Thursday, June 30, 2016

ನಾನು ಪತ್ರಿಕೋದ್ಯಮ ಆಗದಿದ್ದರೆ ದೊಡ್ದ ಗೂಂಡಾ ಆಗುತ್ತಿದ್ದೆ....!

ಯಾವ ಮೋಹನ ಮುರಳಿ ಕರೆಯಿತೋ ಗೊತ್ತಿಲ್ಲ.  ಪತ್ರಿಕೋದ್ಯಮ ನನ್ನನ್ನು ಕರೆಯಿತು. ನನ್ನನ್ನು ಅಪ್ಪಿಕೊಂಡಿತು. ನನಗೆ ಬದುಕು ನೀಡಿತು. ಅನ್ನ ನೀಡಿತು. ನನ್ನ ಬದುಕು ಹಾಗೆ ನಡೆದುಕೊಂಡು ಬಂತು.
ಈ ಸುದೀರ್ಘ ಪತ್ರಿಕೋದ್ಯಮದ ದಾರಿಯಲ್ಲಿ ನನಗೆ ದಕ್ಕಿದ್ದೆಷ್ಟು ನನಗೆ ಗೊತ್ತಿಲ್ಲ. ಆದರೆ ನನ್ನ ಯೋಗ್ಯತೆಗೆ ಮೀರಿ ಎಲ್ಲವನ್ನು ಕೊಟ್ಟ ಪತ್ರಿಕೋದ್ಯಮ ಎಂತಹ ಕರುಣಾಮಯಿ ?
ಮಲೇನಾಡಿನ ಮೂಲೆಯ ಹಳ್ಳಿಯೊಂದರಿಂದ ಬಂದ ನನಗೆ ಪತ್ರಿಕೋದ್ಯಮದ ಬಾಗಿಲು ಹಾಗೆ ತೆರೆದು ಬಿಟ್ಟಿತಲ್ಲ ? ನನ್ನನ್ನು ಸಲಹಿ ಸಾಕಿತಲ್ಲ ? ಪತ್ರಿಕಾ ದಿನಾಚರಣೆಯ ಇಂದಿನ ಸಂದರ್ಭದಲ್ಲಿ ಇದೆಲ್ಲ ನೆನಪಾಗುತ್ತಿದೆ. ಹಾಗೆ ನನ್ನ ಚೆಂಬರಿನಲ್ಲಿ ಕುಳಿತು ಹಳೆಯದನ್ನೆಲ್ಲ ಮೆಲಕು ಹಾಕುತ್ತೇನೆ. ಆಗ ನನ್ನಲ್ಲಿ ಮೂಡುವುದು ಧನ್ಯತಾ ಭಾವ.
ಅದು ಎಂಬತ್ತರ ದಶಕ. ಕಾಲೇಜಿನಲ್ಲಿ ನಾನೊಬ್ಬ ಉಡಾಳ. ತರಲೆ, ಜಗಳ ಗಂಟ. ಆಗ ನನ್ನ ಮೇಲೆ ಪ್ರಭಾವ ಬೀರಿದ್ದು ವಿಷ್ಣುವರ್ಧನ ಅಭಿನಯದ ನಾಗರಹಾವು ಸಿನಿಮಾ. ನಾನೇ ರಾಮಚಾರಿ ಎಂದುಕೊಂಡು ಮುಖಗಂಟಿಕ್ಕಿಕೊಂಡು, ಹುಡುಗರ ಪಡೆ ಕಟ್ಟಿಕೊಂಡು ಓಡಾಡುತ್ತಿದ್ದ ದಿನಗಳು. ಕಾಲೇಜಿನಲ್ಲಿ ಯಾವುದೇ ಗಲಾಟೆಯಾದರೂ ಅದಕ್ಕೆ ನಾನೇ ಕಾರಣ ಎಂದು ಎಲ್ಲರೂ ತೀರ್ಮಾನಕ್ಕೆ ಬರುತ್ತಿದ್ದ ಸಂದರ್ಭ ಅದು.
ನಾನು ಯೋಚಿಸುತ್ತೇನೆ. ನನ್ನ ತರಲೆಯಿಂದ ಅದೆಷ್ಟು ಹುಡುಗಿಯರು ನೋವನ್ನು ಅನುಭವಿಸಿದರು ? ಹೆಣ್ಣು ಹೆತ್ತವರು ಕಾಲೇಜಿಗೂ ಬಂದು ಗಲಾಟೆ ಮಾಡಿದರು. ನನ್ನ ಅಪ್ಪನವರೆಗೆ ದೂರು ಒಯ್ದರು. ಆದರೂ ನಾನು ಮಾತ್ರ ಬದಲಾಗಲೇ ಇಲ್ಲ. ಸೈಕಲ್ ಚೈನ್ ಗೆ ಮರದ ಹಿಡಿಕೆ ಹಾಕಿ ಅದನ್ನು ಬೆಲ್ಟ್ ಜಾಗದಲ್ಲಿ ಕಟ್ಟಿಕೊಂಡು ಹೊರಗೆ ಬರುತ್ತಿದ್ದ ನನ್ನನ್ನು ನೋಡಿದವರು ಹಿಡಿ ಶಾಪ ಹಾಕುತ್ತಿದ್ದರಲ್ಲ ?
ನನ್ನಪ್ಪ ತಾಲೂಕಿನಲ್ಲೇ ಗೌರವಾನ್ವಿತ ವ್ಯಕ್ತಿ; ಅವರ ಮೇಲಿನ ಗೌರವದಿಂದ ಜನ ನನ್ನ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಳ್ಳುತ್ತಿದ್ದರು. ಆದರೆ ನಾನು ಮಾತ್ರ ಬದಲಾಗಲೇ ಇಲ್ಲ. ನನ್ನ ಹರಿದ ಖಾದಿ ಪ್ಯಾಂಟನ್ನು ನೋಡಿ ನಕ್ಕ ನನ್ನ ಸಹಪಾಠಿ ಹುಡುಗಿಗೆ ನಾನು ಕಾಡಿದ ಬಗೆ, ಅಬ್ಬಬ್ಬಾ....
ಆಕೆ ಈಗ ಎಲ್ಲಿದ್ದಾಳೋ ? ನನ್ನ ಬಗ್ಗೆ ಏನು ಅಂದುಕೊಂಡಿದ್ದಾಳೋ ಗೊತ್ತಿಲ್ಲ. ಆಗ ನಾನು ಮಾತ್ರ ಅವರ ಪಾಲಿಗೆ ಟೆರರ್..!
ಆಕೆ ಸ್ವಲ್ಪ ಗತ್ತಿನ ಹುಡುಗಿ. ನೋಡದಕ್ಕೆ ಸುಂದರವಾಗಿಯೂ ಇದ್ದಳು. ಅದೊಂದು ದಿನ ನಾನು ನನ್ನ ಸ್ನೇಹಿತರ ಜೊತೆಗೆ ಕಾಲೇಜಿನಿಂದ ಬರುವಾಗ ನನ್ನ ಹರಿದು ಪ್ಯಾಂಟು ನೋಡಿ ನಕ್ಕಳಲ್ಲ ? ಆಗಲೇ ನನ್ನ  ಪಿತ್ತ ನೆತ್ತಿಗೆ ಏರಿತು. ಮರುದಿನವೇ ಆಕೆಗೆ ಒಂದು ಪತ್ರ ಬರೆದೆ..ನಾನು ಗೌರವಾನ್ವಿತ ಕುಟುಂಬದಿಂದ ಬಂದವನು. ನನಗೂ ಅಕ್ಕ ತಂಗಿಯರಿದ್ದಾರೆ. ನಾನು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲೆ. ಆದರೆ ಮಾಡುವುದಿಲ್ಲ, ಇದು ಪತ್ರದ ಮುಖ್ಯಾಂಶ. ಹಾಗೆ ನೋಡಿದರೆ ನನಗೆ ಅಕ್ಕ ತಂಗಿಯರಿಲ್ಲ. ಆದರೂ ಪತ್ರಕ್ಕೆ ವಜನ್ನು ಬರಲಿ ಎಂದು ಅಕ್ಕ ತಂಗಿಯರಿದ್ದಾರೆ ಎಂದು ಬರೆದಿದ್ದೆ. ಇದನ್ನು ಆಕೆ ಪ್ರಾಂಶುಪಾಲರಿಗೆ ನೀಡಿದಳು. ಆಗ ಕಾಲೇಜಿನ ಪ್ರಾಂಶುಪಾಲರಾಗಿದ್ದವರು ಬಿ,ಎಚ್. ಶ್ರೀಧರ್. ಅವರು ನನ್ನನ್ನು ತಮ್ಮ ಚಂಬರಿಗೆ ಕರೆಸಿದರು.. ಏನಯ್ಯ ಹುಡುಗಿಯರಿಗೆ ಪತ್ರ ಬರೆಯುತ್ತೀಯ ಎಂದು ತರಾಟೆಗೆ ತೆಗೆದುಕೊಂಡರು. ನಾನು ಅವರಿಗೆ ಹೇಳಿದೆ. ನಾನು ತಪ್ಪು ಬರೆದಿದ್ದರೆ ನಿಮ್ಮ ಚೆಪ್ಪಲಿಯಿಂದ ನನಗೆ ಹೊಡೀರಿ.
ಅವರು ಪತ್ರ ಓದಿದರು. ನನಗೂ ಅಕ್ಕ ತಂಗಿಯರಿದ್ದಾರೆ ಎಂಬ ಮಾತು ಅವರ ಮನಸ್ಸಿಗೆ ನಾಟಿತು. ನಾನು ಯೋಗ್ಯ ವಿದ್ಯಾರ್ಥಿ ಎಂಬ ತೀರ್ಮಾನಕ್ಕೆ ಬಂದ ಅವರು ಯಾವುದೇ ಕ್ರಮ ತೆಗೆದುಕೊಳ್ಳದೇ ನನ್ನನ್ನು ಕಳುಹಿಸಿ ಕೊಟ್ಟರು. ಆಗಲೇ ಅಕ್ಕ ತಂಗಿಯರು ಇರುವುದು ಎಂತಹ ರಕ್ಷಣ ನೀಡುತ್ತದೆ ಎಂದು ಜ್ನಾನೋದಯ ಆದದ್ದು..ನನಗೂ ಅಕ್ಕ ತಂಗಿಯರು ಇರಬೇಕಿತ್ತು ಎಂದು ಅನ್ನಿಸಿದ್ದು. ಆದರೆ ನನ್ನಪ್ಪ ಎಬ್ಬರು ಮಕ್ಕಳು ಸಾಕು ಎಂದು ಸುಮ್ಮನಾಗಿ ಬಿಟ್ಟ. ಈಗ ನನಗೆ ಒಬ್ಬ ತಮ್ಮನಿದ್ದಾನೆ. ಅವನು ಸಾದಾ ಸರಳ ಮನುಷ್ಯ. ಆತ ಪತ್ರಿಕೋದ್ಯಮಿ ಆಗಿದ್ದರೂ ನನ್ನಂತೆ ತರಲೆ ಅಲ್ಲ.ಒಳ್ಳೆ ಮನುಷ್ಯ..
