Wednesday, August 10, 2016

ಜ್ಯೋತಿ ಲಕ್ಷ್ಮಿ; ನೀನು ನನಗೆ ಏನಾಗಿದ್ದೆ ?

ಇದೆಲ್ಲ ಹೇಗೆ ಪ್ರಾರಂಭಿಸಬೇಕು ಗೊತ್ತಿಲ್ಲ. ಆದರೆ ಒಂದಂತೂ ನಿಜ.
ನನ್ನ ತಲೆ ಮಾರಿನ ಬಹಳಷ್ಟು ಯುವಕರಿಗೆ, ನಮಗೆ ಯೌವನ ಬಂದಿದೆ ಎಂಬ ಅರಿವು ಮೂಡಿದ್ದೇ ಆಕೆಯಿಂದ. ಅವಳ ನರ್ತನದಲ್ಲಿನ ಮಾದಕತೆ ನಾವು ಯುವಕರಾಗುತ್ತಿದ್ದೇವೆ ಎಂದು ಅನ್ನಿಸುವುದಕ್ಕೆ ಕಾರಣವಾಗಿತ್ತಲ್ಲ. ಎಂದೂ ಹೆಣ್ಣಿನ ಬತ್ತಲೆಯ ಮೈಯನ್ನು ನೋಡದ ನನ್ನಂಥವರಿಗೆ ಆಕೆ ಹೆಣ್ಣಿನ ನಿಗೂಢತೆಯನ್ನು ನಮ್ಮೆದುರು ಕಳಚಿಡುವ ಹಾಗೆ  ಕಾಣುತ್ತಿತ್ತಲ್ಲ ?
ಅವಳು ಬೇರೆ ಯಾರೂ ಅಲ್ಲ. ನಿನ್ನೆ ಅಸು ನೀಗಿದ ಜ್ಯೋತಿ ಲಕ್ಷ್ಮಿ. ಆಕೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಸಿನಿಮಾಗಳಲ್ಲೂ ನಟಿಸಿದ ನಟಿ. ಕ್ಯಾಬರೆ ನರ್ತನ ಮಾಡುತ್ತಿದ್ದವಳು. ಇಷ್ಟೇ ಹೇಳಿದರೆ ಜ್ಯೋತಿ ಲಕ್ಷ್ಮಿ ಬಗ್ಗೆ ಎಲ್ಲವನ್ನೂ ಹೇಳಿದಂತಾಗುವುದಿಲ್ಲ. ಅವಳು ನಮ್ಮ ಎದೆಯನ್ನು ಹುಟ್ಟಿ ಹಾಕುತ್ತಿದ್ದ ಪ್ರೀತಿ ಪ್ರೇಮ ಮತ್ತು  ಕಾಮದ ಕಿಚ್ಚು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟ. ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಆಕೆ ಯುವಕರ ಪಾಲಿಗೆ ಎಲ್ಲವೂ ಆಗಿದ್ದಳು. ಆಕೆಯ ನೃತ್ಯವನ್ನು ನೋಡುವುದಕ್ಕೆ ಬಹಳಷ್ಟು ಯುವಕರು ಸಿನಿಮಾ ಹಾಲ್ ಗೆ ಹೋಗುತ್ತಿದ್ದರು. 
