Monday, March 15, 2021

 ಸಾಮಾಜಿಕ ಬದುಕು, ನೈತಿಕತೆ ಮತ್ತು ಲೈಂಗಿಕ ಹಗರಣಗಳು


ರಮೇಶ್ ಜಾರಕೀಹೊಳಿ ಅವರ ಸಿಡಿ ಹಗರಣ ಹಲವು ಮುಖ್ಯ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ... ರಾಜಕೀಯ ಮತ್ತು ನೈತಿಕತೆಯ ಪ್ರಶ್ನೆ ಇದರಲ್ಲಿ ಬಹುಮುಖ್ಯವಾದುದು. ಸಾರ್ವಜನಿಕ ಬದುಕಿನಲ್ಲಿ ಇರುವವರು ಸಮಾಜಕ್ಕೆ ಆದರ್ಶಪ್ರಾಯರಾಗಿರಬೇಕು ಎಂದು ಜನ ಅಪೇಕ್ಷೆಪಡುವುದು ತುಂಬಾ ಸಹಜ.. ಹಾಗೆ ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಖಾಸಗಿ ಬದುಕು ಎನ್ನುವುದು ಇರುವುದಿಲ್ಲ. ಅವರ ಖಾಸಗಿ ಬದುಕು ಸಾಮಾಜಿಕ ಆಯಾಮವನ್ನು ಪಡೆದೇ ಪಡೆಯುತ್ತಿದೆ.. ಹೀಗಾಗಿ ರಮೇಶ್ ಜಾರಕೀಹೊಳಿ ಅವರ ಮೇಲಿನ ಆರೋಪವನ್ನು ಈ ಹಿನ್ನೆಲೆಯಲ್ಲಿ ನಾವು ನೋಡಬೇಕಾಗುತ್ತದೆ, ಆದರೆ ಈಗ ಈ  ವಿಚಾರ ಸಂಪೂರ್ಣವಾಗಿ ದಾರಿ ತಪ್ಪಿದೆ,, ರಾಜಕಾರಣದಲ್ಲಿ ನೈತಿಕ ದಿವಾಳಿತನದ ಕುರಿತು ಚರ್ಚೆ ನಡೆಯಬೇಕಾಗಿತ್ತು. ಆದರೆ ಈಗ ಸಿಡಿ ಮಾಡಿದವರು ಯಾರು ಎಂಬ ಬಗ್ಗೆಯೇ ತನಿಖಾ ವರದಿಗಳು ಬರಲು ಪ್ರಾರಂಭಿಸಿವೆ.

ಹಾಗೆ ನೋಡಿದರೆ ಇಂತಹ ಆರೋಪಗಳಿಗೆ ಒಳಗಾದ ಮೊದಲ ವ್ಯಕ್ತಿ ಜಾರಕೀಹೊಳಿ ಅಲ್ಲ. ಅವರು , ಅವರು ಕೊನೆಯ ವ್ಯಕ್ತಿಯೂ ಆಗಲಾರರು. ಅಧಿಕಾರ  ಹಣ ಬರುವಂತೆ ಮಾಡುತ್ತದೆ ಹಣ ಅನ್ಯ ಮಾರ್ಗಗಳ ಮೂಲಕ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುತ್ತದೆ,, ಲೈಂಗಿಕತೆ ನಮ್ಮ ಅವಶ್ಯಕತೆಗಳಲ್ಲಿ  ಒಂದಾದರೂ ಈ ಅವಶ್ಯಕತೆಯನ್ನು ನಾವು ಹೇಗೆ ಪೂರೈಸಿಕೊಳ್ಳುತ್ತೇವೆ ಎನ್ನುವುದು ನೈತಿಕತೆಯ ನಿಕಷಕ್ಕೆ ಒಳಗಾಗಲೇ ಬೇಕಾಗುತ್ತದೆ.

