Saturday, December 15, 2012

ಮೋದಿಯ ನಾಡಿನಲ್ಲಿ ಎರಡು ದಿನ- ಕಂಡಿದ್ದು ಕೇಳಿದ್ದು....



ಗುಜರಾತ್ ಕುರುಕ್ಷೇತ್ರ !
ನಾನು ಬೆಂಗಳೂರಿನಿಂದ ಹೊರಟು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದಾಗ ಮಧ್ಯಾನ್ಹ ಒಂದು ಗಂಟೆ.  ನಮ್ಮ ಮಂಗಳೂರನ್ನೋ, ಕರಾವಳಿಯ ಇನ್ಯಾವ್ಯುದೋ ಪಟ್ಟಣವನ್ನು ನೆನಪಿಸುವಷ್ಟು ಉರಿ ಬಿಸಿಲು. ಆಗಲೇ ಮುಂಬೈನ ಕರ್ನಾಟಕ ಸಂಘದ ಗೆಳಯರಿಗೆ ಹೇಳಿ ಒಂದು ಇನ್ನೊವಾ ಕಾರನ್ನು ಗೊತ್ತು ಪಡಿಸಿಕೊಂಡಿದ್ದೆ. ಕಾರಿನ ಚಾಲಕ ನನ್ನ ಹೆಸರಿನ ನೇಮ್ ಪ್ಲೇಟ್ ಹಿಡಿದು ವಿಮಾನ ನಿಲ್ದಾಣದ ಹೊರಗೆ ನಿಂತಿದ್ದ.
ನಾನು ಪ್ರವಾಸ ಹೊರಟಿದ್ದು ಗುಜರಾತಿಗೆ. ಸೂರತ್ ನಗರವನ್ನು ಸಂಜೆಯ ಒಳಗೆ ತಲುಪುವುದು ನನ್ನ ಗುರಿಯಾಗಿತ್ತು. ಮುಂಬೈನಿಂದ ಅಹಮದಾಬಾದ್ ಗೆ ಸುಮಾರು ೫೦೦ ಕಿಮೀ ದೂರ. ಈ ದಾರಿಯನ್ನು ರಸ್ತೆಯ ಮೂಲಕ ಕ್ರಮಿಸಿದರೆ ಗುಜರಾತಿನ ಬಹುಭಾಗವನ್ನು ನೋಡಬಹುದು, ಅಲ್ಲಿನ ಸಾಮಾನ್ಯರ ಜೊತೆ ಮಾತನಾಡಬಹುದು ಎಂದು ನಾನು ಅಂದುಕೊಂಡಿದ್ದೆ. ನನಗೆ ಗುಜರಾಥ್ ಹೆಚ್ಚು ಕುತೂಹಲ ಹುಟ್ಟಿಸಿದ ರಾಜ್ಯ. ಶ್ರೀಕೃಷ್ಣ ದ್ವಾರಕೆ, ಮಹಾತ್ಮಾ ಗಾಂಧಿಜಿಯ ಸಾಬರಮತಿ, ಹತ್ತು ವರ್ಷಗಳಿಂದ ಈ ರಾಜ್ಯವನ್ನು ಆಳುತ್ತಿರುವ ನರೇಂದ್ರ ಮೋದಿ ಎಲ್ಲರೂ ನನ್ನ ಕುತೂಹಲಕ್ಕೆ ಕಾರಣರಾದವರೇ.
ನನ್ನ ಕಾರಿನ ಚಾಲಕನ ಹೆಸರು ಅಮ್ಜದ್. ಆತ ಮುಂಬೈ ಅಹಮದಾಬಾದ್ ರಸ್ತೆಯಲ್ಲಿ ಹಲವು ಬಾರಿ ಕಾರು ಓಡಿಸಿದವನು. ಅವನಿಗೆ ಈ ರಸ್ತೆ ಎಂದರೆ ನೀರು ಕುಡಿದಷ್ಟು ಸಲೀಸು. ಜೊತೆಗೆ ಆತ ಗುಜರಾತ್ ಮೂಲದವನು. ಹೊಟ್ಟೆ ಪಾಡಿಗಾಗಿ ಮುಂಬೈಗೆ ಬಂದು ಇಲ್ಲಿ ಕಾರು ಓಡಿಸಿ ಜೀವನ ಸಾಗಿಸುತ್ತಿದ್ದ.
ಮೋದಿ ಹೈವೇ...

ಮುಂಬೈ ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ ದೇಶದ ಅತ್ಯುತ್ತಮ ಹೆದ್ದಾರಿಗಳಲ್ಲಿ ಒಂದು. ಈ ರಸ್ತೆ ವಿಶಾಲವಾಗಿರುವುದರ ಜೊತೆಗೆ ಎಲ್ಲೂ ಸಹ ಸ್ಪೇಡ್ ಬ್ರೇಕರ್ಸ್ ಅಥವಾ ಹಂಪ್ಸ್ ಇಲ್ಲವೇ ಇಲ್ಲ. ಕಣ್ಣು ಮುಚ್ಚಿಕೊಂಡು ಕಾರನ್ನು ಒಡಿಸುವಷ್ಟು ರಸ್ತೆ ಉತ್ತಮವಾಗಿದೆ.
ಅಮ್ಜದ್ ನನ್ನು ನಾನು ಮೊದಲು ಕೇಳಿದ್ದು ನರೇಂದ್ರ ಮೋದಿಯ ಬಗ್ಗೆ. ನನ್ನ ಪ್ರಶ್ನೆಗೆ ಅವನು ನೀಡಿದ ಉತ್ತರ ಅಚ್ಚಾ ಸಾಬ್ ಎಂದು. ಮುಂದೆ ಆತ ಮಾತನಾಡುವುದಕ್ಕೆ ಸಿದ್ಧನಿರಲಿಲ್ಲ. ಮಹಾರಾಷ್ಟ್ರ ಗಡಿಯನ್ನು ದಾಟಿ ಗುಜರಾತ್ ಅನ್ನು ಪ್ರವೇಶಿಸುತ್ತಿದ್ದಂತೆ ಬದಲಾವಣೆ ಬರೀ ಕಣ್ಣಿಗೆ ಕಾಣತೊಡಗಿತು. ಅಭಿವೃದ್ಧಿ ಅಲ್ಲಿ ನಡೆಯುತ್ತಿದೆ ಎಂದು ಹೇಳುವುದಕ್ಕೆ ಬೇರೆ ಯಾವುದೇ ಸಾಕ್ಷ್ಯ ಬೇಕಾಗಿರಲಿಲ್ಲ.
ನರೇಂದ್ರ ಮೋದಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಈ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ತಂದು ನಿಲ್ಲಿಸಿದ್ದರು. ಆದರೆ ಅದು ಎಂತಹ ಅಭಿವೃದ್ಧಿ ? ಈ ಅಭಿವೃದ್ಧಿಯ ವ್ಯಾಪ್ತಿ ಏನು ? ಅಭಿವೃದ್ಧಿಗೂ ಸಾಮಾಜಿಕ ಬದುಕಿಗೂ ಇರುವ ಸಂಬಂಧ ಎಂತಹುದು ?
ಪಶ್ಚಿಮ ರಾಜ್ಯವಾಗಿರುವ ಗುಜರಾತ್ ೧೬೦೦ ಕಿಮೀ ಸಮುದ್ರ ಕಿನಾರೆಯನ್ನು ಹೊಂದಿದೆ. ಒಂದೆಡೆ ಮಹಾರಾಷ್ತ್ರ, ಇನ್ನೊಂದೆಡೆ ಮಧ್ಯಪ್ರದೇಶ, ಮತ್ತೊಂದೆಡೆ ರಾಜಸ್ಥಾನ ಗಡಿ ರಾಜ್ಯಗಳು. ಗುಜರಾತಿನ ಇನ್ನೊಂದು ವಿಶೇಷ ಎಂದರೆ ಪಾಕಿಸ್ಥಾನದ ಸಿಂದ್ ಪ್ರಾಂತ ಗುಜರಾತಿಗೆ ತಾಗಿಕೊಂಡಿದೆ. ಪಾಕಿಸ್ಥಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾ ಗುಜರಾತಿ ಮುಸ್ಲಿಂ ಕುಟುಂಬಕ್ಕೆ ಸೇರಿದವರು. ಹಿಂದೂ ನದಿ ನಾಗರೀಕತೆಯ ಅವಶೇಷಗಳು ಇಲ್ಲಿ ದೊರಕಿವೆ.
ಗುಜರಾತ್ ಗೆ ಅಭಿವೃದ್ಧಿ ಹೊಸದಲ್ಲ. ನರೇಂದ್ರ ಮೋದಿ ಬಂದ ಮೇಲೆ ಇಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಯಿತು ಎಂಬುದು ಅಪ್ಪಟ ಸುಳ್ಳು. ಗುಪ್ತರು ರಾಷ್ಟ್ರಕೂಟರು ಈ ರಾಜ್ಯವನ್ನು ಆಳುತ್ತಿದ್ದ ಕಾಲದಲ್ಲೇ ಈ ಪ್ರದೇಶ ಅಭಿವೃದ್ಧಿಯನ್ನು ಕಂಡಿತ್ತು. ಮೊದಲಿನಿಂದಲೂ ಅಹಮದಾಬಾದ್, ಸೂರತ್, ಭಾವನಗರ್, ವಡೋದರಾ, ಜಾಮನಗರ್,ಕೈಗಾರಿಕಾ ಕೇಂದ್ರಗಳಾಗಿ ಅಭಿವೃದ್ಧಿ ಹೊಂದುತ್ತಲೇ ಬಂದಿವೆ. ಜೊತೆಗೆ ಗುಜರಾತ್ ಎಂದೂ ವಿದ್ಯುತ್ ಕೊರತೆಯನ್ನು ಹೊಂದಿಲ್ಲ. ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸುವ ರಾಜ್ಯ ಗುಜರಾತ್.

ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಗುಜರಾತ್ ಕರಾವಳಿಯಲ್ಲಿ ೪೧ ಕ್ಕಿಂತ ಹೆಚ್ಚು ಬಂದರುಗಳಿವೆ. ನರ್ಮದಾ, ಸಾಬರಮತಿ, ಮಹಿ ಮತ್ತು ತಾಪಿ ಎಂಬ ದೊಡ್ಡ ನದಿಗಳು ಹಾಗೂ ೩೫ ಕ್ಕೂ ಹೆಚ್ಚು ಸಣ್ನ ನದಿಗಳು ಈ ರಾಜ್ಯದ ನೆಲವನ್ನು ತಂಪಾಗಿರಿಸಿವೆ. ಇಂತಹ ಗುಜರಾತಿನಲ್ಲಿ ನರೇಂದ್ರ ಮೋದಿ ಮಾಡಿದ್ದೇನು ಎಂದು ನಾನು ಯೋಚಿಸುತ್ತಿದ್ದೆ. ಆತ ಇಲ್ಲಿನ ಜನರಿಗೆ ಮಾಡಿದ್ದು ಮೋಡಿಯೇ ಅಥವಾ ಮೋಸವೆ ?
