Tuesday, November 10, 2015

ನಮಗೆ ಟಿಪ್ಪೂ ಯಾಕೆ ಬೇಕು..?

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ. ಬೆಂಗಳೂರಿನಲ್ಲಿ ಮಳೆ. ವಿಪರೀತ ಚಳಿ. ಯಾವುದೋ ಟೀವಿಯೊಂದರಲ್ಲಿ ನಿರೂಪಕಿಯೊಬ್ಬರು  ಬಿಜೆಪಿ ಶಾಸಕ ಸಿ.ಟಿ. ರವಿ ಅವರ ಜೊತೆ ಲೈವ್ ಮಾತುಕತೆ ನಡೆಸಿದ್ದಾರೆ.. ರವಿ ವೀರಾವೇಶದಿಂದ ಟಿಪ್ಪು ಸುಲ್ತಾನ್ ಹೇಗೆ ಕನ್ನಡ ವಿರೋಧಿ ಎಂಬುದನ್ನು ಸಾಬೀತು ಪಡಿಸಲು ಯತ್ನ ನಡೆಸುತ್ತಿದ್ದಾರೆ. ಇನ್ನೊಂದೆಡೆ ವಿಧಾನ ಸೌಧದಲ್ಲಿ ನಡೆದ ಟಿಪ್ಪು ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಜ್ನಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಬೆಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಗೆ ಬದಲಾಗಿ ಟಿಪ್ಪು ಹೆಸರು ಇಡಬೇಕಿತ್ತು ಎಂದು ಹೇಳಿದ ವರದಿ ಬರುತ್ತಿದೆ. ಇದು ಬಂದ ಕೆಲವೇ ಕ್ಷಣಗಳಲ್ಲಿ ಬಿಜೆಪಿಯ ಹಿರಿಯ ನಾಯಕ ಆರ್. ಅಶೋಕ್ ವೀರಾವೇಶದಿಂದ ಡಾ, ಕಾರ್ನಾಡ್ ಅವರ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ.
ಇವೆಲ್ಲವನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡುತ್ತಿವೆ. ಈ ನಡುವೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಚರ್ಚೆ ನಡೆಯುತ್ತಿದೆ. ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯ ಪರ ಮತ್ತು ವಿರೋಧಿ ಗುಂಪಿನವರು ತಮ್ಮ ತಮ್ಮ ವಾದವನ್ನು ಪರಿಣಾಮಕಾರಿಯಾಗಿ ಮಂಡಿಸಲು ಯತ್ನ ನಡೆಸುತ್ತಿದ್ದಾರೆ. ಮಡಿಕೇರಿಯ ವಿಶ್ವ ಹಿಂದೂ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ ಎಂಬವರು ಕಲ್ಲಿನೇಟು ಬಿದ್ದು ಅಸು ನೀಗಿದ ವರದಿ ಚಾನಲ್ ನಲ್ಲಿ ಬರುತ್ತದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿ ಈ ವ್ಯಕ್ತಿ ಅಸು ನೀಗಿದ್ದು ಕಲ್ಲಿ ನೇಟಿನಿಂದ ಅಲ್ಲ, ಮಹಡಿ ಮೇಲಿನಿಂದ ಬಿದ್ದು ಎಂಬ ವಿವರಣೆ ನೀಡುತ್ತದೆ. ಮುಖ್ಯಮಂತ್ರಿಗಳು ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳು ಈ ಬಗ್ಗೆ ವಿವರಣೆ ನೀಡುತ್ತಾರೆ. ತಕ್ಷಣ ಸುದ್ದಿ ವಾಹಿನಿಗಳ ಬಗ್ಗೆಯೂ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಪ್ರಾರಂಭವಾಗುತ್ತದೆ.
ನಾನು ತುಂಬಾ ಆತಂಕದಿಂದ ನೋವಿನಿಂದ ಇದನ್ನೆಲ್ಲ ನೋಡುತ್ತಿದ್ದೇನೆ. ನನಗೆ ದುಃಖ ಬೇಸರ ಆಗುತ್ತಿದೆ. ಬದುಕು ಎಷ್ಟು ಅಸಹನೀಯವಾಗುತ್ತಿದೆ ಎಂದು ನನಗೆ ಅನ್ನಿಸತೊಡಗಿದೆ. ಆಗ ಸುದ್ದಿ ವಾಹಿನಿಯಲ್ಲಿ ಇನ್ನೊಂದು ಸುದ್ದಿ ಬರುತ್ತಿದೆ. ಇನ್ನೊಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಅಸು ನೀಗಿದ. ಆತ ಅಸ್ಪತ್ರೆಯ ಮಹಡಿಯ ಮೇಲಿನಿಂದ ಕೆಳಕ್ಕೆ ಬಿದ್ದಿದ್ದ,,
ಹಾಗಿದ್ದರೆ ಇಬ್ಬರೂ ಮಹಡಿಯ ಮೇಲಿನಿಂದ ಬಿದ್ದರೆ ? ಒಬ್ಬ ಮಾತ್ರ ಮಹಡಿಯ ಮೇಲಿನಿಂದ ಬಿದ್ದು ಸತ್ತರೆ ಕುಟ್ಟುಪ್ಪ ಸತ್ತಿದ್ದು ಹೇಗೆ ? ನನ್ನ ಈ ಪ್ರಶ್ನೆಗೆ ಉತ್ತರ ವಿಲ್ಲ.
ಹೊರಗೆ ಮಳೆ ಸುರಿಯುತ್ತಲೇ ಇದೆ. ಯಾರಿಗೂ ಕಾಯುತ್ತ ಎಲ್ಲಿಯೋ ಕುಳಿತ ನನಗೆ ಬೆಂಗಳೂರು ನನ್ನದಲ್ಲ ಅನ್ನಿಸತೊಡಗಿದೆ. ಕರ್ನಾಟಕ ನನ್ನ ಕರ್ನಾಟಕವಲ್ಲ ಅಲ್ಲ ಎಂದು ಅನ್ನಿಸತೊಡಗಿದೆ.
ಇಂದಿನ ತಂತ್ರ ಜ್ನಾನದ ಯುಗದಲ್ಲಿ ಇಲ್ಲಿಯೇ ನಡೆದ ಘಟನೆಯೊಂದರ ಸತ್ಯಾಸತ್ಯತೆ ನನಗೆ ತಿಳಿಯುತ್ತಿಲ್ಲ. ಹಾಗಿದ್ದರೆ ಸುಮಾರು ೨0೦ ವರ್ಷಗಳ ಹಿಂದಿನ ರಾಜನೊಬ್ಬ ಹೀಗೆ ಇದ್ದ ಎಂದು ನಂಬುವುದು ಹೇಗೆ ? ಟಿಪ್ಪು ಸುಲ್ತಾನ್ ಎಂಬ ವೀರ ಅರಸ ಹೀಗಿದ್ದ ಎಂಬ ಅಂತಿಮ ತೀರ್ಮಾನಕ್ಕೆ ಬರುವುದು ಹೇಗೆ ? ಆದರೆ ಟಿಪ್ಪು ಹೀಗೆಯೇ ಇದ್ದ ಎಂದು ನಂಬಿಕೊಂಡವರು ನಡೆಸುತ್ತಿರುವ ಹೋರಾಟಕ್ಕೆ ರಕ್ತಪಾತಕ್ಕೆ ಅರ್ಥವಿದೆಯೆ ?
ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಾನು ಯತ್ನಿಸುತ್ತಿದ್ದೇನೆ. ನನಗೆ ಅನ್ನಿಸುವ ಹಾಗೆ ನಾವು ಆರಾಧನೆ ಮತ್ತು ವಿರೋಧದ ನಡುವೆ ತೊಳಲಾಡುತ್ತಿದ್ದೇವೆ. ನಾವು ಒಮ್ಮೆ ಒಬ್ಬ ವ್ಯಕ್ತಿಯ ಆರಾಧಕರಾಗಿದ್ದರೆ ಇನ್ನೊಬ್ಬ ವ್ಯಕ್ತಿಯ ವಿರೋಧ ಮಾಡುವವರಾಗಿರುತ್ತೇವೆ. ಇದು ಬಹುಮಟ್ಟಿಗೆ ನಮ್ಮ ಆಲೋಚನಾ ಕ್ರಮ, ನಂಬಿಕೆ, ವಿಷಯದ ಗ್ರಹಿಕೆಯ ಮೇಲೆ ನಿಂತಿರುತ್ತದೆ. ನಮ್ಮ ಗ್ರಹಿಕೆಗೆ ಮೂಲ ಸಾಮಗ್ರಿಯಾವುದು ಎಂಬುದೂ ಕುತೂಹಲಕರ. ನಾವು ಎನನ್ನು ನಂಬುತ್ತೇವೆಯೋ ಅದು ಗ್ರಹಿಕೆಗೆ ಮೂಲ ಸಾಮಗ್ರಿ.. ಹೀಗೆ ಆರಾಧನೆ ಮತ್ತು ವಿರೋಧದ ನಡುವೆ ಜೋಕಾಲಿ ಆಡುವ ನಾವು ಅರ್ಥಮಾಡಿಕೊಳ್ಳಲು ಮುಂದಾಗುವುದೇ ಇಲ್ಲ. ಹಾಗಿದ್ದರೆ, ರಾಮ ಕೃಷ್ಣ, ಬುದ್ಧ ಬಸವ ಗಾಂಧಿ ಅಂಭೇಡ್ಕರ್ ಮತ್ತು ಟಿಪ್ಪು ಸುಲ್ತಾನ್ ನನ್ನು ನಾವು ಅರ್ಥ ಮಾಡಿಕೊಳ್ಳಬೇಕೆ ಅಥವಾ ಆರಾಧಿಸಬೇಕೆ ? ಅಥವಾ ವಿರೋಧಿಸಬೇಕೆ ?
ನನಗೆ ಅನ್ನಿಸುವ ಹಾಗೆ ನಾನು ಮೇಲೆ ಹೆಸರಿಸಿದ ಮಹಾನ್ ವ್ಯಕ್ತಿಗಳನ್ನು ನಾವು ಅರ್ಥ ಮಾಡಿಕೊಳ್ಳಲು ಯತ್ನ ನಡೆಸಿಯೇ ಇಲ್ಲ. ನಾವು ಅವರನ್ನು ಆರಾಧಿಸುತ್ತೇವೆ ಇಲ್ಲವೆ ವಿರೋಧ ಮಾಡುತ್ತೇವೆ. ಇದೇ ಇಂದಿನ ಬಹು ಮುಖ್ಯ ಸಮಸ್ಯೆ ಎಂದು ನನಗೆ ಅನ್ನಿಸುತ್ತದೆ. ನಾವು ಯಾರನ್ನಾದರೂ ವಿರೋಧಿಸಲು ಪ್ರಾರಂಭಿಸಿದ ತಕ್ಷಣ ಅವರಲ್ಲಿರುವ ವಿರೋಧಿಸುವ ಗುಣಗಳೇ ನಮಗೆ ಕಾಣತೊಡಗುತ್ತದೆ. ಹಾಗೆ ಆರಾಧಿಸಲು ಪ್ರಾರಂಭಿಸಿದರೂ ಆಗುವುದು ಹಾಗೆ. ಆರಾಧನೆ ನಮ್ಮ ತರ್ಕ ಮತ್ತು ಆಲೋಚನೆಯ ಬಾಗಿಲುಗಳನ್ನು ಮುಚ್ಚಿ ಬಿಡುತ್ತದೆ. ಇದು ನಮ್ಮ ಮನಸ್ಸಿನ ಮಿತಿ.
ಈ ದೇಶದಲ್ಲಿ ಆಗಿದ್ದು ಅದೇ. ಇಲ್ಲಿ ರಾಮ ಕೃಷ್ಣ ಗಾಂಧಿ ಬಸವ ಅಂಬೇಡ್ಕರ್, ಬುದ್ಧ ಬಸವರ ಆರಾಧಕರಿದ್ದಾರೆ, ಅವರನ್ನು ವಿರೋಧಿಸುವವರಿದ್ದಾರೆ. ಆದರೆ ಅರ್ಥ ಮಾಡಿಕೊಳ್ಳುವವರು ಇಲ್ಲವೇ ಇಲ್ಲ. ಈಗ ಟಿಪ್ಪು ಸುಲ್ತಾನ್ ವಿಚಾರಕ್ಕೆ ಬರೋಣ. ಟಿಪ್ಪು ಸುಲ್ತಾನ್ ಕರ್ನಾಟಕದ ಮಹಾನ್ ಶೂರ ಅರಸರಲ್ಲಿ ಒಬ್ಬ. ಆತನ ಶೌರ್ಯಕ್ಕೆ ಎಣೆಯೇ ಇಲ್ಲ. ಆತ ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ತನ್ನ ಜೀವವನ್ನೇ ಬಲಿ ಕೊಟ್ಟ..ತನ್ನ ವಿರೋಧಿಗಳಾದ ಬ್ರೀಟೀಷರನ್ನು ಮಣಿಸಲು ಆಧುನಿಕ ಯುದ್ಧ ತಂತ್ರವನ್ನು ಬಳಸಿದ. ಹೀಗಾಗಿ ಆತ ಮೈಸೂರು ರಾಜ್ಯದ ಹೆಮ್ಮೆ..
ಆಗಿನ ಬ್ರೀಟೀಷ್ ಇಂಡಿಯಾದಲ್ಲಿ ಹಲವಾರು ಅರಸೊತ್ತಿಗೆಗಳಿದ್ದವು. ಎಲ್ಲ ಅರಸೊತ್ತಿಗೆಗಳು ಬ್ರಿಟೀಷರಿಗೆ ಸೋತು ಕಪ್ಪ ಕಾಣಿಕೆ ಸಲ್ಲಿಸಿ ಅವರ ಗುಲಾಮರಂತೆ ಬದುಕುತ್ತಿದ್ದರು. ಆದರೆ ಟಿಪ್ಪು ಹಾಗೆ ಮಾಡಲಿಲ್ಲ. ಆದರೆ ಟಿಪ್ಪುವನ್ನು ಅರ್ಥ ಮಾಡಿಕೊಳ್ಳಲು ಇವಿಷ್ಟೇ ಮಾಹಿತಿ ಸಾಲದು. ಇನ್ನು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳುತ್ತ ಉತ್ತರ ಕಂಡುಕೊಳ್ಳಲು ಯತ್ನ ನಡೆಸೋಣ..