ಇದಾದ ಮೇಲೆ ನನ್ನಪ್ಪ ಸೇರಿದಂತೆ ಎಲ್ಲರೂ ಸೇರಿ ನನ್ನನ್ನು ಬೇರೆ ಊರಿಗೆ ಕಳುಹಿಸುವ ಒಮ್ಮತದ ನಿರ್ಧಾರಕ್ಕೆ ಬಂದರು. ಯಾಕೆಂದರೆ ನಾನು ಊರಲ್ಲಿದ್ದರೆ ಊರಿಗೆ ಅಪಾಯ ಎನ್ನುವುದು ಎಲ್ಲರ ಅಭಿಪ್ರಾಯವಾಗಿತ್ತು. ನನ್ನನ್ನು ಬೆಳಗಾವಿಯ ಗೋಗಟೆ ಕಾಲೇಜಿಗೆ ಸಾಗು ಹಾಕಿದರು. ತಾಲೂಕಿನ ಜನ ಪೀಡೆ ತೊಲಗಿತು ಎಂದು ಸಮಾಧಾನದ ನಿಟ್ಟುಸಿರು ಬಿಟ್ಟರು. ಹೆಣ್ಣು ಹೆತ್ತವರು ತಮ್ಮ ಮಕ್ಕಳು ಸೇಪ್ ಎಂದುಕೊಂಡರು.
ಬೆಳಗಾವಿಯಲ್ಲಿ ನನ್ನ ವಿದ್ಯಾಭ್ಯಾಸ ಮುಗಿಸಿ ಊರಿಗೆ ಮರುಳಿ ಕೃಷಿ ಮಾಡಿಕೊಂಡು ಬದುಕಬೇಕು ಎಂದುಕೊಂಡವನು ನಾನು. ಆದರೆ ಪತ್ರಿಕೋದ್ಯಮ ನನ್ನನ್ನು ಕರೆದು ಅಪ್ಪಿಕೊಳ್ಳಲು ಸಿದ್ಧವಾಗಿತ್ತು. ಊರಿಗೆ ಬಂದವನು ಸ್ಥಳೀಯ ಪತ್ರಿಕೆಗಳಲ್ಲಿ ಬರೆಯಲು ಪ್ರಾರಂಭಿಸಿದೆ. ಅಲ್ಲಿಯೂ ಶುರುವಾಯಿತು ನೋಡಿ ಗಲಾಟೆ. ನಮ್ಮ ತಾಲೂಕಿನಲ್ಲಿದ್ದ ಪೆಡ್ಡಿ ಸೊಸೈಟಿಯ್ ಅವ್ಯವಹಾರದ ಬಗ್ಗೆ ಲೇಖನ ಬರೆದೆ. ಅದು ಪ್ರಕಟವಾದ ತಕ್ಷಣ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಯಿತು. ನ್ಯಾಯಾಲಯಕ್ಕೆ ಓಡಾಟ. ಎಲ್ಲರೂ ನನ್ನನ್ನು ತಮ್ಮ ಕಡು ವೈರಿಯಂತೆ ನೋಡತೊಡಗಿದರು. ನನ್ನನ್ನು ಊರಿನಿಂದ ಓಡಿಸಿದರೆ ಮಾತ್ರ ಊರು ಉಳಿಯುತ್ತದೆ ಎಂದುಕೊಂಡರು.
ಈ ನಡುವೆ ರಾಮಚಂದ್ರಾ ಮಠದ ಸ್ವಾಮೀಜಿಯ ವಿರುದ್ಧ ಲೇಖನ ಬರೆದೆ. ಅವರು ಈಗಿನ ರಾಘವೇಶ್ವರರ ಹಿಂದಿನ ಗುರುಗಳು. ಹವ್ಯಕರಿಂದ ಅವರು ಹಣ ಸಂಗ್ರಹಿಸಿ ಕಲ್ಯಾಣ ಮಂಟಪ ಕಟ್ಟುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ನಾನು ಇದನ್ನು ವಿರೋಧಿಸಿ ಅವರು ಕಲ್ಯಾಣ ಮಂಟಪ ಕಟ್ಟುವುದಿಲ್ಲ. ಹಾಗೆ ಕಟ್ಟಿದ ದಿನ ಊರ ಪೇಟೆಯಲ್ಲಿ ನಗ್ನನಾಗಿ ಸಂಚರಿಸುತ್ತೇನೆ ಎಂದು ಸವಾಲು ಹಾಕಿದೆ. ಇದಕ್ಕೆ ಪ್ರತಿಯಾಗಿ ಮಠ ನನ್ನನ್ನು ಜಾತಿಯಿಂದ ಹೊರಕ್ಕೆ ಹಾಕಿತು..ಹವ್ಯಕರು ನನ್ನ ವಿರುದ್ಧ ಯುದ್ಧ ಸಾರಿದರು. ನನಗೆ ಹೊಡೆಯುವ ಯೋಜನೆ ಕೂಡ ಮಠದಿಂದ ಸಿದ್ಧವಾಯಿತು. ಅವರು ನನಗೆ ಹೊಡೆಯುವುದಕ್ಕೆ ಮೊದಲು ನನ್ನ ಹುಡುಗರನ್ನು ಕಟ್ಟಿಕೊಂಡು ಮಠದ ಶಿಷ್ಯರ ಮೇಲೆ ಹಲ್ಲೆ ಮಾಡಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ನನ್ನಮ್ಮ ನನ್ನನ್ನು ಬೆಂಗಳೂರಿಗೆ ಕಳುಹಿಸುವ ನಿರ್ಧಾರ ಮಾಡಿದಳು. ಅಮ್ಮನೇ ಊರು ಬಿಡು ಎಂದ ಮೇಲೆ ನನಗೆ ಬೇರೆ ದಾರಿ ಉಳಿಯಲಿಲ್ಲ. ಕೈಯಲ್ಲಿ ೫೦ ರೂಪಾಯಿ ಹಿಡಿದುಕೊಂಡು ಬೆಂಗಳೂರು ಬಸ್ಸು ಹತ್ತಿದೆ.
ಆದರೆ ಈಗಲೂ ರಾಮಚಂದ್ರಾ ಪುರದ ಮಠದ ಕಲ್ಯಾಣ ಮಂಟಪ ಸಿದ್ದವಾಗಿಲ್ಲ. ನಾನು ನಗ್ನನಾಗಿ ಪೇಟೆಯಲ್ಲಿ ಓಡಾಡುವ ಆಸೆ ಈಡೇರಲೇ ಇಲ್ಲ.
ಬೆಂಗಳೂರಿಗೆ ಬಂದ ಮೇಲೆ ಬೆಂಗಳೂರು ಆಕಾಶವಾಣಿ ಸೇರಿದೆ. ಅಲ್ಲಿ ಕ್ಯಾಸುವಲ್ ವರ್ಕರ್ ಆಗಿ ಪ್ರದೇಶ ಸಮಾಚಾರ ಓದುವ ಮೂಲಕ ಪತ್ರಿಕೋದ್ಯಮದ ಬದುಕು ಪ್ರಾರಂಬವಾಯಿತು. ನಂತರ ಸಂಯುಕ್ತ ಕರ್ನಾಟಕ ಸೇರಿದೆ. ಮುಂಜಾನೆ ಪತ್ರಿಕೆ ಉಪ ಮುಖ್ಯ ವರದಿಗಾರನಾಗಿ ಕೆಲಸ ಮಾಡಿದೆ. ಸುದ್ದಿ ಸಂಗಾತಿ ಮನ್ವಂತರ, ನಾವು ನೀವು ಮೊದಲಾದ ನಿಯತ ಕಾಲಿಕಗಳಲ್ಲಿ ದುಡಿದೆ. ಮರಾಠಿ ಸಕಾಳ್ ಪತ್ರಿಕೆಯ ಕಾಲಮಿಸ್ಟ್ ಆದೆ. ಕನ್ನಡ ಪ್ರಭ ಸೇರಿ ಅದರ ಮುಖ್ಯ ವರದಿಗಾರನಾದೆ. ೨೦೦೦ ಇಸ್ವಿಯಿಂದ ದೃಶ್ಯ ಮಾಧ್ಯಮಕ್ಕೆ ಬಂದೆ. ಈ ನಡುವೆ ಬೆಂಗಳೂರು ದೂರದರ್ಶನ ಕೇಂದ್ರದದಲ್ಲಿ ಕರೆಂಟ್ ಅಫೇರ್ಸ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟೆ. ನನಗೆ ಎಂದೂ ಕೆಲಸ ಇಲ್ಲ ಎಂಬ ಸ್ಥಿತಿ ಬರಲೇ ಇಲ್ಲ. ಯಾರ್ಯಾರೋ ಕರೆದರು ಕೆಲಸ ಕೊಟ್ಟರು. ನಾನು ಬೇಡ ಅನ್ನಿಸಿದಾಗ ಕೆಲಸ ಬಿಟ್ಟೆ. ಸುಮ್ಮನೆ ಮಲಗಿದೆ. ಹಾಡು ಕೇಳಿದೆ, ಸಿನಿಮಾ ನೋಡಿದೆ. ಪುಸ್ತಕಗಳನ್ನು ಓದಿದೆ. ಗುಂಡು ಹಾಕಿದೆ. ವಾರಗಟ್ಟಲೆ ನಿದ್ರೆ ಮಾಡಿದೆ.
ಕಾವೇರಿ, ಸುವರ್ಣ ಜಿ ನ್ಯೂಸ್, ಸಮಯ, ಕಸ್ತೂರಿ ಮೊದಲಾದ ವಾಹಿನಿಗಳಲ್ಲಿ ಕೆಲಸ ಮಾಡಿದೆ. ಈಗ ಹೊಸ ವಾಹಿನಿಯೊಂದನ್ನು ಕಟ್ಟಲು ಹೊರಟಿದ್ದೇನೆ.
ನನ್ನ ಈ ಪಯಣವನ್ನು ನೋಡಿದ ಹಲವರು ಹಲವು ರೀತಿ ವಿಮರ್ಶೆ ಮಾಡುತ್ತಾರೆ. ದೃಶ್ಯ ಮಾಧ್ಯಮದಲ್ಲಿ ನೀನು ಯಶಸ್ವಿಯಾಗಿಲ್ಲ ಎಂದು ಹೇಳುವವರು ಇದ್ದಾರೆ. ನಾನು ಆಗೆಲ್ಲ ನಕ್ಕು ಬಿಡುತ್ತೇನೆ. ನಾನು ಯಶಸ್ವಿ ಹೌದೋ ಅಲ್ಲವೋ ಅನ್ನುವುದನ್ನು ಇತಿಹಾಸಕ್ಕೆ ಬಿಟ್ಟಿ ಬಿಡುತ್ತೇನೆ. ಆದರೆ ಈಗ ಯಾರನ್ನು ನೀವು ಯಶಸ್ವಿ ಎಂದು ಪರಿಗಣಿಸುತ್ತೀರೋ ನಾನು ಅವರಂತೆ ಇಲ್ಲ ಎಂಬುದು ನಿಜ. ಆ ರೀತಿಯ ಯಶಸ್ಸು ನನಗೆ ಬೇಕಾಗಿಲ್ಲ. ಯಾಕೆಂದರೆ ನಾನು ಎಲ್ಲರಂತೆ ಇಲ್ಲ. ನಾನು ನಾನೇ...!
ನಾನೊಬ್ಬನೇ ಮೌನವಾಗಿ ಕುಳಿತು ಆಲೋಚಿಸುವಾಗ ನನ್ನಲ್ಲಿ ಮೂಡುವುದು ಕೃತಜ್ನಾತಾ ಭಾವ. ಯಾವುದೇ ಕಾಡಿನ ನಡುವೆ ಹುಟ್ಟಿ ಕನ್ನಡ ಮಾಧ್ಯಮದಲ್ಲಿ ಓದಿದವ ನಾನು. ಒಂದು ರೀತಿಯ ಕಾಡು ಮನುಷ್ಯ. ಫೋನು, ರೈಲು ಎಲ್ಲವನ್ನೂ ನೋಡಿದ್ದು ಬೆಳಗಾವಿಗೆ ಹೋದ ಮೇಲೆ. ಮಹಾನ್ ಮುಜುಗರದ ವ್ಯಕ್ತಿಯೂ ಆಗಿರುವ ನಾನು ಕಾಡು, ನದಿ ಗುಡ್ಡ ಬೆಟ್ಟಗಳ ನಡುವೆ ಬೆಳದವನು. ಆದರೆ ಪತ್ರಿಕೋದ್ಯಮ ನನ್ನನ್ನು ಪ್ರೀತಿಯಿಂದ ಅಪ್ಪಿಕೊಂಡು ಎಲ್ಲವನ್ನೂ ನೀಡಿತಲ್ಲ. ಅದಿಲ್ಲದಿದ್ದರೆ ನಾನೊಬ್ಬ ಗುಂಡಾ ಆಗುತ್ತಿದ್ದೆನಲ್ಲ...