ಆಗಲೇ ಸಂಜೆಯಾಗಿತ್ತು. ರಸ್ತೆ ಪಕ್ಕದ ಹೊಟೇಲ್ ಬಳಿ ಕಾರು ನಿಲ್ಲಿಸಿದ ಅಮ್ಜದ್ ಸಾರ್ ಚಾಯ್ ಪೀಯೆಂಗೆ ಅಂದ. ಸರಿ ಎಂದು ನಾನು ಕಾರಿನಿಂದ ಇಳಿದೆ. ನನಗೆ ಕೆಲವು ಮುಸ್ಲಿಂ ರ ಜೊತೆ ಮಾತನಾಡುವ ಆಸಕ್ತಿ ಇತ್ತು. ಅವರು ನರೇಂದ್ರ ಮೋದಿಯನ್ನು ನೋಡುವ ರೀತಿ ಯಾವುದು ಎಂಬುದು ನನ್ನ ಕುತೂಹಲ. ಜೊತೆಗೆ ಗುಜರಾತಿನ ಜಾತಿ ಸಮೀಕರಣ ಕೂಡ.
ಈ ರಾಜ್ಯದ ಜನಸಂಖ್ಯೆಯಲ್ಲಿ ಪ್ರತಿಶತ ೮೯ ರಷ್ಟು ಜನ ಹಿಂದೂಗಳು. ಮುಸ್ಲಿಂ ಜನಸಂಖ್ಯೆ ಪ್ರತಿಶತ ೯. ಉಳಿದಂತೆ ಮಹಾರಾಷ್ಟ್ರ ಮತ್ತು ರಾಜಸ್ಥಾನವನ್ನು ಹೊರತು ಪಡಿಸಿದರೆ ಅತಿ ಹೆಚ್ಚು ಜೈನರು ಇರುವುದು ಗುಜರಾತಿನಲ್ಲಿ.  ಹಿಂದೂಗಳಲ್ಲಿ ಪಟೇಲರ ಪ್ರಾಬಲ್ಯ ಮೊದಲಿನಿಂದಲೂ ಇದ್ದುದು ನಿಜ. ದೇಶದ ಮೊದಲ ಉಪ ಪ್ರಧಾನಿ, ಗೃಹ ಸಚಿವ ಸರ್ಧಾರ್ ವಲ್ಲಭ್ ಭಾಯ್ ಪಟೇಲ್ ಗುಜರಾತಿನ ಸೌರಾಷ್ಟ್ರ ಪ್ರದೇಶಕ್ಕೆ ಸೇರಿದವರು. ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸಿ ಬಿಜೆಪಿಯಿಂದ ಮುಖ್ಯಮಂತ್ರಿಯಾದ ಕೇಶು ಭಾಯ್ ಪಟೇಲ್ ಕೂಡ ಸೌರಾಷ್ಟ್ರ ಪ್ರದೇಶಕ್ಕೆ ಸೇರಿದವರು.
ಇಲ್ಲಿನ ವ್ಯಾಪಾರಿ ಸಮುದಾಯವನ್ನು ಬನಿಯಾಗಳು ಎಂದು ಕರೆಯುತ್ತಾರೆ. ಪಟೇಲರು ಭೂಮಾಲೀಕರು. ಅವರಿಗೆ ಇಂದಿಗೂ ಸಮಾಜದಲ್ಲಿ ಅತ್ಯುನ್ನತವಾದ ಸ್ಥಾನ. ಆದರೆ ಗುಜರಾತಿನಲ್ಲಿ ಸಿಗುವ ಪಟೇಲರೆಲ್ಲ ನಿಜವಾದ ಪಟೇಲರಲ್ಲ. ಸಮಾಜದಲ್ಲಿ ಗೌರವ ಸಂಪಾದಿಸುವ ಸಲುವಾಗಿ ಪಟೇಲರಾಗಿ ಬದಲಾದ ಕೆಳ ಜಾತಿಯ ಜನ ಕೂಡ ಇದ್ದಾರೆ. ಮೇಲ್ಜಾತಿಯ ವೈದಿಕ ಪರಂಪರೆ ಮತ್ತು ಜೈನ ಸಂಪ್ರದಾಯಗಳು ಇಲ್ಲಿ ಪ್ರಬಲವಾಗಿ ಬೇರೂರಿವೆ.
ಗುಜರಾತಿನ ಬಹುದೂಡ್ಡ ದೇವರೆಂದರೆ ಆತ ಶ್ರೀನಾಥ್ ಜಿ. ಅಂದರೆ ಶ್ರೀಕೃಷ್ಣ.
ರಸ್ತೆಯ ಪಕ್ಕದ ಚಹಾ ದುಖಾನಿನಲ್ಲಿ ಕುಳಿತಾಗ ಅಲ್ಲಿದ್ದ ಕೆಲವರ ಜೊತೆ ಮಾತನಾಡಿದಾಗ ಅನ್ನಿಸಿದ್ದು, ಇಲ್ಲಿನ ಮುಸ್ಲಿಂ ವಿರೋಧಕ್ಕೆ ಸುದೀರ್ಘ ಪರಂಪರೆ ಇದೆ ಎನ್ನುವುದು. ಆದರೆ ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಹಿಂದೂ ಸಂಘರ್ಷ ಚುನಾವಣೆಯ ಮುಖ್ಯ ವಿಷಯವಾಗುವ ಸಂಭವ ಕಡಿಮೆ. ಇಲ್ಲಿನ ಬಹುತೇಕ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳು ಮಹತ್ವದ ಪಾತ್ರವನ್ನು ಒಹಿಸುತ್ತ ಬಂದಿವೆ. ೧೯೬೦ ರಲ್ಲಿ ಗುಜರಾತ್ ರಾಜ್ಯ ರಚನೆಯಾದ ಮೇಲೆ ೮೦ ರ ದಶಕದವರೆಗೂ ಪ್ರತಿಶತ ೪೦ ರಷ್ಟಿರುವ ಹಿಂದುಳಿದ ವರ್ಗದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದರು. ೯೦ ರ ದಶಕದ ಹೊತ್ತಿಗೆ ಸ್ಥಿತಿ ಬದಲಾಯಿತು. ವೈದಿಕ ಮನಸ್ಥಿತಿಯೇ ಪ್ರಬಲವಾಗಿರುವ ಈ ರಾಜ್ಯದ ಹಿಂದುಳಿದ ವರ್ಗಗಳು ಹಿಂದುತ್ವದ ಮೋಹಕ್ಕೆ ಒಳಗಾದರು. ಬಿಜೆಪಿ ಅಧಿಕಾರದ ಗದ್ದುಗೆ ಏರುವಂತಾಯಿತು. ನರೇಂದ್ರ ಮೋದಿ ಮುಖ್ಯಮಂತ್ರಿಯಾದ ಮೇಲೆ ಹಿಂದುಳಿದ ವರ್ಗಗಳ ಮೇಲೆ ನಿಯಂತ್ರಣ ಸಾಧಿಸಿದರು. ಮೋದಿ ಹಿಂದುಳಿದ ಘಾಂಚಿ ಎಂಬ ಜಾತಿಗೆ ಸೇರಿದವರು. ಈ ಜಾತಿಯ ಜನ ಕರ್ನಾಟಕದ ಗಾಣಿಗ ಸಮುದಾಯಕ್ಕೆ ಸಮಾನವಾದ ಜಾತಿ. ಇವರು ಎಣ್ಣೆ ತೆಗೆಯುವವರು.
ಆದರೆ ಹಿಂದುಳಿದ ವರ್ಗದವರಿಗೂ ನರೇಂದ್ರ ಮೋದಿಯವರ ಬಗ್ಗೆ ಕೆಲವೊಂದು ಆಕ್ಷೇಪಗಳಿವೆ. ಅವರೆಂದೂ ತಾವು ಹಿಂದುಳಿದ ವರ್ಗದಿಂದ ಬಂದವರು ಎಂಬುದನ್ನು ತಮ್ಮ ಕಾರ್ಯ ವಿಧಾನದಲ್ಲಿ ತೋರಿಸಿಕೊಟ್ಟಿಲ್ಲ. ಈಗಲೂ ಪ್ರಬಲವಾಗಿರುವ ರಜಪೂತರು ಮತ್ತು ಪಟೇಲರ ಕಪಿಮುಷ್ಟಿಯಲ್ಲಿ ನರೇಂದ್ರ ಮೋದಿ ಇದ್ದಾರೆ. ಅವರ ಅಭಿವೃದ್ಧಿ ಈ ಜನಸಮುದಾಯಗಳನ್ನು ಬಿಟ್ಟರೆ ಕೆಳ ಹಂತದ ಜನರನ್ನು ತಲುಪಿಲ್ಲ ಎಂಬುದು ಹಿಂದುಳಿದ ವರ್ಗಗಳಲ್ಲಿ ಕೇಳಿ ಬರುತ್ತಿರುವ ಮಾತು. ಜೊತೆಗೆ ಹಿಂದುಳಿದ ವರ್ಗಗಳ ಸಂಘಟನೆಗಳು ಈಗ ಪ್ರಬಲವಾಗುತ್ತಿದ್ದು ಅವುಗಳು ಮೋದಿಯವರನ್ನು ಪ್ರಬಲವಾಗಿ ವಿರೋಧಿಸುತ್ತಿವೆ.
ಗುಜರಾತಿನ ೧೮೨ ಒಟ್ಟೂ ಸ್ಥಾನಗಳಲ್ಲಿ ಸುಮಾರು ೭೦ ಸ್ಥಾನಗಳಲ್ಲಿ ಹಿಂದುಳಿದ ವರ್ಗಗಳ ಮತಗಳೇ ನಿರ್ಣಾಯಕ. ಹಾಗೆ ೩೫ ಸ್ಥಾನಗಳಲ್ಲಿ ಮುಸ್ಲಿಂ ರು, ೨೬ ಸ್ಥಾನಗಳಲ್ಲಿ ಆದಿವಾಸಿಗಳು ಮತ್ತು ೧೩ ಸ್ಥಾನಗಳಲ್ಲಿ ದಲಿತರು ನಿರ್ಣಾಯಕ ಪಾತ್ರ ಒಹಿಸುತ್ತಾರೆ. ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲೂ ರಾಜ್ಯದ ಅಧಿಕಾರವನ್ನು ಹಿಡಿಯುವವರು ಎಂಬುದನ್ನು ತೀರ್ಮಾನಿಸುವವರು ಹಿಂದುಳಿದ ವರ್ಗದವರೇ.
ಗಾಂಧಿ ನಾಡಿನಲ್ಲಿ ಅವರ ನೆನಪೇ ಇಲ್ಲ...!

ಗಾಂಧಿಯ ನಾಡು ಗುಜರಾತ್. ಇಲ್ಲಿ ಈಗಲೂ ಮದ್ಯಪಾನ ನಿಷೇಧ. ಇಲ್ಲಿ ಒಂದೇ ಒಂದು ಮದ್ಯದ ಅಂಗಡಿ ಸಿಗುವುದಿಲ್ಲ. ಆದರೆ ಮದ್ಯ ಸಿಗುವುದಿಲ್ಲ ಎಂದುಕೊಂಡರೆ ಅದು ನಿಜವಲ್ಲ. ನಾವು ಕುಳಿತಿದ್ದ ಚಹಾ ದುಖಾನಿನ ಮಾಲೀಕನನ್ನು ಇಲ್ಲಿ ಗುಂಡು ಸಿಗುವುದಿಲ್ಲವೆ ಎಂದು ಪ್ರಶ್ನಿಸಿದೆ. ಆತ ಯಾವುದು ಬೇಕು ? ಹಣ ಕೊಡಿ ಎಂದ ! ಅಂದರೆ ಬಹಿರಂಗವಾಗಿ ನಡೆಯದಿದ್ದುದು ಇಲ್ಲಿ ಗುಪ್ತವಾಗಿ ನಡೆಯುತ್ತದೆ ಅಷ್ಟೇ.
