Monday, September 28, 2015

ಭಗವಾನ್, ಭಗವಾನರ ಬಗ್ಗೆ ಮಾತನಾಡಿ ಸಾಧಿಸಿದ್ದಾದರೂ ಏನು ?

ಕನ್ನಡದ ವಿವಾದಾತ್ಮಕ ಬರೆಹಗಾರ ಕೆ.ಎಸ್. ಬಗವಾನ್ ರಾಮ ಮತ್ತು ಕೃಷ್ಣ ಇಬ್ಬರನ್ನು ಸದ್ಯಕ್ಕಂತೂ ಕೈ ಬಿಡುವ ಸಾಧ್ಯತೆ ಕಾಣುತ್ತಿಲ್ಲ.  ನಿನ್ನೆ ತಾನೆ ಅವರು ರಾಮ ಯಾವುದೊ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಎಂಬ ತಮ್ಮ ಸಂಶೋಧನೆಯನ್ನು ಬಹಿರಂಗಪಡಿಸಿದ್ದಾರೆ.ಇದರ ಅಗತ್ಯ ಇತ್ತಾ ? ಈ ಮಾತುಗಳ ಮೂಲಕ ಅವರು ಸಮಾಜದಲ್ಲಿ ವೈಚಾರಿಕ ಪ್ರಜ್ನೆಯನ್ನು ಬೆಳೆಸುತ್ತಿದ್ದಾರಾ ? ಅಥವಾ ರಾಮ ಕೃಷ್ಣರನ್ನು ನಂಬುವವರು ಒಗ್ಗಟ್ಟಾಗುವ ಮೂಲಕ ಅವರು ಇನ್ನಷ್ಟು ಶಕ್ತಿ ಪಡೆಯುವಂತೆ ಮಾಡುತ್ತಿದ್ದಾರಾ ?
 ಈ ಮಾತುಗಳನ್ನು  ಹೇಳುವಾಗ ನಾನು ಒಂದು ಅಂಶವನ್ನು ಸ್ಪಷ್ಟಪಡಿಸುತ್ತೇನೆ. ನಾನು ಅವರ ಅಭಿಪ್ರಾಯ ಸ್ವಾತಂತ್ರ್ಯದ ಪರವಾಗಿದ್ದೇನೆ. ಅವರಿಗೆ ಈ ಮಾತುಗಳನ್ನು ಹೇಳುವ ಹಕ್ಕಿದೆ. ಹಾಗೆ ಅಭಿಪ್ರಾಯ ಸ್ವಾತಂತ್ರ್ಯ ಕಸಿದುಕೊಳ್ಳುವ ರೀತಿಯಲ್ಲಿ ಬೆದರಿಕೆ ಒಡ್ಡುತ್ತಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಕಾಲದಲ್ಲಿ ಅಭಿಪ್ರಾಯ ಸ್ವಾತಂತ್ರ್ಯದ ಪರವಾಗಿರುವ ಇರುವವರು ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ನಾನು ಬಯಸುತ್ತೇನೆ.
ಅದರೆ ಅವರು ವ್ಯಕ್ತಪಡಿಸಿದ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳ ಬಗ್ಗೆ ನನ್ನ ತಕರಾರಿದೆ. ಅವರು ಎಲ್ಲಿ ತಪ್ಪಿದ್ದಾರೆ, ತಪ್ಪುತ್ತಿದ್ದಾರೆ ಎಂಬುದನ್ನು ನಾನು ಗಮನಕ್ಕೆ ತರಲು ಬಯಸುತ್ತೇನೆ.
ಭಗವಾನ್ ಅವರ  ಮಾತನ್ನು ನಾನು ಮೌನದಿಂದ ಕೇಳಿಸಿಕೊಂಡು ಬರುತ್ತಿದ್ದೇನೆ. ಅವರ ಮಾತುಗಳನ್ನು ಕೇಳಿಸಿಕೊಳ್ಳುವಾಗ ನನಗೆ ಮೂಡಿದ ಮೂಡುತ್ತಿರುವ ಪ್ರಶ್ನೆಗಳು ಹಲವು. ಆ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಲು ಇಲ್ಲಿ ಯತ್ನಿಸುತ್ತಿದ್ದೇನೆ.. ನನಗೆ ಮೂಡಿದ ಮೊದಲ ಪ್ರಶ್ನೆ ಎಂದರೆ ರಾಮಾಯಣ ಮತ್ತು ಮಹಾಭಾರತವನ್ನು ಭಗವಾನ್ ಅವರು ಕಾವ್ಯವನ್ನಾಗಿ ಸ್ವೀಕರಿಸಿದ್ದಾರೆಯೇ ಅಥವಾ ಇದು ನೈಜ ಘಟನೆ ಎಂದು ನಂಬಿದ್ದಾರೆಯೆ ? ರಾಮಾಯಣ ಮತ್ತು ಮಹಾಭಾರತ ಕಾವ್ಯವಾಗಿದ್ದರೆ, ಅದನ್ನು ಕಾವ್ಯವನ್ನಾಗಿ ಮಾತ್ರ ಆಸ್ವಾಧಿಸಬೇಕು. ಕಾವ್ಯದಲ್ಲಿ ಬರುವ ಪಾತ್ರಗಳನ್ನು ನೈಜ ಪಾತ್ರಗಳನ್ನಾಗಿ ನೋಡದೇ ಕಾವ್ಯದಲ್ಲಿ ಸೃಷ್ಟಿಸಲಾದ ಪಾತ್ರಗಳನ್ನಾಗಿ ನೋಡಬೇಕು. ಕಾವ್ಯ ನೈಜ ಪಾತ್ರದಿಂದ ಪ್ರೇರಣೆ ಪಡೆದಿದ್ದರೂ ಅಲ್ಲಿ ಬರುವ ಪಾತ್ರಗಳನ್ನು ನೈಜ ಪಾತ್ರಗಳನ್ನಾಗಿ ನೋಡುವುದು ಸರಿಯಲ್ಲ ಹಾಗೆ ಮಾಡಿದರೆ ಅದು ಕವಿಗೆ ಅಥವಾ ಕೃತಿಕಾರನಿಗೆ ಮಾಡುವ ಅಪಚಾರವಾಗುತ್ತದೆ.