ನಾನು ಪತ್ರಿಕೋದ್ಯಮಕ್ಕೆ ಕೃತಜ್ನನಾಗಿದ್ದೇನೆ. ಅದು ಫಲಾಪೇಕ್ಷೆ ಇಲ್ಲದೇ ಎಲ್ಲವನ್ನೂ ನನಗೆ ನೀಡಿದ್ದಕ್ಕಾಗಿ. ನನ್ನೆಲ್ಲ ತಪ್ಪುಗಳನ್ನು ಕ್ಷಮಿಸಿ ತಾಯಿಯಂತೆ ಪೊರೆದಿದ್ದಕ್ಕಾಗಿ..


Monday, June 27, 2016

ಇತಿಹಾಸ ಪ್ರಜ್ನೆ ಇಲ್ಲದವರು ಇತಿಹಾಸ ಸೃಷ್ಟಿಸಲಾರರು, ವರ್ತಮಾನವನ್ನು ಮುನ್ನಡೆಸಲಾರರು...!

ಕಳೆದ ಎರಡು ದಿನಗಳಿಂದ ಅದೇ ಸುದ್ದಿ. ಸುದ್ದಿ ವಾಹಿನಿಗಳಲ್ಲಿ ನೇರ ಪ್ರಸಾರ. ನನ್ನ ಕೆಲವು ಸ್ನೇಹಿತರು ನನ್ನನ್ನು ಕೇಳಿದರು. ಇದು ಜಾಸ್ತಿ ಆಗಿಲ್ಲವಾ ? ಮಾಜಿ ರಾಜರ ಮನೆಯಲ್ಲಿ ಮದುವೆ ನಡೆದರೆ ಅದು ಅಂತಾ ಮಹತ್ವದ ಸುದ್ದಿಯಾ ? ನಿಮಗೆ ಬೇರೆ ಸುದ್ದಿ ಇಲ್ಲವಾ ?
ನಾನು ಅವರ ಪ್ರಶೆಗೆ ಉತ್ತರ ನೀಡಲಿಲ್ಲ.
ಸಾಮಾಜಿಕ ಜಾಲ ತಾಣಗಳಲ್ಲೂ ಈ ಬಗ್ಗೆ ಚರ್ಚೆವ್ ನಡೆಯುತ್ತಿದೆ. ಮಾಧ್ಯಮಗಳ ಬಗ್ಗೆ ಸದಾ ಟೀಕಿಸುವವರು ಈ ಬಗ್ಗೆಯೂ ಟೀಕೆ ಮಾಡುತ್ತಿದ್ದಾರೆ. ಎಲೆಕ್ಟಾನಿಕ ಮಾಧ್ಯಮಗಳನ್ನು ಟೀಕಿಸುತ್ತಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ಏನಿದು ಹುಚ್ಚಾಟ ಎಂದೂ ಕೇಳುತ್ತಿದ್ದಾರೆ..
ಇದೆಲ್ಲ ಸರಿ. ನಮ್ಮ ಸಂಸದೀಯ ವ್ಯವಸ್ಥೆಗೆ ಇಂಗ್ಲಂಡಿನ ಸಂಸದೀಯ ವ್ಯವಸ್ಥೆಯೇ ಆಧಾರ. ಇಂಗ್ಲಂಡಿನಲ್ಲಿ ಹೌಸ್ ಆಫ್ ಲಾರ್ಡ್ಸ್ ಮತ್ತು ಹೌಸ್ ಆಫ್ ಕಾಮನ್ಸ್ ಇರುವಂತೆ ನಮ್ಮಲ್ಲಿ ರಾಜ್ಯ ಸಭೆ ಮತ್ತು ಲೋಕಸಭೆಗಳಿವೆ..ನಮ್ಮದು ಅಮೇರಿಕದಂತೆ ಅಧ್ಯಕ್ಷೀಯ ಮಾಧರಿಯ ಪ್ರಜಾ ಸತ್ತೆಯಲ್ಲ.. ನಮಗೇನಿದ್ದರೂ ಇಂಗ್ಲಂಡ್ ಮಾಧರಿ.. ಇಂಗ್ಲಂಡಿನಲ್ಲಿ ರಾಣಿ ಇದ್ದಾಳೆ. ರಾಜಮನೆತನ ಇದೆ. ಈ ರಾಜಮನೆತನದ ಆಗುಹೋಗುಗಳ ಬಗ್ಗೆ ವರದಿ ಮಾಡುವ ಟಾಬ್ಲಾಯಡ್ ಗಳಿವೆ. ಇವತ್ತು ರಾಣಿ ಏನು ಮಾಡಿದಳು ? ರಾಜಮನೆತನದವರು ಎಲ್ಲಿಗೆ ಶಾಪಿಂಗ್ ಗೆ ಹೋದರು ? ಅರಮನೆಯಲ್ಲಿನ ಪ್ರೇಮ ಪ್ರಕರಣಗಳು... ಹೀಗೆ ಪ್ರತಿ ಸಂಚಿಕೆಯಲ್ಲೂ ಇಂತಹ ಸುದ್ದಿಗಳಿರುತ್ತವೆ.. ಇಂಗ್ಲೀಷರಿಗೆ ತಮ್ಮ ರಾಜ ಮನೆತನದ ಬಗ್ಗೆ ಅಪಾರ ಗೌರವ.  ತಮ್ಮ ಇತಿಹಾಸವನ್ನು ನೆನಪು ಮಾದಿಕೊಳ್ಳುವುದಕ್ಕಾಗಿ ಅಲ್ಲಿ ರಾಜಮನೆತನ ಇದೆ. ರಾಣಿ ಇದ್ದಾರೆ..
ಕಳೆದ ೧೫ ದಿನಗಳ ಹಿಂದೆ ಬ್ರಿಟನ್ ರಾಣಿಯ ತೊಂಬತ್ತನೆಯ ಹುಟ್ಟು ಹಬ್ಬದ ಆಚರಣೆ ನಡೆಯಿತು. ಇಂಗ್ಲಂಡಿನ ಎಲ್ಲ ವಾಹಿನಿಗಳು ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಿದವು.. ರಾಣಿ ಕುರಿತ ಹಲವಾರು ಸಾಕ್ಷ್ಯ ಚಿತ್ರಗಳು ಪ್ರಸಾರವಾದವು. ಇಂಗ್ಲಂಡನ್ನು ಸೂರ್ಯ ಮುಳುಗದ ಸಾಮ್ರಾಜ್ಯವನ್ನಾಗಿ ಮಾಡಿದ ಕೀರ್ತಿ ಈ ರಾಜಮನೆತನದ್ದು. ಇಡೀ ವಿಶ್ವವನ್ನೇ ಆಳುವಂತೆ ಮಾಡಿದ್ದು ಇವರೇ. ಹೀಗಾಗಿ ರಾಜಸತ್ತೆ ಹೋಗಿ ಪ್ರಜಾ ಪ್ರಭುತ್ವ ಬಂದರೂ ರಾಣಿ ಮತ್ತು ರಾಜಮನೆತನ ಇದೆ. ಬಂಕಿಂಗ್ ಹಾಮ್ ಪ್ಯಾಲೇಸ್ ಇದೆ..
ಬ್ರಿಟೀಷರು ತಮ್ಮ ಇತಿಹಾಸವನ್ನು ಮರೆಯುವುದಿಲ್ಲ. ಇತಿಹಾಸ ವರ್ತಮಾನದಲ್ಲಿ ಬದುಕುವುದಕ್ಕೆ ದಾರಿದೀಪ. ಹಾಗೆ ಇತಿಹಾಸವನ್ನು ನೆನಪು ಮಾಡಿಕೊಂಡು ಹೆಜ್ಜು ಗುರುತು ಮೂಡಿಸಿ ಹೋದವರಿಗೆ ಕೃತಜ್ನತೆ ಸಲ್ಲಿಸುವ ಸೌಜನ್ಯವನ್ನು ಅವರು ತೋರುತ್ತಾರೆ.
ಈಗ ನಮ್ಮ ಕರ್ನಾಟಕಕ್ಕೆ ಬರೋಣ. ಇಲ್ಲಿನ ರಾಜಮನೆತನದ ಬಗ್ಗೆ ಮಾತನಾಡೋಣ. ಮೈಸೂರು ಅರಸು ಉಳಿದೆಲ್ಲ ಅರಸರಂತೆ ಇರಲಿಲ್ಲ. ಅವರು ಜನಾನುರಾಗಿಗಳಾಗಿದ್ದರು.. ತಮ್ಮ ರಾಜ್ಯದ ಅಭಿವೃದ್ಧಿಗಾಗಿ ಅವರು ಪಣ ತೊಟ್ಟಿದ್ದರು.  ಕಳೆದ ಶತಮಾನದಲ್ಲೇ ಮೀಸಲಾತಿಯನ್ನು ಜಾರಿಗೆ ತಂದವರು ಅವರು. ಕನ್ನಂಬಾಡಿ ಅಣೆಕಟ್ಟು ಕಟ್ಟಿದವರು ಒಡೆಯರು. ವಿದ್ಯುತ್ ಉತ್ಪಾದನಾ ಘಟಕ ಪ್ರಾರಂಭಿಸಿದವರು. ಅರಸರ ಜನಪರ ಕಾರ್ಯಕ್ರಮಗಳ ಪಟ್ಟಿ ಹೀಗೆ ಮುಂದುವರಿಯುತ್ತದೆ.. ಒಟ್ಟಾರೆಯಾಗಿ  ಮೈಸೂರು ರಾಜ್ಯವನ್ನು ಮಾಧರಿ ರಾಜ್ಯವನ್ನಾಗಿ ರೂಪಿಸಿದ ಖ್ಯಾತಿ ಮೈಸೂರು ಅರಸರಿಗೆ ಸಲ್ಲುತ್ತದೆ.. ನೀವು ಕರ್ನಾಟಕದ ಉಳಿದ ಭಾಗಗಳ ಜೊತೆ ಹಳೆ ಮೈಸೂರು ಪ್ರದೇಶವನ್ನು ಹೋಲಿಕೆ ಮಾಡಿದರೆ ಮೈಸೂರು ಅರಸರು ಹೇಗೆ ಆಡಳಿತ ಮಾಡಿದರು ಎಂಬುದು ನಮಗೆ ಅರ್ಥವಾಗುತ್ತದೆ.
