Friday, January 27, 2017

ನಾನು ಯಾರು ಗೊತ್ತೆ ? ವಿಶ್ವರೂಪಿ ನಾನು !

ಇವತ್ತಿನ ಸಂದರ್ಭದಲ್ಲಿ ಮನುಷ್ಯ ಎದುರಿಸುತ್ತಿರುವ ಸಮಸ್ಯೆಗಳು ಯಾವವು ? ಊಟ ವಸತಿ ಆತನ ಸಮಸ್ಯೆಯೆ ? ಶಾಂತಿ ಮತ್ತು ಸಮೃದ್ಧಿಯ ಬದುಕು ಆತನ ಸಮಸ್ಯೆಯೆ ?  ನಿಜ ಇವೆಲ್ಲ ಆತನ ಸಮಸ್ಯೆಗಳು.  ಆದರೆ ಇವಿಷ್ಟೇ ಅಲ್ಲ. ನಾನು ನೋಡಿದ ಹಾಗೆ ಸಮಸ್ಯೆ ಇಲ್ಲದ ಮನುಷ್ಯ ಇಲ್ಲವೇ ಇಲ್ಲ. ಪ್ರತಿಯೊಬ್ಬರಿಗೂ ಒಂದಿಲ್ಲ ಒಂದು ಸಮಸ್ಯೆಗಳು. ಒಟ್ಟಿನಲ್ಲಿ ಶಾಂತಿಯುತ ಬದುಕು ಆತನಿಗೆ ಮರೀಚಿಕೆ. ನನ್ನ ಬದುಕಿನಲ್ಲಿ ಇದುವರೆಗೆ ಸಂಪರ್ಕಕ್ಕೆ ಬಂದ ಯಾರೂ ಸಹ ನನಗೆ ಸಮಸ್ಯೆ ಇಲ್ಲ, ನನ್ನ ಬದುಕು ಸುಂದರವಾಗಿದೆ ಎಂದು ಹೇಳಿದವರು ಯಾರೂ ಇಲ್ಲ. ಎಲ್ಲರೂ ಒಂದಲ್ಲ ಒಂದು ಸಮಸ್ಯೆಯ ನಡುವೆಯೇ ಬದುಕುತ್ತಿರುತ್ತಾರೆ. ಆದರೆ ಸಮಸ್ಯೆಗಳ ನಡುವೆ ಬದುಕುತ್ತಿರುವವರು ಬೇರೆಯವರಿಗೆ ಸಮಸ್ಯೆಯಾಗುವುದು ಮಾತ್ರ ತಪ್ಪುವುದಿಲ್ಲ.
ವೇದಾಂತದಲ್ಲಿ ಬಹುಮುಖ್ಯ ಪ್ರಶ್ನೆ ಎಂದರೆ ನಾನು ಯಾರು ಎಂಬುದೇ. ನಾನು ಯಾರು ಎಂಬ ಪ್ರಶ್ನೆಗಳಿಗೆ  ಬೇರೆ ಬೇರೆ ವೇದಾಂತಿಗಳು ಬೇರೆ ಬೇರೆ ಉತ್ತರ ನೀಡಿದ್ದಾರೆ.  ಆದರೆ ಇಂದಿನ ಸಾಮಾನ್ಯ ಮನುಷ್ಯನಿಗೆ ಈ ಪ್ರಶ್ನೆ ಕೇಳಿದರೆ, ಆತ ತನ್ನ ಹೆಸರನ್ನು ಹೆಳಬಹುದು. ತನ್ನ ಕುಲ ಗೋತ್ರವನ್ನು ಹೇಳಿ ತನ್ನನ್ನು ಪರಿಚಯ ಮಾಡಿಕೊಡಲು ಯತ್ನ ನಡೆಸಬಹುದು. ಹೆಸರು ಮತ್ತು ಕುಲ ಗೋತ್ರಗಳು ನಾನು ಯಾರು ಎಂಬ ಪ್ರಶ್ನೆಗೆ ಸಮಾಜ ಎನೆಂದು