Thursday, January 29, 2015

ಸಿದ್ದರಾಮಯ್ಯನವರೇ ಕಾಲ ಮಿಂಚಿಲ್ಲ, ಗುಜರಿ ಅಂಗಡಿ ಮುಚ್ಚಿ, ಮೊಬೈಲ್ ಅಂಗಡಿ ತೆರೆಯಿರಿ....!


ಸುಮಾರು  ೨೪ ವರ್ಷಗಳ ಹಿಂದಿನ ಮಾತು. ಕರ್ನಾಟಕದಲ್ಲಿ ಜನತಾ ಪರಿವಾರ ಗದ್ದುಗೆ ಹಿಡಿದ ಕ್ಷಣ. ಪ್ರಥಮ ಕಾಂಗ್ರೆಸ್ಸೇತರ ಸರ್ಕಾರವನ್ನು ಜನ ಅಧಿಕಾರದ ಗದ್ದುಗೆ ಏರುವಂತೆ ಮಾಡಿದ್ದರು. ೭೦ ಮತ್ತು ೮೦ ದಶಕದಲ್ಲಿ ಇದ್ದ ಮೂರು ಜನಪರ ಚಳವಳಿಗಳು ಈ ಬದಲಾವಣೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿದ್ದವು. ಕರ್ನಾಟಕದಲ್ಲಿ ಹಲವು ರೀತಿಯ ಬದಲಾವಣೆಗೆ ಕಾರಣವಾಗಿದ್ದ ದೇವರಾಜ್ ಅರಸು ರಾಜಕೀಯ ನೇಪಥ್ಯಕ್ಕೆ ಸರಿದಾಗಿತ್ತು.  ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಸರ್ಕಾರ ಜನರ ಬದಲಾವಣೆಯ ಕನಸಿಗೆ ಇಂಬು ನೀಡುವಂತೆ ಅಧಿಕಾರಕ್ಕೆ ಬಂದಿತ್ತು.
ಒಂದು ಕಾಲದ ಗುರು ಶಿಷ್ಯರು...
೧೯೮೩ ರಲ್ಲಿ ಮೊದಲ ಬಾರಿಗೆ ಲೋಕದಳದ ಅಭ್ಯರ್ಥಿಯಾಗಿ ವಿಧಾನ ಸಭೆಗೆ ಗೆದ್ದು ಬಂದವರು ಸಿದ್ದರಾಮಯ್ಯ. ಹಾಗಿದ್ದರೂ ಅವರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನ ಅವರಿಗೆ ದೊರಕಿತ್ತು. ಆಗ ಜನತಾ ದಳದಲ್ಲಿ ಘಟಾನುಘಟಿ ನಾಯಕರಿದ್ದರು. ದೆಹಲಿ ರಾಜಕಾರಣದಲ್ಲಿ ಪಳಗಿದ ರಾಮಕೃಷ್ಣ ಹೆಗಡೆ, ಸಮಾಜವಾದಿ   ಚಿಂತನೆಯ ಹಿನ್ನೆಲೆಯಲ್ಲಿ ಬಂದ, ಜೆ.ಎಚ್. ಪಟೇಲ್, ಎಂ.ಪಿ, ಪ್ರಕಾಶ್,, ಎಸ್.ಆರ್. ಬೊಮ್ಮಾಯಿ, ರಾಚಯ್ಯ, ಅಬ್ದುಲ್ ನಜೀರ್ ಸಾಬ್, ಯುವ ಪಡೆಯನ್ನು ಬಗಲಲ್ಲಿ ಇಟ್ಟುಕೊಂಡ  ಸಂಘಟನಾ ಚತುರ ಡಾ. ಜೀವರಾಜ್ ಆಳ್ವ ಇವರ ನಡುವೆ ಹೋರಾಟದ ರಾಜಕಾರಣ ಮಾಡಿಕೊಂಡು ಬಂದ ಎಚ್.ಡಿ. ದೇವೇಗೌಡ, ಹೀಗೆ ಹೊಸ ಕನಸುಗಳನ್ನು ಬಿಕರಿ ಮಾಡುತ್ತಿದ್ ನಾಯಕ ಪಡೆ ಅದು.
