Wednesday, August 17, 2016

ಪಾಕಿಸ್ಥಾನವೆಂಬ ವಿಫಲ ಪ್ರಭುತ್ವ ಮತ್ತು ನಾವು ಕಲಿಯಬೇಕಾದ ಪಾಠ; ಭಾರತ ಮಾತೆ ಗೋಡೆಯ ಕ್ಯಾಲೆಂಡರ್ ಆಗದಿರಲಿ...

ವಿಭಜನೆಯ ನೋವು 
೧೯೪೭ರ ಸ್ವಾತಂತ್ರ್ಯ ಭಾರತದ ಉಪಖಂಡದಲ್ಲಿ ಹೊಸ ರಾಜಕೀಯ ಶಕೆಗೆ ನಾಂದಿ ಹಾಡಿತ್ತು. ಒಂದೇ ಸಂಸ್ಕೃತಿ ಮತ್ತು ಪರಂಪರೆಯ ಜನ ಎರಡು ದೇಶವಾಗಿ ಭಾಗವಾಗಿದ್ದರು. ವಿಭಜನೆ ರಕ್ತ ಚೆಲ್ಲಾಡುವಂತೆ ಮಾಡಿತು. ಎಲ್ಲೆಡೆ ಸಾವು ನೋವು.. ಪಾಕಿಸ್ಥಾನದ ಭಾಗದಲ್ಲಿರುವ ಹಿಂದೂಗಳು ಭಾರತಕ್ಕೆ ಬಂದರು, ಉತ್ತರ ಭಾರತದ ಮುಸ್ಲಿಂ ಕುಟುಂಬಗಳು ಪಾಕಿಸ್ಥಾನಕ್ಕೆ ವಲಸೆ ಹೋದವು. ಆದರೆ ಈ ವಿಭಜನೆ ಎರಡೂ ದೇಶಗಳಗಳ ಜನರಿಗೆ ಶಾಂತಿಯನ್ನು ತಂದುಕೊಡಲಿಲ್ಲ. ಇದರೊಂದಿಗೆ ವಿಭಜನೆಯ ಮೂಲ ಉದ್ದೇಶ ಈಡೇರಲಿಲ್ಲ. ಬದಲಾಗಿ ಭಯೋತ್ಪಾದನೆ, ಯುದ್ಧೋನ್ಮಾದ ಹೆಚ್ಚಿತು. ಅಪನಂಬಿಕೆಯ ಹೊಸ ಪರ್ವ ಪ್ರಾರಂಭವಾಯಿತು.
ಶಾಂತಿಯ ಪ್ರತಿಪಾದಕ ಮಹಾತ್ಮಾ ಗಾಂಧಿ ಹಿಂಸೆಗೆ ಬಲಿಯಾದರು. ತನ್ನೊಳಗೆ ಹಿಂಸೆಯನ್ನು ತುಂಬಿಕೊಂಡಿದ್ದ ಜಿನ್ನಾ ಶಾಂತವಾಗಿ ಅಸು ನೀಗಿದರು. ಆದರೆ ಈ ಭೂಕಂಡದ ಜನರಿಗೆ ಮಾತ್ರ ಶಾಂತಿ ದಕ್ಕಲೇ ಇಲ್ಲ.
ಪಾಕಿಸ್ಥಾನದ ಪಿತಾಮಹ ಜಿನ್ನಾ ಹಿಂದೂ ಮತ್ತು ಮುಸ್ಲೀಂ ರು ಪ್ರತ್ಯೇಕ ದೇಶವಾಗಿ ಬದುಕುವುದೊಂದೇ ಪರಿಹಾರ ಎಂದು ನಂಬಿದ್ದರು. ಹಿಂದೂ ಮತ್ತು ಮುಸ್ಲಿಂ ರು ಪ್ರತ್ಯೇಕ ದೇಶವಾದರೆ ಮುಸ್ಲಿಂ ರಿಗೆ ಶಾಂತಿ ಮತ್ತು ಅಭಿವೃದ್ಧಿ ದಕ್ಕುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಆದರೆ ಜಿನ್ನಾ ನಂಬಿಕೆ ಹುಸಿಯಾಯಿತು. ಯಾಕೆಂದರೆ ಅವರ ನಂಬಿಕೆಯ ಹಿಂದೆ ಮನುಷ್ಯರನ್ನು ಬೇರ್ಪಡಿಸುವ ಹುನ್ನಾರವಿತ್ತು. ಅವರ ಮನಸ್ಸಿನಲ್ಲಿ ಹಿಂಸೆ ಇತ್ತು.
ಗಾಂಧಿ ಮತ್ತು ಜಿನ್ನಾ
 ಗಾಂಧಿ ಅವರ ನಂಬಿಕೆ ಇದಕ್ಕೆ ವಿರುದ್ಧವಾಗಿತ್ತು. ಗಾಂಧಿ ಹಿಂದೂ ಮತ್ತು ಮುಸ್ಲೀಮರ ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟಿದ್ದರು. ಆದರೆ ಶಾಂತಿ ಮತ್ತು ಸಹಬಾಳ್ವೆಯ ಪ್ರತಿಪಾದಕರಾಗಿದ್ದ ಗಾಂಧಿ ಸೋಲಬೇಕಾಯಿತು. ಆದರೆ ಗಾಂಧಿ ನಂಬಿದ್ದ ಸಹೋದರತ್ವಸ ಮತ್ತು ಸಹಬಾಳ್ವೆ ಇಂದು ಹೆಚ್ಚು ಪ್ರಸ್ತುತ ಎಂದು ಅನ್ನಿಸುತ್ತದೆ. ಹಿಂಸೆಯಲ್ಲಿ ಅಸು ನೀಗಿದ ಗಾಂಧಿ ಬಿಟ್ಟು ಹೋದ ಶಾಂತಿಯ ಬದುಕಿನ ಕನಸು ಇಂದಿನ ಅಗತ್ಯ ಕೂಡ ಆಗಿದೆ.
ಏನೇ ಇರಲಿ ಜಿನ್ನಾ ಮುಸ್ಲೀಮರಿಗಾಗಿ ಹೊಸ ದೇಶವನ್ನು ಹುಟ್ಟು ಹಾಕುವುದರಲ್ಲಿ ಯಶಸ್ವಿಯಾದರು.  ಆದರೆ ಧರ್ಮ ಆಧಾರಿತವಾದ ರಾಜಕೀಯ ಪ್ರಭುತ್ವ ಯಶಸ್ವಿಯಾಗಲಾರದು ಎಂಬ ಸತ್ಯ ಈಗ ಮತ್ತಷ್ಟು ಗಟ್ಟಿಯಾಗಿದೆ, ಜಿನ್ನಾ ಸೋತಿದ್ದೆಲ್ಲಿ ಎಂಬುದು ಈಗ ಗೊತ್ತಾಗುತ್ತಲಿದೆ.
