Monday, January 30, 2012

ನಾನೂ ಮನೆ ಬಿಟ್ಟು ಓಡಿ ಬಂದಿದ್ದೆ....! - ಭಾಗ ೨



ಬೆಳಿಗ್ಗೆ ನಾಲ್ಕು ಗಂಟೆಗೆ ಮೈಕೊಡವಿ ಎದ್ದು ಕುಳಿತುಕೊಳ್ಳುವ ಬೆಂಗಳೂರು ರೈಲ್ವೆ ನಿಲ್ದಾಣ. ಬದುಕಿನ ಗಾಡಿ ಓಡಿಸುವುದಕ್ಕಾಗಿ ಏನೆಲ್ಲಾ ಮಾಡುವವರು.
೯ನೆಯ ತರಗತಿಯ ಲೋಕ ಜ್ನಾನವಿಲ್ಲದ ನಾನು ಎಲ್ಲವನ್ನೂ ನೋಡುತ್ತಿದ್ದೆ. ಆಗಲೇ ನನಗೆ ಅನ್ನಿಸಿದ್ದು ಬದುಕು ಎನ್ನವುದು ಈ ರೈಲ್ವೆ ಸ್ಟೇಷನ್ನಿನಂತೆ. ಇಲ್ಲಿ ಬಂದವರಿಗೆ ಯಾರು ಪರಿಚಿತರು ? ಯಾರು ಅಪರಿಚತರು ? ಪರಿಚಿತರು ಇದ್ದಕ್ಕಿದ್ದ ಹಾಗೆ ಅಪರಿಚಿತರಾಗುತ್ತಾರೆ. ಅಪರಿಚತರು ಪರಿಚಿತರಾಗುತ್ತಾರೆ.
ಈಗಲೂ ನಾನು ಆಗಾಗ ಹೇಳುವ ಒಂದು ಮಾತಿಗೆ ಬೆಂಗಳೂರಿನ ರೈಲ್ವೆ ನಿಲ್ದಾಣವೇ ಸ್ಪೂರ್ತಿ ಎಂದು ಈಗ ನನಗೆ ಅನ್ನಿಸುತ್ತದೆ. ಅದೆಂದರೆ ನಾವು ಸಹ ಒಂದು ರೈಲು. ನಾವು ಹೋಗುತ್ತಲೇ ಇರುತ್ತೇವೆ. ನಮ್ಮ ರೈಲಿಗೆ ಯಾರ್ಯಾರೋ ಬಂದು ಹತ್ತುತ್ತಾರೆ. ತಮ್ಮ ನಿಲ್ದಾಣ ಬಂದ ತಕ್ಷಣ ಇಳಿದು ಹೋಗುತ್ತಾರೆ. ಅದ್ದರಿಂದ ಬಂದು ಇಳಿದು ಹೋಗುವವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ನಮ್ಮ ರೈಲು ಹತ್ತುವ ಎಲ್ಲ ಜನ ಒಂದೇ ರೀತಿ ಇರುವುದಿಲ್ಲ. ಕೆಲವರು ರೈಲನ್ನೇ ತಮ್ಮ ಮನೆ ಎಂದು ತಿಳಿದುಕೊಂಡರೆ ಕೆಲವರು ಹೊಲಸು ಮಾಡುವುದಕ್ಕಾಗಿಯೇ ಬಂದವರಂತೆ ವರ್ತಿಸುತ್ತಾರೆ. ಇವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಕ್ಕೆ ರೈಲಿಗೆ ವ್ಯವಧಾನವಿಲ್ಲ..!
ನಾನು ಮನೆ ಬಿಟ್ಟು ಬಂದ ಮೂರನೆಯ ದಿನ ಅದು. ಹಲವು ರೀತಿಯ ಕನಸುಗಳನ್ನು ಹೊತ್ತು ಬಂದ ನನಗೆ, ಇಲ್ಲಿಗೆ ಬರುವುದಕ್ಕೆ ಮೊದಲು ಬೆಂಗಳುರು ಕನಸುಗಳನ್ನು ಸಾಕಾರಗೊಳಿಸುವ ಮಹಾನ್ ನಗರವಾಗಿ ಕಂಡಿತ್ತು. ಆದರೆ ಇಲ್ಲಿನ ಎರಡು ದಿನಗಳ ಅನುಭವ ಬೆಂಗಳೂರು ಕನಸುಗಳನ್ನು ನೀರು ಹಾಕಿ ಪೋಷಿಸಲಾರದು. ಇದು ಕನಸುಗಳನ್ನು ಕೊಲ್ಲುವ ಕಟುಕ ನಗರ ಎಂದು ಅನ್ನಿಸತೊಡಗಿತು.
ನನ್ನ ಊರು, ಊರಿನ ಜನ, ಮೈದುಂಬಿ ಹರಿಯುವ ನದಿ ಗುಡ್ಡ ಬೆಟ್ಟ ಎಲ್ಲ ನೆನಪಗಿ ಗೊತ್ತಿಲ್ಲದಂತೆ ಕಣ್ಣೀರು ಹರಿಯ ತೊಡಗಿತ್ತು.
ನಾವೆಲ್ಲ ಗುಡ್ದ ಬೆಟ್ಟಗಳಲ್ಲಿ ಓಡಾಡಿ ತಿನ್ನುತ್ತಿದ್ದ ಕವಳಿ ಹಣ್ಣು, ಬಿಕ್ಕೆ ಹಣ್ಣು, ಹಿಡಿಯುತ್ತಿದ್ಸ ಜೇನು ಹೀಗೆ ಒಂದೊಂದೆ ನೆನಪು ಮುಂದೆ ಬಂದು ನರ್ತಿಸತೊಡಗಿದಾಗ ಊರಿಗೆ ತಿರುಗಿ ಹೋಗುವ ಬಯಕೆ ಹೆಚ್ಚಾಗತೊಡಗಿತು. ಈ ನಗರ ಬದುಕು ನನ್ನದಲ್ಲ. ಇಲ್ಲಿ ನಾನು ಬದುಕಲಾರೆ. ಇಲ್ಲಿ ಹೋರಾಟ ಮಾಡಲಾರೆ ಎಂದು ಒಳ ಮನಸ್ಸು ಹೇಳತೊಡಗಿದಾಗ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ನಡೆದೆ.
ಆದರೆ ಊರಿಗೆ ತಿರುಗಿ ಹೋಗುವುದಕ್ಕೆ ನನ್ನ ಬಳಿ ಹಣ ಇಲ್ಲ. ಬಸ್ ಚಾರ್ಜ್ ಗೆ ಬೇಕಾದಷ್ಟು ಹಣ ದುಡಿಯೋಣ ಎಂದುಕೊಂಡರೆ ಯಾರೂ ಕೆಲಸ ನೀಡುವುದಿಲ್ಲ.
ನನ್ನ ಕಿಸೆಯನ್ನು ಮುಟ್ಟಿ ನೋಡಿಕೊಂಡೆ. ಅಲ್ಲಿ ಮೂರು ರೂಪಾಯಿ ೭೫ ಪೈಸೆ ಹಣ ಉಳಿದಿತ್ತು. ಈ ಹಣದಲ್ಲಿ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಹೋಗುವುದು ನಂತರ ಮುಂದೇನು ಎಂದು ತೀರ್ಮಾನಿಸುವುದು ಎಂದುಕೊಂಡವ ಶಿವಮೊಗ್ಗಗೆ ಹೊರಟ ಬಸ್ ಹತ್ತಿದೆ. ಮೂರು ರೂಪಾಯಿ ಹಣವನ್ನು ಕಂಡಕ್ಟರ್ ಕೈಗೆ ನೀಡಿ ಟಿಕೆಟ್ ನೀಡುವಂತೆ ಕೇಳಿಕೊಂಡೆ. ಆತ ನನ್ನ ಮುಖವನ್ನು ನೋಡಿ ಗುಬ್ಬಿಗಾ ? ಎಂದು ಪ್ರಶ್ನಿಸಿದ. ಹೌದು ಎಂದೆ. ಗುಬ್ಬಿ ಎನ್ನುವ ಊರು ಎಲ್ಲಿದೆ ಎಂಬುದು ನನಗೆ ತಿಳಿಯದಿದ್ದರೂ ಅದು ಬೆಂಗಳೂರು ಶಿವಮೊಗ್ಗ ನಡುವೆ ಎಲ್ಲಿಯೋ ಇದೆ ಎಂಬುದರಲ್ಲಿ ನನಗೆ ಯಾವ ಅನುಮಾನವೂ ಇರಲಿಲ್ಲ. ಜೊತೆಗೆ ಗುಬ್ಬಿಯಿಂದ ಶಿವಮೊಗ್ಗೆಗೆ ಎಷ್ಟು ದೂರ ಎಂಬುದು ನನಗೆ ತಿಳಿದಿರಲಿಲ್ಲ.
ಅದು ಬೆಳಗಿನ ಕೆಂಪು ಡಬ್ಬಿ ಬಸ್ಸು. ಅದನ್ನು ಶಾಲಾ ಬಸ್ ಅಂತಾನೂ ಕರೀತಿದ್ದರು. ಅದು ಸಮವಸ್ತ್ರ ಧರಿಸಿ ನಿಂತ ಶಾಲಾ ಮಕ್ಕಳು ಕಂಡ ತಕ್ಷಣ ನಿಂತು ಬಿಡುತ್ತಿತ್ತು. ಅವರನ್ನು ಹತ್ತಿಸಿಕೊಂಡು ಓಲಾಡುತ್ತ, ತೇಲಾಡುತ್ತ ಮುಂದುವರಿಯುತ್ತಿತ್ತು. ನಾನು ಅ ಮಕ್ಕಳನ್ನು ನೋಡುತ್ತಿದ್ದ ಹಾಗೆ ಮನಸ್ಸಿನಲ್ಲಿ ಒಂದು ರೀತಿಯ ತಳಮಳ. ನಾನೂ ಸಹ ಅವರಂತೆ ಸಮವಸ್ತ್ರ ಧರಿಸಿಕೊಂಡು ಶಾಲೆಗೆ ಹೋಗುವವನಾಗಿದ್ದೆ. ಆದರೆ ನಾನು ಹೈಸ್ಕೂಲಿಗೆ ಹೋಗುವಾಗ ಒಬ್ಬಂಟಿ. ನನ್ನ ಜೊತೆಗೆ ಹೈಸ್ಕೂಲಿಗೆ ಬರುವವರು ಯಾರೂ ಇರಲಿಲ್ಲ.
ಬೆಳಿಗ್ಗೆ ಎಂಟು ಕಾಲಿಗೆ ಮನೆಯಿಂದ ಹೊರಟರೆ ಸುಮಾರು ಒಂದು ತಾಸಿನ ದಾರಿ. ಮನೆಯ ಎದುರಿನ ಅಡಿಕೆ ತೋಟವನ್ನು ದಾಟಿ ಎದುರಿನ ದೊಡ್ಡ ಗುಡ್ದವನ್ನು ಹತ್ತಿ ಹೋಗಬೇಕು. ಗುಡ್ಡ ಎಂದರೆ ಅದು ಬೃಹದಾಕಾರದ ಗುಡ್ಡ. ಆ ಗುಡ್ದವನ್ನು ಹತ್ತುವುದೆಂದರೆ ಹಿಮಾಲಯವನ್ನು ಏರಿದಂತೆ. ದಾರಿಯ ಮಧ್ಯದಲ್ಲಿ ಕಾಣುತ್ತಿದ್ದ ನವಿಲಿನ ಹಿಂಡು. ಅಲ್ಲಲ್ಲಿ ಓಡುತ್ತ ಮರೆಯಾಗುವ ನರಿಗಳು. ಎಲ್ಲಿಂದಲೂ ಕೇಳಿ ಬರುತ್ತಿದ್ದ ಬೇರೆ ಬೇರೆ ಪ್ರಾಣಿಗಳ ಕೂಗು. ಅದೆಲ್ಲ ಎಷ್ಟು ಅಪ್ಯಾಯಮಾನ ಎನ್ನಿಸುತ್ತಿತ್ತೆಂದರೆ ಕೆಲವೊಮ್ಮೆ ನಾನು ಯಾವುದೋ ಮರವೊಂದನ್ನು ಏರಿ ಅಲ್ಲಿಯೇ ಕುಳಿತು ಬಿಡುತ್ತಿದ್ದೆ. ಹಾಗೆ ಕೆಲವೊಮ್ಮೆ ಕಾಡಿನ ಮಧ್ಯೆ ಇರುವ ಯಾವುದೇ ಮರವೊಂದರ ಬುಡದಲ್ಲಿ ಮಲಗಿ ನಿದ್ರೆ ಮಾಡಿ ಬಿಡುತ್ತಿದ್ದೆ. ಸಂಜೆಯಾಗುವ ಹೊತ್ತಿಗೆ ಎಚ್ಚರಗೊಂಡು ಹಾಗೆ ಮನೆಗೆ ಹಿಂತಿರುಗಿ ಬಿಡುತ್ತಿದ್ದೆ.
ಆ ಕೆಂಪು ಡಬ್ಬಿ ಬಸ್ಸಿನಲ್ಲಿ ಹೋಗುತ್ತಿದ್ದಾಗ ಇದೆಲ್ಲ ನೆನಪಾಗುತ್ತಿತ್ತು. ಹಾಗೆ ಬೆಂಗಳೂರು ಎಂಬ ಕಾಂಕ್ರಿಟ್ ಕಾಡಿಗೆ ಬಂದ ಮೇಲೆ ನಮ್ಮ ಊರು, ನಮ್ಮ ಕಾಡು ಎಷ್ಟು ಚಂದ ಎಂಬುದು ಗೊತ್ತಾಗಿತ್ತು. ನಗರ ಎನ್ನುವುದು ಅಡಗೋಲಜ್ಜಿ ಕಥೆಯ ಬ್ರಹ್ಮರಾಕ್ಷಸ ಎಂದು ಅನ್ನಿಸತೊಡಗಿದ್ದು.
ಬಸ್ಸಿನ ಕಿಡಕಿಯ ಬಳಿ ಕುಳೀತು ಹೊರಗೆ ನೋಡುತ್ತಿದ್ದ ನನಗೆ ದಾರಿಯಲ್ಲಿ ಎಲ್ಲೂ ಗುಡ್ಡ ಬೆಟ್ತಗಳೇ ಇಲ್ಲ, ಕಾಡು ಇಲ್ಲ ಎಂದು ಆಶ್ಚರ್ಯವಾಗುತ್ತಿತ್ತು. ಎಲ್ಲಿ ನೋಡಿದರೂ ಬಯಲು. ದೂರದಲ್ಲಿ ಕಾಣುವ ಮನೆಗಳು ಅಲ್ಲಿ ಊರೊಂದಿದೆ ಎಂಬುದನ್ನು ಸಾರಿ ಹೇಳುತ್ತಿದ್ದವು.
ಬೆಳಿಗ್ಲೆ ೯ ಗಂಟೆ ೪೫ ನಿಮಿಷಕ್ಕೆ ಬಸ್ಸು ಗುಬ್ಬಿಗೆ ಬಂದು ನಿಂತಿತು. ಕಂಡಕ್ಟರ್ ಗುಬ್ಬಿ ಗುಬ್ಬಿ ಎಂದು ಕೂಗಿ ಹೇಳುತ್ತ ನನ್ನತ್ತಲೇ ನೋಡುತ್ತಿದ್ದಾನೆ ಎಂದು ಅನ್ನಿಸಿ ಬಸ್ ನಿಂದ ಕೆಳಕ್ಕೆ ಇಳಿದೆ. ಇಳಿಯುತ್ತಿದ್ದಂತೆ ನನಗೆ ಗೊತ್ತಾದ ಅಂಶ ಎಂದರೆ ಗುಬ್ಬಿ ಎನ್ನುವುದು ತುಮಕೂರು ನಗರದ ಸಮೀಪ ಇರುವ ಒಂದು ಸಣ್ಣ ಪಟ್ಟಣ ಎಂಬುದು. ಅಂದರೆ ಶಿವಮೊಗ್ಗ ಬಸ್ಸ್ ಹತ್ತಿ ನಾನು ಬಂದಿದ್ದರೂ ತುಂಬಾ ದೂರವೇನೂ ಬಂದಿರಲಿಲ್ಲ. ಇನ್ನು ನಾನು ಸಾಗಬೇಕಾದ ದಾರಿ ತುಂಬಾ ದೂರವಿದೆ ಎಂದು ಅನ್ನಿಸಿ ಹೋಗುವುದು ಹೇಗೆ ಎಂಬುದೇ ಅರ್ಥವಾಗಲಿಲ್ಲ. ಆದರೆ ಆ ಸ್ಥಿತಿಯಲ್ಲೂ ನಾನು ಎದೆ ಗುಂದಿರಲಿಲ್ಲ.
ಆ ರಾಜ್ಯ ಹೆದ್ಧಾರಿಯಲ್ಲಿ ಶಿವಮೊಗ್ಗ ದಿಕ್ಕಿನ ಕಡೆಗೆ ಹಾಗೆ ನಡೆದು ಹೊರಟೆ. ದಿನಾಲು ಹತ್ತಾರು ಕಿಮೀ ನಡೆದ ಅಬ್ಯಾಸವಿದ್ದ ನನಗೆ ನಡೆಯುವುದು ಕಷ್ಟ ಎಂದೂ ಅನ್ನಿಸಲಿಲ್ಲ.
ನಮ್ಮ ಮನೆಯಿಂದ ಸಿದ್ದಾಪುರ ಪೇಟೆಯಲ್ಲಿರುವ ಸಿದ್ದಿವಿನಾಯಕ ಹೈಸ್ಕೂಲಿಗೆ ನಾನು ಹೋಗುತ್ತಿದ್ದುದು. ಸಿದ್ದಾಪುರಕ್ಕೆ ಕಾಲು ದಾರಿಯಲ್ಲಿ ಹೋದರೆ ಸುಮಾರು ೬ ಕಿಮೀ ದೂರ. ಅಂದರೆ ಹಸ್ಕೂಲಿಗೆ ಹೋಗಿ ಬರುವುದೆಂದರೆ ಸುಮಾರು ೧೨ ಕಿ ಮೀ ನಡಿಗೆ. ಚೆನ್ನಮಾವ್, ಅವರಗುಪ್ಪ ಊರುಗಳನ್ನು ದಾಟಿ, ಎರಡು ಗದ್ದೆ ಬೈಲು ಹಾದು ಹೋಗಬೇಕು. ಪ್ರತಿದಿನದ ಈ ನಡುಗೆಯಿಂದ ಕಾಲಿನಲ್ಲಿ ನಡೆಯುವ ಶಕ್ತಿ ಇತು. ಎಷ್ಟು ದೂರ ನಡೆದರೂ ಆಯಾಸವಾಗುತ್ತಿರಲಿಲ್ಲ.
ಹೀಗಾಗಿ ಗುಬ್ಬಿಯಿಂದ ನಾನು ಶಿವಮೊಗ್ಗ ರಸ್ತೆಯಲ್ಲಿ ನಡೆದು ಹೊರಟೆ. ಹಿಂದಿನ ದಿನ ರಾತ್ರಿಯಿಂದ ಹೊಟ್ಟೆಗೆ ಏನೂ ಬಿದ್ದಿರಲಿಲ್ಲ. ಹೀಗಾಗಿ ಹೊಟ್ಟೆಯ ಒಳಗೆ ಯಕ್ಷಗಾನ ಬಯಲಾಟ ನಡೆಯುತ್ತಿತ್ತು. ಆದರೂ ನಾನು ನಡೆಯುತ್ತಿದ್ದೆ. ಸುಮಾರು ಹತ್ತು ಹದಿನೈದು ಕಿಮೀ ನಡೆದಿರಬೇಕು. ಪಕ್ಕದಲ್ಲಿ ಒಂದು ತೆಂಗಿನ ತೋಟ. ಅದರ ಸ್ವಾಗತ ಕಮಾನಿನ ಎದುರು ಧಣಿವಾರಿಸಿಕೊಳ್ಳಲು ಕುಳಿತ. ಆ ತೋಟದಲ್ಲಿ ಏಳೇನೀರು ತೆಗೆಯುತ್ತಿದ್ದನ್ನು ಹಾಗೆ ನೋಡುತ್ತ ಕುಳಿತೆ. ಒಳಗೆ ತೋಟದಲ್ಲಿ ಇದ್ದವರು ಸುಸ್ತಾಗಿ ಕುಳಿತ ನನ್ನನ್ನು ನೋಡಿದರು. ಅವರಿಗೆ ಏನು ಅನ್ನಿಸಿತೋ ಏನೋ. ಅಜ್ಜನೊಬ್ಬ ಎರಡು ಏಳೇ ನೀರು ಹಿಡಿದುಕೊಂಡು ಗೇಟಿನ ಬಳಿ ಬಂದ. ನನ್ನನ್ನು ಏನು ಕೇಳದೇ ಒಂದು ಏಳೆ ನೀರು ಒಡೆದು ನೀಡಿದ. ನಾನು ಮರು ಮಾತನಾಡದೇ ಅವನ ಕೊಟ್ಟ ಏಳೆನೀರು ಕುಡಿದೆ. ಆತ ತಕ್ಷಣ ಇನ್ನೊಂದು ಏಳೇನೀರು ಒಡೆದು ಕೊಟ್ಟ. ಅದನ್ನೂ ಕುಡಿದೆ. ಹೋದ ಜೀವ ತಿರುಗಿ ಬಂದಂತಾಯಿತು.
ಎಷ್ಟು ಎಂದು ಕೇಳುತ್ತ, ನನ್ನ ಖಾಲಿ ಜೇಬನ್ನು ತಡವಿದೆ.
ಆತ ಇಲ್ಲ, ಇದನ್ನು ಹಣಕ್ಕಾಗಿ ನೀಡಲಿಲ್ಲ. ನೀನು ಸುಸ್ತಾಗಿದ್ದೆ. ಇದು ನನ್ನದಲ್ಲ ದೇವರು ಕೊಟಿದ್ದು. ನಿನಗೆ ಕೊಟ್ಟೆ ಎಂದು ಹೇಳಿದವನೇ ತಿರುಗಿಯೂ ನೋಡದೇ ಅಲ್ಲಿಂದ ಮತ್ತೆ ತೋಟದೊಳಗೆ ನಡೆದ.
ನನಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ.
ಮತ್ತೆ ದೇಹದಲ್ಲಿ ಶಕ್ತಿ ತುಂಬಿಕೊಂಡಿತ್ತು. ಇನ್ನೂ ನೂರಾರು ಕಿಮೀ ನಡೆಯಬಲ್ಲೆ ಎಂಬ ಧೈರ್ಯ ಕೂಡ ಬಂದಿತ್ತು. ನಾನು ನನ್ನ ಈ ಪಯಣವನ್ನು ಮುಂದುವರಿಸಿದೆ.
ನಾನು ನಡೆಯುತ್ತಲೇ ಇದ್ದೆ. ಸಮಯ ಎಷ್ಟು ಎಂದು ಗೊತ್ತಾಗುವಂತಿರಲಿಲ್ಲ. ನನ್ನ ಬಳಿ ವಾಚ್ ಕೂಡ ಇರಲಿಲ್ಲ. ಸೂರ್ಯ ನೆತ್ತಿಯಿಂದ ಕೆಳಕ್ಕೆ ಇಳಿಯುವ ಹೊತ್ತಿಗೆ ಮತ್ತೆ ಸುಸ್ತಾಗಿತ್ತು. ಮತ್ತೆ ದಣಿವಾರಿಸಿಕೊಳ್ಳಲು ಮರದ ಕೆಳಗೆ ಕುಳಿತೆ. ಸಂಜೆಯ ಕತ್ತಲು ಸಾವಕಾಶವಾಗಿ ಎಲ್ಲೆಡೆಗೆ ಆವರಿಸಿಕೊಳ್ಳುತ್ತಿತ್ತು. ರಸ್ತೆ ಆ ಕತ್ತಲೆಯಲ್ಲಿ ಹೆಣದ ಹಾಗೆ ಮಲಗಿತ್ತು. ಅಕ್ಕ ಪಕ್ಕದ ಮರಗಳು ಕಪ್ಪನೆಯ ಆಕೃತಿಗಳಾಗಿ ಕಾಣುತ್ತಿದ್ದವು.
ನಾನು ಮತ್ತೆ ಎದ್ದು ನಡೆಯತೊಡಗಿದೆ. ಸುಮಾರು ಅರ್ಧ ಗಂಟೆ ನಡೆದಿರಬೇಕು. ಸೈಕಲ್ಲಿನ ಮೇಲೆ ವ್ಯಕ್ತಿಯೊಬ್ಬ ಬರುವುದು ಕಾಣಿಸಿತು. ಸುಮ್ಮನೆ ಅವನತ್ತ ನೋಡಿ ಕೈ ಅಡ್ದ ಮಾಡಿದೆ. ಆತ ನನ್ನತ್ತ ನೋಡಿ ಎಲ್ಲಿಗೆ ಅಂದ. ನಾನು ಶಿವಮೊಗ್ಗ ಎಂದು ಉತ್ತರಿಸಿದೆ.
ಆತ ಬೇರೆ ಏನೂ ಕೇಳಲಿಲ್ಲ. ನಾನು ಅರಸಿಕೆರೆಗೆ ಹೋಗುತ್ತಿದ್ದೇನೆ. ಅಲ್ಲ್ಲಿಯ ವರೆಗೆ ನಿನ್ನನ್ನು ಬಿಡುತ್ತೇನೆ. ಅಲ್ಲಿಂದ ಯಾವುದಾದರೂ ಲಾರಿಯನ್ನು ಹಿಡಿದುಕೊಂಡು ಶಿವಮೊಗ್ಗೆಗೆ ಹೋಗು ಎಂದ. ನಾನು ಸರಿ ಎಂದು ಅವನ ಸೈಕಲ್ಲಿನ ಹಿಂದೆ ಕುಳಿತೆ. ಆತ ಸೈಕಲ್ ತುಳಿಯುತ್ತ ಮಾತನಾಡತೊಡಗಿದ.
ಆತ ಮೂಲತಹ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದವನು. ಅರಸೀಕೆರೆಯಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುವವನು. ಪಕ್ಕದ ಹಳ್ಳಿಗೆ ಸಾಲ ವಸೂಲಿಗೆ ಹೋದವನು ಈಗ ಅರಸೀಕೆರೆಗೆ ಹಿಂತಿರುಗುತ್ತಿದ್ದಾನೆ. ಇಷ್ಟೇ ಅವನ ಮಾತಿನ ತಾತ್ಪರ್ಯ.
ನನ್ನ ಬಗ್ಗೆ ಆತ ಕೇಳಿದ. ನಾನು ನನ್ನ ಊರು ಯಾವುದು ಎಂದು ಹೇಳಿದೆ. ಆದರೆ ಬೆಂಗಳೂರಿಗೆ ಬಂದಿದ್ದು ಕೆಲಸವೊಂದರ ಸಂದರ್ಶನಕ್ಕೆ. ಆದರೆ ನನ್ನ ಪಿಕ್ ಪಾಕೇಟ್ ಅಯ್ತು ಎಂದು ಸುಳ್ಳನ್ನು ಸೃಷ್ಟಿಸಿ ಹೇಳಿದೆ. ಆತ ನನ್ನ ಮಾತನ್ನು ನಂಬಿದನೋ ಬಿಟ್ಟನೋ. ಬೇರೆ ಮಾತು ಆಡಲಿಲ್ಲ.
ನಾವು ಅರಸಿಕೆರೆ ತಲುಪಿದಾಗ ರಾತ್ರಿ ೧೦ ಗಂಟೆ ಆಗಿತ್ತು. ಆತ ಬಸ್ ನಿಲ್ದಾಣದ ಬಳಿ ನನ್ನನ್ನು ಬಿಟ್ಟು ರಾತ್ರಿ ಇಲ್ಲೇ ಮಲಗು. ಬೆಳಿಗ್ಗೆ ಶಿವಮೊಗ್ಗೆಗೆ ಹೋಗುವ ಲಾರಿಗಳು ಸಿಗ್ತವೆ. ಲಾರಿ ಹತ್ತಿ ಶಿವಮೊಗ್ಗೆಗೆ ಹೋಗು ಎಂದು ಸಲಹೆ ನೀಡಿ ಹೊರಟು ಹೋದ.
ನಾನು ಆ ರಾತ್ರಿ ಅರಸೀಕೆರೆಯ ಬಸ್ ನಿಲ್ದಾಣದಲ್ಲಿ ಕಳೆಯಲು ನಿರ್ಧರಿಸಿದೆ. ಹಾಗೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಹಾಕಿದ ಬೇಂಚಿನ ಮೇಲೆ ಮಲಗಿದೆ. ಹೊಟ್ಟೆ ಖಾಲಿಯಾಗಿ ಚುರುಕ್ ಅನ್ನುತ್ತಿದ್ದರೂ ನಡೆದ ಆಯಾಸದಿಂದಾಗಿ ಕಣ್ಣು ಏಳೆಯುತ್ತಿತ್ತು. ನಾನು ಹಾಕಿಕೊಂಡಿದ್ದ ಚಪ್ಪಲಿಯನ್ನು ತೆಗೆದು ಬೆಂಚಿನ ಕೆಳಗಿಟ್ಟು ಅಲ್ಲಿಯೇ ಮಲಗಿ ನಿದ್ರೆ ಮಾಡಿದೆ.
ನಾನು ಕಣ್ಣು ಬಿಟ್ಟಾಗ ಅರಸೀಕೆರೆಯ ಬಸ್ ನಿಲ್ದಾಣದಲ್ಲಿ ಜನರ ಓಡಾಟ ಪ್ರಾರಂಭವಾಗಿತ್ತು. ಎದ್ದು ಸಾರ್ವಜನಿಕ ನಲ್ಲಿಯಲ್ಲಿ ನೀರು ಕುಡಿದೆ. ಮುಖ ತೊಳೆದುಕೊಂಡೆ. ತಕ್ಷಣ ಚಪ್ಪಲಿಯ ನೆನಪಾಯಿತು. ಆ ಕಲ್ಲು ಬೆಂಚಿನ ಕೆಳಗೆ ನೋಡಿದರೆ ನನ್ನ ಚಪ್ಪಲಿ ಇರಲಿಲ್ಲ. ಅದನ್ನು ಯಾರು ಕದ್ದೊಯ್ದಿದ್ದರು. ನನ್ನ ಚಪ್ಪಲಿ ಕಳ್ಳತನವಾಗಿದೆ ಎಂದು ಯಾರನ್ನು ಕೇಳಲಿ ? ಜೊತೆಗೆ ಚಪ್ಪಲಿ ಇಲ್ಲದೇ ಟಾರು ರಸ್ತೆಯಲ್ಲಿ ನಡೆಯುವುದು ಹೇಗೆ ?
ಆದರೂ ನಾನು ನಡೆಯಲೇಬೇಕಿತ್ತು. ಬರೀ ಕಾಲಿನಲ್ಲಿ ಶಿವಮೊಗ್ಗ ರಸ್ತೆಯಲ್ಲಿ ನಡೆಯತೊಡಗಿದೆ. ಹಸಿವೆಯಾಗಿ ಹೊಟ್ಟೆ ತೊಳಸಿದಂತಾಗುತ್ತಿತ್ತು. ಕಾಲು ಸುಡುತ್ತಿತ್ತು. ಆದರೂ ನಡೆಯದೇ ನನಗೆ ಬೇರೆ ದಾರಿ ಇರಲಿಲ್ಲ.

