Wednesday, November 23, 2011

ಮತ್ತೆ ಮತ್ತೆ ಲಂಕೇಶ್ ನೆನಪಾಗುತ್ತಿದ್ದಾರೆ......!

ಯಾಕೋ ಗೊತ್ತಿಲ್ಲ. ಬಳ್ಳಾರಿಯಲ್ಲಿರುವ ನನ್ನ ಯುವ ಸ್ನೇಹಿತ ಆದಿತ್ಯ ಭಾರದ್ವಾಜ್ ಕಳುಹಿಸಿದ ಒಂದು ಎಸ್ ಎಮ್ ಎಸ್ ನನ್ನನ್ನು ಕಾಡುತ್ತಿದೆ. ಅವರು ಕಳುಹಿಸಿದ ಎಸ್ ಎಮ್ ಎಸ್ ನ ಸಾರ ಇಷ್ಟೇ. ನನಗೆ ಈಗ ಲಂಕೇಶ್ ನೆನಪಾಗುತ್ತಾರೆ.. ಅವರು ಕಳುಹಿಸಿದ ಈ ಎಸ್ ಎಂ ಎಸ್ ಓದಿದ ಮೇಲೆ ನನಗೂ ಲಂಕೇಶ್ ಕಾಡತೊಡಗಿದ್ದಾರೆ. ಪ್ರಾಯಶ: ಲಂಕೇಶ್ ಪತ್ರಿಕೆಯ ಎರಡನೆಯ ಸಂಚಿಕೆ ಹೊರ ಬಂದ ವಾರ ಅದು. ನಾನು ಕೈಯಲ್ಲಿ ಒಂದು ಲೇಖನವನ್ನು ಹಿಡಿದುಕೊಂಡು ಬಸವನಗುಡಿಯಲ್ಲಿರುವ ಅವರ ಕಚೇರಿಗೆ ಹೋದೆ. ಲಂಕೇಶ್ ತುಂಬಾ ಪ್ರೀತಿಯಿಂದ ಒಳಗೆ ಕರೆದು ಮಾತನಾಡಿದರು. ನಾನು ಬರೆದು ತಂದಿದ್ದ ಲೇಖನವನ್ನು ಸ್ವಲ್ಪ ಅಳುಕಿನಿಂದಲೇ ಅವರಿಗೆ ನೀಡಿದೆ. ಅದು ರಾಮಚಂದ್ರಾಪುರದ ಅಂದಿನ ಸ್ವಾಮಿ ರಾಘವೇಂದ್ರ ಭಾರತಿ ಸ್ವಾಮಿಗಳಿಗೆ ಸಂಬಂಧಿಸಿದ್ದಾಗಿತ್ತು. ಆ ದಿನಗಳಲ್ಲಿ ಬಂಡಾಯ ಸಂಘಟನೆಯಲ್ಲಿ ಇದ್ದ ನಾನು ಈ ಸ್ವಾಮಿಯ ವಿರುದ್ಧ ಊರಿನಲ್ಲಿ ಹೋರಾಟವನ್ನು ಸಂಘಟಿಸಿದ್ದೆ. ಇದಕ್ಕೆ ಪ್ರತಿಯಾಗಿ ಅವರು ನನ್ನನ್ನು ಹೈವ್ಯಕ ಭ್ರಾಹ್ಮಣರ ಜಾತಿಯಿಂದ ನನ್ನನ್ನು ಹೊರ ಹಾಕಿದ್ದರು. ಯಾವ ಹವ್ಯಕರೂ ನನಗೆ ಅನ್ನ ನೀರು ಕೊಡಬಾರದು ಎಂದು ಫರ್ಮಾನು ಹೊರಡಿಸಿದ್ದರು.ಅವರ ಮೇಲೆ ಒಂದು ಲೇಖನ ಬರೆದುಕೊಂಡು ಬಂದಿದ್ದ ನಾನು ಲಂಕೇಶ್ ಪತ್ರಿಕೆಯ ಕಚೇರಿಯ ಬಾಗಿಲು ಬಡಿದಿದ್ದೆ. ಲಂಕೇಶ್ ನನ್ನ ಲೇಖನವನ್ನು ಓದಿದರು. ಲೇಖನ ಚೆನ್ನಗಿದೆ. ಆದರೆ ನಿಮಗೆ ಕನ್ನಡ ಕಲಿಸಿದ ಮಹಾತ್ಮ ಯಾರು ಎಂದು ಪ್ರಶ್ನಿಸಿದರು. ನೋಡಯ್ಯ ಲೇಖನ ಬರೆಯುವುದಕ್ಕಿಂತ ಮೊದಲು ಕನ್ನಡದ ವ್ಯಾಕರಣವನ್ನು ಕಲಿತಿರಬೇಕು ಎಂದರು ಲಂಕೇಶ್. ನನಗೆ ಅವಮಾನವಾಗಿತ್ತು. ಕೋಪ ಬಂದಿತ್ತು. ನಾನು ತಿರುಗಿ ಮಾತನಾಡದೇ ಅಲ್ಲಿಂದ ಹೊರಟು ಬಿಟ್ಟೆ. ಮುಂದಿನ ವಾರ ಲಂಕೇಶ್ ಪತ್ರಿಕೆಯಲ್ಲಿ ನನ್ನ ಲೇಖನ ಪ್ರಕಟವಾಗಿತ್ತು. ಜೊತೆಗೆ ೧೫೦ ರೂಪಾಯಿ ಸಂಭಾವನೆ.! ಇದಾದ ಮೇಲೆ ಲಂಕೇಶ್ ಜೊತೆ ನನ್ನ ಸಂಪರ್ಕ ಬೆಳೆಯಿತು. ಹಾಗೆ ಊರಿನಿಂದ ಬೆಂಗಳೂರಿಗೆ ಬಂದ ನಾನು ಬೇರೆ ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡತೊಡಗಿದೆ. ಮೊದಲು ಕೆಲಸಕ್ಕೆ ಸೇರಿದ್ದ್ಉ ಸಂಯುಕ್ತ ಕರ್ನಾಟಕ ಪತ್ರಿಕೆಗೆ. ಅಲ್ಲಿ ಆಗ ನನಗೆ ಸಿಗುತ್ತಿದ್ದುದು ತಿಂಗಳಿಗೆ ೮೦ ರೂಪಾಯಿ ಸಂಬಳ. ಆಗಲೇ ನಾನು ಲಂಕೇಶ್ ಪತ್ರಿಕೆಯ ಕಾಯಂ ಓದುಗನಾಗಿದ್ದೆ. ಲಂಕೇಶ್ ಪತ್ರಿಕೆ ನನಗೆ ಓದುವುದನ್ನು ಕಲಿಸಿತ್ತು. ಒಳನೋಟವನ್ನು ನೀಡಿತ್ತು. ಈಗಲೂ ಆಗಾಗ ನಾನು ಲಂಕೇಶ್ ಅವರ ಟೀಕೆ ಟಿಪ್ಪಣಿಯನ್ನು ಓದುವುದುಂಟು. ಆಗೆಲ್ಲ ಒಂದು ವಸ್ತು ಮತ್ತು ವಿಚಾರವನ್ನ ಅವರು ಗ್ರಹಿಸುತ್ತಿದ್ದ ರೀತಿ ಅಚ್ಚರಿಯನ್ನು ಉಂಟು ಮಾಡುತ್ತದೆ. ಇವತ್ತಿಗೂ ಕೂಡ ಅವರ ಬಹಳಷ್ಟು ಬರಹಗಳು ಪ್ರಸ್ತುತ ಅನ್ನಿಸುತ್ತದೆ. ಲಂಕೇಶ್ ಅವರ ಅತಿ ದೊಡ್ಡ ಗುಣವೆಂದರೆ, ಯಾವುದೇ ರೀತಿಯ ಕ್ರೈಸಿಸ್ ನಲ್ಲಿ- ಅದು ರಾಜಕೀಯ ಬಿಕ್ಕಟ್ಟಿರಬಹುದು, ಸಾಮಾಜಿಕ ಬಿಕ್ಕಟ್ಟು ಇರಬಹುದು, ಅವರು ತೆಗೆದುಕೊಳ್ಳುತ್ತಿದ್ದ ಜನಪರ ನಿಲುವು. ಅವರ ನಿಲುವಿನಲ್ಲಿ ಕೆಲವೊಮ್ಮೆ ತಪ್ಪುಗಳು ಇದ್ದರೂ ಅವು ಉದ್ದೇಶಪೂರ್ವಕ ತಪ್ಪುಗಳಾಗಿರಲಿಲ್ಲ. ಅವರ ಬದ್ಧತೆ ಮತ್ತು ಸಾಮಾಜಿಕ ಕಳಕಳಿಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿರಲಿಲ್ಲ. ಲಂಕೇಶ್ ನಿಜವಾದ ಅರ್ಥದಲ್ಲಿ ಪತ್ರಿಕೋದ್ಯಮಿಯಾಗಿದ್ದರು. ಲಂಕೇಶ್ ಅವರಿಗೆ ೬೦ ತುಂಬಿದ ಸಂದರ್ಭದಲ್ಲಿ ಮೈಸೂರಿನಲ್ಲಿ ಮೂರು ದಿನಗಳ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲ ಘಟಾನುಘಟಿಗಳಿದ್ದ ಆ ಕಾರ್ಯಕ್ರಮದಲ್ಲಿ ಲಂಕೇಶ್ ಪತ್ರಿಕೆ ಮತ್ತು ಕನ್ನಡ ಪತ್ರಿಕೋದ್ಯಮ ಎಂಬ ವಿಚಾರದ ಬಗ್ಗೆ ಭಾಷಣ ಮಾಡುವ ಅವಕಾಶ ನನಗೆ ಲಭ್ಯವಾಗಿತ್ತು. ಲಂಕೇಶ್ ನಾನೇ ಆ ವಿಚಾರದ ಮೇಲೆ ಉಪನ್ಯಾಸ ನೀಡಬೇಕು ಎಂದು ಸೂಚಿಸಿದ್ದರು. ಅಂದಿನ ನನ್ನ ಭಾಷಣವನ್ನು ಅವರು ಮೆಚ್ಚಿಕೊಂಡಿದ್ದರು. ಇದಾದ ಮೇಲೆ ನಾನು ಅವರನ್ನು ನೋಡಿದ್ದು ಅವರು ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಾಗ. ನನ್ನ ಸ್ಣೇಹಿತರಾದ ಭರತಾದ್ರಿ ಮತ್ತು ಪತ್ರಕರ್ತ ಮಹದೇವ್ ಪ್ರಕಾಶ್ ಮೇಷ್ಟ್ರು ನಿಮ್ಮನ್ನು ನೋಡಬೇಕಂತೆ ಎಂದು ಹೇಳಿದಾಗ ಮರುದಿನವೇ ನಾನು ಆಸ್ಪತ್ರೆಗೆ ಹೋದೆ. ಲಂಕೇಶ್ ಹಾಸಿಗೆಯ ಮೇಲೆ ಮಲಗಿದ್ದರು. ಅವರ ಹೊಟ್ಟೆ ಗುಡಾಣದಂತೆ ಕಾಣುತ್ತಿತ್ತು. ಬಾರಯ್ಯ ಎಂದವರೆ ನನ್ನ ಜೊತೆಗೆ ಮಾತನಾಡತೊಡಗಿದರು. ನಾನು ಸತ್ತು ಹೋಗ್ತೀನೇನೋ ಗೊತ್ತಿಲ್ಲ..ಆದರೆ ನಾನು ಸಾವಿಗೆ ಹೆದರುವುದಿಲ್ಲ ಎಂದರು ಲಂಕೇಶ್. ನನ್ನ ಪತ್ರಿಕೆ ಹೇಗಿದೆಯಯ್ಯ ಎಂದೂ ಪ್ರಶ್ನಿಸಿದರು. ಸಾರ್, ಒಬ್ಬ ಮನುಷ್ಯನಂತೆ ಪತ್ರಿಕೆಗೂ ಒಂದು ಆಯಸ್ಸು ಅಂತ ಇರುತ್ತದೆ. ಲಂಕೇಶ್ ಪತ್ರಿಕೆ ಎಷ್ಟು ಎತ್ತರಕ್ಕೆ ಏರಬಹುದಿತ್ತೋ ಅಷ್ಟು ಎತ್ತರಕ್ಕೆ ಏರಿ ಆಗಿದೆ. ಇನ್ನು ಏನಿದ್ದರೂ ಅದು ಕೆಳಕ್ಕೆ ಬರಲೇಬೇಕು. ಮೇಲೆ ಹೋದವರೂ ಕೆಳಕ್ಕೆ ಬೀಳುವಂತೆ ಪತ್ರಿಕೆ ಕೂಡ. ನೀವು ದಯವಿಟ್ಟು ತಪ್ಪು ತಿಳಿಯಬಾರದು. ನೀವು ಬೈದರೇ ಎಲ್ಲರೂ ಕೇಳುತ್ತಾರೆ. ನೀವು ಕ್ಷಮಿಸಿ ಎಂದು ಲೇಖನವನ್ನು ಪ್ರಾರಂಭಿಸಿದರೆ ಅದು ನೀವು ಬರೆಯುವ ವಿಧಾನ ಅದು ನಮಗೆಲ್ಲ ಖುಷಿ ನೀಡುತ್ತದೆ. ಆದರೆ ನಿಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುವರೆಲ್ಲ ಬೈಯುವುದೇ ಪತ್ರಿಕೋದ್ಯಮ ಎಂದುಕೊಂಡರೆ ಅದು ಅಪಾಯ. ಜೊತೆಗೆ ಸಣ್ನ ಪುಟ್ಟ ಹುಡುಗರು ನಿಮ್ಮದೇ ದಾಟಿಯಲ್ಲಿ ಬೈಯಲು ಪ್ರಾರಂಭಿಸಿದರೆ ಯಾರೂ ಕೇಳುವುದಿಲ್ಲ. ಬೈಯುವವನಿಗೂ ಒಂದು ಯೋಗ್ಯತೆ ಬೇಕಾಗುತ್ತದೆ ಎಂದೇ ನಾನು. ಲಂಕೇಶ್ ಎಲ್ಲವನ್ನೂ ಕೇಳಿಸಿಕೊಂಡರು. ಹಾಗೆ ಮಧ್ಯಾನ್ಹದವರೆಗೆ ಹತ್ತಿರಕ್ಕೆ ಕೂಡ್ರಿಸಿಕೊಂಡು ಮಾತನಾಡಿದರು. ನಮ್ಮಂಥಹ ಲಕ್ಶಾಂತರ ಜನರನ್ನು ಮಾನಸಿಕವಾಗಿ ಬೆಳೆಸಿದ ಲಂಕೇಶ್ ಹಾಗೆ ಹಾಸಿಗೆಯ ಮೇಲೆ ಮಲಗಿದ್ದನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಅಗ ನಾನು ಕನ್ನಡ ಪ್ರಭದಲ್ಲಿ ಬರೆಯುತ್ತಿದ್ದ ರಾಜಕೀಯ ವರದಿಗಳನ್ನು ಮೆಚ್ಚಿಕೊಂಡಿದ್ದ ಅವರು ಪತ್ರಿಕೋದ್ಯಮಿಗೆ ನ್ಯಾಯ ನಿಷ್ಠುರತೆ ಬೇಕು ಅದು ನಿನಗೆ ಇದೆ ಎಂದು ನನ್ನ ಬೆನ್ನು ತಟ್ಟಿದ್ದನ್ನು ನಾನು ಹೇಗೆ ತಾನೆ ಮರೆಯಲಿ ? ಈಗ ಪ್ರತಿದಿನ ಪತ್ರಿಕೆ ಓದುವಾಗ ಲಂಕೇಶ್ ನೆನಪಾಗುತ್ತಾರೆ. ಅವರ ಜೊತೆ ಬೇರೆ ಸಂಪಾದಕರನ್ನು ಪತ್ರಿಕೋದ್ಯಮಿಗಳನ್ನು ಹೋಲಿಸಲು ಯತ್ನಿಸುತ್ತೇನೆ. ಮನಸ್ಸಿಗೆ ಬೇಸರವಾಗುತ್ತದೆ. ಕೆಲವೊಮ್ಮೆ ಈ ಪತ್ರಿಕೋದ್ಯಮವೇ ಬೇಡ ಎಂದು ಅನ್ನಿಸುತ್ತದೆ. ಅದರೆ ಬದುಕಲು ಬೇರೆ ದಾರಿ ಯಾವುದು ಎಂದು ತಿಳಿಯದೇ ಸುಮ್ಮನಾಗುತ್ತೇನೆ. ಇಂದಿನ ಪತ್ರಿಕೋದ್ಯಮವನ್ನು ನೋಡಿ ನಾನು ಸಿನಿಕನಾಗಲಾರೆ. ಎಲ್ಲವೂ ಎಲ್ಲರೂ ಕೆಟ್ಟವರು ಎಂದು ಹೇಳಲಾರೆ. ಆದರೆ ಪತ್ರಿಕೋದ್ಯಮ ಸಾಗುತ್ತಿರುವ ದಾರಿ ಬೇಸರವನ್ನು ಉಂಟು ಮಾಡುತ್ತದೆ. ಆಗೆಲ್ಲ ಲಂಕೇಶ್ ನೆನಪಾಗಿ ಹೊಸ ಹುಮ್ಮಸು ಮೂಡುತ್ತದೆ. ಇದೆಲ್ಲ ಬದಲಾಗುತ್ತದೆ ಎಂದು ಅನ್ನಿಸುತ್ತದೆ.

Sunday, November 20, 2011

ನನ್ನ ಶಾಲೆ ಮತ್ತು ಮೋಟು ಕಾನಿನ ಭೂತ...!

