Thursday, June 30, 2016

ನಾನು ಪತ್ರಿಕೋದ್ಯಮ ಆಗದಿದ್ದರೆ ದೊಡ್ದ ಗೂಂಡಾ ಆಗುತ್ತಿದ್ದೆ....!

ಯಾವ ಮೋಹನ ಮುರಳಿ ಕರೆಯಿತೋ ಗೊತ್ತಿಲ್ಲ.  ಪತ್ರಿಕೋದ್ಯಮ ನನ್ನನ್ನು ಕರೆಯಿತು. ನನ್ನನ್ನು ಅಪ್ಪಿಕೊಂಡಿತು. ನನಗೆ ಬದುಕು ನೀಡಿತು. ಅನ್ನ ನೀಡಿತು. ನನ್ನ ಬದುಕು ಹಾಗೆ ನಡೆದುಕೊಂಡು ಬಂತು.
ಈ ಸುದೀರ್ಘ ಪತ್ರಿಕೋದ್ಯಮದ ದಾರಿಯಲ್ಲಿ ನನಗೆ ದಕ್ಕಿದ್ದೆಷ್ಟು ನನಗೆ ಗೊತ್ತಿಲ್ಲ. ಆದರೆ ನನ್ನ ಯೋಗ್ಯತೆಗೆ ಮೀರಿ ಎಲ್ಲವನ್ನು ಕೊಟ್ಟ ಪತ್ರಿಕೋದ್ಯಮ ಎಂತಹ ಕರುಣಾಮಯಿ ?
ಮಲೇನಾಡಿನ ಮೂಲೆಯ ಹಳ್ಳಿಯೊಂದರಿಂದ ಬಂದ ನನಗೆ ಪತ್ರಿಕೋದ್ಯಮದ ಬಾಗಿಲು ಹಾಗೆ ತೆರೆದು ಬಿಟ್ಟಿತಲ್ಲ ? ನನ್ನನ್ನು ಸಲಹಿ ಸಾಕಿತಲ್ಲ ? ಪತ್ರಿಕಾ ದಿನಾಚರಣೆಯ ಇಂದಿನ ಸಂದರ್ಭದಲ್ಲಿ ಇದೆಲ್ಲ ನೆನಪಾಗುತ್ತಿದೆ. ಹಾಗೆ ನನ್ನ ಚೆಂಬರಿನಲ್ಲಿ ಕುಳಿತು ಹಳೆಯದನ್ನೆಲ್ಲ ಮೆಲಕು ಹಾಕುತ್ತೇನೆ. ಆಗ ನನ್ನಲ್ಲಿ ಮೂಡುವುದು ಧನ್ಯತಾ ಭಾವ.
ಅದು ಎಂಬತ್ತರ ದಶಕ. ಕಾಲೇಜಿನಲ್ಲಿ ನಾನೊಬ್ಬ ಉಡಾಳ. ತರಲೆ, ಜಗಳ ಗಂಟ. ಆಗ ನನ್ನ ಮೇಲೆ ಪ್ರಭಾವ ಬೀರಿದ್ದು ವಿಷ್ಣುವರ್ಧನ ಅಭಿನಯದ ನಾಗರಹಾವು ಸಿನಿಮಾ. ನಾನೇ ರಾಮಚಾರಿ ಎಂದುಕೊಂಡು ಮುಖಗಂಟಿಕ್ಕಿಕೊಂಡು, ಹುಡುಗರ ಪಡೆ ಕಟ್ಟಿಕೊಂಡು ಓಡಾಡುತ್ತಿದ್ದ ದಿನಗಳು. ಕಾಲೇಜಿನಲ್ಲಿ ಯಾವುದೇ ಗಲಾಟೆಯಾದರೂ ಅದಕ್ಕೆ ನಾನೇ ಕಾರಣ ಎಂದು ಎಲ್ಲರೂ ತೀರ್ಮಾನಕ್ಕೆ ಬರುತ್ತಿದ್ದ ಸಂದರ್ಭ ಅದು.
ನಾನು ಯೋಚಿಸುತ್ತೇನೆ. ನನ್ನ ತರಲೆಯಿಂದ ಅದೆಷ್ಟು ಹುಡುಗಿಯರು ನೋವನ್ನು ಅನುಭವಿಸಿದರು ? ಹೆಣ್ಣು ಹೆತ್ತವರು ಕಾಲೇಜಿಗೂ ಬಂದು ಗಲಾಟೆ ಮಾಡಿದರು. ನನ್ನ ಅಪ್ಪನವರೆಗೆ ದೂರು ಒಯ್ದರು. ಆದರೂ ನಾನು ಮಾತ್ರ ಬದಲಾಗಲೇ ಇಲ್ಲ. ಸೈಕಲ್ ಚೈನ್ ಗೆ ಮರದ ಹಿಡಿಕೆ ಹಾಕಿ ಅದನ್ನು ಬೆಲ್ಟ್ ಜಾಗದಲ್ಲಿ ಕಟ್ಟಿಕೊಂಡು ಹೊರಗೆ ಬರುತ್ತಿದ್ದ ನನ್ನನ್ನು ನೋಡಿದವರು ಹಿಡಿ ಶಾಪ ಹಾಕುತ್ತಿದ್ದರಲ್ಲ ?
ನನ್ನಪ್ಪ ತಾಲೂಕಿನಲ್ಲೇ ಗೌರವಾನ್ವಿತ ವ್ಯಕ್ತಿ; ಅವರ ಮೇಲಿನ ಗೌರವದಿಂದ ಜನ ನನ್ನ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಳ್ಳುತ್ತಿದ್ದರು. ಆದರೆ ನಾನು ಮಾತ್ರ ಬದಲಾಗಲೇ ಇಲ್ಲ. ನನ್ನ ಹರಿದ ಖಾದಿ ಪ್ಯಾಂಟನ್ನು ನೋಡಿ ನಕ್ಕ ನನ್ನ ಸಹಪಾಠಿ ಹುಡುಗಿಗೆ ನಾನು ಕಾಡಿದ ಬಗೆ, ಅಬ್ಬಬ್ಬಾ....
ಆಕೆ ಈಗ ಎಲ್ಲಿದ್ದಾಳೋ ? ನನ್ನ ಬಗ್ಗೆ ಏನು ಅಂದುಕೊಂಡಿದ್ದಾಳೋ ಗೊತ್ತಿಲ್ಲ. ಆಗ ನಾನು ಮಾತ್ರ ಅವರ ಪಾಲಿಗೆ ಟೆರರ್..!
ಆಕೆ ಸ್ವಲ್ಪ ಗತ್ತಿನ ಹುಡುಗಿ. ನೋಡದಕ್ಕೆ ಸುಂದರವಾಗಿಯೂ ಇದ್ದಳು. ಅದೊಂದು ದಿನ ನಾನು ನನ್ನ ಸ್ನೇಹಿತರ ಜೊತೆಗೆ ಕಾಲೇಜಿನಿಂದ ಬರುವಾಗ ನನ್ನ ಹರಿದು ಪ್ಯಾಂಟು ನೋಡಿ ನಕ್ಕಳಲ್ಲ ? ಆಗಲೇ ನನ್ನ  ಪಿತ್ತ ನೆತ್ತಿಗೆ ಏರಿತು. ಮರುದಿನವೇ ಆಕೆಗೆ ಒಂದು ಪತ್ರ ಬರೆದೆ..ನಾನು ಗೌರವಾನ್ವಿತ ಕುಟುಂಬದಿಂದ ಬಂದವನು. ನನಗೂ ಅಕ್ಕ ತಂಗಿಯರಿದ್ದಾರೆ. ನಾನು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲೆ. ಆದರೆ ಮಾಡುವುದಿಲ್ಲ, ಇದು ಪತ್ರದ ಮುಖ್ಯಾಂಶ. ಹಾಗೆ ನೋಡಿದರೆ ನನಗೆ ಅಕ್ಕ ತಂಗಿಯರಿಲ್ಲ. ಆದರೂ ಪತ್ರಕ್ಕೆ ವಜನ್ನು ಬರಲಿ ಎಂದು ಅಕ್ಕ ತಂಗಿಯರಿದ್ದಾರೆ ಎಂದು ಬರೆದಿದ್ದೆ. ಇದನ್ನು ಆಕೆ ಪ್ರಾಂಶುಪಾಲರಿಗೆ ನೀಡಿದಳು. ಆಗ ಕಾಲೇಜಿನ ಪ್ರಾಂಶುಪಾಲರಾಗಿದ್ದವರು ಬಿ,ಎಚ್. ಶ್ರೀಧರ್. ಅವರು ನನ್ನನ್ನು ತಮ್ಮ ಚಂಬರಿಗೆ ಕರೆಸಿದರು.. ಏನಯ್ಯ ಹುಡುಗಿಯರಿಗೆ ಪತ್ರ ಬರೆಯುತ್ತೀಯ ಎಂದು ತರಾಟೆಗೆ ತೆಗೆದುಕೊಂಡರು. ನಾನು ಅವರಿಗೆ ಹೇಳಿದೆ. ನಾನು ತಪ್ಪು ಬರೆದಿದ್ದರೆ ನಿಮ್ಮ ಚೆಪ್ಪಲಿಯಿಂದ ನನಗೆ ಹೊಡೀರಿ.
ಅವರು ಪತ್ರ ಓದಿದರು. ನನಗೂ ಅಕ್ಕ ತಂಗಿಯರಿದ್ದಾರೆ ಎಂಬ ಮಾತು ಅವರ ಮನಸ್ಸಿಗೆ ನಾಟಿತು. ನಾನು ಯೋಗ್ಯ ವಿದ್ಯಾರ್ಥಿ ಎಂಬ ತೀರ್ಮಾನಕ್ಕೆ ಬಂದ ಅವರು ಯಾವುದೇ ಕ್ರಮ ತೆಗೆದುಕೊಳ್ಳದೇ ನನ್ನನ್ನು ಕಳುಹಿಸಿ ಕೊಟ್ಟರು. ಆಗಲೇ ಅಕ್ಕ ತಂಗಿಯರು ಇರುವುದು ಎಂತಹ ರಕ್ಷಣ ನೀಡುತ್ತದೆ ಎಂದು ಜ್ನಾನೋದಯ ಆದದ್ದು..ನನಗೂ ಅಕ್ಕ ತಂಗಿಯರು ಇರಬೇಕಿತ್ತು ಎಂದು ಅನ್ನಿಸಿದ್ದು. ಆದರೆ ನನ್ನಪ್ಪ ಎಬ್ಬರು ಮಕ್ಕಳು ಸಾಕು ಎಂದು ಸುಮ್ಮನಾಗಿ ಬಿಟ್ಟ. ಈಗ ನನಗೆ ಒಬ್ಬ ತಮ್ಮನಿದ್ದಾನೆ. ಅವನು ಸಾದಾ ಸರಳ ಮನುಷ್ಯ. ಆತ ಪತ್ರಿಕೋದ್ಯಮಿ ಆಗಿದ್ದರೂ ನನ್ನಂತೆ ತರಲೆ ಅಲ್ಲ.ಒಳ್ಳೆ ಮನುಷ್ಯ..
ಇದಾದ ಮೇಲೆ ನನ್ನಪ್ಪ ಸೇರಿದಂತೆ ಎಲ್ಲರೂ ಸೇರಿ ನನ್ನನ್ನು ಬೇರೆ ಊರಿಗೆ ಕಳುಹಿಸುವ ಒಮ್ಮತದ ನಿರ್ಧಾರಕ್ಕೆ ಬಂದರು. ಯಾಕೆಂದರೆ ನಾನು ಊರಲ್ಲಿದ್ದರೆ ಊರಿಗೆ ಅಪಾಯ ಎನ್ನುವುದು ಎಲ್ಲರ ಅಭಿಪ್ರಾಯವಾಗಿತ್ತು. ನನ್ನನ್ನು ಬೆಳಗಾವಿಯ ಗೋಗಟೆ ಕಾಲೇಜಿಗೆ ಸಾಗು ಹಾಕಿದರು. ತಾಲೂಕಿನ ಜನ ಪೀಡೆ ತೊಲಗಿತು ಎಂದು ಸಮಾಧಾನದ ನಿಟ್ಟುಸಿರು ಬಿಟ್ಟರು. ಹೆಣ್ಣು ಹೆತ್ತವರು ತಮ್ಮ ಮಕ್ಕಳು ಸೇಪ್ ಎಂದುಕೊಂಡರು.
ಬೆಳಗಾವಿಯಲ್ಲಿ ನನ್ನ ವಿದ್ಯಾಭ್ಯಾಸ ಮುಗಿಸಿ ಊರಿಗೆ ಮರುಳಿ ಕೃಷಿ ಮಾಡಿಕೊಂಡು ಬದುಕಬೇಕು ಎಂದುಕೊಂಡವನು ನಾನು. ಆದರೆ ಪತ್ರಿಕೋದ್ಯಮ ನನ್ನನ್ನು ಕರೆದು ಅಪ್ಪಿಕೊಳ್ಳಲು ಸಿದ್ಧವಾಗಿತ್ತು. ಊರಿಗೆ ಬಂದವನು ಸ್ಥಳೀಯ ಪತ್ರಿಕೆಗಳಲ್ಲಿ ಬರೆಯಲು ಪ್ರಾರಂಭಿಸಿದೆ. ಅಲ್ಲಿಯೂ ಶುರುವಾಯಿತು ನೋಡಿ ಗಲಾಟೆ. ನಮ್ಮ ತಾಲೂಕಿನಲ್ಲಿದ್ದ ಪೆಡ್ಡಿ ಸೊಸೈಟಿಯ್ ಅವ್ಯವಹಾರದ ಬಗ್ಗೆ ಲೇಖನ ಬರೆದೆ. ಅದು ಪ್ರಕಟವಾದ ತಕ್ಷಣ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಯಿತು. ನ್ಯಾಯಾಲಯಕ್ಕೆ ಓಡಾಟ. ಎಲ್ಲರೂ ನನ್ನನ್ನು ತಮ್ಮ ಕಡು ವೈರಿಯಂತೆ ನೋಡತೊಡಗಿದರು. ನನ್ನನ್ನು ಊರಿನಿಂದ ಓಡಿಸಿದರೆ ಮಾತ್ರ ಊರು ಉಳಿಯುತ್ತದೆ ಎಂದುಕೊಂಡರು.
ಈ ನಡುವೆ ರಾಮಚಂದ್ರಾ ಮಠದ ಸ್ವಾಮೀಜಿಯ ವಿರುದ್ಧ ಲೇಖನ ಬರೆದೆ. ಅವರು ಈಗಿನ ರಾಘವೇಶ್ವರರ ಹಿಂದಿನ ಗುರುಗಳು. ಹವ್ಯಕರಿಂದ ಅವರು ಹಣ ಸಂಗ್ರಹಿಸಿ ಕಲ್ಯಾಣ ಮಂಟಪ ಕಟ್ಟುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ನಾನು ಇದನ್ನು ವಿರೋಧಿಸಿ ಅವರು ಕಲ್ಯಾಣ ಮಂಟಪ ಕಟ್ಟುವುದಿಲ್ಲ. ಹಾಗೆ ಕಟ್ಟಿದ ದಿನ ಊರ ಪೇಟೆಯಲ್ಲಿ ನಗ್ನನಾಗಿ ಸಂಚರಿಸುತ್ತೇನೆ ಎಂದು ಸವಾಲು ಹಾಕಿದೆ. ಇದಕ್ಕೆ ಪ್ರತಿಯಾಗಿ ಮಠ ನನ್ನನ್ನು ಜಾತಿಯಿಂದ ಹೊರಕ್ಕೆ ಹಾಕಿತು..ಹವ್ಯಕರು ನನ್ನ ವಿರುದ್ಧ ಯುದ್ಧ ಸಾರಿದರು. ನನಗೆ ಹೊಡೆಯುವ ಯೋಜನೆ ಕೂಡ ಮಠದಿಂದ ಸಿದ್ಧವಾಯಿತು. ಅವರು ನನಗೆ ಹೊಡೆಯುವುದಕ್ಕೆ ಮೊದಲು ನನ್ನ ಹುಡುಗರನ್ನು ಕಟ್ಟಿಕೊಂಡು ಮಠದ ಶಿಷ್ಯರ ಮೇಲೆ ಹಲ್ಲೆ ಮಾಡಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ನನ್ನಮ್ಮ ನನ್ನನ್ನು ಬೆಂಗಳೂರಿಗೆ ಕಳುಹಿಸುವ ನಿರ್ಧಾರ ಮಾಡಿದಳು. ಅಮ್ಮನೇ ಊರು ಬಿಡು ಎಂದ ಮೇಲೆ ನನಗೆ ಬೇರೆ ದಾರಿ ಉಳಿಯಲಿಲ್ಲ. ಕೈಯಲ್ಲಿ ೫೦ ರೂಪಾಯಿ ಹಿಡಿದುಕೊಂಡು ಬೆಂಗಳೂರು ಬಸ್ಸು ಹತ್ತಿದೆ.
ಆದರೆ ಈಗಲೂ ರಾಮಚಂದ್ರಾ ಪುರದ ಮಠದ ಕಲ್ಯಾಣ ಮಂಟಪ ಸಿದ್ದವಾಗಿಲ್ಲ. ನಾನು ನಗ್ನನಾಗಿ ಪೇಟೆಯಲ್ಲಿ ಓಡಾಡುವ ಆಸೆ ಈಡೇರಲೇ ಇಲ್ಲ.
ಬೆಂಗಳೂರಿಗೆ ಬಂದ ಮೇಲೆ ಬೆಂಗಳೂರು ಆಕಾಶವಾಣಿ ಸೇರಿದೆ. ಅಲ್ಲಿ ಕ್ಯಾಸುವಲ್ ವರ್ಕರ್ ಆಗಿ ಪ್ರದೇಶ ಸಮಾಚಾರ ಓದುವ ಮೂಲಕ ಪತ್ರಿಕೋದ್ಯಮದ ಬದುಕು ಪ್ರಾರಂಬವಾಯಿತು. ನಂತರ ಸಂಯುಕ್ತ ಕರ್ನಾಟಕ ಸೇರಿದೆ. ಮುಂಜಾನೆ ಪತ್ರಿಕೆ ಉಪ ಮುಖ್ಯ ವರದಿಗಾರನಾಗಿ ಕೆಲಸ ಮಾಡಿದೆ. ಸುದ್ದಿ ಸಂಗಾತಿ ಮನ್ವಂತರ, ನಾವು ನೀವು ಮೊದಲಾದ ನಿಯತ ಕಾಲಿಕಗಳಲ್ಲಿ ದುಡಿದೆ. ಮರಾಠಿ ಸಕಾಳ್ ಪತ್ರಿಕೆಯ ಕಾಲಮಿಸ್ಟ್ ಆದೆ. ಕನ್ನಡ ಪ್ರಭ ಸೇರಿ ಅದರ ಮುಖ್ಯ ವರದಿಗಾರನಾದೆ. ೨೦೦೦ ಇಸ್ವಿಯಿಂದ ದೃಶ್ಯ ಮಾಧ್ಯಮಕ್ಕೆ ಬಂದೆ. ಈ ನಡುವೆ ಬೆಂಗಳೂರು ದೂರದರ್ಶನ ಕೇಂದ್ರದದಲ್ಲಿ ಕರೆಂಟ್ ಅಫೇರ್ಸ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟೆ. ನನಗೆ ಎಂದೂ ಕೆಲಸ ಇಲ್ಲ ಎಂಬ ಸ್ಥಿತಿ ಬರಲೇ ಇಲ್ಲ. ಯಾರ್ಯಾರೋ ಕರೆದರು ಕೆಲಸ ಕೊಟ್ಟರು. ನಾನು ಬೇಡ ಅನ್ನಿಸಿದಾಗ ಕೆಲಸ ಬಿಟ್ಟೆ. ಸುಮ್ಮನೆ ಮಲಗಿದೆ. ಹಾಡು ಕೇಳಿದೆ, ಸಿನಿಮಾ ನೋಡಿದೆ. ಪುಸ್ತಕಗಳನ್ನು ಓದಿದೆ. ಗುಂಡು ಹಾಕಿದೆ. ವಾರಗಟ್ಟಲೆ ನಿದ್ರೆ ಮಾಡಿದೆ.
ಕಾವೇರಿ, ಸುವರ್ಣ ಜಿ ನ್ಯೂಸ್, ಸಮಯ, ಕಸ್ತೂರಿ ಮೊದಲಾದ ವಾಹಿನಿಗಳಲ್ಲಿ ಕೆಲಸ ಮಾಡಿದೆ. ಈಗ ಹೊಸ ವಾಹಿನಿಯೊಂದನ್ನು ಕಟ್ಟಲು ಹೊರಟಿದ್ದೇನೆ.
ನನ್ನ ಈ ಪಯಣವನ್ನು ನೋಡಿದ ಹಲವರು ಹಲವು ರೀತಿ ವಿಮರ್ಶೆ ಮಾಡುತ್ತಾರೆ. ದೃಶ್ಯ ಮಾಧ್ಯಮದಲ್ಲಿ ನೀನು ಯಶಸ್ವಿಯಾಗಿಲ್ಲ ಎಂದು ಹೇಳುವವರು ಇದ್ದಾರೆ. ನಾನು ಆಗೆಲ್ಲ ನಕ್ಕು ಬಿಡುತ್ತೇನೆ. ನಾನು ಯಶಸ್ವಿ ಹೌದೋ ಅಲ್ಲವೋ ಅನ್ನುವುದನ್ನು ಇತಿಹಾಸಕ್ಕೆ ಬಿಟ್ಟಿ ಬಿಡುತ್ತೇನೆ. ಆದರೆ ಈಗ ಯಾರನ್ನು ನೀವು ಯಶಸ್ವಿ ಎಂದು ಪರಿಗಣಿಸುತ್ತೀರೋ ನಾನು ಅವರಂತೆ ಇಲ್ಲ ಎಂಬುದು ನಿಜ. ಆ ರೀತಿಯ ಯಶಸ್ಸು ನನಗೆ ಬೇಕಾಗಿಲ್ಲ. ಯಾಕೆಂದರೆ ನಾನು ಎಲ್ಲರಂತೆ ಇಲ್ಲ. ನಾನು ನಾನೇ...!
ನಾನೊಬ್ಬನೇ ಮೌನವಾಗಿ ಕುಳಿತು ಆಲೋಚಿಸುವಾಗ ನನ್ನಲ್ಲಿ ಮೂಡುವುದು ಕೃತಜ್ನಾತಾ ಭಾವ. ಯಾವುದೇ ಕಾಡಿನ ನಡುವೆ ಹುಟ್ಟಿ ಕನ್ನಡ ಮಾಧ್ಯಮದಲ್ಲಿ ಓದಿದವ ನಾನು. ಒಂದು ರೀತಿಯ ಕಾಡು ಮನುಷ್ಯ. ಫೋನು, ರೈಲು ಎಲ್ಲವನ್ನೂ ನೋಡಿದ್ದು ಬೆಳಗಾವಿಗೆ ಹೋದ ಮೇಲೆ. ಮಹಾನ್ ಮುಜುಗರದ ವ್ಯಕ್ತಿಯೂ ಆಗಿರುವ ನಾನು ಕಾಡು, ನದಿ ಗುಡ್ಡ ಬೆಟ್ಟಗಳ ನಡುವೆ ಬೆಳದವನು. ಆದರೆ ಪತ್ರಿಕೋದ್ಯಮ ನನ್ನನ್ನು ಪ್ರೀತಿಯಿಂದ ಅಪ್ಪಿಕೊಂಡು ಎಲ್ಲವನ್ನೂ ನೀಡಿತಲ್ಲ. ಅದಿಲ್ಲದಿದ್ದರೆ ನಾನೊಬ್ಬ ಗುಂಡಾ ಆಗುತ್ತಿದ್ದೆನಲ್ಲ...
ನಾನು ಪತ್ರಿಕೋದ್ಯಮಕ್ಕೆ ಕೃತಜ್ನನಾಗಿದ್ದೇನೆ. ಅದು ಫಲಾಪೇಕ್ಷೆ ಇಲ್ಲದೇ ಎಲ್ಲವನ್ನೂ ನನಗೆ ನೀಡಿದ್ದಕ್ಕಾಗಿ. ನನ್ನೆಲ್ಲ ತಪ್ಪುಗಳನ್ನು ಕ್ಷಮಿಸಿ ತಾಯಿಯಂತೆ ಪೊರೆದಿದ್ದಕ್ಕಾಗಿ..


Monday, June 27, 2016

ಇತಿಹಾಸ ಪ್ರಜ್ನೆ ಇಲ್ಲದವರು ಇತಿಹಾಸ ಸೃಷ್ಟಿಸಲಾರರು, ವರ್ತಮಾನವನ್ನು ಮುನ್ನಡೆಸಲಾರರು...!

ಕಳೆದ ಎರಡು ದಿನಗಳಿಂದ ಅದೇ ಸುದ್ದಿ. ಸುದ್ದಿ ವಾಹಿನಿಗಳಲ್ಲಿ ನೇರ ಪ್ರಸಾರ. ನನ್ನ ಕೆಲವು ಸ್ನೇಹಿತರು ನನ್ನನ್ನು ಕೇಳಿದರು. ಇದು ಜಾಸ್ತಿ ಆಗಿಲ್ಲವಾ ? ಮಾಜಿ ರಾಜರ ಮನೆಯಲ್ಲಿ ಮದುವೆ ನಡೆದರೆ ಅದು ಅಂತಾ ಮಹತ್ವದ ಸುದ್ದಿಯಾ ? ನಿಮಗೆ ಬೇರೆ ಸುದ್ದಿ ಇಲ್ಲವಾ ?
ನಾನು ಅವರ ಪ್ರಶೆಗೆ ಉತ್ತರ ನೀಡಲಿಲ್ಲ.
ಸಾಮಾಜಿಕ ಜಾಲ ತಾಣಗಳಲ್ಲೂ ಈ ಬಗ್ಗೆ ಚರ್ಚೆವ್ ನಡೆಯುತ್ತಿದೆ. ಮಾಧ್ಯಮಗಳ ಬಗ್ಗೆ ಸದಾ ಟೀಕಿಸುವವರು ಈ ಬಗ್ಗೆಯೂ ಟೀಕೆ ಮಾಡುತ್ತಿದ್ದಾರೆ. ಎಲೆಕ್ಟಾನಿಕ ಮಾಧ್ಯಮಗಳನ್ನು ಟೀಕಿಸುತ್ತಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ಏನಿದು ಹುಚ್ಚಾಟ ಎಂದೂ ಕೇಳುತ್ತಿದ್ದಾರೆ..
ಇದೆಲ್ಲ ಸರಿ. ನಮ್ಮ ಸಂಸದೀಯ ವ್ಯವಸ್ಥೆಗೆ ಇಂಗ್ಲಂಡಿನ ಸಂಸದೀಯ ವ್ಯವಸ್ಥೆಯೇ ಆಧಾರ. ಇಂಗ್ಲಂಡಿನಲ್ಲಿ ಹೌಸ್ ಆಫ್ ಲಾರ್ಡ್ಸ್ ಮತ್ತು ಹೌಸ್ ಆಫ್ ಕಾಮನ್ಸ್ ಇರುವಂತೆ ನಮ್ಮಲ್ಲಿ ರಾಜ್ಯ ಸಭೆ ಮತ್ತು ಲೋಕಸಭೆಗಳಿವೆ..ನಮ್ಮದು ಅಮೇರಿಕದಂತೆ ಅಧ್ಯಕ್ಷೀಯ ಮಾಧರಿಯ ಪ್ರಜಾ ಸತ್ತೆಯಲ್ಲ.. ನಮಗೇನಿದ್ದರೂ ಇಂಗ್ಲಂಡ್ ಮಾಧರಿ.. ಇಂಗ್ಲಂಡಿನಲ್ಲಿ ರಾಣಿ ಇದ್ದಾಳೆ. ರಾಜಮನೆತನ ಇದೆ. ಈ ರಾಜಮನೆತನದ ಆಗುಹೋಗುಗಳ ಬಗ್ಗೆ ವರದಿ ಮಾಡುವ ಟಾಬ್ಲಾಯಡ್ ಗಳಿವೆ. ಇವತ್ತು ರಾಣಿ ಏನು ಮಾಡಿದಳು ? ರಾಜಮನೆತನದವರು ಎಲ್ಲಿಗೆ ಶಾಪಿಂಗ್ ಗೆ ಹೋದರು ? ಅರಮನೆಯಲ್ಲಿನ ಪ್ರೇಮ ಪ್ರಕರಣಗಳು... ಹೀಗೆ ಪ್ರತಿ ಸಂಚಿಕೆಯಲ್ಲೂ ಇಂತಹ ಸುದ್ದಿಗಳಿರುತ್ತವೆ.. ಇಂಗ್ಲೀಷರಿಗೆ ತಮ್ಮ ರಾಜ ಮನೆತನದ ಬಗ್ಗೆ ಅಪಾರ ಗೌರವ.  ತಮ್ಮ ಇತಿಹಾಸವನ್ನು ನೆನಪು ಮಾದಿಕೊಳ್ಳುವುದಕ್ಕಾಗಿ ಅಲ್ಲಿ ರಾಜಮನೆತನ ಇದೆ. ರಾಣಿ ಇದ್ದಾರೆ..
ಕಳೆದ ೧೫ ದಿನಗಳ ಹಿಂದೆ ಬ್ರಿಟನ್ ರಾಣಿಯ ತೊಂಬತ್ತನೆಯ ಹುಟ್ಟು ಹಬ್ಬದ ಆಚರಣೆ ನಡೆಯಿತು. ಇಂಗ್ಲಂಡಿನ ಎಲ್ಲ ವಾಹಿನಿಗಳು ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಿದವು.. ರಾಣಿ ಕುರಿತ ಹಲವಾರು ಸಾಕ್ಷ್ಯ ಚಿತ್ರಗಳು ಪ್ರಸಾರವಾದವು. ಇಂಗ್ಲಂಡನ್ನು ಸೂರ್ಯ ಮುಳುಗದ ಸಾಮ್ರಾಜ್ಯವನ್ನಾಗಿ ಮಾಡಿದ ಕೀರ್ತಿ ಈ ರಾಜಮನೆತನದ್ದು. ಇಡೀ ವಿಶ್ವವನ್ನೇ ಆಳುವಂತೆ ಮಾಡಿದ್ದು ಇವರೇ. ಹೀಗಾಗಿ ರಾಜಸತ್ತೆ ಹೋಗಿ ಪ್ರಜಾ ಪ್ರಭುತ್ವ ಬಂದರೂ ರಾಣಿ ಮತ್ತು ರಾಜಮನೆತನ ಇದೆ. ಬಂಕಿಂಗ್ ಹಾಮ್ ಪ್ಯಾಲೇಸ್ ಇದೆ..
ಬ್ರಿಟೀಷರು ತಮ್ಮ ಇತಿಹಾಸವನ್ನು ಮರೆಯುವುದಿಲ್ಲ. ಇತಿಹಾಸ ವರ್ತಮಾನದಲ್ಲಿ ಬದುಕುವುದಕ್ಕೆ ದಾರಿದೀಪ. ಹಾಗೆ ಇತಿಹಾಸವನ್ನು ನೆನಪು ಮಾಡಿಕೊಂಡು ಹೆಜ್ಜು ಗುರುತು ಮೂಡಿಸಿ ಹೋದವರಿಗೆ ಕೃತಜ್ನತೆ ಸಲ್ಲಿಸುವ ಸೌಜನ್ಯವನ್ನು ಅವರು ತೋರುತ್ತಾರೆ.
ಈಗ ನಮ್ಮ ಕರ್ನಾಟಕಕ್ಕೆ ಬರೋಣ. ಇಲ್ಲಿನ ರಾಜಮನೆತನದ ಬಗ್ಗೆ ಮಾತನಾಡೋಣ. ಮೈಸೂರು ಅರಸು ಉಳಿದೆಲ್ಲ ಅರಸರಂತೆ ಇರಲಿಲ್ಲ. ಅವರು ಜನಾನುರಾಗಿಗಳಾಗಿದ್ದರು.. ತಮ್ಮ ರಾಜ್ಯದ ಅಭಿವೃದ್ಧಿಗಾಗಿ ಅವರು ಪಣ ತೊಟ್ಟಿದ್ದರು.  ಕಳೆದ ಶತಮಾನದಲ್ಲೇ ಮೀಸಲಾತಿಯನ್ನು ಜಾರಿಗೆ ತಂದವರು ಅವರು. ಕನ್ನಂಬಾಡಿ ಅಣೆಕಟ್ಟು ಕಟ್ಟಿದವರು ಒಡೆಯರು. ವಿದ್ಯುತ್ ಉತ್ಪಾದನಾ ಘಟಕ ಪ್ರಾರಂಭಿಸಿದವರು. ಅರಸರ ಜನಪರ ಕಾರ್ಯಕ್ರಮಗಳ ಪಟ್ಟಿ ಹೀಗೆ ಮುಂದುವರಿಯುತ್ತದೆ.. ಒಟ್ಟಾರೆಯಾಗಿ  ಮೈಸೂರು ರಾಜ್ಯವನ್ನು ಮಾಧರಿ ರಾಜ್ಯವನ್ನಾಗಿ ರೂಪಿಸಿದ ಖ್ಯಾತಿ ಮೈಸೂರು ಅರಸರಿಗೆ ಸಲ್ಲುತ್ತದೆ.. ನೀವು ಕರ್ನಾಟಕದ ಉಳಿದ ಭಾಗಗಳ ಜೊತೆ ಹಳೆ ಮೈಸೂರು ಪ್ರದೇಶವನ್ನು ಹೋಲಿಕೆ ಮಾಡಿದರೆ ಮೈಸೂರು ಅರಸರು ಹೇಗೆ ಆಡಳಿತ ಮಾಡಿದರು ಎಂಬುದು ನಮಗೆ ಅರ್ಥವಾಗುತ್ತದೆ.
ಸ್ವಾತಂತ್ರ್ಯ ಬಂದ ಮೇಲೆ ಪರಿಸ್ಥಿತಿ ಬದಲಾಯಿತು. ಕನ್ನಂಬಾಡಿ ಕಟ್ಟೆಯನ್ನು ನಿರ್ಮಿಸುವುದಕ್ಕಾಗಿ ಸ್ವಂತ ಬಂಗಾರವನ್ನೇ ಅಡವಿಟ್ಟಿದ್ದ ರಾಜ ಮನೆತನ ಮೊದಲಿನಂತೆ ಉಳಿಯಲಿಲ್ಲ. ಜಮಚಾಮರಾಜೇಂದ್ರ ಓಡೆಯರ್ ಬದುಕಿದ್ದಶ್ಟು ಕಾಲ ಇದ್ದ ಪರಿಸ್ಥಿತಿ ಆವರು ಕಾಲವಾದ ಮೇಲೆ ಉಳಿಯಲಿಲ್ಲ. ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಬೇರೆ ಬೇರೆ ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.. ಆದರೆ ಅವರು ಯಾವುದರಲ್ಲೂ ಯಶಸ್ವಿಯಾಗಲಿಲ್ಲ. ಜಯಚಾಮರಾಜೇಂದ್ರ ಒಡೆಯರ್ ಈ ಮಗ ಉದ್ಧಾರವಾಗೋಲ್ಲ ಎಂದು ಹೇಳಿದ್ದು ಶಾಪದಂತೆ ಶ್ರೀಕಂಠದತ್ತರನ್ನು ಕಾಡತೊಡಗಿತು.
ಪ್ರಾಯಶ: ೧೯೬೯ ರಲ್ಲಿ ರಾಜ ಧನ ರದ್ಧತಿಯೊಂದಗೆ ಈ ದೇಶದ ರಾಜ ಮಹಾರಾಜರ ವೈಭವದ ದಿನಗಳು ಮರೆಯಾದವು. ಹಳೆಯ ವೈಭವವನ್ನು ಮರೆಯಲಾಗದೇ ಹೊಸ ಬದುಕನ್ನು ಒಪ್ಪಿಕೊಳ್ಳರಾದೇ ರಾಜರೆಲ್ಲ ಅತಂತ್ರ ಸ್ಥಿತಿಯಲ್ಲಿ ಬದುಕಲಾರಂಭಿಸಿದರು.. ತಮ್ಮ ದಿನಗಳು ಮರೆಯಾಗಿವೆ ಎಂದು ಅವರೆಲ್ಲ ಅರ್ಥ ಮಾಡಿಕೊಳ್ಳಲು ಹಲವು ವರ್ಷಗಳೆ ಹಿಡಿದವು. ರಾಜಸ್ಥಾನ ಮಧ್ಯಪ್ರದೇಶ ಮೊದಲಾದ ಉತ್ತರ ಭಾಗದ ಅರಸು ಮನೆತನ ಚುನಾವಣಾ ರಾಜಕೀಯಕ್ಕೆ ಇಳಿದವು. ಅಧಿಕಾರವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡವು. ಆದರೆ ಶ್ರೀಕಂಥ ದತ್ತ ಒಡೆಯರ್ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಿದರೂ ಅವರು ಯಶಸ್ವಿ ರಾಜಕಾರಣಿ ಅನ್ನಿಸಲೇ ಇಲ್ಲ. ರಾಜ ಮನೆತನದ ಬಗ್ಗೆ ಮೈಸೂರು ಪ್ರಾಂತದ ಜನರಿಗಿರುವ ಪ್ರೀತಿ ಮತ್ತು ಗೌರವವನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಲೇ ಇಲ್ಲ. ಜನತಂತ್ರ ವ್ಯವಸ್ಥೆಯನ್ನು ತಿರುಳನ್ನು ಅರಿಯದೇ ರಾಜ ರಂತೆ ಬದುಕಲು ಯತ್ನಿಸಿ ಅವರು ಸೋತರು..
ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದಲಾಗಲೇ ಬೆಂಗಳೂರು ಅರಮನೆಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಲು ಮುಂದಾಯಿತು. ಈ ಪ್ರಕರಣ ಈಗಲೂ ಸಎರ್ವೋಚ್ಚ ನ್ಯಾಯಾಲಯದ ಮುಂದಿದೆ. ಮೈಸೂರು ಅರಮನೆಯ ಒಂದು ಭಾಗವನ್ನು ರಾಜ ಮನೆತನಕ್ಕೆ ಬಿಟ್ಟು ಉಳಿದಿದ್ದು ಸರ್ಕಾರದ ನಿಯಂತ್ರಣಕ್ಕೆ ಬಂತು. ಮೈಸೂರು ದಸರಾ ಮೊದಲ ವೈಭವನ್ನು ಕಳೆದುಕೊಂಡು ಸರ್ಕಾರಿ ಕಾರ್ಯಕ್ರಮವಾಗಿ ಬದಲಾಯಿತು. ಅಲ್ಲಿ ಇತಿಹಾಸವನ್ನು ನೆನಪಿಸುವ ಕೆಲಸಕ್ಕೆ ಒತ್ತು ಸಿಗದೇ ಆ ಭಾಗದ ರಾಜಕಾರಣಿಗಳು ಮಿಂಚಲು ಅಧಿಕಾರ ಚಲಾಯಿಸಲು ಅವಕಾಶವಾಯಿತು ಅಷ್ಟೇ.
ಈಗ ಶ್ರೀಕಂಥ ದತ್ತ ನರಸಿಂಹ ರಾಜ ಒಡೆಯರ್ ಇಲ್ಲ. ಅವರ ಪತ್ನಿ ಪ್ರಮೋದಾ ದೇವಿ ಯದುವೀರರನ್ನು ದತ್ತು ತೆಗೆದುಕೊಂಡಿದ್ದಾರೆ. ಅವರನ್ನೇ ರಾಜರನ್ನಾಗಿ ಮಾಡಿದ್ದಾರೆ. ಆದರೆ ಎಲ್ಲವೂ ಬದಲಾಗಿದೆ. ಕಾಲದ ಗುಣವೇ ಹಾಗೆ ಅದು ಎಲ್ಲವನ್ನೂ ಬದಲಿಸುತ್ತದೆ. ಈ ಬದುಕಿನಲ್ಲಿ ಬದಲಾವಣೆಯೊಂದೇ ಶಾಶ್ವತ ಎಂಬ ನಾಣ್ಣುಡಿಯನ್ನು ಇದು ಸಾಭೀತು ಪಡಿಸಿದೆ. ಆದೆ ಇದೆಲ್ಲ ನಮ್ಮ ಮುಂದೆ ಕೆಲವೊಂದು ಪ್ರಶ್ನೆಗಳನ್ನು ಮುಂದಿಟ್ಟಿದೆ. ಅದು ಇತಿಹಾಸ ಪ್ರಜ್ನೆಗೆ ಸಂಬಂಧಿಸಿದ್ದು. ಕಾಲನ ತೆಕ್ಕೆಯಲ್ಲಿ ಕರಗಿ ಹೋದವರನ್ನು ನೆನಪು ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ್ದು.
ನಮ್ಮ ನಾಡಿನ ಇತಿಹಾಸವನ್ನು ಮುಂದಿನ ಜನಾಂಗಕ್ಕೆ ತಲುಪಿಸುವುದು ಬೇಡವೆ ? ತಲುಪಿಸುವುದಿದ್ದರೆ ಹೇಗೆ ? ನಾವು ಎಲ್ಲಕ್ಕೂ ಬ್ರೀಟೀಷ್ ಮಾಧರಿಯನ್ನು ಅನುಸರಿಸುವವರು ಈ ವಿಚಾರದಲ್ಲಿ ಮಾತ್ರ ಯಾಕೆ ಅವರನ್ನು ಅನುಸರಿಸುತ್ತಿಲ್ಲ ? ಮೈಸೂರನ್ನು ಹಳೆ ವೈಭವನ್ನು ನೆನಪಿಸುವ ಒಂದು ಪ್ರವಾಸಿ ಕೇಂದ್ರವನ್ನಾಗಿ ಬದಲಾಯಿಸಲು ನಾವು ಯತ್ನ ನಡೆಸಿಲ್ಲ ಯಾಕೆ ? ನಮ್ಮಲ್ಲಿ ಐತಿಹಾಸಿಕ ಪ್ರಜ್ನೆ ಇಲ್ಲದಿರುವುದು ಇದಕ್ಕೆ ಕಾರಣವೆ ?
ಈಗ ಮೈಸೂರನ್ನು ಕೈಗಾರಿಕಾ ಮತ್ತು ಐಟಿ ಬಿಟಿ ಕೇಂದ್ರವನ್ನಾಗಿ ಮಾಡಲು ನಾವು ಮುಂದಾಗಿದ್ದೇವೆ. ಹಲವಾರು ಅಂತಾರಾಷ್ಟಿಯ ಕಂಪೆನಿಗಳು ಈಗಾಗಲೇ ಮೈಸೂರಿನಲ್ಲಿ ತಮ್ಮ ಶಾಖೆಗಳನ್ನು ಪ್ರಾರಂಭಿಸಿವೆ..ಇನ್ನು ಹಲವಾರು ಕಂಪೆನಿಗಳು ಮೈಸೂರಿಗೆ ಬರಲಿವೆ. ಈ ಕೈಗಾರೀಕರಣ ಮೈಸೂರನ್ನು ಹೇಗೆ ಬದಲಿಸುತ್ತದೆ ಎಂಬುದು ಒಂದು ಪ್ರಶ್ನೆಯಾದರೆ ಮೈಸೂರು ಕೈಗಾರಿಕರಣ ಇಲ್ಲದೇ ಇರುವುದು ಸಾಧ್ಯವಿಲ್ಲವೇ ಎನ್ನುವುದು ಇನ್ನೊಂದು ಪ್ರಶ್ನೆ. ಈ ಪ್ರಶ್ನೆಗಳನ್ನು ಕೇಳಿಕೊಳ್ಳುವಾಗಲೂ ನಮ್ಮ ಮುಂದೆ ಬರುವುದು ಅದೇ ಐತಿಹಾಸಿಕ ಪ್ರಜ್ನೆಯ ಪ್ರಶ್ನೆ..
ಮೈಸೂರನ್ನು ನಾವು ಹೇಗೆ ನೋಡಲು ಬಯಸುತ್ತೇವೆ ಎಂಬ ಪ್ರಶ್ನೆಗೆ ಸರ್ಕಾರಕ್ಕೆ ಸ್ಪಷ್ಟತೆ ಬೇಕು. ಇದನ್ನು ದೇಶದ ಪ್ರಮುಖ ಪ್ರವಾಸಿ ಕೇಂದ್ರವನ್ನು ಇನ್ನೂ ಅಭಿವೃದ್ಧಿಪಡಿಸಬೇಕು ಎಂದು ಅನ್ನಿಸಿದರೆ ಅದನ್ನು ಅನುಷ್ಠಾನಗೊಳಿಸಲು ಕಾರ್ಯಸೂಚಿ ಬೇಕು..ಮೈಸೂರನ್ನು ಶೋಕೇಸ್ ಮಾಡುವುದು ಹೇಗೆ ಎನ್ನುವ ಬಗ್ಗೆ ಚರ್ಚಿಸಬೇಕು. ಯಾವುದೇ ಪ್ರವಾಸಿಗ ಮೈಸೂರಿಗೆ ಬರುವುದಿದ್ದರೆ ಯಾಕೆ ಬರುತ್ತಾನೆ ? ಹೀಗೆ ಬರುವ ಪ್ರವಾಸಿಗರಿಗೆ ನಾವು ಮೈಸೂರನ್ನು ತಿಳಿಸಿಕೊಡುವುದು ಹೇಗೆ ಎಂಬುದು ಮುಖ್ಯ ಪ್ರಶ್ನೆಯಾಗುತ್ತದೆ. ಹಾಗೇಯೇ ಇಲ್ಲಿ ಬರುವ ನಮ್ಮ ರಾಜ್ಯದ ಪ್ರವಾಸಿಗರು, ದೇಶದ ಪ್ರವಾಸಿಗರು ಮತ್ತು ಹೊರದೇಶದ ಪ್ರವಾಸಿಗರನ್ನು ಆಕರ್ಷಿಸಲು ಏನು ಮಾಡಬೇಕು ಎಂಬ ಬಗ್ಗೆ ಯೋಜನಾ ಬದ್ಧ ಕಾರ್ಯಸೂಚಿ ಬೇಕು. ಇದೆಲ್ಲ ನಿಂತಿರುವುದು ಮೈಸೂರನ್ನು ನಾವು ಏನು ಮಾಡಬೇಕು ಎಂಬು ಮೂಲಭೂತ ಪ್ರಶ್ನೆಗೆ ಉತ್ತರ ಕಂಡುಕೊಂಡಾಗ ಮಾತ್ರ.
ನಾನು ಮೊದಲು ಹೇಳಿದ ಹಾಗೆ ಮೈಸೂರು ಅರಸರನ್ನು ನಾವು ಮೆರವಣಿಗೆ ಮಾಡಬೇಕಾಗಿಲ್ಲ. ಅವರಿಗೆ ರಾಜಧನ ನೀಡಬೇಕಾಗಿಲ್ಲ. ಆದರೆ ಮೈಸೂರಿಗೆ ಬಂದರೆ ಅಲ್ಲಿನ ಭವ್ಯ ಇತಿಹಾಸ ನಮಗೆ ತಿಳಿಯಬೇಕು. ಅಲ್ಲಿನ ಪರಂಪರೆಯ ಅರಿವಾಗಬೇಕು. ಮೈಸೂರು ಅರಸರು ಏನು ಮಾಡಿದರು ಎಂಬುದನ್ನು ಪ್ರವಾಸಿಗರಿಗೆ ತಿಳಿಸುವಂತಾಗಬೇಕು.. ಮತ್ತೆ ನಾನು ಇಂಗ್ಲಂಡಿನ ಉದಾಹರಣೆಯನ್ನೇ ನೀಡುತ್ತೇನೆ. ಅಲ್ಲಿ ಶೇಕ್ಸಫಿಯರ್ ನಾಟಕ ಪ್ರದರ್ಶನ ಪ್ರತಿ ದಿನ ನಡೆಯುವ ರಂಗ ಮಂದಿರಗಳಿವೆ. ಬ್ರಿಟೀಶ್ಅರು ಸಾಹಿತ್ಯ ಮತ್ತು ಸಂಸ್ಕೃತಿಗೆ ಕೊಡುತ್ತಿರುವ ಗೌರವದ ಸಂಕೇತ ಅದು. ನಾವು ಸಹ ಮೈಸೂರನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿ ಪರಿವರ್ತಿಸಬಹುದು. ಅಲ್ಲಿ ನಮ್ಮ ಮೈಸೂರು ಅರಸರ ಜನಪರವಾದ ಕೆಲಸವನ್ನು ತೋರಿಸುವ ನಾಟಕ, ನೃತ್ಯ ಪ್ರದರ್ಶನ ಪ್ರತಿ ದಿನ ನಡೆಯುವಂತೆ ವ್ಯವಸ್ಥೆ ಮಾಡಬಹುದು. ಹಾಗೆ ಮೈಸೂರು ಅರಸರ ಅಭಿವೃದ್ಧಿ ಕೆಲಸಗಳ ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡಬಹುದು. ಕರ್ನಾಟಕದ ಇತಿಹಾಸವನ್ನು ತಿಳಿಸುವ ಪ್ರದರ್ಶನದ ವ್ಯವಸ್ಥೆ ಮಾಡಬಹುದು.ಯಾವುದೇ ಪ್ರವಾಸಿಗ ಮೈಸೂರಿಗೆ ಬಂದರೆ ಕರ್ನಾಟಕದ ಇತಿಹಾಸ ಪರಂಪರೆ, ಸಾಹಿತ್ಯ ಎಲ್ಲವೂ ತಿಳಿಯುವಂತೆ ಮಾಡಬಹುದು. ಆಗ ಮೈಸೂರು ನಿಜವಾದ ಅರ್ಥದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗುತ್ತದೆ. ಐಟಿ ಬಿಟಿ ಕಂಪೆನಿಗಳನ್ನು ಪ್ರಾರಂಬಿಸುವುದಕ್ಕಿಂತ ಇದು ಹೆಚ್ಚು ಮಹತ್ವದ್ದು ಎಂದು ನಾನು ನಂಬಿದ್ದೇನೆ. ಆದರೆ ಅಧಿಕಾರಸ್ಥರಿಗೆ ಈ ಮಾತುಗಳು ಅರ್ಥವಾಗುವುದು ಕಷ್ಟ.
ಈಗ ಈ ಲೇಖನದ ಪ್ರಾರಂಭಿದಲ್ಲಿ ಎತ್ತಿದ ಪ್ರಶ್ನೆಗಳು. ಕನ್ನಡದ ಸುದ್ದಿ ವಾಹಿನಿಗಳು ಮಹಾರಾಜರ ಕುಟುಂಬದ ಮದುವೆಯ ನೇರ ಪ್ರಸಾರ ಸರಿಯೇ ಎಂಬುದು. ಜನ ತಂತ್ರವಾದಿಗಳ ಈ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟವಲ್ಲ. ಕರ್ನಾಟಕದ ಜನರಿಗೆ ಈಗಲೂ ಮೈಸೂರು ಅರಸರ ಬಗ್ಗೆ ಗೌರವಾದರಗಳಿವೆ. ಹಳೆ ಮೈಸೂರು ಪ್ರದೇಶದಲ್ಲಿ ಈಗಲೂ ಸಾಮಾನ್ಯ ಜನರ ಮನೆಗಳಲ್ಲಿ ಮೈಸೂರು ಅರಸರ ಫೋಟೋಗಳನ್ನು ಇಟ್ಟು ಪೂಜಿಸಲಾಗುತ್ತದೆ.  ಮೈಸೂರು ಅರಸರು ಎಂದರೆ ಆವರಿಗೆ ಈಗಲೂ ಅರಸರೇ.  ಇಂಥ ಸಾಮಾನ್ಯ ಜನರಿಗೆ ಮೈಸೂರು ಅರಸು ಮನೆತನದ ಮದುವೆ ಹೇಗಿರುತ್ತದೆ ಎಂಬ ಕುತೂಹಲ ಇರುವುದು ಸಹಜ. ಅವರ ಈ ಕೂತೂಹಲವನ್ನು ತಣಿಸುವ ಕೆಲಸವನ್ನು ವಾಹಿನಿಗಳು ಮಾಡಿವೆ. ಮಾಡುತ್ತಿವೆ. ಆದ್ದರಿಂದ ಇದನ್ನೆಲ್ಲ ವೈಚಾರಿಕ ದೃಷ್ಟಿಯಿಂದ ನೋಡುವುದು ಸಾಧ್ಯವಿಲ್ಲ. ಜನತಂತ್ರ ವ್ಯವಸ್ಚ್ಥೆಯಲ್ಲಿ ರಾಜರಿಗೆ ಸ್ಥಾನ ಇಲ್ಲ. ಹಾಗಂತ ರಾಜ ಸತ್ತೆಯ ಇತಿಹಾಸವನ್ನು ನಾವು ತಿರಸ್ಕರಿಸುವುದು ಸಾಧ್ಯವಿಲ್ಲ. ರಾಜಸತ್ತೆಯಲ್ಲಿ ಒಳ್ಳೆಯ ಕೆಲಸ ಆಗಿದ್ದರೆ ಅದನ್ನು ನಾವು ನೆನಪು ಮಾಡಿಕೊಳ್ಳಬೇಕು. ರಾಜರೆಲ್ಲ ಅಯೋಗ್ಯರು ಎಂಬ ತೀರ್ಮಾನಕ್ಕೆ ಬರುವುದು ಮೂರ್ಖತನ..

ಒಟ್ಟಾರೆಯಾಗಿ ಇತಿಹಾಸವನ್ನು ತಿರಸ್ಕರಿಸುವವನು ವರ್ತಮಾನವನ್ನು ಅರ್ಥ ಮಾಡಿಕೊಳ್ಳಲಾರ, ಜೊತೆಗೆ ಇತಿಹಾಸವನ್ನು ಇತಿಹಾಸವಾಗಿ ನೋಡುವ ಮನಸ್ಥಿತಿಯೂ ಬೇಕು.

 

