Sunday, February 12, 2017

ವಾಲೆಂಟೈನ್ ಮುನ್ನಾ ದಿನ ಪ್ರೀತಿ ಪ್ರೇಮವನ್ನು ನೆನೆದು.....!

ಮತ್ತೊಂದು ವಾಲೆಂಟೈನ್ ಡೆ ಬಂದಿದೆ. ಇದು ವಿಶ್ವ ಪ್ರೇಮಿಗಳ ದಿನ. ಈ ಬಗ್ಗೆ ವಿರೋಧವನ್ನು ವ್ಯಕ್ತಪಡಿಸುವವರೂ ಇದ್ದಾರೆ.ಪ್ರೇಮಿಗಳಿಗೂ ಒಂದು ದಿನ ಬೇಕಾ ಎಂದು ಪ್ರಶ್ನಿಸುವವರೂ ಇದ್ದಾರೆ. ವಾಲೆಂಟೈನ್ ಡೇ ವಿರೋಧಿಸಿ ಕೆಲವರು ರಸ್ತೆಗೆ ಇಳಿದಿದ್ದಾರೆ. ಪ್ರೇಮಿಗಳ ಮೇಲೆ ಹಲ್ಲೆಯೂ ನಡೆದಿದೆ. ಸಮಸ್ಯೆ ಎಂದರೆ ಇವರಲ್ಲಿ  ಯಾರಿಗೂ ಪ್ರೇಮ ಪ್ರೀತಿ ಎಂದರೇನು ಎಂಬುದು ಗೊತ್ತಿಲ್ಲ. ಹಾಗೆಂದ ಮಾತ್ರಕ್ಕೆ ನನಗೆ ಪ್ರೇಮಿ ಮತ್ತು ಪ್ರೀತಿ ಗೊತ್ತಿದೆ ಎಂದು ಹೇಳಲಾರೆ. ಯಾಕೆಂದರೆ ಗೊತ್ತಿದೆ ಎಂದ ತಕ್ಷಣ ತಿಳಿದುಕೊಳ್ಳುವ ಎಲ್ಲ ದಾರಿಗಳೂ ಮುಚ್ಚುತ್ತವೆ. ನಾನು ಪ್ರೇಮ ಮತ್ತು ಪ್ರೀತಿಯ ದಾರಿಯನ್ನು ಮುಚ್ಚಲಾರೆ.ಹೀಗಾಗಿ ನನಗೆ  ಪ್ರೀತಿ ಮತ್ತು ಪ್ರೇಮ ಗೊತ್ತಿದೆ ಎಂದುಕೊಳ್ಳುವುದಿಲ್ಲ.ಪ್ರೀತಿಯ ಗೊತ್ತು ಗುರಿ
ಇಲ್ಲದ ದಾರಿಯಲ್ಲಿ ನಾನೊಬ್ಬ ದಾರಿಹೋಕ,ಪಯಣಿಗ. ಈ  ಪಯಣ ಸಾಗುತ್ತಲೇ ಇರಬೇಕು.ಆಗ ಮಾತ್ರ ಪ್ರೀತಿ ಜೀವಂತವಾಗಿರುತ್ತದೆ.ಪ್ರೀತಿ ಪ್ರೇಮಗೊತ್ತಿದೆ ಎಂದ ತಕ್ಷಣ ಸಾಗುವ ದಾರಿ ಮುಚ್ಚಿಕೊಳ್ಳುತ್ತದೆ.ಪ್ರೀತಿ ಆ ಘಳಿಗೆಯಲ್ಲಿ ಸತ್ತು ಹೋಗುತ್ತದೆ.
ನಾನು ಯಾರು ಯಾರನ್ನು ಪ್ರೀತಿಸಿದೆ,ಪ್ರೇಮಿಸಿದೆ ?ಈ ಪ್ರಶ್ನೆಗಳಿಗೆ ಉತ್ತರ ಕೊಡುವುದು ಕಷ್ಟ.ಹಾಗೆ ನೋಡಿದರೆ ಇದು ಪ್ರಶ್ನೆಯೇ ಅಲ್ಲ. ನನ್ನನ್ನುಯಾರು ಯಾರು ಪ್ರೀತಿಸಿದರು ? ಯಾಕಾಗಿ ಪ್ರೀತಿಸಿದರು ಎಂಬುದು ಸರಿಯಾದ ಪ್ರಶ್ನೆ..ಏನೇ ಇರಲಿ ಪ್ರಶ್ನೆಗಳು ಇರುವುದು ಉತ್ತರ ಕಂಡುಕೊಳ್ಳುವುದಕ್ಕಾಗಿ... ನಮ್ಮನ್ನು  ನಾವು ತಿಳಿದುಕೊಳ್ಳುವುದಕ್ಕಾಗಿ.