ನಾನು ಓದಿದ ಶಾಲೆಗೆ ನೂರು ವರ್ಷ !
ಈ ಶಾಲೆ ಇರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಸುಮಾರು ನಾಲ್ಕು ಕಿಮೀ ದೂರದಲ್ಲಿ. ಸಿದ್ಧಾಪುರದಿಂದ ಸಿರ್ಸಿ ಮಾರ್ಗದಲ್ಲಿ ಬಂದು ಹಾರ್ಸಿಕಟ್ಟಾಗೆ ಹೋಗುವ ದಾರಿಯಲ್ಲಿ ತಿರುಗಿಕೊಂಡರೆ ಸಿಗುತ್ತದೆ, ಕೋಲಸಿರ್ಸಿ. ಆದರೆ ಆ ಊರನ್ನು ಕೋಲಸಿರ್ಸಿ ಎಂದು ಸಂಬೋಧಿಸುವುದು ತುಂಬಾ ಕಡಿಮೆ. ಜನರ ಬಾಯಲ್ಲಿ ಇದು ಕೋಲ್ಸೆ. ಈ ಊರಿಗೆ ಕೋಲಸಿರ್ಸಿ ಎಂಬ ಹೆಸರು ಯಾಕೆ ಬಂತು ಎಂಬುದು ಯಾರಿಗೂ ತಿಳಿಯದು. ಬಹುಶಃ ಸಿರ್ಸಿ ಸಿದ್ದಾಪುರದ ದಾರಿಯಲ್ಲಿ ಈ ಹೆಸರು ಬಂದರೂ ಬಂದಿರಬಹುದು.
ನಾನು ಆ ಶಾಲೆಗೆ ಹೋಗುವಾಗ ನಡೆದುಕೊಂಡೇ ಹೋಗಬೇಕಗಿತ್ತು. ಸುಮಾರು ಮೂರು ಕಿಮೀ ಕಾಡಿನ ದಾರಿ. ಆ ಕಾಡಿನ ದಾರಿಯಲ್ಲಿ ನನ್ನ ಜೊತೆಗೆ ಶಾಲೆಗೆ ಬರುತ್ತಿದ್ದ ನನ್ನ ಚಿಕ್ಕಪ್ಪ ಬಾಲಚಂದ್ರ ಹಾಗೂ ನಾನು ಹಲವು ಸಲ ಹುಲಿಯನ್ನು ನೋಡಿದ್ದುಂಟು. ಮಲಗಿರುವ ಹುಲಿಯನ್ನು ಕಲ್ಲು ಹೊಡೆದು ಎಬ್ಬಿಸುವ ಬಗ್ಗೆ ಮಾತನಾಡಿದ್ದು ಉಂಟು. ಆದರೆ ಅಲ್ಲಿ ಇಂದು ಹುಲಿಯೂ ಇಲ್ಲ, ಆಗಿನ ಕಾಡು ಇಲ್ಲ.
ಅದರ ಜೊತೆಗೆ ಅರ್ಧ ದಾರಿಯಲ್ಲಿ ಇದ್ದ ಮೋಟ ಕಾನಿನ ಭೂತ..
ಈ ಭೂತ ಸ್ಥಾನದ ಹಿಂದೆ ಸ್ಮಶಾನವಿತ್ತು. ಹೀಗಾಗಿ ಈ ಭೂತಕ್ಕೆ ಭಯಾನಕತೆ ಕೂಡ ಬಂದಿತ್ತು. ಈ ದಾರಿಯಲ್ಲಿ ಸಾಗುವವರು ಭೂತನಿಗೆ ಭಯ ಭಕ್ತಿಯಿಂದ ಕೈಮುಗಿದು ಸಾಗುತ್ತಿದ್ದರು. ಹಾಗೆ ಅಮಾವಾಸ್ಯೆಯೆಂದು ಹಲವರು ಅಲ್ಲಿ ಕುರಿ ಕೊಯ್ಯುತ್ತಿದ್ದರು. ಕೊಯ್ದ ಕುರಿಯ ರಕ್ತವನ್ನು ಭೂತದ ಕಲ್ಲಿಗೆ ಅಭಿಷೇಕ ಮಾಡುತ್ತಿದ್ದರು. ಇದರಿಂದ ಕೆಲವು ದಿನಗಳ ಕಾಲ ಭೂತನ ಕಲ್ಲು ರಕ್ತದಿಂದಾಗಿ ಕೆಂಪಗೆ ಕಾಣುತ್ತಿತ್ತು. ಮೋಟಕಾನಿನ ಈ ಭೂತ ತುಂಬಾ ಶಕ್ತಿವಂತ ಎಂದು ನನ್ನ ಅಜ್ಜ ಆಗಾಗ ಹೇಳುತ್ತಿದ್ದುದುಂಟು. ಆದರೆ ನಮ್ಮ ಮನೆಯವರು ಈ ಭೂತನಿಗೆ ನಡೆದುಕೊಳ್ಳುತ್ತಿರಲಿಲ್ಲ. ಹಾಗೆ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಇರುವ ಹವ್ಯಕರಿಗೂ ಈ ಭೂತನಿಗೂ ಅಂತಹ ಸಂಬಂಧ ಇರಲಿಲ್ಲ. ಕೋಳಿ ಕೊಯ್ಯುವುದನ್ನು ನೋಡಬಾರದು ಎಂದು ಅಮ್ಮ ಶಾಲೆಗೆ ಹೋಗುವಾಗ ಹೇಳಿ ಕಳಿಸುತ್ತಿದ್ದರು. ಆದರೆ ಭಯದಿಂದ ತಲೆ ಬಗ್ಗಿಸಿ ಆ ಬೂತನ ಸ್ಥಾನವನ್ನು ದಾಟಿ ಹೋಗಬೇಕು ಎಂದುಕೊಂಡರೂ ಆ ಸ್ಥಳಕ್ಕೆ ಬಂದ ತಕ್ಷಣ ಕಣ್ನು ಮೇಲೆ ಹೋಗುತ್ತಿತ್ತು. ಆಗೆಲ್ಲ ಕೋಳಿ ಕೊಯ್ದ ಮೇಲೆ ಅದರ ತಲೆ ಚಡಪಡಿಸುವುದು ಕಾಣುತ್ತಿತ್ತು. ಹಾಗೆ ಸ್ವಲ್ಪ ಹೊತ್ತು ಮೇಲಕ್ಕೆ ಹಾರಿದ ಕೋಳಿಯ ದೇಹ ನಂತರ ನಿಸ್ತೇಜವಾಗುತ್ತಿತ್ತು.
ನಮ್ಮ ಕೋಲ್ಸೆ ಶಾಲೆಯ ಪಕ್ಕದಲ್ಲಿ ಒಂದು ಅರಳಿ ಮರವಿತ್ತು. ಆ ಮರ ಈಗ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಆರಿದ್ರಾ ಮಳೆಯ ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿದ್ದುದು ಅದ್ರೆ ಮಳೆ ಹಬ್ಬ. ನಡು ಮಳೆಗಾಲದಲ್ಲಿ ನಡೆಯುವ ಈ ಹಬ್ಬದಲ್ಲಿ ಒಂದೇ ದಿನ ನೂರಾರು ಕುರಿಗಳನ್ನು ಬಲಿ ಕೊಡಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ನಾವು ಶಾಲೆಗೆ ಹೋಗುತ್ತಿರಲಿಲ್ಲ. ಕಡಿದ ಕುರಿಯನ್ನು ನೋಡಬಾರದು ಎಂಬ ಕಾರಣಕ್ಕೆ ನಮ್ಮ ಶಾಲೆಯ ಮೇಸ್ತ್ರು ನಮಗೆ ರಜೆ ಕೊಟ್ಟು ಬಿಡುತ್ತಿದ್ದರು. ನೂರಾರು ಕುರಿ ಕೋಳಿಯ ರಕ್ತಾಭಿಷೇಕಕ್ಕೆ ಸಾಕ್ಷಿಯಾಗಿರುತ್ತಿದ್ದ ಈ ಮರ ಉಳಿದ ದಿನಗಳಲ್ಲಿ ಎಲ್ಲ ಮರಗಳಂತೆ ಇರುತ್ತಿತ್ತು. ನಮ್ಮ ಶಾಲೆಯಲ್ಲಿ ಅಗ ಶೌಚಾಲಯ ಇರದಿದ್ದರಿಂದ ನಾವು ಶಾಲೆ ಮಕ್ಕಳು ಮೂತ್ರ ವಿಸರ್ಜೆನೆಗೆ ಈ ಸ್ಥಳವನ್ನು ಬಳಸುತ್ತಿದ್ದೆವು. ಆ ಮರದ ಮರೆಯಲ್ಲಿ ನಿಂತರೆ ಯಾರೂ ಕಾಣುತ್ತಿರಲಿಲ್ಲ. ಅಲ್ಲಿ ಮೂತ್ರ ವಿಸರ್ಜನೆಗೆ ಉಚ್ಚೆ ಕುಣಿಗಳನ್ನು ನಾವು ನಿರ್ಮಿಸುತ್ತಿದ್ದೆವು.
ನಮ್ಮದು ಏಳನೆಯ ತರಗತಿಯವರೆಗಿನ ಶಾಲೆ. ಅಲ್ಲಿ ಬರುವ ಮಕ್ಕಳಲ್ಲಿ ಬಹುತೇಕರು ಈಡಿಗರು ಮತ್ತು ಹಿಂದುಳಿದ ವರ್ಗದವರ ಮಕ್ಕಳು. ಇವರನ್ನು ಬಿಟ್ಟರೆ ಹತ್ತಾರು ಲಿಂಗಾಯಿತರ ಮಕ್ಕಳು. ನಾವು ಎರಡು ಮೂರು ಮಕ್ಕಳು ಮಾತ್ರ ಹವ್ಯಕರು.
ಮಳೆಗಾಲ ಬಂದರೆ ಶಾಲೆ ಸೋರುತ್ತಿತ್ತು. ಹೀಗಾಗಿ ಮಳೆಗಾಲಕ್ಕೆ ಮೊದಲು ನಾವು ಶಾಲೆಯ ಮೇಲೆ ಏರಿ ಒಡೆದ ಹೆಂಚುಗಳನ್ನು ತೆಗೆದು ಹೊಸ ಹೆಂಚು ಹಾಕುತ್ತಿದ್ದೆವು. ಹಾಗೆ ಶಾಲೆಯ ಎದರು ಎಲ್ಲ ರೀತಿಯ ತರಕಾರಿಗಳನ್ನು ನಾವು ಬೆಳೆಸಿದ್ದೆವು. ಎಲ್ಲೂ ಬೆಳೆಯದಂತೆ ಬೆಳೆದ ಆ ತರಕಾರಿ ಎಲ್ಲಿಗೆ ಹೋಗುತ್ತದೆ ಎಂಬುದು ಮಾತ್ರ ನಮಗೆ ತಿಳಿಯುತ್ತಿರಲಿಲ್ಲ. ಶಾಲೆಯಲ್ಲಿರುವ ಎಲ್ಲ ಟೀಚರುಗಳ ಮನೆಗೆ ಇದೇ ತರಕಾರಿ ಹೋಗುತ್ತದೆ ಎಂಬ ಮಾತು ಕೇಳಿ ಬಂದಿದ್ದವು. ಆದರೆ ಈ ಮಾತಿಗೆ ನಮ್ಮ ಬಳಿ ಯಾವ ಪುರಾವೆಯೂ ಇರಲಿಲ್ಲ.
ನಮ್ಮ ಶಾಲೆಯಲ್ಲಿ ಇದ್ದ ಟೀಚರುಗಳಲ್ಲಿ ಎಂಟು ಜನ ಮಿಸ್ ಗಳು. ನಾವು ಅವರನ್ನು ಅಕ್ಕೋರೆ ಎಂದು ಸಂಬೊಂಧಿಸುತ್ತಿದ್ದೆವು. ಇವರಲ್ಲಿ ಸುಮಿತ್ರಾ ಅಕ್ಕೋರಿಗೆ ನನ್ನ ಬಗ್ಗೆ ತುಂಬಾ ಪ್ರೀತಿ. ನಾನು ಅವರಿಗೆ ನಮ್ಮ ಮನೆಯಲ್ಲಿ ಬೆಳೆಯುತ್ತಿದ್ದ ದೊಡ್ದ ದೊಡ್ದ ಡೇರೆ ಹೂವುಗಳನ್ನು ಕೊಡುತ್ತಿದ್ದೆ. ಅವರು ಅದನ್ನು ಮುಡಿದುಕೊಂಡು ಶಶಿ ತಂದು ಕೊಟ್ಟಿದ್ದು ಎಂದು ಹೆಮ್ಮೆಯಿಂದ ಹೇಳುತ್ತಿದ್ದರು.