ಈ ಎರಡೂ ದೇಶಗಳು ದೇಶ ವಿಭಜನೆಯ ನಂತರ ಎದುರಿಸಿದ ಸಮಸ್ಯೆ ಸಾಮಾನ್ಯ ಸಮಸ್ಯೆ ಆಗಿರಲಿಲ್ಲ. ಬ್ರಿಟೀಷ್ ಇಂಡಿಯಾದಲ್ಲಿದ್ದ ಹಲವಾರು ರಾಜ್ಯಗಳಿಗೆ ಸ್ವಯಂ ನಿರ್ಣಯದ ಹಕ್ಕನ್ನು ಬ್ರಿಟೀಷರು ನೀಡಿದ್ದರು. ಈ ರಾಜ್ಯಗಳಿಗೆ ಭಾರತ ಅಥವಾ ಪಾಕಿಸ್ಥಾನದ ಜೊತೆ ಸೇರುವ ಅಧಿಕಾರವನ್ನು ನೀಡಲಾಗಿತ್ತು. ಈ ಸ್ಥಿತಿಯಲ್ಲಿ ಭಾರತ ಎದುರಿಸಿದ ಮೊದಲ ಸಮಸ್ಯೆ ಹೈದರಾಬಾದಿನ ನಿಜಾಮರಿಂದ ಬಂದಿತ್ತು. ಹೈದರಾಬಾದ್ ನಿಜಾಮರು ತಮ್ಮ ರಾಜ್ಯವನ್ನು ಭಾರತಕ್ಕೆ ಸೇರಿಸಲು ಸಿದ್ದರಿರಲಿಲ್ಲ. ಆಗ ಗೃಹ ಸಚಿವರಾಗಿದ್ದ ವಲ್ಲಭ ಬಾಯಿ ಪಟೇಲರು ಸೈನ್ಯ ಕಾರ್ಯಾಚಾರಣೆ ನಡೆಸಬೇಕಾಯಿತು. ಸೈನ್ಯ ಬಲದ ಮೂಲಕ ಹೈದರಾಬಾದ್ ಅನ್ನು ಭಾರತಕ್ಕೆ ಸೇರಿಸಲಾಯಿತು.
ಆದರೆ ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಮಾತ್ರ ಭಿನ್ನವಾಗಿತ್ತು. ಈ ರಾಜ್ಯದ ಜನ ಪಾಕಿಸ್ಥಾನವನ್ನು ಸೇರಬೇಕೋ ಅಥವಾ ಭಾರತವನ್ನು ಸೇರಬೇಕೋ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರೀಸಿಂಗ್ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿರಲಿಲ್ಲ. ಆದರೆ ಅಷ್ಟರಲ್ಲಿ ಬುಡಕಟ್ಟು ಜನಾಂಗದ ಹೆಸರಿನಲ್ಲಿ ಪಾಕಿಸ್ಥಾನದ ಸೈನ್ಯ ಜಮ್ಮು ಮತ್ತು ಕಾಶ್ಮೀರ ಪ್ರವೇಶ ಮಾಡಿತ್ತು. ಈ ಬಗ್ಗೆ ಭಾರತ ತಲೆ ಕೆಡಿಸಿಕೊಳ್ಳುವುದಕ್ಕಿಂತ ಹೆಚ್ಚಿನ ತಲೆ ಕೆಡಿಸಿಕೊಂಡವರು ಮಹಾರಜ ಹರೀಸಿಂಗ್. ತಮ್ಮ ರಾಜ್ಯವನ್ನು ಅವರು ಉಳಿಸಿಕೊಳ್ಳಲು ಭಾರತದ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಪ್ರಕಾರ ಭಾರತದ ಸೈನ್ಯ ಜಮ್ಮು ಮತ್ತು ಕಾಶ್ಮೀರದ ರಕ್ಷಣೆಗೆ ಮುಂದಾಯಿತು. ಈ ರಾಜ್ಯದ ಒಂದು ಭಾಗ ಭಾರತದಲ್ಲಿ ಸೇರ್ಪಡೆಯಾಯಿತು. ಇನ್ನೊಂದು ಭಾಗ ಪಾಕಿಸ್ಥಾನಕ್ಕೆ ಸೇರಿಕೊಂಡಿತು. ಈ ಹಂತದಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ವಿಚಾರವನ್ನು ವಿಶ್ವ ಸಂಸ್ಥೆಗೆ ಒಯ್ದರು. ವಿಶ್ವ ಸಂಸ್ಥೆ ಈ ವಿವಾದದ ಬಗ್ಗೆ ಮೂರು ಪ್ರಮುಖ ನಿರ್ಣಯವನ್ನು ಕೈಗೊಂಡಿತು.
ಪಾಕಿಸ್ಥಾನ ಕಾಶ್ಮೀರದಿಂದ ತನ್ನ ಸೈನ್ಯವನ್ನು ಹಿಂದಕ್ಕೆ ಪಡೆಯಬೇಕು. ನಂತರ ಅಲ್ಲಿ  ಜನಮತ ಗಣನೆ ನಡೆಯಬೇಕು ಎಂಬುದು ವಿಶ್ವ ಸಂಸ್ಥೆಯ ಪ್ರಮುಖ ನಿರ್ಣಯವಾಗಿತ್ತು. ಆದರೆ ಪಾಕಿಸ್ಥಾನ ವಿಶ್ವ ಸಂಸ್ಥೆಯ ನಿರ್ಣಯದ ಮೊದಲ ಅಂಶವನ್ನೇ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ತನ್ನ ಸೈನ್ಯವನ್ನು ವಾಪಸು ಪಡೆಯಲೇ ಇಲ್ಲ. ಹಾಗೆ ಕಾಶ್ಮೀರದ ಜನ ಏನನ್ನೂ ಬಯಸುತ್ತಾರೆ ಎಂಬುದು ನೇಪಥ್ಯಕ್ಕೆ ಸರಿದು, ಈ ಭಾಗಕ್ಕಾಗಿ ಭಾರತ ಮತ್ತು ಪಾಕಿಸ್ಥಾನ ಯುದ್ಧ ನಡೆಸುವ ಸ್ಥಿತಿ ನಿರ್ಮಾಣವಾಯಿತು.
