Monday, October 20, 2008

ಎಲ್ಲರೂ ಹುಚ್ಚರೆ.............

ಸಾರಿಗೆ ಸಚಿವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು !
ಇದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಆರ್. ವಿ. ದೇಶಪಾಂಡೆ ನೀಡಿದ ಹೇಳಿಕೆ. ಈ ಹೇಳಿಕೆಯನ್ನು ನೀಡುವುದಕ್ಕೆ ಕಾರಣಗಳೇನೇ ಇರಲಿ, ಇಂತಹ ಹೇಳಿಕೆ ನೀಡುವ ಸ್ಥಿತಿಯಲ್ಲಿ ರಾಜಕಾರಣ ಇದೆ ಎಂಬುದು ದುಃಖದ ವಿಷಯ. ದೇಶಪಾಂಡೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ತಕ್ಷಣ ಅವರ ಧ್ವನಿ ಬದಲಾಗಿದೆ. ಮಾತಿನಲ್ಲಿ ಗತ್ತು ಕಾಣಿಸಿಕೊಳ್ಳುತ್ತಿದೆ. ಯಾರನ್ನೂ ಎದುರು ಹಾಕಿಕೊಳ್ಳದೇ ಹೊಂದಾಣಿಕೆಯ ರಾಜಕಾರಣ ಮಾಡುತ್ತ ಬಂದವರು ಈಗ ಬದಲಾಗಿದ್ದಾರೆ. ಪ್ರಾಯಶಃ ಅಧಿಕಾರ ತಂದು ಕೊಡುವ ಅಹಂಕಾರ ಇದು.
ಈ ಸಂದರ್ಭದಲ್ಲಿ ನಾವು ಗಾಂಧೀಜಿಯವರನ್ನು ನೆನಪು ಮಾಡಿಕೊಳ್ಲಬೇಕು. ಗಾಂಧಿ ಹೇಳಿದಂತೆ ಇಡೀ ದೇಶ ಕೇಳುತ್ತಿತ್ತು. ಈಗ ಅಸ್ಥಿಪಂಜರವಾಗಿರುವ ಕಾಂಗ್ರೆಸ್ ಅಂದು ಗಾಂಧೀಜಿಯವರ ಒಂದು ಕರೆಗೆ ಮೈಕೊಡ್ಇ ಎದ್ದು ಬಿಡುತ್ತಿತ್ತು. ಗಾಂಧೀಜಿಯವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ನೆಹರೂ ಕೂಡ ಗಾಂಧೀಜಿಯವರಿಗೆ ಹೆದರುತ್ತಿದ್ದರು. ತಮ್ಮ ಎಲ್ಲ ರಂಗು ರಂಗಿನ ಬದುಕನ್ನು ಗಾಂಧೀಜಿಯವರಿಂದ ಮುಚ್ಚಿಡಲು ಯತ್ನ ನಡೆಸುತ್ತಿದ್ದರು. ಗಾಂಧೀಜಿಯವರಿಗೆ ತಾವು ನಾಯಕ ಎಂಬ ಅಹಂಮಿಕೆ ಇರಲಿಲ್ಲ. ಆದರೆ ಹಠ ಇತ್ತು. ಗಾಂಧೀಜಿಯವರ ಇಂತಹ ವ್ಯಕ್ತಿತ್ವ ಕಾಂಗ್ರೆಸ್ ಪಕ್ಷದ ಇತರ ನಾಯಕರ ಅಹಂಮಿಕೆಗೆ ಕಡಿವಾಣ ಹಾಕುತ್ತಿತ್ತು. ಎಲ್ಲ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಮೀರಿ, ತಾತ್ವಿಕ ರಾಜಕಾರಣದಲ್ಲಿ ಒಂದಾಗಿಸುವ ಶಕ್ತಿ ಗಾಂಧೀಜಿಯವರಿಗೆ ಇತ್ತು. ಗಾಂಧಿ ಎಂಬ ಹಠ ಮಾರಿ ಅಜ್ಜ ಒಂದು ಸತ್ಯಾಗ್ರಹದ ಬೆದರಿಕೆಯಿಂದ ಎಲ್ಲರನ್ನೂ ಬಗ್ಗು ಬಡಿಯಬಲ್ಲವರಾಗಿದ್ದರು. ಎಲ್ಲರು ಮಾತು ಕೇಳುವಂತೆ ಮಾಡಬಲ್ಲವರಾಗಿದ್ದರು.
ಗಾಂಧೀಜಿ ನಿಧನರಾದ ಮೇಲೆ ಕಾಂಗ್ರೆಸ್ ರೂಪ ಬದಲಾಯಿತು. ನೆಹರೂ ಅವರ ಟೋಪಿ ಮಿಂಚತೊಡಗಿತು. ನೆಹರೂ ಶರ್ಟ್ ಕಾಂಗ್ರೆಸ್ ಪಕ್ಷದ ಎಲ್ಲ ಹುಳುಕುಗಳಿಗೆ, ಸಿಂಬಾಲ್ ಆಯಿತು. ಆಗಲೇ ಈ ಪಕ್ಷ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿತ್ತು.
ಇಂತಹ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಜೀವ ತುಂಬುವಂತೆ ಮಾಡಿದವರು ಶ್ರೀಮತಿ ಇಂದಿರಾ ಗಾಂಧಿ. ತನ್ನ ತಂದೆಯ ಗರಡಿಯಲ್ಲೇ ಬೆಳೆದ ಇಂದಿರಾ ಗಾಂಧಿ ಅವರಿಗೆ ಗಾಂಧೀಜಿ ಬಾಲ್ಯದ ನೆನಪು ಮಾತ್ರ. ಅವರಿಗೆ ಗಾಂಧೀ ಪ್ರಣೀತ ಆರ್ಥಿಕ ನೀತಿಯಾಗಲಿ, ಅವರ ಸತ್ಯ ಮತ್ತು ಅಹಿಂಸೆಯ ಬೋಧನೆಯಾಗಲಿ ನಗೆಪಾಟಲಿನ ವಿಷಯವಾಗಿತ್ತು. ನೆಹರೂ ಅವರು ಕುಡಿಯಾದ ಇಂದಿರಾ ಒಬ್ಬ ಒಳ್ಲೆಯ ಸೆಲ್ಸಮನ್. ಅವರು ಕಾಂಗ್ರೆಸ್ ಪಕ್ಷವನ್ನು ಚುನಾವಣಾ ರಾಜಕೀಯದಲ್ಲಿ ಒಂದುಅತ್ಯುತ್ತಮ ಪ್ರೊಡಕ್ಟ್ ಆಗಿ ಬದಲಿಸಿಬಿಟ್ಟರು. ಹಾಗೆ ಜನರಲ್ಲಿ ಕನಸುಗಳನ್ನು ಬಿತ್ತಿ ಅಧಿಕಾರವನ್ನು ಗಟ್ಟಿಯಾಗಿ ಹಿಡಿದುಕೊಂಡರು.
ಶ್ರೀಮತಿ ಇಂದಿರಾ ಗಾಂಧಿ ಅವರ ನಂತರ ಬಂದ ಗಾಂಧಿಗಳಿಗೆ ಈ ಸೆಲ್ಸಮನ್ ಶಿಪ್ ಕೂಡ ಇರಲಿಲ್ಲ. ಗಾಂಧಿಯನ್ನು ಉದ್ದೇಶಪೂರ್ವಕವಾಗಿ ಮರೆತ ಕಾಂಗ್ರೆಸ್ಗೆ ಈಗ ಆತ್ಮ ಇಲ್ಲ. ಇದು ಕೇವಲ ಅಸ್ಥಿಪಂಜರ ಮಾತ್ರ. ಈ ಅಸ್ಥಿಪಂಜರವನ್ನು ಹಿಡಿದುಕೊಂಡು ಭೂತ ನೃತ್ಯ ಮಾಡುವ ನಾಯಕರ ಪಡೆ ಇದೆ. ಇವರಿಗೆ ಯಾವ ವಿಚಾರದಲ್ಲಿಯೂ ಸ್ಪಷ್ಟತೆ ಇಲ್ಲ. ಸೈದ್ಧಾಂತಿಕ ನೆಲಗಟ್ಟೂ ಇಲ್ಲ.
ಗಾಂಧೀಜಿಯವರನ್ನು ಟೀಕಿಸಲು ನೂರು ಕಾರಣಗಳು ಇರಬಹುದು. ಆದರೆ ಗಾಂಧೀಜಿಯವರನ್ನು ಮೆಚ್ಚಿಕೊಳ್ಳಲು ಸಾವಿರ ಕಾರಣಗಳಿವೆ. ಒಂದು ದೇಶದ ಆತ್ಮವೇ ಆಗಿದ್ದ ಗಾಂಧಿ ಇಂದಿಗೂ ಒಂದು ವಿಸ್ಮಯ. ಆದರೆ ಇತ್ತೀಚಿನ ಗಾಂಧಿಗಳನ್ನು ನೋಡಿ. ಇವರು ದೇಶವನ್ನು ತಿಳಿದುಕೊಳ್ಳಲು ಡಿಸ್ಕವರ್ ಮಾಡುತ್ತಾರೆ. ತಮ್ಮ ಭಟ್ಟಂಗಿಗಳ ಜೊತೆ ಊರು ಸುತ್ತುತ್ತಾರೆ. ಒಬ್ಬ ರಾಜಕಾರಣಿಯಾದವನಿಗೆ ದೇಶವನ್ನು ತಿಳಿದುಕೊಳ್ಲುವುದು ಪ್ರತಿ ನಿಮಿಷದ ಕೆಲಸವಾಗಬೇಕು. ಯಾವುದೋ ಪ್ರವಾಸದ ಮೂಲಕ ದೇಶವನ್ನು ತಿಳಿದುಕೊಳ್ಳುವುದಲ್ಲ.
ಈಗ ಮೊದಲ ವಿಚಾರಕ್ಕೆ ಬರುತ್ತೇನೆ. ಸಚಿವ ಅಶೋಕ್ ಹುಚ್ಚಾಸ್ಪತ್ರೆ ಸೇರುವ ಸ್ಥಿತಿಯಲ್ಲಿ ಇದ್ದಾರೋ ಇಲ್ಲವೋ ನನಗೆ ತಿಳಿಯದು. ನನಗೆ ಅನ್ನಿಸುವ ಹಾಗೆ ಎಲ್ಲ ರಾಜಕಾರಣಿಗಳು ಹುಚ್ಚಾಸ್ಪತ್ರೆ ಸೇರಿದರೆ ಒಳ್ಳೆಯದು ಎಂದು ಮಾತ್ರ ನಾನು ಹೇಳಬಲ್ಲೆ. ಆದರೆ ಇವರು ಅವರನ್ನು ಹುಚ್ಚ ಅನ್ನುತ್ತಾರೆ, ಅವರು ಇವರನ್ನು ಹುಚ್ಚ ಅನ್ನುತ್ತಾರೆ. ಇದರಿಂದ ನಮಗಾಗುವ ಸತ್ಯ ದರ್ಶನ ಎಂದರೆ ಇವರೆಲ್ಲರೂ ಹುಚ್ಚರು ಎಂದು ಮಾತ್ರ. ಇಂತಹ ಹುಚ್ಚರು ನಮ್ಮ ರಾಜಕಾರಣಿಗಳು ಎಂಬ ಬೇಸರ ಮಾತ್ರ ನಮ್ಮದು.

