Wednesday, August 17, 2016

ಪಾಕಿಸ್ಥಾನವೆಂಬ ವಿಫಲ ಪ್ರಭುತ್ವ ಮತ್ತು ನಾವು ಕಲಿಯಬೇಕಾದ ಪಾಠ; ಭಾರತ ಮಾತೆ ಗೋಡೆಯ ಕ್ಯಾಲೆಂಡರ್ ಆಗದಿರಲಿ...

ವಿಭಜನೆಯ ನೋವು 
೧೯೪೭ರ ಸ್ವಾತಂತ್ರ್ಯ ಭಾರತದ ಉಪಖಂಡದಲ್ಲಿ ಹೊಸ ರಾಜಕೀಯ ಶಕೆಗೆ ನಾಂದಿ ಹಾಡಿತ್ತು. ಒಂದೇ ಸಂಸ್ಕೃತಿ ಮತ್ತು ಪರಂಪರೆಯ ಜನ ಎರಡು ದೇಶವಾಗಿ ಭಾಗವಾಗಿದ್ದರು. ವಿಭಜನೆ ರಕ್ತ ಚೆಲ್ಲಾಡುವಂತೆ ಮಾಡಿತು. ಎಲ್ಲೆಡೆ ಸಾವು ನೋವು.. ಪಾಕಿಸ್ಥಾನದ ಭಾಗದಲ್ಲಿರುವ ಹಿಂದೂಗಳು ಭಾರತಕ್ಕೆ ಬಂದರು, ಉತ್ತರ ಭಾರತದ ಮುಸ್ಲಿಂ ಕುಟುಂಬಗಳು ಪಾಕಿಸ್ಥಾನಕ್ಕೆ ವಲಸೆ ಹೋದವು. ಆದರೆ ಈ ವಿಭಜನೆ ಎರಡೂ ದೇಶಗಳಗಳ ಜನರಿಗೆ ಶಾಂತಿಯನ್ನು ತಂದುಕೊಡಲಿಲ್ಲ. ಇದರೊಂದಿಗೆ ವಿಭಜನೆಯ ಮೂಲ ಉದ್ದೇಶ ಈಡೇರಲಿಲ್ಲ. ಬದಲಾಗಿ ಭಯೋತ್ಪಾದನೆ, ಯುದ್ಧೋನ್ಮಾದ ಹೆಚ್ಚಿತು. ಅಪನಂಬಿಕೆಯ ಹೊಸ ಪರ್ವ ಪ್ರಾರಂಭವಾಯಿತು.
ಶಾಂತಿಯ ಪ್ರತಿಪಾದಕ ಮಹಾತ್ಮಾ ಗಾಂಧಿ ಹಿಂಸೆಗೆ ಬಲಿಯಾದರು. ತನ್ನೊಳಗೆ ಹಿಂಸೆಯನ್ನು ತುಂಬಿಕೊಂಡಿದ್ದ ಜಿನ್ನಾ ಶಾಂತವಾಗಿ ಅಸು ನೀಗಿದರು. ಆದರೆ ಈ ಭೂಕಂಡದ ಜನರಿಗೆ ಮಾತ್ರ ಶಾಂತಿ ದಕ್ಕಲೇ ಇಲ್ಲ.
ಪಾಕಿಸ್ಥಾನದ ಪಿತಾಮಹ ಜಿನ್ನಾ ಹಿಂದೂ ಮತ್ತು ಮುಸ್ಲೀಂ ರು ಪ್ರತ್ಯೇಕ ದೇಶವಾಗಿ ಬದುಕುವುದೊಂದೇ ಪರಿಹಾರ ಎಂದು ನಂಬಿದ್ದರು. ಹಿಂದೂ ಮತ್ತು ಮುಸ್ಲಿಂ ರು ಪ್ರತ್ಯೇಕ ದೇಶವಾದರೆ ಮುಸ್ಲಿಂ ರಿಗೆ ಶಾಂತಿ ಮತ್ತು ಅಭಿವೃದ್ಧಿ ದಕ್ಕುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಆದರೆ ಜಿನ್ನಾ ನಂಬಿಕೆ ಹುಸಿಯಾಯಿತು. ಯಾಕೆಂದರೆ ಅವರ ನಂಬಿಕೆಯ ಹಿಂದೆ ಮನುಷ್ಯರನ್ನು ಬೇರ್ಪಡಿಸುವ ಹುನ್ನಾರವಿತ್ತು. ಅವರ ಮನಸ್ಸಿನಲ್ಲಿ ಹಿಂಸೆ ಇತ್ತು.
ಗಾಂಧಿ ಮತ್ತು ಜಿನ್ನಾ
 ಗಾಂಧಿ ಅವರ ನಂಬಿಕೆ ಇದಕ್ಕೆ ವಿರುದ್ಧವಾಗಿತ್ತು. ಗಾಂಧಿ ಹಿಂದೂ ಮತ್ತು ಮುಸ್ಲೀಮರ ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟಿದ್ದರು. ಆದರೆ ಶಾಂತಿ ಮತ್ತು ಸಹಬಾಳ್ವೆಯ ಪ್ರತಿಪಾದಕರಾಗಿದ್ದ ಗಾಂಧಿ ಸೋಲಬೇಕಾಯಿತು. ಆದರೆ ಗಾಂಧಿ ನಂಬಿದ್ದ ಸಹೋದರತ್ವಸ ಮತ್ತು ಸಹಬಾಳ್ವೆ ಇಂದು ಹೆಚ್ಚು ಪ್ರಸ್ತುತ ಎಂದು ಅನ್ನಿಸುತ್ತದೆ. ಹಿಂಸೆಯಲ್ಲಿ ಅಸು ನೀಗಿದ ಗಾಂಧಿ ಬಿಟ್ಟು ಹೋದ ಶಾಂತಿಯ ಬದುಕಿನ ಕನಸು ಇಂದಿನ ಅಗತ್ಯ ಕೂಡ ಆಗಿದೆ.
ಏನೇ ಇರಲಿ ಜಿನ್ನಾ ಮುಸ್ಲೀಮರಿಗಾಗಿ ಹೊಸ ದೇಶವನ್ನು ಹುಟ್ಟು ಹಾಕುವುದರಲ್ಲಿ ಯಶಸ್ವಿಯಾದರು.  ಆದರೆ ಧರ್ಮ ಆಧಾರಿತವಾದ ರಾಜಕೀಯ ಪ್ರಭುತ್ವ ಯಶಸ್ವಿಯಾಗಲಾರದು ಎಂಬ ಸತ್ಯ ಈಗ ಮತ್ತಷ್ಟು ಗಟ್ಟಿಯಾಗಿದೆ, ಜಿನ್ನಾ ಸೋತಿದ್ದೆಲ್ಲಿ ಎಂಬುದು ಈಗ ಗೊತ್ತಾಗುತ್ತಲಿದೆ.
ಈ ಎರಡೂ ದೇಶಗಳು ದೇಶ ವಿಭಜನೆಯ ನಂತರ ಎದುರಿಸಿದ ಸಮಸ್ಯೆ ಸಾಮಾನ್ಯ ಸಮಸ್ಯೆ ಆಗಿರಲಿಲ್ಲ. ಬ್ರಿಟೀಷ್ ಇಂಡಿಯಾದಲ್ಲಿದ್ದ ಹಲವಾರು ರಾಜ್ಯಗಳಿಗೆ ಸ್ವಯಂ ನಿರ್ಣಯದ ಹಕ್ಕನ್ನು ಬ್ರಿಟೀಷರು ನೀಡಿದ್ದರು. ಈ ರಾಜ್ಯಗಳಿಗೆ ಭಾರತ ಅಥವಾ ಪಾಕಿಸ್ಥಾನದ ಜೊತೆ ಸೇರುವ ಅಧಿಕಾರವನ್ನು ನೀಡಲಾಗಿತ್ತು. ಈ ಸ್ಥಿತಿಯಲ್ಲಿ ಭಾರತ ಎದುರಿಸಿದ ಮೊದಲ ಸಮಸ್ಯೆ ಹೈದರಾಬಾದಿನ ನಿಜಾಮರಿಂದ ಬಂದಿತ್ತು. ಹೈದರಾಬಾದ್ ನಿಜಾಮರು ತಮ್ಮ ರಾಜ್ಯವನ್ನು ಭಾರತಕ್ಕೆ ಸೇರಿಸಲು ಸಿದ್ದರಿರಲಿಲ್ಲ. ಆಗ ಗೃಹ ಸಚಿವರಾಗಿದ್ದ ವಲ್ಲಭ ಬಾಯಿ ಪಟೇಲರು ಸೈನ್ಯ ಕಾರ್ಯಾಚಾರಣೆ ನಡೆಸಬೇಕಾಯಿತು. ಸೈನ್ಯ ಬಲದ ಮೂಲಕ ಹೈದರಾಬಾದ್ ಅನ್ನು ಭಾರತಕ್ಕೆ ಸೇರಿಸಲಾಯಿತು.
ಆದರೆ ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಮಾತ್ರ ಭಿನ್ನವಾಗಿತ್ತು. ಈ ರಾಜ್ಯದ ಜನ ಪಾಕಿಸ್ಥಾನವನ್ನು ಸೇರಬೇಕೋ ಅಥವಾ ಭಾರತವನ್ನು ಸೇರಬೇಕೋ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರೀಸಿಂಗ್ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿರಲಿಲ್ಲ. ಆದರೆ ಅಷ್ಟರಲ್ಲಿ ಬುಡಕಟ್ಟು ಜನಾಂಗದ ಹೆಸರಿನಲ್ಲಿ ಪಾಕಿಸ್ಥಾನದ ಸೈನ್ಯ ಜಮ್ಮು ಮತ್ತು ಕಾಶ್ಮೀರ ಪ್ರವೇಶ ಮಾಡಿತ್ತು. ಈ ಬಗ್ಗೆ ಭಾರತ ತಲೆ ಕೆಡಿಸಿಕೊಳ್ಳುವುದಕ್ಕಿಂತ ಹೆಚ್ಚಿನ ತಲೆ ಕೆಡಿಸಿಕೊಂಡವರು ಮಹಾರಜ ಹರೀಸಿಂಗ್. ತಮ್ಮ ರಾಜ್ಯವನ್ನು ಅವರು ಉಳಿಸಿಕೊಳ್ಳಲು ಭಾರತದ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಪ್ರಕಾರ ಭಾರತದ ಸೈನ್ಯ ಜಮ್ಮು ಮತ್ತು ಕಾಶ್ಮೀರದ ರಕ್ಷಣೆಗೆ ಮುಂದಾಯಿತು. ಈ ರಾಜ್ಯದ ಒಂದು ಭಾಗ ಭಾರತದಲ್ಲಿ ಸೇರ್ಪಡೆಯಾಯಿತು. ಇನ್ನೊಂದು ಭಾಗ ಪಾಕಿಸ್ಥಾನಕ್ಕೆ ಸೇರಿಕೊಂಡಿತು. ಈ ಹಂತದಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ವಿಚಾರವನ್ನು ವಿಶ್ವ ಸಂಸ್ಥೆಗೆ ಒಯ್ದರು. ವಿಶ್ವ ಸಂಸ್ಥೆ ಈ ವಿವಾದದ ಬಗ್ಗೆ ಮೂರು ಪ್ರಮುಖ ನಿರ್ಣಯವನ್ನು ಕೈಗೊಂಡಿತು.
ಪಾಕಿಸ್ಥಾನ ಕಾಶ್ಮೀರದಿಂದ ತನ್ನ ಸೈನ್ಯವನ್ನು ಹಿಂದಕ್ಕೆ ಪಡೆಯಬೇಕು. ನಂತರ ಅಲ್ಲಿ  ಜನಮತ ಗಣನೆ ನಡೆಯಬೇಕು ಎಂಬುದು ವಿಶ್ವ ಸಂಸ್ಥೆಯ ಪ್ರಮುಖ ನಿರ್ಣಯವಾಗಿತ್ತು. ಆದರೆ ಪಾಕಿಸ್ಥಾನ ವಿಶ್ವ ಸಂಸ್ಥೆಯ ನಿರ್ಣಯದ ಮೊದಲ ಅಂಶವನ್ನೇ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ತನ್ನ ಸೈನ್ಯವನ್ನು ವಾಪಸು ಪಡೆಯಲೇ ಇಲ್ಲ. ಹಾಗೆ ಕಾಶ್ಮೀರದ ಜನ ಏನನ್ನೂ ಬಯಸುತ್ತಾರೆ ಎಂಬುದು ನೇಪಥ್ಯಕ್ಕೆ ಸರಿದು, ಈ ಭಾಗಕ್ಕಾಗಿ ಭಾರತ ಮತ್ತು ಪಾಕಿಸ್ಥಾನ ಯುದ್ಧ ನಡೆಸುವ ಸ್ಥಿತಿ ನಿರ್ಮಾಣವಾಯಿತು.
ಹಲವು ಧರ್ಮ ಸಂಸ್ಕೃತಿ ಪರಂಪರೆಗಳ ಭಾರತದ ವಿಭಜನೆಯ ನಂತರ ವಿಚಿತ್ರ ಸಂಕಟಕ್ಕೆ ಒಳಗಾಯಿತು. ಭಾರತಕ್ಕಿಂತ ಪಾಕಿಸ್ಥಾನದ ಸಮಸ್ಯೆ ಸಾವಿರ ಪಟ್ಟು ಹೆಚ್ಚಿತ್ತು. ಪಾಕಿಸ್ಥಾನ ಜಮ್ಮು ಮತ್ತು ಕಾಶ್ಮೀರದ ಮೇಲೆ ಧಾಳಿ ನಡೆಸಿ ಭೂ ಭಾಗವನ್ನು ಕಬಳಿಸಿದ ಮೇಲೆ ಅದರ ಕಣ್ಣು ಬಿದ್ದುದು ಬಲೂಚಿಸ್ಥಾನದ ಮೇಲೆ ಅಲ್ಲಿಯೂ ಸೈನ್ಯ ಕಳಿಸಿ, ೧೯೪೮ ರಲ್ಲಿ ಆ ಪ್ರದೇಶವನ್ನು ಪಾಕಿಸ್ಥಾನಕ್ಕೆ ಸೇರಿಸಿಕೊಂಡಿತು. ಬಲೂಚಿಗಳಿಗೆ ಪಾಕಿಸ್ಥಾನಕ್ಕೆ ಸೇರಿಸುವುದಕ್ಕೆ ಇಷ್ಟ ಇರಲಿಲ್ಲ.  ಪಾಕಿಸ್ಥಾನ ಎಂಬ ಈ ದೇಶ ಒಂದು ಒಕ್ಕೂಟದಂತೆ ಇರಬೇಕಾದ ಪ್ರದೇಶ. ಯಾಕೆಂದರೆ ಅಲ್ಲಿ ಒಂದು ಭಾಷೆ ಮತ್ತು ಸಂಸ್ಕೃತಿ ಇರಲಿಲ್ಲ. ಬಲೂಚಿಸ್ಥಾನ, ಸಿಂದ್, ಪಂಜಾಬ್, ಬಂಗಾಲ, ಪಶ್ತೂನ್, ಹೀಗೆ ಸಂಪೂರ್ಣವಾದ ಭಿನ್ನ ಸಂಸ್ಕೃತಿ ಮತ್ತು ಪರಂಪರೆಯ ಜನ ಪಾಕಿಸ್ಥಾನ ಎಂಬ ದೇಶದ ಒಳಗೆ ಬಂದಿದ್ದರು. ಇವರೆಲ್ಲ ಏಕ ಸಂಸ್ಕೃತಿ ಮತ್ತು ಪರಂಪರೆಗೆ ಒಳ ಪಟ್ಟವರಾಗಿರಲಿಲ್ಲ. ಆದರೆ ಪಾಕಿಸ್ಥಾನದ ದೇಶ ಭಕ್ತರು ಈ ವಿಭಿನ್ನತೆಯನ್ನು ಒಪ್ಪಿಕೊಳ್ಳಲೇ ಇಲ್ಲ. ಅವರು ಇಸ್ಲಾಂ ಎಂಬ ಧರ್ಮದ ಅಡಿಯಲ್ಲಿ ದೇಶ ಒಂದಾಗಿರುತ್ತದೆ ಎಂಬ ಭ್ರಮೆಗೆ ಒಳಗಾಗಿದ್ದರು. ವಿಭಿನ್ನ ಸಂಸ್ಕೃತಿ ಮತ್ತು ಭಾಷೆಯ ಜನ ಕೇವಲ ಧರ್ಮದ ಕಾರಣದಿಂದ ಒಂದಾಗುವುದಿಲ್ಲ ಎಂಬುದು ಪಾಕಿಸ್ಥಾನದ ದೇಶ ಭಕ್ತರಿಗೆ ಅರ್ಥವಾಗಲೇ ಇಲ್ಲ.  ಈ ನಡುವೆ ಕರಾಚಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದ ಉತ್ತರ ಭಾರತದಿಂದ ವಲಸೆ ಹೋದ ಮುಸ್ಲೀಮ್ ರಿಗೆ ಅಲ್ಲ ಸಮಾನ ಅಧಿಕಾರ ದೊರಕಲೇ ಇಲ್ಲ. ಅವರು ಎರಡನೆ ದರ್ಜೆಯ ಪ್ರಜೆಗಳಾಗಿ ಮೊಹಜರ್ ಗಳು ಎನ್ನಿಸಿಕೊಳ್ಳಬೇಕಾಯಿತು. ಆದರೆ ಹೊಸ ದಾಗಿ ಹುಟ್ಟಿದ ಈ ಮುಸ್ಲಿಂ ರಾಷ್ಟದ ನಾಯಕರು ಕೇವಲ ಧರ್ಮವನ್ನು ಮಾತ್ರ ಇಟ್ಟುಕೊಂಡು ದೇಶವನ್ನು ಕಟ್ಟಲು ಹೊರಟಿದ್ದರು..ಅವರಿಗೆ ಸಂಸ್ಕೃತಿ ಭಾಷೆ ಮತ್ತು ಪರಂಪರೆಯ ಮಹತ್ವ ತಿಳಿಯಲೇ ಇಲ್ಲ.
ವಿಭಜನೆ; ಬದುಕು ಹುಡುಕಿಕೊಂಡು ಹೊರಟವರು...
ಈ ನೀತಿಯಿಂದಾಗಿ ಬಲೂಚಿಸ್ಥಾನದಲ್ಲಿ ೧೯೪೮ ರಲ್ಲೇ ಪಾಕಿಸ್ಥಾನಿ ವಿರೋಧಿ ಚಳವಳಿ ಪ್ರಾರಂಭವಾಯಿತು. ಈ ಚಳವಳಿಯನ್ನು ಹತ್ತಿಕ್ಕಲು ಪಾಕಿಸ್ಥಾನ ಬೇರೆ ಬೇರೆ ಮಾರ್ಗವನ್ನು ಬಳಸತೊಡಗಿತು. ಈ ಪ್ರದೇಶದವನ್ನು ಸೈನ್ಯದ ಆಡಳಿತಕ್ಕೆ ಒಳಪಡಿಸಲಾಯಿತು. ಬಲೂಚಿ ಹೋರಾಟಗಾರರನ್ನು ಬಂಧಿಸಿ ಹತ್ಯೆ ಮಾಡಲಾಯಿತು. ಮನೆ ಮನೆಗಳಿಗೆ ನುಗ್ಗಿ ಹೆಂಗಸರು ಮತ್ತು ಮಕ್ಕಳನ್ನು ಎಳೆ ತಂದು ಜೈಲಿಗೆ ದಬ್ಬಲಾಯಿತು. ಅಲ್ಲಿ ಹತ್ಯೆ ದಿನ ನಿತ್ಯದ ವ್ಯವಹಾರ ಎನ್ನುವಂತಾಯಿತು. ಹಲವಾರು ಬಲೂಚಿ ನಾಯಕರು ದೇಶ ತೊರೆದು ಹೊರಟು ಹೋದರು. ವಿದೇಶಿ ನೆಲದಲ್ಲಿ ನೆಲೆ ನಿಂತು ಅಲ್ಲಿಂದಲೇ ತಮ್ಮ ಹೋರಾಟವನ್ನು ಮುಂದುವರಿಸಿದರು.. ಇದರಿಂದಾಗಿ ಬಲೂಚಿ ಲಿಬರೇಶನ್ ಫ್ರಂಟ್ ನಂತಹ ಉಗ್ರಗಾಮಿ ಸಂಘಟನೆಗಳು ಹುಟ್ಟಿಕೊಂಡವು. ರಕ್ತದ ಹೊಳೆ ಹರಿಯತೊಡಗಿತು..
ಇತ್ತ ಬಂಗಾಲದಲ್ಲಿ ನಡೆದಿದ್ದು ಎಲ್ಲರಿಗೂ ಗೊತ್ತಲ್ಲ ? ಬಂಗಾಲಿ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳದ ಪಾಕಿಸ್ಥಾನ ಬಂಗಾಲಿ ಭಾಷೆಯನ್ನು ಹತ್ತಿಕ್ಕಿತು. ಬಲವಂತವಾಗಿ ಉರ್ದು ಭಾಷೆಯನ್ನು ಅಲ್ಲಿ ಹೇರಲಾಯಿತು. ಶೇಖ್ ಮುಜಬೀರ್ ರೆಹಮಾನ್ ನೇತೃತ್ವದಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ಪ್ರಾರಂಭವಾದಾಗ ಇದನ್ನು ಕಡೆಗಣಿಸಿದ ಪಾಕಿಸ್ಥಾನ ಮುಸ್ಲಿಂ ಧರ್ಮ ದೇಶದ ಏಕತೆಯನ್ನು ಕಾಪಾಡುತ್ತದೆ ಎಂದು ನಂಬಿಕೊಂಡಿತ್ತು. ಕೊನೆಗೆ ಬಂಗಾಲ ಪ್ರದೇಶ ಬಾಂಗ್ಲಾ ದೇಶವಾಗಿದ್ದು ಇತಿಹಾಸ.
ಈ ತಪ್ಪಿನ ನಂತರವೂ ಪಾಕಿಸ್ಥಾನ ಪಾಠ ಕಲಿಯಲಿಲ್ಲ. ಉರ್ದು ಮಾತನಾಡುವ ಪಾಕಿಸ್ಥಾನಿಯರೇ ಅಲ್ಲಿ ಸಾರ್ವಭೌಮರಾದರು. ಉಳಿದ ಜನ ಸಂಸ್ಕೃತಿಯನ್ನು ಸೈನ್ಯ ಬಲದ ಮೂಲಕ ಹತ್ತಿಕ್ಕಲಾಯಿತು. ಪಂಜಾಬಿ ಭಾಷೆ ಮರೆಯಾಗತೊಡಗಿತು. ವಿಭಜನೆಯ ಸಂದರ್ಭದಲ್ಲಿ ಪ್ರತಿ ಶತ ೧೪ ರಷ್ಟಿದ್ದ ಹಿಂದೂಗಳ ಸಂಖ್ಯೆ ಪ್ರತಿ ಶತ ೨ ಕ್ಕೆ ಇಳಿಯಿತು. ಸಿಂದ್ ನಲ್ಲಿದ್ದ ಉರ್ದು ಏತರ ಪತ್ರಿಕೆಗಳು ಬಾಗಿಲು ಮುಚ್ಚಿದವು. ಇತಿಹಾಸವನ್ನು ತನಗೆ ಬೇಕಾದಂತೆ ತಿರುಚಿದ ಪಾಕಿಸ್ಥಾನ ಸುಳ್ಳನ್ನೇ ಸತ್ಯ ಎಂದು ವಿದ್ಯಾರ್ಥಿಗಳಿಗೆ ಕಲಿಸತೊಡಗಿತು. ಇಡೀ ದೇಶ ಧರ್ಮ ಮತ್ತು ಸುಳ್ಳಿನ ಮೇಲೆ ನಿಂತು ಬಿಟ್ಟಿತು. ಧರ್ಮ ಪಾಕಿಸ್ಥಾನಿಯರನ್ನು ಒಂದು ಮಾಡುವುದಕ್ಕೆ ಬದಲಾಗಿ ಒಡೆಯತೊಡಗಿತು. ಸುನ್ನಿ ಮುಸ್ಲಿಂ ರ ಪ್ರಾಭಲ್ಯ ಇರುವ ಪಾಕಿಸ್ಥಾನದಲ್ಲಿ ಅಹಮದೀಯರು ಮತ್ತು ಶಿಯಾ ಮುಸ್ಲಿಂ ರ ಅತಂತ್ರರಾದರು.
ಈಗ ಪಾಕಿಸ್ಥಾನ ಪೇಲ್ಡ್ ಸ್ಟೇಟ್. ಇದನ್ನು ಕನ್ನಡದಲ್ಲಿ ಸೋತ ಪ್ರಭುತ್ವ ಎಂದು ಹೇಳಬಹುದೇನೋ. ಪಾಕಿಸ್ಥಾನ ಈ ರೀತಿ ಅವನತಿಯ ಹಂತಕ್ಕೆ ಬಂದು ನಿಂತಿರುವುದಕ್ಕೆ ಏಕ ಸಂಸ್ಕೃತಿ ಮತ್ತು ಧರ್ಮ ಸ್ಥಾಪನೆಗೆ ನಡೆಸಿದ ನಡೆಸುತ್ತಿರುವ ಯತ್ನವೇ ಕಾರಣವಾಗಿದೆ.
ಇದನ್ನೆಲ್ಲ ನೋಡಿದ ಮೇಲೆ ನನಗೆ ಭಾರತದ ಬಗ್ಗೆ ಆತಂಕ ಪ್ರಾರಂಭವಾಗಿದೆ. ಪಾಕಿಸ್ಥಾನದಲ್ಲಿ ಪ್ರಯೋಗ ಮಾಡಿ ಆ ದೇಶವನ್ನು ನಾಶಪಡಿಸಿದ ಸಾಮಾಜಿಕ ಮತ್ತು ರಾಜಕೀಯ ಬದುಕಿನ ಏಕಮುಖಿ ಸಂಸ್ಕೃತಿಯ ತಾತ್ವಿಕತೆಯನ್ನು ನಮ್ಮಲ್ಲಿಯೂ ಅನುಷ್ಠಾನಕ್ಕೆ ತರಲು ಸಂಘ ಪರಿವಾರ ಯತ್ನ ನಡೆಸುತ್ತಿದೆ. ನಾವೆಲ್ಲ ಹಿಂದೂ ಎಂದು ಹೇಳುವ ಮೂಲಕ ಹಿಂದೂ ಅಲ್ಲದವರು ನಮ್ಮವರಲ್ಲ ಎಂದು ಪ್ರತಿಪಾದಿಸಲಾಗುತ್ತಿದೆ. ಹಾಗೆ ಇಂಡಿಯಾದ ಬಹುಮುಖಿ ಸಂಸ್ಕೃತಿಯನ್ನು ನಾಶಪಡಿಸಲಾಗುತ್ತಿದೆ. ಸಂಘ ಪರಿವಾರದವರ ಆಹಾರ ಪದ್ಧತಿ ಮಾತ್ರ ಈ ದೇಶದಲ್ಲಿ ಇರಬೇಕು ಎಂದು ಒತ್ತಡ ಹೇರಲಾಗುತ್ತಿದೆ. ಆಹಾರ, ನಂಬಿಕೆ,, ನಡವಳಿಕೆ ಎಲ್ಲದರಲ್ಲಿಯೂ ಏಕರೂಪತೆ ತರಲು ಹೊರಟವರು ಪಾಕಿಸ್ಥಾನವನ್ನು ನಾಶಪಡಿಸಿದವರಿಗಿಂತ ಭಿನ್ನವಾಗಿ ನನಗೆ ಕಾಣುವುದಿಲ್ಲ.