ಹಲವು ಧರ್ಮ ಸಂಸ್ಕೃತಿ ಪರಂಪರೆಗಳ ಭಾರತದ ವಿಭಜನೆಯ ನಂತರ ವಿಚಿತ್ರ ಸಂಕಟಕ್ಕೆ ಒಳಗಾಯಿತು. ಭಾರತಕ್ಕಿಂತ ಪಾಕಿಸ್ಥಾನದ ಸಮಸ್ಯೆ ಸಾವಿರ ಪಟ್ಟು ಹೆಚ್ಚಿತ್ತು. ಪಾಕಿಸ್ಥಾನ ಜಮ್ಮು ಮತ್ತು ಕಾಶ್ಮೀರದ ಮೇಲೆ ಧಾಳಿ ನಡೆಸಿ ಭೂ ಭಾಗವನ್ನು ಕಬಳಿಸಿದ ಮೇಲೆ ಅದರ ಕಣ್ಣು ಬಿದ್ದುದು ಬಲೂಚಿಸ್ಥಾನದ ಮೇಲೆ ಅಲ್ಲಿಯೂ ಸೈನ್ಯ ಕಳಿಸಿ, ೧೯೪೮ ರಲ್ಲಿ ಆ ಪ್ರದೇಶವನ್ನು ಪಾಕಿಸ್ಥಾನಕ್ಕೆ ಸೇರಿಸಿಕೊಂಡಿತು. ಬಲೂಚಿಗಳಿಗೆ ಪಾಕಿಸ್ಥಾನಕ್ಕೆ ಸೇರಿಸುವುದಕ್ಕೆ ಇಷ್ಟ ಇರಲಿಲ್ಲ.  ಪಾಕಿಸ್ಥಾನ ಎಂಬ ಈ ದೇಶ ಒಂದು ಒಕ್ಕೂಟದಂತೆ ಇರಬೇಕಾದ ಪ್ರದೇಶ. ಯಾಕೆಂದರೆ ಅಲ್ಲಿ ಒಂದು ಭಾಷೆ ಮತ್ತು ಸಂಸ್ಕೃತಿ ಇರಲಿಲ್ಲ. ಬಲೂಚಿಸ್ಥಾನ, ಸಿಂದ್, ಪಂಜಾಬ್, ಬಂಗಾಲ, ಪಶ್ತೂನ್, ಹೀಗೆ ಸಂಪೂರ್ಣವಾದ ಭಿನ್ನ ಸಂಸ್ಕೃತಿ ಮತ್ತು ಪರಂಪರೆಯ ಜನ ಪಾಕಿಸ್ಥಾನ ಎಂಬ ದೇಶದ ಒಳಗೆ ಬಂದಿದ್ದರು. ಇವರೆಲ್ಲ ಏಕ ಸಂಸ್ಕೃತಿ ಮತ್ತು ಪರಂಪರೆಗೆ ಒಳ ಪಟ್ಟವರಾಗಿರಲಿಲ್ಲ. ಆದರೆ ಪಾಕಿಸ್ಥಾನದ ದೇಶ ಭಕ್ತರು ಈ ವಿಭಿನ್ನತೆಯನ್ನು ಒಪ್ಪಿಕೊಳ್ಳಲೇ ಇಲ್ಲ. ಅವರು ಇಸ್ಲಾಂ ಎಂಬ ಧರ್ಮದ ಅಡಿಯಲ್ಲಿ ದೇಶ ಒಂದಾಗಿರುತ್ತದೆ ಎಂಬ ಭ್ರಮೆಗೆ ಒಳಗಾಗಿದ್ದರು. ವಿಭಿನ್ನ ಸಂಸ್ಕೃತಿ ಮತ್ತು ಭಾಷೆಯ ಜನ ಕೇವಲ ಧರ್ಮದ ಕಾರಣದಿಂದ ಒಂದಾಗುವುದಿಲ್ಲ ಎಂಬುದು ಪಾಕಿಸ್ಥಾನದ ದೇಶ ಭಕ್ತರಿಗೆ ಅರ್ಥವಾಗಲೇ ಇಲ್ಲ.  ಈ ನಡುವೆ ಕರಾಚಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದ ಉತ್ತರ ಭಾರತದಿಂದ ವಲಸೆ ಹೋದ ಮುಸ್ಲೀಮ್ ರಿಗೆ ಅಲ್ಲ ಸಮಾನ ಅಧಿಕಾರ ದೊರಕಲೇ ಇಲ್ಲ. ಅವರು ಎರಡನೆ ದರ್ಜೆಯ ಪ್ರಜೆಗಳಾಗಿ ಮೊಹಜರ್ ಗಳು ಎನ್ನಿಸಿಕೊಳ್ಳಬೇಕಾಯಿತು. ಆದರೆ ಹೊಸ ದಾಗಿ ಹುಟ್ಟಿದ ಈ ಮುಸ್ಲಿಂ ರಾಷ್ಟದ ನಾಯಕರು ಕೇವಲ ಧರ್ಮವನ್ನು ಮಾತ್ರ ಇಟ್ಟುಕೊಂಡು ದೇಶವನ್ನು ಕಟ್ಟಲು ಹೊರಟಿದ್ದರು..ಅವರಿಗೆ ಸಂಸ್ಕೃತಿ ಭಾಷೆ ಮತ್ತು ಪರಂಪರೆಯ ಮಹತ್ವ ತಿಳಿಯಲೇ ಇಲ್ಲ.
ವಿಭಜನೆ; ಬದುಕು ಹುಡುಕಿಕೊಂಡು ಹೊರಟವರು...
ಈ ನೀತಿಯಿಂದಾಗಿ ಬಲೂಚಿಸ್ಥಾನದಲ್ಲಿ ೧೯೪೮ ರಲ್ಲೇ ಪಾಕಿಸ್ಥಾನಿ ವಿರೋಧಿ ಚಳವಳಿ ಪ್ರಾರಂಭವಾಯಿತು. ಈ ಚಳವಳಿಯನ್ನು ಹತ್ತಿಕ್ಕಲು ಪಾಕಿಸ್ಥಾನ ಬೇರೆ ಬೇರೆ ಮಾರ್ಗವನ್ನು ಬಳಸತೊಡಗಿತು. ಈ ಪ್ರದೇಶದವನ್ನು ಸೈನ್ಯದ ಆಡಳಿತಕ್ಕೆ ಒಳಪಡಿಸಲಾಯಿತು. ಬಲೂಚಿ ಹೋರಾಟಗಾರರನ್ನು ಬಂಧಿಸಿ ಹತ್ಯೆ ಮಾಡಲಾಯಿತು. ಮನೆ ಮನೆಗಳಿಗೆ ನುಗ್ಗಿ ಹೆಂಗಸರು ಮತ್ತು ಮಕ್ಕಳನ್ನು ಎಳೆ ತಂದು ಜೈಲಿಗೆ ದಬ್ಬಲಾಯಿತು. ಅಲ್ಲಿ ಹತ್ಯೆ ದಿನ ನಿತ್ಯದ ವ್ಯವಹಾರ ಎನ್ನುವಂತಾಯಿತು. ಹಲವಾರು ಬಲೂಚಿ ನಾಯಕರು ದೇಶ ತೊರೆದು ಹೊರಟು ಹೋದರು. ವಿದೇಶಿ ನೆಲದಲ್ಲಿ ನೆಲೆ ನಿಂತು ಅಲ್ಲಿಂದಲೇ ತಮ್ಮ ಹೋರಾಟವನ್ನು ಮುಂದುವರಿಸಿದರು.. ಇದರಿಂದಾಗಿ ಬಲೂಚಿ ಲಿಬರೇಶನ್ ಫ್ರಂಟ್ ನಂತಹ ಉಗ್ರಗಾಮಿ ಸಂಘಟನೆಗಳು ಹುಟ್ಟಿಕೊಂಡವು. ರಕ್ತದ ಹೊಳೆ ಹರಿಯತೊಡಗಿತು..