ಗುರುತಿಸುತ್ತದೆ ಎಂಬುದೇ ಉತ್ತರ ವಾಗಿರುತ್ತದೆ. ಆದರೆ ಸಮಾಜವನ್ನು ಪ್ರತ್ಯೇಕಿಸಿ ನಮಗೆ ನಾವೇ ಈ ಪ್ರಶ್ನೆ ಕೇಳಿಕೊಂಡರೆ ಉತ್ತರ ಪಡೆಯುವುದು ಅಷ್ಟು ಸುಲಭವಲ್ಲ. ಸಮಾಜ ನಮ್ಮನ್ನು ಗುರುತಿಸುವಿಕೆಯಲ್ಲೂ ಏಕರೂಪತೆ ಇಲ್ಲ. ಅದು ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆಯಾಗಿರುತ್ತದೆ. ಆಯಾ ವ್ಯಕ್ತಿಗಳು ಇನ್ನೊಬ್ಬ ವ್ಯಕ್ತಿಯನ್ನು ಗುರುತಿಸುವಾಗ ಕೇವಲ ಅವರ ಕುಲ ಮತ್ತು ಗೋತ್ರಗಳಿಗೆ ಮಾತ್ರ ಸಿಮಿತವಾಗಿರುವುದಿಲ್ಲ. ಇದನ್ನೂ ಮೀರಿ ತಾವು ಗೃಹಿಸಿದ ವ್ಯಕ್ತಿ ವಿಶೇಷಗಳನ್ನು ಅದಕ್ಕೆ ಸೇರಿಸಿ ಬಿಡುತ್ತಾರೆ. ಉದಾಹರಣೆಗೆ ನನ್ನನ್ನು ಕೇವಲ ಶಶಿಧರ್ ಭಟ್ಟ ಎಂಬ ಹೆಸರಿಗೋ ನಾನು ಹೊಂದಿರುವ ಹುದ್ದೆಗೂ ಸೀಮಿತವಾಗಿ ಗುರುತಿಸುವುದಿಲ್ಲ. ನನ್ನ ಹೆಸರಿನ ಜೊತೆಗೆ ಅವರು ನನ್ನನ್ನು ಹೇಗೆ ಗೃಹಿಸಿದ್ದಾರೆ ಎಂಬುದನ್ನು ಅದಕ್ಕೆ ಸೇರಿಸುತ್ತಾರೆ. ಹೀಗಾಗಿ ಇಂದು ಅರ್ಥದಲ್ಲಿ ಒಬ್ಬ ವ್ಯಕ್ತಿ ವಿಶ್ವರೂಪಿ. ಆತನಿಗೆ ಒಂದೆ ರೂಪ ಗುಣವಿಲ್ಲ. ಆತನಿಗೆ ಪರಿಚಯವಿರುವ, ಆತನ ಪರಿಚಯ ಇಲ್ಲದಿದ್ದರೆ ಅವನನ್ನು ಹುದ್ದೆ ಮತ್ತು ಹೆಸರಿನ ಮೂಲಕ ತಿಳಿದುಕೊಂಡವರೂ ಒಂದು ಪುನರ್ ಸೃಷ್ಟಿ ಮಾಡಿಬಿಡುತ್ತಾರೆ. ಹೀಗಾಗಿ ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ಹಲವು ರೂಪಗಳನ್ನು, ಅವತಾರಗಳನ್ನು ಹೊಂದಿದ ವ್ಯಕ್ತಿಯಾಗಿ ಬಿಡುತ್ತಾನೆ. ನಾನು ಹಾಗೆ ಒಂದು ರೀತಿಯಲ್ಲಿ ವಿಶ್ವರೂಪಿ.