Tuesday, June 21, 2016

ಇದೆಲ್ಲ ನಡೆಯಬಾರದಿತ್ತು. ಆದರೂ ನಡೆದುಹೋಗಿದೆ,


ಇದೆಲ್ಲ ನಡೆಯಬಾರದಿತ್ತು. ಆದರೂ ನಡೆದುಹೋಗಿದೆ, ನಡೆಯುತ್ತಿದೆ. ಅಧಿಕಾರ ರಾಜಕಾರಣ ಜನತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೂರಿ ಆಗಿದೆ. ನಮ್ಮ ಜನ ಪ್ರತಿನಿಧಿಗಳು ಅಧಿಕಾರ ತಮ್ಮ ಖಾಸಗಿ ಆಸ್ತಿ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದಾರೆ. ಅಧಿಕಾರ ಕೈತಪ್ಪಿದಾಗ ತಮ್ಮ ಹಿಂಬಾಲಕರನ್ನು ಬಿಟ್ಟು ಸಾರ್ವಜನಿಕ ಆಸ್ತಿಯನ್ನು ನಾಶ ಪಡಿಸುತ್ತಿದ್ದಾರೆ. ಜನರನ್ನು ಭಾವನಾತ್ಮಕವಾಗಿ ಸೆಳೆಯುವುದಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ. ತಮಗೆ ತಮ್ಮ ಜಾತಿಗೆ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹೇಳುವ ಮೂಲಕ ತಮ್ಮ ಜಾತಿ ಮತ್ತು ಸಮುದಾಯದ ಜನರನ್ನು ಎತ್ತಿ ಕಟ್ಟಲು ಯತ್ನಿಸುತ್ತಿದ್ದಾರೆ.
ಜನತಂತ್ರ ವ್ಯವಸ್ಥೆಯನ್ನು ನಂಬುವವರು ಈ ವ್ಯವಸ್ಥೆ ದೇಶದಲ್ಲಿ ಬಲವಾಗಿ ಬೇರೂರಬೇಕು ಎಂದುಕೊಂಡವರು ಮೌನವಾಗಿ ಇದನ್ನೆಲ್ಲ ನೋಡುತ್ತಿದ್ದಾರೆ.
ಅಧಿಕಾರ ಯಾರೊಬ್ಬನ ಮನೆ ಆಸ್ತಿ ಅಲ್ಲ. ಜನತಂತ್ರ ವ್ಯವಸ್ಥೆಯಲ್ಲಿ ಅಧಿಕಾರ ಜನರ ಕೊಡುಗೆ. ಜನ ನೀಡಿದ ತೀರ್ಪಿನಂತೆ ನಡೆದುಕೊಳ್ಳುವುದು ಜನ ಪ್ರತಿನಿಧಿಗಳ ಕರ್ತವ್ಯ.. ಆದರೆ ಜನತಂತ್ರದ ಗಂಧ ಗಾಳಿ ಇಲ್ಲದವರು, ಜನ ಪ್ರತಿನಿಧಿಗಳಾದರೆ ಇದೆಲ್ಲ ನಡೆದು ಬಿಡುತ್ತದೆ.ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವುದು ಇದೇ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳ ನಂತರ ತಮ್ಮ ಸಂಪುಟವನ್ನು ಪುನಾ ರಚನೆ ಮಾಡುವ ನಿರ್ಧಾರ ಕೈಗೊಂಡರು. ೧೪ ಸಚಿವರನ್ನು ಕೈ ಬಿಟ್ಟು ಹೊಸದಾಗಿ ೧೩ ಜನರನ್ನು ಸೇರಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಇದು ಅವರ ಪರಮಾಧಿಕಾರವಾಗಿತ್ತು.
ಆದರೆ ಸಂಪುಟ ಪುನಾರಚನೆ ಅಂತಹ ಸುಲಭದ ಕೆಲಸವಾಗಿರಲಿಲ್ಲ. ಪಕ್ಷದ ಹಲವು ನಾಯಕರು ಇದಕ್ಕೆ ಅಡ್ಡಗಾಲು ಹಾಕಿದರು. ತಮ್ಮ ತಮ್ಮ ಬೆಂಬಲಿಗರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲು ಯತ್ನ ನಡೆಸಿದರು. ಪಕ್ಷದ ವರಿಷ್ಠರ ಮೇಲೆ ಒತ್ತದ ಹಾಕಿದರು. ಮೂರು ದಿನಗಳ ಕಾಲ ದೆಹಲಿಯಲ್ಲಿ ನಡೆದಿದ್ದು ನಾಟಕವೇ. ಸಂಪುಟದಿಂದ ಬಿಡುವವರು ಮತ್ತೆ ತೆಗೆದುಕೊಳ್ಳುವವರ ಪಟ್ಟಿಯನ್ನು ಮುಖ್ಯಮಂತ್ರಿಗಳು ಒಯ್ದಿದ್ದರು. ಆದರೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಎಲ್ಲರ ಜೊತೆ ಮಾತನಾಡಿ ಒಮ್ಮತದ ಪಟ್ಟಿಯನ್ನು ಸಿದ್ದಪಡಿಸುವಂತೆ ಸೂಚಿಸಿ ಬಿಟ್ಟರು. ಹೀಗಾಗಿ ಮುಖ್ಯಮಂತ್ರಿಗಳು ಲೋಕಸಭೆಯ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ರಾಜ್ಯದ ಉಸ್ತುವಾರಿ ದಿಗ್ವಿಜಯ್ ಸಿಂಗ್ ಮತ್ತು ಕರ್ನಾಟಕದ ಪ್ರದೇಶ 
ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಗೄಹ ಸಚಿವ ಡಾ. ಪರಮೇಶ್ವರ್ ಜೊತೆ ಇನ್ನೊಂದು ಸುತ್ತು ಮಾತುಕತೆ ನಡೆಸಬೇಕಾಯಿತು.
ಆಗ ಆನ್ನಿಸಿದ್ದು ಕಾಂಗ್ರೆಸ್ ತನ್ನ ಮೂಲಬೂತ ಗುಣಧರ್ಮದಿಂದ ಹೊರಕ್ಕೆ ಬಂದಿಲ್ಲ ಎಂಬುದೇ. ಯಾವುದೇ ರಾಜ್ಯ ಮಟ್ಟದ ನಾಯಕರು ಒಂದು ಹಂತವನ್ನು ಮೀರಿ ಬೆಳೆಯದಂತೆ ತಡೆಯುವ ಕಾಂಗ್ರೆಸ್ ವರಿಷ್ಠರು ಅದೇ ದಾರಿಯನ್ನು ಈಗಲೂ ಅನುಸರಿಸುತ್ತಿದ್ದಾರೆ ಎಂದು ಅನ್ನಿಸಿತ್ತು. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಎಲ್ಲವೂ ಬದಲಾಗಿತ್ತು.  ಕಾಂಗ್ರೆಸ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಿದ್ದರಾಮಯ್ಯನವರಿಗೆ ಸಂಪುಟ ವಿಸ್ತರಣೆಯ ಸಂಪೂರ್ಣ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲು ತೀರ್ಮಾನಿಸಿ ಬಿಟ್ಟಿದ್ದರು. ಕಾಂಗ್ರೆಸ್ ಮಟ್ಟಿಗೆ ಇದು ಮಹತ್ವದ ಬದಲಾವಣೆ ಆಗಿತ್ತು. ಮಗುವನ್ನು ಚಿವುಟಿ ತೊಟ್ಟಿಲು ತೂಗಿವ ಕಾಂಗ್ರೆಸ್ ವರುಷ್ಷರು ಬದಲಾಗಿದ್ದರು. ಪ್ರಾಯಶಃ ಇದು ಅವರಿಗೆ ಅನಿವಾರ್ಯವೂ ಆಗಿತ್ತು. ಯಾಕೆಂದರೆ ಸಿದ್ದರಾಮಯ್ಯ ಬಗ್ಗಿ ನಿಲ್ಲುವ ಮನಸ್ಥಿತಿಯವರಲ್ಲ ಎಂಬ ಅರಿವೂ ಪಕ್ಷದ ವರಿಷ್ಠರಿಗೆ ಇತ್ತು. ದೇಶದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿರುವ ಇನ್ನೊಂದು ರಾಜ್ಯವನ್ನು ಕಳೆದುಕೊಳ್ಳಲು ಪಕ್ಷದ ವರಿಷ್ಠರು ಸಿದ್ದರಿರಲಿಲ್ಲ. ಹೀಗಾಗಿ ಅವರು ಒಂದು ಅರ್ಥದಲ್ಲಿ ಸಿದ್ದರಾಮಯ್ಯನವರಿಗೆ ತಲೆ ಬಾಗಲೇಬೇಕಾಯಿತು. ಸಿದ್ದರಾಮಯ್ಯ ಹಿಡಿದುಕೊಂಡು ಬಂದಿದ್ದ ಪಟ್ಟಿಗೆ ಒಪ್ಪಿಗೆ ನೀಡಲೇಬೇಕಾಯಿತು. ಇಲ್ಲದಿದ್ದರೆ ಮುಖ್ಯಮಂತ್ರಿ ರೆಬಲ್ ಆಗುವ ಅಪಾಯವಿತ್ತು.
ಇದು ಮುಖ್ಯಮಂತ್ರಿಗಳ ಜಯ ಎಂದು ವಿಶ್ಲೇಸಿಸಬಹುದು, ಆದರೆ ಇದಷ್ಟೇ ಅಲ್ಲ. ಕಾಂಗ್ರೆಸ್ ವರಿಷ್ಠರು ಬದಲಾಗಿದ್ದರು ಎಂಬುದು ಬಹಳ ಮುಖ್ಯ. ಪ್ರಾಯಶಃ ಕಾಂಗ್ರೆಸ್ ಹಿರಿಯ ನಾಯಕರು ಇದನ್ನು ನಿರೀಕ್ಷಿಸಿರಲಿಲ್ಲ. ಸಂಪುಟ ಪುನಾ ರಚನೆಯ ಎಳೆದಾಟ ಇನ್ನಷ್ಟು ದಿನ ಮುಂದುವರಿಯುತ್ತದೆ, ಮುಖ್ಯಮಂತ್ರಿಗಳು ಇನ್ನಷ್ಟು ಮೆತ್ತಗಾಗುತ್ತಾರೆ ಎಂದು ಈ ನಾಯಕರು ನಿರೀಕ್ಷಿಸಿದ್ದರು. ಆದರೆ ಹಾಗಾಗಲಿಲ್ಲ. ಮುಖ್ಯಮಂತ್ರಿಗಳು ಪಕ್ಷದ ವರಿಷ್ಟರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಆಶೀರ್ವಾದ ಪಡೆದು ಬೆಂಗಳೂರಿಗೆ ಹಿಂತಿರುಗಿದರು.
ಕಾಂಗ್ರೆಸ್ ಪಕ್ಷದ ಪ್ರಭಾವಿ ಮತ್ತು ಶಕ್ತಿಯುತ ನಾಯಕರಾಗಿ ಬೆಳೆದಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿಗೂ ಬೆಲೆ ಸಿಗಲಿಲ್ಲ. ತಮ್ಮ ಇಬ್ಬರು ಬೆಂಬಲಿಗ ಸಚಿವರಾದ ಖಮರುಲ್ ಇಸ್ಲಾಂ ಮತ್ತು ಬಾಬುರಾವ್ ಚಿಂಚನಸೂರ್ ಅವರನ್ನು ಉಳಿಸಿಕೊಳ್ಳುವುದು ಖರ್ಗೆ ಅವರಿಗೆ ಸಾಧ್ಯವಾಗಲಿಲ್ಲ. ಜೊತೆಗೆ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವರನ್ನಾಗಿ ಮಾಡುವ ಮೂಲಕ ಹೊಸ ರಾಜಕೀಯ ದಾಳವನ್ನು ಮುಖ್ಯಮಂತ್ರಿಗಳು ಉರುಳಿಸಿಬಿಟ್ಟಿದ್ದರು. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಖರ್ಗೆ ಅವರನ್ನು ತಣ್ಣಗೆ ಮಾಡುವ ದಾಳ ಇದಾಗಿತ್ತು. ಖರ್ಗೆ ಅವರ ವಿರುದ್ಧ ಅವರ ಬೆಂಬಲಿಗರನ್ನೇ ಎತ್ತಿ ಕಟ್ಟುವ ದಾಳ.. ಈ ಯೋಜನಾಬದ್ಧ ಕೆಲಸದಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು.. ಖರ್ಗೆ ಕರ್ನಾಟಕದ ರಾಜಕಾರಣದಲ್ಲಿ ಅತಂತ್ರರಾದರು.
ಮಗನನ್ನು ಮಂತ್ರಿ ಮಾಡಬೇಡಿ ಎಂದು ಹೇಳುವ ಸ್ಥಿತಿಯಲ್ಲೂ ಖರ್ಗೆ ಇರಲಿಲ್ಲ. ಬೆಂಬಲಿಗರನ್ನು ಬಿಟ್ಟು ಮಗನನ್ನು ಸಂಪುಟಕ್ಕೆ ತೆಗೆದುಕೊಂಡರೆ ಅದರ ಪರಿಣಾಮ ಆಗುವುದು ತಮ್ಮ ಮೇಲೆ ಎಂಬ ಅರಿವು ಖರ್ಗೆ ಅವರಿಗಿದ್ದರೂ ಅವರು ಅಸಹಾಯಕರಾಗಿ ಬಿಟ್ಟಿದ್ದರು. ಯಾಕೆಂದರೆ ಸೋನಿಯಾ ಮತ್ತು ರಾಹುಲ್ ಗಾಂಧಿ ಪ್ರಿಯಾಂಕ್ ಖರ್ಗೆ ಅವರು ಸಂಪುಟಕ್ಕೆ ಸೇರಲು ಒಪ್ಪಿಗೆ ನೀಡಿಬಿಟ್ಟಿದ್ದರು. ನೆಹರೂ  ಕುಟುಂಬದ ನಿಷ್ಟರಾಗಿರುವ ಖರ್ಗೆ ಈ ತೀರ್ಮಾನವನ್ನು ವಿರೋಧಿಸುವ ಧಾರ್ಷ್ಯವನ್ನು ಪ್ರದರ್ಶಿಸಲಿಲ್ಲ...ಇದರಿಂದಾಗಿ ಖರ್ಗೆ ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಯಿತು.. ಸಂಪುಟದಿಂದ ಹೊರಕ್ಕೆ ಹೋದ ಬಹುತೇಕ ನಾಯಕರು ಖರ್ಗೆ ಅವರನ್ನೇ ಟಾರ್ಗೆಟ್ ಮಾಡಿದರು.. ತಮ್ಮ ಮಗನನ್ನು ಸಚಿವನನ್ನಾಗಿ ಮಾಡುವುದಕ್ಕಾಗಿ ನಮ್ಮನ್ನು ಬಲಿ ಕೊಟ್ಟರು ಎಂದು ದೂರಿದರು... ಸಂಪುಟ ಪುನಾರಚನೆಯಿಂದ ನೊಂದವರೆಲ್ಲರಿಗೆ ಟಾರ್ಗೆಟ್ ಆದವರು ಖರ್ಗೆ..
ಈಗ ಈ ಪುನಾರಚನೆಯ ನಂತರ ಘಟನೆಯನ್ನು ಗಮನಿಸಿ. ಸಚಿವ ಸಂಪುಟದಿಂದ ಹೊರಕ್ಕೆ ಹೋದವರ ಬೆಂಬಲಿಗರು ಪ್ರತಿಭಟನೆ ಮಾಡಿದರು. ಬಸ್ ಗೆ ಬೆಂಕಿ ಹಚ್ಚಿದರು.. ಕಲ್ಲು ತೂರಿದರು. ತಮ್ಮ ಬದುಕೇ ಮುಗಿದು ಹೋಯಿತು ಎಂದು ಅಲವತ್ತುಗೊಂಡರು. ಸಚಿವ ಸ್ಥಾನ ತಮ್ಮ ಜನ್ಮ ಸಿದ್ಧ ಹಕ್ಕು ಎಂಬಂತೆ ವರ್ತಿಸತೊಡಗಿದರು.
ವಯೋವೃದ್ಧ ನಾಯಕ ಕಮರುಲ್ ಇಸ್ಲಾಂ ತಮ್ಮನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿರುವುದು ಕಾಂಗ್ರೆಸ್ ಮುಕ್ತ ಭಾರತದ ಮುನ್ಸೂಚನೆ ಎಂದು ಹೇಳಿದರು. ತಾವೇ ಕಾಂಗ್ರೆಸ್ ಎಂಬಂತೆ ಅವರು ಮಾತನಾಡಿದ್ದು ಹಾಸ್ಯಾಸ್ಪದವಾಗಿ ಕಾಣುತ್ತಿತ್ತು. ಇನ್ನೊಬ್ಬ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ತಮ್ಮ ಮತ್ತು ಮುಖ್ಯಮಂತ್ರಿಗಳ ನಡುವಿನ ಸಂಬಂಧವನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದರು. ಸಿದ್ದರಾಮಯ್ಯ ಅಸಮರ್ಥ ನಾಯಕ ಎಂದು ಅಪ್ಪಣೆ ಕೊಡಿಸಿದರು...
ಖಮರುಲ್ ಇಸ್ಮಾಂ ಅವರಿಗೆ ಮಾತನಾದುವುದು ಕಷ್ಟ.. ನಡೆಯುವಾಗಲೂ ಬೇರೆಯವರ ಹೆಗಲು ಬೇಕು. ವಯೋ ಸಹಜವಾದ ರೋಗಗಳು ಅವರನ್ನು ಆವರಿಸಿವೆ. ಶ್ರೀನಿವಾಸ್ ಪ್ರಸಾದ್ ಅವರಿಗೂ ಆರೋಗ್ಯ ಸರಿಯಿಲ್ಲ.. ಮೂತ್ರಕೋಶದ ಕಸಿ ಮಾಡಿಸಿಕೊಂಡಿದ್ದಾರೆ.. ಅಂಬರೀಷ್ ಅವರ ಆರೋಗ್ಯ ಕೂಡ ಸಂಪೂರ್ಣವಾಗಿ ಸರಿಯಿಲ್ಲ. ಜೊತೆಗೆ ಜವಾಬ್ದಾರಿ ಇಲ್ಲದ ನಾಯಕ ಅವರು. ಶಾಮನೂರು ಶಿವಶಂಕರಪ್ಪ ಅವರು ಎಂಬತ್ತರ ಗಡಿ ದಾಟಿದ್ದಾರೆ. ಆದರೆ ಇವರಲ್ಲಿ ಯಾರೂ ಸಹ ಸಂಪುಟದಿಂದ ಹೊರಕ್ಕೆ ಬರುವುದಕ್ಕೆ ಸಿದ್ದರಿಲ್ಲ.. ಅವರ ಪ್ರಕಾರ ತಮ್ಮ ತಮ್ಮ ಖಾತೆಗಳನ್ನು ಇವರೆಲ್ಲ ತುಂಬಾ ಚೆನ್ನಾಗಿಯೇ ನಿರ್ವಹಿಸಿದ್ದಾರೆ..
ಇವರೆಲ್ಲ ಅಧಿಕಾರ ತಮ್ಮ ಜನ್ಮ ಸಿದ್ಧ ಹ,ಕ್ಕು ಎಂದು ನಂಬಿಕೊಂಡಿರುವಂತಿದೆ.. ತಾವು ಹುಟ್ಟಿರುವುದೇ ಅಧಿಕಾರ ಅನುಭವಿಸುವುದಕ್ಕಾಗಿ ಎಂಬ ಭ್ರಮೆಯಲ್ಲಿ ಇವರೆಲ್ಲ ಇದ್ದಂತಿದೆ. ಹೀಗೆ ಭ್ರಮೆಯಲ್ಲಿ ಬದುಕಲು ಇವರಿಗೆ ಹಕ್ಕಿದೆ. ಆದರೆ ಸಾರ್ವಜನಿಕ ಆಸ್ತಿಯನ್ನು ನಾಶ ಪಡಿಸುವ ಅಧಿಕಾರವನ್ನು ಇವರ ಬೆಂಬಲಿಗರಿಗೆ ನೀಡಿದವರು ಯಾರು ? ಬಸ್ ಗೆ ಬೆಂಕಿ ಹಚ್ಚುವುದು ಅಪರಾಧ ಎಂಬ ಅರಿವು ಇವರಿಗೆ ಬೇಡವೆ ? ತಮ್ಮ ತಮ್ಮ ಬೆಂಬಲಿಗರನ್ನೇ ನಿಯಂತ್ರಣದಲ್ಲಿ ಇಡಲಾರದ ಇವರನ್ನು ನಾಯಕರೆಂದು ಒಪ್ಪಿಕೊಳ್ಳುವುದು ಹೇಗೆ ?
ಶಾಮನೂರು ಶಿವಶಂಕರಪ್ಪ ಅವರ ಮಾತನ್ನು ಕೇಳಿಸಿಕೊಳ್ಳಿ. ನಾನು ಸಚಿವನಾಗಿ ಇನ್ನೊವಾ ಕಾರ್ ನಲ್ಲಿ ಓಡಾಡುತ್ತಿದ್ದೆ. ಇನ್ನು ಮುಂದೆ ನನ್ನ ಬೇಂಜ್ ಕಾರಿನಲ್ಲಿ ಓಡಾಡುತ್ತೇನೆ.. ಇದು ದುರಹಂಕಾರದ ಮಾತಲ್ಲವೆ ? ನಿಮಗೆ ಬೆಂಜ್ ಕಾರಿನಲ್ಲಿ ಓಡಾಡುವಷ್ಟು ಹಣ ಸಂಪತ್ತು ಎಲ್ಲ ಇದೆ ನಿಜ. ಆದರೆ ಅಧಿಕಾರ ಕಳೆದುಕೊಂಡ ಸಂದರ್ಭದಲ್ಲಿ ಹೀಗೆ ಮಾತನಾಡುವುದು ಸೌಜನ್ಯವಲ್ಲ ಎಂಬ ತಿಳುವಳಿಕೆ ನಿಮಗೆ ಇರಬೇಕಲ್ಲವೆ ?
ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಜನತಂತ್ರ ವ್ಯವಸ್ಥೆಯ ಬಗ್ಗೆ ಸ್ಪಷ್ಟ ತಿಳುವಳಿಕೆ ಇರಬೇಕು. ಜನ ಪ್ರತಿನಿಧಿಯಾಗಿ ಕೆಲಸ ಮಾಡುವುದು ಜನರ ನಂಬಿಕೆಯ ಮೇಲೆ. ಜನ ನೀಡಿದ ಅಧಿಕಾರ ಅವರಿಗೆ ಮೀಸಲು ಎಂಬ ತಿಳುವಳಿಕೆ ಇರಬೇಕು.. ಒಂದಲ್ಲ ಒಂದು ದಿನ ಅಧಿಕಾರವನ್ನು ಬಿಡಬೇಕಾಗುತ್ತದೆ ಎಂಬುದು ಅವರ ಮನಸ್ಸಿನಲ್ಲಿ ಸದಾ ಜಾಗೃತವಾಗಿರಬೇಕು, ಹಾಗಿದ್ದಾಗ ಮಾತ್ರ ಅಧಿಕಾರ ಬಿಡುವಾಗ ನೋವಾಗುವುದಿಲ್ಲ...ಆದರೆ ಇವರೆಲ್ಲ ಅಧಿಕಾರ ಎನ್ನುವುದು ತಮ್ಮ ಕರ್ತವ್ಯ ಎನ್ನುವುದಕ್ಕೆ ಬದಲಾಗಿ ಇದು ತಮ್ಮ ಹಕ್ಕು ಎಂದುಕೊಂಡಂತಿದೆ. ಇವರ ಬೆಂಬಲಿಗರು ಮತ್ತು ಅಭಿಮಾನಿಗಳೂ ಸಹ ಇದೇ ಮನಸ್ಥಿತಿಯವರು..
ಚಿತ್ರ ನಟ ಅಂಬರೀಷ್ ಅವರನ್ನು ಸಂಪುಟದಿಂದ ಕೈಬಿಟ್ಟ ವಿಚಾರವನ್ನು ನೋಡಿ. ಈ ಬಗ್ಗೆ ಅವರ ಅಭಿಮಾನಿಗಳು ಹುಚ್ಚು ಹುಚ್ಚಾಗಿ ಪ್ರತಿಕ್ರಿಯೆ ನೀಡಿದ್ದನ್ನು ಕ್ಷಮಿಸಿಬಿಡಬಹುದು. ಯಾಕೆಂದರೆ ಅವರೆಲ್ಲ ಅಭಿಮಾನಿಗಳು. ಅಭಿಮಾನ ಎನ್ನುವುದು ನಮ್ಮನ್ನು ವಿವೇಚನಾ ಹೀನರನ್ನಾಗಿ ಮಾಡಿ ಬಿಡುತ್ತದೆ. ಯಾರಿಗೆ ವಿವೇಚನಾ ಶಕ್ತಿ ಇರುತ್ತದೆಯೋ ಅವರು ಅಭಿಮಾನಿಗಳಾಗುವುದು ಸಾಧ್ಯವಿಲ್ಲ...ಆದರೆ ಕನ್ನಡ ಚಿತ್ರರಂಗದ ಪ್ರತಿಕ್ರಿಯೆ ಮಾತ್ರ ಆಶ್ಚರ್ಯವನ್ನು ಉಂಟು ಮಾಡುತ್ತದೆ.
ಅಂಬರೀಷ್ ಅವರನ್ನು ಸಂಪುಟದಿಂದ ಕೈ ಬಿಟ್ಟ ತಕ್ಷಣ ಕನ್ನಡ ಚಿತ್ರರಂಗದ ನಾಯಕರು ಇದು ತಮ್ಮ ವೈಯಕ್ತಿಕ ವಿಚಾರ ಎಂಬಂತೆ ಮಾತನಾಡಲು ಪ್ರಾರಂಭಿಸುತ್ತಾರೆ. ಯಾವುದೇ ಒಂದು ಸರ್ಕಾರದಲ್ಲಿ ಯಾರು ಇರಬೇಕು ಯಾರು ಇರಬಾರದು ಎಂಬುದನ್ನು ಅಧಿಕಾರಕ್ಕೆ ಬಂದ ಪಕ್ಷ ನಿರ್ಧರಿಸುತ್ತದೆ. ಶಾಸಕಾಂಗ ಪಕ್ಷದ ನಾಯಕರು ತಮ್ಮ ಸಂಪುಟದಲ್ಲಿ ಯಾರನ್ನು ಇಟ್ಟುಕೊಳ್ಳಬೇಕು ಎಂದು ನಿರ್ಧರಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರವನ್ನು ಪ್ರಶ್ನಿಸಲು ಇವರು ಯಾರು ?
ಅಂಬರೀಶ್ ಸಚಿವರಾಗಿದ್ದು ಕನ್ನಡ ಚಿತ್ರ ರಂಗದ ಪ್ರತಿನಿಧಿಯಾಗಿ ಅಲ್ಲ. ಅವರೊಬ್ಬ ಸಿನಿಮಾ ನಟ ಕಂ ಕಾಂಗ್ರೆಸ್ ಪಕ್ಷದ ರಾಜಕಾರಣಿ. ಅವರು ಶಾಸಕ ಮತ್ತು ಸಚಿವರಾಗಿದ್ದು ಚಿತ್ರ ನಟ ಎಂದಲ್ಲ. ಅವರು ನಿರ್ವಹಿಸಿದ ವಸತಿ ಖಾತೆ ಕೂಡ ಚಿತ್ರ ರಂಗಕ್ಕೆ ಸಂಬಂಧಿಸಿದ್ದಲ್ಲ...ಹೀಗಿರುವಾಗ ಚಿತ್ರರಂಗಕ್ಕೆ ಏನು ಸಂಬಂಧ ? ಅಂಬರೀಶ್ ಅವರನ್ನು ಸಂಪುಟದಲ್ಲಿ ಮುಂದುವರಿಸದಿದ್ದರೆ ಚಿತ್ರ ರಂಗದ ಬಂದ್ ಮಾಡ್ತೀವಿ ಎಂದು ಹೇಳುತ್ತಿರುವ ಇವರಿಗೆ ಜನ ತಂತ್ರ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಇಲ್ಲವೆ...?
ಅಂಬರೀಶ್ ಸಚಿವರಾಗಿ ಮುಂದುವರಿಯಬೇಕೆ ಬೇಡವೇ ಎಂದು ನಿರ್ಧರಿಸುವುದು ಅವರು ಸಚಿವರಾಗಿ ಹೇಗೆ ಕೆಲಸ ಮಾಡಿದ್ದಾರೆ ಎನ್ನುವುದರ ಮೇಲೆ. ಅವರು ಚಿತ್ರರಂಗಕ್ಕೆ ಏನು ಮಾಡಿದ್ದಾರೆ ಎಂಬುದರ ಮೇಲಲ್ಲ. ಅವರು ಚಿತ್ರ ನಟರಾಗಿ ನೂರಾರು ಚಿತ್ರಗಳಲ್ಲಿ ನಟಿಸಿದ್ದು, ಸಾವಿರಾರು ಖಳನಾಯಕರನ್ನು ತೆರೆಯ ಮೇಲೆ ಬಡಿದಿದ್ದು ಅವರು ಸಂಪುಟದಲ್ಲಿ ಮುಂದುವರಿಯುವುದಕ್ಕೆ ಅರ್ಹತೆಯಾಗಲಾರದು. ಅವರು ವಸತಿ ಸಚಿವರಾಗಿ ಹೇಗೆ ಕೆಲಸ ಮಾಡಿದರು ಎಂಬುದು ಮಾತ್ರ ಅವರ ಸಂಪುಟದಲ್ಲಿ ಮುಂದವರಿಯುವುದಕ್ಕೆ ಅಥವಾ ಮುಂದುವರಿಯದಿರುವುದಕ್ಕೆ ಕಾರಣವಾಗಬೇಕು. ಇದೆಲ್ಲ ನಮ್ಮ ಕನ್ನಡ ಚಿತ್ರ ರಂಗದವರಿಗೆ ತಿಳಿದಿರಬೇಕಿತ್ತು. ಪಾಪ ಬಿಡಿ.

ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅಂಬರೀಷ್ ತಾವು ಬೇಕಾದಗಲೆಲ್ಲ ಬಿಡುವುದಕ್ಕೆ ಚಪ್ಪಲಿ ಅಲ್ಲ ಅಂದರು. ಅವರು ತಮ್ಮ ಸ್ವಾಭಿಮಾನದ ಪ್ರಶ್ನೆ ಎತ್ತಿದರು. ಇದೆಲ್ಲ ಸರಿ. ಆದರೆ ವಸತಿ ಸಚಿವರಾಗಿ ಮೂರು ವರ್ಷಗಳ ಅವಧಿಯಲ್ಲಿ ಮಾಡಿದ್ದೇನು ಎಂಬುದನ್ನು ಹೇಳಲಿಲ್ಲ. ತಾವು ಅಸಮರ್ಥರಲ್ಲ ಎಂಬುದನ್ನು ಸಾಬೀತು ಪಡಿಸಲು ಯತ್ನಿಸಲಿಲ್ಲ.  ಸಿನಿಮಾ ನಾಯಕನಂತೆ ಡೈಲಾಗ್ ಹೊಡೆದರೆ ಹೊರತೂ ಒಬ್ಬ ರಾಜಕೀಯ ನಾಯಕನಂತೆ ಜನ ಪ್ರತಿನಿಧಿಯಂತೆ ವರ್ತಿಸಲಿಲ್ಲ. ಇದರ ಅರ್ಥ ಒಬ್ಬ ಸಿನಿಮಾ ನಾಯಕನಿಗೂ ರಾಜಕೀಯ ನಾಯಕನಿಗೂ ಇರಬೇಕಾದ ವ್ಯತ್ಯಾಸ ಅವರಿಗೆ ಅರ್ಥವಾಗಲೇ ಇಲ್ಲ. ಒಬ್ಬ ಸಿನಿಮಾ ನಾಯಕ ಜನ ನಾಯಕನಾಗಿ ಬದಲಾಗಲೇ ಇಲ್ಲ.
ಅಂಬರೀಶ್ ಅವರನ್ನು ಸಂಪುಟದಿಂದ ಬಿಟ್ಟ ತಕ್ಷಣ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾರ್ಯಪ್ರವೃತ್ತರಾಗುತ್ತಾರೆ. ಮಾಜಿ ಪ್ರಧಾನಿ ದೇವೇಗೌಡರು, ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಅಂಬರೀಶ್ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಾರೆ, ಅವರ್ವಿಗೆ ಸಾಂತ್ವನ ಹೇಳುತ್ತಾರೆ. ಹಾಗೆ ಶ್ರೀನಿವಾಸ್ ಪ್ರಸಾದ್ ಅವರ ಬಗ್ಗೆಯೂ ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ವಿಪರೀತ ಪ್ರೀತಿ ಹುಟ್ಟಿ ಬಿಡುತ್ತದೆ. ಪ್ರಸಾದ್ ಅವರನ್ನು ಭೇಟಿ ಮಾದಿ ಸಾಂತ್ವನ ಹೇಳುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅವರತ್ತ ಗಾಳ ಬೀಸುತ್ತಿರುವುದು ನಿಜ.
ಇಲ್ಲಿ ನಮ್ಮ ಜನತಂತ್ರ ವ್ಯವಸ್ಥೆ ಕುರಿತು ಕೇಳಲೇಬೇಕಾದ ಕೆಲವು ಪ್ರಶ್ನೆಗಳಿವೆ. ಜನತಂತ್ರ ವ್ಯವಸ್ಥೆಯ ಮುಖ್ಯ ಲಕ್ಷಣ ಎಂದರೆ ಅದು ರಾಜಸತ್ತೆಯ ವಿರೋಧ. ಹಾಗೆ ವ್ಯಕ್ತಿ ಪೂಜೆಗೆ ಇಲ್ಲಿ ಅವಕಾಶವಿಲ್ಲ. ಆದರೆ ನಮ್ಮ ಜನತಂತ್ರ ವ್ಯವಸ್ಥೆ ರಾಜಸತ್ತೆಯ ಪಳಯುಳಿಕೆಯಾಗಿಯೇ ಮುಂದುವರಿದಿದೆ. ಇಲ್ಲಿ ನಾಯಕರ ಅಭಿಮಾನಿಗಳಿದ್ದಾರೆ. ನಿಜವಾದ ಜನತಂತ್ರ ಪ್ರೇಮಿಗಳಿಲ್ಲ. ಅಧಿಕಾರ ರಾಜಕಾರಣದ ಎಲ್ಲ ಪಟ್ಟುಗಳನ್ನು ಬಳಸಿಕೊಂಡು ಅಧಿಕಾರವನ್ನು ಸದಾ ಅನುಭವಿಸುವ ಮನಸ್ಥಿತಿಯ ರಾಜಕಾರಣಿಗಳಿದ್ದಾರೆ. ರಾಜನೀತಿಜ್ನರಿಲ್ಲ..
ಜನತಂತ್ರ ವ್ಯವಸ್ಥೆಯ ಯಶಸ್ಸು ರಾಜಕೀಯ ಪಕ್ಷಗಳ ಮೇಲಿದೆ. ಒಂದು ರಾಜಕೀಯ ಪಕ್ಷ ಎಂದರೆ ಅದಕ್ಕೊಂದು ಸಿದ್ದಾಂತ ಇರಬೇಕು ಬದ್ಧತೆ ಇರಬೇಕು. ಒಂದು ರಾಜಕೀಯ ಪಕ್ಷಕ್ಕೂ ಇನ್ನೊಂದು ರಾಜಕೀಯ ಪಕ್ಷಕ್ಕೂ ಸೈದ್ದ್ಧಾಂತಿಕ ವ್ಯತ್ಯಾಸಗಳಿರಬೇಕು. ನೀತಿ ನಿರೂಪಣೆಯಲ್ಲಿ ವ್ಯತ್ಯಾಸ ಇರಬೇಕು. ನಮ್ಮಲ್ಲಿ ನಿಜವಾದ ಅರ್ಥದ ರಾಜಕೀಯ ಪಕ್ಷಗಳಿಲ್ಲ. ಇಲ್ಲಿರುವುದು ಬಾಲಬಡುಕ ರಾಜಕೀಯ ಗುಂಪುಗಳು. ಈ ಗುಂಪುಗಳಲ್ಲಿ ಇರುವ ಜನ ಅಂಗಿಯನ್ನು ಬದಲಿಸುವ ಹಾಗೆ ನಾಯಕರನ್ನು ಪಕ್ಷವನ್ನು ಬದಲಿಸುತ್ತಾರೆ. ಯಾಕೆಂದರೆ ಇವರೆಲ್ಲರ ರಾಜಕಾರಣಕ್ಕೆ ಅಧಿಕಾರವೇ ಗುರಿ. ಸಿದ್ಧಾಂತವಲ್ಲ.

ನನಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಎಲ್ಲ ಪಕ್ಷಗಳು ವ್ಯಕ್ತಿ ಮತ್ತು ಅಧಿಕಾರ ಕೇಂದ್ರಿತ ರಾಜಕಾರಣದಲ್ಲಿ ತೊಡಗಿವೆ. ಹೀಗಾಗಿ ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ, ದೇವೇಗೌಡ, ಯಡಿಯೂರಪ್ಪ ಕಾಣುತ್ತಾರೆ. ಅವರ ನೆರಳಿನ ಹಿಂದೆ ಎಲ್ಲೋ ರಾಜಕೀಯ ಪಕ್ಷಗಳು ಕಳೆದುಹೋಗಿವೆ. ಹೀಗಾಗಿ ಇಲ್ಲಿ ನಿಜವಾದ ಜನತಂತ್ರ ಕನಸು ಮಾತ್ರ....

Saturday, November 14, 2015

ನಮಗೀಗ ಬೇಕಾಗಿರುವುದು ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಮುಲಾಮು; ರಕ್ತ ಚೆಲ್ಲಾಡುವ ಖಡ್ಗ ಹಿಡಿದ ಕೈಗಳಲ್ಲ....!.