ನಾಲ್ಕನೆ ತರಗತಿಯಲ್ಲಿ ಓದುತ್ತಿದ್ದ ನಾನು ಎಲ್ಲರಿಗಿಂತ ಸಣ್ಣಗಿದ್ದೆ. ಕುಳ್ಳ ಬೇರೆ. ಕೆಂಪಗಿನ ಒಂದು ಮುದ್ದೆಯ ಹಾಗಿದ್ದ ನನ್ನನ್ನು ಕಂಡರೆ ಎಲ್ಲ ಶಿಕ್ಷರಿಗೂ ಪ್ರೀತಿ. ಅದೊಂದು ದಿನ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ತಲೆ ತಿರುಗಿ ಬಿದ್ದು ಬಿಟ್ಟೆ. ಪಟಗಾರ್ ಮಾಸ್ತರು ಮತ್ತು ಸುಮಿತ್ರಾ ಅಕ್ಕೋರು ನನ್ನನ್ನು ಕಳುಹಿಸಿ ಕೊಡಲು ನನ್ನ ಜೊತೆಗೆ ನಮ್ಮ ಮನೆಗೆ ಬಂದರು. ಕಾಡಿನ ಹಾದಿಯಲ್ಲಿ ಸುಮಾರು ಅರ್ಧ ಗಂಟೆ ನಡೆದು ಮನೆಗೆ ಬಂದ ಮೇಲೆ ನಾನು ತಲೆ ತಿರುಗಿ ಬಿದ್ದಿದ್ದನ್ನು ಹೇಳಿದ ಮಾಸ್ತರು ನಾನು ತುಂಬಾ ವೀಕ್ ಇರುವುದರಿಂದ ಹೀಗಾಗಿದೆ ಎಂದು ಹೇಳಿ ಅವನು ಒಂದೆರದು ದಿನ ರಜಾ ತೆಗೆದುಕೊಳ್ಳಲಿ ಎಂದು ಸ್ಯಾಂಕ್ಷನ್ ಮಾಡಿಯೇ ಬಿಟ್ಟರು.
ಅಮ್ಮ ಅವತ್ತೆ ಮಾಡಿದ್ದ ತೊಡೆದೆಳ್ಳವು ಅನ್ನು ಪ್ರೀತಿಯಿಂದ ನಮ್ಮ ಮಾಸ್ತರು ಮತ್ತು ಅಕ್ಕೋರಿಗೆ ಕೊಟ್ಟರು. ಮಲೇನಾಡಿನಲ್ಲಿ ಕಬ್ಬಿನ ಹಾಲಿನಿಂದ ಮಾಡುವ ಈ ತೊಡೆದೆಳ್ಳವು ಕರಾವಳಿಯವರಾದ ಅವರಿಗೆ ಅಪರಿಚಿತವಾಗಿತ್ತು. ದೊಡ್ಡ ಮಡಿಕೆಯನ್ನು ಮಗಚಿ ಒಲೆಯ ಮೇಲಿಟ್ಟು ಅದರ ಮೇಲೆ ದೂಸೆಯಂತೆ ಹಾಕುವ ವಿಶಿಷ್ಟವಾದದ್ದು ತೊಡೆದೆಳ್ಳವು. ಅದನ್ನು ಬಾಯಿಯಲ್ಲಿ ಇಟ್ಟ ಕೆಲವೇ ಸೆಕೆಂಡುಗಳಲ್ಲಿ ಅದು ಕರಗಿ ಹೋಗುತ್ತದೆ. ಇದು ಯಾವ ರೀತಿಯ ತಿಂಡಿ ಎಂಬುದು ಪಟಗಾರ್ ಮಾಸ್ತರಿಗೆ ಅರ್ಥವಾಗಲಿಲ್ಲ. ಆದರೆ ಅವರಿಗೆ ಅದರ ಮೋಹ ಮಾತ್ರ ಹೋಗಲಿಲ್ಲ. ಅಮ್ಮ ಅವರಿಗಾಗಿ ನಾಲ್ಕಾರು ತೊಡೆದೆಳ್ಲವುಗಳನ್ನು ಪ್ರೀತಿಯಿಂದ ಕಟ್ಟಿ ಕೊಟ್ಟಳು.
ಇದಾದ ಮೇಲೆ ಕಂಡಾಗಲೆಲ್ಲ ನಿಮ್ಮ ಮನೆಯ ತೊಡೆದೆಳ್ಳವು ಅದ್ಭುತ ಅತ್ಯದ್ಭುತ ಎಂದು ಅವರು ಹೇಳುತ್ತಿದ್ದರು. ಜೊತೆಗೆ ಇದೇ ಕಾರಣಕ್ಕೆ ಅವರ ದೃಷ್ಟಿಯಲ್ಲಿ ನನ್ನ ಗೌರವವೂ ಹೆಚಾಯಿತು. ಆದರೆ ನಾನು ಇಡೀ ಘಟನೆಯನ್ನು ಅರ್ಥ ಮಾಡಿಕೊಂಡಿದ್ದೇ ಬೇರೆ ರೀತಿಯಲ್ಲಿ. ನಾನು ತಲೆ ತಿರುಗಿ ಬಿದ್ದರೆ ನನಗೆ ರಜೆ ನೀಡುತ್ತಾರೆ ಎಂಬ ಸತ್ಯದ ದರ್ಶನ ನನಗಾಗಿತ್ತು. ಹೀಗಾಗಿ ವಾರಕ್ಕೆ ಒಮ್ಮೆ ಪ್ರಾರ್ಥನೆಯ ವೇಳೆಯಲ್ಲಿ ತಲೆ ತಿರುಗಿ ಬಿದ್ದು ಬಿಡುತ್ತಿದ್ದೆ. ಇದು ನಾಟಕವೋ ಅಥವಾ ನಿಜವೂ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳದ ಪಟಗಾರ್ ಮಾಸ್ತರು ನನ್ನನ್ನು ಮನೆಗೆ ಕಳುಹಿಸಿಕೊಡಲು ಸಿದ್ಧವಾಗುತ್ತಿದ್ದರು. ನಮ್ಮ ಮನೆಗೆ ಬಂದು ವಿಶೇಷ ತಿಂಡಿಗಳನ್ನು ತಿಂದು ಅವರು ಶಾಲೆಗೆ ಹಿಂತಿರುಗುತ್ತಿದ್ದರು. ನಾನು ರಜಾದ ಸುಖವನ್ನು ಅನುಭವಿಸುತ್ತಿದ್ದೆ. ಕಾಡುಮೇಡುಗಳಲ್ಲಿ ಅಲೆದು ರಜಾವನ್ನು ಸಾರ್ಥಕವನ್ನಾಗಿ ಮಾಡಿಕೊಳ್ಳುತ್ತಿದ್ದೆ. ಮಳೆಗಾಲದಲ್ಲಿ ಬಹಳಷ್ಟು ದಿನ ಶಾಲೆಯೇ ನಡೆಯುತ್ತಿರಲಿಲ್ಲ. ದೊಡ್ಡ ಮಳೆ ಬಂದರೆ ನೀರು ಒಳಗೆ ಬರುತ್ತಿದ್ದರಿಂದ ಶಾಲೆಗೆ ರಜಾ ಘೋಷಿಸಲಾಗುತ್ತಿತ್ತು. ಹಾಗೆ ನಮ್ಮ ಮನೆ ಮತ್ತು ಶಾಲೆಯ ನಡುವೆ ಕಾಡಿನ ಜೊತೆಗೆ ಸಣ್ಣ ಸಣ್ನ ಹಳ್ಳಗಳೂ ಇದ್ದವು. ಈ ಹಳ್ಳಗಳು ತುಂಬಿದರೆ ಅದಕ್ಕೆ ದಾಟಲು ಹಾಕಿದ ಸಂಕ ಕೊಚ್ಚಿ ಹೋಗುತ್ತಿತ್ತು. ಹೀಗಾಗಿ ನಾವು ಹಳ್ಳದ ಬಳಿ ಬಂದು ಸಂಕ ಇಲ್ಲ ಎಂದು ಮನೆಗೆ ಹೋಗಿ ಬಿಡುತ್ತಿದ್ದವು.
ಈ ಶಾಲೆಯಲ್ಲಿನ ನನ್ನ ಆನುಭವದ ಭುತ್ತಿ ದೊಡ್ದದು. ಅದನ್ನು ಇನ್ನೊಮ್ಮೆ ಹೇಳುತ್ತೇನೆ. ನಾನು ಮೊದಲು ಹೇಳಿದ ಮೋಟು ಕಾನಿನ ಭೂತ ಮತ್ತು ನನಗೂ ಇರುವ ಸಂಬಂಧದ ಬಗ್ಗೆ ಒಂದೆರಡು ಮಾತುಗಳನ್ನು ಹೇಳಲೇ ಬೇಕು.
ನನ್ನಲ್ಲಿ ಭಯ ಹುಟ್ಟಿಸಿದ್ದ ಈ ಭೂತ ನನಗೆ ತೀವ್ರವಾಗಿ ಕಾಡುತ್ತಿದ್ದುದು ಪರೀಕ್ಷೆ ಬಂದಾಗ ಮಾತ್ರ. ಆಗ ಮಾತ್ರ ಭೂತನ ಎದುರು ನಿಂತು ನಾನು ಪರೀಕ್ಷೆಯಲ್ಲಿ ಪಾಸಾದರೆ ೫೦ ತೆಂಗಿನ ಕಾಯಿ ಒಡೆಸುತ್ತೇನೆ ಎಂದು ಹೇಳುತ್ತಿದ್ದೆ. ಪರೀಕ್ಷೆಯಲ್ಲಿ ಪಾಸಾದ ಮೇಲೆ ನನಗೆ ಈ ಭೂತನ ಬಗ್ಗೆ ಗೌರವ ಉಳಿಯುತ್ತಿರಲಿಲ್ಲ. ಹೀಗಾಗಿ ಭೂತಪ್ಪನಿಗೆ ತೆಂಗಿನ ಕಾಯಿಯೂ ಸಿಗುತ್ತಿರಲಿಲ್ಲ. ಎಳು ವರ್ಷ ಕೋಲ್ಸೆ ಶಾಲೆಗೆ ಹೋದವ, ಪ್ರತಿ ವರ್ಷ ೫೦ ತೆಂಗಿನ ಕಾಯಿ ಹರಿಕೆ ಹೇಳಿಕೊಂಡಿದ್ದೇನೆ. ಒಂದೇ ಒಂದು ತೆಂಗಿನ ಕಾಯಿ ಹರಿಕೆಯನ್ನು ತೀರಿಸಿಲ್ಲ. ಆದರೆ ಮೋಟುಕಾನಿನ ಭೂತ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ, ನನ್ನನ್ನು ಸಲಹುತ್ತಲೇ ಇದ್ದಾನೆ.
ಕಳೆದ ಶನಿವಾರ ಊರಿನವರೆಲ್ಲ ಸೇರಿ ಈ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನನ್ನನ್ನು ಕರೆಯಲು ಬೆಂಗಳೂರಿಗೆ ಬಂದು ಮಾತನಾಡಿ ಹೋಗಿದ್ದರು. ನಾನು ನನ್ನ ಶಾಲೆಯ ಶತಮನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಲಬೇಕು ಎಂದುಕೊಂಡಿದ್ದೆ. ಆದರೆ ಊರಿಗೆ ಹೋದರೂ ಶಾಲೆಗೆ ಃಓಗಲು ಆಗಲಿಲ್ಲ. ಯಾಕೆಂದರೆ ಅನಿರೀಕ್ಷಿತವಾಗಿ ನನ್ನ ಅಪ್ಪ ತೀರಿಕೊಂಡಿದ್ದ.
ಹೀಗಿದ್ದರೂ ಊರಿನ ಹಿರಿಯಲು ಶಾಲು ಸ್ಮರಣ ಫಲಕ ಹಿಡಿಕೊಂಡು ನನ್ನ ಮನೆಗೆ ಬಂದು ಸತ್ಕಾರ ಮಾಡಿದರು. ಈ ಶಾಲೆಯಲ್ಲಿ ಕಲಿತ ನೀನು ದೊಡ್ಡ ಮನುಷ್ಯನಗಿದ್ದೀಯಾ ಎಂದು ಪ್ರೀತಿಯ ಮಾತನಾಡಿದರು. ಅಪ್ಪನನ್ನು ಕಳೆದುಕೊಂಡ ಆ ಸಂದರ್ಭದಲ್ಲೂ ನನಗೆ ಮನಸ್ಸಿನಲ್ಲಿ ಮೂಡಿದ್ದು ಕೃತಜ್ನತೆ. ನೆನಪಾಗಿದ್ದು ಅದೇ ನನ್ನ ಶಾಲಾ ದಿನಗಳು.