ಮೊದಲು ರಾಮಾಯಣವನ್ನು ನೋಡೋಣ. ಈ ಕೃತಿಯನ್ನು ಬರೆದವನು ವಾಲ್ಮೀಕಿ. ಆತ ಬರೆದದ್ದು ಯಾವಾಗ ಎನ್ನುವ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ. ಹೀಗಿದ್ದರೂ ಇದೊಂದು ಸಾವಿರಾರು ವರ್ಷಗಳ ಹಿಂದಿನ ಕೃತಿ ಎಂದು ಹೇಳಲು ಯಾವ ಸಾಕ್ಷ್ಯದ ಅವಶ್ಯಕತೆಯೂ ಇಲ್ಲ. ಸಾವಿರಾರು ವರ್ಷಗಳ ಹಿಂದೆ ರಚಿತವಾದ ಒಂದು ಕೃತಿಯನ್ನು ವಿಮರ್ಶಿಸುವಾಗ ಯಾವ ಮಾನದಂಡವನ್ನು ಬಳಸಬೇಕು ? ಒಂದು ಕೃತಿ ಸಾಮಾಜಿಕ ಮೌಲ್ಯವನ್ನು ಎತ್ತಿ ಹಿಡಿಯುತ್ತಿದೆಯೇ ಇಲ್ಲವೇ ಎಂಬ ನಿರ್ಧಾರಕ್ಕೆ ಬರುವುದು ಹೇಗೆ ? ಇವತ್ತಿನ ಸಾಮಾಜಿಕ ಮೌಲ್ಯಗಳನ್ನು ಪುರಾತಸ ಗ್ರಂಥವೂ ಎತ್ತಿ ಹಿಡಿಯಬೇಕು ಎಂದು ಹೇಳಿದರೆ ಅದು ಸರಿಯೆ ? ಹೀಗಾದರೆ ಅದು ಪಕ್ಷಪಾತಿ ಧೋರಣೆ ಆಗುವುದಿಲ್ಲವೆ ?
ಮೊದಲು ರಾಮಾಯಣವನ್ನು ಕಾವ್ಯ ಎಂದು ನೋಡೋಣ. ಈ ಕಾವ್ಯವನ್ನು ರಚಿಸಿದ ವಾಲ್ಮೀಕಿ ಅಂದಿನ ಸಾಮಾಜಿಕ ಸ್ಥಿತಿ ಗತಿ, ಅಂದಿನ ಮೌಲ್ಯಗಳನ್ನು ಮೂಲವಾಗಿಟ್ಟುಕೊಂಡೇ ಕಾವ್ಯ ರಚಿಸಿರುತ್ತಾನೆ. ಸಾವಿರಾರು ವರ್ಷಗಳ ಹಿಂದಿನ ಸಮಾಜ, ಅಂದಿನ ಸಾಮಾಜಿಕ ಮತ್ತು ರಾಜಕಿಯ ವ್ಯವಸ್ಥೆ ಮಾತ್ರ ಅವನ ಕಾವ್ಯದಲ್ಲಿ ಪ್ರತಿಬಿಂಬಿತವಾಗಲು ಸಾಧ್ಯ. ಹೀಗಾಗಿ ಯಾವುದೇ ಕಾವ್ಯ ಅಥವಾ ಬೇರೆ ಯಾವುದೇ ಕೃತಿಯನ್ನು ವಿಮರ್ಶಿಸುವಾಗ ಆ ಕಾವ್ಯ ರಚಿತವಾದ ಕಾಲ ಮತ್ತು ಸಂದರ್ಭವನ್ನು ಗಣನೆಗೆ ತೆಗೆದುಕೊಳ್ಳಲೇ ಬೇಕು. ರಾಮಾಯಣ ಮತ್ತು ಮಹಾಭಾರತವನ್ನು ವಿಮರ್ಶಿಸುವವರು ಮೊದಲ ಕೃತಿಯ ಕಾಲ ಮತ್ತು ಸಂದರ್ಭವನ್ನು ಗಣನೆಗೆ ತೆಗೆದುಕೊಳ್ಳಲೇ ಬೇಕು. ಉದಾಹರಣೆಗೆ ನಮ್ಮ ಬಹುತೇಕ ಹಳೆಗನ್ನಡ ಸಾಹಿತಿಗಳೂ ರಾಜಾಶ್ರಯ ಪಡೆದು ರಾಜರ ಗುಣಗಾನ ಮಾಡಿದ್ದಾರೆ. ಇವರು ಕಾವ್ಯ ಶಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕೇ ಅಥವಾ ಅವರು ರಾಜರ ಭಟ್ಟಿಂಗಿಗಳಾಗಿದ್ದರು ಎಂಬುದನ್ನೇ ? ಹಾಗೆ ಕಾವ್ಯದ ಕಾಲ ಮತ್ತು ಸಂದರ್ಭವನ್ನು  ಬಿಟ್ಟು ಈವತ್ತಿನ ಕಾಲ ಮತ್ತು ಸಂದರ್ಭವನ್ನು ಗಣನೆಗೆ ತೆಗೆದುಕೊಂಡು ಅದನ್ನೇ ಕೃತಿ ವಿಮರ್ಷೆಯ ಮಾನದಂಡವನ್ನಾಗಿ ತೆಗೆದುಕೊಂಡರೆ ಅದು ತಪ್ಪಾಗುತ್ತದೆ..ಉದಾಹರಣೆಗೆ ರಾಮ ಭಾರತೀಯ ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕಿತ್ತು ಎಂದು ಟೀಕಿಸಿದರೆ ಅದು ಮೂರ್ಖತನವಾಗುತ್ತದೆ. ಈಗ ಭಗವಾನ ಮಾಡುತ್ತಿರುವುದು ಅದೇ ಎಂದು ನನಗೆ ಅನ್ನಿಸುತ್ತದೆ.
