Saturday, September 19, 2015

ಮಾಧ್ಯಮಕ್ಕೆ ಕೆಲವೇ ಕೆಲವು ರಾಜಕಾರಣಿಗಳು ಇಷ್ಟವಾಗುವುದು ಯಾಕೆ ?

ನಾನು ಪತ್ರಿಕೋದ್ಯಮಕ್ಕೆ ಬಂದಾಗ ಅಗತಾನೆ ದೇವರಾಜ ಅರಸು ಅವರ ಯುಗ ಮುಗಿಯುತ್ತ ಬಂದಿತ್ತು. ಆರ್. ಗುಂದೂರಾವ್ ಮುಖ್ಯಮಂತ್ರಿ. ಕರ್ನಾಟಕದ ರಾಜಕಾರಣದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಮಣ್ಣು ಹದವಾಗುತ್ತಿತ್ತು.. ರಾಜ್ಯದಲ್ಲಿ ರೈತ ಚಳವಳಿ, ದಲಿತ ಚಳವಳಿ ಮತ್ತು ಕನ್ನಡ ಚಳವಳಿ ಹೊಸ ಕನಸಿಗೆ ನೀರೆರೆಯುವ ಮಣ್ಣನ್ನು ಹದ ಮಾಡುವ ಕೆಲಸ ಮಾಡುತ್ತಿದ್ದವು. ಆಗ ನಾನು ಪತ್ರಿಕಾ ವ್ಯವಸಾಯವನ್ನು ಪ್ರಾರಂಭಿಸಿದ್ದೆ. ಅದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ. ಆಗಲೇ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯನ್ನು ಸರ್ಕಾರ ನಡೆಸುತ್ತಿತ್ತು. ಅದಕೊಬ್ಬ ಆಡಳಿತಾಧಿಕಾರಿ ಇದ್ದರು. ಪತ್ರಿಕೆಯ ಜಂಟಿ ಸಂಪಾದಕರಾಗಿ ಇದ್ದವರು ಎಸ್. ವಿ. ಜಯಶೀಲರಾವ್. ಆಗಲೇ ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಸ ಮಾಡಿ ಅವರು ಇಲ್ಲಿಗೆ ಬಂದಿದ್ದರು.
ಆ ದಿನಗಳಲ್ಲಿ ಯಾವ ದಿನ ಪತ್ರಿಕೆಯೂ ಅರಸು ಅವರ ಬೆಂಬಲಕ್ಕೆ ನಿಂತಿರಲಿಲ್ಲ. ಅರಸು ಅವರು ಜಾರಿಗೆ ತಂದ ಊಳೂವವನೇ ನೆಲದೊಡೆಯ ಎಂಬ ಕಾನೂನಾಗಲಿ, ಮಲ ಹೊರುವುದನ್ನು ನಿಷೇಧಿಸಿದ್ದಾಗಲೀ ಮಾಧ್ಯಮಗಳಿಗೆ ಎಷ್ಟು ಮುಖ್ಯವಾಗಬೇಕಿತ್ತೋ ಅಷ್ಟು ಮುಖ್ಯವಾಗಿರಲಿಲ್ಲ. ಬದಲಾಗಿ ಅರಸು ಅವರು ಕರ್ನಾಟಕದ ಭ್ರಷ್ಟ ಮುಖ್ಯಮಂತ್ರಿ ಎಂಬಂತೆ ಮಾಧ್ಯಮಗಳು ಪ್ರತಿಬಿಂಬಿಸುತ್ತಿದ್ದವು.. ವರ್ಗಾವಣೆಯಲ್ಲಿ ಹಣ ಪ್ರಮುಖ ಪಾತ್ರ ಒಹಿಸುವ ಬಗ್ಗೆ, ಅರಸು ಅವರ ಹೆಂಡತಿಯೇ ಈ ವ್ಯವಹಾರ ಮಾಡುವ ಬಗ್ಗೆ ಸಾಕಷ್ಟು ವದಂತಿಗಳು ಸಾಮಾಜಿಕ, ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಹರಡಿದ್ದವು..ಇದಾದ ಮೇಲೆ ಅರಸು ಅವರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಸುವುದಕ್ಕೆ ಆಯೋಗದ ನೇಮಕವೂ ಆಯಿತು. ಆಗೆಲ್ಲ ಅರಸು ಕರ್ನಾಟಕ ರಾಜಕಾರಣದ ಒಬ್ಬ ವಿಲನ್ ನಂತೆ ಪ್ರತಿಬಿಂಬಿತರಾಗಿದ್ದರು..