ಸ್ವಾತಂತ್ರ್ಯ ಬಂದ ಮೇಲೆ ಪರಿಸ್ಥಿತಿ ಬದಲಾಯಿತು. ಕನ್ನಂಬಾಡಿ ಕಟ್ಟೆಯನ್ನು ನಿರ್ಮಿಸುವುದಕ್ಕಾಗಿ ಸ್ವಂತ ಬಂಗಾರವನ್ನೇ ಅಡವಿಟ್ಟಿದ್ದ ರಾಜ ಮನೆತನ ಮೊದಲಿನಂತೆ ಉಳಿಯಲಿಲ್ಲ. ಜಮಚಾಮರಾಜೇಂದ್ರ ಓಡೆಯರ್ ಬದುಕಿದ್ದಶ್ಟು ಕಾಲ ಇದ್ದ ಪರಿಸ್ಥಿತಿ ಆವರು ಕಾಲವಾದ ಮೇಲೆ ಉಳಿಯಲಿಲ್ಲ. ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಬೇರೆ ಬೇರೆ ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.. ಆದರೆ ಅವರು ಯಾವುದರಲ್ಲೂ ಯಶಸ್ವಿಯಾಗಲಿಲ್ಲ. ಜಯಚಾಮರಾಜೇಂದ್ರ ಒಡೆಯರ್ ಈ ಮಗ ಉದ್ಧಾರವಾಗೋಲ್ಲ ಎಂದು ಹೇಳಿದ್ದು ಶಾಪದಂತೆ ಶ್ರೀಕಂಠದತ್ತರನ್ನು ಕಾಡತೊಡಗಿತು.
ಪ್ರಾಯಶ: ೧೯೬೯ ರಲ್ಲಿ ರಾಜ ಧನ ರದ್ಧತಿಯೊಂದಗೆ ಈ ದೇಶದ ರಾಜ ಮಹಾರಾಜರ ವೈಭವದ ದಿನಗಳು ಮರೆಯಾದವು. ಹಳೆಯ ವೈಭವವನ್ನು ಮರೆಯಲಾಗದೇ ಹೊಸ ಬದುಕನ್ನು ಒಪ್ಪಿಕೊಳ್ಳರಾದೇ ರಾಜರೆಲ್ಲ ಅತಂತ್ರ ಸ್ಥಿತಿಯಲ್ಲಿ ಬದುಕಲಾರಂಭಿಸಿದರು.. ತಮ್ಮ ದಿನಗಳು ಮರೆಯಾಗಿವೆ ಎಂದು ಅವರೆಲ್ಲ ಅರ್ಥ ಮಾಡಿಕೊಳ್ಳಲು ಹಲವು ವರ್ಷಗಳೆ ಹಿಡಿದವು. ರಾಜಸ್ಥಾನ ಮಧ್ಯಪ್ರದೇಶ ಮೊದಲಾದ ಉತ್ತರ ಭಾಗದ ಅರಸು ಮನೆತನ ಚುನಾವಣಾ ರಾಜಕೀಯಕ್ಕೆ ಇಳಿದವು. ಅಧಿಕಾರವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡವು. ಆದರೆ ಶ್ರೀಕಂಥ ದತ್ತ ಒಡೆಯರ್ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಿದರೂ ಅವರು ಯಶಸ್ವಿ ರಾಜಕಾರಣಿ ಅನ್ನಿಸಲೇ ಇಲ್ಲ. ರಾಜ ಮನೆತನದ ಬಗ್ಗೆ ಮೈಸೂರು ಪ್ರಾಂತದ ಜನರಿಗಿರುವ ಪ್ರೀತಿ ಮತ್ತು ಗೌರವವನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಲೇ ಇಲ್ಲ. ಜನತಂತ್ರ ವ್ಯವಸ್ಥೆಯನ್ನು ತಿರುಳನ್ನು ಅರಿಯದೇ ರಾಜ ರಂತೆ ಬದುಕಲು ಯತ್ನಿಸಿ ಅವರು ಸೋತರು..
ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದಲಾಗಲೇ ಬೆಂಗಳೂರು ಅರಮನೆಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಲು ಮುಂದಾಯಿತು. ಈ ಪ್ರಕರಣ ಈಗಲೂ ಸಎರ್ವೋಚ್ಚ ನ್ಯಾಯಾಲಯದ ಮುಂದಿದೆ. ಮೈಸೂರು ಅರಮನೆಯ ಒಂದು ಭಾಗವನ್ನು ರಾಜ ಮನೆತನಕ್ಕೆ ಬಿಟ್ಟು ಉಳಿದಿದ್ದು ಸರ್ಕಾರದ ನಿಯಂತ್ರಣಕ್ಕೆ ಬಂತು. ಮೈಸೂರು ದಸರಾ ಮೊದಲ ವೈಭವನ್ನು ಕಳೆದುಕೊಂಡು ಸರ್ಕಾರಿ ಕಾರ್ಯಕ್ರಮವಾಗಿ ಬದಲಾಯಿತು. ಅಲ್ಲಿ ಇತಿಹಾಸವನ್ನು ನೆನಪಿಸುವ ಕೆಲಸಕ್ಕೆ ಒತ್ತು ಸಿಗದೇ ಆ ಭಾಗದ ರಾಜಕಾರಣಿಗಳು ಮಿಂಚಲು ಅಧಿಕಾರ ಚಲಾಯಿಸಲು ಅವಕಾಶವಾಯಿತು ಅಷ್ಟೇ.
ಈಗ ಶ್ರೀಕಂಥ ದತ್ತ ನರಸಿಂಹ ರಾಜ ಒಡೆಯರ್ ಇಲ್ಲ. ಅವರ ಪತ್ನಿ ಪ್ರಮೋದಾ ದೇವಿ ಯದುವೀರರನ್ನು ದತ್ತು ತೆಗೆದುಕೊಂಡಿದ್ದಾರೆ. ಅವರನ್ನೇ ರಾಜರನ್ನಾಗಿ ಮಾಡಿದ್ದಾರೆ. ಆದರೆ ಎಲ್ಲವೂ ಬದಲಾಗಿದೆ. ಕಾಲದ ಗುಣವೇ ಹಾಗೆ ಅದು ಎಲ್ಲವನ್ನೂ ಬದಲಿಸುತ್ತದೆ. ಈ ಬದುಕಿನಲ್ಲಿ ಬದಲಾವಣೆಯೊಂದೇ ಶಾಶ್ವತ ಎಂಬ ನಾಣ್ಣುಡಿಯನ್ನು ಇದು ಸಾಭೀತು ಪಡಿಸಿದೆ. ಆದೆ ಇದೆಲ್ಲ ನಮ್ಮ ಮುಂದೆ ಕೆಲವೊಂದು ಪ್ರಶ್ನೆಗಳನ್ನು ಮುಂದಿಟ್ಟಿದೆ. ಅದು ಇತಿಹಾಸ ಪ್ರಜ್ನೆಗೆ ಸಂಬಂಧಿಸಿದ್ದು. ಕಾಲನ ತೆಕ್ಕೆಯಲ್ಲಿ ಕರಗಿ ಹೋದವರನ್ನು ನೆನಪು ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ್ದು.
ನಮ್ಮ ನಾಡಿನ ಇತಿಹಾಸವನ್ನು ಮುಂದಿನ ಜನಾಂಗಕ್ಕೆ ತಲುಪಿಸುವುದು ಬೇಡವೆ ? ತಲುಪಿಸುವುದಿದ್ದರೆ ಹೇಗೆ ? ನಾವು ಎಲ್ಲಕ್ಕೂ ಬ್ರೀಟೀಷ್ ಮಾಧರಿಯನ್ನು ಅನುಸರಿಸುವವರು ಈ ವಿಚಾರದಲ್ಲಿ ಮಾತ್ರ ಯಾಕೆ ಅವರನ್ನು ಅನುಸರಿಸುತ್ತಿಲ್ಲ ? ಮೈಸೂರನ್ನು ಹಳೆ ವೈಭವನ್ನು ನೆನಪಿಸುವ ಒಂದು ಪ್ರವಾಸಿ ಕೇಂದ್ರವನ್ನಾಗಿ ಬದಲಾಯಿಸಲು ನಾವು ಯತ್ನ ನಡೆಸಿಲ್ಲ ಯಾಕೆ ? ನಮ್ಮಲ್ಲಿ ಐತಿಹಾಸಿಕ ಪ್ರಜ್ನೆ ಇಲ್ಲದಿರುವುದು ಇದಕ್ಕೆ ಕಾರಣವೆ ?
ಈಗ ಮೈಸೂರನ್ನು ಕೈಗಾರಿಕಾ ಮತ್ತು ಐಟಿ ಬಿಟಿ ಕೇಂದ್ರವನ್ನಾಗಿ ಮಾಡಲು ನಾವು ಮುಂದಾಗಿದ್ದೇವೆ. ಹಲವಾರು ಅಂತಾರಾಷ್ಟಿಯ ಕಂಪೆನಿಗಳು ಈಗಾಗಲೇ ಮೈಸೂರಿನಲ್ಲಿ ತಮ್ಮ ಶಾಖೆಗಳನ್ನು ಪ್ರಾರಂಭಿಸಿವೆ..ಇನ್ನು ಹಲವಾರು ಕಂಪೆನಿಗಳು ಮೈಸೂರಿಗೆ ಬರಲಿವೆ. ಈ ಕೈಗಾರೀಕರಣ ಮೈಸೂರನ್ನು ಹೇಗೆ ಬದಲಿಸುತ್ತದೆ ಎಂಬುದು ಒಂದು ಪ್ರಶ್ನೆಯಾದರೆ ಮೈಸೂರು ಕೈಗಾರಿಕರಣ ಇಲ್ಲದೇ ಇರುವುದು ಸಾಧ್ಯವಿಲ್ಲವೇ ಎನ್ನುವುದು ಇನ್ನೊಂದು ಪ್ರಶ್ನೆ. ಈ ಪ್ರಶ್ನೆಗಳನ್ನು ಕೇಳಿಕೊಳ್ಳುವಾಗಲೂ ನಮ್ಮ ಮುಂದೆ ಬರುವುದು ಅದೇ ಐತಿಹಾಸಿಕ ಪ್ರಜ್ನೆಯ ಪ್ರಶ್ನೆ..
ಮೈಸೂರನ್ನು ನಾವು ಹೇಗೆ ನೋಡಲು ಬಯಸುತ್ತೇವೆ ಎಂಬ ಪ್ರಶ್ನೆಗೆ ಸರ್ಕಾರಕ್ಕೆ ಸ್ಪಷ್ಟತೆ ಬೇಕು. ಇದನ್ನು ದೇಶದ ಪ್ರಮುಖ ಪ್ರವಾಸಿ ಕೇಂದ್ರವನ್ನು ಇನ್ನೂ ಅಭಿವೃದ್ಧಿಪಡಿಸಬೇಕು ಎಂದು ಅನ್ನಿಸಿದರೆ ಅದನ್ನು ಅನುಷ್ಠಾನಗೊಳಿಸಲು ಕಾರ್ಯಸೂಚಿ ಬೇಕು..ಮೈಸೂರನ್ನು ಶೋಕೇಸ್ ಮಾಡುವುದು ಹೇಗೆ ಎನ್ನುವ ಬಗ್ಗೆ ಚರ್ಚಿಸಬೇಕು. ಯಾವುದೇ ಪ್ರವಾಸಿಗ ಮೈಸೂರಿಗೆ ಬರುವುದಿದ್ದರೆ ಯಾಕೆ ಬರುತ್ತಾನೆ ? ಹೀಗೆ ಬರುವ ಪ್ರವಾಸಿಗರಿಗೆ ನಾವು ಮೈಸೂರನ್ನು ತಿಳಿಸಿಕೊಡುವುದು ಹೇಗೆ ಎಂಬುದು ಮುಖ್ಯ ಪ್ರಶ್ನೆಯಾಗುತ್ತದೆ. ಹಾಗೇಯೇ ಇಲ್ಲಿ ಬರುವ ನಮ್ಮ ರಾಜ್ಯದ ಪ್ರವಾಸಿಗರು, ದೇಶದ ಪ್ರವಾಸಿಗರು ಮತ್ತು ಹೊರದೇಶದ ಪ್ರವಾಸಿಗರನ್ನು ಆಕರ್ಷಿಸಲು ಏನು ಮಾಡಬೇಕು ಎಂಬ ಬಗ್ಗೆ ಯೋಜನಾ ಬದ್ಧ ಕಾರ್ಯಸೂಚಿ ಬೇಕು. ಇದೆಲ್ಲ ನಿಂತಿರುವುದು ಮೈಸೂರನ್ನು ನಾವು ಏನು ಮಾಡಬೇಕು ಎಂಬು ಮೂಲಭೂತ ಪ್ರಶ್ನೆಗೆ ಉತ್ತರ ಕಂಡುಕೊಂಡಾಗ ಮಾತ್ರ.