ವಾಲ್ಮೀಕಿ ರಾಮಾಯಣ ಬರೆದ ಕಾಲ ಈಗಿನಂತೆ ಇರಲಿಲ್ಲ. ಆಗ  ವರ್ಣಾಶ್ರಮ ಧರ್ಮ ಜಾರಿಯಲ್ಲಿತ್ತು. ಮಹಾರಾಜನಾದವನು ಬ್ರಾಹ್ಮಣರನ್ನು ಅತಿ ಗೌರವದಿಂದ ನೋಡುತ್ತಿದ್ದ. ಅವರ ಸಲಹೆ ಸೂಚನೆಯನ್ನು ಪಡೆಯುತ್ತಿದ್ದ.. ಕ್ಷತ್ರಿಯರು ಬ್ರಾಹ್ಮಣರ ಸಲಹೆಯಂತೆ ನಡೆದುಕೊಳ್ಳುತ್ತಿದ್ದರು. ವೈಶ್ಯರು ವ್ಯಾಪಾರ ಮಾಡುತ್ತಿದ್ದರು. ಶೂದ್ರರ ಸ್ಥಿತಿ ದಯನೀಯವಾಗಿತ್ತು. ಇದು ಇತಿಹಾಸ. ಈ ಇತಿಹಾಸವೇ ವಾಲ್ಮೀಕಿ ರಾಮಾಯಣ ಎಂಬ ಕೃತಿಯಲ್ಲಿ ಕಾಣುತ್ತಿದೆ..ಆದ್ದರಿಂದ ಇತಿಹಾಸವನ್ನು ಇತಿಹಾಸವನ್ನಾಗಿ ಮಾತ್ರ ಸ್ವೀಕರಿಸಬೇಕು.
ಇನ್ನು ವರ್ಣಾಶ್ರಮ ಧರ್ಮ ಮಾನವೀಯತೆಗೆ ದೊಡ್ಡ ಕೊಡಲಿ ಪೆಟ್ಟು ನೀಡಿದೆ ಎಂಬುದು ನಮಗೆ ಅರ್ಥವಾಗಿದೆ. ಆದ್ದರಿಂದ ನಾವು ವರ್ಣಾಶ್ರಮ ಧರ್ಮವನ್ನು ವಿರೋಧಿಸುತ್ತೇವೆ. ಇವತ್ತು ವರ್ಣಾಶ್ರಮದ ಧರ್ಮವನ್ನು ಬೆಂಬಲಿಸಿದರೆ ಅವರು ಮಾನವೀಯತೆಯ ವಿರೋಧಿಗಳು.. ಜಾತಿ, ಕೋಮುವಾದವನ್ನು ಇವತ್ತು ಎಲ್ಲರೂ ವಿರೋಧಿಸಲೇಬೇಕು. ಆದರೆ ರಾಮಾಯಣ ಬರೆದ ಕಾಲದಲ್ಲಿ ಈ ಅರಿವು ಸಮಾಜದಲ್ಲಿ ಇರಲಿಲ್ಲ. ಮಾನವ ಜನಾಂಗ ಇಷ್ಟು ಬೆಳೆದಿರಲಿಲ್ಲ. ಸಮಾಜದಲ್ಲಿ ಬ್ರಾಹ್ಮಣರನ್ನು ಅರಸರು ಪ್ರಶ್ನಿಸುವಂತಿರಲಿಲ್ಲ. ಇದನ್ನು ಅರ್ಥ ಮಾಡಿಕೊಳ್ಳದೇ ರಾಮ ವರ್ಣಾಶ್ರಮದ ಧರ್ಮದ ಪರವಾಗಿದ್ದ ಎಂದು ಟೀಕಿಸಿವುದು ಹುಚ್ಚತನವಲ್ಲವೆ ? ಹಾಗೆ ಕೃತಿಯೊಂದರಲ್ಲಿ ಬರುವ ಪಾತ್ರಗಳನ್ನು ನೈಜ ಪಾತ್ರಗಳೆಂದು ನಂಬುವುದೂ ಸತ್ಯಕ್ಕೆ ಮಾಡುವ ಅಪಚಾರವಲ್ಲವೆ ?