ಸಂಪುಟ ಸಭೆಯಲ್ಲಿ ಪಟೇಲರ ಪಕ್ಕ ಸಿದ್ದರಾಮಯ್ಯ
ಸಿದ್ದರಾಮಯ್ಯನವರಿಗೆ ಮೊದಲಿನಿಂದಲೂ ದೇವೇಗೌಡರ ಬಗ್ಗೆ ಅಕ್ಕರೆ. ಇದಕ್ಕೆ ಕಾರಣ ಅವರ ರೈತ ಪರ ನಿಲುವು. ಉಳಿದ ನಾಯಕರಿಗಿಂತ ದೇವೇಗೌಡರು ರೈತ ಪರ ಚಿಂತನೆಯ ನಾಯಕರಾಗಿ ಸಿದ್ದರಾಮಯ್ಯನವರಿಗೆ ಕಂಡಿದ್ದರು. ಹೆಗಡೆ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದರೆ ಹೊರತೂ ರೈತರ ಪರವಾಗಿ ಇರುವ ನಾಯಕ ಎಂದು ಅನ್ನಿಸಿಕೊಳ್ಳಲೇ ಇಲ್ಲ. ಜೊತೆಗೆ ಸಿದ್ದರಾಮಯ್ಯನವರಂತಹ ಗ್ರಾಮೀಣ ಸೊಗಡಿನ ನಾಯಕರಿಗೆ, ಹೆಗಡೆ ಅವರಿಗಿಂತ ದೇವೇಗೌಡರೇ  ಈ ನೆಲದ ನಾಯಕ ಎಂದು ಅನ್ನಿಸುವುದು ಸಹಜವಾಗಿತ್ತು. ಹೆಗಡೆ.ಪಟೇಲ್, ಆಳ್ವ ಅವರಂತಹ ನಾಯಕರದ್ದು ರಂಗು ರಂಗಿನ ವ್ಯಕ್ತಿತ್ವ. ಅವರು  ವಾಸ್ತವದ ರಾಜಕಾರಣಕ್ಕೆ ವೈಚಾರಿಕ ರಾಜಕಾರಣವನ್ನು ಸೇರಿಸಿ ಉಣಬಡಿಸಿ ಬಲ್ಲ ನಾಯಕರಾಗಿದ್ದರು. ಜೊತೆಗೆ ಎಲ್ಲ ಉತ್ಕೃಷ್ಣ ಅಂಶಗಳನ್ನು ಆಸ್ವಾದಿಸುವ ಗುಣ ಅವರಲ್ಲಿತ್ತು. ಹಾಸ್ಯ, ಕ್ಷಮಾ ಗುಣ, ಎಲ್ಲವೂ ಅವರಲ್ಲಿದ್ದುದರಿಂದ ದಿನದಲ್ಲಿ ಕೆಲಹೊತ್ತು ವೃತ್ತಿ ರಾಜಕಾರಣವನ್ನು ಮರೆತು ಅವರು ಬದುಕಬಲ್ಲವರಾಗಿದ್ದರು. ಆದರೆ ದೇವೇಗೌಡರಲ್ಲಿ ಪಟೇಲರಂತೆ ಹಾಸ್ಯ ಪ್ರಜ್ನೆಯನ್ನಾಗಲಿ ಕ್ಷಮಾ ಗುಣವನ್ನಾಗಲಿ ಕಾಣುವುದು ಸಾಧ್ಯವೇ ಇರಲಿಲ್ಲ. ದೇವೇಗೌಡರು ಎಂದೂ ಮುಕ್ತವಾಗಿ ನಕ್ಕ ನಾಯಕರೂ ಅಲ್ಲ. ಸದಾ ರಾಜಕಾರಣವನ್ನೇ ಉಸಿರಾಗಿಸಿಕೊಂಡ ನಾಯಕರು ಅವರು. ಸಿದ್ದರಾಮಯ್ಯ ಅವರಲ್ಲೂ ದೇವೇಗೌಡರಲ್ಲಿ ಇದ್ದ ಈ ಕೆಲವು ಗುಣಗಳಿದ್ದವು. ಅವರೂ ಸಹಾ ಮುಕ್ತವಾಗಿ ನಕ್ಕವರಲ್ಲ. ಹಾಸ್ಯ ಪ್ರಜ್ನೆ ಕಡಿಮೆ. ದೇವೇಗೌಡರಂತೆ ಉಡಾಫೆ ಎಂದು ಅನ್ನಿಸುವ ಹಾಗೆ ಮುಖ ಗಂಟಿಕ್ಕಿಕೊಂಡು ಇರುವಂತಹ ಜನ.
