ತಾ ಎಂದು ಪ್ರಶ್ನೆ ಕೇಳುವಂತೆ ಸೂಚಿಸಿದ್ದೆ. ನಮ್ಮ ಹುಡುಗರು ಸಂದರ್ಶಿಸಿದ ಪ್ರತಿ ಶತ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೋನಿಯಾ ಗಾಂಧಿಯಿಂದ ಪೂಜಾ ಗಾಂಧಿಯವರೆಗೆ ತಮಗೆ ಗೊತ್ತಿದ್ದ ಎಲ್ಕ ಡುಪ್ಲಿಕೇಟ್ ಗಾಂಧಿಗಳ ಹೆಸರು ಹೇಳಿದ್ದರು ! ಆದರೆ ಮೋಹನದಾಸ್ ಕರಮಚಂದ್ ಗಾಂಧಿಯ ಹೆಸರು ಹೇಳಿದವರು ಕೆಲವೇ ಕೆಲವರು. ಇದರಿಂದ ನನಗೆ ಆಗ ಆಶ್ಚರ್ಯವಾಗಿರಲಿಲ್ಲ. ಮನಸ್ಸಿನ ಮೂಲೆಯಲ್ಲಿ ಸಣ್ಣ ನೋವು, ವೇದನೆ ಉಂಟಾಗಿತ್ತು.
ಈಗ ನಾನು ಮತ್ತೆ ಅದ್ಸೇ ಹಳೆಯ ಪ್ರಶ್ನೆಯನ್ನು ಮತ್ತೆ ಕೇಳುವ ಸಾಹಸ ಮಾಡುವುದಿಲ್ಲ. ಯಾಕೆಂದರೆ ಮಹಾತ್ಮಾ ಗಾಂಧಿ ರಸ್ತೆ ಎನ್ನುವುದೇ ಎಂ.ಜಿ. ರಸ್ತೆಯಾದ ಕಾಲ ಇದು. ಇದನ್ನು ನಾನು ಮರೆಯುವಿಕೆ ಮತ್ತು ಬದಲಾವಣೆಯ  ಪರಿ ಎಂದು ಭಾವಿಸುತ್ತೇನೆ.
ಇದು ಒಂದು ರೀತಿಯ ವಿಸ್ಮೃತಿ. ಎಲ್ಲ ಕಾಲಘಟ್ಟದಲ್ಲಿಯೂ ಸ್ದಮಾಜ ಇಂತಹ ವಿಸ್ಮೃತಿಗೆ ಒಳಗಾಗುತ್ತದೆ. ಇತಿಹಾಸ ಎನ್ನುವುದು ಕಾಲಕ್ಕೆ ಸಂಬಂಧಿಸಿರುವುದರಿಂದ ಅದು ಪ್ರತಿ ಕ್ಷಣದಲ್ಲೂ ಸೃಷ್ಟಿಯಾಗುತ್ತಲೇ ಇರುತ್ತದೆ, ಇತಿಹಾಸದ ಸಮಾಧಿಯ ಮೇಲೆ ಹೊಸ ಇತಿಹಾಸ ಸೃಷ್ಟಿಯಾಗುತ್ತದೆ. ಹಾಗೆ ಇತಿಹಾಸ ನಮಗೆ ಪಾಠ ಹೇಳುತ್ತ ವರ್ತಮಾನವನ್ನು ಹೆಚ್ಚು ಅರ್ಥಪೂರ್ಣವಾಗಿ ಮಾಡಲು ಶ್ರಮಿಸುತ್ತಿರುತ್ತದೆ. ಹಾಗೆ ಇತಿಹಾಸ ಹೊಸ ಅಂಗಿ ಧರಿಸಿ ವರ್ತಮಾನದಲ್ಲಿ ಪ್ರಕಟವಾಗುವ ರೀತಿ ಕೂಡ ಕುತೂಹಲಕರ. ಇತಿಹಾಸವನ್ನು ನಾವು ಬಾಷೆಯ ಮೂಲಕ ಅರ್ಥ ಮಾಡಿಕೊಳ್ಳಲು ಯತ್ನಿಸಿದರೂ ಅಕ್ಷರಗಳನ್ನು ಮೀರಿದ ಸಂಕೇತಗಳು ಅದರೊಳಗೆ ಅವಿತಿರುತ್ತವೆ. ಇತಿಹಾಸ ನಮಗೆ ಸಂಪೂರ್ಣವಾಗಿ ಅರ್ಥವಾಗುವುದು ಈ ಸಂಕೇತಗಳ ಒಗಟನ್ನು ಬಿಡಿಸಲು ನಮಗೆ ಸಾಧ್ಯವಾದಾಗ ಮಾತ್ರ. ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ ಇತಿಹಾಸ ಎನ್ನುವುದು ಯಾರೋ ದಾಖಲೆ ಮಾಡಿದ ಘಟನೆಗಳ ಅಕ್ಷರ ರೂಪ ಮಾತ್ರ ಆಗಿರುವುದಿಲ್ಲ. ಈ ಅಕ್ಷರಗಳು ಒಂದಾಗಿ ಹೊರಬಂದ ಶಬ್ದ ಮತ್ತು ಶಬ್ದದೊಳಗೆ ಇರುವ ಸಂಕೇತಗಳು ಬಹಳ ಮುಖ್ಯ.
ನನಗೆ ಮಹಾತ್ಮಾ ಗಾಂಧಿ ಗೊತ್ತಾಗುವುದಕ್ಕೆ ಮೊದಲು ಗಾಂಧಿ ಟೋಪಿ ಗೊತ್ತಿತ್ತು. ನನ್ನ ಅಪ್ಪ ಮತ್ತು ಅಜ್ಜ ಎಲ್ಲಿಗೆ ಹೋಗುವುದಿದ್ದರೂ ತಲೆಯ ಮೇಲೆ ಗಾಂಧಿ ಟೋಪಿ ಇಲ್ಲದೇ ಹೋಗುತ್ತಿರಲಿಲ್ಲ. ಮನೆಯಲ್ಲಿ ಅವರು ಇರುವಾಗ ಟೋಪಿ ಮನೆಯ ಒಳಗಿನ ಗಿಳಿ ಗೂಟದ ಮೇಲೆ ನೇತಾಡುತ್ತಿತ್ತು. ಹೀಗಾಗಿ ಗಿಳಿ ಗೂಟದ ಮೇಲೆ ಟೋಪಿ ಇದ್ದರೆ ಅಪ್ಪ ಅಜ್ಜ ಮನೆಯಲ್ಲಿ ಇದ್ದಾರೆ ಎಂಬುದು ನಮಗೆ ಸ್ಪಷ್ತವಾಗುತ್ತಿತ್ತು.  ಅಜ್ಜ ಮತ್ತು ಅಪ್ಪನ ಟೋಪಿಗೆ ನಮ್ಮ ಮನೆಯಲ್ಲಿ ಗಾಂಧಿ ಟೋಪಿ ಎಂದು ಕರೆಯುತ್ತಿರಲಿಲ್ಲ. ಅದು ಬರೀ ಟೋಪಿ. ಇದಕ್ಕೆ ಬಹು ಮುಖ್ಯ ಕಾರಣ ಸ್ವಾತಂತ್ಯ್ರ ಹೋರಾಟಗಾರನಾಗಿದ್ದ ನನ್ನ ಅಜ್ಜನಿಗೆ ಗಾಂಧಿಯ ಬಗ್ಗೆ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಆತ ಗಾಂದ್ಘಿಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿರಲಿಲ್ಲ. ಮಹಾನ ಜಗಳ ಗಂಟನಾಗಿದ್ದ ಅಜ್ಜನಿಗೆ ಸುಭಾಷಚಂದ್ರ ಭೋಸ್ ಎಂದರೆ ಇಷ್ತವಾಗಿತ್ತು. ಜೊತೆಗೆ ಸ್ವಾತಂತ್ರ್ಯ ಹೋರಾಟದ ಸಂಪೂರ್ಣ ಕ್ರೆಡಿಟ್  ಅನ್ನು ಸಂಪೂರ್ಣವಾಗಿ ಗಾಂಧೀಜಿಗೆ ಕೊಡಲು ನನ್ನ ಅಜ್ಜ ಸಿದ್ದನಿರಲಿಲ್ಲ.  ನನ್ನ ಅಪ್ಪ ಮತ್ತು ಅಜ್ಜ ನಾವೆಲ್ಲ ದೊಡ್ಡವರಾಗುವ ಹೊತ್ತಿಗೆ ಟೊಪಿ ಹಾಕುವುದನ್ನು ನಿಲ್ಲಿಸಿದ್ದರು. ಆದರೆ ಖಾದಿಯನ್ನು ಮಾತ್ರ ಅವರು ಸಾಯುವವರೆಗೂ ಬಿಡಲಿಲ್ಲ.