ರಾಮಯಣ ಮತ್ತು ಮಹಾಭಾರತವನ್ನು ವಿಶ್ವದ ಮಹಾ ಗ್ರಂಥಗಳ ಪಟ್ಟಿಗೆ ಸೇರಿಸಲಾಗಿದೆ. ಇದನ್ನು ಭಗವಾನ್ ಅವರು ಒಪ್ಪಿಕೊಳ್ಳದಿರಬಹುದು. ಆದರೆ ವಿಶ್ವದ ಮಹಾ ಗ್ರಂಥಗಳ ಸಾಲಿನಲ್ಲಿ ರಾಮಾಯಣ ಮತ್ತು ಮಹಾಭಾರತ ಇರುವುದು ನಿಜ. ಈಗ ವಿಶ್ವದ ಉಳಿದ ಮಹಾ ಗ್ರಂಥಗಳತ್ತ ಒಮ್ಮೆ ಗಮನಹರಿಸೋಣ.ಕ್ರಿಸ್ತಪೂರ್ವ ೯ ನೆಯ ಶತಮಾನದಲ್ಲಿ ಹೂಮರ್ ಬರೆದ ಈಲಿಯಡ್ ವಿಶ್ವದ ಮಹಾ ಕಾವ್ಯಗಳ ಪಟ್ಟಿಯಲ್ಲಿ  ಮೊದಲ ಸ್ಥಾನದಲ್ಲಿದೆ.. ಇದು ಗ್ರೀಕರ ಕಥೆ. ಹಾಗೆ ಓಡೆಸ್ಸಿ, ಪೆರಡೈಸ್ ಲಾಸ್ಟ್ ಕೂಡ ವಿಶ್ವದ ಮಹಾ ಕಾವ್ಯಗಳ ಪಟ್ಟಿಯಲ್ಲಿ ಬರುತ್ತವೆ. ಈ ಕಾವ್ಯಗಳಲ್ಲಿನ ಪಾತ್ರಗಳು ಆ ಕಾಲದ ಸಾಮಾಜಿಕ ರಾಜಕೀಯ ಬದುಕು, ಆಗಿನ ಮೌಲ್ಯ ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ವರ್ತಿಸುತ್ತವೆ.  ಇವುಗಳನ್ನು ವಿಮರ್ಶಿಸುವಾಗ ಇಂದಿನ ಸಾಮಾಜಿಕ ಮತ್ತು ಮೌಲಿಕ ಅಂಶಗಳನ್ನು ಮಾನದಂಡವಾಗಿ ಬಳಸಿ ವಿಮರ್ಶಿಸಿದರೆ ಏನಾಗುತ್ತದೆ ? ಇದು ಭಗವಾನರಿಗೆ ಗೊತ್ತಿಲ್ಲವೆ ?
ವಿಚಾರವಾದಿ ಭಗವಾನರು ರಾಮಾಯಣ ಮತ್ತು ಮಹಾಭಾರತವನ್ನು ಕಾವ್ಯ ಎಂದು ಪರಿಗಣಿಸದೇ ನೈಜ ಘಟನೆ ಎಂದು ಪರಿಗಣಿಸಿದ್ದಾರೆ ಎಂದುಕೊಳ್ಳೋಣ. ಇದೊಂದು ನೈಜ ಘಟನೆ ಎಂದು ಪರಿಗಣಿಸಿದರೆ ನಾವು ಅದನ್ನು ಬೇರೆ ರೀತಿ ನೋಡಬೇಕಾಗುತ್ತದೆ. ರಾಮಾಯಣ ಮತ್ತು ಮಹಾಭಾರತ  ನೈಜ ಘಟನೆ ಎಂದಾದರೆ ಅದು ನಮಗೆ ತಿಳಿದಿದ್ದು ಹೇಗೆ ? ರಾಮಾಯಣ ಬರೆದ ವಾಲ್ಮೀಕಿ ಮತ್ತು ಮಹಾಭಾರತ ಬರೆದ ವ್ಯಾಸರ ಮೂಲಕ., ಅಲ್ಲವೆ ? ಅಂದರೆ ಒಂದು ನೈಜ ಘಟನೆ ನಮಗೆ ತಲುಪಿದ್ದು ಕಾವ್ಯದ ಮೂಲಕವೇ ಹೊರತೂ ನಾವ್ಯಾರು ನೋಡಿದ್ದಲ್ಲ, ಹಾಗೆ ಐತಿಹಾಸಿಕ ದಾಖಲೆ ಕೂಡ ನಮ್ಮ ಬಳಿ ಇಲ್ಲ.  ಅಂದರೆ ಇತಿಹಾಸದ ಘಟನೆಯೊಂದು ಕಾವ್ಯದ ಮೂಲಕ ನಮ್ಮನ್ನು ತಲುಪಿದೆ. ಅದು ಇತಿಹಾಸದ ದಾಖಲೆಯಾಗಿ ನಮ್ಮನ್ನು ತಲುಪಿಲ್ಲ. ಯಾಕೆಂದರೆ ವಾಲ್ಮೀಕಿಯಾಗಲೀ, ವ್ಯಾಸರಾಗಲಿ ಎಡಪಂಥೀಯ ಇತಿಹಾಸಕಾರರೂ ಅಲ್ಲ, ಬಲಪಂಥೀಯ ಇತಿಹಾಸಕಾರರೂ ಅಲ್ಲ. ಒಂದು ಅರ್ಥದಲ್ಲಿ ಅವರಿಬ್ಬರೂ ಕವಿಗಳು..