ನಾನು ಮೊದಲು ಹೇಳಿದ ಹಾಗೆ ಮೈಸೂರು ಅರಸರನ್ನು ನಾವು ಮೆರವಣಿಗೆ ಮಾಡಬೇಕಾಗಿಲ್ಲ. ಅವರಿಗೆ ರಾಜಧನ ನೀಡಬೇಕಾಗಿಲ್ಲ. ಆದರೆ ಮೈಸೂರಿಗೆ ಬಂದರೆ ಅಲ್ಲಿನ ಭವ್ಯ ಇತಿಹಾಸ ನಮಗೆ ತಿಳಿಯಬೇಕು. ಅಲ್ಲಿನ ಪರಂಪರೆಯ ಅರಿವಾಗಬೇಕು. ಮೈಸೂರು ಅರಸರು ಏನು ಮಾಡಿದರು ಎಂಬುದನ್ನು ಪ್ರವಾಸಿಗರಿಗೆ ತಿಳಿಸುವಂತಾಗಬೇಕು.. ಮತ್ತೆ ನಾನು ಇಂಗ್ಲಂಡಿನ ಉದಾಹರಣೆಯನ್ನೇ ನೀಡುತ್ತೇನೆ. ಅಲ್ಲಿ ಶೇಕ್ಸಫಿಯರ್ ನಾಟಕ ಪ್ರದರ್ಶನ ಪ್ರತಿ ದಿನ ನಡೆಯುವ ರಂಗ ಮಂದಿರಗಳಿವೆ. ಬ್ರಿಟೀಶ್ಅರು ಸಾಹಿತ್ಯ ಮತ್ತು ಸಂಸ್ಕೃತಿಗೆ ಕೊಡುತ್ತಿರುವ ಗೌರವದ ಸಂಕೇತ ಅದು. ನಾವು ಸಹ ಮೈಸೂರನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿ ಪರಿವರ್ತಿಸಬಹುದು. ಅಲ್ಲಿ ನಮ್ಮ ಮೈಸೂರು ಅರಸರ ಜನಪರವಾದ ಕೆಲಸವನ್ನು ತೋರಿಸುವ ನಾಟಕ, ನೃತ್ಯ ಪ್ರದರ್ಶನ ಪ್ರತಿ ದಿನ ನಡೆಯುವಂತೆ ವ್ಯವಸ್ಥೆ ಮಾಡಬಹುದು. ಹಾಗೆ ಮೈಸೂರು ಅರಸರ ಅಭಿವೃದ್ಧಿ ಕೆಲಸಗಳ ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡಬಹುದು. ಕರ್ನಾಟಕದ ಇತಿಹಾಸವನ್ನು ತಿಳಿಸುವ ಪ್ರದರ್ಶನದ ವ್ಯವಸ್ಥೆ ಮಾಡಬಹುದು.ಯಾವುದೇ ಪ್ರವಾಸಿಗ ಮೈಸೂರಿಗೆ ಬಂದರೆ ಕರ್ನಾಟಕದ ಇತಿಹಾಸ ಪರಂಪರೆ, ಸಾಹಿತ್ಯ ಎಲ್ಲವೂ ತಿಳಿಯುವಂತೆ ಮಾಡಬಹುದು. ಆಗ ಮೈಸೂರು ನಿಜವಾದ ಅರ್ಥದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗುತ್ತದೆ. ಐಟಿ ಬಿಟಿ ಕಂಪೆನಿಗಳನ್ನು ಪ್ರಾರಂಬಿಸುವುದಕ್ಕಿಂತ ಇದು ಹೆಚ್ಚು ಮಹತ್ವದ್ದು ಎಂದು ನಾನು ನಂಬಿದ್ದೇನೆ. ಆದರೆ ಅಧಿಕಾರಸ್ಥರಿಗೆ ಈ ಮಾತುಗಳು ಅರ್ಥವಾಗುವುದು ಕಷ್ಟ.
ಈಗ ಈ ಲೇಖನದ ಪ್ರಾರಂಭಿದಲ್ಲಿ ಎತ್ತಿದ ಪ್ರಶ್ನೆಗಳು. ಕನ್ನಡದ ಸುದ್ದಿ ವಾಹಿನಿಗಳು ಮಹಾರಾಜರ ಕುಟುಂಬದ ಮದುವೆಯ ನೇರ ಪ್ರಸಾರ ಸರಿಯೇ ಎಂಬುದು. ಜನ ತಂತ್ರವಾದಿಗಳ ಈ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟವಲ್ಲ. ಕರ್ನಾಟಕದ ಜನರಿಗೆ ಈಗಲೂ ಮೈಸೂರು ಅರಸರ ಬಗ್ಗೆ ಗೌರವಾದರಗಳಿವೆ. ಹಳೆ ಮೈಸೂರು ಪ್ರದೇಶದಲ್ಲಿ ಈಗಲೂ ಸಾಮಾನ್ಯ ಜನರ ಮನೆಗಳಲ್ಲಿ ಮೈಸೂರು ಅರಸರ ಫೋಟೋಗಳನ್ನು ಇಟ್ಟು ಪೂಜಿಸಲಾಗುತ್ತದೆ.  ಮೈಸೂರು ಅರಸರು ಎಂದರೆ ಆವರಿಗೆ ಈಗಲೂ ಅರಸರೇ.  ಇಂಥ ಸಾಮಾನ್ಯ ಜನರಿಗೆ ಮೈಸೂರು ಅರಸು ಮನೆತನದ ಮದುವೆ ಹೇಗಿರುತ್ತದೆ ಎಂಬ ಕುತೂಹಲ ಇರುವುದು ಸಹಜ. ಅವರ ಈ ಕೂತೂಹಲವನ್ನು ತಣಿಸುವ ಕೆಲಸವನ್ನು ವಾಹಿನಿಗಳು ಮಾಡಿವೆ. ಮಾಡುತ್ತಿವೆ. ಆದ್ದರಿಂದ ಇದನ್ನೆಲ್ಲ ವೈಚಾರಿಕ ದೃಷ್ಟಿಯಿಂದ ನೋಡುವುದು ಸಾಧ್ಯವಿಲ್ಲ. ಜನತಂತ್ರ ವ್ಯವಸ್ಚ್ಥೆಯಲ್ಲಿ ರಾಜರಿಗೆ ಸ್ಥಾನ ಇಲ್ಲ. ಹಾಗಂತ ರಾಜ ಸತ್ತೆಯ ಇತಿಹಾಸವನ್ನು ನಾವು ತಿರಸ್ಕರಿಸುವುದು ಸಾಧ್ಯವಿಲ್ಲ. ರಾಜಸತ್ತೆಯಲ್ಲಿ ಒಳ್ಳೆಯ ಕೆಲಸ ಆಗಿದ್ದರೆ ಅದನ್ನು ನಾವು ನೆನಪು ಮಾಡಿಕೊಳ್ಳಬೇಕು. ರಾಜರೆಲ್ಲ ಅಯೋಗ್ಯರು ಎಂಬ ತೀರ್ಮಾನಕ್ಕೆ ಬರುವುದು ಮೂರ್ಖತನ..

ಒಟ್ಟಾರೆಯಾಗಿ ಇತಿಹಾಸವನ್ನು ತಿರಸ್ಕರಿಸುವವನು ವರ್ತಮಾನವನ್ನು ಅರ್ಥ ಮಾಡಿಕೊಳ್ಳಲಾರ, ಜೊತೆಗೆ ಇತಿಹಾಸವನ್ನು ಇತಿಹಾಸವಾಗಿ ನೋಡುವ ಮನಸ್ಥಿತಿಯೂ ಬೇಕು.

 

Tuesday, June 21, 2016

ಇದೆಲ್ಲ ನಡೆಯಬಾರದಿತ್ತು. ಆದರೂ ನಡೆದುಹೋಗಿದೆ,


ಇದೆಲ್ಲ ನಡೆಯಬಾರದಿತ್ತು. ಆದರೂ ನಡೆದುಹೋಗಿದೆ, ನಡೆಯುತ್ತಿದೆ. ಅಧಿಕಾರ ರಾಜಕಾರಣ ಜನತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೂರಿ ಆಗಿದೆ. ನಮ್ಮ ಜನ ಪ್ರತಿನಿಧಿಗಳು ಅಧಿಕಾರ ತಮ್ಮ ಖಾಸಗಿ ಆಸ್ತಿ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದಾರೆ. ಅಧಿಕಾರ ಕೈತಪ್ಪಿದಾಗ ತಮ್ಮ ಹಿಂಬಾಲಕರನ್ನು ಬಿಟ್ಟು ಸಾರ್ವಜನಿಕ ಆಸ್ತಿಯನ್ನು ನಾಶ ಪಡಿಸುತ್ತಿದ್ದಾರೆ. ಜನರನ್ನು ಭಾವನಾತ್ಮಕವಾಗಿ ಸೆಳೆಯುವುದಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ. ತಮಗೆ ತಮ್ಮ ಜಾತಿಗೆ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹೇಳುವ ಮೂಲಕ ತಮ್ಮ ಜಾತಿ ಮತ್ತು ಸಮುದಾಯದ ಜನರನ್ನು ಎತ್ತಿ ಕಟ್ಟಲು ಯತ್ನಿಸುತ್ತಿದ್ದಾರೆ.
ಜನತಂತ್ರ ವ್ಯವಸ್ಥೆಯನ್ನು ನಂಬುವವರು ಈ ವ್ಯವಸ್ಥೆ ದೇಶದಲ್ಲಿ ಬಲವಾಗಿ ಬೇರೂರಬೇಕು ಎಂದುಕೊಂಡವರು ಮೌನವಾಗಿ ಇದನ್ನೆಲ್ಲ ನೋಡುತ್ತಿದ್ದಾರೆ.
ಅಧಿಕಾರ ಯಾರೊಬ್ಬನ ಮನೆ ಆಸ್ತಿ ಅಲ್ಲ. ಜನತಂತ್ರ ವ್ಯವಸ್ಥೆಯಲ್ಲಿ ಅಧಿಕಾರ ಜನರ ಕೊಡುಗೆ. ಜನ ನೀಡಿದ ತೀರ್ಪಿನಂತೆ ನಡೆದುಕೊಳ್ಳುವುದು ಜನ ಪ್ರತಿನಿಧಿಗಳ ಕರ್ತವ್ಯ.. ಆದರೆ ಜನತಂತ್ರದ ಗಂಧ ಗಾಳಿ ಇಲ್ಲದವರು, ಜನ ಪ್ರತಿನಿಧಿಗಳಾದರೆ ಇದೆಲ್ಲ ನಡೆದು ಬಿಡುತ್ತದೆ.ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವುದು ಇದೇ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳ ನಂತರ ತಮ್ಮ ಸಂಪುಟವನ್ನು ಪುನಾ ರಚನೆ ಮಾಡುವ ನಿರ್ಧಾರ ಕೈಗೊಂಡರು. ೧೪ ಸಚಿವರನ್ನು ಕೈ ಬಿಟ್ಟು ಹೊಸದಾಗಿ ೧೩ ಜನರನ್ನು ಸೇರಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಇದು ಅವರ ಪರಮಾಧಿಕಾರವಾಗಿತ್ತು.