Sunday, November 13, 2011

ನನ್ನ ಅಪ್ಪ ಇನ್ನಿಲ್ಲ.....!

ನನ್ನ ಅಪ್ಪ ಕಳೆದ ಮಂಗಳವಾರ ಇಹಲೋಕ ಯಾತ್ರೆ ಮುಗಿಸಿದ. ಅಪ್ಪನಿಗೆ ಹುಷಾರಿಲ್ಲ ಎಂಬುದು ದೂರದ ಬೆಂಗಳೂರಿನಲ್ಲಿರುವ ನನಗೆ ತಿಳಿದಿತ್ತು. ಆದರೆ ಇಷ್ಟು ಬೇಗ ಆತ ಜೈ ಎಂದು ಹೊರಟಿ ಬಿಡುತ್ತಾನೆ ಎಂದು ನಾನು ಅಂದುಕೊಂಡಿರಲಿಲ್ಲ.
ಅಪ್ಪನನ್ನು ಕಳುಹಿಸಿಕೊಟ್ಟ ಮೇಲೆ ನಾನು ಅವನ ಬಗ್ಗೆ ಯೋಚಿಸುತ್ತೇನೆ. ನನ್ನ ಅಪ್ಪ ಹೇಗಿದ್ದ ? ಆತ ಏನನ್ನು ನಂಬಿದ್ದ ? ಆತ ಹೇಗೆ ಬದುಕಿದ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತೇನೆ.
ನನ್ನ ಅಪ್ಪ ಎಂದ ತಕ್ಷಣ ನನಗೆ ನೆನಪಾಗುವುದು ಆತನ ನೆಹರೂ ಶರ್ಟು ಮತ್ತು ಬಿಳಿಯ ಲುಂಗಿ. ಆತ ಎಂದೂ ಖಾದಿಯನ್ನು ಬಿಟ್ಟು ಬೇರೆ ಬಟ್ಟೆ ಹಾಕಲಿಲ್ಲ. ಸದಾ ಗರಿ ಗರಿಯಾದ ಇಸ್ತ್ರೀ ಮಾಡಿದ ಶರ್ಟು ಲುಂಗಿ. ಹೆಗಲ ಮೇಲೆ ಒಂದು ಶಾಲು. ಆತ ಹತ್ತಿರದ ಸಿದ್ದಾಪುರಕ್ಕೆ ಹೊರಟನೆಂದರೆ ಅವನ ಸುತ್ತ ಇರುತ್ತಿದ್ದ ನಾಲ್ಕಾರು ಜನ. ಅವರ ಜೊತೆ ಅವನ ಮೆರವಣಿಗೆ ಪೇಟೆಯಲ್ಲಿ ಹೊರಟಿತೆಂದರೆ ಅದನ್ನು ನೋದುವುದೇ ಚಂದ. ಮನೆಯಿಂದ ಹೊರಟ ಮೊದಲು ಬರುತ್ತಿದ್ದುದು ಕನ್ಸುಮರ್ಸ್ ಸೊಸೈಟಿಗೆ. ಅಲ್ಲಿಂದ ಚೌದರಿಯ ಪ್ರದೀಪ್ ಸ್ಟೋರ್ಸ್. ಅಲ್ಲೆಲ್ಲ ಸ್ನೇಹಿತರ ಜೊತೆ ಮಾತನಾಡಿ ಮಹಾಲಸಾ ಹೋಟೆಲ್ ಗೆ ಬಂದು ಒಂದು ಕಪ್ ಬಿಸಿ ಬಿಸಿ ಚಹ ಕುಡಿದು ಜೊತೆಗಿದ್ದವರಿಗೆಲ್ಲ ಚಹಾ ಸಮಾರಾಧನೆ.
ಬೆಳಿಗ್ಗೆ ಹತ್ತಕ್ಕೋ ಹನ್ನೊಂದಕ್ಕೋ ಪೇಟೆಗೆ ಹೋದರೆ ಅವನು ತಿರುಗಿ ಮನೆಗೆ ಬರುತ್ತಿದ್ದುದು ರಾತ್ರಿ ೮ ಗಂಟೆ ಸುಮಾರಿಗೆ. ಬರುವಾಗ ಅವನ ಕೈಯಲ್ಲಿ ಇರುತ್ತಿದ್ದ ಉದ್ದನೆಯ ಜೋಲು ಚೀಲದಲ್ಲಿ ಎಲ್ಲ ದಿನ ಪತ್ರಿಕೆಗಳು ಮಾಸಿಕಗಳು ಇರುತ್ತಿದ್ದವು. ಶಿವರಾಮ ಕಾರಂತ್, ಕುವೆಂಪು, ತೇಜಸ್ವಿ, ಮೊದಲಾದವರ ಯಾವುದೇ ಹೊಸ ಪುಸ್ತಕ ಬರಲಿ, ಅದು ಮೊದಲು ಅಪ್ಪನ ಕೈಚೀಲದಲ್ಲಿ ನುಸುಳಿಕೊಂಡು ಮನೆಯ ಲೈಬ್ರರಿ ಸೇರುತ್ತಿದ್ದವು. ಆತ ಅತಿಯಾಗಿ ಇಷ್ಟ ಪಡುತ್ತಿದ್ದ ದಿನ ಪತ್ರಿಕೆ ಎಂದರೆ ದಿ ಹಿಂದೂ. ಸಿ ರಾಜಗೋಪಾಲಾಚಾರಿ ಅವರು ತರುತ್ತಿದ್ದ ಸ್ವರಾಜ್ ಪತ್ರಿಕೆಯನ್ನು ಅವನು ತರಿಸುತ್ತಿದ್ದ. ಹಾಗೆ ಜರ್ಮನ್ ನ್ಯೂಸ್, ಸೋವಿಯತ್ ಲ್ಯಾಂಡ್ ಪತ್ರಿಕೆಗಳು ಮನೆಗೆ ಬರುತ್ತಿದ್ದವು.
ರಾತ್ರಿ ಮನೆಗೆ ಬಂದವ ಹಿಂದೂ ಪತ್ರಿಕೆಯನ್ನು ತೆಗೆದುಕೊಂಡು ದೊಡ್ಡ ದ್ವನಿಯಲ್ಲಿ ಪಠಣ ಮಾಡುತ್ತಿದ್ದ. ಹಾಗೆ ಸುಧಾ ಕಸ್ತೂರಿ, ಸಂಗಮ, ಮೊದಲಾದ ಪತ್ರಿಕೆಗಳನ್ನು ತರಿಸುತ್ತಿದ್ದ ಅಪ್ಪ ತಾನು ಓದಿ ಮುಗಿಸಿದ ಹೊರತೂ ಅ ಪತ್ರಿಕೆಗಳನ್ನು ಬೇರೆಯವರಿಗೆ ಕೊಡುತ್ತಿರಲಿಲ್ಲ. ಆತ ಒಂದು ರೀತಿಯಲ್ಲಿ ಹುಟ್ಟಾ ಕಾಂಗ್ರೆಸ್ಸಿಗ. ಆದರೆ ಹಳೆಗನ್ನಡ ಮತ್ತು ಹೊಸ ಗನ್ನಡ ಸಾಹಿತ್ಯದ ಬಗ್ಗೆ ಅವನಿಗೆ ಪ್ರೀತಿ ಇದ್ದಂತೆ ಇಂಗ್ಲೀಷ್ ಸಾಹಿತ್ಯದ ಬಗ್ಗೆಯೂಅ ಅಪಾರವಾದ ಪ್ರೀತಿ ಇತ್ತು.
ಷೇಕ್ಶಫಿಯರ್ ನಾಟಕಗಳನ್ನು ಆರಾಧಿಸುತ್ತಿದ್ದ ಅಪ್ಪ ಅವುಗಳನ್ನು ಓದಲು ನೀಡುತ್ತಿದ್ದ. ಹಾಗೆ ಸಮರ್ ಸೆಟ್ ಮಾಂ ನ ಕಾದಂಬರಿಗಳು. ನನಗೆ ಇಂಗ್ಲೀಷ್ ಸಾಹಿತ್ಯವನ್ನು ಓದಲು ನೀಡುತ್ತಿದ್ದ ಆತ ಅವುಗಳ ಬಗ್ಗೆ ವಿಮರ್ಷೆ ಮಾಡುತ್ತಿದ್ದ. ಆದರೆ ನನಗೆ ಸರಿಯಾದ ಇಂಗ್ಲೀಷ್ ಬರುವುದಿಲ್ಲ ಎಂಬ ಸಿಟ್ಟಿ ಅವನಿಗೆ ಕೊನೆಯವರೆಗೆ ಇತ್ತು. ನಾನು ಬೆಳಗಾವಿಯಲ್ಲಿ ಕಾಲೇಜಿಗೆ ಹೋಗುವಾಗ ಇಂಗ್ಲೀಷ್ ನಲ್ಲೇ ಪತ್ರ ಬರೆಯುವಂತೆ ಅದೇಶ ನೀಡಿದ್ದ. ನಾನು ಬರೆದ ಇಂಗ್ಲೀಷ್ ಪತ್ರಗಳಲ್ಲಿ ಇರುವ ತಪ್ಪುಗಳನ್ನು ಮಾರ್ಕ್ ಮಾಡಿ ನನಗೆ ಕಳುಹಿಸುತ್ತಿದ್ದ. ನಾನು ಅಪ್ಪನ ಈ ಅವತಾರಕ್ಕೆ ಹೆದರಿ ಅವನಿಗೆಪತ್ರ ಬರೆಯುವುದನ್ನೇ ನಿಲ್ಲಿಸಿ ಬಿಟ್ಟೆ.
ಹಳೆಗನ್ನಡ ಸಹಿತ್ಯವೂ ಕೂಡ ಅವನನ್ನು ಸೆಳೆದಿತ್ತು. ರನ್ನ ಹರಿಹರ ರಾಘವಾಂಕ, ಜನ್ನ ಪೊನ್ನ ಮೊದಲಾದವರ ಕೃತಿಗಳು ಅವನಿಗೆ ಬಾಯಿ ಪಾಠ. ಕುಮಾರವ್ಯಾಸ ಭಾರತವನ್ನು ಅವರು ದೊಡ್ದ ಧ್ವನಿಯಲ್ಲಿ ಓದುತ್ತಿದ್ದ.
ಅಪ್ಪನಿಗೆ ಸಾಕಷ್ಟು ಸಿಟ್ಟು ಬರುತ್ತಿತ್ತು. ಸಿಟ್ಟು ಬಂದಾಗ ಮುಖ ಮುಸಡಿ ನೋಡದೇ ಭಾರಿಸಿ ಬಿಡುತ್ತಿದ್ದ. ಹಲವು ಬಾರಿ ತಪ್ಪುಗಳನ್ನು ಮಾಡಿ ಅವನಿಂದ ನಾನು ಹೊಡೆತ ತಿಂದಿದ್ದೇನೆ. ಒಮ್ಮೆಯಂತೂ ಮನೆಯ ಅಂಗಳದ ಕಂಬಕ್ಕೆ ನನ್ನನ್ನು ಕಟ್ಟಿ ದನಕ್ಕೆ ಬಡಿಯುವಂತೆ ನನಗೆ ಬಡಿದಿದ್ದ. ಆತ ಊಟ ಮಾಡಿ ಮಲಗಿದಾಗ ಯಾರಾದರೂ ಗಲಾಟೆ ಮಾಡಿದರೆ ಆತ ಸಹಿಸುತ್ತಿರಲಿಲ್ಲ. ಪಕ್ಕದ ಮನೆಯ ಚಿಕ್ಕಪ್ಪಂದಿರು ಗಲಾಟೆ ಮಾಡಿದರೂ ಹೊಡತ ಮಾತ್ರ ನನಗೆ ಬೀಳುತ್ತಿತು. ನನಗೆ ಹೊಡೆದರೆ ಅವರು ಬುದ್ದಿ ಕಲಿಯುತ್ತಾರೆ ಎಂಬ ನಂಬಿಕೆ ಅವನದಾಗಿತ್ತು.
ಅಪ್ಪ ತನ್ನ ಮನಸ್ಸಿನಲ್ಲಿ ಇದ್ದುದನ್ನು ಯಾರ ಬಳಿಯೂ ಹೇಳಿಕೊಂಡವನಲ್ಲ. ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದಾಗಲೂ ಆತ ಕೊಡು ಗೈ ದೊರೆಯೇ. ಯಾರು ಏನು ಕೇಳಿದರೂ ಇಲ್ಲ ಎಂದು ಹೇಳುವುದು ಅವನಿಗೆ ಗೊತ್ತೇ ಇರಲಿಲ್ಲ. ನಾನು ಊರು ಬಿಟ್ಟು ಬೆಂಗಳೂರಿಗೆ ಬಂದ ಮೇಲೂ ಶಶಿಧರ್ ಬೆಂಗಳೂರಿನಲ್ಲಿ ಹ್ಯಾಂಗೆ ಜೀವನ ಮಾಡ್ತೇನೋ ಎಂದು ತಲೆ ಕೆಡಿಸಿಕೊಂಡಿದ್ದನೇ ಹೊರತೂ ನನ್ನಿಂದ ಯಾವ ನಿರೀಕ್ಷೆಯನ್ನೂ ಇಟ್ತುಕೊಂಡವನಲ್ಲ. ನಾನು ವರ್ಷಕ್ಕೆ ಎರಡು ವರ್ಷಕ್ಕೇ ಮನೆಗೆ ಹೋದರೂ ಯಾಕೆ ಬಂದಿಲ್ಲ ಎಂದು ಒಮ್ಮೆಯೂ ಕೇಳಿದವನಲ್ಲ.
ಇನ್ನೊಂದು ಘಟನೆಯೂ ನನಗೆ ನೆನಪಾಗುತ್ತದೆ. ಅದು ನನ್ನ ಮದುವೆಯ ಸಂದರ್ಭದ್ದು. ನಾನು ಮದುವೆಯಾದ ಹುಡುಗಿ ಸ್ವಜಾತಿಯವಳಲ್ಲ ಎಂದು ತಿಳಿದರೂ ಒಂದೇ ಒಂದು ಮಾತನ್ನೂ ಆತ ಆಡಲಿಲ್ಲ. ಜೊತೆಗೆ ಹೆಣ್ಣು ಒಪ್ಪಿಸಿಕೊಳ್ಳುವ ಸಂದರ್ಭದಲ್ಲಿ ತನ್ನ ಜನೀವಾರವನ್ನೇ ತೆಗೆದು ಬಿಟ್ಟ. ಯಾಕೆಂದರೆ ನನ್ನ ಹೆಂಡತಿಯಾಗುವ ಹುಡುಗಿಯ ನೆಂಟರಿಷ್ಟರಿಗೆ ನಾವು ಬ್ರಾಹ್ಮಣರು ಎಂಬುದು ತಿಳಿದಿರಲಿಲ್ಲ. ಆ ಸಂದರ್ಭದಲ್ಲಿ ಅದು ಗೊತ್ತಾದರೆ ತೊಂದರೆಯಾಗಬಹುದು ಎಂಬ ಭಯ. ಆಗ ಅಪ್ಪ ಹೇಳಿದ್ದು. ಮಗನೇ ನೀನು ಮದುವೆಯಾಗುವುದು ಮುಖ್ಯ. ನನ್ನ ಜನಿವಾರವಲ್ಲ...!
ಅಪ್ಪ ಮಗೇಗಾರಿನ ಮಹಾ ಗಣಪತಿ ನಾಟಕ ಸಂಘದ ಸಂಸ್ಥಾಪಕ ಸದಸ್ಯನಾಗಿದ್ದ. ಹಲವಾರು ನಾಟಕಗಳಲಿ ಅಭಿನಯಿಸಿದ್ದ. ಪ್ರಚಂಡ ರಾವಣ ಮತ್ತು ಕೌಶಿಕ ಅವನು ಬರೆದ ಎರಡು ನಾಟಕಗಳು. ಈ ನಾಟಕಗಳು ಹಲವಾರು ಬಾರಿ ಪ್ರದರ್ಶನ ಕಂಡವು. ಹಾಗೆ ಎರಡು ಯಕ್ಷಗಾನವನ್ನು ಅವನು ಬರೆದಿದ್ದ.
ನಾನು ಬೆಂಗಳೂರಿಗೆ ಬಂದಿ ಇಲ್ಲಿಯೇ ಕಳೆದು ಹೋದ ಮೇಲೆ ಅವನು ನನಗೆ ಎಂದೂ ಬೈಯಲಿಲ್ಲ. ನನ್ನ ಬಗ್ಗೆ ಅವನಿಗೆ ಅಪಾರವಾದ ಪ್ರೀತಿ ಇತ್ತು. ಮಗನ ಬಗ್ಗೆ ಹೆಮ್ಮೆಯಿತ್ತು. ಮಗನ ಪ್ರಾಮಾಣಿಕತೆ ಮತ್ತು ಸಾಧನೆಯಿಂದ ಸಂತೋಷಗೊಂಡಿದ್ದ ಅತ ತನ್ನ ಕೊನೆಯ ದಿನಗಳಲ್ಲಿ ನಾನು ಅವನಿಗೆ ಏನೂ ಮಾಡಲಿಲ್ಲ ಎಂದು ಹೇಳುತ್ತಿದ್ದನಂತೆ. ನನ್ನನ್ನು ನೋಡಬೇಕು ಎಂದು ತಮ್ಮ ಮತ್ತು ಅಮ್ಮನ ಹತ್ತಿರ ಹೇಳುತ್ತಿದ್ದನಂತೆ. ನಾನು ಕಳೆದ ಸೋಮವಾರ ಊರಿಗೆ ದೌಡಾಯಿಸಿದೆ. ಆಗ ಅಪ್ಪ ಅರೆ ಪ್ರಜ್ನಾವಸ್ತೆಯಲ್ಲಿದ್ದ. ಆದರೆ ಅವನಿಗೆ ನಾನು ಬಂದಿದ್ದು ತಿಳಿದಿತ್ತು. ನಾಲ್ಕಾರು ದಿನಗಳಿಂದ ನಿದ್ರೆ ಮಾಡದೇ ಏನೇನೂ ಮಾತನಾಡುತ್ತಿದ್ದ ಅತ ನನ್ನನ್ನು ನೋಡಿದ. ಕೈ ಎತ್ತಿ ಆಶೀರ್ವಾದ ಮಾಡಿದ. ನಿನಗೆ ಗುಣವಾಗುವ ವರೆಗೆ ಆನು ಇಲ್ಲೇ ಇರ್ತಿ ಎಂದಾಗ ಸಮಾಧಾನದಿಂದ ಹಾಗೆ ಮಲುಗಿದ. ರಾತ್ರಿ ಗಂಜಿ ಕುಡಿದ. ಔಷಧ ಸೇವಿಸಿದ. ಆದರೆ ಮರು ದಿನ ಬೆಳಿಗ್ಗೆ ನೋಡಿದಾದ ಅವನಿರಲಿಲ್ಲ.
ಹಾಸಿಗೆ ಹಿಡಿದ ಮೇಲೂ ಆತ ನಾಟಕ ಬರೆಯಲು ಮುಂದಾಗಿದ್ದ. ಆಗ ಅವನ ಕೈ ಕೂಡ ಸ್ವಾದೀನದಲ್ಲಿ ಇರಲಿಲ್ಲ. ಹೀಗಾಗಿ ಮೊಮ್ಮಗ ಕಾರ್ತೀಕನಿಗೆ ಹೇಳಿ ಬರೆಸುತ್ತಿದ್ದನಂತೆ. ನಾಲ್ಕಾರು ದೃಶ್ಯಗಳನ್ನು ಬರೆದು ಮುಗಿಸುವಷ್ಟರಲ್ಲಿ ಅವನು ಅರೆ ಪ್ರಜ್ನಾವಸ್ತೆಗೆ ಸರಿದು ಹೋದ. ಆತನ ನಾಟಕದ ಅಂಕದ ಪರದೆಯೂ ಜಾರಿ ಹೋಗಿತ್ತು.
ನನಗೆ ಅಪ್ಪ ಎಂದಾಕ್ಷಣ ಹೀಗೆ ಹಲವರು ಘಟನೆಗಳು ನೆನಪಾಗುತ್ತವೆ. ನನಗೆ ಓದುವ ಅಭಿರುಚಿಯನ್ನು ಮೂಡಿಸಿದ. ಬದುಕುವುದನ್ನು ಕಲಿಸಿದ. ಬದುಕಿನಲ್ಲಿ ಮೌಲ್ಯಗಳು ಮುಖ್ಯ, ಹಣವಲ್ಲ ಎಂದು ಪಾಠ ಹೇಳಿದ. ಜಾತ್ಯಾತೀತ ಮೌಲ್ಯಗಳನ್ನು ನನ್ನೊಳಗೆ ತುಂಬಿದ. ಬೆರೆಯವರ ಅಭಿಪ್ರಾಯಗಳಿಗೆ ಮನ್ನಣೆ ನೀಡುವ ವ್ಯಕ್ತಿತ್ವ ರೂಪಗೊಳ್ಳುವಂತೆ ಮಾಡಿದ. ಬೇರೆಯವರಿಂದ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳದೇ ಬದುಕುವ ದಾರಿ ತೋರಿಸಿದ.
ಹಾಗೆ ನನ್ನೊಳಗೆ ಒಬ್ಬ ಪತ್ರಿಕೋದ್ಯಮಿಯನ್ನು ಹುಟ್ಟು ಹಾಕಿದವನೂ ಅವನೇ. ನಾನು ಸಣ್ಣವನಿರುವಾಗಲೇ ಸ್ಥಳೀಯ ಪತ್ರಿಕೆಗಳಲ್ಲಿ ರಾಜಕೀಯ ವಿಶ್ಲೇಷಣೆ ಹಾಗೂ ಲೇಖನಗಳನ್ನು ಬರೆಯುತ್ತಿದ್ದ ಆತ ನನಗೆ ಬರೆಯುವ ಅಭಿರುಚಿ ಬೆಳೆಯುವಂತೆ ಮಾಡಿದ.
ಅಪ್ಪ ನನ್ನಿಂದ ಏನನ್ನೂ ನಿರೀಕ್ಷಿಸಲಿಲ್ಲ. ನಾನು ಅವನಿಗೆ ಏನನ್ನೂ ಕೊಡಲಿಲ್ಲ. ಆದರೆ ಅವನು ನನಗೆ ನೀಡಿದ್ದನ್ನು ನಾನು ಈ ಜನ್ಮದಲ್ಲಿ ಮರೆಯಲಾರೆ. ಆ ಋಣವನ್ನು ನಾನು ತೀರಿಸಲಾರೆ.

Friday, December 17, 2010

ಮುರುಘಾ ಶ್ರೀ,ಪತ್ರಕರ್ತರು ಮತ್ತು ನಾಯಿ ಎಂಬ ಪ್ರಾಣಿ...!

