Sunday, July 27, 2008

ಒಂದು ಸ್ಪೋಟ ಮತ್ತು ಒಂದು ಸಾವು....!

ಗಂಡನನ್ನು ಕರೆದುಕೊಂಡು ಆಸ್ಪತ್ರೆಗೆ ಹೊರಟವಳು. ಬಸ್ ನಿಲ್ದಾಣದಲ್ಲಿ ನಿಂತವಳು ಅಲ್ಲಿಯೇ ಹೆಣವಾಗಿ ಹೋದಳು. ಬಹಳ ಹೊತ್ತು ಅವಳ ಹೆಣವನ್ನು ಕೇಳುವವರೂ ಇರಲಿಲ್ಲ. ಇದು ನಗರದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಅಸು ನೀಗಿದ ಮಧ್ಯಮ ವರ್ಗದ ಹೆಣ್ಣು ಮಗಳ ದುರಂತ ಕಥೆ. ಪ್ರಾಯಶಃ ಆಕೆ ತನ್ನ ಸಾವನ್ನು ಅಲ್ಲಿ ನಿರೀಕ್ಷಿಸರಲಿಲ್ಲ. ಬೆಳಿಗ್ಗೆ ಎದ್ದು ಕೆಲಸಕ್ಕೆ ರಜೆ ಹಾಕಿ, ಎದೆ ನೋವು ಬಂದ ಗಂಡನನ್ನು ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದ ಆಕೆ ದಾರಿಯಲ್ಲೇ ಹೆಣವಾಗಿ ಹೋದಳು.

ಈ ಭಯೋತ್ಪಾದಕತೆಯ ಬಗ್ಗೆ ನಾವು ಮಾತನಾಡೋಣ. ಈ ಬಗ್ಗೆ ಮಾತನಾಡುವಾಗಲೂ ನನ್ನಲ್ಲಿ ಹಿಂಜರಿಕೆ ಇದೆ. ಯಾಕೆಂದರೆ ಮುಸ್ಲಿಂ ಭಯೋತ್ಪಾದಕತೆ ಎಂದ ತಕ್ಷಣ ಬಿಜೆಪಿ ವಾಸನೆ ಹೊಡೆಯಲು ಪ್ರಾರಂಭವಾಗುತ್ತದೆ. ಬಿಜೆಪಿ ರಾಜಕೀಯ ಕಾರಣಕ್ಕಾಗಿ ಇಂತಹ ಮಾತುಗಳನ್ನು ಬಳಸಿಕೊಳ್ಳಲು ಪ್ರಾರಂಭಿಸುತ್ತದೆ. ಬೇರೆ ಧ್ವನಿಯಲ್ಲಿ ಮಾತನಾಡಲು ಪ್ರಾರಂಭಿಸಿದ ತಕ್ಷಣ ಕಾಂಗ್ರೆಸ್ ಪಕ್ಷ ಅಲ್ಲಿ ಗಹಗಹಿಸತೊಡಗುತ್ತದೆ. ಜೆಡಿಎಸ್ ಪಕ್ಕದಲ್ಲಿ ನಿಂತು ನಗುತ್ತದೆ.

ವಿಶ್ವದ ಯಾವುದೇ ಧರ್ಮ ಜೀವವನ್ನು ಕಸಿದುಕೊಳ್ಳುವಂತೆ ಬೋಧಿಸುತ್ತದೆ ಎಂದು ನಾನು ನಂಬಿಲ್ಲ. ಹಾಗೆ ಬೋಧನೆ ಮಾಡುವ ಧರ್ಮವನ್ನು ಧರ್ಮ ಎಂದು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ನನಗೆ ಅನ್ನಿಸುವ ಹಾಗೆ ಯಾವುದೇ ಧರ್ಮದಲ್ಲಿ ಸಮಸ್ಯೆಯಿಲ್ಲ. ಧರ್ಮ ವನ್ನು ವ್ಯಾಖ್ಯಾನಿಸುವವರಲ್ಲಿ, ಇದರ ಆಚರಣೆ ಮಾಡುತ್ತ ಬಂದವರಲ್ಲಿ ಸಮಸ್ಯೆ ಇದೆ. ಈಗ ನಾವು ಮಾತನಾಡಲು ಹೊರಟಿರುವ ಮುಸ್ಲಿಮ್ ಭಯೋತ್ಪಾದಕತೆಯ ವಿಚಾರದಲ್ಲೂ ಅಷ್ಟೇ.