ಆದರೆ ಸಂಪುಟ ಪುನಾರಚನೆ ಅಂತಹ ಸುಲಭದ ಕೆಲಸವಾಗಿರಲಿಲ್ಲ. ಪಕ್ಷದ ಹಲವು ನಾಯಕರು ಇದಕ್ಕೆ ಅಡ್ಡಗಾಲು ಹಾಕಿದರು. ತಮ್ಮ ತಮ್ಮ ಬೆಂಬಲಿಗರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲು ಯತ್ನ ನಡೆಸಿದರು. ಪಕ್ಷದ ವರಿಷ್ಠರ ಮೇಲೆ ಒತ್ತದ ಹಾಕಿದರು. ಮೂರು ದಿನಗಳ ಕಾಲ ದೆಹಲಿಯಲ್ಲಿ ನಡೆದಿದ್ದು ನಾಟಕವೇ. ಸಂಪುಟದಿಂದ ಬಿಡುವವರು ಮತ್ತೆ ತೆಗೆದುಕೊಳ್ಳುವವರ ಪಟ್ಟಿಯನ್ನು ಮುಖ್ಯಮಂತ್ರಿಗಳು ಒಯ್ದಿದ್ದರು. ಆದರೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಎಲ್ಲರ ಜೊತೆ ಮಾತನಾಡಿ ಒಮ್ಮತದ ಪಟ್ಟಿಯನ್ನು ಸಿದ್ದಪಡಿಸುವಂತೆ ಸೂಚಿಸಿ ಬಿಟ್ಟರು. ಹೀಗಾಗಿ ಮುಖ್ಯಮಂತ್ರಿಗಳು ಲೋಕಸಭೆಯ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ರಾಜ್ಯದ ಉಸ್ತುವಾರಿ ದಿಗ್ವಿಜಯ್ ಸಿಂಗ್ ಮತ್ತು ಕರ್ನಾಟಕದ ಪ್ರದೇಶ 
ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಗೄಹ ಸಚಿವ ಡಾ. ಪರಮೇಶ್ವರ್ ಜೊತೆ ಇನ್ನೊಂದು ಸುತ್ತು ಮಾತುಕತೆ ನಡೆಸಬೇಕಾಯಿತು.
ಆಗ ಆನ್ನಿಸಿದ್ದು ಕಾಂಗ್ರೆಸ್ ತನ್ನ ಮೂಲಬೂತ ಗುಣಧರ್ಮದಿಂದ ಹೊರಕ್ಕೆ ಬಂದಿಲ್ಲ ಎಂಬುದೇ. ಯಾವುದೇ ರಾಜ್ಯ ಮಟ್ಟದ ನಾಯಕರು ಒಂದು ಹಂತವನ್ನು ಮೀರಿ ಬೆಳೆಯದಂತೆ ತಡೆಯುವ ಕಾಂಗ್ರೆಸ್ ವರಿಷ್ಠರು ಅದೇ ದಾರಿಯನ್ನು ಈಗಲೂ ಅನುಸರಿಸುತ್ತಿದ್ದಾರೆ ಎಂದು ಅನ್ನಿಸಿತ್ತು. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಎಲ್ಲವೂ ಬದಲಾಗಿತ್ತು.  ಕಾಂಗ್ರೆಸ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಿದ್ದರಾಮಯ್ಯನವರಿಗೆ ಸಂಪುಟ ವಿಸ್ತರಣೆಯ ಸಂಪೂರ್ಣ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲು ತೀರ್ಮಾನಿಸಿ ಬಿಟ್ಟಿದ್ದರು. ಕಾಂಗ್ರೆಸ್ ಮಟ್ಟಿಗೆ ಇದು ಮಹತ್ವದ ಬದಲಾವಣೆ ಆಗಿತ್ತು. ಮಗುವನ್ನು ಚಿವುಟಿ ತೊಟ್ಟಿಲು ತೂಗಿವ ಕಾಂಗ್ರೆಸ್ ವರುಷ್ಷರು ಬದಲಾಗಿದ್ದರು. ಪ್ರಾಯಶಃ ಇದು ಅವರಿಗೆ ಅನಿವಾರ್ಯವೂ ಆಗಿತ್ತು. ಯಾಕೆಂದರೆ ಸಿದ್ದರಾಮಯ್ಯ ಬಗ್ಗಿ ನಿಲ್ಲುವ ಮನಸ್ಥಿತಿಯವರಲ್ಲ ಎಂಬ ಅರಿವೂ ಪಕ್ಷದ ವರಿಷ್ಠರಿಗೆ ಇತ್ತು. ದೇಶದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿರುವ ಇನ್ನೊಂದು ರಾಜ್ಯವನ್ನು ಕಳೆದುಕೊಳ್ಳಲು ಪಕ್ಷದ ವರಿಷ್ಠರು ಸಿದ್ದರಿರಲಿಲ್ಲ. ಹೀಗಾಗಿ ಅವರು ಒಂದು ಅರ್ಥದಲ್ಲಿ ಸಿದ್ದರಾಮಯ್ಯನವರಿಗೆ ತಲೆ ಬಾಗಲೇಬೇಕಾಯಿತು. ಸಿದ್ದರಾಮಯ್ಯ ಹಿಡಿದುಕೊಂಡು ಬಂದಿದ್ದ ಪಟ್ಟಿಗೆ ಒಪ್ಪಿಗೆ ನೀಡಲೇಬೇಕಾಯಿತು. ಇಲ್ಲದಿದ್ದರೆ ಮುಖ್ಯಮಂತ್ರಿ ರೆಬಲ್ ಆಗುವ ಅಪಾಯವಿತ್ತು.
ಇದು ಮುಖ್ಯಮಂತ್ರಿಗಳ ಜಯ ಎಂದು ವಿಶ್ಲೇಸಿಸಬಹುದು, ಆದರೆ ಇದಷ್ಟೇ ಅಲ್ಲ. ಕಾಂಗ್ರೆಸ್ ವರಿಷ್ಠರು ಬದಲಾಗಿದ್ದರು ಎಂಬುದು ಬಹಳ ಮುಖ್ಯ. ಪ್ರಾಯಶಃ ಕಾಂಗ್ರೆಸ್ ಹಿರಿಯ ನಾಯಕರು ಇದನ್ನು ನಿರೀಕ್ಷಿಸಿರಲಿಲ್ಲ. ಸಂಪುಟ ಪುನಾ ರಚನೆಯ ಎಳೆದಾಟ ಇನ್ನಷ್ಟು ದಿನ ಮುಂದುವರಿಯುತ್ತದೆ, ಮುಖ್ಯಮಂತ್ರಿಗಳು ಇನ್ನಷ್ಟು ಮೆತ್ತಗಾಗುತ್ತಾರೆ ಎಂದು ಈ ನಾಯಕರು ನಿರೀಕ್ಷಿಸಿದ್ದರು. ಆದರೆ ಹಾಗಾಗಲಿಲ್ಲ. ಮುಖ್ಯಮಂತ್ರಿಗಳು ಪಕ್ಷದ ವರಿಷ್ಟರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಆಶೀರ್ವಾದ ಪಡೆದು ಬೆಂಗಳೂರಿಗೆ ಹಿಂತಿರುಗಿದರು.
ಕಾಂಗ್ರೆಸ್ ಪಕ್ಷದ ಪ್ರಭಾವಿ ಮತ್ತು ಶಕ್ತಿಯುತ ನಾಯಕರಾಗಿ ಬೆಳೆದಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿಗೂ ಬೆಲೆ ಸಿಗಲಿಲ್ಲ. ತಮ್ಮ ಇಬ್ಬರು ಬೆಂಬಲಿಗ ಸಚಿವರಾದ ಖಮರುಲ್ ಇಸ್ಲಾಂ ಮತ್ತು ಬಾಬುರಾವ್ ಚಿಂಚನಸೂರ್ ಅವರನ್ನು ಉಳಿಸಿಕೊಳ್ಳುವುದು ಖರ್ಗೆ ಅವರಿಗೆ ಸಾಧ್ಯವಾಗಲಿಲ್ಲ. ಜೊತೆಗೆ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವರನ್ನಾಗಿ ಮಾಡುವ ಮೂಲಕ ಹೊಸ ರಾಜಕೀಯ ದಾಳವನ್ನು ಮುಖ್ಯಮಂತ್ರಿಗಳು ಉರುಳಿಸಿಬಿಟ್ಟಿದ್ದರು. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಖರ್ಗೆ ಅವರನ್ನು ತಣ್ಣಗೆ ಮಾಡುವ ದಾಳ ಇದಾಗಿತ್ತು. ಖರ್ಗೆ ಅವರ ವಿರುದ್ಧ ಅವರ ಬೆಂಬಲಿಗರನ್ನೇ ಎತ್ತಿ ಕಟ್ಟುವ ದಾಳ.. ಈ ಯೋಜನಾಬದ್ಧ ಕೆಲಸದಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು.. ಖರ್ಗೆ ಕರ್ನಾಟಕದ ರಾಜಕಾರಣದಲ್ಲಿ ಅತಂತ್ರರಾದರು.
ಮಗನನ್ನು ಮಂತ್ರಿ ಮಾಡಬೇಡಿ ಎಂದು ಹೇಳುವ ಸ್ಥಿತಿಯಲ್ಲೂ ಖರ್ಗೆ ಇರಲಿಲ್ಲ. ಬೆಂಬಲಿಗರನ್ನು ಬಿಟ್ಟು ಮಗನನ್ನು ಸಂಪುಟಕ್ಕೆ ತೆಗೆದುಕೊಂಡರೆ ಅದರ ಪರಿಣಾಮ ಆಗುವುದು ತಮ್ಮ ಮೇಲೆ ಎಂಬ ಅರಿವು ಖರ್ಗೆ ಅವರಿಗಿದ್ದರೂ ಅವರು ಅಸಹಾಯಕರಾಗಿ ಬಿಟ್ಟಿದ್ದರು. ಯಾಕೆಂದರೆ ಸೋನಿಯಾ ಮತ್ತು ರಾಹುಲ್ ಗಾಂಧಿ ಪ್ರಿಯಾಂಕ್ ಖರ್ಗೆ ಅವರು ಸಂಪುಟಕ್ಕೆ ಸೇರಲು ಒಪ್ಪಿಗೆ ನೀಡಿಬಿಟ್ಟಿದ್ದರು. ನೆಹರೂ  ಕುಟುಂಬದ ನಿಷ್ಟರಾಗಿರುವ ಖರ್ಗೆ ಈ ತೀರ್ಮಾನವನ್ನು ವಿರೋಧಿಸುವ ಧಾರ್ಷ್ಯವನ್ನು ಪ್ರದರ್ಶಿಸಲಿಲ್ಲ...ಇದರಿಂದಾಗಿ ಖರ್ಗೆ ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಯಿತು.. ಸಂಪುಟದಿಂದ ಹೊರಕ್ಕೆ ಹೋದ ಬಹುತೇಕ ನಾಯಕರು ಖರ್ಗೆ ಅವರನ್ನೇ ಟಾರ್ಗೆಟ್ ಮಾಡಿದರು.. ತಮ್ಮ ಮಗನನ್ನು ಸಚಿವನನ್ನಾಗಿ ಮಾಡುವುದಕ್ಕಾಗಿ ನಮ್ಮನ್ನು ಬಲಿ ಕೊಟ್ಟರು ಎಂದು ದೂರಿದರು... ಸಂಪುಟ ಪುನಾರಚನೆಯಿಂದ ನೊಂದವರೆಲ್ಲರಿಗೆ ಟಾರ್ಗೆಟ್ ಆದವರು ಖರ್ಗೆ..