ಜೊತೆಗೆ ಕವಿಗಳ ಹೃದಯ, ಬುದ್ದಿಗಿಂತ  ಹೆಚ್ಚು ಕೆಲಸ ಮಾಡುವುದರಿಂದ ಅವರು ವಿಚಾರವಾದಿಯೂ ಆಗಿರುವುದಿಲ್ಲ. ಜೊತೆಗೆ ಒಬ್ಬ ಕವಿ ಕಾವ್ಯವೊಂದನ್ನು ರಚಿಸುವಾಗ ಅವನದೇ ಆದ ಸ್ವಾತಂತ್ರ್ಯ ಅವನಿಗೆ ಇರುತ್ತದೆ. ಅಲ್ಲಿನ ಪಾತ್ರಗಳೂ ನೈಜ ಪಾತ್ರಗಳು ಆಗಿದ್ದರೂ ಕವಿ ಆ ಪಾತ್ರಗಳಿಗೆ ರಕ್ತ ಮಾಂಸ ಸೇರಿಸುತ್ತಾನೆ. ಜೀವ ತುಂಬುತ್ತಾನೆ. ಜೀವಂತ ಪಾತ್ರದ ಅಸ್ಥಿಪಂಜರ ಮಾತ್ರ ಅಲ್ಲಿರುತ್ತದೆ..ರಾಮಾಯಣ ಮತ್ತು ಮಹಾಭಾರತ ನೈಜ ಘಟನೆಯನ್ನು ಆಧರಿಸಿದ್ದರೂ ಅದು ನೈಜ ಘಟನೆಯ ರನ್ನಿಂಗ್ ಕಾಮೆಂಟರಿ ಆಗಿರಲು ಸಾಧ್ಯವಿಲ್ಲ. ಅಂದರೆ ನಾವು ವಾಲ್ಮೀಕಿ ಮತ್ತು ವ್ಯಾಸರ ಮೂಲಕ ತಿಳಿದುಕೊಂಡ ರಾಮ ಮತ್ತು ಕೃಷ್ಣರ ಕಥೆ ಸಂಪೂರ್ಣವಾಗಿ ಅವರು ವಿವರಿಸಿದಂತೆ ನೂರಕ್ಕೆ ನೂರು ಸತ್ಯವಾಗಿರಲು ಸಾಧ್ಯವಿಲ್ಲ. ಅಲ್ಲಲ್ಲಿ ಪಾತ್ರ ಮತ್ತು ಘಟನೆಗಳನ್ನು ಮೀರಿ ಕವಿ ವಿಜೄಂಬಿಸಿರುವ ಸಾಧ್ಯತೆ ಇದೆ.
ರಾಮಾಯಣ ಮತ್ತು ಮಹಾಭಾರತ ಮಹಾ ಕಾವ್ಯದ ಎಲ್ಲ ಲಕ್ಷಣಗಳನ್ನು ಹೊಂದಿರುವುದರಿಂದ ಬಹುಬೇಗ ಭಾರತೀಯರ ಮನಸ್ಸನ್ನು ಸೆಳೆದವು. ಹೀಗಾಗಿ ರಾಮ ಮತ್ತು ಕೃಷ್ಣರು ದೇವರಾಗುವ ಪ್ರಕ್ರಿಯೆ ಪ್ರಾರಂಭವಾಯಿತು.. ಇದು ಮೂರು ಸಾವಿರ ವರ್ಷಗಳಲ್ಲಿ ಬೇರೆ ಬೇರೆ ರೀತಿ ಭಾರತೀಯರ ಮನಸುಗಳಲ್ಲಿ ಬೆಳೆದು ಮರವಾಯಿತು.
ಭಾರತೀಯರು ದೇವರನ್ನು ಸೃಷ್ಟಿಸುವಲ್ಲಿ ಮಹಾ ನಿಸ್ಸೀಮರು. ಒಬ್ಬ ಸಾಮಾನ್ಯನನ್ನು ದೇವರನ್ನಾಗಿಸುವ ಈ ಪ್ರಕ್ರೀಯೆ ಭಾರತೀಯ ಸಮಾಜಕ್ಕೆ ಮಾತ್ರ ಸೀಮಿತವಾಗಿದೆ ಎಂದು ನಾನು ಹೇಳುವುದಿಲ್ಲ. ಮನುಷ್ಯ ದೇವರನ್ನು ಸೃಷ್ಟಿಸುವ ಬೆಳೆಸುವ ಕೆಲಸ ಮಾನವ ಇತಿಹಾಸದಲ್ಲಿ ನಡೆಯುತ್ತಲೇ ಬಂದಿದೆ. ಆದರೆ ಲಕ್ಷಾಂತರ ದೇವರುಗಳನ್ನು ಹುಟ್ಟಿಸಿರುವ ಭಾರತೀಯರು ಈ ಕೆಲಸದಲ್ಲಿ ನಿಸ್ಸೀಮರು ಎಂಬುದು ಮಾತ್ರ ನಿಜ. ಚಲನ ಚಿತ್ರ ನಟರ ಕಟ್ ಔಟ್ ಹಾಕಿ ಹಾಲಿನ ಅಭಿಷೇಕ ಮಾಡುವ ನಾವು ಅವರಿಗಾಗಿ ದೇವಾಲಯ ಕಟ್ಟಿದ ಉದಾಹರಣೆಗಳು ನಮ್ಮಲ್ಲಿರುವುದು ಈ ಮಾತಿನ ಸತ್ಯಾಸತ್ಯತೆಯನ್ನು ಸಾಬೀತು ಪಡಿಸುತ್ತದೆ..