ನನಗೂ ಒಂದು ದಿನ ನಾನು ಯಾರು ಎಂಬ ಪ್ರಶ್ನೆ ಕಾಡತೊಡಗಿತು. ನಾನು ಈ ಪ್ರಶ್ನೆಯನ್ನು ನನಗೆ ನಾನು ಕೇಳಿಕೊಂಡೆ. ಆದರೆ ಈ ಪ್ರಶ್ನೆಗೆ ಉತ್ತರ ಸರಳವಾಗಿ ದೊರಕಲಿಲ್ಲ. ನನ್ನನ್ನೇ ಈ ಪ್ರಶ್ನೆಯನ್ನು ಕೇಳಿಕೊಂಡಾಗ ನನಗೆ ದೊರಕಿದ ಉತ್ತರ ನಾನು ಎಂಬುದೇ ಇಲ್ಲ ಎಂಬ ಉತ್ತರವಾಗಿತ್ತು. ಹೀಗಾಗಿ ಸಮಾಜ ನನ್ನನ್ನು ಹೇಗೆ ಗುರುತಿಸುತ್ತದೆ ಎಂಬುದರ ಮೇಲೆ ಈ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಬೇಕು ಎಂದು ನನಗೆ ಅನ್ನಿಸತೊಡಗಿತು. ಹೀಗಾಗಿ ನನ್ನನ್ನು ಬಲ್ಲವರು, ನನ್ನನ್ನು ಹತ್ತಿರದಿಂದ ನೋಡಿದವರು ನನ್ನನ್ನು ಏನೆಂದು ಗುರುತಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಪ್ರಾರಂಭಿಸಿದೆ. ಮೊದಲು ನನ್ನ ಅಮ್ಮ ಮತ್ತು ಸಹೋದರ ನನ್ನ ಬಗ್ಗೆ ಏನೆಂದುಕೊಂಡಿದ್ದಾರೆ ಮತ್ತು ಅವರು ನನ್ನನ್ನು ಹೇಗೆ ಗೃಹಿಸುತ್ತಾರೆ ಎಂಬ ಪ್ರಶ್ನೆಗೆ ಮೊದಲು ಉತ್ತರ ಕಂದುಕೊಳ್ಳಲು ಯತ್ನ ನಡೆಸಿದೆ. ಈ ಪ್ರಶ್ನೆಗೆ  ತುಂಬಾ ಸರಳವಾದ ಉತ್ತರ ದೊರಕಿತು. ನನ್ನ ಅಮ್ಮನ ಪ್ರಕಾರ ನನ್ನಂಥ ಮಗ ಬೇರೆ ಯಾರೂ ಇಲ್ಲ. ನಾನು ಮಹಾನ್ ಸಾಧಕ. ಕಷ್ಟದಿಂದ ಮೇಲೆ ಬಂದವನು. ಒಳ್ಳೆಯ ಗುಣಗಳ ಗಣಿ. ನನ್ನ ತಮ್ಮನ ಅಭಿಪ್ರಾಯ ಇದಕ್ಕಿಂತ ಬೇರೆ ಇರಲಿಲ್ಲ. ಈ ಬಗ್ಗೆ ನನಗೆ ನಗು ಬಂತು. ನಾನು ಅಮ್ಮ ತಮ್ಮ ಅಂದುಕೊಂಡಷ್ಟು ಒಳ್ಳೆಯವನಲ್ಲ...!