ನಾನು ಮೊದಲು ಪ್ರೀತಿಸಿದ್ದು ಯಾರನ್ನು ಎಂದು  ಕೇಳಿಕೊಂಡರೂ ಉತ್ತರ ದೊರುಕುವುದಿಲ್ಲ.ಯಾಕೆಂದರೆ ನಾನು ಮೊದಲು ಯಾರನ್ನು ಇಷ್ಟ ಪಟ್ಟಿದ್ದೆನೋ ಅದು ಕೇವಲ ಇಷ್ಟವಾಗಿತ್ತೋ ಅಥವಾ ಪ್ರೀತಿಯಾಗಿತ್ತೋ ಎಂಬುದು ನನಗಿನ್ನೂ ತಿಳಿದಿಲ್ಲ.ಆದರೆ ನನ್ನ ಕಾಲೇಜು ದಿನಗಳಲ್ಲಿ  ಹಲವರ ಹಿಂದೆ ನಾನು ಸುತ್ತಿದ್ದು ನಿಜ.ಆದರೆ ಅವರಲ್ಲಿ  ಯಾರಿಗೂ ನಾನು ಪ್ರೀತಿಸುತ್ತೇನೆ ಎಂದು ಕೊನೆಯವರೆಗೂ ಹೇಳಿಯೇ ಇರಲಿಲ್ಲ.  ಆದರೆ ನಾನು ಇಷ್ಟಪಟ್ಟಿದ್ದ ಈ ಹುಡುಗಿಯರಲ್ಲಿ ಯಾರಿಗಾದರೂ ಮದುವೆಯಾದರೆ ಮಾತ್ರ  ನನ್ನ  ಹೃದಯದ ಮೂಲೆಯಲ್ಲಿ  ಸೆಳೆತ ಕಾಣಿಸಿಕೊಳ್ಳುತ್ತಿತ್ತು.  ಅವರಿಗೆ ಮದುವೆಯಾದಾಗ  ನನ್ನ ಒಳಗಿನ ಅನಾಥ ಭಾವ ಇನ್ನಷ್ಟು ಗಟ್ಟಿಯಾಗುತ್ತಿತ್ತು..  ಇದೆಲ್ಲ ಎಂತಹ ತಮಾಷೆ ಅನ್ನಿಸುತ್ತದೆ ನೋಡಿ. ನನ್ನ ಸಹಪಾಠಿಯಾಗಿದ್ದ  ಹುಡೂಗಿಯೊಬ್ಬಳು ತನ್ನ ಮದುವೆ ಆಮಂತ್ರಣ ಕೊಡಲು ಬಂದಾಗ ಒಂದು ಮಾತು ಹೇಳಿದ್ದಳು
" ನೀನು ಎಂಥಹ ಮುಗ್ಧ ಗೊತ್ತಾ ? ನಿನಗೆ ಹೆಣ್ನಿನ ಮನಸ್ಸು ಅರ್ಥವಾಗುವುದಿಲ್ಲ. ಪ್ರೀತಿ  ನಿವೇದನೆಯ ಸೂಕ್ಶ್ಮತೆಗಳು  ನಿನ್ನ  ಅರಿವಿಗೆ ಬರುವುದೇ ಇಲ್ಲ. ನಿನಗೆ ಅದು ಗೊತ್ತಾಗಿದ್ದರೆ ನಾನು  ಹೀಗೆ ಮದುವೆಯ ಆಮಂತ್ರಣವನ್ನು  ನಿನಗೆ ಕೊಡುವ ಪ್ರಮೇಯ ಬರುತ್ತಿರಲಿಲ್ಲ. ನಾವಿಬ್ಬರೂ ಸೇರಿ ಮದುವೆ  ಆಮಂತ್ರಣವನ್ನು ಹಂಚುತ್ತಿದ್ದೆವು. "
ಆ ಹುಡುಗಿ ಈ ಮಾತುಗಳನ್ನು ಹೇಳುವಾಗ ನನಗೆ ಸಂತೋಷವಾಗಿತ್ತೆ ?  ಆಥವಾ ನಾನೊಬ್ಬ ದಡ್ದ ಅಂತಾ ಅವಳು ಹೇಳುತ್ತಿದ್ದಾಳೆ ಎಂದು ಬೇಸರವಾಗಿತ್ತೆ ? ಈಗಲೂ ಈ ಪ್ರಶ್ನೆ ನನ್ನ ಮನಸ್ಸಿನಲ್ಲಿ ಹಾಗೆ ಕಾಡುತ್ತಿದೆ..