Sunday, January 29, 2012

ನಾನೂ ಮನೆ ಬಿಟ್ಟು ಓಡಿ ಬಂದಿದ್ದೆ....!





ನನಗೆ ಒಂದು ಕಾಲದಲ್ಲಿ ತಿರುಗುವ ಹುಚ್ಚು ಹಿಡಿದಿತ್ತು. ಈ ಹುಚ್ಚಿನಿಂದಾಗಿ ನಾನು ಭಾರತದ ಉದ್ದಗಲಕ್ಕೆ ಒಡಾಡಿದ್ದೇನೆ. ಹಣ ಖಾಲಿಯಾದ ಮೇಲೆ ಈ ತಿರುಗಾಟದಿಂದ ನಾನು ಹಿಂದಕ್ಕೆ ಬರುತ್ತಿದ್ದುದು ಮಾಮೂಲು. ನಾನು ಈ ತಿರುಗಾಟಕ್ಕೆ ಮುನ್ನುಡಿ ಬರೆದಿದ್ದು ನಾನು ಹೈಸ್ಕೂಲಿಗೆ ಹೋಗುತ್ತಿದ್ದಾಗ. ಆಗ ನನಗೆ ವಿಪಿರೀತ ನಾಟಕದ ಹುಚ್ಚು. ಒಬ್ಬ ಮಹಾನ್ ನಟನಾಗಬೇಕು ಎಂಬುದು ನನ್ನ ಬದುಕಿನ ಗುರಿಯಾಗಿತ್ತು. ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ನಾನು ನನ್ನ ನಟನಾ ಸಾಮರ್ಥ್ಯದಿಂದ ಹಲವು ಭಾರಿ ಪ್ರಶಸ್ತಿ ಪಾರಿತೋಷಕವನ್ನು ಪಡೆದಿದ್ದೂ ಉಂಟು.
ನಟನೆ ಮತ್ತು ಸಿನೆಮಾ ನನ್ನನ್ನು ಸೆಳೆದಿದ್ದ ಆ ದಿನಗಳಲ್ಲಿ ಬೆಂಗಳೂರಿಗೆ ಹೋಗಿ ನಟನಾಗಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದು. ಅದೊಂದು ದಿನ. ಬಹುಶಃ ೧೯೭೪ ಇಸವಿ ದಿಸೆಂಬರ್ ತಿಂಗಳು ಇರಬೇಕು. ಅಂದು ಮನೆಯಲ್ಲಿ ಹಸ್ಕೂಲ್ ನ ಫೀ ಕಟ್ಟಲೆಂದು ಅಪ್ಪ ಕೊಟ್ಟ ಹದಿನೆಂಟು ರೂಪಾಯಿ ನನ್ನ ಕಿಸೆಯಲ್ಲಿ ಇತ್ತು. ನನಗೆ ಆ ಹದಿನೆಂಟು ರೂಪಾಯಿ ಭಾರಿ ಮೊತ್ತವಾಗಿ ಕಂಡಿತ್ತು. ಈ ಹಣವನ್ನು ತೆಗೆದುಕೊಂಡು ಬೆಂಗಳೂರು ಬಸ್ ಹತ್ತುವ ತೀರ್ಮಾನ ತೆಗೆದುಕೊಂಡೆ. ಹೈಸ್ಕೂಲಿಗೆ ಬಂದವನು ಹತ್ತು ಗಂಟೆಯ ಸಿರ್ಸಿ ಬೆಂಗಳೂರು ಬಸ್ ಹತ್ತಿ ಬಿಟ್ಟೆ. ಆ ಕೆಂಪು ಡಬ್ಬಿ ಬಸ್ಸಿನಲ್ಲಿ ಆಗ ಬೆಂಗಳೂರಿಗೆ ೧೧ ರೂಪಾಯಿ ಚಾರ್ಜ್. ಬಸ್ ಹತ್ತಿ ಟಿಕೆಟ್ ತೆಗೆದುಕೊಂಡ ಮೇಲೆ ನನ್ನ ಕೈಯಲ್ಲಿ ಉಳಿದಿದ್ದು ೭ ರೂಪಾಯಿಗಳು. ಉತ್ತರ ಕನ್ನಡ ಮತ್ತು ಹುಬ್ಬಳ್ಳಿಯನ್ನು ಬಿಟ್ಟು ಬೇರೆ ಊರುಗಳನ್ನೇ ಆ ದಿನಗಳಲ್ಲಿ ನಾನು ನೋಡಿರಲಿಲ್ಲ. ಹುಬ್ಬಳ್ಳಿಗೆ ಹೋಗಿದ್ದು ನನ್ನ ಅಪ್ಪನಿಗೆ ಕೀಡ್ನಿ ಅಪರೇಷನ್ ಆಗಿದ್ದರಿಂದ ಅಮ್ಮನ ಜೊತೆಗೆ ಹೋಗಿದ್ದು. ಒಂದು ವಾರ ಆಸ್ಪತ್ರೆಯಲ್ಲಿ ಇದ್ದು ಬಂದಿದ್ದು ಬಿಟ್ಟರೆ ಹುಬ್ಬಳ್ಳಿಯನ್ನು ಸರಿಯಾಗಿ ನೋದಿರಲಿಲ್ಲ.
ಇನ್ನು ನಾನು ನೋಡಿದ್ದ ಊರುಗಳೆಂದರೆ ಸಿರ್ಸಿ, ಸಾಗರ, ಜೋಗ್ ಫಾಲ್ಸ್ ಮಾತ್ರ.
ನಮ್ಮೂರಿನ ಕಾಡು, ನದಿ ಬೆಟ್ಟ ಗುಡ್ಡಗಳು, ಹೆಚ್ಚೆಂದರೆ ಅಕ್ಕ ಪಕ್ಕದ ಗ್ರಾಮಗಳನ್ನು ಮಾತ್ರ ನೋಡಿದ್ದ ನಾನು ಆಗ ನಟನಾಗುವುದಕ್ಕಾಗಿ ಬೆಂಗಳೂರು ಕನಸುಕಂಡು ಅದನ್ನು ಸಾಕಾರಗೊಳಿಸಲು ಯಾರಿಗೂ ಹೇಳದೇ ಬೆಂಗಳೂರು ಬಸ್ ಹತ್ತಿಬಿಟ್ಟಿದ್ದೆ !
ಬಸ್ ಸಿದ್ದಾಪುರದಿಂದ ಸಾಗರದ ಮಾರ್ಗವಾಗಿ ಶಿವಮೊಗ್ಗ ತಲುಪವಷ್ಟರಲ್ಲಿ ನಾನು ಮಹಾನ್ ನಟನಾದಂತೆ ಕನಸು ಕಾಣತೊಡಗಿದ್ದೆ. ಆಗಲೇ ರಾಜಕುಮಾರ್, ಉದಯಕುಮಾರ್ ಅವರ ಸಾಲಿನಲ್ಲಿ ನಾನು ಬಂದು ನಿಂತಂತೆ ನನಗೆ ಅನ್ನಿಸಿಬಿಟ್ಟಿತ್ತು. ರಾಜಕುಮಾರ್ ಮತ್ತು ಉದಯಕುಮಾರ್ ಅವರ ಬಹುತೇಕ ಸಿನೆಮಾಗಳನ್ನು ಕದ್ದು ನೋಡಿದ್ದ ನಾನು ಅವರ ಮ್ಯಾನರಿಸಂ ಗಳನ್ನು ಅನುಕರಿಸಲು ಪ್ರಾರಂಭಿಸಿ ಹಲವು ಕಾಲವಾಗಿತ್ತು. ಜೊತೆಗೆ ನನ್ನನ್ನು ಅತಿಯಾಗಿ ಕಾಡಿದ ಹಿಂದಿ ಚಿತ್ರ ನಟ ಎಂದರೆ ರಾಜೇಶ್ ಖನ್ನಾ. ರಾಜೇಶ್ ಖನ್ನಾ ಆ ದಿನಗಳಲ್ಲಿ ತನ್ನ ಹಲವು ಚಿತ್ರಗಳಲ್ಲಿ ಕುತ್ತಿಗೆ ಮುಚ್ಚುವ ಶರ್ಟ್ ಧರಿಸುತ್ತಿದ್ದ. ನಾನು ಅದೇ ರೀತಿಯ ಶರ್ಟ್ ಹಾಕಬೇಕೆಂದು ನನ್ನೂರಿನ ಟೇಲರ್ ಭಟ್ಟಿಯನ್ನು ರಾಜೇಶ್ ಖನ್ನಾನ ಹಾಥಿ ಮೇರೆ ಸಾಥಿ ಸಿನೆಮಾಕ್ಕೆ ಕರೆದುಕೊಂಡು ಹೋಗಿ ತೋರಿಸಿದ್ದೆ. ಆತ ನನ್ನ ಖರ್ಚಿನಲ್ಲಿ ಸಿನೆಮಾ ನೋಡಿ ಬಿಡಿ ಇದೇ ರೀತಿಯ ಶರ್ಟ್ ಹೊಲಿದುಕೊಡ್ತೀನಿ ಅಂತ ಭರವಸೆಯನ್ನು ನೀಡಿ ಬಿಟ್ಟಿದ್ದ. ನಾನೇ ಹಂಡ ಬಂಡದ ಬಟ್ಟೆಯನ್ನು ಖರೀದಿ ಮಾಡಿ ಕೊಟ್ಟು ಶರ್ಟಿಗಾಗಿ ಕಾದು ಕುಳಿತೆ. ಒಂದು ವಾರದ ನಂತರ ಶರ್ಟ್ ಸಿಕ್ಕಾಗ ಸ್ವರ್ಗ ಮೂರೇ ಗೇಣು. ಆದರೆ ಆತ ಕುತ್ತಿಗೆಯನ್ನು ಮುಚ್ಚಬೇಕಾದ ಬಟ್ಟೆಯ ಭಾಗವನ್ನು ಸ್ವಲ್ಪ್ ಜಾಸ್ತಿ ಇಟ್ಟು ಬಿಟ್ಟಿದ್ದ. ಹೀಗಾಗಿ ಅದು ಗಡ್ಡದ ವರೆಗೆ ಬಂದು ನಿಂತು ಬಿಡುತ್ತಿತ್ತು. ಜೊತೆಗೆ ಕುತ್ತಿಗೆಯ ಎಡ ಭಾಗದಲ್ಲಿ ಇರಿಸಿದ್ದ ಬಟನ್ ಗಳು ಅಗಾಗ ಕುತ್ತಿಗೆಯನ್ನು ಕಚ್ಚುತ್ತ ಕಿರಿ ಕಿರಿಯನ್ನು ಉಂಟು ಮಾಡುತ್ತಿದ್ದವು. ಈ ಬಗ್ಗೆ ಅವನಿಗೆ ಹೇಳಿದಾಗ ಇದು ರಾಜೇಶ್ ಖನ್ನಾನ ಶರ್ಟಿನ ತದ್ರೂಪ ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿದ್ದ. ನಾನೂ ಸಹ ಇದನ್ನು ದೊಡ್ದ ವಿಚಾರ ಮಾಡಲು ಬಯಸದೇ ಶರ್ಟನ್ನು ಪ್ರೀತಿಯಿಂದ ತೊಟ್ಟುಕೊಂಡು ಓಡಾಡ ತೊಡಗಿದೆ. ಊರಿನ ಜನರೆಲ್ಲ ನನ್ನನ್ನು ಉತ್ತರ ಕನ್ನಡ ರಾಜೇಶ್ ಖನ್ನಾ ಎಂದು ಕರೆದು ನನ್ನನ್ನು ಪುಳಕಿತರನ್ನಾಗಿ ಮಾಡುತ್ತಿದ್ದರು. ಆದರೆ ಹಿಂದಿನಿಂದ ಭಟ್ಟರ ಮಗಂದು ಜಾಸ್ತಿಯಾಯ್ತು ಎಂದು ಹೇಳಿಕೊಂಡು ಓಡಾಡುತ್ತಿದ್ದರು.
ಇಂತಹ ಇತಿಹಾಸದ ನಾನು ನಟನಾಗಬೇಕು ಎಂದು ಬೆಂಗಳೂರಿಗೆ ಹೊರಟು ಬಿಟ್ಟಿದ್ದೆ, ಆ ಕೆಂಪು ಡಬ್ಬಿ ಬಸ್ಸು ಕಂಡ ಕಂಡಲ್ಲಿ ನಿಲ್ಲುತ್ತ ಬೆಂಗಳೂರಿಗೆ ಬಂದು ತಲುಪಿದಾಗ ರಾತ್ರಿ ಹತ್ತು ಗಂಟೆ ದಾಟಿ ಹೋಗಿತ್ತು. ಇಡೀ ನಗರ ವಿದ್ಯುತ್ ದೀಪದಿಂದ ಶೃಂಗರಿಸಿಕೊಂಡು ನಿಂತಿತ್ತು. ಹೈಸ್ಕೂಲಿನ ಬಿಳಿ ಅಂಗಿ ಖಾಕಿ ಚೆಡ್ದಿ ಹಾಕಿಕೊಂಡು ಬಸ್ ನಿಲ್ದಾಣದಲ್ಲಿ ಇಳಿದ ನನಗೆ ಮುಂದೇನು ಎಂಬುದು ಗೊತ್ತಿರಲಿಲ್ಲ. ಆದರೆ ಹೊರ ಊರಿಗೆ ಹೋದಾಗ ಹೊಟೇಲ್ಲಿನಲ್ಲಿ ಉಳಿದುಕೊಳ್ಳಬೇಕು ಎಂದು ನಾನು ನಂಬಿಕೊಂಡಿದ್ದೆ. ಆದರೆ ಕೈಯಲ್ಲಿ ಯಾವ ಬ್ಯಾಗು ಇಲ್ಲದೇ ರಸ್ತೆ ಬದಿಯ ಪ್ಯಾದೆಯಂತೆ ಇರುವ ನನಗೆ ರೂಮು ಕೊಡುವವರು ಯಾರು ? ಜೊತೆಗೆ ಕೈಯಲ್ಲಿ ಏಳು ರೂಪಾಯಿ ಇಟ್ಟುಕೊಂಡವ ಬಾದಿಗೆ ರೂಮು ಪಡೆಯುವುದು ಸಾಧ್ಯವೆ ? ಈ ಪ್ರಶ್ನೆಗಳು ನನ್ನನ್ನು ಕಾಡಲೇ ಇಲ್ಲ. ನಾನು ಮೆಜೆಸ್ಟಿಕ್ ನ ಹಲವು ಹೋಟೇಲ್ ಗಳನ್ನು ಸುತ್ತಿದೆ. ರೂಮು ಬೇಕಿತ್ತು ಎಂದು ಹೇಳಿದಾಗ ಅವರೆಲ್ಲ ನನ್ನನ್ನು ನೋಡಿ ನಕ್ಕು ರೂಮಿಲ್ಲ ಎಂದು ಹಿಂದಕ್ಕೆ ಕಳುಹಿಸಿದರು. ಹೀಗೆ ಸುತ್ತುತ್ತಾ ಬಳೇ ಪೆಟೆಯ ಹೋಟೆಲ್ ಒಂದರ ಬಳಿ ನಿಂತೆ. ಯಥಾ ಪ್ರಕಾರ ಅದೇ ಪ್ರಶ್ನೆ: ರೂಮು ಇದೆಯಾ ?
ಅಲ್ಲಿದ್ದ ವ್ಯಕ್ತಿಯೊಬ್ಬ ನನ್ನನ್ನು ನೋಡಿ ಹೇಳಿದ. ನೋಡು ಅಲ್ಲಿ ರೈಲ್ವೆ ಸೇಷನ್ ಇದೆ. ನಿನ್ನಂತವರಿಗೆ ಅದೇ ಹೋಟೆಲ್. ಅಲ್ಲಿ ಹೋಗು ಮಲಗು.
ನನಗೆ ಬೇರೆ ದಾರಿ ಇರಲಿಲ್ಲ. ಕಣ್ಣು ಎಳೆಯುತ್ತಿತ್ತು. ಸರಿ ಎಂದು ರೈಲ್ವೆ ಸ್ಟೆಷನ್ ಗೆ ಬಂದು ಮಲಗಿದೆ. ಬೆಳಿಗ್ಗೆ ಎದ್ದಾಗ ನನ್ನ ಎದುರು ಬೆಂಗಳೂರು ತೆರೆದು ನಿಂತಿತ್ತು. ಆದರೆ ನನ್ನ ಕಿಸೆಯಲ್ಲಿ ಇದ್ದುದು ಕೇವಲ ೭ ರೂಪಾಯಿಗಳು ಮಾತ್ರ. ಈ ಏಳು ರೂಪಾಯಿ ಮೂಲ ಬಂಡವಾಳದೊಂದಿಗೆ ನಾನು ನಟನಾಗಲು ಹೊರಟಿದ್ದೆ.
ರೈಲ್ವೆ ಸ್ಟೇಷನನ್ನಿನ ಪಕ್ಕದ ತಳ್ಳು ಗಾಡಿಯಲ್ಲಿ ೮೦ ಪೈಸೆ ನೀಡಿ ಎರಡು ಇಡ್ಲಿ ತಿಂದಾಗ ಹೊಟ್ಟೆ ತುಂಬಿ ಸಂತೃಪ್ತಿಯ ಭಾವ. ಅಲ್ಲಿಯವರೆಗೆ ಮನೆಯಲ್ಲಿ ಸುದಿಷ್ಟ ತಿಂಡಿ ಭೋಜನ ಮಾಡುತ್ತಲೇ ಬೆಳೆದ ನನಗೆ ಪ್ರಥಮ ಬಾರಿ ಹಸಿವು ಎಂದರೇನು ಎಂಬುದು ತಿಳಿದಿತ್ತು. ಜೊತೆಗೆ ಹಸಿವನ್ನು ತುಂಬಿಸಿಕೊಳ್ಳಲು ಪಡಬೇಕಾದ ಕಷ್ಟ ಏನು ಎಂಬುದು ಅರ್ಥವಾಗಿತ್ತು. ಆದರೂ ನಟನಾಗಬೇಕು ಎಂಬ ನನ್ನ ಕನಸು ಸತ್ತಿರಲಿಲ್ಲ.
ರೈಲ್ವೆ ಸ್ಟೇಷನ್ನಿನ ಪಕ್ಕದಲ್ಲಿ ತಿಂಡಿ ತಿಂದವನು ಸಿನೆಮಾ ಸೇರುವುದಕ್ಕೆ ಮೊದಲು ಯಾವುದಾದರೂ ನಾಟಕ ಕಂಪೆನಿ ಸೇರಿದರೆ ಒಳ್ಳೆಯದು ಎಂಬ ಭಾವನೆ ಬಂತು. ನಟನೆಯಲ್ಲಿ ತರಬೇತಿ ಪಡೆದ ಮೇಲೆ ಚಿತ್ರರಂಗ ಕೈಬೀಸಿ ಕರೆಯುತ್ತಿದೆ ಎಂದು ಯೋಚಿಸುತ್ತಿದ್ದವನಿಗೆ ಪಕ್ಕದಲ್ಲೇ ಕಂಡಿದ್ದು ಮಾಸ್ಟರ್ ಹಿರಣ್ಣಯ್ಯ ಅವರ ನಾಟಕ ಮಂಡಳಿಯ ಬೋರ್ಡು. ಆಗ ಅಲ್ಲಿ ಸುಭಾಷನಗರ ಸಿಟಿ ಬಸ್ ನಿಲ್ದಾಣ ಇರಲಿಲ್ಲ. ಸಿಟಿ ಬಸ್ ಗಳೆಲ್ಲ ಅಲ್ಲಿದ್ದ ಮೈದಾನದಂತೆ ಕಾಣುತ್ತಿದ್ದ ಕೆರೆಯ ಸುತ್ತಲೂ ರಸ್ತೆಯ ಪಕ್ಕದಲ್ಲಿ ಬಸ್ ಗಳನ್ನ ನಿಲ್ಲಿಸುತ್ತಿದ್ದರು. ಈ ಮೈದಾನದಲ್ಲಿ ಟೆಂಟ್ ಹಾಕಿದ್ದು ಹಿರಣ್ಣಯ್ಯ ಮಿತ್ರ ಮಂಡಳಿ.
ಸರಿ ಎಂದು ಹಿರಣ್ಣಯ್ಯ ಮಿತ್ರ ಮಂಡಳಿಯ ಟೆಂಟ್ ಪ್ರವೇಶಿಸಿದೆ. ಅಲ್ಲಿ ಮಾಸ್ಟರ್ ಹಿರಣ್ಣಯ್ಯ ಇರಲಿಲ್ಲ. ಅಲ್ಲಿದ್ದ ಹಿರಿಯರೊಬ್ಬರನ್ನು ಕಂಡು ನಾನು ನಟನಾಗಬೇಕು ಎಂದೆ.
ಅವರು ನನ್ನನ್ನು ಕಾಲಿನಿಂದ ತಲೆಯ ವರೆಗೆ ನೋಡಿ ಮನೆ ಬಿಟ್ಟು ಓಡಿ ಬಂದಿದ್ದೀಯಾ ? ಎಂದು ಪ್ರಶ್ನಿಸಿದರು. ಹೌದು ಎಂದು ತಲೆ ಆಡಿಸಿದೆ.
ಮೊದಲು ಮನೆಗೆ ಹಿಂತಿರುಗಿ ಹೋಗು. ನಿನ್ನ ವಿದ್ಯಾಭ್ಯಾಸವನ್ನು ಮುಗಿಸು. ನಂತರ ನಟನಾಗು ಎಂದು ಬುದ್ದಿ ಮಾತು ಹೇಳಿದರು. ಹಾಗೆ ತಿಂಡಿ ತಿಂದಿದ್ದೀಯಾ ತಾನೆ ಎಂದು ವಿಚಾರಿಸಿಕೊಂಡರು. ಮತ್ತೆ ಅವರು ಶಿಕ್ಷಣದ ಮಹತ್ವವನ್ನು ವಿವರಿಸಿದರು. ಅವರ ಮಾತುಗಳನ್ನು ಕೇಳಿದ ಮೇಲೆ ಯಾಕೋ ನಟನಾಗಬೇಕು ಎಂಬ ನನ್ನ ಆಸೆ ಒಳಗೆ ಸಾಯತೊಡಗಿತು.
ಅವರ ಹೆಸರನ್ನು ಕೇಳದೆ ಹಾಗೆ ತಲೆ ತಗ್ಗಿಸಿ ಅಲ್ಲಿಂದ ಹೊರಟೆ. ಮುಂದೇನು ಎಂಬ ಪ್ರಶ್ನೆ ಕಾಡುತ್ತಿತ್ತು. ಊರಿಗೆ ಹಿಂತಿರುಗಿ ಹೋಗಲು ಏನೋ ಮುಜುಗರ. ಹಾಗೆ ಇಲ್ಲಿ ಬದುಕುವುದು ಹೇಗೆ ಎಂಬುದು ಗೊತ್ತಿಲ್ಲ. ಕೈಯಲ್ಲಿ ಇದ್ದುದು ೫ ರೂಪಾಯಿ,
ಅಲ್ಲಿಂದ ಹೊರಟು ಮತ್ತೆ ಬಳೆ ಪೇಟೆಯ ರಾತ್ರಿ ನೋಡಿದ್ದ ಹೋಟೇಲ್ಲಿನ ಎದುರು ಬಂದು ನಿಂತಿದ್ದೆ. ಇಲ್ಲಿಯೇ ಕೆಲಸ ಕೇಳಬೇಕು ಎಂದುಕೊಂಡು ಮೆನೇಜರ್ ಎದುರು ನಿಂತಿ ಕೇಳಿದ್ದು ಏನಾದರೂ ಕೆಲಸ ಇದೆಯಾ ? ಅಂತ.
ಆತ ನನ್ನ ಮುಖವನ್ನು ಒಮ್ಮೆ ದಿಟ್ಟಿಸಿದ. ಅವನದು ಅದೇ ಹಳೆಯ ಪ್ರಶ್ನೆ: ಮನೆ ಬಿಟ್ಟಿ ಓಡಿ ಬಂದೀದಿಯಾ ?
ನೋಡು ನೀನು ಯಾವುದೋ ಒಳ್ಳೆ ಕುಟುಂಬದಿಂದ ಬಂದಂತೆ ಕಾಣ್ತೀಯಾ ? ಸುಮ್ಮನೆ ಮನೆಗೆ ಹಿಂತಿರುಗಿ ಹೋಗು. ಹೊಟೆಲ್ ಕೆಲಸ ನಿನ್ನಂತವರಿಗಲ್ಲ ಎಂಭ ಬುದ್ದಿ ಮಾತನ್ನು ಆತ ಹೇಳಿದ. ಅವನ ಮಾತನ್ನು ಕೇಳಿಸಿಕೊಂಡು ಅಲ್ಲಿಂದ ಹೊರಟೆ.
ನೇರವಾಗಿ ಶಾಂತಲಾ ಸಿಲ್ಕ್ ಹೌಸ್ ನ ಪಕ್ಕದಲ್ಲಿದ್ದ ಸಣ್ನ ಪಾರ್ಕ್ ಗೆ ಬಂದು ಆಕಾಶ ನೋಡುತ್ತ ಮಲಗಿದೆ. ಸಾಧಾರಣವಾಗಿ ಮೊದಲಿನಿಂದಲೂ ನನಗೆ ನಿದ್ರೆಯ ಸಮಸ್ಯೆಯೇ ಇಲ್ಲ. ಎಲ್ಲಿ ಬೇಕಾದರೂ ಮಲಗಿ ನಿದ್ರೆ ಮಾಡುವವನು ನಾನು. ಅಲ್ಲಿಯೂ ಹಾಗೆ ಆಯ್ತು. ಮಲಗಿದ ತಕ್ಷಣ ಗಾಢ ನಿದ್ರೆಗೆ ಜಾರಿ ಬಿಟ್ಟೆ.
ಕಣ್ಣು ಬಿಟ್ಟು ನೋಡಿದಾಗ ರಾತ್ರಿ ೮ ಗಂಟೆ ದಾಟಿತ್ತು. ಹೊಟ್ಟೆ ಚುರು ಚುರು ಅನ್ನುತ್ತಿತ್ತು. ಏನಾದರೂ ತಿನ್ನಬೇಕು ಎಂದು ಅನ್ನಿಸಿದರೂ ಕೈಯಲ್ಲಿರುವ ಹಣ ಖರ್ಚಾಗುತ್ತದೆ ಎಂಬ ಭಯ.
ಅಲ್ಲಿಂದ ಮತ್ತೆ ರೈಲ್ವೆ ಸ್ಟೇಷನ್ನಿಗೆ ತಿರುಗಿ ಬಂದೆ. ಅಲ್ಲಿರುವ ಚಿತ್ರ ವಿಚಿತ್ರ ಜನರನ್ನು ನೋಡುತ್ತ ಬೇಂಚಿನ ಮೇಲೆ ಹಾಗೆ ಕುಳಿತೆ. ಹಸಿವನ್ನು ಹೋಗಲಾಡಿಸಲು ಹೊಟ್ಟೆ ತುಂಬಾ ನೀರು ಕುಡಿದೆ.
ರೈಲು ಬರುತ್ತಿತ್ತು ಹೋಗುತ್ತಿತ್ತು. ಜನ ಎಲ್ಲಿಗೂ ಹೋಗಿ ಬರುವ ತರಾತುರಿಯಲ್ಲಿದ್ದರು. ಬಂದು ಹೋಗುವವರ ಮುಖಗಳನ್ನು ನೋಡುತ್ತ ಹಾಗೆ ಕುಳಿತಿದ್ದೆ. ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ರೈಲ್ವೆ ನಿಲ್ದಾಣದಲ್ಲಿ ಜನ ಜಂಗುಳಿ ಕಡಿಮೆಯಾಗಿತ್ತು. ರೈಲ್ವೆ ನಿಲ್ದಾಣದ ಮೂಲೆಯೊಂದರಲ್ಲಿ ಹಾಗೆ ಮಲಗಿ ನಿದ್ರೆ ಮಾಡಿದೆ. ಅಲ್ಲಿ ನಿದ್ರೆ ಮಾಡುತ್ತ ಮಲಗಿದ್ದ ಹತ್ತಾರು ಅನಾಥರ ನಡುವೆ ನಾನು ಒಬ್ಬನಾಗಿದ್ದೆ. ಆ ಗದ್ದಲದ ನಡುವೆಯೇ ನನಗೆ ಯಾವಾಗ ನಿದ್ರೆ ಬಂತೋ ತಿಳಿಯಲಿಲ್ಲ.