ನನಗೆ ಅನ್ನಿಸುವ ಹಾಗೆ ಟೊಪಿ ಹಾಕುವುದು ಬೇರೆ ಬೇರೆ ಅರ್ಥಗಳನ್ನು ಪಡೆದು ಬಿಟ್ಟಿತ್ತು. ಯಾರಿಗಾದರೂ ಮೋಸ ಮಾಡಿದರೆ ಆತ ಟೊಪಿ ಹಾಕಿದ ಎಂಬ ನಾಣ್ನುಡಿ ಪ್ರಚಲಿತಕ್ಕೆ ಬಂದಿದ್ದರಿಂದ ಅವರು ಟೋಪಿ ಹಾಕುವುದನ್ನು ನಿಲ್ಲಿಸಿರಬಹುದು ಎಂದು ನನಗೆ ಈಗ ಅನ್ನಿಸುತ್ತದೆ.
ಅಪ್ಪ ಯಾವಾಗಲೂ ಖಾದಿ ಹಾಕುತ್ತಿದ್ದವ ಅದು ಗರಿ ಗರಿಯಾಗಿ ಇರುವಂತೆ ನೋಡಿಕೊಳ್ಲುತ್ತಿದ್ದ, ಅದಕ್ಕೆ ಅಮ್ಮ ಗಂಜಿ ಹಾಕಿ ತೊಳದ ಮೇಲೆ ದೋಬಿಯ ಹತ್ತಿರ ಇಸ್ತ್ರಿ ಹಾಕಿಸಿಯೇ ಧರಿಸುತ್ತಿದ್ದ. ಹೀಗೆ ಬಟ್ಟೆಯನ್ನು ಇಸ್ತ್ರಿಗೆ ಕೊಡುವಾಗ ಟೋಪಿಯನ್ನು ಜೊತೆಗೆ ಕಳುಹಿಸುತ್ತಿದ್ದ. ಇಸ್ತ್ರಿ ಮಾಡಿಸಿ ತಂದ ಟೊಪಿಅಯನ್ನು ಆತ ವಿಶೇಷ ಸಂದರ್ಭಗಳಲ್ಲಿ ಮಾತ್ರ ಧರಿಸತೊಡಗಿದ. ಅಷ್ಟರಲ್ಲಿ ಟೋಪಿ ಮರೆಯಾಗತೊಡಗಿತ್ತು. ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದವರು ಕಾಂಗ್ರೆಸ್ ಆಡಳಿತವನ್ನು ನೋಡೀ ಬೇಸತ್ತು ಖಾದಿಯನ್ನು ಟೋಪಿಯನ್ನು ಧ್ವೇಷಿಸಲು ಪ್ರಾರಂಭಿಸಿದ್ದರು.
ನಾನು ಬೆಂಗಳೂರಿಗೆ ಬಂದು ಪತ್ರಿಕೋದ್ಯಮಿ ಆದ ಮೇಲೆ ಊರಿಗೆ ಹೋಗುವುದು ಕಡಿಮೆಯಾಯಿತು. ಅಪರೂಪಕ್ಕೆ ಊರಿಗೆ ಹೋದರೂ ಅಪ್ಪ ಟೋಪಿ ಧರಿಸಿದ್ದನ್ನು ಮತ್ತೆ ನೋಡಲಿಲ್ಲ. ಆದರೆ ಅಜ್ಜ ಮಾತ್ರ ಸಾಯುವವರೆಗೂ ಟೋಪಿ ಧರಿಸುವುದನ್ನು ಬಿಟ್ಟರಲಿಲ್ಲ.
ನನ್ನ ವಿಚಾರಕ್ಕೆ ಬರುವುದಾದರೆ ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ವದ ದಿನದಂದು ಮಾತ್ರ ಟೋಪಿ ಧರಿಸುತ್ತಿದ್ದೆ. ಕೊನೆಗೆ ಅಪ್ಪ ಅಜ್ಜನ ಜೊತೆ ಜಗಳವಾಡಲು ಶುರು ಮಾಡಿದ ಮೇಲೆ ಟೋಪಿಯನ್ನು