ಇದಕ್ಕೆ ಇರಬಹುದಾದ ಕಾರಣಗಳು ಹಲವು. ಅರಸು ಅವರು ಜಾರಿಗೆ ತಂದ ಹಲವಾರಿ ಕ್ರಾಂತಿಕಾರಿ ಯೋಜನೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿ ಮೇಲ್ವರ್ಗದ ಹಿಡಿತದಲ್ಲಿದ್ದ ಮಾಧ್ಯಮಕ್ಕೆ ಇರಲಿಲ್ಲ. ಹಾಗೆ ಅಂದಿನ ರಾಜಕಾರಣಕ್ಕೂ ಇರಲಿಲ್ಲ. ಇಂದಿರಾ ಗಾಂಧಿಯವರು ರೋಟಿ ಕಪಡಾ ಅವರ ಮಕಾನ್, ಗರೀಬಿ ಹಟಾವೋ ಯೋಜನೆಯನ್ನು ಜಾರಿಗೆ ತರುವವರೆಗೆ ಕಾಂಗ್ರೆಸ್ ಸಾಮಾಜಿಕ ನ್ಯಾಯ ಮತ್ತು ಸರ್ವರಿಗೂ ಸಮಬಾಳ್ವೆ ಎಂಬ ಕಲ್ಪನೆನ್ನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಕಾಂಗ್ರೆಸ್ಸಿನಲ್ಲಿದ್ದ ಬಹುತೇಕ ನಾಯಕರು ಮೇಲ್ವರ್ಗ ಮತ್ತು ಜಾತಿಗಳಿಂದ ಬಂದವರಾಗಿದ್ದರು. ಗಾಂಧಿಯ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ರಾಜಕೀಯಕ್ಕೆ ಬಂದ ಈ ನಾಯಕರು ಸಾಮಾಜಿಕ ನ್ಯಾಯವನ್ನು ಗಂಭೀರವಾಗಿ ತೆಗೆದುಕೊಂಡವರಾಗಿರಲಿಲ್ಲ. ಸ್ವಾತಂತ್ರ್ಯ ಬಂದ ಸಂಭ್ರಮದಲ್ಲೇ ರಾಜಕೀಯ ಮಾಡುತ್ತಿದ್ದ ಕಾಂಗ್ರೆಸ್ ನ ಈ ಬಹುಸಂಖ್ಯಾತ ಗಣ ನೆಹರೂವಾದಿಗಳಾಗಿದ್ದರು. ಇವರೆಲ್ಲ ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿಯ ಬಗ್ಗೆ ಮಾತನಾಡಬಲ್ಲವರಾಗಿದ್ದರು. ಒಂದೇ ಮಾತಿನಲ್ಲಿ ಹೇಳುವುದಾದರೆ ಇವರಿಗೆ ಅಂಬೇಡ್ಕರ್ ಪರಿಚಿತರಾಗಿರಲಿಲ್ಲ. ಅಂಬೇಡ್ಕರ್ ರನ್ನು ಅರ್ಥ ಮಾಡಿಕೊಳ್ಳುವುದು ಹಾಗಿರಲಿ, ಅವರಿಗೆ ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸುತ್ತಿರಲಿಲ್ಲ. ೧೯೬೯ ರಲ್ಲಿ ಕಾಂಗ್ರೆಸ್ ಇಬ್ಬಾಗವಾದಾಗ ಈ ಥರದ ನಾಯಕರು ಸಂಸ್ಥಾ ಕಾಂಗ್ರೆಸ್ ನಲ್ಲಿ ಉಳಿದರು. ಕಾಂಗ್ರೆಸ್ ಪಳೆಯುಳಿಕೆಗೆ ತಾವು ವಾರಸುದಾರರು ಎಂಬ ಭ್ರಮೆ ಈ ನಾಯಕರಿಗಿತ್ತು.. ರೆಡ್ಡಿ ಕಾಂಗ್ರೆಸ್ ಹೆಸರಿನಲ್ಲಿ ಒಂದಾಗಿದ್ದ ಈ ಗುಂಪು ಇಂದಿರಾ ಗಾಂಧಿ ಅವರ ಗರೀಭಿ ಹಟಾವೋ ಮತ್ತು ರೋಟಿ ಕಪಡಾ ಮಖಾನ್ ಘೋಷಣೆಯಲ್ಲಿ  ಕೊಚ್ಚಿ ಹೋದರು. ದೇಶದಲ್ಲಿ ಇಂದಿರಾ ಗಾಂಧಿಒ ಹೊಸ ರಾಜಕಾರಣವನ್ನು ಪ್ರಾರಂಭಿಸಿದರು. ಅದು ಕಾಂಗ್ರೆಸ್ ನಿರ್ಲಕ್ಷಿಸಿದ್ದ ಬಡವರು, ದೀನದಲಿತರು, ದುರ್ಬಲ ವರ್ಗದದವರ ಪರವಾದ ರಾಜಕಾರಣವಾಗಿತ್ತು.