ನರೇಂದ್ರ ಮೋದಿಯವರ ಆಡಳಿತ ಹೇಗಿದೆ ಎಂಬ ಪ್ರಶ್ನೆಗೆ ಅವನ ಉತ್ತರ ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತುಂಬಾ ಅಭಿವೃದ್ಧಿಯಾಗುತ್ತಿದೆ ಎಂಬುದು. ಯಾವ ಅಭಿವೃದ್ಧಿ ? ಯಾವ ರೀತಿಯ ಅಭಿವೃದ್ಧಿ ಎಂಬ ಪ್ರಶ್ನೆಗೆ ಅವರ ಬಳೀ ಸ್ಪಷ್ಟ ಉತ್ತರವಿಲ್ಲ.
ನರೇಂದ್ರ ಮೋದಿ ಒಬ್ಬ ಅತ್ಯುತ್ತಮ ಸೇಲ್ಸ್ ಮನ್. ಅವರಿಗೆ ಯಾವ ವಸ್ತುವನ್ನು ಯಾವಾಗ ಹೇಗೆ ಮಾರಟ ಮಾಡಬೇಕು ಎಂಬುದು ಗೊತ್ತು. ಹಿಂದುತ್ವವನ್ನು ಮಾರಾಟ ಮಾಡಲು ಕೋಮು ಗಲಭೆಯನ್ನು ಮಾರಾಟ ಮಾಡಿದ ಅವರು ಈಗ ಅದೇ ವಸ್ತುವನ್ನು ಮತ್ತೆ ಮಾರಾಟ ಮಾಡುತ್ತಿಲ್ಲ.ಯಾಕೆಂದರೆ ಆ ವಸ್ತುವನ್ನು ಈಗ ಖರೀದಿಸುವವರಿಲ್ಲ ಎಂಬುದು ಅವರಿಗೆ ಗೊತ್ತು. ಕಳಪೆ ವಸ್ತುಗಳನ್ನು ಮಾರಾಟ ಮಾಡುವವರೇ ಹಾಗೆ. ಅವರು ಒಮ್ಮೆ ಮಾರಾಟ ಮಾಡಿದ ವಸ್ತುವನ್ನು ಮತ್ತೆ ಮಾರಾಟಕ್ಕೆ ಇಡುವುದಿಲ್ಲ.
ಮೋದಿಯವರ ಅಭಿವೃದ್ಧಿಯ ಕಲ್ಪನೆಯಲ್ಲಿ ಇಲ್ಲಿಯೇ ಹುಟ್ಟಿದ ಮಹತ್ಮಾ ಗಾಂಧಿಯವರ ಆರ್ಥಿಕ ನೀತಿಗೆ ಅವಕಾಶವಿಲ್ಲ.
ಅವರಿ ಹಿಂದುತ್ವದ ರಾಜಕಾರಣ ಎಲ್ಲ ಕೆಳ ವರ್ಗದ ಜಾತಿ ಸಮುದಾಯಗಳನ್ನು ಬಿಜೆಪಿಯ ತೆಕ್ಕೆಗೆ ತಂದಿದ್ದು ನಿಜ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹಿಂದುಳಿದ ವರ್ಗದ ಜನರಿಗೆ ಈಗ ವಾಸ್ತವದ ಅರಿವಾಗುತ್ತಿದೆ. ಹಾಗೆ ಮೇಲ್ವರ್ಗದ ಪಟೇಲ್ ಸಮುದಾಯ ಕೇಶು ಬಾಯ್ ಪಟೇಲ್ ಅವರ ಹಿಂದೆ ನಿಂತಿರುವುದರಿಂದ ಮೋದಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ನಾವು ರಾತ್ರಿ ೯ ಗಂಟೆ ಹೊತ್ತಿಗೆ ಸೂರತ್ ನಗರವನ್ನು ತಲುಪಿದೆವು. ಸೂರತ್ ಮೊದಲಿನಿಂದಲೂ ಕೈಗಾರಿಕೆಗಳ ನಗರ. ನೇಕಾರಿಕೆ ಇಲ್ಲಿ ಪ್ರದಾನ. ಹಾಗೆ ಜೈನ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಈ ನಗರದಲ್ಲಿ ರಾತ್ರಿ ೯ ಗಂಟೆಯ ಹೊತ್ತಿಗೆ ಎಲ್ಲ ಹೋಟೆಲ್ ಗಳು ಮುಚ್ಚಿರುತ್ತವೆ. ನಾನು ಇಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದು ತ್ರಿತಾರಾ ಹೋಟೆಲ್ ಒಂದರಲ್ಲಿ. ಆ ಹೋಟೆಲ್ ಲಾಬಿಯಲ್ಲಿ ನಿಂತಾಗ ನನ್ನ ಸ್ನೇಹಿತರ ಜೊತೆ ನಾನು ಕನ್ನಡಡದಲ್ಲಿ ಮಾತನಾಡುತ್ತಿದ್ದೆ. ರೆಸೇಪ್ಶನ್ ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ನನ್ನ ಚಾಲಕನ ಬಳಿ ಕೇಳಿದ.
ಇವರು ಮುಸಲ್ಮಾನರೆ ? ಅವರು ಮಾತನಾಡುತ್ತಿರುವ ಭಾಷೆ ಯಾವುದು ? ಅವರು ಮುಸ್ಲೀಮ್ ರಾಗಿದ್ದರೆ ಅವರಿಗೆ ಈ ಹೋಟೆಲ್ಲಿನಲ್ಲಿ ರೂಮು ನೀಡುವುದಿಲ್ಲ.
ನನಗೆ ಆಘಾತವಾಗಿತ್ತು. ನಾನು ನೋಡಲು ಮುಸಲ್ಮಾನಂತೆ ಕಾಣುತ್ತಿದೆ. ಜೊತೆಗೆ ಸ್ವಲ್ಪ ಗಡ್ದವನ್ನು ಬಿಟ್ಟು ಟ್ರಿಮ್ ಮಾಡಿದ್ದೆ. ಹೀಗಾಗಿ ಆತ ನಾನು ಮುಸ್ಲಿಮ್ ಧರ್ಮಕ್ಕೆ ಸೇರಿದವನು ಎಂದು ಆತ ಅಂದುಕೊಂಡಿದ್ದ. ನಾನು ಅವನ ಜೊತೆ ಜಗಳವಾಡಿದೆ. ಕೋಮಿನ ಕಾರಣಕ್ಕಾಗಿ ರುಂಉ ನೀಡದಿರುವುದು ಸರಿಯಲ್ಲ ಎಂದು ವಾದಿಸಿದೆ. ಕೊನೆಗೆ ನನ್ನ ಹೆಅಸು ಕೇಳಿದ ಮೇಲೆ ಆತ ನನಗೆ ರೂಮು ನೀಡಲು ಒಪ್ಪಿದ.
ಆದರೆ ನರೇಂದ್ರ ಮೋದಿಯವರ ಗುಜರಾತಿನ ಸತ್ಯ ದರ್ಶನ ನನಗಾಗಿತ್ತು.. ಗಾಂಧಿಜಿಯವರ ಗುಜರಾತ್ ಸಂಪೂರ್ಣ ವಾಗಿ ಬದಲಾಗಿತ್ತು. ಇದನ್ನು ನನಗೆ ಸಹಿಸಿಕೊಳ್ಳುವುದು ಕಷ್ಟವಾಗಿತ್ತು. ಅಮ್ಜದ್ ಇದೆಲ್ಲ ನನಗೆ ಗೊತ್ತು ಎನ್ನುವಂತೆ ಸಣ್ಣಕ್ಕೆ ನಕ್ಕಿದ್ದು ನನ್ನ ಮನಸ್ಸಿನಲ್ಲಿ ಹಾಗೆ ಉಳಿದಿತ್ತು.
ಮರು ದಿನ ನಾನು ಅಹಮದಾಬಾದಿಗೆ ಭೇಟಿ ನೀಡಿದೆ. ಹಾಗೆ ಗುಜರಾತಿನ ಇನ್ನೂ ಕೆಲವು ಪ್ರದೇಶಗಳಿಗೆ ಬೇಟಿ ನೀಡಿದೆ.
ಅಲ್ಲಿ ನರೇಂದ್ರ ಮೋದಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಜಾತಿ ಲೆಕ್ಕಾಚಾರಗಳು ನಡೆಯುತ್ತಿದ್ದವು. ಆದರೆ ಮುಸ್ಲಿಮ್ ಎನ್ನುವ ಕಾರಣಕ್ಕಾಗಿ ಹೋಟೆಲ್ಲಿನಲ್ಲಿ ರೂಮು ನೀದುವುದಿಲ್ಲ ಎಂಬುದೇ ನನ್ನ ಮನಸ್ಸಿನಲ್ಲಿ ಕಾಡುತ್ತಿತ್ತು. ಇಂಥಹ ರಾಜ್ಯಕ್ಕೆ ದಿಕ್ಕಾರವಿರಲಿ ಎಂದು ನನ್ನ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಲೇ ನಾನು ಗುಜರಾತಿನಲ್ಲಿ ಅಸಹಾಯಕನಂತೆ ನಿಂತು ಬಿಟ್ಟೆ.

Friday, December 7, 2012

ನಿಮ್ಮಂಥ ದೊಡ್ದವರಿಗೆ ನನ್ನಂತಹ ಸಾಮಾನ್ಯನ ಮೇಲೆ ಯಾಕೆ ಅಸಹನೆ ?


ಮನುಷ್ಯರ ಮನಸ್ಸು ಕೆಲಸ ಮಾಡುವ ರೀತಿ ಕೆಲವೊಮ್ಮೆ ಭಯವನ್ನು ಹುಟ್ಟಿಸುತ್ತದೆ. ಕೆಲವೊಮ್ಮೆ ಬೇಸರವಾಗುತ್ತದೆ. ಕೆಲವೊಮ್ಮೆ ಕೋಪವನ್ನು ಉಂಟು ಮಾಡುತ್ತದೆ. ಸುಮಾರು ೨೦ ವರ್ಷಗಳ ಹಿಂದೆ ನಾನು ಹಿಮಾಲಯದಲ್ಲಿ ಭೇಟಿ ಮಾಡಿದ ಸ್ವಾಮೀಜಿ ಒಬ್ಬರು ನೀನು ಎಂದರೆ ನಿನ್ನ ಮನಸ್ಸು ಮತ್ತು ಆಲೋಚನೆ ಬೇರೆ ಏನೂ ಅಲ್ಲ ಎಂದು ಹೇಳಿದ ಮಾತು ನನಗೆ ಆಗಾಗ ನೆನಪಾಗುತ್ತದೆ. ಈ ಮನಷ್ಯನೆಂಬ ಕ್ಷುದ್ರ ಜೀವಿಯ ಮನಸ್ಸು ಅಸಹ್ಯ ಹುಟ್ಟಿಸುತ್ತದೆ.