ಹೆಗಡೆ, ಪಟೇಲರ ಮುಂದೆ ಸಮಾನರಂತೆ ಕಾಣಿಸಿಕೊಳ್ಳಲು ಸಿದ್ದರಾಮಯ್ಯ ಹೆದರುತ್ತಿದ್ದರು. ಅವರ  ಜೊತೆ ಮುಕ್ತವಾಗಿ ಇರುವುದಕ್ಕೂ ಸಿದ್ದರಾಮಯ್ಯನವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ, ದೇವೇಗೌಡರ ಜೊತೆ ಅವರು ಹೆಚ್ಚು ಮುಕ್ತವಾಗಿ ಬೆರೆಯುತ್ತಿದ್ದರು. ಅವರ ಜೊತೆ ಜಗಳವಾಡುವುದಕ್ಕೂ ಹಿಂಜರಿಯುತ್ತಿರಲಿಲ್ಲ.
ಜನತಾ ಪರಿವಾರ ಒಡಕಿನ ದಾರಿಯಲ್ಲಿ ಸಾಗುತ್ತಿದ್ದಾಗ ದೇವೇಗೌಡರ ಜೊತೆ ಗಟ್ಟಿಯಾಗಿ ನಿಂತವರು ಸಿದ್ದರಾಮಯ್ಯ. ರೈತ ಪರ ಮತ್ತು ಹಿಂದುಳಿದವರ ಪರವಾದ ನಾಯಕ ದೇವೇಗೌಡ ಎಂದು ಪ್ರಬಲವಾಗಿ ನಂಬಿದ್ದವರು ಸಿದ್ದರಾಮಯ್ಯ. ಜೊತೆಗೆ ಹೆಗಡೆ ಮತ್ತು ಪಟೇಲ್ ಸರಳವಾಗಿದ್ದರೂ ಅವರ ವ್ಯಕ್ತಿತ್ವದಲ್ಲಿದ್ದ ಸೊಪೆಸ್ಟಿಕೇಷನ್ ಸಿದ್ದರಾಮಯ್ಯನವರಿಗೆ ಇಷ್ಟವಾಗುತ್ತಿರಲಿಲ್ಲ. ಜನತಾ ಪರಿವಾರಕ್ಕೆ ಬಂದು ಸೇರಿದ ಮೇಲೂ ಸಿದ್ದರಾಮಯ್ಯನವರಿಗೆ ಅವಿಭಾಜಿತ ಜನತಾ ದಳದ ಒಂದು ಭಾಗವಾಗಿ ಉಳಿಯಲು ಸಾಧ್ಯವಾಗಲೇ ಇಲ್ಲ. ಜನತಾ ಪರಿವಾರ ಒಡೆಯುವ ಸಂದರ್ಭದಲ್ಲಿ ತಮ್ಮ ಜೊತೆಗೆ ಬರುವಂತೆ ಹೆಗಡೆ ಆಹ್ವಾನ ನೀಡಿದರೂ ಆಗ ಸಿದ್ದರಾಮಯ್ಯ ಆಯ್ಕೆ ಮಾಡಿಕೊಂಡಿದ್ದು ದೇವೇಗೌಡರನ್ನೇ.
ಜನರ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳಿ...
