Thursday, April 11, 2019

ಕಾಂಗ್ರೆಸ್ ಪಕ್ಷದ ಐತಿಹಾಸಿಕ ತಪ್ಪುಗಳು: ಬಿಜೆಪಿಗೆ ವರದಾನವಾಯಿತೇ ? ಭಾಗ ೨

ತುರ್ತು ಪರಿಸ್ಥಿತಿಯ ಕರಾಳ ದಿನಗಳು. ಭಾರತೀಯ ರಾಜಕೀಯ ಮತ್ತು ಸಾಮಾಜಿಕ ಬದುಕಿನಲ್ಲಿ ಎಂದೂ ಮರೆಯಲಾಗದ ದಿನಗಳು. ಶ್ರೀಮತಿ ಇಂದಿರಾ ಗಾಂಧಿ ತಾವು ದೇಶಕ್ಕಿಂತಲೂ ದೊಡ್ಡವರು ಎಂಬ ಭ್ರಮೆಗೆ ಒಳಗಾಗಿದ್ದರು. ಇಂದಿರಾ ಈಸ್ ಇಂಡಿಯಾ ಎಂಭ ಘೋಷಣೆಗಳು ಎಲ್ಲೆಡೆಗೂ ಮೊಳಗತೊಡಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಬಟ್ಟಂಗಿಗಳ ಕಾರುಬಾರು ಜೋರಾಗಿತ್ತು. ಕಾಂಗ್ರೆಸ್ ರಾಜಕಾರಣ ಎಂದರೆ ನೆಹರೂ ಕುಟುಂಬದ ರಾಜಕಾರಣವಾಗಿ ಮಾರ್ಪಾಡಾಗಿತ್ತು. ಇಂದಿರಾ ಗಾಂಧಿ ಅವರ ಮನೆಯ ನಾಯಿಗಳಿಗೂ ಅತಿ ಹೆಚ್ಚಿನ ಬೇಡಿಕೆ ಬಂದು ಬಿಟ್ಟಿತ್ತು. ಬೇರೆ ಬೇರೆ ರಾಜ್ಯಗಳ ಕಾಂಗ್ರೆಸ್ ನಾಯಕರು ಇಂದಿರಾ ಗಾಂಧಿ ಅವರ ದರ್ಶನವಾಗದಿದ್ದರೆ ಅವರ್ ಮನೆಯ ನಾಯಿಯ ದರ್ಶನ ಮಾಡಿ ಬಿಸ್ಕೀಟ್ ಹಾಕಿ ಬರುವದನ್ನೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದರು.
ಮಾಡಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕತ್ವವಾಗಲೀ ನಾಯಕರಾಗಲೀ ಇರಲಿಲ್ಲ. ಒಂದು ರಾಜಕೀಯ ಪಕ್ಷದ ಜನತಾಂತ್ರಿಕ ಗುಣ ಅಲ್ಲಿ ಮಾಯವಾಗಿತ್ತು. ಹೊಸ ರಾಜಕೀಯ ಶಕ್ತಿ ಉದ್ಭವಿಸುವುದಕ್ಕೆ ಮಣ್ಣು ಹದವಾಗಿದ್ದ ಕಾಲ. ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿ ಒಂದು ಆಂದೋಲನವಾಗಿ ರೂಪಗೊಂಡಿತ್ತು. ದೇಶದ ಯುವ ಜನತೆ ಬದಲಾವಣೆಯ ಕನಸು ಕಾಣತೊಡಗಿದ್ದರು. ಚಂಬಲ್ ಕಣಿವೆಯ ಡಕಾಯಿತರಿಂದ ನಗರ ಪಟ್ಟಣಗಳಲ್ಲಿ ಇರುವ ಡಕಾಯಿತರೂ ಬದಲಾವಣೆಗೆ ತಮ್ಮನ್ನು ಒಡ್ಡಿಕೊಂಡಿದ್ದರು.