ಈ ಪೂರ್ವಭಾವಿ ಪೀಠಿಕೆ ನೀಡುವುದಕ್ಕೆ ಬಹುಮುಖ್ಯ ಕಾರಣ ನನ್ನ ಕೆಲವು ಸಹೋದ್ಯೋಗಿಗಳು ನೆನಪಾಗಿದ್ದು. ನಾನು ಪತ್ರಿಕೋದ್ಯಮಕ್ಕೆ ಬಂದು ೨೫ ವರ್ಷಗಳು ಕಳೆದು ಹೋಗಿವೆ. ಇಲ್ಲಿಗೆ ಬಂದ ಮೇಲೆ ಹಲವು ರೀತಿಯ ಜನರನ್ನು ಭೇಟಿ ಮಾಡಿದ್ದೇನೆ. ಹಲವಾರು ಸಹೋದ್ಯೋಗಿಗಳ ಜೊತೆ ಕೆಲಸ ಮಾಡಿದ್ದೇನೆ. ಕೆಲವೇ ಕೆಲವರು ಸ್ನೇಹಿತರಾಗಿದ್ದಾರೆ. ಹಲವರ ಜೊತೆ ವೈಚಾರಿಕ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಆದರೆ ಯಾರ ಬಗ್ಗೆಯೋ ವೈಯಕ್ತಿಕ ದ್ವೇಷ ಸಾಧನೆ ಮಾಡುವುದು ನನ್ನ ಜಾಯಮಾನವಲ್ಲ. ಮನುಷ್ಯ ಗುಣ ಮತ್ತು ದೌರ್ಬಲ್ಯಗಳ ಒಂದು ಮೊತ್ತ ಎಂದು ನಂಬಿದವನು ನಾನು. ಹಾಗೆ ಗುಣಗ್ರಾಹಿಯಾಗಿ ಬದುಕಲು ಯತ್ನ ನಡೆಸಿದವನು ನಾನು. ಆದರೆ ಕೆಲವೊಂದು ವಿಚಾರಗಳ ಬಗ್ಗೆ  ಎಂದೂ  ಹೊಂದಾಣಿಕೆ  ಮಾಡಿಕೊಂಡವನಲ್ಲ.  ಎಂದೂ ಹೊಂದಾಣಿಕೆ ಮಾಡಿಕೊಳ್ಳುವವನು ಅಲ್ಲ.
ನನ್ನ ಸಹೋದ್ಯೋಗಿಗಳಾಗಿದ್ದವರಲ್ಲಿ  ರವಿ ಬೆಳಗೆರೆ, ವಿಶ್ವೇಶ್ವರ ಭಟ್, ಎಚ್. ಆರ್. ರಂಗನಾಥ್ ಎಲ್ಲರೂ ಇದ್ದಾರೆ. ಇವರಲ್ಲಿ ಎಲ್ಲರ ಬಗ್ಗೆಯೂ ನನಗೆ ನನ್ನದೇ ಆದ ಆಭಿಪ್ರಾಯವಿದೆ. ಆದರೆ  ವೈಯಕ್ತಿಕ ಧ್ವೇಷವಿಲ್ಲ. ಅವರಲ್ಲಿರುವ ಒಳ್ಳೆಯ ಗುಣಗಳ ಬಗ್ಗೆ ನನಗೆ ಪ್ರೀತಿ ಮತ್ತು ಗೌರವಗಳಿವೆ.
ರವಿ ಬೆಳಗೆರೆ ಮತ್ತು ವಿಶ್ವೇಶ್ವರ ಭಟ್ ಆತ್ಮೀಯರಾಗಿದ್ದ ದಿನಗಳಲ್ಲಾಗಲೀ, ಜಗಳ ಮಾಡುತ್ತಿರುವ ಇಂದಿನ ದಿನಗಳಲ್ಲಾಗಲಿ ಆ ಬಗ್ಗೆ ಬಹಿರಂಗವಾಗಿ ನಾನು ಮಾತನಾಡಿದವನಲ್ಲ. ಒಬ್ಬರು ಇನ್ನೊಬ್ಬರ ಮೇಲೆ ಕೆಸರು ಎರಚುತ್ತಿರುವಾಗ ನನಗೆ ಬೇಸರವಾಗಿದ್ದುಂಟು. ರವಿಯ ಬಗ್ಗೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿದ್ದಾಗಲೂ ನಾನು ಕೆಲಸ ಮಾಡುತ್ತಿದ್ದ ವಾಹಿನಿಯೊಂದರಲ್ಲಿ ಅವನನ್ನು ಕರೆದು ಕಾರ್ಯಕ್ರಮ ಮಾಡಿಸಿದವನು ನಾನು. ಅವನಿಗೂ ನನ್ನ ಮೇಲೆ ಗೌರವವಿದೆ. ಅವನೆಂದೂ ನನ್ನ ಬಗ್ಗೆ ಸಣ್ಣದಾಗಿ ಮಾತನಾಡಿಲ್ಲ.
ಇನ್ನು ರಂಗನಾಥ್. ಆತ ಮತ್ತು ನಾನು ಹಲವು ವರ್ಷ ಜೊತೆಯಾಗಿ ಇದ್ದವರು. ಜೊತೆಯಾಗಿ ಕೆಲಸ ಮಾಡಿದವರು. ಕೆಲವೊಮ್ಮೆ ಸಿಟ್ಟು ಮಾಡಿಕೊಂಡಿದ್ದೇವೆ. ಮಾತನಾಡದೇ ಕಾಲ ಕಳೇದಿದ್ದೇವೆ. ಆದರೆ ವಾರದಲ್ಲಿ ನಾಲ್ಕಾರು ಬಾರಿಯಾದರೂ ಅವನ ಬಗ್ಗೆ ನಾವು ಮನೆಯಲ್ಲಿ ಮಾತನಾಡುತ್ತೇವೆ. ಈತ ನಮ್ಮ ಸ್ನೇಹಿತ ಎಂಬ ಭಾವ ಎಂದೂ ಹೋಗುವುದಿಲ್ಲ. ಆತನೂ ಅಷ್ಟೇ. ತಾನು ಹೊಸದೊಂದು ಚಾನಲ್ ಮಾಡಿದಾಗ ಪ್ರೀತಿಯಿಂದ ಕರೆದ. ನಾನು ಹೋಗಿ ಬಂದೆ.
ರಂಗನಾಥ್ ಕನ್ನಡ ಪ್ರಭ ಸಂಪಾದಕನಾಗಿದ್ದಾಗ ಸುವರ್ಣದಲ್ಲಿ ರಾಜಕೀಯ ಚರ್ಚೆಗೆ ಕರೆದು ವಿಸ್ಯುವಲ್ ಮೀಡಿಯಾ ಪ್ರವೇಶಕ್ಕೆ ಕಾರಣನಾದವನು ನಾನು. ಈ ಬಗ್ಗೆ ನನಗೆ ಸಂತೋಷವಿದೆ. ಆತ ಪತ್ರಿಕೋದ್ಯಮಿಯಾಗಿ ಮಾಡಿರುವ ಸಾಧನೆಯ ಬಗ್ಗೆ ನನಗೆ ಹೆಮ್ಮೆ ಇದೆ.  ರಂಗನಾಥ್ ಮತ್ತು ರವಿಯ ಜೊತೆ ಯಾವಾಗಲಾದರೂ ಒಮ್ಮೆ ದೂರವಾಣಿಯಲ್ಲಿ ಮಾತನಾಡಿ ಯೋಗಕ್ಷೇಮ ವಿಚಾರಿಸಿಕೊಳ್ಳುವುದಿದೆ.
ನಾಡಿನ ಖ್ಯಾತ ಪತ್ರಕರ್ತರಾದ ವಿಶ್ವೇಶ್ವರ ಭಟ್ ರು ನನ್ನ ಜಿಲ್ಲೆಯವರು. ನಾನು ಮತ್ತು ಅವರು ಕನ್ನಡ ಪ್ರಭದಲ್ಲಿ ಜೊತೆಯಾಗಿ ಕೆಲಸ ಮಾಡಿದವರು. ಅವರು ನನಗೆ ರಂಗನಾಥ್ ಮತ್ತು ರವಿಯಷ್ಟು ಆತ್ಮೀಯರಲ್ಲದಿದ್ದರೂ ಅವರ ಜೊತೆ ನಾನೆಂದೂ ಜಗಳವನ್ನು ಆಡಿಲ್ಲ. ನಾನು ವರದಿಗಾರನಾಗಿ ಕೆಲಸ ಮಾಡುತ್ತಿದ್ದಾಗ ಅವರು ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಏಷ್ಯನ್ ಸ್ಕೂಲ್ ಆಫ್ ಜರ್ನಲಿಸಂ ನಲ್ಲಿ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಆದರೆ ಕನ್ನಡ ಪ್ರಭ ಸಂಪಾದಕರಾದ ವೈ ಎನ್ ಕೆ ಅವರಿಗೆ ಹತ್ತಿರದವರಾದ್ದರಿಂದ ಅವರನ್ನು ಭೇಟಿ ಮಾಡಲು ಬಂದಾಗ ನಾನು ಅವರೊಂದಿಗೆ ಕೆಲವೊಮ್ಮೆ ಮಾತನಾಡಿದ್ದು ಉಂಟು.
ನನ್ನ ಮೇಲೇಕೆ ಅಸಹನೆ ಭಟ್ಟರೆ ?
ನಾನು ಸುವರ್ಣ ನ್ಯೂಸ್ ಸೇರಿದ ಮೇಲೆ ಅವರಿಂದ ವಾಕ್ ದಿ ಟಾಕ್ ಕಾರ್ಯಕ್ರಮ ಮಾಡಿಸಿದೆವು. ನಮ್ಮ ಆಡಳಿತ ಮಂಡಳಿಗೆ ಅವರಿಂದ ಕಾರ್ಯಕ್ರಮ ಮಾಡಿಸಬೇಕು ಅನ್ನಿಸಿದಾಗ ನಾನೇನೂ ಅದಕ್ಕೆ ವಿರೋಧವನ್ನು ವ್ಯಕ್ತಪಡಿಸಲಿಲ್ಲ. ಈ ಕಾರ್ಯಕ್ರಮದ ಸಂಬಂಧ ಅವರು ಕಚೇರಿಗೆ ಬಂದಾಗ ನಾನು ಅವರನ್ನು ಭೇಟಿ ಮಾಡಿತ್ತಿದ್ದುದು ಉಂಟು. ಆದರೆ ಆ ಕಾರ್ಯಕ್ರಮಕ್ಕೆ ನಿರೀಕ್ಷಿತ ಜನಪ್ರಿಯತೆ ಬರದಿದ್ದರಿಂದ ಅದನ್ನು ನಿಲ್ಲಿಸಬೇಕಾಯಿತು. ಇದಾದ ಮೇಲೆ ನಾನೆಂದೂ ಅವರನ್ನೂ ಭೇಟಿ ಮಾಡಲಿಲ್ಲ.