ಚಿತ್ರದುರ್ಗದ ಮುರಘಾಶ್ರೀ ನಾಡಿನ ಕ್ರಾಂತಿಕಾರಿ ಸ್ವಾಮಿಜಿ ಎಂದೇ ಹೆಸರು ಪಡೆದವರು. ಸನ್ಯಾಸದ ಪರಂಪರಾಗತ ಮೌಲ್ಯಗಳನ್ನು ತಿರಸ್ಕರಿಸಿ ಸಮಾನತೆಯ ಕನಸು ಹೊತ್ತವರು. ಪ್ರತಿ ವರ್ಷ ಅವರು ನೀದುವ ಪ್ರಶಸ್ತಿ ಕೂಡ ಇಂತಹ ಸಾಮಾಜಿಕ ಕ್ರಾಂತಿಯ ಅವರ ಕನಸನ್ನು ನನಸು ಮಾಡುವ ದಿಸೆಯಲ್ಲಿ ಇಡುತ್ತಿರುವ ಹೆಜ್ಜೆ ಎಂದೇ ನಾಡಿನ ಜನ ನಂಬಿಕೊಂಡಿದೆ. ಹಾಗೆ ಎಲ್ಲ ಜಾತಿ ಸಮುದಾಯಗಳಿಗೆ ಧಾರ್ಮಿಕ ನಾಯಕತ್ವವನ್ನು ನೀಡುವ ಕೆಲಸವನ್ನು ಅವರು ಮಾಡುತ್ತ ಬಂದಿದ್ದಾರೆ.
ಅವರ ಎಲ್ಲ ರೀತಿಯ ಕ್ರಾಂತಿಯ ಹೆಜ್ಜೆಗಳಿಗೆ ಮಾಧ್ಯಮಗಳು ಬೆಂಬಲ ನೀಡುತ್ತ ಬಂದಿವೆ. ಮಠ ಮಾನ್ಯರನ್ನು ಟೀಕಿಸುವ ಪತ್ರಿಕೆಗಳೂ ಸಹ ಮುರಾಘಾ ಶ್ರೀ ಅವರ ಬಗ್ಗೆ ಟೀಕಿಸಿ ಬರೆದ ಉದಾಹರಣೆಗಳು ಇಲ್ಲ. ಆದರೆ ಕಳೆದ ವಾರ ಸ್ವಾಮೀಜಿ ಅವರಿಗೆ ಮಾಧ್ಯಮದ ಮೇಲೆ ಸಿಟ್ಟು ಬಂದಿತ್ತು. ಅವರು ಪತ್ರಿಕೋದ್ಯಮಿಗಳನ್ನು ಕಾವಲು ನಾಯಿಗಳಾಗಬೇಕಾದವರು ಕೇವಲ ನಾಯಿಗಳಾಗಿದ್ದಾರೆ ಎಂದು ಅಣಿ ಮುತ್ತುಗಳನ್ನು ಉದುರಿಸಿ ಬಿಟ್ಟರು. ಹಾಗೆ ಪತ್ರಿಕೋದ್ಯಮಗಳಿಗೆ ನೀಡಬೇಕಾದ ಆಮಿಷಗಳ ಬಗ್ಗೆ ಪಟ್ಟಿ ನೀಡಿದರು. ಆದರೆ ಅವರ ಈ ಹೇಳಿಕೆಯ ಬಗ್ಗೆ ಪತ್ರಿಕೋದ್ಯಮಿಗಳು ಪ್ರತಿಭಟನೆ ವ್ಯಕ್ತಪಡಿಸಿದಾಗ ಸಾರಿ ಎಂದು ಹೇಳಿ ಕೈತೊಳೆದುಕೊಂಡು ಬಿಟ್ಟರು. ಸ್ವಾಮೀಜಿ ಅವರದೂ ಉಪ್ಪು ಖಾರ ತಿನ್ನುವ ದೇಹವಾದ್ದರಿಂದ ಪಾಪ ಕೋಪ ಬಂದಿತ್ತು ಎಂದು ಸುಮ್ಮನಾಗೋಣ ಎಂದು ಒಮ್ಮೆ ಅನ್ನಿಸಿದರೂ ಹಾಗೆ ಮಾಡಲು ಮನಸ್ಸು ಬರಲಿಲ್ಲ. ಯಾಕೆಂದರೆ ಅವರು ಯಾಕೆ ಪತ್ರಿಕೋದ್ಯಮಿಗಳನ್ನು ನಾಯಿ ಎಂದು ಕರೆದರು ಎಂಬ ಬಗ್ಗೆ ನಾವು ಆಲೋಚನೆ ಮಾಡಲೇಬೇಕಾಗಿದೆ.
ನಾಯಿಯ ನಿಷ್ಟೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಜೊತೆಗೆ ಅದು ಮನೆನಾಯಿ ಆಗಿದ್ದರೆ ಮನೆ ಕಾಯುತ್ತದೆ. ಬೀದಿ ನಾಯಿಯಾಗಿದ್ದರೆ ಬೀದಿಯನ್ನು ಕಾಯುತ್ತದೆ. ಜಾತಿ ನಾಯಿಯಾಗಿದ್ದರೆ ಅದಕ್ಕೆ ಒಳ್ಳೆಯ ಆಹಾರ ದೊರಕುತ್ತದೆ. ಬೀದಿ ನಾಯಿಯಾಗಿದ್ದರೆ ಬೀದಿಯಲ್ಲಿ ಬಿದ್ದಿದ್ದನ್ನು ತಿಂದುಕೊಂದು ಬಿದ್ದಿರುತ್ತದೆ. ಆದರೆ ಕಳ್ಳರನ್ನು ಕಂಡರೆ, ಅಪರಿಚತರು ಬಂದರೆ ಬೊಗಳುವುದನ್ನು ನಿಲ್ಲಿಸುವುದಿಲ್ಲ. ಹೀಗಾಗಿ ಅದು ಕಾವಲು ನಾಯಿಯೆಂಬ ಹಣೆ ಪಟ್ಟಿಯನ್ನು ಪಡೆಯಲಿ ಪಡೆಯದಿರಲಿ ಅದು ಕಾವಲು ಕೆಲಸವನ್ನು ನಿಲ್ಲಿಸುವುದಿಲ್ಲ. ಜೊತೆಗೆ ನಾಯಿಯ ಇನ್ನೊಂದು ಗುಣವೆಂದರೆ ಅದು ಅಪರಿಚತರನ್ನು ನಂಬುವುದಿಲ್ಲ. ಜೊತೆಗೆ ರೊಟ್ಟಿ ತುಂಡನ್ನು ಹಾಕಿ ಅದರ ಸ್ನೇಹ ಗಳಿಸುವುದು ಅಷ್ಟು ಸುಲಭವಲ್ಲ. ಯಾಕೆಂದರೆ ನಾಯಿ ಮನುಷ್ಯರನ್ನು ಅಷ್ಟು ಬೇಗ ನಂಬುವುದಿಲ್ಲ. ಅಪನಂಬಿಕೆಯೇ ನಾಯಿಯ ಮೂಲ ಗುಣ. ಹಾಗೆ ನಂಬಿಕೆ ಕೂಡ.
ಗೌರವಾನ್ವಿತ ಸ್ವಾಮೀಜಿಯವರು ಪತ್ರಕರ್ತರನ್ನು ಯಾವ ನಾಯಿಯ ಸಾಲಿಗೆ ಸೇರಿಸಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಅವರ ಮಾತಿನಲ್ಲಿ ರೊಟ್ಟಿ ಹಾಕಿಯೂ ನಾಯಿ ಕಚ್ಚಿದ ನೋವಿದೆ. ತಾವು ಪತ್ರಕರ್ತರನ್ನು ಕರೆದು ರೊಟ್ಟಿ ಹಾಕಿದರೂ ಅದು ತನ್ನ ಎದುರು ಬಾಲ ಅಲ್ಲಾಡಿಸುತ್ತಿಲ್ಲ ಎಂಬ ವಿಷಾಧವಿದೆ.ಆದರೆ ನಾಯಿಯ ಗುಣವೇ ಹಾಗೆ ಎಂಬುದನ್ನು ಕ್ರಾಂತಿಕಾರಿ ಸ್ವಾಮೀಜಿ ಅರ್ಥ ಮಾಡಿಕೊಳ್ಲದಿರುವುದು ಈ ನಾಡಿನ ದುರ್ದೈವ.
ಸ್ವಾಮೀಜಿ ಅವರು ಈ ನಾಯಿಯ ಆರೋಪ ಮಾಡುವುದಕ್ಕಿಂತ ಸ್ವಲ್ಪ ದಿನಗಳ ಮೊದಲು ಇನ್ನೊಂದು ಹೇಳಿಕೆಯನ್ನು ನೀಡಿದ್ದರು. ಅದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಹೇಳಿಕೆಯಾಗಿತ್ತು. ಭೂ ಹಗರಣಕ್ಕೆ ಸಿಕ್ಕು ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಬಂದ ಸಂದರ್ಭದಲ್ಲಿ ಅವರು ಯಡಿಯೂರಪ್ಪ ಈ ನಾಡಿನ ಅತ್ಯುತ್ತಮ ಮುಖ್ಯಮಂತ್ರಿ ಎಂದು ಸರ್ಟಿಫಿಕೇಟ್ ನೀಡಿದ್ದರು. ಅವರಿಗೆ ಮುಖ್ಯಮಂತ್ರಿಗಳ ಅವ್ಯವಹಾರದ ವಾಸನೆ ಬಂದಿರಲಿಲ್ಲ. ಪಾಪ, ಅವರಿಗೆ ಈ ವಾಸನೆ ಹಿಡಿಯುವ ಶಕ್ತಿ ಇರಲಿಲ್ಲ.ಅಂತಹ ಗುಣ ಇರುವುದು ನಾಯಿಗಳಿಗೆ ಮಾತ್ರ. ಆದರೆ ಪತ್ರಕರ್ತರು ನಾಯಿಗಳಾಗಿದ್ದರಿಂದ ನಾಯಿಗಳಿಗಿರುವ ವಾಸನಾ ಶಕ್ತಿ ಇದ್ದುದುರಿಂದ ಅವರು ಬಹುಬೇಗ ಅಕ್ರಮ ವ್ಯವಹಾರಗಳ ವಾಸನೆ ಹಿಡಿದು ಬಿಟ್ಟಿದ್ದರು. ಇದರಿಂದ ಸ್ವಾಮೀಜಿಗಳಿಗೆ ಬೇಸರವಾಗಿದ್ದರೂ ಆಗಿರಬಹುದು. ತಾವು ಮೆಚ್ಚುವ ಮುಖ್ಯಮಂತ್ರಿಗಳನ್ನು ಈ ನಾಡಿನ ಪತ್ರಿಕೋದ್ಯಮಿಗಳು ಮೆಚ್ಚುತ್ತಿಲ್ಲ ಎಂಬ ಬೇಸರ ಅವರಿಗಿದ್ದರೂ ಇರಬಹುದು. ಹೀಗಾಗಿ ಕೋಪ ಬಂದ ಅವರು ಪತ್ರಕರ್ತರನ್ನು ನಾಯಿಗಳು ಎಂದು ಕರೆದು ಬಿಟ್ಟರು. ಆದರೆ ಹೀಗೆ ಹೇಳುವಾಗ ಅವರು ನಾಯಿಗಳ ಬಗ್ಗೆ ಹೆಚ್ಚಿಗೆ ಯೋಚಿಸಿರಲಿಕ್ಕಿಲ್ಲ ಎಂದು ಅನ್ನಿಸುತ್ತದೆ. ಸದಾ ಸಾಮಾಜಿಕ ಕ್ರಾಂತಿಯ ಕನಸು ಕಾಣುತ್ತಿರುವ ಅವರಿಗೆ ಮಠದ ಪಕ್ಕದಲ್ಲೇ ಇರುವ ನಾಯಿಗಳನ್ನು ನೋಡುವುದಕ್ಕೆ ಸಮಯ ಇಲ್ಲದಿರಬಹುದು !
ಧರ್ಮ ಕ್ಷೇತ್ರವಾದ ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಧರ್ಮವಿದೆ. ಅದರಲ್ಲಿ ಸನ್ಯಾಸ ಧರ್ಮವೂ ಒಂದು. ಸನ್ಯಾಸಿಗಳು ರಾಗ ಧ್ವೇಷದಿಂದ ಹೊರಗಿರಬೇಕು. ಅವರು ಸದಾ ಭಗವಂತನ ಧ್ಯಾನ ಮಾಡುತ್ತಿರಬೇಕು. ಪಾರಮಾರ್ಥಿಕ ಚಿಂತನೆ, ಜೀವ ಮತ್ತು ಪರಮಾತ್ನನ ನಡುವಿನ ಸಂಬಂಧದ ಬಗ್ಗೆ ಯೋಚಿಸಬೇಕು. ರಾಜನಾದವನಿಗೆ ಧರ್ಮ ಮಾರ್ಗದಲ್ಲಿ ಪ್ರಜಾ ಪಾಲನೆ ಮಾಡುವಂತೆ ಬೋಧಿಸಬೇಕು. ಪರಸ್ತ್ರಿಯನ್ನು ತಾಯಿಯಂತೆಯೂ ರಾಜ ಧನವನ್ನು ಪ್ರಜಾ ಧನದಂತೆಯೂ ನೋಡುವಂತೆ ಬೋಧಿಸಬೇಕು. ನೆಲಗಳ್ಳತನ ಮಾಡದಂತೆ ಹೇಳಬೇಕು. ಮುಖ್ಯಮಂತ್ರಿ ಯದೀಯೂರಪ್ಪ ಅವರಿಗೆ ಈ ಬೋಧನೆಯನ್ನು ಮುರುಘಾ ಶ್ರೀ ಮಾಡಿದ್ದಾರೆಯೇ ಅಥವಾ ಇಲ್ಲವೆ ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಹೀಗಾಗಿ ಅವರು ತಮ್ಮ ಧರ್ಮವನ್ನು ಪಾಲಿಸಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅನುಮಾನಗಳಿವೆ.
ಇನ್ನು ಮುರುಘಾ ಶ್ರೀಗಳು ಒಪ್ಪಿ ನಡೆಯುವ ಬಸವಣ್ಣ ಕೂಡ ಬಿಜ್ಜಳನ ಆಸ್ಥಾನದಲ್ಲೇ ಇದ್ದುಕೊಂಡೇ ಕ್ರಾಂತಿಕಾರ ನೆನಸಿಕೊಂಡ. ಜಾತಿ ಪದ್ಧತಿಯನ್ನು ವಿರೋಧಿಸಿದ. ವೈದಿಕ ಧರ್ಮದ ಹುಳುಕುಗಳನ್ನು ತೆರೆದಿಟ್ಟ. ಕಳಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ ಎಂದ. ಆತ ಎಂದೂ ಬಿಜ್ಜಳ ರಾಜನಾಗಿದ್ದಾನೆ ಎಂಬ ಕಾರಣಕ್ಕೆ ಅವನ ಬಕೆಟ್ ಹಿಡಿಯುವ ಕೆಲಸ ಮಾಡಲಿಲ್ಲ. ಯಾರನ್ನೂ ನಾಯಿ, ಕುನ್ನಿ ಎಂದು ಕರೆಯಲೇ ಇಲ್ಲ. ಇದೆಲ್ಲ ಮುರುಘಾ ಶ್ರೀಗಳ್ಗೆ ಗೊತ್ತಿದೆ ಎಂದು ನಾನು ನಂಬಿದ್ದೇನೆ. ಆದರೂ ಅವರಿಗೆ ನಾಯಿಗಳು ಇದ್ದಕ್ಕಿದ್ದ ಹಾಗೆ ನೆನಪಾದವು. ಪತ್ರಕರ್ತರ ಮೇಲೆ ಕೋಪವೂ ಬಂತು.
ಇದೆಲ್ಲದವುರಗಳ ನಡುವೆಯೂ ನಾನು ಮುರಾಘಾ ಶ್ರೀಗಳಿಗೆ ಪತ್ರಿಕೋದ್ಯಮಿಯಾಗಿ ಕೃತಜ್ನನಾಗಿದ್ದೇನೆ. ಅವರು ನಮ್ಮನ್ನು ಬೇರೆ ಯಾವ ಪ್ರಾಣಿಗಳಿಗೂ ಹೋಲಿಸಿದೇ ನಾಯಿಗೆ ಹೋಲಿಸಿ ನಮ್ಮನ್ನ್ ಉಪಕೃತರನ್ನಾಗಿ ಮಾಡಿದ್ದಾರೆ. ಯಾಕೆಂದರೆ ನನಗೆ ನಾಯಿಗಳೆಂದರೆ ಇಷ್ಟ. ಪತ್ರಿಕೋದ್ಯಮಿಗಳಿಗೆ ತತ್ವ ಮೌಲ್ಯಗಳ ವಿಚಾರದಲ್ಲಿ ನಾಯಿ ನಿಷ್ಟೆ ಇರಬೇಕು ಎಂದು ನಾನು ನಂಬಿದ್ದೇನೆ. ಇಂತಹ ನಿಷ್ಟೆ ಪತ್ರಿಕೋದ್ಯಮಿಗಳಿಗೆ ಇದೆ, ಇಲ್ಲದಿದ್ದರೆ ಆ ನಿಷ್ಟೆ ಬರಲಿ ಎಂದು ಸ್ವಾಮೀಜಿಯವರು ನಮಗೆಲ್ಲ ಆಶೀರ್ವಚನ ನೀಡಿದ್ದಾರೆ.
ಅವರು ನಮ್ಮನ್ನು ಪ್ರಾಣಿಗಳಿಗೆ ಹೋಲಿಸಿದ್ದಾರೆ ಎಂಬ ಕಾರಣಕ್ಕೆ ರಾಜಕಾರಣ ಮಾಡುತ್ತಿರುವ ಸ್ವಾಮೀಜಿಗಳನ್ನು ನಾನು ಪ್ರಾಣಿಗಳಿಗೆ ಹೋಲಿಸಲಾರೆ. ಆ ಮೂಲಕ ಪ್ರಾಣಿಗಳಿಗೆ ಅವಮಾನ ಮಾಡಲಾರೆ. ನನಗೆ ಪ್ರಾಣಿಗಳ ಬಗ್ಗೆ ವಿಶೇಷ ಗೌರವ ಮತ್ತು ಪ್ರೀತಿ ಇದೆ. ನಾನೊಮ್ಮೆ ಸ್ವಾಮೀಜಿಗಳನ್ನು ಪ್ರಾಣಿಗಳಿಗೆ ಹೋಲಿಸಬೇಕಾದ ಅನಿವಾರ್ಯತೆ ಬಂದರೆ, ಹೋಲಿಕೆಗೆ ಯೋಗ್ಯವಾದ ಪ್ರಾಣಿಗಳು ಸಿಗುವುದು ಕಷ್ಟ. ನಾನು ಈ ಸ್ವಾಮೀಜಿಗಳನ್ನು ಬಕ ಧ್ಯಾನ ನಿರತರು ಎಂದು ಕರೆಯಬೇಕಾಗುತ್ತದೆ. ಮೀನು ಸಿಗಲಿ ಎಂದು ಕಣ್ಣು ಮುಚ್ಚಿ ಧ್ಯಾನ ಮಾಡುವ ಪ್ರಾಣಿ ಬಕ ಪಕ್ಷಿ. ಆದರ ಬಕ ಪಕ್ಷಿಯಂತೆ ಧ್ಯಾನ ಮಾಡುವಷ್ಟು ಶಾಂತಿ ಮತ್ತು ಸಹನೆ ನಮ್ಮ ಸ್ವಾಮೀಜಿಗಳಿಗೆ ಇದೆ ಎಂದು ಹೇಳುವುದು ಕಷ್ಟ. ಹೀಗಾಗಿ ಈ ಹೋಲಿಕೆ ಕೂಡ ಸರಿಯಾಗುವಿದಿಲ್ಲ.
ಯಡೀಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಹೋಗುತ್ತಾರೆ ಎಂದುಕೊಂಡಾಗ ಎದ್ದು ನಿಂತ ಈ ಸ್ವಾಮಿ ಗಣದ ಬಗ್ಗೆ ಪಾಪ ಎಂದು ಅನ್ನಿಸುತ್ತದೆ. ಯಾವುದೋ ಹಣ ಆಸ್ತಿಗಾಗಿ ಇವರೆಲ್ಲ ಪುಂಗಿ ಊದುವುದಕ್ಕೆ ಪ್ರಾರಂಭ ಮಾಡಿದರಲ್ಲ ಎಂದು ನೋವಾಗುತ್ತದೆ. ಇಂತಹ ದೇವ ಮಾನವರನ್ನೆಲ್ಲ ಇಂತಹ ದುಸ್ಥಿಗೆ ತಳ್ಳಿದ ಇಂದಿನ ರಾಜಕಾರಣ, ಬಿಜೆಪಿ ಸರ್ಕಾರ ಮತ್ತು ಯಡಿಯೂರಪ್ಪ ಅವರ ಬಗ್ಗೆ ಬೇಸರವಾಗುತ್ತದೆ.

Saturday, December 11, 2010

ನೆನಪುಗಳ ಜಾಡು ಹಿಡಿದು ಬೆಳಗಾವಿಯಲ್ಲಿ ಸುತ್ತಿದೆ.....!