ಈಗ ಈ ಪುನಾರಚನೆಯ ನಂತರ ಘಟನೆಯನ್ನು ಗಮನಿಸಿ. ಸಚಿವ ಸಂಪುಟದಿಂದ ಹೊರಕ್ಕೆ ಹೋದವರ ಬೆಂಬಲಿಗರು ಪ್ರತಿಭಟನೆ ಮಾಡಿದರು. ಬಸ್ ಗೆ ಬೆಂಕಿ ಹಚ್ಚಿದರು.. ಕಲ್ಲು ತೂರಿದರು. ತಮ್ಮ ಬದುಕೇ ಮುಗಿದು ಹೋಯಿತು ಎಂದು ಅಲವತ್ತುಗೊಂಡರು. ಸಚಿವ ಸ್ಥಾನ ತಮ್ಮ ಜನ್ಮ ಸಿದ್ಧ ಹಕ್ಕು ಎಂಬಂತೆ ವರ್ತಿಸತೊಡಗಿದರು.
ವಯೋವೃದ್ಧ ನಾಯಕ ಕಮರುಲ್ ಇಸ್ಲಾಂ ತಮ್ಮನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿರುವುದು ಕಾಂಗ್ರೆಸ್ ಮುಕ್ತ ಭಾರತದ ಮುನ್ಸೂಚನೆ ಎಂದು ಹೇಳಿದರು. ತಾವೇ ಕಾಂಗ್ರೆಸ್ ಎಂಬಂತೆ ಅವರು ಮಾತನಾಡಿದ್ದು ಹಾಸ್ಯಾಸ್ಪದವಾಗಿ ಕಾಣುತ್ತಿತ್ತು. ಇನ್ನೊಬ್ಬ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ತಮ್ಮ ಮತ್ತು ಮುಖ್ಯಮಂತ್ರಿಗಳ ನಡುವಿನ ಸಂಬಂಧವನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದರು. ಸಿದ್ದರಾಮಯ್ಯ ಅಸಮರ್ಥ ನಾಯಕ ಎಂದು ಅಪ್ಪಣೆ ಕೊಡಿಸಿದರು...
ಖಮರುಲ್ ಇಸ್ಮಾಂ ಅವರಿಗೆ ಮಾತನಾದುವುದು ಕಷ್ಟ.. ನಡೆಯುವಾಗಲೂ ಬೇರೆಯವರ ಹೆಗಲು ಬೇಕು. ವಯೋ ಸಹಜವಾದ ರೋಗಗಳು ಅವರನ್ನು ಆವರಿಸಿವೆ. ಶ್ರೀನಿವಾಸ್ ಪ್ರಸಾದ್ ಅವರಿಗೂ ಆರೋಗ್ಯ ಸರಿಯಿಲ್ಲ.. ಮೂತ್ರಕೋಶದ ಕಸಿ ಮಾಡಿಸಿಕೊಂಡಿದ್ದಾರೆ.. ಅಂಬರೀಷ್ ಅವರ ಆರೋಗ್ಯ ಕೂಡ ಸಂಪೂರ್ಣವಾಗಿ ಸರಿಯಿಲ್ಲ. ಜೊತೆಗೆ ಜವಾಬ್ದಾರಿ ಇಲ್ಲದ ನಾಯಕ ಅವರು. ಶಾಮನೂರು ಶಿವಶಂಕರಪ್ಪ ಅವರು ಎಂಬತ್ತರ ಗಡಿ ದಾಟಿದ್ದಾರೆ. ಆದರೆ ಇವರಲ್ಲಿ ಯಾರೂ ಸಹ ಸಂಪುಟದಿಂದ ಹೊರಕ್ಕೆ ಬರುವುದಕ್ಕೆ ಸಿದ್ದರಿಲ್ಲ.. ಅವರ ಪ್ರಕಾರ ತಮ್ಮ ತಮ್ಮ ಖಾತೆಗಳನ್ನು ಇವರೆಲ್ಲ ತುಂಬಾ ಚೆನ್ನಾಗಿಯೇ ನಿರ್ವಹಿಸಿದ್ದಾರೆ..
ಇವರೆಲ್ಲ ಅಧಿಕಾರ ತಮ್ಮ ಜನ್ಮ ಸಿದ್ಧ ಹ,ಕ್ಕು ಎಂದು ನಂಬಿಕೊಂಡಿರುವಂತಿದೆ.. ತಾವು ಹುಟ್ಟಿರುವುದೇ ಅಧಿಕಾರ ಅನುಭವಿಸುವುದಕ್ಕಾಗಿ ಎಂಬ ಭ್ರಮೆಯಲ್ಲಿ ಇವರೆಲ್ಲ ಇದ್ದಂತಿದೆ. ಹೀಗೆ ಭ್ರಮೆಯಲ್ಲಿ ಬದುಕಲು ಇವರಿಗೆ ಹಕ್ಕಿದೆ. ಆದರೆ ಸಾರ್ವಜನಿಕ ಆಸ್ತಿಯನ್ನು ನಾಶ ಪಡಿಸುವ ಅಧಿಕಾರವನ್ನು ಇವರ ಬೆಂಬಲಿಗರಿಗೆ ನೀಡಿದವರು ಯಾರು ? ಬಸ್ ಗೆ ಬೆಂಕಿ ಹಚ್ಚುವುದು ಅಪರಾಧ ಎಂಬ ಅರಿವು ಇವರಿಗೆ ಬೇಡವೆ ? ತಮ್ಮ ತಮ್ಮ ಬೆಂಬಲಿಗರನ್ನೇ ನಿಯಂತ್ರಣದಲ್ಲಿ ಇಡಲಾರದ ಇವರನ್ನು ನಾಯಕರೆಂದು ಒಪ್ಪಿಕೊಳ್ಳುವುದು ಹೇಗೆ ?
ಶಾಮನೂರು ಶಿವಶಂಕರಪ್ಪ ಅವರ ಮಾತನ್ನು ಕೇಳಿಸಿಕೊಳ್ಳಿ. ನಾನು ಸಚಿವನಾಗಿ ಇನ್ನೊವಾ ಕಾರ್ ನಲ್ಲಿ ಓಡಾಡುತ್ತಿದ್ದೆ. ಇನ್ನು ಮುಂದೆ ನನ್ನ ಬೇಂಜ್ ಕಾರಿನಲ್ಲಿ ಓಡಾಡುತ್ತೇನೆ.. ಇದು ದುರಹಂಕಾರದ ಮಾತಲ್ಲವೆ ? ನಿಮಗೆ ಬೆಂಜ್ ಕಾರಿನಲ್ಲಿ ಓಡಾಡುವಷ್ಟು ಹಣ ಸಂಪತ್ತು ಎಲ್ಲ ಇದೆ ನಿಜ. ಆದರೆ ಅಧಿಕಾರ ಕಳೆದುಕೊಂಡ ಸಂದರ್ಭದಲ್ಲಿ ಹೀಗೆ ಮಾತನಾಡುವುದು ಸೌಜನ್ಯವಲ್ಲ ಎಂಬ ತಿಳುವಳಿಕೆ ನಿಮಗೆ ಇರಬೇಕಲ್ಲವೆ ?
ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಜನತಂತ್ರ ವ್ಯವಸ್ಥೆಯ ಬಗ್ಗೆ ಸ್ಪಷ್ಟ ತಿಳುವಳಿಕೆ ಇರಬೇಕು. ಜನ ಪ್ರತಿನಿಧಿಯಾಗಿ ಕೆಲಸ ಮಾಡುವುದು ಜನರ ನಂಬಿಕೆಯ ಮೇಲೆ. ಜನ ನೀಡಿದ ಅಧಿಕಾರ ಅವರಿಗೆ ಮೀಸಲು ಎಂಬ ತಿಳುವಳಿಕೆ ಇರಬೇಕು.. ಒಂದಲ್ಲ ಒಂದು ದಿನ ಅಧಿಕಾರವನ್ನು ಬಿಡಬೇಕಾಗುತ್ತದೆ ಎಂಬುದು ಅವರ ಮನಸ್ಸಿನಲ್ಲಿ ಸದಾ ಜಾಗೃತವಾಗಿರಬೇಕು, ಹಾಗಿದ್ದಾಗ ಮಾತ್ರ ಅಧಿಕಾರ ಬಿಡುವಾಗ ನೋವಾಗುವುದಿಲ್ಲ...ಆದರೆ ಇವರೆಲ್ಲ ಅಧಿಕಾರ ಎನ್ನುವುದು ತಮ್ಮ ಕರ್ತವ್ಯ ಎನ್ನುವುದಕ್ಕೆ ಬದಲಾಗಿ ಇದು ತಮ್ಮ ಹಕ್ಕು ಎಂದುಕೊಂಡಂತಿದೆ. ಇವರ ಬೆಂಬಲಿಗರು ಮತ್ತು ಅಭಿಮಾನಿಗಳೂ ಸಹ ಇದೇ ಮನಸ್ಥಿತಿಯವರು..
ಚಿತ್ರ ನಟ ಅಂಬರೀಷ್ ಅವರನ್ನು ಸಂಪುಟದಿಂದ ಕೈಬಿಟ್ಟ ವಿಚಾರವನ್ನು ನೋಡಿ. ಈ ಬಗ್ಗೆ ಅವರ ಅಭಿಮಾನಿಗಳು ಹುಚ್ಚು ಹುಚ್ಚಾಗಿ ಪ್ರತಿಕ್ರಿಯೆ ನೀಡಿದ್ದನ್ನು ಕ್ಷಮಿಸಿಬಿಡಬಹುದು. ಯಾಕೆಂದರೆ ಅವರೆಲ್ಲ ಅಭಿಮಾನಿಗಳು. ಅಭಿಮಾನ ಎನ್ನುವುದು ನಮ್ಮನ್ನು ವಿವೇಚನಾ ಹೀನರನ್ನಾಗಿ ಮಾಡಿ ಬಿಡುತ್ತದೆ. ಯಾರಿಗೆ ವಿವೇಚನಾ ಶಕ್ತಿ ಇರುತ್ತದೆಯೋ ಅವರು ಅಭಿಮಾನಿಗಳಾಗುವುದು ಸಾಧ್ಯವಿಲ್ಲ...ಆದರೆ ಕನ್ನಡ ಚಿತ್ರರಂಗದ ಪ್ರತಿಕ್ರಿಯೆ ಮಾತ್ರ ಆಶ್ಚರ್ಯವನ್ನು ಉಂಟು ಮಾಡುತ್ತದೆ.
ಅಂಬರೀಷ್ ಅವರನ್ನು ಸಂಪುಟದಿಂದ ಕೈ ಬಿಟ್ಟ ತಕ್ಷಣ ಕನ್ನಡ ಚಿತ್ರರಂಗದ ನಾಯಕರು ಇದು ತಮ್ಮ ವೈಯಕ್ತಿಕ ವಿಚಾರ ಎಂಬಂತೆ ಮಾತನಾಡಲು ಪ್ರಾರಂಭಿಸುತ್ತಾರೆ. ಯಾವುದೇ ಒಂದು ಸರ್ಕಾರದಲ್ಲಿ ಯಾರು ಇರಬೇಕು ಯಾರು ಇರಬಾರದು ಎಂಬುದನ್ನು ಅಧಿಕಾರಕ್ಕೆ ಬಂದ ಪಕ್ಷ ನಿರ್ಧರಿಸುತ್ತದೆ. ಶಾಸಕಾಂಗ ಪಕ್ಷದ ನಾಯಕರು ತಮ್ಮ ಸಂಪುಟದಲ್ಲಿ ಯಾರನ್ನು ಇಟ್ಟುಕೊಳ್ಳಬೇಕು ಎಂದು ನಿರ್ಧರಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರವನ್ನು ಪ್ರಶ್ನಿಸಲು ಇವರು ಯಾರು ?