ಆದರೆ ಮಾಧ್ಯಮ ರೆಡ್ಡಿ ಕಾಂಗ್ರೆಸ್ ಪರವಾಗಿತ್ತೇ ಹೊರತೂ ಇಂದಿರಾ ಗಾಂಧಿ ಅವರ ಪರವಾಗಿ ಇರಲಿಲ್ಲ. ಇಂದಿರಾ ಗಾಂಧಿ ಅವರ ಜೊತೆಗಿದ್ದ ದೇವರಾಜ್ ಅರಸು ಕರ್ನಾಟಕದಲ್ಲಿ ಹಿಂದುಳಿದ ವರ್ಗದವರ ಪರವಾಗಿ ಅಭೂತಪೂರ್ವ ಕೆಲಸ ಮಾಡಿದರು. ಲಿಂಗಾಯಿತರು, ಒಕ್ಕಲಿಗರು ಮತ್ತು ಬ್ರಾಹ್ಮಣ ರಾಜಕಾರಣಕ್ಕೆ ತೆರೆ ಎಳೆದರು..ಆಗಲೇ ಮಾಧ್ಯಮ ಸಂಪೂರ್ಣವಾಗಿ ಇಂದಿರಾ ಮತ್ತು ಅರಸು ವಿರೋಧಿ ನಿಲುಮೆಯನ್ನು ಇನ್ನಷ್ಟ್ಯು ಪ್ರಖರಗೊಳಿಸಿತು.. ಇಂದಿರಾ ಗಾಂಧಿ ಅವರ ವಿರೋಧಕ್ಕೆ ಆಂತರಿಕವಾಗಿ ಬೇರೆ ಕಾರಣಗಳಿದ್ದರೂ ೧೯೭೫ ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಇಂದಿರಾ ಗಾಂಧಿ ಅವರು ತಮ್ಮ ವಿರೋಧಿಗಳಿಗೆ ತಾತ್ವಿಕ ಆಯುಧವನ್ನು ತಾವೇ ಪ್ರಧಾನ ಮಾಡಿದರು. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಜಯ ಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಆಂದೋಳನ ಪ್ರಾರಂಭವಾಯಿತು..ಆಗ ದೇಶದ  ಪ್ರಜಾಪ್ರಭುತ್ವವನ್ನು ಪ್ರೀತಿಸುವವರೆಲ್ಲ ಈ ಆಂದೋಲನದಲ್ಲಿ ದುಮುಕಿದರು. ಇದರಿಂದ ಇಂದಿರಾ ಗಾಂಧಿ ಅವರ ಬಡವರ ಪರವಾದ ರಾಜಕಾರಣವನ್ನು ವಿರೋಧಿಸುತ್ತಿದ್ದ ಮನಸ್ಸುಗಳಿಗೆ ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೊಸ ಆಯುಧ ಸಿಕ್ಕಿಬಿಟ್ಟಿತು.  ಮಾಧ್ಯಮಗಳೂ ಈ ಆಯುಧವನ್ನೇ ಇಂದಿರಾ ಗಾಂಧಿ ಅವರ ವಿರುದ್ಧ ಬಳಸಿದವು.
ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಶ್ರೀಮತಿ ಇಂದಿರಾ ಗಾಂಧಿ ಕೇವಲ ತಮಗೆ ಮಾತ್ರ ಅನ್ಯಾಯ ಮಾಡಿಕೊಳ್ಳಲಿಲ್ಲ, ಕಾಂಗ್ರೆಸ್ ಗೆ ಮಾತ್ರ ಮರಣ ಶಾಸನ ಬರೆಯಲಿಲ್ಲ, ಬಡವರು ಮತ್ತು ಹಿಂದುಳಿದ ವರ್ಗಗಳ ಪರವಾದ ರಾಜಕಾರಣಕ್ಕೂ ಕೊಡಲಿ ಪೆಟ್ಟು ನೀಡಿದರು. ಬಡವರು ದಲಿತರು ಮತ್ತು ಹಿಂದುಳಿದ ವರ್ಗಗಳ ವಿರೋಧಿಗಳಿಗೆ ಹೊಸ ಅಸ್ತ್ರವನ್ನು ನೀಡಿ ಬಿಟ್ಟರು.