ನಿನ್ನೆ ಬೆಳಿಗ್ಗೆ ವಾಟ್ಸ್ ಅಪ್ ನಲ್ಲಿ ಗೆಳೆಯ ಇರ್ಷಾದ್ ಉಪ್ಪಿನಂಗಡಿ ಕಳುಹಿಸಿದ ಸಂದೇಶ  ಹೀಗಿತ್ತು;
ಸಮಿಉಲ್ಲಾ ಹರೀಶ್ ಸ್ನೇಹಿತರು. ಕ್ರಿಕೆಟ್ ಆಡಿ ಮನೆಗೆ ಹಿಂತಿರುಗುತ್ತಿದ್ದ್ಸರು, ಅಂಗಡಿಯೊಂದರಲ್ಲಿ ಕೂಲ್ ಡ್ರಿಂಕ್ಸ್ ಕುಡೀದು  ಸಮೀಉಲ್ಲಾ ಬೈಕ್ ನಲ್ಲಿ ಹೊರಡುತ್ತಿದ್ದಾಗ  ದುಷ್ಕರ್ಮಿಗಳ ತಂಡ ಅವನಿಗೆ ಇರಿದಿದೆ.  ಅಷ್ಟರಲ್ಲಿ ಸ್ನೇಹಿತನ ರಕ್ಷಣೆಗೆ  ಹರೀಶ್ ಧಾವಿಸಿ ಬಂದಿದ್ದಾನೆ. ದುಷ್ಕರ್ಮಿಗಳು ಆತನಿಗೂ ಇರಿದಿದ್ದಾರೆ.  ತೀರ್ವ ಗಾಯಗೊಂದ ಹರೀಶ್ ಅಸು ನೀಗಿದ್ದಾನೆ. ಕರಾವಳಿ ಸ್ನೇಹಿತರಿಗೆ ಧರ್ಮ ಯಾವತ್ತೂ ಮುಖ್ಯವಲ್ಲ. ಧರ್ಮದ ಹಂಗು ತೊರೆದು ಸ್ನೇಹಿತನ  ಪ್ರಾಣ ರಕ್ಷಣೆಗೆ ಮುಂದಾಗಿ ಪ್ರಾಣ ಕಳೆದುಕೊಂಡ ಎರಡನೆಯ ಪ್ರಕರಣ ಇದು....
ಈ ಬಗ್ಗೆ ರಾತ್ರಿಯೆಲ್ಲ ಯೋಚಿಸುತ್ತಿದ್ದೆ.  ಈ ದೇಶದಲ್ಲಿ ಈಗಲೂ ಆರೋಗ್ಯಪೂರ್ಣವಾಗಿ ಯೋಚಿಸುವವರಿದ್ದಾರೆ. ರಕ್ತದ ರಾಜಕಾರಣ ಮಾಡುವವರು ಇರುವಂತೆ ಶಾಂತಿಯ ಪಾರಿವಾಳವನ್ನು ಹಾರಿ ಬಿಡುವವರೂ ಇದ್ದಾರೆ. ಮನುಷ್ಯನ ಇತಿಹಾಸದಲ್ಲಿ ಶಾಂತಿ ಸಹಬಾಳ್ವೆಯ ಸಂದೇಶ ನಮ್ಮೆಲ್ಲರ ಮನಸ್ಸಿನಲ್ಲಿ ಸ್ಥಾಯಿಭಾವವಾಗಿ ಇರುವುದು ಇದೆಯಲ್ಲ ಅದೇ ಮುಖ್ಯ ಅನ್ನಿಸಿತು. ಧರ್ಮ ನಮ್ಮಲ್ಲಿ ಪಾಶವೀ ಮನಸ್ಥಿಗೆ ಕಾರಣವಾಗುವುದಿದ್ದರೆ ನಮಗೆ ಧರ್ಮ ಬೇಕಾ ? ಎಲ್ಲ ಧರ್ಮಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದು ಯಾಕೆ ಸಾಧ್ಯವಿಲ್ಲ ? ಆಗ ನನ್ನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ;
ಧರ್ಮ ಎಂದರೇನು ? ಈ ಶತಮಾನದ ದಾರ್ಶಿನಿಕರಲ್ಲಿ ಒಬ್ಬರಾದ ಜಿದ್ದು ಕೃಷ್ಣಮೂರ್ತಿ ಈ ಪ್ರಶ್ನೆಗೆ ನೀಡಿದ ಉತ್ತರ ಕುತೂಹಲಕರ.
ಧರ್ಮ ಎಂದರೇನು ಎಂಬ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಲು ಯಾವುದು ಧರ್ಮ ಅಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಯಾವುದು ಧರ್ಮವಲ್ಲ ಎಂಬುದು ತಿಳಿದರೆ ಈ ಪ್ರಶ್ನೆಗೆ ಉತ್ತರ ದೊರಕುತ್ತದೆ.. ಈಗ ದೇವಾಲಯಕ್ಕೆ ಹೋಗಿ ಪೂಜೆ ಮಾಡುವುದು ಧರ್ಮ ಎಂದು ಹೇಳಲಾಗಿದೆ. ಆದರೆ ದೇವಾಲಯಕ್ಕೆ ಹೋಗುವುದೇ ಧರ್ಮ ಅಲ್ಲ. ರಾಮ ಕೃಷ್ಣ ಎಂದು ಭಜನೆ ಮಾಡುವುದು ಧರ್ಮ ಎಂದು ಹೇಳಲಾಗಿದೆ. ಆದರೆ ಇದು ಧರ್ಮ ಅಲ್ಲ....ಯಾಕೆಂದರೆ ಇವೆಲ್ಲವೂ ಸಂಕೇತಗಳು. ಸಂಕೇತವೇ ಧರ್ಮ ಅಲ್ಲ....
ನಿಜ. ಧರ್ಮ ಎನ್ನುವುದು ಸಂಕೇತವಲ್ಲ. ಸನಾತನ ಧರ್ಮ ಎಂದು ಮಾತನಾಡುವವರು, ವೈದಿಕ ಧರ್ಮದ ಬಗ್ಗೆ ಮಾತನಾಡುವವರಿಗೆ ಧರ್ಮದ ಬಗ್ಗೆ ಗೊತ್ತಿದೆಯೆ ? ಧರ್ಮ ಎನ್ನುವ ಶಬ್ದದ ಮೂಲ ಧಾತು, ದೃ ಎಂದು. ದೃ ಎಂದರೆ ಬದುಕನ್ನು ಎತ್ತರಿಸು ಎಂಬ ಅರ್ಥವನ್ನು ಹೊಂದಿದೆ. ಯಾವುದು ಬದುಕನ್ನು ಎತ್ತರಿಸುತ್ತದೆಯೋ ಅದೇ ಧರ್ಮ..
ಜಿದ್ದು ಕೃಷ್ಣಮೂರ್ತ್ಇ ಹೇಳಿದಂತೆ ನಾವು ಸಂಕೇತಗಳ ಹಿಂದೆ ಬಿದ್ದಿದ್ದೇವೆ. ಸಂಕೇತಗಳು ಇರುವುದು ಗುರುತಿಸುವುದಕ್ಕೆ ಮಾತ್ರ. ಇದನ್ನು ಬಿಟ್ತು ಸಂಕೇತಗಳಿಗೆ ಬೇರೆ ಅರ್ಥ ಮತ್ತು ಉದ್ದೇಶಗಳಿಲ್ಲ. ಆದರೆ ಧರ್ಮಗಳ ವಾರಸುದಾರರು ಈ ಸಂಕೇತಗಳ ಹಿಂದೆ ಬಿದ್ದಿರುತ್ತಾರೆ. ಅವರಿಗೆ ಸಂಕೇತದ ಹಿಂದಿನ ತತ್ವ ಮುಖ್ಯವಲ್ಲ. ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ..
ತಲೆಯ ಮೇಳಿನ ಜುಟ್ಟು, ಮೀಸೆ ಇಲ್ಲದ ಗಡ್ಡ, ತಲೆಯ ಮೇಲಿನ ಸ್ಕಲ್ ಟೋಪಿ ಎಲ್ಲವೂ ಧಾರ್ಮಿಕ ಸಂಕೇತಗಳೇ. ಈ ಧಾರ್ಮಿಕ ಸಂಕೇತಗಳೂ ಧರ್ಮದಂತೆ ಎಅರಡೂ ರೀತಿಯಲ್ಲಿ ಕೆಲಸ ಮಾಡುತ್ತವೆ. ಒಂದೆಡೆ ಓಗ್ಗಟ್ಟಿಗೆ ಕಾರಣವಾದರೆ ಇನ್ನೊಂದೆಡೆ ವಿಭಜನೆಗೆ ಕಾರಣವಾಗುತ್ತದೆ. ಒಂದೇ ದೇವರನ್ನು ಪೂಜಿಸುವವರು, ಒಂದೇ ರೀತಿಯ ಧಾರ್ಮಿಕ ಸಂಕೇತವನ್ನು ಹೊಂದಿದವರು ಒಗ್ಗಟ್ಟಾಗುತ್ತಾರೆ. ಹಾಗೆ ಇನ್ನೊಬ್ಬ ದೇವರು ಮತ್ತು ಸಂಕೇತವನ್ನು ಹೊಂದಿದವರನ್ನು ಧ್ವೇಷಿಸತೊಡಗುತ್ತಾರೆ. ಅಂದರೆ ಒಂದು ಧರ್ಮದ ಅನುಯಾಯಿಗಳು ಒಂದಾಗುತ್ತಲೇ ಇನ್ನೊಂದು ಧರ್ಮದವನ್ನು ಧ್ವೇಷಿಸುವುದು ಏಕ ಕಾಲಕ್ಕೆ ನಡೆದು ಹೋಗುತ್ತದೆ.
ಈಗ ಕೆಲವು ದಿನಗಳ ಹಿಂದೆ ಯಾವುದೋ ಮಠವೊಂದರ ಭಕ್ತರು ನಾಮವನ್ನು ಹಾಕಿಕೊಳ್ಳುವುದರ ಸಂಬಂಧದಲ್ಲಿ ಬೀದಿ ರಂಪ ಮಾಡಿಕೊಂಡಿದ್ದರು. ವಿ ಆಕಾರದ ನಾಮ ಸರಿಯೋ, ಯು ಆಕಾರದ ನಾಮ ಸರಿಯೋ ಎಂಬುದು ಅವರ ಕಚ್ಚಾಟಕ್ಕೆ ಮೂಲವಾಗಿತ್ತು. ನಾಮ ಯಾವ ಆಕಾರದಲ್ಲೇ ಇರಲಿ ಅದು ನಮ್ಮ ಹಣೆಯ ಮೇಲಿದ್ದರೆ ಚಂದ. ಅದನ್ನು ಬೇರೆಯವರ ಹಣೆಯ ಮೇಲೆ ಹಾಕಿದರೆ ಸಮಸ್ಯೆ ಪ್ರಾರಂಭವಾಗುತ್ತದೆ..ಆದರೆ ಧರ್ಮದ ಬಗ್ಗೆ ಮೂಲಭೂತ ಜ್ನಾನ ಇಲ್ಲದವರು ಸಂಕೇತಗಳ ಬಗ್ಗೆ ಜಗಳವಾಡುತ್ತಾರೆ. ಬೀದಿ ರಂಪ ಮಾಡುತ್ತಾರೆ. ಹೊಡೆದಾಟ ಮಾಡುತ್ತಾರೆ. ಕತ್ತಿ ಝಳಪಿಸುತ್ತಾರೆ. ರಕ್ತ ಚೆಲ್ಲುತ್ತಾರೆ.
ಈಗ ಟಿಪ್ಪೂ ವಿವಾದವನ್ನೇ ತೆಗೆದುಕೊಳ್ಳಿ. ಈ ವಿವಾದದ ಹಿಂದೆ ಇರುವುದು ಧರ್ಮ. ಟಿಪ್ಪೂ ಮುಸ್ಲಿಂನಾಗಿದ್ದೇ ಈ ವಿವಾದಕ್ಕೆ ಕಾರಣ ಎಂದು ನನಗೆ ಅನ್ನಿಸುತ್ತದೆ. ಹಾಗಂತ ಟಿಫ್ಫೂ ಇವತ್ತಿನ ಅರ್ಥದಲ್ಲಿ ದೇಶಪ್ರೇಮಿಯಾಗಿದ್ದ ಎನ್ನುವುದು ಮೂರ್ಖತನ. ಹಾಗೆ ಆತ ಹಿಂದೂ ವಿರೋಧಿಯಾಗಿದ್ದ ಎನ್ನುವುದು ಸುಳ್ಳು. ಆತ ಒಬ್ಬ ಮಹಾತ್ವಾಕಾಂಕ್ಷಿ ರಾಜನಾಗಿದ್ದ. ಆ ಕಾಲದಲ್ಲಿ ಬದುಕಿ ಬಾಳಿದ ಎಲ್ಲ ರಾಜರ ಹಾಗೆ ಆತ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಎಲ್ಲವನ್ನೂ ಮಾಡಿದ. ತನ್ನ ಪಕ್ಕದ ರಾಜ್ಯವಾದ ಕೇರಳ ಮತ್ತು ಕೊಡಗಿನ ಮೇಲೆ ಧಾಳಿ ನಡೆಸಿ ಅಲ್ಲಿನ ಜನರನ್ನು ಬರ್ಬರವಾಗಿ ಕೊಂದ. ಅಂದಿನ ಎಲ್ಲ ರಾಜರು ನಡೆದುಕೊಳ್ಳುತ್ತಿದ್ದ ರೀತಿಯಲ್ಲೇ ಅವನು ನಡೆದುಕೊಂಡ. ಹೀಗಾಗಿ ಟಿಪ್ಪೂ ಇಂದಿನ ಅರ್ಥದಲ್ಲಿ ಮಹಾನ್ ದೇಶ ಭಕ್ತಎಂದು ಪ್ರತಿಪಾದಿಸುವುದಾಗಲೀ ಆತ ಧರ್ಮಾಂಧ ಎನ್ನುವದಾಗಲೀ ಎರಡೂ ಸತ್ಯವಲ್ಲ.
ಈ ಬಗ್ಗೆ ಯೋಚಿಸುತ್ತಲೇ ನಿದ್ರೆಯ ಸೆರಗಿಗೆ ನಾನು ಜಾರಿದೆ. ಬೆಳಿಗ್ಗೆ ೬ ಗಂತೆ ಇರಬೇಕು. ಸ್ನೇಹಿತರೊಬ್ಬರು ಪ್ಯಾರಿಸ್ ನಲ್ಲಿ ಉಗ್ರಗಾಮಿ ಧಾಳಿಯಲ್ಲಿ ೧೫೦ ಜನರ ಹತ್ಯೆ ಮಾಡಿದ ಸುದ್ದಿ ನೀಡಿದರು. ತಕ್ಷಣ ಟೀವಿ ಹಾಕಿದೆ. ಈ ಬರ್ಬರ ಕ್ರತ್ಯದ ಸುದ್ದಿ ಎಲ್ಲ ವಾಹಿನಿಗಳಲ್ಲೂ ಭಿತ್ತರವಾಗುತ್ತಿತ್ತು. ಇದು ಐಸಿಎಸ್ ಉಗ್ರರ ಕೃತ್ಯ ಎನ್ನುವುದು ಈಗಾಗಲೇ ಸ್ಪ್ಶಷ್ಟವಾಗಿದೆ. ಐಸಿಎಸ್ ಈ ಧಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಸುದ್ದಿ ಅಂತಾರಾಷ್ಟ್ರೀಯ ವಾಹಿನಿಗಳಲ್ಲಿ, ರಾಷ್ಟೀಯ ವಾಹಿನಿಗಳಲ್ಲಿ ಬರುತ್ತಿದ್ದಾಗ ಕನ್ನಡ ಕೆಲವು ವಾಹಿನಿಗಳಲ್ಲಿ ಜ್ಯೋತಿಷಿಗಳು ಕನ್ನಡಿಗರ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದರು. ದಿನ ಭವಿಷ್ಯದ ಬಗ್ಗೆ ಪ್ರವಚನ ನಡೆಯುತ್ತಿತ್ತು. ಇವರಿಗೆ ಪ್ಯಾರಿಸ್ ನಲ್ಲಿ ನಡೆದ ಧಾಳಿಯ ಬಗ್ಗೆ ಏನಾದರೂ ಭವಿಷ್ಯವಾಣಿ ಆಗಿರಬಹುದೆ ಎಂಬ ಕೆಟ್ಟ ಕುತೂಹಲನನ್ನಲ್ಲಿತ್ತು. ಆದರೆ ಇವರೆಲ್ಲ ಕನ್ನಡಿಗರ ಗೃಹ ಗತಿಗೆ ಮಾತ್ರ ಸೀಮಿತವಾಗಿದ್ದರು. ಯಾಕೋ ಈ ಹಕ್ಕಿ ಶಕುನದವರು ಮತ್ತು ಅವರನ್ನು ನಂಬುವ ಮುಗ್ದ ಕನ್ನಡಿಗರ ಬಗ್ಗೆ ಪಾಪ ಅನ್ನಿಸತೊಡಗಿತ್ತು.
ಬೆಳಗಿನ ಕಾಫಿ ಕುಡಿಯುತ್ತ ಈ ಐಸಿಸ್ ಉಗ್ರರ ಬಗ್ಗೆ ಯೋಚಿಸತೊಡಗಿದೆ. ಈಗ ಇಸ್ಲಾಂ ಮತಾವಲಂಬಿಗಳು ಹೊರಕ್ಕೆ ಬರಬೇಕು. ಇಸ್ಲಾಂ ಹೆಸರಿನಲ್ಲಿ ನಡೆಯುತ್ತಿರುವ ನರಮೇಧದ ಬಗ್ಗೆ ಆ ಧರ್ಮದ ಒಳಗೆ ಪ್ರತಿಭಟನೆಯ ಬೆಂಕಿ ಹೊತ್ತಿಕೊಳ್ಳಬೇಕು. ಈ ಬಗ್ಗೆ ಬೇರೆ ಧರ್ಮದವರು ಮಾತನಾಡಿದ ತಕ್ಷಣ ಸಮಸ್ಯೆ ಪ್ರಾರಂಭವಾಗುತ್ತದೆ. ನನಗೆ ಅನ್ನಿಸುವ ಹಾಗೆ ಧರ್ಮ ಎಂದೂ ನಿಂತ ನೀರಾಗಬಾರದು. ಅದಕ್ಕೊಂದು ಚಲನಶೀಲತೆ ಬೇಕು. ಈಗ ವಿಶ್ವದ ಎಲ್ಲ ಧರ್ಮಗಳೂ ನೀಂತ ನೀರಾಗಿವೆ. ಇದು ಬದಲಾಗದಿದ್ದರೆ ಮಾನವ ಜನಾಂಗಕ್ಕೆ ಉಳಿಗಾಲವಿಲ್ಲ. ಐದು ಸಾವಿರ ವರ್ಷಗಳಷ್ಟು ಹಳೆಯದಾದ ಹಿಂದೂ ಧರ್ಮ ಇವತ್ತಿನ ಜಗತ್ತಿಗೆ ತೆರೆದುಕೊಳ್ಳಬೇಕು. ಹಾಗೆ ವಿಶ್ವದ ಅತಿ ಕಿರಿಯ ಧರ್ಮವಾದ ಇಸ್ಲಾಂ ಕೂಡ ಬದಲಾಗಬೇಕಾಗಿದೆ. ಈ ಬದಲಾವಣ್ಎ ಹೊರಗಿನ ಸೂಚನೇ ಹೇಳಿಕೆ ಮತ್ತು ಒತ್ತಾಯದಿಂದ ಆಗುವುದಿಲ್ಲ. ಆಯಾ ಧರ್ಮದ ಒಳಗೆ ಇಂತಹ ಬದಲಾವಣೆ ಆಗಬೇಕಿದೆ. ಈ ಬದಲಾವಣೆಯ ನೇತೃತ್ವವನ್ಮು ಆಯಾ ಧರ್ಮದವರೇ ಒಹಿಸಬೇಕು..ಈ ಮಾತನ್ನು ನಾನು ಯಾಕೆ ಹೇಳುತ್ತಿದ್ದೇನೆಂದರೆ, ಇಸ್ಲಾಂ ಧರ್ಮದಲ್ಲಿ ಆಗಬೇಕಾದ ಸುಧಾರಣೆ ಮತ್ತು ಬದಲಾವಣೆಯ ಬಗ್ಗೆ ಹಿಂದೂಗಳು ಮಾತನಾಡತೊಡಗಿದರೆ ಅದಕ್ಕೆ ಕೋಮು ಬಣ್ಣ ಬರತೊಡಗುತ್ತದೆ. ಹಾಗೆ ಹಿಂದೂ ಧರ್ಮದ ಬಗ್ಗೆ ಆಗಬೇಕಾದ ಸುಧಾರಣೆಯ ಬಗ್ಗೆ ಮುಸ್ಲೀಂ ಮತಾವಲಂಬಿಗಳು ಮಾತನಾಡಿದರೆ ಅದನ್ನು ಸ್ವೀಕರಿಸಲು ಹಿಂದೂ ಅಭಿಮಾನಿಗಳು ಸಿದ್ದರಿರುವುದಿಲ್ಲ.
ಆದರೆ ಈಗಿನ ಸಮಸ್ಯೆ ಎಂದರೆ ಹಿಂದೂ ಅಭಿಮಾನಿಗಳು ಇಸ್ಲಾಂ ಧರ್ಮದಲ್ಲಿ ಆಗಬೇಕಾದ ಬದಲಾವಣೆಯ ಬಗ್ಗೆ ಸುಧಾರಣೆಯ ಬಗ್ಗೆ ಮಾತನಾಡುತ್ತಾರೆ. ಇಸ್ಲಾಂ ಧರ್ಮದ ವಿಚಾರವಂತರು ಹಿಂದೂ ಧರ್ಮದಲ್ಲಿ ಇರುವ ಲೋಪದೋಷ ಮತ್ತು ಸುಧಾರಣೆಯ ಬಗ್ಗೆ ಭಾಷಣ ಮಾಡುತ್ತಾರೆ. ಇವರೆಲ್ಲ ಯಾಕೆ ತಮ್ಮ ತಮ್ಮ ಧರ್ಮದ ಒಳಗೆ ಇರುವ ಮನುಷ್ಯ ವಿರೋಧಿ ನಿಲುಮೆಯ ಬಗ್ಗೆ ಯಾಕೆ ಮಾತನಾಡುವುದಿಲ್ಲ. ತಮ್ಮ ತಮ್ಮ ಧರ್ಮವನ್ನು ಗರ್ಭ ಗುಡಿಯಲ್ಲಿ ಭದ್ರವಾಗಿ ಇಟ್ಟುಕೊಂಡು ಇನ್ನೊಂದು ಧರ್ಮದ ಬಗ್ಗೆ ಯಾಕೆ ಮಾತನಾಡುತ್ತಾರೆ ? ಅವರು ಹೀಗೆ ಮಾಡುವುದರಿಂದ ಕೋಮು ಧ್ವೇಷ ಇನ್ನಷ್ಟು ಹೆಚ್ಚುತ್ತದೆ. ನನ್ನ ಧರ್ಮದ ಬಗ್ಗೆ ಮಾತನಾಡಲು ಇವನ್ಯಾರು ಎಂದು ಪ್ರಶ್ನಿಸುವುದರೊಂದಿಗೆ ಅಸಹನೆ ಪ್ರಾರಂಭವಾಗುತ್ತದೆ. ಧರ್ಮಾಂಧರು ರಕ್ತಪಾತಕ್ಕೂ ಕೈಹಾಕುತ್ತಾರೆ.
 ಸಮಾಜದಲ್ಲಿ ಸಮಾನತೆ ಮತ್ತು ಸಹಭಾಳ್ವೆ ನಮ್ಮ ಗುರಿಯಾಗಿದ್ದರೆ ನಮ್ಮ ಕಾರ್ಯವಿಧಾನದಲ್ಲಿ ಸಾಕಷ್ಟು ಬದಲಾವಣೆ ಆಗಬೇಕಾಗಿದೆ. ಮೊದಲನೆಯದಾಗಿ ಎಲ್ಲ ಧರ್ಮಗಳನ್ನು ತಿರಕ್ಸರಿಸುವುದು ಸಾಧ್ಯವೆ ಎನ್ನುವುದು. ಇದಕ್ಕೆ ಸಾಮಾನ್ಯ ಜನ ಒಪ್ಪುವುದಿಲ್ಲ. ಯಾಕೆಂದರೆ ದುಃಖ ನೋವು ಅಸಹಾಯಕತೆಯಲ್ಲಿ ಬದುಕುವವರಿಗೆ ಅವಲಂಬನೆಗಾಗಿ ಧರ್ಮ ಬೇಕೇ ಬೇಕು. ಅಂದರೆ ರಿಲಿಜನ್ ಎನ್ನುವುದು ಸಾಮಾನ್ಯ ಜನರಿಗೆ ಅನಿವಾರ್ಯ. ಇಂತಹ ಸ್ಥಿತಿಯಲ್ಲಿ ರಿಲಿಜನ್ ನಲ್ಲಿ ಬದಲಾವಣೆ ಆಗಬೇಕಾಗಿದೆ. ಆದರೆ ಇಂದಿನ ಸ್ಥಿತಿಯಲ್ಲಿ ಧಾರ್ಮಿಕ ಸುಧಾರಣೆ ಮತ್ತು ಬದಲಾವಣೆಯ ಬಗ್ಗೆ ಯಾರೂ ಮಾತನಾಡುವುದಿಲ್ಲ. ಈಗ ಇಸ್ಲಾಮಿಕ್ ಭಯೋತ್ಪಾದನೆಯ ವಿಚಾರವನ್ನೇ ತೆಗೆದುಕೊಳ್ಳಿ. ಇದರ ಮೂಲೋತ್ಪಾಟನೆ ಮಾಡಲು ಏನು ಮಾಡಬೇಕು ಎಂಬ ಬಗ್ಗೆ ಯಾವುದೇ ದೇಶದ ವೈಚಾರಿಕ ವಲಯದಲ್ಲಿ ಚರ್ಚೆ ನಡೆಯುತ್ತಿಲ್ಲ. ಭಾರತದ ಸ್ಥಿತಿಯೂ ಹಾಗೆ. ಇಲ್ಲಿನ ವೈಚಾರಿಕ ವರ್ಗ ಹಿಂದೂ ಧರ್ಮದಲ್ಲಿ ಆಗಬೇಕಾದ ಸುಧಾರಣೆ ಮತ್ತು ಅದಕ್ಕೆ ಚಲನಶೀಲತೆಯನ್ನು ನೀಡುವ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತದೆ. ಇದಕ್ಕೆ ಬಹುಮುಖ್ಯ ಕಾರಣ ಎಂದರೆ ಹಿಂದೂ ಧಾರ್ಮಿಕ ಮೂಲಭೂತವಾದದ ಭಯ. ಹಿಂದೂ ಮೂಲಭೂತವಾದವನ್ನು ವಿರೋಧಿಸುವುದು ಎಂದರೆ ಇಸ್ಲಾಮಿಕ್ ಮೂಲಬೂತವಾದದ ಬಗ್ಗೆ ಮೌನ ಒಹಿಸುವುದು ಎಂಬ ತಪ್ಪು ಕಲ್ಪನೆ ನಮ್ಮ ವೈಚಾರಿಕ ವಲಯದಲ್ಲಿದೆ. ಹಾಗೆ ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆಯನ್ನು ಸಮಗ್ರವಾಗಿ ನೋಡದೇ ಸೆಲೆಕ್ಟೀವ್ ಆಗಿ ನಾವು ನೋಡುತ್ತಿದ್ದೇವೆ ಎಂದು ನನಗೆ ಅನ್ನಿಸುತ್ತಿದೆ.
ಇಂದು ಬೆಳಿಗ್ಗೆ ನಮ್ಮೆಲ್ಲರ ಪ್ರೀತಿಯ ದೇವನೂರು ಸಮಾಜದಲ್ಲಿ ಅಸಹಿಷ್ಣತೆ ಹೆಚ್ಚುತ್ತಿರುವುದನ್ನು ಪ್ರತಿಭಟಿಸಿ ಪ್ರಶಸ್ತಿ ವಾಪಸ್ ನೀಡಿದ ಸುದ್ದಿ ಬಂತು. ಈ ಸುದ್ದಿಯನ್ನು ನನಗೆ ಹೇಳಿದ ನನ್ನ ಕಾಮ್ರೇಡ್ ಮಿತ್ರರೊಬ್ಬರು ನೀವು ನಿಮಗೆ ಸಿಕ್ಕಿರುವ ಪ್ರಶಸ್ತಿಯನ್ನು ವಾಪಸು ಮಾಡುತ್ತೀರಿ ಎಂದುಕೊಂಡಿದ್ದೆ. ಯಾಕೆಂದರೆ ನೀವೂ ಎಡಪಂಥೀಯರಲ್ಲವೆ ಎಂದು ಪ್ರಶ್ನಿಸಿದರು.
ನಾನು ಎಡಪಂಥೀಯ ವಿಚಾರಧಾರೆಯಲ್ಲಿ ಬೆಳೆದು ಬಂದಿದ್ದು ನಿಜ. ಆದರೆ ಈಗ ನಾನು ಯಾವ ಪಂಥೀಯನೂ ಅಲ್ಲ. ನಾನು ಮನುಷ್ಯ ಪರ. ನಾನು ಪತ್ರಿಕೋದ್ಯಮಿ ಆಗಿರುವುದರಿಂದ ಒಬ್ಬರ ಪರ ಮತ್ತು ಇನ್ನೊಬ್ಬರ ವಿರೋಧಿ ಎಂದು ಕೆಲಸ ಮಾಡಲು ಸಾಧ್ಯವಿಲ್ಲ. ನಾನು ಯಾವುದೇ ಒಂದು ಸಿದ್ಧಾಂತಕ್ಕೆ ಬದ್ಧನಾಗಿ ಕೆಲಸ ಮಾಡಲು ಪ್ರಾರಂಭಿಸಿದ ತಕ್ಷಣ ಸತ್ಯ ನಿಷ್ಟೆ ಮಾಯವಾಗುತ್ತದೆ. ಹೀಗಾಗಿ ನಾನು ಎಡಪಂಥೀಯ ವಿಚಾರಧಾರೆಯನ್ನು ಒಪ್ಪುವ ವ್ಯಕ್ತಿಯಾದರೂ ಪತ್ರಿಕೋದ್ಯಮಿಯಾಗಿ ಎಡಪಂಥೀಯ ಎಂದು ಗುರುತಿಸಿಕೊಳ್ಳಲಾರೆ. ನನ್ನ ವೈಯಕ್ತಿಕ ನಂಬಿಕೆ ಮತ್ತು ಸಿದ್ಧಾಂತವನ್ನು ನನ್ನ ವೃತ್ತಿಯ ಮೇಲೆ ಹೇರಲಾರೆ. ನಾನು ಎಕ್ಟಿವಿಸ್ಟ್ ಅಲ್ಲ. ಕೇವಲ ಸತ್ಯದ ಪರ ಮತ್ತು ಮನುಷ್ಯ ಪರವಿರುವ ಒಬ್ಬ ಪತ್ರಿಕೋದ್ಯಮಿ ಅಷ್ಟೇ ಎಂದು ನಕ್ಕೆ.
ನೀವು ಹೇಳಿದಂತೆ ನನಗೆ ಯಾವುದಾದರೂ ಪ್ರಶಸ್ತಿ ಬಂದಿದ್ದರೆ ಅದನ್ನು ಹಿಂತಿರುಗಿಸುವ ಬಗ್ಗೆ ಯೋಚಿಸಬಹುದಿತ್ತು. ಆ ಸನ್ನಿವೇಶದಲ್ಲಿ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೇನೋ ಇಲ್ಲವೋ ಎಂಬುದನ್ನು ಈಗ ಹೇಳಲಾರೆ. ಆದರೆ ಇದುವರೆಗೆ ನನಗೆ ಯಾವ ಪ್ರಶಸ್ತಿಯನ್ನು ಯಾರೂ ನೀಡಿಲ್ಲ. ನೀವು ಅಂದುಕೊಂಡಂತೆ ನಾನು ಎಡಪಂಥೀಯನಾಗಿದ್ದರೆ ಒಂದು ಪಕ್ಷದ ಸರ್ಕಾರ ಇದ್ದಾಗ ಪ್ರಶಸ್ತಿ ಸಿಗುತ್ತಿತ್ತು. ಬಲಪಂಥೀಯನಾಗಿದ್ದರೆ ಇನ್ನೊಂದು ಪಕ್ಷದ ಸರ್ಕಾರ ಇದ್ದಾಗ ಪ್ರಶಸ್ತಿ ಬರಬಹುದಿತ್ತು. ನಾನು ಯಾವ ಪಂಥಕ್ಕೂ ಸೇರದಿರುವುದರಿಂದ ನನಗೆ ಪ್ರಶಸ್ತಿ ಬಂದಿಲ್ಲ ಎಂದು ತಮಾಷೆ ಮಾಡಿದೆ. ಅವರು ಒಂದು ನಿಮಿಷ ಮೌನವಾದರು. ನಿಜವಾಗಿಯೂ ನಿಮಗೆ ಯಾವ ಪ್ರಶಸ್ತಿಯೂ ಬಂದಿಲ್ಲವಾ ಎಂದು ಇನ್ನೊಮ್ಮೆ ಪ್ರಶ್ನಿಸಿ ಖಾತರಿ ಮಾಡಿಕೊಂಡರು.
ಇಂದು ಸಮಾಜದಲ್ಲಿ ಅಸಹಿಷ್ಣತೆ ಹೆಚ್ಚುತ್ತಿರುವುದನ್ನು ವಿರೋಧಿಸಿ ಪ್ರಶಸ್ತಿಗಳನ್ನು ವಾಪಸ್ ಮಾಡುವುದನ್ನು ನಾನು ಸ್ವಾಗತಿಸುತ್ತೇನೆ. ಸಮಾಜ ಮತ್ತು ಸರ್ಕಾರದಲ್ಲಿ ಜಾಗೃತಿ ಮೂಡಿಸಲು ಇಂತಹ ಕೆಲಸ ಮಾಡಲೇಬೇಕು. ಇದು ಸಾತ್ವಿಕ ಪ್ತತಿಭಟನೆಯ ಒಂದು ಮಾರ್ಗ. ಸಮಾಜ ಜೀವಂತವಾಗಿರಲು ಪ್ರತಿಭಟನೆ ಮತ್ತು ಚಳವಳಿಗಳು ಬೇಕೇ ಬೇಕು..ಆದರೆ ಈ ಅಸಹಿಷ್ಣತೆಯ ಪ್ರಶ್ನೆಯನ್ನು ಒಂದು ತತ್ವವನ್ನಾಗಿ ಸ್ವೀಕರಿಸಬೇಕು. ಅದಕ್ಕೆ ಸೈದ್ಧಾಂತಿಕ ಬದ್ಧತೆ ಬೇಕು. ಯಾವುದೇ ಸರ್ಕಾರ ಬರಲೀ ನಮ್ಮ ಸಿದ್ಧಾಂತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು. ಆದರೆ ನಮ್ಮ ಪ್ರತಿಭಟನೆ ಸೆಲೆಕ್ಟೀವ್ ಆದರೆ ಆಗ ಸೈದ್ಧಾಂತಿಕತೆ ಮಣ್ಣು ಮುಕ್ಕುತ್ತದೆ. ಈಗ ಹೀಗಿಯೇ ಆಗುತ್ತಿದೆ ಎಂದು ನಾನು ಹೇಳುತ್ತಿಲ್ಲ. ಹಾಗೆ ಆಗದಂತೆ ಇಂತಹ ಆರೋಪ ಬರದಂತೆ ಎಚ್ಚರ ಒಹಿಸಬೇಕಾದ್ದು ವೈಚಾರಿಕ ಮತ್ತು ಸಾಹಿತ್ಯ ವಲಯದ ಜವಾಬ್ದಾರಿ ಎಂಬುದು ನನ್ನ ನಂಬಿಕೆ.
ಈ ಸಂಶಯ ನನಗೆ ಬರುವುದಕ್ಕೆ ಮೂಲಭೂತ ಕಾರಣ ನಮ್ಮ ದೇಶದ ರಾಜಕೀಯು ಪಕ್ಷಗಳನ್ನು ನಾವು ನೋಡುವ ರೀತಿಯಲ್ಲಿ ಇರುವ ಲೋಪ. ಭಾರತೀಯ ಜನತಾ ಪಕ್ಷ ಧಾರ್ಮಿಕ ಅಸಹಿಷ್ಣತೆಗೆ ತುಪ್ಪ ಸುರಿಯುತ್ತದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಂಘಪರಿವಾರ ಮತ್ತು ಅದರ ನಾಯಕರು ಯುದ್ಧವನ್ನು ಗೆದ್ದ ಸೈನ್ಯ ತಾನು ಗೆದ್ದ ಪ್ರದೇಶದಲ್ಲಿ ಹಿಂಸಾಚಾರ ನಡೆಸಲು ಮುಂದಾಗುವ ರೀತಿಯಲ್ಲೇ ವರ್ತಿಸುತ್ತಿದ್ದಾರೆ. ಇವರಿಗೆ ಬೀಜೆಪಿ ಅಧಿಕಾರ ನಡೆಸುತ್ತಿರುವುದು ಹೆಚ್ಚಿನ ಶಕ್ತಿಯನ್ನು ತುಂಬಿದೆ. ನಮದೇ ಸರ್ಕಾರ ಎಂಬ ಹಮ್ಮಿನಲ್ಲಿ ಅಹಂಕಾರದಲ್ಲಿ ಅಲ್ಪಸಂಖ್ಯಾತರಲ್ಲಿ ಭಯ ಮತ್ತು ಆತಂಕವನ್ನು ಹುಟ್ಟಿಸಿ ಸಂತೋಷ ಪಡುತ್ತಿದೆ ಸಂಘ ಪರಿವಾರ. ಇದನ್ನು ವಿರೋಧಿಸುವ ಸಂದರ್ಭದಲ್ಲಿ ಇದು ಮೋದಿ ಮೇಲಿನ ವಯಕ್ತಿಕ ಧ್ವೇಷದಿಂದ ನಡೆಸುತ್ತಿರುವ ಶಿಸ್ತುಬದ್ಧ ಕಾರ್ಯಾಚರಣೆ ಎಂಬ ಭಾವನೆ ಯಾರಿಗೂ ಬರಕೂಡದು.  ನಮ್ಮ ಸೈದ್ಧಾಂತಿಕತೆ ಕಾಲ ಮತ್ತು ಪರಿಸ್ಥಿತಿಗೆ ತಕ್ಕಂತೆ ಬದಲಾಗಕೂಡದು.
ಆದರೆ ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸುವಾಗ ನಾವು ಎದುರಿಸುವ ಸಮಸ್ಯೆಗಳು ಹೆಚ್ಚು ಸಂಕೀರ್ಣವಾಗಿವೆ.. ಒಂದು ಧರ್ಮದಲ್ಲಿನ ಲೋಪ ಮತ್ತು ಸುಧಾರಣೆಯ ಬಗ್ಗೆ ನಾವು ಮಾತಸಾಡಲು ಪ್ರಾರಂಭಿಸಿದ ತಕ್ಷಣ ಇನ್ನೊಂದು ಧರ್ಮದ ಮೂಲಭೂತವಾದಿಗಳು ಇದರ ಲಾಭವನ್ನು ಪಡೆದುಕೊಳ್ಳುತ್ತಾರೆ. ಉದಾಹರಣೆಗೆ ಇಸ್ಲಾಂ ಧರ್ಮ ನಿಂತ ನೇರಾಗಿರುವುದು, ಇಂದಿನ ಬದುಕಿಗೆ ಪೂರಕವಲ್ಲದ ಅಂಶಗಳು ಆ ಧರ್ಮದಲ್ಲಿರುವುದು ಮೊದಲಾದ ವಿಚಾರಗಳನ್ನು ಪ್ರಸ್ತಾಪಿಸಿದ ತಕ್ಷಣ ಹಿಂದೂ ಮೂಲಭೂತವಾದಿಗಳು ಅದನ್ನು ಬಳಸಿಕೊಳ್ಳಲು ಪ್ರಾರಂಭಿಸುತ್ತಾರೆ. ಈ ಕಾರಣದಿಂದಲೇ ಈ ದೇಶದ ವೈಚಾರಿಕ ವರ್ಗ ಇಸ್ಲಾಂ ಧರ್ಮದಲ್ಲಿ ಇರಬಹುದಾದ ಮನುಷ್ಯ ವಿರೋಧಿ ನಿಲುವುಗಳ ಬಗ್ಗೆ ಮಾತನಾಡದೇ ಇರಬಹುದು. ಹಾಗೆ ಹಿಂದೂ ಧರ್ಮದಲ್ಲಿ ಇರುವ ಜಾತೀಯತೆ ಮನುಷ್ಯ ವಿರೋಧಿ ಅಂಶಗಳ ಬಗ್ಗೆ ಮಾತನಾಡಿದರೆ ಅದನ್ನು ಇಸ್ಲಾಂ ಮೂಲಭೂತವಾದಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಾರಂಬಿಸುತ್ತಾರೆ. ಈ ಸಂಕೀರ್ಣ ಸಮಸ್ಯೆಯನ್ನು ಬಗೆ ಹರಿಸುವುದು ಹೇಗೆ ಎಂಬ ಬಗ್ಗೆ ಮನುಷ್ಯ ಪರವಾದವರೆಲ್ಲ ಯೋಚಿಸಬೇಕಾಗಿದೆ.
ಭಾರತ ಕಂಡ ಇನ್ನೊಬ್ಬ ದಾರ್ಶನಿಕ ಓಷೋ ಅವರು ಹೇಳಿದ ಮಾತುಗಳೊಂದಿಗೆ ನನ್ನ ಈ ಲೇಖನವನ್ನು ಮುಗಿಸಬಹುದು ಎಂದು ನನಗೆ ಅನ್ನಿಸುತ್ತದೆ. ಧರ್ಮದ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿರುವ ಓಶೋ ಒಂದೆಡೆ ಹೇಳುತ್ತಾರೆ.
ನಮಗೆ ಬೇಕಾಗಿರುವುದು ಧರ್ಮವಲ್ಲ, ಧಾರ್ಮಿಕತೆ..
ಈ ಮಾತನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಧರ್ಮ ಎಂದ ತಕ್ಷಣ ಅಲ್ಲಿ ಮೂಢನಂಬಿಕೆ ಇದೆ. ಮನುಷ್ಯ ವಿರೋಧಿ ಆಚರಣೆ ಇದೆ. ಇನ್ನೊಂದು ಧರ್ಮವನ್ನು ವಿರೋಧಿಸುವ ಟೀಕಿಸುವ ಗುಣವಿದೆ. ತಮ್ಮ ಧರ್ಮಕ್ಕಾಗಿ ಇನ್ನೊಂದು ಧರ್ಮದವರ ರುಂಡವನ್ನು ಚೆಂಡಾದುವ ಪಾಷವೀ ಮನಸ್ಸಿದೆ. ಧರ್ಮ ಆಗಾಗ ರಕ್ತವನ್ನು ಬೇಡುತ್ತಲೇ ಇರುತ್ತದೆ. ಧಾರ್ಮಿಕತೆ ಎನ್ನುವುದು ಹಾಗಲ್ಲ. ಅದು ಒಂದು ಅದ್ಬೂತವಾದ ಮನಸ್ಥಿತಿ. ಧಾರ್ಮಿಕತೆ ನಮ್ಮಲ್ಲಿ ಪ್ರೀತಿಯನ್ನು ಉಕ್ಕಿಸುತ್ತದೆ. ಮನುಷ್ಯರನ್ನು ಪ್ರೀತಿಸುವುದನ್ನು ಕಲಿಸುತ್ತದೆ. ಧಾರ್ಮಿಕತೆಗೆ ಒಡೆಯುವ ಗುಣ ಇಲ್ಲ. ಅದಕ್ಕಿರುವುದು ಎಲ್ಲವನ್ನೂ ಒಂದುಗೂಡಿಸುವ ಸಮಗ್ರ ದೃಷ್ಟಿ. ನಿಜವಾದ ಧರ್ಮವನ್ನು ಅರ್ಥ ಮಾಡಿಕೊಂಡವರಿಗೆ ಧಾರ್ಮಿಕತೆಯ ಮನಸ್ಸು ಅರಳುತ್ತದೆ. ಆತ ಮನುಷ್ಯ ಪ್ರೇಮಿಯಾಗುತ್ತಾನೆ.
ಒಬ್ಬ ನೈಜ ಮುಸಲ್ಮಾನ್, ಒಬ್ಬ ನೈಜ ಹಿಂದೂ ಒಬ್ಬ ನೈಜ ಕ್ರಿಶ್ಚಿಯನ್ ರ ನಡುವೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಅವರೆಲ್ಲ ತಮ್ಮ ಧರ್ಮವನ್ನು ನಂಬುತ್ತಲೇ ಪರ ಧರ್ಮವನ್ನು ಗೌರವಿಸುತ್ತಾರೆ. ಅವರ ಮನಸ್ಸಿನಲ್ಲಿ ಪ್ರೀತಿಯ ವರತೆ ಸದಾ ಉಕ್ಕುತ್ತಲೇ ಇರುತ್ತದೆ..