ವಿರೋಧಿಸತೊಡಗಿದೆ. ಯಾಕೆಂದರೆ ಟೋಪಿ ಎನ್ನುವುದು ಅಪ್ಪ ಮತ್ತು ಅಜ್ಜನನ್ನು ಸಂಕೇತಸುತ್ತಿತ್ತು. ನನಗೆ ಈ ಟೋಪಿ ಯಾವ ರೀತಿ ಕಾಡಲು ತೊಡಗಿತ್ತೆಂದರೆ, ಹೊರಗೆ ಯಾರಾದರೂ ಟೋಪಿ ಧರಿಸಿದವರು ಕಂಡರೆ ಅಪ್ಪ ಅಜ್ಜನನ್ನು ನೋಡ್ಫಿದಂತೆ ಭಾಸವಾಗುತ್ತಿತ್ತು.
ಅಪ್ಪ ಅಜ್ಜನ ನಡುವಿನ ಇನ್ನೊಂದು ವ್ಯತ್ಯಾಸ ಎಂದರೆ ಅಜ್ಜ ಎಂದೂ ಖಾದಿ ಬಟ್ಟೆಗೆ ಇಸ್ತ್ರಿ ಹಾಕಿಸುತ್ತಿರಲಿಲ್ಲ, ಅವನ ತಲೆಯ ಮೇಲಿನ ಟೋಪಿ ಕೂಡ ಇಸ್ತ್ರಿ ಇಲ್ಲದೇ ತಲೆಯ ಬೋಡಿಗೆ ಅಂಟಿಕೊಂಡು ಬಿಡುತ್ತಿತ್ತು. ಹಾಗೆ ಟೋಪಿಯ ಮುಂಭಾಗ ಕಣ್ಣ ಮೇಲಿನ ಹುಬ್ಬಿನವರೆಗೆ ಬಂದು ಮಗುಚಿ ಮಲಗಿ ಬಿಡುತ್ತಿತ್ತು. ಕೆಲವಮ್ಮೊ ಅದು ಕಣ್ಣುಗಳ ಮೇಲೆ ಬಂದು ಅದನ್ನು ಮುಚ್ಚಿದಂತೆ ಕಂಡು ಅಜ್ಜ ಬೇರೆಯವರನ್ನು ಹೇಗೆ ನೋಡುತ್ತಾನೆ ಎಂಬ ಪ್ರಶ್ನೆ ನನಗೆ ಕಾಡುತ್ತಿತ್ತು.
ಅಪ್ಪ ಮಾತ್ರ ಇಸ್ತ್ರಿ ಇಲ್ಲದೇ ಟೋಪಿಯನ್ನಾಗಲೀ, ಬಟ್ಟೆಯನ್ನಾಗಲಿ ಧರಿಸುತ್ತಿರಲಿಲ್ಲ. ಅಪ್ಪ ದಿ ಹಿಂದೂ ಪತ್ರಿಕೆಯನ್ನು ಖಾದಿ ಬಟ್ಟೆಯಷ್ಟೇ ಅಗಾಧವಾಗಿ ಪ್ರೀತಿಸುತ್ತಿದ್ದರೆ ಅಜ್ಜ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಓದುತ್ತಿದ್ದ. ನನ್ನ ಅಜ್ಜ ನೋಡುವುದಕ್ಕೆ ಸ್ವಲ್ಪ ಮಟ್ಟಿಗೆ ಅಣ್ಣಾ ಹಜಾರೆಯಂತೆ ಕಾಣುತ್ತಿದ್ದ. ಆದರೆ ಅಣ್ಣ ಹಜಾರೆಗೆ ಇರುವ ಮುಗ್ದತೆ ನನ್ನ ಅಜ್ಜನಿಗೆ ಇರಲಿಲ್ಲ. ಆತ ಗಡಸು ಎಂದರೆ ಗಡಸು. ಜೊತೆಗೆ ಮಹಾನ್ ಜಗಳ ಗಂಟ. ಆತನಿಗೆ ಜಗಳವಾಡಲು ಯಾರಾದರೂ ಬೇಕಿತ್ತು. ಯಾರೂ ಸಿಗದಿದ್ದರೆ ಮನೆಯವರ ಜೊತೆಗೆ ಜಗಳಕ್ಕೆ ಇಳಿದು ಬಿಡುತ್ತಿದ್ದ. ಅಷ್ಟರಲ್ಲಿ ಇಂದಿರಾ ಗಾಂಧಿಯ ಕಟ್ಟಾ ಅಭಿಮಾನಿಗಿದ್ದ ಅಜ್ಜ ತುರ್ತು