ಆ ಕಾಲದಲ್ಲಿ ಒಟ್ಟಾರೆ ಮಾಧ್ಯಮದ ಮನಸ್ಥಿತಿ, ಕೂಡ ಇಂದಿರಾ ಗಾಂಧಿ ವಿರುದ್ಧದ ಮನಸ್ಥಿತಿಯೇ ಆಗಿತ್ತು. ಆಗ ವಿದ್ಯಾರ್ಥಿಯಾಗಿದ್ದ ನನಗೂ ಇಂದಿರಾ ಗಾಂಧಿ ಅಂದರೆ ಖಳನಾಯಕಿ ಎಂದೇ ಅನ್ನಿಸುತ್ತಿತ್ತು. ಪತ್ರಿಕೆಗಳನ್ನು ಓದಿ ಬೆಳೆದ ನನಗೆ ಪ್ರಾರಂಭದಲ್ಲಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ರಾಜಕಾರಣಕ್ಕೆ ನೀಡಿದ ಬಡವರು ದಲಿತರ ಪರವಾಗಿ ನೀಡಿದ ಹೊಸ ಆಯಾಮ ಗಮನಕ್ಕೆ ಬಂದಿರಲಿಲ್ಲ. ಇಂದಿರಾ ಗಾಂಧಿ ಅಂದರೆ ಪ್ರಜಾಪ್ರಭುತ್ವ ವಿರೋಧಿ ಸರ್ವಾಧಿಕಾರಿ ಎಂದೇ ಅನ್ನಿಸುತ್ತಿತ್ತು.. ಆದರೆ ಕರ್ನಾಟಕದಲ್ಲಿ ದೇವರಾಜ್ ಅರಸು ಅವರು ತೆಗೆದುಕೊಂಡ ಕ್ರಾಂತಿ ಕಾರಿ ತೀರ್ಮಾನಗಳನ್ನು ತಿಳಿದುಕೊಳ್ಳುತ್ತ ಹೋದಹಾಗೆ ನನ್ನ ನಿಲುಮೆ ಬದಲಾಯಿತು.ಜನತಂತ್ರ ಕಗ್ಗೊಲೆ ಮಾಡಿದ ಇಂದಿರಾ ಗಾಂಧಿ ಕಾಂಗ್ರೆಸ್ ರಾಜಕಾರಣವನ್ನು ಇನ್ನೊಂದು ನೆಲೆಗೆ ಕೊಂಡೊಯ್ದರು ಎಂಬುದನ್ನು ನಾನು ಕಂಡುಕೊಂಡೆ. ಇಂದಿರಾ ಗಾಂಧಿ ಮತ್ತು ದೇವರಾಜ್ ಅರಸು ಅವರನ್ನು ಮಾಧ್ಯಮ ವಿರೋಧಿಸುವುದಕ್ಕೆ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕೆ ನಡೆಸುತ್ತಿರುವ ಯತ್ನ ಎಂದು ಕಂಡರೂ ಅದರ ಹಿಂದೆ ಅಡಗಿ ಕುಳಿತಿರುವ ಬೇರೆ ಬೇರೆ ಕಾರಣಗಳು ಅರ್ಥವಾಗತೊಡಗಿತು..ಇಂದಿರಾ ಕಾಂಗ್ರೆಸ್ ಯಾವಾಗ ದೀನ ದಲಿತರ ಬಗ್ಗೆ ಮಾತನಾಡತೊಡಗಿದಂತೆ ಮೇಲ್ಜಾತಿಯ ಜನ ಕಾಂಗ್ರೆಸ್ ನಿಂದ ದೂರ ಸರಿಯತೊಡಗಿದರು. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಇವರೆಲ್ಲ ಐಖ್ಯವಾದದ್ದು ಇತಿಹಾಸ.
ಕರ್ನಾಟಕದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾದವರು ರಾಮಕೃಷ್ಣ ಹೆಗಡೆ. ಆಗ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದವರು ಕ್ರಾಂತಿರಂಗದಿಂದ ಬಂದ ಎಸ್. ಬಂಗಾರಪ್ಪ..ಆದರೆ ಆಗಲೇ ಮಾಧ್ಯಮ ಹೆಗಡೆಯವರ ಪರವಾಗಿತ್ತು. ಹೆಗಡೆ ದೇವೇಗೌಡ ಅವರ ನಡುವೆ ರಾಜಕಿಯ ವೈಷಮ್ಯ ತಾರಕಕ್ಕೆ ಏರಿದಾಗಲೂ ಮಾಧ್ಯಮ ಹೆಗಡೆ ಅವರ ಬೆಂಬಲಕ್ಕೆ ನಿಂತಿತ್ತು.
ಕರ್ನಾಟಕದಲ್ಲಿ ಮಾಧ್ಯಮ ಬೆಂಬಲ ನೀಡಿದ ನಾಯಕರ ಪಟ್ಟಿಯನ್ನು ಮಾಡಬಹುದು.. ರಾಮಕೃಷ್ಣ ಹೆಗಡೆ, ಎಸ್. ಎಮ್. ಕೃಷ್ಣ, ವಿರೇಂದ್ರ ಪಾಟೀಲ್, ಬಿ.ಎಸ್. ಯಡಿಯೂರಪ್ಪ ಹೀಗೆ ಪಟ್ಟಿ ಮಾಡಬಹುದು. ಆದರೆ ಈ ಪಟ್ಟಿಯಲ್ಲಿ ನಿಖರವಾಗಿ ಹೆಸರಿಸಬಹುದಾದ ಇಬ್ಬರು ನಾಯಕರೆಂದರೆ ಹೆಗಡೆ ಮತ್ತು ಎಸ್. ಎಮ್. ಕೃಷ್ಣ ಮಾತ್ರ.. ಮಾಧ್ಯಮ ಇವರಿಬ್ಬರಿಗೆ ಯಾಕೆ ಬೆಂಬಲ ನೀಡುತ್ತ ಬಂತು ? ಈ ಪ್ರಶ್ನೆಯನ್ನು ಕೇವಲ ಜಾತಿ ಆಧಾರದಿಂದ ಮಾತ್ರ ನೋಡುವುದು ಸಾಧ್ಯವಿಲ್ಲ. ಹಾಗೆ ಇವರಿಬ್ಬರು ಕರ್ನಾಟಕ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳು ಎಂಬ ವಾದಕ್ಕೂ ಸಾಕ್ಷ್ಯ ಪುರಾವೆ ಇಲ್ಲ. ಎಸ್. ಎಮ್. ಕೃಷ್ಣ ದೇವೇಗೌಡ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು. ಹೀಗಿದ್ದರೂ ಕೃಷ್ಣ ಅವರನ್ನು ಬೆಂಬಲಿಸಿದ ಮಾಧ್ಯಮ ದೇವೇಗೌಡರನ್ನು ಬೆಂಬಲಿಸಲಿಲ್ಲ.