Friday, January 27, 2012

ನಡೆಯುವುದು ಸುಲಭವಲ್ಲ.......!


ಒಳಗೆ ನಡೆಯುವುದು ಅಷ್ಟು ಸುಲಭವಲ್ಲ,
ಗುಪ್ತ ದಾರಿಯಲಿ ನೂರೆಂಟು ಕೊರಕಲು
ಕೆಳಗೆ ಬಿದ್ದರೆ ಪ್ರಪಾತ. ಆದರೂ ನಡೆಯಲೇ ಬೇಕು.
ಒಳಗಿನ ಗಮ್ಯ ತೆರೆದುಕೊಂಡರೆ, ಹೊರ ದಾರಿ ಸಲೀಸು.

ಒಳಗೆ ನಡೆಯುವುದು ಅಷ್ಟು ಸುಲಭವಲ್ಲ,
ಒಳಗೆ ನಡೆಯಲು ಹೊರಗಿನ ಸೆಳೆತ. ಎಳೆತ
ಅಲ್ಲಲ್ಲಿ ಕತ್ತಲು, ದೀಪ ಹಚ್ಚಲೇ ಬೇಕು, ನಡೆಯಲೇ ಬೇಕು
ಅಲ್ಲಿ ನಡೆಯದಿದ್ದರೆ ಇಲ್ಲಿ ಚಲನೆಯಿಲ್ಲ, ಅಲ್ಲಿ ಕಾಣದಿದ್ದರೆ
. ಮುಸುಕಿದ ಮಂಜು, ಮನಸ್ಸಿನ ನಂಜು. ಹೇಗೆ ಕಂಡೀತು ಹಾದಿ ?

ಎದ್ದು ನಿಂತ ಹಿಮಾಲಯ, ಪಕ್ಕದಲ್ಲೇ ವಿಂದ್ಯ, ಮಧ್ಯ ಭಾರತ
ಹರಿಯುತ್ತಿರುವ ನದಿ, ಕಾಣದಿರುವ ಜಲಪಾತ.
ಉರುಳಿದರೆ ಅತಳ ಸುತಳ ಪಾತಾಳ.
ಒಳ ಕಣಿವೆಯಲಿ, ನೂರೆಂಟೂ ದಾರಿಗಳು.
ಯಾರಿಗೆ ಗೊತ್ತು, ಅವರವರ ದಾರಿಯ ಗಮ್ಮತ್ತು ?
ನಡೆಯುವವನಿಗೆ ಅವನೇ ಮಾಧರಿ.
ದಾರಿಹೋಕನಿಗೆ ನಡೆದಿದ್ದೇ ದಾರಿ.
ಸುಮ್ಮನೆ ನೋಡು ಒಳಗಿನ ಪ್ರಪಾತವನ್ನು. ನಿನ್ನೊಳಗೆ ಬೀಡು ಬಿಟ್ಟ ಗಿರಿ ಕಂದರವನ್ನು
ಹೆದರಬೇಡ ನೀನು ನಡೆಯಲೇ ಬೇಕು, ನೀ ಗುಪ್ತ ಗಾಮಿನಿ.
ಇಲ್ಲಿ ದಾರಿ ಮಾಡಿಟ್ಟವರು ಯಾರೂ ಇಲ್ಲ. ನಿನ್ನ ದಾರಿಯ ಹುಡುಕಾಟ ಸುಲಭವಲ್ಲ.
ಆದರೂ ನಡೆಯಲೇಬೇಕು.
ನಡೆಯುವುದು ಅಷ್ಟು ಸುಲಭವಲ್ಲ.

ನೆನಪಿಡು, ಒಳಗೆ ನಡೆಯದವನು ಹೊರಗೆ ನಡೆಯಲಾರ.
ಒಳಗೆ ಕಾಣದ್ದನ್ನು ಹೊರಗೆ ಪಡೆಯಲಾರ.
ಇಡು ಇಡು ಅಂಬೇಗಾಲು, ಕಾಣಲಿ, ಕಾಣದಿರಲಿ,
ನಡೆದೇಬಿಡು ಒಳಗಿನ ಕಾಣದ ದಾರಿಯಲ್ಲಿ.

ಒಳಗಿನ ಹಾದಿಯಲ್ಲಿ ಅಲ್ಲಲ್ಲಿ ಮೈಲುಗಲ್ಲು.
ಆದರೂ ದೂರ ಬಹುದೂರ, ಗುರಿ ಮಾತ್ರ ಅಗೋಚರ.
ಒಳಗೆ ನಡೆವಾಗ ಹೊರಗೂ ಕಾಣಬಹುದು. ಕಣ್ಣಿದ್ದರೆ,
ಒಳಗೇ ಕಾಣಬಹುದು, ಕಾಣದ ಕನಕನ ಕಿಂಡಿ.

ಒಳಗೆ ನೋಡು ನಿನೇ ಸೃಷ್ಟಿಸಿಕೊಂಡ ಜಗತ್ತನ್ನು.
ಅಲ್ಲಿ ಏನಿದೆ ಏನಿಲ್ಲ ? ತಂದು ತುಂಬಿದ್ದೀಯಾ, ಕಸದ ಕೊಪ್ಪರಿಗೆಯನ್ನು.
ಸ್ವಲ್ಪ ಶುಚಿ ಮಾಡು. ತೆಗೆದಿಡು ಕಲ್ಲು ಬಂಡೆಗಳನ್ನು.
ಈಗ ಎಲ್ಲವೂ ಸಲೀಸು, ಕಂಡೀತೆ ಹೊರಗಿನ ಹಾಸು ?
ಇನ್ಯಾಕೆ ತಡ, ನಡೆದು ಬಿಡು, ಹಾಗೆ ಸುಮ್ಮನೆ.