ಆದರೆ ಅವರು ಹಲವಾರು ವಿಚಾರಗಳಲ್ಲಿ ವಿವಾದಕ್ಕೆ ಒಳಗಾದಾಗ ಆ ಬಗ್ಗೆ ಸಹೋದ್ಯೋಗಿಗಳ ಜೊತೆ ನಾನು ಬೇಸರದಿಂದಲೇ ಮಾತನಾಡಿದ್ದಿದೆ. ಅದು ಗಣಿ ಹಗರಣಕ್ಕೆ ಸಂಬಂಧಿಸಿರಬಹುದು, ಲಾಯರ್ ಜೊತೆಗಿನ ಗುದ್ದಾಟವಿರಬಹುದು, ಹಾಯ್ ಬೆಂಗಳೂರಿನಲ್ಲಿ ಬಂದ ವರದಿಯಲ್ಲಿನ ವಿಷಯಕ್ಕೆ ಸಂಬಂಧಿಸಿರಬಹುದು ಆಗೆಲ್ಲ ಖಾಸಗಿಯಾಗಿ ನಾನು ಬೇಸರದಿಂದ ಮಾತನಾಡಿದ್ದಿದ್ದೆ.
ಹಾಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ಕೆಲವರು ವಿಶ್ವೇಶ್ವರ ಭಟ್ಟರ ಬಗ್ಗೆ ಬೇಸರದಿಂದ ಮಾತನಾಡಿದಾಗ ಆ ಜಿಲ್ಲೆಯವನೇ ಆದ ನಾನು ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದೇನೆ. ಇದನ್ನು ಬಿಟ್ಟರೆ ನಾನು ಅವರ ಬಗ್ಗೆ ಎಂದೂ ಎಲ್ಲಿಯೂ ಮಾತನಾಡಿಲ್ಲ. ಯಾಕೆಂದರೆ ನಾನು ಸ್ಟಾರ್ ಪತ್ರಕರ್ತನಲ್ಲ. ಇಡೀ ರಾಜ್ಯದ ರಾಜಕೀಯವನ್ನು ಸಾಮಾಜಿಕ ಬದುಕನ್ನು ಬದಲಿಸುವ ಶಕ್ತಿವಂತನೂ ಅಲ್ಲ. ನಾನು ಹತ್ತರಲ್ಲಿ ಒಬ್ಬ.
ಈ ವಿಚಾರಗಳನ್ನು ನಾನು ಪ್ರಸ್ತಾಪಿಸುವುದಕ್ಕೆ ಕಾರಣ ನನಗೆ ಬಂದ ದೂರವಾಣಿ ಕರೆ. ಕಳೆದ ವಾರ ನಾನು ಮಂಗಳೂರಿನಿಂದ ಹಿಂತಿರುಗಿ ಬಂದ ಮೇಲೆ ಸ್ನೇಹಿತರೊಬ್ಬರು ನನಗೆ ಕರೆ ಮಾಡಿ ಕನ್ನಡ ಪ್ರಭದಲ್ಲಿ ಬಾಣ ಭಟ್ ನಿಮ್ಮ ಬಗ್ಗೆ ಬರೆದಿದ್ದಾರೆ ಎಂದರು. ನಾನು ತಲೆ ಕೆಡಿಸಿಕೊಳ್ಳಲಿಲ್ಲ. ನಾನು ಕಳೆದ ಕೆಲವು ವರ್ಷಗಳಿಂದ ಕನ್ನಡ ಪ್ರಭ ಪತ್ರಿಕೆಯನ್ನು ಮನೆಗೆ ತರಿಸಿಕೊಳ್ಳದೇ ಇರುವುದರಿಂದ ಆ ಬಗ್ಗೆ ನನಗೆ ಗೊತ್ತಾಗಲಿಲ್ಲ. ಇಂದು ಬೆಳಿಗ್ಗೆ ಮತ್ತೆ ಇನ್ನೊಂದು ದೂರವಾಣಿ ಕರೆ. ಅವರೂ ಸಹ ಇಂದಿನ ಕನ್ನಡ ಪ್ರಭ ನೋಡಿ ಎಂದರು. ತಕ್ಷಣ ಅಂಗಡಿಗೆ ಹೋಗಿ ಪತ್ರಿಕೆಯನ್ನು ತಂದು ನೋಡಿದೆ. ಅಲ್ಲಿ ಬಾಣ ಭಟ್ಟನ ಪ್ರಶ್ನೋತ್ತರ ಹೀಗಿತ್ತು.
ಪ್ರಶ್ನೆ; ತುಟಿ ಕೆಂಪಗಿರುವವರೆಲ್ಲೆ ಲಿಪ್ ಸ್ಟಿಕ್ ಹಚ್ಚಿಕೊಳ್ಳುತ್ತಾರೆಯೆ ?
ಉತ್ತರ; ಪೊಕಳೆ ಶಶಿಧರ ಭಟ್ ಎಲೆಅಡಿಕೆ ಮೆತ್ತಿಕೊಂಡಿರುತ್ತಾನೆ.
ಇಲ್ಲಿ ಪ್ರಶ್ನೆ ಮತ್ತು ಉತ್ತರದ ನಡುವೆ ನನಗೆ ಯಾವ ಸಂಬಂಧವೂ ಕಾಣುತ್ತಿಲ್ಲ. ಅಸಹನೆ ಮತ್ತು ಧ್ವೇಷ ಮಾತ್ರ ಇಲ್ಲಿ ತಾಂಡವವಾಡುತ್ತಿದೆ. ಇನ್ನು ನಾನು ಎಲೆ ಅಡಿಕೆ ಹಾಕಿಕೊಳ್ಳುತ್ತೇನೆ ಎಂಬುದು ನಿಜ. ಅದು ನನ್ನ ಜಿಲ್ಲೆಯ ಬಹುತೇಕ ಜನರೂ ಹಾಕಿಕೊಳ್ಳುತ್ತಾರೆ. ವಿಶ್ವೇಶ್ವರ ಭಟ್ ರ ಅಪ್ಪ ಅಮ್ಮ ಕೂಡ ಎಲೆ ಅಡಿಕೆ ಹಾಕಿಕೊಳ್ಳುತ್ತಿರಬಹುದು. ಈಗಲೂ ಅವರ ನೂರಾರು ಸಂಬಂಧಿಕರು ಎಲೆ ಅಡಿಕೆ ಹಾಕಿಕೊಳ್ಳುತ್ತಾರೆ ಎಂದು ನಾನು ಎದೇ ತಟ್ಟಿ ಹೇಳಬಲ್ಲೆ.ಹಾಗಂತ ತಮ್ಮ ಜಿಲ್ಲೆಯ ಸ್ನೇಹಿತರನ್ನು ಜನರನ್ನು ಅವರು ದ್ವೇಷಿಸುತ್ತಾರೆಯೆ ?  ಜೊತೆಗೆ ನಾನು ಎಲೆ ಅಡಿಕೆ ಹಾಕಿಕೊಂಡರೂ ಇನ್ನೂ ಯಾರಿಗೂ ಉಗಿದಿಲ್ಲ. ಕೆಲವೊಮ್ಮೆ ಉಗಿಯಬೇಕು  ಎಂದು ಅನ್ನಿಸಿದರೂ ಹಾಗೆ ಮಾಡಿಲ್ಲ. ನಾನು ಕೆಲವೊಮ್ಮೆ ಹೇಳುವುದಿದೆ. ಎಲೆ ಅಡಿಕೆ ನನ್ನ ಜಿಲ್ಲೆಯನ್ನು ನನ್ನ ಜನರನ್ನು ನನ್ನ ತೋಟವನ್ನು ಕಾಡನ್ನು ಜಲಪಾತವನ್ನು ನೆನಪು ಮಾಡುತ್ತದೆ. ನನ್ನೂರಿನ ನೆನಪನ್ನು ಮರೆತು ನನಗೆ ಜೀವಿಸಲು ಸಾಧ್ಯವಿಲ್ಲ.  ಪ್ರತಿ ಕ್ಷಣದಲ್ಲಿ ನನ್ನನ್ನು ನನ್ನ ನೆಲ ಮತ್ತು ಜನರ  ನೆನಪು ಮಾಡುವುದು ಎಲೆ ಅಡಿಕೆಯೇ. ಇಲ್ಲಿದಿದ್ದರೆ ಯಾರ್ಯಾರೋ ನೆನಪಾಗಿ ಮನಸಿಗೆ ಬೇಸರವಾಗುತ್ತದೆ.
ನಾನು ಏನನ್ನಾದರೂ ಬಿಟ್ಟೇನು, ಎಲೆ ಅಡಿಕೆ ಬಿಡುವಿದಿಲ್ಲ. ಜೊತೆಗೆ ಎಲೆ ಅಡಿಕೆ ಕೋಟಿನ ಹಾಗೆ ಸೂಟಿನ ಹಾಗೆ ಎಲ್ಲಿಂದಲೋ ಬಂದಿದ್ದಲ್ಲ.ವಿದೇಶಗಳಲ್ಲಿ ಸುತ್ತುವವರಿಗೆ ವಿದೇಶಿ ಇಂಗ್ಲೀಷ್ ಕನಸು ಕಾಣುವವರಿಗೆ ಇದೆಲ್ಲ ಬೇಡದಿರಬಹುದು.ಆದರೆ ನನ್ನಂಥಹ ಪಾಮರರಿಗೆ ಸಾಮಾನ್ಯರಿಗೆ ಇದೆಲ್ಲ ಬೇಕು. ಅದು ಬೇರೆ ಯಾವ ಅನುಕರಣೆಯೂ ಅಲ್ಲ. ಅದು ನಮ್ಮ ನೆಲದ್ದು ನಮ್ಮದು.
ಇನ್ನು ಪೊಕಳೆ ಎಂಬ ವಿಶೇಷಣ. ಪೊಕಳೆ ಎಂದು ಸುಳ್ಳು ಹೇಳುವವನು ಎಂಬ ಅರ್ಥವಿದೆ. ಅದಕ್ಕೆ ಬುರುಡೆ ಎಂದು ಹೇಳಬಹುದು. ನಾನು ಎಲ್ಲಿ ಸುಳ್ಳು ಹೇಳಿದ್ದೇನೆ ಎಂಬುದು, ನಾನು ಎಲ್ಲಿ ಬುರುಡೆ ಬಿಡುತ್ತೇನೆ ಎಂಬುದು ನನಗೆ ತಿಳಿಯದು. ಹಾಗೆ ಸುಳ್ಳು ಹೇಳುವವರಿಗೆ ತಾವು ಸುಳ್ಳು ಹೇಳುತ್ತಿದ್ದೇವೆ ಎಂದು ತಿಳಿಯುವುದಿಲ್ಲ. ಜೊತೆಗೆ ಮುಕ್ತವಾಗಿ ಇರುವವರು ಕೆಲವೊಮ್ಮೆ ಒಂದರೆಡು ಹೆಚ್ಚಿಗೆ ಮಾತನಾಡುತ್ತಾರೆ. ಅದರಲ್ಲಿ ಉತ್ಪ್ರೇಕ್ಶೆ ಇರಬಹುದು. ನನ್ನ ಮಾತಿನಲ್ಲೂ ಉತ್ಪ್ರೇಕ್ಶೆ ಇದ್ದರೂ ಇರಬಹುದು. ಜೊತೆಗೆ ಅಪಾಯಕಾರಿಯಲ್ಲದ ಸುಳ್ಳು ಒಳ್ಳೆಯದೇ.