ಪರಿಸ್ಥಿಯನ್ನು ಸಮರ್ಥಿಸುವ ಹಂತಕ್ಕೆ ತಲುಪಿ ಬಿಟ್ಟಿದ್ದ. ಬಂಡಾಯ ಮತ್ತು ಸಮಾಜವಾದಿ ಚಳವಳಿಯ ಪ್ರಭಾವಕ್ಕೆ ಒಳಗಾಗಿದ್ದ ನಾನು ಇಂದಿರಾ ಗಾಂಧಿಯವರನ್ನು ಟೀಕಿಸಲು ಪ್ರಾರಂಬಿಸಿದ್ದೆ. ಹಲವು ಬಾರಿ ಇಂದಿರಾ ಗಾಂಧಿಯವರನ್ನು ಬೈಯುವ ನನ್ನನ್ನು ಹೊಡ್ಫೆಯಲು ಅಟ್ಟಿಸಿಕೊಂಡು ಬಂದಿದ್ದು ಇದೆ. ನಾನು ಅಜ್ಜನ ಹೊಡೆತವನ್ನು ತಪ್ಪಿಸಿಕೊಳ್ಳಲು ಮನೆಯಿಂದಲೇ ಓಡೀ ಹೋಗುತ್ತಿದ್ದೆ.
ಹೀಗೆ ಟೋಪಿಯ ಜೊತೆ ಇಂತಹ ಸಂಬಂಧ ಹೊಂದಿರುವ ನನಗೆ ಅಣ್ಣಾ ಹಜಾರೆಯ ಚಳವಳಿ ಪ್ರಾರಂಭವಾದ ಮೇಲೆ ಮತ್ತೆ ಟೋಪಿ ಕಾಡತೊಡಗಿತು. ಅಣ್ಣಾ ಹಜಾರೆಯ ಜೊತೆ ಉಪವಾಸ ಕುಳಿತ ನಮ್ಮ ಹುಡೂಗ ಹುಡುಗಿಯರ ತಲೆಯ ಮೇಲೆ ಟೋಪಿ ಕಂಡಾಗ ಇವರಿಗೆ ಟೊಪಿ ಎನ್ನುವುದು ಏನು ಎಂಭ ಪ್ರಶ್ನೆ ಕಾಡತೊಡಗಿತು. ಆಗ ನಾನು ನನ್ನ ಸ್ನೇಹಿತರಿಗೆ ಹೇಳಿದೆ ಟೋಪಿ ಹಾಕಿದವರೆಲ್ಲ ಮಹಾತ್ಮಾ ಗಾಂಧಿ ಆಗುವುದಿಲ್ಲ !
ಗಾಂಧಿ ಟೋಪಿಗೂ ಅಣ್ಣಾ ಹಜಾರೆ ಟೋಪಿಗೂ ವ್ಯತ್ಯಾಸವಿದೆ. ಹಾಗೆ ಅಣ್ಣಾ ಹಜಾರೆ ಮೋಹನದಾಸ್ ಕರಮಚಂದ್ ಗಾಂಧಿ ಅಲ್ಲ. ಗಾಂಧೀಜಿ ಸತ್ಯದ ಅನ್ವೇಷಕ. ಅವರ ಬದುಕು ಸತ್ಯದ ಅನ್ವೇಷಣೆಗಾಗಿ ನಡೆಸಿದ ಸುದೀರ್ಘ ಪಯಣ. ಗಾಂಧೀಜಿ ಸತ್ಯವನ್ನು ಹುಡುಕುತ್ತಲೇ ಮುಂದಕ್ಕೆ ನಡೆಯುತ್ತಿದ್ದರು. ತಮ್ಮ ತಪುಗಳನ್ನು ಒಪ್ಪಿಕೊಳ್ಳುವದರ ಜೊತೆಗೆ  ತಾವು ನಂಬಿದ್ದನ್ನು ಪ್ರಬಲವಾಗಿ ಪ್ರತಿಪಾದಿಸುವ ದೃಡತೆ ಅವರಲ್ಲಿ ಇತ್ತು. ಸತ್ಯ ಮತ್ತು ಅಹಿಂಸೆಯನ್ನು ಅವರು ನಂಬಿದ್ದರು. ಬಹಳಷ್ಟು ಜನರು ಈಗ ಗಾಂಧಿಯವರನ್ನು ವಿರೋಧಿಸುತ್ತಿರಬಹುದು. ಆದರೆ ಆ ಕಾಲಘಟ್ಟದಲ್ಲಿ ನಿಂತು ಗಾಂಧಿಜಿಯವರನ್ನು ನೋಡಬೇಕೆ ಹೊರತೂ ಈ ಕಾಲಘಟ್ಟದಲ್ಲಿ ನಿಂತು ಅಲ್ಲ.