ಟಿಪ್ಪು ಒಬ್ಬ ಹಿಂದೂ ದ್ರೋಹಿ ಎಂಬ ಆರೋಪ ದ ಬಗ್ಗೆ ನೋಡೋಣ..  ಈ ಬಗ್ಗೆ ಮಾತನಾಡುವ ಬಲಪಂಥೀಯರು ಆತ ಕೇರಳದಲ್ಲಿ ನಡೆಸಿದ ದೌರ್ಜನ್ಯದ ಬಗ್ಗೆ ಅಲ್ಲಿ ಹಿಂದೂ ದೇವಾಲಯಗಳನ್ನು ಲೂಟಿ ಮಾಡಿದ ಬಗ್ಗೆ ಮಾತನಾಡುತ್ತಾರೆ. ಟಿಪ್ಪುವನ್ನು ಸಮರ್ಥಿಸುವವವರು ಆತ ಶ್ರಿಂಗೇರಿ ಮಠಕ್ಕೆ ನೀಡಿದ ರಕ್ಷಣ ನಂಜನಗೂಡು ನಂಜುಂಡೇಶ್ವರಿಗೆ ನಡೆದುಕೊಳ್ಳುತಿದ್ದ ಬಗ್ಗೆ ವಿವರಗಳನ್ನು ನೀಡಿ ಸಮರ್ಥಿಸಿಕೊಳ್ಳುತ್ತಾರೆ. ಅದರೆ ಸತ್ಯ ಈ ಸಮರ್ಥನೆ ಮತ್ತು ಟೀಕೆಗೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಮೀರಿ ನಾವು ನೋಡಿದರೆ ಮಾತ್ರ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದು ಎಂದು ನನಗೆ ಅನ್ನಿಸುತ್ತದೆ.
ಟಿಪ್ಪು ಅಧಿಕಾರ ನಡೆಸಿದ ಕಾಲಘಟ್ಟದಲ್ಲಿ ಅರಸನಾದವ ಹೇಗಿರುತ್ತಿದ್ದ ಎಂಬುದನ್ನು ಮೊದಲನೇಯದಾಗಿ ನಾವು ತಿಳಿದುಕೊಳ್ಳಬೇಕು. ಆಗಿನ ಕಾಲದಲ್ಲಿ ಈ ದೇಶದಲ್ಲಿ ಆಡಳಿತ ನಡೆಸುತ್ತಿದ್ದ ಯಾವುದೇ ಅರಸರು ಸಂಪೂರ್ಣವಾಗಿ ಹಿಂದೂ ವಿರೋಧಿಯಾಗಿರಲು ಸಾಧ್ಯವೇ ಇರಲಿಲ್ಲ. ಯಾಕೆಂದರೆ ಬಹುಸಂಖ್ಯಾತರಾದ ಹಿಂದುಗಳ ವಿರೋಧವನ್ನು ಕಟ್ಟಿಕೊಂಡು ಅವರು ಆಡಳಿತ ನಡೆಸುವುದು ಸಾಧ್ಯವಿರಲಿಲ್ಲ. ಹೀಗಾಗಿಯೇ ಮುಸ್ಲಿಂ ಅರಸರು, ಸುಲ್ತಾನರು, ಮಾಂಡಲೀಕರು ಹಿಂದೂ ಧರ್ಮವನ್ನು ಸಂಪೂರ್ಣವಾಗಿ ನಿರಾಕರಿಸುತ್ತಿರಲಿಲ್ಲ. ಆದರೆ ತಾವು ನಂಬಿದ ಇಸ್ಲಾಂ ಧರ್ಮವನ್ನು ಪ್ರಸಾರ ಮಾಡಲು ಅವರು ಯತ್ನ ನಡೆಸುತ್ತಿದ್ದುದು ನಿಜ..ಆದರೆ ಆತ ಹಿಂದೂ ಧರ್ಮಕ್ಕೆ ಸೇರಿದ ಅರಸನಿರಲಿ, ಅಥವಾ ಇಸ್ಲಾಂ ಧರಕ್ಕೆ ಸೇರಿದ ಅರಸರಿರಲೀ ಅವರಲ್ಲಿ ಕೆಲವೊಂದು ಸಮಾನ ಗುಣಗಳಿದ್ದವು. ಅದು ಇನ್ನೊಂದು ರಾಜ್ಯದ ಮೇಲೆ ಆಕ್ರಮಣ ನಡೆಸಿದಾಗ ಅವರು ಅನುಸರಿಸುತ್ತಿದ್ದ ಯುದ್ಧದ ರಿವಾಜುಗಳಿಗೆ ಸಂಬಂಧಿಸಿದ್ದು.  ತಮ್ಮ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡವುದಕ್ಕಾಗಿ ಎಲ್ಲ ಧರ್ಮದ ಅನುಯಾಯಿಗಳಿಗೆ ಸಮಾನ ಗೌರವ ಕೊಡುತ್ತಿದ್ದ ಅವರು ಬೇರೆ ರಾಜ್ಯದ ಮೇಲೆ ಧಾಳಿ ಮಾಡಿದಾಗ ಬದಲಾಗಿ ಬಿಡುತ್ತಿದ್ದರು. ಆಗ ಸೈನ್ಯ ನಿಜವಾದ ಅರ್ಥದಲ್ಲಿ ಸೈನ್ಯವಾಗಿಯೇ ವರ್ತಿಸುತ್ತಿತ್ತು. ಇದನ್ನು ನಾನು ಸೈನ್ಯದ ಮನಸ್ಥಿತಿ ಎಂದೇ ಕರೆಯುತ್ತೇನೆ. ಈಗಲೂ ಭಾರತ ಮತ್ತು ಪಾಕಿಸ್ಥಾನದ ಸೈನಿಕರ ಚಟವಟಿಕೆಯನ್ನು ಗಮನಿಸಿದರೆ ಸೈನ್ಯದ ಈ ಮನಸ್ಥಿತಿ ನಮಗೆ ಅರ್ಥವಾಗುತ್ತದೆ. ಈ ಮನಸ್ಥಿತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ.