ಹಾಗೆ ಒಪ್ಪಿತ ಲೈಂಗಿಕತೆಯನ್ನು ಯಾರೂ ವಿರೋಧಿಸುವುದು ಸಾಧ್ಯವಿಲ್ಲ. ಕಾನೂನು ಸಹ ಒಪ್ಪಿತ ಲೈಂಗಿಕತೆಗೆ ಪುರಸ್ಕಾರ ನೀಡುತ್ತದೆ. ಆದರೆ ಒಂದು ಗಂಡು ಮತ್ತು ಹೆಣ್ಣು ನಡೆಸುವ ಒಪ್ಪಿತ ಲೈಂಗಿಕತೆಯಲ್ಲಿ ಅಧಿಕಾರ ಯಾವ ರೀತಿ ಪ್ರಭಾವ ಭೀರಿದೆ ? ಅಧಿಕಾರನ್ನು ಬಳಸಿಕೊಂಡು ಲೈಂಗಿಕ ಚಟುವಟಿಕೆಗೆ ಭಾಗಿದಾರರನ್ನಾಗಿ ಮಾಡಿಕೊಂಡರೆ ಅದು ಅಪರಾಧ, ರಮೇಶ ಜಾರಕೀಹೊಳಿ ಪ್ರಕರಣದಲ್ಲಿ ಈಗಾಗಲೇ ಆರೋಪಿಸಿದಂತೆ ಕೆಲಸ ಕೊಡಿಸುವ ಭರವಸೆ ನೀಡಿ ಆಕೆಯ ಜೊತೆ ಲೈಂಗಿಕ ಚಟುವಟಿಕೆ ನಡೆಸಿದ್ದಾರೆ ಎನ್ನುವುದು. ಅದು ಕಾನೂನು ಪ್ರಕಾರ ಅಪರಾಧವಾಗುತ್ತದೆ, 

ಕಾನೂನು ಪ್ರಕಾರ ನಡೆಸುವ ಲೈಂಗಿಕ ಚಟುವಟಿಕೆಗೂ ಕಾನೂನು ವಿರುದ್ಧವಾಗಿ ನಡೆಸುವ ಲೈಂಗಿಕ ಚಟುವಟಿಕೆಗೆ ಇರುವ ಈ ವ್ಯತ್ಯಾಸ ಒಂದೆಡೆಯಾದರೆ, ಗಂಡು ಹೆಣ್ಣಿನ ಸೂಕ್ಷ್ಮ ಸಂಬಂಧವನ್ನು ಅಶ್ಲೀಲತೆಯ ಹಂತಕ್ಕೆ ತೆಗೆದುಕೊಂಡೂ ಹೋಗುವುದು ಮತ್ತು ಅದನ್ನು ಚೀತ್ರಿಕರಿಸುವುದು ಕೂಡ ಸಾಮಾಜಿಕ ಸ್ವಾಸ್ಠ್ಯಕ್ಕೆ ಪೂರಕವಾದುದಲ್ಲ.

ಈ ಹಿನ್ನೆಲೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ರಾಜ್ಯದಲ್ಲಿನ ರಾಜಕಾರಣ ಮತ್ತು ಲೈಂಗಿಕ ಹಗರಣದ ಬಹುಮುಖ್ಯ ವಿಚಾರವನ್ಜು ನಾವು ನೋಡಬಹುದು,

ರಾಜ್ಯದಲ್ಲಿ ನಡೆದ  ರಾಜಕೀಯ ಲೈಂಗಿಕ ಹಗರಣಗಳನ್ನು ನಾವು ನೋಡುವಾಗ ನಮಗೆ ದೊರಕುವ ಮೊದಲ ಹಗರಣ ನಡೆದಿದ್ದು ೧೯೭೩ ರಲ್ಲಿ.. ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಆರಸು..ಅವರ ಸಂಪುಟದಲ್ಲಿ ಗೃಹ ರಾಜ್ಯ ಸಚಿವರಾಗಿದ್ದವರು ಆರ್. ಡಿ. ಕಿತ್ತೂರ್.  ಅವರ ಮೇಲಿದ್ದ ಆರೋಪ ಕಾಣೆಯಾಗಿದ್ದ ಹೆಣ್ಣು ಮಗಳೊಬ್ಬಳು ಸಚಿವ ಕಿತ್ತೂರ್ ಅವರ ಮನೆಯಲ್ಲಿ ಇದ್ದರು ಎಂಬುದು ಆರೋಪ.. ಆರೋಪದ ಕಾರಣದಿಂದ ಕಿತ್ತೂರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಬಹುಶಃ ಲೈಂಗಿಕ ಹಗರಣದ ಕಾರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲ ಸಚಿವರೂ ಅವರೇ,,, ಬಹಿರಂಗವಾದ ಮೊದಲ ಪ್ರಕರಣವೂ ಇದೇ.