ದಕ್ಷಿಣ ಅಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿದೆ ಗಾಂಧಿ ಈ ದೇಶವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದರು. ಹರಿಜನ ಮತ್ತು ಯಂಗ್ ಇಂಡಿಯಾ ಪತ್ರಿಕೆಗಳಲ್ಲಿ ಅವರು ಬರೆಯುತ್ತಿದ್ದ ಲೇಖನಗಳು ದೇಶವನ್ನು ಅರ್ಥಮಾಡಿಕೊಳ್ಲಲು ಅವರು ನಡೆಸುತ್ತಿದ್ದ ಯತ್ನದ ಪ್ರತಿರೂಪಗಳಾಗಿದ್ದವು. ಜೊತೆಗೆ ಅವರು ತಮ್ಮ ಜೊತೆ ತಾವೇ ನಡೆಸುತ್ತಿದ್ದ ಅಂತರಂಗದ ಸಂವಾದವೂ ಆಗಿತ್ತು.
ಅಂದಿನ ಸಂದರ್ಭದಲ್ಲಿ ಈ ದೇಶ ಎದುರಿಸುತ್ತಿದ್ದ ಸಮಸ್ಯೆಗಳಿಗೆ ಗಾಂಧೀಜಿಯವರ ಅವರದೇ ಆದ ಪರಿಹಾರಗಳಿದ್ದವು.
ಆದರೆ ಅಣ್ಣಾ ಹಜಾರೆ ಅವರು ಭಾರತವನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ನನಗೆ ನನ್ನದೇ ಆದ ಅನುಮಾನಗಳಿವೆ. ಗಾಂಧಿ ಬದುಕ್ಲಿದ್ದ ಕಾಲದಲ್ಲಿ ಅವರು ಸಮಾಜಕ್ಕೆ  ಮುಖಾಮುಖಿಯಾಗಿ ಸಂವಾದ ನಡೆಸುತ್ತಿದ್ದಂತೆ, ಅಣ್ಣಾ ಹಜಾರೆ ಇವತ್ತೀನ ಸಮಾಜದ ಜೊತೆ ಮುಖಾಮುಖಿಯಾಗಿ ಸಂವಾದ ನಡೆಸುತ್ತಿದ್ದಾರೆಯೇ ? ಇಲ್ಲ.. ಅವರು ಭಾರತವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಷ್ಟು ಮುಗ್ದರು. ಹೀಗಾಗಿ ತಮ್ಮ ಜೊತೆ ಇರುವವರ ಪ್ರಭಾವಕ್ಕೆ ಅವರು ಬಹುಬೇಗ ಒಳಗಾಗಿ ಬಿಡುತ್ತಾರೆ. ಗಾಂಧಿ ಹಾಗಿರಲಿಲ್ಲ. ಅವರು ಯಾರ ಪ್ರಭಾವಕ್ಕು ಒಳಗಾಗುತ್ತಿರಲಿಲ್ಲ. ಹೀಗಾಗಿ ಅವರು ಬೇರೆಯವರನ್ನು ತಮ್ಮ ಪ್ರಭಾವಳಿಯ ಓಳಗೆ ಸೇಳೆದುಕೊಂಡು ಬಿಡುತ್ತಿದ್ದರು. ಅಂತಹ ಶಕ್ತಿ ಅಣ್ಣಾ ಹಜಾರೆ ಅವರಿಗೆ ಇಲ್ಲ.
ಮತ್ತೆ ಗಾಂಧಿ ಟೋಪಿ ನನ್ನನ್ನು ಕಾಡುತ್ತಿದೆ. ಜೊತೆಗೆ ಟೋಪಿಯಲ್ಲಾದ ರೂಪಾಂತರ ನನ್ನನ್ನು ಬೆದರಿಸುತ್ತಿದೆ,