ಈಗ ನಮ್ಮ ದೇಶವನ್ನು ಉಳಿಸಿಕೊಳ್ಳುವ ತುರ್ತು ನಮ್ಮ ಮುಂದಿದೆ. ಹೀಗೆ ಹೇಳುವಾಗ ದೇಶ ಎಂದರೇನು ಎಂಬ ಬಗ್ಗೆ ನಮಗೆ ಸ್ಪಷ್ಟತೆ ಬೇಕು. ದೇಶ ಎಂದರೆ ಅದು ಕೇವಲ ಭೂ ಭಾಗವಲ್ಲ.  ದೇಶ ಎಂದರೆ ಭೂ ಭಾಗದದ ಜೊತೆಗೆ ಅಲ್ಲಿನ ಜನ, ಅವರ ಸಂಸ್ಕೃತಿ ನಂಬಿಕೆ, ಪರಂಪರೆ ಎಲ್ಲವೂ ಆಗಿದೆ. ಇದೆಲ್ಲವೂ ಸೇರಿ ಅಗಿರುವ ಒಟ್ಟೂ ಮೊತ್ತವೇ ದೇಶ.  ಇಲ್ಲಿನ ವಿಭಿನ್ನ ಪರಂಪರೆ, ನಂಬಿಕೆ, ಆಹಾರ ಪದ್ಧತಿ ಎಲ್ಲವನ್ನೂ ಉಳಿಸಿಕೊಂಡರೆ ಮಾತ್ರ ದೇಶ ಉಳಿಯುತ್ತದೆ.  ಇಲ್ಲದಿದ್ದರೆ ದೇಶ ಉಳಿಯಲಾರದು. ಕೇವಲ ಜನರೇ ಇಲ್ಲದೆ ಭೂ ಭಾಗ ಮಾತ್ರ ಉಳಿಯಬಹುದು. ಹೀಗೆ ಉಳಿದ ಭೂ ಭಾಗವನ್ನು ಭಾರತ ಮಾತೆ ಎಂದು ಪೂಜೆ ಮಾಡಬಹುದು. ಹೀಗೆ ಪೂಜೆ ಮಾಡುವ ಭೂಪಟ ಮನೆಯ ಗೋಡೆಯ ಮೇಲೆ ಹಾಕುವ ಕ್ಯಾಲೆಂಡರ್ ಆಗಿ ಮಾತ್ರ ಉಳಿಯುತ್ತದೆ.  ಅದು ದೇಶವಾಗಲಾರದು. ಈಗ ದೇಶ ಭಕ್ತರು ಮಾಡುತ್ತಿರುವ ಕೆಲಸ ಇದೇ. ಅವರು ಈ ದೇಶದಲ್ಲಿ ಆಂತರಿಕ ಶಕ್ತಿ ಸೌಂದರ್ಯವನ್ನು ನಾಶಪಡಿಸಿ ಅದನ್ನು ಗೋಡೆಯ ಮೇಲಿನ ಪಟವನ್ನಾಗಿ ಮಾಡುತ್ತಿದ್ದಾರೆ. ಅದಕ್ಕೆ ಊದು ಬತ್ತಿ ಹಚ್ಚಿ ಮಂಗಳಾರತಿ ಮಾಡುತ್ತಿದ್ದಾರೆ..


Wednesday, August 10, 2016

ಜ್ಯೋತಿ ಲಕ್ಷ್ಮಿ; ನೀನು ನನಗೆ ಏನಾಗಿದ್ದೆ ?

ಇದೆಲ್ಲ ಹೇಗೆ ಪ್ರಾರಂಭಿಸಬೇಕು ಗೊತ್ತಿಲ್ಲ. ಆದರೆ ಒಂದಂತೂ ನಿಜ.
ನನ್ನ ತಲೆ ಮಾರಿನ ಬಹಳಷ್ಟು ಯುವಕರಿಗೆ, ನಮಗೆ ಯೌವನ ಬಂದಿದೆ ಎಂಬ ಅರಿವು ಮೂಡಿದ್ದೇ ಆಕೆಯಿಂದ. ಅವಳ ನರ್ತನದಲ್ಲಿನ ಮಾದಕತೆ ನಾವು ಯುವಕರಾಗುತ್ತಿದ್ದೇವೆ ಎಂದು ಅನ್ನಿಸುವುದಕ್ಕೆ ಕಾರಣವಾಗಿತ್ತಲ್ಲ. ಎಂದೂ ಹೆಣ್ಣಿನ ಬತ್ತಲೆಯ ಮೈಯನ್ನು ನೋಡದ ನನ್ನಂಥವರಿಗೆ ಆಕೆ ಹೆಣ್ಣಿನ ನಿಗೂಢತೆಯನ್ನು ನಮ್ಮೆದುರು ಕಳಚಿಡುವ ಹಾಗೆ  ಕಾಣುತ್ತಿತ್ತಲ್ಲ ?
ಅವಳು ಬೇರೆ ಯಾರೂ ಅಲ್ಲ. ನಿನ್ನೆ ಅಸು ನೀಗಿದ ಜ್ಯೋತಿ ಲಕ್ಷ್ಮಿ. ಆಕೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಸಿನಿಮಾಗಳಲ್ಲೂ ನಟಿಸಿದ ನಟಿ. ಕ್ಯಾಬರೆ ನರ್ತನ ಮಾಡುತ್ತಿದ್ದವಳು. ಇಷ್ಟೇ ಹೇಳಿದರೆ ಜ್ಯೋತಿ ಲಕ್ಷ್ಮಿ ಬಗ್ಗೆ ಎಲ್ಲವನ್ನೂ ಹೇಳಿದಂತಾಗುವುದಿಲ್ಲ. ಅವಳು ನಮ್ಮ ಎದೆಯನ್ನು ಹುಟ್ಟಿ ಹಾಕುತ್ತಿದ್ದ ಪ್ರೀತಿ ಪ್ರೇಮ ಮತ್ತು  ಕಾಮದ ಕಿಚ್ಚು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟ. ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಆಕೆ ಯುವಕರ ಪಾಲಿಗೆ ಎಲ್ಲವೂ ಆಗಿದ್ದಳು. ಆಕೆಯ ನೃತ್ಯವನ್ನು ನೋಡುವುದಕ್ಕೆ ಬಹಳಷ್ಟು ಯುವಕರು ಸಿನಿಮಾ ಹಾಲ್ ಗೆ ಹೋಗುತ್ತಿದ್ದರು. 
ಜ್ಯೋತಿ ಲಕ್ಷ್ಮಿಯ ಕ್ಯಾಬರೆ ಡ್ಯಾನ್ಸ್ ಮಾಡುವಾಗ ಆಕೆಯ ನೃತ್ಯಕ್ಕ್ಎ ಹಿನ್ನೆಲೆ ಗಾಯನ ಮಾಡುತ್ತಿದ್ದವರು ಎಲ್. ಆರ್. ಈಶ್ವರಿ.  ಜ್ಯೋತಿ ಲಕ್ಷಿಯ ದೇಹದ ಚಲನೆ ಮತ್ತು ಎಲ್. ಆರ್. ಈಶ್ವರಿಯ ಧ್ವನಿಯ ನಡುವೆ ಯಾವ ರೀತಿಯ ಹೊಂದಾಣಿಕೆ ಇತ್ತೆಂದರೆ ಹಾಡುವವರು ಮತ್ತು ನೃತ್ಯ ಮಾಡುವವರು ಬೇರೆ ಬೇರೆ ಎಂದು ಅನ್ನಿಸುತ್ತಲೇ ಇರಲಿಲ್ಲ.  ಅಂತಹ ಹೊಂದಾಣಿಕೆ ಅದು.  ಎಲ್. ಆರ್ ಈಶ್ವರಿ ಕಣ್ಣು ಕತ್ತಿಯ ಅಂಚು ಎಂದು ಹಾಡಿದರೆ ಜ್ಯೋತಿ ಲಕ್ಷಿಯ ಕಣ್ಣುಗಳು ಕತ್ತಿಯ ಹಾಗೆ ಬಂದು ಯುವಕರ ಹೃದಯವನ್ನೇ ಇರಿದು ಬಿಡುತ್ತಿದ್ದವು.. ಈಶ್ವರಿಯ ಹಾಡಿನಲ್ಲಿದ್ದ ಮಾದಕತೆ ಜ್ಯೋತಿ ಲಕ್ಷ್ಮಿಯ ನರ್ತನದಲ್ಲಿ ಪುನರ್ ಹುಟ್ಟು ಪಡೆದ ಭಾವ ಪರವಶತೆಯನ್ನು ಮೂಡಿಸಿ ಬಿಡುತ್ತಿತ್ತು..
ಆ ಕಾಲ ಹಾಗಿತ್ತು. ಈಗಿನಂತೆ ಹೆಣ್ಣು ಗಂಡಿನ ಸಂಬಂಧವನ್ನು ಬಿಚ್ಚಿಡುವ ಸಾಹಿತ್ಯ ಸಮೃದ್ಧವಾಗಿ ಸಿಗುತ್ತಿರಲಿಲ್ಲ. ಹಾಗೆ ಸಿನಿಮಾಗಳಲ್ಲೂ ರಸಿಕರ ಮನಸ್ಸು ತೃಪ್ತಿ ಪಡಿಸುವುದಕ್ಕಾಗಿಯೇ ಕ್ಯಾಬರೆ ಡ್ಯಾನ್ಸರ್ ಇರುತ್ತಿದ್ದರು. ಚಿತ್ರದ ನಾಯಕ ಯಾವುದೋ ಕಳ್ಳನನ್ನೋ ಗೂಂಡಾನನ್ನೋ ಬಡಿಯುವುದಕ್ಕಾಗಿ ಬಾರ್ ಗೆ ಹೋದಾಗ ಅಲ್ಲಿ ಒಂದು ಕ್ಯಾಬರೆ ಡ್ಯಾನ್ಸ್ ಇರುತ್ತಿದ್ದುದು ಮಾಮೂಲು. ಡ್ಯಾನ್ಸ್ ಮುಗಿದ ಮೇಲೆ ನಾಯಕನ ಫೈಟ್. ಹೀಗೆ ಕೆಲವೇ ನಿಮಿಷಗಳಲ್ಲಿ ಕ್ಯಾಬರೆ ಡ್ಯಾನ್ಸರ್ ಗಳ ಕೆಲಸ ಮುಗಿದು ಹೋಗುತ್ತಿತ್ತು. ಜ್ಯೋತಿ ಲಕ್ಷ್ಮಿ ಯಂತಹ ಕ್ಯಾಬರೆ ಡ್ಯಾನ್ಸರ್ ಚಿತ್ರ ಕಥೆಯ ಒಂದು ಭಾಗವಾಗಿ ಇರುತ್ತಿದ್ದ ಸಂದರ್ಭ ತುಂಬಾ ಕಡಿಮೆ. ಉಳಿದಂತೇ ಕೆಲವೇ ನಿಮಿಷಗಳಲ್ಲಿ ತಮ್ಮ ನರ್ತನವನ್ನು ಪ್ರದರ್ಶಿಸಿ ಅವರು ಮರೆಯಾಗುತ್ತಿದ್ದರು. ಅವರಿಗೆ ಆಗ ಸಿಗುತ್ತಿದ್ದ ಸಂಭಾವನೆ ಸಾವಿರಕ್ಕೆ ಹತ್ತಿರ ಅಷ್ಟೇ. ಆದರೆ ಕ್ಯಾಬರೆ ಡ್ಯಾನ್ಸ್ ಅನ್ನು ಬಿಟ್ಟು ಚಿತ್ರವನ್ನು ಊಹಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ.
ಕ್ಯಾಬರೆ ಡ್ಯಾನ್ಸರ್ ಗಳಿಗೆ ಅಂತಹ ಗೌರವ ಕೂಡ ಇರಲಿಲ್ಲ. ಅವರನ್ನು ಚಿತ್ರ ರಂಗ ಮತ್ತು ಚಿತ್ರ ರಸಿಕರು ನೋಡುತ್ತಿದ್ದ ರೀತಿ ಕೂಡ ಬೇರೆಯಾಗಿತ್ತು. ಸುಮಾರು ಎರಡು ಮೂರು ದಶಕಗಳ ಕಾಲ ಭಾರತೀಯ ಚಿತ್ರ ರಂಗದಲ್ಲಿ ಕ್ಯಾಬರೆ ನರ್ತಕಿಯರು ಮಿಂಚಿದರು. ತಮ್ಮ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಯತ್ನ ನಡೆಸಿದರು. ಆದರೆ ಕಾಲ ಕ್ರಮದಲ್ಲಿ ಎಲ್ಲವೂ ಬದಲಾಗತೊಡಗಿತು. ಅರವತ್ತು ಎಪ್ಪತ್ತರ ದಶಕಗಳಲ್ಲಿ ನಾಯಕಿ ಭಾರತೀಯ ಮಹಿಳೆಯ ಪ್ರತಿ ರೂಪದಂತೆ ಇದ್ದಳು. ಆಕೆ ಎಂದೂ ತಲೆ ಎತ್ತಿ ನೋಡುತ್ತಿರಲಿಲ್ಲ.  ನಾಯಕ ಪ್ರೇಮ ನಿವೇದನೆ ಮಾಡಿದಾಗ ನಾಯಕಿ ತನ್ನ ಕಾಲ ಬೆರಳಿನಿಂದ ನೆಲ ಕೆರದಳೆಂದರೆ ಆಕೆಗೆ ಪ್ರೀತಿಯ ಬಗ್ಗೆ ಒಲವು ಇದೆ ಎಂದೇ ಆರ್ಥ. ಸಾಧಾರಣವಾಗಿ ಎಲ್ಲ ಚಿತ್ರ ನಿರ್ದೇಶಕರು ನಾಯಕ ನಟಿ ನೆಲ ಕೆರೆಯುವ ಕ್ಲೋಸ್ ಅಪ್ ಶಾಟ್ ಹಾಕುತ್ತಿದ್ದರು. ಅಂದಿನ ನಾಯಕಿ ಹೀಗೆ ಇರಬೇಕು ಎನ್ನುವ ನಂಬಿಕೆಯ ಕಾಲದಲ್ಲಿ ಹೆಣ್ಣಿನ ಮೈಯಂದವನ್ನು ತೋರಿಸುವುದಕ್ಕೆ ಕ್ಯಾಬರೆ ಡ್ಯಾನ್ಸರ್ ಗಳು ಬೇಕಾಗಿದ್ದರು. ಆದರೆ ಎಂಬತ್ತರ ದಶಕದ ಮಧ್ಯ ಭಾಗದ ಹೊತ್ತಿಗೆ ಇದೆಲ್ಲ ಬದಲಾಯಿತು. ಸೀರೆ ಉಟ್ಟು ನೆಲ ಕೆರೆಯುತ್ತಿದ್ದ ನಾಯಕಿಯರು ಸಾವಕಾಶ ಸೀರೆಯಿಂದ ತುಂಡು ಸ್ಕರ್ಟ್ ವರೆಗೆ ಬಂದು ನಿಂತಿದ್ದರು. ಇದನ್ನೂ ಜ್ಯೂಲಿ ಹಿಂದಿ ಸಿನಿಮಾದಲ್ಲಿ ನಾವು ಗಮನಿಸಬಹುದು, ಜ್ಯೂಲಿಯ ನಾಯಕಿಯಾಗಿದ್ದ ಚಟ್ಟಕ್ಕಾರಿ ಲಕ್ಷ್ಮಿ ತನ್ನ ಸುಂದರ ತೊಡೆಗಳನ್ನು ಪ್ರದರ್ಶಿಸಿದಳು. ಸಾವಕಾಶವಾಗಿ ನಟಿಯರೇ ಕ್ಯಾಬರೆ ಡ್ಯಾನ್ಸರ್ ಕೆಲಸವನ್ನೂ ಮಾಡಲು ಪ್ರಾರಂಭಿಸಿದರು. ಕಾಲಕ್ರಮೇಣ ಕ್ಯಾಬರೆ ನರ್ತಕಿಯರ ಬೇಡಿಕೆ ಕಡಿಮೆಯಾಯಿತು. ಅವರೆಲ್ಲ ಸಾವಕಾಶವಾಗಿ ಮರೆಯಾಗತೊಡಗಿದರು;  ಸಿನಿಮಾಗಳಲ್ಲಿ ಐಟಂ ಸಾಂಗ್ಸ್ ಬಂದ ಮೇಲೆ ಕ್ಯಾಬರೆ ಡ್ಯಾನ್ಸರ್ ಮತ್ತು ನಾಯಕಿಯರ ನಡುವಿನ ವ್ಯತ್ಯಾಸವೇ ಉಳಿಯಲೇ ಇಲ್ಲ.;
ಜ್ಯೋತಿ ಲಕ್ಷ್ಮಿ, ಜಯಮಾಲಿನಿ. ಹಲಂ ಮೊದಲಾದ ಕ್ಯಾಬರೆ ಡ್ಯಾನ್ಸರ್ ಗಳಿಗೆ ಬದುಕುವುದಕ್ಕೆ ಬೇರೆ ಮಾರ್ಗವೇ  ಉಳಿಯಲಿಲ್ಲ. ಅವರೆಲ್ಲರ ಬದುಕು ದುರಂತದಲ್ಲಿ ನೋವಿನಲ್ಲಿ, ಅಸಹಾಯಕತೆಯಲ್ಲಿ ಕಳೆದು ಹೋಗುವಂತಾಯಿತು.  ಅವರೆಲ್ಲ ಅನಾರೋಗ್ಯ ಪೀಡಿತರಾಗಿ ಖರ್ಚಿಗೆ ಹಣ ಇಲ್ಲದೇ ತಮ್ಮ ಬದುಕನ್ನು ದೂಡುವಂತಾಯಿತು. ಹೊಸ ತಲೆಮಾರಿನವರಿಗೆ ಇವರೆಲ್ಲ ಯಾರು ಎಂಬುದು ತಿಳಿಯದಿದ್ದಾಗ ಇವರೆಲ್ಲ ಇನ್ನಷ್ಟು ಹತಾಶೆಯನ್ನು ಅನುಭವಿಸುವಂತಾಯಿತು. ಇಂತಹ ಮನಸ್ಥಿತಿಯಲ್ಲೇ ಜ್ಯೋತಿ ಲಕ್ಷ್ಮಿಯೂ ಇಹಲೋಕ ಯಾತ್ರೆಯನ್ನು ಮುಗಿಸಿದಳು. ಆಕೆಗೆ ಸಾಯುವ ವಯಸ್ಸು ಆಗಿರಲಿಲ್ಲ.
ನನ್ನ ತಲೆ ಮಾರಿನವರಿಗೆ ಜ್ಯೋತಿ ಲಕ್ಷ್ಮಿ ಕಾಡಲೇ ಬೇಕು. ಇಲ್ಲ ಎಂದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದೇ ಅರ್ಥ. ಯಾಕೆ ಗೊತ್ತಾ ? ಗಂಡಸರಿಗೆಲ್ಲ ಒಂದು ಅಬ್ಸೆಷನ್ ಇರುತ್ತದೆ. ಅದು ತಾವು ಕಣ್ಣು ಬಿಟ್ಟಾಗ ಮೊದಲು ಏನನ್ನು ನೋಡುತ್ತಾರೆಯೋ ಅದರ ಅಬ್ಸೆಷನ್.  ಮಗು ಕಣ್ಣು ಬಿಟ್ಟಾಗ ಮೊದಲು ನೋಡುವುದು ಅಮ್ಮನ ಎದೆಯನ್ನು. ಅಮ್ಮನ ಹಾಲು ಕುಡಿಯುವ ಸುಮಾರು ಒಂದು ವರ್ಷದ ಕಾಲ ಮಗು ತಾಯಿಯ ಎದೆಗೆ ಅಂಟಿಕೊಂಡಿರುತ್ತದೆ. ಅದು ಆ ಮಗುವಿನ ಮನಸ್ಸಿನಲ್ಲಿ ಸ್ಥಾಯಿ ಭಾವವಾಗಿ ಉಳಿದು ಬಿಡುತ್ತದೆ. ಬದುಕಿನ ಕೊನೆಯ ಉಸಿರು ಬಿಡುವ ವರೆಗೂ ಗಂಡಸರಿಗೆ ಅದು ಕಾಡುತ್ತಲೇ ಇರುತ್ತದೆ. ಹೆಣ್ಣು ಮಗುವಿಗೆ ಹೇಗೆ ಎನ್ನುವುದು ನನಗೆ ತಿಳಿಯದು.
ನಾವೆಲ್ಲ ಶಾಲಾ ಮತ್ತು ಹೈಸ್ಕೂಲ್ ದಿನಗಳಲ್ಲಿ ನೋಡುತ್ತಿದ್ದ ಸಿನಿಮಾಗಳಲ್ಲಿ ಜ್ಯೋತಿ ಲಕ್ಷ್ಮಿ ಇದ್ದೇ ಇರುತ್ತಿದ್ದಳು. ಅವಳು ನರ್ತನ ಮತ್ತು ಅಂಗಾಂಗ ಪ್ರದರ್ಶನ ನಮ್ಮ ಮನಸ್ಸುಗಳಲ್ಲಿ ಬಾಲ್ಯದ ಅನುಭವವನ್ನು ಮತ್ತೆ ಚಿಗುರಿಸುತ್ತಿತ್ತು. ಸೆಳೆತ ಹೆಚ್ಚುತ್ತಿತ್ತು.; ನಮಗೆಲ್ಲ ನಿಗೂಡವಾಗಿದ್ದ ಸೃಷ್ಟಿ ಕ್ರಿಯೆಯ ಮೂಲವಾಗಿದ್ದ ಹೆಣ್ಣು  ಕಾಡುವ ರೀತಿಯ ಅನುಭವ ಬಂದಿದ್ದು ಜ್ಯೋತಿ ಲಕ್ಷ್ಮಿ  ಇಂದಲೇ ಎಂದೂ ನನಗೆ ಅನ್ನಿಸುತ್ತದೆ.  ನಮಗೆ ಅಮ್ಮನಾಗಿ ಹೆಂಡತಿಯಾಗಿ, ಗೆಳತಿಯಾಗಿ ಅಜ್ಜಿಯಾಗಿ,  ಇನ್ನೂ ಏನೇನೂ ಆಗಿ ಕಾಡುವ ಹೆಣ್ಣು ಜೀವ ಪಡೆದುಕೊಳ್ಳುವ ವಿವಿಧ ರೂಪಗಳು ಆಕೃತಿಗಳು ನಮ್ಮೆಲ್ಲ ಕ್ರಿಯಾಶೀಲತೆಗೆ ಮೂಲವಾಗಿರಬಹುದೆ ? ಆಕೆ ಇಲ್ಲದಿದ್ದರೆ ಎಲ್ಲ ಗಂಡು ಜೀವಿಗಳ ಕ್ರಿಯಾಶೀಲತೆ ನಾಶವಾಗಿ  ಹೋಗುತ್ತಿತ್ತೆ ? ಇರಬಹುದು. 
ನನಗೆ ಯಾರೋ ಹೇಳಿದೆ ಮಾತು ನೆನಪಾಗುತ್ತದೆ. ಆತ ಒಬ್ಬ ಜ್ಯೊತಿಷಿಯೋ ಅಲ್ಲ, ಒಬ್ಬ ಮಾನಸಿಕ ತಜ್ನನೋ ಯಾರೋ ಇರಬೇಕು. ಆತ ಹೇಳಿದ್ದು, ನಿನ್ನ ಶಕ್ತಿ ಮತ್ತು ದೌರ್ಬಲ್ಯ ಎರಡೂ ಹೆಣ್ಣು. ಈ ಮಾತು ನನಗೆ ನಿಜ ಅನ್ನಿಸುತ್ತದೆ. ನನಗೆ ತುಂಬಾ ಬೇಸರವಾದಾಗ  ಅಥವಾ ಅನಾಥ ಅನ್ನಿಸಿದಾಗ ನಾನು ನನ್ನ ಅಮ್ಮನಿಗೆ ದೂರವಾಣಿ ಕರೆ ಮಾಡುತ್ತೇನೆ. ಆಥವಾ ನನ್ನದೆಲ್ಲವನ್ನೂ ನಾನು ಹಂಚಿಕೊಳ್ಳುವುದು ಹೆಣ್ಣು ಜೀವಗಳ ಜೊತೆ ಮಾತ್ರ,  ನನಗೆ ಹೆಣ್ಣು ಜೀವಗಳ ಜೊತೆ ಇದ್ದಾಗ ಮಾತ್ರ ಸೇಪ್ ಎಂದು ಅನ್ನಿಸುತ್ತದೆ. ಅದು ಅಮ್ಮ ನನಗೆ ನೀಡಿದ ಸುರಕ್ಷತೆಯ ಭಾವದಿಂದ ಪ್ರೇರಿತವಾಗಿದ್ದರೂ ಇರಬಹುದು. ನಾನು ಎಲ್ಲ ಹೆಣ್ಣು ಮಕ್ಕಳಲ್ಲಿ ಅಮ್ಮನನ್ನು ಹುಡುಕುತ್ತೇನೆ. ಗೆಳತಿಯನ್ನು ಹುಡುಕುತ್ತೇನೆ.. ಅಮ್ಮನ ಬಿಸಿ ಅಪ್ಪುಗೆ ಮತ್ತು ಸಾಂತ್ವನ ನನ್ನನ್ನು ಇದು ವರೆಗೆ ಉಳಿಸಿಕೊಂಡು ಬಂದಿದೆ.
ನನಗೆ ಜ್ಯೋತಿ ಲಕ್ಷ್ಮಿಯ ನರ್ತನ  ಮಾದಕ ಪ್ರಪಂಚದ  ಪರಿಚಯ ಮಾಡಿಕೊಟ್ಟಿತು. ಹಾಗೆ ನಾನು ಯುವಕ ಎಂಬುದು ಗೊತ್ತಾಗಿದ್ದು ಆಕೆಯ ನರ್ತನದ ಮೂಲಕವೇ.  ನನ್ನ ಒಳಗೆ ಇದ್ದ ಕಾಮ ಜಾಗ್ರತವಾಗಿದ್ದೂ ಇದೇ ಜ್ಯೋತಿ ಲಕ್ಷ್ಮಿಯ ಡಾನ್ಸ್ ನೋಡಿಯೇ. ಹೀಗಾಗಿ ಆಕೆ ಸತ್ತಾಗ ನನ್ನಲ್ಲಿ ಮೂಡಿದ್ದು ಇದೇ ವಿಚಿತ್ರ ಭಾವ. ಆಕೆ ಮತ್ತು ನನ್ನ ನಡುವಿನ ಸಂಬಂಧ ಎಂಥಹದು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಆಕೆ ತಾಯಿಯಾಗಿದ್ದಳೇ, ನನ್ನನ್ನು ಕಾಮ ಮೂಡಲು ಆಕೆಯೇ ಪ್ರೇರಣಯೇ ನನಗೆ ಗೊತ್ತಿಲ್ಲ.