ಇನ್ನು ನನ್ನ ಕುಟುಂಬದವರು ನನ್ನ ಬಗ್ಗೆ ಏನು ಅಂದುಕೊಂಡಿರಬಹುದು ? ಅವರ ಪ್ರಕಾರ ನನ್ನ ರೂಪ ಯಾವುದು ?  ವಯಸ್ಸಿಗೆ ಬಂದ ಮಕ್ಕಳಿಗೆ ಅಪ್ಪನ ಬಗ್ಗೆ ಪ್ರೀತಿ ಮತ್ತು ಗೌರವವಿದ್ದರೂ ಜಗತ್ತಿನಲ್ಲಿ ಅತಿ ದಡ್ಡರೆಂದರೆ ನನ್ನ ಅಪ್ಪ ಅಮ್ಮ ಎಂದು ಅನ್ನಿಸುತ್ತಿರುತ್ತದೆ. ಈ ಭಾವನೆಗೆ ಕಾರಣ ಜನರೇಷನ್ ಗ್ಯಾಪ್.. ಮಹಾನ್ ಬೇಜವಾಬ್ದಾರಿ, ಕುಟುಂಬದ ಬಗ್ಗೆ ಪ್ರೀತಿ ಗೌರವ ಇಲ್ಲದವನು. ವೈಯಕ್ತಿಕ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳದವನು. ನನ್ನ ಬದುಕು ಸೆಟಲ್ ಆಗಲು ಕೆಲಸ ಮಾಡದವನು.. ಹೀಗೆ ಆರೋಪ ಪಟ್ಟಿ ದೊಡ್ದದಾಗುತ್ತದೆ. ಈ ಗೃಹಿಕೆಯಲ್ಲಿ ಸ್ವಲ್ಪ ಸತ್ಯವೂ ಮಿಥ್ಯೆಯೂ ಎರಡು ಸೇರಿಕೊಂಡಿದೆ ಎಂದು ನನಗೆ ಅನ್ನಿಸ್ತು. ಅವರು ಅಂದುಕೊಂಡಷ್ಟು ನಾನು ಕೆಟ್ಟವನಿರಲಿಕ್ಕಿಲ್ಲ, ಮತ್ತು ಬೇಜವಾಬ್ದಾರಿಯ ಮನುಷ್ಯ ಆಗಿರಲಿಕ್ಕಲ್ಲ ಎಂದುಕೊಂಡೆ.
ಇನ್ನು ನನಗಿರುವ ಸ್ನೇಹಿತೆಯರು ಸ್ನೇಹಿತರು ಎನೆಂದುಕೊಂಡಿರಬಹುದು. ಅವರ ಪ್ರಕಾರ ನನ್ನ ರೂಪ ಯಾವುದು ? ನಾನು ಯೋಗ್ಯನೆ ಅಯೋಗ್ಯನೆ ಎಂಬ ಪ್ರಶ್ನೆ. ನನಗೆ ಸ್ನೇಹಿತರ ಸಂಖ್ಯ ಕಡಿಮೆ. ಆದರೆ ಸ್ನೇಹಿತಿಯರಿದ್ದಾರೆ.. ನನಗೆ ಯಾವೊದೋ ಒಬ್ಬ ಕಳ್ಲ ಜ್ಯೋತಿಷಿ ಯಾವಾಗಲೋ ಹೇಳಿದ ಮಾತು ನೆನಪಾಗುತ್ತದೆ. ಜ್ಯೋತಿಷಿ ಕಳ್ಳನಾದರೂ ಆತ ಹೇಳಿದ ಮಾತು ನಿಜವೇನೋ ಎಂದು ಹಲವು ಬಾರಿ ಅಂದುಕೊಂಡಿದ್ದಿದೆ. ಆತ ಹೇಳಿದ್ದ; ನಿಮ್ಮ ಉನ್ನತಿಗೆ ಮತ್ತು ನಾಶಕ್ಕೆ ಹೆಣ್ಣೇ ಕಾರಣವಾಗುತ್ತಾಳೆ...! ನನ್ನ ಹಲವಾರು ಸ್ನೇಹಿತೆಯರು ನನ್ನನ್ನು ಪ್ರೀತಿಯಿಂದ ನೋಡಿಕೊಂಡಾಗ ಕೆಲವರು ಇಲ್ಲ ಸಲ್ಲದ ಆರೋಪ ಮಾಡಿದಾಗ  ಈ ಮಾತು ನನಗೆ ನೆನಪಾಗುತ್ತದೆ. ಆದರೆ ಗಂಡಸರಿಗಿಂತ ಹೆಂಗಸರ ಜೊತೆ ಹೆಚ್ಚು ಸೇಫ್ ಎಂದುಕೊಳ್ಳುವ ನಾನು ನನ್ನ ಉನ್ನತಿ ಹೆಣ್ಣಿನಿಂದಲೇ ಎಂಬುದನ್ನು ಯಾವುದೇ ಮುಜುಗರವಿಲ್ಲದೇ ಒಪ್ಪಿಕೊಳ್ಳುತ್ತೇನೆ. ಆದರೆ ನಾಶ ಎಂಬುದನ್ನು ನಾನು ಒಪ್ಪುವುದಿಲ್ಲ. ಆದರೆ ಹಲವು ಸ್ನೇಹಿತೆಯರಿಂದ ನಾನು ತೊಂದರೆ ಅನುಭವಿಸಿದ್ದು ಮಾತ್ರ ನಿಜ. ನನಗೆ ಅನ್ನಿಸುವ ಹಾಗೆ ನನ್ನ ಸ್ನೇಹಿತೆಯರು ನನ್ನನ್ನು ವಿಭಿನ್ನವಾಗಿ ಗೃಹಿಸಿದ್ದಾರೆ. ಕೆಲವರ ಪ್ರಕಾರ ನಾನು ಸಾಧು ಮತ್ತು ಬೋಳೇ ಶಂಕರ. ನನಗೆ ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎಂಬುದೇ ತಿಳಿಯುವುದಿಲ್ಲ. ಎಲ್ಲರನ್ನು ನಂಬಿ ಮೋಸ ಹೋಗುತ್ತೇನೆ. ಇನ್ನೂ ಕೆಲವರ ಪ್ರಕಾರ ನಾನು ಶ್ರೀ ಕೃಷ್ಣ, ಶ್ರೀ ರಾಮಚಂದ್ರ ಅಲ್ಲ. ಗೋಪಿಕಾ ಸ್ತ್ರೀಯರ ನಡುವೆ ಇರುವುದಕ್ಕೆ ಇಷ್ಟ ಪಡುತ್ತೇನೆ. ಈ ಮಾತು ಸಂಪೂರ್ಣ ಸುಳ್ಳಲ್ಲ.
ಆದರೆ ಸ್ನೇಹಿತೆಯರಾಗಲೀ, ನನ್ನನ್ನು ಬಲ್ಲ ಮಹಿಳೆಯರಾಗಲೀ ನನ್ನನ್ನು ಕಳ್ಳ ಸುಳ್ಳ, ಮೋಸಗಾರ ಎಂಬುದನ್ನು ಹೇಳುವುದಿಲ್ಲ. ನಾನು ವ್ಯಾಮೋಹಿಯಾದರೂ ಮೋಸಗಾರ ಎಂದು ಹೇಳುವುದಿಲ್ಲ.
ನನ್ನ ಜೊತೆಗೆ ಕೆಲಸ ಮಾಡಿದವರು ನನ್ನನ್ನು ಹೇಗೆ ಗುರುತಿಸುತ್ತಾರೆ ? ಈ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಲು ನಾನು ತೀವ್ರ ಯತ್ನ ನಡೆಸಿದೆ. ಇದು ಅಷ್ಟು ಸುಲಭವಾಗಿರಲಿಲ್ಲ. ಯಾಕೆಂದರೆ ಮಾಧ್ಯಮದಲ್ಲಿ ಕೆಲಸ ಮಾಡುವವರು ಎಲ್ಲವನ್ನು ಕರಗತ ಮಾಡಿಕೊಂಡಿರುತ್ತಾರೆ. ಆದರೆ ಅವರು ಆಗಾಗ ನನ್ನ ಎದುರಿಗೆ ಆಡುವ ಮಾತುಗಳು, ನನ್ನ ಬಗ್ಗೆ ಬೇರೆಯವರ ಜೊತೆ ಆಡುವ ಮಾತುಗಳನ್ನೆಲ್ಲ ಸೇರಿಸಿ ಅವರು ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಯತ್ನ ನಡೆಸಿದೆ. ನನ್ನ ಜೊತೆಗೆ ಬಹಳ ವರ್ಷ ಕೆಲಸ ಮಾಡಿದ ವ್ಯಕ್ತಿಯೊಬ್ಬನನ್ನು ಈ ಬಗ್ಗೆ ಕೇಳಿದೆ. ಆತ ಹೇಳಿದ್ದು ನನಗೆ ನಗು