ನಾನು ಉದ್ದೇಶಪೂರ್ವಕವಾಗಿ ಸುಳ್ಳು ಹೇಳುವುದಿಲ್ಲ ಎಂದು ಮಾತ್ರ ಹೇಳಬಲ್ಲೆ.
ಕನ್ನಡ ಪ್ರಭದಲ್ಲಿ ಬಂದ ಪ್ರಶ್ನೋತ್ತರವನ್ನು ನೋಡಿದಾಗ ವಿಶ್ವೇಶ್ವರ ಭಟ್ಟರಿಗೆ ನನ್ನ ಮೇಲೆ ಕೋಪ ಮತ್ತು ಅಸಹನೆ ಇದೆ ಎಂಬುದು ಸ್ಪಷ್ಟ. ಅದು ಯಾಕೆ ಎಂಬುದು ನನಗೆ ನಿಜವಾಗಿ ತಿಳಿಯದು. ಪ್ರೀತಿ ಮತ್ತು ಕೋಪಕ್ಕೆ ಸಕಾರಣಗಳಿರಬೇಕು. ಸಕಾರಣಗಳಿಲ್ಲದ ಪ್ರೀತಿ ಮತ್ತು ಧ್ವೇಷ ಎರಡು ಅಪಾಯಕಾರಿಯೆ. ಇಂತಹ ಅಪಾಯಕಾರಿಯಾದ ಧ್ವೇಷ ಯಾತಕ್ಕೆ ಎಂಬುದು ನನಗೆ ತಿಳಿದರೆ ಒಳ್ಳೆಯದು. ಆದರೆ ಅವರು ಪೊಕಳೆ ಎಂಬ ಶಬ್ದವನ್ನು ಬಳಸಿರುವುದನ್ನು ಗಮನಿಸಿದರೆ ನಾನು ಎಲ್ಲೋ ಹೇಳಿದ ಯಾವುದೋ ಮಾತಿನಿಂದ ಅವರಿಗೆ ಸಿಟ್ಟು ಬಂದಿದೆ ಎಂಬುದು ಸ್ಪಷ್ಟ. ಅದು ಯಾವುದು ಎಂಬುದನ್ನು ಅವರು ಹೇಳಿದರೆ ಆ ಬಗ್ಗೆ ನಾವು ಚರ್ಚೆ ಮಾಡಬಹುದು. ನಾನು ಪೊಕಳೆ ಭಟ್ಟನಾದರೂ ಓಡಿ ಹೋಗುವ ಭಟ್ಟನಲ್ಲ. ಹೊಂದಾಣಿಕೆ ಮಾಡಿಕೊಳ್ಳುವ ಭಟ್ಟನಲ್ಲ. ಗುಂಪು ಕಟ್ಟುವ, ಯೋಧರ ಪಡೆ ಕಟ್ಟುವ ಭಟ್ಟನಲ್ಲ. ನಾನು ಒಬ್ಬಂಟಿಯಾಗಿ ಮಾತನಾಡಬಲ್ಲೆ. ನನ್ನನ್ನು ನಾನು ಸಮರ್ಥಿಸಿಕೊಳ್ಳಬಲ್ಲೆ.  ಆರೋಗ್ಯಪೂರ್ಣ ಚರ್ಚೆಯಲ್ಲಿ ನನಗೆ ನಂಬಿಕೆ ಇದೆ. ಯಾಕೆಂದರೆ ನಾನು ಮೂಲಭೂತವಾಗಿ ಜನತಂತ್ರವಾದಿ.

ಇವರು ನಿಜವಾದ ಜನ ನಾಯಕರೆ ? ಅಥವಾ ಬೇರೆ ಏನೋ ಇದೆಯೆ ?

ಕಮಲ ಈಗ  ದೂರ ದೂರ 

ಇತ್ತೀಚಿನ ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಇಡೀ ಬೆಳವಣಿಗೆಗಳ ಕೇಂದ್ರ ಬಿಂದುವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡೀಯೂರಪ್ಪನವರು ಕಾಣುತ್ತಾರೆ ಅಥವಾ ಅವರು ಹಾಗೆ ಬಿಂಬಿತರಾಗುತ್ತಿದ್ದಾರೆ. ಇದಕ್ಕೆ ಬಹುಮುಖ್ಯಕಾರಣ ಕಳೆದ ಆರೆಳು ವರ್ಷಗಳ ರಾಜ್ಯ ರಾಜಕಾರಣದಲ್ಲಿ ಅವರು ಒಹಿಸಿದ ಪಾತ್ರ ಎಂಬುದು ನಿಜ. ಬಿಜೆಪಿ ,ಮತ್ತು ಜೆಡಿಎಸ್ ಸರ್ಕಾರ ಪತನಗೊಂಡ ಮೇಲೆ ಅವರು ಒಬ್ಬ ಷಡ್ಯಂತ್ರಕ್ಕೆ ಬಲಿಯಾದ ರಾಜಕಾರಣಿಯಾಗಿ ಕಾಣಿಸಿಕೊಂಡರು.. ಜೊತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ತಮ್ಮ ರಾಜಕೀಯ ಅಪಕ್ವತೆಯಿಂದಾಗಿ ದುರಂತ ನಾಯಕನೊಬ್ಬನನ್ನು ಸೃಷ್ಟಿಸಿ ಬಿಟ್ಟರು. ನಮ್ಮಲ್ಲಿ ಸಾಧಾರಣವಾಗಿ ದುರಂತ ನಾಯಕರಿಗೆ ಜನ ಮನ್ನಣೆ ಹೆಚ್ಚು. ಕಥೆಯ ನಾಯಕರಿಗಿಂತ ದುರಂತ ನಾಯಕರನ್ನು ಮೆಚ್ಚುವ ಆರಾಧಿಸುವ ಮನಸ್ಥಿತಿ ನಮ್ಮದು.
ನೀವು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಭಾಗದವರಾಗಿದ್ದರೆ, ಗಧಾಯುದ್ಧ ಯಕ್ಷಗಾನ ಪ್ರಸಂಗವನ್ನು ನೋಡಿಯೇ ನೋಡಿರುತ್ತೀರಿ. ಈ ಪ್ರಸಂಗದಲ್ಲಿ ಎಲ್ಲವನ್ನು ಕಳೆದುಕೊಂಡ ದುರ್ಯೋಧನ ಕುರುಕ್ಷೇತ್ರ ಎಂಬ ಯುದ್ಧಭೂಮಿಯಲ್ಲಿ ಒಬ್ಬನೇ ಬರುತ್ತಿರುತ್ತಾನೆ. ಆಗ ಬರುವ ಹಾಡು ಹೀಗಿದೆ.
ಕುರುರಾಯನಿದನೆಲ್ಲ ಕಂಡು ಸಂತಾಪದಲಿ
ತನ್ನೆಲ ಭಾಗ್ಯವೆನುತ...
ಹೆಣದ ಪರ್ವತವನೇರಿಳುದು...
ಬೆಳಗಿನ ಜಾವ ಈ ಪದವನ್ನು ಭಾಗವತರು ಹೇಳುತ್ತಿದ್ದಂತೆ ಮಲಗಿದವರೆಲ್ಲೆ ಎದ್ದು ಕುಳಿತು ಬಿಡುತ್ತಾರೆ. ಹಾಗೆ ಕುರುರಾಯನ ದುರಂತ ಎಲ್ಲರ ಎದೆಯನ್ನು ತಟ್ಟಿ ಅಲ್ಲಿಯೇ ಉಳಿದುಬಿಡುತ್ತದೆ. ಕೊನೆಗೆ ಆಟ ಮುಗಿಸಿ ಮನೆಗೆ ಹೋಗುವವರು ಕುರುರಾಯನ ಪಾತ್ರದ ಬಗ್ಗೆಯೇ ಮಾತನಾಡುತ್ತಾರೆಯೇ ಹೊರತೂ ಭೀಮನ ಬಗ್ಗೆ ಯಾರೂ ಮಾತನಾಡುವುದಿಲ್ಲ. ಈ ಪ್ರಸಂಗದಲ್ಲಿ ನಾಯಕನೆಂದರೆ ಕುರುರಾಯನೇ..ಆತ ಎನೇ ತಪ್ಪು ಮಾಡಿದರೂ ಕೊನೆಗೆ ಏನೇ ಇರಲಿ  ಕೌರವ ಮಾಡಿದ್ದರಲ್ಲಿ ತಪ್ಪೇನು ಇಲ್ಲ ಎಂದು ಜನ ಮಾತನಾಡುತ್ತ ಮನೆ ಸೇರುತ್ತಾರೆ.
ದುರಂತ ನಾಯಕರಿಗೆ ಇರುವ ಗೌರವ ಅಂತಹುದು. ಯಾವತ್ತೂ ದುರಂತ ನಮ್ಮ ಎದೆಯ ಬಾಗಿಲನ್ನು ಬಡಿದ ಕಂಪನವನ್ನು ಉಂಟು ಮಾಡುತ್ತದೆ. ಅವರು ಮಾಡಿದ ತಪ್ಪುಗಳನ್ನೆಲ್ಲ ಮರೆಯುವಂತೆ ಮಾಡುತ್ತದೆ. ಜೆಡಿಎಸ್ ಪಕ್ಷದ ನಾಯಕರ ತಪ್ಪಿನಿಂದ ಯಡಿಯೂರಪ್ಪ ದುರಂತ ನಾಯಕರಾಗಿ ಕನ್ನಡಿಗರ ಮನಸ್ಸಿನಲ್ಲಿ ಉಳಿದು ಬಿಟ್ಟರು. ಆಗ ಅವರು ಸೇರಿದ ಪ್ರಬಲ ಲಿಂಗಾಯಿತ ಜಾತಿಯವರು ಮಾತ್ರವಲ್ಲ, ಇಡೀ ಕರ್ನಾಟಕದ ಜನ ಯಡಿಯೂರಪ್ಪನವರ ಬಗ್ಗೆ ಮರುಕಪಟ್ಟರು. ಅವರಿಗೆ ಹೀಗೆ ಮೋಸವಾಗಬಾರದಿತ್ತು ಎಂದರು. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿಯನ್ನು ಅಧಿಕಾರದ ಗದ್ದುಗೆಯ ಹತ್ತಿರ ತಂದು ಬಿಟ್ಟರು. ೧೧೦ ಸ್ಥಾನಗಳನ್ನು ಪಡೆದ ಬಿಜೆಪಿ ಸದನದ ಬಹುಮತಪಡೆಯಲು ಕೇವಲ ಎರಡು ಸ್ಥಾನಗಳು ಮಾತ್ರ ಕಡಿಮೆಯಾಗಿತ್ತು.