ಇನ್ನೊಂದೆಡೆ ವೀರಪ್ಪ ಮೊಯ್ಲಿ, ಎಸ್. ಬಂಗಾರಪ್ಪ ಅವರಿಗೆ ಮಾಧ್ಯಮ ಎಂದೂ ಬೆಂಬಲ ನೀಡಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಮಾಧ್ಯಮದ ಬೆಂಬಲ ಪಡೆಯುವಲ್ಲಿ ಯಶಸ್ವಿಯಾದರು. ಯಡಿಯೂರಪ್ಪ ತಾವೇ ಸೃಷ್ಟಿಸಿಕೊಂಡ ವಿವಾದಗಳಲ್ಲಿ ಸಿಲುಕಿಕೊಂಡು ಜೈಲಿಗೆ ಹೋಗಿ ಬಂದಿದ್ದರಿಂದ ಮಾಧ್ಯಮದ ಬೆಂಬಲ ಅವರಿಗೆ ಸಿಗದಂತಾಯಿತು. ಇನ್ನು ಜಗದೀಶ್ ಶೆಟ್ಟರ್, ಸದಾನಂದ ಗೌಡರಿಗೆ ಮಾಧ್ಯಮದ ಬೆಂಬಲ ಇತ್ತೋ ಇಲ್ಲವೋ ಎಂದು ಅರ್ಥ ಮಾಡಿಕೊಳ್ಳಲು ಕಾಲಾವಕಾಶವೇ ಇರಲಿಲ್ಲ. ಇವರಿಗಿಂತ ಮೊದಲು ಆರ್. ಗುಂಡೂರಾಯರಂತೂ ಮಾಧ್ಯಮಗಳ ಧಾಳಿಗೆ ಸಿಲುಕಿ ನಲುಗಿ ಹೋದರು. ಪತ್ರಕರ್ತರೆಲ್ಲ ಸಮುದ್ರಕ್ಕೆ ಹೋಗಿ ಬೀಳಲಿ ಎಂದು ಅವರು ಶಪಿಸುವಂತೂ ಆಯಿತು.
ಪ್ರಸಕ್ತ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಮಾಧ್ಯಮ ಬೆಂಬಲ ನೀಡುತ್ತಿಲ್ಲ.
ಇದೆನ್ನೆಲ್ಲ ಗಮನಿಸಿದ ಮೇಲೆ  ಮಾಧ್ಯಮಕ್ಕೆ ಯಾರು ಯಾಕೆ ಇಷ್ಟವಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಲು ಯತ್ನಿಸೋಣ..
ಕರ್ನಾಟಕದ ಸ್ವಾತಂತ್ರೋತ್ಸವದ ರಾಜಕಾರಣದಲ್ಲಿ ಕೇವಲ ಜಾತಿ ಆಧಾರದ ಮೇಲೆ ಮಾಧ್ಯಮ, ನಾಯಕರು ಮತ್ತು ಪಕ್ಷಕ್ಕೆ ಬೆಂಬಲ ನೀಡುತ್ತ ಬಂದಿದೆ ಎಂದು ಹೇಳಲು ಸಾಕ್ಷಾಧಾರಗಳಿಲ್ಲ. ಆದರೆ ಕೆಲವೊಂದು ವಿಶಿಷ್ಠ ಸಂದರ್ಭಗಳಲ್ಲಿ ಜಾತಿ ಕೂಡ ಪ್ರಮುಖ ಪಾತ್ರ ಒಹಿಸಿದರೂ ಅದೊಂದೇ ಕಾರಣವಲ್ಲ. ದೇವರಾಜ ಅರಸು ಅವರನ್ನು  ಮಾಧ್ಯಮ ವಿರೋಧಿಸಿದ್ದಕ್ಕೆ ಮಾಧ್ಯಮದ ಇಂದಿರಾ ವಿರೋಧಿ ಮನಸ್ಥಿತಿ  ಪ್ರಮುಖ ಕಾರಣವಾಗಿತ್ತು. ಮಾಧ್ಯಮದ ಇಂತಹ ಮನಸ್ಥಿತಿಗೆ ಈಗಾಗಲೇ ವಿವರಿಸಿರುವಂತೆ ಇಂದಿರಾ ಗಾಂಧಿ ಅವರ ಜನತಂತ್ರ ವಿರೋಧಿ ನಡವಳಿಕೆಯ ಜೊತೆಗೆ ಅವರು ಹೊಂದಿದ್ದ ಬಡವರ ಮತ್ತು ಹಿಂದುಳಿದ ವರ್ಗಗಳ ಪರವಾದ ನಿಲುಮೆಯೂ ಕಾರಣವಾಗಿತ್ತು ಎಂಬುದನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ.  