ಆದರ‍ೇ ಆಕೆಯ ಸಾವಿನ ಸುದ್ದಿ ನನನಗೆ ಬೇಸರವನ್ನು ಉಂಟು ಮಾಡಿದ್ದು ನಿಜ. ಆಕೆ ಸಾಯಬಾರದಿತ್ತು.

Tuesday, July 19, 2016

ಗಣಪತಿ ಆತ್ಮಹತ್ಯೆಯ ಸುತ್ತ ಮುತ್ತ: ಸಾವಿನಿಂದಲೂ ಲಾಭ ಪಡೆದವರು ಯಾರು ?

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಡಿ ವೈ ಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಅಂಕ ಮುಗಿದಿದೆ. ಜಾರ್ಜ್ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ಪ್ರತಿ ಪಕ್ಷಗಳು ತಾವು ನಡೆಸುತ್ತಿದ್ದ ಹೋರಾಟಕ್ಕೆ ಜಯ ಲಭಿಸಿತು ಎಂದು ಬೀಗಬಹುದಾಗಿದೆ. ಹಾಗೆ ಜಾರ್ಜ್ ರಾಜೀನಾಮೆಗೆ ಎಸ್. ಎಮ್. ಎಸ್ ಮತ್ತು ಪೋನ್ ಆಂದೋಲನ ನಡೆಸಿದ್ದ ಮಾಧ್ಯಮಗಳು ಇದು ತಮಗೆ ಲಭಿಸಿದ ಜಯ ಎಂದು ಹೆಮ್ಮೆ ಪಡಬಹುದು. ಹಾಗೆ ನಾವೇ ಜಾರ್ಜ್ ಅವರ ರಾಜೀನಾಮೆ ಕೊಡಿಸಿದ್ದು ಎಂದು ಹೇಳಿಕೊಳ್ಳಬಹುದು. ಅದನ್ನೇ ಇನ್ನು ನಾಲ್ಕಾರು ದಿನ ತಮ್ಮ ಮಾಧ್ಯಮದಲ್ಲಿ ಪ್ರಚಾರ ಮಾಡಿಕೊಳ್ಳಬಹುದು. ಒಂದು ಆತ್ಮಹತ್ಯೆ ಎಂಬ ಸ್ವಯಂ ತಂದುಕೊಂಡ ಸಾವು ಯಾರು ಯಾರಿಗೋ ಲಾಭವನ್ನು ತಂದುಕೊಡಬಹುದು.
D ವೈ ಎಸ್ ಪಿ ಗಣಪತಿ ಮಡಿಕೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವುದರೊಂದಿಗೆ ಈ ಪ್ರಕರಣ ಭಾವನಾತ್ಮಕ ತಿರುವು ಪಡೆದುಕೊಂಡಿತು. ನಂತರದ ದಿನಗಳಲ್ಲಿ ಸಾರ್ವಜನಿಕರ ಭಾವನೆ ಗಣಪತಿ ಅವರ ಪರವಾಗಿ ರೂಪಗೊಂಡಿತು. ಇದರಲ್ಲಿ ಮಾಧ್ಯಮ ಪ್ರಮುಖ ಪಾತ್ರ ಒಹಿಸಿತು. ಆದರೆ ಇಡೀ ಪ್ರಕರಣದಲ್ಲಿ ತನಿಖೆ ನಡೆಯುವುದಕ್ಕೆ ಬದಲಾಗಿ ತೀರ್ಮಾನಗಳು ಹೊರಬಂದವು. ಮಾಧ್ಯಮಗಳು ನೀಡಿದ ತೀರ್ಪನ್ನು ಸಾರ್ವಜನಿಕರು ಒಪ್ಪಿಕೊಂಡರು. ಆದರೆ ಗಣಪತಿ ನೀಡಿದ ಹೇಳಿಕೆ, ಆ ಹೇಳಿಕೆಯ ಬಗ್ಗೆ ಇರಬೇಕಾದ ಸಂಶಯ ಯಾವುದೂ ಹೊರಕ್ಕೆ ಬರಲೇ ಇಲ್ಲ. ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಂಡ ಪ್ರತಿ ಪಕ್ಷಗಳಾಗಲೀ, ಈ ಬಗ್ಗೆ ಭಾವನಾತ್ಮಕ ತೀರ್ಪು ನೀಡಿದ ಮಾಧ್ಯಮವಾಗಲೀ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೆ ಹೋಗಲೇ ಇಲ್ಲ. ಎಲ್ಲರೂ ಗಣಪತಿ ಅವರ ಹೇಳಿಕೆಯನ್ನೇ ಸತ್ಯ ಎಂದುಕೊಂಡು ತೀರ್ಪು ನೀಡಿದ ಮೇಲೆ ಆರೋಪ ಹೊತ್ತವರು ಹೊಣೆ ಹೊತ್ತುಕೊಳ್ಳದೇ ಬೇರೆ ದಾರಿ ಉಳಿಯಲೇ ಇಲ್ಲ.
ಈಗ ಗಣಪತಿ ಅವರು ಆತ್ಮಹತ್ಯೆಗೆ ಮೊದಲು ನೀಡಿದ ಹೇಳಿಕೆಯನ್ನೇ  ನೋಡೋಣ. ಇಂತಹ ಹೇಳಿಕೆಯೊಂದನ್ನು ಮಾಧ್ಯಮದ ಮುಂದೆ ಯಾವುದೇ ವ್ಯಕ್ತಿ ನೀಡಿದಾಗ ಆ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿ ವಿವರ ಪಡೆಯಬೇಕಾದ್ದು ಮಾಧ್ಯಮದ ಕರ್ತವ್ಯ. ಯಾವಾಗ ಗಣಪತಿ ನನಗೇ ಏನಾದರೂ ಆದರೆ ಅದಕ್ಕೆ ಈ ಮೂವರೇ ಕಾರಣ ಎಂದಾಗ ಮಾಧ್ಯಮದವರಾದ ನಾವು ಕೇಳಬೇಕಾದ ಪ್ರಶ್ನೆ ನಿಮ್ಮ ಜನರಲ್ ಆದ ಈ ಹೇಳಿಕೆಗೆ ಇರುವ ಸಾಕ್ಶ್ಯ ಯಾವುದು ? ಎಂದು.  ನಿಮಗೆ ಈ ಮೂವರು ನೀಡಿದ ಕಿರುಕುಳದ ಬಗ್ಗೆ ವಿವರಣೆ ನೀಡಿ. ಯಾವಾಗ ಯಾವ ಪ್ರಕರಣದಲ್ಲಿ ನಿಮಗೆ ಕಿರುಕುಳ ನೀಡಲಾಯಿತು ? ಎಲ್ಲಿ ಕಿರುಕುಳ ನೀಡಲಾಯಿತು ? ನಿಮಗೆ ನಾನ್ ಎಕ್ಸಿಕ್ಯೂಟಿವ್ ಹುದ್ದೆ ನೀಡಿದ್ದೇ ಕಿರುಕುಳವೆ ?  ಈ ಬಗ್ಗೆ ಈ ಮೊದಲು ಮೇಲಾಧಿಕಾರಿಗಳಾಗಲೀ, ಸರ್ಕಾರಕ್ಕಾಗಲಿ ದೂರು ನೀಡಿದ್ದೀರಾ ? ದೂರು ನೀಡದಿದ್ದರೆ ಯಾಕೆ ನೀಡಿಲ್ಲ ? ಅದಕ್ಕಿರುವ ಕಾರಣಗಳಾವವು ?
ಈ ರೀತಿಯ ಯಾವ ಪ್ರಶ್ನೆಗಳನ್ನು ನಾವು ಕೇಳಲಿಲ್ಲ. ಅವರು ಹೇಳಿದ್ದನ್ನು ಕೇಳಿಸಿಕೊಂಡು ಗಣಪತಿ ಆತ್ಮಹತ್ಯೆ ಮಾಡಿಕೊಂಡ ಮೇಳೆ ಪ್ರಸಾರ ಮಾಡಿದವು. ಜೊತೆಗೆ ಇದು ಡಾಯಿಂಗ್ ಡಿಕ್ಲರೇಷನ್ ಹೌದೇ ಅಲ್ಲವೇ ಎನ್ನುವ ಬಗ್ಗೆಯೂ ನಾವು ಚರ್ಚೆ ಮಾಡಲಿಲ್ಲ. ಗಣಪತಿ ಅವರ ಪೂರ್ವಾಪರದ ಬಗ್ಗೆ ಯೋಚಿಸಲಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಅವರೊಬ್ಬ ಪ್ರಾಮಾಣಿಕ ಅಧಿಕಾರಿ ಎಂದು ಸರ್ಟಿಫಿಕೆಟ್ ನೀಡಿಬಿಟ್ಟೆವು. ಕಿರುಕುಳ ತಾಳಲಾರದೇ ಪ್ರಾಮಾಣಿಕ ಅಧಿಕಾರಿಯ ಆತ್ಮಹತ್ಯೆ ಎಂದು ಜನರ ಭಾವನೆಗಳ ಕೆರಳಿಸಿಬಿಟ್ಟೆವು. ದಿನದಿಂದ ದಿನಕ್ಕೆ ಭಾವನೆಯ ಮಹಾಪೂರ ಹೊಳೆಯಾಗಿ ಹರಿಯಿತು. ಅಲ್ಲಿ ಒಬ್ಬ ತನಿಖಾ ಪತ್ರಿಕೋದ್ಯಮಿಗೆ ಇರಬೇಕಾದ ಸತ್ಯ ನಿಷ್ಟೆ ಎಲ್ಲೂ ಕಾಣಲಿಲ್ಲ. ತನಿಖೆ ಇಲ್ಲಿದೇ ತೀರ್ಪು ನೀಡುವ ಒಬ್ಬ ನ್ಯಾಯಾಧೀಶರಂತೆ ನಾವು ವರ್ತಿಸಿದೆವು.
ಸಾಧಾರಣವಾಗಿ ನನಗೇ ಏನಾದರೂ ಆದರೆ ಎಂದರೆ ಏನರ್ಥ ? ನನಗೆ ಬೇರೆಯವರಿಂದ ಏನಾದರೂ ಆದರೆ ಎಂದಲ್ಲವೆ ? ಗಣಪತಿ ನನಗೆ ಏನಾದರೂ ಆದರೆ ಎಂದು ಹೇಳಿದಾಗ ಬೇರೆಯವರಿಂದ ಸಾವು ಸಂಭವಿಸಿದರೆ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅವರ ಕೊನೆಯ ಹೇಳಿಕೆಯಲ್ಲಿ ತಾವು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಈ ಮೂವರು ಕಾರಣ ಎಂದು ಗಣಪತಿ ಹೇಳಿಲ್ಲ.  ತಮಗೆ ಏನಾದರೂ ಸಂಭವಿಸಿದರೆ ಎಂದರೆ ಕೊಲೆ ಮಾಡಿದರೆ, ಅದಕ್ಕೆ ಇವರು ಕಾರಣ ಎಂದು ಅವರ ಮಾತು ಧ್ವನಿಸುತ್ತದೆ. ಆತ್ಮಹತ್ಯೆಯ ಬಗ್ಗೆ ಏನೂ ಹೇಳದೇ ಆತ್ಮಹತ್ಯೆ ಮಾಡಿಕೊಂಡಿರುವಾಗ ಇದನ್ನು ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸುವುದು ಸಾಧ್ಯವೆ ?
 ಆದರೆ ಮೊದಲು ನಾವು ಕೇಳಬೇಕಾದ ಪ್ರಶ್ನೆ ಯಾವುದು ಡೈಯಿಂಗ್ ದಿಕ್ಲರೇಷನ್ ಎಂಬದು. ಕಾನೂನು ಡಾಯಿಂಗ್ ಡಿಕ್ಲಲರೇಷನ್ ಬಗ್ಗೆ ಹೀಗೆ ಹೇಳುತ್ತದೆ.
In common law, a "dying declaration" must have been a statement made by a deceased person who would otherwise have been a credible witness to their own death by murder or manslaughter, and was of "settled hopeless expectation of death".
ಕಾನೂನಿನ ಪ್ರಕಾರ ಡೈಯಿಂಗ್ ಡಿಕ್ಲರೇಷನ್ ಎಂದರೇನು ಎಂಬ ಬಗ್ಗೆ ಸ್ಪಷ್ಟ ವಿವರಣೆ ಇದೆ. ಯಾವುದೇ ವ್ಯಕ್ತಿ ನನಗೆ ಇಂಥವರಿಂದ ಅಪಾಯವಿದೆ ಎಂದು ಸಾಕ್ಷ್ಯಾಧಾರಗಳ ಮೂಲಕ ಮೊದಲೇ ಹೇಳಿಕೆ ನೀಡಿರಬೇಕು. ಆತ ಹೀಗೆ ಹೇಳಿಕೆ ನೀಡುವಾಗ ಕನಿಷ್ಟ ಒಬ್ಬ ಸಾಕ್ಶಿಯಾದರೂ ಬಳಿ ಇರಬೇಕು. ಇನ್ನು ಭಾರತೀಯ ಎವಿಡೆನ್ಸ್ ಎಕ್ಟ್ ನ ೩೨ [೧] ಡೈಯಿಂಗ್ ಡಿಕ್ಲರೇಷನ್ ಎಂದರೇನು ಎಂಬ ಬಗ್ಗೆ ಸಂಪೂರ್ಣ ವಿವರಣೆ ನೀಡಿದೆ. ಯಾವುದನ್ನು ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸಬೇಕು ಎಂಬ ಬಗ್ಗೆ ನಿಖರವಾಗಿ ಹೇಳಲಾಗಿದೆ. ಈ ಕಾನೂನಿನಲ್ಲಿ ಯಾವುದೇ ವ್ಯಕ್ತಿ ಸಾಯುವುದಕ್ಕಿಂತ ಮೊದಲು ನನಗೆ ಇಂಥವರಿಂದ ಜೀವಕ್ಕೆ ಅಪಾಯವಿದೆ, ನನಗೆ ಸಾವು ಸಂಭವಿಸಿದರೆ ಅದಕ್ಕೆ ಇವರೇ ಕಾರಣ ಎಂದು ಸ್ಪಷ್ಟವಾಗಿ ಹೇಳಿರಬೇಕು. ಹೀಗೆ ಹೇಳಿಕೆ ನೀಡುವುದಕ್ಕೂ ಕೆಲವೊಂದು ನಿಯಮಗಳಿವೆ.
A statement by a person who is conscious and knows that death is imminent concerning what he or she believes to be the cause or circumstances of death that can be introduced into evidence during a trial in certain cases.
ಯಾವುದೇ ವ್ಯಕ್ತಿ ಡೈಯಿಂಗ್ ಡಿಕ್ಲರೇಷನ್ ನೀಡುವಾಗ ಆತ ಪ್ರಜ್ನೆಯನ್ನು ಕಳೆದುಕೊಂಡಿರಬಾರದು. ಅಂದರೆ ಆತ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢನಾಗಿರಬೇಕು. ಆತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಆತನ ಹೇಳಿಕೆಯನ್ನು ಡಾಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸಲು ಸಾಧ್ಯವಿಲ್ಲ.  ಈ ಕಾರಣದಿಂದ ಗಣಪತಿ ನೀಡಿದ ಕೊನೆಯ ಹೇಳಿಕೆ ಡೈಯಿಂಗ್ ಡಿಕ್ಲರೇಷನ್ ಹೌದೋ ಅಲ್ಲವೋ ಎಂಬುದು ನಿರ್ಧಾರವಾಗುವ ಮೊದಲು ಇದು ಡೈಯಿಂಗ್ ಡಿಕ್ಲರೇಷನ್ ಎಂದೇ ಮಾಧ್ಯಮದವಾರದ ನಾವು ತೀರ್ಮಾನಿಸಿ ಬಿಟ್ಟೆವು. ಕನಿಷ್ಟ ಈ ಬಗ್ಗೆ ನಾವು ಚರ್ಚೆಯನ್ನೂ ಮಾಡಲಿಲ್ಲ.
ಇನ್ನೊಂದು ಪ್ರಮುಖ ಅಂಶ ಎಂದರೆ ಒಬ್ಬ ವ್ಯಕ್ತಿ ಇಂಥವರಿಂದ ತನ್ನ ಜೀವಕ್ಕೆ ಅಪಾಯವಿದೆ, ನನಗೆ ಸಾವು ಸಂಭವಿಸಿದರೆ ಇಂಥವರೇ ಕಾರಣ ಎಂದು ಸೂಕ್ತ ಸಾಕ್ಷಾಧಾರ ಮತ್ತು ಸೂಕ್ತ ನಿಯಮಗಳ ಪ್ರಕಾರ ಹೇಳಿಕೆ ನೀಡಿದರೆ ಅದು ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿತವಾಗುತ್ತದೆ.  ಆದರೆ ಕಾನೂನಿನಲ್ಲಿ ಸಾವು ಸಂಭವಿಸಿದರೆ ಎಂದು ಹೇಳಲಾಗಿದೆಯೇ ಹೊರತೂ  ಆತ್ಮಹತ್ಯೆ ಮಾಡಿಕೊಂಡರೆ ಏನು ಎಂಬ ಬಗ್ಗೆ ನಿಖರವಾದ ವಿವರಣೆಗಳಿಲ್ಲ. ಆದರೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ಹಲವು ತೀರ್ಪುಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಬರೆದು ಇಟ್ಟ ನೋಟ್ ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸಬಹುದು ಎಂದು ಹೇಳಿದೆ. ಹೀಗಾಗಿ, ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪುಗಳ ಕಾರಣದಿಂದ ಗಣಪತಿ ನೀಡಿರುವ ಹೇಳಿಕೆಯನ್ನು ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸಬಹುದು.  ಈ ಬಗ್ಗೆ ಕೂಡ ಚರ್ಚೆ ನಡೆಯುವ ಅಗತ್ಯವಿತ್ತು. ಆದರೆ ನಾವು ಚರ್ಚೆ ಮಾಡಲಿಲ್ಲ.
ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಪ್ರತಿ ಪಕ್ಷಗಳೂ ಕೂಡ ಇಂತಹ ಯಾವ ಚರ್ಚೆಯನ್ನೂ ಮಾಡದೇ ರಾಜಕೀಯ ಕಾರಣವನ್ನೇ ಮುಂದಿಟ್ಟುಕೊಂಡು ಹೋರಾಟ ಮಾಡಿದವು.  ಗಣಪತಿ ಅವರಿಗೆ ಖಿನ್ನತೆ ಇತ್ತು ಎಂದು ಸರ್ಕಾರ ಹೇಳಿದ್ದನ್ನು ಮೆಂಟಲ್ ಎಂದು ಅರ್ಥೈಸಿ ಗಣಪತಿ ಅವರು ಮೆಂಟಲ್ ಅಲ್ಲ ಎಂದು ವಾದಿಸಿದವು.  ಆದರೆ ಖಿನ್ನತೆ ಬೇರೆ ಮೆಂಟಲ್ ಆಗುವುದು ಬೇರೆ ಎಂಬ ಸಾಮಾನ್ಯ ಜ್ನಾನ ಕೂಡ ಬಿಜೆಪಿ ನಾಯಕರಿಗೆ ಇರಲಿಲ್ಲ.  ಜೊತೆಗೆ ಖಿನ್ನತೆಯಿಂದ ಬಳಲುವವರು ಒಂದೇ ರೀತಿ ಇರುವುದಿಲ್ಲ. ಒಂದು ದಿನ ಅವರು ಎಲ್ಲರಂತೆ ಇರಬಹುದು. ಮರು ದಿನ ಖಿನ್ನತೆ ಹೆಚ್ಚಬಹುದು.   ಈ ಬಗ್ಗೆ ಕೂಡ  ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಜ್ನಾನ ಇರಲಿಲ್ಲ.
ಜೊತೆಗೆ ಇನ್ನೊಂದು ಆಶ್ಚರ್ಯದ ವಿಷಯ ಎಂದರೆ ಗಣಪತಿ ಅವರ ಆತ್ಮಹತ್ಯೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪ್ರತಿ ಪಕ್ಷಗಳು ಕಲ್ಲಪ್ಪ ಹುಂಡಿಬಾಗ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.  ಯಾಕೆ ? ಡಿ ವೈ ಎಸ್ ಪಿ ಕಲ್ಲಪ್ಪ ಅವರ ಪ್ರಕರಣದಲ್ಲಿ ಭಜರಂಗದಳದ ಕಾರ್ಯಕರ್ತರ ಹೆಸರುಗಳಿವೆ ಎಂಬ ಕಾರಣಕ್ಕೆ ಇವರು ಮಾತನಾಡುತ್ತಿಲ್ಲವೆ ? ಗೊತ್ತಿಲ್ಲ. ಇದೇ ರಾಜಕೀಯ ನೋಡಿ. ಈ ತಿಂಗಳ ೩೦ ರ ವರೆಗೆ ನಡೆಯಬೇಕಿದ್ದ ವಿಧಾನ ಮಂಡಲ ಅಧಿವೇಶನ ಈ ಗಲಾಟೆಯಲ್ಲಿ ಮುಳುಗಿ ಮುಗಿದೇ ಹೋಯಿತು. ಶಾಸನ ರಚನೆಯ ಕೆಲಸ ಮಾಡಬೇಕಿದ್ದ ಸದನದಲ್ಲಿ ತರಾತುರಿಯಲ್ಲಿ ವಿಧೇಯಕಗಳ ಮಂಡನೆಯಾಗಿ ಅಂಗೀಕಾರವಾಯಿತು.
ಇಂತಹ ವಿಚಾರಗಳಲ್ಲಿ ನಮಗೆಲ್ಲ ಇರುವ ನೋವು ಒಬ್ಬ ವ್ಯಕ್ತಿ ತಾನೇ ಸಾವನ್ನು ಅಪ್ಪಿಕೊಂಡನಲ್ಲ ಎಂಬುದಕ್ಕಾಗಿ. ಇದನ್ನು ಬಿಟ್ಟರೆ ಬೇರೆ ಕಾರಣಗಳಿಗೆ ಗಣಪತಿಗೆ ಸಹಾನುಭೂತಿ ವ್ಯಕ್ತಪಡಿಸಲು ಕಾರಣಗಳೇ ಕಾಣುತ್ತಿಲ್ಲ.  ಒಬ್ಬ  ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವನಿಗೆ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಇರಬೇಕು. ಇಲ್ಲದಿದ್ದರೆ ಆತ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಲು ಅರ್ಹನಲ್ಲ. ಜೊತೆಗೆ ಇಲಾಖೆ ಎಲ್ಲಿ ಕೆಲಸ ಮಾಡು ಎಂದು ಸೂಚಿಸುತ್ತದೆಯೋ ಅಲ್ಲಿ ಕೆಲಸ ಮಾಡಬೇಕು. ನಾನು ಕೆಲಸ ಮಾಡುವುದಿಲ್ಲ ಎನ್ನುವುದಾಗಲೀ ನನಗೆ ಇದೇ ಹುದ್ದೆ ಬೇಕು ಎನ್ನುವುದಾಗಲಿ ಆತನನ್ನು ಈ ಇಲಾಖೆಯಲ್ಲಿ ಕೆಲಸ ಮಾಡುವುದಕ್ಕೆ ಅನರ್ಹನನ್ನಾಗಿ ಮಾಡುತ್ತದೆ.
ಹಾಗೆ ತಮ್ಮ ಪದೋನ್ನತಿಗಾಗಿ ಗಣಪತಿ ಎಲ್ಲ ರೀತಿಯಲ್ಲೂ ಯತ್ನ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಬಹಿರಂಗವಾದ ದೂರವಾಣಿ ಮಾತುಕತೆಯ ಆಡಿಯೋ ನಿಜವಾಗಿದ್ದರೆ ಅದು ಅವರ ಬಗ್ಗೆ ಇನ್ನೂ ಕೆಲವು ಪ್ರಶ್ನೆಗಳನ್ನು ಹುಟ್ಟಿ ಹಾಕುತ್ತದೆ. ಆ ಆಡಿಯೋದಲ್ಲಿ ಗಣಪತಿ ತಮಗೆ ಪ್ರಮೋಷನ್  ಕೊಡಿಸುವಂತೆ ಯಾವುದೋ ಜ್ಯೋತಿಷಿಗೆ ಮನವಿ ಮಾಡುತ್ತಾರೆ. ಬಾಸ್ ಜೊತೆ ಮಾತನಾಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಅಂದರೆ ನೀವು ನಿಮ್ಮ ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ಇಲಾಖೆಗೆ ಸಂಬಂಧವೇ ಇಲ್ಲದ ಜ್ಯೋತಿಷಿಯೊಬ್ಬರ ಮೂಲಕ ಒತ್ತಡ ಹಾಕಿಸುತ್ತೀರಿ ಎಂದಾದರೆ ನಿಮ್ಮನ್ನು ಪ್ರಾಮಾಣಿಕ ಅಧಿಕಾರಿ ಎಂದು ನಾವು ಹೇಳುವುದು ಸಾಧ್ಯವೇ ? ಗಣಪತಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧರಿದ್ದರು ಎಂಬುದು ಆಘಾತಕಾರಿ ಅಲ್ಲವೆ ?
ಈ ಲೇಖನ ಬರೆಯುತ್ತಿರುವಾಗ ಯಾವುದೋ ಒಬ್ಬ ಅಧಿಕಾರಿ ತಮ್ಮ ಮೇಲಾಧಿಕಾರಿ ನೀಡುತ್ತಿರುವ ಕಿರುಕುಳದ ಬಗ್ಗೆ ಮಾತನಾಡಿದ ವರದಿ ಸುದ್ದಿ ವಾಹಿನಿಯೊಂದರಲ್ಲಿ ಬರುತ್ತಿತ್ತು. ಅವರೂ ಸಹ ತಾವು ಮತ್ತು ತಮ್ಮ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡುತ್ತಿದ್ದರು. ಇನ್ನು ಹಲವಾರು ಅಧಿಕಾರಿಗಳು ಸರ್ಕಾರಿ ನೌಕರರು ಇದೇ ರೀತಿಯ ಬೆದರಿಕೆ ಒಡ್ಡಬಹುದು. ಹಾಗೆ ಗಣಪತಿ ಅವರ ಹೆಂಡತಿ ಕೂಡ ತಮಗೆ ನ್ಯಾಯ ಸಿಗದಿದ್ದರೆ ತಾವು ಗಂಡನ ದಾರಿ ಹಿಡಿಯುವುದಾಗಿ ಬೆದರಿಕೆ ಒಡ್ಡಿದ್ದಾರೆ.  ಆತ್ಮ್ಸಹತ್ಯೆ ಮಾಡಿಕೊಳ್ಳುವುದು ಮತ್ತು ಬೆದರಿಗೆ ಒಡ್ಡುವುದು ಸಮೂಹ ಸನ್ನಿಯ ರೂಪ ಪಡೆದುಕೊಳ್ಳುವ ಅಪಾಯ ಕಂಡುಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ.
ಸಾವು ಒಂದು ಸಹಜ ಕ್ರಿಯೆ. ಆದರೆ ಸಾವನ್ನು ಆತ್ಮಹತ್ಯೆ ಮೂಲಕ ವಿಜೃಂಭಿಸುವುದು ಅಪಾಯಕಾರಿ. ಆತ್ಮಹತ್ಯೆಯ ವೈಭವೀಕರಣ ಬೇರೆಯವರನ್ನು ಆತ್ಮಹತ್ಯೆಗೆ ಪ್ರೇರೇಪಿಸಬಹುದು. ಯಾರು ಯಾರೋ ಡೆತ್ ನೋಟ್ ಬರೆದಿಟ್ಟು  ಆತ್ಮಹತ್ಯೆ ಮಾಡಿಕೊಳ್ಳಬಹುದು. ಇಂಥಹ ಒಂದು ಅಪಾಯಕಾರಿ ಸ್ಥಿತಿಗೆ ನಾವು ತಲುಪಿ ಬಿಟ್ಟಿದ್ದೇವೆ.
ಕೊನೆಯ ಮಾತು: ಗಣಪತಿ ಅವರ ಆತ್ಮಹತ್ಯೆ ಯಾರು ಯಾರಿಗೆ ಲಾಭದಾಯಕ ವಾಯಿತು ? ಯಾರು ಯಾರು ಸಾವಿನಿಂದ ಲಾಭ ಪಡೆಯಲು ಯತ್ನ ನಡೆಸಿದರು ? ಈ ಪ್ರಶ್ನೆಗೆ ಉತ್ತರ ಸಿಕ್ಕರೆ ಪ್ರಕರಣ ಸಂಪೂರ್ಣವಾಗಿ ಬಯಲಾಗುತ್ತದೆ.