ಇದಾದ ಮೇಲೆ ಯಡಿಯೂರಪ್ಪನವರ ದುರಂತ ನಾಯಕನ ಸ್ಥಾನ ಹೊರಟು ಹೋಯಿತು. ಅವರು ದುರಂತ ನಾಯಕನ ಸ್ಥಾನದಿಂದ ರಾಜ್ಯದ ನಾಯಕನ ಸ್ಥಾನವನ್ನು ಏರಿ ಕುಳಿತರು. ಆಗಲೇ ಯಡಿಯೂರಪ್ಪ ಬದಲಾಗತೊಡಗಿದರು. ಜನ ಬೆಂಬಲ ಅವರನ್ನು ಒಬ್ಬ ಸರ್ವಾಧಿಕಾರಿ ರಾಜಕಾರಣಿಯನ್ನಾಗಿ ಬದಲಿಸಿಬಿಟ್ಟಿತ್ತು. ಅವರು ಆಪರೇಷನ್ ಕಮಲದ ಮೂಲಕ ಕಂಡ ಕಂಡವರನ್ನು ಅವಕಾಶವಾದಿಗಳನ್ನು, ಅಧಿಕಾರದಾಹಿಗಳನ್ನು ತಂದು ತಮ್ಮ ಪಕ್ಕದಲ್ಲಿ ಕೂಡ್ರಿಸಿಕೊಂಡರು. ಬಿಜೆಪಿಯ ತತ್ವ ಸಿದ್ಧಾಂತಗಳ ಅರಿವಿಲ್ಲದ ಅಧಿಕಾರ ರಾಜಕಾರಣವನ್ನೇ ನಂಬಿರುವ ತುಂಡು ದೋರೆಗಳಿಂದ ಅವರು ಬಹುಪರಾಕ್ ಹೇಳಿಸಿಕೊಳ್ಳತೊಡಗಿದರು.
ಯಡಿಯೂರಪ್ಪ ಅಧಿಕಾರ ರಾಜಕಾರಣದ ಎಲ್ಲ ಪಟ್ಟುಗಳನ್ನು ಕರಗತ ಮಾಡಿಕೊಳ್ಳತೊಡಗಿದರು. ಒಬ್ಬ ರಾಜನೀತಿಜ್ನನಿಗೂ ಮೂರನೆಯ ದರ್ಜೆ ರಾಜಕಾರಣಿಗೂ ಇರುವ ವ್ಯತ್ಯಾಸವನ್ನು ಅವರು ಅರ್ಥ ಮಾಡಿಕೊಳ್ಳಲೇ ಇಲ್ಲ. ಈ ನಾಡಿನ ರೈತರ ಪರವಾಗಿ ಹೋರಾಡಿ ಬೆಳೆದ ನಾಯಕ ರೈತರ ಮೂಲಭೂತ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಪರಿಹಾರ ಒದಗಿಸುವ ಯತ್ನ ಮಾಡಲಿಲ್ಲ. ರೈತರ ಬೆಳೆಗಳಿಗೆ ವೈಜ್ನಾನಿಕ ಬೆಲೆ ದೊರಕಿಸುವ ಬಗ್ಗೆ ಯೋಚಿಸಲಿಲ್ಲ. ಕೃಷಿ ಉತ್ಪನ್ನಗಳನ್ನು ಮೌಲ್ಯ ವರ್ಧಿತ ವಸ್ತುವನ್ನಾಗಿ ಪರಿವರ್ತಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಯೋಚಿಸಲಿಲ್ಲ. ಕೃಷಿ ಮಧ್ಯವರ್ತಿಗಳನ್ನು ನಿಯಂತ್ರಿಸಲು ಅವರು ಯೋಚಿಸಲಿಲ್ಲ. ಬದಲಾಗಿ ಶಾಲಾ ಮಕ್ಕಳಿಗೆ ಸೈಕಲ್ ನೀಡುವಲ್ಲಿ ಸಂತೋಷ ಪಡತೊಡಗಿದರು. ಕೃಷಿ ಸಾಲ ಮನ್ನಾ ಮಾಡಿ ಮಹಾನ್ ಸಾಧನೆ ಮಾಡಿದ್ದೇನೆ ಎಂದು ಬೀಗತೊಡಗಿದರು. ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿ ದಾಖಲೆ ಮಾಡುತ್ತೇನೆ ಎಂದು ಗುಡುಗತೊಡಗಿದರು.
ಈ ನಡುವೆ ರೆಡ್ದಿ ಸಹೋದರರು ಮಾಡಿದ ಬಂಡಾಯದಿಂದ ಕೆರಳಿದ ಅವರು ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಹಪಹಪಿಸತೊಡಗಿದರು. ಶೋಭಾ ಕರಂದ್ಲಾಜೆ ವಿರುದ್ಧ ಕೂಗು ಎದ್ದಾಗ ಬಹಿರಂಗವಾಗಿ ಕಣ್ಣೀರು ಹಾಕಿ ಸಾಮಾಜಿಕ ಬದುಕಿಗಿಂತ ತಮಗೆ ವೈಯಕ್ತಿಕ ಬದುಕು ಮತ್ತು ಸಂಬಂಧ ಮುಖ್ಯ ಎಂಬ ಸಂದೇಶವನ್ನು ಸಾರಿ ಬಿಟ್ಟರು. ಈ ಮೂಲಕ ಜನರ ನಡುವಿನಿಂದ ಎದ್ದು ಬಂದ ನಾಯಕ ಎಂದು ನಂಬಿದವರಿಗೆ ತಾವು ಎದ್ದು ಬಂದಿದ್ದು ಎಲ್ಲಿಂದ ಮತ್ತು ಈಗ ಇರುವುದು ಎಲ್ಲಿ ಎಂಬುದನ್ನು ನಿರೂಪಿಸಿ ಬಿಟ್ಟರು.
ಭ್ರಷ್ಠಾಚಾರದ ಪ್ರಕರಣಗಳಲ್ಲಿ ಸಿಲುಕಿ ಅಧಿಕಾರ ಕಳೆದುಕೊಂಡ ಮೇಲೂ ಇದು ತಮ್ಮ ವಿರುದ್ಧದ ಪಿತೂರಿ ಎಂದು ಕರ್ನಾಟಕದ ಜನರನ್ನು ನಂಬಿಸುವ ಯತ್ನ ಮಾಡಿದರು. ಅದರೆ ಅವರು ಅರ್ಥ ಮಾಡಿಕೊಳ್ಳದ ವಿಚಾರ ಎಂದರೆ ರಾಜಕಾರಣದಲ್ಲಿ ಪಿತೂರಿ ಎಂಬುದು ಆ ಅಟದ ಒಂದು ನಿಯಮ ಎಂಬುದನ್ನು. ಯಾಕೆಂದರೆ ಒಂದು ಪಕ್ಷದಲ್ಲಿ ಇರುವ ಹಲವಾರು ನಾಯಕರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುತ್ತಾರೆ. ಅವರು ಷಡ್ಯಂತ್ರಗಳನ್ನು ನಡೆಸುತ್ತಲೇ ಇರುತ್ತಾರೆ. ಜೊತೆಗೆ ಕರ್ನಾಟಕದಲ್ಲಿ ಷ್ಯಡಂತ್ರ ನಡೆದಿರುವುದು ಯಡೀಯೂರಪ್ಪ ಅವರ ಮೇಲೆ ಮಾತ್ರ ಅಲ್ಲ. ಮುಖ್ಯಮಂತ್ರಿಗಳಾದ ಎಲ್ಲ ನಾಯಕರೂ ಷಡ್ಯಂತ್ರಗಳನ್ನು ಎದುರಿಸಿದ್ದಾರೆ. ಆದರೆ ಅವರಲ್ಲಿ ಯಾರೂ ಈ ರೀತಿ ಬೀದಿ ರಂಪ ಮಾಡಲಿಲ್ಲ. ದೇವರಾಜ ಅರಸು, ರಾಮಕೃಷ್ಣ ಹೆಗಡೆ, ವೀರಪ್ಪ ಮೊಯ್ಲಿ, ಎಸ್. ಬಂಗಾರಪ್ಪ, ವೀರೇಂದ್ರ ಪಾಟೀಲ್ ಎಲ್ಲರೂ ರಾಜಕೀಯ ಪಿತೂರಿಗಳಿಗೆ ಬಲಿಯಾದವರೇ. ಇವರಲ್ಲಿ ಎಲ್ಲರಿಗೂ ಮುಖ್ಯಮಂತ್ರಿ ಗಾದಿ ಮುಳ್ಳಿನ ಹಾಸಿಗೆಯೇ ಆಗಿತ್ತು. ಆದರೆ ಈ ಎಲ್ಲ ಮಾಜಿ ಮುಖ್ಯಮಂತ್ರಿಗಳಿಗೆ ಸಿಗದ ಅನುಕಂಪ ಯಡಿಯೂರಪ್ಪನವರಿಗೆ ಸಿಗುತ್ತಿದೆಯೆ ? ಈ ಎಲ್ಲ ಮಾಜಿ ಮುಖ್ಯಮಂತ್ರಿಗಳು ಮಾಡದ ಮಹಾನ್ ಸಾಧನೆಯನ್ನು ಯಡೀಯೂರಪ್ಪ ಮಾಡಿದ್ದಾರೆಯೆ ? ಕರ್ನಾನಟಕವನ್ನು ರಾಮ ರಾಜ್ಯವನ್ನಾಗಿ ಅವರು ಮಾಡಲು ಹೊರಟಿದ್ದರೆ ?
ಈಗ ಹಾಗೆ ಬಿಂಬಿಸುವ ಯತ್ನವಂತೂ ನಡೆಯುತ್ತಿದೆ. ಕನ್ನಡ ಖಾಸಗಿ ವಾಹಿನಿಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷ ಎರಡನೆಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಇದೇ ಮಾತನ್ನು ಬಹಳಷ್ಟು ಜನ ಹೇಳುತ್ತಾರೆ.
ಹಾಗಾದರೆ ಯಡಿಯೂರಪ್ಪ ಎಂತಹ ನಾಯಕ ಎಂದು ಅರ್ಥ ಮಾಡಿಕೊಳ್ಳಲು ನಾವೆಲ್ಲ ವಿಫಲರಾಗಿದ್ದೇವೆಯೆ ? ನನಗೆ ಗೊತ್ತಿಲ್ಲ. ಯಡೀಯೂರಪ್ಪ ಮಾಡಿರುವ ಅಭಿವೃದ್ಧಿ ಕಾರ್ಯಗಳು ಯಾವವು ಎಂದು ಪಟ್ಟಿ ಮಾಡಲು ಹೊರಟರೆ ಹೆಸರಿಸಬಹುದಾದ ಯಾವ ಕಾರ್ಯಕ್ರಮವೂ ಕಾಣುವುದಿಲ್ಲ. ಜೊತೆಗೆ ಭ್ರಷ್ಟಾಚಾರ ಅವರ ಆಡಳಿತಾವಧಿಯಲ್ಲಿ ಯಾವ ರೀತಿಯಲ್ಲಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಮುಖ್ಯಮಂತ್ರಿಯಾದವರು ತಮ್ಮ ಕುಟುಂಬಕ್ಕೆ ಸೇರಿದ ಶಿಕ್ಷಣ ಸಂಸ್ಥೆಗೆ ಚೆಕ್ ಮೂಲಕ ಕಮೀಷನ್ ಕೊಡಿಸಿದರು ಎಂದು ಆಪಾದಿಸಲಾದ ಪ್ರಕರಣ ನಡೆದಿದೆ. ಅಂದರೆ ಭ್ರಷ್ಟಾಚಾರ ಮತ್ತು ಕಮೀಷನ್ ವ್ಯವಹಾರವನ್ನು ಸರಿಯಾಗಿ ಮಾಡಲಾಗದ ಕಾಲ..