ಇತ್ತ ಬಂಗಾಲದಲ್ಲಿ ನಡೆದಿದ್ದು ಎಲ್ಲರಿಗೂ ಗೊತ್ತಲ್ಲ ? ಬಂಗಾಲಿ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳದ ಪಾಕಿಸ್ಥಾನ ಬಂಗಾಲಿ ಭಾಷೆಯನ್ನು ಹತ್ತಿಕ್ಕಿತು. ಬಲವಂತವಾಗಿ ಉರ್ದು ಭಾಷೆಯನ್ನು ಅಲ್ಲಿ ಹೇರಲಾಯಿತು. ಶೇಖ್ ಮುಜಬೀರ್ ರೆಹಮಾನ್ ನೇತೃತ್ವದಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ಪ್ರಾರಂಭವಾದಾಗ ಇದನ್ನು ಕಡೆಗಣಿಸಿದ ಪಾಕಿಸ್ಥಾನ ಮುಸ್ಲಿಂ ಧರ್ಮ ದೇಶದ ಏಕತೆಯನ್ನು ಕಾಪಾಡುತ್ತದೆ ಎಂದು ನಂಬಿಕೊಂಡಿತ್ತು. ಕೊನೆಗೆ ಬಂಗಾಲ ಪ್ರದೇಶ ಬಾಂಗ್ಲಾ ದೇಶವಾಗಿದ್ದು ಇತಿಹಾಸ.
ಈ ತಪ್ಪಿನ ನಂತರವೂ ಪಾಕಿಸ್ಥಾನ ಪಾಠ ಕಲಿಯಲಿಲ್ಲ. ಉರ್ದು ಮಾತನಾಡುವ ಪಾಕಿಸ್ಥಾನಿಯರೇ ಅಲ್ಲಿ ಸಾರ್ವಭೌಮರಾದರು. ಉಳಿದ ಜನ ಸಂಸ್ಕೃತಿಯನ್ನು ಸೈನ್ಯ ಬಲದ ಮೂಲಕ ಹತ್ತಿಕ್ಕಲಾಯಿತು. ಪಂಜಾಬಿ ಭಾಷೆ ಮರೆಯಾಗತೊಡಗಿತು. ವಿಭಜನೆಯ ಸಂದರ್ಭದಲ್ಲಿ ಪ್ರತಿ ಶತ ೧೪ ರಷ್ಟಿದ್ದ ಹಿಂದೂಗಳ ಸಂಖ್ಯೆ ಪ್ರತಿ ಶತ ೨ ಕ್ಕೆ ಇಳಿಯಿತು. ಸಿಂದ್ ನಲ್ಲಿದ್ದ ಉರ್ದು ಏತರ ಪತ್ರಿಕೆಗಳು ಬಾಗಿಲು ಮುಚ್ಚಿದವು. ಇತಿಹಾಸವನ್ನು ತನಗೆ ಬೇಕಾದಂತೆ ತಿರುಚಿದ ಪಾಕಿಸ್ಥಾನ ಸುಳ್ಳನ್ನೇ ಸತ್ಯ ಎಂದು ವಿದ್ಯಾರ್ಥಿಗಳಿಗೆ ಕಲಿಸತೊಡಗಿತು. ಇಡೀ ದೇಶ ಧರ್ಮ ಮತ್ತು ಸುಳ್ಳಿನ ಮೇಲೆ ನಿಂತು ಬಿಟ್ಟಿತು. ಧರ್ಮ ಪಾಕಿಸ್ಥಾನಿಯರನ್ನು ಒಂದು ಮಾಡುವುದಕ್ಕೆ ಬದಲಾಗಿ ಒಡೆಯತೊಡಗಿತು. ಸುನ್ನಿ ಮುಸ್ಲಿಂ ರ ಪ್ರಾಭಲ್ಯ ಇರುವ ಪಾಕಿಸ್ಥಾನದಲ್ಲಿ ಅಹಮದೀಯರು ಮತ್ತು ಶಿಯಾ ಮುಸ್ಲಿಂ ರ ಅತಂತ್ರರಾದರು.
ಈಗ ಪಾಕಿಸ್ಥಾನ ಪೇಲ್ಡ್ ಸ್ಟೇಟ್. ಇದನ್ನು ಕನ್ನಡದಲ್ಲಿ ಸೋತ ಪ್ರಭುತ್ವ ಎಂದು ಹೇಳಬಹುದೇನೋ. ಪಾಕಿಸ್ಥಾನ ಈ ರೀತಿ ಅವನತಿಯ ಹಂತಕ್ಕೆ ಬಂದು ನಿಂತಿರುವುದಕ್ಕೆ ಏಕ ಸಂಸ್ಕೃತಿ ಮತ್ತು ಧರ್ಮ ಸ್ಥಾಪನೆಗೆ ನಡೆಸಿದ ನಡೆಸುತ್ತಿರುವ ಯತ್ನವೇ ಕಾರಣವಾಗಿದೆ.
ಇದನ್ನೆಲ್ಲ ನೋಡಿದ ಮೇಲೆ ನನಗೆ ಭಾರತದ ಬಗ್ಗೆ ಆತಂಕ ಪ್ರಾರಂಭವಾಗಿದೆ. ಪಾಕಿಸ್ಥಾನದಲ್ಲಿ ಪ್ರಯೋಗ ಮಾಡಿ ಆ ದೇಶವನ್ನು ನಾಶಪಡಿಸಿದ ಸಾಮಾಜಿಕ ಮತ್ತು ರಾಜಕೀಯ ಬದುಕಿನ ಏಕಮುಖಿ ಸಂಸ್ಕೃತಿಯ ತಾತ್ವಿಕತೆಯನ್ನು ನಮ್ಮಲ್ಲಿಯೂ ಅನುಷ್ಠಾನಕ್ಕೆ ತರಲು ಸಂಘ ಪರಿವಾರ ಯತ್ನ ನಡೆಸುತ್ತಿದೆ. ನಾವೆಲ್ಲ ಹಿಂದೂ ಎಂದು ಹೇಳುವ ಮೂಲಕ ಹಿಂದೂ ಅಲ್ಲದವರು ನಮ್ಮವರಲ್ಲ ಎಂದು ಪ್ರತಿಪಾದಿಸಲಾಗುತ್ತಿದೆ. ಹಾಗೆ ಇಂಡಿಯಾದ ಬಹುಮುಖಿ ಸಂಸ್ಕೃತಿಯನ್ನು ನಾಶಪಡಿಸಲಾಗುತ್ತಿದೆ. ಸಂಘ ಪರಿವಾರದವರ ಆಹಾರ ಪದ್ಧತಿ ಮಾತ್ರ ಈ ದೇಶದಲ್ಲಿ ಇರಬೇಕು ಎಂದು ಒತ್ತಡ ಹೇರಲಾಗುತ್ತಿದೆ. ಆಹಾರ, ನಂಬಿಕೆ,, ನಡವಳಿಕೆ ಎಲ್ಲದರಲ್ಲಿಯೂ ಏಕರೂಪತೆ ತರಲು ಹೊರಟವರು ಪಾಕಿಸ್ಥಾನವನ್ನು ನಾಶಪಡಿಸಿದವರಿಗಿಂತ ಭಿನ್ನವಾಗಿ ನನಗೆ ಕಾಣುವುದಿಲ್ಲ.