Friday, July 8, 2016

ಗಣಪತಿ ಆತ್ಮಹತ್ಯೆ: ಅವರ ಹೇಳಿಕೆಯ ಬಗ್ಗೆಯೂ ಸಣ್ಣ ಸಂಶಯ ನಮಗೆಲ್ಲ ಇರಬೇಕಿತ್ತು ಅಲ್ಲವಾ ?

ಅವರು ಹೀಗೆ ಮಾಡಿಕೊಳ್ಳಬಾರದಿತ್ತು. ಬದುಕಿಗೆ ಬೆನ್ನು ತೋರಿಸಿಹೋಗಬಾರದಿತ್ತು. ಆದರೂ ಹೋಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಎಲ್ಲರಿಗೂ ಅನ್ನಿಸುವ ಹಾಗೆ ಅವರಿಗೆ ಬದುಕು ಸಾಕು ಅನ್ನಿಸಿರಬೇಕು. ಹೀಗಾಗಿ ಅವರು ಈ ತೀರ್ಮಾನ ಕೈಗೊಂಡಿರಬೇಕು.
ಆತ್ಮಹತ್ಯೆ ಮಾಡಿಕೊಳ್ಳುವವರು ದುರ್ಬಲ ಮನಸ್ಸಿನವರಾಗಿರುತ್ತಾರೆ, ಒಂದು ಕ್ಷಣ ಈ ಬದುಕು ಸಾಕು ಅನ್ನಿಸಿದಾಗ ಬದುಕಿನ ಪುಟಗಳ ಕೊನೆಯ ಹಾಳೆಯನ್ನು ಮುಗಿಚಿಹಾಕಿಬಿಡುತ್ತಾರೆ. ಅದು ಭಾವುಕತೆಯ ಅತ್ಯುಂಗ ಸ್ಥಿತಿ. ಅದಾದ ಮೇಲೆ ಎಲ್ಲವೂ ಮುಗಿಯಿತು. ಆದರೆ ಬದುಕು ಭಾವುಕತೆಯನ್ನು ಮೀರಿದ್ದು. ಭಾವುಕತೆಯೊಂದೇ ಬದುಕನ್ನು ಕಟ್ಟಿಕೊಡುವುದಿಲ್ಲ. ಭಾವುಕತೆಯನ್ನು ಮೀರುವುದು ಹೇಗೆ ?
ನನ್ನನ್ನು ಎಂದಿನಿಂದಲೂ ಕಾಡುತ್ತಿರುವ ಕೆ. ರಾಮಯ್ಯನವರು ಒಂದು ಸಣ್ಣ ಕವನ ನನಗೆ ಮತ್ತೆ ಮತ್ತೆ ನೆನಪಾಗುತ್ತಿದೆ.
ನಾನು ಆತ್ಮಹತ್ಯೆಗೆ ಕೊಟ್ಟುಕೊಳ್ಳುವ ಕಾರಣಗಳು,
ಕಾರಣಗಳೇ ಅಲ್ಲ ಎಂಬ ಸಂಶಯ ನನ್ನನ್ನು
ಬದುಕಿ ಉಳಿಸಿದೆ.
ರಾಮಯ್ಯ ಹೇಳುವಂತೆ ಆತ್ಮಹತ್ಯೆಗೆ ಕೊಡುವ ಕಾರಣಗಳು ಕಾರಣಗಳೇ ಅಲ್ಲದಿರಬಹುದು ಎಂಬ ಸಂಶಯ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವರಿಗೆ ಮೂಡಬೇಕು. ಆಗ ಬದುಕಿನ ಬಾಗಿಲು ಮತ್ತೆ ತೆರದುಕೊಳ್ಳುತ್ತದೆ. ಆದರೆ ಅತಿಯಾದ ಭಾವುಕತೆ ಸಂಶಯ ಪಡುವುದಕ್ಕೆ ಅವಕಾಶ ನೀಡುವುದಿಲ್ಲ. ಆಗ ಅವರೇ ತಮ್ಮ ಬದುಕಿನ ಬಾಗಿಲನ್ನು ಮುಚ್ಚಿಕೊಂಡು ಬಿಡುತ್ತಾರೆ. ಮಂಗಳೂರಿನ ಡಿ ವೈ ಎಸ್ ಪಿ ಗಣಪತಿ ಅವರಿಗೆ ಅವರ ಭಾವುಕತೆಯನ್ನು ಮೀರಿದ ಇಂತಹ ಒಂದು ಸಂಶಯ ಮೂಡಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಜಲಪಾತದಂತೆ ಭೋರ್ಗರೆದ ಭಾವುಕತೆ ಇದಕ್ಕೆ ಅವಕಾಶ ನೀಡಲೇ ಇಲ್ಲ.
 ಸಾವು, ಅದು ಅತ್ಮಹತ್ಯೆ ಇರಲಿ, ಅಥವಾ ನೈಜ ಸಾವು ಇರಲಿ ನಮ್ಮನ್ನೆಲ್ಲ ಭಾವುಕರನ್ನಾಗಿ ಮಾಡುತ್ತದೆ. ಇದು ಸಹಜ. ಆದರೆ ಸಾವಿನ ಕಾರಣವನ್ನು ಹುಡುಕುವಾಗ  ಭಾವುಕರಾಗಬಾರದು. ಆತ್ಮಹತ್ಯೆಯ ಕಾರಣವನ್ನು ಹುಡುಕುವಾಗ ಭಾವುಕರಾಗಬಾರದು. ಹಾಗಾದರೆ ಸತ್ಯದ ಕೊಲೆ ಆಗಿಬಿಡುತ್ತದೆ.ಮಾಧ್ಯಮ ಭಾವುಕತೆಯಿಂದ ಹೊರಕ್ಕೆ ಬರಬೇಕು. ಒಂದು ಸಣ್ಣ ಸಂಶಯ ಮಾಧ್ಯಮದವರಿಗೆ ಇರಬೇಕು. ಸಂಶಯವೇ ಮಾಧ್ಯಮದ ಮೂಲ ದೃವ್ಯ. ಅದೇ ಸತ್ಯದೆಡೆಗೆ ತೆರಳುವ ದಾರಿ. ಆದರೆ ಇಂದು ಮಾಧ್ಯಮ ಕೂಡ ಭಾವುಕವಾಗುತ್ತಿದೆ. ಹೀಗಾಗಿ ಮಾಧ್ಯಮಕ್ಕೆ ಸಂಶಯವೇ ಇಲ್ಲ. ಇದು ಮಾಧ್ಯಮವನ್ನು ಸಂಶಯ ರಹಿತವನ್ನಾಗಿ ಮಾಡಿ ಬಿಟ್ಟಿದೆ. ಅಳುವುದು ಮತ್ತು ಅಳಿಸುವುದೇ ಮಾಧ್ಯಮದ ಕಾಯಕವಾಗಿದೆ ಎಂಬ ಅನುಮಾನವೂ ನನಗೆ ಮೂಡುತ್ತಿದೆ.
ಮೊನ್ನೆ ಮಂಗಳೂರು ಡಿ ವೈ ಎಸ್ ಪಿ ಗಣಪತಿ ಆತ್ಮ ಹತ್ಯೆ ಮಾಡಿಕೊಳ್ಳುವಾಗ ಅವರಿಗೆ ಎಲ್ಲವೂ ಸಾಕು ಅನ್ನಿಸಿರಬಹುದು. ಹಾಗಿದ್ದರೆ ಅವರಿಗೆ ಎಲ್ಲವೂ ಸಾಕು ಎಂದು ಯಾಕೆ ಅನ್ನಿಸಿರಬಹುದು ? ಎಲ್ಲವನ್ನು ಮುಗಿಸಿ ಕೈಚೆಲ್ಲುವ ಹಂತಕ್ಕೆ ಅವರು ಹೋಗಿದ್ದು ಯಾಕೆ ? ಇಂಥ ತೀರ್ಮಾನಕ್ಕೆ ತೆಗೆದುಕೊಳ್ಳುವುದಕ್ಕೆ ಇರಬಹುದಾದ ಕಾರಣಗಳು ಯಾವವು ? ಅದು ಕೇವಲ ವೃತ್ತಿಯ ಕಾರಣವಾ ಅಥವಾ ಕೌಟುಂಬಿಕ ಕಾರಣಗಳು ಸೇರಿಕೊಂಡಿದ್ದವೆ ? ಅಥವಾ ಎಲ್ಲ ಕಾರಣಗಳೂ ಸೇರಿ ಅವರು ಈ ಸ್ಥಿತಿಗೆ ತಲುಪಿದ್ದರಾ ? ತಾವು ಆತ್ಮಹತ್ಯೆಗೆ ಕಂಡುಕೊಂಡ ಕಾರಣಗಳು ಕಾರಣಗಳೇ ಅಲ್ಲ ಎಂಬ ಸಂಶಯ ಅವರಿಗೆ ಮೂಡಲೇ ಇಲ್ಲವೆ ? ಇಲ್ಲ ಅನ್ನಿಸುತ್ತದೆ. ಇಂತಹ ಒಂದು ಸಣ್ಣ ಸಂಶಯ ಅವರಿಗೆ ಮೂಡಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ನಮಗೆ ಅಂದರೆ ಮಾಧ್ಯಮದವರಿಗೆ ಇಂಥಹ ಸಣ್ಣ ಸಂಶಯ ಮೂಡಿದ್ದರೆ ಈ ಘಟನೆಯನ್ನು  ಭಾವುಕತೆಯ ಪರಾಕಾಷ್ಟೆಗೆ ಒಯ್ಯುವ ಸ್ಥಿತಿ ಬರುತ್ತಿರಲಿಲ್ಲ.
ನಿನ್ನೆ ಅವರು ಮಡಿಕೇರಿಗೆ ಬರುತ್ತಾರೆ. ಹೋಟೆಲ್ ಒಂದರಲ್ಲಿ ರೂಂ ಮಾಡಿಕೊಂಡು ಮಾಧ್ಯಮಗಳ ಬಳಿ ಹೋಗುತ್ತಾರೆ. ಅಲ್ಲಿ ತಮ್ಮ ವೃತ್ತಿಯ ಬಗ್ಗೆ ಮಾತನಾಡುತ್ತಾರೆ. ತಮಗೆ ಇಲಾಖೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸುತ್ತಾರೆ. ಇಬ್ಬರು ಹಿರಿಯ ಅಧಿಕಾರಿಗಳು ಮತ್ತು ಹಿಂದಿನ ಗೃಹ ಸಚಿವ ಕೆ. ಜೆ. ಜಾರ್ಜ್ ವಿರುದ್ಧ ಆರೋಪ ಮಾಡುತ್ತಾರೆ. ತಮಗೆ ಮುಂದೆ ಏನಾದರೂ ಆದರೆ ಅದಕ್ಕೆ ಈ ಮೂವರೆ ಕಾರಣ ಎಂದು ಹೇಳುತ್ತಾರೆ. ಆಗ ಅವರು ಮಾತನಾಡುತ್ತಿದ್ದುದನ್ನು ನೋಡಿದರೆ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದು ಸ್ಪಷ್ಟವಾಗಿ ಕಾಣುತ್ತದೆ. ಅಲ್ಲಿ ಸಂಶಯಕ್ಕೆ ಎಡೆಯೇ ಇರಲಿಲ್ಲ.
ಅವರು ಈ ಆರೋಪ ಮಾಡಿದ ತಕ್ಷಣ ಮಾಧ್ಯಮದವರಾಗಿ ನಮಗೆ ಬರುವ ಮುಂದಿನ ಪ್ರಶ್ನೆ ಎಂದರೆ ಕಿರುಕುಳ ನೀಡಿದರು ಎಂದರೆ ಹೇಗೆ ಕಿರುಕುಳ ನೀಡಿದರು ಎಂಬುದು. ಕಿರಿಕುಳ ನೀಡಿದ್ದಕ್ಕೆ ಸಾಕ್ಷಾಧಾರಗಳು ಇವೆಯೆ ಎಂಬುದು ಮತ್ತೊಂದು ಪ್ರಶ್ನೆ..ವರ್ಗಾವಣೆ ಮಾಡಿದ್ದನ್ನು ಕಿರುಕುಳ ಎನ್ನಬಹುದೆ ? ಅಥವಾ ನಾನ್ ಎಕ್ಸಿಕ್ಯೂಟೀವ್ ಪೋಸ್ಟ್ ಗೆ ಹಾಕಿದ್ದನ್ನು ಕಿರುಕುಳ ಎಂದು ಭಾವಿಸಬಹುದೆ ? ಯಾಕೆಂದರೆ ಒಂದು ಸರ್ಕಾರಿ ಇಲಾಖೆಯಲ್ಲಿ ವರ್ಗಾವಣೆ ಎಂಬುದು ತುಂಬಾ ಸಹಜವಾದದ್ದು. ಸರ್ಕಾರಿ ಕೆಲಸ ಮಾಡುವವನು ವರ್ಗಾವಣೆಯನ್ನು ಒಪ್ಪಿಕೊಳ್ಳದೇ ಇರುವಂತಿಲ್ಲ. ಹಾಗೆ ನಾನ್ ಎಕ್ಸಿಕ್ಯೂಟೀವ್ ಹುದ್ದೆಗೆ ಹಾಕುವುದು ಕಿರಿಕುಳ ಎಂದಾಗುವುದೆ ? ಪೊಲೀಸ್ ಮ್ಯಾನುವಲ್ ಪ್ರಕಾರ ಒಬ್ಬ ಅಧಿಕಾರಿಯನ್ನು ಎಷ್ಟು ಕಾಲ ಎಕ್ಸಿಕ್ಯುಟೀವ್ ಮತ್ತು ಎಷ್ಟು ಕಾಲ ನಾನ್ ಎಕ್ಸಿಕ್ಯುಟೀವ್ ಹುದ್ದೆಗೆ ಹಾಕಬೇಕು ಎಂಬ ಬಗ್ಗೆ ನಿಯಮವೇನಾದರೂ ಇದೆಯೇ ?
ಈ ಪ್ರಶ್ನೆಗಳಿಗೆ ಅವರ ಸಂದರ್ಶನದಲ್ಲಿ ಉತ್ತರವಿಲ್ಲ. ಯಾಕೆಂದರೆ ಅವರು ಕೇವಲ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ತಾತ್ವಿಕವಾಗಿ ಮಾತನಾಡಿಲಿಲ್ಲ. ಕಾನೂನನ್ನು ಉಲ್ಲೇಖಿಸಿ ಮಾತನಾಡಿಲ್ಲ.  ಯಾಕೆಂದರೆ ಆಗಲೇ ಅವರು ತಮ್ಮ ಆತ್ಮಹತ್ಯೆಯ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಂಡಾಗಿತ್ತು. ಹೀಗಾಗಿ ತಮ್ಮ ಸಾವಿಗೆ ಯಾರು ಯಾರು ಕಾರಣ ಎಂದು ದಾಖಲಿಸುವ ಕೆಲಸಕ್ಕಾಗಿ ಮಾತ್ರ ಅವರು ಮಾಧ್ಯಮದ ಎದುರು ಬಂದಿದ್ದರು.
ಅವರು ಮಾಧ್ಯಮದ ಜೊತೆ ಮಾತನಾಡುವಾಗ ಕೊನೆಯ ಮಾತೊಂದನ್ನು ಹೇಳುತ್ತಾರೆ. ಈ ಸರ್ಕಾರ ಇರುವವರೆಗೆ ಅನ್ಯಾಯ ಮುಂದುವರಿಯುತ್ತದೆ. ಈ ಸರ್ಕಾರ ಹೋಗಬೇಕು..! ಜೊತೆಗೆ ನನಗಾದ ಅನ್ಯಾಯ ಬೇರೆಯವರಿಗೆ ಆಗಬಾರದು ಇದೇ ನನ್ನ ಉದ್ದೇಶ ಎಂದು ಅವರು ಹೇಳುತ್ತಾರೆ.
ತಮ್ಮ ಸೇವಾವಧಿಯಲ್ಲಿ ತಮಗೆ ಆದ ಅನ್ಯಾಯ ಮತ್ತು ಕಿರುಕುಳದ ಬಗ್ಗೆ ಆರೋಪಿಸುವ ಗಣಪತಿ ತಮ್ಮ ಮಾತಿನ ಕೊನೆಯಲ್ಲಿ ರಾಜಕೀಯ ಉದ್ದೇಶವನ್ನು ಹೊರಗೆ ಹಾಕುತ್ತಾರೆ. ಅದು ಈ ಸರ್ಕಾರ ಹೋಗಬೇಕು ಎಂಬುದು. ಈ ಮಾತಿನ ಹಿಂದಿನ ಉದ್ದೇಶ ರಾಜಕೀಯ ಬದಲಾವಣೆ ಮತ್ತು ಸರ್ಕಾರದ ಬದಲಾವಣೆ..
ಅವರ ಮಾತಿನಿಂದ ಇನ್ನಷ್ಟು ಪ್ರಶ್ನೆಗಳು ಉದ್ಭವವಾಗುತ್ತದೆ. ಅಂದಿನ ಗೃಹ ಸಚಿವ ಕೆ. ಜೆ. ಜಾರ್ಜ್ ಗಣಪತಿ ಅವರಿಗೆ ಕಿರುಕುಳ ನೀಡಿದರು ಎಂದಾದರೆ ಅದಕ್ಕೆ ಇರುವ ಕಾರಣಗಳೇನು ? ಜಾರ್ಜ್ ಅವರಿಗೆ ಯಾಕೆ ಗಣಪತಿ ಅವರಿಗೆ ಕಿರುಕುಳ ನೀಡುವಷ್ಟು ಸಿಟ್ಟು ? ಈ ಪ್ರಶ್ನೆಗಳಿಗೆ ಅವರ ಮಾತುಗಳಲ್ಲಿ ಉತ್ತರವಿಲ್ಲ.
ಈ ಬಗ್ಗೆ ಕೆ.ಜೆ.ಜಾರ್ಜ್ ಹೇಳುವುದು ನನಗೆ ಗಣಪತಿ ಯಾರು ಎಂಬುದು ಗೊತ್ತಿಲ್ಲ. ಅವರು ಒಮ್ಮೆ ಮಾತ್ರ ನನ್ನನ್ನು ಭೇಟಿ ಮಾಡಿದ್ದರು. ಆಗ ತಮ್ಮನ್ನು ಎಕ್ಸಿಕ್ಯುಟೀವ್ ಹುದ್ದೆಗೆ ಹಾಕಬೇಕು ಎಂದು ಮನವಿ ಮಾಡಿದ್ದರು.. ಆಗ ನಾನು ಇದು ಆಡಳಿತಾತ್ಮಕ ವಿಚಾರ. ನಾನು ಇದರಲ್ಲಿ ತಲೆ ಹಾಕಲಾರೆ ಎಂದು ಹೇಳಿದ್ದೆ..
ಇವರಿಬ್ಬರ ಮಾತುಗಳನ್ನು ಇಟ್ಟುಕೊಂಡು ಇನ್ನಷ್ಟು ಆಳವಾಗಿ ನೋಡೋಣ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇರುವ ಇನಸ್ಪೆಕ್ಟರ್ ಗಳ ಸಂಖ್ಯೆ ಎಷ್ಟು ? ಈ ಎಲ್ಲ ಇನಸ್ಪೆಕ್ಟರ್ ಗಳ ಬಗ್ಗೆ ಸಚಿವರಾದವರಿಗೆ ಗೊತ್ತಿರುತ್ತದೆಯೆ ? ಹೀಗೆ ಎಲ್ಲರಿಗೂ ಕಿರುಕುಳ ನೀಡುವುದು ಅವರ ಕೆಲಸವೇ ? ಒಂದೊಮ್ಮೆ ಯಾರೋ ಒಬ್ಬ ಇನಸ್ಪೆಕ್ಟರ್ ಗೆ ಕಿರುಕುಳ ನೀಡುತ್ತಾರೆ ಎಂದರೆ ಅದಕ್ಕೆ ಬಲವಾದ ಕಾರಣಗಳು ಇರಬೇಕು. ಹಾಗಿದ್ದರೆ ಗಣಪತಿ ಅವರ ಪ್ರಕರಣದಲ್ಲಿ ಅಂತಹ ಕಾರಣ ಯಾವುದು ? ಈ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಗಣಪತಿ ಇಂತಹ ಮಾಹಿತಿಯನ್ನು ಒದಗಿಸಿಲ್ಲ..
ನಮ್ಮ ಜನತಂತ್ರ ವ್ಯವಸ್ಥೆಯಲ್ಲಿ ಆರೋಪ ಮಾಡುವ ಹಕ್ಕು ಎಲ್ಲರಿಗೂ ಇದೆ. ಗಣಪತಿ ಅವರಿಗೂ ಸಹ. ಹಾಗೆ ಕಿರುಕುಳದ ಆರೋಪ ಮಾಡುವುದು ಸುಲಭ. ಈಗ ಗಣಪತಿ ಅವರ ಬಗ್ಗೆ ಸಿಂಪಥಿಯಿಂದ ಮಾತನಾಡುವ ಮಾಧ್ಯಮಗಳ ಕಚೇರಿಯಲ್ಲೂ ಕಿರುಕುಳ ಇದೆ ಎಂದು ಯಾರೋ ಒಬ್ಬ ಸಿಬ್ಬಂದಿ ಮಾತನಾಡಬಹುದು, ಆರೋಪ ಮಾಡಬಹುದು. ಶಶಿಧರ ಭಟ್ ಕಿರುಕುಳ ನೀಡುತ್ತಾರೆ ಎಂದು ನನ್ನ ಸಹೋದ್ಯೋಗಿ ನನ್ನನ್ನು ದೂರಬಹುದು. ಹಾಗೆ ಕಿರುಕುಳದ ಆರೋಪ ಮಾಡಿದಾಗ ಮಾಡಿದವರ ಫೂರ್ವಾಪರಗಳನ್ನು ತಿಳಿದುಕೊಳ್ಳಬೇಕು. ಅವರ ಉದ್ದೇಶ ಏನಿರಬಹುದು ಎಂದು ತಿಳಿದುಕೊಳ್ಳಲು ಯತ್ನ ಮಾಡಬೇಕು. ಯಾಕೆಂದರೆ ಕಿರುಕುಳದ ಆರೋಪ ಮಾಡುವುದು ತುಂಬಾ ಸುಲಭ. ಮಾಧ್ಯಮ ಸಂಶಯದಿಂದ ಕೆಲಸ ಮಾಡಿದರೆ ಈ ಪ್ರಶ್ನೆಗಳು ಮೂಡುತ್ತವೆ. ಇಲ್ಲದಿದ್ದರೆ ಭಾವುಕತೆ ಎಂಬ ಬೆಂಕಿಗೆ ತುಪ್ಪ ಸುರಿದಂತೆ..
ಗಣಪತಿ ಅವರು ಅಪ್ಪಟ ಪ್ರಾಮಾಣಿಕ ಎಂಬ ತೀರ್ಪನ್ನು ಮಾಧ್ಯಮದವರಾದ ನಾವು ನೀಡಿ ಬಿಟ್ಟಿದ್ದೇವೆ. ಕೆಲಸ ವಾಹಿನಿಗಳು ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿಯೂ ಅಗಿದೆ. ಸಚಿವ ಜಾರ್ಜ್ ಅವರ ರಾಜೀನಾಮೆಗೂ ಕೆಲವು ಮಾಧ್ಯಮಗಳು ಒತ್ತಾಯಿಸಿವೆ. ಹಾಗಿದ್ದರೆ ಗಣಪತಿ ಅವರು ಪ್ರಾಮಾಣಿಕರೆ ಎಂಬ ಪ್ರಶ್ನೆಗೆ ಮೊದಲು ಉತ್ತರ ಕಂಡುಕೊಳ್ಳಬೇಕು. ಆದರೆ ಇಲ್ಲಿ ಅವರ ಪ್ರಾಮಾಣಿಕತೆಯ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಒಂದು ಕೋಟಿ ಕಳವಿನ ಪ್ರಕರಣದಲ್ಲಿ ಅವರತ್ತ ಸಂಶಯದ ಮುಳ್ಳು ನೆಟ್ಟಿದೆ. ಮಂಗಳೂರು ಚರ್ಚ್ ಮೇಲಿನ ಧಾಳಿ ಪ್ರಕರಣದಲ್ಲಿ ಅವರ ಸಂಘ ಪರಿವಾರದ ಸದಸ್ಯರಂತೆ ನಡೆದುಕೊಂಡರು ಎಂಬ ಆರೋಪಗಳಿವೆ. ಹೀಗಾಗಿ ಅವರು ಪ್ರಶ್ನಾತೀತ ಅಧಿಕಾರಿ ಅಲ್ಲ ಎಂಬುದು ಸ್ಪಷ್ಟ. ಹಾಗಿದ್ದರೆ ಅವರು ಪ್ರಾಮಾಣಿಕರು ಎಂಬ ಬಗ್ಗೆಯೇ ಭಿನ್ನಾಭಿಪ್ರಾಯ ಇರುವಾಗ ಅವರ ಮಾತುಗಳೆಲ್ಲ ಪ್ರಾಮಾಣಿಕ ಎಂದು ನಂಬುವುದು ಹೇಗೆ ?
ಅವರು ಸಾಯುವುದಕ್ಕೆ ಮೊದಲು ನೀಡಿದ ಹೇಳಿಕೆ ಸಂಪೂರ್ಣ ಸತ್ಯ ಎಂದು ನಾವು ಮಾಧ್ಯಮದವರು ನಂಬುವುದು ಹೇಗೆ ?
ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮಾಧ್ಯಮದವರಾದ ನಾವು ಯೋಚಿಸಬೇಕಿತ್ತು. ಆದರೆ ಅವರ ಆತ್ಮಹತ್ಯೆ ಸುದ್ದಿ ಬಂದ ತಕ್ಷಣ ನಾವು ಅವರನ್ನು ನಾಯಕರನ್ನಾಗಿ ಸೃಷ್ಟಿಸಲು ಹೊರಟು ಬಿಟ್ಟೆವು, ಪ್ರಾಮಾಣಿಕ ಅಧಿಕಾರಿ ಎಂಬ ಬಿರುದು ನೀಡಿದೆವು. ಸಚಿವರ ರಾಜೀನಾಮೆಗೆ ಒತ್ತಾಯಿಸಿದೆವು. ಅವರ ತಂದೆ ನೀಡಿದ ದೂರಿನ ಬಗ್ಗೆಯಾಗಲೀ ಅಧಿಕಾರಿಗಳು ನೀಡಿದ ಹೇಳಿಕೆಯನ್ನಾಗಲಿ ಗಂಭೀರವಾಗಿ ತೆಗೆದುಕೊಳ್ಳಲು ಮುಂದಾಗಲೇ ಇಲ್ಲ. ಯಾಕೆಂದರೆ ಮಾಧ್ಯಮ ಆಗಲೇ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಕಿರುಕುಳದದಿಂದ ನಡೆದ ಆತ್ಮಹತ್ಯೆ ಪ್ರಕರಣ ಎಂದು ತೀರ್ಮಾನಿಸಿ ಆಗಿತ್ತು. ಡಿ. ಕೆ. ರವಿ ಪ್ರಕರಣದ ನಂತರ ಇನ್ನೊಂದು ನಾಯಕನ್ನು ಸೃಷ್ಟಿಸಲು ವೇದಿಕೆಯನ್ನು ಸಿದ್ಧಪಡಿಸಿ ಆಗಿತ್ತು.
ಗಣಪತಿ ಅವರಿಗೆ ಮಾನಸಿಕ ಖಿನ್ನತೆ ಇತ್ತು ಎಂಬುದನ್ನಾಗಲೀ, ಅವರು ಸತತವಾಗಿ ಔಷಧವನ್ನು ಸೇವಿಸುತ್ತಿದ್ದರು ಎಂಬುದನ್ನಾಗಲಿ ನಂಬಲು ಮಾಧ್ಯಮ ಸಿದ್ಧ ವಿರಲಿಲ್ಲ. ಯಾಕೆಂದರೆ ಹಾಗೆ ನಂಬಿದ ತಕ್ಷಣ ಈ ಅಧಿಕಾರಿಯ ಆತ್ಮಹತ್ಯೆ ಪ್ರಕರಣ ಅದರ ಮಹತ್ವವನ್ನು ಕಳೆದುಕೊಂಡು ಬಿಡುತ್ತದೆ. ಅದು ಮಾಧ್ಯಮಕ್ಕೆ ಬೇಕಾಗಿಲ್ಲ.
ಡಿ. ಕೆ. ರವಿ ಅವರನ್ನು ಇದೆ ರೀತಿ ನಾಯಕನ್ನಾಗಿ ಸೃಷ್ಟಿಸಿದ ನಂತರ ಏನಾಯಿತು ಗಮನಿಸಿ. ಈ ಪ್ರಕರಣವನ್ನು ಸಿ ಬಿ ಐ ತನಿಖೆ ನಡೆಸಿ ಇದು ಆತ್ಮಹತ್ಯೆ ಪ್ರಕರಣ ಎಂದು ವರದಿ ನೀಡಿದರೂ ಯಾರೂ ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಸಾಮಾನ್ಯ ಜನ ಕೂಡ ಇದು ಕೊಲೆ ಪ್ರಕರಣವೇ ಎಂದು ಹೇಳಲು ಪ್ರಾರಂಭಿಸಿದ್ದಾರೆ. ಮಾಧ್ಯಮ ಕೂಡ ಹಾಗೆ ಹೇಳುತ್ತದೆ. ಇನ್ನು ಈ ಪ್ರಕರಣದ ತನಿಖೆಯನ್ನು ಯಾವುದೂ ವಿದೇಶಿ ತನಿಖಾ ಸಂಸ್ಥೆಗೆ ನೀಡಿ ಅವರು ಆತ್ಮಹತ್ಯೆ ಎಂದು ವರದಿ ನೀಡಿದರೂ ಜನ ಒಪ್ಪಿಕೊಳ್ಳಲಾರರು. ಯಾಕೆಂದರೆ ಇದೊಂದು ನಿಗೂಢ ಕೊಲೆ ಎಂದು ಮಾಧ್ಯಮಗಳು ತೀರ್ಮಾನಕ್ಕೆ ಬಂದಾಗಿದೆ. ಅದೇ ರೀತಿ ಪ್ರಚಾರ ಮಾಡಿ ಆಗಿದೆ. ಮಹಾನ್ ನಾಯಕನ ಸೃಷ್ಟಿ ಆದ ಮೇಲೆ ಅವನು ನಾಯಕನಲ್ಲ ಎಂದು ಹೇಳಿದರೆ ಯಾರೂ ನಂಬುವುದಿಲ್ಲ.
ನಾವು ಕೆಲವೇ ದಿನಗಳ ಹಿಂದೆ ಅನುಪಮಾ ಶೆಣೈ ಎಂಬ ಡಿ ವೈ ಎಸ್ ಪಿ ರಾಜೀನಾಮೆ ಪ್ರಕರಣವನ್ನು ನೋಡಿದ್ದೇವೆ. ಇವರು ತುಂಬಾ ಪ್ರಾಮಾಣಿಕ ಅಧಿಕಾರಿ ಇರಬಹುದು. ಅವರಿಗೂ ಕಿರುಕುಳ ಆಗಿರಬಹುದು. ಆದರೆ ಆಕೆ ರಾಜೀನಾಮೆ ನೀಡಿದ ಮೇಲೆ ದಕ್ಷಿಣ ಕನ್ನಡ ಪ್ರಮುಖ ಆರ್ ಎಸ್ ಎಸ್ ನಾಯಕರ ಶಿಕ್ಷಣ ಸಂಸ್ಥೆಗೆ ಭೇಟಿ ನೀಡುತ್ತಾರೆ. ರಾಜಕಾರಣಿಯಂತೆ ಮಾತನಾಡುತ್ತಾರೆ. ಆಕೆಯನ್ನು ಪ್ರಾಮಾಣಿಕ ಅಧಿಕಾರಿ ಪಟ್ಟಕ್ಕೆ ಏರಿಸಿದ ನಾವು ಈ ಬಗ್ಗೆ ಯೋಚಿಸುವುದಿಲ್ಲ. ಅವರಿಗೂ ಆರ್ ಎಸ್ ಎಸ್ ಸಂಘಟನೆಗೂ ಇರುವ ಸಂಬಂಧದ ಬಗ್ಗೆ ಸಣ್ಣ ಸಂಶಯವೂ ನಮಗೆ ಬರುವುದಿಲ್ಲ. ಇವರ ರಾಜೀನಾಮೆ ಪ್ರಕರಣದ ಹಿಂದೆ ಆರ್ ಎಸ್ ಎಸ್ ಕೈವಾಡ ಇರಬಹುದೇ ಎಂಬ ಸಂಶಯ ಮಾಧ್ಯಮಕ್ಕೆ ಬರುವುದಿಲ್ಲ. ಹಾಗೆ ಒಂದು ಸಣ್ಣ ಅನುಮಾನ ಮೂಡಿದ್ದರೆ ಇಡೀ ಸ್ಟೋರಿ ಬೇರೆ ರೂಪ ಪಡೆಯುತ್ತಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ. ನಾವೇ ಸೃಷ್ಟಿಸಿದ ನಾಯಕಿಯನ್ನು ಖಳನಾಯಕಿಯನ್ನಾಗಿ ಮಾಡುವುದಕ್ಕೆ ನಮಗೆ ಇಷ್ಟ ಇಲ್ಲ.
ಬೆಳಿಗ್ಗೆ ದಿನ ಪತ್ರಿಕೆಯೊಂದನ್ನು ನೋಡುತ್ತಿದ್ದೆ. ಆ ಪತ್ರಿಕೆಯಲ್ಲಿ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬ ಇನ್ನೊಬ್ಬ ಅಧಿಕಾರಿಯ ಸ್ಟೋರಿ ಬ್ಯಾನರ್ ಹೆಡ್ ಲೈನ್ ಆಗಿ ಬಂದಿದೆ. ಅವರೂ ಆತ್ಮಹತ್ಯೆಗೆ ಮಾಡಿಕೊಳ್ಳಬಹುದು ಎಂಬ ಎಚ್ಚರಿಕೆಯನ್ನು ವರದಿಯಲ್ಲಿ ನೀಡಲಾಗಿದೆ...!