ಇಂದಿರಾ ಗಾಂಧಿ ಮತ್ತು ಅವರ ಕಾಂಗ್ರೆಸ್ ಪಕ್ಷದ ಅಂದಿನ ಬಡವರ ಪರವಾದ ನೀತಿ ನಿಜವಾದ ಬದ್ಧತೆಯಿಂದ ಕೂಡಿತ್ತೇ ಅಥವಾ ಮತ ಬ್ಯಾಂಕ್ ರಾಜಕರಣ ಇದಾಗಿತ್ತೆ ಎಂಬುದನ್ನು ಸ್ಪಷ್ಟವಾಗಿ ಹೇಳುವುದು ಕಷ್ಟ.ಆದರೆ ಇಂದಿರಾ ಗಾಂಧಿ ಅವರು ಘೋಷಿಸಿದ ಬಹುತೇಕ ಕಾರ್ಯಕ್ರಮಗಳು ಬಡವರಪರವಾಗಿದ್ದವು. ಇದೇ ಮಾಧ್ಯಮ ಇಂದಿರಾ ಗಾಂಧಿ ಅವರನ್ನು ವಿರೋಧಿಸುವುದಕ್ಕೆ ಕಾರಣವಾಗಿರಬಹುದೆ ? ಇನ್ನು ದೇವರಾಜ್ ಅರಸು. ಅವರು ಕರ್ನಾಟಕದ ರಾಜಕಾರಣದಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮತ್ತು ಸಾಮಾಜಿಕ ಪ್ರಾತಿನಿಧ್ಯ ನೀಡಿದವರು. ಇದೇ ಅರಸು ಅವರನ್ನು ಮಾಧ್ಯಮ ವಿರೋಧಿಸುವುದಕ್ಕೆ ಪ್ರಮುಖ ಕಾರಣ ಇರಬಹುದು.
ಈಗ ಕರ್ನಾಟಕದಲ್ಲಿ ಮಾಧ್ಯಮದ ಬೆಂಬಲ ಪಡೆದವರಲ್ಲಿ ಪ್ರಮುಖರೆಂದರೆ ರಾಮಕೃಷ್ಣ ಹೆಗಡೆ ಮತ್ತು ಎಸ್.ಎಮ್. ಕೃಷ್ಣ. ಇವರಿಬ್ಬರೂ ಕ್ರಮವಾಗಿ ಬ್ರಾಹ್ಮಣ ಮತ್ತು ಒಕ್ಕಲಿಗೆ ಜಾತಿಗೆ ಸೇರಿದ್ದರೂ ಇಬ್ಬರ ನಡುವೆ ಹಲವು ರೀತಿಯ ಸಾಮ್ಯತೆಗಳಿವೆ. ಇವರಿಬ್ಬರು ಕರ್ನಾಟಕದ ಉಳಿದೆಲ್ಲ ರಾಜಕಾರಣಿಗಳಿಗಿಂತ ಹೆಚ್ಚಾಗಿ ತಮ್ಮ ಇಮೇಜ್ ಬಗ್ಗೆ ತಲೆ ಕೆಡಿಸಿಕೊಂಡವರು. ಭ್ರಷ್ಟರಾದರೂ ಎಲ್ಲಿಯೂ ಸಿಕ್ಕಿ ಹಾಕಿಕೊಳ್ಳದೇ ನಯ ನಾಜೂಕಿನಿಂದ ರಾಜಕಾರಣ ಮಾಡಿದವರು. ಹೆಗಡೆ  ರೇವಜೀತು, ಬಾಟ್ಲಿಂಗ್ ಮೊದಲಾದ ಹಗರಣಗಳಲ್ಲಿ ಸಿಲುಕಿಕೊಂಡು ತಮ್ಮ ಇಮೇಜಿಗೆ ದಕ್ಕೆ ತಂದುಕೊಂಡರೂ ಕೃಷ್ಣ ಮಾತ್ರ ಎಲ್ಲಿಯೂ ಸಿಕ್ಕಿ ಹಾಕಿಕೊಳ್ಳಲಿಲ್ಲ.
ಇದನ್ನೆಲ್ಲ ಗಮನಿಸಿದರೆ ಮಾಧ್ಯಮಕ್ಕೆ ಒಬ್ಬ ರಾಜಕಾರಣಿ ಯಾಕೆ ಇಷ್ಟವಾಗುತ್ತಾನೆ ಎಂಬುದಕ್ಕೆ ಕೆಲವು ಅಂಶಗಳನ್ನು ಪಟ್ಟಿ ಮಾಡಬಹುದು.
೧. ಜಾತಿ.