ಆಗ ದೇವೇಗೌಡರ ಲೆಕ್ಕಾಚಾರವೇ ಬೇರೆಯಾಗಿತ್ತು. ಒಕ್ಕಲಿಗ  ಮತ್ತು  ಕುರುಬರ ಕಾಂಬಿನೇಷನ್ ತಮ್ಮ ಪಕ್ಷವನ್ನು ಅಧಿಕಾರದ ಗದ್ದುಗೆಯತ್ತ ತರುತ್ತದೆ ಎಂದು ದೇವೇಗೌಡ ನಂಬಿದ್ದರು. ಹೀಗಾಗಿ ಸಿದ್ದರಾಮಯ್ಯನವರನ್ನು ಪ್ರೊಜೆಕ್ಟ್ ಮಾಡುತ್ತ ತಮ್ಮ ರಾಜಕೀಯ ಹಾದಿಯನ್ನು ರೂಪಿಸಿಕೊಂಡು ದೇವೇಗೌಡ..ನಮ್ಮ ಸಿದ್ದರಾಮಣ್ಣ ನಮ್ಮ ಸಿದ್ದರಾಮಣ್ಣ ಎಂದು ಹೇಳುತ್ತ ಅವರನ್ನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತ ರಾಜ್ಯಾದ್ಯಂತ ಸುತ್ತಿದರು ದೇವೇಗೌಡ..ಆದರೆ ದೇವೇಗೌಡರ ಒಳ ರಾಜಕಾರಣದ ಮಸಲತ್ತು ಸಿದ್ದರಾಮಯ್ಯನವರಿಗೆ ಅರ್ಥವಾಗಿದ್ದು ಎಚ್. ಡಿ. ಕುಮಾರಸ್ವಾಮಿ ರಾಜಕೀಯ ರಂಗ ಪ್ರವೇಶಿಸಿದ ಮೇಲೆ. ಆ ಹೊತ್ತಿಗೆ ದೇವೇೌಡರ ಜನತಾ ಪರಿವಾರ ಕುಟುಂಬ ರಾಜಕಾರಣದ ಅಂಗಳವಾಗಿ ರೂಪಗೊಂಡಾಗಿತ್ತು. ಅಲ್ಲಿ ಜನತಾಂತ್ರಿಕ ಮೌಲ್ಯಗಳ ಸಮಾಧಿಯಾಗುತ್ತಿರುವುದು ಸಿದ್ದರಾಮಯ್ಯನವರಿಗೆ ಅರಿವಾಗುವ ಹೊತ್ತಿಗೆ ಕರ್ನಾಟಕದ ರಾಜಕಾರಣ ಮಗ್ಗಲು ಮಗಚಿಯಾಗಿತ್ತು. ಇಂತಹ ಸ್ಥಿತಿಯಲ್ಲಿ ಸಿದ್ದರಾಮಯ್ಯ ದೇವೇಗೌಡರ ಜೊತೆ ಮುಂದುವರಿಯುವ ಸಾಧ್ಯತೆ ಇರಲೇ ಇಲ್ಲ. ಒಂದೊಮ್ಮೆ ಅಲ್ಲಿಯೇ ಮುಂದುವರಿದರೆ ಗೌಡರ ಕುಟುಂಬದ ಚಾಕರಿ ಮಾಡಿಕೊಂಡು ಬದುಕಬೇಕು ಎಂಬ ಜ್ನಾನೋದನ ಅವರಿಗಾಗಿತ್ತು. ಸಿದ್ದರಾಮಯ್ಯ ಕೊನೆಗೆ ಕಾಂಗ್ರೆಸ್ ಸೇರಿ ಮುಖ್ಯಮಂತ್ರಿಯೂ ಆಗಿದ್ದು ಇತಿಹಾಸ.
ತಮ್ಮ ರಾಜಕೀಯ ಬದುಕಿನಲ್ಲಿ ಸಿದ್ದರಾಮಯ್ಯ ತಪ್ಪಿದ್ದೆಲ್ಲಿ ? ಅವರು ಎಲ್ಲರೂ ಒಪ್ಪುವ ರಾಜಕೀಯ ನಾಯಕರಾಗಿ ಯಾಕೆ ಬೆಳೆಯಲಿಲ್ಲ ?