ಕಳೆದ ವರ್ಷ ನನ್ನ ಅಪ್ಪ ತೀರಿಕೊಂಡಾಗ ನಾನು ಊರಿಗೆ ಹೋಗಿ 21 ದಿನ ಊರಿನಲ್ಲೇ ಇದ್ದೆ. ಅಪ್ಪನ ಟೋಪಿಗಾಗಿ ಮನೆಯ ತುಂಬಾ ಹುಡುಕಿದೆ. ಟೋಪಿ ಸಿಗಲಿಲ್ಲ. ಅಪ್ಪ ಇತ್ತೀಚಿನ ವರ್ಷಗಳಲ್ಲಿ ಹೊಸ ಟೋಪಿಯನ್ನು ಖರೀದಿಸಿರಲಿಲ್ಲ. ಆತ ಟೋಪಿ ಹಾಕುವುದನ್ನು ನಿಲ್ಲಿಸಿ ಹಲವಾರು ವರ್ಷಗಳೇ ಕಳೆದು ಹೋಗಿದ್ದವಂತೆ !

9 comments:

Ravish Tumkur said...

Very nice and relevant article sir.

ಮಹಾಬಲಗಿರಿ ಭಟ್ಟ said...

:)

Unknown said...

ಅಲ್ರಿ ಇನ್ನೆಷ್ಟು ದಿನಾ ಅಂತ ಆ ಕಾಲದಲ್ಲಿ ಬದುಕಿದ್ ಗಾಂಧೀನೇ ನೆನಕಂಡೂ,, ಅವನೇ ತಂದು ಕೊಟ್ಟಿದ್ದು ಸ್ವಾತಂತ್ರ್ಯಾನಾ ಅಂತ ಸುಳ್ ಸುಳ್ಲೇ ಹೇಳ್ಕ್ಯಂಡೂ ರಾಜಕೀಯಾ ಮಾಡೋಣ ಹೇಳಿ... ಬಿಡ್ರೀ ಅವನ್ನಾ ಹಾಂಗೇ ಬಿಟ್ ಬಿಡೋಣ... ನಾವು ಬದುಕೋಣಾರೀ... ಅಲ್ರೀ ಆ ಗಾಂಧೀ ತಂದು ಕೊಡ್ವಾಗಿದ್ ಇಂಡಿಯಾ ಇದೆಯೇನ್ರೀ ಆ ಸತ್ಯ ಆ ಪ್ರಾಮಾಣಿಕತೆ ಥೂ ಇವರ ಮನೆ ಹಾಳಾಗಾ.... ಇನ್ನೂ ಯಾಕ್ರೀ ಗಾಂಧೀ ನೆನಪೂ .....

Unknown said...

ಅಲ್ರಿ ಇನ್ನೆಷ್ಟು ದಿನಾ ಅಂತ ಆ ಕಾಲದಲ್ಲಿ ಬದುಕಿದ್ ಗಾಂಧೀನೇ ನೆನಕಂಡೂ,, ಅವನೇ ತಂದು ಕೊಟ್ಟಿದ್ದು ಸ್ವಾತಂತ್ರ್ಯಾನಾ ಅಂತ ಸುಳ್ ಸುಳ್ಲೇ ಹೇಳ್ಕ್ಯಂಡೂ ರಾಜಕೀಯಾ ಮಾಡೋಣ ಹೇಳಿ... ಬಿಡ್ರೀ ಅವನ್ನಾ ಹಾಂಗೇ ಬಿಟ್ ಬಿಡೋಣ... ನಾವು ಬದುಕೋಣಾರೀ... ಅಲ್ರೀ ಆ ಗಾಂಧೀ ತಂದು ಕೊಡ್ವಾಗಿದ್ ಇಂಡಿಯಾ ಇದೆಯೇನ್ರೀ ಆ ಸತ್ಯ ಆ ಪ್ರಾಮಾಣಿಕತೆ ಥೂ ಇವರ ಮನೆ ಹಾಳಾಗಾ.... ಇನ್ನೂ ಯಾಕ್ರೀ ಗಾಂಧೀ ನೆನಪೂ .....

Unknown said...

ಅಲ್ರಿ ಇನ್ನೆಷ್ಟು ದಿನಾ ಅಂತ ಆ ಕಾಲದಲ್ಲಿ ಬದುಕಿದ್ ಗಾಂಧೀನೇ ನೆನಕಂಡೂ,, ಅವನೇ ತಂದು ಕೊಟ್ಟಿದ್ದು ಸ್ವಾತಂತ್ರ್ಯಾನಾ ಅಂತ ಸುಳ್ ಸುಳ್ಲೇ ಹೇಳ್ಕ್ಯಂಡೂ ರಾಜಕೀಯಾ ಮಾಡೋಣ ಹೇಳಿ... ಬಿಡ್ರೀ ಅವನ್ನಾ ಹಾಂಗೇ ಬಿಟ್ ಬಿಡೋಣ... ನಾವು ಬದುಕೋಣಾರೀ... ಅಲ್ರೀ ಆ ಗಾಂಧೀ ತಂದು ಕೊಡ್ವಾಗಿದ್ ಇಂಡಿಯಾ ಇದೆಯೇನ್ರೀ ಆ ಸತ್ಯ ಆ ಪ್ರಾಮಾಣಿಕತೆ ಥೂ ಇವರ ಮನೆ ಹಾಳಾಗಾ.... ಇನ್ನೂ ಯಾಕ್ರೀ ಗಾಂಧೀ ನೆನಪೂ .....