ಇದೇ ಒಂದು ಸಮೂಹ ಸನ್ನಿಯಾಗಬಹುದು. ಇನ್ನೂ ನೂರಾರು ಅಧಿಕಾರಿಗಳು ಕಿರುಕುಳದ ಆರೋಪ ಮಾಡಬಹುದು. ಮಾಧ್ಯಮ ಇಂತಹ ಹಲವಾರು ಕಥೆಗಳನ್ನು ಎತ್ತಿ ಪ್ರಕಟಿಸಬಹುದು. ಇದೆಲ್ಲ ಏನು ? ನಾವು ಏನು ಮಾಡಲು ಹೊರಟಿದ್ದೇವೆ. ನಾನು ಮತ್ತೆ ಸಂಶಯದ ವಿಚಾರಕ್ಕೆ ಬರುತ್ತೇನೆ. ನನಗೆ ಏನನ್ನೂ ನಂಬಲು ಸಾಧ್ಯವಾಗುತ್ತಿಲ್ಲ ನನಗೆ ಎಲ್ಲದರ ಮೇಲೆ ಎಲ್ಲರ ಮೇಲೆ ಸಂಶಯ. ನನ್ನ ಮೇಲೆ ಸಹ ನನಗೆ ಸಂಶಯ ಇದೆ. ನಾನು ಯೋಗ್ಯನೋ ಅಯೋಗ್ಯನೋ ಎಂಬ ಪ್ರಶ್ನೆಗೆ ಉತ್ತರ ದೊರಕದೇ ಒದ್ದಾಡುತ್ತಿದ್ದೇನೆ. ನಾನು ಆಯೋಗ್ಯನಿರಬಹುದು ಎಂಬ ಸಣ್ಣ ಸಂಶಯ ನನಗೆ ಯಾವಾಗಲೂ ಇರುತ್ತದೆ. ಹೀಗಾಗಿ ನಾನು ಯೋಗ್ಯನಾಗಲು ಪ್ರಯತ್ನಿಸಲು ಸಾಧ್ಯವಾಗಿದೆ. ಇಂತಹ ಸಂಶಯ ಮಾಧ್ಯಮಕ್ಕೂ ಇರಬೇಕು ಅಲ್ಲವಾ ?

Thursday, June 30, 2016

ನಾನು ಪತ್ರಿಕೋದ್ಯಮ ಆಗದಿದ್ದರೆ ದೊಡ್ದ ಗೂಂಡಾ ಆಗುತ್ತಿದ್ದೆ....!

ಯಾವ ಮೋಹನ ಮುರಳಿ ಕರೆಯಿತೋ ಗೊತ್ತಿಲ್ಲ.  ಪತ್ರಿಕೋದ್ಯಮ ನನ್ನನ್ನು ಕರೆಯಿತು. ನನ್ನನ್ನು ಅಪ್ಪಿಕೊಂಡಿತು. ನನಗೆ ಬದುಕು ನೀಡಿತು. ಅನ್ನ ನೀಡಿತು. ನನ್ನ ಬದುಕು ಹಾಗೆ ನಡೆದುಕೊಂಡು ಬಂತು.
ಈ ಸುದೀರ್ಘ ಪತ್ರಿಕೋದ್ಯಮದ ದಾರಿಯಲ್ಲಿ ನನಗೆ ದಕ್ಕಿದ್ದೆಷ್ಟು ನನಗೆ ಗೊತ್ತಿಲ್ಲ. ಆದರೆ ನನ್ನ ಯೋಗ್ಯತೆಗೆ ಮೀರಿ ಎಲ್ಲವನ್ನು ಕೊಟ್ಟ ಪತ್ರಿಕೋದ್ಯಮ ಎಂತಹ ಕರುಣಾಮಯಿ ?
ಮಲೇನಾಡಿನ ಮೂಲೆಯ ಹಳ್ಳಿಯೊಂದರಿಂದ ಬಂದ ನನಗೆ ಪತ್ರಿಕೋದ್ಯಮದ ಬಾಗಿಲು ಹಾಗೆ ತೆರೆದು ಬಿಟ್ಟಿತಲ್ಲ ? ನನ್ನನ್ನು ಸಲಹಿ ಸಾಕಿತಲ್ಲ ? ಪತ್ರಿಕಾ ದಿನಾಚರಣೆಯ ಇಂದಿನ ಸಂದರ್ಭದಲ್ಲಿ ಇದೆಲ್ಲ ನೆನಪಾಗುತ್ತಿದೆ. ಹಾಗೆ ನನ್ನ ಚೆಂಬರಿನಲ್ಲಿ ಕುಳಿತು ಹಳೆಯದನ್ನೆಲ್ಲ ಮೆಲಕು ಹಾಕುತ್ತೇನೆ. ಆಗ ನನ್ನಲ್ಲಿ ಮೂಡುವುದು ಧನ್ಯತಾ ಭಾವ.
ಅದು ಎಂಬತ್ತರ ದಶಕ. ಕಾಲೇಜಿನಲ್ಲಿ ನಾನೊಬ್ಬ ಉಡಾಳ. ತರಲೆ, ಜಗಳ ಗಂಟ. ಆಗ ನನ್ನ ಮೇಲೆ ಪ್ರಭಾವ ಬೀರಿದ್ದು ವಿಷ್ಣುವರ್ಧನ ಅಭಿನಯದ ನಾಗರಹಾವು ಸಿನಿಮಾ. ನಾನೇ ರಾಮಚಾರಿ ಎಂದುಕೊಂಡು ಮುಖಗಂಟಿಕ್ಕಿಕೊಂಡು, ಹುಡುಗರ ಪಡೆ ಕಟ್ಟಿಕೊಂಡು ಓಡಾಡುತ್ತಿದ್ದ ದಿನಗಳು. ಕಾಲೇಜಿನಲ್ಲಿ ಯಾವುದೇ ಗಲಾಟೆಯಾದರೂ ಅದಕ್ಕೆ ನಾನೇ ಕಾರಣ ಎಂದು ಎಲ್ಲರೂ ತೀರ್ಮಾನಕ್ಕೆ ಬರುತ್ತಿದ್ದ ಸಂದರ್ಭ ಅದು.
ನಾನು ಯೋಚಿಸುತ್ತೇನೆ. ನನ್ನ ತರಲೆಯಿಂದ ಅದೆಷ್ಟು ಹುಡುಗಿಯರು ನೋವನ್ನು ಅನುಭವಿಸಿದರು ? ಹೆಣ್ಣು ಹೆತ್ತವರು ಕಾಲೇಜಿಗೂ ಬಂದು ಗಲಾಟೆ ಮಾಡಿದರು. ನನ್ನ ಅಪ್ಪನವರೆಗೆ ದೂರು ಒಯ್ದರು. ಆದರೂ ನಾನು ಮಾತ್ರ ಬದಲಾಗಲೇ ಇಲ್ಲ. ಸೈಕಲ್ ಚೈನ್ ಗೆ ಮರದ ಹಿಡಿಕೆ ಹಾಕಿ ಅದನ್ನು ಬೆಲ್ಟ್ ಜಾಗದಲ್ಲಿ ಕಟ್ಟಿಕೊಂಡು ಹೊರಗೆ ಬರುತ್ತಿದ್ದ ನನ್ನನ್ನು ನೋಡಿದವರು ಹಿಡಿ ಶಾಪ ಹಾಕುತ್ತಿದ್ದರಲ್ಲ ?
ನನ್ನಪ್ಪ ತಾಲೂಕಿನಲ್ಲೇ ಗೌರವಾನ್ವಿತ ವ್ಯಕ್ತಿ; ಅವರ ಮೇಲಿನ ಗೌರವದಿಂದ ಜನ ನನ್ನ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಳ್ಳುತ್ತಿದ್ದರು. ಆದರೆ ನಾನು ಮಾತ್ರ ಬದಲಾಗಲೇ ಇಲ್ಲ. ನನ್ನ ಹರಿದ ಖಾದಿ ಪ್ಯಾಂಟನ್ನು ನೋಡಿ ನಕ್ಕ ನನ್ನ ಸಹಪಾಠಿ ಹುಡುಗಿಗೆ ನಾನು ಕಾಡಿದ ಬಗೆ, ಅಬ್ಬಬ್ಬಾ....
ಆಕೆ ಈಗ ಎಲ್ಲಿದ್ದಾಳೋ ? ನನ್ನ ಬಗ್ಗೆ ಏನು ಅಂದುಕೊಂಡಿದ್ದಾಳೋ ಗೊತ್ತಿಲ್ಲ. ಆಗ ನಾನು ಮಾತ್ರ ಅವರ ಪಾಲಿಗೆ ಟೆರರ್..!
ಆಕೆ ಸ್ವಲ್ಪ ಗತ್ತಿನ ಹುಡುಗಿ. ನೋಡದಕ್ಕೆ ಸುಂದರವಾಗಿಯೂ ಇದ್ದಳು. ಅದೊಂದು ದಿನ ನಾನು ನನ್ನ ಸ್ನೇಹಿತರ ಜೊತೆಗೆ ಕಾಲೇಜಿನಿಂದ ಬರುವಾಗ ನನ್ನ ಹರಿದು ಪ್ಯಾಂಟು ನೋಡಿ ನಕ್ಕಳಲ್ಲ ? ಆಗಲೇ ನನ್ನ  ಪಿತ್ತ ನೆತ್ತಿಗೆ ಏರಿತು. ಮರುದಿನವೇ ಆಕೆಗೆ ಒಂದು ಪತ್ರ ಬರೆದೆ..ನಾನು ಗೌರವಾನ್ವಿತ ಕುಟುಂಬದಿಂದ ಬಂದವನು. ನನಗೂ ಅಕ್ಕ ತಂಗಿಯರಿದ್ದಾರೆ. ನಾನು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲೆ. ಆದರೆ ಮಾಡುವುದಿಲ್ಲ, ಇದು ಪತ್ರದ ಮುಖ್ಯಾಂಶ. ಹಾಗೆ ನೋಡಿದರೆ ನನಗೆ ಅಕ್ಕ ತಂಗಿಯರಿಲ್ಲ. ಆದರೂ ಪತ್ರಕ್ಕೆ ವಜನ್ನು ಬರಲಿ ಎಂದು ಅಕ್ಕ ತಂಗಿಯರಿದ್ದಾರೆ ಎಂದು ಬರೆದಿದ್ದೆ. ಇದನ್ನು ಆಕೆ ಪ್ರಾಂಶುಪಾಲರಿಗೆ ನೀಡಿದಳು. ಆಗ ಕಾಲೇಜಿನ ಪ್ರಾಂಶುಪಾಲರಾಗಿದ್ದವರು ಬಿ,ಎಚ್. ಶ್ರೀಧರ್. ಅವರು ನನ್ನನ್ನು ತಮ್ಮ ಚಂಬರಿಗೆ ಕರೆಸಿದರು.. ಏನಯ್ಯ ಹುಡುಗಿಯರಿಗೆ ಪತ್ರ ಬರೆಯುತ್ತೀಯ ಎಂದು ತರಾಟೆಗೆ ತೆಗೆದುಕೊಂಡರು. ನಾನು ಅವರಿಗೆ ಹೇಳಿದೆ. ನಾನು ತಪ್ಪು ಬರೆದಿದ್ದರೆ ನಿಮ್ಮ ಚೆಪ್ಪಲಿಯಿಂದ ನನಗೆ ಹೊಡೀರಿ.
ಅವರು ಪತ್ರ ಓದಿದರು. ನನಗೂ ಅಕ್ಕ ತಂಗಿಯರಿದ್ದಾರೆ ಎಂಬ ಮಾತು ಅವರ ಮನಸ್ಸಿಗೆ ನಾಟಿತು. ನಾನು ಯೋಗ್ಯ ವಿದ್ಯಾರ್ಥಿ ಎಂಬ ತೀರ್ಮಾನಕ್ಕೆ ಬಂದ ಅವರು ಯಾವುದೇ ಕ್ರಮ ತೆಗೆದುಕೊಳ್ಳದೇ ನನ್ನನ್ನು ಕಳುಹಿಸಿ ಕೊಟ್ಟರು. ಆಗಲೇ ಅಕ್ಕ ತಂಗಿಯರು ಇರುವುದು ಎಂತಹ ರಕ್ಷಣ ನೀಡುತ್ತದೆ ಎಂದು ಜ್ನಾನೋದಯ ಆದದ್ದು..ನನಗೂ ಅಕ್ಕ ತಂಗಿಯರು ಇರಬೇಕಿತ್ತು ಎಂದು ಅನ್ನಿಸಿದ್ದು. ಆದರೆ ನನ್ನಪ್ಪ ಎಬ್ಬರು ಮಕ್ಕಳು ಸಾಕು ಎಂದು ಸುಮ್ಮನಾಗಿ ಬಿಟ್ಟ. ಈಗ ನನಗೆ ಒಬ್ಬ ತಮ್ಮನಿದ್ದಾನೆ. ಅವನು ಸಾದಾ ಸರಳ ಮನುಷ್ಯ. ಆತ ಪತ್ರಿಕೋದ್ಯಮಿ ಆಗಿದ್ದರೂ ನನ್ನಂತೆ ತರಲೆ ಅಲ್ಲ.ಒಳ್ಳೆ ಮನುಷ್ಯ..
ಇದಾದ ಮೇಲೆ ನನ್ನಪ್ಪ ಸೇರಿದಂತೆ ಎಲ್ಲರೂ ಸೇರಿ ನನ್ನನ್ನು ಬೇರೆ ಊರಿಗೆ ಕಳುಹಿಸುವ ಒಮ್ಮತದ ನಿರ್ಧಾರಕ್ಕೆ ಬಂದರು. ಯಾಕೆಂದರೆ ನಾನು ಊರಲ್ಲಿದ್ದರೆ ಊರಿಗೆ ಅಪಾಯ ಎನ್ನುವುದು ಎಲ್ಲರ ಅಭಿಪ್ರಾಯವಾಗಿತ್ತು. ನನ್ನನ್ನು ಬೆಳಗಾವಿಯ ಗೋಗಟೆ ಕಾಲೇಜಿಗೆ ಸಾಗು ಹಾಕಿದರು. ತಾಲೂಕಿನ ಜನ ಪೀಡೆ ತೊಲಗಿತು ಎಂದು ಸಮಾಧಾನದ ನಿಟ್ಟುಸಿರು ಬಿಟ್ಟರು. ಹೆಣ್ಣು ಹೆತ್ತವರು ತಮ್ಮ ಮಕ್ಕಳು ಸೇಪ್ ಎಂದುಕೊಂಡರು.
ಬೆಳಗಾವಿಯಲ್ಲಿ ನನ್ನ ವಿದ್ಯಾಭ್ಯಾಸ ಮುಗಿಸಿ ಊರಿಗೆ ಮರುಳಿ ಕೃಷಿ ಮಾಡಿಕೊಂಡು ಬದುಕಬೇಕು ಎಂದುಕೊಂಡವನು ನಾನು. ಆದರೆ ಪತ್ರಿಕೋದ್ಯಮ ನನ್ನನ್ನು ಕರೆದು ಅಪ್ಪಿಕೊಳ್ಳಲು ಸಿದ್ಧವಾಗಿತ್ತು. ಊರಿಗೆ ಬಂದವನು ಸ್ಥಳೀಯ ಪತ್ರಿಕೆಗಳಲ್ಲಿ ಬರೆಯಲು ಪ್ರಾರಂಭಿಸಿದೆ. ಅಲ್ಲಿಯೂ ಶುರುವಾಯಿತು ನೋಡಿ ಗಲಾಟೆ. ನಮ್ಮ ತಾಲೂಕಿನಲ್ಲಿದ್ದ ಪೆಡ್ಡಿ ಸೊಸೈಟಿಯ್ ಅವ್ಯವಹಾರದ ಬಗ್ಗೆ ಲೇಖನ ಬರೆದೆ. ಅದು ಪ್ರಕಟವಾದ ತಕ್ಷಣ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಯಿತು. ನ್ಯಾಯಾಲಯಕ್ಕೆ ಓಡಾಟ. ಎಲ್ಲರೂ ನನ್ನನ್ನು ತಮ್ಮ ಕಡು ವೈರಿಯಂತೆ ನೋಡತೊಡಗಿದರು. ನನ್ನನ್ನು ಊರಿನಿಂದ ಓಡಿಸಿದರೆ ಮಾತ್ರ ಊರು ಉಳಿಯುತ್ತದೆ ಎಂದುಕೊಂಡರು.
ಈ ನಡುವೆ ರಾಮಚಂದ್ರಾ ಮಠದ ಸ್ವಾಮೀಜಿಯ ವಿರುದ್ಧ ಲೇಖನ ಬರೆದೆ. ಅವರು ಈಗಿನ ರಾಘವೇಶ್ವರರ ಹಿಂದಿನ ಗುರುಗಳು. ಹವ್ಯಕರಿಂದ ಅವರು ಹಣ ಸಂಗ್ರಹಿಸಿ ಕಲ್ಯಾಣ ಮಂಟಪ ಕಟ್ಟುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ನಾನು ಇದನ್ನು ವಿರೋಧಿಸಿ ಅವರು ಕಲ್ಯಾಣ ಮಂಟಪ ಕಟ್ಟುವುದಿಲ್ಲ. ಹಾಗೆ ಕಟ್ಟಿದ ದಿನ ಊರ ಪೇಟೆಯಲ್ಲಿ ನಗ್ನನಾಗಿ ಸಂಚರಿಸುತ್ತೇನೆ ಎಂದು ಸವಾಲು ಹಾಕಿದೆ. ಇದಕ್ಕೆ ಪ್ರತಿಯಾಗಿ ಮಠ ನನ್ನನ್ನು ಜಾತಿಯಿಂದ ಹೊರಕ್ಕೆ ಹಾಕಿತು..ಹವ್ಯಕರು ನನ್ನ ವಿರುದ್ಧ ಯುದ್ಧ ಸಾರಿದರು. ನನಗೆ ಹೊಡೆಯುವ ಯೋಜನೆ ಕೂಡ ಮಠದಿಂದ ಸಿದ್ಧವಾಯಿತು. ಅವರು ನನಗೆ ಹೊಡೆಯುವುದಕ್ಕೆ ಮೊದಲು ನನ್ನ ಹುಡುಗರನ್ನು ಕಟ್ಟಿಕೊಂಡು ಮಠದ ಶಿಷ್ಯರ ಮೇಲೆ ಹಲ್ಲೆ ಮಾಡಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ನನ್ನಮ್ಮ ನನ್ನನ್ನು ಬೆಂಗಳೂರಿಗೆ ಕಳುಹಿಸುವ ನಿರ್ಧಾರ ಮಾಡಿದಳು. ಅಮ್ಮನೇ ಊರು ಬಿಡು ಎಂದ ಮೇಲೆ ನನಗೆ ಬೇರೆ ದಾರಿ ಉಳಿಯಲಿಲ್ಲ. ಕೈಯಲ್ಲಿ ೫೦ ರೂಪಾಯಿ ಹಿಡಿದುಕೊಂಡು ಬೆಂಗಳೂರು ಬಸ್ಸು ಹತ್ತಿದೆ.
ಆದರೆ ಈಗಲೂ ರಾಮಚಂದ್ರಾ ಪುರದ ಮಠದ ಕಲ್ಯಾಣ ಮಂಟಪ ಸಿದ್ದವಾಗಿಲ್ಲ. ನಾನು ನಗ್ನನಾಗಿ ಪೇಟೆಯಲ್ಲಿ ಓಡಾಡುವ ಆಸೆ ಈಡೇರಲೇ ಇಲ್ಲ.
ಬೆಂಗಳೂರಿಗೆ ಬಂದ ಮೇಲೆ ಬೆಂಗಳೂರು ಆಕಾಶವಾಣಿ ಸೇರಿದೆ. ಅಲ್ಲಿ ಕ್ಯಾಸುವಲ್ ವರ್ಕರ್ ಆಗಿ ಪ್ರದೇಶ ಸಮಾಚಾರ ಓದುವ ಮೂಲಕ ಪತ್ರಿಕೋದ್ಯಮದ ಬದುಕು ಪ್ರಾರಂಬವಾಯಿತು. ನಂತರ ಸಂಯುಕ್ತ ಕರ್ನಾಟಕ ಸೇರಿದೆ. ಮುಂಜಾನೆ ಪತ್ರಿಕೆ ಉಪ ಮುಖ್ಯ ವರದಿಗಾರನಾಗಿ ಕೆಲಸ ಮಾಡಿದೆ. ಸುದ್ದಿ ಸಂಗಾತಿ ಮನ್ವಂತರ, ನಾವು ನೀವು ಮೊದಲಾದ ನಿಯತ ಕಾಲಿಕಗಳಲ್ಲಿ ದುಡಿದೆ. ಮರಾಠಿ ಸಕಾಳ್ ಪತ್ರಿಕೆಯ ಕಾಲಮಿಸ್ಟ್ ಆದೆ. ಕನ್ನಡ ಪ್ರಭ ಸೇರಿ ಅದರ ಮುಖ್ಯ ವರದಿಗಾರನಾದೆ. ೨೦೦೦ ಇಸ್ವಿಯಿಂದ ದೃಶ್ಯ ಮಾಧ್ಯಮಕ್ಕೆ ಬಂದೆ. ಈ ನಡುವೆ ಬೆಂಗಳೂರು ದೂರದರ್ಶನ ಕೇಂದ್ರದದಲ್ಲಿ ಕರೆಂಟ್ ಅಫೇರ್ಸ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟೆ. ನನಗೆ ಎಂದೂ ಕೆಲಸ ಇಲ್ಲ ಎಂಬ ಸ್ಥಿತಿ ಬರಲೇ ಇಲ್ಲ. ಯಾರ್ಯಾರೋ ಕರೆದರು ಕೆಲಸ ಕೊಟ್ಟರು. ನಾನು ಬೇಡ ಅನ್ನಿಸಿದಾಗ ಕೆಲಸ ಬಿಟ್ಟೆ. ಸುಮ್ಮನೆ ಮಲಗಿದೆ. ಹಾಡು ಕೇಳಿದೆ, ಸಿನಿಮಾ ನೋಡಿದೆ. ಪುಸ್ತಕಗಳನ್ನು ಓದಿದೆ. ಗುಂಡು ಹಾಕಿದೆ. ವಾರಗಟ್ಟಲೆ ನಿದ್ರೆ ಮಾಡಿದೆ.
ಕಾವೇರಿ, ಸುವರ್ಣ ಜಿ ನ್ಯೂಸ್, ಸಮಯ, ಕಸ್ತೂರಿ ಮೊದಲಾದ ವಾಹಿನಿಗಳಲ್ಲಿ ಕೆಲಸ ಮಾಡಿದೆ. ಈಗ ಹೊಸ ವಾಹಿನಿಯೊಂದನ್ನು ಕಟ್ಟಲು ಹೊರಟಿದ್ದೇನೆ.
ನನ್ನ ಈ ಪಯಣವನ್ನು ನೋಡಿದ ಹಲವರು ಹಲವು ರೀತಿ ವಿಮರ್ಶೆ ಮಾಡುತ್ತಾರೆ. ದೃಶ್ಯ ಮಾಧ್ಯಮದಲ್ಲಿ ನೀನು ಯಶಸ್ವಿಯಾಗಿಲ್ಲ ಎಂದು ಹೇಳುವವರು ಇದ್ದಾರೆ. ನಾನು ಆಗೆಲ್ಲ ನಕ್ಕು ಬಿಡುತ್ತೇನೆ. ನಾನು ಯಶಸ್ವಿ ಹೌದೋ ಅಲ್ಲವೋ ಅನ್ನುವುದನ್ನು ಇತಿಹಾಸಕ್ಕೆ ಬಿಟ್ಟಿ ಬಿಡುತ್ತೇನೆ. ಆದರೆ ಈಗ ಯಾರನ್ನು ನೀವು ಯಶಸ್ವಿ ಎಂದು ಪರಿಗಣಿಸುತ್ತೀರೋ ನಾನು ಅವರಂತೆ ಇಲ್ಲ ಎಂಬುದು ನಿಜ. ಆ ರೀತಿಯ ಯಶಸ್ಸು ನನಗೆ ಬೇಕಾಗಿಲ್ಲ. ಯಾಕೆಂದರೆ ನಾನು ಎಲ್ಲರಂತೆ ಇಲ್ಲ. ನಾನು ನಾನೇ...!
ನಾನೊಬ್ಬನೇ ಮೌನವಾಗಿ ಕುಳಿತು ಆಲೋಚಿಸುವಾಗ ನನ್ನಲ್ಲಿ ಮೂಡುವುದು ಕೃತಜ್ನಾತಾ ಭಾವ. ಯಾವುದೇ ಕಾಡಿನ ನಡುವೆ ಹುಟ್ಟಿ ಕನ್ನಡ ಮಾಧ್ಯಮದಲ್ಲಿ ಓದಿದವ ನಾನು. ಒಂದು ರೀತಿಯ ಕಾಡು ಮನುಷ್ಯ. ಫೋನು, ರೈಲು ಎಲ್ಲವನ್ನೂ ನೋಡಿದ್ದು ಬೆಳಗಾವಿಗೆ ಹೋದ ಮೇಲೆ. ಮಹಾನ್ ಮುಜುಗರದ ವ್ಯಕ್ತಿಯೂ ಆಗಿರುವ ನಾನು ಕಾಡು, ನದಿ ಗುಡ್ಡ ಬೆಟ್ಟಗಳ ನಡುವೆ ಬೆಳದವನು. ಆದರೆ ಪತ್ರಿಕೋದ್ಯಮ ನನ್ನನ್ನು ಪ್ರೀತಿಯಿಂದ ಅಪ್ಪಿಕೊಂಡು ಎಲ್ಲವನ್ನೂ ನೀಡಿತಲ್ಲ. ಅದಿಲ್ಲದಿದ್ದರೆ ನಾನೊಬ್ಬ ಗುಂಡಾ ಆಗುತ್ತಿದ್ದೆನಲ್ಲ...
ನಾನು ಪತ್ರಿಕೋದ್ಯಮಕ್ಕೆ ಕೃತಜ್ನನಾಗಿದ್ದೇನೆ. ಅದು ಫಲಾಪೇಕ್ಷೆ ಇಲ್ಲದೇ ಎಲ್ಲವನ್ನೂ ನನಗೆ ನೀಡಿದ್ದಕ್ಕಾಗಿ. ನನ್ನೆಲ್ಲ ತಪ್ಪುಗಳನ್ನು ಕ್ಷಮಿಸಿ ತಾಯಿಯಂತೆ ಪೊರೆದಿದ್ದಕ್ಕಾಗಿ..