ಎರಡು ಮೂರು ದಶಕಗಳ ಹಿಂದಿನ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ತುಂಬಾ ವ್ಯತ್ಯಾಸವಿದೆ. ಒಬ್ಬ ನಾಯಕ ಕೇವಲ ದೀನ ದಲಿತರ, ಹಿಂದುಳಿದವರ ಪರ ಎಂದು ಹೇಳಿಕೊಂಡರೆ ಅದು ಸಾಕಾಗುವುದಿಲ್ಲ. ಅಥವಾ ಯಾವುದೋ ಜನಪ್ರಿಯ ಯೋಜನೆಗಳನ್ನು ಪ್ರಕಟಿಸಿ ರಾಜಕೀಯ  ಮಾಡುವುದು ಸಾಧ್ಯವಿಲ್ಲ. ಇದನ್ನೆಲ್ಲ ಮೀರಿದ ರಾಜಕೀಯ ದೂರದರ್ಶಿತ್ವ ನಾಯಕನಾದವನಿಗೆ ಬೇಕಾಗುತ್ತದೆ. ಆತ ಕನಸುಗಳನ್ನು ಕಾಣುವಂತಿರಬೇಕು. ಕನಸುಗಳನ್ನು ಹಂಚುವಂತಿರಬೇಕು. ಇಂದಿನ ಯುವ ಜನಾಂಗ ಒಬ್ಬ ರಾಜಕಾರಣಿ ಮತ್ತು ರಾಜಕೀಯ ವ್ಯವಸ್ಥೆಯಿಂದ ನಿರೀಕ್ಷಿಸುವುದು  ಅಭಿವೃದ್ಧಿಪರ ರಾಜಕಾರಣ. ಜಗತ್ತಿನ ಜೊತೆ ಪೈಪೋಟಿ ನಡೆಸುವ ಎದೆಗಾರಿಕೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಹಲವರಿಗೆ ಭ್ರಮನಿರಸನವಾಗಿದೆ. ಅವರ ಸರ್ಕಾರ ನಿದ್ರೆ ಮಾಡುವಂತೆ ಕಾಣುತ್ತಿದೆ. ಎರಡು ದಶಕಗಳ ಹಿಂದೆ ನಾವು ಇದ್ದೇವೆ ಎಂದು ಅನ್ನಿಸುವ ಹಾಗೆ ಸರ್ಕಾರ ನಡೆಯುತ್ತಿದೆ. ಅದೇ ಜನಪ್ರಿಯ ಯೋಜನೆಗಳು.
ಪಕ್ಕದಲ್ಲಿದ್ದರೂ ಮನಸ್ಸು ದೂರ ದೂರ
ಆದರೆ ಇಂತಹ ಜನಪ್ರಿಯ ಯೋಜನೆಗಳೊಂದೇ ಸಾಕೆ ? ಇದರಿಂದ ನಮ್ಮ ಜನ ಸಂತೋಷ ಪಡುತ್ತಾರೆಯೆ ?? ಇಲ್ಲ ಎಂದು ನನಗೆ ಅನ್ನಿಸುತ್ತದೆ. ಇಂದಿನ ಐಟಿ ಬಿಟಿ ಯುಗದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಇಂಟರ್ ನೆಟ್ ಸಂಪರ್ಕ ಇದೆ. ನಮ್ಮ ಹಳ್ಳಿಯ ಹುಡುಗರು ತಮ್ಮ ಊರಲ್ಲೇ ಕುಳಿತು ಜಗತ್ತಿನ ಜೊತೆ ಮುಖಾಮುಖಿಯಾಗುತ್ತಾರೆ. ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ.  ವಿಪ್ರೋ, ಇನ್ಪೋಸಿಸ್ ನಂತಹ ಕಂಪೆನಿಗಳಲ್ಲಿ ಕೆಲಸ ಮಾಡುವ ಕನಸು  ಕಾಣುತ್ತಾರೆ. ಅವರಿಗೀಗ ಅಭಿವೃದ್ಧಿ ಎಲ್ಲಕ್ಕಿಂತ ಮುಖ್ಯವಾಗಿದೆ. ಅವರಿಗೆ ಬೇಕಾಗಿದ್ದು  ಅಭಿವೃದ್ಧಿಪರ ರಾಜಕಾರಣ. ಇದು ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ನರೇಂದ್ರ ಮೋದಿ ತಮ್ಮ ಕಪ್ಪು ಕಲೆಗಳ ನಡುವೆಯೂ ಅಧಿಕಾರದ ಗದ್ದುಗೆ ಹಿಡಿದಿದ್ದು ಅಭಿವೃದಧಿ ರಾಜಕಾರಣವನ್ನು ಜನ ಬಯಸಿದ್ದರಿಂದಲೇ.
ಇದು ಸಿದ್ದರಾಮಯ್ಯನವರಿಗೆ ಅರ್ಥವಾದಂತೆ  ಕಾಣುತ್ತಿಲ್ಲ. ಅವರ ಸರ್ಕಾರದಲ್ಲಿ  ಕೈಗಾರಿಕಾ ಮಂತ್ರಿಯೂ ಇಲ್ಲ. ವಿದೇಶಿ ಬಂಡವಾಳ ಹೂಡಿಕೆಯ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವು ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿದೇಶಿ ಬಂಡವಾಳವನ್ನು ತರುವ ವಿಚಾರದಲ್ಲಿ ಈ ಸರ್ಕಾರ ಏನು ಮಾಡುತ್ತಿಲ್ಲ. ಡಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಸಮಾವೇಶದಲ್ಲಿ ಕರ್ನಾಟಕದ ಯಾವ ಪ್ರತಿನಿಧಿಯೂ ಪಾಲ್ಗೊಳ್ಳಲಿಲ್ಲ.