Friday, January 20, 2012

ಭಿನ್ನ ಧ್ವನಿ, ಪ್ರತಿಭಟನೆ; ಅದರ ಸ್ವರೂಪ ಮತ್ತು ಕೆಲವು ತಾತ್ವಿಕ ಪ್ರಶ್ನೆಗಳು





ಇತ್ತೀಚೆಗೆ ನಡೆಯುತ್ತಿರುವ ಕೆಲವು ಪ್ರತಿಭಟನೆಗಳು, ಚಳವಳಿ, ಪ್ರತಿರೋಧ ಕೆಲವೊಂದು ಮೂಲಭೂತ ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಪ್ರತಿಭಟನೆ ಯಾಕೆ ಬೇಕು ಎಂಬ ಪ್ರಶ್ನೆಯ ಜೊತೆಗೆ ಪ್ರತಿಭಟನೆಯ ಉದ್ದೇಶ, ಅದರ ಸ್ವರೂಪ ಮತ್ತು ಪ್ರತಿಭಟನೆ ಮಾಡುವವರ ಪ್ರಾಮಾಣಿಕತೆ ಕೂಡ ಬಹಳ ಮುಖ್ಯವಾಗಿದೆ. ಪ್ರತಿಭಟನೆ ಮತ್ತು ಅದರ ಚಳವಳಿಯ ಸ್ವರೂಪ, ಯಾವ ರೀತಿಯದ್ದು, ಮತ್ತು ತಮ್ಮ ಭಿನ್ನ ಧ್ವನಿಯನ್ನು ದಾಖಲಿಸಲು ಅದಕ್ಕೆ ಅವರು ಹಿಡಿದ ದಾರಿಯಾವುದು ಎಂಬ ಪ್ರಶ್ನೆಗಳೂ ಸಹ ಹೆಚ್ಚು ಪ್ರಸ್ತುತವಾಗಿವೆ, ಪ್ರತಿರೋಧ ಎನ್ನುವುದು ಒಂದು ಭಿನ್ನ ಧ್ವನಿ. ಈ ಭಿನ್ನ ಧ್ವನಿಯನ್ನು ವ್ಯಕ್ತಪಡಿಸುವುದು, ಪ್ರತಿಭಟನೆ ಮತ್ತು ಚಳವಳಿಯ ಮೂಲಕ ಎಂಬುದು ತುಂಬಾ ಸರಳೀಕೃತವಾದ ಒಂದು ವ್ಯಾಖ್ಯೆ. ಜನತಂತ್ರ ವ್ಯವಸ್ಥೆಯಲ್ಲಿ ಭಿನ್ನ ಧ್ವನಿಗೆ ಮತ್ತು ಅದನ್ನು ವ್ಯಕ್ತಪಡಿಸುವ ಯಾವುದೇ ರೀತಿಯ ವಿಧಾನಗಳಿರಲೀ ಅದಕ್ಕೆ ಅವಕಾಶವಿದೆ ಮತ್ತು ಅವಕಾಶ ಇರಲೇಬೇಕು..
ಪ್ರಾಯಶ; ಕಳೆದ ಒಂದೆರಡು ದಶಕಗಳಿಗೆ ಹೋಲಿಸಿದರೆ ಈಗ ಪ್ರತಿಭಟನೆಯ ಕಾವು ಕಡಿಮೆಯಾಗಿದೆ. ಸಾಮಾನ್ಯ ಜನ ವ್ಯವಸ್ಥೆಗೆ ಹೊಂದಿಕೊಂಡು ಬದುಕುವುದನ್ನು ಕಲಿತಿದ್ದಾರೆ. ವ್ಯವಸ್ಥೆಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಬದುಕುವುದು ಸುಲಭ ಎಂಬ ಜ್ನಾನೋದಯ ಜನರಿಗೆ ಆಗುತ್ತಿದೆ. ಆದರೆ ಜನತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ ಸಮಾಜದ ಅಂತಸತ್ವವನ್ನು ಕಾಪಾಡುತ್ತದೆ. ಪ್ರತಿಭಟನೆ ವ್ಯವಸ್ಥೆಯ ಅರೋಗ್ಯಕ್ಕೆ ಬೇಕಾದ ಒಂದು ದಿವ್ಯ ಔಷಧಿ.
ಇಂದು ಪ್ರತಿಭಟನೆಯೇ ಇಲ್ಲ ಎಂಬುದು ನನ್ನ ವಾದವಲ್ಲ. ಪ್ರತಿ ಭಟನೆ ಮತ್ತು ಹೋರಾಟಗಳಿಗೆ ಬೇಕಾದ ಅಂತಸತ್ವ, ಪ್ರಾಮಾಣಿಕತೆ ಬದ್ಧತೆ ಇಂದು ಮರೆಯಾಗುತ್ತಿರುವುದು ಇದಕ್ಕೆ ಬಹುಮುಖ್ಯವಾದ ಕಾರಣ. ಹೀಗಾಗಿ ಯಾವುದೇ ಹೋರಾಟ ಯಶಸ್ವಿಯಾಗುತ್ತಿಲ್ಲ. ಹೋರಾಟಗಳನ್ನು ಅಪನಂಬಿಕೆಯಿಂದ ನೋದುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕ ಎಂಬತ್ತರ ದಶಕದಲ್ಲಿ ಕಂಡ ಮೂರು ಜನಪರ ಚಳವಳಿಗಳು ತಮ್ಮ ಭಾರಕ್ಕೆ ತಾವು ಕುಸಿದು ಹೋದವು. ಆ ಕಾಲ ಘಟ್ಟದಲ್ಲಿ ಈ ಚಳವಳಿಗಳ ಮಹತ್ವವನ್ನು ಅಲ್ಲಗಳೆಯುವುದು ಸಾಧ್ಯವಿಲ್ಲದಿದ್ದರೂ ಚಳವಳಿಯ ಒಳಗೆ ಇದ್ದ ವೈರುದ್ಧ್ಯಗಳು, ಚಳವಳಿಯ ನಾಯಕತ್ವದ ಅಪ್ರಾಮಾಣಿಕತೆ ಚಳವಳಿಯನ್ನೇ ಬಲಿ ತೆಗೆದುಕೊಂಡವು. ಹಾಗೆ ನೋಡಿದರೆ ಎಂಬತ್ತರ ದಶಕದಲ್ಲಿ ಯಾವ ಕಾರಣಕ್ಕಾಗಿ ಈ ಚಳವಳಿಗಳು ಹುಟ್ಟಿದವೋ ಆ ಕಾರಣಗಳೂ ಇಂದೂ ಇವೆ. ಆದರೆ ಚಳವಳಿಗೆ ನಾಯಕತ್ವವೇ ಇಲ್ಲ. ಇದ್ದ ನಾಯಕತ್ವ ರೋಗಗ್ರಸ್ತವಾಗಿದೆ.
ಕನ್ನಡ ಚಳವಳಿಯನ್ನೇ ತೆಗೆದುಕೊಳ್ಳಿ.. ಈ ಚಳವಳಿ ಕನ್ನಡ ಮತ್ತು ಕನ್ನಡ ಪ್ರಜ್ನೆಯನ್ನು ಮುಂದಿಟ್ಟುಕೊಂಡು ಪ್ರಾರಂಭವಾದ ಚಳವಳಿ. ಮ. ರಾಮಮೂರ್ತಿ ಅವರಂತಹ ಕ್ರಾಂತಿಕಾರಿಗಳು ಈ ಚಳವಳಿಗೆ ಬುನಾದಿಯನ್ನು ಹಾಕಿಕೊಟ್ಟರೂ ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಭಾಷೆ ಮತ್ತು ಸಂಸ್ಕೃತಿ ಬಹುಮುಖ್ಯ ಪ್ರಶ್ನೆಯಾಗಿ ಉಳಿದಿಲ್ಲ ಅಥವಾ ಇದೊಂದು ಬಹುಮುಖ್ಯ ಪ್ರಶ್ನೆ ಎಂದು ಯಾರೂ ಪರಿಗಣಿಸುತ್ತಿಲ್ಲ. ಗೋಕಾಕ ಚಳವಳಿ ಸಂಸ್ಕೃತ ವಿರೋಧಿ ಚಳವಳಿಯಂತೆ ಕಂಡರೂ ಅದರ ಹಿಂದಿನ ಆಶಯ ಮತ್ತು ಅದಕ್ಕೆ ದೊರೆತ ಸಾಮುದಾಯಿಕ ಬೆಂಬಲ ಐತಿಹಾಸಿಕವೇ. ಆದರೆ ಇಂದು ಆ ಚಳವಳಿ ಕೆಲವರು ನವೆಂಬರ್ ತಿಂಗಳಿನಲ್ಲಿ ಚಂದಾ ಎತ್ತುವುದಕ್ಕಾಗಿ ನಡೆಸುವ ಚಳವಳಿಯಾಗಿದೆ. ಇದಕ್ಕೂ ಮೀರಿ ಭಾಷೆ ಮತ್ತು ಸಂಸ್ಕೃತಿಯ ಪ್ರಶ್ನೆಯನ್ನು ವಿಸ್ತ್ರತ ಕ್ಯಾನವಾಸಿನ ಮೇಲೆ ನೋಡಿ ಅದಕ್ಕೊಂದು ಚಳವಳಿಯ ರೂಪ ಕೊಡುವ ಯತ್ನ ನಡದೇ ಇಲ್ಲ. ಭಾಷೆ ಮತ್ತು ಸಂಸ್ಕೃತಿಯ ಪ್ರಶ್ನೆ ಯಾವುದೇ ಒಂದು ಕಾಲ ಘಟ್ಟದಲ್ಲಿ ಪ್ರತ್ಯಕ್ಷವಾಗಿ ನಂತರ ಮರೆಯಾಗುವಂತಹುದಲ್ಲ. ಹಾಗೆ ನೋಡಿದರೆ ಇವತ್ತು ಭಾಷೆ ಮತ್ತು ಸಂಸ್ಕೃತಿಯ ಪ್ರಶ್ನೆ ಹಿಂದೆಂದಿಗಿಂತ ಹೆಚ್ಚು ಪ್ರಸ್ತುತವಾಗಿದೆ. ಭಾಷೆ ಎಂದೂ ಸಾಯುವುದಿಲ್ಲ ಎಂಬುದು ನಿಜವಾದರೂ, ದೇಶೀಯ ಭಾಷೆಗಳು ಎದುರಿಸುತ್ತಿರುವ ಸವಾಲುಗಳು ಭಾಷೆಯ ಪ್ರಶ್ನೆಗೆ ಇನ್ನಷ್ಟು ಪ್ರಸ್ತುತತೆಯನ್ನು ನೀಡಿವೆ.. ಇಂತಹ ಸಂದರ್ಭದಲ್ಲಿ ಹೊಸ ಸವಾಲುಗಳನ್ನು ಎದುರಿಸಲು ಎಲ್ಲ ದೇಶೀಯ ಭಾಷೆಗಳು ಸಿದ್ಧವಾಗಬೇಕಿದೆ.
ಇನ್ನು ಸಂಸ್ಕೃತಿಯ ಪ್ರಶ್ನೆ. ಪ್ರಾಯಶಃ ಸಂಸ್ಕೃತಿಯಷ್ಟು ಅಪವ್ಯಾಖ್ಯೆಗೆ ಒಳಗಾದ ಇನ್ನೊಂದು ಶಬ್ದ ಬೇರೆ ಇರಲಿಕ್ಕಿಲ್ಲ. ಸಂಸ್ಕೃತಿ ಶಬ್ದವನ್ನು ಎಲ್ಲರೂ ತಮಗೆ ಬೇಕಾದ ಹಾಗೆ ಬೇಕಾದ ಅರ್ಥದಲ್ಲಿ ಬಳಸುತ್ತಿದ್ದಾರೆ. ಬಟ್ಟೆಯನ್ನು ಎತ್ತಿ ಎತ್ತಿ ಒಗೆಯುವಂತೆ ಈ ಶಬ್ದವನ್ನು ಎತ್ತಿ ಎತ್ತಿ ಒಗೆಯಲಾಗುತ್ತಿದೆ. ರಾಜಕೀಯ ಪಕ್ಷಗಳಿಗೆ ಸಂಸ್ಕೃತಿ ಎಂಬುದು ತುಂಬಾ ಪ್ರಿಯವಾದ ಶಬ್ದ. ನಮ್ಮ ಸಂಸ್ಕೃತಿ ನಾಶವಾಯಿತು, ನಾಶವಾಗುತ್ತಿದೆ ಎಂದು ಮಾತನಾಡುವುದು ಸುಲಭ. ಭಾವನಾತ್ಮಕವಾಗಿ ಈ ಶಬ್ದ ಜನಪ್ರಿಯತೆಯನ್ನು ದೊರಕಿಸಿಕೊಡುತ್ತದೆ ಎಂಬುದು ನಿಜ.
ಸಂಸ್ಕೃತಿ ಎಂಬುದು ಒಂದು ರೀತಿಯಲ್ಲಿ ಬದುಕುವ ವಿಧಾನ. ನಾವು ಹೇಗೆ ಬದುಕಿದ್ದೇವೆ ಮತ್ತು ಹೇಗೆ ಬದುಕುತ್ತಿದ್ದೇವೆ ಎಂಬುದು ನಿಕಷಕ್ಕೆ ಒಳಗಾದಾದ ಸಂಸ್ಕೃತಿ ಅನಾವರಣಗೊಳ್ಳುತ್ತದೆ. ಬದುಕುವ ವಿಧಾನ ಎಂಬುದು ಕೂಡ ಸರಳವಾದುದಲ್ಲ. ಬದುಕು ಎಂದು ತಕ್ಷಣ ಅಲ್ಲಿ ನಂಬಿಕೆ ಪ್ರತ್ಯಕ್ಷವಾಗುತ್ತದೆ. ಜನಪದ, ಕಾವ್ಯ, ನಾಟಕ, ಯಕ್ಷಗಾನ, ಸಂಗೀತ ಎಲ್ಲವೂ ಪ್ರವೇಶಿಸುತ್ತವೆ. ನಮ್ಮ ನಡವಳಿಕೆ, ಮಾತನಾಡುವ ರೀತಿ, ಅತಿಥಿ ಸತ್ಕಾರದ ಬಗೆ, ಬೇರೆ ಬೇರೆ ರೀತಿಯ ಅಡುಗೆಗಳು, ನಮ್ಮಲ್ಲಿ ಬೇರೆ ಬೇರೆ ಪ್ರದೇಶದಲ್ಲಿರುವ ಅಡುಗೆ ಪದ್ಧತಿಗಳು, ನಾವು ಹುಟ್ಟಿದಾಗ, ಸತ್ತಾಗ ಮಾಡುವ ಬೇರೆ ಬೇರೆ ರೀತಿಯ ಆಚರಣೆಗಳು, ಎಲ್ಲವೂ ನಮ್ಮ ಸಂಸ್ಕೃತಿಯ ಭಾಗಗಳೇ. ಇದೆಲ್ಲ ಒಟ್ಟಾರೆಯಾಗಿ ಗ್ರಹಿಸಿದಾದ ಅದು ಕನ್ನಡ ಸಂಸ್ಕೃತಿಯಾಗುತ್ತದೆ. ಹಾಗಾಗಿ ಕನ್ನಡ ಸಂಸ್ಕೃತಿ ಎಂಬುದು ಕೇವಲ ಒಂದು ಶಬ್ದವಲ್ಲ. ಅದು ಕನ್ನಡಿಗರ ಒಟ್ಟಾರೆ ಬದುಕುವ ವಿಧಾನ. ಬದುಕಿ ಬಂದ ರೀತಿ. ಈ ಬದುಕುವ ವಿಧಾನದಲ್ಲಿ ಯಾವುದು ನಮಗೆ ಬೇಕು ಮತ್ತು ಯಾವುದು ನಮಗೆ ಬೇಡ ಎಂಬುದೇ ಈಗ ನಮ್ಮ ಮುಂದಿರುವ ಬಹುದೊಡ್ದ ಸವಾಲು. ಅದನ್ನೇ ನಾನು ಸಂಸ್ಕೃತಿಯ ಪ್ರಶ್ನೆಯನ್ನಾಗಿ ಪರಿಗಣಿಸಿದ್ದೇನೆ. ಇದನ್ನು ಸಾಂಸ್ಕೃತಿಕ ಸವಾಲು ಎಂದೂ ಹೇಳಬಹುದು.