ಈಗ ನಮ್ಮ ದೇಶವನ್ನು ಉಳಿಸಿಕೊಳ್ಳುವ ತುರ್ತು ನಮ್ಮ ಮುಂದಿದೆ. ಹೀಗೆ ಹೇಳುವಾಗ ದೇಶ ಎಂದರೇನು ಎಂಬ ಬಗ್ಗೆ ನಮಗೆ ಸ್ಪಷ್ಟತೆ ಬೇಕು. ದೇಶ ಎಂದರೆ ಅದು ಕೇವಲ ಭೂ ಭಾಗವಲ್ಲ.  ದೇಶ ಎಂದರೆ ಭೂ ಭಾಗದದ ಜೊತೆಗೆ ಅಲ್ಲಿನ ಜನ, ಅವರ ಸಂಸ್ಕೃತಿ ನಂಬಿಕೆ, ಪರಂಪರೆ ಎಲ್ಲವೂ ಆಗಿದೆ. ಇದೆಲ್ಲವೂ ಸೇರಿ ಅಗಿರುವ ಒಟ್ಟೂ ಮೊತ್ತವೇ ದೇಶ.  ಇಲ್ಲಿನ ವಿಭಿನ್ನ ಪರಂಪರೆ, ನಂಬಿಕೆ, ಆಹಾರ ಪದ್ಧತಿ ಎಲ್ಲವನ್ನೂ ಉಳಿಸಿಕೊಂಡರೆ ಮಾತ್ರ ದೇಶ ಉಳಿಯುತ್ತದೆ.  ಇಲ್ಲದಿದ್ದರೆ ದೇಶ ಉಳಿಯಲಾರದು. ಕೇವಲ ಜನರೇ ಇಲ್ಲದೆ ಭೂ ಭಾಗ ಮಾತ್ರ ಉಳಿಯಬಹುದು. ಹೀಗೆ ಉಳಿದ ಭೂ ಭಾಗವನ್ನು ಭಾರತ ಮಾತೆ ಎಂದು ಪೂಜೆ ಮಾಡಬಹುದು. ಹೀಗೆ ಪೂಜೆ ಮಾಡುವ ಭೂಪಟ ಮನೆಯ ಗೋಡೆಯ ಮೇಲೆ ಹಾಕುವ ಕ್ಯಾಲೆಂಡರ್ ಆಗಿ ಮಾತ್ರ ಉಳಿಯುತ್ತದೆ.  ಅದು ದೇಶವಾಗಲಾರದು. ಈಗ ದೇಶ ಭಕ್ತರು ಮಾಡುತ್ತಿರುವ ಕೆಲಸ ಇದೇ. ಅವರು ಈ ದೇಶದಲ್ಲಿ ಆಂತರಿಕ ಶಕ್ತಿ ಸೌಂದರ್ಯವನ್ನು ನಾಶಪಡಿಸಿ ಅದನ್ನು ಗೋಡೆಯ ಮೇಲಿನ ಪಟವನ್ನಾಗಿ ಮಾಡುತ್ತಿದ್ದಾರೆ. ಅದಕ್ಕೆ ಊದು ಬತ್ತಿ ಹಚ್ಚಿ ಮಂಗಳಾರತಿ ಮಾಡುತ್ತಿದ್ದಾರೆ..


Wednesday, August 10, 2016

ಜ್ಯೋತಿ ಲಕ್ಷ್ಮಿ; ನೀನು ನನಗೆ ಏನಾಗಿದ್ದೆ ?

ಇದೆಲ್ಲ ಹೇಗೆ ಪ್ರಾರಂಭಿಸಬೇಕು ಗೊತ್ತಿಲ್ಲ. ಆದರೆ ಒಂದಂತೂ ನಿಜ.
ನನ್ನ ತಲೆ ಮಾರಿನ ಬಹಳಷ್ಟು ಯುವಕರಿಗೆ, ನಮಗೆ ಯೌವನ ಬಂದಿದೆ ಎಂಬ ಅರಿವು ಮೂಡಿದ್ದೇ ಆಕೆಯಿಂದ. ಅವಳ ನರ್ತನದಲ್ಲಿನ ಮಾದಕತೆ ನಾವು ಯುವಕರಾಗುತ್ತಿದ್ದೇವೆ ಎಂದು ಅನ್ನಿಸುವುದಕ್ಕೆ ಕಾರಣವಾಗಿತ್ತಲ್ಲ. ಎಂದೂ ಹೆಣ್ಣಿನ ಬತ್ತಲೆಯ ಮೈಯನ್ನು ನೋಡದ ನನ್ನಂಥವರಿಗೆ ಆಕೆ ಹೆಣ್ಣಿನ ನಿಗೂಢತೆಯನ್ನು ನಮ್ಮೆದುರು ಕಳಚಿಡುವ ಹಾಗೆ  ಕಾಣುತ್ತಿತ್ತಲ್ಲ ?
ಅವಳು ಬೇರೆ ಯಾರೂ ಅಲ್ಲ. ನಿನ್ನೆ ಅಸು ನೀಗಿದ ಜ್ಯೋತಿ ಲಕ್ಷ್ಮಿ. ಆಕೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಸಿನಿಮಾಗಳಲ್ಲೂ ನಟಿಸಿದ ನಟಿ. ಕ್ಯಾಬರೆ ನರ್ತನ ಮಾಡುತ್ತಿದ್ದವಳು. ಇಷ್ಟೇ ಹೇಳಿದರೆ ಜ್ಯೋತಿ ಲಕ್ಷ್ಮಿ ಬಗ್ಗೆ ಎಲ್ಲವನ್ನೂ ಹೇಳಿದಂತಾಗುವುದಿಲ್ಲ. ಅವಳು ನಮ್ಮ ಎದೆಯನ್ನು ಹುಟ್ಟಿ ಹಾಕುತ್ತಿದ್ದ ಪ್ರೀತಿ ಪ್ರೇಮ ಮತ್ತು  ಕಾಮದ ಕಿಚ್ಚು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟ. ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಆಕೆ ಯುವಕರ ಪಾಲಿಗೆ ಎಲ್ಲವೂ ಆಗಿದ್ದಳು. ಆಕೆಯ ನೃತ್ಯವನ್ನು ನೋಡುವುದಕ್ಕೆ ಬಹಳಷ್ಟು ಯುವಕರು ಸಿನಿಮಾ ಹಾಲ್ ಗೆ ಹೋಗುತ್ತಿದ್ದರು. 