ನಾನು ಬೆಳಗಾವಿಯಲ್ಲಿ ಓದುವಾಗ ನನ್ನಪಕ್ಕದಲ್ಲಿ  ಕುಳಿತುಕೊಳ್ಳುತ್ತಿದ್ದ ಹುಡುಗಿ ಸುನಿತಾ ಘಾಟಗೆ ಅಂತಾ. ಆಕೆ  ಶ್ರೀಮಂತ ಮನೆತನದ ಹುಡುಗಿ. ಓದಿನಲ್ಲಿ ತುಂಬಾ  ಚುರುಕು. ಜೊತೆಗೆ ತುಂಬಾ ಸುಂದರಿ.. ಆಕೆ ನನಗೆ ಸ್ವಲ್ಪ ಮಟ್ಟಿಗೆ  ಇಂಗ್ಲೀಷ್ ಮಾತನಾಡುವುದನ್ನು ಕಲಿಸಿದಳು.. ಇಂಗ್ಲೀಷ್ ಸಿನಿಮಾಗಳನ್ನು ತೋರಿಸಿದಳು.. ಬೀರ್ ಕುಡಿಯುವದನ್ನು ಕಲಿಸಿದಳು. ಮನೆಗೆ ಕರೆದುಕೊಂಡು ಹೋಗಿ ಮರಾಠಿಗಳ ಊಟದ  ರುಚಿಯ ಪರಿಚಯ ಮಾಡಿಕೊಟ್ಟಳು... ಗೂಂಡಾನಂತಿದ್ದ ನನ್ನನ್ನು  ಸನ್ನಡತೆಯ ಹುಡುಗನನ್ನಾಗಿ ಮಾಡಿದಳು. ನನ್ನನ್ನು  ಸರಿ ದಾರಿಗೆ ತರಲು ಯತ್ನಿಸಿ ವಿಫಲರಾದ ನನ್ನ ಅಪ್ಪ ಅಮ್ಮ  ಬೇರೆ ದಾರಿ  ಕಾಣದೇ  ಊರು ಬಿಡಿಸಿ  ಬೆಳಗಾವಿಗೆ ಸಾಗು ಹಾಕಿದ್ದರು.. ಅಪ್ಪ ಅಮ್ಮ ಮಾಡಲಾಗದಿದ್ದುದನ್ನು  ಈ  ಹುಡುಗಿ  ಕೆಲವೇ ತಿಂಗಳಿನಲ್ಲಿ  ಮಾಡಿ ಬಿಟ್ಟಿದ್ದಳು.. ಆಗಲೇ ಹೆಣ್ಣು ಜೀವದ ಒಳಗೆ ಇರುವ ಈ ಪವಾಡ ಸದೃಶ ಶಕ್ತಿಯ ಮೊದಲ ಅರಿವು ನನಗಾಗಿತ್ತು.
ಆದರೆ ಎಂದೂ ನಾವು ಪ್ರೀತಿಯ ಬಗ್ಗೆ ಮಾತನಾಡಲಿಲ್ಲ.  ಐ ಲವ್ ಯು ಎಂದು ಹೇಳಿಕೊಳ್ಳಲಿಲ್ಲ. ಕೈ ಕೈ ಹಿಡಿದುಕೊಂಡು ಸುತ್ತುವಾಗಲೂ ಬೇರೆ ಭಾವ ಬರಲೇ ಇಲ್ಲ.  ನಾನು ನನ್ನ ಅಮ್ಮನನ್ನು ಆಕೆಯಲ್ಲಿ ಕಾಣುತ್ತಿದ್ದೆನೆ ? ನಿಜವಿರಬಹುದು.