Monday, June 27, 2016

ಇತಿಹಾಸ ಪ್ರಜ್ನೆ ಇಲ್ಲದವರು ಇತಿಹಾಸ ಸೃಷ್ಟಿಸಲಾರರು, ವರ್ತಮಾನವನ್ನು ಮುನ್ನಡೆಸಲಾರರು...!

ಕಳೆದ ಎರಡು ದಿನಗಳಿಂದ ಅದೇ ಸುದ್ದಿ. ಸುದ್ದಿ ವಾಹಿನಿಗಳಲ್ಲಿ ನೇರ ಪ್ರಸಾರ. ನನ್ನ ಕೆಲವು ಸ್ನೇಹಿತರು ನನ್ನನ್ನು ಕೇಳಿದರು. ಇದು ಜಾಸ್ತಿ ಆಗಿಲ್ಲವಾ ? ಮಾಜಿ ರಾಜರ ಮನೆಯಲ್ಲಿ ಮದುವೆ ನಡೆದರೆ ಅದು ಅಂತಾ ಮಹತ್ವದ ಸುದ್ದಿಯಾ ? ನಿಮಗೆ ಬೇರೆ ಸುದ್ದಿ ಇಲ್ಲವಾ ?
ನಾನು ಅವರ ಪ್ರಶೆಗೆ ಉತ್ತರ ನೀಡಲಿಲ್ಲ.
ಸಾಮಾಜಿಕ ಜಾಲ ತಾಣಗಳಲ್ಲೂ ಈ ಬಗ್ಗೆ ಚರ್ಚೆವ್ ನಡೆಯುತ್ತಿದೆ. ಮಾಧ್ಯಮಗಳ ಬಗ್ಗೆ ಸದಾ ಟೀಕಿಸುವವರು ಈ ಬಗ್ಗೆಯೂ ಟೀಕೆ ಮಾಡುತ್ತಿದ್ದಾರೆ. ಎಲೆಕ್ಟಾನಿಕ ಮಾಧ್ಯಮಗಳನ್ನು ಟೀಕಿಸುತ್ತಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ಏನಿದು ಹುಚ್ಚಾಟ ಎಂದೂ ಕೇಳುತ್ತಿದ್ದಾರೆ..
ಇದೆಲ್ಲ ಸರಿ. ನಮ್ಮ ಸಂಸದೀಯ ವ್ಯವಸ್ಥೆಗೆ ಇಂಗ್ಲಂಡಿನ ಸಂಸದೀಯ ವ್ಯವಸ್ಥೆಯೇ ಆಧಾರ. ಇಂಗ್ಲಂಡಿನಲ್ಲಿ ಹೌಸ್ ಆಫ್ ಲಾರ್ಡ್ಸ್ ಮತ್ತು ಹೌಸ್ ಆಫ್ ಕಾಮನ್ಸ್ ಇರುವಂತೆ ನಮ್ಮಲ್ಲಿ ರಾಜ್ಯ ಸಭೆ ಮತ್ತು ಲೋಕಸಭೆಗಳಿವೆ..ನಮ್ಮದು ಅಮೇರಿಕದಂತೆ ಅಧ್ಯಕ್ಷೀಯ ಮಾಧರಿಯ ಪ್ರಜಾ ಸತ್ತೆಯಲ್ಲ.. ನಮಗೇನಿದ್ದರೂ ಇಂಗ್ಲಂಡ್ ಮಾಧರಿ.. ಇಂಗ್ಲಂಡಿನಲ್ಲಿ ರಾಣಿ ಇದ್ದಾಳೆ. ರಾಜಮನೆತನ ಇದೆ. ಈ ರಾಜಮನೆತನದ ಆಗುಹೋಗುಗಳ ಬಗ್ಗೆ ವರದಿ ಮಾಡುವ ಟಾಬ್ಲಾಯಡ್ ಗಳಿವೆ. ಇವತ್ತು ರಾಣಿ ಏನು ಮಾಡಿದಳು ? ರಾಜಮನೆತನದವರು ಎಲ್ಲಿಗೆ ಶಾಪಿಂಗ್ ಗೆ ಹೋದರು ? ಅರಮನೆಯಲ್ಲಿನ ಪ್ರೇಮ ಪ್ರಕರಣಗಳು... ಹೀಗೆ ಪ್ರತಿ ಸಂಚಿಕೆಯಲ್ಲೂ ಇಂತಹ ಸುದ್ದಿಗಳಿರುತ್ತವೆ.. ಇಂಗ್ಲೀಷರಿಗೆ ತಮ್ಮ ರಾಜ ಮನೆತನದ ಬಗ್ಗೆ ಅಪಾರ ಗೌರವ.  ತಮ್ಮ ಇತಿಹಾಸವನ್ನು ನೆನಪು ಮಾದಿಕೊಳ್ಳುವುದಕ್ಕಾಗಿ ಅಲ್ಲಿ ರಾಜಮನೆತನ ಇದೆ. ರಾಣಿ ಇದ್ದಾರೆ..
ಕಳೆದ ೧೫ ದಿನಗಳ ಹಿಂದೆ ಬ್ರಿಟನ್ ರಾಣಿಯ ತೊಂಬತ್ತನೆಯ ಹುಟ್ಟು ಹಬ್ಬದ ಆಚರಣೆ ನಡೆಯಿತು. ಇಂಗ್ಲಂಡಿನ ಎಲ್ಲ ವಾಹಿನಿಗಳು ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಿದವು.. ರಾಣಿ ಕುರಿತ ಹಲವಾರು ಸಾಕ್ಷ್ಯ ಚಿತ್ರಗಳು ಪ್ರಸಾರವಾದವು. ಇಂಗ್ಲಂಡನ್ನು ಸೂರ್ಯ ಮುಳುಗದ ಸಾಮ್ರಾಜ್ಯವನ್ನಾಗಿ ಮಾಡಿದ ಕೀರ್ತಿ ಈ ರಾಜಮನೆತನದ್ದು. ಇಡೀ ವಿಶ್ವವನ್ನೇ ಆಳುವಂತೆ ಮಾಡಿದ್ದು ಇವರೇ. ಹೀಗಾಗಿ ರಾಜಸತ್ತೆ ಹೋಗಿ ಪ್ರಜಾ ಪ್ರಭುತ್ವ ಬಂದರೂ ರಾಣಿ ಮತ್ತು ರಾಜಮನೆತನ ಇದೆ. ಬಂಕಿಂಗ್ ಹಾಮ್ ಪ್ಯಾಲೇಸ್ ಇದೆ..
ಬ್ರಿಟೀಷರು ತಮ್ಮ ಇತಿಹಾಸವನ್ನು ಮರೆಯುವುದಿಲ್ಲ. ಇತಿಹಾಸ ವರ್ತಮಾನದಲ್ಲಿ ಬದುಕುವುದಕ್ಕೆ ದಾರಿದೀಪ. ಹಾಗೆ ಇತಿಹಾಸವನ್ನು ನೆನಪು ಮಾಡಿಕೊಂಡು ಹೆಜ್ಜು ಗುರುತು ಮೂಡಿಸಿ ಹೋದವರಿಗೆ ಕೃತಜ್ನತೆ ಸಲ್ಲಿಸುವ ಸೌಜನ್ಯವನ್ನು ಅವರು ತೋರುತ್ತಾರೆ.
ಈಗ ನಮ್ಮ ಕರ್ನಾಟಕಕ್ಕೆ ಬರೋಣ. ಇಲ್ಲಿನ ರಾಜಮನೆತನದ ಬಗ್ಗೆ ಮಾತನಾಡೋಣ. ಮೈಸೂರು ಅರಸು ಉಳಿದೆಲ್ಲ ಅರಸರಂತೆ ಇರಲಿಲ್ಲ. ಅವರು ಜನಾನುರಾಗಿಗಳಾಗಿದ್ದರು.. ತಮ್ಮ ರಾಜ್ಯದ ಅಭಿವೃದ್ಧಿಗಾಗಿ ಅವರು ಪಣ ತೊಟ್ಟಿದ್ದರು.  ಕಳೆದ ಶತಮಾನದಲ್ಲೇ ಮೀಸಲಾತಿಯನ್ನು ಜಾರಿಗೆ ತಂದವರು ಅವರು. ಕನ್ನಂಬಾಡಿ ಅಣೆಕಟ್ಟು ಕಟ್ಟಿದವರು ಒಡೆಯರು. ವಿದ್ಯುತ್ ಉತ್ಪಾದನಾ ಘಟಕ ಪ್ರಾರಂಭಿಸಿದವರು. ಅರಸರ ಜನಪರ ಕಾರ್ಯಕ್ರಮಗಳ ಪಟ್ಟಿ ಹೀಗೆ ಮುಂದುವರಿಯುತ್ತದೆ.. ಒಟ್ಟಾರೆಯಾಗಿ  ಮೈಸೂರು ರಾಜ್ಯವನ್ನು ಮಾಧರಿ ರಾಜ್ಯವನ್ನಾಗಿ ರೂಪಿಸಿದ ಖ್ಯಾತಿ ಮೈಸೂರು ಅರಸರಿಗೆ ಸಲ್ಲುತ್ತದೆ.. ನೀವು ಕರ್ನಾಟಕದ ಉಳಿದ ಭಾಗಗಳ ಜೊತೆ ಹಳೆ ಮೈಸೂರು ಪ್ರದೇಶವನ್ನು ಹೋಲಿಕೆ ಮಾಡಿದರೆ ಮೈಸೂರು ಅರಸರು ಹೇಗೆ ಆಡಳಿತ ಮಾಡಿದರು ಎಂಬುದು ನಮಗೆ ಅರ್ಥವಾಗುತ್ತದೆ.
ಸ್ವಾತಂತ್ರ್ಯ ಬಂದ ಮೇಲೆ ಪರಿಸ್ಥಿತಿ ಬದಲಾಯಿತು. ಕನ್ನಂಬಾಡಿ ಕಟ್ಟೆಯನ್ನು ನಿರ್ಮಿಸುವುದಕ್ಕಾಗಿ ಸ್ವಂತ ಬಂಗಾರವನ್ನೇ ಅಡವಿಟ್ಟಿದ್ದ ರಾಜ ಮನೆತನ ಮೊದಲಿನಂತೆ ಉಳಿಯಲಿಲ್ಲ. ಜಮಚಾಮರಾಜೇಂದ್ರ ಓಡೆಯರ್ ಬದುಕಿದ್ದಶ್ಟು ಕಾಲ ಇದ್ದ ಪರಿಸ್ಥಿತಿ ಆವರು ಕಾಲವಾದ ಮೇಲೆ ಉಳಿಯಲಿಲ್ಲ. ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಬೇರೆ ಬೇರೆ ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.. ಆದರೆ ಅವರು ಯಾವುದರಲ್ಲೂ ಯಶಸ್ವಿಯಾಗಲಿಲ್ಲ. ಜಯಚಾಮರಾಜೇಂದ್ರ ಒಡೆಯರ್ ಈ ಮಗ ಉದ್ಧಾರವಾಗೋಲ್ಲ ಎಂದು ಹೇಳಿದ್ದು ಶಾಪದಂತೆ ಶ್ರೀಕಂಠದತ್ತರನ್ನು ಕಾಡತೊಡಗಿತು.
ಪ್ರಾಯಶ: ೧೯೬೯ ರಲ್ಲಿ ರಾಜ ಧನ ರದ್ಧತಿಯೊಂದಗೆ ಈ ದೇಶದ ರಾಜ ಮಹಾರಾಜರ ವೈಭವದ ದಿನಗಳು ಮರೆಯಾದವು. ಹಳೆಯ ವೈಭವವನ್ನು ಮರೆಯಲಾಗದೇ ಹೊಸ ಬದುಕನ್ನು ಒಪ್ಪಿಕೊಳ್ಳರಾದೇ ರಾಜರೆಲ್ಲ ಅತಂತ್ರ ಸ್ಥಿತಿಯಲ್ಲಿ ಬದುಕಲಾರಂಭಿಸಿದರು.. ತಮ್ಮ ದಿನಗಳು ಮರೆಯಾಗಿವೆ ಎಂದು ಅವರೆಲ್ಲ ಅರ್ಥ ಮಾಡಿಕೊಳ್ಳಲು ಹಲವು ವರ್ಷಗಳೆ ಹಿಡಿದವು. ರಾಜಸ್ಥಾನ ಮಧ್ಯಪ್ರದೇಶ ಮೊದಲಾದ ಉತ್ತರ ಭಾಗದ ಅರಸು ಮನೆತನ ಚುನಾವಣಾ ರಾಜಕೀಯಕ್ಕೆ ಇಳಿದವು. ಅಧಿಕಾರವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡವು. ಆದರೆ ಶ್ರೀಕಂಥ ದತ್ತ ಒಡೆಯರ್ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಿದರೂ ಅವರು ಯಶಸ್ವಿ ರಾಜಕಾರಣಿ ಅನ್ನಿಸಲೇ ಇಲ್ಲ. ರಾಜ ಮನೆತನದ ಬಗ್ಗೆ ಮೈಸೂರು ಪ್ರಾಂತದ ಜನರಿಗಿರುವ ಪ್ರೀತಿ ಮತ್ತು ಗೌರವವನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಲೇ ಇಲ್ಲ. ಜನತಂತ್ರ ವ್ಯವಸ್ಥೆಯನ್ನು ತಿರುಳನ್ನು ಅರಿಯದೇ ರಾಜ ರಂತೆ ಬದುಕಲು ಯತ್ನಿಸಿ ಅವರು ಸೋತರು..
ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದಲಾಗಲೇ ಬೆಂಗಳೂರು ಅರಮನೆಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಲು ಮುಂದಾಯಿತು. ಈ ಪ್ರಕರಣ ಈಗಲೂ ಸಎರ್ವೋಚ್ಚ ನ್ಯಾಯಾಲಯದ ಮುಂದಿದೆ. ಮೈಸೂರು ಅರಮನೆಯ ಒಂದು ಭಾಗವನ್ನು ರಾಜ ಮನೆತನಕ್ಕೆ ಬಿಟ್ಟು ಉಳಿದಿದ್ದು ಸರ್ಕಾರದ ನಿಯಂತ್ರಣಕ್ಕೆ ಬಂತು. ಮೈಸೂರು ದಸರಾ ಮೊದಲ ವೈಭವನ್ನು ಕಳೆದುಕೊಂಡು ಸರ್ಕಾರಿ ಕಾರ್ಯಕ್ರಮವಾಗಿ ಬದಲಾಯಿತು. ಅಲ್ಲಿ ಇತಿಹಾಸವನ್ನು ನೆನಪಿಸುವ ಕೆಲಸಕ್ಕೆ ಒತ್ತು ಸಿಗದೇ ಆ ಭಾಗದ ರಾಜಕಾರಣಿಗಳು ಮಿಂಚಲು ಅಧಿಕಾರ ಚಲಾಯಿಸಲು ಅವಕಾಶವಾಯಿತು ಅಷ್ಟೇ.
ಈಗ ಶ್ರೀಕಂಥ ದತ್ತ ನರಸಿಂಹ ರಾಜ ಒಡೆಯರ್ ಇಲ್ಲ. ಅವರ ಪತ್ನಿ ಪ್ರಮೋದಾ ದೇವಿ ಯದುವೀರರನ್ನು ದತ್ತು ತೆಗೆದುಕೊಂಡಿದ್ದಾರೆ. ಅವರನ್ನೇ ರಾಜರನ್ನಾಗಿ ಮಾಡಿದ್ದಾರೆ. ಆದರೆ ಎಲ್ಲವೂ ಬದಲಾಗಿದೆ. ಕಾಲದ ಗುಣವೇ ಹಾಗೆ ಅದು ಎಲ್ಲವನ್ನೂ ಬದಲಿಸುತ್ತದೆ. ಈ ಬದುಕಿನಲ್ಲಿ ಬದಲಾವಣೆಯೊಂದೇ ಶಾಶ್ವತ ಎಂಬ ನಾಣ್ಣುಡಿಯನ್ನು ಇದು ಸಾಭೀತು ಪಡಿಸಿದೆ. ಆದೆ ಇದೆಲ್ಲ ನಮ್ಮ ಮುಂದೆ ಕೆಲವೊಂದು ಪ್ರಶ್ನೆಗಳನ್ನು ಮುಂದಿಟ್ಟಿದೆ. ಅದು ಇತಿಹಾಸ ಪ್ರಜ್ನೆಗೆ ಸಂಬಂಧಿಸಿದ್ದು. ಕಾಲನ ತೆಕ್ಕೆಯಲ್ಲಿ ಕರಗಿ ಹೋದವರನ್ನು ನೆನಪು ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ್ದು.
ನಮ್ಮ ನಾಡಿನ ಇತಿಹಾಸವನ್ನು ಮುಂದಿನ ಜನಾಂಗಕ್ಕೆ ತಲುಪಿಸುವುದು ಬೇಡವೆ ? ತಲುಪಿಸುವುದಿದ್ದರೆ ಹೇಗೆ ? ನಾವು ಎಲ್ಲಕ್ಕೂ ಬ್ರೀಟೀಷ್ ಮಾಧರಿಯನ್ನು ಅನುಸರಿಸುವವರು ಈ ವಿಚಾರದಲ್ಲಿ ಮಾತ್ರ ಯಾಕೆ ಅವರನ್ನು ಅನುಸರಿಸುತ್ತಿಲ್ಲ ? ಮೈಸೂರನ್ನು ಹಳೆ ವೈಭವನ್ನು ನೆನಪಿಸುವ ಒಂದು ಪ್ರವಾಸಿ ಕೇಂದ್ರವನ್ನಾಗಿ ಬದಲಾಯಿಸಲು ನಾವು ಯತ್ನ ನಡೆಸಿಲ್ಲ ಯಾಕೆ ? ನಮ್ಮಲ್ಲಿ ಐತಿಹಾಸಿಕ ಪ್ರಜ್ನೆ ಇಲ್ಲದಿರುವುದು ಇದಕ್ಕೆ ಕಾರಣವೆ ?
ಈಗ ಮೈಸೂರನ್ನು ಕೈಗಾರಿಕಾ ಮತ್ತು ಐಟಿ ಬಿಟಿ ಕೇಂದ್ರವನ್ನಾಗಿ ಮಾಡಲು ನಾವು ಮುಂದಾಗಿದ್ದೇವೆ. ಹಲವಾರು ಅಂತಾರಾಷ್ಟಿಯ ಕಂಪೆನಿಗಳು ಈಗಾಗಲೇ ಮೈಸೂರಿನಲ್ಲಿ ತಮ್ಮ ಶಾಖೆಗಳನ್ನು ಪ್ರಾರಂಭಿಸಿವೆ..ಇನ್ನು ಹಲವಾರು ಕಂಪೆನಿಗಳು ಮೈಸೂರಿಗೆ ಬರಲಿವೆ. ಈ ಕೈಗಾರೀಕರಣ ಮೈಸೂರನ್ನು ಹೇಗೆ ಬದಲಿಸುತ್ತದೆ ಎಂಬುದು ಒಂದು ಪ್ರಶ್ನೆಯಾದರೆ ಮೈಸೂರು ಕೈಗಾರಿಕರಣ ಇಲ್ಲದೇ ಇರುವುದು ಸಾಧ್ಯವಿಲ್ಲವೇ ಎನ್ನುವುದು ಇನ್ನೊಂದು ಪ್ರಶ್ನೆ. ಈ ಪ್ರಶ್ನೆಗಳನ್ನು ಕೇಳಿಕೊಳ್ಳುವಾಗಲೂ ನಮ್ಮ ಮುಂದೆ ಬರುವುದು ಅದೇ ಐತಿಹಾಸಿಕ ಪ್ರಜ್ನೆಯ ಪ್ರಶ್ನೆ..
ಮೈಸೂರನ್ನು ನಾವು ಹೇಗೆ ನೋಡಲು ಬಯಸುತ್ತೇವೆ ಎಂಬ ಪ್ರಶ್ನೆಗೆ ಸರ್ಕಾರಕ್ಕೆ ಸ್ಪಷ್ಟತೆ ಬೇಕು. ಇದನ್ನು ದೇಶದ ಪ್ರಮುಖ ಪ್ರವಾಸಿ ಕೇಂದ್ರವನ್ನು ಇನ್ನೂ ಅಭಿವೃದ್ಧಿಪಡಿಸಬೇಕು ಎಂದು ಅನ್ನಿಸಿದರೆ ಅದನ್ನು ಅನುಷ್ಠಾನಗೊಳಿಸಲು ಕಾರ್ಯಸೂಚಿ ಬೇಕು..ಮೈಸೂರನ್ನು ಶೋಕೇಸ್ ಮಾಡುವುದು ಹೇಗೆ ಎನ್ನುವ ಬಗ್ಗೆ ಚರ್ಚಿಸಬೇಕು. ಯಾವುದೇ ಪ್ರವಾಸಿಗ ಮೈಸೂರಿಗೆ ಬರುವುದಿದ್ದರೆ ಯಾಕೆ ಬರುತ್ತಾನೆ ? ಹೀಗೆ ಬರುವ ಪ್ರವಾಸಿಗರಿಗೆ ನಾವು ಮೈಸೂರನ್ನು ತಿಳಿಸಿಕೊಡುವುದು ಹೇಗೆ ಎಂಬುದು ಮುಖ್ಯ ಪ್ರಶ್ನೆಯಾಗುತ್ತದೆ. ಹಾಗೇಯೇ ಇಲ್ಲಿ ಬರುವ ನಮ್ಮ ರಾಜ್ಯದ ಪ್ರವಾಸಿಗರು, ದೇಶದ ಪ್ರವಾಸಿಗರು ಮತ್ತು ಹೊರದೇಶದ ಪ್ರವಾಸಿಗರನ್ನು ಆಕರ್ಷಿಸಲು ಏನು ಮಾಡಬೇಕು ಎಂಬ ಬಗ್ಗೆ ಯೋಜನಾ ಬದ್ಧ ಕಾರ್ಯಸೂಚಿ ಬೇಕು. ಇದೆಲ್ಲ ನಿಂತಿರುವುದು ಮೈಸೂರನ್ನು ನಾವು ಏನು ಮಾಡಬೇಕು ಎಂಬು ಮೂಲಭೂತ ಪ್ರಶ್ನೆಗೆ ಉತ್ತರ ಕಂಡುಕೊಂಡಾಗ ಮಾತ್ರ.
ನಾನು ಮೊದಲು ಹೇಳಿದ ಹಾಗೆ ಮೈಸೂರು ಅರಸರನ್ನು ನಾವು ಮೆರವಣಿಗೆ ಮಾಡಬೇಕಾಗಿಲ್ಲ. ಅವರಿಗೆ ರಾಜಧನ ನೀಡಬೇಕಾಗಿಲ್ಲ. ಆದರೆ ಮೈಸೂರಿಗೆ ಬಂದರೆ ಅಲ್ಲಿನ ಭವ್ಯ ಇತಿಹಾಸ ನಮಗೆ ತಿಳಿಯಬೇಕು. ಅಲ್ಲಿನ ಪರಂಪರೆಯ ಅರಿವಾಗಬೇಕು. ಮೈಸೂರು ಅರಸರು ಏನು ಮಾಡಿದರು ಎಂಬುದನ್ನು ಪ್ರವಾಸಿಗರಿಗೆ ತಿಳಿಸುವಂತಾಗಬೇಕು.. ಮತ್ತೆ ನಾನು ಇಂಗ್ಲಂಡಿನ ಉದಾಹರಣೆಯನ್ನೇ ನೀಡುತ್ತೇನೆ. ಅಲ್ಲಿ ಶೇಕ್ಸಫಿಯರ್ ನಾಟಕ ಪ್ರದರ್ಶನ ಪ್ರತಿ ದಿನ ನಡೆಯುವ ರಂಗ ಮಂದಿರಗಳಿವೆ. ಬ್ರಿಟೀಶ್ಅರು ಸಾಹಿತ್ಯ ಮತ್ತು ಸಂಸ್ಕೃತಿಗೆ ಕೊಡುತ್ತಿರುವ ಗೌರವದ ಸಂಕೇತ ಅದು. ನಾವು ಸಹ ಮೈಸೂರನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿ ಪರಿವರ್ತಿಸಬಹುದು. ಅಲ್ಲಿ ನಮ್ಮ ಮೈಸೂರು ಅರಸರ ಜನಪರವಾದ ಕೆಲಸವನ್ನು ತೋರಿಸುವ ನಾಟಕ, ನೃತ್ಯ ಪ್ರದರ್ಶನ ಪ್ರತಿ ದಿನ ನಡೆಯುವಂತೆ ವ್ಯವಸ್ಥೆ ಮಾಡಬಹುದು. ಹಾಗೆ ಮೈಸೂರು ಅರಸರ ಅಭಿವೃದ್ಧಿ ಕೆಲಸಗಳ ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡಬಹುದು. ಕರ್ನಾಟಕದ ಇತಿಹಾಸವನ್ನು ತಿಳಿಸುವ ಪ್ರದರ್ಶನದ ವ್ಯವಸ್ಥೆ ಮಾಡಬಹುದು.ಯಾವುದೇ ಪ್ರವಾಸಿಗ ಮೈಸೂರಿಗೆ ಬಂದರೆ ಕರ್ನಾಟಕದ ಇತಿಹಾಸ ಪರಂಪರೆ, ಸಾಹಿತ್ಯ ಎಲ್ಲವೂ ತಿಳಿಯುವಂತೆ ಮಾಡಬಹುದು. ಆಗ ಮೈಸೂರು ನಿಜವಾದ ಅರ್ಥದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗುತ್ತದೆ. ಐಟಿ ಬಿಟಿ ಕಂಪೆನಿಗಳನ್ನು ಪ್ರಾರಂಬಿಸುವುದಕ್ಕಿಂತ ಇದು ಹೆಚ್ಚು ಮಹತ್ವದ್ದು ಎಂದು ನಾನು ನಂಬಿದ್ದೇನೆ. ಆದರೆ ಅಧಿಕಾರಸ್ಥರಿಗೆ ಈ ಮಾತುಗಳು ಅರ್ಥವಾಗುವುದು ಕಷ್ಟ.
ಈಗ ಈ ಲೇಖನದ ಪ್ರಾರಂಭಿದಲ್ಲಿ ಎತ್ತಿದ ಪ್ರಶ್ನೆಗಳು. ಕನ್ನಡದ ಸುದ್ದಿ ವಾಹಿನಿಗಳು ಮಹಾರಾಜರ ಕುಟುಂಬದ ಮದುವೆಯ ನೇರ ಪ್ರಸಾರ ಸರಿಯೇ ಎಂಬುದು. ಜನ ತಂತ್ರವಾದಿಗಳ ಈ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟವಲ್ಲ. ಕರ್ನಾಟಕದ ಜನರಿಗೆ ಈಗಲೂ ಮೈಸೂರು ಅರಸರ ಬಗ್ಗೆ ಗೌರವಾದರಗಳಿವೆ. ಹಳೆ ಮೈಸೂರು ಪ್ರದೇಶದಲ್ಲಿ ಈಗಲೂ ಸಾಮಾನ್ಯ ಜನರ ಮನೆಗಳಲ್ಲಿ ಮೈಸೂರು ಅರಸರ ಫೋಟೋಗಳನ್ನು ಇಟ್ಟು ಪೂಜಿಸಲಾಗುತ್ತದೆ.  ಮೈಸೂರು ಅರಸರು ಎಂದರೆ ಆವರಿಗೆ ಈಗಲೂ ಅರಸರೇ.  ಇಂಥ ಸಾಮಾನ್ಯ ಜನರಿಗೆ ಮೈಸೂರು ಅರಸು ಮನೆತನದ ಮದುವೆ ಹೇಗಿರುತ್ತದೆ ಎಂಬ ಕುತೂಹಲ ಇರುವುದು ಸಹಜ. ಅವರ ಈ ಕೂತೂಹಲವನ್ನು ತಣಿಸುವ ಕೆಲಸವನ್ನು ವಾಹಿನಿಗಳು ಮಾಡಿವೆ. ಮಾಡುತ್ತಿವೆ. ಆದ್ದರಿಂದ ಇದನ್ನೆಲ್ಲ ವೈಚಾರಿಕ ದೃಷ್ಟಿಯಿಂದ ನೋಡುವುದು ಸಾಧ್ಯವಿಲ್ಲ. ಜನತಂತ್ರ ವ್ಯವಸ್ಚ್ಥೆಯಲ್ಲಿ ರಾಜರಿಗೆ ಸ್ಥಾನ ಇಲ್ಲ. ಹಾಗಂತ ರಾಜ ಸತ್ತೆಯ ಇತಿಹಾಸವನ್ನು ನಾವು ತಿರಸ್ಕರಿಸುವುದು ಸಾಧ್ಯವಿಲ್ಲ. ರಾಜಸತ್ತೆಯಲ್ಲಿ ಒಳ್ಳೆಯ ಕೆಲಸ ಆಗಿದ್ದರೆ ಅದನ್ನು ನಾವು ನೆನಪು ಮಾಡಿಕೊಳ್ಳಬೇಕು. ರಾಜರೆಲ್ಲ ಅಯೋಗ್ಯರು ಎಂಬ ತೀರ್ಮಾನಕ್ಕೆ ಬರುವುದು ಮೂರ್ಖತನ..

ಒಟ್ಟಾರೆಯಾಗಿ ಇತಿಹಾಸವನ್ನು ತಿರಸ್ಕರಿಸುವವನು ವರ್ತಮಾನವನ್ನು ಅರ್ಥ ಮಾಡಿಕೊಳ್ಳಲಾರ, ಜೊತೆಗೆ ಇತಿಹಾಸವನ್ನು ಇತಿಹಾಸವಾಗಿ ನೋಡುವ ಮನಸ್ಥಿತಿಯೂ ಬೇಕು.

 