ಜ್ಯೋತಿ ಲಕ್ಷ್ಮಿಯ ಕ್ಯಾಬರೆ ಡ್ಯಾನ್ಸ್ ಮಾಡುವಾಗ ಆಕೆಯ ನೃತ್ಯಕ್ಕ್ಎ ಹಿನ್ನೆಲೆ ಗಾಯನ ಮಾಡುತ್ತಿದ್ದವರು ಎಲ್. ಆರ್. ಈಶ್ವರಿ.  ಜ್ಯೋತಿ ಲಕ್ಷಿಯ ದೇಹದ ಚಲನೆ ಮತ್ತು ಎಲ್. ಆರ್. ಈಶ್ವರಿಯ ಧ್ವನಿಯ ನಡುವೆ ಯಾವ ರೀತಿಯ ಹೊಂದಾಣಿಕೆ ಇತ್ತೆಂದರೆ ಹಾಡುವವರು ಮತ್ತು ನೃತ್ಯ ಮಾಡುವವರು ಬೇರೆ ಬೇರೆ ಎಂದು ಅನ್ನಿಸುತ್ತಲೇ ಇರಲಿಲ್ಲ.  ಅಂತಹ ಹೊಂದಾಣಿಕೆ ಅದು.  ಎಲ್. ಆರ್ ಈಶ್ವರಿ ಕಣ್ಣು ಕತ್ತಿಯ ಅಂಚು ಎಂದು ಹಾಡಿದರೆ ಜ್ಯೋತಿ ಲಕ್ಷಿಯ ಕಣ್ಣುಗಳು ಕತ್ತಿಯ ಹಾಗೆ ಬಂದು ಯುವಕರ ಹೃದಯವನ್ನೇ ಇರಿದು ಬಿಡುತ್ತಿದ್ದವು.. ಈಶ್ವರಿಯ ಹಾಡಿನಲ್ಲಿದ್ದ ಮಾದಕತೆ ಜ್ಯೋತಿ ಲಕ್ಷ್ಮಿಯ ನರ್ತನದಲ್ಲಿ ಪುನರ್ ಹುಟ್ಟು ಪಡೆದ ಭಾವ ಪರವಶತೆಯನ್ನು ಮೂಡಿಸಿ ಬಿಡುತ್ತಿತ್ತು..
ಆ ಕಾಲ ಹಾಗಿತ್ತು. ಈಗಿನಂತೆ ಹೆಣ್ಣು ಗಂಡಿನ ಸಂಬಂಧವನ್ನು ಬಿಚ್ಚಿಡುವ ಸಾಹಿತ್ಯ ಸಮೃದ್ಧವಾಗಿ ಸಿಗುತ್ತಿರಲಿಲ್ಲ. ಹಾಗೆ ಸಿನಿಮಾಗಳಲ್ಲೂ ರಸಿಕರ ಮನಸ್ಸು ತೃಪ್ತಿ ಪಡಿಸುವುದಕ್ಕಾಗಿಯೇ ಕ್ಯಾಬರೆ ಡ್ಯಾನ್ಸರ್ ಇರುತ್ತಿದ್ದರು. ಚಿತ್ರದ ನಾಯಕ ಯಾವುದೋ ಕಳ್ಳನನ್ನೋ ಗೂಂಡಾನನ್ನೋ ಬಡಿಯುವುದಕ್ಕಾಗಿ ಬಾರ್ ಗೆ ಹೋದಾಗ ಅಲ್ಲಿ ಒಂದು ಕ್ಯಾಬರೆ ಡ್ಯಾನ್ಸ್ ಇರುತ್ತಿದ್ದುದು ಮಾಮೂಲು. ಡ್ಯಾನ್ಸ್ ಮುಗಿದ ಮೇಲೆ ನಾಯಕನ ಫೈಟ್. ಹೀಗೆ ಕೆಲವೇ ನಿಮಿಷಗಳಲ್ಲಿ ಕ್ಯಾಬರೆ ಡ್ಯಾನ್ಸರ್ ಗಳ ಕೆಲಸ ಮುಗಿದು ಹೋಗುತ್ತಿತ್ತು. ಜ್ಯೋತಿ ಲಕ್ಷ್ಮಿ ಯಂತಹ ಕ್ಯಾಬರೆ ಡ್ಯಾನ್ಸರ್ ಚಿತ್ರ ಕಥೆಯ ಒಂದು ಭಾಗವಾಗಿ ಇರುತ್ತಿದ್ದ ಸಂದರ್ಭ ತುಂಬಾ ಕಡಿಮೆ. ಉಳಿದಂತೇ ಕೆಲವೇ ನಿಮಿಷಗಳಲ್ಲಿ ತಮ್ಮ ನರ್ತನವನ್ನು ಪ್ರದರ್ಶಿಸಿ ಅವರು ಮರೆಯಾಗುತ್ತಿದ್ದರು. ಅವರಿಗೆ ಆಗ ಸಿಗುತ್ತಿದ್ದ ಸಂಭಾವನೆ ಸಾವಿರಕ್ಕೆ ಹತ್ತಿರ ಅಷ್ಟೇ. ಆದರೆ ಕ್ಯಾಬರೆ ಡ್ಯಾನ್ಸ್ ಅನ್ನು ಬಿಟ್ಟು ಚಿತ್ರವನ್ನು ಊಹಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ.