ಈಗ ನಾನು ಒಂದು ಪ್ರಮುಖ ವಿಚಾರವನ್ನು ಪ್ರಸ್ತಾಪಿಸಿ ಈ ಸಂಸ್ಕೃತಿಯ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಲು ಯತ್ನ ನಡೆಸುತ್ತೇನೆ.
ಪ್ರಜಾವಾಣಿಯ ಸಹಸಂಪಾದಕರಾದ ದಿನೇಶ್ ಅಮೀನಮಟ್ಟು ಸ್ವಾಮಿ ವಿವೇಕಾನಂದರ ಜನ್ಮ ದಿನದಂದು ತಮ್ಮ ಅಂಕಣದಲ್ಲಿ ಬರೆದ ಲೇಖನ ಹಲವರ ವಿರೋಧಕ್ಕೆ ಕಾರಣವಾಯಿತು. ಅವರು ತಮ್ಮ ಲೇಖನದಲ್ಲಿ ವಿವೇಕಾನಂದರ ಬದುಕಿನ ಕೆಲವು ಅಂಶಗಳನ್ನು ಪ್ರಸ್ತಾಪಿಸಿದ್ದರು. ಅವರು ಪ್ರಸ್ತಾಪಿಸಿರುವ ವಿಚಾರಗಳು ಸಾಮಾನ್ಯ ಜನರಿಗೆ ಗೊತ್ತಿಲ್ಲದ ವಿಚಾರಗಳಾಗಿದ್ದವು. ಹಾಗೇ ವಿವೇಕಾನಂದ ಎಂಬ ಹೆಸರು ನಮ್ಮ ಚಿತ್ತಭಿತ್ತಿಯಲ್ಲಿ ಮೂಡುವ ರೀತಿಗೆ ಬೇರೆಯದಾದ ಚಿತ್ರವೊಂದನ್ನು ಅದು ರೂಪಿಸುವಂತೆ ಇತ್ತು. ಇದು ವಿವೇಕಾನಂದರ ಬಗ್ಗೆ ಪ್ರಚಲಿತವಿರುವ ನಂಬಿಕೆಗೆ ವ್ಯತಿರಿಕ್ತವಾದುದು. ಇದೊಂದು ಭಿನ್ನ ಧ್ವನಿ.
ಇದನ್ನು ನಾನು ಮೂರ್ತಿಭಂಜನೆ ಎಂದು ಕರೆಯುತ್ತೇನೆ. ನಾವು ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಅರ್ಥ ಮಾಡಿಕೊಳ್ಳಲು ಆಗಾಗ ಮೂರ್ತಿ ಭಂಜನೆ ನಡೆಯಲೇಬೇಕು. ಅಂದರೆ ನಮ್ಮ ಈಗಿನ ನಂಬಿಕೆಗಳು ಸಂಪೂರ್ಣ ಸತ್ಯವಲ್ಲ ಎಂದು ಅರಿತುಕೊಳ್ಳುವ ಮೂಲಕ ಸತ್ಯವನ್ನು ಅರ್ಥ ಮಾಡಿಕೊಳ್ಳುವ ಯತ್ನ ಇದು. ಆದರೆ ಇಲ್ಲಿರುವ ಸಮಸ್ಯೆ ಎಂದರೆ ಸಾಮಾನ್ಯರು ಒಂದು ರೀತಿಯಲ್ಲಿ ಮೂರ್ತಿ ಪೂಜಕರು. ಅವರು ತಮ್ಮ ತಮ್ಮ ಮನಸ್ಸುಗಳಲ್ಲಿ ಮೂರ್ತಿಯೊಂದರ ಪ್ರತಿಷ್ಠಾಪನೆ ಮಾಡಿಕೊಂಡಿರುತ್ತಾರೆ. ಅದಕ್ಕಿಂತ ಭಿನ್ನವಾದ ಮೂರ್ತಿಯ ಕಲ್ಪನೆ ಕೂಡ ಅವರಿಗೆ ಸಾಧ್ಯವಿಲ್ಲ. ಹೀಗಾಗಿ ವಿವೇಕಾನಂದರು ಹಲವಾರು ರೋಗಗಳಿಂದ ಬಳಲುತ್ತಿದ್ದರು ಎಂಬುದು ಮೂರ್ತಿ ಪ್ರತಿಷ್ಠಾಪಕರಿಗೆ ಸುಲಭವಾಗಿ ಒಪ್ಪಿಕೊಳ್ಳುವ ವಿಚಾರವಲ್ಲ. ಅವರಿಗೆ ಸ್ವಾಮಿ ವಿವೇಕಾನಂದ, ಸದೃಡ ಕಾಯದ ಆರೋಗ್ಯಪೂರ್ಣ ವ್ಯಕ್ತಿ. ಅವರು ಸೂರ್ಯನ ಚಲನೆಯನ್ನು ನಿಲ್ಲಿಸಬಲ್ಲವರಾಗಿದ್ದರು. ಅವರು ತಮ್ಮ ವೀರ್ಯವನ್ನು ಬ್ರಹ್ಮರಂದ್ರದ ವರೆಗೆ ಮೇಲಕ್ಕೆ ಚಲಿಸುವಂತೆ ಮಾಡಬಲ್ಲವರಾಗಿದ್ದರು.
. ವಿವೇಕಾನಂದರು ಎಂದ ತಕ್ಷಣ ಬರುವ ಕಲ್ಪನೆ ಎಂದರೆ ಅವರು ವೀರ ಸನ್ಯಾಸಿ. ಅವರು ಕಟ್ಟಾ ಬ್ರಹ್ಮಚಾರಿಯಾಗಿದ್ದರು. ಯುವಕರನ್ನು ಎದ್ದೇಳಿಸಲು ಅವರು ನೀಡಿದ ಕರೆ ನಮ್ಮ ಕಿವಿಗಳಲ್ಲಿ ಪ್ರತಿಧ್ವನಿಸುವಂತೆ ನಮ್ಮೆಲ್ಲರ ಮನಸ್ಸುಗಳನ್ನು ಸಿದ್ಧಪಡಿಸಲಾಗಿದೆ. ಮನಸ್ಸು ಈ ರೀತಿ ಸಿದ್ಧಗೊಂಡಿರುವಾಗ ಇದು ಹೀಗಲ್ಲ ಎಂಬುದು ಆಘಾತವನ್ನು ಉಂಟು ಮಾಡುತ್ತದೆ. ಜೊತೆಗೆ ಹೊಸದಲ್ಲಿ ಒಪ್ಪಿಕೊಳ್ಳದೇ ಪ್ರತಿಭಟಿಸುತ್ತದೆ. ಆದ್ದರಿಂದ ಅವರು ವೈಯಕ್ತಿಕವಾಗಿ ರೋಗಗ್ರಸ್ತರಾಗಿದ್ದರು ಮತ್ತು ಮಾಂಸಾಹಾರ ಪ್ರಿಯರಾಗಿದ್ದರು ಎಂಬುದು ತಮ್ಮ ತಮ್ಮ ಮನಸ್ಸುಗಳಲ್ಲಿ ಪ್ರತಿಮೆಯೊಂದನ್ನು ಪ್ರತಿಷ್ಠಾಪನೆ ಮಾಡಿಕೊಂಡವರಿಗೆ ಸುಲಭ ಗ್ರಾಹ್ಯವಲ್ಲ.
ಇದಕ್ಕೆ ಬಹು ಮುಖ್ಯವಾದ ಕಾರಣ ಇತಿಹಾಸ ಮತ್ತು ಪುರಾಣಗಳನ್ನು ಗ್ರಹಿಸುವಲ್ಲಿ ಅಗುತ್ತಿರುವ ತಪ್ಪುಗಳು. ದಿನೇಶ್ ಅಮೀನಮಟ್ಟು ಅವರ ವಿರುದ್ಧ ಹೋರಾಟ ಪ್ರತಿಭಟನೆ ಮಾಡಲು ಮುಂದಾಗಿರುವುದು ಅಖಿಲ ಭಾರತ ವಿಧ್ಯಾರ್ಥಿ ಪರಿಷತ್ತು. ವಿವೇಕಾನಂದರೇ ಅವರಿಗೆ ಆದರ್ಶ. ಈ ಆದರ್ಶ ಮತ್ತು ಈ ಸಂಘಟನೆ ವಿವೇಕಾನಂದರನ್ನು ಪ್ರತಿಬಿಂಬಿಸುವ ರೀತಿಗೆ ಈ ಮೂರ್ತಿ ಭಂಜನೆಯನ್ನು ತಡೆದುಕೊಳ್ಳುವ ಶಕ್ತಿಯಿಲ್ಲ. ಅಮೀನಮಟ್ಟು ಅವರು ಪ್ರಸ್ತಾಪಿಸಿರುವ ವಿಚಾರಗಳು ಇಂತಹ ಮೂರ್ತಿ ಪೂಜಕರ ಬುಡವನ್ನು ಅಲಗಾಡಿಸಿಬಿಡುತ್ತದೆ. ಅವರ ಆದರ್ಶ ಕೊಚ್ಚಿ ಹೋಗುತ್ತದೆ. ಬುಡ ಅಲಗುತ್ತದೆ. ಹೀಗಾಗಿ ಅವರಿಗೆ ಉಳಿದ ದಾರಿ ಎಂದರೆ ಪ್ರತಿಭಟನೆ ಹೋರಾಟ ಮಾತ್ರ. ಯಾಕೆಂದರೆ ಸತ್ಯವನ್ನು ಎದುರಿಸುವುದು ಮತ್ತು ಸತ್ಯವನ್ನು ಸಂಶೋಧಿಸುವಾಗ ನಮ್ಮ ನಮ್ಮ ಮನಸ್ಸುಗಳಲ್ಲಿ ನಾವು ಪ್ರತಿಷ್ಠಾಪಿಸಿಕೊಂಡ ಮೂರ್ತಿಯನ್ನು ಒಡೆಯಲೇ ಬೇಕಾಗುತ್ತದೆ. ಹಳೆಯ ಮೂರ್ತಿಯನ್ನು ಒಡೆದಾಗ ಮಾತ್ರ ಹೊಸ ಮೂರ್ತಿಯ ಪ್ರತಿಷ್ಠಾಪನೆ ಸಾಧ್ಯ,
ಆದರೆ ಇದು ಅಷ್ಟು ಸುಲಭವಾದುದಲ್ಲ. ನಾವು ನಮ್ಮ ಅಪ್ಪ ಅಜ್ಜ ಮುತ್ತಜ್ಜರಿಂದ ನಾವು ಓದಿದ ಪುಸ್ತಕಗಳಿಂದ ರೂಪಗೊಂಡ ಪ್ರತಿಮೆಯನ್ನು ಅಷ್ಟು ಬೇಗ ಅಳಿಸಿ ಹಾಕುವುದು ಸಾಧ್ಯವಿಲ್ಲ. ಯಾರು ಏನೇ ಹೇಳಿದರೂ ವಿವೇಕಾನಂದರು ರೋಗಪೀಡಿತರಾಗಿದ್ದರೂ ಎಂಬುದು ಸತ್ಯವಾಗಿದ್ದರೂ ಅದು ಸತ್ಯ ಎಂದು ತಿಳಿದಿದ್ದರೂ ಅದನ್ನು ಒಪ್ಪಿಕೊಳ್ಳುವುದು ಕಷ್ಟವೇ. ಆಗ ನಾವು ಯಾವುದನ್ನೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲವೋ ಅದನ್ನು ಮೊದಲ ರೂಪದಲ್ಲಿ ಒಳಿಸಿಕೊಳ್ಳಲು ಯತ್ನ ನಡೆಸುತ್ತೇವೆ.
ಇಲ್ಲಿ ನಮ್ಮೆಲ್ಲರ ಸಂಪ್ರದಾಯವಾದಿ ಮನಸ್ಸು ಕೆಲಸ ಮಾಡಲು ಪ್ರಾರಂಭಿಸುತ್ತದೆ. ಸಂಪ್ರದಾಯವಾದಿ ಮನಸ್ಸು ಸಂಸ್ಕೃತಿಯ ಪ್ರಶ್ನೆಯನ್ನು ಮುಂದಿಡುತ್ತಲೇ ಈಗಿರುವ ನಂಬಿಕೆಯನ್ನೇ ಮುಂದುವರಿಸಲು ಯತ್ನ ನಡೆಸುತ್ತದೆ.
ಇದರಿಂದ ನಮಗೆ ಅರ್ಥವಾಗುವ ಅಂಶ ಎಂದರೆ ಸಂಸ್ಕೃತಿ ಮತ್ತು ನಂಬಿಕೆಗಳು ಆಯಾ ಕಾಲ ಘಟ್ಟದಲ್ಲಿ ವಾಸ್ತವದ ಜೊತೆ ಮುಖಾಮುಖಿಯಾಗಬೇಕಾಗುತ್ತದೆ. ಹೀಗೆ ಮುಖಾಮುಖಿಯಾಗುತ್ತ ಹೊಸ ರೂಪ ಮತ್ತು ಪ್ರತಿಮೆಗಳು ಸೃಷ್ಟಿಯಾಗುತ್ತವೆ. ಹೀಗೆ ಮಾಡುವಾಗ ಮೂರ್ತಿ ಭಂಜನೆ ಒಮ್ಮೆಲೆ ನಡೆಯುವ ಕ್ರಿಯೆಯಲ್ಲ ಎಂಬ ಅರಿವು ಬಹುಮುಖ್ಯ. ಅದಿಲ್ಲದಿದ್ದರೆ ಒಮ್ಮೆಲೆ ಮೂರ್ತಿ ಭಂಜನೆ ಮಾಡಲು ಹೋಗಿ ನಾವು ಸಂಕಷ್ಟಕ್ಕೆ ಸಿಲುಕಿಕೊಂಡು ಬಿಡುತ್ತೇವೆ. ಮೂರ್ತಿ ಪೂಜಕರು ಮತ್ತು ಮೂರ್ತಿ ಭಂಜಕರು ಸಮಾಜದ ಭಾಗವೇ ಆಗಿರುವುದರಿಂದ ಇವರಿಬ್ಬರ ನಡುವಿನ ಸಂಘರ್ಷ ಒಮ್ಮೆಲೆ ನಡೆದು ಮುಗಿದು ಬಿಡುವಂತಹುದಲ್ಲ. ಈ ಕಾರಣಗಳಿಂದ ಮೂರ್ತಿ ಪೂಜಕರಿಗಿಂತ ಮೂರ್ತಿ ಭಂಜಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.
ಕನ್ನಡ ಸಂಸ್ಕೃತಿಯ ಪ್ರಶ್ನೆಯನ್ನು ಎತ್ತಿಕೊಂಡು ನಾನು ಈ ಮೇಲಿನ ಮಾತುಗಳನ್ನು ಹೇಳಿದ್ದೇನೆ. ಜೊತೆಗೆ ಸಂಸ್ಕೃತಿ ಮತ್ತು ನಂಬಿಕೆಯ ಮೂಲಕವೇ ಸೃಷ್ಟಿಯಾದ ನಮ್ಮ ಕನ್ನಡದ ಮನಸ್ಸು ಇದೆಯಲ್ಲ ಅದು ಯಾವ ರೀತಿಯದು ? ಕನ್ನಡ ಮನಸ್ಸು ಎಂಬುದು ರೂಪಗೊಳ್ಳುವ ಬಗೆಯಾವುದು ? ಈ ಕುರಿತು ನಾವು ಆಲೋಚಿಸಬೇಕಾಗಿದೆ. ಜೊತೆಗೆ ಪ್ರತಿಭಟನೆ ಮತ್ತು ವಿರೋಧಕ್ಕೆ ತಾತ್ವಿಕತೆಯ ಮೆರಗು ಇರಬೇಕು. ಅದರ ಉದ್ದೇಶ ಸಂಸ್ಕೃತಿಯ ಜೊತೆಗೆ ತಳಕು ಹಾಕಿಕೊಂಡಿರಬೇಕು. ಆದರೆ ಇಂದಿನ ಬಹುತೇಕ ಚಳವಳಿ ಮತ್ತು ಪ್ರತಿಭಟನೆಗಳು ಅರ್ಥವಿಲ್ಲದ ಕೂಗಾಟವಾಗಿದೆ. ಜೊತೆಗೆ ಈಗಿನ ಹೋರಾಟಗಳಿಗೆ ತಾತ್ವಿಕತೆಯ ಮೆರಗೂ ಇಲ್ಲ.