ವಿಶ್ವದ ಮುಸ್ಲಿಮ್ ಸಮುದಾಯ ವಿಚಿತ್ರ ಅಸಹಾಯಕತೆಯಲ್ಲಿದೆ ಎಂಬುದು ನಿಜ. ಕೊಲ್ಲಿ ರಾಷ್ಟ್ರಗಳಲ್ಲಿನ ತೈಲ ರಾಜಕೀಯ , ಆಫ್ರಿಕನ್ ರಾಷ್ಟ್ರಗಳಲ್ಲಿನ ಬಡತನ, ಪಾಕಿಸ್ಥಾನದಂತಹ ಮುಸ್ಲಿಮ್ ರಾಷ್ಟ್ರಗಳಲ್ಲಿನ ರಾಜಕೀಯ ಅಭದ್ರತೆ ಇದಕ್ಕೆ ಕಾರಣವಾಗಿರಬಹುದು. ಆದರೆ ಇದೇ ಭಯೋತ್ಪಾದಕ ಚಟುವಟಿಕೆಯನ್ನು ಸಮರ್ಥಿಸಿಕೊಳ್ಳಲು ಕಾರಣವಾಗಬಾರದು. ಮುಸ್ಲಿಮರಲ್ಲಿ ಇಂತಹ ಸಮಸ್ಯೆ ಇದೆ ಎಂಬ ಕಾರಣಕ್ಕೆ ಅವರು ಭಯೋತ್ಪಾದಕರಾಗುತ್ತಿದ್ದಾರೆ ಎಂಬ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ಈ ಸಮಸ್ಯೆಯನ್ನು ರಾಜಕೀಯ ಪಕ್ಷಗಳು ನೋಡುವ ರೀತಿ ಭಿನ್ನ. ಹಿಂದೂ ದೇಶದ ಕನಸನ್ನು ಬಿತ್ತುತ್ತಿರುವ ಬೆಜೆಪಿ ಮುಸ್ಲೀಮ್ ರನ್ನೆಲ್ಲ ಭಯೋತ್ಪಾದಕರು ಎಂದು ನೋಡುತ್ತದೆ. ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಉಗ್ರಗಾಮಿ ಮುಸ್ಲಿಮರನ್ನು ಉಗ್ರಗಾಮಿಗಳು ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಅಂದರೆ ಬಿಜೆಪಿಗೆ ಮತಗಳಿಸಲು ಹಿಂದೂ ಸೆಂಟಿಮೆಂಟ್ ಅತ್ಯಗತ್ಯ. ಹಾಗೆ ಕಾಂಗ್ರೆಸ್ ಮತ್ತು ಇತರ ಸೋಕಾಲ್ಡ್ ಜಾತ್ಯಾತೀತ ಪಕ್ಷಗಳಿಗೆ ಮುಸ್ಲಿಮ್ ಒಲೈಕೆ ಬೇಕೆ ಬೇಕು.
ಇದೆಲ್ಲ ಎಂತಹ ಹುಚ್ಚುತನ ನೋಡಿ. ಭಯೋತ್ಪಾದಕ ಚಟುವಟಿಕೆಯನ್ನು ಯಾರೇ ಮಾಡಲಿ, ಅದನ್ನು ಖಂಡಿಸುವುದು ಎಲ್ಲರ ಕರ್ತವ್ಯ. ಆದರೆ ನಮ್ಮ ರಾಜಕಾರಣಿಗಳು ಈ ವಿಚಾರವನ್ನು ನೋಡುವ ರೀತಿಯೇ ಬೇರೆ. ಬಿಜೆಪಿಗೆ ಹಿಂದೂ ಭಯೋತ್ಪಾದಕತೆ, ಅದು ಯಾವುದೇ ರೀತಿಯಲ್ಲಿರಲಿ ಅದು ಭಯೋತ್ಪಾದನೆಯಾಗಿ ಕಾಣುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮ್ ಭಯೋತ್ಪಾದಕತೆಯನ್ನು ಒಪ್ಪಿಕೊಳ್ಳಲು ಹಿಂಜರಿಕೆ.
ರಾಜಕಾರಣಿಗಳು ಪ್ರತಿ ವಿಚಾರವನ್ನೂ ಲಾಭ ಮತ್ತು ನಷ್ಠದ ವ್ಯವಹಾರವನ್ನಾಗಿ ನೋಡುತ್ತಾರೆ. ಅವರಿಗೆ ಒಬ್ಬ ವ್ಯಕ್ತಿ ಎಂದರೆ ಒಂದು ಮತ. ಈ ವ್ಯಕ್ತಿಯ ಮನಸ್ಸು, ಹೃದಯ ಯಾವುದೂ ಮುಖ್ಯವಲ್ಲ. ಹೀಗಾಗಿ ಅವರಿಗೆ ಬದುಕು ಎಂಬುದು ಒಂದು ವ್ಯಾಪಾರವಾಗಿದೆ.