ಇವತ್ತಿನ ಸಂದರ್ಭದಲ್ಲಿ ಈ ಹಗರಣವನ್ನು ನೋಡುವಾಗ ಇದೊಂದು ದೊಡ್ಡ ಹಗರಣ ಎಂದು ಅನ್ನಿಸುವುದಿಲ್ಲ. ಆಕೆಯ ಮನೆಯಲ್ಲಿ ಇದ್ದಳು ಎನ್ನಲಾದ ಆ ಹೆಣ್ಣು ಮಗಳ ಜೊತೆ ಕಿತ್ತೂರ್ ಬೇರೆ ರೀತಿ ಸಂಬಂಧ ಹೊಂದಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯ ಇರಲಿಲ್ಲ.. ಆಕೆ ಸಚಿವರ ಮನೆಯಲ್ಲಿ ಇದ್ದರು ಅಷ್ಟೇ..  ಆ ಸಂದರ್ಭದಲ್ಲಿ ಬಂದ ವರದಿಗಳ ಪ್ರಕಾರ ಈ ಕತೆ ತುಂಬಾ ಸಿನಿಮೀಯವೂ ರೋಚಕವೂ ಆಗಿದೆ..

ಈ ಹೆಣ್ಣುಮಗಳು ಅದೊಂದು ದಿನ ಭಾರಿ ಮಳೆ ಬೀಳುತ್ತಿದ್ದ ಸಂದರ್ಭದಲ್ಲಿ ಸಚಿವರ ಅಧಿಕೃತ ನಿವಾಸದ ಕಂಪೌಂಡ್  ಒಳಗಿನ ಮರದ ಕೆಳಗೆ ನಿಂತಿರುತ್ತಾಳೆ..ಸಚಿವರು ಆಕೆಯನ್ನು ಮನೆಯ ಒಳಗೆ ಕರೆಯುತ್ತಾರೆ. ಇಲ್ಲಿಂದ ಕಥೆ ಬೇರೆ ಬೇರೆ ತಿರುವುಗಳನ್ನು ಪಡೆದು ಸಚಿವ ಕಿತ್ತೂರ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ..೧೯೭೩ ರ ಸಂದರ್ಭದಲ್ಲಿ ಇದ್ದ ನೈತಿಕತೆಯ ವ್ಯಾಖ್ಯೆ ಈಗ ಸಂಪೂರ್ಣವಾಗಿ ಬದಲಾಗಿದೆ. ಆ ಸಂದರ್ಭದಲ್ಲಿ ಸಿಡಿಯ ಸಾಕ್ಷ್ಯ ಇಲ್ಲದಿದ್ದರೂ ಕೇವಲ ಆರೋಪದ ಹಿನ್ನೆಲೆಯಲ್ಲಿ ಸಚಿವರು ರಾಜೀನಾಮೆ ನೀಡಿದರು. ಈಗ ಸಿಡಿ ಇದ್ದರೂ ಅದು ನಕಲಿ ಎಂದು ಆರೋಪಿಸಬಹುದು.. ಇದು ನಕಲಿ ಸಿಡಿ ಎಂದು ಮಾಧ್ಯಮಗಳು ವಾದ ಮಾಡಬಹುದು. ಸಚಿವನಾದವನು ತನ್ನ ಸ್ಥಾನದಲ್ಲಿ ಉಳಿದುಕೊಳ್ಳಲು ಯತ್ನ ನಡೆಸಬಹುದು.