ಒಂದು ದೇಶವನ್ನು ಗೆದ್ದ ತಕ್ಷಣ ಗೆದ್ದ ಸಐನಿಕರು ಮೊದಲು ಮಾಡುತ್ತಿದ್ದುದು ಲೂಟಿ. ಜೊತೆಗೆ ಹಿಂದಿನ ಕಾಲದಲ್ಲಿ ಪ್ರಸಿದ್ಧ ದೇವಾಲಯಗಳಲ್ಲಿ ಸಂಪತ್ತನ್ನು ಬಚ್ಚಿಡುತ್ತಿದ್ದುದು ಸಾಮಾನ್ಯವಾಗಿತ್ತು. ಹೀಗಾಗಿ ವೈರಿ ಸೈನಿಕರು ತಾವು ಧಾಳಿ ಮಾಡಿದೆ ದೇಶದ ದೇವಾಲಾಯಗಳನ್ನು ಮೊದಲ ಟಾರ್ಗೇಟ್ ಮಾಡುತ್ತಿದ್ದರು. ಜೊತೆಗೆ ತಮ್ಮ  ಮೂಲ ರಾಜ್ಯದಲ್ಲಿ ಎಲ್ಲ ಧರ್ಮಗಳೀಗೂ ಸಮಾನವಾದ ಅವಕಾಶ ರಕ್ಷಣೆ ಕೊಡುತ್ತಿದ್ದ ಅರಸರು ತಮ್ಮ ಸಾಮ್ರ್ವಾಜ್ಯ ವಿಸ್ತರಣೆಯ ಆಸೆಯಿಂದ ಧಾಳಿ ನಡೆಸಿ ತಮ್ಮ ರಾಜ್ಯಕ್ಕೆ ಸೇರಿಸಿಕೊಂಡ ಪ್ರದೇಶಗಳಲ್ಲಿ ಮೊದಲು ಸಂಪತ್ತಿನ ಲೂಟಿ ಮಾಡುತ್ತಿದ್ದರು. ನಂತರ ಶಾಂತಿ ನೆಲಸಿದ ಮೇಲೆ ಅವರು ಎಲ್ಲರಿಗೂ ಬೇಕಾದ ರೀತಿಯ ಆಡಳಿತ ನೀಡಲು ಯತ್ನ ನಡೆಸುತ್ತಿದ್ದರು..ಈ ಹಿನ್ನೆಲೆಯಲ್ಲಿ ಟಿಪ್ಪೂ ಸುಲ್ತಾನ್ ಕೇರಳ ಮತ್ತು ಮಲಬಾರಿನಲ್ಲಿ ನಡೆಸಿದನೆನ್ನಲಾದ ದೌರ್ಜನ್ಯವನ್ನು ನೋಡಬೇಕು..
ಇನ್ನು ಮೈಸೂರು ರಾಜ್ಯವನ್ನು ಒಡೆಯರರಿಂದ ಕಸುದುಕೊಂಡ ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ತುಂಬಾ ಜಾಣ ತನದಿಂದ ಅಧಿಕಾರ ನಡೆಸಲೇ ಬೇಕಾಗಿತ್ತು. ಅವರ ಅಧಿಕಾರ ಉಳಿಯಬೇಕು ಎಂದಾದರೇ ಮೈಸೂರು ರಾಜ್ಯದಲ್ಲಿ ಶಾಂತಿ ನೆಲಸಬೇಕಾದ್ದು ಅನಿವಾರ್ಯವಾಗಿತ್ತು. ಅವರು ಹಿಂದೂ ವಿರೋಧಿಗಳಾಗಿ  ರಾಜ್ಯದಲ್ಲಿ ಶಾಂತಿ ನೆಲಸುವುದು ಸಾಧ್ಯವೇ ಇರಲಿಲ್ಲ. ಜೊತೆಗೆ ಇದು ಕಸಿದುಕೊಂಡ ರಾಜ್ಯವಾದ್ದರಿಂದ ಅವರಿಗೆ ರಾಜ್ಯದ ಜನ ಮೆಚ್ಚುವ ಹಾಗೆ ಅಧಿಕಾರ ನಡೆಸುವುದು ಅನಿವಾರ್ಯವಾಗಿತ್ತು ಇದನ್ನು ಅರಿಯದಷ್ಟು ಟಿಪ್ಪು ಸುಲ್ತಾನ್ ಮೂರ್ಖನಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀಂಗೇರಿಯ ಮೇಲೆ ಮರಾಠರು  ನಡೆಸಿದ ಧಾಳಿಯ ಘಟನೆಯನ್ನು ನೋಡೋಣ. ಮರಾಠಿಗರು ಎಂಥಹ ಹಿಂದೂ ಧರ್ಮ ಪರಿಪಾಲಕರು ಎಂದು ಹೆಸರು ಪಡೆದಿರಲಿ ಮೈಸೂರು ರಾಜ್ಯದ ಶ್ರೀಂಗೇರಿ ಅವರ ಪಾಲಿಗೆ ಪಕ್ಕದ ರಾಜ್ಯದ ಒಂದು ಕ್ಷೇತ್ರ. ಜೊತೆಗೆ ಶಂಕರಾಚಾರ್ಯರಿಂದ ಸ್ಥಾಪಿತವಾದ ಈ ಮಠ ಆಗ ಪ್ರಭಾವಶಾಲಿಯಾಗಿತ್ತು. ಅದಕ್ಕೆ ರಾಜಾಶ್ರಯ ದೊರಕುತ್ತಲೇ ಇದ್ದುದುರಿಂದ ಮಠದಲ್ಲಿ ಅಪಾರ ಸಂಪತ್ತು ಇದೆ ಎಂಬ ನಂಬಿಕೆ ಕೂಡ ಇತ್ತು. ಇದರಿಂದಾಗಿ ಮರಾಠಿಗರು ಈ ಮಠದ ಮೇಲೆ ಧಾಳಿ ನಡೆಸಿರಬಹುದು.ಅಂದರೆ ಕೆರಳದ ಮೇಲೆ ಧಾಳಿ ನಡೆಸಿದ ಟಿಪ್ಪು ಮನಸ್ಥಿತಿ ಹಾಗೂ ಶ್ರೀಂಗೇರಿ ಮೇಲೆ ಧಾಳಿ ನಡೆಸಿದ ಮರಾಠಿಗಳ ಮನಸ್ಥಿತಿ ಆ ಕಾಲ ಘಟ್ಟದ ಅರಸರ ಸಾಮಾನ್ಯ ಮನಸ್ಥಿತಿಯಾಗಿತ್ತು. ಇದಕ್ಕೆ ಇರುವುದು ಆರ್ಥಿಕ ಕಾರಣಗಳೇ ಹೊರತೂ ಧಾರ್ಮಿಕ ಕಾರಣಗಳಲ್ಲ. ಇದನ್ನು ಧಾರ್ಮಿಕ ಕಾರಣಗಳೆಂದು ವಿಶ್ಲೇಷಿಸುವುದು ಸರಿಯಲ್ಲ.