Sheila Bhat said...

yarannu gauravisada indina piligeya ondu comment nimma blogallide! Hay Rama!Anna hazare upavasada nataka madidagale, avara Trust hesaralli hanada hole hariyatodagidale, media publicityge biddagale gottayitu, idella rajakiyakke baruva kutantra endu... adu iga sabitagide... Nice Article...

Sheila Bhat said...

Nice Article..

Badarinath Palavalli said...

ಗಾಂಧೀಜಿಯನ್ನು ನಾವು ಅವಮಾನಗೊಳಿಸಲು ಆರಂಭಿಸಿದ್ದು ನಮ್ಮ ಪುಟ್ಟ ಪುಟ್ಟ ಊರುಗಳ ಮುಖ್ಯ ರಸ್ತೆಗಳಿಗೂ ಅವರ ಹೆಸರಿಡಲು ಆರಂಭಿಸಿದ ಮೇಲೆ.

ಗಾಂಧಿ ಟೋಪಿಯ ನಿಜ ಅವಮಾನವಾದದ್ದು ರಾಜಕಾರಣಿಗಳು ಅದನ್ನು ಧರಿಸಲು ಆರಂಭಿಸಿದ ಮೇಲೆ.

ಸ್ವಾತಂತ್ರ್ಯೋತ್ಸವಕ್ಕೆ ಒಂದು ಸರಿಯಾದ ಬ್ಲಾಗ್ ಬರಹ ಕೊಟ್ಟ ನಿಮಗೆ ಧನ್ಯವಾದಗಳು ಸಾರ್.

Lahari said...

ನಾನ್ ವಯಸ್ಸಿನಲ್ಲಿ ಚಿಕ್ಕವನು. ಆದ್ರೂ ನಿಮ್ಮ ಲೇಖನದ ಬಗ್ಗೆ ಒಂದು ಮಾತ್ ಹೇಳೋಕೆ ಇಷ್ಟಪಡ್ತಿನಿ. ಸ್ವಾತಂತ್ರ್ಯ ಅವ್ರು ತಂದ್ ಕೊಟ್ರು, ಇವ್ರು ತಂದ್ ಕೊಟ್ರು ಅನ್ನೊ ಜಂಜಾಟದ ಮಾತನ್ನ ಬದಿಗಿತ್ತು. ನಿಜವಾದ ಸ್ವಾತಂತ್ರ್ಯದ ಅರ್ಥ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ತಲುಪುತ್ತಿದೆಯೇ. ಇದ್ರ ಬಗ್ಗೆ ತಿಳಿ ಹೇಳಬೇಕಾದ ವಿದ್ಯಾವಂತರೆನಿಸಿಕೊಂಡವರು ಏನ್ ಮಾಡ್ತಾ ಇದಾರೆ? ಕೋಟಿ ಹಣ ಬಿಡುಗಡೆ ಯಾರ ಉದ್ಧಾರಕ್ಕಾಗಿ? ಯೋಜನೆಗಳ ಕರಾಳ ಮುಖವಾಡ ಹೇಗಿದೆ? ಈ ದೇಶ ಯಾರ ಆಸ್ತಿ? ಎಂಭಿತ್ಯಾಧಿ ಮಾರ್ಮಿಕ ವಿಚಾರಗಳು ಪ್ರಜಾಪ್ರಭುತ್ವದ ನಿಜವಾದ ರೂಪಗಳೆ, ಒಂದು ವೇಳೆ ಹಾಗಿದ್ದರೆ. ಇವೆಲ್ಲ ಟೋಪಿಗಳ ಹಿಂದಿನ ಸತ್ಯಗಳೇ ಎಂಬ ಧ್ವಂದ್ವಾರ್ಥಕ್ಕೆ ಪರಿಹಾರ ಹುಡುಕಬೇಕಿದೆ ಸಾರ್.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...