೨. ವರ್ಗ
೩. ಮಾಧ್ಯಮ ನಿರ್ವಹಣೆ
೪. ಇಮೇಜ್
ಮಾಧ್ಯಮಕ್ಕೆ ಯಾರು ಇಷ್ಟವಾಗುತ್ತಾರೆ ಎಂಬುದಕ್ಕೆ ಜಾತಿ ಪ್ರಮುಖ ಕಾರಣ ಎಂಬುದು ನಿಜ. ಆದರೆ ಇದ್ಏ ಅಂತಿಮ ಅಲ್ಲ. ಜಾತಿಯೊಂದೇ ಅಂತಿಮ ವಾಗಿದ್ದರೆ, ಒಂದೇ ಸಮುದಾಯಕ್ಕೆ ಸೇರಿದ ಎಸ್. ಎಮ್. ಕೃಷ್ಣ ಮತ್ತು ದೇವೇಗೌಡ ಇಬ್ಬರಿಗೂ ಸಮಾನ ಪ್ರಾತಿನಿಧ್ಯ ಮಾಧ್ಯಮದಲ್ಲಿ ದೊರಕಬೇಕಿತ್ತು. ಆದರೆ ಹಾಗಾಗಿಲ್ಲ.  ಜಾತಿಯ ಜೊತೆಗೆ ಅವರು ಯಾವ ವರ್ಗವನ್ನು ಪ್ರತಿನಿಧಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ ಎಂಬುದನ್ನು ನಾವು ಗಮನಿಸಬಹುದು. ಇದಕ್ಕೆ ದೇವರಾಜ್ ಅರಸು ಅವರನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಬಹುದು. ಅರಸು ಅವರನ್ನು ವಿರೋಧಿಸುವುದಕ್ಕೆ ಅವರ ಜಾತಿ ಕಾರಣವಾಗಿರಲಿಲ್ಲ, ಅವರು ಯಾವ ವರ್ಗವನ್ನು ಪ್ರತಿನಿಧಿಸುತ್ತಿರುವುದು ಕಾರಣವಾಗಿತ್ತು.
ಇನ್ನು ಮಾಧ್ಯಮ ನಿರ್ವಹಣೆ. ಮಾಧ್ಯಮ ನಿರ್ವಹಣೆ ಎಂದರೆ ಅದು ಕೇವಲ ಪೇಡ್ ನ್ಯೂಸ್ ಗೆ ಮಾತ್ರ ಸಂಬಂಧಿಸಿದ್ದಲ್ಲ..ಮಾಧ್ಯಮದ ಜೊತೆ ಒಬ್ಬ ರಾಜಕಾರಣಿ ಯಾವ ರೀತಿಯ ಸಂಬಂಧ ಇಟ್ಟುಕೊಳ್ಳುತ್ತಾನೆ ಎಂಬುದು ಮುಖ್ಯ. ಆತ ಯಾವ ರೀತಿ ಮಾತನಾಡುತ್ತಾನೆ, ಅವನು ಪತ್ರಿಕಾಗೋಷ್ಟಿ ಕರೆದಾಗ ಹೇಗೆ ಹ್ಯಾಂಡಲ್ ಮಾಡುತ್ತಾನೆ, ಅವನ ಹೇಳಿಕೆಯಲ್ಲಿ ಸುದ್ದಿ ಇರುತ್ತದೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಾಗುತ್ತದೆ..
ಈ ವಾದದ ನಡುವೆಯೂ ಜಾತಿ ಪ್ರಮುಖ ಪಾತ್ರ ಒಹಿಸುತ್ತದೆ ಎಂಬುದಕ್ಕೆ ನಮ್ಮ ಎದುರು ಉದಾಹರಣೆಗಳಿವೆ. ಇತ್ತೀಚಿಗೆ ಅತ್ಯಾಚಾರ ಆರೋಪಕ್ಕೆ ಸಿಲುಕಿರುವ ರಾಘವೇಶ್ವರ ಸ್ವಾಮಿಯ ಪ್ರಕರಣವನ್ನೇ ತೆಗೆದುಕೊಳ್ಳಬಹುದು. ಅತ್ಯಾಚಾರದ ಎರಡು ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ರಾಘವೇಶ್ವರ ಸ್ವಾಮಿ ಮಾಧ್ಯಮದ ಪಾಲಿಗೆ ಶ್ರೀಗಳು..ಆದರೆ ಅತ್ಯಾಚಾರ  ಆರೋಪ ಎದುರಿಸುತ್ತಿರುವ ನಿತ್ಯಾನಂದ ಸ್ವಾಮಿ, ಕಾಮಿ ಸ್ವಾಮಿ, ರಾಘವೇಶ್ವರ ಸ್ವಾಮಿಯನ್ನು ಕಾಮಿ ಸ್ವಾಮಿ ಎಂದು ಕರೆಯುವ ಧೈರ್ಯ ಯಾಕೆ ಮಾಧ್ಯಮಕ್ಕಿಲ್ಲ ? ಮಾಧ್ಯಮಕ್ಕೆ ಧೈರ್ಯ ಇಲ್ಲವೋ ಆಥವಾ ಈ ಸ್ವಾಮಿಯ ಜಾತಿ ಬಾಂಧವರು ಅವರ ರಕ್ಷಣೆಗೆ ನಿಂತಿದ್ದಾರೆಯೆ ? ಈ ಬಗ್ಗೆ ಅನುಮಾನ ಬೇಡ. ಇದು ಕಾಕತಾಳಿಯವೂ ಅಲ್ಲ. ರಾಜ್ಯದ ಮೂರು ಪ್ರಮುಖ ಪತ್ರಿಕೆಗಳಲ್ಲಿ ರಾಘವೇಶ್ವರ ಸ್ವಾಮಿಯ ಜಾತಿ ಬಾಂಧವರು ಪ್ರಮುಖ ಸ್ಥಾನದಲ್ಲಿದ್ದಾರೆ. ಅವರಿಗೆ ರಾಘವೇಶ್ವರ ಸ್ವಾಮಿ ಕಾಮಿ ಸ್ವಾಮಿಯಲ್ಲ, ಅವರು ಶ್ರೀಗಳು.