ಶ್ರಿಂಗೇರಿ ಮಠಕ್ಕೆ ಟಿಪ್ಪು ಸುಲ್ತಾನ್ ನೀಡಿದ ರಕ್ಷಣೆಯನ್ನು ನಾವು ಧಾರ್ಮಿಕ ಆಯಾಮದಲ್ಲಿ ನೋಡಬೇಕಾಗಿಲ್ಲ. ಈ ಆಧಾರವನ್ನು ಇಟ್ಟುಕೊಂಡು ಆತ ಧರ್ಮ ನಿರಪೇಕ್ಷ ರಾಜನಾಗಿದ್ದ ಎಂಬ ತೀರ್ಮಾನಕ್ಕೆ ಬರುವುದೂ ಕಷ್ಟ. ಯಾಕೆಂದರೆ ಶ್ರಿಂಗೇರಿ ಮಠ ಕೇವಲ ಬ್ರಾಹ್ಮಣರ ಮಠವಾಗಿ ಇರಲಿಲ್ಲ. ದಕ್ಷಿಣ ಕನ್ನಡದ ಒಕ್ಕಲಿಗರೂ ಸೇರಿದಂತೆ ಭಾರಿ ಸಂಖ್ಯೆಯ ಶಿಷ್ಯರು ಆ ಮಠಕ್ಕೆ ಇದ್ದರು. ಒಂದೊಮ್ಮೆ ಶ್ರಿಂಗೇರಿ ಮಠಕ್ಕೆ ಟಿಪ್ಪು ರಕ್ಷಣೆ ನೀಡದಿದ್ದರೆ ಈ ಜನ ಸಮುದಾಯದಲ್ಲಿ ಅಸಮಾಧಾನ ಮೂಡುವ ಸಾಧ್ಯತೆ ಇತ್ತು. ಹೀಗಾಗಿ ಆತ ಈ ಮಠಕ್ಕೆ ರಕ್ಷಣೆ ನೀಡಿದ. ಜೊತೆಗೆ ತಾನು ಯಶಸ್ವಿ ರಾಜನಾಗಬೇಕು ಎಂಭ ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದ ಆತ ಹಿಂದೂಗಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಷ್ಟು ಜಾಣನಾಗಿದ್ದ..
ತನ್ನ ರಾಜ್ಯದಲ್ಲಿರುವ ಹಿಂದೂಗಳಿಗೆ ಆಡಳಿತದಲ್ಲಿ ಎಲ್ಲ ರೀತಿಯ ಪಾಲುದಾರಿಕೆಯನ್ನು ಆತ ನೀಡಿದ್ದ. ಆತ ಮೈಸೂರು ರಾಜ್ಯದಲ್ಲಂತೂ ಹಿಂದೂ ಧರ್ಮವನ್ನು ಸಂರಕ್ಷಿಸಿದ್ದ. ಆದರೆ ಇದು ಆತ ಧರ್ಮನಿರಪೇಕ್ಷ ಮನೋಭಾವದಿಂದ ಮಾಡಿದನೇ ಅಥವಾ ತನ್ನ ರಾಜ್ಯದ ಹಿಂದೂಗಳಲ್ಲಿ ಅಶಾಂತಿ ಮೂಡಿದರೆ ಆಡಳಿತ ನಡೆಸುವುದು ಸಾಧ್ಯವಿಲ್ಲ ಎಂಬ ಅರಿವಿನಿಂದ ಮಾಡಿದನೋ ಹೇಳುವುದು ಕಷ್ಟ. ಕಾರಣ ಏನೇ ಇರಲಿ ಆಥ ಮೈಸೂರು ರಾಜ್ಯದಲ್ಲಿ ಹಿಂದೂ ಧರ್ಮದ ಸಂರಕ್ಷನಂತೆ ಆಡಳಿತ ನಡೆಸಿದ್ದು ಐತಿಹಾಸಿಕ ಸತ್ಯ.
ಇಪ್ಪು ಸುಲ್ತಾನ್ ಒಬ್ಬ ಮಹಾನ್ ದೇಶಪ್ರೇಮಿಯಾಗಿದ್ದ ಎಂಬ ಹೇಳಿಕೆಯನ್ನು ಈಗ ವಿಶ್ಲೇಷಿಸೋಣ. ಆಗಿನ ಟಿಪ್ಪು ಆಡಳಿತ ನಡೆಸಿದ ಕಾಲದಲ್ಲಿ ದೇಶ ಎಂದರೇನು ? ಆಗ ದೇಶ ಎಂದರೆ ಯಾವ ಯಾವ ಭೂಪ್ರದೇಶ ಸೇರಿತ್ತು ?
ಬ್ರಿಟೀಷರು ಭಾರತಕ್ಕೆ ಬರುವ ಸಮಯದಲ್ಲಿ ಈಗಿನ ದೇಶದ ಕಲ್ಪನೆ ಇರಲಿಲ್ಲ. ಆಗ ಈ ದೇಶದಲ್ಲಿ ಇದ್ದವರು ಹಲವಾರು ಅರಸರು, ಸಾಮ್ರಾಟರು ಮಾಂಡಲೀಕರು. ಉತ್ತರ ಭಾರತವನ್ನು ಆಳುತ್ತಿದ್ದವರಿಗೆ ಅವರು ಆಳುತ್ತಿದ್ದ ಪ್ರದೇಶವೇ ಅವರ ದೇಶವಾಗಿತ್ತು. ದಕ್ಷಿಣದಲ್ಲಿ ಆಳುತ್ತಿದ್ದವರಿಗೆ ಅದೇ ಅವರ ದೇಶವಾಗಿತ್ತು. ಈ ದೇಶದ ಪ್ರಬಲ ರಾಜಸತ್ತೆ ಮತ್ತು ಸಾಮ್ರಾಜ್ಯಗಳು ನಾಶವಾದ ಮೇಲೆ ಬೇರೆ ಬೇರೆ ಭಾಗಗಳಲ್ಲಿ ಬೇರೆ ಅರಸರು ಆಡಳಿತ ನಡೆಸುತ್ತಿದ್ದರು. ಅವರು ಆಡಳಿತ ನಡೆಸುತ್ತಿದ್ದ ಪ್ರದೇಶವೇ ಅವರ ದೇಶವಾಗಿತ್ತು.