Tuesday, June 21, 2016

ಇದೆಲ್ಲ ನಡೆಯಬಾರದಿತ್ತು. ಆದರೂ ನಡೆದುಹೋಗಿದೆ,


ಇದೆಲ್ಲ ನಡೆಯಬಾರದಿತ್ತು. ಆದರೂ ನಡೆದುಹೋಗಿದೆ, ನಡೆಯುತ್ತಿದೆ. ಅಧಿಕಾರ ರಾಜಕಾರಣ ಜನತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೂರಿ ಆಗಿದೆ. ನಮ್ಮ ಜನ ಪ್ರತಿನಿಧಿಗಳು ಅಧಿಕಾರ ತಮ್ಮ ಖಾಸಗಿ ಆಸ್ತಿ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದಾರೆ. ಅಧಿಕಾರ ಕೈತಪ್ಪಿದಾಗ ತಮ್ಮ ಹಿಂಬಾಲಕರನ್ನು ಬಿಟ್ಟು ಸಾರ್ವಜನಿಕ ಆಸ್ತಿಯನ್ನು ನಾಶ ಪಡಿಸುತ್ತಿದ್ದಾರೆ. ಜನರನ್ನು ಭಾವನಾತ್ಮಕವಾಗಿ ಸೆಳೆಯುವುದಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ. ತಮಗೆ ತಮ್ಮ ಜಾತಿಗೆ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹೇಳುವ ಮೂಲಕ ತಮ್ಮ ಜಾತಿ ಮತ್ತು ಸಮುದಾಯದ ಜನರನ್ನು ಎತ್ತಿ ಕಟ್ಟಲು ಯತ್ನಿಸುತ್ತಿದ್ದಾರೆ.
ಜನತಂತ್ರ ವ್ಯವಸ್ಥೆಯನ್ನು ನಂಬುವವರು ಈ ವ್ಯವಸ್ಥೆ ದೇಶದಲ್ಲಿ ಬಲವಾಗಿ ಬೇರೂರಬೇಕು ಎಂದುಕೊಂಡವರು ಮೌನವಾಗಿ ಇದನ್ನೆಲ್ಲ ನೋಡುತ್ತಿದ್ದಾರೆ.
ಅಧಿಕಾರ ಯಾರೊಬ್ಬನ ಮನೆ ಆಸ್ತಿ ಅಲ್ಲ. ಜನತಂತ್ರ ವ್ಯವಸ್ಥೆಯಲ್ಲಿ ಅಧಿಕಾರ ಜನರ ಕೊಡುಗೆ. ಜನ ನೀಡಿದ ತೀರ್ಪಿನಂತೆ ನಡೆದುಕೊಳ್ಳುವುದು ಜನ ಪ್ರತಿನಿಧಿಗಳ ಕರ್ತವ್ಯ.. ಆದರೆ ಜನತಂತ್ರದ ಗಂಧ ಗಾಳಿ ಇಲ್ಲದವರು, ಜನ ಪ್ರತಿನಿಧಿಗಳಾದರೆ ಇದೆಲ್ಲ ನಡೆದು ಬಿಡುತ್ತದೆ.ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವುದು ಇದೇ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳ ನಂತರ ತಮ್ಮ ಸಂಪುಟವನ್ನು ಪುನಾ ರಚನೆ ಮಾಡುವ ನಿರ್ಧಾರ ಕೈಗೊಂಡರು. ೧೪ ಸಚಿವರನ್ನು ಕೈ ಬಿಟ್ಟು ಹೊಸದಾಗಿ ೧೩ ಜನರನ್ನು ಸೇರಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಇದು ಅವರ ಪರಮಾಧಿಕಾರವಾಗಿತ್ತು.
ಆದರೆ ಸಂಪುಟ ಪುನಾರಚನೆ ಅಂತಹ ಸುಲಭದ ಕೆಲಸವಾಗಿರಲಿಲ್ಲ. ಪಕ್ಷದ ಹಲವು ನಾಯಕರು ಇದಕ್ಕೆ ಅಡ್ಡಗಾಲು ಹಾಕಿದರು. ತಮ್ಮ ತಮ್ಮ ಬೆಂಬಲಿಗರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲು ಯತ್ನ ನಡೆಸಿದರು. ಪಕ್ಷದ ವರಿಷ್ಠರ ಮೇಲೆ ಒತ್ತದ ಹಾಕಿದರು. ಮೂರು ದಿನಗಳ ಕಾಲ ದೆಹಲಿಯಲ್ಲಿ ನಡೆದಿದ್ದು ನಾಟಕವೇ. ಸಂಪುಟದಿಂದ ಬಿಡುವವರು ಮತ್ತೆ ತೆಗೆದುಕೊಳ್ಳುವವರ ಪಟ್ಟಿಯನ್ನು ಮುಖ್ಯಮಂತ್ರಿಗಳು ಒಯ್ದಿದ್ದರು. ಆದರೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಎಲ್ಲರ ಜೊತೆ ಮಾತನಾಡಿ ಒಮ್ಮತದ ಪಟ್ಟಿಯನ್ನು ಸಿದ್ದಪಡಿಸುವಂತೆ ಸೂಚಿಸಿ ಬಿಟ್ಟರು. ಹೀಗಾಗಿ ಮುಖ್ಯಮಂತ್ರಿಗಳು ಲೋಕಸಭೆಯ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ರಾಜ್ಯದ ಉಸ್ತುವಾರಿ ದಿಗ್ವಿಜಯ್ ಸಿಂಗ್ ಮತ್ತು ಕರ್ನಾಟಕದ ಪ್ರದೇಶ 
ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಗೄಹ ಸಚಿವ ಡಾ. ಪರಮೇಶ್ವರ್ ಜೊತೆ ಇನ್ನೊಂದು ಸುತ್ತು ಮಾತುಕತೆ ನಡೆಸಬೇಕಾಯಿತು.
ಆಗ ಆನ್ನಿಸಿದ್ದು ಕಾಂಗ್ರೆಸ್ ತನ್ನ ಮೂಲಬೂತ ಗುಣಧರ್ಮದಿಂದ ಹೊರಕ್ಕೆ ಬಂದಿಲ್ಲ ಎಂಬುದೇ. ಯಾವುದೇ ರಾಜ್ಯ ಮಟ್ಟದ ನಾಯಕರು ಒಂದು ಹಂತವನ್ನು ಮೀರಿ ಬೆಳೆಯದಂತೆ ತಡೆಯುವ ಕಾಂಗ್ರೆಸ್ ವರಿಷ್ಠರು ಅದೇ ದಾರಿಯನ್ನು ಈಗಲೂ ಅನುಸರಿಸುತ್ತಿದ್ದಾರೆ ಎಂದು ಅನ್ನಿಸಿತ್ತು. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಎಲ್ಲವೂ ಬದಲಾಗಿತ್ತು.  ಕಾಂಗ್ರೆಸ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಿದ್ದರಾಮಯ್ಯನವರಿಗೆ ಸಂಪುಟ ವಿಸ್ತರಣೆಯ ಸಂಪೂರ್ಣ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲು ತೀರ್ಮಾನಿಸಿ ಬಿಟ್ಟಿದ್ದರು. ಕಾಂಗ್ರೆಸ್ ಮಟ್ಟಿಗೆ ಇದು ಮಹತ್ವದ ಬದಲಾವಣೆ ಆಗಿತ್ತು. ಮಗುವನ್ನು ಚಿವುಟಿ ತೊಟ್ಟಿಲು ತೂಗಿವ ಕಾಂಗ್ರೆಸ್ ವರುಷ್ಷರು ಬದಲಾಗಿದ್ದರು. ಪ್ರಾಯಶಃ ಇದು ಅವರಿಗೆ ಅನಿವಾರ್ಯವೂ ಆಗಿತ್ತು. ಯಾಕೆಂದರೆ ಸಿದ್ದರಾಮಯ್ಯ ಬಗ್ಗಿ ನಿಲ್ಲುವ ಮನಸ್ಥಿತಿಯವರಲ್ಲ ಎಂಬ ಅರಿವೂ ಪಕ್ಷದ ವರಿಷ್ಠರಿಗೆ ಇತ್ತು. ದೇಶದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿರುವ ಇನ್ನೊಂದು ರಾಜ್ಯವನ್ನು ಕಳೆದುಕೊಳ್ಳಲು ಪಕ್ಷದ ವರಿಷ್ಠರು ಸಿದ್ದರಿರಲಿಲ್ಲ. ಹೀಗಾಗಿ ಅವರು ಒಂದು ಅರ್ಥದಲ್ಲಿ ಸಿದ್ದರಾಮಯ್ಯನವರಿಗೆ ತಲೆ ಬಾಗಲೇಬೇಕಾಯಿತು. ಸಿದ್ದರಾಮಯ್ಯ ಹಿಡಿದುಕೊಂಡು ಬಂದಿದ್ದ ಪಟ್ಟಿಗೆ ಒಪ್ಪಿಗೆ ನೀಡಲೇಬೇಕಾಯಿತು. ಇಲ್ಲದಿದ್ದರೆ ಮುಖ್ಯಮಂತ್ರಿ ರೆಬಲ್ ಆಗುವ ಅಪಾಯವಿತ್ತು.
ಇದು ಮುಖ್ಯಮಂತ್ರಿಗಳ ಜಯ ಎಂದು ವಿಶ್ಲೇಸಿಸಬಹುದು, ಆದರೆ ಇದಷ್ಟೇ ಅಲ್ಲ. ಕಾಂಗ್ರೆಸ್ ವರಿಷ್ಠರು ಬದಲಾಗಿದ್ದರು ಎಂಬುದು ಬಹಳ ಮುಖ್ಯ. ಪ್ರಾಯಶಃ ಕಾಂಗ್ರೆಸ್ ಹಿರಿಯ ನಾಯಕರು ಇದನ್ನು ನಿರೀಕ್ಷಿಸಿರಲಿಲ್ಲ. ಸಂಪುಟ ಪುನಾ ರಚನೆಯ ಎಳೆದಾಟ ಇನ್ನಷ್ಟು ದಿನ ಮುಂದುವರಿಯುತ್ತದೆ, ಮುಖ್ಯಮಂತ್ರಿಗಳು ಇನ್ನಷ್ಟು ಮೆತ್ತಗಾಗುತ್ತಾರೆ ಎಂದು ಈ ನಾಯಕರು ನಿರೀಕ್ಷಿಸಿದ್ದರು. ಆದರೆ ಹಾಗಾಗಲಿಲ್ಲ. ಮುಖ್ಯಮಂತ್ರಿಗಳು ಪಕ್ಷದ ವರಿಷ್ಟರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಆಶೀರ್ವಾದ ಪಡೆದು ಬೆಂಗಳೂರಿಗೆ ಹಿಂತಿರುಗಿದರು.
ಕಾಂಗ್ರೆಸ್ ಪಕ್ಷದ ಪ್ರಭಾವಿ ಮತ್ತು ಶಕ್ತಿಯುತ ನಾಯಕರಾಗಿ ಬೆಳೆದಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿಗೂ ಬೆಲೆ ಸಿಗಲಿಲ್ಲ. ತಮ್ಮ ಇಬ್ಬರು ಬೆಂಬಲಿಗ ಸಚಿವರಾದ ಖಮರುಲ್ ಇಸ್ಲಾಂ ಮತ್ತು ಬಾಬುರಾವ್ ಚಿಂಚನಸೂರ್ ಅವರನ್ನು ಉಳಿಸಿಕೊಳ್ಳುವುದು ಖರ್ಗೆ ಅವರಿಗೆ ಸಾಧ್ಯವಾಗಲಿಲ್ಲ. ಜೊತೆಗೆ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವರನ್ನಾಗಿ ಮಾಡುವ ಮೂಲಕ ಹೊಸ ರಾಜಕೀಯ ದಾಳವನ್ನು ಮುಖ್ಯಮಂತ್ರಿಗಳು ಉರುಳಿಸಿಬಿಟ್ಟಿದ್ದರು. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಖರ್ಗೆ ಅವರನ್ನು ತಣ್ಣಗೆ ಮಾಡುವ ದಾಳ ಇದಾಗಿತ್ತು. ಖರ್ಗೆ ಅವರ ವಿರುದ್ಧ ಅವರ ಬೆಂಬಲಿಗರನ್ನೇ ಎತ್ತಿ ಕಟ್ಟುವ ದಾಳ.. ಈ ಯೋಜನಾಬದ್ಧ ಕೆಲಸದಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು.. ಖರ್ಗೆ ಕರ್ನಾಟಕದ ರಾಜಕಾರಣದಲ್ಲಿ ಅತಂತ್ರರಾದರು.
ಮಗನನ್ನು ಮಂತ್ರಿ ಮಾಡಬೇಡಿ ಎಂದು ಹೇಳುವ ಸ್ಥಿತಿಯಲ್ಲೂ ಖರ್ಗೆ ಇರಲಿಲ್ಲ. ಬೆಂಬಲಿಗರನ್ನು ಬಿಟ್ಟು ಮಗನನ್ನು ಸಂಪುಟಕ್ಕೆ ತೆಗೆದುಕೊಂಡರೆ ಅದರ ಪರಿಣಾಮ ಆಗುವುದು ತಮ್ಮ ಮೇಲೆ ಎಂಬ ಅರಿವು ಖರ್ಗೆ ಅವರಿಗಿದ್ದರೂ ಅವರು ಅಸಹಾಯಕರಾಗಿ ಬಿಟ್ಟಿದ್ದರು. ಯಾಕೆಂದರೆ ಸೋನಿಯಾ ಮತ್ತು ರಾಹುಲ್ ಗಾಂಧಿ ಪ್ರಿಯಾಂಕ್ ಖರ್ಗೆ ಅವರು ಸಂಪುಟಕ್ಕೆ ಸೇರಲು ಒಪ್ಪಿಗೆ ನೀಡಿಬಿಟ್ಟಿದ್ದರು. ನೆಹರೂ  ಕುಟುಂಬದ ನಿಷ್ಟರಾಗಿರುವ ಖರ್ಗೆ ಈ ತೀರ್ಮಾನವನ್ನು ವಿರೋಧಿಸುವ ಧಾರ್ಷ್ಯವನ್ನು ಪ್ರದರ್ಶಿಸಲಿಲ್ಲ...ಇದರಿಂದಾಗಿ ಖರ್ಗೆ ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಯಿತು.. ಸಂಪುಟದಿಂದ ಹೊರಕ್ಕೆ ಹೋದ ಬಹುತೇಕ ನಾಯಕರು ಖರ್ಗೆ ಅವರನ್ನೇ ಟಾರ್ಗೆಟ್ ಮಾಡಿದರು.. ತಮ್ಮ ಮಗನನ್ನು ಸಚಿವನನ್ನಾಗಿ ಮಾಡುವುದಕ್ಕಾಗಿ ನಮ್ಮನ್ನು ಬಲಿ ಕೊಟ್ಟರು ಎಂದು ದೂರಿದರು... ಸಂಪುಟ ಪುನಾರಚನೆಯಿಂದ ನೊಂದವರೆಲ್ಲರಿಗೆ ಟಾರ್ಗೆಟ್ ಆದವರು ಖರ್ಗೆ..
ಈಗ ಈ ಪುನಾರಚನೆಯ ನಂತರ ಘಟನೆಯನ್ನು ಗಮನಿಸಿ. ಸಚಿವ ಸಂಪುಟದಿಂದ ಹೊರಕ್ಕೆ ಹೋದವರ ಬೆಂಬಲಿಗರು ಪ್ರತಿಭಟನೆ ಮಾಡಿದರು. ಬಸ್ ಗೆ ಬೆಂಕಿ ಹಚ್ಚಿದರು.. ಕಲ್ಲು ತೂರಿದರು. ತಮ್ಮ ಬದುಕೇ ಮುಗಿದು ಹೋಯಿತು ಎಂದು ಅಲವತ್ತುಗೊಂಡರು. ಸಚಿವ ಸ್ಥಾನ ತಮ್ಮ ಜನ್ಮ ಸಿದ್ಧ ಹಕ್ಕು ಎಂಬಂತೆ ವರ್ತಿಸತೊಡಗಿದರು.
ವಯೋವೃದ್ಧ ನಾಯಕ ಕಮರುಲ್ ಇಸ್ಲಾಂ ತಮ್ಮನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿರುವುದು ಕಾಂಗ್ರೆಸ್ ಮುಕ್ತ ಭಾರತದ ಮುನ್ಸೂಚನೆ ಎಂದು ಹೇಳಿದರು. ತಾವೇ ಕಾಂಗ್ರೆಸ್ ಎಂಬಂತೆ ಅವರು ಮಾತನಾಡಿದ್ದು ಹಾಸ್ಯಾಸ್ಪದವಾಗಿ ಕಾಣುತ್ತಿತ್ತು. ಇನ್ನೊಬ್ಬ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ತಮ್ಮ ಮತ್ತು ಮುಖ್ಯಮಂತ್ರಿಗಳ ನಡುವಿನ ಸಂಬಂಧವನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದರು. ಸಿದ್ದರಾಮಯ್ಯ ಅಸಮರ್ಥ ನಾಯಕ ಎಂದು ಅಪ್ಪಣೆ ಕೊಡಿಸಿದರು...