ಜ್ಯೋತಿ ಲಕ್ಷ್ಮಿಯ ಕ್ಯಾಬರೆ ಡ್ಯಾನ್ಸ್ ಮಾಡುವಾಗ ಆಕೆಯ ನೃತ್ಯಕ್ಕ್ಎ ಹಿನ್ನೆಲೆ ಗಾಯನ ಮಾಡುತ್ತಿದ್ದವರು ಎಲ್. ಆರ್. ಈಶ್ವರಿ.  ಜ್ಯೋತಿ ಲಕ್ಷಿಯ ದೇಹದ ಚಲನೆ ಮತ್ತು ಎಲ್. ಆರ್. ಈಶ್ವರಿಯ ಧ್ವನಿಯ ನಡುವೆ ಯಾವ ರೀತಿಯ ಹೊಂದಾಣಿಕೆ ಇತ್ತೆಂದರೆ ಹಾಡುವವರು ಮತ್ತು ನೃತ್ಯ ಮಾಡುವವರು ಬೇರೆ ಬೇರೆ ಎಂದು ಅನ್ನಿಸುತ್ತಲೇ ಇರಲಿಲ್ಲ.  ಅಂತಹ ಹೊಂದಾಣಿಕೆ ಅದು.  ಎಲ್. ಆರ್ ಈಶ್ವರಿ ಕಣ್ಣು ಕತ್ತಿಯ ಅಂಚು ಎಂದು ಹಾಡಿದರೆ ಜ್ಯೋತಿ ಲಕ್ಷಿಯ ಕಣ್ಣುಗಳು ಕತ್ತಿಯ ಹಾಗೆ ಬಂದು ಯುವಕರ ಹೃದಯವನ್ನೇ ಇರಿದು ಬಿಡುತ್ತಿದ್ದವು.. ಈಶ್ವರಿಯ ಹಾಡಿನಲ್ಲಿದ್ದ ಮಾದಕತೆ ಜ್ಯೋತಿ ಲಕ್ಷ್ಮಿಯ ನರ್ತನದಲ್ಲಿ ಪುನರ್ ಹುಟ್ಟು ಪಡೆದ ಭಾವ ಪರವಶತೆಯನ್ನು ಮೂಡಿಸಿ ಬಿಡುತ್ತಿತ್ತು..
ಆ ಕಾಲ ಹಾಗಿತ್ತು. ಈಗಿನಂತೆ ಹೆಣ್ಣು ಗಂಡಿನ ಸಂಬಂಧವನ್ನು ಬಿಚ್ಚಿಡುವ ಸಾಹಿತ್ಯ ಸಮೃದ್ಧವಾಗಿ ಸಿಗುತ್ತಿರಲಿಲ್ಲ. ಹಾಗೆ ಸಿನಿಮಾಗಳಲ್ಲೂ ರಸಿಕರ ಮನಸ್ಸು ತೃಪ್ತಿ ಪಡಿಸುವುದಕ್ಕಾಗಿಯೇ ಕ್ಯಾಬರೆ ಡ್ಯಾನ್ಸರ್ ಇರುತ್ತಿದ್ದರು. ಚಿತ್ರದ ನಾಯಕ ಯಾವುದೋ ಕಳ್ಳನನ್ನೋ ಗೂಂಡಾನನ್ನೋ ಬಡಿಯುವುದಕ್ಕಾಗಿ ಬಾರ್ ಗೆ ಹೋದಾಗ ಅಲ್ಲಿ ಒಂದು ಕ್ಯಾಬರೆ ಡ್ಯಾನ್ಸ್ ಇರುತ್ತಿದ್ದುದು ಮಾಮೂಲು. ಡ್ಯಾನ್ಸ್ ಮುಗಿದ ಮೇಲೆ ನಾಯಕನ ಫೈಟ್. ಹೀಗೆ ಕೆಲವೇ ನಿಮಿಷಗಳಲ್ಲಿ ಕ್ಯಾಬರೆ ಡ್ಯಾನ್ಸರ್ ಗಳ ಕೆಲಸ ಮುಗಿದು ಹೋಗುತ್ತಿತ್ತು. ಜ್ಯೋತಿ ಲಕ್ಷ್ಮಿ ಯಂತಹ ಕ್ಯಾಬರೆ ಡ್ಯಾನ್ಸರ್ ಚಿತ್ರ ಕಥೆಯ ಒಂದು ಭಾಗವಾಗಿ ಇರುತ್ತಿದ್ದ ಸಂದರ್ಭ ತುಂಬಾ ಕಡಿಮೆ. ಉಳಿದಂತೇ ಕೆಲವೇ ನಿಮಿಷಗಳಲ್ಲಿ ತಮ್ಮ ನರ್ತನವನ್ನು ಪ್ರದರ್ಶಿಸಿ ಅವರು ಮರೆಯಾಗುತ್ತಿದ್ದರು. ಅವರಿಗೆ ಆಗ ಸಿಗುತ್ತಿದ್ದ ಸಂಭಾವನೆ ಸಾವಿರಕ್ಕೆ ಹತ್ತಿರ ಅಷ್ಟೇ. ಆದರೆ ಕ್ಯಾಬರೆ ಡ್ಯಾನ್ಸ್ ಅನ್ನು ಬಿಟ್ಟು ಚಿತ್ರವನ್ನು ಊಹಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ.