ಅಂಬರೀಶ್ ಸಚಿವರಾಗಿದ್ದು ಕನ್ನಡ ಚಿತ್ರ ರಂಗದ ಪ್ರತಿನಿಧಿಯಾಗಿ ಅಲ್ಲ. ಅವರೊಬ್ಬ ಸಿನಿಮಾ ನಟ ಕಂ ಕಾಂಗ್ರೆಸ್ ಪಕ್ಷದ ರಾಜಕಾರಣಿ. ಅವರು ಶಾಸಕ ಮತ್ತು ಸಚಿವರಾಗಿದ್ದು ಚಿತ್ರ ನಟ ಎಂದಲ್ಲ. ಅವರು ನಿರ್ವಹಿಸಿದ ವಸತಿ ಖಾತೆ ಕೂಡ ಚಿತ್ರ ರಂಗಕ್ಕೆ ಸಂಬಂಧಿಸಿದ್ದಲ್ಲ...ಹೀಗಿರುವಾಗ ಚಿತ್ರರಂಗಕ್ಕೆ ಏನು ಸಂಬಂಧ ? ಅಂಬರೀಶ್ ಅವರನ್ನು ಸಂಪುಟದಲ್ಲಿ ಮುಂದುವರಿಸದಿದ್ದರೆ ಚಿತ್ರ ರಂಗದ ಬಂದ್ ಮಾಡ್ತೀವಿ ಎಂದು ಹೇಳುತ್ತಿರುವ ಇವರಿಗೆ ಜನ ತಂತ್ರ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಇಲ್ಲವೆ...?
ಅಂಬರೀಶ್ ಸಚಿವರಾಗಿ ಮುಂದುವರಿಯಬೇಕೆ ಬೇಡವೇ ಎಂದು ನಿರ್ಧರಿಸುವುದು ಅವರು ಸಚಿವರಾಗಿ ಹೇಗೆ ಕೆಲಸ ಮಾಡಿದ್ದಾರೆ ಎನ್ನುವುದರ ಮೇಲೆ. ಅವರು ಚಿತ್ರರಂಗಕ್ಕೆ ಏನು ಮಾಡಿದ್ದಾರೆ ಎಂಬುದರ ಮೇಲಲ್ಲ. ಅವರು ಚಿತ್ರ ನಟರಾಗಿ ನೂರಾರು ಚಿತ್ರಗಳಲ್ಲಿ ನಟಿಸಿದ್ದು, ಸಾವಿರಾರು ಖಳನಾಯಕರನ್ನು ತೆರೆಯ ಮೇಲೆ ಬಡಿದಿದ್ದು ಅವರು ಸಂಪುಟದಲ್ಲಿ ಮುಂದುವರಿಯುವುದಕ್ಕೆ ಅರ್ಹತೆಯಾಗಲಾರದು. ಅವರು ವಸತಿ ಸಚಿವರಾಗಿ ಹೇಗೆ ಕೆಲಸ ಮಾಡಿದರು ಎಂಬುದು ಮಾತ್ರ ಅವರ ಸಂಪುಟದಲ್ಲಿ ಮುಂದವರಿಯುವುದಕ್ಕೆ ಅಥವಾ ಮುಂದುವರಿಯದಿರುವುದಕ್ಕೆ ಕಾರಣವಾಗಬೇಕು. ಇದೆಲ್ಲ ನಮ್ಮ ಕನ್ನಡ ಚಿತ್ರ ರಂಗದವರಿಗೆ ತಿಳಿದಿರಬೇಕಿತ್ತು. ಪಾಪ ಬಿಡಿ.

ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅಂಬರೀಷ್ ತಾವು ಬೇಕಾದಗಲೆಲ್ಲ ಬಿಡುವುದಕ್ಕೆ ಚಪ್ಪಲಿ ಅಲ್ಲ ಅಂದರು. ಅವರು ತಮ್ಮ ಸ್ವಾಭಿಮಾನದ ಪ್ರಶ್ನೆ ಎತ್ತಿದರು. ಇದೆಲ್ಲ ಸರಿ. ಆದರೆ ವಸತಿ ಸಚಿವರಾಗಿ ಮೂರು ವರ್ಷಗಳ ಅವಧಿಯಲ್ಲಿ ಮಾಡಿದ್ದೇನು ಎಂಬುದನ್ನು ಹೇಳಲಿಲ್ಲ. ತಾವು ಅಸಮರ್ಥರಲ್ಲ ಎಂಬುದನ್ನು ಸಾಬೀತು ಪಡಿಸಲು ಯತ್ನಿಸಲಿಲ್ಲ.  ಸಿನಿಮಾ ನಾಯಕನಂತೆ ಡೈಲಾಗ್ ಹೊಡೆದರೆ ಹೊರತೂ ಒಬ್ಬ ರಾಜಕೀಯ ನಾಯಕನಂತೆ ಜನ ಪ್ರತಿನಿಧಿಯಂತೆ ವರ್ತಿಸಲಿಲ್ಲ. ಇದರ ಅರ್ಥ ಒಬ್ಬ ಸಿನಿಮಾ ನಾಯಕನಿಗೂ ರಾಜಕೀಯ ನಾಯಕನಿಗೂ ಇರಬೇಕಾದ ವ್ಯತ್ಯಾಸ ಅವರಿಗೆ ಅರ್ಥವಾಗಲೇ ಇಲ್ಲ. ಒಬ್ಬ ಸಿನಿಮಾ ನಾಯಕ ಜನ ನಾಯಕನಾಗಿ ಬದಲಾಗಲೇ ಇಲ್ಲ.
ಅಂಬರೀಶ್ ಅವರನ್ನು ಸಂಪುಟದಿಂದ ಬಿಟ್ಟ ತಕ್ಷಣ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾರ್ಯಪ್ರವೃತ್ತರಾಗುತ್ತಾರೆ. ಮಾಜಿ ಪ್ರಧಾನಿ ದೇವೇಗೌಡರು, ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಅಂಬರೀಶ್ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಾರೆ, ಅವರ್ವಿಗೆ ಸಾಂತ್ವನ ಹೇಳುತ್ತಾರೆ. ಹಾಗೆ ಶ್ರೀನಿವಾಸ್ ಪ್ರಸಾದ್ ಅವರ ಬಗ್ಗೆಯೂ ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ವಿಪರೀತ ಪ್ರೀತಿ ಹುಟ್ಟಿ ಬಿಡುತ್ತದೆ. ಪ್ರಸಾದ್ ಅವರನ್ನು ಭೇಟಿ ಮಾದಿ ಸಾಂತ್ವನ ಹೇಳುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅವರತ್ತ ಗಾಳ ಬೀಸುತ್ತಿರುವುದು ನಿಜ.
ಇಲ್ಲಿ ನಮ್ಮ ಜನತಂತ್ರ ವ್ಯವಸ್ಥೆ ಕುರಿತು ಕೇಳಲೇಬೇಕಾದ ಕೆಲವು ಪ್ರಶ್ನೆಗಳಿವೆ. ಜನತಂತ್ರ ವ್ಯವಸ್ಥೆಯ ಮುಖ್ಯ ಲಕ್ಷಣ ಎಂದರೆ ಅದು ರಾಜಸತ್ತೆಯ ವಿರೋಧ. ಹಾಗೆ ವ್ಯಕ್ತಿ ಪೂಜೆಗೆ ಇಲ್ಲಿ ಅವಕಾಶವಿಲ್ಲ. ಆದರೆ ನಮ್ಮ ಜನತಂತ್ರ ವ್ಯವಸ್ಥೆ ರಾಜಸತ್ತೆಯ ಪಳಯುಳಿಕೆಯಾಗಿಯೇ ಮುಂದುವರಿದಿದೆ. ಇಲ್ಲಿ ನಾಯಕರ ಅಭಿಮಾನಿಗಳಿದ್ದಾರೆ. ನಿಜವಾದ ಜನತಂತ್ರ ಪ್ರೇಮಿಗಳಿಲ್ಲ. ಅಧಿಕಾರ ರಾಜಕಾರಣದ ಎಲ್ಲ ಪಟ್ಟುಗಳನ್ನು ಬಳಸಿಕೊಂಡು ಅಧಿಕಾರವನ್ನು ಸದಾ ಅನುಭವಿಸುವ ಮನಸ್ಥಿತಿಯ ರಾಜಕಾರಣಿಗಳಿದ್ದಾರೆ. ರಾಜನೀತಿಜ್ನರಿಲ್ಲ..
ಜನತಂತ್ರ ವ್ಯವಸ್ಥೆಯ ಯಶಸ್ಸು ರಾಜಕೀಯ ಪಕ್ಷಗಳ ಮೇಲಿದೆ. ಒಂದು ರಾಜಕೀಯ ಪಕ್ಷ ಎಂದರೆ ಅದಕ್ಕೊಂದು ಸಿದ್ದಾಂತ ಇರಬೇಕು ಬದ್ಧತೆ ಇರಬೇಕು. ಒಂದು ರಾಜಕೀಯ ಪಕ್ಷಕ್ಕೂ ಇನ್ನೊಂದು ರಾಜಕೀಯ ಪಕ್ಷಕ್ಕೂ ಸೈದ್ದ್ಧಾಂತಿಕ ವ್ಯತ್ಯಾಸಗಳಿರಬೇಕು. ನೀತಿ ನಿರೂಪಣೆಯಲ್ಲಿ ವ್ಯತ್ಯಾಸ ಇರಬೇಕು. ನಮ್ಮಲ್ಲಿ ನಿಜವಾದ ಅರ್ಥದ ರಾಜಕೀಯ ಪಕ್ಷಗಳಿಲ್ಲ. ಇಲ್ಲಿರುವುದು ಬಾಲಬಡುಕ ರಾಜಕೀಯ ಗುಂಪುಗಳು. ಈ ಗುಂಪುಗಳಲ್ಲಿ ಇರುವ ಜನ ಅಂಗಿಯನ್ನು ಬದಲಿಸುವ ಹಾಗೆ ನಾಯಕರನ್ನು ಪಕ್ಷವನ್ನು ಬದಲಿಸುತ್ತಾರೆ. ಯಾಕೆಂದರೆ ಇವರೆಲ್ಲರ ರಾಜಕಾರಣಕ್ಕೆ ಅಧಿಕಾರವೇ ಗುರಿ. ಸಿದ್ಧಾಂತವಲ್ಲ.

ನನಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಎಲ್ಲ ಪಕ್ಷಗಳು ವ್ಯಕ್ತಿ ಮತ್ತು ಅಧಿಕಾರ ಕೇಂದ್ರಿತ ರಾಜಕಾರಣದಲ್ಲಿ ತೊಡಗಿವೆ. ಹೀಗಾಗಿ ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ, ದೇವೇಗೌಡ, ಯಡಿಯೂರಪ್ಪ ಕಾಣುತ್ತಾರೆ. ಅವರ ನೆರಳಿನ ಹಿಂದೆ ಎಲ್ಲೋ ರಾಜಕೀಯ ಪಕ್ಷಗಳು ಕಳೆದುಹೋಗಿವೆ. ಹೀಗಾಗಿ ಇಲ್ಲಿ ನಿಜವಾದ ಜನತಂತ್ರ ಕನಸು ಮಾತ್ರ....

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...