ಇದನ್ನೆಲ್ಲ ನೋಡಿದಾಗ ಸಿದ್ದರಾಮಯ್ಯನವರ ರಾಜಕಾರಣ ಔಟ್ ಡೇಟೆಡ್ ಎಂದು ಅನ್ನಿಸುತ್ತದೆ. ಅವರಿಗೆ ಕನಸುಗಳು ಇದ್ದಂತೆ ಕಾಣುತ್ತಿಲ್ಲ. ಹೇಗೋ ಮುಖ್ಯಮಂತ್ರಿಯಾಗಿದ್ದೇನೆ ನನ್ನ ಅವಧಿಯನ್ನು ಮುಗಿಸಿದರೆ ಸಾಕು ಎಂಬಂತೆ ಅವರು ನಡೆದುಕೊಳ್ಳುತ್ತಿದ್ದಾರೆ. ಇಂತಹ ನಿಲುಮೆಯಿಂದ ಕರ್ನಾಟಕದ ಮೇಲೆ ಆಗುವ  ದುಷ್ಪರಿಣಾಮದ ಬಗ್ಗೆ ಅವರು ಯೋಚಸಿದಂತೆ ಕಾಣುತ್ತಿಲ್ಲ.
ಸಿದ್ದರಾಮಯ್ಯನವರ ಸರ್ಕಾರದ  ಸಾಧನೆ ಏನು ಎಂದು ಪ್ರಶ್ನಿಸಿದರೆ ಅದೇ  ಹಲವಾರು ಭಾಗ್ಯ ನಮ್ಮ ಮುಂದೆ ಕಣ್ಣು ಮುಂದೆ ಬರುತ್ತದೆ. ಇಂತಹ ಭಾಗ್ಯದಿಂದ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯುವುದಿಲ್ಲ.  ಒಂದು ಸರ್ಕಾರಕ್ಕೆ ಉದ್ಯೋಗ ಸೃಷ್ಟಿ ಮುಖ್ಯವಾಗಬೇಕು. ಜನರನ್ನು ಕೇವಲ ಭಿಕ್ಷುಕರನ್ನಾಗಿ ಮಾಡಿದರೆ ಅನ್ನದಾತ ಎಂದು ಅನ್ನಿಸಿಕೊಳ್ಳಬಹುದೇ ಹೊರತೂ ಅನ್ನ ಹುಟ್ಟುವುದಿಲ್ಲ.
ರಾಜಕಾರಣಿಯಾದವನು ಸದಾ ವಾಸ್ತವದ ಜೊತೆ ಮುಖಾಮುಖಿಯಾಗಬೇಕು. ಬದಲಾದ ಸಮಯಕ್ಕೆ ಬದಲಾಗಬೇಕು. ಇವತ್ತು ಮೊಬೈಲ್ , ಕಂಪ್ಯೂಟರ್ ಅಂಗಡಿ ತೆಗೆದರೆ ವ್ಯಾಪಾರವಾಗುತ್ತದೆ. ಇದಕ್ಕೆ ಬದಲಾಗಿ  ಟ್ರಾನಿಸ್ಟರ್ ಅಂಗಡಿ ತೆಗೆದರೆ ? ನನಗೆ ಸಿದ್ದರಾಮಯ್ಯನವರನ್ನು ನೋಡಿದರೆ  ಹಾಗೆ ಅನ್ನಿಸುತ್ತದೆ. ಅವರು ಶಿವಾಜಿನಗರದ ಮೂಲೆಯಲ್ಲಿ ಗುಜರಿ ಅಂಗಡಿ ಇಟ್ಟುಕೊಂಡವರಂತೆ ಕಾಣುತ್ತಾರೆ. ಗುಜರಿ ಅಂಗಡಿ ಇಟ್ಟುಕೊಂಡವನು ಯಾವಾಗಲೋ ಒಮ್ಮೆ ಬರುವ ಗಿರಾಕಿಗಳಿಗಾಗಿ ಕಾಯಬೇಕಾಗುತ್ತದೆ. ಹೀಗಾಗಿ ಗುಜರಿ ಅಂಗಡಿ ಮಾಲೀಕರು ಯಾವಾಗಲೂ ನಿದ್ರೆ ಮಾಡುತ್ತಲೇ ಇರುತ್ತಾರೆ.  ಗಿರಾಕಿ ಬಂದರೆ ಕಣ್ಣು ಬಿಡುತ್ತಾರೆ.