5 comments:

ಪ್ರಿಯಾ ಕೆರ್ವಾಶೆ said...

ಇತ್ತೀಚೆಗೆ ನೀನಾಸಂ ಕ್ಯಾಂಪ್‌ನಲ್ಲಿದ್ದಾಗ ಗಾಂಧೀಜಿ ಅವರ ಮರಿ ಮಗ ತುಷಾರ್‍ ಗಾಂಧಿ ‘let`s kill gandhi' ಕೃತಿಯ ಬಗೆ ಹೇಳ್ತಾ ಇದ್ರು. ನಮ್ಮ ರಾಜಕಾರಣಿಗಳು ಅದರತ್ತ ಒಮ್ಮೆ ಕಣ್ಣು ಹಾಯಿಸಿದ್ದರೆ ಚೆನ್ನಾಗಿತ್ತು. ಗಾಂಧಿಯನ್ನು ಮತ್ತೆ ಮತ್ತೆ ಕೊಲೆ ಮಾಡುವುದು ಸ್ಪಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತಿತ್ತು. ಲೇಖನ ತುಂಬ ಹರಿತವಿದೆ.

ಮಹೇಶ್ ಪುಚ್ಚಪ್ಪಾಡಿ said...

ಸರ್ ಎಲ್ಲೆಗೋ ಹೋಗಿ ಇಲ್ಲಿಗೆ ಬಂದೆ.
ಗಾಂಧೀಜಿ ಮತ್ತು ಆ ಬಗ್ಗೆ ಮಾತನಾಡುತ್ತಾ ಹಿಂದಿನ ದಿನಗಳ ಮೆಲುಕು ಹಾಕುವ ಅಜ್ಜಂದಿರು ಇಂದಿನ ರಾಜಕಾರಣಿಗಳ ಬಗ್ಗೆ ತೀರಾ ಕೆಟ್ಟದಾದ "ಸಭ್ಯ " ಮಾತುಗಳಿಂದ ವರ್ಣಿಸುತ್ತಾರೆ.ನನಗೂ ಗಾಂಧಿ ಜಯಂತಿಯಂದು ಒಬ್ಬರು ವೃದ್ಧರು ವಿವರಿಸಿದ್ದರು ಅರ್ಧ ಗಂಟೆಯಷ್ಟು ಕಾಲ... ನಿಜಕ್ಕೂ ಹುಚ್ಚಾಸ್ಪತ್ರೆಯೇ ಸರಿ.. ಅವರಿಗೆ...

c said...
This comment has been removed by the author.
Kumara Raitha said...
This comment has been removed by the author.
Kumara Raitha said...

ದೇಶಪಾಂಡೆ ಮಾತನ್ನು ನೆಪವಾಗಿಟ್ಟುಕೊಂಡು ಕಾಂಗ್ರೇಸ್ ಕುರಿತು ನೀವು ಮಾಡಿರುವ ವಿಶ್ಲೇಷಣೆ ಅರ್ಥಪೂರ್ಣ.
ನಾಟಕಕಾರ ಶ್ರೀರಂಗರ ಕೆಲವು ಕೃತಿಗಳಲ್ಲಿ ಸ್ವಾತಂತ್ರ್ಯಪೂರ್ವದ ಕೆಲವಾರು ದೇಶಿ ರಾಜಕಾರಣಿಗಳ ಭ್ರಷ್ಟತೆ ಕುರಿತ ಪ್ರಸ್ತಾಪವಿದೆ.ಈ ಕುರಿತ ಮುಂಗಾಣ್ಕೆಯಿದ್ದ ಗಾಂಧಿ ಅವರು
ಕಾಂಗ್ರೇಸ್ ಅನ್ನು ವಿಸರ್ಜಿಸಲು ಬಯಸಿರಬಹುದು.
ಈ ದೇಶದ ನಾಡಿಮಿಡಿತ ಅರಿತ ಗಾಂಧಿ ಅವರ ಭಾವವನ್ನು ಗ್ರಹಿಸಲು ಅವರ ನಿಕಟ ಶಿಷ್ಯರೆನ್ನಿಸಿಕೊಂಡವರು ಮತ್ತು ನಂತರದ
ಕಾಂಗ್ರೇಸ್ ಮಂದಿ ವಿಫಲರಾಗಿದ್ದು ವಿಷಾದನೀಯ.ಕರಮಚಂದ ಗಾಂಧಿ ಮತ್ತು ಇಂದಿರಾ ಕುರಿತ ನಿಮ್ಮ ಗ್ರಹಿಕೆ ಮನೋಜ್ಞ.
ಇಂಥ ಚಿಂತನೆಗಳಿರುವ ಪುಸ್ತಕ ನಿಮ್ಮಿಂದ ಬಂದರೆ ಸಮಕಾಲೀನ
ಸಂಧರ್ಭದ ಪತ್ರಿಕಾರಂಗದಲ್ಲಿರುವವರಿಗೆ,ಪ್ರವೇಶಾರ್ಥಿಗಳಿಗೆ
ಮತ್ತು ಆಸಕ್ತರಿಗೆ ಭಾರತೀಯ ರಾಜಕಾರಣ ಅರ್ಥ್ಯೆಸುವ ಕೃತಿ ದೊರೆಯುತ್ತದೆ-ಕುಮಾರ ರೈತ

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...