ಶಶಿಧರ‍್ ಭಟ್

Tuesday, January 17, 2012

ಪತ್ರಿಕೋದ್ಯಮ ವ್ಯಾಪಾರವಲ್ಲ










ಅಮ್ಮನ ಗರ್ಭದಲ್ಲಿ ಹಾಯಾಗಿದ್ದವನು ಹೊರಕ್ಕೆ ಬಂದ ಮೇಲೆ ಮೊದಲು ನೋಡಿದ್ದು ಅಮ್ಮನನ್ನೇ ಎಂಬುದರಲ್ಲಿ ನನಗೆ ಅನುಮಾನವಿಲ್ಲ. ಅಮ್ಮನನ್ನು ನೋಡಿದ ಮೇಲೆ, ಅಪ್ಪ, ಮತ್ತು ಮನೆಯಲ್ಲಿದ್ದ ಇತರರು ನನ್ನನ್ನು ನೋಡಿರಬೇಕು. ಹಾಗೂ ನಾನು ಅವರನ್ನು ನೋಡಿರಬೇಕು. ಆದರೆ ಅಮ್ಮನನ್ನು ನೋಡಿದ ಮೇಲೆ ನಾನು ನೋಡಿದ್ದು ಪತ್ರಿಕೆಗಳು ಮತ್ತು ಸಾಹಿತ್ಯ ಪುಸ್ತಕಗಳನ್ನು ಎಂಬುದು ಮಾತ್ರ ಸತ್ಯ. ಅಪ್ಪನಿಗಿಂತ ನನ್ನನ್ನು ಹೆಚ್ಚು ಕಾಡಿದ್ದು, ಈಗಲೂ ಕಾಡುತ್ತಿರುವುದು ಪುಸ್ತಕಗಳು ಮತ್ತು ಪತ್ರಿಕೆಗಳು. ಅಪ್ಪನ ಕೈಚೀಲ ಒಂದು ಪುಸ್ತಕ ಭಂಡಾರ. ಅತ ಯಾವುದೇ ಹೊಸ ಪುಸ್ತಕ ಬರಲಿ ಅದನ್ನು ತರುತ್ತಿದ್ದ. ಅವನ ಹೆಗಲ ಮೇಲೆ ವಿರಾಜಮಾನವಾಗಿರುತ್ತಿದ್ದ ಉದ್ದನೆಯ ಕೈಚೀಲದಲ್ಲಿ ಇರುತ್ತಿದ್ದುದು ಇಂಗ್ಲೀಷ್ ಮತ್ತು ಕನ್ನಡ ಪತ್ರಿಕೆಗಳು ಮತ್ತು ಹೊಸ ಪುಸ್ತಕಗಳು. ಆತ ಅವುಗಳನ್ನು ತಾನು ಓದಿ ಮುಗಿಸುವ ಮೊದಲು ಬೇರೆಯವರಿಗೆ ಮುಟ್ಟುವುದಕ್ಕೂ ಕೊಡುತ್ತಿರಲಿಲ್ಲ. ತಾನು ಓದಿದ ಮೇಲೆ ಅವುಗಳನ್ನು ಓದಲು ನನಗೆ ನೀಡುತ್ತಿದ್ದ.

ಬೇರೆ ಯಾವುದೇ ಆಸ್ತಿಯನ್ನು ಮಾಡದ ಅಪ್ಪ ಕನಿಷ್ಠ ೧೦ ಸಾವಿರ ಪುಸ್ತಕಗಳನ್ನು ತಂದು ಮನೆಯಲ್ಲಿ ತುಂಬಿದ್ದ/ ಆಗ ನಮ್ಮ ಮನೆಗೆ ದಿ. ಹಿಂದೂ, ಪ್ರಜಾವಾಣಿ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳು ಬರುತ್ತಿದ್ದವು. ಹೀಗಾಗಿ ಅಂದಿನಿಂದ ಇಂದಿನ ವರೆಗೆ ನಾನು ಬಿಡದ ಸಂಗಾತಿಗಳೆಂದರೆ ಪತ್ರಿಕೆಗಳು ಮತ್ತು ಪುಸ್ತಕಗಳು.

ನಾನು ಈ ಕಾಲಘಟ್ಟದಲ್ಲಿ ನಿಂತು ಪತ್ರಿಕೋದ್ಯಮದ ಬಗ್ಗೆ ಯೋಚಿಸುವಾಗ ನನಗೆ ಸದಾ ಸಂಗಾತಿಯಾಗಿರುವ ಪತ್ರಿಕೆಗಳು ಮತು ಪುಸ್ತಕಗಳು ನೆನಪಾಗುತ್ತದೆ. ಹಾಗೆ ಪತ್ರಿಕೋದ್ಯಮದ ಉದ್ದೇಶ, ಪರಿಣಾಮ, ಮತ್ತು ಸಾಧ್ಯಾಸಾಧ್ಯತೆಗಳ ಬಗ್ಗೆ ಯೋಚಿಸುವಾಗ ಈ ಅಕ್ಷರ ಪ್ರಪಂಚ ನನಗೆ ನೀಡಿದ್ದೇನು ಎಂಬುದನ್ನು ನಾನು ಯೋಚಿಸುತ್ತೇನೆ. ಒಬ್ಬ ಮನುಷ್ಯನನ್ನು ಮನುಷ್ಯನನ್ನಾಗಿ ರೂಪಿಸುವಲ್ಲಿ ಅಕ್ಷರ ಪ್ರಪಂಚದ ಕೊಡುಗೆ ತುಂಬಾ ದೊಡ್ದದು ಎಂಬುದು ಅರಿವಾಗಿ ನನ್ನಲ್ಲಿ ಕೃತಜ್ನತಾ ಭಾವ ಮೂಡುತ್ತದೆ.

ನಾನು ಹಿಂತಿರುಗಿ ನಾನು ನಡೆದು ಬಂದ ದಾರಿಯನ್ನು ನೋಡುವಾಗ ನನಗೆ ತಕ್ಷಣ ಅನ್ನಿಸುವುದು ಈ ಪತ್ರಿಕೋದ್ಯಮವೇ ನನಗೆ ಬಂದ ಪಿತ್ರಾರ್ಜಿತ ಆಸ್ತಿ. ನಾನು ಶಾಲೆಗೆ ಹೋಗುವುದಕ್ಕೆ ಮೊದಲು ನನ್ನ ಅಪ್ಪ ಜಿಲ್ಲಾ ಪತ್ರಿಕೆಗಳಿಗೆ ರಾಜಕೀಯ ವಿಶ್ಲೇಷಣೆ ಮತ್ತು ಲೇಖನಗಳನ್ನು ಬರೆಯುತ್ತಿದ್ದ. ಅವನು ಬರೆದ್ ಲೇಖನವೊಂದರ ಶೀರ್ಷಿಕೆ ನನಗೆ ಈಗಲೂ ನೆನಪಿದೆ. ಅದು ಕೆಸರ ಮೇಲೆ ಕಲ್ಲು ತೂರುವುದಿಲ್ಲ ಎಂದಾಗಿತ್ತು. ಅಪ್ಪ ನನಗೆ ಆಗ ಕಲಿಸಿದ್ದೆಂದರೆ ಪತ್ರಿಕೋದ್ಯಮ ಎಂದರೆ ಸತ್ಯದ ಅನ್ವೇಷಣೆ ಎಂಬುದು. ನಾನು ಪತ್ರಿಕಾ ವೃತ್ತಿಯನ್ನು ಒಪ್ಪಿಕೊಂಡ ಮೇಲೆ, ಅಪ್ಪಿಕೊಂಡ ಮೇಲೆ ಅಪ್ಪನ ಈ ಮಾತನ್ನು ಎಂದೂ ಮರೆಯಲಿಲ್ಲ. ಈಗಲೂ ಅಪ್ಪ ಹೇಳಿದ ಸತ್ಯದ ಅನ್ವೇಷಣೆಯೇ ನನ್ನ ಕೆಲಸ ಎಂದು ನಂಬಿದ್ದೇನೆ.

ಪತ್ರಿಕೋದ್ಯಮ ಉಳಿದ ಉದ್ಯಮಗಳಂತೆ ಅಲ್ಲ. ಒಂದು ಅರ್ಥದಲ್ಲಿ ಇದು ಉದ್ಯಮವಾದರೂ, ಇದು ಉದ್ಯಮ ಅಲ್ಲ. ಹೀಗಾಗಿ ಇದು ಪತ್ರಿಕಾವೃತಿ ಮಾತ್ರ. ಅಥವಾ ಇದೊಂದು ಬದ್ಧತೆ ಅಥವ ಸೇವೆ ಎಂದು ಪರಿಗಣಿಸಬೇಕು ಎಂಬುದು ನನ್ನ ಪ್ರಬಲ ನಂಬಿಕೆ. ಯಾಕೆಂದರೆ ಉದ್ಯಮ ಎನ್ನುವುದು ವ್ಯಾಪಾರ ಒಹಿವಾಟು ಅಗಿರುವುದರಿಂದ ಅದರ ಮೂಲ ಉದ್ದೇಶ ಲಾಭವನ್ನು ಗಳಿಸುವುದೇ ಆಗಿದೆ. ಉದ್ಯಮದಲ್ಲಿ ಮನಸ್ಸಿನ ಕೆಲಸ ತುಂಬಾ ಕಡಿಮೆ. ಅದು ಮನಸ್ಸಿನ ಜೊತೆ ಹಾಗೂ ಸಮಾಜದ ಜೊತೆ ನಡೆಸುವ ಸಂವಾದವಲ್ಲ. ಹೇಗೆ ಬದುಕು ವ್ಯಾಪಾರವಲ್ಲವೋ ಪತ್ರಿಕೋದ್ಯಮ ಕೂಡ ವ್ಯಾಪಾರವಲ್ಲ.

ಉದ್ಯಮದಲ್ಲಿ ಲಾಭವೇ ಪರಮ. ಪತ್ರಿಕೋದ್ಯಮದಲ್ಲಿ ಸಾಮಾಜಿಕ ಬದ್ಧತೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವ ಎಲ್ಲದಕ್ಕಿಂತ ಮುಖ್ಯ. ಇಲ್ಲಿ ಲಾಭಕ್ಕಾಗಿ ಏನನ್ನಾದರೂ ಮಾಡುವಂತಿಲ್ಲ. ಜೊತೆಗೆ ಪತ್ರಿಕೆಗಳು ವರ್ತಮಾನದ ಜೊತೆ ಸದಾ ಸಂವಹನ ನಡೆಸುತ್ತವೆ. ಭೂತಕಾಲವನ್ನು ನೆನಪು ಮಾಡಿಕೊಡುತ್ತ ವರ್ತಮಾನವನ್ನು ವಿಶ್ಲೇಷಿಸುತ್ತ ಭವಿಷ್ಯದ ಭಾಷ್ಯವನ್ನು ಬರೆಯುವುದು ಪತ್ರಿಕೋದ್ಯಮ. ಇದು ಕಾಲದ ಜೊತೆಗಿನ ಜಂಗಿ ಕುಸ್ತಿ.

ನಾನು ಈ ಮೊದಲು ಹೇಳಿದಂತೆ ಪತ್ರಿಕೋದ್ಯಮದ ಸಂಪೂರ್ಣ ವ್ಯವಹಾರ ಇರುವುದು ಮನಸ್ಸುಗಳ ಜೊತೆ. ಹೀಗಾಗಿ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಬೇಕಾದ ಪತ್ರಿಕೋದ್ಯಮ ಮನಸ್ಸುಗಳನ್ನು ಒಡೆಯುವ ಕೆಲಸವನ್ನು ಮಾಡಬಹುದು. ಎಲ್ಲರ ಮನಸ್ಸುಗಳ ಒಟ್ಟಾರೆ ಮೊತ್ತವೇ ಪತ್ರಿಕೋದ್ಯಮವಗಿರುವುದರಿಂದ, ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಬೇಕಾದ ಪತ್ರಿಕೋದ್ಯಮದ ಹೊಣೆಗಾರಿಕೆ ತುಂಬಾ ಮುಖ್ಯವಾಗುತ್ತದೆ. ಉದಾಹರಣೆಗೆ ಸ್ವಾತಂತ್ರ್ಯ ಚಳವಳಿ ಮತ್ತು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪತ್ರಿಕೆಗಳನ್ನು ಜನತಾಂತ್ರಿಕ ಮೌಲ್ಯಗಳ ಬಗ್ಗೆ ಮಾತನಾಡುತ್ತ ರಾಜಸತ್ತೆ ಮತ್ತು ಸರ್ವಾಧಿಕಾರವನ್ನು ವಿರೋಧಿಸುತ್ತ ಬಂದವು. ಹೀಗಾಗಿ ನಮ್ಮ ಒಟ್ಟಾರೆ ಸಮಾಜದ ಮನಸ್ಸು ಎಂಬುದಿದ್ದರೆ ಅದು ಸ್ವಾತಂತ್ರ್ಯದ ಪರವಾದ, ಸರ್ವಾಧಿಕಾರವ ವಿರೋಧಿಯಾದ ಮನಸ್ಥಿತಿಯಾಗಿ ರೂಪಗೊಂಡಿತು. ಇತ್ತೀಚೆಹೆ ಅಣ್ಣಾ ಹಜಾರೆಯ ಭ್ರಷ್ಟಾಚಾರ ವಿರೋಧಿ ಚಳವಳಿ ಯುವ ಜನತೆಯನ್ನು ಮುಟ್ಟಲು ಕಾರಣ ನಮ್ಮ ಮಾಧ್ಯಮಗಳೇ. ಈ ಕಾರಣದಿಂದಲೇ ಇಂದಿಗೂ ಜನ ಪತ್ರಿಕೆಗಳಲ್ಲಿ ಬರುವುದು ಪರಮ ಸತ್ಯ ಎಂದು ನಂಬಿಕೊಂಡಿದ್ದಾರೆ. ಆದ್ದರಿಂದ ಜನರ ನಂಬಿಕೆಯ ಮೇಲೆ ನಿಂತಿರುವ ಪತ್ರಿಕೋದ್ಯಮ ಈ ನಂಬಿಕೆಯನ್ನು ಉಳಿಸಿಕೊಳ್ಳುವದಕ್ಕಾಗಿಯಾದರೂ ಸತ್ಯದ ಹುಡುಕಾಟವನ್ನು ನಡೆಸಲೇ ಬೇಕಾಗಿದೆ.

ಮಾಧ್ಯಮ ಜಗತ್ತಿನ ಮಹಾ ಅದ್ಭುತ ಎಂದರೆ ಅದು ಸಮಾಜದ ಭಾಗವಾಗಿದ್ದುಕೊಂಡೇ ಸಮಾಜದಿಂದ ಹೊರಕ್ಕೆ ನಿಂತು ನೋಡುವ ಶಕ್ತಿಯನ್ನು ಹೊಂದಿರುತ್ತದೆ. ಇಡೂ ಜನ ಸಮುದಾಯದ ಪ್ರಜ್ನೆಯಂತೆ ಅದು ಕೆಲಸ ಮಾಡುತ್ತಿರುತ್ತದೆ. ಅಂದರೆ ಒಂದೇ ಕಾಲದಲ್ಲಿ ವ್ಯವಸ್ಥೆಯ ಭಾಗವಾಗಿದ್ದರೂ ಅದರಿಂದ ಹೊರಕ್ಕೆ ನಿಲ್ಲುವ ಧ್ಯಾನಸ್ಥ ಸ್ಥಿತಿ ಪತ್ರಿಕೋದ್ಯಮದ್ದು. ಇದೇ ಪತ್ರಿಕೋದ್ಯಮಕ್ಕೆ ವಿಶಿಷ್ಠ ಶಕ್ತಿಯನ್ನು ಮಾತ್ರವಲ್ಲ, ಜನ ಸಮುದಾಯದ ಪ್ರಾತಿನಿಧಿಕ ಸ್ಥಾನವನ್ನು ನೀಡಿದೆ ಎಂಬುದು ನನ್ನ ನಂಬಿಕೆ. ಹೀಗಾಗಿ ಜನತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕಿಂತ ಭಿನ್ನವಾದ ಮತ್ತು ಗುರುತರವಾದ ಹೊಣೆಗಾರಿಕೆ ಇರುವುದು ಮಾಧ್ಯಮ ರಂಗದ ಮೇಲೆ.

ನಾನು ಹೇಳಿದ ಈ ಮಾತುಗಳಲ್ಲಿ ಹೊಸದೇನೂ ಇಲ್ಲ. ಇವೆಲ್ಲ ಇತಿಹಾಸದ ಪರೀಕ್ಷೆಗೆ ಒಳಗಾಗಿ ಸಾಬೀತಾದ ಅಂಶಗಳೇ ಆಗಿವೆ. ಆದರೆ ಈ ಪೂರ್ವ ಪೀಠಿಕೆಯ ನಂತರವೇ ನಾನು ಇಂದಿನ ಪತ್ರಿಕೋದ್ಯಮವನ್ನು ವಿಶ್ಲೇಷಿಸಬೇಕಾಗಿದೆ. ಈ ನೆನಪುಗಳ ನಂತರವೇ ನಾವು ಮುಂದುವರಿಯಬೇಕಾಗಿದೆ.

ಇಂದು ಮಾಧ್ಯಮ ಜಗತ್ತು ಬದಲಾಗಿದೆ. ಪತ್ರಿಕೋದ್ಯಮ ನಿಜವಾದ ಅರ್ಥದಲ್ಲಿ ಉದ್ಯಮವಾಗಿದೆ. ಉದ್ಯಮಪತಿಗಳು, ಈ ರಂಗವನ್ನು ಆಳತೊಡಗಿದ್ದಾರೆ. ಲಾಭ ಮತ್ತು ವ್ಯಯಕ್ತಿಕ ಹಿತಾಸಕ್ತಿಗಳು ಮುಖ್ಯವಾಗುತ್ತ ಸಾಮಾಜಿಕ ಹೊಣೆಗಾರಿಕೆ ಮತ್ತು ಸಾಮಾಜಿಕೆ ಬದ್ಧತೆ ಎಂಬುದು ಕಡಿಮೆಯಾಗುತ್ತಿದೆ. ಎಲ್ಲರೂ ಮಾಧ್ಯಮ ಅಂಗಡಿಗಳ ಮಾಲೀಕರು ಮತ್ತು ವಾರಸುದಾರರು. ಇವೆರೆಲ್ಲ ಕಾಯುತ್ತಿರುವುದು ಗಿರಾಕಿಗಳಿಗಾಗಿ. ಪಕ್ಷ ಮತ್ತು ಜಾತಿ ರಾಜಕಾರಣ ಮಾಧ್ಯಮ ರಂಗದಲ್ಲಿ ನರ್ತಿಸತೊಡಗಿವೆ. ಪತ್ರಿಕಾ ವೃತ್ತಿಯ ಮೂಲ ಉದ್ದೇಶದ ಬಗ್ಗೆಯೇ ಎಲ್ಲರೂ ಅನುಮಾನದಿಂದ ನೋಡುವಂತಾಗಿದೆ. ಎಲ್ಲವನ್ನೂ ರುಚಿಕಟ್ಟಾಗಿ ನೀಡಬೇಕು ಎಂದು ಪತ್ರಿಕಾ ಸ್ನೇಹಿತರು ಮಾತನಾಡತೊಡಗಿದ್ದಾರೆ.