ನಾನು ನನ್ನ ಓದಿ  ಮುಗಿಸಿ ಬೆಂಗಳೂರಿಗೆ ಬಂದೆ. ಯಾವ ಯಾವುದೋ ಕೆಲಸ ಮಾಡುತ್ತ ಬೆಂಗಳೂರಿನ ರಸ್ತೆಗಳಲ್ಲಿ ಅಲೆದಾಡುತ್ತಿದ್ದೆ. ನನ್ನ  ಪ್ರೀತಿ ಪ್ರೇಮದ  ಹುಡುಕಾಟ ಮುಂದುವರಿದಿತ್ತು.. ಆದರೆ ಯಾವ ಪ್ರೇಮ ಪ್ರಕರಣದಲ್ಲೂ ನಾನು ಜಯಶಾಲಿಯಾಗಿರಲಿಲ್ಲ... ಹುಡುಗಿಯರೆಲ್ಲ  ನನ್ನನ್ನು ರಿಜೆಕ್ಟ್ ಮಾಡುವುದು ಸಾಮಾನ್ಯವಾಗಿತ್ತು. ಆಗೆಲ್ಲ ಮಲ್ಲೇಶ್ವರಂ ನ  ನನ್ನ ರೂಮಿನಲ್ಲಿ ಕುಳಿತು ಸ್ನಾನ ಮಾಡದೇ ರಂ ಕುಡಿಯುತ್ತ ದೇವದಾಸನ ಪೋಜು ನೀಡುತ್ತ ಬದುಕು ಸಾಗಿಸುತ್ತಿದ್ದೆ .ನನ್ನ ಜೊತೆಗೆ ಇರುತ್ತಿದ್ದ ಎಲ್. ಸಿ,ನಾಗರಾಜ್,ಆಗಾಗ ಬರುತ್ತಿದ್ದ ವೇಣು ಎಲ್ಲರೂ ಒಂದಲ್ಲ ಒಂದು ಪ್ರೇಮ  ಪ್ರಕರಣದಲ್ಲಿ ಸಿಲುಕಿ  ಯಶಸ್ವಿಯಾಗದೇ ದೇವದಾಸರಂತೆ  ಜೀವನ ಸಾಗಿಸುತ್ತಿದ್ದರು..
ಇಂತಹ ದಿನಗಳಲ್ಲಿ ಮತ್ತೆ ನನ್ನ ಪ್ರೇಮ ಪ್ರಕರಣಗಳು ಪ್ರಾರಂಭವಾದವು.ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಹುಡುಗಿಯನ್ನು  ಪ್ರೇಮಿಸಿ ಮದುವೆಯ ಹಂತಕ್ಕೆ ಬಂದು ನಿಂತಿದ್ದೆ. ಈ  ಪ್ರೇಮ ವಿಫಲವಾಗುವುದಿಲ್ಲ ಎಂಬ ಅಧಮ್ಯ ವಿಶ್ವಾಸವೂ ನನ್ನಲ್ಲಿತ್ತು. ಆಗ ನಡೆದಿದ್ದು ಸಿನಿಮೀಯ ಘಟನೆ.ಕೆಲವೊಮ್ಮೆ ಬದುಕು ಸಿನಿಮಾಕ್ಕಿಂತ ರೋಚಕವಾಗಿರುತ್ತದೆ.