ಭರಿಸಿತು. ಆತ ಒಬ್ಬರ ಹೆಸರು ಹೇಳಿದ. ನಿಮಗೆ ಅವರಿಗೆ ಸಂಬಂಧವಿದೆಯಂತೆ ಎಂದು ಯಾವುದು ಗುಟ್ಟು ಹೇಳುವಂತೆ ಹೇಳಿದ. ಎಲ್ಲರೂ ಹಾಗೆ ಮಾತನಾಡಿಕೊಳ್ಳುತ್ತಾರೆ ಅಂದ. ನನಗೆ ನಗು ಬಂತು. ಹೌದಾ ? ನಿಮ್ಮ ಜೊತೆ ನನಗೆ ಸಂಬಂಧವಿಲ್ಲವಾ ಎಂದು ಕೇಳಿದೆ. ಆತ ತಡಬಡಾಯಿಸಿದ. ಹಾಗಲ್ಲ ಸಾರ್ ಅವರನ್ನು ನೀವು ದೂರವಿಡುವುದು ಒಳ್ಳೆಯದು ಎಂಬ ಬಿಟ್ಟಿ ಸಲಹೆಯನ್ನು ನೀಡಿದ. ನನಗೆ ಯಾರ ಜೊತೆಗೋ ಸಂಬಂಧವಿದ್ದರೆ ನಿಮಗೇನಾದರೂ ಸಮಸ್ಯೆಯಾಗುತ್ತದೆಯೆ ಎಂದು ಪ್ರಶ್ನಿಸಿದೆ. ಆತ ಉತ್ತರ ನೀಡಲಿಲ್ಲ. ಹಾಗೆ ನನ್ನ ಜೊತೆಗೆ ಕೆಲಸ ಮಾಡಿ ಈಗ ಬೇರೆಡೆ ಇರುವವರು ನನ್ನ ಬಗ್ಗೆ ಏನು ಅಂದುಕೊಂಡಿರಬಹುದು ಎಂಬ ಕುತೂಹಲವನ್ನು ನಾನು ತಣಿಸಿಕೊಳ್ಳಬೇಕಾಗಿತ್ತು. ಹೀಗಾಗಿ ಕೆಲವು ಸ್ನೇಹಿತೆಯರನ್ನು ಈ ಬಗ್ಗೆ ವಿಚಾರಿಸಿದೆ. ಮಾಧ್ಯಮದಲ್ಲಿ ಇರುವವರಲ್ಲಿ ಬಹಳಷ್ಟು ಜನರಿಗೆ ನನ್ನ ಬಗ್ಗೆ ಸದಾಭಿಪ್ರಾಯ ಇರಲಿಲ್ಲ. ಕೆಲವರಿಗೆ ವೃತ್ತಿ ಮಾತ್ಸರ್ಯವಿತ್ತು. ಇನ್ನು ಕೆಲವರಿಗೆ ನನ್ನ ಬಗ್ಗೆ ಕೆಲವರು ಆಡುವ ಒಳ್ಳೆಯ ಮಾತುಗಳು ಈರ್ಷ್ಯೆಯನ್ನು ಉಂಟು ಮಾಡಿತ್ತು. ಇನ್ನು ಕೆಲವರಿಗೆ ನಾನು ಭಹಿರಂಗವಾಗಿ ಆಡುವ ಮಾತುಗಳು, ಮಾಡುವ ಟೀಕೆಯಿಂದ ಸಿಟ್ಟು ಬಂದಿತ್ತು. ಇವರೆಲ್ಲ ನನ್ನನ್ನು ವ್ಯಯಕ್ತಿಕ ಕಾರಣಗಳಿಗಾಗಿ ಟೀಕಿಸುತ್ತಿರುವುದು ಧ್ವೇಷಿಸುತ್ತಿರುವುದನ್ನು ಗಮನಕ್ಕೆ ಬಂತು. ಇವರೂ ಸಹ ನನ್ನ  ವೈಯಕ್ತಿಕ ನಡುವಳಿಗಳನ್ನು ಟೀಕಿಸಿ ತಮ್ಮ ಕೋಪವನ್ನು ತೀರಿಸಿಕೊಳ್ಳುತ್ತಿದ್ದರು. ಇವರಿಗೂ ನಾನು ಯಾರೂ ಇಷ್ಟ ಪಡದ ವ್ಯಕ್ತಿ ನಾನು. ಇವರ ಗೃಹಿಕೆಯೂ ಸಂಪೂರ್ಣ ಸತ್ಯವಲ್ಲ. ನಾನು ಎಲ್ಲರೂ ಸಾಮೂಹಿಕವಾಗಿ ತಿರಸ್ಕರಿಸಬೇಕಾದ ವ್ಯಕ್ತಿ ಅಲ್ಲ ಅಂದುಕೊಂಡೆ. ಆದರೆ ಅದೂ ಸಹ ಅವರ ಗೃಹಿಕೆಯ ನನ್ನ ರೂಪವಾಗಿತ್ತು.