ಸತ್ಯಕ್ಕಿಂತ ಮಾರಾಟ ಮಾಡುವುದು ಮುಖ್ಯವಾಗಿರುವ ಈ ಸಂದರ್ಭದಲ್ಲಿ ಮಾರುಕಟ್ಟೆ ಸಂಸ್ಕೃತಿ ಮತ್ತು ಮಾರಾಟ ಯೋಜನೆಗಳು ಅನುಷ್ಠಾನಕ್ಕೆ ಬರತೊಡಗಿವೆ. ಅಂದರೆ ಪತ್ರಿಕೆಗಳೂ ಕೂಡ ಒಂದು ಸೋಪಿನಂತೆ, ಕಾಂಡೋಮಿನಂತೆ ಹಲ್ಲು ಉಜ್ಜುವ ಭ್ರಷ್ ನಂತೆ ಮಾರಾಟದ ಸರಕಾಗುತ್ತಿದೆ, ಪತ್ರಿಕಾ ಸಂಸ್ಥೆಗಳಲ್ಲಿ ಸಂಪಾದಕರುಗಳಿಗಿಂತ ಮರುಕಟ್ಟೆ ವಿಭಾಗದ ಮುಖ್ಯಸ್ಥರು ಹೆಚ್ಚಿನ ಮಾನ್ಯತೆ ಪಡೆಯುತ್ತಿದ್ದಾರೆ. ಸಂಪಾದಕರು ಸಂಪಾದಕೀಯವನ್ನು ಬರೆಯುವುದಕ್ಕೆ ಮೊದಲು ಆಡಳಿತ ವರ್ಗದಿಂದ ಡಿಕ್ಟೇಷನ್ ಪಡೆಯುವ ಸ್ಥಿತಿ ನಿರ್ಮಾಣವಗಿದೆ.

ಈ ಬದಲಾವಣೆಗಳು ಪತ್ರಿಕಾ ವೃತ್ತಿಯ ಪಾವಿತ್ರತೆಗೆ ದಕ್ಕೆಯನ್ನು ಉಂಟು ಮಾಡಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಂಥ ಪರಿಸ್ಥಿತಿಗೆ ಕಾರಣ ಎಂಬ ಪ್ರಶ್ನೆಗೆ ಉತ್ತರ ನೀಡುವುದೂ ಕಷ್ಟ, ಯಾಕೆಂದರೆ ಈ ಪ್ರಶ್ನೆಗೆ ಏಕರೂಪವಾದ ಮತ್ತು ಸರಳವಾದ ಉತ್ತರವಿಲ್ಲ. ಯಾಕೆಂದರೆ ಈ ಸ್ಥಿತಿಗೆ ಪತ್ರಿಕಾ ಜಗತ್ತಿನಲ್ಲಿ ಇರುವವರು ಮಾತ್ರ ಕಾರಣರಲ್ಲ. ಸಮಾಜದಲ್ಲಿ ಆದ ಬದಲಾವಣೆಗಳು, ನಮ್ಮ ಮೌಲ್ಯ ಗ್ರಹಿಕೆಯಲ್ಲಿ ಕಂಡು ಬರುತ್ತಿರುವ ವ್ಯತ್ಯಾಸ, ಬದುಕಿನ ವಿಭಿನ್ನ ಪಲ್ಲಟಗಳು, ಎಲ್ಲವೂ ಈ ಬದಲಾವಣೆಗೆ ತಮ್ಮ ಕೊಡುಗೆಯನ್ನು ನೀಡಿವೆ.

ಈ ಮೌಲ್ಯ ಪಲ್ಲಟವನ್ನು ನಾನು ಮೂರು ವಿಭಾಗಗಳನ್ನಾಗಿ ವಿಂಗಡಿಸುತ್ತೇನೆ. ಮೊದಲನೇಯದಾಗಿ ಬದಲಾದ ಮಾಲೀಕ ವರ್ಗ ಮತ್ತು ಅವರ ಧ್ಯೇಯೋದ್ಧೇಶಗಳು. ಮಾಲಿಕ ವರ್ಗಕ್ಕೆ ಇರುವ ಆಧ್ಯತೆಗಳು ಇಂದಿನ ಉದ್ಯಮ ಜಗತ್ತಿನಿಂದ ಪಡೆದುಕೊಂಡ ಆಧ್ಯತೆಗಳೇ ಆಗಿವೆ. ಜೊತೆಗೆ ಸೇವೆ ಮತ್ತು ಬದ್ಧತೆ ಎಂಬ ಶಬ್ಧಕ್ಕೆ ವ್ಯಾಪಾರೀಕರಣಗೊಂಡ ಮನಸ್ಸುಗಳಲ್ಲಿ ಯಾವ ಸ್ಥಾನವೂ ಇರದಿರುವುದು, ಇಂಥ ವ್ಯಾಪಾರೀಕರಣಗೊಂಡ ಮನಸ್ಸುಗಳೇ ಪತ್ರಿಕೋದ್ಯಮವನ್ನು ಆಳುತ್ತಿರುವುದು ಕೂಡ ಇದಕ್ಕೆ ಕಾರಣ. ಇಂದು ಸರಳೀಕೃತಗೊಂಡ ಪತ್ರಿಕೋದ್ಯಮದ ವ್ಯಾಖ್ಯೆಯಲ್ಲಿ ಹಣ ಮತ್ತು ಪ್ರಭಾವ ಮುಖ್ಯವಾಗುತ್ತಿರುವುದನ್ನು ನಾವು ಗಮನಿಸಬಹುದು.

ಇನ್ನು ಬದ್ಧತೆಯ ಪ್ರಶ್ನೆಯನ್ನು ಮಾಧ್ಯಮ ರಂಗದಲ್ಲಿ ಕೆಲಸ ಮಾಡುವವರ ದೃಷ್ಟಿಕೋನದಿಂದ ನೋಡೋಣ. ಮಾಧ್ಯಮ ರಂಗದಲ್ಲಿ ಕೆಲಸ ಮಾಡುವವರ ಆಧ್ಯತೆಗಳೂ ಬದಲಾಗಿವೆ. ಅವರು ನಂಬಿಕೊಂಡಿರುವ ಮೌಲ್ಯ ಕೂಡ ಒಂದು ರೀತಿಯ ಮೌಲ್ಯ ಪಲ್ಲಟದ ಉದಾಹರಣೆಯೇ..ಅಂದರೆ ಮಾಧ್ಯಮ ರಂಗದಲ್ಲಿ ಕೆಲಸ ಮಾಡುವವರಿಗೂ, ಬದುಕಿನ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ ಇರಬೇಕಾದ ವ್ಯತ್ಯಾಸ ಕೂಡ ಮರೆಯಾಗುತ್ತಿದೆ ಎಂಬುದು. ಈಗಿನ ಬಹಳಷ್ಟು ವೃತ್ತಿ ಬಾಂಧವರಿಗೆ ಪತ್ರಿಕಾ ಅಥವಾ ಮಾಧ್ಯಮ ವೃತ್ತಿ ಎಂದರೆ ಉಳಿದ ಕ್ಷೇತ್ರಗಳಿಗಿಂತ ಭಿನ್ನವಲ್ಲ. ಎಲ್ಲೋ ದಲ್ಲಾಳಿ ಕೆಲಸ ಮಾಡುವುದಕ್ಕೂ ಮಾಧ್ಯಮದಲ್ಲಿ ಕೆಲಸ ಮಾಡುವುದಕ್ಕೂ ಇರುವ ವ್ಯತ್ಯಾಸವನ್ನು ತಿಳಿಯದವರೂ ಮಾಧ್ಯಮದಲ್ಲಿದ್ದಾರೆ. ಬೀಡಾ ಅಂಗಡಿ ಇಡಬೇಕಾದವರು, ಚಾ ಅಂಗಡಿ ತೆರೆಯಬೇಕಾದವರು, ರಾಜಕೀಯ ಮಧ್ಯವರ್ಥಿಗಳು ಈ ವೃತ್ತಿಗ್ಎ ಬಂದಿರುವುದು ಇನ್ನೊಂದು ದುರಂತ.

ಈ ಮಾತುಗಳನ್ನು ನಾನು ಸಿನಿಕನಗಿ ಹೇಳುತ್ತಿಲ್ಲ. ಆದರೆ ಈ ಕಾಲಘಟ್ಟದಲ್ಲಿ ಮಾಧ್ಯಮ ರಂಗದಲ್ಲಿ ಅದ ಆಗುತ್ತಿರುವ ಬದಲಾವಣೆಯನ್ನು ಗುರುತಿರುವ ಯತ್ನ ಇದು ಎಂದೂ ನಮ್ರವಾಗಿ ಹೇಳಲು ಬಯಸುತ್ತೇನೆ.

ಮೂರನೆಯದಾಗಿ ಓದುಗ ಮಹಾ ಪ್ರಭು. ಸಮಾಜದಲ್ಲಿ ಆದ ಆಗುತ್ತಿರುವ ಮೌಲ್ಯ ಪಲ್ಲಟದ ಶಿಶುಗಳು ಇವರು.

ಜಾಗತೀಕರಣದ ಪ್ರಭಾವದಲ್ಲಿ ಬದುಕುತ್ತಿರುವ ಇವರಿಗೆ ಬದುಕಿನಲ್ಲಿ ಯಾವುದು ಮುಖ್ಯ ಮತ್ತು ಯಾವುದು ಮುಖ್ಯವಲ್ಲ ಎಂಬ ಬಗ್ಗೆ ಸ್ಪಷ್ಟ ಅಭಿಪ್ರಾಯವಿಲ್ಲ.
ಜೊತೆಗೆ ಪ್ರಾಮಾಣಿಕತೆ, ಸಾಮಾಜಿಕ ಬದ್ಧತ್ಎ ಮತ್ತು ಕಾಳಜಿ ಎಂಬಂತಹ ಮೌಲ್ಯಗಳು ಇವರಿಗೆ ಅಪಮೌಲ್ಯಗಳಾಗಿ ಕಾಣುತ್ತಿವೆ. ಅಮೇರಿಕದಿಂದ ಪಿಜ್ಜಾವನ್ನೋ ರಾಕ್, ಡ್ಯಾನ್ಸನ್ನೋ ಪಡೆದು ಆರಾಧಿಸುವ ಈ ಜನ ಸಮುದಾಯ ಬದುಕಿನ ಮೌಲ್ಯ ಕಲ್ಪನೆಯ ಪಲ್ಲಟವನ್ನು ಗುರುತಿಸಿದಂತೆ ಕಾಣುತ್ತಿಲ್ಲ. ಹಣ ಮುಖ್ಯವಾಗುತ್ತ ಮನುಷ್ಯ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿರುವುದಕ್ಕೇ ಇವರೆ ಜೀವಂತ ಉದಾಹರಣೆಯಾಗುತ್ತಿದ್ದಾರೆ. ಬದುಕಿನಲ್ಲಿ ಹಣವೇ ಮುಖ್ಯ. ಹಣವೊಂದೇ ನಮಗೆ ಶಾಂತಿ ಸಮಾಧಾನವನ್ನು ನೀಡುತ್ತದೆ ಎಂಬ ಹೊಸ ನಂಬಿಕೆಯನ್ನು ಈ ಜಾಗತೀಕರಣ ನಮ್ಮ ಓದುಗ ಸಮುದಾಯದಕ್ಕೆ ಕೊಡುಗೆಯಾಗಿ ನೀಡಿದೆ. ಹಣ ಪಡೆಯುವುದೇ ಮುಖ್ಯವಾದಾಗ ಬದುಕಿನ ಎಲ್ಲ ಮೌಲ್ಯಗಳು ಅರ್ಥವನ್ನು ಕಳೆದುಕೊಳ್ಳುತ್ತವೆ. ಈಗ ಆಗುತ್ತಿರುವುದೂ ಇದೇ ಎಂದು ನನಗೆ ಅನ್ನಿಸುತ್ತದೆ.
ಇದನ್ನೆಲ್ಲ ಗಮನಿಸಿದರೆ ಸಮಸ್ಯೆಯನ್ನು ಹೇಗೆ ಬಗೆಹರಿಸುವುದು ಎಂದು ನನ್ನನ್ನು ಕೇಳಿದರೆ ನನ್ನ ಬಳಿ ಸ್ಪಷ್ಟ ಉತ್ತರ ಇಲ್ಲ. ಆದರೆ ಬದುಕಿನಲ್ಲಿ ಬದಲಾವಣೆಯೊಂದೇ ಶಾಶ್ವತ ಎಂದು ನಂಬಿರುವ ನಾನು ಪತ್ರಿಕೋದ್ಯಮದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕುತೂಹಲದಿಂದ ಗಮನಿಸುತ್ತಿದ್ದೇನೆ. ಹಾಗೆ ಬದುಕಿನಲ್ಲಿ ಯಾವುದು ಮುಖ್ಯ ಮತ್ತು ಯಾವುದು ಮುಖ್ಯವಲ್ಲ ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಳ್ಳುತ್ತಿದ್ದೇನೆ. ಆದರೆ ಉತ್ತರ ಇನ್ನೂ ದೊರಕಿಲ್ಲ.

ಸಿಹಿಗಾಳಿ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ





























Saturday, January 14, 2012

ಕ್ರಿಕೆಟ್ ರಾಜಕಾರಣ; ಕ್ರಿಕೆಟ್ ಇತಿಹಾಸದ ಕಪ್ಪು ದಿನ.....!