ಕ್ಯಾಬರೆ ಡ್ಯಾನ್ಸರ್ ಗಳಿಗೆ ಅಂತಹ ಗೌರವ ಕೂಡ ಇರಲಿಲ್ಲ. ಅವರನ್ನು ಚಿತ್ರ ರಂಗ ಮತ್ತು ಚಿತ್ರ ರಸಿಕರು ನೋಡುತ್ತಿದ್ದ ರೀತಿ ಕೂಡ ಬೇರೆಯಾಗಿತ್ತು. ಸುಮಾರು ಎರಡು ಮೂರು ದಶಕಗಳ ಕಾಲ ಭಾರತೀಯ ಚಿತ್ರ ರಂಗದಲ್ಲಿ ಕ್ಯಾಬರೆ ನರ್ತಕಿಯರು ಮಿಂಚಿದರು. ತಮ್ಮ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಯತ್ನ ನಡೆಸಿದರು. ಆದರೆ ಕಾಲ ಕ್ರಮದಲ್ಲಿ ಎಲ್ಲವೂ ಬದಲಾಗತೊಡಗಿತು. ಅರವತ್ತು ಎಪ್ಪತ್ತರ ದಶಕಗಳಲ್ಲಿ ನಾಯಕಿ ಭಾರತೀಯ ಮಹಿಳೆಯ ಪ್ರತಿ ರೂಪದಂತೆ ಇದ್ದಳು. ಆಕೆ ಎಂದೂ ತಲೆ ಎತ್ತಿ ನೋಡುತ್ತಿರಲಿಲ್ಲ.  ನಾಯಕ ಪ್ರೇಮ ನಿವೇದನೆ ಮಾಡಿದಾಗ ನಾಯಕಿ ತನ್ನ ಕಾಲ ಬೆರಳಿನಿಂದ ನೆಲ ಕೆರದಳೆಂದರೆ ಆಕೆಗೆ ಪ್ರೀತಿಯ ಬಗ್ಗೆ ಒಲವು ಇದೆ ಎಂದೇ ಆರ್ಥ. ಸಾಧಾರಣವಾಗಿ ಎಲ್ಲ ಚಿತ್ರ ನಿರ್ದೇಶಕರು ನಾಯಕ ನಟಿ ನೆಲ ಕೆರೆಯುವ ಕ್ಲೋಸ್ ಅಪ್ ಶಾಟ್ ಹಾಕುತ್ತಿದ್ದರು. ಅಂದಿನ ನಾಯಕಿ ಹೀಗೆ ಇರಬೇಕು ಎನ್ನುವ ನಂಬಿಕೆಯ ಕಾಲದಲ್ಲಿ ಹೆಣ್ಣಿನ ಮೈಯಂದವನ್ನು ತೋರಿಸುವುದಕ್ಕೆ ಕ್ಯಾಬರೆ ಡ್ಯಾನ್ಸರ್ ಗಳು ಬೇಕಾಗಿದ್ದರು. ಆದರೆ ಎಂಬತ್ತರ ದಶಕದ ಮಧ್ಯ ಭಾಗದ ಹೊತ್ತಿಗೆ ಇದೆಲ್ಲ ಬದಲಾಯಿತು. ಸೀರೆ ಉಟ್ಟು ನೆಲ ಕೆರೆಯುತ್ತಿದ್ದ ನಾಯಕಿಯರು ಸಾವಕಾಶ ಸೀರೆಯಿಂದ ತುಂಡು