Tuesday, November 10, 2015

ನಮಗೆ ಟಿಪ್ಪೂ ಯಾಕೆ ಬೇಕು..?

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ. ಬೆಂಗಳೂರಿನಲ್ಲಿ ಮಳೆ. ವಿಪರೀತ ಚಳಿ. ಯಾವುದೋ ಟೀವಿಯೊಂದರಲ್ಲಿ ನಿರೂಪಕಿಯೊಬ್ಬರು  ಬಿಜೆಪಿ ಶಾಸಕ ಸಿ.ಟಿ. ರವಿ ಅವರ ಜೊತೆ ಲೈವ್ ಮಾತುಕತೆ ನಡೆಸಿದ್ದಾರೆ.. ರವಿ ವೀರಾವೇಶದಿಂದ ಟಿಪ್ಪು ಸುಲ್ತಾನ್ ಹೇಗೆ ಕನ್ನಡ ವಿರೋಧಿ ಎಂಬುದನ್ನು ಸಾಬೀತು ಪಡಿಸಲು ಯತ್ನ ನಡೆಸುತ್ತಿದ್ದಾರೆ. ಇನ್ನೊಂದೆಡೆ ವಿಧಾನ ಸೌಧದಲ್ಲಿ ನಡೆದ ಟಿಪ್ಪು ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಜ್ನಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಬೆಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಗೆ ಬದಲಾಗಿ ಟಿಪ್ಪು ಹೆಸರು ಇಡಬೇಕಿತ್ತು ಎಂದು ಹೇಳಿದ ವರದಿ ಬರುತ್ತಿದೆ. ಇದು ಬಂದ ಕೆಲವೇ ಕ್ಷಣಗಳಲ್ಲಿ ಬಿಜೆಪಿಯ ಹಿರಿಯ ನಾಯಕ ಆರ್. ಅಶೋಕ್ ವೀರಾವೇಶದಿಂದ ಡಾ, ಕಾರ್ನಾಡ್ ಅವರ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ.
ಇವೆಲ್ಲವನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡುತ್ತಿವೆ. ಈ ನಡುವೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಚರ್ಚೆ ನಡೆಯುತ್ತಿದೆ. ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯ ಪರ ಮತ್ತು ವಿರೋಧಿ ಗುಂಪಿನವರು ತಮ್ಮ ತಮ್ಮ ವಾದವನ್ನು ಪರಿಣಾಮಕಾರಿಯಾಗಿ ಮಂಡಿಸಲು ಯತ್ನ ನಡೆಸುತ್ತಿದ್ದಾರೆ. ಮಡಿಕೇರಿಯ ವಿಶ್ವ ಹಿಂದೂ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ ಎಂಬವರು ಕಲ್ಲಿನೇಟು ಬಿದ್ದು ಅಸು ನೀಗಿದ ವರದಿ ಚಾನಲ್ ನಲ್ಲಿ ಬರುತ್ತದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿ ಈ ವ್ಯಕ್ತಿ ಅಸು ನೀಗಿದ್ದು ಕಲ್ಲಿ ನೇಟಿನಿಂದ ಅಲ್ಲ, ಮಹಡಿ ಮೇಲಿನಿಂದ ಬಿದ್ದು ಎಂಬ ವಿವರಣೆ ನೀಡುತ್ತದೆ. ಮುಖ್ಯಮಂತ್ರಿಗಳು ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳು ಈ ಬಗ್ಗೆ ವಿವರಣೆ ನೀಡುತ್ತಾರೆ. ತಕ್ಷಣ ಸುದ್ದಿ ವಾಹಿನಿಗಳ ಬಗ್ಗೆಯೂ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಪ್ರಾರಂಭವಾಗುತ್ತದೆ.
ನಾನು ತುಂಬಾ ಆತಂಕದಿಂದ ನೋವಿನಿಂದ ಇದನ್ನೆಲ್ಲ ನೋಡುತ್ತಿದ್ದೇನೆ. ನನಗೆ ದುಃಖ ಬೇಸರ ಆಗುತ್ತಿದೆ. ಬದುಕು ಎಷ್ಟು ಅಸಹನೀಯವಾಗುತ್ತಿದೆ ಎಂದು ನನಗೆ ಅನ್ನಿಸತೊಡಗಿದೆ. ಆಗ ಸುದ್ದಿ ವಾಹಿನಿಯಲ್ಲಿ ಇನ್ನೊಂದು ಸುದ್ದಿ ಬರುತ್ತಿದೆ. ಇನ್ನೊಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಅಸು ನೀಗಿದ. ಆತ ಅಸ್ಪತ್ರೆಯ ಮಹಡಿಯ ಮೇಲಿನಿಂದ ಕೆಳಕ್ಕೆ ಬಿದ್ದಿದ್ದ,,
ಹಾಗಿದ್ದರೆ ಇಬ್ಬರೂ ಮಹಡಿಯ ಮೇಲಿನಿಂದ ಬಿದ್ದರೆ ? ಒಬ್ಬ ಮಾತ್ರ ಮಹಡಿಯ ಮೇಲಿನಿಂದ ಬಿದ್ದು ಸತ್ತರೆ ಕುಟ್ಟುಪ್ಪ ಸತ್ತಿದ್ದು ಹೇಗೆ ? ನನ್ನ ಈ ಪ್ರಶ್ನೆಗೆ ಉತ್ತರ ವಿಲ್ಲ.
ಹೊರಗೆ ಮಳೆ ಸುರಿಯುತ್ತಲೇ ಇದೆ. ಯಾರಿಗೂ ಕಾಯುತ್ತ ಎಲ್ಲಿಯೋ ಕುಳಿತ ನನಗೆ ಬೆಂಗಳೂರು ನನ್ನದಲ್ಲ ಅನ್ನಿಸತೊಡಗಿದೆ. ಕರ್ನಾಟಕ ನನ್ನ ಕರ್ನಾಟಕವಲ್ಲ ಅಲ್ಲ ಎಂದು ಅನ್ನಿಸತೊಡಗಿದೆ.
ಇಂದಿನ ತಂತ್ರ ಜ್ನಾನದ ಯುಗದಲ್ಲಿ ಇಲ್ಲಿಯೇ ನಡೆದ ಘಟನೆಯೊಂದರ ಸತ್ಯಾಸತ್ಯತೆ ನನಗೆ ತಿಳಿಯುತ್ತಿಲ್ಲ. ಹಾಗಿದ್ದರೆ ಸುಮಾರು ೨0೦ ವರ್ಷಗಳ ಹಿಂದಿನ ರಾಜನೊಬ್ಬ ಹೀಗೆ ಇದ್ದ ಎಂದು ನಂಬುವುದು ಹೇಗೆ ? ಟಿಪ್ಪು ಸುಲ್ತಾನ್ ಎಂಬ ವೀರ ಅರಸ ಹೀಗಿದ್ದ ಎಂಬ ಅಂತಿಮ ತೀರ್ಮಾನಕ್ಕೆ ಬರುವುದು ಹೇಗೆ ? ಆದರೆ ಟಿಪ್ಪು ಹೀಗೆಯೇ ಇದ್ದ ಎಂದು ನಂಬಿಕೊಂಡವರು ನಡೆಸುತ್ತಿರುವ ಹೋರಾಟಕ್ಕೆ ರಕ್ತಪಾತಕ್ಕೆ ಅರ್ಥವಿದೆಯೆ ?
ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಾನು ಯತ್ನಿಸುತ್ತಿದ್ದೇನೆ. ನನಗೆ ಅನ್ನಿಸುವ ಹಾಗೆ ನಾವು ಆರಾಧನೆ ಮತ್ತು ವಿರೋಧದ ನಡುವೆ ತೊಳಲಾಡುತ್ತಿದ್ದೇವೆ. ನಾವು ಒಮ್ಮೆ ಒಬ್ಬ ವ್ಯಕ್ತಿಯ ಆರಾಧಕರಾಗಿದ್ದರೆ ಇನ್ನೊಬ್ಬ ವ್ಯಕ್ತಿಯ ವಿರೋಧ ಮಾಡುವವರಾಗಿರುತ್ತೇವೆ. ಇದು ಬಹುಮಟ್ಟಿಗೆ ನಮ್ಮ ಆಲೋಚನಾ ಕ್ರಮ, ನಂಬಿಕೆ, ವಿಷಯದ ಗ್ರಹಿಕೆಯ ಮೇಲೆ ನಿಂತಿರುತ್ತದೆ. ನಮ್ಮ ಗ್ರಹಿಕೆಗೆ ಮೂಲ ಸಾಮಗ್ರಿಯಾವುದು ಎಂಬುದೂ ಕುತೂಹಲಕರ. ನಾವು ಎನನ್ನು ನಂಬುತ್ತೇವೆಯೋ ಅದು ಗ್ರಹಿಕೆಗೆ ಮೂಲ ಸಾಮಗ್ರಿ.. ಹೀಗೆ ಆರಾಧನೆ ಮತ್ತು ವಿರೋಧದ ನಡುವೆ ಜೋಕಾಲಿ ಆಡುವ ನಾವು ಅರ್ಥಮಾಡಿಕೊಳ್ಳಲು ಮುಂದಾಗುವುದೇ ಇಲ್ಲ. ಹಾಗಿದ್ದರೆ, ರಾಮ ಕೃಷ್ಣ, ಬುದ್ಧ ಬಸವ ಗಾಂಧಿ ಅಂಭೇಡ್ಕರ್ ಮತ್ತು ಟಿಪ್ಪು ಸುಲ್ತಾನ್ ನನ್ನು ನಾವು ಅರ್ಥ ಮಾಡಿಕೊಳ್ಳಬೇಕೆ ಅಥವಾ ಆರಾಧಿಸಬೇಕೆ ? ಅಥವಾ ವಿರೋಧಿಸಬೇಕೆ ?
ನನಗೆ ಅನ್ನಿಸುವ ಹಾಗೆ ನಾನು ಮೇಲೆ ಹೆಸರಿಸಿದ ಮಹಾನ್ ವ್ಯಕ್ತಿಗಳನ್ನು ನಾವು ಅರ್ಥ ಮಾಡಿಕೊಳ್ಳಲು ಯತ್ನ ನಡೆಸಿಯೇ ಇಲ್ಲ. ನಾವು ಅವರನ್ನು ಆರಾಧಿಸುತ್ತೇವೆ ಇಲ್ಲವೆ ವಿರೋಧ ಮಾಡುತ್ತೇವೆ. ಇದೇ ಇಂದಿನ ಬಹು ಮುಖ್ಯ ಸಮಸ್ಯೆ ಎಂದು ನನಗೆ ಅನ್ನಿಸುತ್ತದೆ. ನಾವು ಯಾರನ್ನಾದರೂ ವಿರೋಧಿಸಲು ಪ್ರಾರಂಭಿಸಿದ ತಕ್ಷಣ ಅವರಲ್ಲಿರುವ ವಿರೋಧಿಸುವ ಗುಣಗಳೇ ನಮಗೆ ಕಾಣತೊಡಗುತ್ತದೆ. ಹಾಗೆ ಆರಾಧಿಸಲು ಪ್ರಾರಂಭಿಸಿದರೂ ಆಗುವುದು ಹಾಗೆ. ಆರಾಧನೆ ನಮ್ಮ ತರ್ಕ ಮತ್ತು ಆಲೋಚನೆಯ ಬಾಗಿಲುಗಳನ್ನು ಮುಚ್ಚಿ ಬಿಡುತ್ತದೆ. ಇದು ನಮ್ಮ ಮನಸ್ಸಿನ ಮಿತಿ.
ಈ ದೇಶದಲ್ಲಿ ಆಗಿದ್ದು ಅದೇ. ಇಲ್ಲಿ ರಾಮ ಕೃಷ್ಣ ಗಾಂಧಿ ಬಸವ ಅಂಬೇಡ್ಕರ್, ಬುದ್ಧ ಬಸವರ ಆರಾಧಕರಿದ್ದಾರೆ, ಅವರನ್ನು ವಿರೋಧಿಸುವವರಿದ್ದಾರೆ. ಆದರೆ ಅರ್ಥ ಮಾಡಿಕೊಳ್ಳುವವರು ಇಲ್ಲವೇ ಇಲ್ಲ. ಈಗ ಟಿಪ್ಪು ಸುಲ್ತಾನ್ ವಿಚಾರಕ್ಕೆ ಬರೋಣ. ಟಿಪ್ಪು ಸುಲ್ತಾನ್ ಕರ್ನಾಟಕದ ಮಹಾನ್ ಶೂರ ಅರಸರಲ್ಲಿ ಒಬ್ಬ. ಆತನ ಶೌರ್ಯಕ್ಕೆ ಎಣೆಯೇ ಇಲ್ಲ. ಆತ ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ತನ್ನ ಜೀವವನ್ನೇ ಬಲಿ ಕೊಟ್ಟ..ತನ್ನ ವಿರೋಧಿಗಳಾದ ಬ್ರೀಟೀಷರನ್ನು ಮಣಿಸಲು ಆಧುನಿಕ ಯುದ್ಧ ತಂತ್ರವನ್ನು ಬಳಸಿದ. ಹೀಗಾಗಿ ಆತ ಮೈಸೂರು ರಾಜ್ಯದ ಹೆಮ್ಮೆ..
ಆಗಿನ ಬ್ರೀಟೀಷ್ ಇಂಡಿಯಾದಲ್ಲಿ ಹಲವಾರು ಅರಸೊತ್ತಿಗೆಗಳಿದ್ದವು. ಎಲ್ಲ ಅರಸೊತ್ತಿಗೆಗಳು ಬ್ರಿಟೀಷರಿಗೆ ಸೋತು ಕಪ್ಪ ಕಾಣಿಕೆ ಸಲ್ಲಿಸಿ ಅವರ ಗುಲಾಮರಂತೆ ಬದುಕುತ್ತಿದ್ದರು. ಆದರೆ ಟಿಪ್ಪು ಹಾಗೆ ಮಾಡಲಿಲ್ಲ. ಆದರೆ ಟಿಪ್ಪುವನ್ನು ಅರ್ಥ ಮಾಡಿಕೊಳ್ಳಲು ಇವಿಷ್ಟೇ ಮಾಹಿತಿ ಸಾಲದು. ಇನ್ನು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳುತ್ತ ಉತ್ತರ ಕಂಡುಕೊಳ್ಳಲು ಯತ್ನ ನಡೆಸೋಣ..
ಟಿಪ್ಪು ಒಬ್ಬ ಹಿಂದೂ ದ್ರೋಹಿ ಎಂಬ ಆರೋಪ ದ ಬಗ್ಗೆ ನೋಡೋಣ..  ಈ ಬಗ್ಗೆ ಮಾತನಾಡುವ ಬಲಪಂಥೀಯರು ಆತ ಕೇರಳದಲ್ಲಿ ನಡೆಸಿದ ದೌರ್ಜನ್ಯದ ಬಗ್ಗೆ ಅಲ್ಲಿ ಹಿಂದೂ ದೇವಾಲಯಗಳನ್ನು ಲೂಟಿ ಮಾಡಿದ ಬಗ್ಗೆ ಮಾತನಾಡುತ್ತಾರೆ. ಟಿಪ್ಪುವನ್ನು ಸಮರ್ಥಿಸುವವವರು ಆತ ಶ್ರಿಂಗೇರಿ ಮಠಕ್ಕೆ ನೀಡಿದ ರಕ್ಷಣ ನಂಜನಗೂಡು ನಂಜುಂಡೇಶ್ವರಿಗೆ ನಡೆದುಕೊಳ್ಳುತಿದ್ದ ಬಗ್ಗೆ ವಿವರಗಳನ್ನು ನೀಡಿ ಸಮರ್ಥಿಸಿಕೊಳ್ಳುತ್ತಾರೆ. ಅದರೆ ಸತ್ಯ ಈ ಸಮರ್ಥನೆ ಮತ್ತು ಟೀಕೆಗೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಮೀರಿ ನಾವು ನೋಡಿದರೆ ಮಾತ್ರ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದು ಎಂದು ನನಗೆ ಅನ್ನಿಸುತ್ತದೆ.
ಟಿಪ್ಪು ಅಧಿಕಾರ ನಡೆಸಿದ ಕಾಲಘಟ್ಟದಲ್ಲಿ ಅರಸನಾದವ ಹೇಗಿರುತ್ತಿದ್ದ ಎಂಬುದನ್ನು ಮೊದಲನೇಯದಾಗಿ ನಾವು ತಿಳಿದುಕೊಳ್ಳಬೇಕು. ಆಗಿನ ಕಾಲದಲ್ಲಿ ಈ ದೇಶದಲ್ಲಿ ಆಡಳಿತ ನಡೆಸುತ್ತಿದ್ದ ಯಾವುದೇ ಅರಸರು ಸಂಪೂರ್ಣವಾಗಿ ಹಿಂದೂ ವಿರೋಧಿಯಾಗಿರಲು ಸಾಧ್ಯವೇ ಇರಲಿಲ್ಲ. ಯಾಕೆಂದರೆ ಬಹುಸಂಖ್ಯಾತರಾದ ಹಿಂದುಗಳ ವಿರೋಧವನ್ನು ಕಟ್ಟಿಕೊಂಡು ಅವರು ಆಡಳಿತ ನಡೆಸುವುದು ಸಾಧ್ಯವಿರಲಿಲ್ಲ. ಹೀಗಾಗಿಯೇ ಮುಸ್ಲಿಂ ಅರಸರು, ಸುಲ್ತಾನರು, ಮಾಂಡಲೀಕರು ಹಿಂದೂ ಧರ್ಮವನ್ನು ಸಂಪೂರ್ಣವಾಗಿ ನಿರಾಕರಿಸುತ್ತಿರಲಿಲ್ಲ. ಆದರೆ ತಾವು ನಂಬಿದ ಇಸ್ಲಾಂ ಧರ್ಮವನ್ನು ಪ್ರಸಾರ ಮಾಡಲು ಅವರು ಯತ್ನ ನಡೆಸುತ್ತಿದ್ದುದು ನಿಜ..ಆದರೆ ಆತ ಹಿಂದೂ ಧರ್ಮಕ್ಕೆ ಸೇರಿದ ಅರಸನಿರಲಿ, ಅಥವಾ ಇಸ್ಲಾಂ ಧರಕ್ಕೆ ಸೇರಿದ ಅರಸರಿರಲೀ ಅವರಲ್ಲಿ ಕೆಲವೊಂದು ಸಮಾನ ಗುಣಗಳಿದ್ದವು. ಅದು ಇನ್ನೊಂದು ರಾಜ್ಯದ ಮೇಲೆ ಆಕ್ರಮಣ ನಡೆಸಿದಾಗ ಅವರು ಅನುಸರಿಸುತ್ತಿದ್ದ ಯುದ್ಧದ ರಿವಾಜುಗಳಿಗೆ ಸಂಬಂಧಿಸಿದ್ದು.  ತಮ್ಮ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡವುದಕ್ಕಾಗಿ ಎಲ್ಲ ಧರ್ಮದ ಅನುಯಾಯಿಗಳಿಗೆ ಸಮಾನ ಗೌರವ ಕೊಡುತ್ತಿದ್ದ ಅವರು ಬೇರೆ ರಾಜ್ಯದ ಮೇಲೆ ಧಾಳಿ ಮಾಡಿದಾಗ ಬದಲಾಗಿ ಬಿಡುತ್ತಿದ್ದರು. ಆಗ ಸೈನ್ಯ ನಿಜವಾದ ಅರ್ಥದಲ್ಲಿ ಸೈನ್ಯವಾಗಿಯೇ ವರ್ತಿಸುತ್ತಿತ್ತು. ಇದನ್ನು ನಾನು ಸೈನ್ಯದ ಮನಸ್ಥಿತಿ ಎಂದೇ ಕರೆಯುತ್ತೇನೆ. ಈಗಲೂ ಭಾರತ ಮತ್ತು ಪಾಕಿಸ್ಥಾನದ ಸೈನಿಕರ ಚಟವಟಿಕೆಯನ್ನು ಗಮನಿಸಿದರೆ ಸೈನ್ಯದ ಈ ಮನಸ್ಥಿತಿ ನಮಗೆ ಅರ್ಥವಾಗುತ್ತದೆ. ಈ ಮನಸ್ಥಿತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ.
ಒಂದು ದೇಶವನ್ನು ಗೆದ್ದ ತಕ್ಷಣ ಗೆದ್ದ ಸಐನಿಕರು ಮೊದಲು ಮಾಡುತ್ತಿದ್ದುದು ಲೂಟಿ. ಜೊತೆಗೆ ಹಿಂದಿನ ಕಾಲದಲ್ಲಿ ಪ್ರಸಿದ್ಧ ದೇವಾಲಯಗಳಲ್ಲಿ ಸಂಪತ್ತನ್ನು ಬಚ್ಚಿಡುತ್ತಿದ್ದುದು ಸಾಮಾನ್ಯವಾಗಿತ್ತು. ಹೀಗಾಗಿ ವೈರಿ ಸೈನಿಕರು ತಾವು ಧಾಳಿ ಮಾಡಿದೆ ದೇಶದ ದೇವಾಲಾಯಗಳನ್ನು ಮೊದಲ ಟಾರ್ಗೇಟ್ ಮಾಡುತ್ತಿದ್ದರು. ಜೊತೆಗೆ ತಮ್ಮ  ಮೂಲ ರಾಜ್ಯದಲ್ಲಿ ಎಲ್ಲ ಧರ್ಮಗಳೀಗೂ ಸಮಾನವಾದ ಅವಕಾಶ ರಕ್ಷಣೆ ಕೊಡುತ್ತಿದ್ದ ಅರಸರು ತಮ್ಮ ಸಾಮ್ರ್ವಾಜ್ಯ ವಿಸ್ತರಣೆಯ ಆಸೆಯಿಂದ ಧಾಳಿ ನಡೆಸಿ ತಮ್ಮ ರಾಜ್ಯಕ್ಕೆ ಸೇರಿಸಿಕೊಂಡ ಪ್ರದೇಶಗಳಲ್ಲಿ ಮೊದಲು ಸಂಪತ್ತಿನ ಲೂಟಿ ಮಾಡುತ್ತಿದ್ದರು. ನಂತರ ಶಾಂತಿ ನೆಲಸಿದ ಮೇಲೆ ಅವರು ಎಲ್ಲರಿಗೂ ಬೇಕಾದ ರೀತಿಯ ಆಡಳಿತ ನೀಡಲು ಯತ್ನ ನಡೆಸುತ್ತಿದ್ದರು..ಈ ಹಿನ್ನೆಲೆಯಲ್ಲಿ ಟಿಪ್ಪೂ ಸುಲ್ತಾನ್ ಕೇರಳ ಮತ್ತು ಮಲಬಾರಿನಲ್ಲಿ ನಡೆಸಿದನೆನ್ನಲಾದ ದೌರ್ಜನ್ಯವನ್ನು ನೋಡಬೇಕು..
ಇನ್ನು ಮೈಸೂರು ರಾಜ್ಯವನ್ನು ಒಡೆಯರರಿಂದ ಕಸುದುಕೊಂಡ ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ತುಂಬಾ ಜಾಣ ತನದಿಂದ ಅಧಿಕಾರ ನಡೆಸಲೇ ಬೇಕಾಗಿತ್ತು. ಅವರ ಅಧಿಕಾರ ಉಳಿಯಬೇಕು ಎಂದಾದರೇ ಮೈಸೂರು ರಾಜ್ಯದಲ್ಲಿ ಶಾಂತಿ ನೆಲಸಬೇಕಾದ್ದು ಅನಿವಾರ್ಯವಾಗಿತ್ತು. ಅವರು ಹಿಂದೂ ವಿರೋಧಿಗಳಾಗಿ  ರಾಜ್ಯದಲ್ಲಿ ಶಾಂತಿ ನೆಲಸುವುದು ಸಾಧ್ಯವೇ ಇರಲಿಲ್ಲ. ಜೊತೆಗೆ ಇದು ಕಸಿದುಕೊಂಡ ರಾಜ್ಯವಾದ್ದರಿಂದ ಅವರಿಗೆ ರಾಜ್ಯದ ಜನ ಮೆಚ್ಚುವ ಹಾಗೆ ಅಧಿಕಾರ ನಡೆಸುವುದು ಅನಿವಾರ್ಯವಾಗಿತ್ತು ಇದನ್ನು ಅರಿಯದಷ್ಟು ಟಿಪ್ಪು ಸುಲ್ತಾನ್ ಮೂರ್ಖನಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀಂಗೇರಿಯ ಮೇಲೆ ಮರಾಠರು  ನಡೆಸಿದ ಧಾಳಿಯ ಘಟನೆಯನ್ನು ನೋಡೋಣ. ಮರಾಠಿಗರು ಎಂಥಹ ಹಿಂದೂ ಧರ್ಮ ಪರಿಪಾಲಕರು ಎಂದು ಹೆಸರು ಪಡೆದಿರಲಿ ಮೈಸೂರು ರಾಜ್ಯದ ಶ್ರೀಂಗೇರಿ ಅವರ ಪಾಲಿಗೆ ಪಕ್ಕದ ರಾಜ್ಯದ ಒಂದು ಕ್ಷೇತ್ರ. ಜೊತೆಗೆ ಶಂಕರಾಚಾರ್ಯರಿಂದ ಸ್ಥಾಪಿತವಾದ ಈ ಮಠ ಆಗ ಪ್ರಭಾವಶಾಲಿಯಾಗಿತ್ತು. ಅದಕ್ಕೆ ರಾಜಾಶ್ರಯ ದೊರಕುತ್ತಲೇ ಇದ್ದುದುರಿಂದ ಮಠದಲ್ಲಿ ಅಪಾರ ಸಂಪತ್ತು ಇದೆ ಎಂಬ ನಂಬಿಕೆ ಕೂಡ ಇತ್ತು. ಇದರಿಂದಾಗಿ ಮರಾಠಿಗರು ಈ ಮಠದ ಮೇಲೆ ಧಾಳಿ ನಡೆಸಿರಬಹುದು.ಅಂದರೆ ಕೆರಳದ ಮೇಲೆ ಧಾಳಿ ನಡೆಸಿದ ಟಿಪ್ಪು ಮನಸ್ಥಿತಿ ಹಾಗೂ ಶ್ರೀಂಗೇರಿ ಮೇಲೆ ಧಾಳಿ ನಡೆಸಿದ ಮರಾಠಿಗಳ ಮನಸ್ಥಿತಿ ಆ ಕಾಲ ಘಟ್ಟದ ಅರಸರ ಸಾಮಾನ್ಯ ಮನಸ್ಥಿತಿಯಾಗಿತ್ತು. ಇದಕ್ಕೆ ಇರುವುದು ಆರ್ಥಿಕ ಕಾರಣಗಳೇ ಹೊರತೂ ಧಾರ್ಮಿಕ ಕಾರಣಗಳಲ್ಲ. ಇದನ್ನು ಧಾರ್ಮಿಕ ಕಾರಣಗಳೆಂದು ವಿಶ್ಲೇಷಿಸುವುದು ಸರಿಯಲ್ಲ.