ಇಂದಿರಾ ಗಾಂಧಿ ಜೊತೆ ಬೇಡಿ


ನಾನು ಮೆಚ್ಚುವ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ಕ್ರಿಕೆಟ್ ಆಂಗ್ಲರ ಆಟವಾದರೂ ಅದರ ಬಗ್ಗೆ ನನಗೆ ವಿಚಿತ್ರ ಮೋಹ. ನನ್ನ ಕಾಲೇಜು ದಿನಗಳಲ್ಲಿ ನಾನೊಬ್ಬ ಕ್ರಿಕೆಟ್ ಆಟಗಾರ. ಎಡಗೈಯಲ್ಲಿ ಬಾಲಿಂಗ್ ಮಾಡುತ್ತಿದ್ದ ನಾನು ಲೆಗ್ ಸ್ಪಿನ್ನರ್. ಆಗಿನ ದಿನಗಳಲ್ಲಿ ನನ್ನ ಮೇಲೆ ಆಪಾರವಾದ ಪ್ರಭಾವ ಬೀರಿದ ಕ್ರಿಕೆಟಿಗರೆಂದರೆ, ಬೆ. ಎಸ್. ಚಂದ್ರಶೇಖರ್, ಜಿ. ಅರ್. ವಿಶ್ವನಾಥ್, ಬಿಷನ್ ಸಿಂಗ್ ಬೇಡಿ ಮತ್ತು ಸುನಿಲ್ ಗಾವಾಸ್ಕರ್.
ಆಗ ಈಗಿನಂತೆ ಟೀವಿಗಳು ಇರಲಿಲ್ಲ. ನಾವೆಲ್ಲ ಸಣ್ಣ ಟ್ರಾನಿಸ್ಟರ್ ಹಿಡಿದುಕೊಂಡು ರನ್ನಿಂಗ್ ಕಾಮೇಂಟರಿ ಕೇಳುತ್ತಿದ್ದೆವು. ಸುರೇಶ್ ಸರೈಯಾ ಎಂಬ ಕಾಮೆಂಟರಿಗಾರ ಭಾರತ ಸೋಲಿನ ದವಡೆಯಲ್ಲಿ ಇರುವಾಗಲೆಲ್ಲ ಕಣ್ಣೀರು ಹಾಕುವಂತೆ ಕಾಮೆಂಟರಿ ಹೇಳುತ್ತಿದ್ದರು.
ಅದು ವೆಸ್ಟ್ ಇಂಡೀಸ್ ವಿರುದ್ಧ ಮುಂಭೈ ಟೆಸ್ಟ್. ಆಗಿನ ವೆಸ್ಟ್ ಇಂಡೀಸ್ ತಂಡ ವಿಶ್ವದಲ್ಲೇ ಅಗ್ರಮಾನ್ಯ ತಂಡವಾಗಿತ್ತು. ಕ್ಲೈವ್ ಲಾಯ್ಡ್, ವಿವಿಯನ್ ರಿಚರ್ಡ್ಸ್, ಅಲ್ವಿನ್ ಕಾಲೀಚರಣ್, ಡೆರಿಕ್ ಮರ್ರೆ, ಮಾಲ್ಕಮ್ ಮಾರ್ಷಲ್, ಒಬ್ಬರಿಗಿಂತ ಒಬ್ಬರು ಪ್ರತಿಭಾನ್ವಿತ ಆಟಗಾರರು. ಅವರನ್ನು ನೋಡಿಯೇ ಕ್ರಿಕೆಟ್ ದಾಂಡಿಗರು ಎಂಬ ಶಬ್ದದ ಬಳಕೆ ಪ್ರಾರಂಭವಾದದ್ದು. ಇವರಲ್ಲಿ ವಿವಿಯನ್ ರಿಚರ್ಡ್ಸ್ ಬ್ಯಾಟು ಎತ್ತಿದರೆ ಸಾಕು ಎಂತಹ ಬೌಲರ್ ಅದರೂ ಅವರ ತೊಡೆ ನಡುಗುತ್ತಿತ್ತು. ಅವರ ಹೊಡೆತದಲ್ಲಿ ವಿಶ್ವನಾಥ್ ಅವರ ಬ್ಯಾಟಿಂಗ್ ನಲ್ಲಿ ಇರುವ ಕಲಾತ್ಮಕತೆ ಇರಲಿಲ್ಲ. ಆದರೆ ಅವರು ವಿರೋಧಿ ತಂಡದ ಬೌಲರುಗಳನ್ನು ಯಾವ ರೀತಿ ದಂಡಿಸುತ್ತಿದ್ದರೆಂದು, ಆ ಹೊಡೆತಗಳಿಂದ ಚೆತರಿಸಿಕೊಳ್ಳುವುದೇ ಸಾಧ್ಯವಗುತ್ತಿರಲಿಲ್ಲ.
ಮುಂಬೈ ಟೆಸ್ಟ್ ನಲ್ಲಿ ವೆಸ್ಟ್ ಇಂಡೀಸ್ ದಾಂಡಿಗರ ಹೊಡೆತವನ್ನು ನೋಡಲೆಂದೇ ವಿಕ್ಷಕರು ಸ್ಟೇಡಿಯಂ ನಲ್ಲಿ ತುಂಬಿಕೊಂಡಿದ್ದರು. ಬಿ.ಎಸ್. ಚಂದ್ರಶೇಖರ್ ಮೊದಲ ಬೌಲಿಂಗ್ ಬದಲಾವಣೆಯಲ್ಲಿ ಬೌಲ್ ಮಾಡಲು ಬಂದರು. ಎದುರಿಗಿದ್ದವರು ರಿಚರ್ಡ್ಸ್. ಮೊದಲ ಓವರ್ ನ ಎರಡು ಎಸೆತಗಳು ಬೌಂಡರಿ ಗೆರೆಯನ್ನು ದಾಟಿದೆವು. ಎಲ್ಲರೂ ಉಸಿರು ಬಿಗಿ ಹಿಡಿದುಕೊಂಡು ಮುಂದೇನು ಎಂಬ ಆತಂಕದಲ್ಲಿದ್ದರು. ಆದರೆ ಚಂದ್ರಶೇಖರ್ ಮಾತ್ರ ಸಾವಧಾನವಾಗಿಯೇ ಇದ್ದರು. ಮೂರನೆಯ ಎಸೆತ...! ಅದು ರಿಚರ್ಡ್ಸ್ ಅವರ ಬ್ಯಾಟು ಮತ್ತು ಪ್ಯಾಡಿನ ಮದ್ದೆ ನುಸುಳಿ ಸ್ಟಂಪ್ ಉರುಳಿಸಿಯೇ ಬಿಟ್ಟಿತು. ರಿಚರ್ಡ್ಸ್ ಮುಖ ಕೆಳಗೆ ಹಾಕಿಕೊಂಡು ಪೆವಿಲಿಯನ್ ಗೆ ಹಿಂತಿರುಗಿದರು.
ಇಡೀ ವಾಖಂಡೆ ಸ್ಟೇಡಿಯಂನಲ್ಲಿ ಕರತಾಡನ. ನಂತರ ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವೆ ನಡೆದ ಹಲವಾರು ಟೆಸ್ಟ್ ಪಂದ್ಯಗಳಲ್ಲಿ ಎಂದೂ ರಿಚರ್ಡ್ಸ್ ಎಂಬ ದಾಂಡಿಗ ಚಂದ್ರಶೇಖರ್ ಅವರ ಗೂಗ್ಲಿ ಬೌಲಿಂಗ್ ಅನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ. ಚಂದ್ರಶೇಖರ್ ಬೌಲಿಂಗ್ ಎದುರಿಸಲು ಅವರಿಗೆ ಎಂದೂ ಸಾಧ್ಯವಾಗಲೇ ಇಲ್ಲ.
ಇದೆಲ್ಲ ಇಂದು ನೆನಪಾಗುತ್ತಿದೆ. ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯನ್ನು ನೋಡುವಾಗ ಬೇಸರವಾಗುತ್ತಿದೆ. ಸಚಿನ್ ತೆಂಡೂಲ್ಕರ್, ರಾಹುಲ್ ಡ್ರಾವಿಡ್, ವಿ. ವಿ. ಎಸ್ ಲಕ್ಷ್ಮಣ್ ಅವರಿಗೆ ವಯಸ್ಸಾದಂತೆ ಕಾಣುತ್ತಿದೆ. ಇವರೆಲ್ಲರ ಟೈಮಿಂಗ್ ಮಾಯವಾಗಿದೆ. ಬ್ಯಾಟು ಎತ್ತವುದಕ್ಕೆ ಇವರಿಗೆ ಬೇಸರವಾದಂತೆ ಕಾಣುತ್ತಿದೆ. ಫೂಟ್ ವರ್ಕ್ ಕೂಡ ಕಳೆಗುಂದಿದೆ.
ಭಾರತದ ಯಶಸ್ವಿ ನಾಯಕರೆಂದೇ ಪರಿಗಣಿಸಲ್ಪಟ್ಟಿರುವ ಮಹೇಂದ್ರ ಸಿಂಗ್ ದೋನಿ ಮುಖದಲ್ಲಿ ವಿಷಾಧದ ನೆರಳು. ಕೂಲ್ ಕ್ಯಾಪ್ಟನ್ ಮನಸ್ಸು ಆತಂಕದಲ್ಲಿ ತೊಳಲಾಡುತ್ತಿರುವಂತಿದೆ. ಎಂದೂ ಗುಂಪುಗಾರಿಕೆ ಮಾಡದೇ ಆಟವನ್ನು ಧ್ಯಾನದಂತೆ ಸ್ವೀಕರಿಸಿ ಆಡುತ್ತಿದ್ದ ಧೋನಿ ಈಗ ತಂಡದ ರಾಜಕೀಯಕ್ಕೆ ಬಲಿಯಾಗುವ ಲಕ್ಷಣಗಳೂ ಗೋಚರವಾಗುತ್ತಿದೆ. ವಿರೇಂದ್ರ ಸೆಹ್ವಾಗ್ ನೇತೃತ್ವದ ದೆಹಲಿ ಆಟಗಾರರ ಗುಂಪು ದೋನಿಯನ್ನು ಮನೆಗೆ ಕಳುಹಿಸಲು ಷದ್ಯಂತ್ರವನ್ನು ರೂಪಿಸಿರುವುದು ಈಗ ಬೆಳಕಿಗೆ ಬರುತ್ತಿದೆ. ಇವರ ಈ ರಾಜಕಾರಣದಲ್ಲಿ ಕ್ರಿಕೆಟ್ ಸೋಲುತ್ತಿದೆ. ಕ್ರಿಕೆಟ್ ಅನ್ನು ದೇಶಾಭಿಮಾನದ ಸಂಕೇತವಾಗಿ ಭಾವಿಸಿರುವ ದೇಶದ ಕ್ರಿಕೆಟ್ ಪ್ರೇಮಿಗಳು ಬೇಸರದಿಂದ ತಲೆ ತಗ್ಗಿಸುವಂತಾಗಿದೆ.
ಹಾಗೆ ನೋಡಿದರೆ ಭಾರತದ ಕ್ರಿಕೆಟ್ ರಾಜಕಾರಣಕ್ಕೆ ಸುದೀರ್ಘ ಇತಿಹಾಸವಿದೆ. ಈಗ ಕ್ರಿಕೆಟ್ ಕಾಮೇಂಟರಿ ಹೇಳುತ್ತ ಹಣ ಗಳಿಸುವುದರ ಜೊತೆಗೆ, ಆಟಗಾರರಿಗೆ ಬುದ್ದಿವಾದ ಹೇಳುತ್ತಿರುವ ಗವಾಸ್ಕರ್ ಅತಿ ದೊಡ್ದ ಕ್ರಿಕೆಟ್ ರಾಜಕಾರಣಿ ಆಗಿದ್ದರು,. ಅವರ ಜೊತೆಗಿರುವ ರವೀ ಶಾಸ್ತ್ರಿ ಕೂಡ ಮಹಾನ್ ರಾಜಕಾರಣಿ. ಇವರೆಲ್ಲ ದೇಶಕ್ಕಾಗಿ ಅಡಿದ್ದಕ್ಕಿಂತ ಸ್ವಂತಕ್ಕಾಗಿ ಆಡಿದ್ದೇ ಹೆಚು.
ಇನ್ನ್ನು ಬಿಷನ್ ಸಿಂಗ್ ಬೇಡಿ. ಒಂದು ಕಾಲದಲ್ಲಿ ತಮ್ಮ ಆತ್ಮೀಯ ಸ್ನೇಹಿತನಾಗಿದ್ದ ಇ ಎ ಎಸ್ ಪ್ರಸನ್ನ ಅವರ ವಿರುದ್ಧವೇ ರಾಜಕಾರಣ ಮಾಡಿದವರು ಇವರು. ಕೊನೆಗೆ ತುಂಬು ಬೇಸರದಲ್ಲಿ ಪ್ರಸನ್ನ ಕ್ರಿಕೆಟ್ ಗೆ ವಿದಾಯ ಹೇಳಬೇಕಾಯಿತು. ಬಿಷನ್ ಸಿಂಗ್ ಬೇಡಿಯ ರಾಜಕಾರಣವನ್ನು ಈಗ ವಿರೇಂದ್ರ ಸೆಹ್ವಾಗ್ ಮುಂದುವರಿಸುತ್ತಿದ್ದಾರೆ ಅಷ್ಟೇ.
ಭಾರತ ಕಂಡ ಉತ್ತಮ ಸ್ಪಿನ್ ಬೌಲರುಗಳಲ್ಲಿ ಒಬ್ಬರಾದ ವೆಂಕಟರಾಘವನ್ ಇಂಥಹ ಕ್ರಿಕೆಟ್ ರಾಜಕಾರಣದ ಫಲಾನುಭವಿ. ಅವರು ಸತತ ಸೋಲನ್ನು ಉಣ್ಣುತ್ತಿದ್ದರೂ ಭಾರತದ ತಂಡದ ನಾಯಕನ ಪಟ್ಟ ಅವರಿಗೆ ಒಲಿದು ಬಂದಿತ್ತು. ಅವರು ಫಾರ್ಮ್ ನಲ್ಲಿ ಇರದಿದ್ದರೂ ಭಾರತ ತಂಡದಲ್ಲಿ ಅವರಿಗಾಗಿ ಸ್ಥಾನವನ್ನು ಕಾಯ್ದಿರಿಸಲಾಗಿತ್ತು. ಈ ರಾಜಕಾರಣದಿಂದಾಗಿ ಅತ್ಯುತ್ತಮ ಸ್ಪಿನ್ ಬೌಲರ್ ಆಗಿದ್ದ ಶಿವಾಲ್ಪರ್ ಅವರಿಗೆ ಟೆಸ್ಟ್ ಆಡುವ ಅವಕಾಶವೇ ದೊರಕಲಿಲ್ಲ. ಇದೇ ಸಾಲಿಗೆ ಸೇರುವ ಇನ್ನೊಬ್ಬ ವ್ಯಕ್ತಿ ಕರ್ನಾಟಕದ ಸುಧಾಕರ್ ರಾವ್.
ಸುಧಾಕರ್ ರಾವ್ ವಿಶ್ವನಾಥ್ ಅವರಂತೆ ಕುಳ್ಳನೆಯ ವ್ಯಕ್ತಿ. ಅವರ ಬ್ಯಾಟಿಂಗ್ ಶೈಲಿ ಕೂಡ ಜಿ.ಎಸ್. ವಿಶ್ವನಾಥ್ ಅವರಂತೆ ಇತ್ತು. ಆದರೆ ಅವರು ಕ್ರಿಕೆಟ್ ರಾಜಕಾರಣದಿಂದಾಗಿ ಅವಕಾಶ ವಂಚಿತರಾದರು.
ಭಾರತ ತಂಡದಲ್ಲಿ ಮೊದಲು ಮುಂಬೈ ಆಟಗಾರರದೇ ಕರಾಮತ್ತು. ನಂತರದ ದಿನಗಳಲ್ಲಿ ದೆಹಲಿ ಆಟಗಾರರ ಪ್ರಾಭಲ್ಯ. ದಕ್ಷಿಣಕ್ಕೆ ಬಂದರೆ ಮದ್ರಾಸಿಗಳ ಕಾರುಬಾರು. ಭಾರತ ತಂಡ ಎಂದರೆ ಇಷ್ಟೆ. ಕಪಿಲ್ ದೇವ್ ಭಾರತ ತಂಡವನ್ನು ಉತ್ತುಂಗಕ್ಕೆ ಕೊಂಡೊಯ್ದರೂ ಅವರ ವಿರುದ್ಧ ನಡೆದಿದ್ದು ಬಹುದೊಡ್ದ ರಾಜಕೀಯ. ಈ ರಾಜಕೀಯದಲ್ಲಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಪ್ರಮುಖ ಸದಸ್ಯರೂ ಪಲುದಾರರಾಗಿದ್ದರು.
ಈಗ ಇತಿಹಾಸ ಮರುಕಳಿಸುತ್ತಿದೆ. ಮತ್ತೆ ಕ್ರಿಕೆಟ್ ರಾಜಕಾರಣ ಕ್ರಿಕೆಟ್ ಎಂಬ ಅದ್ಭುತ್ ಆಟವನ್ನು ನಾಶಪಡಿಸುತ್ತಿದೆ. ಜೊತೆಗೆ ಕ್ರಿಕೆಟ್ ಆಟದ ಕಲಾತ್ಮಕತೆ ಮಾಯವಾಗುತ್ತಿದೆ. ವಿಶ್ವನಾಥ್ ಹೊಡೆಯುತ್ತಿದ್ದ ಸ್ಕ್ವಾರ್ ಕಟ್ ನೋಡಲು ಸಿಗುವುದಿಲ್ಲ. ಮೀನಿನ ನಡೆಯಂತೆ ತಮ್ಮ ಹೆಜ್ಜೆಯನ್ನು ಹಿಂದಕ್ಕೆ ಮುಂದಕ್ಕೆ ಇಟ್ಟು ಚಂಡನ್ನು ಕಣ್ಣು ಮುಚ್ಚಿ ನೋಡುವುದರ ಒಳಗೆ ಬೌಂಡರಿ ಲೈನ್ ಗೆ ಹೊಡೆಯುವುದು ಕಾಣುತ್ತಿಲ್ಲ. ಈಗಿನ ಕ್ರಿಕೆಟ್ ನೋಡಿದಾಗ ಚಿನ್ನಿ ದಾಂಡು ಆಟ ನೋದಿದಂತೆ ಕಾಣುತ್ತಿದೆ. ಕ್ರಿಕೆಟ್ ನಲ್ಲಿದ್ದ ನವಿರು ಆಟ ಮಾಯವಾಗಿ ಬಡಿಯುವುದು, ಹೊಡೆಯುವುದು ಹೆಚ್ಚಾಗುತ್ತಿದೆ. ಕೆಲವರು ಬ್ಯಾಟು ಬೀಸುವುದನ್ನು ನೋಡಿದರೆ, ಬ್ಯಾಟೇ ಮುರಿದು ಹಾರಿ ಹೋಗಬಹುದು ಎಂಬ ಭಯ ಕಾಡತೊಡಗುತ್ತಿದೆ.
ಇಂದು ಕ್ರಿಕೆಟ್ ಬಹುದೊಡ್ದ ಉದ್ಯಮವಾಗಿ ಬೆಳದಿದೆ. ಕ್ರಿಕೆಟ್ ಆಟಗಾರರು ಮೊದಲಿನಂತೆ, ಕಿಟ್ ಕೊಳ್ಳುವುದಕ್ಕೆ ಪರಿಪಾಟಲು ಪಡಬೇಕಾಗಿಲ್ಲ. ಕ್ರಿಕೆಟ್ ಆಟಕ್ಕಿಂತ ಜಾಹಿರಾತಿನಿಂದ ಕೋಟ್ಯಾಂತರ ರೂಪಾಯಿ ಹರಿದು ಬರುತ್ತಿದೆ. ಹಲವು ಟೆಸ್ಟ್ ಗಳಲ್ಲಿ ವಿಫಲರಾದರೂ ಜಾಹೀರಾತಿನಿನಿಂದ ಬರುವ ಹಣ ನಿಲ್ಲುವುದಿಲ್ಲ.
ನಿಜ, ಇಂದು ಭಾರತದ ಕ್ರಿಕೆಟ್ ನ ಕರಾಳ ದಿನ. ಭಾರತ ಅವಮಾನಕರವಾಗಿ ಸೋತಿದೆ. ಇದೆನ್ನೆಲ್ಲ ನೋಡಿದರೆ ಅನ್ನಿಸುವುದೆಂದರೆ ನಮ್ಮ ಸ್ಟಾರ್ ಕ್ರಿಕೆಟ್ ಆಟಗಾರರು ಕ್ರಿಕೆಟ್ ಬಿಡುವುದು ಒಳ್ಳೆಯದು. ಬಿಡದಿದ್ದರೆ ರಾಜಕಾರಣ ಮಾಡುತ್ತಿರುವ ಈ ಆಟಗಾರರನ್ನು ಮನೆಗೆ ಕಳುಹಿಸುವ ಕೆಲಸವನ್ನು ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಡಬೇಕು. ಕ್ರಿಕೆಟ್ ನ ಮರ್ಯಾದೆಯನ್ನು ಉಳಿಸುವ ಕೆಲಸ ಆಗಬೇಕು.

ಗೆಳೆಯರ ಮಾತು


ಅವರಿಗೆ ಇವರು ಸ್ನೇಹಿತ, ಇವರಿಗೆ ಅವರು ಸ್ನೇಹಿತ
ಸ್ನೇಹಿತರ ಕೈಯಲ್ಲೇ ಅಯುಧ
ಎಲ್ಲಿ ಇರಿಯಲಿ ?, ತೆಗೆಯಲೇ ತಲೆ ? ಬಗೆಯಲೇ ಹೊಟ್ಟೆ ?
ಇಡಲೇ ಕುಂಡೆಯ ಮೇಲೆ ಒಂದು ಬರೆ ?
ನೋವಾಗುತ್ತಿದೆಯೆ ? ಆಯುಧ ಅಂತಹ ಹರಿತವೇನಿಲ್ಲ
ಸ್ವಲ್ಪ ಹಳೆಯದಾದರೂ ಮಾಡುತ್ತದೆ ತನ್ನ ಕೆಲಸ
ಯಾರಿಗೂ ತಿಳಿಯದ ಹಾಗೆ

ಎಲ್ಲವೂ ಸಿದ್ಧವಾಗಿದೆ, ಉರಿಯುತ್ತಿದೆ ಬೆಂಕಿ, ಮೇಲೆ ಬಾಣಲೆ
ಬೆಂಕಿಯಲ್ಲಾದರೂ ಹಾಕಬೇಕು, ಬಾಣಲೆಯಲ್ಲಾದರೂ ಕುದಿಸಬೇಕು
ಮನಸು ಕುದಿದ ಮೇಲೆ ಕೊಡಲೇ ಬೇಕು ಬಲಿ
ಸಾರಿ, ನಾನೇನು ಮಾಡಲಿ ?

ಎಲ್ಲವೂ ಪ್ರಾರಂಭವಾಗಿತ್ತು ನೀನು ನೋಡಿದ ಕೂಡಲೆ.
ಮಾತು ಪ್ರಾರಂಭಿಸಿದಾಗಲೆ.
ಅಲ್ಲಿದ್ದ ಒಂದೇ ಒಂದು ಪೀಠದ ಮೇಲೆ ನೀನು ಕುಳಿತಾಗಲೆ,
ಆಗಲೇ ಸಿದ್ಧವಾಗಿತ್ತು, ಅಗ್ನಿ ಕುಂಡ,
ನೀ ಏನನ್ನೂ ಬಿಟ್ತು ಕೊಡದ ಭಂಡ, ಜಗಮೊಂಡ,
ಸಾರಿ ನಾನೇನು ಮಾಡಲಿ ?

ಹೀಗಿದ್ದರೂ, ಅಲ್ಲಿ ನಡೆದಿತ್ತು ಮಾತು ಬರೀ ಮಾತು
ಇರಿಯುವುದಿದ್ದರೆ ಇರಿ, ಬಗೆಯುವುದಿದ್ದರೆ ಬಗಿ,
ಹಾಕುವುದಿದ್ದರೆ ಹಾಕು ಬರೆ
ಆದರೆ,
ಶಬ್ದಗಳನ್ನು ಉದಿರಸಬೇಡ, ಶಬ್ದಗಳು ಸತ್ತಹೋದ
ಈ ಘಳಿಗೆಯಲ್ಲಿ.
ಮಾತನ್ನು ಮಥಿಸಿ, ಅರ್ಥವನ್ನು ಭಜಿಸಿ ಸುಮ್ಮನೆ ಕುಳಿತು ಬಿಡು
ಎಲ್ಲವೂ ನಿನ್ನೊಳಗೆ ಇರುವ ಹಾಗೆ.

ಮಾತಿಗೆ ಅರ್ಥ ತುಂಬುವುದೇ ಭಾವ, ಅರ್ಥಕ್ಕೆ ನಿನ್ನೊಳಗಿನದೇ ಮೋಹ
ಶಬ್ದಕ್ಕೆ ಉಣಬಡಿಸು, ನಿನ್ನ ಎದೆಯ ಉರಿಯನ್ನು
ಬಗೆದು ಬಿಡು, ತುಂಬಿ ಬಿಡು, ನುಂಗಿ ಬಿಡು ಎಲ್ಲವನ್ನೂ.

ತುಂಬು ಜೀವಜಲ, ಎದ್ದು ನಿಲ್ಲಲಿ ಶಬ್ದಗಳು, ಮಾಡಲಿ, ಆಡಲಿ ಶಿವತಾಂಡವ
ತೆಗೆದುಕೋ ಶಸ್ತ್ರ ಸನ್ಯಾಸ, ಇಳಿಸಿ ಬಿಡು ಬೆಂಕಿ ಮೇಲಿನ ಬಾಣಲೆಯನ್ನು
ಹಾಕು ಉರಿವ ಬೆಂಕಿಗೆ ನೀರು, ಹೇಗಿದ್ದರೂ ಇದೆಲ್ಲ ನಿನ್ನದೇ ಕಾರು ಬಾರು.
ಸುಮ್ಮನೆ ಮಾತನಾಡಬೇಡ, ಎತ್ತಿ ಒಗೆಯಬೇಡ, ಶಬ್ದ ಸಮೂಹವನ್ನು

ಹೃದಯ ಬಸಿದರೆ ಮಾತ್ರ ಹುಟ್ಟೀತು ಮಾತು, ಇಲ್ಲದಿದ್ದರೆ,
ಮಾತು ಆದೀತು ವ್ಯರ್ಥ, ಎಲ್ಲವೂ ಅನರ್ಥ
ಈಗ ಆಗುತ್ತಿರುವ ಹಾಗೆ.


AMERICA SUPPORTS PAK#Shashidharbhat#Sudditv#Karnatakapolitics

ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...