ನೆನಪುಗಳು ವರವೋ ಶಾಪವೋ ? ಈ ಪ್ರಶ್ನೆಗೆ ಹೀಗೆ ಎಂದು ಉತ್ತರ ನೀಡುವುದು ಕಷ್ಟ. ಕೆಲವು ನೆನಪುಗಳು ನಮ್ಮನ್ನು ಸದಾ ಕಾಡುತ್ತಲೇ ಇರುತ್ತವೆ. ಅವುಗಳಿಂದ ಬಿಡುಗಡೆ ಪಡೆಯಲು ನಾವು ಯತ್ನ ನಡೆಸುತ್ತಲೇ ಇರುತ್ತೇವೆ. ಆದರೆ ಅದು ಅಷ್ಟು ಸುಲಭವಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಇಂಥಹ ನೆನಪುಗಳು ನಮಗೆ ಬೇಡ ಎಂದು ಅಂದುಕೊಂಡರೂ ಆ ನೆನಪುಗಳು ಮನಸ್ಸಿನ ಗೋಡೌನ್ ನಿಂದ ಹೊರಕ್ಕೆ ಬಂದಾಗ ನಮ್ಮ ಮನಸ್ಸು ಸಂತೋಷ ಪಡುತ್ತಿರುತ್ತದೆ.ಹೌದು ನಮಗೆ ನೆನಪುಗಳು ಬೇಕು. ನೆನಪುಗಳ ಜೊತೆ ಬದುಕುತ್ತ, ಅವುಗಳ ಜೊತೆ ಅಟವಾಡುತ್ತ, ಕೀಟಲೆ ಮಾಡುತ್ತ ವರ್ತಮಾನವನ್ನು ಎದುರಿಸಿದರೆ ಬದುಕಿನ ಚಂದವೇ ಬೇರೆ. ಬಹಳಷ್ಟು ಜನ ನಮಗೆ ಇಂತ ನೆನಪುಗಳು ಬೇಡ ಎಂದು ಹೇಳುತ್ತಿರುತ್ತಾರೆ. ಇದು ಪಲಾಯನವಾದ. ನೆನಪುಗಳಿಂದ ಬಿಡುಗಡೆ ಪಡೆಯುವ ಯತ್ನವೇ ಸರಿಯಲ್ಲ.
ನಾನು ಇದನ್ನೆಲ್ಲ ಹೇಳುವುದಕ್ಕೆ ಬಹು ಮುಖ್ಯ ಕಾರಣ ನಾನು ಕಳೆದ ಎರಡು ಮೂರು ದಿನ ಬೆಳಗಾವಿಯಲ್ಲಿ ಇದ್ದುದು. ಬೆಳಗಾವಿ ನಾನು ಓದಿದ ಊರು.ಅಲ್ಲಿಯೇ ನನ್ನ ಕಾಲೇಜು ಜೀವನ ರೂಪ ಪಡೆದಿದ್ದು. ನಾನು ಬೆಳಗಾವಿಗೆ ಹೋಗಿದ್ದು ಒಂದು ವಿಚಿತ್ರ ಪರಿಸ್ಥಿತಿಯಲ್ಲಿ. ಆಗ ನನ್ನ ಹೋರಾಟಗಾರನ ಮನಸ್ಥಿತಿ ತುಂಬಾ ಪ್ರಬಲವಾಗಿತ್ತು. ಪ್ರತಿಯೊಂದು ವಿಚಾರಕ್ಕೂ ಜಗಳ ತರಲೆ. ನನ್ನಪ್ಪ ಮಗ ಊರಿನಲ್ಲಿ ಇದ್ದರೆ ಉದ್ದಾರವಾಗುವುದಿಲ್ಲ ಎಂದು ಬೆಳಗಾವಿಗೆ ಕಳುಹಿಸುವ ತೀರ್ಮಾನ ಕೈಗೊಂಡ. ಇದಕ್ಕೆ ಕಾರಣ ಬೆಳಗಾವಿ ಗೋಗಟೆ ಕಾಲೇಜಿನ ಪ್ರಿನ್ಸಿಪಾಲ್ ಡಿ ಏ ಹೆಗಡೆ ಅಂತ. ಅವರು ಅಪ್ಪನಿಗೆ ತುಂಬಾ ಪರಿಚಿತರು. ಅವರ ನಿಗಾದಲ್ಲಿ ಮಗ ಉದ್ದಾರವಾಗುತ್ತಾನೆ ಎಂಬುದು ಅಪ್ಪನ ನಂಬಿಕೆ.
ನಾನು ಬೆಳಗಾವಿಯಲ್ಲಿ ಇದ್ದುದು ಒಬ್ಬ ಆಂಗ್ಲೋ ಇಂಡಿಯನ್ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ. ನನ್ನ ಜೊತೆಗೆ ಅಪ್ಪಿಕೋ ಚಳವಳಿಯ ಮೂಲಕ ಹೆಸರು ಮಾಡಿದ ಪಾಂಡುರಂಗ ಹೆಗದೆ ಹಾಗೂ ಇಬ್ಬರು ಆಸ್ಟ್ರೇಲಿಯಾದ ಹುಡುಗರಿದ್ದರು.
ಮನೆಯ ಯಜಮಾನ್ತಿಯ ಹೆಸರು ಮಿಸೆಸ್ ಫೆರೆರಾ ಅಂತ ನೆನಪು. ಆಕೆಯ ಒಬ್ಬನೇ ಮಗ ಜ್ಯೂಡಿಿಯರಿಯಲ್ಲಿ ಕೆಲಸ ಮಾಡುತ್ತಿದ್ದ. ಸೊಸೆ ತುಂಬಾ ಸುಂದರಿ. ಅವರಿಗೆ ಒಬ್ಬನೇ ಮಗ.ಯಾವುದೋ ಪರ್ವತವೊಂದು ನಡೆದು ಬಂದಂತೆ ಕಾಣುತ್ತಿದ್ದ ಮಿಸ್ ಫೇರೆರಾ ತುಂಬಾ ಒಳ್ಳೆಯ ಹೆಂಗಸು. ಆಕೆ ಏಷ್ಟು ದಪ್ಪಗಿದ್ದಳೆಂದರೆ, ಆಕೆ ಧರಿಸುತ್ತಿದ್ದ ಸ್ಕರ್ಟ್ ಹೊಟ್ಟೆಯ ಭಾಗವನ್ನು ಮುಚ್ಚುವುದಕ್ಕೆ ತೀವ್ರ ಯತ್ನ ನಡೆಸುತ್ತಿರುವಂತೆ ಕಾಣುತ್ತಿತ್ತು. ಈ ಹೆಂಗಸು ನನಗೆ ದೈರ್ಯವಾಗಿ ಇಂಗ್ಲೀಷ್ ಮಾತನಾಡುವುದನ್ನು ಕಲಿಸಿದಳು. ಯಾಕೆಂದರೆ ಅವಳಿಗೆ ಇಂಗ್ಲೀಷ್ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ.
ಒಮ್ಮೆ ನಾನು ಜ್ವರ ಬಂದು ಮಲಗಿದ್ದೆ. ನಾನು ಮಲಗಿದ್ದನ್ನು ಕಂಡ ಆಕೆ ಬಂದು ವಿಚಾರಿಸಿದಳು. ನಂತರ ಒಳಗೆ ಹೋಗಿ ಬ್ರಾಂಡಿ ಬಾಟಲ್ ತಂದು ಅದನ್ನು ಬಿಸಿ ನೀರಿನಲ್ಲಿ ಬೆರಸಿ ಕುಡಿಸಿದಳು. ಮರುದಿನ ಜ್ವರ ಮಾಯವಾಯಿತು. ಆದರೆ ಇದಾದ ನಂತರ ಆಗಾಗ ನಾನು ಜ್ವರ ಬಂದಂತೆ ಮಲುಗುವುದು ಫೇರೆರಾ ಬಂಡು ಬ್ರಾಂಡಿ ಕೊಡುವುದು ಸಾಮಾನ್ಯವಾಯಿತು. ನನಗೆ ಕುಡಿಯಬೇಕು ಅನ್ನಿಸಿದಾಗಲೆಲ್ಲ ಜ್ವರ ಬರುವುದು ಸಾಮಾನ್ಯವಾಯಿತು.
ಪ್ರತಿಯೊಬ್ಬ ಗಂಡಸು ಅಮ್ಮನನ್ನು ಹುಡುಕುತ್ತಿರುತ್ತಾನಂತೆ. ಆತ ತನ್ನ ಹೆಂಡತಿಯಲ್ಲಿ ಕಾಣಲು ಬಯಸುವುದು ಅಮ್ಮನನ್ನೇ. ಯಾಕೆಂದರೆ ನಾವೆಲ್ಲ ಕಣ್ಣು ಬಿಟ್ಟ ತಕ್ಷಣ ಮೊದಲು ನೋಡುವುದು ಅಮ್ಮನನ್ನೇ. ಈ ಫೆರೆರಾ ನನಗೆ ಒಂದು ರೀತಿಯಲ್ಲಿ ಅಮ್ಮನಾಗಿದ್ದಳು. ನಾನು ಈ ಬಾರಿ ಬೆಳಗಾವಿಗೆ ಹೋದಾಗ ಈ ಅಮ್ಮನನ್ನು ಹುಡುಕಿಕೊಂಡು ಹೊರಟೆ. ಆದರೆ ಅವರ ಕುಟುಂಬ ಇರಲಿಲ್ಲ. ಮನೆಯನ್ನು ಬಾಡಿಗೆಗೆ ಕೊಟ್ಟು ಅವರು ಗೋವಾಕ್ಕೆ ಶಿಫ್ಟ್ ಆಗಿದ್ದರು.
ಬೆಳಗಾವಿ ಅಂದ ತಕ್ಷಣ ನನಗೆ ಇಂತಹ ನೋರಾರು ನೆನಪುಗಳು ಬಂದು ಡಿಕ್ಕಿ ಹೊಡೆಯುತ್ತವೆ. ನಾನು ಬೆಳಗಾವಿಯಲ್ಲಿ ಓದಿತ್ತಿದ್ದ ದಿನಗಳಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವಿನ ವಿರಸ ಜೋರಾಗಿತ್ತು. ನಾನು ಓದುತ್ತಿದ್ದುದು ಗೋಗಟೆ ಕಾಲೇಜಿನಲ್ಲಿ.ಗೋಗಟೆ ಒಬ್ಬ ಉದ್ಯಮಿ. ಆದರೆ ಮರಾಠಿಗ. ಆತ ಯಶವಂತರಾವ್ ಚೆವಾಣ್ ಎಂಬ ಹಿರಿಯ ರಾಜಕಾರಣಿಯ ಖಾಸಾ ದೋಸ್ತ. ನಾನು ಕನ್ನಡ ಹೋರಾಟಗಾರರ ಜೊತೆ ಸೇರಿಕೊಂಡು ಗೋಗಟೆಯ ಪ್ರತಿಮೆಯನ್ನು ಕೆಡವುವ ಸಂಚನ್ನು ಮಾಡಿದ್ದೆವು. ಕೊನೆಗೆ ಧೈರ್ಯ ಬರೆದು ಸುಮ್ಮನಾಗಿದ್ದೆವು.
ಇಂಥಹ ಬೆಳಗಾವಿಗೆ ಈ ಬಾರಿ ನಾನು ಹೋಗಿದ್ದು ಬೇರೆ ಉದ್ದೇಶದಿಂದ. ಸುಮ್ಮನೆ ಒಂದೆರಡು ದಿನ ಬೆಂಗಳೂರಿನಿಂದ ಹೊರಕ್ಕೆಇರಬೇಕಾಗಿತ್ತು.ಅದಕ್ಕಾಗಿ ಬೆಳಗಾವಿಗೆ ಹೊರಟು ಬಿಟ್ಟೆ.
ಬೆಳಗಾವಿಯಿಂದ ನಾನು ಹೋಗಿದ್ದು ಗೋಕಾಕಕ್ಕೆ. ಗೋಕಾಕದ ಜಾರಕಿಹೊಳೆ ಸಹೋದರರು ನನಗೆ ಸುಮಾರು ೨೦ ವರ್ಷಗಳ ಸ್ನೇಹಿತರು. ಅವರಿಗೆ ನನ್ನ ಬಗ್ಗೆ ಪ್ರೀತಿ ಮತ್ತು ಗೌರವ. ಗೋಕಾಕಕ್ಕೆ ಹೋದವ ಅವರ ಸತೀಶ್ ಶುಗರ್ಸ್ ಗೆ ಭೇಟಿ ನೀಡಿದೆ. ಸತೀಶ್ ಅವರ ಮನೆಯಲ್ಲಿ ಅವಲಕ್ಕಿ ಚೂಡಾ ತಿಂದೆ. ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಅವರ ಜೊತೆ ಹರಟೆ ಹೊಡೆದು ಬೆಳಗಾವಿಗೆ ಹಿಂತಿರುಗಿದೆ. ಬೆಳಗಾವಿಯ ಹೊಟೆಲ್ ನಲ್ಲಿ ಕುಳಿತಾಗ ಮತ್ತೆ ನನಗೆ ಹಳೆಯ ನೆನಪುಗಳು ಕಾಡತೊಡಗಿದವು. ನಾನು ಬೆಳಗಾವಿಗೆ ಬಂದ ತಕ್ಷಣ ಕಲಿತ ಮೊದಲ ಮರಾಠಿ ಭಾಷೆಯ ಸಾಲು; ಏ ಮುಲಗಿ ಪಾರ್ ಸುಂದರ್ ಆಯೇ...ಅಂದರೆ ಈ ಹುಡುಗಿ ತುಂಬಾ ಸುಂದರವಾಗಿದ್ದಾಳೆ.
ಈ ಬೆಳಗಾವಿ ಕಾಡು ಮನುಷ್ಯನಂತಿದ್ದ ನನ್ನನ್ನು ನಾಗರಿಕನನ್ನಾಗಿ ಮಾಡಿತ್ತು. ಮಾತನಾಡಲು ಹಿಂಜರಿಯುತ್ತಿದ್ದವನಿಗೆ ಮಾತನಾಡಲು ಕಲಿಸಿತ್ತು. ಕುಡಿತ, ಪ್ರೀತಿ, ಪ್ರೇಮ, ಜಗಳ ಹೊರಾಟ ಎಲ್ಲವೂ ಪ್ರಾರಂಭವಾಗಿದ್ದು ಇಲ್ಲಿಯೇ. ನಾವಿದ್ದ ಶ್ರೀಮತಿ ಫೆರೆರಾ ಅವರ ಮನೆಯ ಎದುರು ಲಕ್ಷ್ಮಿ ಬಿಲ್ಡಿಂಗ್ ಎಂಬ ಕಟ್ಟಡವೊಂದಿತ್ತು. ಈ ಕಟ್ಟದಲ್ಲಿ ಉತ್ತರ ಕರ್ನಾಟಕದ ಕಾಲೇಜು ಹುಡುಗರು ರೂಂ ಮಾಡಿಕೊಂಡು ವಾಸವಾಗಿದ್ದರು. ಬಹುತೇಕ ಹುಡುಗರು ಹಣವಂತರು. ಮೋಜು ಮಸ್ತಿ ಅವರ ಬದುಕಿನ ಭಾಗವಾಗಿತ್ತು. ಭಾನುವಾರವಂತೂ ಬೆಳಿಗಿನಿಂದಲೇ ಅಲ್ಲಿ ಗುಂಡಿನ ಸಮಾರಾಧನೆ.
ಅದೊಂದು ಭಾನುವಾರ. ಶ್ರೀಮತಿ ಘೆರೆರಾ ಅವರ ಸೊಸೆ ಮನೆಯ ಮುಂದೆ ಕುಳಿತು ಕೋಳಿ ಮಾಂಸವನ್ನು ಕೊಯ್ದು ಅಡುಗೆಗೆ ಸಿದ್ಧ ಮಾಡುತ್ತಿದ್ದಳು. ಈಕೆ ನಾನು ಮೊದಲು ಹೇಳಿದಂತೆ ತುಂಬಾ ಸುಂದರಿ. ನಿಜವಾದ ಆಂಗ್ಲೋ ಇಂಡಿಯನ್. ಭಾರತ ಮತ್ತು ಬ್ರಿಟೀಷರ ಬಣ್ಣ ಸೇರಿ ಆಕೆಯ ಬಣ್ಣ ಹೆಚ್ಚು ಚಿತ್ತಾಕರ್ಷಕವಾಗಿತ್ತು. ಈ ಲಕ್ಖ್ಶಿ ಬಿಲ್ಡಿಂಗಿನ ಹುಡುಗರು ಒಮ್ಮೆಲೆ ಫೇರೆರಾಳ ಮನೆಯ ಬಳಿ ಬಂದರು. ನೋಡು ನೋಡುತ್ತಿದ್ದಂತೆ ಈ ಸುಂದರ ಸೊಸೆಯನ್ನು ಹೊತ್ತುಕೊಂಡು ಹೊರಟೇ ಬಿಟ್ಟರು. ಅತ್ತೆ, ಮಿಸೆಸ್ ಫೇರೆರಾ ಸೇವ್ ಅಸ್ ಎಂದು ಬೊಬ್ಬೆ ಹೊಡೆಯತೊಡಗಿದಳು. ಯಾರಿಗೆ ಏನು ಮಾಡಬೇಕು ಎಂದು ತಿಳಿಯಲಾಗದ ಸ್ಥಿತಿ.
ನನಗೆ ಆಗ ನೆನಪಾದವರು ಎಸ್. ಜಿ. ಹೆಗಡೆ ಎಂಬ ನಮ್ಮೂರಿನ ಪೋಲೀಸ್ ಇನಸ್ಪೇಕ್ಟರ್. ಅವರು ಬೆಳಗಾವಿಯ ರೈಲ್ವೆ ನಿಲ್ದಾಣದ ಪೋಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಪೊಲೀಸ್ ಠಾಣೆ ಮಿಸೆಸ್ ಪೇರೆರಾಳ ಮನೆಯಿಂದ ಐದು ನಿಮಿಷದ ದಾರಿ. ನಾನು ಅವರಿಗೆ ಫೋನ್ ಮಾಡಿದೆ. ಒಂದೆರಡು ನಿಮಿಷದಲ್ಲಿ ಹೆಗಡೆ ತಮ್ಮ ಪಡೆಯೂಂದಿಗೆ ಹಾಜರಾದರು. ಹುಡುಗರಿಗೆ ಬಡಿದು ಫೆರೆರಾಳ ಸೊಸೆಯನ್ನು ಬಿಡಿಸಿ ತಂದರು. ಜೊತೆಗೆ ಹುಡುಗರನ್ನು ಠಾಣೆಗೆ ಒಯ್ದು ಬೆಂಡೆತ್ತಿದರು.
ಇದಾದ ಮೇಲೆ ಮಿಸ್ ಫೆರೆರಾಳ ಮನೆಯಲ್ಲಿ ನನ್ನ ಗೌರವ ಹೆಚ್ಚಿತು. ನಾನು ಅವರ ಮನೆಯ ಮಗನಂತಾದೆ. ಆಕೆ ನಾನು ನೀಡಬೇಕಾದ ಮಾಸಿಕ ಬಾಡಿಗೆಯನ್ನು ಕೇಳುತ್ತಿರಲಿಲ್ಲ. ನನ್ನ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ಆ ಮಹಾತಾಯಿ ನನ್ನ ಆರೋಗ್ಯದ ಬಗ್ಗೆ ಅಮ್ಮನಂತೆ ಕಾಳಜಿ ಒಹಿಸುತ್ತಿದ್ದಳು. ನಾನು ಸಸ್ಯಾಹಾರಿ ಆಗಿದ್ದರಿಂದ ನನಗೆ ಪ್ರತ್ಯೇಕ ಅಡುಗೆ ಮಾಡತೊಡಗಿದಳು. ನನಗೆ ಗೊತ್ತಿಲ್ಲದಂತೆ ನಾನು ಊರಿನಲ್ಲಿ ಬಿಟ್ಟು ಬಂದಿದ್ದ ನನ್ನ ಅಮ್ಮ ನನಗೆ ಅಲ್ಲಿ ಸಿಕ್ಕಿಬಿಟ್ಟಿದ್ದಳು.
ಹೊಟೆಲ್ ರೂಮಿನಲ್ಲಿ ಕುಳಿತು ನನ್ನೊಳಗೆ ಇರುವ ಬೆಳಗಾವಿಗಾಗಿ ನಾನು ಮತ್ತೆ ಮತ್ತೆ ಹುಡುಕತೊಡಗಿದೆ. ಮನುಷ್ಯ ಸಂಬಂಧಗಳ ನಿಗೂಢತೆ, ಅದು ಪಡೆದುಕೊಳ್ಳುವ ಆಯಾಮ ನನ್ನಲ್ಲಿ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿತ್ತು.

Monday, December 6, 2010

ನಾನು ನನ್ನ ಗೆಟಪ್ಪು ಮತ್ತು ಇಂದಿನ ಆಧುನಿಕ ಜಗತ್ತು....!