ಇದಾದ ನಂತರ ರಾಜಕಾರಣಿಗಳ ಲೈಂಗಿಕ ಹಗರಣ ಬಹಳ ವರ್ಷಗಳ ಕಾಲ ವರದಿಯಾಗಲಿಲ್ಲ.. ೨೦೦೭ ರಲ್ಲಿ ಶಾಸಕ ರೇಣುಕಾಚಾರ್ಯ ಅವರ ಲೈಂಗಿಕ ಹಗರಣ ವರದಿಯಾಯಿತು. ಸ್ವಲ್ಪ ಕಾಲ ಬಾರಿ ಸದ್ದು ಮಾಡಿತು. ನರ್ಸ್ ಒಬ್ಬರ ಜೊತೆ ರೇಣುಕಾಚಾರ್ಯ ಚುಂಬನದಲ್ಲಿ ತೊಡಗಿರುವ ದೃಶ್ಯಗಳು ಬಹಿರಂಗಗೊಂಡವು.  ಇದು ಭಾರತೀಯ ಜನತಾ ಪಕ್ಷವನ್ನು ಮುಜುಗರಕ್ಕೆ ಈಡು ಮಾಡಿತು. ರಾಜಕಾರಣಿಗಳ ನೈತಿಕತೆಯ ಪ್ರಶ್ನೆ ಮತ್ತೆ ಚರ್ಚೆಗೆ ಕಾರಣವಾಯಿತು.. ಸಾರ್ವಜನಿಕ ಬದುಕಿನಲ್ಲಿ ಇರುವವರು ನೈತಿಕತೆಗೆ ಮಹತ್ವ ನೀಡದಿರುವುದು ಸಾಮಾಜಿಕ ವಲಯದ  ಚರ್ಚೆಗೆ ಕಾರಣವಾಯಿತು. ಈ ಆರೋಪದ ನಡುವೆಯೂ ರೇಣುಕಾಚಾರ್ಯ ೨೦೦೮ ರಲ್ಲಿ ಸಚಿವರಾದರು.. ಅವರ ಮೇಲೆ ಬಂದಿದ್ದ  ಅನೈತಿಕತ ಸಂಬಂಧದ ಪ್ರಶ್ನೆಯನ್ನು ನೇಪತ್ಯಕ್ಕೆ ಸರಿಸಲಾಯಿತು.

೨೦೦೭ ರ ನಂತರ  ಅನೈತಿಕ ಲೈಂಗಿಕತೆ ಪ್ರಕರಣಗಳು ಹೆಚ್ಚು ಹೆಚ್ಚಾಗಿ ಬೆಳಕಿಗೆ ಬರತೊಡಗಿದವು. ಇದಕ್ಕೆ ಮಾಧ್ಯಮಗಳು ರಾಜಕಾರಣಿಗಳ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನ ಮಹತ್ವ ನೀಡಲು ಪ್ರಾರಂಭಿಸಿದ್ದು ಒಂದು ಕಾರಣವಾದರೆ, ಟ್ಯಾಬಲೈಡ್ ಪತ್ರಿಕೋದ್ಯಮ ಮುಖ್ಯವಾಹಿನಿಗೆ ಬಂದಿದ್ದೂ ಕಾರಣ ಇರಬಹುದು. ಒಟ್ಟಿನಲ್ಲಿ ರಾಜಕಾರಣಿಗಳು ತುಂಬು ಎಚ್ಚರದಿಂದ ಇರಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ನಿಜ. ಏನೇ ಇರಲಿ ೨೦೧೦ ರಲ್ಲಿ ಇನ್ನೊಬ್ಬ ಸಚಿವರು ಲೈಂಗಿಕ ಹಗರಣಕ್ಕೆ ಸಿಲುಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅವರು ಯಡಿಯೂರಪ್ಪ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಹರತಾಳು ಹಾಲಪ್ಪ..

ಸ್ನೇಹಿತನ ಹೆಂಡಿತಿಯ ಜೊತೆ ಲೈಂಗಿಕ ಚಟುವಟಿಕೆ ನಡೆಸಿದ ಆರೋಪ ಹೊತ್ತಿದ್ದ ಹರತಾಳು ಹಾಲಪ್ಪ ೨೦೧೭ ರಲ್ಲಿ ಈ ಆರೋಪದಿಂದ ಮುಕ್ತರಾದರು, ಹರತಾಳು ಹಾಲಪ್ಪ ಅವರ ಸ್ನೇಹಿತರೇ ತಮ್ಮ ಹೆಂಡತಿಯ ಜೊತೆ ಹಾಲಪ್ಪ ಅವರ ಸಂಬಂಧವಿದೆ ಎಂದು ಆರೋಪ ಮಾಡಿದ್ದರು.