ಅದೊಂದು ದಿನ ಸೌಥ್ ಎಂಡ ಸರ್ಕಲ್ ಬಳಿ ಇರುವ  ನಮ್ಮ ಕಚೇರಿಯಲ್ಲಿದ್ದೆ.  ಅದು ಮನ್ವಂತರ ಎಂಬ ವಾರಪತ್ರಿಕೆಯ ಕಚೇರಿ. ನಾನು ಆ ಪತ್ರಿಕೆಯ ಮುಖ್ಯ ವರದಿಗಾರ.. ನಾನು ಪ್ರೇಮಿಸುತ್ತಿದ್ದವಳು ಅದೇ ಕಚೇರಿಯಲ್ಲಿ ಉಪ ಸಂಪಾದಕಿ. ಅವಳು ನನ್ನ ಪ್ರೇಮಭಿಕ್ಷೆಯನ್ನು ಸ್ವೀಕರಿಸಿದ್ದಳು.ನನಗೆ ನನ್ನ ಬದುಕಿನಲ್ಲಿ ಕೊನೆಗೂ ಒಬ್ಬ ಹುಡೂಗಿ ಸಿಕ್ಕಳಲ್ಲ ಎಂದು ಸಮಾಧಾನ. ಅಂದು ನನ್ನ ಕಚೇರಿಗೆ ಬಂದಿಳಿದವಳು  ಅದೇ ಸುನಿತಾ ಘಾಟಗೆ. ಹಾಗೆ ಬಂದವಳು ನೇರವಾಗಿ ನನ್ನ ಬಳಿಗೆ ಬಂದು ನನ್ನ ಬೆನ್ನ ಮೇಲೆ ಬಡ ಬಡನೇ ಗುದ್ದಿದಳು.ತಲೆಗೆ ಬಡಿದಳು. ಎಲ್ಲಿ ಹಾಳಾಗಿ ಹೋಗಿದ್ದೆ ಎಂದು ಬೈದಳು. ತಲೆಯ ಕೂದಲು ಹಿಡಿದು ಎಳೆದಳು..ನಾನು ವಿಚಿತ್ರ ಪರಿಸ್ಥಿಯಲ್ಲಿ ಸಿಲುಕಿಕೊಂಡಿದ್ದೆ.ನನ್ನ ಪಕ್ಕದಲ್ಲಿ  ನಾನು ಪ್ರೇಮಿಸಿ  ಮದುವೆಯಾಗಲಿರುವ ಹುಡುಗಿ  ಕುಳಿತಿದ್ದಳು.ಆಕೆ ತಪ್ಪು ತಿಳಿದುಕೊಂಡು ಈ  ಪ್ರೇಮವೂ ವಿಫಲವಾದರೆ ಎಂಬ ಆತಂಕ ನನ್ನದು.. ನಾನುಮುಜುಗರದಿಂದ ಆಕೆಯನ್ನು ನೋಡುತ್ತಿದ್ದೆ.
ತಕ್ಷಣ ಹೊರಡು ಎಂದಳು ಸುನಿತಾ.ಎಲ್ಲಿಗೆ ಎಂದು ಕೇಳಬೇಡ ಎಂದು ಫರ್ಮಾನು ಹೊರಡಿಸಿದಳು. ನಾನು ನನ್ನ ಪಕ್ಕದಲ್ಲಿ ಕುಳಿತಿದ್ದ ನಾನು ಪ್ರೇಮಿಸುತ್ತಿದ್ದವಳ ಕಡೆ ನೋಡಿದೆ.ಅವಳ ಮುಖ ಎಂದಿನಂತೆ ಇತ್ತು. ನಾನು ಸುನಿತಾ ಜೊತೆ  ಹೊರಟೆ.
ಅವಳ ಮನೆಗೆ ಸೇರಿದ ಕಂಪನಿಯ ಗೆಸ್ಟ್ ಹೌಸ್ ಇಂದಿರಾ ನಗರದಲ್ಲಿತ್ತು. ಆಕೆ ತನ್ನ ವಿದೇಶಿ ಕಾರಿನಲ್ಲಿ ನನ್ನನ್ನು ಕೂಡ್ರಿಸಿಕೊಂಡು ಆ ಗೆಸ್ಟ್ ಹೌಸ್ ಗೆ ಹೋಗುವಂತೆ ಡ್ರೈವರ್ ಗೆ ಸೂಚಿಸಿದಳು.ಆಕೆ  ಕಾರಿನಲ್ಲಿ ಮಾತನಾಡುತ್ತಲೇ ಇದ್ದಳು. ಶಶಿ ನೀನು ಎಷ್ಟುಒಳ್ಳೆಯವನು ಗೊತ್ತಾ ?ನಿನಗೆ ಗೊತ್ತಿಲ್ಲ ಯಾಕೆಂದರೆ ನೀನು ಕಾಡು ಪಾಪ.. ಕಾಡಿನಿಂದ ಬಂದವನು.ಆದರೆಈ ಕಾಡು ಪ್ರಾಣಿ ನನಗೆ ಇಷ್ಟ ಎಂದು ತಾನೇ ನಕ್ಕಳು.ನಾನು ನಗಲಿಲ್ಲ.ನನಗೆ  ನನ್ನ ಆಗಿನ ಪ್ರೇಮವನ್ನು ಉಳಿಸಿಕೊಳ್ಳಬೇಕಾಗಿತ್ತು.  ಈಕೆ ಬಂದು ಕೊನೆಗೂ ಕೈ ಹತ್ತಿದ ಈ ಪ್ರೇಮವನ್ನು ನಾಶಪಡಿಸುತ್ತಾಳೆ ಎಂದು ನನಗೆ ಅನ್ನಿಸತೊಡಗಿತ್ತು.