ದಕ್ಷಿಣದಲ್ಲಿ ವಿಜಯ ನಗರ ಸಾಮ್ರಾಜ್ಯ ನಾಶವಾದ ಮೇಲೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಆಡಳಿತ ನಡೆಸುತ್ತ ಬಂದವರು ಮೈಸೂರು ಅರಸರು. ಇವರು ಅಂತಹ ಮಹಾನ್ ಹೋರಾಟಗಾರರೂ ಸಾಮ್ರಾಜ್ಯವನ್ನು ವಿಸ್ತರಿಸುವ ಮಹಾತ್ವಾಕಾಂಕ್ಷೆ ಉಳ್ಳವರೂ ಆಗಿರಲಿಲ್ಲ. ಅವರು ಕತ್ತಿ ಹಿಡಿದು ಹೋರಾಟ ಮಾಡಿದ್ದೂ ಕಡಿಮೆ. ಹೀಗಾಗಿ ಮೈಸೂರು ರಾಜ್ಯ ಒಂದು ಸಣ್ಣ ರಾಜ್ಯವಾಗಿತ್ತು. ಈ ರಾಜ್ಯವನ್ನು ತನ್ನದಾಗಿ ಮಾಡಿಕೊಂಡವರು ಹೈದರಾಲಿ. ಆತ ಯುದ್ಧ ಕಲೆಯ ನಿಪುಣನಾಗಿದ್ದ.  ಆತನ ಮಗ ಟಿಪ್ಪೂ ಸುಲ್ತಾನ್ ಮಹಾನ್ ಶೂರ ಮತ್ತು ಧೀರ. ಆತ ಅರಸನಾದ ಮೇಲೆ ಸಾಮ್ರಾಜ್ಯ ವಿಸ್ತರಣೆಯ ಕನಸುಕಂಡ..ಮೈಸೂರು ರಾಜ್ಯವನ್ನು ಒಂದು ಮಾಧರಿ ರಾಜ್ಯವನ್ನಾಗಿ ಮಾಡುವ ಯೋಜನೆಯನ್ನು ರೂಪಿಸಿದ. ಸ್ವಾಭಿಮಾನಿಯಾದ ಆತ ತನ್ನ ರಾಜ್ಯವನ್ನು ಬ್ರೀಟೀಷರಿಗೆ ಒಪ್ಪಿಸಲು ಸಿದ್ಧನಿರಲೇ ಇಲ್ಲ. ಇದು ಅಂದಿನ ಕಾಲದಲ್ಲಿ ಸ್ವಾಭಿಮಾನಿ ಮತ್ತು ಶೌರ್ಯವಂತ ರಾಜ ಮಾಡುವ ಕೆಲಸವೇ. ತೆಗೆದುಕೊಳ್ಳುವ ನಿಲುಮೆಯೇ..  ಈ  ನಿಲುಮೆಯನ್ನು ನಾವು ಇಂದಿನ ಅರ್ಥದಲ್ಲಿ ದೇಶಭಕ್ತಿ ಎಂದು ಕರೆಯಬೇಕೆ ಅಥವಾ ರಾಜಭಕ್ತಿ ಎಂದು ಕರೆಯಬೇಕೆ ? ಸಮಗ್ರ ಭಾರತದ ಕಲ್ಪನೆಯೇ ಇಲ್ಲದ ಕಾಲದಲ್ಲಿ ರಾಜನೊಬ್ಬ ನಡೆದುಕೊಂಡ ರೀತಿ ರಾಜ್ಯ ಪ್ರೀತಿಯೇ ಅಥವಾ ಇಂದಿನ ಅಖಂಡ ಭಾರತದೆಲ್ಲಿ ಮಾತನಾಡುವ ದೇಶಪ್ರೇಮವೆ ? ಇದು ನಾವು ನೋಡುವ ದೃಷ್ಟಿಯ ಮೇಲೆ ಅವಲಂಬಿತವಾಗಿದೆ.
ಇನ್ನು ಟಿಪ್ಪು ಸುಲ್ತಾನ ಬಹಳಷ್ಟು ಹಿಂದೂಗಳನ್ನು ಮತಾಂತರ ಮಾಡಿದ ಎಂಬ ಆರೋಪವನ್ನು ನೋಡೋಣ. ಒಂದು ಜಾತಿ ಮತ್ತು ಕೋಮಿಗೆ ಸೇರಿದ ವ್ಯಕ್ತಿಯೊಬ್ಬ ಅಧಿಕಾರದ ಗದ್ದುಗೆ ಹಿಡಿದ ತಕ್ಷಣ ಆ ಜಾತಿ ಮತ್ತು ಕೋಮಿನ ಜನರಿಗೆ ಒಂದು ರೀತಿಯ ಹುಚ್ಚು ಧೈರ್ಯ ಬರುತ್ತದೆ. ಅದು ಎಲ್ಲ ರಾಜ ಮಹಾರಾಜರ ಕಾಲದಲ್ಲಿ ನಡೆದಿದ್ದೇ. ಅದು ಕೇವಲ ಟಿಪ್ಪೂ ಸುಲ್ತಾನ್ ಕಾಲದಲ್ಲಿ ನಡೆದ ವಿದ್ಯಮಾನವಲ್ಲ. ಈ ದೇಶದಲ್ಲಿ ಹಿಂದೂಗಳು ರಾಜ್ಯಭಾರ ನಡೆಸಿದಾಗ ಹಿಂದೂ ದೇವಾಲಯಗಳ ನಿರ್ಮಾಣವಾಗಿದೆ. ಜೈನರು ಆಡಳಿತ ನಡೆಸಿದಾಗ ಜೈನ ಬಸದಿಗಳ ನಿರ್ಮಾಣವಾಗಿದೆ. ಬೌದ್ಧ ಧರ್ಮದ ರಾಜರು ಬಂದಾಗ ಬೌದ್ಧ ಧರ್ಮಕ್ಕೆ ಪ್ರೋತ್ಸಾಹ ದೊರಕಿದೆ. ಹಾಗೆ ಇಸ್ಮಾಂ ಧರ್ಮದ ಅನುಯಾಯಿಗಳು ಅಧಿಕಾರ ನಡೆಸಿದಾಗ ಇಸ್ಮಾಂ ಗೆ ಹೆಚ್ಚಿನ ಪ್ರೋತ್ಸಾಹ ದೊರಕಿದೆ. ಇದು ಟಿಪ್ಪು ಕಾಲದಲ್ಲಿ ಮಾತ್ರ ನಡೆದ ವಿಶೇಷ ವಿಧ್ಯಮಾನವಲ್ಲ. ಹೀಗಾಗಿಯೇ ಈ ದೇಶದ ದೇವಾಲಯಗಳ ಕೆಳಗೆ ಬಸದಿಯ ಕುರುಹಿಗಳು ದೊರಕುತ್ತವೆ. ಮಸೀದಿಗಳ ಕೆಳಗೆ ದೇವಾಲಯಗಳ ಕುರುಹುಗಳು ದೊರಕುತ್ತವೆ. ಬೌದ್ಧರ ಸ್ಪೂಪಗಳು ನಾಶವಾಗಿ ದೇವಾಲಯಗಳು ಕಾಣುತ್ತವೆ. ಈ ವಿಚಾರದಲ್ಲಿ ತಿರುಪತಿ ತಿಮ್ಮಪ್ಪನೇ ತೀರ್ಥಂಕರ ಎಂಬ ವಾದವೂ ಇದೇ. ಇದೆಲ್ಲ ಈ ದೇಶದ ಇತಿಹಾಸ. ಹಾಗೆ ಟಿಪ್ಪೂ ಕನ್ನಡ ವಿರೋಧಿ ಎಂಬ ಆರೋಪವನ್ನು ನೋಡಿ. ಕನ್ನಡ ಪ್ರೇಮದ ಇಂದಿನ ಮಾನದಂಡಕ್ಕೂ ಟಿಪ್ಪೂ ಕಾಲದಲ್ಲಿದ್ದ ಭಾಷಾ ಪ್ರೇಮಕ್ಕೂ ವ್ಯತ್ಯಾಸವಿದೆ, ಅಂದು ವಾಟಾಳ್ ನಾಗಾರಾಜ್, ನಾರಾಯಣ ಗೌಡರಂತಹ ಹೋರಾಟಗಾರರು ಇರಲಿಲ್ಲ. ಭಾಷಾ ಪ್ರೇಮ ಇಂದು ಸಮಾಜದಲ್ಲಿ ಯಾವ ಮಹತ್ವನ್ನು ಪಡೆದಿದೆಯೋ ಅಷ್ಟು ಮಹತ್ವವನ್ನು ಪಡೆದಿರಲಿಲ್ಲ. ಇಂಡಿಯಾದ ಹೊರಗೆ ಹಲವಾರು ದೇಶಗಳ ಜೊತೆ ವಾಣಿಜ್ಯ ಸಂಬಂಧವನ್ನು ಹೊಂದಲಿಉ ಬಯಸಿದ್ದ ಆತನಿಗೆ ಕನ್ನಡಕ್ಕೆ ಹೊರತಾಗಿದ್ದ ಭಾಷೆಯೊಂದು ಬೇಕಾಗಿತ್ತು. ಹೀಗಾಗಿ ಆತ ಪರ್ಷಿಯನ್ ಭಾಷೆಯನ್ನು ಬಳಸಿರಬಹುದು. ಜೊತೆಗೆ ಕೊಲ್ಲಿ ರಾಷ್ಟಗಳ ಜೊತೆ ಹೆಚ್ಚಿನ ವಾಣಿಜ್ಯ ಸಂಬಂಧವನ್ನು ಹೊಂದಿದ್ದೂ ಇದಕ್ಕೆ ಕಾರಣವಾಗಿರಬಹುದು. ಇದನ್ನು ಅರ್ಥ ಮಾಡಿಕೊಳ್ಳದೇ ಇಂದಿನ ಕನ್ನಡ ಹೋರಾಟಗಾರರ ಭಾಷೆ ಮತ್ತು ಕನ್ನಡ ಪ್ರೇಮದ ವ್ಯಾಖ್ಯೆಯನ್ನು ಮಾಡಿದರೆ ಅದು ಮೂರ್ಖತನವಲ್ಲವೆ ?