ಮೊನ್ನೆ ನಡೆದ ಬಾಂಬ ಸ್ಪೋಟದಲ್ಲಿ ಸತ್ತಳಲ್ಲ, ಆ ಹೆಂಗಸಿನ ಕುಟುಂಬದ ವಿವರವನ್ನು ಸಂಕ್ರಹಿಸುತ್ತಿದ್ದೆ. ಯಾರೋ ಹೇಳಿದರು, ಅವರ ಕುಟುಂಬ ಸಂಪೂರ್ಣವಾಗಿ ಕೂಲಿ ಮಾಡಿ ಬದುಕುವಂತಹುದು. ಅವರಿಗೆ ಬದುಕಲು ಬೇರೆ ದಾರಿ ಇಲ್ಲ. ಈಗ ಆಕೆ ಅಸು ನೀಗಿದ್ದಾಳೆ. ಅವಳ ಗಂಡನ ಆರೋಗ್ಯ ಸರಿಯಿಲ್ಲ. ಬಹುಶಃ ಇವರಿಗೆ ಜೇಹಾದ್ ಎಂದರೆ ಏನು ಎಂಬುದು ತಿಳಿದಿರಲಿಕ್ಕಿಲ್ಲ. ಹಿಂದೂ ರಾಷ್ಟ್ರದ ಕಲ್ಪನೆ ಅವರಿಗೆ ಇದೆಯೋ ಇಲ್ಲವೋ ತಿಳಿಯದು. ಹಾಗೆ ಯಾವ ರಾಜ್ಯದಲ್ಲಿ ಯಾವುದೇ ಸರ್ಕಾರ ಇರಲಿ, ಅದು ಅವರಿಗೆ ಮುಖ್ಯ ವಾಗಿರಲಿಕ್ಕಿಲ್ಲ. ಯಾಕೆಂದರೆ, ಅವರ ಬದುಕಿಗೆ ಇದ್ಯಾವುದೂ ಸಂಬಂಧ ಇರದ ವಿಚಾರ. ಹಿಂದೂವಾದ, ಮುಸ್ಲೀಮರ ಜೇಹಾದಿ ಎಲ್ಲವೂ ಕೂಡ ಸಾಮಾನ್ಯರಿಗೆ ಅನ್ನ ಕೋಡುವುದಿಲ್ಲ. ಅವರ ಮನಸ್ಸಿನಲ್ಲಿ ಕನಿಷ್ಠ ಕನಸುಗಳನ್ನು ತುಂಬುವುದಿಲ್ಲ. ಆದರೆ ಅವರಿಗೆ ಸಂಬಂಧವಿಲ್ಲದ ವಿಚಾರ ಅವರ ಕುಟುಂಬದ ದುರಂತಕ್ಕೆ ಕಾರಣವಾಯಿತು. ಈ ಕುಟುಂಬದ ಹೆಣ್ಣು ಮಗಳ ಬದುಕನ್ನು ಕಸಿದುಕೊಳ್ಳಲು ಕಾರಣವಾಯಿತು.
ನನಗೆ ಅನ್ನಿಸುತ್ತದೆ, ಇದೇ ಇವತ್ತಿನ ಬದುಕಿನ ಬಹುದೊಡ್ಡ ದ್ವಂದ್ವ. ನಮಗೆ ಸಂಬಂಧವಿಲ್ಲದ ವಿಚಾರಗಳು ನಮ್ಮ ಬದುಕನ್ನು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ಇಂತಹ ಸಂಬಂಧವಿಲ್ಲದ ವಿಚಾರಗಳನ್ನು ನಮಗೆ ಜೋಡಿಸುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಾರೆ. ಆಧುನಿಕ ಬದುಕಿನ ಬಹುದೊಡ್ಡ ದುರಂತ ಎಂದರೆ ಇದೇ ಇರಬಹುದೇನೋ. ಇಲ್ಲಿ ನಮ್ಮ ನಮ್ಮ ನಿರ್ಧಾರಗಳನ್ನು ನಾವು ತೆಗೆದುಕೊಳ್ಳುವುದಿಲ್ಲ. ಬೇರೆಯವರು ತೆಗೆದುಕೊಂಡ ತೀರ್ಮಾನಗಳು ನಮ್ಮನ್ನು ನಿಯಂತ್ರಿಸುತ್ತವೆ. ನಮ್ಮನ್ನು ಆಳುತ್ತವೆ. ನಮ್ಮನ್ನು ಸಾವಿನ ಮನೆಗೂ ದೂಡುತ್ತವೆ.
I

1 comment:

Vimala said...

mmmmkannaalli neeru bantu.ondu kshana mookaalade...nimma baraha chintisuvante maditu.
vimalanavada

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...