ಇಂದಿರಾ ಗಾಂಧಿ ಅವರ ಭ್ರಮೆ ಕಳಚಿ ಬೀಳುವ ಸಂದರ್ಭ ಅದು. ಹಳೆಯದು ನಾಶವಾಗಿ ಹೊಸದು ಚಿಗುರುವ ಸಂದರ್ಭ ಕೂಡ.
ದೇಶದಲ್ಲಿ ಕಾಂಗ್ರೆಸ್ ವಿರೋಧಿ ಮನಸ್ಥಿತಿ ಮನೆ ಮಾಡಿತ್ತು. ತುರ್ತು ಪರಿಸ್ಥಿತಿಯ ನಂತರ ಕಾಂಗ್ರೆಸ್ ನೆಲ ಕಚ್ಚಿದ್ದು ಮುಂದಿನ ಬೆಳವಣಿಗೆ. ಹೊಸ ಕನಸುಗಳೊಂದಿಗೆ ಮುರಾರ್ಜಿ ದೇಸಾಯಿ ಸರ್ಕಾರ ಅಧಿಕಾರ ಸ್ವೀಕರಿಸಿತು. ಆದರೆ ಕಾಂಗ್ರೆಸ್ ವಿರೋಧವನ್ನು ಬಿಟ್ಟರೆ, ಈ ಕಾಂಗ್ರೆಸ್ ವಿರೋಧಿ ಪಕ್ಷಗಳಲ್ಲಿ ಸಮಾನವಾದ ಅಂಶಗಳೇ ಇರಲಿಲ್ಲ. ರಾಜನಾರಾಯಣ್ ಅವರಂತಹ ಭಫೂನ್ ಗಳು ಇಂದಿರಾ ವಿರೋಧಿ ಅಲೆಯಲ್ಲಿ ಆರಿಸಿ ಬಂದು ತಮ್ಮ ಭಫೂನ್ ರಾಜಕಾರಣವನ್ನು ಪ್ರಾರಂಭಿಸಿ ಬಿಟ್ಟಿದ್ದರು. ಹಾಗೆ ಸಂಸ್ಥಾ ಕಾಂಗ್ರೆಸ್ ಮೂಲದ ನಾಯಕರುಗಳು ತಮ್ಮ ಹಳೇ ಛಾಳಿಯನ್ನು ಮುಂದುವರಿಸಿದ್ದರು. ಸಮಾಜವಾದಿಗಳು ಮಜಾವಾದಿಗಳಾಗಿ ಪರಿವರ್ತನೆಯಾಗಿದ್ದರು. ಜನತಾ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಈ ಸರ್ಕಾರ ಉಳಿಯುವುದಿಲ್ಲ ಎಂದು ಅನ್ನಿಸತೊಡಗಿತ್ತು.
ಆದರೆ ಜನತಾ ಪರಿವಾರದಲ್ಲಿ ಜನ ಸಂಘದ ನಾಯಕರು ಮೊದಲ ಬಾರಿ ಅಧಿಕಾರದ ಗದ್ದುಗೆ ಏರಿದ್ದರು. ಅವರ ಹಿಂದಿರುವ ಸಂಘ ಪರಿವಾರ ತನ್ನ ರಾಜಕೀಯ ಮುಖಕ್ಕೆ ಬಣ್ಣ ಹಚ್ಚುವ ಕೆಲಸದಲ್ಲಿ ನಿರತವಾಗಿತ್ತು. ಇದನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಜನತಾ ಪರಿವಾರದ ಉಳಿದ ನಾಯಕರು ಇರಲಿಲ್ಲ.