ಇದೆಲ್ಲವನ್ನು ಗಮನಿಸಿದ ಮೇಲೆ ರಾಜ್ಯದ ಮಾಧ್ಯದ ಮನಸ್ಸು ಹೇಗೆ ಕೆಲಸ ಮಾಡುತ್ತಿದೆ ಎಂಬ ಬಗ್ಗೆ ಕೆಲವೊಂದು ಸುಳಿವುಗಳು ದೊರಕುತ್ತವೆ. ರಾಜ್ಯದ ಮಾಧ್ಯಮಕ್ಕೆ ಒಬ್ಬ ನಾಯಕ ಯಾವ ವರ್ಗ ಮತ್ತು ಸಮುದಾಯವನ್ನು ಪ್ರತಿನಿಧಿಸುತ್ತಾನೆ ಎಂಬುದು ಮೊದಲ ಆಧ್ಯತೆ. ಈ ಸಮುದಾಯದ ಪ್ರಾತಿನಿಧ್ಯ ಒಳಗಡೆ ಇರುವುದು ಜಾತಿಯೇ. ಇದಾದ ಮೇಲೆ ಮಾಧ್ಯಮ ನಿರ್ವಹಣೆ ಮತ್ತು ಇಮೇಜ್ ಪ್ರಮುಖ ಪಾತ್ರ ಒಹಿಸುತ್ತವೆ..

1 comment:

Prof.B.Harishchandra Bhat said...

ಸರಿಯಾಗಿ ಪತ್ರಿಕಾ ಪ್ರಚಾರ ಪಡೆದವರು ದೇವರಾಜ ಅರಸು ಅವರೇ . ಪ್ರಜಾವಾಣಿ ಆಗಿನ ದೊಡ್ಡ ಪತ್ರಿಕೆ. ಸಂಪಾದಕರಾಗಿದ್ದ ಟಿ ಎಸ್ ಮತ್ತು ಖಾದ್ರಿ ಶಾಮಣ್ಣ ಜಯಶೀಲ ರಾವ್ , ಹುಣಸೂರಿನವರೇ ಆಗಿದ್ದ ಜಯತೀರ್ಥ ರಾವ್, ಆರ್ ಶಾಮಣ್ಣ , ಡೆಕ್ಕನ್ ಹೆರಾಲ್ದಿನ ರಘುರಾಮ ಶೆಟ್ಟಿ, ಮೈಸೂರುಮಠ ಮುಂತಾದ ಅತಿರಥ ರೆಲ್ಲರೂ ಅರಸು ಅವರ ಆತ್ಹ್ಮೀಯರಾಗಿದ್ದರು. ಸ್ವಲ್ಪ ಕ್ರಿಟಿಕಲ್ ಆಗಿ ಬರೆಯುತ್ತಿದ್ದ ಎಂ.ಸಿ.ವಿ ಮೂರ್ತಿ ಅವರನ್ನು ಅರಸು ಅವರು ಪತ್ರಿಕಾಗೋಷ್ಟಿಯಿಂದ ಹೊರಗಿಡುವ ಆದೇಶವನ್ನೇ ಹೊರಡಿಸಿದ್ದರು !. ಅರಸು ಅವರು ತಮ್ಮ ಶಿಷ್ಯ ಬಿ.ಡಿ.ಏ . ಅಧ್ಯಕ್ಷ ಬಿ.ಟಿ. ಸೋಮಣ್ಣ ಅವರಿಗೆ ಹೇಳಿ ಪತ್ರಕರ್ತರಿಗೆ ಅರ್ಧ ಬೆಲೆಯಲ್ಲಿ ನಿವೇಶನಗಳನ್ನು ಹಂಚಿದ್ದರು. ವಿಶೇಷ quota ದಲ್ಲಿ Lambretta ಸ್ಕೂಟರ್ ಕೊಡಿಸುತ್ತಿದ್ದರು. ಇಂದಿರಾ ಗಾಂಧಿಯವರಿಗಿಂತ ಹೆಚ್ಚಿನ ಪ್ರಚಾರ ಪಡೆದದ್ದು ಅರಸು ಪತನ ಕ್ಕೆ ಕಾರಣವೂ ಆಯಿತು ! ,

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...