ಕ್ಯಾಬರೆ ಡ್ಯಾನ್ಸರ್ ಗಳಿಗೆ ಅಂತಹ ಗೌರವ ಕೂಡ ಇರಲಿಲ್ಲ. ಅವರನ್ನು ಚಿತ್ರ ರಂಗ ಮತ್ತು ಚಿತ್ರ ರಸಿಕರು ನೋಡುತ್ತಿದ್ದ ರೀತಿ ಕೂಡ ಬೇರೆಯಾಗಿತ್ತು. ಸುಮಾರು ಎರಡು ಮೂರು ದಶಕಗಳ ಕಾಲ ಭಾರತೀಯ ಚಿತ್ರ ರಂಗದಲ್ಲಿ ಕ್ಯಾಬರೆ ನರ್ತಕಿಯರು ಮಿಂಚಿದರು. ತಮ್ಮ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಯತ್ನ ನಡೆಸಿದರು. ಆದರೆ ಕಾಲ ಕ್ರಮದಲ್ಲಿ ಎಲ್ಲವೂ ಬದಲಾಗತೊಡಗಿತು. ಅರವತ್ತು ಎಪ್ಪತ್ತರ ದಶಕಗಳಲ್ಲಿ ನಾಯಕಿ ಭಾರತೀಯ ಮಹಿಳೆಯ ಪ್ರತಿ ರೂಪದಂತೆ ಇದ್ದಳು. ಆಕೆ ಎಂದೂ ತಲೆ ಎತ್ತಿ ನೋಡುತ್ತಿರಲಿಲ್ಲ.  ನಾಯಕ ಪ್ರೇಮ ನಿವೇದನೆ ಮಾಡಿದಾಗ ನಾಯಕಿ ತನ್ನ ಕಾಲ ಬೆರಳಿನಿಂದ ನೆಲ ಕೆರದಳೆಂದರೆ ಆಕೆಗೆ ಪ್ರೀತಿಯ ಬಗ್ಗೆ ಒಲವು ಇದೆ ಎಂದೇ ಆರ್ಥ. ಸಾಧಾರಣವಾಗಿ ಎಲ್ಲ ಚಿತ್ರ ನಿರ್ದೇಶಕರು ನಾಯಕ ನಟಿ ನೆಲ ಕೆರೆಯುವ ಕ್ಲೋಸ್ ಅಪ್ ಶಾಟ್ ಹಾಕುತ್ತಿದ್ದರು. ಅಂದಿನ ನಾಯಕಿ ಹೀಗೆ ಇರಬೇಕು ಎನ್ನುವ ನಂಬಿಕೆಯ ಕಾಲದಲ್ಲಿ ಹೆಣ್ಣಿನ ಮೈಯಂದವನ್ನು ತೋರಿಸುವುದಕ್ಕೆ ಕ್ಯಾಬರೆ ಡ್ಯಾನ್ಸರ್ ಗಳು ಬೇಕಾಗಿದ್ದರು. ಆದರೆ ಎಂಬತ್ತರ ದಶಕದ ಮಧ್ಯ ಭಾಗದ ಹೊತ್ತಿಗೆ ಇದೆಲ್ಲ ಬದಲಾಯಿತು. ಸೀರೆ ಉಟ್ಟು ನೆಲ ಕೆರೆಯುತ್ತಿದ್ದ ನಾಯಕಿಯರು ಸಾವಕಾಶ ಸೀರೆಯಿಂದ ತುಂಡು ಸ್ಕರ್ಟ್ ವರೆಗೆ ಬಂದು ನಿಂತಿದ್ದರು. ಇದನ್ನೂ ಜ್ಯೂಲಿ ಹಿಂದಿ ಸಿನಿಮಾದಲ್ಲಿ ನಾವು ಗಮನಿಸಬಹುದು, ಜ್ಯೂಲಿಯ ನಾಯಕಿಯಾಗಿದ್ದ ಚಟ್ಟಕ್ಕಾರಿ ಲಕ್ಷ್ಮಿ ತನ್ನ ಸುಂದರ ತೊಡೆಗಳನ್ನು ಪ್ರದರ್ಶಿಸಿದಳು. ಸಾವಕಾಶವಾಗಿ ನಟಿಯರೇ ಕ್ಯಾಬರೆ ಡ್ಯಾನ್ಸರ್ ಕೆಲಸವನ್ನೂ ಮಾಡಲು ಪ್ರಾರಂಭಿಸಿದರು. ಕಾಲಕ್ರಮೇಣ ಕ್ಯಾಬರೆ ನರ್ತಕಿಯರ ಬೇಡಿಕೆ ಕಡಿಮೆಯಾಯಿತು. ಅವರೆಲ್ಲ ಸಾವಕಾಶವಾಗಿ ಮರೆಯಾಗತೊಡಗಿದರು;  ಸಿನಿಮಾಗಳಲ್ಲಿ ಐಟಂ ಸಾಂಗ್ಸ್ ಬಂದ ಮೇಲೆ ಕ್ಯಾಬರೆ ಡ್ಯಾನ್ಸರ್ ಮತ್ತು ನಾಯಕಿಯರ ನಡುವಿನ ವ್ಯತ್ಯಾಸವೇ ಉಳಿಯಲೇ ಇಲ್ಲ.;
ಜ್ಯೋತಿ ಲಕ್ಷ್ಮಿ, ಜಯಮಾಲಿನಿ. ಹಲಂ ಮೊದಲಾದ ಕ್ಯಾಬರೆ ಡ್ಯಾನ್ಸರ್ ಗಳಿಗೆ ಬದುಕುವುದಕ್ಕೆ ಬೇರೆ ಮಾರ್ಗವೇ  ಉಳಿಯಲಿಲ್ಲ. ಅವರೆಲ್ಲರ ಬದುಕು ದುರಂತದಲ್ಲಿ ನೋವಿನಲ್ಲಿ, ಅಸಹಾಯಕತೆಯಲ್ಲಿ ಕಳೆದು ಹೋಗುವಂತಾಯಿತು.  ಅವರೆಲ್ಲ ಅನಾರೋಗ್ಯ ಪೀಡಿತರಾಗಿ ಖರ್ಚಿಗೆ ಹಣ ಇಲ್ಲದೇ ತಮ್ಮ ಬದುಕನ್ನು ದೂಡುವಂತಾಯಿತು. ಹೊಸ ತಲೆಮಾರಿನವರಿಗೆ ಇವರೆಲ್ಲ ಯಾರು ಎಂಬುದು ತಿಳಿಯದಿದ್ದಾಗ ಇವರೆಲ್ಲ ಇನ್ನಷ್ಟು ಹತಾಶೆಯನ್ನು ಅನುಭವಿಸುವಂತಾಯಿತು. ಇಂತಹ ಮನಸ್ಥಿತಿಯಲ್ಲೇ ಜ್ಯೋತಿ ಲಕ್ಷ್ಮಿಯೂ ಇಹಲೋಕ ಯಾತ್ರೆಯನ್ನು ಮುಗಿಸಿದಳು. ಆಕೆಗೆ ಸಾಯುವ ವಯಸ್ಸು ಆಗಿರಲಿಲ್ಲ.
ನನ್ನ ತಲೆ ಮಾರಿನವರಿಗೆ ಜ್ಯೋತಿ ಲಕ್ಷ್ಮಿ ಕಾಡಲೇ ಬೇಕು. ಇಲ್ಲ ಎಂದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದೇ ಅರ್ಥ. ಯಾಕೆ ಗೊತ್ತಾ ? ಗಂಡಸರಿಗೆಲ್ಲ ಒಂದು ಅಬ್ಸೆಷನ್ ಇರುತ್ತದೆ. ಅದು ತಾವು ಕಣ್ಣು ಬಿಟ್ಟಾಗ ಮೊದಲು ಏನನ್ನು ನೋಡುತ್ತಾರೆಯೋ ಅದರ ಅಬ್ಸೆಷನ್.  ಮಗು ಕಣ್ಣು ಬಿಟ್ಟಾಗ ಮೊದಲು ನೋಡುವುದು ಅಮ್ಮನ ಎದೆಯನ್ನು. ಅಮ್ಮನ ಹಾಲು ಕುಡಿಯುವ ಸುಮಾರು ಒಂದು ವರ್ಷದ ಕಾಲ ಮಗು ತಾಯಿಯ ಎದೆಗೆ ಅಂಟಿಕೊಂಡಿರುತ್ತದೆ. ಅದು ಆ ಮಗುವಿನ ಮನಸ್ಸಿನಲ್ಲಿ ಸ್ಥಾಯಿ ಭಾವವಾಗಿ ಉಳಿದು ಬಿಡುತ್ತದೆ. ಬದುಕಿನ ಕೊನೆಯ ಉಸಿರು ಬಿಡುವ ವರೆಗೂ ಗಂಡಸರಿಗೆ ಅದು ಕಾಡುತ್ತಲೇ ಇರುತ್ತದೆ. ಹೆಣ್ಣು ಮಗುವಿಗೆ ಹೇಗೆ ಎನ್ನುವುದು ನನಗೆ ತಿಳಿಯದು.