ಈ ಪ್ರಕರಣ ನಡೆದ ಎರಡೇ ವರ್ಷಗಳಲ್ಲಿ ಬೆಳಕಿಗೆ ಬಂದಿದ್ದು ಮೂವರು ಶಾಸಕರು ವಿಧಾನಸಭೆಯಲ್ಲಿ ಇರುವಾಗ ತಮ್ಮ ಮೊಬೈಲ್ ನಲ್ಲಿ ನೀಲಿ ಚಿತ್ರದ ವೀಕ್ಷಣೆ ಮಾಡಿದ್ದು..  ಅವರೆಂದರೇ ಈಗಿನ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕರಾದ ಕೃಷ್ಣಪಾಲೇಮಾರ್ ಮತ್ತು ಸಿ.ಸಿ. ಪಾಟೀಲ್. ಸಿ. ಸಿ, ಪಾಟೀಲ್ ಈಗ ಸಚಿವರು.

ಈ ಪ್ರಕರಣ ಸಾಕಷ್ಟು ಸದ್ದು ಮಾಡಿತು. ಮತ್ತೆ ಸಾರ್ವಜನಿಕ ಬದುಕಿನಲ್ಲಿ ಇರುವವರ ನೈತಿಕತೆ ಮತ್ತು ಅನೈತಿಕತೆ ಕುರಿತು ಚರ್ಚೆ ನಡೆಯಿತು.. ಹಾಗೆ ಈ ಬಗ್ಗೆ ತನಿಖೆ ನಡೆಸಲು ನೇಮಕವಾದ ಸದನ ಸಮೀತಿ ಲಕ್ಶ್ಮಣ ಸವದಿ ಮತ್ತು ಸಿ.ಸಿ. ಪಾಟೀಲರನ್ನು ಆರೋಪ ಮುಕ್ತರನ್ನಾಗಿ ಮಾಡಿತು, ಪಾಲೇಮಾರ್ ಮಾತ್ರ ತಪ್ಪಿತಸ್ಥರಾದರು.

ಇಷ್ಟಕ್ಕೆ ಶಾಸಕರ ಮೇಲಿನ ಲೈಂಗಿಕ ಹಗರಣ ಆರೋಪ ನಿಲ್ಲಲಿಲ್ಲ. ಕೇವಲ ಒಂದು ವರ್ಷದ ನಂತರ ಪ್ರಕಟವಾದದ್ದು ಇನ್ನೊಂದು ಲೈಂಗಿಕ ಹಗರಣ.. ಅದು ಉಡುಪು ಶಾಸಕ ರಘುಪತಿ ಭಟ್ಟರದು..ಮಹಿಳೆಯೊಬ್ಬಳ ಜೊತೆ ಅವರಿದ್ದ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಯಿತು.. ಭಟ್ಟರು ಚುನಾವಣೆಯಿಂದಲೇ ಹಿಂದೆ ಸರಿದರು. ಐದು ವರ್ಷ ವನವಾಸ ಅನುಭವಿಸಿದರು.. ಯಾವಾಗಲೂ ಸಾಮಾನ್ಯ ಜನರಿಗೆ ನೆನಪು ಕಡಿಮೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಭಟ್ಟರು ಉಡುಪಿ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು..

೨೦೧೫ ರಲ್ಲಿ ಲೈಂಗಿಕ ಹಗರಣದಲ್ಲಿ ಸಿಲುಕಿದ ಇನ್ನೊಬ್ಬ ಶಾಸಕ, ಮಾಜಿ ಸಚಿವ ಎ. ರಾಮದಾಸ್. ಮಹಿಳೆಯೊಬ್ಬಳನ್ನು ಲೈಂಗಿಕವಾಗಿ ರಾಮದಾಸ್ ಬಳಸಿಕೊಂಡರು ಎಂಬುದು ಅವರ ಮೇಲಿನ ಆರೋಪವಾಗಿತ್ತು. ಆದರೆ ಈ ಆರೋಪದಿಂದಾಗಿ ರಾಮದಾಸ್ ಆತ್ಮಹತ್ಯೆಗೆ ಯತ್ನ ನಡೆಸಿದ್ದರು. ನಂತರ ಈ ಆರೋಪದ ಬಗ್ಗೆ ತನಿಖೆ ನಡೆಸಿದ ಸಿಐಡಿ ಪೊಲೀಸರು ರಾಮದಾಸ್ ಅವರನ್ನು ಆರೋಪ ಮುಕ್ತರನ್ನಾಗಿ ಮಾಡಿದರು.