ಸ್ಕರ್ಟ್ ವರೆಗೆ ಬಂದು ನಿಂತಿದ್ದರು. ಇದನ್ನೂ ಜ್ಯೂಲಿ ಹಿಂದಿ ಸಿನಿಮಾದಲ್ಲಿ ನಾವು ಗಮನಿಸಬಹುದು, ಜ್ಯೂಲಿಯ ನಾಯಕಿಯಾಗಿದ್ದ ಚಟ್ಟಕ್ಕಾರಿ ಲಕ್ಷ್ಮಿ ತನ್ನ ಸುಂದರ ತೊಡೆಗಳನ್ನು ಪ್ರದರ್ಶಿಸಿದಳು. ಸಾವಕಾಶವಾಗಿ ನಟಿಯರೇ ಕ್ಯಾಬರೆ ಡ್ಯಾನ್ಸರ್ ಕೆಲಸವನ್ನೂ ಮಾಡಲು ಪ್ರಾರಂಭಿಸಿದರು. ಕಾಲಕ್ರಮೇಣ ಕ್ಯಾಬರೆ ನರ್ತಕಿಯರ ಬೇಡಿಕೆ ಕಡಿಮೆಯಾಯಿತು. ಅವರೆಲ್ಲ ಸಾವಕಾಶವಾಗಿ ಮರೆಯಾಗತೊಡಗಿದರು;  ಸಿನಿಮಾಗಳಲ್ಲಿ ಐಟಂ ಸಾಂಗ್ಸ್ ಬಂದ ಮೇಲೆ ಕ್ಯಾಬರೆ ಡ್ಯಾನ್ಸರ್ ಮತ್ತು ನಾಯಕಿಯರ ನಡುವಿನ ವ್ಯತ್ಯಾಸವೇ ಉಳಿಯಲೇ ಇಲ್ಲ.;
ಜ್ಯೋತಿ ಲಕ್ಷ್ಮಿ, ಜಯಮಾಲಿನಿ. ಹಲಂ ಮೊದಲಾದ ಕ್ಯಾಬರೆ ಡ್ಯಾನ್ಸರ್ ಗಳಿಗೆ ಬದುಕುವುದಕ್ಕೆ ಬೇರೆ ಮಾರ್ಗವೇ  ಉಳಿಯಲಿಲ್ಲ. ಅವರೆಲ್ಲರ ಬದುಕು ದುರಂತದಲ್ಲಿ ನೋವಿನಲ್ಲಿ, ಅಸಹಾಯಕತೆಯಲ್ಲಿ ಕಳೆದು ಹೋಗುವಂತಾಯಿತು.  ಅವರೆಲ್ಲ ಅನಾರೋಗ್ಯ ಪೀಡಿತರಾಗಿ ಖರ್ಚಿಗೆ ಹಣ ಇಲ್ಲದೇ ತಮ್ಮ ಬದುಕನ್ನು ದೂಡುವಂತಾಯಿತು. ಹೊಸ ತಲೆಮಾರಿನವರಿಗೆ ಇವರೆಲ್ಲ ಯಾರು ಎಂಬುದು ತಿಳಿಯದಿದ್ದಾಗ ಇವರೆಲ್ಲ ಇನ್ನಷ್ಟು ಹತಾಶೆಯನ್ನು ಅನುಭವಿಸುವಂತಾಯಿತು. ಇಂತಹ ಮನಸ್ಥಿತಿಯಲ್ಲೇ ಜ್ಯೋತಿ ಲಕ್ಷ್ಮಿಯೂ ಇಹಲೋಕ ಯಾತ್ರೆಯನ್ನು ಮುಗಿಸಿದಳು. ಆಕೆಗೆ ಸಾಯುವ ವಯಸ್ಸು ಆಗಿರಲಿಲ್ಲ.