ಇನ್ನು ಸಾಮಾಜಿಕ ಜಾಲ ತಾಣಗಳಲ್ಲಿ ನನ್ನು ಟೀಕಿಸುವ ಬೈಯುವವರ ಸಂಖ್ಯೆ ದೊಡ್ದದಿದೆ. ಅದಕ್ಕೆ ಬಹುಮುಖ್ಯ ಕಾರಣ ನಾನು ಬಲಪಂಥೀಯರನ್ನು ಕೋಮುವಾದಿಗಳನ್ನು ಸತತವಾಗಿ ಟೀಕಿಸುತ್ತಿರುವುದು ಕಾರಣ. ಇತ್ತೀಚೆಗೆ ನನ್ನ ಪ್ರೈಂ ಟೈ ನ್ಯೂಸ್ ನಲ್ಲಿ ಬಿಜೆಪಿ ನಾಯಕ ಡಾ. ವಾಮನಾಚಾರ್ಯ ಪಾಕಿಸ್ಥಾನಕ್ಕೆ ಹೋಗಿ ಎಂದು ನನಗೆ ಫರ್ಮಾನು ಹೊರಡಿಸಿಬಿಟ್ಟಿದ್ದರು. ನಾನು ಒಂದು ಕಾಲದಲ್ಲಿ ಎಡಪಂಥೀಯ ವಿಚಾರ ಧಾರೆಯನ್ನು ಒಪ್ಪಿಕೊಂಡಿದ್ದರೂ ಈಗ ಎಡಪಂಥೀಯನಲ್ಲ. ನಾನು ಬಲಪಂಥೀಯ ವಿರೋಧಿ. ಕೋಮುವಾದ, ಜಾತಿಯತೆಯ ವಿರೋಧಿ. ಹೀಗಾಗಿ ಈ ಜನರ ಪಾಲಿಗೆ ನಾನು ದೊಡ್ದ ವಿಲನ್. ದೇಶ ಧ್ರೋಹಿ. ಹಿಂದೂ ವಿರೋಧಿ. ಇದೂ ಕೂಡ ಅವರ ಗ್ರಹಿಕೆ.
ಇದನ್ನೆಲ್ಲ ನೋಡಿದ ಮೇಲೂ ನಾನು ಯಾರು ಎಂಬ ಪ್ರಶ್ನೆಗೆ ಉತ್ತರ ದೊರಕಲೇ ಇಲ್ಲ. ನಾನು ಇವರೆಲ್ಲ ಹೇಳಿದಂತೆ ಇರುವ ವ್ಯಕ್ತಿಯಾಗಿರಬಹುದು, ಆಗದೆಯೂ ಇರಬಹುದು. ಇವರೆಲ್ಲ ನನ್ನನ್ನು ಗ್ರಹಿಸಿದ್ದರಲ್ಲಿ ಕೆಲವು ಅಂಶಗಳು ಸೇರಿ ಇನ್ನೊಂದು ವ್ಯಕ್ತಿತ್ವ ನಾನಾಗಿರಬಹುದು. ಇದಕ್ಕೆ ಹೀಗೆ ಎಂದು ಉತ್ತರ ನೀಡುವುದು ಕಷ್ಟ. ಆದರೆ ನನಗೆ ಒಂದು ವಿಷಯದಲ್ಲಿ ಸಂ ತೋಷವಿದೆ. ಅದೆಂದರೆ ನನ್ನ ವಿಶ್ವರೂಪ; ನಾನು ವಿಶ್ವರೂಪಿ.