೨೦೧೫ ರ ಈ ಪ್ರಕರಣದ ನಂತರ ೨೦೧೬ ರಲ್ಲಿ ಬೆಳಕಿಗೆ ಬಂದಿದ್ದು ಇನ್ನೊಂದು ಪ್ರಕರಣ..ಈ ಪ್ರಕರಣದ ಆರೋಪಿ ೭೧ ವರ್ಷ ವಯಸ್ಸಿನ ಅಬ್ಕಾರಿ ಸಚಿವರಾಗಿದ್ದ ಎಚ್. ವೈ. ಮೇಟಿ. ಅವರು ಮಹಿಳೆಯೊಬ್ಬರ ಜೊತೆ ನಡೆಸುತ್ತಿದ್ದ ಕ್ಲಿಪಿಂಗ್ ಎಲ್ಲ ವಾಹಿನಿಗಳನ್ನು ತಲುಪಿ ಪ್ರಸಾರವಾಯಿತು. ವರ್ಗಾವಣೆ ಬಯಸಿದ ಮಹಿಳೆಯ ಜೊತೆ ಅವರು ಲೈಂಗಿಕ ಚಟುವಟಿಕೆ ನಡೆಸಿದ ಆರೋಪ ಅವರ ಮೇಲಿತ್ತು. ೨೦೧೭ ರಲ್ಲಿ ಸಿಐಡಿ ಈ ಬಗ್ಗೆ ತನಿಖೆ ನಡೆಸಿ ಮೇಟಿ ಅವರನ್ನು ದೋಷಮುಕ್ತರನ್ನಾಗಿ ಮಾಡಿತು..

ಇದಾದ ಮೇಲೆ ಈಗ ಬಹಿರಂಗವಾಗಿದ್ದು ರಮೇಶ್ ಜಾರಕೀಹೊಳಿ ಅವರ ಪ್ರಕರಣ...

ಸ್ವಾತಂತ್ರೋತ್ತರ ಕರ್ನಾಟಕದ ರಾಜಕಿಯ ಇತಿಹಾಸದಲ್ಲಿ ಬಹಿರಂಗಗೊಂಡ ಲೈಗಿಂಕ ಹಗರಣಗಳ ದಾಖಲಿತ ವಿವರಗಳು ಇವಾದರೆ ರಾಜಕೀಯ ನಾಯಕರ ಲೈಂಗಿಕ ಚಟುವಟಿಕೆಗಳ ಬಗ್ಗೆ ಬಹಳಷ್ಟು ಸುದ್ದಿಗಳು ವೈರಲ್ ಆದದ್ದಿದೆ..

ಕೆಲವು ರಾಜಕೀಯ ನಾಯಕರ ಮದುವೆಯೇತರ ಸಂಬಂಧಗಳು ಸಾರ್ವಜನಿಕ ಚರ್ಚೆಗೆ ಕಾರಣವೂ ಆಗಿದ್ದವು. ಆದರೆ ಅದ್ಯಾವುದೂ ಕೂಡ ಈಗ ಪ್ರಸ್ತಾಪಿಸಿರುವ ಪ್ರಕರಣಗಳಂತೆ ಹಗರಣ ಆಗಿರಲಿಲ್ಲ. ಅಲ್ಲಿ ಅಧಿಕಾರ ದುರೂಪಯೋಗ ಚೀಟೀಂಗ್ ಅಂತಹ ಆರೋಪವೂ ಇರಲಿಲ್ಲ. ಅದು ಕೇವಲ ಗಂಡು ಹೆಣ್ಣಿನ ಒಪ್ಪಿತ ಲೈಂಗಿಕ ಚಟುವಟಿಕೆ ಮಾತ್ರ ಆಗಿದ್ದವು. ಇಲ್ಲಿ ನೈತಿಕತೆಯ ಪ್ರಶ್ನೆ ಅಷ್ಟು ಮುಖ್ಯ ಆಗಲೇ ಇಲ್ಲ.