ಈ ವಿಚಾರದಲ್ಲೆ ಕೇವಲ ಟಿಪ್ಪೂ ಸುಲ್ತಾನನನ್ನು ಮಾತ್ರ ಪ್ರತ್ಯೇಕಿಸಿ ಆತ ಹಿಂದೂ ವಿರೋಧಿ ಎಂದು ಪ್ರತಿಬಿಂಬಿಸುವುದು ಹೀನ  ಮನಸ್ಸುಗಳು ಮಾತ್ರ. ರಾಜ ,ಮಹಾರಾಜರ ಕಾಲದಲ್ಲಿನ ವಿದ್ಯಮಾನವನ್ನು ಇಂದಿನ ಧರ್ಮ ನಿರಪೇಕ್ಷತೆಯ ಮಾನದಂಡದಲ್ಲಿ ನೋಡಲು ಪ್ರಾರಂಭಿಸಿದ ತಕ್ಷಣ ನಾವು ಇತಿಹಾಸಕ್ಕೆ ಅಪಚಾರ ಮಾಡಿದಂತಾಗುತ್ತದೆ. ನಾವು ಇವತ್ತು ಯೋಚಿಸುವ ರೀತಿಯಲ್ಲಿ ಯಾವುದೋ ಕಾಲದಲ್ಲಿದ್ದ ಐತಿಹಾಸಿಕ ವ್ಯಕ್ತಿಗಳು ಅಥವಾ ನಾವು  ನಂಬುವ ಪುರಾಣದಲ್ಲಿ ಇರುವ ಪಾತ್ರಗಳು ಇರಬೇಕಿತ್ತು ಎಂದು ವಾದಿಸುವುದು ಮೂರ್ಖತನ. ಕಾಲವನ್ನು ಮರೆತು ವ್ಯಕ್ತಿ ಅಥವಾ ವಸ್ತುವನ್ನು ವಿಶ್ಲೇಷಿಸುವುದನ್ನು ಒಪ್ಪಲಾಗದು. ರಾಮ ಅಪ್ಪನಿಲ್ಲದ ಮಗ ಎಂದು ವಾದಿಸುವುದು ಎಷ್ಟು ಮೂರ್ಖತನದ್ದೋ, ಟಿಪ್ಪು ಒಬ್ಬ ಹಿಂದೂ ವಿರೋಧಿಯಾಗಿದ್ದ ಎಂದು ವಾದಿಸುವುದು  ಅಷ್ಟೇ ಮೂರ್ಖತನ.
ಹಾಗಿದ್ದರೆ ಈವತ್ತು ಟಿಪ್ಪೂ ನಮಗೆ ಯಾಕೆ ಬೇಕು ? ಟಿಪ್ಪು ದಿನಾಚರಣೆಯನ್ನು ಯಾಕೆ ಆಚರಿಸಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಯತ್ನಿಸೋಣ.
ಹಲವು ಧರ್ಮ ನಂಬಿಕೆ, ಜಾತಿಯನ್ನು ಹೊಂದಿರುವ ಈ ದೇಶದಲ್ಲಿ ಪ್ರತ್ರಿಯೊಂದು ಜಾತಿ ಕೋಮಿಗೆ ಒಂದು ಪ್ರತಿಮೆಯ ಅಗತ್ಯ ಇದೆ. ಅದು ಅಯಾ ಜಾತಿ ಮತ್ತು ಕೋಮಿನ ಸ್ವಾಭೀಮಾನ ಮತ್ತು ಹೋರಾಟಕ್ಕೆ ಶಕ್ತಿಯನ್ನು ತುಂಬುತ್ತದೆ. ಬ್ರಾಹ್ಮಣರಿಗೆ ಶಂಕರಾಚಾರ್ಯ, ಮದ್ವಾಚಾರ್ಯ ರಾಮಾನುಜಾಚಾರ್ಯರಿದ್ದಾರೆ. ಲಿಂಗಾಯಿತರಿಗೆ ಬಸವಣ್ಣನಿದ್ದಾನೆ. ಒಕ್ಕಲಿಗರಿಗೆ ಒಕ್ಕಲಿಗರ ಮಠ ಮತ್ತು ಸ್ವಾಮೀಜಿ ಅವರನ್ನು ಪ್ರತಿನಿಧಿಸುವ ಪ್ರತಿಮೆಯಾಗಿದೆ. ಕುರುಬರು ಕನಕದಾಸರನ್ನು ತಮ್ಮ ಇತಿಹಾಸದ ಪ್ರತಿಮೆಯನ್ನಾಗಿ ಕಂಡುಕೊಳ್ಳುತ್ತಿದ್ದಾರೆ. ಕ್ರಿಶ್ಚಿಯನ್ನರಿಗೆ ಏಸು ಇದ್ದಾನೆ. ದಲಿತರಿಗೆ ತಮ್ಮ ಇತಿಹಾಸವನ್ನು ಪ್ರತಿನಿಧಿಸುವ ಸ್ವಾಭಿಮಾನವನ್ನು ಹೆಚ್ಚುಸುವ ತಮಗೂ ಇತಿಹಾಸವಿದೆ ಎಂದು ಹೇಳುವ ಇಂತಹ ಪ್ರತಿಮೆ ಇಲ್ಲ. ಹೀಗಾಗಿ ದಲಿತರು ಎದೆ ಉಬ್ಬಿಸಿ ನಿಲ್ಲುವುದಕ್ಕೆ ಸಾಧ್ಯವಾಗಿಯೇ ಇಲ್ಲ. ಈ ದೇಶದ ಮುಸ್ಲೀಂರಿಗೆ ಇಂತಹ ಪ್ರತಿಮೆ ಒಂದರ ಅಗತ್ಯ ಇದೆ.. ಆ ಪ್ರತಿಮೆಯನ್ನು ಅವರು ಟಿಪ್ಪುವಿನಲ್ಲಿ ಕಂಡುಕೊಳ್ಳುತ್ತಿದ್ದಾರೆ. ಮುಸ್ಲೀಂ ಇತಿಹಾಸದ ಹೆಜ್ಜೆಗುರುತುಗಳನ್ನು ನೆನಪಿಸುವ ಅವರ ಸ್ವಾಭಿಮಾನ ಮತ್ತು ದೇಶಪ್ರೇಮವನ್ನು