ನಾವೆಲ್ಲ ಡಾ. ರಾಜಕುಮಾರ್, ರಾಜೇಶ್ ಖನ್ನಾ, ಅಮಿತಾಬ್ ಬಚ್ಚನ್ ಹಾಗೂ ಯಕ್ಷಗಾನ ಬಯಲಾಟವನ್ನು ನೋಡಿ ಬೆಳೆದವರು. ನಮಗೆ ಅಂದರೆ ನನ್ನ ತಲೆ ಮಾರಿನವರಿಗೆ ಇವರೇ ಒಂದು ರೀತಿಯಲ್ಲಿ ಆದರ್ಶವಾಗಿದ್ದರು. ರಾಜೇಶ್ ಖನ್ನಾ ನವಿರಾಗಿ ಮಾತನಾಡುವ ರೀತಿ ಹೆಚ್ಚು ಇಷ್ಟವಾಗುತ್ತಿತ್ತು. ಆತನ ಪ್ರೀತಿ ನಿವೇದನೆಯ ವಿಧಾನ ಮನಸ್ಸಿಗೆ ತಟ್ಟುತ್ತಿತ್ತು. ಪ್ರೀತಿ ನಿವೇದನೆ ಮಾಡುವ ರೀತಿ ಇದೇ ಎಂದು ನಾನು ಬಲವಾಗಿ ನಂಬಿದ್ದ ಕಾಲ ಅದು. ಆದರೆ ಹೈಸ್ಕೂಲಿಗೆ ಹೋಗುತ್ತಿದ್ದ ಆ ದಿನಗಳಲ್ಲಿ ನನಗೆ ಆಗತಾನೇ ಮೀಸೆ ಮೂಡುತ್ತಿತ್ತು. ಆಗ ಬಂದಿದ್ದು ವಿಷ್ಣುವರ್ಧನ ಅಭಿನಯದ ನಾಗರಹಾವು. ಈ ಸಿನೆಮಾ ಪ್ರೀತಿಯ ಬಗೆಗಿನ ನನ್ನ ಕಲ್ಪನೆಯನ್ನು ಬದಲಿಸಿಬಿಟ್ಟಿತು. ಹುಡುಗಿಯರನ್ನು ಪ್ರೀತಿ ಮಾಡಲು ರಾಮಚಾರಿಯ ನಡವಳಿಗೆ ಮನಸ್ಥಿತಿ ಬೇಕು ಎಂದು ನನ್ನ ನಂಬಿಕೆಯಲ್ಲಿ ಸ್ವಲ್ಪ ಮಾರ್ಪಾಟು ಮಾಡಿಕೊಂಡೆ. ಎಲ್ಲರ ಜೊತೆ ನಗುನಗುತ್ತ ಮಾತನಾಡುತ್ತಿದ್ದ ನಾನು ನಗುವುದನ್ನು ಸ್ವಲ್ಪ ಕಡಿಮೆ ಮಾಡಿದೆ. ಸಿಟ್ಟು ಸಿಡುಕು ಜಗಳ ಎಲ್ಲವೂ ನನ್ನ ವ್ಯಕ್ತಿತ್ವದಲ್ಲಿ ಸೇರಿಕೊಂಡವು. ಆದರೆ ನನ್ನ ಈ ಬದಲಾದ ವರ್ತನೆಯಿಂದ ಯಾವ ಬದಲಾವಣೆಯೂ ಅಗಲಿಲ್ಲ. ಯಾವ ಹುಡುಗಿಯೂ ಈ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನನಗೆ ಮಾರ್ಗರೇಟ್ ಆಗಲೀ, ಅಲಮೇಲು ಆಗಲೀ ಸಿಗಲಿಲ್ಲ.
ಆಗ ನನಗೆ ಯಾಕೋ ಈ ರಾಮಾಚಾರಿಯ ಗೆಟ್ ಅಪ್ ಪ್ರೀತಿ ಪ್ರೇಮವನ್ನು ಕೊಡುವುದಿಲ್ಲ ಎಂದು ಅನಿಸಲು ಪ್ರಾರಂಭವಾಯಿತು. ಆಗ ಮತ್ತೆ ನಾನು ರಾಜೇಶ್ ಖನ್ನಾನತ್ತ ಹಿಂತಿರುಗಿದೆ. ರಾಜೇಶ್ ಖನ್ನಾ ಹಾಕುತ್ತಿದ್ದ ಕುತ್ತಿಗೆ ಮುಚ್ಚುವ ಶರ್ಟ್ ಹೊಲಿಸಲು ಊರಿನ ಎಲ್ಲ ಟೈಲರ್ಸ್ ಹತ್ತಿರ ಓಡಾಡಿದೆ. ಕೊನೆಗೆ ಒಬ್ಬನನ್ನು ರಾಜೇಶ್ ಖನ್ನಾನ ಹಾಥಿ ಮೇರೆ ಸಾಥಿ ಸಿನೇಮಾಕ್ಕೆ ನನ್ನ ಖರ್ಚಿನಲ್ಲಿ ಕರೆದೊಯ್ದೆ. ಆತ ಸಿನೇಮಾ ನೋಡಿದವ ಅದೇ ರೀತಿಯ ಶರ್ಟ್ ಹೊಲಿದು ಕೊಟ್ಟ. ಆದರೆ ನನ್ನ ಊರಿನ ಜನ ಇದನ್ನು ನೋಡಿ ನಕ್ಕರು. ಊರಿನ ಪರಿಸರಕ್ಕೂ ಈ ರೀತಿಯ ಉಡುಪಿಗೂ ಹೊಂದಾಣಿಕೆ ಆಗುತ್ತಿರಲಿಲ್ಲ. ಅಷ್ಟರಲ್ಲಿ ಹೈಸ್ಕೂಲು ಮುಗಿಸಿ ಕಾಲೇಜಿಗೆ ಬಂದಿದ್ದೆ. ಕಾಲೇಜಿಗೆ ಹೋಗುವಾಗಲೇ ಉಳಿದವರಿಗಿಂತ ಬೇರೆಯಾಗಿರಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೆ. ಹೀಗಾಗಿ ನನ್ನ ಉಡುಪನ್ನು ಖಾದಿಗೆ ಬದಲಾಯಿಸಿ ಬಿಟ್ಟೆ. ಖಾದಿ ನಮ್ಮ ಮನೆಯ ಉಡುಪು. ನನ್ನ ಅಪ್ಪನಾಗಲೀ, ಅಜ್ಜನಾಗಲೀ ಕಾದಿಯನ್ನು ಬಿಟ್ಟು ಬೇರೆ ಉದುಪನ್ನು ಹಾಕುದವರೇ ಅಲ್ಲ. ಜೊತೆಗೆ ನಮ್ಮದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಎಲ್ಲವನ್ನು ಕಳೆದುಕೊಂಡ ಕುಟುಂಬ. ಹತ್ತಾರು ಎಕರೆ ಅಡಿಕೆ ತೋಟವನ್ನು ಕರ ನಿರಾಕರಣ ಚಳವಳಿಯಲ್ಲಿ ಕಳೆದುಕೊಂಡರೂ ಕಾಂಗ್ರೆಸ್ ಮೋಹವನ್ನು ಬಿಡದ ಕುಟುಂಬ. ಸ್ವಾತಂತ್ರ್ಯ ಬಂದ ಮೇಲೂ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುತ್ತ ಬಂದ ಕುಟುಂಬ.
ನಾನು ಖಾದಿ ಪ್ಯಾಂಟು ಮತ್ತು ಶರ್ಟ್ ಧರಿಸಿ ಕಾಲೇಜಿಗೆ ಹೋಗಲು ಪ್ರಾರಂಭಿಸಿದೆ. ಅಷ್ಟರಲ್ಲಿ ಸಮಾಜವಾದಿ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ ನನ್ನ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದ್ದವು. ಚಂದ್ರಶೇಖರ್ ಪಾಟೀಲ್, ದೇವಯ್ಯ ಹರವೆ, ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ ಮೊದಲಾದವರ ಸಂಪರ್ಕದಿಂದ ನನ್ನ ಡ್ರೆಸ್ ಕೋಡ್ ಬದಲಿಸಿದೆ. ಖಾದಿಯನ್ನು ಬಿಟ್ಟು ನಾರ್ಮಲ್ ಬಟ್ಟೆಯನ್ನು ಧರಿಸಲು ಪ್ರಾರಂಭಿಸಿದೆ. ಜೊತೆಗೆ ಕಾಂಗ್ರೆಸ್ ವಿರೋಧಿ ಮನಸ್ಥಿತಿಯೂ ಬಲವಾಗತೊಡಗಿತು. ಅಪ್ಪ ಅಜ್ಜನ ಜೊತೆ ಕಾಂಗ್ರೆಸ್ ಪಕ್ಷವನ್ನು ಹಿಯಾಳಿಸಲು ಪ್ರಾರಂಭಿಸಿದೆ. ಇದು ಮನೆಯಲ್ಲಿ ದೊಡ್ಡ ಜಗಳಕ್ಕೆ ಕಾರಣವಾಗಿ ಬಿಟ್ಟಿತು. ಅಜ್ಜ ಕಾಂಗ್ರೆಸ್ ಪಕ್ಷವನ್ನು ಬೈದಾಗಲೆಲ್ಲ ರುದ್ರಾವತಾರ ತಾಳಿ ನನ್ನ ಮೇಲೆ ಏರಿ ಬರುತ್ತಿದ್ದ. ಕೆಲವೊಮ್ಮೆ ನನ್ನ ಕಾಂಗ್ರೆಸ್ ವಿರೋಧಿ ಮಾತುಗಳನ್ನು ಕೇಳಿದಾಗ ಪೆಟ್ಟು ನೀಡುತ್ತಿದ್ದ. ಕಾಂಗ್ರೆಸ್ ಪಕ್ಷ ಮತ್ತು ಶ್ರೀಮತಿ ಇಂದಿರಾ ಗಾಂಧಿಯವರನ್ನು ಟೀಕಿಸಿ ಅಜ್ಜನ ಕೈಯಲ್ಲಿ ಹೊಡೆತ ತಿನ್ನುವುದು ಸಾಮಾನ್ಯವಾಯಿತು.
ಆದರೆ ಒಬ್ಬ ಕ್ರಾಂತಿಕಾರಿಯಾಗಲು ನಾನು ತೀರ್ಮಾನಿಸಿ ಆಗಿತ್ತು. ಹೀಗಾಗಿ ಬಟ್ಟೆ ಧಿರಸಿನ ಬಗ್ಗೆ ಲಕ್ಷ ನೀಡುವುದು ಕಡಿಮೆಯಾಯಿತು.ಕ್ರಾಂತಿ ಮಾಡಲು ಹೊರಟವರು ಪ್ರೀತಿಯ ಬಂಧನದಲ್ಲಿ ಬೀಳ ಬಾರದು ಎಂಬ ತೀರ್ಮಾನಕ್ಕೂ ನಾನು ಬಂದಿದ್ದೆ. ಹೀಗಾಗಿ ಪ್ರೀತಿಯನ್ನು ಬಿಟ್ಟು ಊರಿನಲ್ಲಿ ಚಳವಳಿ ಮಾಡಲು ಮುಂದಾದೆ. ನಾನು ಮೊದಲು ಚಳವಳಿ ಪ್ರಾರಂಭಿಸಿದ್ದು ರಾಮಚಂದ್ರಾ ಪುರದ ಸ್ವಾಮೀಜಿಯ ವಿರುದ್ಧ. ಇದು ಉರಿನಲ್ಲಿ ದೊಡ್ ಗಲಾಟೆಗೆ ಕಾರಣವಾಯಿತು. ಹವ್ಯಕ ಸಮಾಜದಿಂದ ನನಗೆ ಭಹಿಷ್ಕಾರ ಹಾಕಲಾಯಿತು. ಈ ಗಲಾಟೆ ಹೊಡೆದಾಟದ ವರೆಗೆ ಹೋದಾಗ ನಾನು ಊರು ಬಿಡಲು ನಿರ್ಧರಿಸಿದೆ. ಬೆಂಗಳೂರಿಗೆ ಬಂದೆ. ಈ ಕಥೆಯನ್ನು ಇನ್ನೊಮ್ಮೆ ಹೇಳುತ್ತೇನೆ.
ಬೆಂಗಳೂರಿಗೆ ಬಂದ ಮೇಲೆ ಪಾನ ಬೀಡಾಕ್ಕು ಕಾಸಿರಲಿಲ್ಲ. ಹೀಗಾಗಿ ಬಟ್ಟೆಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಸ್ಥಿತಿ ಇರಲಿಲ್ಲ. ಆಗ ಇದ್ದುದು ಒಂದೆ ಪ್ಯಾಂಟು ಶರ್ಟು. ಜೊತೆಗೆ ಒಂದು ಹಸಿರು ಜುಬ್ಬಾ ಇತ್ತು. ಈ ಜುಬ್ಬಾದ ಮೇಲೆ ನಾನು ಪಾನ್ ಉಗಿದುಕೊಂಡು ದೊಡ್ಡ ಕಲೆಯಾಗಿತ್ತು. ಅದು ಎಷ್ಟು ತೊಳೆದರೂ ಹೋಗುತ್ತಿರಲಿಲ್ಲ. ನಾನು ಉಷಾಳನ್ನು ಪ್ರೀತಿಸುತ್ತಿದ್ದ ಆ ದಿನಗಳಲ್ಲಿ ಅವಳೂ ಈ ಕಲೆಯ ಬಗ್ಗೆ ಕೇಳಿದಾಗ ಇದು ಕಲೆಯಲ್ಲ ಜುಬ್ಬಾದ ಡಿಸೈನ್ ಎಂದು ಹೇಳಿ ನಂಬಿಸಿ ಬಿಟ್ಟಿದ್ದೆ. ಬಹಳಷ್ಟು ನನ್ನ ಸ್ನೇಹಿತರು ನನ್ನ ಜುಬ್ಬಾದ ಮೇಲಾಗಿದ್ದ ಕಲೆಯನ್ನು ಡಿಸೈನ್ ಎಂದೇ ನಂಬಿದ್ದರು. ಆದರೆ ಆ ದಿನಗಳಲ್ಲಿ ಬಟ್ಟೆಯ ಬಗ್ಗೆ ಅಂತಹ ಆಸಕ್ತಿ ಉಳಿದಿರಲಿಲ್ಲ. ಜೊತೆಗೆ ಒಳ್ಳೆಯ ಬಟ್ಟೆ ಹಾಕಿಕೊಂಡರೆ ಹುಡುಗಿಯರು ಆಕರ್ಷಿತರಾಗುತ್ತಾರೆ ಎಂಬುದನ್ನು ನಾನು ನಂಬುತ್ತಿರಲಿಲ್ಲ. ಬಟ್ಟೆಯ ಮೇಲೆ ಆಕರ್ಷಿತರಾಗುವವರು ವ್ಯಕ್ತಿತ್ವದ ಬಗ್ಗೆ ಏನನ್ನೂ ತಿಳಿದುಕೊಂಡಿರುವುದಿಲ್ಲ. ಇದರಿಂದ ಯಾವ ಪ್ರಯೋಜನವೂ ಆಗದು ಎಂದು ನಾನು ನಂಬಿದ್ದೆ.
ಆದರೆ ಬಟ್ಟೆಯ ಮಹತ್ವ ನನಗೆ ತಿಳಿದಿದ್ದು ನಾನು ಜೀ ನ್ಯೂಸ್ ನ ಬೆಂಗಳೂರು ಬ್ಯುರೋದ ಮುಖ್ಯಸ್ಥನಾದ ಮೇಲೆ. ಒಮ್ಮೆ ಜೀ ಟೀವಿಯ ಮುಖ್ಯಸ್ಥ ಸುಭಾಷ್ ಚಂದ್ರ ಅವರ ಜೊತೆ ಮೀಟಿಂಗ್ ವ್ಯವಸ್ಥೆಯಾಗಿತ್ತು. ನಾನು ಸಭೆಗೆ ಹೋದಾಗ ಸುಭಾಷ್ ಚಂದ್ರ ಅವರ ಸೆಕ್ರೇಟರಿ ನನ್ನ ಕಾಲನ್ನು ಮತ್ತೊಮ್ಮೆ ನನ್ನನ್ನು ನೋಡುತ್ತಿದ್ದಳು. ಅವಳು ಯಾಕೆ ಹೀಗೆ ನೋಡುತ್ತಿದ್ದಾಳೆ ಎಂಬುದು ಆಗ ನನಗೆ ತಿಳಿಯಲಿಲ್ಲ. ಸಭೆ ಮುಗಿಸಿ ಹೊರಕ್ಕೆ ಬಂದಾಗ ಆಕೆ ನನ್ನನ್ನು ಕರೆದಳು. ಇನ್ನು ಮೇಲೆ ಚೆರಮೆನ್ ಮೀಟಿಂಗ್ ಗೆ ಬರುವಾಗ ಸೂಟ್ ಧರಿಸಿ ಬರಬೇಕು ಎಂದು ಸೂಚಿಸಿದಳು. ನಾನು ನನ್ನ ಮದುವೆಯಲ್ಲೂ ಸೂಟ್ ಹಾಕಿದವನಲ್ಲ. ಶೂ ಧರಿಸಿದವನಲ್ಲ. ಶೂ ಧರಿಸಿದರೆ ನನಗೆ ಯಾರೋ ನನ್ನ ಕಾಲು ಹಿಡಿದು ಎಳೆದಂತಾಗುತ್ತದೆ. ಆದರೆ ನಗೆ ಬೇರೆ ದಾರಿಯಿರಲಿಲ್ಲ. ಪ್ರಥಮ ಬಾರಿಗೆ ಬ್ಲೇಸರ್ ಮತ್ತು ಶೂ ಖರೀದಿಸಿದೆ. ನಂತರ ಸುವರ್ಣ ಚಾನಲ್ ಸೇರಿದ ಮೇಲೆ ಇನ್ನೂ ಒಂದೆರಡು ಬ್ಲೇಸರ್ ಖರಿದಿಸಿದೆ.
ಆದರೆ ಈಗ ನನ್ನನ್ನು ಬಟ್ಟೆಗಳು ಹೆದರಿಸುತ್ತವೆ. ಮೈಮೇಲೆ ಕೋಟು ಹೇರಿಕೊಂಡರೆ ಸೇಖೆಯಲ್ಲೂ ಶೂ ಧರಿಸಿದರೆ ನಾನು ಹೈರಾಣಾಗಿ ಹೋಗುತ್ತೇನೆ. ಅದು ನನ್ನ ವ್ಯಕ್ತಿತ್ವಕ್ಕೆ ಹೊಂದುವುದಿಲ್ಲ. ಆದರೆ ಇವತ್ತಿನ ಬದುಕು ಇದೆಯಲ್ಲ, ಅದೂ ಸಹ ಮಾರಾಟದ ವಸ್ತುವೇ.ನಾನು ನನ್ನನ್ನು ಮಾರಾಟ ಮಾಡಿಕೊಳ್ಳಲು ಇದನ್ನೆಲ್ಲ ಮಾಡಲೇಬೇಕು. ಅದಿಲ್ಲದಿದ್ದರೆ ಇಂದಿನ ಕಾರ್ಪುರೇಟ್ ಜಗತ್ತು ನಮ್ಮನ್ನು ತಿರಸ್ಕಿರಿಸಿ ಬಿಡುತ್ತದೆ.
ಇತ್ತೀಚಿಗೆ ಕಾರ್ಪುರೇಟ್ ಮೀಟಿಂಗ್ ಗೆ ಹೋಗುವಾಗ ಸುವರ್ಣ ಬಿಟ್ಟ ಮೇಲೆ ಮೂಲೆ ಸೇರಿದ್ದ ಬ್ಲೇಜರ್ ಅನ್ನು ಹೊರಕ್ಕೆ ತೆಗೆದೆ. ಅದನ್ನು ಹಾಕಿಕೊಂಡು ಹೋಗುವಾಗ ನಾನು ಯಾವುದೋ ಸರ್ಕಸ್ಸಿನ ಜೋಕರ್ ಎಂದು ಅನ್ನಿಸುತ್ತಿತ್ತು. ಆಗ ನಾನು ಹೇಳಿಕೊಂಡಿದ್ದು; ಶಶಿಧರ್ ಭಟ್ ನೀನು ಇದೆಯಲ್ಲ, ಬದುಕುವುದನ್ನು ಕಲಿಯುತ್ತಿದೆಯಲ್ಲೋ ಮಹಾರಾಯಾ ...!

