ಇಂದು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಡಿ. ಸಿ. ತಮ್ಮಣ್ಣ ಭಾರತೀಯ ಜನತಾ ಪಾರ್ಟಿಯನ್ನು ಸೇರಿದರು. ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಿಂದ ತಮ್ಮಣ್ಣ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಪ್ರಕಟಿಸಿತು. ಚುನಾವಣೆಗೆ ಮೊದಲು ಇನ್ನೊಂದು ಅಪೇರೇಷನ್ ಕಮಲ ನಡೆದುಹೋಯಿತು.
ಕರ್ನಾಟಕದ ರಾಜಕಾರಣ ಯಾವ ಹಂತವನ್ನು ತಲುಪಿ ಬಿಟ್ಟಿದೆ ನೋಡಿ. ಬಹುತೇಕ ರಾಜಕಾರಣಿಗಳು ಮಾರಾಟದ ಸರಕುಗಳಾಗಿದ್ದಾರೆ. ರಾಜಕೀಯ ಸಿದ್ಧಾಂತ ಮರೆಯಾಗುತ್ತಿದೆ. ಪಕ್ಷ ಪಕ್ಷಗಳ ನಡುವಿನ ವ್ಯತ್ಯಾಸ ಮರೆಯಾಗುತ್ತಿದೆ. ಇಂಥಹ ಸ್ಥಿತಿಯಲ್ಲಿ ಯಾರನ್ನು ಬೈಯುವುದು ? ಈ ಯಡಿಯೂರಪ್ಪ ಇಷ್ಟು ನಿರ್ಲಜ್ಜರು ಎಂದು ನಾನಂತೂ ಅಂದುಕೊಂಡಿರಲಿಲ್ಲ. ಅವರ ಹುಂಬತನ ಸಿಟ್ಟು ಎಲ್ಲವೂ ಸಹನೀಯ ಎಂದುಕೊಂಡವನು ನಾನು. ಗ್ರಾಮಾಂತರ ಪ್ರದೇಶದಿಂದ ಬಂದ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಈತ ಏನಾದರೂ ಮಾಡ್ತಾನೆ ಕಣ್ರಿ ಎಂದು ನಮ್ಮ ರಾಜಕೀಯ ಸ್ನೇಹಿತರು ಹೇಳಿದ್ದರು. ನಾನೂ ಸಹ ಈತ ಏನಾದರೂ ಮಾಡಬಹುದು ಎಂದು ಅಂದುಕೊಂಡಿದ್ದೆ. ಆದರೆ ಅವರು ಮಾಡಿದ್ದು ಗಣಿ ದೊರೆಗಳ ಯಂಜಲು ರಾಜಕೀಯದ ಆಶ್ರಯದಲ್ಲಿ ತಮ್ಮ ಸಾಮ್ರಾಜ್ಯವನ್ನು ಕಟ್ಟಲು ಹೊರಟಿಬಿಟ್ಟರು. ಎಲ್ಲ ಶಾಸಕರಿಗೆ ಆಸೆ ಆಮೀಷ ಒಡ್ಡಿ ಅವರೆಲ್ಲ ಅಂಗಡಿ ತೆರೆದು ಕುಳಿತುಕೊಳ್ಳುವಂತೆ ಮಾಡಿದರು. ಅಧಿಕಾರ ಹಣ ಮುಖ್ಯ ಎಂದುಕೊಂಡ ಶಾಸಕರು, ತಮ್ಮ ತಮ್ಮ ಹಣೆಯ ಮೇಲೆ ರೇಟಿನ ಪಟ್ತಿ ಹಾಕಿಕೊಂಡು ಅಂಗಡಿಯಲ್ಲಿ ಕುಳಿತುಬಿಟ್ತರು. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಪಕ್ಶೇತರ ಶಾಸಕರನ್ನು ಸೆಳೆದಾಗ ಭ್ರಮನಿರಸನವಾಗಿತ್ತು. ಬೇರೆ ಪಕ್ಷದ ಶಾಸಕರನ್ನು ಸೆಳೆದು ಅವರಿಂದ ರಾಜೀನಾಮೆ ಕೊಡಿಸಿ, ಸಚಿವರನ್ನು ಮಾಡಿದಾಗ ಛೀ ಥೂ ಎಂದು ಉಗಿಯಬೇಕು ಎನ್ನಿಸಿತ್ತು. ಈ ಪ್ರಕ್ರಿಯೆ ಶಾಸಕರ ಮಟ್ಟದಲ್ಲಿ ಮಾತ್ರವಲ್ಲ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನಡೆದಾಗ ಈ ಮನುಷ್ಯನಿಗೆ ಲಜ್ಜೆ ಮಾನ ಮರ್ಯಾದಿ ಇಲ್ಲವೇ ಎಂದು ಅನ್ನಿಸಿತ್ತು.