ಎಚ್ಚೆರಿಸುವ ಸಂಕೇತ ಮತ್ತು ಪ್ರತಿಮೆಯಾಗಿ ಟಿಪ್ಪೂ ಸುಲ್ತಾನ ಕಂಡರೆ ಅದನ್ನು ಸ್ವಾಗತಿಸಬೇಕಾದ್ದು ಈ ದೇಶದ ಎಲ್ಲರ ಕರ್ತವ್ಯ. ಇದನ್ನು ಬಿಟ್ಟು ಟಿಪ್ಪು ಹಾಗಿದ್ದ ಹೀಗಿದ್ದ ಎಂದು ವಾದ ಮಾಡುತ್ತ ಕರ್ನಾಟಕದ ಮುಸ್ಲೀಂ ಸಮುದಾಯವನ್ನು ಹೀಗಳಿಯುವುದು ಸರಿಯಾದುದಲ್ಲ. ಇತಿಹಾಸದಲ್ಲಿ ಆತ ಹೇಗಿದ್ದ ಎನ್ನುವುದಕ್ಕಿಂತ ಈಗ ಎಲ್ಲರ ಮನಸ್ಸಿನಲ್ಲಿ ಟಿಪ್ಪು ಹೇಗಿದ್ದಾನೆ ಎಂಬುದು ಮುಖ್ಯ. ಅದನ್ನು ಗೌರಿಸುವುದು ಅಷ್ಟೇ ಮುಖ್ಯ.
ಈಗ ಮತ್ತೆ ನಾನು ಪ್ರಾರಂಭದಲ್ಲಿ ಎತ್ತಿದ ಪ್ರಶ್ನೆಗೆ ಬರುತ್ತೇನೆ.  ಅದು ಆರಾಧನೆ ಮತ್ತು ವಿರೋಧಿಸುವುದಕ್ಕೆ ಸಂಬಂಧಿಸಿದ್ದು. ಡಾ. ಗಿರೀಶ್ ಕಾರ್ನಾಡ್ ಅವರು ಬೆಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಗೆ ಬದಲಾಗಿ ಟಿಪ್ಪೂವಿನ ಹೆಸರಿ ಇಡಬೇಕಿತ್ತು ಎಂದು ಹೇಳಿದ್ದು. ಇದೂ ಸಹ ಆರಾಧನೆಯ ಮನಸ್ಥಿತಿಯಿಂದ ಬಂದಿದ್ದೇ ಹೊರತೂ ವಸ್ತು ಸ್ಥಿತಿಯ ಅರವಿನಿಂದ ಬಂದಿದ್ದಲ್ಲ. ಈ ಹಿಂದೆ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರು ಇಡಬೇಕೆ ಅಥವಾ ಅಂಬೇಡ್ಕರ್ ಹೆಸರನ್ನು ಇಡಬೇಕೇ ಎಂಬುದು ದೊಡ್ಡ ವಿವಾದವಾಗಿತ್ತು. ಬಸವ ಮತ್ತು ಅಂಬೇಡ್ಕರ್ ಅನುಯಾಯಿಗಳ ನಡುವೆ ದೊಡ್ಡ ಕಂದಕವನ್ನೇ ಇದು ನಿರ್ಮಿಸಿತ್ತು. ಅಂಬೇಡ್ಕರ್ ಮತ್ತು ಬಸವಣ್ಣ ಇಬ್ಬರೂ ಮಾನವತಾವಾದಿಗಳಾಗಿದ್ದರೂ ಅವರ ಅನುಯಾಯಿಗಳು ಮಾನವತಾವಾದಿಗಳಾಗದೇ ಬಸವ ಮತ್ತು ಅಂಬೇಡ್ಕರ್ ಬೇರೆ ಬೇರೆ ಎಂದು ಪ್ರತಿಪಾದಿಸಿದ್ದರು.
ಈಗ ಡಾ. ಕಾರ್ನಾಡ್ ಕೂಡ ಟಿಪ್ಪು ಅಭಿಮಾನಿಗಳು ಮತ್ತು ಕೇಂಪೇಗೌಡರ ಅಭಿಮಾನಿಗಳು ಜಗಳವಾಡುವ ಸ್ಥಿತಿಯನ್ನು ನಿರ್ಮಿಸಿದ್ದಾರೆ. ಬಿಜೆಪಿ ಈ ಬೆಂಕಿಗೆ ಈಗಾಗಲೇ ತುಪ್ಪ ಸುರಿಯುವ ಕೆಲಸ ಮಾಡಿದೆ. ಬಿಜೆಪಿ ನಾಯಕ ಹೋರಾಟದ ಮಾತನ್ನು ಆಡೀಯೂ ಆಗಿದೆ.
ಆರಾಧಿಸುವ ಜನ ವಿವೇಕವನ್ನು ಕಳೆದುಕೊಳ್ಳುತ್ತಾರೆ. ಅವರು ಕಳ್ಳಸ್ವಾಮಿಗಳನ್ನು ಆರಾಧಿಸುವವರು ಆದರೂ ಒಂದೇ ಜನಪರ ರಾಜರನ್ನು ಆರಾಧಿಸುವವರಾದರೂ ಒಂದೇ. ಅದಕ್ಕೆ ನಾನು ಹೇಳಿದ್ದು. ನಾವು ಆರಾಧಿಸುವುದೂ ಬೇಡ ವಿರೋಧಿಸುವುದೂ ಬೇಡ. ನಾವು ಅರ್ಥಮಾಡಿಕೊಳ್ಳಲು ಯತ್ನಿಸೋಣ.



 

1 comment:

Unknown said...

ಅತ್ಯಂತ ಸಮಚಿತ್ತದ ವಿಶ್ಲೇಷಣೆ

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...