ಇಂತಹ ಮದುವೆಯೇತರ ಸಂಬಂಧ ಅಥವಾ ಸ್ನೇಹಿತೆಯರನ್ನು ಹೊಂದಿದ್ದಾರೆ ಎಂದು ಹೇಳಲಾದ ದೇವರಾಜ್ ಅರಸು, ರಾಮಕೃಷ್ಣ ಹೆಗಡೆ, ಆರ್. ಗುಂಡೂರಾವ್, ಜೆ. ಎಚ್. ಪಟೇಲರ ಸುತ್ತ ಸಾಕಷ್ಟು ರಂಜನೀಯ ಕಥೆಗಳು ಕೇಳಿ ಬಂದಿದ್ದವು. ಜೊತೆಗೆ ಈ ಸಂಬಂಧಗಳನ್ನು ಒಪ್ಪಿಕೊಂಡ ಈ ಹಿರಿಯ ರಾಜಕಾರಣಿಗಳು ತಾವು ಶ್ರೀರಾಮಚಂದ್ರ ಅಲ್ಲ ಎಂದು ಜನರ ಎದುರು ಸ್ಪಷ್ಟ ಪಡಿಸಿದ್ದರು. ಜೊತೆಗೆ ಇವರ ಈ ಮದುವೆಯೇತರ ಸಂಬಂಧಗಳು ಅಸಹ್ಯ ಹುಟ್ಟಿಸುವಂತೆ ಇರಲಿಲ್ಲ..ಅದು ಸಭ್ಯತೆಯ ಎಲ್ಲೆಯನ್ನೂ ಮೀರಿರಲಿಲ್ಲ..ಜೊತೆಗೆ ಅಧಿಕಾರ ದುರೂಪಯೋಗ ಮಾಡಿ ಲೈಂಗಿಕ ಸುಖ ಪಡೆಯಲು ಯತ್ನಸಿದ ದೂರು ಕೂಡ ಇವರ ಮೇಲಿರಲಿಲ್ಲ. ಅದು ಕೇವಲ ರಂಜನೀಯ ಕಥೆಗಳಾಗಿ ಮಾತ್ರ ಕನ್ನಡಿಗರ ಮನಸ್ಸಿನಲ್ಲಿ ಉಳಿದುಕೊಂಡವು..

ಆದರೆ ೧೯೭೩ ರ ಆರ್. ಡಿ. ಕಿತ್ತೂರ್ ಅವರ ಪ್ರಕರಣದಿಂದ ರಮೇಶ್ ಜಾರಕೀಹೊಳಿ ವರೆಗಿನ ಲೈಂಗಿಕ ಹಗರಣ ಒಪ್ಪಿತ ಲೈಂಗಿಕ ಚಟುವಟಿಕೆ ಆಗಿರಲಿಲ್ಲ. ಅದು ತಮ್ಮ ಅಧಿಕಾರ ದುರೂಪಯೋಗ ಪಡಿಸಿಕೊಂಡು ಮಹಿಳೆಯನ್ನು ಬಳಸಿಕೊಂಡ ಆರೋಪಗಳಾಗಿವೆ.. ಹೀಗಾಗಿ ಇದು ಕೇವಲ ಗಂಡು ಹೆಣ್ಣಿನ ಸಂಬಂಧಕ್ಕೆ ಮಾತ್ರ ಸೀಮಿತವಾಗದೇ ಸಾಮಾಜಿಕ ಆಯಾಮವನ್ನು ಪಡೆಯುತ್ತದೆ. ಈ ಕಾರಣದಿಂದ ಸಾಮಾಜಿಕ ಬದುಕು ಮತ್ತು ನೈತಿಕತೆ ಕುರಿತು ಚರ್ಚೆ ನಡೆಸಲೇಬೇಕಾದ ಅನಿವಾರ್ಯತೆ ಮೂಡಿದೆ.

article published in prajavani 

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...