ಈ ಲೇಖನವನ್ನು ಓದಿದವರು ನನಗೆ ಇನ್ನೂ ಕೆಲವು ರೂಪಗಳನ್ನು ಕೊಡಬಹುದು, ಮಾತನಾಡಬಹುದು. ತಮ್ಮ ಈ ಹಿಂದಿನ ಗೃಹಿಕೆ ಸರಿಯಾದುದು ಎಂಬುದು ಈ ಲೇಖನದಿಂದ ಸಾಬೀತಾಗಿದೆ ಎಂದು ಸಂತೋಷಪಡಬಹುದು. ಹಾಗೆ ತಮ್ಮ ಗೃಹಿಕೆಯನ್ನು ಬದಲಿಸಿಕೊಳ್ಳಬಹುದು. ಆದರೆ ನನಗೆ ಒಂದು ರೂಪವಿಲ್ಲ, ನಾನು ಬಹುರೂಪಿ ಎಂಬುದು ಸಾಬೀತಾಗುತ್ತದೆ. ಇದಾದ ಮೇಲೂ ನನಗಿರುವ ಕುತೂಹಲ ಕಡಿಮೆಯಾಗಿಲ್ಲ. ಇವರೆಲ್ಲ ನನ್ನನ್ನು ಗೃಹಿಸಿರುವ ಬಗ್ಗೆ ನನಗೆ ಅನುಮಾನ ಹಾಗೆಯೇ ಮುಂದುವರಿದಿದೆ.ನಾನು ಇವರೆಲ್ಲ ಅಂದುಕೊಂಡಷ್ಟು ಕೆಟ್ಟವನಲ್ಲದಿರಬಹುದು ಎಂದು ನನಗೆ ಅನ್ನಿಸುತ್ತದೆ,  ಹಾಗೆ ತುಂಬಾ ಒಳ್ಳೆಯವನೂ ಅಲ್ಲ ಎಂದು ಆಗಾಗ ಅನ್ನಿಸುವುದಿದೆ. ಏನೇ ಅನ್ನಿಸಲಿ, ನಾನು ಬದುಕನ್ನು ಪ್ರೀತಿಸುತ್ತೇನೆ. ಮನುಷ್ಯರನ್ನು ಪ್ರೀತಿಸುತ್ತೇನೆ. ಬದುಕಿನ ಬಗ್ಗೆ ಪ್ರೀತಿಯ ಬಗ್ಗೆ ನಾನು ವ್ಯಾಮೋಹಿ.. ಹೀಗಾಗಿ ಪ್ರತಿದಿನ ನನಗೆ ಹೊಸದು. ಅದೇ ನನ್ನನ್ನು ಜೀವಂತವಾಗಿ ಇರಿಸಿದೆ. ನನ್ನ ಅಮ್ಮ, ನನ್ನನ್ನು ಪ್ರೀತಿಸಿದ ಗೆಳತಿಯರು, ನನ್ನ ಬೆನ್ನು ತಟ್ಟಿದ ಸ್ನೇಹಿತೆಯರು, ನನ್ನನು ಬದುಕಿಸಿದ್ದಾರೆ. ಬದುಕಿಸುತ್ತಿದ್ದಾರೆ. ಆದ್ದರಿಂದ ನಾನು ಯಾರು ಎಂಬ ಪ್ರಶ್ನೆಗೆ ಕೊನೆಯದಾಗಿ ಕಂಡುಕೊಂಡ ಉತ್ತರ ನಾನು ಎಂದರೆ ಪ್ರೀತಿ, ಧ್ವೇಷವಲ್ಲ.

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...