ನನ್ನ ತಲೆ ಮಾರಿನವರಿಗೆ ಜ್ಯೋತಿ ಲಕ್ಷ್ಮಿ ಕಾಡಲೇ ಬೇಕು. ಇಲ್ಲ ಎಂದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದೇ ಅರ್ಥ. ಯಾಕೆ ಗೊತ್ತಾ ? ಗಂಡಸರಿಗೆಲ್ಲ ಒಂದು ಅಬ್ಸೆಷನ್ ಇರುತ್ತದೆ. ಅದು ತಾವು ಕಣ್ಣು ಬಿಟ್ಟಾಗ ಮೊದಲು ಏನನ್ನು ನೋಡುತ್ತಾರೆಯೋ ಅದರ ಅಬ್ಸೆಷನ್.  ಮಗು ಕಣ್ಣು ಬಿಟ್ಟಾಗ ಮೊದಲು ನೋಡುವುದು ಅಮ್ಮನ ಎದೆಯನ್ನು. ಅಮ್ಮನ ಹಾಲು ಕುಡಿಯುವ ಸುಮಾರು ಒಂದು ವರ್ಷದ ಕಾಲ ಮಗು ತಾಯಿಯ ಎದೆಗೆ ಅಂಟಿಕೊಂಡಿರುತ್ತದೆ. ಅದು ಆ ಮಗುವಿನ ಮನಸ್ಸಿನಲ್ಲಿ ಸ್ಥಾಯಿ ಭಾವವಾಗಿ ಉಳಿದು ಬಿಡುತ್ತದೆ. ಬದುಕಿನ ಕೊನೆಯ ಉಸಿರು ಬಿಡುವ ವರೆಗೂ ಗಂಡಸರಿಗೆ ಅದು ಕಾಡುತ್ತಲೇ ಇರುತ್ತದೆ. ಹೆಣ್ಣು ಮಗುವಿಗೆ ಹೇಗೆ ಎನ್ನುವುದು ನನಗೆ ತಿಳಿಯದು.
ನಾವೆಲ್ಲ ಶಾಲಾ ಮತ್ತು ಹೈಸ್ಕೂಲ್ ದಿನಗಳಲ್ಲಿ ನೋಡುತ್ತಿದ್ದ ಸಿನಿಮಾಗಳಲ್ಲಿ ಜ್ಯೋತಿ ಲಕ್ಷ್ಮಿ ಇದ್ದೇ ಇರುತ್ತಿದ್ದಳು. ಅವಳು ನರ್ತನ ಮತ್ತು ಅಂಗಾಂಗ ಪ್ರದರ್ಶನ ನಮ್ಮ ಮನಸ್ಸುಗಳಲ್ಲಿ ಬಾಲ್ಯದ ಅನುಭವವನ್ನು ಮತ್ತೆ ಚಿಗುರಿಸುತ್ತಿತ್ತು. ಸೆಳೆತ ಹೆಚ್ಚುತ್ತಿತ್ತು.; ನಮಗೆಲ್ಲ ನಿಗೂಡವಾಗಿದ್ದ ಸೃಷ್ಟಿ ಕ್ರಿಯೆಯ ಮೂಲವಾಗಿದ್ದ ಹೆಣ್ಣು  ಕಾಡುವ ರೀತಿಯ ಅನುಭವ ಬಂದಿದ್ದು ಜ್ಯೋತಿ ಲಕ್ಷ್ಮಿ  ಇಂದಲೇ ಎಂದೂ ನನಗೆ ಅನ್ನಿಸುತ್ತದೆ.  ನಮಗೆ ಅಮ್ಮನಾಗಿ ಹೆಂಡತಿಯಾಗಿ, ಗೆಳತಿಯಾಗಿ ಅಜ್ಜಿಯಾಗಿ,  ಇನ್ನೂ ಏನೇನೂ ಆಗಿ ಕಾಡುವ ಹೆಣ್ಣು ಜೀವ ಪಡೆದುಕೊಳ್ಳುವ ವಿವಿಧ ರೂಪಗಳು ಆಕೃತಿಗಳು ನಮ್ಮೆಲ್ಲ ಕ್ರಿಯಾಶೀಲತೆಗೆ ಮೂಲವಾಗಿರಬಹುದೆ ? ಆಕೆ ಇಲ್ಲದಿದ್ದರೆ ಎಲ್ಲ ಗಂಡು ಜೀವಿಗಳ ಕ್ರಿಯಾಶೀಲತೆ ನಾಶವಾಗಿ  ಹೋಗುತ್ತಿತ್ತೆ ? ಇರಬಹುದು. 