ಸಿದ್ದರಾಮಯ್ಯನವರಿಗೆ ಈಗಲೂ ಕಾಲ ಮಿಂಚಿಲ್ಲ ಎಂದು ನಾನು ನಂಬಿದ್ದೇನೆ. ಅವರು ವಾಸ್ತವ ಜೊತೆ ಮುಖಾಮುಖಿಯಾಗಬೇಕು. ನಿದ್ರೆಯಲ್ಲಿ ಕನಸು ಕಾಣದೇ ವಾಸ್ತವದಲ್ಲಿ ಕನಸು ಕಾಣಬೇಕು. ಕರ್ನಾಟಕದ ಭವಿಷ್ಯ ತಮ್ಮ ಕಯ್ಯಲ್ಲಿದೆ ಎಂಬುದನ್ನು ಅವರು ನೆನಪು ಮಾಡಿಕೊಳ್ಳಬೇಕು.



.

2 comments:

sham said...

Good one

Seen-Unseen said...

ಶ್ರೀಯುತ ಶಶಿಧರರವರ ಲೇಖನ ಪ್ರಸ್ತುತ ವಿದ್ಯಮಾನಗಳನ್ನ ಎತ್ತಿ ಹಿಡಿದಿದೆ. ಜನರಿಗೆ ದುಡಿಯೋದನ್ನ ಕಲಿಸೋದ್ ಬಿಟ್ಟು ಬೇಡೋ ತರ ಮಾಡಿದೆ ಈಗಿನ ಸರ್ಕಾರ. ರಾಜ್ಯದ ಬಹುತೇಕ ಹಳ್ಳಿಗಳು ಖಾಲಿಯಾಗಿವೆ ಅಥವಾ ವೃದ್ಧಾಶ್ರಮವಾಗಿ ಪರಿವರ್ತನೆಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಅಲ್ಲಲ್ಲಿ ಅಳಿದುಳಿದ ಯುವಕರನ್ನ ನೋಡಿದಾಗ ನಮಗೆ ಅರ್ಥವಾಗುತ್ತೆ, ಹಲವಾರು ಭಾಗ್ಯ ಯೋಜನೆಗಳು ಅವರನ್ನ ಸೋಮಾರಿಗಳನ್ನಾಗಿಸುತ್ತಿದೆ.
ದಿವಗಂತ ರಾಮಕೃಷ್ಣ ಹೆಗಡೆ, ಜೆ. ಎಚ್ ಪಟೆಲ್ ಮುಂತಾದವರು ರಾಜಕೀಯ ವಿಷಯದಲ್ಲಿ ಎನೇ ಮಾಡಿರಬಹುದು ಆದರೆ ಅವರೆಲ್ಲರಲ್ಲಿ ರಾಜ್ಯ ಅಭಿವೃದ್ಧಿ ಕುರಿತು ದೂರದೃಷ್ಟಿ ಇತ್ತು ಅನ್ನೊದು ನನ್ನ ಅನಿಸಿಕೆ. ಈಗಿನ ಮುಖ್ಯಮಂತ್ರಿಗಳ ಯಾವುದೇ ಯೋಜನೆಗಳಲ್ಲಿ ನಾವು ರಾಜ್ಯದ ಭವಿಷ್ಯ ಅಭಿವೃದ್ಧಿ ಕಾಣಲು ಸಾಧ್ಯವಿದೆಯಾ? ಯಾವುದಾದರೂ ಒಂದು ಉದಾಹರಣೆಯನ್ನ ಅವರನ್ನ ಬೆಂಬಲಿಸುವ ಯಾರಾದರೂ ಕೊಡಬಲ್ಲಿರಾ?

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...