ಹಾಗಿದ್ದರೆ ಯಡಿಯೂರಪ್ಪನವರಿಗೆ ಈ ರೀತಿಯ ಬೆಂಬಲ ಸಿಗುತ್ತಿರುವುದಕ್ಕೆ ಕಾರಣವಾದರೂ ಏನು ? ಅವರು ತಮ್ಮ ಕಾಲದಲ್ಲಿ ಮಾಡಿದ ಅಭಿವೃದ್ಧಿ ಜನ ಬೆಂಬಲಕ್ಕೆ ಕಾರಣವಲ್ಲದಿದ್ದರೆ ಬೇರೆ ಯಾವುದೋ ಕಾರಣವಿರಬೇಕು . ಅದು ಯಾವುದು ?
ಒಂದೊಮ್ಮೆ ಈಗ ಬಿಂಬಿಸಲಾಗುತ್ತಿರುವ ರೀತಿಯಲ ಜನ ಬೆಂಬಲ ಅವರಿಗಿಲ್ಲ ಎಂದಾದರೆ ಹೀಗೆ ಅವರನ್ನು ಬಿಂಬಿಸುತ್ತಿರುವವರೂ ಸಹ ಒಟ್ಟಾರೆ ನಾಟಕದ ಪ್ರಮುಖ ಪಾತ್ರಧಾರಿಗಳು ಎಂದೇ ಅರ್ಥ. ಜೊತೆಗೆ ಹೀಗೆ ಯಡಿಯೂರಪ್ಪ ಕರ್ನಾಟಕ ಕಂಡರಿಯದ ಮಹಾನ್ ನಾಯಕ ಎಂದು ಬಿಂಬಿಸುತ್ತಿರುವುದರ ಹಿಂದಿನ ಸತ್ಯ ಯಾವುದು ?
ಬಹಳಷ್ಟು ಜನ ಖಾಸಗಿಯಾಗಿ ಮಾತನಾಡುವಾಗ ಯಡಿಯೂರಪ್ಪ ಅವರು ಸೇರಿದ ಲಿಂಗಾಯಿತ ಜಾತಿಯ ಮಾತನಾಡುತ್ತಾರೆ. ಲಿಂಗಾಯತರು ಸಂಫೂರ್ಣವಾಗಿ ಯಡಿಯೂರಪ್ಪನವರ ಬೆಂಬಲಕ್ಕೆ ನಿಂತು ಬಿಡುತ್ತಾರೆ ಎಂದು ಹೇಳುತ್ತಾರೆ. ಯಡಿಯೂರಪ್ಪ ಲಿಂಗಾಯಿತರಿರಬಹುದು. ಲಿಂಗಾಯಿತ ಧರ್ಮದ ಕೆಲವು ಮಠಾಧಿಪತಿಗಳು ಅವರ ಬೆಂಬಲಲ್ಲೆ ಇರಬಹುದು. ಆದರೆ ಲಿಂಗಾಯತ ಧರ್ಮವೇ ನ್ಯಾಯ ಪಕ್ಷಪಾತಿಯಾದುದು. ಸಾಮಾಜಿಕ ನ್ಯಾಯವನ್ನು ಎಲ್ಲರಿಗಿಂತ ಮೊದಲು ಪ್ರತಿಪಾದಿಸಿದವನು ಬಸವಣ್ಣ. ಜೊತೆಗೆ ಲಿಂಗಾಯಿತರು ಜಾತಿವಾದಿಗಳಾಗಿದ್ದರೆ ರಾಮಕೃಷ್ಣ ಹೆಗಡೆ ಎಂಬ ಬ್ರಾಹ್ಮಣನಿಗೆ ಬೆಂಬಲ ನೀಡುತ್ತಿರಲಿಲ್ಲ.
ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತ ಮುಕ್ಕಾಲು ಪಾಲು ನಾಯಕರು ಲಿಂಗಾಯಿತರು ಎಂಬುದು ನಿಜ. ಆದರೆ ಆ ಮಾತ್ರಕ್ಕೆ ಲಿಂಗಾಯಿತ ಜನ ಸಮುದಾಯವೇ ಯಡಿಯೂರಪ್ಪನವರನ್ನು ಬೆಂಬಲಿಸುತ್ತಿದೆ ಎಂದು ಹೇಳುವುದು ಸರಿಯಲ್ಲ.
ನಾವೆಲ್ಲ ಮಾಡುವ ತಪ್ಪೆಂದರೆ ಯಡಿಯೂರಪ್ಪ ಅವರ ಪಕ್ಕದಲ್ಲಿರುವ ರೇಣುಕಾಚಾರ್ಯ ಮತ್ತು ಹರೀಶ್ ಅಂತವರನ್ನು ಅವರ ಸಮುದಾಯದ ಜಹಗೀರು ಪಡೆದವರು ಎಂದು ಭಾವಿಸಿಬಿಡುವುದು. ಅದರಂತೆ ಪ್ರಚಾರ ಮಾಡುತ್ತ ಸಾಗುವುದು.
ಇಂದು ಬೆಳಿಗ್ಗೆ ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಬೆಳಗಿನ ಉಪಹಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲು ಸುಮಾರು ೧೦ ಸಚಿವರು ೩೦ ಶಾಸಕರು ಪಾಲ್ಗೊಂಡಿದ್ದರು. ಇದಾದ ನಂತರ ನನ್ನ ಬೆಂಬಲವನ್ನು ತೋರಿಸಲು ಇಲ್ಲಿಗೆ ಬಂದಿದ್ದೆ ಎಂದು ಅವರು ರಾಜಕೀಯ ಮೈಲೇಜ್ ಪಡೆಯಲು ಯತ್ನ ನಡೆಸಿದರು.. ಆದರೆ ಇಂತಹ ಚಹಾಕೂಟಗಳು ಮತ್ತು ಪಾನಗೋಷ್ಠಿಯಲ್ಲಿ ಪಾಲ್ಗೊಂಡವರು ಕೊನೆಯ ವರೆಗೆ ಅವರ ಜೊತೆಗೆ ಇರುತ್ತಾರೆಯೆ ಎಂಬುದು ಪ್ರಶ್ನೆ. ಒಂದೊಮ್ಮೆ ಇದ್ದರೂ ಸಚಿವರು ಶಾಸಕರು ಜೊತೆಗಿದ್ದರೆ ಜನ ಕೂಡ ಅವರ ಜೊತೆಗಿದ್ದಾರೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.
ಹೀಗಿದ್ದರೂ ಮಾಧ್ಯಮವಂತೂ ಯಡಿಯೂರಪ್ಪನವರ ಪರವಾಗಿ ನಿಂತಿದೆ ಎಂದು ಹೇಳುವುದು ಕಷ್ಟವಾದರೂ ಯಡಿಯೂರಪ್ಪನವರಿಗೆ ಮಾಧ್ಯಮದಲ್ಲಿ ಭಾರಿ ಪ್ರಚಾರ ದೊರಕುತ್ತಿರುವುದಂತೂ ನಿಜ. ಯಡಿಯೂರಪ್ಪನವರನ್ನು ಸೌಜನ್ಯಕ್ಕಾಗಿ ಭೇಟಿ ಮಾಡಿದವರೂ ಅವರ ಬೆಂಬಲಿಗರಾಗಿ ಬಿಂಬಿತರಾಗುತ್ತಿದ್ದಾರೆ.
ಯಾರು ಅರಿಯಲು ನಿಮ್ಮ ಭುಜ ಬಲದ ಪರಾಕ್ರಮ ? 
ಇಷ್ಟೆಲ್ಲ ಹೇಳಿದ ಮೇಲೂ ಯಡಿಯೂರಪ್ಪನವರು ನಿಜವಾಗಿ ಅಭಿವೃದ್ಧಿ ಕೆಲಸ ಮಾಡಿ ಜನರ ಮನಸ್ಸಿನಲ್ಲಿ ಉಳಿದಿದ್ದಾರೆಯೇ ಎಂಬ ಪ್ರಶ್ನೆ ಹಾಗೆ ಉಳಿದು ಬಿಡುತ್ತದೆ. ನನ್ನ ಪ್ರಕಾರ ಯಡೀಯೂರಪ್ಪ ಯಾವುದೇ ಕನಸುಗಳಿಲ್ಲದ, ಕರ್ನಾಟಕವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ನಾಯಕ. ಅವರ ಸುತ್ತ ಮುತ್ತ ಕಾಣಿಸಿಕೊಳ್ಳುತ್ತಿರುವವರು ಅವಕಾಶವಾದಿಗಳು, ಭ್ರಷ್ಟರು ಮತ್ತು ಲಂಪಟರು. ಇಂತವರನ್ನೇ ಕರ್ನಾಟಕದ ಜನ ಬಯಸುತ್ತಾರೆ ಎಂದಾದರೆ, ನಾವು ರಾಜಕಾರಣವನ್ನು ಬದುಕಿನ ಮೌಲ್ಯ ಪ್ರತಿಪಾದನೆಯನ್ನು ಪುನರ್ ವ್ಯಾಖ್ಯೆಗೆ ಒಳಪಡಿಸಬೇಕಾಗುತ್ತದೆ. ಮತ್ತು ರಾಜಕಾರಣದ ಉದ್ದೇಶ ಏನು ಎಂಬುದನ್ನು ಮತ್ತೆ ಮತ್ತೆ ಪ್ರಶ್ನಿಸಬೇಕಾಗುತ್ತದೆ.
ಕೊನೆಯ ಮಾತು;
ದೇವರಾಜ ಅರಸು ಅವರು ಅಧಿಕಾರ ಕಳೆದುಕೊಳ್ಳುವ ಹಿಂದಿನ ದಿನ ಅವರ ಜೊತೆ ಇದ್ದು ಬೆಂಬಲ ವ್ಯಕ್ತಪಡಿಸಿದವರಲ್ಲಿ ಕೆ. ಎಚ್. ಶ್ರೀನಿವಾಸ್ ಕೂಡ ಒಬ್ಬರು. ಮರುದಿನ ಮಾತ್ರ ಅವರು ಅರಸು ಅವರಿಗೆ ಕೈಕೊಟ್ಟು ವಿರೋಧಿ ಪಾಳೆಯದಲ್ಲಿ ಕಾಣಿಸಿಕೊಂಡಿದ್ದರು. ಈಗ ಕಳೆದ ಕೆಲವು ದಿನಗಳಿಂದ ಅವರು ಯಡಿಯೂರಪ್ಪನವರ ಪಕ್ಕ ಕಾಣಿಸಿಕೊಳ್ಳುತ್ತಿದ್ದಾರೆ. ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ರಾಜಕೀಯವಾಗಿ ಮೂಲೆ ಗುಂಪಾಗಿದ್ದ ಶ್ರೀನಿವಾಸರನ್ನು ಅದೇ ಈಶ್ವರಪ್ಪನವರ ವಿರುದ್ಧ ಯಡೀಯೂರಪ್ಪ ನಿಲ್ಲಿಸಬಹುದೆ ?

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...