ರಾಮ ಮತ್ತು ಕೃಷ್ಣರನ್ನು ದೇವರನ್ನಾಗಿಸುವ ಪ್ರಕ್ರಿಯೆ ಯಾವಾಗ ಪ್ರಾರಂಭವಾಯಿತು ಎಂದು ಹೇಳಲು ಸಾಧ್ಯವಿಲ್ಲದಿದ್ದರೂ ಅದು ಸತತವಾಗಿ ನಡೆಯುತ್ತಲೇ ಬಂದ ಪ್ರಕ್ರಿಯೆ. ರಾಮಾಯಣ ಮತ್ತು ಮಹಾಭಾರತ ನಡೆದ ಘಟನೆ ಎಂದು ಪರಿಗಣಿಸಿದರೆ, ಈ ಘಟನೆ ನಡೆದ ನೂರಾರು ವರ್ಷಗಳ ನಂತರ ದೇವರನ್ನಾಗಿಸುವ ಪ್ರಕ್ರಿಯೆ ಪ್ರಾರಂಭವಾಗಿರಬಹುದು.. ಅದು ಹಾಗೆ ಮುಂದುವರಿಯುತ್ತಲೇ ಇಂದಿನ ದೇವರು ಬೃಹತ್ ಆಗಿ ನಮ್ಮೆದುರು ನಿಂತಿರಬಹುದು. ಈ ವಿಶ್ಲೇಷಣೆಯಿಂದ ಅರ್ಥವಾಗುವುದೆಂದರೆ ರಾಮ ಮತ್ತು ಕೃಷ್ಣರ ನೈಜ ಪಾತ್ರಕ್ಕೂ ಅವರನ್ನು ದೇವರನ್ನಾಗಿ ಸ್ವೀಕರಿಸಿದ ಇಂದಿನ ಪಾತ್ರಕ್ಕೂ ತುಂಬಾ ವ್ಯತ್ಯಾಸ ಇರಲೇಬೇಕು. ಅಂದರೆ ರಾಮ ಮತ್ತು ಕೃಷ್ಣರು ನಿಜವಾಗಿ ಬದುಕಿದ್ದವರೇ ಆಗಿದ್ದರೆ ಅವರು ನಾವು ಈಗ ದೇವರಾಗಿ ನಂಬಿರುವಂತೆ ಇದ್ದಿರಲು ಸಾಧ್ಯವೇ ಇಲ್ಲ. ಯಾಕೆಂದರೆ ಇವರಿಬ್ಬರನ್ನೂ ದೇವರನ್ನಾಗಿಸುವ ಪ್ರಕ್ರಿಯೆಯಲ್ಲಿ ಕಾಲ ಒಹಿಸಿದ ಪಾತ್ರ ತುಂಬಾ ಮುಖ್ಯವಾಗಿರುತ್ತದೆ. ಕಾಲ ಪಾತ್ರದ ಗುಣಧರ್ಮವನ್ನು ಬದಲಿಸುತ್ತದೆ. ರಾಮ ಮತ್ತು ಕೃಷ್ಣ ದೇವರಾಗಿ ಜನ ಮನ್ನಿಸುವ ನಡುವಿನ ಕಾಲದಲ್ಲಿ ಇವರಿಬ್ಬರೂ ಸಾಕಷ್ಟು ಬದಲಾದ ಸಾಧ್ಯತೆ ತುಂಬಾ ಇದೆ..ಈ ಬದಲಾವಣೆ ಮೂಲ ರಾಮ ಕೃಷ್ಣರಿಗೂ ಈಗ ಜನ ನಂಬಿರುವ ರಾಮ ಕೃಷ್ಣರಿಗೂ ಅಜಗಜಾಂತರ ವ್ಯತ್ಯಾಸ ಇರಲೇಬೇಕು.
ಈಗಿನ ರಾಮ ಮತ್ತು ಕೃಷ್ಣರ ದೈವಿಕ ಹೊಸ ಮೂರ್ತಿ ಭಾರತೀಯ ಸಮಾಜದಲ್ಲಿ ಸೃಷ್ಟಿಯಾಗಿದೆ. ಈ ಮೂರ್ತಿಗಳಿಗೆ ಜನರಿಂದಾಗಿ ದೈವಿಕ ಶಕ್ತಿ ಬಂದಿದೆ. ಈಗ ದೇವರಾಗಿರುವ ನಂಬಿಕೆಯ ಮೂರ್ತಿಯಾಗಿರುವ ರಾಮ ಕೃಷ್ಣರನ್ನು ಎಂದೂ ಬದುಕಿದ ರಾಮ ಕೃಷ್ಣರಿಗೆ ಹೋಲಿಸಿ ಮಾತನಾಡುವುದೇ ಅಜ್ನಾನ. ಯಾಕೆಂದರೆ ಮೂಲ ಮಹಾಭಾರತ ರಾಮಾಯಣಯದಲ್ಲಿ ಬರುವ ರಾಮ ಮತ್ತು ಕೃಷ್ಣರು ಈಗ ದೇವರಾಗಿರುವ ರಾಮ ಕೃಷ್ಣರ ಮೂಲ ಮಾತ್ರ. ಅವರು ಬೀಜ ಮಾತ್ರ. ಈಗ ಜನಮಾನಸದಲ್ಲಿರುವ ರಾಮ ಕೃಷ್ಣರು ದೇವರನ್ನು ಬಯಸುವ ಭಾರತೀಯರ ನಂಬಿಕೆಯ ಫಲ.. ಹೀಗೆ ದೇವರ ಮೂರ್ತಿಯಾದವರ ಮೂರ್ತಿ ಭಂಜನೆ ಅಂಥ ಸುಲಭವಾದುದಲ್ಲ.