ಶ್ರಿಂಗೇರಿ ಮಠಕ್ಕೆ ಟಿಪ್ಪು ಸುಲ್ತಾನ್ ನೀಡಿದ ರಕ್ಷಣೆಯನ್ನು ನಾವು ಧಾರ್ಮಿಕ ಆಯಾಮದಲ್ಲಿ ನೋಡಬೇಕಾಗಿಲ್ಲ. ಈ ಆಧಾರವನ್ನು ಇಟ್ಟುಕೊಂಡು ಆತ ಧರ್ಮ ನಿರಪೇಕ್ಷ ರಾಜನಾಗಿದ್ದ ಎಂಬ ತೀರ್ಮಾನಕ್ಕೆ ಬರುವುದೂ ಕಷ್ಟ. ಯಾಕೆಂದರೆ ಶ್ರಿಂಗೇರಿ ಮಠ ಕೇವಲ ಬ್ರಾಹ್ಮಣರ ಮಠವಾಗಿ ಇರಲಿಲ್ಲ. ದಕ್ಷಿಣ ಕನ್ನಡದ ಒಕ್ಕಲಿಗರೂ ಸೇರಿದಂತೆ ಭಾರಿ ಸಂಖ್ಯೆಯ ಶಿಷ್ಯರು ಆ ಮಠಕ್ಕೆ ಇದ್ದರು. ಒಂದೊಮ್ಮೆ ಶ್ರಿಂಗೇರಿ ಮಠಕ್ಕೆ ಟಿಪ್ಪು ರಕ್ಷಣೆ ನೀಡದಿದ್ದರೆ ಈ ಜನ ಸಮುದಾಯದಲ್ಲಿ ಅಸಮಾಧಾನ ಮೂಡುವ ಸಾಧ್ಯತೆ ಇತ್ತು. ಹೀಗಾಗಿ ಆತ ಈ ಮಠಕ್ಕೆ ರಕ್ಷಣೆ ನೀಡಿದ. ಜೊತೆಗೆ ತಾನು ಯಶಸ್ವಿ ರಾಜನಾಗಬೇಕು ಎಂಭ ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದ ಆತ ಹಿಂದೂಗಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಷ್ಟು ಜಾಣನಾಗಿದ್ದ..
ತನ್ನ ರಾಜ್ಯದಲ್ಲಿರುವ ಹಿಂದೂಗಳಿಗೆ ಆಡಳಿತದಲ್ಲಿ ಎಲ್ಲ ರೀತಿಯ ಪಾಲುದಾರಿಕೆಯನ್ನು ಆತ ನೀಡಿದ್ದ. ಆತ ಮೈಸೂರು ರಾಜ್ಯದಲ್ಲಂತೂ ಹಿಂದೂ ಧರ್ಮವನ್ನು ಸಂರಕ್ಷಿಸಿದ್ದ. ಆದರೆ ಇದು ಆತ ಧರ್ಮನಿರಪೇಕ್ಷ ಮನೋಭಾವದಿಂದ ಮಾಡಿದನೇ ಅಥವಾ ತನ್ನ ರಾಜ್ಯದ ಹಿಂದೂಗಳಲ್ಲಿ ಅಶಾಂತಿ ಮೂಡಿದರೆ ಆಡಳಿತ ನಡೆಸುವುದು ಸಾಧ್ಯವಿಲ್ಲ ಎಂಬ ಅರಿವಿನಿಂದ ಮಾಡಿದನೋ ಹೇಳುವುದು ಕಷ್ಟ. ಕಾರಣ ಏನೇ ಇರಲಿ ಆಥ ಮೈಸೂರು ರಾಜ್ಯದಲ್ಲಿ ಹಿಂದೂ ಧರ್ಮದ ಸಂರಕ್ಷನಂತೆ ಆಡಳಿತ ನಡೆಸಿದ್ದು ಐತಿಹಾಸಿಕ ಸತ್ಯ.
ಇಪ್ಪು ಸುಲ್ತಾನ್ ಒಬ್ಬ ಮಹಾನ್ ದೇಶಪ್ರೇಮಿಯಾಗಿದ್ದ ಎಂಬ ಹೇಳಿಕೆಯನ್ನು ಈಗ ವಿಶ್ಲೇಷಿಸೋಣ. ಆಗಿನ ಟಿಪ್ಪು ಆಡಳಿತ ನಡೆಸಿದ ಕಾಲದಲ್ಲಿ ದೇಶ ಎಂದರೇನು ? ಆಗ ದೇಶ ಎಂದರೆ ಯಾವ ಯಾವ ಭೂಪ್ರದೇಶ ಸೇರಿತ್ತು ?
ಬ್ರಿಟೀಷರು ಭಾರತಕ್ಕೆ ಬರುವ ಸಮಯದಲ್ಲಿ ಈಗಿನ ದೇಶದ ಕಲ್ಪನೆ ಇರಲಿಲ್ಲ. ಆಗ ಈ ದೇಶದಲ್ಲಿ ಇದ್ದವರು ಹಲವಾರು ಅರಸರು, ಸಾಮ್ರಾಟರು ಮಾಂಡಲೀಕರು. ಉತ್ತರ ಭಾರತವನ್ನು ಆಳುತ್ತಿದ್ದವರಿಗೆ ಅವರು ಆಳುತ್ತಿದ್ದ ಪ್ರದೇಶವೇ ಅವರ ದೇಶವಾಗಿತ್ತು. ದಕ್ಷಿಣದಲ್ಲಿ ಆಳುತ್ತಿದ್ದವರಿಗೆ ಅದೇ ಅವರ ದೇಶವಾಗಿತ್ತು. ಈ ದೇಶದ ಪ್ರಬಲ ರಾಜಸತ್ತೆ ಮತ್ತು ಸಾಮ್ರಾಜ್ಯಗಳು ನಾಶವಾದ ಮೇಲೆ ಬೇರೆ ಬೇರೆ ಭಾಗಗಳಲ್ಲಿ ಬೇರೆ ಅರಸರು ಆಡಳಿತ ನಡೆಸುತ್ತಿದ್ದರು. ಅವರು ಆಡಳಿತ ನಡೆಸುತ್ತಿದ್ದ ಪ್ರದೇಶವೇ ಅವರ ದೇಶವಾಗಿತ್ತು.
ದಕ್ಷಿಣದಲ್ಲಿ ವಿಜಯ ನಗರ ಸಾಮ್ರಾಜ್ಯ ನಾಶವಾದ ಮೇಲೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಆಡಳಿತ ನಡೆಸುತ್ತ ಬಂದವರು ಮೈಸೂರು ಅರಸರು. ಇವರು ಅಂತಹ ಮಹಾನ್ ಹೋರಾಟಗಾರರೂ ಸಾಮ್ರಾಜ್ಯವನ್ನು ವಿಸ್ತರಿಸುವ ಮಹಾತ್ವಾಕಾಂಕ್ಷೆ ಉಳ್ಳವರೂ ಆಗಿರಲಿಲ್ಲ. ಅವರು ಕತ್ತಿ ಹಿಡಿದು ಹೋರಾಟ ಮಾಡಿದ್ದೂ ಕಡಿಮೆ. ಹೀಗಾಗಿ ಮೈಸೂರು ರಾಜ್ಯ ಒಂದು ಸಣ್ಣ ರಾಜ್ಯವಾಗಿತ್ತು. ಈ ರಾಜ್ಯವನ್ನು ತನ್ನದಾಗಿ ಮಾಡಿಕೊಂಡವರು ಹೈದರಾಲಿ. ಆತ ಯುದ್ಧ ಕಲೆಯ ನಿಪುಣನಾಗಿದ್ದ.  ಆತನ ಮಗ ಟಿಪ್ಪೂ ಸುಲ್ತಾನ್ ಮಹಾನ್ ಶೂರ ಮತ್ತು ಧೀರ. ಆತ ಅರಸನಾದ ಮೇಲೆ ಸಾಮ್ರಾಜ್ಯ ವಿಸ್ತರಣೆಯ ಕನಸುಕಂಡ..ಮೈಸೂರು ರಾಜ್ಯವನ್ನು ಒಂದು ಮಾಧರಿ ರಾಜ್ಯವನ್ನಾಗಿ ಮಾಡುವ ಯೋಜನೆಯನ್ನು ರೂಪಿಸಿದ. ಸ್ವಾಭಿಮಾನಿಯಾದ ಆತ ತನ್ನ ರಾಜ್ಯವನ್ನು ಬ್ರೀಟೀಷರಿಗೆ ಒಪ್ಪಿಸಲು ಸಿದ್ಧನಿರಲೇ ಇಲ್ಲ. ಇದು ಅಂದಿನ ಕಾಲದಲ್ಲಿ ಸ್ವಾಭಿಮಾನಿ ಮತ್ತು ಶೌರ್ಯವಂತ ರಾಜ ಮಾಡುವ ಕೆಲಸವೇ. ತೆಗೆದುಕೊಳ್ಳುವ ನಿಲುಮೆಯೇ..  ಈ  ನಿಲುಮೆಯನ್ನು ನಾವು ಇಂದಿನ ಅರ್ಥದಲ್ಲಿ ದೇಶಭಕ್ತಿ ಎಂದು ಕರೆಯಬೇಕೆ ಅಥವಾ ರಾಜಭಕ್ತಿ ಎಂದು ಕರೆಯಬೇಕೆ ? ಸಮಗ್ರ ಭಾರತದ ಕಲ್ಪನೆಯೇ ಇಲ್ಲದ ಕಾಲದಲ್ಲಿ ರಾಜನೊಬ್ಬ ನಡೆದುಕೊಂಡ ರೀತಿ ರಾಜ್ಯ ಪ್ರೀತಿಯೇ ಅಥವಾ ಇಂದಿನ ಅಖಂಡ ಭಾರತದೆಲ್ಲಿ ಮಾತನಾಡುವ ದೇಶಪ್ರೇಮವೆ ? ಇದು ನಾವು ನೋಡುವ ದೃಷ್ಟಿಯ ಮೇಲೆ ಅವಲಂಬಿತವಾಗಿದೆ.
ಇನ್ನು ಟಿಪ್ಪು ಸುಲ್ತಾನ ಬಹಳಷ್ಟು ಹಿಂದೂಗಳನ್ನು ಮತಾಂತರ ಮಾಡಿದ ಎಂಬ ಆರೋಪವನ್ನು ನೋಡೋಣ. ಒಂದು ಜಾತಿ ಮತ್ತು ಕೋಮಿಗೆ ಸೇರಿದ ವ್ಯಕ್ತಿಯೊಬ್ಬ ಅಧಿಕಾರದ ಗದ್ದುಗೆ ಹಿಡಿದ ತಕ್ಷಣ ಆ ಜಾತಿ ಮತ್ತು ಕೋಮಿನ ಜನರಿಗೆ ಒಂದು ರೀತಿಯ ಹುಚ್ಚು ಧೈರ್ಯ ಬರುತ್ತದೆ. ಅದು ಎಲ್ಲ ರಾಜ ಮಹಾರಾಜರ ಕಾಲದಲ್ಲಿ ನಡೆದಿದ್ದೇ. ಅದು ಕೇವಲ ಟಿಪ್ಪೂ ಸುಲ್ತಾನ್ ಕಾಲದಲ್ಲಿ ನಡೆದ ವಿದ್ಯಮಾನವಲ್ಲ. ಈ ದೇಶದಲ್ಲಿ ಹಿಂದೂಗಳು ರಾಜ್ಯಭಾರ ನಡೆಸಿದಾಗ ಹಿಂದೂ ದೇವಾಲಯಗಳ ನಿರ್ಮಾಣವಾಗಿದೆ. ಜೈನರು ಆಡಳಿತ ನಡೆಸಿದಾಗ ಜೈನ ಬಸದಿಗಳ ನಿರ್ಮಾಣವಾಗಿದೆ. ಬೌದ್ಧ ಧರ್ಮದ ರಾಜರು ಬಂದಾಗ ಬೌದ್ಧ ಧರ್ಮಕ್ಕೆ ಪ್ರೋತ್ಸಾಹ ದೊರಕಿದೆ. ಹಾಗೆ ಇಸ್ಮಾಂ ಧರ್ಮದ ಅನುಯಾಯಿಗಳು ಅಧಿಕಾರ ನಡೆಸಿದಾಗ ಇಸ್ಮಾಂ ಗೆ ಹೆಚ್ಚಿನ ಪ್ರೋತ್ಸಾಹ ದೊರಕಿದೆ. ಇದು ಟಿಪ್ಪು ಕಾಲದಲ್ಲಿ ಮಾತ್ರ ನಡೆದ ವಿಶೇಷ ವಿಧ್ಯಮಾನವಲ್ಲ. ಹೀಗಾಗಿಯೇ ಈ ದೇಶದ ದೇವಾಲಯಗಳ ಕೆಳಗೆ ಬಸದಿಯ ಕುರುಹಿಗಳು ದೊರಕುತ್ತವೆ. ಮಸೀದಿಗಳ ಕೆಳಗೆ ದೇವಾಲಯಗಳ ಕುರುಹುಗಳು ದೊರಕುತ್ತವೆ. ಬೌದ್ಧರ ಸ್ಪೂಪಗಳು ನಾಶವಾಗಿ ದೇವಾಲಯಗಳು ಕಾಣುತ್ತವೆ. ಈ ವಿಚಾರದಲ್ಲಿ ತಿರುಪತಿ ತಿಮ್ಮಪ್ಪನೇ ತೀರ್ಥಂಕರ ಎಂಬ ವಾದವೂ ಇದೇ. ಇದೆಲ್ಲ ಈ ದೇಶದ ಇತಿಹಾಸ. ಹಾಗೆ ಟಿಪ್ಪೂ ಕನ್ನಡ ವಿರೋಧಿ ಎಂಬ ಆರೋಪವನ್ನು ನೋಡಿ. ಕನ್ನಡ ಪ್ರೇಮದ ಇಂದಿನ ಮಾನದಂಡಕ್ಕೂ ಟಿಪ್ಪೂ ಕಾಲದಲ್ಲಿದ್ದ ಭಾಷಾ ಪ್ರೇಮಕ್ಕೂ ವ್ಯತ್ಯಾಸವಿದೆ, ಅಂದು ವಾಟಾಳ್ ನಾಗಾರಾಜ್, ನಾರಾಯಣ ಗೌಡರಂತಹ ಹೋರಾಟಗಾರರು ಇರಲಿಲ್ಲ. ಭಾಷಾ ಪ್ರೇಮ ಇಂದು ಸಮಾಜದಲ್ಲಿ ಯಾವ ಮಹತ್ವನ್ನು ಪಡೆದಿದೆಯೋ ಅಷ್ಟು ಮಹತ್ವವನ್ನು ಪಡೆದಿರಲಿಲ್ಲ. ಇಂಡಿಯಾದ ಹೊರಗೆ ಹಲವಾರು ದೇಶಗಳ ಜೊತೆ ವಾಣಿಜ್ಯ ಸಂಬಂಧವನ್ನು ಹೊಂದಲಿಉ ಬಯಸಿದ್ದ ಆತನಿಗೆ ಕನ್ನಡಕ್ಕೆ ಹೊರತಾಗಿದ್ದ ಭಾಷೆಯೊಂದು ಬೇಕಾಗಿತ್ತು. ಹೀಗಾಗಿ ಆತ ಪರ್ಷಿಯನ್ ಭಾಷೆಯನ್ನು ಬಳಸಿರಬಹುದು. ಜೊತೆಗೆ ಕೊಲ್ಲಿ ರಾಷ್ಟಗಳ ಜೊತೆ ಹೆಚ್ಚಿನ ವಾಣಿಜ್ಯ ಸಂಬಂಧವನ್ನು ಹೊಂದಿದ್ದೂ ಇದಕ್ಕೆ ಕಾರಣವಾಗಿರಬಹುದು. ಇದನ್ನು ಅರ್ಥ ಮಾಡಿಕೊಳ್ಳದೇ ಇಂದಿನ ಕನ್ನಡ ಹೋರಾಟಗಾರರ ಭಾಷೆ ಮತ್ತು ಕನ್ನಡ ಪ್ರೇಮದ ವ್ಯಾಖ್ಯೆಯನ್ನು ಮಾಡಿದರೆ ಅದು ಮೂರ್ಖತನವಲ್ಲವೆ ?
ಈ ವಿಚಾರದಲ್ಲೆ ಕೇವಲ ಟಿಪ್ಪೂ ಸುಲ್ತಾನನನ್ನು ಮಾತ್ರ ಪ್ರತ್ಯೇಕಿಸಿ ಆತ ಹಿಂದೂ ವಿರೋಧಿ ಎಂದು ಪ್ರತಿಬಿಂಬಿಸುವುದು ಹೀನ  ಮನಸ್ಸುಗಳು ಮಾತ್ರ. ರಾಜ ,ಮಹಾರಾಜರ ಕಾಲದಲ್ಲಿನ ವಿದ್ಯಮಾನವನ್ನು ಇಂದಿನ ಧರ್ಮ ನಿರಪೇಕ್ಷತೆಯ ಮಾನದಂಡದಲ್ಲಿ ನೋಡಲು ಪ್ರಾರಂಭಿಸಿದ ತಕ್ಷಣ ನಾವು ಇತಿಹಾಸಕ್ಕೆ ಅಪಚಾರ ಮಾಡಿದಂತಾಗುತ್ತದೆ. ನಾವು ಇವತ್ತು ಯೋಚಿಸುವ ರೀತಿಯಲ್ಲಿ ಯಾವುದೋ ಕಾಲದಲ್ಲಿದ್ದ ಐತಿಹಾಸಿಕ ವ್ಯಕ್ತಿಗಳು ಅಥವಾ ನಾವು  ನಂಬುವ ಪುರಾಣದಲ್ಲಿ ಇರುವ ಪಾತ್ರಗಳು ಇರಬೇಕಿತ್ತು ಎಂದು ವಾದಿಸುವುದು ಮೂರ್ಖತನ. ಕಾಲವನ್ನು ಮರೆತು ವ್ಯಕ್ತಿ ಅಥವಾ ವಸ್ತುವನ್ನು ವಿಶ್ಲೇಷಿಸುವುದನ್ನು ಒಪ್ಪಲಾಗದು. ರಾಮ ಅಪ್ಪನಿಲ್ಲದ ಮಗ ಎಂದು ವಾದಿಸುವುದು ಎಷ್ಟು ಮೂರ್ಖತನದ್ದೋ, ಟಿಪ್ಪು ಒಬ್ಬ ಹಿಂದೂ ವಿರೋಧಿಯಾಗಿದ್ದ ಎಂದು ವಾದಿಸುವುದು  ಅಷ್ಟೇ ಮೂರ್ಖತನ.
ಹಾಗಿದ್ದರೆ ಈವತ್ತು ಟಿಪ್ಪೂ ನಮಗೆ ಯಾಕೆ ಬೇಕು ? ಟಿಪ್ಪು ದಿನಾಚರಣೆಯನ್ನು ಯಾಕೆ ಆಚರಿಸಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಯತ್ನಿಸೋಣ.
ಹಲವು ಧರ್ಮ ನಂಬಿಕೆ, ಜಾತಿಯನ್ನು ಹೊಂದಿರುವ ಈ ದೇಶದಲ್ಲಿ ಪ್ರತ್ರಿಯೊಂದು ಜಾತಿ ಕೋಮಿಗೆ ಒಂದು ಪ್ರತಿಮೆಯ ಅಗತ್ಯ ಇದೆ. ಅದು ಅಯಾ ಜಾತಿ ಮತ್ತು ಕೋಮಿನ ಸ್ವಾಭೀಮಾನ ಮತ್ತು ಹೋರಾಟಕ್ಕೆ ಶಕ್ತಿಯನ್ನು ತುಂಬುತ್ತದೆ. ಬ್ರಾಹ್ಮಣರಿಗೆ ಶಂಕರಾಚಾರ್ಯ, ಮದ್ವಾಚಾರ್ಯ ರಾಮಾನುಜಾಚಾರ್ಯರಿದ್ದಾರೆ. ಲಿಂಗಾಯಿತರಿಗೆ ಬಸವಣ್ಣನಿದ್ದಾನೆ. ಒಕ್ಕಲಿಗರಿಗೆ ಒಕ್ಕಲಿಗರ ಮಠ ಮತ್ತು ಸ್ವಾಮೀಜಿ ಅವರನ್ನು ಪ್ರತಿನಿಧಿಸುವ ಪ್ರತಿಮೆಯಾಗಿದೆ. ಕುರುಬರು ಕನಕದಾಸರನ್ನು ತಮ್ಮ ಇತಿಹಾಸದ ಪ್ರತಿಮೆಯನ್ನಾಗಿ ಕಂಡುಕೊಳ್ಳುತ್ತಿದ್ದಾರೆ. ಕ್ರಿಶ್ಚಿಯನ್ನರಿಗೆ ಏಸು ಇದ್ದಾನೆ. ದಲಿತರಿಗೆ ತಮ್ಮ ಇತಿಹಾಸವನ್ನು ಪ್ರತಿನಿಧಿಸುವ ಸ್ವಾಭಿಮಾನವನ್ನು ಹೆಚ್ಚುಸುವ ತಮಗೂ ಇತಿಹಾಸವಿದೆ ಎಂದು ಹೇಳುವ ಇಂತಹ ಪ್ರತಿಮೆ ಇಲ್ಲ. ಹೀಗಾಗಿ ದಲಿತರು ಎದೆ ಉಬ್ಬಿಸಿ ನಿಲ್ಲುವುದಕ್ಕೆ ಸಾಧ್ಯವಾಗಿಯೇ ಇಲ್ಲ. ಈ ದೇಶದ ಮುಸ್ಲೀಂರಿಗೆ ಇಂತಹ ಪ್ರತಿಮೆ ಒಂದರ ಅಗತ್ಯ ಇದೆ.. ಆ ಪ್ರತಿಮೆಯನ್ನು ಅವರು ಟಿಪ್ಪುವಿನಲ್ಲಿ ಕಂಡುಕೊಳ್ಳುತ್ತಿದ್ದಾರೆ. ಮುಸ್ಲೀಂ ಇತಿಹಾಸದ ಹೆಜ್ಜೆಗುರುತುಗಳನ್ನು ನೆನಪಿಸುವ ಅವರ ಸ್ವಾಭಿಮಾನ ಮತ್ತು ದೇಶಪ್ರೇಮವನ್ನು ಎಚ್ಚೆರಿಸುವ ಸಂಕೇತ ಮತ್ತು ಪ್ರತಿಮೆಯಾಗಿ ಟಿಪ್ಪೂ ಸುಲ್ತಾನ ಕಂಡರೆ ಅದನ್ನು ಸ್ವಾಗತಿಸಬೇಕಾದ್ದು ಈ ದೇಶದ ಎಲ್ಲರ ಕರ್ತವ್ಯ. ಇದನ್ನು ಬಿಟ್ಟು ಟಿಪ್ಪು ಹಾಗಿದ್ದ ಹೀಗಿದ್ದ ಎಂದು ವಾದ ಮಾಡುತ್ತ ಕರ್ನಾಟಕದ ಮುಸ್ಲೀಂ ಸಮುದಾಯವನ್ನು ಹೀಗಳಿಯುವುದು ಸರಿಯಾದುದಲ್ಲ. ಇತಿಹಾಸದಲ್ಲಿ ಆತ ಹೇಗಿದ್ದ ಎನ್ನುವುದಕ್ಕಿಂತ ಈಗ ಎಲ್ಲರ ಮನಸ್ಸಿನಲ್ಲಿ ಟಿಪ್ಪು ಹೇಗಿದ್ದಾನೆ ಎಂಬುದು ಮುಖ್ಯ. ಅದನ್ನು ಗೌರಿಸುವುದು ಅಷ್ಟೇ ಮುಖ್ಯ.
ಈಗ ಮತ್ತೆ ನಾನು ಪ್ರಾರಂಭದಲ್ಲಿ ಎತ್ತಿದ ಪ್ರಶ್ನೆಗೆ ಬರುತ್ತೇನೆ.  ಅದು ಆರಾಧನೆ ಮತ್ತು ವಿರೋಧಿಸುವುದಕ್ಕೆ ಸಂಬಂಧಿಸಿದ್ದು. ಡಾ. ಗಿರೀಶ್ ಕಾರ್ನಾಡ್ ಅವರು ಬೆಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಗೆ ಬದಲಾಗಿ ಟಿಪ್ಪೂವಿನ ಹೆಸರಿ ಇಡಬೇಕಿತ್ತು ಎಂದು ಹೇಳಿದ್ದು. ಇದೂ ಸಹ ಆರಾಧನೆಯ ಮನಸ್ಥಿತಿಯಿಂದ ಬಂದಿದ್ದೇ ಹೊರತೂ ವಸ್ತು ಸ್ಥಿತಿಯ ಅರವಿನಿಂದ ಬಂದಿದ್ದಲ್ಲ. ಈ ಹಿಂದೆ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರು ಇಡಬೇಕೆ ಅಥವಾ ಅಂಬೇಡ್ಕರ್ ಹೆಸರನ್ನು ಇಡಬೇಕೇ ಎಂಬುದು ದೊಡ್ಡ ವಿವಾದವಾಗಿತ್ತು. ಬಸವ ಮತ್ತು ಅಂಬೇಡ್ಕರ್ ಅನುಯಾಯಿಗಳ ನಡುವೆ ದೊಡ್ಡ ಕಂದಕವನ್ನೇ ಇದು ನಿರ್ಮಿಸಿತ್ತು. ಅಂಬೇಡ್ಕರ್ ಮತ್ತು ಬಸವಣ್ಣ ಇಬ್ಬರೂ ಮಾನವತಾವಾದಿಗಳಾಗಿದ್ದರೂ ಅವರ ಅನುಯಾಯಿಗಳು ಮಾನವತಾವಾದಿಗಳಾಗದೇ ಬಸವ ಮತ್ತು ಅಂಬೇಡ್ಕರ್ ಬೇರೆ ಬೇರೆ ಎಂದು ಪ್ರತಿಪಾದಿಸಿದ್ದರು.
ಈಗ ಡಾ. ಕಾರ್ನಾಡ್ ಕೂಡ ಟಿಪ್ಪು ಅಭಿಮಾನಿಗಳು ಮತ್ತು ಕೇಂಪೇಗೌಡರ ಅಭಿಮಾನಿಗಳು ಜಗಳವಾಡುವ ಸ್ಥಿತಿಯನ್ನು ನಿರ್ಮಿಸಿದ್ದಾರೆ. ಬಿಜೆಪಿ ಈ ಬೆಂಕಿಗೆ ಈಗಾಗಲೇ ತುಪ್ಪ ಸುರಿಯುವ ಕೆಲಸ ಮಾಡಿದೆ. ಬಿಜೆಪಿ ನಾಯಕ ಹೋರಾಟದ ಮಾತನ್ನು ಆಡೀಯೂ ಆಗಿದೆ.
ಆರಾಧಿಸುವ ಜನ ವಿವೇಕವನ್ನು ಕಳೆದುಕೊಳ್ಳುತ್ತಾರೆ. ಅವರು ಕಳ್ಳಸ್ವಾಮಿಗಳನ್ನು ಆರಾಧಿಸುವವರು ಆದರೂ ಒಂದೇ ಜನಪರ ರಾಜರನ್ನು ಆರಾಧಿಸುವವರಾದರೂ ಒಂದೇ. ಅದಕ್ಕೆ ನಾನು ಹೇಳಿದ್ದು. ನಾವು ಆರಾಧಿಸುವುದೂ ಬೇಡ ವಿರೋಧಿಸುವುದೂ ಬೇಡ. ನಾವು ಅರ್ಥಮಾಡಿಕೊಳ್ಳಲು ಯತ್ನಿಸೋಣ.