ನಾವು ಅವರ ಗೆಸ್ಟ್ ಹೌಸ್ ಗೆ ಬಂದೆವು. ಅಲ್ಲಿ ನಮಗಾಗಿ ಊಟ ಸಿದ್ದವಾಗಿತ್ತು.. ಆಕೆ ತನ್ನ ಕಥೆ ಹೇಳಿದಳು. ತಾನು  ಮುಂಬೈಗೆ ಹೋಗಿ ಸಿ ಏ ಮಾಡಿದ್ದು, ನಂತರ ಕುಟುಂಬದ ಉದ್ಯಮವನ್ನು ತಾನೇ ನೋಡಿಕೊಳ್ಳುತ್ತಿದ್ದುದು, ತಾನೀಗ ಕಂಪೆನಿಯ ಎಂ ಡಿ ಅಗಿರೋದು ಹೀಗೆ ಆಕೆಯ ಮಾತು ಮುಂದುವರಿದಿತ್ತು. ಊಟ ಮುಗಿಯುವ ಹೊತ್ತಿಗೆ ಆಕೆ ಮೂಲ ವಿಷಯಕ್ಕೆ ಬಂದಳು.

ಶಶಿ ನಾವು ಮದುವೆಯಾಗೋಣ ಕಣೋ.. ನಾನು ನಿನ್ನ ತುಂಬಾ ಪ್ರೀತಿಸ್ತೀನಿ. ನಾನು ಮದುವೆಯಾಗುವುದಿದ್ದರೆ ನಿನ್ನನ್ನು ಮಾತ್ರ..ನೀನು ಒಂದು ದಿನ ಪತ್ರಿಕೆ  ಪ್ರಾರಂಭಿಸು. ನಾನು ಅದರ ಪ್ರಕಾಶಕಿ.ಎಷ್ಟು ಲಕ್ಶ್ಯ ಬೇಕಾದರೂ ಖರ್ಚಾಗಲಿ.ನನಗೆತೊಂದರೆ ಇಲ್ಲ ಅಂದಳು.
ನನಗೆ  ಶಾಕ್ ಆಗಿತ್ತು.ನಾವೆಂದೂ ಪ್ರೀತಿ ಪ್ರೇಮದ  ಬಗ್ಗೆ ಮಾತನಾಡಿರಲಿಲ್ಲ. ಆಕೆ ನನ್ನನ್ನು ಪ್ರೀತಿಸುತ್ತಾಳೆ  ಎಂದು ಎಂದೂ ಕನಸು ಮನಸಿನಲ್ಲೂ ಎಣಿಸಿರಲಿಲ್ಲ...ನಾನು ಆಕೆಗೆ ಹೇಳಿದೆ
ಸಾರಿ, ನನ್ನ ಕಚೇರಿಯಲ್ಲಿ ನನ್ನ ಪಕ್ಕದಲ್ಲಿ  ಕುಳಿತ ಹುಡುಗಿಯನ್ನು ನೋಡಿದ್ದೀಯಲ್ಲ. ಅವಳನ್ನು ನಾನು ಪ್ರೀತಿಸುತ್ತಿದ್ದೇನೆ. ಆಕೆಗೆ ಮಾತು ಕೊಟ್ಟಿದ್ದೇನೆ..