ಖಮರುಲ್ ಇಸ್ಮಾಂ ಅವರಿಗೆ ಮಾತನಾದುವುದು ಕಷ್ಟ.. ನಡೆಯುವಾಗಲೂ ಬೇರೆಯವರ ಹೆಗಲು ಬೇಕು. ವಯೋ ಸಹಜವಾದ ರೋಗಗಳು ಅವರನ್ನು ಆವರಿಸಿವೆ. ಶ್ರೀನಿವಾಸ್ ಪ್ರಸಾದ್ ಅವರಿಗೂ ಆರೋಗ್ಯ ಸರಿಯಿಲ್ಲ.. ಮೂತ್ರಕೋಶದ ಕಸಿ ಮಾಡಿಸಿಕೊಂಡಿದ್ದಾರೆ.. ಅಂಬರೀಷ್ ಅವರ ಆರೋಗ್ಯ ಕೂಡ ಸಂಪೂರ್ಣವಾಗಿ ಸರಿಯಿಲ್ಲ. ಜೊತೆಗೆ ಜವಾಬ್ದಾರಿ ಇಲ್ಲದ ನಾಯಕ ಅವರು. ಶಾಮನೂರು ಶಿವಶಂಕರಪ್ಪ ಅವರು ಎಂಬತ್ತರ ಗಡಿ ದಾಟಿದ್ದಾರೆ. ಆದರೆ ಇವರಲ್ಲಿ ಯಾರೂ ಸಹ ಸಂಪುಟದಿಂದ ಹೊರಕ್ಕೆ ಬರುವುದಕ್ಕೆ ಸಿದ್ದರಿಲ್ಲ.. ಅವರ ಪ್ರಕಾರ ತಮ್ಮ ತಮ್ಮ ಖಾತೆಗಳನ್ನು ಇವರೆಲ್ಲ ತುಂಬಾ ಚೆನ್ನಾಗಿಯೇ ನಿರ್ವಹಿಸಿದ್ದಾರೆ..
ಇವರೆಲ್ಲ ಅಧಿಕಾರ ತಮ್ಮ ಜನ್ಮ ಸಿದ್ಧ ಹ,ಕ್ಕು ಎಂದು ನಂಬಿಕೊಂಡಿರುವಂತಿದೆ.. ತಾವು ಹುಟ್ಟಿರುವುದೇ ಅಧಿಕಾರ ಅನುಭವಿಸುವುದಕ್ಕಾಗಿ ಎಂಬ ಭ್ರಮೆಯಲ್ಲಿ ಇವರೆಲ್ಲ ಇದ್ದಂತಿದೆ. ಹೀಗೆ ಭ್ರಮೆಯಲ್ಲಿ ಬದುಕಲು ಇವರಿಗೆ ಹಕ್ಕಿದೆ. ಆದರೆ ಸಾರ್ವಜನಿಕ ಆಸ್ತಿಯನ್ನು ನಾಶ ಪಡಿಸುವ ಅಧಿಕಾರವನ್ನು ಇವರ ಬೆಂಬಲಿಗರಿಗೆ ನೀಡಿದವರು ಯಾರು ? ಬಸ್ ಗೆ ಬೆಂಕಿ ಹಚ್ಚುವುದು ಅಪರಾಧ ಎಂಬ ಅರಿವು ಇವರಿಗೆ ಬೇಡವೆ ? ತಮ್ಮ ತಮ್ಮ ಬೆಂಬಲಿಗರನ್ನೇ ನಿಯಂತ್ರಣದಲ್ಲಿ ಇಡಲಾರದ ಇವರನ್ನು ನಾಯಕರೆಂದು ಒಪ್ಪಿಕೊಳ್ಳುವುದು ಹೇಗೆ ?
ಶಾಮನೂರು ಶಿವಶಂಕರಪ್ಪ ಅವರ ಮಾತನ್ನು ಕೇಳಿಸಿಕೊಳ್ಳಿ. ನಾನು ಸಚಿವನಾಗಿ ಇನ್ನೊವಾ ಕಾರ್ ನಲ್ಲಿ ಓಡಾಡುತ್ತಿದ್ದೆ. ಇನ್ನು ಮುಂದೆ ನನ್ನ ಬೇಂಜ್ ಕಾರಿನಲ್ಲಿ ಓಡಾಡುತ್ತೇನೆ.. ಇದು ದುರಹಂಕಾರದ ಮಾತಲ್ಲವೆ ? ನಿಮಗೆ ಬೆಂಜ್ ಕಾರಿನಲ್ಲಿ ಓಡಾಡುವಷ್ಟು ಹಣ ಸಂಪತ್ತು ಎಲ್ಲ ಇದೆ ನಿಜ. ಆದರೆ ಅಧಿಕಾರ ಕಳೆದುಕೊಂಡ ಸಂದರ್ಭದಲ್ಲಿ ಹೀಗೆ ಮಾತನಾಡುವುದು ಸೌಜನ್ಯವಲ್ಲ ಎಂಬ ತಿಳುವಳಿಕೆ ನಿಮಗೆ ಇರಬೇಕಲ್ಲವೆ ?
ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಜನತಂತ್ರ ವ್ಯವಸ್ಥೆಯ ಬಗ್ಗೆ ಸ್ಪಷ್ಟ ತಿಳುವಳಿಕೆ ಇರಬೇಕು. ಜನ ಪ್ರತಿನಿಧಿಯಾಗಿ ಕೆಲಸ ಮಾಡುವುದು ಜನರ ನಂಬಿಕೆಯ ಮೇಲೆ. ಜನ ನೀಡಿದ ಅಧಿಕಾರ ಅವರಿಗೆ ಮೀಸಲು ಎಂಬ ತಿಳುವಳಿಕೆ ಇರಬೇಕು.. ಒಂದಲ್ಲ ಒಂದು ದಿನ ಅಧಿಕಾರವನ್ನು ಬಿಡಬೇಕಾಗುತ್ತದೆ ಎಂಬುದು ಅವರ ಮನಸ್ಸಿನಲ್ಲಿ ಸದಾ ಜಾಗೃತವಾಗಿರಬೇಕು, ಹಾಗಿದ್ದಾಗ ಮಾತ್ರ ಅಧಿಕಾರ ಬಿಡುವಾಗ ನೋವಾಗುವುದಿಲ್ಲ...ಆದರೆ ಇವರೆಲ್ಲ ಅಧಿಕಾರ ಎನ್ನುವುದು ತಮ್ಮ ಕರ್ತವ್ಯ ಎನ್ನುವುದಕ್ಕೆ ಬದಲಾಗಿ ಇದು ತಮ್ಮ ಹಕ್ಕು ಎಂದುಕೊಂಡಂತಿದೆ. ಇವರ ಬೆಂಬಲಿಗರು ಮತ್ತು ಅಭಿಮಾನಿಗಳೂ ಸಹ ಇದೇ ಮನಸ್ಥಿತಿಯವರು..
ಚಿತ್ರ ನಟ ಅಂಬರೀಷ್ ಅವರನ್ನು ಸಂಪುಟದಿಂದ ಕೈಬಿಟ್ಟ ವಿಚಾರವನ್ನು ನೋಡಿ. ಈ ಬಗ್ಗೆ ಅವರ ಅಭಿಮಾನಿಗಳು ಹುಚ್ಚು ಹುಚ್ಚಾಗಿ ಪ್ರತಿಕ್ರಿಯೆ ನೀಡಿದ್ದನ್ನು ಕ್ಷಮಿಸಿಬಿಡಬಹುದು. ಯಾಕೆಂದರೆ ಅವರೆಲ್ಲ ಅಭಿಮಾನಿಗಳು. ಅಭಿಮಾನ ಎನ್ನುವುದು ನಮ್ಮನ್ನು ವಿವೇಚನಾ ಹೀನರನ್ನಾಗಿ ಮಾಡಿ ಬಿಡುತ್ತದೆ. ಯಾರಿಗೆ ವಿವೇಚನಾ ಶಕ್ತಿ ಇರುತ್ತದೆಯೋ ಅವರು ಅಭಿಮಾನಿಗಳಾಗುವುದು ಸಾಧ್ಯವಿಲ್ಲ...ಆದರೆ ಕನ್ನಡ ಚಿತ್ರರಂಗದ ಪ್ರತಿಕ್ರಿಯೆ ಮಾತ್ರ ಆಶ್ಚರ್ಯವನ್ನು ಉಂಟು ಮಾಡುತ್ತದೆ.
ಅಂಬರೀಷ್ ಅವರನ್ನು ಸಂಪುಟದಿಂದ ಕೈ ಬಿಟ್ಟ ತಕ್ಷಣ ಕನ್ನಡ ಚಿತ್ರರಂಗದ ನಾಯಕರು ಇದು ತಮ್ಮ ವೈಯಕ್ತಿಕ ವಿಚಾರ ಎಂಬಂತೆ ಮಾತನಾಡಲು ಪ್ರಾರಂಭಿಸುತ್ತಾರೆ. ಯಾವುದೇ ಒಂದು ಸರ್ಕಾರದಲ್ಲಿ ಯಾರು ಇರಬೇಕು ಯಾರು ಇರಬಾರದು ಎಂಬುದನ್ನು ಅಧಿಕಾರಕ್ಕೆ ಬಂದ ಪಕ್ಷ ನಿರ್ಧರಿಸುತ್ತದೆ. ಶಾಸಕಾಂಗ ಪಕ್ಷದ ನಾಯಕರು ತಮ್ಮ ಸಂಪುಟದಲ್ಲಿ ಯಾರನ್ನು ಇಟ್ಟುಕೊಳ್ಳಬೇಕು ಎಂದು ನಿರ್ಧರಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರವನ್ನು ಪ್ರಶ್ನಿಸಲು ಇವರು ಯಾರು ?
ಅಂಬರೀಶ್ ಸಚಿವರಾಗಿದ್ದು ಕನ್ನಡ ಚಿತ್ರ ರಂಗದ ಪ್ರತಿನಿಧಿಯಾಗಿ ಅಲ್ಲ. ಅವರೊಬ್ಬ ಸಿನಿಮಾ ನಟ ಕಂ ಕಾಂಗ್ರೆಸ್ ಪಕ್ಷದ ರಾಜಕಾರಣಿ. ಅವರು ಶಾಸಕ ಮತ್ತು ಸಚಿವರಾಗಿದ್ದು ಚಿತ್ರ ನಟ ಎಂದಲ್ಲ. ಅವರು ನಿರ್ವಹಿಸಿದ ವಸತಿ ಖಾತೆ ಕೂಡ ಚಿತ್ರ ರಂಗಕ್ಕೆ ಸಂಬಂಧಿಸಿದ್ದಲ್ಲ...ಹೀಗಿರುವಾಗ ಚಿತ್ರರಂಗಕ್ಕೆ ಏನು ಸಂಬಂಧ ? ಅಂಬರೀಶ್ ಅವರನ್ನು ಸಂಪುಟದಲ್ಲಿ ಮುಂದುವರಿಸದಿದ್ದರೆ ಚಿತ್ರ ರಂಗದ ಬಂದ್ ಮಾಡ್ತೀವಿ ಎಂದು ಹೇಳುತ್ತಿರುವ ಇವರಿಗೆ ಜನ ತಂತ್ರ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಇಲ್ಲವೆ...?
ಅಂಬರೀಶ್ ಸಚಿವರಾಗಿ ಮುಂದುವರಿಯಬೇಕೆ ಬೇಡವೇ ಎಂದು ನಿರ್ಧರಿಸುವುದು ಅವರು ಸಚಿವರಾಗಿ ಹೇಗೆ ಕೆಲಸ ಮಾಡಿದ್ದಾರೆ ಎನ್ನುವುದರ ಮೇಲೆ. ಅವರು ಚಿತ್ರರಂಗಕ್ಕೆ ಏನು ಮಾಡಿದ್ದಾರೆ ಎಂಬುದರ ಮೇಲಲ್ಲ. ಅವರು ಚಿತ್ರ ನಟರಾಗಿ ನೂರಾರು ಚಿತ್ರಗಳಲ್ಲಿ ನಟಿಸಿದ್ದು, ಸಾವಿರಾರು ಖಳನಾಯಕರನ್ನು ತೆರೆಯ ಮೇಲೆ ಬಡಿದಿದ್ದು ಅವರು ಸಂಪುಟದಲ್ಲಿ ಮುಂದುವರಿಯುವುದಕ್ಕೆ ಅರ್ಹತೆಯಾಗಲಾರದು. ಅವರು ವಸತಿ ಸಚಿವರಾಗಿ ಹೇಗೆ ಕೆಲಸ ಮಾಡಿದರು ಎಂಬುದು ಮಾತ್ರ ಅವರ ಸಂಪುಟದಲ್ಲಿ ಮುಂದವರಿಯುವುದಕ್ಕೆ ಅಥವಾ ಮುಂದುವರಿಯದಿರುವುದಕ್ಕೆ ಕಾರಣವಾಗಬೇಕು. ಇದೆಲ್ಲ ನಮ್ಮ ಕನ್ನಡ ಚಿತ್ರ ರಂಗದವರಿಗೆ ತಿಳಿದಿರಬೇಕಿತ್ತು. ಪಾಪ ಬಿಡಿ.

ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅಂಬರೀಷ್ ತಾವು ಬೇಕಾದಗಲೆಲ್ಲ ಬಿಡುವುದಕ್ಕೆ ಚಪ್ಪಲಿ ಅಲ್ಲ ಅಂದರು. ಅವರು ತಮ್ಮ ಸ್ವಾಭಿಮಾನದ ಪ್ರಶ್ನೆ ಎತ್ತಿದರು. ಇದೆಲ್ಲ ಸರಿ. ಆದರೆ ವಸತಿ ಸಚಿವರಾಗಿ ಮೂರು ವರ್ಷಗಳ ಅವಧಿಯಲ್ಲಿ ಮಾಡಿದ್ದೇನು ಎಂಬುದನ್ನು ಹೇಳಲಿಲ್ಲ. ತಾವು ಅಸಮರ್ಥರಲ್ಲ ಎಂಬುದನ್ನು ಸಾಬೀತು ಪಡಿಸಲು ಯತ್ನಿಸಲಿಲ್ಲ.  ಸಿನಿಮಾ ನಾಯಕನಂತೆ ಡೈಲಾಗ್ ಹೊಡೆದರೆ ಹೊರತೂ ಒಬ್ಬ ರಾಜಕೀಯ ನಾಯಕನಂತೆ ಜನ ಪ್ರತಿನಿಧಿಯಂತೆ ವರ್ತಿಸಲಿಲ್ಲ. ಇದರ ಅರ್ಥ ಒಬ್ಬ ಸಿನಿಮಾ ನಾಯಕನಿಗೂ ರಾಜಕೀಯ ನಾಯಕನಿಗೂ ಇರಬೇಕಾದ ವ್ಯತ್ಯಾಸ ಅವರಿಗೆ ಅರ್ಥವಾಗಲೇ ಇಲ್ಲ. ಒಬ್ಬ ಸಿನಿಮಾ ನಾಯಕ ಜನ ನಾಯಕನಾಗಿ ಬದಲಾಗಲೇ ಇಲ್ಲ.
ಅಂಬರೀಶ್ ಅವರನ್ನು ಸಂಪುಟದಿಂದ ಬಿಟ್ಟ ತಕ್ಷಣ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾರ್ಯಪ್ರವೃತ್ತರಾಗುತ್ತಾರೆ. ಮಾಜಿ ಪ್ರಧಾನಿ ದೇವೇಗೌಡರು, ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಅಂಬರೀಶ್ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಾರೆ, ಅವರ್ವಿಗೆ ಸಾಂತ್ವನ ಹೇಳುತ್ತಾರೆ. ಹಾಗೆ ಶ್ರೀನಿವಾಸ್ ಪ್ರಸಾದ್ ಅವರ ಬಗ್ಗೆಯೂ ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ವಿಪರೀತ ಪ್ರೀತಿ ಹುಟ್ಟಿ ಬಿಡುತ್ತದೆ. ಪ್ರಸಾದ್ ಅವರನ್ನು ಭೇಟಿ ಮಾದಿ ಸಾಂತ್ವನ ಹೇಳುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅವರತ್ತ ಗಾಳ ಬೀಸುತ್ತಿರುವುದು ನಿಜ.
ಇಲ್ಲಿ ನಮ್ಮ ಜನತಂತ್ರ ವ್ಯವಸ್ಥೆ ಕುರಿತು ಕೇಳಲೇಬೇಕಾದ ಕೆಲವು ಪ್ರಶ್ನೆಗಳಿವೆ. ಜನತಂತ್ರ ವ್ಯವಸ್ಥೆಯ ಮುಖ್ಯ ಲಕ್ಷಣ ಎಂದರೆ ಅದು ರಾಜಸತ್ತೆಯ ವಿರೋಧ. ಹಾಗೆ ವ್ಯಕ್ತಿ ಪೂಜೆಗೆ ಇಲ್ಲಿ ಅವಕಾಶವಿಲ್ಲ. ಆದರೆ ನಮ್ಮ ಜನತಂತ್ರ ವ್ಯವಸ್ಥೆ ರಾಜಸತ್ತೆಯ ಪಳಯುಳಿಕೆಯಾಗಿಯೇ ಮುಂದುವರಿದಿದೆ. ಇಲ್ಲಿ ನಾಯಕರ ಅಭಿಮಾನಿಗಳಿದ್ದಾರೆ. ನಿಜವಾದ ಜನತಂತ್ರ ಪ್ರೇಮಿಗಳಿಲ್ಲ. ಅಧಿಕಾರ ರಾಜಕಾರಣದ ಎಲ್ಲ ಪಟ್ಟುಗಳನ್ನು ಬಳಸಿಕೊಂಡು ಅಧಿಕಾರವನ್ನು ಸದಾ ಅನುಭವಿಸುವ ಮನಸ್ಥಿತಿಯ ರಾಜಕಾರಣಿಗಳಿದ್ದಾರೆ. ರಾಜನೀತಿಜ್ನರಿಲ್ಲ..
ಜನತಂತ್ರ ವ್ಯವಸ್ಥೆಯ ಯಶಸ್ಸು ರಾಜಕೀಯ ಪಕ್ಷಗಳ ಮೇಲಿದೆ. ಒಂದು ರಾಜಕೀಯ ಪಕ್ಷ ಎಂದರೆ ಅದಕ್ಕೊಂದು ಸಿದ್ದಾಂತ ಇರಬೇಕು ಬದ್ಧತೆ ಇರಬೇಕು. ಒಂದು ರಾಜಕೀಯ ಪಕ್ಷಕ್ಕೂ ಇನ್ನೊಂದು ರಾಜಕೀಯ ಪಕ್ಷಕ್ಕೂ ಸೈದ್ದ್ಧಾಂತಿಕ ವ್ಯತ್ಯಾಸಗಳಿರಬೇಕು. ನೀತಿ ನಿರೂಪಣೆಯಲ್ಲಿ ವ್ಯತ್ಯಾಸ ಇರಬೇಕು. ನಮ್ಮಲ್ಲಿ ನಿಜವಾದ ಅರ್ಥದ ರಾಜಕೀಯ ಪಕ್ಷಗಳಿಲ್ಲ. ಇಲ್ಲಿರುವುದು ಬಾಲಬಡುಕ ರಾಜಕೀಯ ಗುಂಪುಗಳು. ಈ ಗುಂಪುಗಳಲ್ಲಿ ಇರುವ ಜನ ಅಂಗಿಯನ್ನು ಬದಲಿಸುವ ಹಾಗೆ ನಾಯಕರನ್ನು ಪಕ್ಷವನ್ನು ಬದಲಿಸುತ್ತಾರೆ. ಯಾಕೆಂದರೆ ಇವರೆಲ್ಲರ ರಾಜಕಾರಣಕ್ಕೆ ಅಧಿಕಾರವೇ ಗುರಿ. ಸಿದ್ಧಾಂತವಲ್ಲ.

ನನಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಎಲ್ಲ ಪಕ್ಷಗಳು ವ್ಯಕ್ತಿ ಮತ್ತು ಅಧಿಕಾರ ಕೇಂದ್ರಿತ ರಾಜಕಾರಣದಲ್ಲಿ ತೊಡಗಿವೆ. ಹೀಗಾಗಿ ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ, ದೇವೇಗೌಡ, ಯಡಿಯೂರಪ್ಪ ಕಾಣುತ್ತಾರೆ. ಅವರ ನೆರಳಿನ ಹಿಂದೆ ಎಲ್ಲೋ ರಾಜಕೀಯ ಪಕ್ಷಗಳು ಕಳೆದುಹೋಗಿವೆ. ಹೀಗಾಗಿ ಇಲ್ಲಿ ನಿಜವಾದ ಜನತಂತ್ರ ಕನಸು ಮಾತ್ರ....

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...