 

Monday, September 28, 2015

ಭಗವಾನ್, ಭಗವಾನರ ಬಗ್ಗೆ ಮಾತನಾಡಿ ಸಾಧಿಸಿದ್ದಾದರೂ ಏನು ?

ಕನ್ನಡದ ವಿವಾದಾತ್ಮಕ ಬರೆಹಗಾರ ಕೆ.ಎಸ್. ಬಗವಾನ್ ರಾಮ ಮತ್ತು ಕೃಷ್ಣ ಇಬ್ಬರನ್ನು ಸದ್ಯಕ್ಕಂತೂ ಕೈ ಬಿಡುವ ಸಾಧ್ಯತೆ ಕಾಣುತ್ತಿಲ್ಲ.  ನಿನ್ನೆ ತಾನೆ ಅವರು ರಾಮ ಯಾವುದೊ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಎಂಬ ತಮ್ಮ ಸಂಶೋಧನೆಯನ್ನು ಬಹಿರಂಗಪಡಿಸಿದ್ದಾರೆ.ಇದರ ಅಗತ್ಯ ಇತ್ತಾ ? ಈ ಮಾತುಗಳ ಮೂಲಕ ಅವರು ಸಮಾಜದಲ್ಲಿ ವೈಚಾರಿಕ ಪ್ರಜ್ನೆಯನ್ನು ಬೆಳೆಸುತ್ತಿದ್ದಾರಾ ? ಅಥವಾ ರಾಮ ಕೃಷ್ಣರನ್ನು ನಂಬುವವರು ಒಗ್ಗಟ್ಟಾಗುವ ಮೂಲಕ ಅವರು ಇನ್ನಷ್ಟು ಶಕ್ತಿ ಪಡೆಯುವಂತೆ ಮಾಡುತ್ತಿದ್ದಾರಾ ?
 ಈ ಮಾತುಗಳನ್ನು  ಹೇಳುವಾಗ ನಾನು ಒಂದು ಅಂಶವನ್ನು ಸ್ಪಷ್ಟಪಡಿಸುತ್ತೇನೆ. ನಾನು ಅವರ ಅಭಿಪ್ರಾಯ ಸ್ವಾತಂತ್ರ್ಯದ ಪರವಾಗಿದ್ದೇನೆ. ಅವರಿಗೆ ಈ ಮಾತುಗಳನ್ನು ಹೇಳುವ ಹಕ್ಕಿದೆ. ಹಾಗೆ ಅಭಿಪ್ರಾಯ ಸ್ವಾತಂತ್ರ್ಯ ಕಸಿದುಕೊಳ್ಳುವ ರೀತಿಯಲ್ಲಿ ಬೆದರಿಕೆ ಒಡ್ಡುತ್ತಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಕಾಲದಲ್ಲಿ ಅಭಿಪ್ರಾಯ ಸ್ವಾತಂತ್ರ್ಯದ ಪರವಾಗಿರುವ ಇರುವವರು ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ನಾನು ಬಯಸುತ್ತೇನೆ.
ಅದರೆ ಅವರು ವ್ಯಕ್ತಪಡಿಸಿದ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳ ಬಗ್ಗೆ ನನ್ನ ತಕರಾರಿದೆ. ಅವರು ಎಲ್ಲಿ ತಪ್ಪಿದ್ದಾರೆ, ತಪ್ಪುತ್ತಿದ್ದಾರೆ ಎಂಬುದನ್ನು ನಾನು ಗಮನಕ್ಕೆ ತರಲು ಬಯಸುತ್ತೇನೆ.
ಭಗವಾನ್ ಅವರ  ಮಾತನ್ನು ನಾನು ಮೌನದಿಂದ ಕೇಳಿಸಿಕೊಂಡು ಬರುತ್ತಿದ್ದೇನೆ. ಅವರ ಮಾತುಗಳನ್ನು ಕೇಳಿಸಿಕೊಳ್ಳುವಾಗ ನನಗೆ ಮೂಡಿದ ಮೂಡುತ್ತಿರುವ ಪ್ರಶ್ನೆಗಳು ಹಲವು. ಆ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಲು ಇಲ್ಲಿ ಯತ್ನಿಸುತ್ತಿದ್ದೇನೆ.. ನನಗೆ ಮೂಡಿದ ಮೊದಲ ಪ್ರಶ್ನೆ ಎಂದರೆ ರಾಮಾಯಣ ಮತ್ತು ಮಹಾಭಾರತವನ್ನು ಭಗವಾನ್ ಅವರು ಕಾವ್ಯವನ್ನಾಗಿ ಸ್ವೀಕರಿಸಿದ್ದಾರೆಯೇ ಅಥವಾ ಇದು ನೈಜ ಘಟನೆ ಎಂದು ನಂಬಿದ್ದಾರೆಯೆ ? ರಾಮಾಯಣ ಮತ್ತು ಮಹಾಭಾರತ ಕಾವ್ಯವಾಗಿದ್ದರೆ, ಅದನ್ನು ಕಾವ್ಯವನ್ನಾಗಿ ಮಾತ್ರ ಆಸ್ವಾಧಿಸಬೇಕು. ಕಾವ್ಯದಲ್ಲಿ ಬರುವ ಪಾತ್ರಗಳನ್ನು ನೈಜ ಪಾತ್ರಗಳನ್ನಾಗಿ ನೋಡದೇ ಕಾವ್ಯದಲ್ಲಿ ಸೃಷ್ಟಿಸಲಾದ ಪಾತ್ರಗಳನ್ನಾಗಿ ನೋಡಬೇಕು. ಕಾವ್ಯ ನೈಜ ಪಾತ್ರದಿಂದ ಪ್ರೇರಣೆ ಪಡೆದಿದ್ದರೂ ಅಲ್ಲಿ ಬರುವ ಪಾತ್ರಗಳನ್ನು ನೈಜ ಪಾತ್ರಗಳನ್ನಾಗಿ ನೋಡುವುದು ಸರಿಯಲ್ಲ ಹಾಗೆ ಮಾಡಿದರೆ ಅದು ಕವಿಗೆ ಅಥವಾ ಕೃತಿಕಾರನಿಗೆ ಮಾಡುವ ಅಪಚಾರವಾಗುತ್ತದೆ.
ಮೊದಲು ರಾಮಾಯಣವನ್ನು ನೋಡೋಣ. ಈ ಕೃತಿಯನ್ನು ಬರೆದವನು ವಾಲ್ಮೀಕಿ. ಆತ ಬರೆದದ್ದು ಯಾವಾಗ ಎನ್ನುವ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ. ಹೀಗಿದ್ದರೂ ಇದೊಂದು ಸಾವಿರಾರು ವರ್ಷಗಳ ಹಿಂದಿನ ಕೃತಿ ಎಂದು ಹೇಳಲು ಯಾವ ಸಾಕ್ಷ್ಯದ ಅವಶ್ಯಕತೆಯೂ ಇಲ್ಲ. ಸಾವಿರಾರು ವರ್ಷಗಳ ಹಿಂದೆ ರಚಿತವಾದ ಒಂದು ಕೃತಿಯನ್ನು ವಿಮರ್ಶಿಸುವಾಗ ಯಾವ ಮಾನದಂಡವನ್ನು ಬಳಸಬೇಕು ? ಒಂದು ಕೃತಿ ಸಾಮಾಜಿಕ ಮೌಲ್ಯವನ್ನು ಎತ್ತಿ ಹಿಡಿಯುತ್ತಿದೆಯೇ ಇಲ್ಲವೇ ಎಂಬ ನಿರ್ಧಾರಕ್ಕೆ ಬರುವುದು ಹೇಗೆ ? ಇವತ್ತಿನ ಸಾಮಾಜಿಕ ಮೌಲ್ಯಗಳನ್ನು ಪುರಾತಸ ಗ್ರಂಥವೂ ಎತ್ತಿ ಹಿಡಿಯಬೇಕು ಎಂದು ಹೇಳಿದರೆ ಅದು ಸರಿಯೆ ? ಹೀಗಾದರೆ ಅದು ಪಕ್ಷಪಾತಿ ಧೋರಣೆ ಆಗುವುದಿಲ್ಲವೆ ?
ಮೊದಲು ರಾಮಾಯಣವನ್ನು ಕಾವ್ಯ ಎಂದು ನೋಡೋಣ. ಈ ಕಾವ್ಯವನ್ನು ರಚಿಸಿದ ವಾಲ್ಮೀಕಿ ಅಂದಿನ ಸಾಮಾಜಿಕ ಸ್ಥಿತಿ ಗತಿ, ಅಂದಿನ ಮೌಲ್ಯಗಳನ್ನು ಮೂಲವಾಗಿಟ್ಟುಕೊಂಡೇ ಕಾವ್ಯ ರಚಿಸಿರುತ್ತಾನೆ. ಸಾವಿರಾರು ವರ್ಷಗಳ ಹಿಂದಿನ ಸಮಾಜ, ಅಂದಿನ ಸಾಮಾಜಿಕ ಮತ್ತು ರಾಜಕಿಯ ವ್ಯವಸ್ಥೆ ಮಾತ್ರ ಅವನ ಕಾವ್ಯದಲ್ಲಿ ಪ್ರತಿಬಿಂಬಿತವಾಗಲು ಸಾಧ್ಯ. ಹೀಗಾಗಿ ಯಾವುದೇ ಕಾವ್ಯ ಅಥವಾ ಬೇರೆ ಯಾವುದೇ ಕೃತಿಯನ್ನು ವಿಮರ್ಶಿಸುವಾಗ ಆ ಕಾವ್ಯ ರಚಿತವಾದ ಕಾಲ ಮತ್ತು ಸಂದರ್ಭವನ್ನು ಗಣನೆಗೆ ತೆಗೆದುಕೊಳ್ಳಲೇ ಬೇಕು. ರಾಮಾಯಣ ಮತ್ತು ಮಹಾಭಾರತವನ್ನು ವಿಮರ್ಶಿಸುವವರು ಮೊದಲ ಕೃತಿಯ ಕಾಲ ಮತ್ತು ಸಂದರ್ಭವನ್ನು ಗಣನೆಗೆ ತೆಗೆದುಕೊಳ್ಳಲೇ ಬೇಕು. ಉದಾಹರಣೆಗೆ ನಮ್ಮ ಬಹುತೇಕ ಹಳೆಗನ್ನಡ ಸಾಹಿತಿಗಳೂ ರಾಜಾಶ್ರಯ ಪಡೆದು ರಾಜರ ಗುಣಗಾನ ಮಾಡಿದ್ದಾರೆ. ಇವರು ಕಾವ್ಯ ಶಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕೇ ಅಥವಾ ಅವರು ರಾಜರ ಭಟ್ಟಿಂಗಿಗಳಾಗಿದ್ದರು ಎಂಬುದನ್ನೇ ? ಹಾಗೆ ಕಾವ್ಯದ ಕಾಲ ಮತ್ತು ಸಂದರ್ಭವನ್ನು  ಬಿಟ್ಟು ಈವತ್ತಿನ ಕಾಲ ಮತ್ತು ಸಂದರ್ಭವನ್ನು ಗಣನೆಗೆ ತೆಗೆದುಕೊಂಡು ಅದನ್ನೇ ಕೃತಿ ವಿಮರ್ಷೆಯ ಮಾನದಂಡವನ್ನಾಗಿ ತೆಗೆದುಕೊಂಡರೆ ಅದು ತಪ್ಪಾಗುತ್ತದೆ..ಉದಾಹರಣೆಗೆ ರಾಮ ಭಾರತೀಯ ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕಿತ್ತು ಎಂದು ಟೀಕಿಸಿದರೆ ಅದು ಮೂರ್ಖತನವಾಗುತ್ತದೆ. ಈಗ ಭಗವಾನ ಮಾಡುತ್ತಿರುವುದು ಅದೇ ಎಂದು ನನಗೆ ಅನ್ನಿಸುತ್ತದೆ.
ವಾಲ್ಮೀಕಿ ರಾಮಾಯಣ ಬರೆದ ಕಾಲ ಈಗಿನಂತೆ ಇರಲಿಲ್ಲ. ಆಗ  ವರ್ಣಾಶ್ರಮ ಧರ್ಮ ಜಾರಿಯಲ್ಲಿತ್ತು. ಮಹಾರಾಜನಾದವನು ಬ್ರಾಹ್ಮಣರನ್ನು ಅತಿ ಗೌರವದಿಂದ ನೋಡುತ್ತಿದ್ದ. ಅವರ ಸಲಹೆ ಸೂಚನೆಯನ್ನು ಪಡೆಯುತ್ತಿದ್ದ.. ಕ್ಷತ್ರಿಯರು ಬ್ರಾಹ್ಮಣರ ಸಲಹೆಯಂತೆ ನಡೆದುಕೊಳ್ಳುತ್ತಿದ್ದರು. ವೈಶ್ಯರು ವ್ಯಾಪಾರ ಮಾಡುತ್ತಿದ್ದರು. ಶೂದ್ರರ ಸ್ಥಿತಿ ದಯನೀಯವಾಗಿತ್ತು. ಇದು ಇತಿಹಾಸ. ಈ ಇತಿಹಾಸವೇ ವಾಲ್ಮೀಕಿ ರಾಮಾಯಣ ಎಂಬ ಕೃತಿಯಲ್ಲಿ ಕಾಣುತ್ತಿದೆ..ಆದ್ದರಿಂದ ಇತಿಹಾಸವನ್ನು ಇತಿಹಾಸವನ್ನಾಗಿ ಮಾತ್ರ ಸ್ವೀಕರಿಸಬೇಕು.
ಇನ್ನು ವರ್ಣಾಶ್ರಮ ಧರ್ಮ ಮಾನವೀಯತೆಗೆ ದೊಡ್ಡ ಕೊಡಲಿ ಪೆಟ್ಟು ನೀಡಿದೆ ಎಂಬುದು ನಮಗೆ ಅರ್ಥವಾಗಿದೆ. ಆದ್ದರಿಂದ ನಾವು ವರ್ಣಾಶ್ರಮ ಧರ್ಮವನ್ನು ವಿರೋಧಿಸುತ್ತೇವೆ. ಇವತ್ತು ವರ್ಣಾಶ್ರಮದ ಧರ್ಮವನ್ನು ಬೆಂಬಲಿಸಿದರೆ ಅವರು ಮಾನವೀಯತೆಯ ವಿರೋಧಿಗಳು.. ಜಾತಿ, ಕೋಮುವಾದವನ್ನು ಇವತ್ತು ಎಲ್ಲರೂ ವಿರೋಧಿಸಲೇಬೇಕು. ಆದರೆ ರಾಮಾಯಣ ಬರೆದ ಕಾಲದಲ್ಲಿ ಈ ಅರಿವು ಸಮಾಜದಲ್ಲಿ ಇರಲಿಲ್ಲ. ಮಾನವ ಜನಾಂಗ ಇಷ್ಟು ಬೆಳೆದಿರಲಿಲ್ಲ. ಸಮಾಜದಲ್ಲಿ ಬ್ರಾಹ್ಮಣರನ್ನು ಅರಸರು ಪ್ರಶ್ನಿಸುವಂತಿರಲಿಲ್ಲ. ಇದನ್ನು ಅರ್ಥ ಮಾಡಿಕೊಳ್ಳದೇ ರಾಮ ವರ್ಣಾಶ್ರಮದ ಧರ್ಮದ ಪರವಾಗಿದ್ದ ಎಂದು ಟೀಕಿಸಿವುದು ಹುಚ್ಚತನವಲ್ಲವೆ ? ಹಾಗೆ ಕೃತಿಯೊಂದರಲ್ಲಿ ಬರುವ ಪಾತ್ರಗಳನ್ನು ನೈಜ ಪಾತ್ರಗಳೆಂದು ನಂಬುವುದೂ ಸತ್ಯಕ್ಕೆ ಮಾಡುವ ಅಪಚಾರವಲ್ಲವೆ ?
ರಾಮಯಣ ಮತ್ತು ಮಹಾಭಾರತವನ್ನು ವಿಶ್ವದ ಮಹಾ ಗ್ರಂಥಗಳ ಪಟ್ಟಿಗೆ ಸೇರಿಸಲಾಗಿದೆ. ಇದನ್ನು ಭಗವಾನ್ ಅವರು ಒಪ್ಪಿಕೊಳ್ಳದಿರಬಹುದು. ಆದರೆ ವಿಶ್ವದ ಮಹಾ ಗ್ರಂಥಗಳ ಸಾಲಿನಲ್ಲಿ ರಾಮಾಯಣ ಮತ್ತು ಮಹಾಭಾರತ ಇರುವುದು ನಿಜ. ಈಗ ವಿಶ್ವದ ಉಳಿದ ಮಹಾ ಗ್ರಂಥಗಳತ್ತ ಒಮ್ಮೆ ಗಮನಹರಿಸೋಣ.ಕ್ರಿಸ್ತಪೂರ್ವ ೯ ನೆಯ ಶತಮಾನದಲ್ಲಿ ಹೂಮರ್ ಬರೆದ ಈಲಿಯಡ್ ವಿಶ್ವದ ಮಹಾ ಕಾವ್ಯಗಳ ಪಟ್ಟಿಯಲ್ಲಿ  ಮೊದಲ ಸ್ಥಾನದಲ್ಲಿದೆ.. ಇದು ಗ್ರೀಕರ ಕಥೆ. ಹಾಗೆ ಓಡೆಸ್ಸಿ, ಪೆರಡೈಸ್ ಲಾಸ್ಟ್ ಕೂಡ ವಿಶ್ವದ ಮಹಾ ಕಾವ್ಯಗಳ ಪಟ್ಟಿಯಲ್ಲಿ ಬರುತ್ತವೆ. ಈ ಕಾವ್ಯಗಳಲ್ಲಿನ ಪಾತ್ರಗಳು ಆ ಕಾಲದ ಸಾಮಾಜಿಕ ರಾಜಕೀಯ ಬದುಕು, ಆಗಿನ ಮೌಲ್ಯ ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ವರ್ತಿಸುತ್ತವೆ.  ಇವುಗಳನ್ನು ವಿಮರ್ಶಿಸುವಾಗ ಇಂದಿನ ಸಾಮಾಜಿಕ ಮತ್ತು ಮೌಲಿಕ ಅಂಶಗಳನ್ನು ಮಾನದಂಡವಾಗಿ ಬಳಸಿ ವಿಮರ್ಶಿಸಿದರೆ ಏನಾಗುತ್ತದೆ ? ಇದು ಭಗವಾನರಿಗೆ ಗೊತ್ತಿಲ್ಲವೆ ?
ವಿಚಾರವಾದಿ ಭಗವಾನರು ರಾಮಾಯಣ ಮತ್ತು ಮಹಾಭಾರತವನ್ನು ಕಾವ್ಯ ಎಂದು ಪರಿಗಣಿಸದೇ ನೈಜ ಘಟನೆ ಎಂದು ಪರಿಗಣಿಸಿದ್ದಾರೆ ಎಂದುಕೊಳ್ಳೋಣ. ಇದೊಂದು ನೈಜ ಘಟನೆ ಎಂದು ಪರಿಗಣಿಸಿದರೆ ನಾವು ಅದನ್ನು ಬೇರೆ ರೀತಿ ನೋಡಬೇಕಾಗುತ್ತದೆ. ರಾಮಾಯಣ ಮತ್ತು ಮಹಾಭಾರತ  ನೈಜ ಘಟನೆ ಎಂದಾದರೆ ಅದು ನಮಗೆ ತಿಳಿದಿದ್ದು ಹೇಗೆ ? ರಾಮಾಯಣ ಬರೆದ ವಾಲ್ಮೀಕಿ ಮತ್ತು ಮಹಾಭಾರತ ಬರೆದ ವ್ಯಾಸರ ಮೂಲಕ., ಅಲ್ಲವೆ ? ಅಂದರೆ ಒಂದು ನೈಜ ಘಟನೆ ನಮಗೆ ತಲುಪಿದ್ದು ಕಾವ್ಯದ ಮೂಲಕವೇ ಹೊರತೂ ನಾವ್ಯಾರು ನೋಡಿದ್ದಲ್ಲ, ಹಾಗೆ ಐತಿಹಾಸಿಕ ದಾಖಲೆ ಕೂಡ ನಮ್ಮ ಬಳಿ ಇಲ್ಲ.  ಅಂದರೆ ಇತಿಹಾಸದ ಘಟನೆಯೊಂದು ಕಾವ್ಯದ ಮೂಲಕ ನಮ್ಮನ್ನು ತಲುಪಿದೆ. ಅದು ಇತಿಹಾಸದ ದಾಖಲೆಯಾಗಿ ನಮ್ಮನ್ನು ತಲುಪಿಲ್ಲ. ಯಾಕೆಂದರೆ ವಾಲ್ಮೀಕಿಯಾಗಲೀ, ವ್ಯಾಸರಾಗಲಿ ಎಡಪಂಥೀಯ ಇತಿಹಾಸಕಾರರೂ ಅಲ್ಲ, ಬಲಪಂಥೀಯ ಇತಿಹಾಸಕಾರರೂ ಅಲ್ಲ. ಒಂದು ಅರ್ಥದಲ್ಲಿ ಅವರಿಬ್ಬರೂ ಕವಿಗಳು..ಜೊತೆಗೆ ಕವಿಗಳ ಹೃದಯ, ಬುದ್ದಿಗಿಂತ  ಹೆಚ್ಚು ಕೆಲಸ ಮಾಡುವುದರಿಂದ ಅವರು ವಿಚಾರವಾದಿಯೂ ಆಗಿರುವುದಿಲ್ಲ. ಜೊತೆಗೆ ಒಬ್ಬ ಕವಿ ಕಾವ್ಯವೊಂದನ್ನು ರಚಿಸುವಾಗ ಅವನದೇ ಆದ ಸ್ವಾತಂತ್ರ್ಯ ಅವನಿಗೆ ಇರುತ್ತದೆ. ಅಲ್ಲಿನ ಪಾತ್ರಗಳೂ ನೈಜ ಪಾತ್ರಗಳು ಆಗಿದ್ದರೂ ಕವಿ ಆ ಪಾತ್ರಗಳಿಗೆ ರಕ್ತ ಮಾಂಸ ಸೇರಿಸುತ್ತಾನೆ. ಜೀವ ತುಂಬುತ್ತಾನೆ. ಜೀವಂತ ಪಾತ್ರದ ಅಸ್ಥಿಪಂಜರ ಮಾತ್ರ ಅಲ್ಲಿರುತ್ತದೆ..ರಾಮಾಯಣ ಮತ್ತು ಮಹಾಭಾರತ ನೈಜ ಘಟನೆಯನ್ನು ಆಧರಿಸಿದ್ದರೂ ಅದು ನೈಜ ಘಟನೆಯ ರನ್ನಿಂಗ್ ಕಾಮೆಂಟರಿ ಆಗಿರಲು ಸಾಧ್ಯವಿಲ್ಲ. ಅಂದರೆ ನಾವು ವಾಲ್ಮೀಕಿ ಮತ್ತು ವ್ಯಾಸರ ಮೂಲಕ ತಿಳಿದುಕೊಂಡ ರಾಮ ಮತ್ತು ಕೃಷ್ಣರ ಕಥೆ ಸಂಪೂರ್ಣವಾಗಿ ಅವರು ವಿವರಿಸಿದಂತೆ ನೂರಕ್ಕೆ ನೂರು ಸತ್ಯವಾಗಿರಲು ಸಾಧ್ಯವಿಲ್ಲ. ಅಲ್ಲಲ್ಲಿ ಪಾತ್ರ ಮತ್ತು ಘಟನೆಗಳನ್ನು ಮೀರಿ ಕವಿ ವಿಜೄಂಬಿಸಿರುವ ಸಾಧ್ಯತೆ ಇದೆ.
ರಾಮಾಯಣ ಮತ್ತು ಮಹಾಭಾರತ ಮಹಾ ಕಾವ್ಯದ ಎಲ್ಲ ಲಕ್ಷಣಗಳನ್ನು ಹೊಂದಿರುವುದರಿಂದ ಬಹುಬೇಗ ಭಾರತೀಯರ ಮನಸ್ಸನ್ನು ಸೆಳೆದವು. ಹೀಗಾಗಿ ರಾಮ ಮತ್ತು ಕೃಷ್ಣರು ದೇವರಾಗುವ ಪ್ರಕ್ರಿಯೆ ಪ್ರಾರಂಭವಾಯಿತು.. ಇದು ಮೂರು ಸಾವಿರ ವರ್ಷಗಳಲ್ಲಿ ಬೇರೆ ಬೇರೆ ರೀತಿ ಭಾರತೀಯರ ಮನಸುಗಳಲ್ಲಿ ಬೆಳೆದು ಮರವಾಯಿತು.
ಭಾರತೀಯರು ದೇವರನ್ನು ಸೃಷ್ಟಿಸುವಲ್ಲಿ ಮಹಾ ನಿಸ್ಸೀಮರು. ಒಬ್ಬ ಸಾಮಾನ್ಯನನ್ನು ದೇವರನ್ನಾಗಿಸುವ ಈ ಪ್ರಕ್ರೀಯೆ ಭಾರತೀಯ ಸಮಾಜಕ್ಕೆ ಮಾತ್ರ ಸೀಮಿತವಾಗಿದೆ ಎಂದು ನಾನು ಹೇಳುವುದಿಲ್ಲ. ಮನುಷ್ಯ ದೇವರನ್ನು ಸೃಷ್ಟಿಸುವ ಬೆಳೆಸುವ ಕೆಲಸ ಮಾನವ ಇತಿಹಾಸದಲ್ಲಿ ನಡೆಯುತ್ತಲೇ ಬಂದಿದೆ. ಆದರೆ ಲಕ್ಷಾಂತರ ದೇವರುಗಳನ್ನು ಹುಟ್ಟಿಸಿರುವ ಭಾರತೀಯರು ಈ ಕೆಲಸದಲ್ಲಿ ನಿಸ್ಸೀಮರು ಎಂಬುದು ಮಾತ್ರ ನಿಜ. ಚಲನ ಚಿತ್ರ ನಟರ ಕಟ್ ಔಟ್ ಹಾಕಿ ಹಾಲಿನ ಅಭಿಷೇಕ ಮಾಡುವ ನಾವು ಅವರಿಗಾಗಿ ದೇವಾಲಯ ಕಟ್ಟಿದ ಉದಾಹರಣೆಗಳು ನಮ್ಮಲ್ಲಿರುವುದು ಈ ಮಾತಿನ ಸತ್ಯಾಸತ್ಯತೆಯನ್ನು ಸಾಬೀತು ಪಡಿಸುತ್ತದೆ..
ರಾಮ ಮತ್ತು ಕೃಷ್ಣರನ್ನು ದೇವರನ್ನಾಗಿಸುವ ಪ್ರಕ್ರಿಯೆ ಯಾವಾಗ ಪ್ರಾರಂಭವಾಯಿತು ಎಂದು ಹೇಳಲು ಸಾಧ್ಯವಿಲ್ಲದಿದ್ದರೂ ಅದು ಸತತವಾಗಿ ನಡೆಯುತ್ತಲೇ ಬಂದ ಪ್ರಕ್ರಿಯೆ. ರಾಮಾಯಣ ಮತ್ತು ಮಹಾಭಾರತ ನಡೆದ ಘಟನೆ ಎಂದು ಪರಿಗಣಿಸಿದರೆ, ಈ ಘಟನೆ ನಡೆದ ನೂರಾರು ವರ್ಷಗಳ ನಂತರ ದೇವರನ್ನಾಗಿಸುವ ಪ್ರಕ್ರಿಯೆ ಪ್ರಾರಂಭವಾಗಿರಬಹುದು.. ಅದು ಹಾಗೆ ಮುಂದುವರಿಯುತ್ತಲೇ ಇಂದಿನ ದೇವರು ಬೃಹತ್ ಆಗಿ ನಮ್ಮೆದುರು ನಿಂತಿರಬಹುದು. ಈ ವಿಶ್ಲೇಷಣೆಯಿಂದ ಅರ್ಥವಾಗುವುದೆಂದರೆ ರಾಮ ಮತ್ತು ಕೃಷ್ಣರ ನೈಜ ಪಾತ್ರಕ್ಕೂ ಅವರನ್ನು ದೇವರನ್ನಾಗಿ ಸ್ವೀಕರಿಸಿದ ಇಂದಿನ ಪಾತ್ರಕ್ಕೂ ತುಂಬಾ ವ್ಯತ್ಯಾಸ ಇರಲೇಬೇಕು. ಅಂದರೆ ರಾಮ ಮತ್ತು ಕೃಷ್ಣರು ನಿಜವಾಗಿ ಬದುಕಿದ್ದವರೇ ಆಗಿದ್ದರೆ ಅವರು ನಾವು ಈಗ ದೇವರಾಗಿ ನಂಬಿರುವಂತೆ ಇದ್ದಿರಲು ಸಾಧ್ಯವೇ ಇಲ್ಲ. ಯಾಕೆಂದರೆ ಇವರಿಬ್ಬರನ್ನೂ ದೇವರನ್ನಾಗಿಸುವ ಪ್ರಕ್ರಿಯೆಯಲ್ಲಿ ಕಾಲ ಒಹಿಸಿದ ಪಾತ್ರ ತುಂಬಾ ಮುಖ್ಯವಾಗಿರುತ್ತದೆ. ಕಾಲ ಪಾತ್ರದ ಗುಣಧರ್ಮವನ್ನು ಬದಲಿಸುತ್ತದೆ. ರಾಮ ಮತ್ತು ಕೃಷ್ಣ ದೇವರಾಗಿ ಜನ ಮನ್ನಿಸುವ ನಡುವಿನ ಕಾಲದಲ್ಲಿ ಇವರಿಬ್ಬರೂ ಸಾಕಷ್ಟು ಬದಲಾದ ಸಾಧ್ಯತೆ ತುಂಬಾ ಇದೆ..ಈ ಬದಲಾವಣೆ ಮೂಲ ರಾಮ ಕೃಷ್ಣರಿಗೂ ಈಗ ಜನ ನಂಬಿರುವ ರಾಮ ಕೃಷ್ಣರಿಗೂ ಅಜಗಜಾಂತರ ವ್ಯತ್ಯಾಸ ಇರಲೇಬೇಕು.
ಈಗಿನ ರಾಮ ಮತ್ತು ಕೃಷ್ಣರ ದೈವಿಕ ಹೊಸ ಮೂರ್ತಿ ಭಾರತೀಯ ಸಮಾಜದಲ್ಲಿ ಸೃಷ್ಟಿಯಾಗಿದೆ. ಈ ಮೂರ್ತಿಗಳಿಗೆ ಜನರಿಂದಾಗಿ ದೈವಿಕ ಶಕ್ತಿ ಬಂದಿದೆ. ಈಗ ದೇವರಾಗಿರುವ ನಂಬಿಕೆಯ ಮೂರ್ತಿಯಾಗಿರುವ ರಾಮ ಕೃಷ್ಣರನ್ನು ಎಂದೂ ಬದುಕಿದ ರಾಮ ಕೃಷ್ಣರಿಗೆ ಹೋಲಿಸಿ ಮಾತನಾಡುವುದೇ ಅಜ್ನಾನ. ಯಾಕೆಂದರೆ ಮೂಲ ಮಹಾಭಾರತ ರಾಮಾಯಣಯದಲ್ಲಿ ಬರುವ ರಾಮ ಮತ್ತು ಕೃಷ್ಣರು ಈಗ ದೇವರಾಗಿರುವ ರಾಮ ಕೃಷ್ಣರ ಮೂಲ ಮಾತ್ರ. ಅವರು ಬೀಜ ಮಾತ್ರ. ಈಗ ಜನಮಾನಸದಲ್ಲಿರುವ ರಾಮ ಕೃಷ್ಣರು ದೇವರನ್ನು ಬಯಸುವ ಭಾರತೀಯರ ನಂಬಿಕೆಯ ಫಲ.. ಹೀಗೆ ದೇವರ ಮೂರ್ತಿಯಾದವರ ಮೂರ್ತಿ ಭಂಜನೆ ಅಂಥ ಸುಲಭವಾದುದಲ್ಲ.
ನನಗೆ ದೇವರನ್ನಾಗಿಸುವ ಪ್ರಕ್ರಿಯೆ ಬಗ್ಗೆ ಹೆಚ್ಚು ಕುತೂಹಲ. ಇದು ಪುರಾಣಗಳಿಂದ ವರ್ತಮಾನದ ವರೆಗೆ ಮುಂದುವರಿದುಕೊಂಡು ಬಂದಿದೆ. ಪ್ರತಿ ಕಾಲದಲ್ಲಿಯೂ ಮನುಷ್ಯರಾಗಿದ್ದವರೇ ದೇವರಾಗಿದ್ದಾರೆ ಎಂದು ವಾದಿಸಲು ಬೇಕಾದಷ್ಟು ಸಾಕ್ಷ್ಯಗಳನ್ನು ನೀಡಬಹುದು. ರಾಮ ಮತ್ತು ಕೃಷ್ಣ ಮನುಷ್ಯರಾಗಿದ್ದವರೇ ಎಂಬ ಬಗ್ಗೆ ಅನುಮಾನಪಡಬೇಕಾಗಿಲ್ಲ. ಹಾಗೆ ಆಧುನಿಕ ಭಾರತದಲ್ಲಿ ಇಂತಹ ಹಲವು ಉದಾಹರಣೆಗಳನ್ನು ನೀಡಬಹುದು. ಬುದ್ಧ, ಬಸವ, ಅಂಬೇಡ್ಕರ್ ಎಲ್ಲ ಈಗ ದೇವರೋ ಮೂರ್ತಿಗಳೋ ಆಗಿಬಿಟ್ಟಿದ್ದಾರೆ. ಒಮ್ಮೆ ಒಬ್ಬ ಮನುಷ್ಯ, ದೇವರೋ ಮೂರ್ತಿಯೋ ಆದ ಮೇಲೆ ಅವರ ಬಗ್ಗೆ ಮಾತನಾಡುವ ಚರ್ಚಿಸುವ, ವಿಶ್ಲೇಷಿಸುವ ಅಧಿಕಾರವನ್ನು ಜನ ಸಾಮಾನ್ಯರಿಂದ ಕಸಿದುಕೊಳ್ಳಲಾಗುತ್ತದೆ. ಹಲವು ದೇವರು ದೇವರ ಪ್ರತಿನಿಧಿಗಳು, ದೇವರಾದ ಮೇಲೆ ಅವರ ಬಗ್ಗೆ ಮಾತನಾಡದಂತೆ ಭಕ್ತರು ಬಾಯಿ ಕಟ್ಟುತ್ತಾರೆ. ಬೆದರಿಕೆ ಒಡ್ಡುತ್ತಾರೆ. ಮೂರ್ತಿ ಭಂಜನೆಯನ್ನು ಮೂರ್ತಿಪೂಜಕರು, ಮೂರ್ತಿಯನ್ನು ಪ್ರತಿಷ್ಠಾಪಿಸಿದವರು ವಿರೋಧಿಸುತ್ತಾರೆ.
ಭಗವಾನ್ ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಅವರು ಯಾವ ರಾಮ ಮತ್ತು ಕೃಷ್ಣನ ಬಗ್ಗೆ ಮಾತನಾಡುತ್ತಿದ್ದಾರೋ ಆತ ಜನ ಈಗ ತಮ್ಮ ಮನಸ್ಸಿನಲ್ಲಿ ಸ್ಥಾಪಿಸಿಕೊಂಡಿರುವ ರಾಮ ಕೃಷ್ಣರಲ್ಲ. ದೇವರಾಗಿ ಬೆಳೆದ ರಾಮಕೃಷ್ಣರಲ್ಲ. ಒಬ್ಬ ಮನುಷ್ಯ ದೇವರಾದ ಮೇಲೆ ಸಮಾಜ ಅವರ ಜೊತೆ ನಿಲ್ಲುತ್ತದೆ. ಮೂರ್ತಿ ಪೂಜಕರು ಬಾಡೀ ಗಾರ್ಡ್ ಅಂತ್ರೆ ಪಕ್ಕ ನಿಂತಿರುತ್ತಾರೆ. ಈಗ ಈ ಸಮಾಜ ದೇವರು ಎಂದು ಪರಿಗಣಿಸಿರುವ ರಾಮಕೃಷ್ಣರ ಪಕ್ಕಇಂತಹ ಬಾಡಿ ಗಾರ್ಡ್ ಗಳಿದ್ದಾರೆ.  ಈ ವ್ಯತ್ಯಾಸ ಭಗವಾನರಿಗೆ ಅರ್ಥವಾದಂತಿಲ್ಲ. ಅವರು ವಾಲ್ಮೀಕಿ ರಾಮಾಯಣದಲ್ಲಿ ಇರುವ ರಾಮ ಮತ್ತು ಜನ ಮಾನಸದಲ್ಲಿ ದೇವರಾಗಿ ಬೆಳೆದು ನಿಂತ ರಾಮನ ನಡುವಿನ ವ್ಯತ್ಯಾಸವನ್ನು ತಿಳಿದುಕೊಂಡಿಲ್ಲ. ವಾಲ್ಮೀಕಿ ರಾಮನ ಬಗ್ಗೆ ಮಾತನಾಡುತ್ತ ಜನ ಮಾನಸದ ರಾಮನ ತಂಟೆಗೆ ಹೋಗಿದ್ದಾರೆ, ಕಲ್ಲು ಹೊಡೆದಿದ್ದಾರೆ.
ಈ ರೀತಿ ಸೂಕ್ಷ್ಮ ಆಲೋಚನೆ ಚಿಂತನೆ ಇಲ್ಲದೇ, ವ್ಯತ್ಯಾಸ ತಿಳೀಯದೆ ಮಾಡಿದ ತಪ್ಪಿನ ಪರಿಣಾಮ ಏನು ? ಜನ ಮಾನಸದಲ್ಲಿ ದೇವರಾದ ರಾಮನ ತಂಟೆಗೆ ಹೋಗುವ ಮೂಲಕ ಅವರ ಜೇನು ಹುಟ್ಟಿಗೆ ಕಲ್ಲು ಹೊಡೆದಿದ್ದಾರೆ.ಜೇನು ಹುಟ್ಟಿಗೆ ಕಲ್ಲು ಹೊಡೆದು ಜೇನಿನ ಧಾಳಿಗೆ ಒಳಗಾಗಿದ್ದಾರೆ.  ಮೂರ್ತಿ ಭಂಜನೆಗೆ ಮೊದಲು ಮೂರ್ತಿಯ ಶಕ್ತಿ ಮತ್ತು ಪರಿಣಾಮದ ಬಗ್ಗೆಯೂ ಅವರು ಆಲೋಚಿಸಿದಂತಿಲ್ಲ. ಇದರ ಜೊತೆಗೆ ಇನ್ನೊಂದು ಬಹುಮುಖ್ಯ ಪ್ರಶ್ನೆ ಎಂದರೆ ಭಗವಾನ್ ಅವರು ಈ ರೀತಿ ರಾಮ ಮತ್ತು ಕೃಷ್ಣರನ್ನು ಟೀಕಿಸುವುದರಿಂದ ಸಾಧಿಸಿದ್ದೇನು ? ರಾಮ ಕೆಲವು ವರ್ಷಗಳ ನಂತರ ಇಹಲೋಕ ಯಾತ್ರೆ ಮುಗಿಸಿದ ಎಂಬುದು ಸತ್ಯ. ಅದನ್ನು ಬಿಟ್ಟು ಆತ ಹೇಗೆ ಸತ್ತ ಎಂಬುದನ್ನು ಸಂಷೋಧನೆ ಮಾಡಿದ್ದರಿಂದ ಆಗುವ ಲಾಭ ಏನು ?
ಸಾಧಾರಣವಾಗಿ ಮೂರ್ತಿ ಸ್ಥಾಪಿಸುವವರು ಬಹುಸಂಖ್ಯಾತರು. ಅವರ ಬಲ ಹೆಚ್ಚು. ಮೂರ್ತಿ ಭಂಜಕರ ಬಲ ತುಂಬಾ ಕಡಿಮೆ. ಮೂರ್ತಿ ಭಂಜಕರ ಬಗ್ಗೆ ಸಮಾಜದ ಸಹಾನುಭೂತಿ ಕೂಡ ಇರುವುದಿಲ್ಲ . ಮೂರ್ತಿ ಭಂಜನೆಗೆ ಕೆಲವರು ಸಿದ್ಧವಾದರೆ, ಮೂರ್ತಿಯನ್ನು ಕಾಯುವ ಬಹುಸಂಖ್ಯಾತರು ತಮ್ಮ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನೆಲ್ಲ ಮರೆತು ಮೂರ್ತಿ ರಕ್ಷಣೆಗೆ ಒಂದಾಗುತ್ತಾರೆ.. ಹೀಗೆ ಒಂದಾದವರ ಬಲ ಇನ್ನಷ್ಟು ಹೆಚ್ಚುತ್ತದೆ. ಅವರನ್ನು ಸೋಲಿಸುವುದು ಇನ್ನಷ್ಟು ಕಷ್ಟವಾಗುತ್ತದೆ.ಈಗ ವಾಲ್ಮೀಕಿ ರಾಮನಗಿಂತ ಸಾವಿರ ಪಟ್ಟು ಬೆಳೆದು ಜನ ಮಾನಸದಲ್ಲಿ ನಿಂತ ರಾಮಕೃಷ್ಣರು ಮತ್ತು ಅವರ ಕಾವಲು ಕಾಯುತ್ತಿರುವ ಭಕ್ತರು ತುಂಬಾ ಬಲಶಾಲಿಗಳಾಗಿದ್ದಾರೆ, ಈ ಬಲ ಬಂದಿದ್ದೂ ಸಹ ನಂಬಿಕೆಯಿಂದ.
ನಂಬಿಕೆಯ ಶಕ್ತಿ ಅಪನಂಬಿಕೆಗೆ ಇರುವುದಿಲ್ಲ. ಹೀಗಾಗಿ ರಾಮನನನ್ನು ತಮ್ಮ ಮನಸ್ಸಿನಲ್ಲಿ ಪ್ರತಿಷ್ಠಾಪಿಸಿಕೊಂಡವರಿಗೆ ಇರುವ ಶಕ್ತ್ರಿ ನಂಬದ ಭಗವಾನ್ ಅವರಿಗೆ ಇರುವುದು ಕಷ್ಟ.

Saturday, September 19, 2015

ಮಾಧ್ಯಮಕ್ಕೆ ಕೆಲವೇ ಕೆಲವು ರಾಜಕಾರಣಿಗಳು ಇಷ್ಟವಾಗುವುದು ಯಾಕೆ ?