Friday, December 3, 2010

ದೋಸೆ ವರ್ಸಸ್ ಪಿಜ್ಜಾ; ನಮಗೆ ಸಂತೋಷ ನೀಡುವುದು ಯಾವುದು ?

ಬದುಕು ಅರ್ಥಪೂರ್ಣವಾಗುವುದು ಯಾವುದರಿಂದ ? ನಮಗೆ ಬೇಕು ಅನ್ನಿಸಿದ್ದನ್ನೆಲ್ಲ ಪಡೆದುಕೊಳ್ಳುವುದರಿಂದಲೇ ? ಅಥವಾ ನಮಗೆ ಬೇಕು ಅನ್ನಿಸಿದ್ದು ಸಿಗದಿರುವುದರಿಂದಲೇ ?
ನಮಗೆ ಬೇಕು ಅನ್ನಿಸಿದ್ದನ್ನೆಲ್ಲ ಅಲ್ಲಾಉದ್ದೀನನ ಅದ್ಬುತ ದೀಪದಿಂದ ಪಡೆದುಕೊಳ್ಳುವಂತಾಗಿದ್ದರೆ ಬದುಕು ನೀರಸವಾಗಿಬಿಡುತ್ತಿತ್ತು. ಆಗ ಬದುಕಿಗೆ ಸ್ವಾರಸ್ಯವೇ ಉಳಿದಿರುತ್ತಿರಲಿಲ್ಲ. ನಮಗೆ ಬೇಕು ಅನ್ನಿಸಿದ್ದು ಗಗನದೀಪವಾಗಿದ್ದರೆ ನಾವು ಅದನ್ನು ಪಡೆದುಕೊಳ್ಳುವುದಕ್ಕೆ ಯತ್ನ ನಡೆಸುತ್ತೇವೆ. ಪಡೆದುಕೊಳ್ಳುವ ಯತ್ನವೇ ನಮ್ಮ ಬದುಕಿಗೆ ಚೈತನ್ಯವನ್ನು ನೀಡುತ್ತದೆ. ಪಡೆದುಕೊಳ್ಳುವುದು ಎನ್ನುವುದು ಕೊನೆ. ಅಲ್ಲಿಗೆ ಎಲ್ಲವೂ ಮುಗಿಯಿತು. ಉದಾಹರಣೆಗೆ ಪ್ರತಿಯೊಬ್ಬ ಮಧ್ಯ ವರ್ಗದ ವ್ಯಕ್ತಿಯ ಆಸೆ ಸ್ವಂತ ಮನೆ ಮತ್ತು ಓಡಾಡುವುದಕ್ಕೆ ಒಂದು ಕಾರು ಪಡೆಯುವುದು ಆಗಿರುತ್ತದೆ. ಆದರೆ ಮನೆ ಮತ್ತು ಕಾರು ದೊರಕಿದ ಮೇಲೆ ಆತ ಸಂತೋಷವಾಗಿರುತ್ತಾನಾ ? ಬಹುಶಃ ಇಲ್ಲ. ಮನೆ ಕಾರು ಬಂದ ಮೇಲೂ ಆತ ಮೊದಲಿನಂತ ಇರುತ್ತಾನೆ. ಹೊಸ ಸೌಲಭ್ಯ ಅವನ ಬದುಕಿಗೆ ಶಾಂತಿ ಮತ್ತು ಪ್ರೀತಿಯನ್ನು ಎಲ್ಲಿಂದಲೋ ತಂದುಕೊಡುವುದಿಲ್ಲ. ಯಾಕೆಂದರ ಶಾಂತಿ. ಸಮಾಧಾನ ಮತ್ತು ತೃಪ್ತಿ ಎಲ್ಲಿಯೋ ಇರುವ ಎಲ್ಲಿಂದಲೂ ಕೊಂಡು ತರುವ ವಸ್ತುವಲ್ಲ.
ಆದರೆ ನಮಗೆ ಬೇಕು ಅನ್ನಿಸಿದ್ದನ್ನು ಪಡೆದುಕೊಳ್ಳಲು ನಾವು ಯತ್ನ ನಡೆಸುವುದಿದೆಯಲ್ಲ ಅದೇ ಬದುಕು. ಯತ್ನ ಮುಗಿಯಿತೆಂದರೆ ಬದುಕೂ ಮುಗಿಯಿತು.
ದಕ್ಷಿಣ ಭಾರತದ ಖ್ಯಾತ ನಟ, ಪ್ರಕಾಶ್ ರೈ ನಮ್ಮ ಜೊತೆಗೆ ಮಲ್ಲೇಶ್ವರಂ ರೂಮಿನಲ್ಲಿ ಇರುತ್ತಿದ್ದ. ಆತನಿಗೆ ಆಗಲೂ ನಟನಾಗಬೇಕು ಎನ್ನುವ ಅಧಮ್ಯ ಆಸೆ. ಆದರೆ ಆಗ ನಮ್ಮ ಬಳಿ ಹಣ ಇರುತ್ತಿರಲಿಲ್ಲ. ನನಗಾಗ ಆರನೂರು ರೂಪಾಯಿ ಸಂಬಳ. ನನ್ನ ಇನ್ನೊಬ್ಬ ಸ್ನೇಹಿತ ಎಲ್. ಸಿ. ನಾಗರಾಜನಿಗೆ ಸಾವಿರದ ಇನ್ನೂರು ರೂಪಾಯಿ. ಪ್ರಕಾಶ್ ರೈಗೆ ಹೇಳಿಕೊಳ್ಳುವಂತಹ ಕೆಲಸ ಇಲ್ಲದಿದ್ದರಿಂದ ಅವನ ವರಮಾನದ ಬಗ್ಗೆ ಯಾವುದೇ ಮಾತನ್ನು ಆಡುವಂತಿರಲಿಲ್ಲ.
ಪ್ರಕಾಶ್ ಪ್ರತಿ ದಿನ ಒಬ್ಬಿಬ್ಬರು ನಿರ್ಮಾಪಕ ನಿರ್ದೇಶಕರನ್ನು ಭೇಟಿ ಮಾಡುತ್ತಿದ್ದ. ಹಾಗೆ ಹೋಗುವುದಕ್ಕೂ ಅವನ ಬಳಿ ಬಸ್ ಚಾರ್ಜ್ ಗೂ ಹಣ ಇರುತ್ತಿರಲಿಲ್ಲ. ಆಗೆಲ್ಲ ಹಲವು ಬಾರಿ ರಸ್ತೆಯಂಚಿನ ಗಾಡಿಯಲ್ಲಿ ರೈಸ್ ಬಾತ್ ಹಂಚಿಕೊಂಡು ತಿನ್ನುತ್ತಿದ್ದವರು ನಾವು.ಒಂದುವರೆ ರೂಪಾಯಿಯ ಚಿತ್ರಾನ್ನ ನಮ್ಮ ಮೂವರ ಹೊಟ್ಟೆ ತುಂಬುತ್ತಿತ್ತು. ಆಗ ಕ್ವಾರ್ಟರ್ ರಮ್ ಗೆ ಕೇವಲ ೮ ರೂಪಾಯಿ. ಯು ಬಿ ಬೀರಿಗೆ ೯ ರೂಪಾಯಿ. ನಮ್ಮ ತಲಾ ಮೂರು ರೂಪಾಯಿ ಹಾಕಿ ಕ್ವಾರ್ಟರ್ ರಂ ತೆಗೆದುಕೊಂದು ನಾವು ಮಾತನಾಡುತ್ತಿದ್ದೆವು. ಪ್ರಕಾಶ ಖ್ಯಾತ ನಟನಾಗುವ ಕನಸು ಕಾಣುತ್ತಿದ್ದ. ಎಲ್ ಸಿ ನಾಗರಾಜ ಮಾತ್ರ ಹಾಗಲ್ಲ. ಆತನಿಗೆ ಬದುಕಿನಲ್ಲಿ ಅದ್ಭುತ ಸಾಧನೆ ಮಾಡಬೇಕು ಅಂತ ಇತ್ತೋ ಇಲ್ಲವೋ ಆದರೆ ಆತ ಕವನ ಬರೆಯುತ್ತ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತ ಸ್ವಯಂ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತ ಕ್ರಾಂತಿಯ ಕನಸು ಕಾಣುತ್ತಿದ್ದ. ನನಗೆ ಕ್ರಾಂತಿಯ ಬಗ್ಗೆ ಆಗಲೇ ನಂಬಿಕೆ ಹೊರಟು ಹೋಗಿತ್ತು. ನಾನು ಬದುಕನ್ನು ಬಂದ ಹಾಗೆ ಸ್ವೀಕರಿಸುವ ಮನಸ್ಥಿತಿಯನ್ನು ರೂಪಿಸಿಕೊಂಡು ಬಿಟ್ಟಿದ್ದೆ. ಓದು ಬರವಣಿಗೆ, ಸಿನೆಮಾ,ಟ್ರಿಬಲ್ ಎಕ್ಸ್ ರಂ ನಡುವೆ ನನ್ನ ಬದುಕು ಸಾಗುತ್ತಿತ್ತು.
ಬದುಕನ್ನು ಮುಷ್ಟಿಯಲ್ಲಿ ಹಿಡಿದುಕೊಳ್ಳುವ ಚಲ ನನಗಾಗಲೀ ಎಲ್ಸಿ ಗಾಗಲೀ ಇರಲಿಲ್ಲ. ಆದರೆ ಪ್ರಕಾಶ್ ಹಾಗಲ್ಲ. ಆತ ಎಲ್ಲವನ್ನು ತನ್ನ ಮುಷ್ಟಿಯಲ್ಲಿ ಹಿಡಿದುಕೊಳ್ಳಲು ಯತ್ನ ನಡೆಸುವ ಚಲವಂತ. ಆತನ ಶಕ್ತಿ ಇದ್ದುದು ಎಲ್ಲವನ್ನೂ ಪಡೆದುಕೊಳ್ಳಬೇಕು ಎಂಬ ಚಲ ಮತ್ತು ಹೋರಾಟದಲ್ಲಿ. ಬೇಕಾದ್ದನ್ನು ಪಡೆದುಕೊಂಡ ಮೇಲೆ ಆತ ಸುಮ್ಮನೆ ಕುಳಿತುಕೊಳ್ಳುವವನಲ್ಲ. ಮತ್ತೇನನ್ನೋ ಪಡೆದುಕೊಳ್ಳಲು ಮತ್ತೊಂದು ಹೋರಾಟ.
ನನಗೆ ಅನ್ನಿಸುವ ಹಾಗೆ ಅವನ ಬದುಕು ಮತ್ತು ಯಶಸ್ಸು ಇರುವುದು ಈ ಸತತ ಹೋರಾಟದಲ್ಲೇ ಹೊರತೂ ಪಡೆದುಕೊಂಡ ಸಂತೃಪ್ತಿಯಲ್ಲಿ ಅಲ್ಲ. ಅವನಿಗೆ ಪಡೆದುಕೊಳ್ಳುವುದಕ್ಕೆ ನಡೆಸುವ ಹೋರಾಟದಲ್ಲಿ ಸಂತೋಷ ಇದ್ದರೆ, ನನಗೆ ಪಡೆದುಕೊಳ್ಳದೇ ಇರುವುದರಲ್ಲಿಯೇ ಆ ಸಂತೋಷ ಇದೆ. ಎಲ್ಲವನ್ನು ನನಗಾಗಿ ಬಾಚಿಕೊಳ್ಳುವುದರಲ್ಲಿ ನನಗೆ ನಂಬಿಕೆ ಇಲ್ಲ. ಅದು ನನಗೆ ಸಂತೋಷವನ್ನು ನೀಡುವುದಿಲ್ಲ.
ಬದುಕು ಮತ್ತು ಹೋರಾಟ ಎನ್ನುವುದು ಒಂದು ಮನಸ್ಥಿತಿ.ಸಂತೋಷ ಸಮಾಧಾನವೂ ಮನಸ್ಥಿತಿಯೇ. ಈ ಮನಸ್ಥಿತಿಯನ್ನು ರೂಪಿಸಿಕೊಳ್ಳುವುದು ಮುಖ್ಯವೇ ಹೊರತೂ ಅದು ಹೇಗೆ ದಕ್ಕುತ್ತದೆ ಎಂಬುದರಿಂದ ಅಲ್ಲ. ಆದರೆ ನಾವು ಸಂತೋಷ ಪಡುವುದನ್ನು ಕಲಿಯಬೇಕು. ಸಮಾಧಾನದಿಂದ ಬದುಕುವುದನ್ನೂ ರೂಢಿಸಿಕೊಳ್ಳಬೇಕು. ಇಲ್ಲದಿದ್ದರೆ ಬದುಕು ಸದಾ ಚಿಂತೆಯ ಆಗರವಾಗಿ ಬಿಡುತ್ತದೆ. ಇದನ್ನು ಇನ್ನೂ ಸರಳವಾಗಿ ಹೇಳುತ್ತೇನೆ. ನನಗೆ ಬೆಳಿಗ್ಗೆ ನೀರು ದೋಸೆಯನ್ನೋ, ಉಪ್ಪಿಟ್ಟನ್ನೋ ತಿಂದರೆ ಸಾಕು, ಆದರೆ ನನ್ನ ಮಗನಿಗೆ ಬರ್ಗರ್ ಫಿಜ್ಜಾಗಳೆಂದರೆ ಇಷ್ಟ. ಇಲ್ಲಿ ದೋಸೆ ಒಳ್ಳೆಯದೋ ಬರ್ಗರ್ ಫೀಜ್ಜಾ ಹೆಚ್ಚು ಒಳ್ಳೆಯದೋ ಎಂದು ಚರ್ಚೆ ಮಾಡುತ್ತ ಕುಳಿತರೆ ಚರ್ಚೆ ಮಾತ್ರ ಉಳಿಯುತ್ತದೆ ಇದರಿಂದ ಬೇರೆ ಏನೋ ಸಿಗುವುದಿಲ್ಲ. ಆದರೆ ದೋಸೆಯಲ್ಲಿ ನನಗೆ ಸಿಗುವ ಸಂತೋಷ ನನ್ನ ಮಗನಿಗೆ ಬರ್ಗರ್ ಮತ್ತು ಫಿಜ್ಜಾಗಳಲ್ಲಿ ದೊರಕುತ್ತಿದೆ ಎಂಬುದು ಮಾತ್ರ ಮುಖ್ಯ. ಅಂದರೆ ಪ್ರತಿಯೊಬ್ಬರಿಗೂ ಸಂತೋಷ ನೀದುವ ವಸ್ತುಗಳು ಬೇರೆ ಬೇರೆಯಾಗಿರುತ್ತವೆ. ನನಗೆ ಮುಖ್ಯ ಎನ್ನಿಸುವುದು ನಮಗೆ ಸಂತೋಷವನ್ನು ಕೊಡುವುದು ಯಾವುದು ಎಂದು ಗೊತ್ತಿರಬೇಕು. ಅದನ್ನು ತಿಳಿದುಕೊಳ್ಳಲು ಯತ್ನ ನಡೆಸಬೇಕು. ನಾನು ದೋಸೆ ಎಂದರೆ ಬೇರಯವರು ಏನು ಹೇಳುತ್ತಾರೆ ಎಂದು ಚಿಂತಿಸಲು ಪ್ರಾರಂಭಿಸಿದರೆ ಸಮಸ್ಯೆ ಪ್ರಾರಂಭವಾಗುತ್ತದೆ. ಯಾಕೆಂದರೆ ನಮ್ಮ ಸಂತೋಷ ಬೇರೆಯವರ ಮೇಲೆ ಅವಲಂಬಿಸಿರಬಾರದು. ಆಗ ನಮಗೆ ಸಂತೋಷ ದಕ್ಕುವುದಿಲ್ಲ. ನಮ್ಮ ಸಂತೋಷ ನಮ್ಮ ಮೇಲೆ ಮಾತ್ರ ಅವಲಂಬಿಸಿರಬೇಕು. ಆಗ ಮಾತ್ರ ಬದುಕು ಸುಂದರ ವಾಗಿರುತ್ತದೆ.

AMERICA SUPPORTS PAK#Shashidharbhat#Sudditv#Karnatakapolitics

ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...