ನನಗೆ ಯಾರೋ ಹೇಳಿದೆ ಮಾತು ನೆನಪಾಗುತ್ತದೆ. ಆತ ಒಬ್ಬ ಜ್ಯೊತಿಷಿಯೋ ಅಲ್ಲ, ಒಬ್ಬ ಮಾನಸಿಕ ತಜ್ನನೋ ಯಾರೋ ಇರಬೇಕು. ಆತ ಹೇಳಿದ್ದು, ನಿನ್ನ ಶಕ್ತಿ ಮತ್ತು ದೌರ್ಬಲ್ಯ ಎರಡೂ ಹೆಣ್ಣು. ಈ ಮಾತು ನನಗೆ ನಿಜ ಅನ್ನಿಸುತ್ತದೆ. ನನಗೆ ತುಂಬಾ ಬೇಸರವಾದಾಗ  ಅಥವಾ ಅನಾಥ ಅನ್ನಿಸಿದಾಗ ನಾನು ನನ್ನ ಅಮ್ಮನಿಗೆ ದೂರವಾಣಿ ಕರೆ ಮಾಡುತ್ತೇನೆ. ಆಥವಾ ನನ್ನದೆಲ್ಲವನ್ನೂ ನಾನು ಹಂಚಿಕೊಳ್ಳುವುದು ಹೆಣ್ಣು ಜೀವಗಳ ಜೊತೆ ಮಾತ್ರ,  ನನಗೆ ಹೆಣ್ಣು ಜೀವಗಳ ಜೊತೆ ಇದ್ದಾಗ ಮಾತ್ರ ಸೇಪ್ ಎಂದು ಅನ್ನಿಸುತ್ತದೆ. ಅದು ಅಮ್ಮ ನನಗೆ ನೀಡಿದ ಸುರಕ್ಷತೆಯ ಭಾವದಿಂದ ಪ್ರೇರಿತವಾಗಿದ್ದರೂ ಇರಬಹುದು. ನಾನು ಎಲ್ಲ ಹೆಣ್ಣು ಮಕ್ಕಳಲ್ಲಿ ಅಮ್ಮನನ್ನು ಹುಡುಕುತ್ತೇನೆ. ಗೆಳತಿಯನ್ನು ಹುಡುಕುತ್ತೇನೆ.. ಅಮ್ಮನ ಬಿಸಿ ಅಪ್ಪುಗೆ ಮತ್ತು ಸಾಂತ್ವನ ನನ್ನನ್ನು ಇದು ವರೆಗೆ ಉಳಿಸಿಕೊಂಡು ಬಂದಿದೆ.
ನನಗೆ ಜ್ಯೋತಿ ಲಕ್ಷ್ಮಿಯ ನರ್ತನ  ಮಾದಕ ಪ್ರಪಂಚದ  ಪರಿಚಯ ಮಾಡಿಕೊಟ್ಟಿತು. ಹಾಗೆ ನಾನು ಯುವಕ ಎಂಬುದು ಗೊತ್ತಾಗಿದ್ದು ಆಕೆಯ ನರ್ತನದ ಮೂಲಕವೇ.  ನನ್ನ ಒಳಗೆ ಇದ್ದ ಕಾಮ ಜಾಗ್ರತವಾಗಿದ್ದೂ ಇದೇ ಜ್ಯೋತಿ ಲಕ್ಷ್ಮಿಯ ಡಾನ್ಸ್ ನೋಡಿಯೇ. ಹೀಗಾಗಿ ಆಕೆ ಸತ್ತಾಗ ನನ್ನಲ್ಲಿ ಮೂಡಿದ್ದು ಇದೇ ವಿಚಿತ್ರ ಭಾವ. ಆಕೆ ಮತ್ತು ನನ್ನ ನಡುವಿನ ಸಂಬಂಧ ಎಂಥಹದು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಆಕೆ ತಾಯಿಯಾಗಿದ್ದಳೇ, ನನ್ನನ್ನು ಕಾಮ ಮೂಡಲು ಆಕೆಯೇ ಪ್ರೇರಣಯೇ ನನಗೆ ಗೊತ್ತಿಲ್ಲ.

ಆದರ‍ೇ ಆಕೆಯ ಸಾವಿನ ಸುದ್ದಿ ನನನಗೆ ಬೇಸರವನ್ನು ಉಂಟು ಮಾಡಿದ್ದು ನಿಜ. ಆಕೆ ಸಾಯಬಾರದಿತ್ತು.

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...