ನಾನು ಪತ್ರಿಕೋದ್ಯಮಕ್ಕೆ ಬಂದಾಗ ಅಗತಾನೆ ದೇವರಾಜ ಅರಸು ಅವರ ಯುಗ ಮುಗಿಯುತ್ತ ಬಂದಿತ್ತು. ಆರ್. ಗುಂದೂರಾವ್ ಮುಖ್ಯಮಂತ್ರಿ. ಕರ್ನಾಟಕದ ರಾಜಕಾರಣದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಮಣ್ಣು ಹದವಾಗುತ್ತಿತ್ತು.. ರಾಜ್ಯದಲ್ಲಿ ರೈತ ಚಳವಳಿ, ದಲಿತ ಚಳವಳಿ ಮತ್ತು ಕನ್ನಡ ಚಳವಳಿ ಹೊಸ ಕನಸಿಗೆ ನೀರೆರೆಯುವ ಮಣ್ಣನ್ನು ಹದ ಮಾಡುವ ಕೆಲಸ ಮಾಡುತ್ತಿದ್ದವು. ಆಗ ನಾನು ಪತ್ರಿಕಾ ವ್ಯವಸಾಯವನ್ನು ಪ್ರಾರಂಭಿಸಿದ್ದೆ. ಅದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ. ಆಗಲೇ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯನ್ನು ಸರ್ಕಾರ ನಡೆಸುತ್ತಿತ್ತು. ಅದಕೊಬ್ಬ ಆಡಳಿತಾಧಿಕಾರಿ ಇದ್ದರು. ಪತ್ರಿಕೆಯ ಜಂಟಿ ಸಂಪಾದಕರಾಗಿ ಇದ್ದವರು ಎಸ್. ವಿ. ಜಯಶೀಲರಾವ್. ಆಗಲೇ ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಸ ಮಾಡಿ ಅವರು ಇಲ್ಲಿಗೆ ಬಂದಿದ್ದರು.
ಆ ದಿನಗಳಲ್ಲಿ ಯಾವ ದಿನ ಪತ್ರಿಕೆಯೂ ಅರಸು ಅವರ ಬೆಂಬಲಕ್ಕೆ ನಿಂತಿರಲಿಲ್ಲ. ಅರಸು ಅವರು ಜಾರಿಗೆ ತಂದ ಊಳೂವವನೇ ನೆಲದೊಡೆಯ ಎಂಬ ಕಾನೂನಾಗಲಿ, ಮಲ ಹೊರುವುದನ್ನು ನಿಷೇಧಿಸಿದ್ದಾಗಲೀ ಮಾಧ್ಯಮಗಳಿಗೆ ಎಷ್ಟು ಮುಖ್ಯವಾಗಬೇಕಿತ್ತೋ ಅಷ್ಟು ಮುಖ್ಯವಾಗಿರಲಿಲ್ಲ. ಬದಲಾಗಿ ಅರಸು ಅವರು ಕರ್ನಾಟಕದ ಭ್ರಷ್ಟ ಮುಖ್ಯಮಂತ್ರಿ ಎಂಬಂತೆ ಮಾಧ್ಯಮಗಳು ಪ್ರತಿಬಿಂಬಿಸುತ್ತಿದ್ದವು.. ವರ್ಗಾವಣೆಯಲ್ಲಿ ಹಣ ಪ್ರಮುಖ ಪಾತ್ರ ಒಹಿಸುವ ಬಗ್ಗೆ, ಅರಸು ಅವರ ಹೆಂಡತಿಯೇ ಈ ವ್ಯವಹಾರ ಮಾಡುವ ಬಗ್ಗೆ ಸಾಕಷ್ಟು ವದಂತಿಗಳು ಸಾಮಾಜಿಕ, ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಹರಡಿದ್ದವು..ಇದಾದ ಮೇಲೆ ಅರಸು ಅವರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಸುವುದಕ್ಕೆ ಆಯೋಗದ ನೇಮಕವೂ ಆಯಿತು. ಆಗೆಲ್ಲ ಅರಸು ಕರ್ನಾಟಕ ರಾಜಕಾರಣದ ಒಬ್ಬ ವಿಲನ್ ನಂತೆ ಪ್ರತಿಬಿಂಬಿತರಾಗಿದ್ದರು..
ಇದಕ್ಕೆ ಇರಬಹುದಾದ ಕಾರಣಗಳು ಹಲವು. ಅರಸು ಅವರು ಜಾರಿಗೆ ತಂದ ಹಲವಾರಿ ಕ್ರಾಂತಿಕಾರಿ ಯೋಜನೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿ ಮೇಲ್ವರ್ಗದ ಹಿಡಿತದಲ್ಲಿದ್ದ ಮಾಧ್ಯಮಕ್ಕೆ ಇರಲಿಲ್ಲ. ಹಾಗೆ ಅಂದಿನ ರಾಜಕಾರಣಕ್ಕೂ ಇರಲಿಲ್ಲ. ಇಂದಿರಾ ಗಾಂಧಿಯವರು ರೋಟಿ ಕಪಡಾ ಅವರ ಮಕಾನ್, ಗರೀಬಿ ಹಟಾವೋ ಯೋಜನೆಯನ್ನು ಜಾರಿಗೆ ತರುವವರೆಗೆ ಕಾಂಗ್ರೆಸ್ ಸಾಮಾಜಿಕ ನ್ಯಾಯ ಮತ್ತು ಸರ್ವರಿಗೂ ಸಮಬಾಳ್ವೆ ಎಂಬ ಕಲ್ಪನೆನ್ನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಕಾಂಗ್ರೆಸ್ಸಿನಲ್ಲಿದ್ದ ಬಹುತೇಕ ನಾಯಕರು ಮೇಲ್ವರ್ಗ ಮತ್ತು ಜಾತಿಗಳಿಂದ ಬಂದವರಾಗಿದ್ದರು. ಗಾಂಧಿಯ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ರಾಜಕೀಯಕ್ಕೆ ಬಂದ ಈ ನಾಯಕರು ಸಾಮಾಜಿಕ ನ್ಯಾಯವನ್ನು ಗಂಭೀರವಾಗಿ ತೆಗೆದುಕೊಂಡವರಾಗಿರಲಿಲ್ಲ. ಸ್ವಾತಂತ್ರ್ಯ ಬಂದ ಸಂಭ್ರಮದಲ್ಲೇ ರಾಜಕೀಯ ಮಾಡುತ್ತಿದ್ದ ಕಾಂಗ್ರೆಸ್ ನ ಈ ಬಹುಸಂಖ್ಯಾತ ಗಣ ನೆಹರೂವಾದಿಗಳಾಗಿದ್ದರು. ಇವರೆಲ್ಲ ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿಯ ಬಗ್ಗೆ ಮಾತನಾಡಬಲ್ಲವರಾಗಿದ್ದರು. ಒಂದೇ ಮಾತಿನಲ್ಲಿ ಹೇಳುವುದಾದರೆ ಇವರಿಗೆ ಅಂಬೇಡ್ಕರ್ ಪರಿಚಿತರಾಗಿರಲಿಲ್ಲ. ಅಂಬೇಡ್ಕರ್ ರನ್ನು ಅರ್ಥ ಮಾಡಿಕೊಳ್ಳುವುದು ಹಾಗಿರಲಿ, ಅವರಿಗೆ ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸುತ್ತಿರಲಿಲ್ಲ. ೧೯೬೯ ರಲ್ಲಿ ಕಾಂಗ್ರೆಸ್ ಇಬ್ಬಾಗವಾದಾಗ ಈ ಥರದ ನಾಯಕರು ಸಂಸ್ಥಾ ಕಾಂಗ್ರೆಸ್ ನಲ್ಲಿ ಉಳಿದರು. ಕಾಂಗ್ರೆಸ್ ಪಳೆಯುಳಿಕೆಗೆ ತಾವು ವಾರಸುದಾರರು ಎಂಬ ಭ್ರಮೆ ಈ ನಾಯಕರಿಗಿತ್ತು.. ರೆಡ್ಡಿ ಕಾಂಗ್ರೆಸ್ ಹೆಸರಿನಲ್ಲಿ ಒಂದಾಗಿದ್ದ ಈ ಗುಂಪು ಇಂದಿರಾ ಗಾಂಧಿ ಅವರ ಗರೀಭಿ ಹಟಾವೋ ಮತ್ತು ರೋಟಿ ಕಪಡಾ ಮಖಾನ್ ಘೋಷಣೆಯಲ್ಲಿ  ಕೊಚ್ಚಿ ಹೋದರು. ದೇಶದಲ್ಲಿ ಇಂದಿರಾ ಗಾಂಧಿಒ ಹೊಸ ರಾಜಕಾರಣವನ್ನು ಪ್ರಾರಂಭಿಸಿದರು. ಅದು ಕಾಂಗ್ರೆಸ್ ನಿರ್ಲಕ್ಷಿಸಿದ್ದ ಬಡವರು, ದೀನದಲಿತರು, ದುರ್ಬಲ ವರ್ಗದದವರ ಪರವಾದ ರಾಜಕಾರಣವಾಗಿತ್ತು.
ಆದರೆ ಮಾಧ್ಯಮ ರೆಡ್ಡಿ ಕಾಂಗ್ರೆಸ್ ಪರವಾಗಿತ್ತೇ ಹೊರತೂ ಇಂದಿರಾ ಗಾಂಧಿ ಅವರ ಪರವಾಗಿ ಇರಲಿಲ್ಲ. ಇಂದಿರಾ ಗಾಂಧಿ ಅವರ ಜೊತೆಗಿದ್ದ ದೇವರಾಜ್ ಅರಸು ಕರ್ನಾಟಕದಲ್ಲಿ ಹಿಂದುಳಿದ ವರ್ಗದವರ ಪರವಾಗಿ ಅಭೂತಪೂರ್ವ ಕೆಲಸ ಮಾಡಿದರು. ಲಿಂಗಾಯಿತರು, ಒಕ್ಕಲಿಗರು ಮತ್ತು ಬ್ರಾಹ್ಮಣ ರಾಜಕಾರಣಕ್ಕೆ ತೆರೆ ಎಳೆದರು..ಆಗಲೇ ಮಾಧ್ಯಮ ಸಂಪೂರ್ಣವಾಗಿ ಇಂದಿರಾ ಮತ್ತು ಅರಸು ವಿರೋಧಿ ನಿಲುಮೆಯನ್ನು ಇನ್ನಷ್ಟ್ಯು ಪ್ರಖರಗೊಳಿಸಿತು.. ಇಂದಿರಾ ಗಾಂಧಿ ಅವರ ವಿರೋಧಕ್ಕೆ ಆಂತರಿಕವಾಗಿ ಬೇರೆ ಕಾರಣಗಳಿದ್ದರೂ ೧೯೭೫ ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಇಂದಿರಾ ಗಾಂಧಿ ಅವರು ತಮ್ಮ ವಿರೋಧಿಗಳಿಗೆ ತಾತ್ವಿಕ ಆಯುಧವನ್ನು ತಾವೇ ಪ್ರಧಾನ ಮಾಡಿದರು. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಜಯ ಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಆಂದೋಳನ ಪ್ರಾರಂಭವಾಯಿತು..ಆಗ ದೇಶದ  ಪ್ರಜಾಪ್ರಭುತ್ವವನ್ನು ಪ್ರೀತಿಸುವವರೆಲ್ಲ ಈ ಆಂದೋಲನದಲ್ಲಿ ದುಮುಕಿದರು. ಇದರಿಂದ ಇಂದಿರಾ ಗಾಂಧಿ ಅವರ ಬಡವರ ಪರವಾದ ರಾಜಕಾರಣವನ್ನು ವಿರೋಧಿಸುತ್ತಿದ್ದ ಮನಸ್ಸುಗಳಿಗೆ ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೊಸ ಆಯುಧ ಸಿಕ್ಕಿಬಿಟ್ಟಿತು.  ಮಾಧ್ಯಮಗಳೂ ಈ ಆಯುಧವನ್ನೇ ಇಂದಿರಾ ಗಾಂಧಿ ಅವರ ವಿರುದ್ಧ ಬಳಸಿದವು.
ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಶ್ರೀಮತಿ ಇಂದಿರಾ ಗಾಂಧಿ ಕೇವಲ ತಮಗೆ ಮಾತ್ರ ಅನ್ಯಾಯ ಮಾಡಿಕೊಳ್ಳಲಿಲ್ಲ, ಕಾಂಗ್ರೆಸ್ ಗೆ ಮಾತ್ರ ಮರಣ ಶಾಸನ ಬರೆಯಲಿಲ್ಲ, ಬಡವರು ಮತ್ತು ಹಿಂದುಳಿದ ವರ್ಗಗಳ ಪರವಾದ ರಾಜಕಾರಣಕ್ಕೂ ಕೊಡಲಿ ಪೆಟ್ಟು ನೀಡಿದರು. ಬಡವರು ದಲಿತರು ಮತ್ತು ಹಿಂದುಳಿದ ವರ್ಗಗಳ ವಿರೋಧಿಗಳಿಗೆ ಹೊಸ ಅಸ್ತ್ರವನ್ನು ನೀಡಿ ಬಿಟ್ಟರು.
ಆ ಕಾಲದಲ್ಲಿ ಒಟ್ಟಾರೆ ಮಾಧ್ಯಮದ ಮನಸ್ಥಿತಿ, ಕೂಡ ಇಂದಿರಾ ಗಾಂಧಿ ವಿರುದ್ಧದ ಮನಸ್ಥಿತಿಯೇ ಆಗಿತ್ತು. ಆಗ ವಿದ್ಯಾರ್ಥಿಯಾಗಿದ್ದ ನನಗೂ ಇಂದಿರಾ ಗಾಂಧಿ ಅಂದರೆ ಖಳನಾಯಕಿ ಎಂದೇ ಅನ್ನಿಸುತ್ತಿತ್ತು. ಪತ್ರಿಕೆಗಳನ್ನು ಓದಿ ಬೆಳೆದ ನನಗೆ ಪ್ರಾರಂಭದಲ್ಲಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ರಾಜಕಾರಣಕ್ಕೆ ನೀಡಿದ ಬಡವರು ದಲಿತರ ಪರವಾಗಿ ನೀಡಿದ ಹೊಸ ಆಯಾಮ ಗಮನಕ್ಕೆ ಬಂದಿರಲಿಲ್ಲ. ಇಂದಿರಾ ಗಾಂಧಿ ಅಂದರೆ ಪ್ರಜಾಪ್ರಭುತ್ವ ವಿರೋಧಿ ಸರ್ವಾಧಿಕಾರಿ ಎಂದೇ ಅನ್ನಿಸುತ್ತಿತ್ತು.. ಆದರೆ ಕರ್ನಾಟಕದಲ್ಲಿ ದೇವರಾಜ್ ಅರಸು ಅವರು ತೆಗೆದುಕೊಂಡ ಕ್ರಾಂತಿ ಕಾರಿ ತೀರ್ಮಾನಗಳನ್ನು ತಿಳಿದುಕೊಳ್ಳುತ್ತ ಹೋದಹಾಗೆ ನನ್ನ ನಿಲುಮೆ ಬದಲಾಯಿತು.ಜನತಂತ್ರ ಕಗ್ಗೊಲೆ ಮಾಡಿದ ಇಂದಿರಾ ಗಾಂಧಿ ಕಾಂಗ್ರೆಸ್ ರಾಜಕಾರಣವನ್ನು ಇನ್ನೊಂದು ನೆಲೆಗೆ ಕೊಂಡೊಯ್ದರು ಎಂಬುದನ್ನು ನಾನು ಕಂಡುಕೊಂಡೆ. ಇಂದಿರಾ ಗಾಂಧಿ ಮತ್ತು ದೇವರಾಜ್ ಅರಸು ಅವರನ್ನು ಮಾಧ್ಯಮ ವಿರೋಧಿಸುವುದಕ್ಕೆ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕೆ ನಡೆಸುತ್ತಿರುವ ಯತ್ನ ಎಂದು ಕಂಡರೂ ಅದರ ಹಿಂದೆ ಅಡಗಿ ಕುಳಿತಿರುವ ಬೇರೆ ಬೇರೆ ಕಾರಣಗಳು ಅರ್ಥವಾಗತೊಡಗಿತು..ಇಂದಿರಾ ಕಾಂಗ್ರೆಸ್ ಯಾವಾಗ ದೀನ ದಲಿತರ ಬಗ್ಗೆ ಮಾತನಾಡತೊಡಗಿದಂತೆ ಮೇಲ್ಜಾತಿಯ ಜನ ಕಾಂಗ್ರೆಸ್ ನಿಂದ ದೂರ ಸರಿಯತೊಡಗಿದರು. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಇವರೆಲ್ಲ ಐಖ್ಯವಾದದ್ದು ಇತಿಹಾಸ.
ಕರ್ನಾಟಕದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾದವರು ರಾಮಕೃಷ್ಣ ಹೆಗಡೆ. ಆಗ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದವರು ಕ್ರಾಂತಿರಂಗದಿಂದ ಬಂದ ಎಸ್. ಬಂಗಾರಪ್ಪ..ಆದರೆ ಆಗಲೇ ಮಾಧ್ಯಮ ಹೆಗಡೆಯವರ ಪರವಾಗಿತ್ತು. ಹೆಗಡೆ ದೇವೇಗೌಡ ಅವರ ನಡುವೆ ರಾಜಕಿಯ ವೈಷಮ್ಯ ತಾರಕಕ್ಕೆ ಏರಿದಾಗಲೂ ಮಾಧ್ಯಮ ಹೆಗಡೆ ಅವರ ಬೆಂಬಲಕ್ಕೆ ನಿಂತಿತ್ತು.
ಕರ್ನಾಟಕದಲ್ಲಿ ಮಾಧ್ಯಮ ಬೆಂಬಲ ನೀಡಿದ ನಾಯಕರ ಪಟ್ಟಿಯನ್ನು ಮಾಡಬಹುದು.. ರಾಮಕೃಷ್ಣ ಹೆಗಡೆ, ಎಸ್. ಎಮ್. ಕೃಷ್ಣ, ವಿರೇಂದ್ರ ಪಾಟೀಲ್, ಬಿ.ಎಸ್. ಯಡಿಯೂರಪ್ಪ ಹೀಗೆ ಪಟ್ಟಿ ಮಾಡಬಹುದು. ಆದರೆ ಈ ಪಟ್ಟಿಯಲ್ಲಿ ನಿಖರವಾಗಿ ಹೆಸರಿಸಬಹುದಾದ ಇಬ್ಬರು ನಾಯಕರೆಂದರೆ ಹೆಗಡೆ ಮತ್ತು ಎಸ್. ಎಮ್. ಕೃಷ್ಣ ಮಾತ್ರ.. ಮಾಧ್ಯಮ ಇವರಿಬ್ಬರಿಗೆ ಯಾಕೆ ಬೆಂಬಲ ನೀಡುತ್ತ ಬಂತು ? ಈ ಪ್ರಶ್ನೆಯನ್ನು ಕೇವಲ ಜಾತಿ ಆಧಾರದಿಂದ ಮಾತ್ರ ನೋಡುವುದು ಸಾಧ್ಯವಿಲ್ಲ. ಹಾಗೆ ಇವರಿಬ್ಬರು ಕರ್ನಾಟಕ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳು ಎಂಬ ವಾದಕ್ಕೂ ಸಾಕ್ಷ್ಯ ಪುರಾವೆ ಇಲ್ಲ. ಎಸ್. ಎಮ್. ಕೃಷ್ಣ ದೇವೇಗೌಡ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು. ಹೀಗಿದ್ದರೂ ಕೃಷ್ಣ ಅವರನ್ನು ಬೆಂಬಲಿಸಿದ ಮಾಧ್ಯಮ ದೇವೇಗೌಡರನ್ನು ಬೆಂಬಲಿಸಲಿಲ್ಲ.
ಇನ್ನೊಂದೆಡೆ ವೀರಪ್ಪ ಮೊಯ್ಲಿ, ಎಸ್. ಬಂಗಾರಪ್ಪ ಅವರಿಗೆ ಮಾಧ್ಯಮ ಎಂದೂ ಬೆಂಬಲ ನೀಡಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಮಾಧ್ಯಮದ ಬೆಂಬಲ ಪಡೆಯುವಲ್ಲಿ ಯಶಸ್ವಿಯಾದರು. ಯಡಿಯೂರಪ್ಪ ತಾವೇ ಸೃಷ್ಟಿಸಿಕೊಂಡ ವಿವಾದಗಳಲ್ಲಿ ಸಿಲುಕಿಕೊಂಡು ಜೈಲಿಗೆ ಹೋಗಿ ಬಂದಿದ್ದರಿಂದ ಮಾಧ್ಯಮದ ಬೆಂಬಲ ಅವರಿಗೆ ಸಿಗದಂತಾಯಿತು. ಇನ್ನು ಜಗದೀಶ್ ಶೆಟ್ಟರ್, ಸದಾನಂದ ಗೌಡರಿಗೆ ಮಾಧ್ಯಮದ ಬೆಂಬಲ ಇತ್ತೋ ಇಲ್ಲವೋ ಎಂದು ಅರ್ಥ ಮಾಡಿಕೊಳ್ಳಲು ಕಾಲಾವಕಾಶವೇ ಇರಲಿಲ್ಲ. ಇವರಿಗಿಂತ ಮೊದಲು ಆರ್. ಗುಂಡೂರಾಯರಂತೂ ಮಾಧ್ಯಮಗಳ ಧಾಳಿಗೆ ಸಿಲುಕಿ ನಲುಗಿ ಹೋದರು. ಪತ್ರಕರ್ತರೆಲ್ಲ ಸಮುದ್ರಕ್ಕೆ ಹೋಗಿ ಬೀಳಲಿ ಎಂದು ಅವರು ಶಪಿಸುವಂತೂ ಆಯಿತು.
ಪ್ರಸಕ್ತ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಮಾಧ್ಯಮ ಬೆಂಬಲ ನೀಡುತ್ತಿಲ್ಲ.
ಇದೆನ್ನೆಲ್ಲ ಗಮನಿಸಿದ ಮೇಲೆ  ಮಾಧ್ಯಮಕ್ಕೆ ಯಾರು ಯಾಕೆ ಇಷ್ಟವಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಲು ಯತ್ನಿಸೋಣ..
ಕರ್ನಾಟಕದ ಸ್ವಾತಂತ್ರೋತ್ಸವದ ರಾಜಕಾರಣದಲ್ಲಿ ಕೇವಲ ಜಾತಿ ಆಧಾರದ ಮೇಲೆ ಮಾಧ್ಯಮ, ನಾಯಕರು ಮತ್ತು ಪಕ್ಷಕ್ಕೆ ಬೆಂಬಲ ನೀಡುತ್ತ ಬಂದಿದೆ ಎಂದು ಹೇಳಲು ಸಾಕ್ಷಾಧಾರಗಳಿಲ್ಲ. ಆದರೆ ಕೆಲವೊಂದು ವಿಶಿಷ್ಠ ಸಂದರ್ಭಗಳಲ್ಲಿ ಜಾತಿ ಕೂಡ ಪ್ರಮುಖ ಪಾತ್ರ ಒಹಿಸಿದರೂ ಅದೊಂದೇ ಕಾರಣವಲ್ಲ. ದೇವರಾಜ ಅರಸು ಅವರನ್ನು  ಮಾಧ್ಯಮ ವಿರೋಧಿಸಿದ್ದಕ್ಕೆ ಮಾಧ್ಯಮದ ಇಂದಿರಾ ವಿರೋಧಿ ಮನಸ್ಥಿತಿ  ಪ್ರಮುಖ ಕಾರಣವಾಗಿತ್ತು. ಮಾಧ್ಯಮದ ಇಂತಹ ಮನಸ್ಥಿತಿಗೆ ಈಗಾಗಲೇ ವಿವರಿಸಿರುವಂತೆ ಇಂದಿರಾ ಗಾಂಧಿ ಅವರ ಜನತಂತ್ರ ವಿರೋಧಿ ನಡವಳಿಕೆಯ ಜೊತೆಗೆ ಅವರು ಹೊಂದಿದ್ದ ಬಡವರ ಮತ್ತು ಹಿಂದುಳಿದ ವರ್ಗಗಳ ಪರವಾದ ನಿಲುಮೆಯೂ ಕಾರಣವಾಗಿತ್ತು ಎಂಬುದನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ.  ಇಂದಿರಾ ಗಾಂಧಿ ಮತ್ತು ಅವರ ಕಾಂಗ್ರೆಸ್ ಪಕ್ಷದ ಅಂದಿನ ಬಡವರ ಪರವಾದ ನೀತಿ ನಿಜವಾದ ಬದ್ಧತೆಯಿಂದ ಕೂಡಿತ್ತೇ ಅಥವಾ ಮತ ಬ್ಯಾಂಕ್ ರಾಜಕರಣ ಇದಾಗಿತ್ತೆ ಎಂಬುದನ್ನು ಸ್ಪಷ್ಟವಾಗಿ ಹೇಳುವುದು ಕಷ್ಟ.ಆದರೆ ಇಂದಿರಾ ಗಾಂಧಿ ಅವರು ಘೋಷಿಸಿದ ಬಹುತೇಕ ಕಾರ್ಯಕ್ರಮಗಳು ಬಡವರಪರವಾಗಿದ್ದವು. ಇದೇ ಮಾಧ್ಯಮ ಇಂದಿರಾ ಗಾಂಧಿ ಅವರನ್ನು ವಿರೋಧಿಸುವುದಕ್ಕೆ ಕಾರಣವಾಗಿರಬಹುದೆ ? ಇನ್ನು ದೇವರಾಜ್ ಅರಸು. ಅವರು ಕರ್ನಾಟಕದ ರಾಜಕಾರಣದಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮತ್ತು ಸಾಮಾಜಿಕ ಪ್ರಾತಿನಿಧ್ಯ ನೀಡಿದವರು. ಇದೇ ಅರಸು ಅವರನ್ನು ಮಾಧ್ಯಮ ವಿರೋಧಿಸುವುದಕ್ಕೆ ಪ್ರಮುಖ ಕಾರಣ ಇರಬಹುದು.
ಈಗ ಕರ್ನಾಟಕದಲ್ಲಿ ಮಾಧ್ಯಮದ ಬೆಂಬಲ ಪಡೆದವರಲ್ಲಿ ಪ್ರಮುಖರೆಂದರೆ ರಾಮಕೃಷ್ಣ ಹೆಗಡೆ ಮತ್ತು ಎಸ್.ಎಮ್. ಕೃಷ್ಣ. ಇವರಿಬ್ಬರೂ ಕ್ರಮವಾಗಿ ಬ್ರಾಹ್ಮಣ ಮತ್ತು ಒಕ್ಕಲಿಗೆ ಜಾತಿಗೆ ಸೇರಿದ್ದರೂ ಇಬ್ಬರ ನಡುವೆ ಹಲವು ರೀತಿಯ ಸಾಮ್ಯತೆಗಳಿವೆ. ಇವರಿಬ್ಬರು ಕರ್ನಾಟಕದ ಉಳಿದೆಲ್ಲ ರಾಜಕಾರಣಿಗಳಿಗಿಂತ ಹೆಚ್ಚಾಗಿ ತಮ್ಮ ಇಮೇಜ್ ಬಗ್ಗೆ ತಲೆ ಕೆಡಿಸಿಕೊಂಡವರು. ಭ್ರಷ್ಟರಾದರೂ ಎಲ್ಲಿಯೂ ಸಿಕ್ಕಿ ಹಾಕಿಕೊಳ್ಳದೇ ನಯ ನಾಜೂಕಿನಿಂದ ರಾಜಕಾರಣ ಮಾಡಿದವರು. ಹೆಗಡೆ  ರೇವಜೀತು, ಬಾಟ್ಲಿಂಗ್ ಮೊದಲಾದ ಹಗರಣಗಳಲ್ಲಿ ಸಿಲುಕಿಕೊಂಡು ತಮ್ಮ ಇಮೇಜಿಗೆ ದಕ್ಕೆ ತಂದುಕೊಂಡರೂ ಕೃಷ್ಣ ಮಾತ್ರ ಎಲ್ಲಿಯೂ ಸಿಕ್ಕಿ ಹಾಕಿಕೊಳ್ಳಲಿಲ್ಲ.
ಇದನ್ನೆಲ್ಲ ಗಮನಿಸಿದರೆ ಮಾಧ್ಯಮಕ್ಕೆ ಒಬ್ಬ ರಾಜಕಾರಣಿ ಯಾಕೆ ಇಷ್ಟವಾಗುತ್ತಾನೆ ಎಂಬುದಕ್ಕೆ ಕೆಲವು ಅಂಶಗಳನ್ನು ಪಟ್ಟಿ ಮಾಡಬಹುದು.
೧. ಜಾತಿ.
೨. ವರ್ಗ
೩. ಮಾಧ್ಯಮ ನಿರ್ವಹಣೆ
೪. ಇಮೇಜ್
ಮಾಧ್ಯಮಕ್ಕೆ ಯಾರು ಇಷ್ಟವಾಗುತ್ತಾರೆ ಎಂಬುದಕ್ಕೆ ಜಾತಿ ಪ್ರಮುಖ ಕಾರಣ ಎಂಬುದು ನಿಜ. ಆದರೆ ಇದ್ಏ ಅಂತಿಮ ಅಲ್ಲ. ಜಾತಿಯೊಂದೇ ಅಂತಿಮ ವಾಗಿದ್ದರೆ, ಒಂದೇ ಸಮುದಾಯಕ್ಕೆ ಸೇರಿದ ಎಸ್. ಎಮ್. ಕೃಷ್ಣ ಮತ್ತು ದೇವೇಗೌಡ ಇಬ್ಬರಿಗೂ ಸಮಾನ ಪ್ರಾತಿನಿಧ್ಯ ಮಾಧ್ಯಮದಲ್ಲಿ ದೊರಕಬೇಕಿತ್ತು. ಆದರೆ ಹಾಗಾಗಿಲ್ಲ.  ಜಾತಿಯ ಜೊತೆಗೆ ಅವರು ಯಾವ ವರ್ಗವನ್ನು ಪ್ರತಿನಿಧಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ ಎಂಬುದನ್ನು ನಾವು ಗಮನಿಸಬಹುದು. ಇದಕ್ಕೆ ದೇವರಾಜ್ ಅರಸು ಅವರನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಬಹುದು. ಅರಸು ಅವರನ್ನು ವಿರೋಧಿಸುವುದಕ್ಕೆ ಅವರ ಜಾತಿ ಕಾರಣವಾಗಿರಲಿಲ್ಲ, ಅವರು ಯಾವ ವರ್ಗವನ್ನು ಪ್ರತಿನಿಧಿಸುತ್ತಿರುವುದು ಕಾರಣವಾಗಿತ್ತು.
ಇನ್ನು ಮಾಧ್ಯಮ ನಿರ್ವಹಣೆ. ಮಾಧ್ಯಮ ನಿರ್ವಹಣೆ ಎಂದರೆ ಅದು ಕೇವಲ ಪೇಡ್ ನ್ಯೂಸ್ ಗೆ ಮಾತ್ರ ಸಂಬಂಧಿಸಿದ್ದಲ್ಲ..ಮಾಧ್ಯಮದ ಜೊತೆ ಒಬ್ಬ ರಾಜಕಾರಣಿ ಯಾವ ರೀತಿಯ ಸಂಬಂಧ ಇಟ್ಟುಕೊಳ್ಳುತ್ತಾನೆ ಎಂಬುದು ಮುಖ್ಯ. ಆತ ಯಾವ ರೀತಿ ಮಾತನಾಡುತ್ತಾನೆ, ಅವನು ಪತ್ರಿಕಾಗೋಷ್ಟಿ ಕರೆದಾಗ ಹೇಗೆ ಹ್ಯಾಂಡಲ್ ಮಾಡುತ್ತಾನೆ, ಅವನ ಹೇಳಿಕೆಯಲ್ಲಿ ಸುದ್ದಿ ಇರುತ್ತದೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಾಗುತ್ತದೆ..
ಈ ವಾದದ ನಡುವೆಯೂ ಜಾತಿ ಪ್ರಮುಖ ಪಾತ್ರ ಒಹಿಸುತ್ತದೆ ಎಂಬುದಕ್ಕೆ ನಮ್ಮ ಎದುರು ಉದಾಹರಣೆಗಳಿವೆ. ಇತ್ತೀಚಿಗೆ ಅತ್ಯಾಚಾರ ಆರೋಪಕ್ಕೆ ಸಿಲುಕಿರುವ ರಾಘವೇಶ್ವರ ಸ್ವಾಮಿಯ ಪ್ರಕರಣವನ್ನೇ ತೆಗೆದುಕೊಳ್ಳಬಹುದು. ಅತ್ಯಾಚಾರದ ಎರಡು ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ರಾಘವೇಶ್ವರ ಸ್ವಾಮಿ ಮಾಧ್ಯಮದ ಪಾಲಿಗೆ ಶ್ರೀಗಳು..ಆದರೆ ಅತ್ಯಾಚಾರ  ಆರೋಪ ಎದುರಿಸುತ್ತಿರುವ ನಿತ್ಯಾನಂದ ಸ್ವಾಮಿ, ಕಾಮಿ ಸ್ವಾಮಿ, ರಾಘವೇಶ್ವರ ಸ್ವಾಮಿಯನ್ನು ಕಾಮಿ ಸ್ವಾಮಿ ಎಂದು ಕರೆಯುವ ಧೈರ್ಯ ಯಾಕೆ ಮಾಧ್ಯಮಕ್ಕಿಲ್ಲ ? ಮಾಧ್ಯಮಕ್ಕೆ ಧೈರ್ಯ ಇಲ್ಲವೋ ಆಥವಾ ಈ ಸ್ವಾಮಿಯ ಜಾತಿ ಬಾಂಧವರು ಅವರ ರಕ್ಷಣೆಗೆ ನಿಂತಿದ್ದಾರೆಯೆ ? ಈ ಬಗ್ಗೆ ಅನುಮಾನ ಬೇಡ. ಇದು ಕಾಕತಾಳಿಯವೂ ಅಲ್ಲ. ರಾಜ್ಯದ ಮೂರು ಪ್ರಮುಖ ಪತ್ರಿಕೆಗಳಲ್ಲಿ ರಾಘವೇಶ್ವರ ಸ್ವಾಮಿಯ ಜಾತಿ ಬಾಂಧವರು ಪ್ರಮುಖ ಸ್ಥಾನದಲ್ಲಿದ್ದಾರೆ. ಅವರಿಗೆ ರಾಘವೇಶ್ವರ ಸ್ವಾಮಿ ಕಾಮಿ ಸ್ವಾಮಿಯಲ್ಲ, ಅವರು ಶ್ರೀಗಳು.

ಇದೆಲ್ಲವನ್ನು ಗಮನಿಸಿದ ಮೇಲೆ ರಾಜ್ಯದ ಮಾಧ್ಯದ ಮನಸ್ಸು ಹೇಗೆ ಕೆಲಸ ಮಾಡುತ್ತಿದೆ ಎಂಬ ಬಗ್ಗೆ ಕೆಲವೊಂದು ಸುಳಿವುಗಳು ದೊರಕುತ್ತವೆ. ರಾಜ್ಯದ ಮಾಧ್ಯಮಕ್ಕೆ ಒಬ್ಬ ನಾಯಕ ಯಾವ ವರ್ಗ ಮತ್ತು ಸಮುದಾಯವನ್ನು ಪ್ರತಿನಿಧಿಸುತ್ತಾನೆ ಎಂಬುದು ಮೊದಲ ಆಧ್ಯತೆ. ಈ ಸಮುದಾಯದ ಪ್ರಾತಿನಿಧ್ಯ ಒಳಗಡೆ ಇರುವುದು ಜಾತಿಯೇ. ಇದಾದ ಮೇಲೆ ಮಾಧ್ಯಮ ನಿರ್ವಹಣೆ ಮತ್ತು ಇಮೇಜ್ ಪ್ರಮುಖ ಪಾತ್ರ ಒಹಿಸುತ್ತವೆ..

AMERICA SUPPORTS PAK#Shashidharbhat#Sudditv#Karnatakapolitics

ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...