ನಾವೆಲ್ಲ ಶಾಲಾ ಮತ್ತು ಹೈಸ್ಕೂಲ್ ದಿನಗಳಲ್ಲಿ ನೋಡುತ್ತಿದ್ದ ಸಿನಿಮಾಗಳಲ್ಲಿ ಜ್ಯೋತಿ ಲಕ್ಷ್ಮಿ ಇದ್ದೇ ಇರುತ್ತಿದ್ದಳು. ಅವಳು ನರ್ತನ ಮತ್ತು ಅಂಗಾಂಗ ಪ್ರದರ್ಶನ ನಮ್ಮ ಮನಸ್ಸುಗಳಲ್ಲಿ ಬಾಲ್ಯದ ಅನುಭವವನ್ನು ಮತ್ತೆ ಚಿಗುರಿಸುತ್ತಿತ್ತು. ಸೆಳೆತ ಹೆಚ್ಚುತ್ತಿತ್ತು.; ನಮಗೆಲ್ಲ ನಿಗೂಡವಾಗಿದ್ದ ಸೃಷ್ಟಿ ಕ್ರಿಯೆಯ ಮೂಲವಾಗಿದ್ದ ಹೆಣ್ಣು  ಕಾಡುವ ರೀತಿಯ ಅನುಭವ ಬಂದಿದ್ದು ಜ್ಯೋತಿ ಲಕ್ಷ್ಮಿ  ಇಂದಲೇ ಎಂದೂ ನನಗೆ ಅನ್ನಿಸುತ್ತದೆ.  ನಮಗೆ ಅಮ್ಮನಾಗಿ ಹೆಂಡತಿಯಾಗಿ, ಗೆಳತಿಯಾಗಿ ಅಜ್ಜಿಯಾಗಿ,  ಇನ್ನೂ ಏನೇನೂ ಆಗಿ ಕಾಡುವ ಹೆಣ್ಣು ಜೀವ ಪಡೆದುಕೊಳ್ಳುವ ವಿವಿಧ ರೂಪಗಳು ಆಕೃತಿಗಳು ನಮ್ಮೆಲ್ಲ ಕ್ರಿಯಾಶೀಲತೆಗೆ ಮೂಲವಾಗಿರಬಹುದೆ ? ಆಕೆ ಇಲ್ಲದಿದ್ದರೆ ಎಲ್ಲ ಗಂಡು ಜೀವಿಗಳ ಕ್ರಿಯಾಶೀಲತೆ ನಾಶವಾಗಿ  ಹೋಗುತ್ತಿತ್ತೆ ? ಇರಬಹುದು. 
ನನಗೆ ಯಾರೋ ಹೇಳಿದೆ ಮಾತು ನೆನಪಾಗುತ್ತದೆ. ಆತ ಒಬ್ಬ ಜ್ಯೊತಿಷಿಯೋ ಅಲ್ಲ, ಒಬ್ಬ ಮಾನಸಿಕ ತಜ್ನನೋ ಯಾರೋ ಇರಬೇಕು. ಆತ ಹೇಳಿದ್ದು, ನಿನ್ನ ಶಕ್ತಿ ಮತ್ತು ದೌರ್ಬಲ್ಯ ಎರಡೂ ಹೆಣ್ಣು. ಈ ಮಾತು ನನಗೆ ನಿಜ ಅನ್ನಿಸುತ್ತದೆ. ನನಗೆ ತುಂಬಾ ಬೇಸರವಾದಾಗ  ಅಥವಾ ಅನಾಥ ಅನ್ನಿಸಿದಾಗ ನಾನು ನನ್ನ ಅಮ್ಮನಿಗೆ ದೂರವಾಣಿ ಕರೆ ಮಾಡುತ್ತೇನೆ. ಆಥವಾ ನನ್ನದೆಲ್ಲವನ್ನೂ ನಾನು ಹಂಚಿಕೊಳ್ಳುವುದು ಹೆಣ್ಣು ಜೀವಗಳ ಜೊತೆ ಮಾತ್ರ,  ನನಗೆ ಹೆಣ್ಣು ಜೀವಗಳ ಜೊತೆ ಇದ್ದಾಗ ಮಾತ್ರ ಸೇಪ್ ಎಂದು ಅನ್ನಿಸುತ್ತದೆ. ಅದು ಅಮ್ಮ ನನಗೆ ನೀಡಿದ ಸುರಕ್ಷತೆಯ ಭಾವದಿಂದ ಪ್ರೇರಿತವಾಗಿದ್ದರೂ ಇರಬಹುದು. ನಾನು ಎಲ್ಲ ಹೆಣ್ಣು ಮಕ್ಕಳಲ್ಲಿ ಅಮ್ಮನನ್ನು ಹುಡುಕುತ್ತೇನೆ. ಗೆಳತಿಯನ್ನು ಹುಡುಕುತ್ತೇನೆ.. ಅಮ್ಮನ ಬಿಸಿ ಅಪ್ಪುಗೆ ಮತ್ತು ಸಾಂತ್ವನ ನನ್ನನ್ನು ಇದು ವರೆಗೆ ಉಳಿಸಿಕೊಂಡು ಬಂದಿದೆ.
ನನಗೆ ಜ್ಯೋತಿ ಲಕ್ಷ್ಮಿಯ ನರ್ತನ  ಮಾದಕ ಪ್ರಪಂಚದ  ಪರಿಚಯ ಮಾಡಿಕೊಟ್ಟಿತು. ಹಾಗೆ ನಾನು ಯುವಕ ಎಂಬುದು ಗೊತ್ತಾಗಿದ್ದು ಆಕೆಯ ನರ್ತನದ ಮೂಲಕವೇ.  ನನ್ನ ಒಳಗೆ ಇದ್ದ ಕಾಮ ಜಾಗ್ರತವಾಗಿದ್ದೂ ಇದೇ ಜ್ಯೋತಿ ಲಕ್ಷ್ಮಿಯ ಡಾನ್ಸ್ ನೋಡಿಯೇ. ಹೀಗಾಗಿ ಆಕೆ ಸತ್ತಾಗ ನನ್ನಲ್ಲಿ ಮೂಡಿದ್ದು ಇದೇ ವಿಚಿತ್ರ ಭಾವ. ಆಕೆ ಮತ್ತು ನನ್ನ ನಡುವಿನ ಸಂಬಂಧ ಎಂಥಹದು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಆಕೆ ತಾಯಿಯಾಗಿದ್ದಳೇ, ನನ್ನನ್ನು ಕಾಮ ಮೂಡಲು ಆಕೆಯೇ ಪ್ರೇರಣಯೇ ನನಗೆ ಗೊತ್ತಿಲ್ಲ.

ಆದರ‍ೇ ಆಕೆಯ ಸಾವಿನ ಸುದ್ದಿ ನನನಗೆ ಬೇಸರವನ್ನು ಉಂಟು ಮಾಡಿದ್ದು ನಿಜ. ಆಕೆ ಸಾಯಬಾರದಿತ್ತು.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...