ನನಗೆ ದೇವರನ್ನಾಗಿಸುವ ಪ್ರಕ್ರಿಯೆ ಬಗ್ಗೆ ಹೆಚ್ಚು ಕುತೂಹಲ. ಇದು ಪುರಾಣಗಳಿಂದ ವರ್ತಮಾನದ ವರೆಗೆ ಮುಂದುವರಿದುಕೊಂಡು ಬಂದಿದೆ. ಪ್ರತಿ ಕಾಲದಲ್ಲಿಯೂ ಮನುಷ್ಯರಾಗಿದ್ದವರೇ ದೇವರಾಗಿದ್ದಾರೆ ಎಂದು ವಾದಿಸಲು ಬೇಕಾದಷ್ಟು ಸಾಕ್ಷ್ಯಗಳನ್ನು ನೀಡಬಹುದು. ರಾಮ ಮತ್ತು ಕೃಷ್ಣ ಮನುಷ್ಯರಾಗಿದ್ದವರೇ ಎಂಬ ಬಗ್ಗೆ ಅನುಮಾನಪಡಬೇಕಾಗಿಲ್ಲ. ಹಾಗೆ ಆಧುನಿಕ ಭಾರತದಲ್ಲಿ ಇಂತಹ ಹಲವು ಉದಾಹರಣೆಗಳನ್ನು ನೀಡಬಹುದು. ಬುದ್ಧ, ಬಸವ, ಅಂಬೇಡ್ಕರ್ ಎಲ್ಲ ಈಗ ದೇವರೋ ಮೂರ್ತಿಗಳೋ ಆಗಿಬಿಟ್ಟಿದ್ದಾರೆ. ಒಮ್ಮೆ ಒಬ್ಬ ಮನುಷ್ಯ, ದೇವರೋ ಮೂರ್ತಿಯೋ ಆದ ಮೇಲೆ ಅವರ ಬಗ್ಗೆ ಮಾತನಾಡುವ ಚರ್ಚಿಸುವ, ವಿಶ್ಲೇಷಿಸುವ ಅಧಿಕಾರವನ್ನು ಜನ ಸಾಮಾನ್ಯರಿಂದ ಕಸಿದುಕೊಳ್ಳಲಾಗುತ್ತದೆ. ಹಲವು ದೇವರು ದೇವರ ಪ್ರತಿನಿಧಿಗಳು, ದೇವರಾದ ಮೇಲೆ ಅವರ ಬಗ್ಗೆ ಮಾತನಾಡದಂತೆ ಭಕ್ತರು ಬಾಯಿ ಕಟ್ಟುತ್ತಾರೆ. ಬೆದರಿಕೆ ಒಡ್ಡುತ್ತಾರೆ. ಮೂರ್ತಿ ಭಂಜನೆಯನ್ನು ಮೂರ್ತಿಪೂಜಕರು, ಮೂರ್ತಿಯನ್ನು ಪ್ರತಿಷ್ಠಾಪಿಸಿದವರು ವಿರೋಧಿಸುತ್ತಾರೆ.
ಭಗವಾನ್ ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಅವರು ಯಾವ ರಾಮ ಮತ್ತು ಕೃಷ್ಣನ ಬಗ್ಗೆ ಮಾತನಾಡುತ್ತಿದ್ದಾರೋ ಆತ ಜನ ಈಗ ತಮ್ಮ ಮನಸ್ಸಿನಲ್ಲಿ ಸ್ಥಾಪಿಸಿಕೊಂಡಿರುವ ರಾಮ ಕೃಷ್ಣರಲ್ಲ. ದೇವರಾಗಿ ಬೆಳೆದ ರಾಮಕೃಷ್ಣರಲ್ಲ. ಒಬ್ಬ ಮನುಷ್ಯ ದೇವರಾದ ಮೇಲೆ ಸಮಾಜ ಅವರ ಜೊತೆ ನಿಲ್ಲುತ್ತದೆ. ಮೂರ್ತಿ ಪೂಜಕರು ಬಾಡೀ ಗಾರ್ಡ್ ಅಂತ್ರೆ ಪಕ್ಕ ನಿಂತಿರುತ್ತಾರೆ. ಈಗ ಈ ಸಮಾಜ ದೇವರು ಎಂದು ಪರಿಗಣಿಸಿರುವ ರಾಮಕೃಷ್ಣರ ಪಕ್ಕಇಂತಹ ಬಾಡಿ ಗಾರ್ಡ್ ಗಳಿದ್ದಾರೆ.  ಈ ವ್ಯತ್ಯಾಸ ಭಗವಾನರಿಗೆ ಅರ್ಥವಾದಂತಿಲ್ಲ. ಅವರು ವಾಲ್ಮೀಕಿ ರಾಮಾಯಣದಲ್ಲಿ ಇರುವ ರಾಮ ಮತ್ತು ಜನ ಮಾನಸದಲ್ಲಿ ದೇವರಾಗಿ ಬೆಳೆದು ನಿಂತ ರಾಮನ ನಡುವಿನ ವ್ಯತ್ಯಾಸವನ್ನು ತಿಳಿದುಕೊಂಡಿಲ್ಲ. ವಾಲ್ಮೀಕಿ ರಾಮನ ಬಗ್ಗೆ ಮಾತನಾಡುತ್ತ ಜನ ಮಾನಸದ ರಾಮನ ತಂಟೆಗೆ ಹೋಗಿದ್ದಾರೆ, ಕಲ್ಲು ಹೊಡೆದಿದ್ದಾರೆ.