ಆಕೆ ಒಮ್ಮೆಲೆ ಮಾತು ನಿಲ್ಲಿಸಿದಳು.. ಬಾ ನಿನ್ನನ್ನು  ನಿನ್ನ ಆಫಿಸಿನ ಬಳಿ ಬಿಡುತ್ತೇನೆ ಎಂದವಳು ನನ್ನ ಉತ್ತರಕ್ಕೂ ಕಾಯಲಿಲ್ಲ. ಕಾರಿನ ಬಳಿ ನಡೆದಳು.ಡ್ರೈವರ್ ನನ್ನು ಬಿಟ್ಟು ಅವಳೇ ಡ್ರೈವ್ ಮಾಡತೊಡಗಿದಳು.ನಮ್ಮ ನಡುವೆ ಮಾತು ಇರಲೇ ಇಲ್ಲ.ಕೇವಲ ಮೌನ.ಆ ಮೌನ ಅಸಹನೀಯವಾಗಿತ್ತು.. ನಮ್ಮ ಕಚೇರಿಯನ್ನು ತಲುಪಿದವಳು ನೇರವಾಗಿ ಒಳಗೆ ಬಂದಳು.. ನಾನು ಪ್ರೀತಿಸುತ್ತಿದ್ದವಳ ಬಳಿ ಬಂದು  ನೀನು ಅದೃಷ್ಟವಂತೆ. ಇಂತಹ ಹುಡುಗನ್ನು ಪಡೆದುಕೊಳ್ಳಲು ಪುಣ್ಯ ಮಾಡಿರಬೇಕು.. ನನ್ನ ಶಶಿಯನ್ನು ಚೆನ್ನಾಗಿ ನೋಡಿಕೋ..ಆತ ತುಂಬಾ ಸೂಕ್ಷ್ನ. ಆತನ ಮನಸ್ಸು ನೋಯಿಸಬೇಡ,, ಎಂದಳು.. ಹಾಗೆ ಹೊರಕ್ಕೆ ಬಂದು ಕಾರಿನಲ್ಲಿ ಮರೆಯಾದಳು..
ನಾನು ಮಾತು ಬಾರದೇ ನಿಂತಿದ್ದೆ...
ನಂತರದ ದಿನಗಳಲ್ಲಿ ಆಕೆಯನ್ನು ಹುಡುಕುವುದಕ್ಕೆ ನಾನು ಪ್ರಯತ್ನಿಸಿದೆ.. ಗೆಸ್ಟ್ ಹೌಸ್ ಗೆ ಹೋಗಿ ಕೇಳಿದರೂ ಯಾವುದೇ ವಿವರ ದೊರಕಲಿಲ್ಲ.  ಬೆಳಗಾವಿಯ ಅವರ ಮನೆಗೆ ಒಮ್ಮೆ ಹೋದರೂ ಆ ಮನೆಗೆ ಬೀಗ ಹಾಕಿತ್ತು..ಇದಾದ ಮೇಲೆ ಹಲವಾರು ಬಾರಿ ಆಕೆಯನ್ನು ಹುಡುಕುವುದಕ್ಕೆ ಪ್ರಯತ್ನಿಸಿದ್ದೇನೆ.. ಈಗಲೂ ಪ್ರಯತ್ನಿಸುತ್ತಿದ್ದೇನೆ.
ನನಗೆ ಈಗಲೂ ಅನ್ನಿಸುತ್ತದೆ..ನನಗೆ  ಆಗಲೂ ಪ್ರೀತಿ ಅರ್ಥವಾಗಿರಲಿಲ್ಲ.ಈಗಲೂ ಅರ್ಥವಾಗಿಲ್ಲ.  ಆದರೆ ನಾನು ಈಗಲೂ ಪ್ರೀತಿಯ ದಾರಿಯಲ್ಲಿರುವ ದಾರಿ ಹೋಕನೆ .ನನ್ನ ಹುಡುಕಾಟ ಮುಂದುವರಿದಿದೆ. ಮುಂದುವರಿಯುತ್ತದೆ.. ಆದರೆ ಈಗ ನನಗೆ  ಅನ್ನಿಸುತ್ತದೆ.ಪ್ರೀತಿ ಪ್ರೇಮ ಯಾರಿಗೂ ಅರ್ಥವಾಗಬಾರದು.ಅರ್ಥವಾದರೆ ಪ್ರೀತಿ ಸಾಯುತ್ತದೆ,  ಅರ್ಥವಾಗದೇ ಅರ್ಥಕ್ಕಾಗಿ ಹುಡುಕುವುದೇ ಅದ್ಭುತವಾದದ್ದು..
ಹೀಗೆ ಹುಡುಕುವಾಗಲೇ ಪ್ರೀತಿ ನಮ್ಮಲ್ಲಿ ಸ್ಥಾಯಿ ಯಾಗುತ್ತದೆ.ನಾವೇ ಪ್ರೀತಿಯಾಗುತ್ತೇವೆ..ಆಗ ಹೊರಗಿನ ಪ್ರೀತಿಯ ಹುಡುಕಾಟ ನಿಂತು ಒಳಗೆ ಇರುವ ಪ್ರೀತಿ ಸ್ಪೋಟವಾಗುತ್ತದೆ.ಅದೇ ಬದುಕಿನ ಅದ್ಭುತ ಕ್ಷಣ..


ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...