ಒಡಕಿನಲ್ಲೇ ಹುಟ್ಟಿ ಒಡಕಿನಲ್ಲೇ ಮುಂದುವರಿಯುತ್ತಿದ್ದ ಜನತಾ ಪರಿವಾರ ಕೆಲವೇ ತಿಂಗಳಿನಲ್ಲಿ ಆಂತರಿಕ ಭಾರದಿಂದ ಜರ್ಜರಿತವಾಗತೊಡಗಿತ್ತು. ಆಗಲೇ ಭಾರತೀಯ ಜನತಾ ಪಾರ್ಟಿಯ ಹುಟ್ಟಿಗೆ ವೇದಿಕೆ ಸಿದ್ಡವಾಗತೊಡಗಿತ್ತು. ಸಂಘ ಪರಿವಾರ ಜನತಾ ಪರಿವಾರದ ಜೊತೆ ಮುಂದುವರಿಯುವುದು ಬೇಡ ಎಂಬ ತೀರ್ಮಾನಕ್ಕೆ ಬಂದಾಗಿತ್ತು. ಜನತಾ ಪರಿವಾರ ಒಡೆಯಿತು. ಆಗ  ಹುಟ್ಟಿದ್ದು ಭಾರತೀಯ ಜನತಾ ಪಾರ್ಟಿ.ಆಗಲೇ ವಾಜಪೇಯಿ ಆಡ್ವಾಣಿಯಂತಹ ಬಿಜೆಪಿ ನಾಯಕರು ಅಧಿಕಾರದ ಅನುಭವ ಪಡೆದಿದ್ದು ಮಾತ್ರವಲ್ಲ, ತಾವು ಉಳಿದ ಪಕ್ಷಗಳ ನಾಯಕರಿಗಿಂತ ಬೇರೆ ಎಂದು ತೋರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಜನರಲ್ಲಿ ವಿಶ್ವಾಸ ತುಂಬುವುದರಲ್ಲೀ ಅವರಿಗೆ ಜಯ ಸಿಕ್ಕಿತು.ಈ ಪಕ್ಷದ ಮೂಲ ಜೀವಾಳವಾದ ಹಿಂದುತ್ವ ಮೇಲೆಕ್ಕೆ ಕಾಣುತ್ತಿರಲಿಲ್ಲ. ಆಗಿನ ಸಂಘ ಮತ್ತು ಬಿಜೆಪಿ ನಾಯಕತ್ವ ಹಿಂದುತ್ವದ ಅಜೆಂಡಾವನ್ನು ನೇರವಾgi ಅನುಷ್ಟಾನಗೊಳಿಸುವಲ್ಲಿ ಆಸಕ್ತಿಯನ್ನು ಪ್ರಕಟಿಸಲಿಲ್ಲ. ಬದಲಾಗಿ ಸಂಘದ ಕಾರ್ಯಾಚರಣೆಯ ಮೂಲ ಸಿದ್ಧಾಂತದಂತೆ ಗುಪ್ತವಾಗಿ ಉದ್ದೇಶವನ್ನು ಈಡೇರಿಸಿಕೊಳ್ಳುವ ಕಾರ್ಯಾಚರಣೆ.
ಆ ಸಂದರ್ಭದಲ್ಲಿ ಬಿಜೆಪಿ ಇಂದಿನ ಮಟ್ಟದಲ್ಲಿ ಬೆಳೆಯಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ ನಾಯಕತ್ವಕ್ಕೆ ಇರಲಿಲ್ಲ. ನೆಹರೂ ಕುಟುಂಬದ ಸುತ್ತಲೂ ಗಿರಿಕಿ ಹೊಡೆಯುತ್ತಿದ್ದ ಕಾಂಗ್ರೆಸ್ ಇಂದಿರಾ ಗಾಂಧಿ ಅವರ ಬಡವರ ಪರವಾದ ಕೆಲಸಗಳು ತಮ್ಮನ್ನು ಕೈ ಹಿಡಿಯುತ್ತದೆ ಎಂದು ನಂಬಿಕೊಂಡಿತ್ತು. ಹೊಸ ಆಲೋಚನೆಗಳು ಇರಲಿಲ್ಲ. ನೆಹರೂ ಕುಟುಂಬದ ವಿರೋಧಿ ಪ್ರಾದೇಶಿಕ ನಾಯಕರನ್ನು ರಾಜಕೀಯವಾಗಿ ಹತ್ತಿಕ್ಕುವ ಕೆಲಸವನ್ನು ಕಾಂಗ್ರೆಸ್ ಮುಂದುವರಿಸಿತು. ತಮಗೆ ಮತ ತರಲು ನೆಹರೂ ಕುಟುಂಬ ಮಾತ್ರ ಸಾಕು ಎಂದು ಈ ಪುರಾತನ ಪಕ್ಷ ನಂಬಿಕೊಂಡಿತ್ತು. ಕಾಂಗ್ರೆಸ್ ಪಕ್ಷದ ಚಿನ್ಹೆಯ ಮೇಲೆ ನಾಯಿ ನಿಂತರೂ ಆಯ್ಕೆಯಾಗುತ್ತದೆ ಎಂದು ನಂಬಿದ ದಿನಗಳು ಅವು.