ಈ ರೀತಿ ಸೂಕ್ಷ್ಮ ಆಲೋಚನೆ ಚಿಂತನೆ ಇಲ್ಲದೇ, ವ್ಯತ್ಯಾಸ ತಿಳೀಯದೆ ಮಾಡಿದ ತಪ್ಪಿನ ಪರಿಣಾಮ ಏನು ? ಜನ ಮಾನಸದಲ್ಲಿ ದೇವರಾದ ರಾಮನ ತಂಟೆಗೆ ಹೋಗುವ ಮೂಲಕ ಅವರ ಜೇನು ಹುಟ್ಟಿಗೆ ಕಲ್ಲು ಹೊಡೆದಿದ್ದಾರೆ.ಜೇನು ಹುಟ್ಟಿಗೆ ಕಲ್ಲು ಹೊಡೆದು ಜೇನಿನ ಧಾಳಿಗೆ ಒಳಗಾಗಿದ್ದಾರೆ.  ಮೂರ್ತಿ ಭಂಜನೆಗೆ ಮೊದಲು ಮೂರ್ತಿಯ ಶಕ್ತಿ ಮತ್ತು ಪರಿಣಾಮದ ಬಗ್ಗೆಯೂ ಅವರು ಆಲೋಚಿಸಿದಂತಿಲ್ಲ. ಇದರ ಜೊತೆಗೆ ಇನ್ನೊಂದು ಬಹುಮುಖ್ಯ ಪ್ರಶ್ನೆ ಎಂದರೆ ಭಗವಾನ್ ಅವರು ಈ ರೀತಿ ರಾಮ ಮತ್ತು ಕೃಷ್ಣರನ್ನು ಟೀಕಿಸುವುದರಿಂದ ಸಾಧಿಸಿದ್ದೇನು ? ರಾಮ ಕೆಲವು ವರ್ಷಗಳ ನಂತರ ಇಹಲೋಕ ಯಾತ್ರೆ ಮುಗಿಸಿದ ಎಂಬುದು ಸತ್ಯ. ಅದನ್ನು ಬಿಟ್ಟು ಆತ ಹೇಗೆ ಸತ್ತ ಎಂಬುದನ್ನು ಸಂಷೋಧನೆ ಮಾಡಿದ್ದರಿಂದ ಆಗುವ ಲಾಭ ಏನು ?
ಸಾಧಾರಣವಾಗಿ ಮೂರ್ತಿ ಸ್ಥಾಪಿಸುವವರು ಬಹುಸಂಖ್ಯಾತರು. ಅವರ ಬಲ ಹೆಚ್ಚು. ಮೂರ್ತಿ ಭಂಜಕರ ಬಲ ತುಂಬಾ ಕಡಿಮೆ. ಮೂರ್ತಿ ಭಂಜಕರ ಬಗ್ಗೆ ಸಮಾಜದ ಸಹಾನುಭೂತಿ ಕೂಡ ಇರುವುದಿಲ್ಲ . ಮೂರ್ತಿ ಭಂಜನೆಗೆ ಕೆಲವರು ಸಿದ್ಧವಾದರೆ, ಮೂರ್ತಿಯನ್ನು ಕಾಯುವ ಬಹುಸಂಖ್ಯಾತರು ತಮ್ಮ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನೆಲ್ಲ ಮರೆತು ಮೂರ್ತಿ ರಕ್ಷಣೆಗೆ ಒಂದಾಗುತ್ತಾರೆ.. ಹೀಗೆ ಒಂದಾದವರ ಬಲ ಇನ್ನಷ್ಟು ಹೆಚ್ಚುತ್ತದೆ. ಅವರನ್ನು ಸೋಲಿಸುವುದು ಇನ್ನಷ್ಟು ಕಷ್ಟವಾಗುತ್ತದೆ.ಈಗ ವಾಲ್ಮೀಕಿ ರಾಮನಗಿಂತ ಸಾವಿರ ಪಟ್ಟು ಬೆಳೆದು ಜನ ಮಾನಸದಲ್ಲಿ ನಿಂತ ರಾಮಕೃಷ್ಣರು ಮತ್ತು ಅವರ ಕಾವಲು ಕಾಯುತ್ತಿರುವ ಭಕ್ತರು ತುಂಬಾ ಬಲಶಾಲಿಗಳಾಗಿದ್ದಾರೆ, ಈ ಬಲ ಬಂದಿದ್ದೂ ಸಹ ನಂಬಿಕೆಯಿಂದ.
ನಂಬಿಕೆಯ ಶಕ್ತಿ ಅಪನಂಬಿಕೆಗೆ ಇರುವುದಿಲ್ಲ. ಹೀಗಾಗಿ ರಾಮನನನ್ನು ತಮ್ಮ ಮನಸ್ಸಿನಲ್ಲಿ ಪ್ರತಿಷ್ಠಾಪಿಸಿಕೊಂಡವರಿಗೆ ಇರುವ ಶಕ್ತ್ರಿ ನಂಬದ ಭಗವಾನ್ ಅವರಿಗೆ ಇರುವುದು ಕಷ್ಟ.

1 comment:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...