ಈಗ ಉಪ ಚುನಾವಣೆರ್ ಘೋಷಣೆಯಾದ ಮೇಲೆ ಅವರು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಮಾಜಿ ಶಾಸಕರೊಬ್ಬರನ್ನು ಪಕ್ಷಕ್ಕೆ ಸೆಳೆದುಕೊಂಡು ಅವರಿಗೆ ಟಿಕೆಟ್ ಕೊಡಲಾಗುವುದು ಎಂದು ಪ್ರಕಟಿಸಿದ್ದಾರೆ. ಈ ಬಗ್ಗೆ ಬೈಯುವುದಕ್ಕೂ ಮನಸ್ಸಾಗುತ್ತಿಲ್ಲ. ಯಾಕೆಂದರೆ ಅವರನ್ನು ಬೈಯಲು ಶಬ್ದಗಳೇ ಇಲ್ಲ.
ರಾಜಕಾರಣ ಹೊಲಸು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇಂತಹ ಸ್ಥಿತಿಯಲ್ಲಿ ಪತ್ರಿಕೋದ್ಯಮಿಯಾಗಿ ನಮ್ಮ ಪಾಲೆಷ್ಟು ಎಂದು ಯೋಚಿಸುತ್ತೇನೆ. ಆಗೆಲ್ಲ ಬೇರೆ ಬೇರೆ ರಾಜಕಾರಣಿಗಳ ಮನೆಗಳಲ್ಲಿ ಕಾಣಿಸಿಕೊಳ್ಳುವ ಅವರಿಗೆ ಸಲಹೆ ನೀಡುವ ಪತ್ರಿಕೋದ್ಯಮಿಗಳ ಚಿತ್ರ ಕಣ್ಣು ಮುಂದೆ ಬರುತ್ತದೆ. ಆಗ ನಾನು ನನ್ನ ಬಾಯಲ್ಲಿ ತುಂಬಿಕೊಂಡ ಕವಳವನ್ನು ಉಗಿದು ಬಾಯಿ ತೊಳೆದುಕೊಳ್ಳುತ್ತೇನೆ.
2 comments:
ನೆಟ್ ಮುಂದೆ ಕುಳಿತಾಗ ನನ್ನ ನೆಚ್ಚಿನ ಬ್ಲಾಗ್ ಗಳ ಸಾಲಿನ
'ಕುಮ್ರಿ'ಯಲ್ಲಿ ಹೊಸ ಬರಹವಿದೆಯೇ ಎಂದು ನೋಡುತ್ತೇನೆ.
''ಛಿ...ಥೂ....ರಾಜಕಾರಣ"ದ 'ಆಗ ನಾನು ನನ್ನ ಬಾಯಲ್ಲಿ ತುಂಬಿಕೊಂಡ ಕವಳವನ್ನು ಉಗಿದು ಬಾಯಿ ತೊಳೆದುಕೊಳ್ಳುತ್ತೇನೆ'ಓದಿದ ನಂತರ ಇದಕ್ಕಿಂತ ಹೆಚ್ಚಾಗಿ
ಉಗಿಯಲು ಸಾಧ್ಯವಿದೆಯೇ ಎಂದು ಯೋಚಿಸಿದೆ.ತಾತ್ಪೂರ್ತಿಕವಾಗಿ ಸಾಧ್ಯವಿಲ್ಲ ಎನ್ನಿಸಿ
ನಗು ಬಂತು.ಮರುಕ್ಷಣವೇ ಪರಿಸ್ಥಿತಿಯ ಗಹನತೆಗೆ ವಿಷಾದವೆನ್ನಿಸಿತು
BHATTAR BARAHA TUMBA pRAMANIKAVADDDU ENNUVUDARALLI ERADU MATILLA. ADARASTE ARTHAPOORNAVADADDU KUMAR RAITAR PRATIKRIYE.
HILLURU RAGHAVENDRA
Post a Comment