ಈ ಹಂತದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ತಮ್ಮ ರಾಜಕೀಯ ಮತ್ತು ಸಾಮಾಜಿಕ ಸಿದ್ಧಾಂತವನ್ನು ಒಗ್ಗೂಡಿಸಿ ಹೊಸ ಭರವಸೆಯ ರಥ ಯಾತ್ರೆ ಪ್ರಾರಂಭಸಿದವು. ಹಿದುಂತ್ವ ಬಹುಮುಖ್ಯವಾದ ಅಜೇಂಡಾ ಆಗಿ ಮುನ್ನೆಲೆಗೆ ಬಂತು. ಬಿಜೆಪಿ ಥಿಂಕ್ ಟ್ಯಾಂಕ್ ಈ ಉದ್ದೇಶಕ್ಕಾಗಿ ಎರಡು ಮುಖಗಳನ್ನು ಯಶಸ್ವಿಯಾಗಿ ಬಳಸತೊಡಗಿತು.ಒಂದು ಆಡ್ವಾಣಿ ಅವರ ಉಗ್ರ ಮುಖ. ಈ ಉಗ್ರ ಮುಖ ಪಕ್ಷದ ಉದ್ದೇಶವನ್ನು ನಾಶಪಡಿಸದಿರಲಿ ಎಂದು ವಾಜಪೇಯಿ ಅವರ ಶಾಂತ ಮುಖ. ಹಾಗೇ ನೋಡಿದರೆ ಇವರಿಬ್ಬರ ನಡುವೆ ಅಂತಹ ವ್ಯತ್ಯಾಸ ಇರಲಿಲ್ಲ ಇಬ್ಬರ ಉದ್ದೇಶವೂ ಒಂದೇ. ದಾರಿ ಮಾತ್ರ ಬೇರೆ ಬೇರೆ.
೯೦ ರದಶಕದಲ್ಲಿ ಬಿಜೆಪಿ ತನ್ನ ಉಗ್ರ ಹಿಂದುತ್ವವನ್ನು ಪ್ರದರ್ಶಿಸತೊಡಗಿತು. ಒಂದು ದೇಶದಲ್ಲಿ ಪ್ರತಿಶತ ೯೦ ಕ್ಕಿಂತ ಹೆಚ್ಚಿರುವ ಜನಸಮುದಾಯಕ್ಕೆ ಅನ್ಯಾಯವಾಗುತ್ತದೆ ಅವರ ಧರ್ಮ ಅಪಾಯದಲ್ಲಿದೆ ಎಂಬುದನ್ನು ಯಾರೂ ಒಪ್ಪಲು ಸಾಧ್ಯವೇ ಇಲ್ಲ. ಆದರೆ ಬಿಜೆಪಿ ತನ್ನ ರಾಜಕೀಯ ಉದ್ದೇಶಕ್ಕಾಗಿ ಆಯೋಧ್ಯೆ ವಿವಾದವನ್ನು ಕೈಗೆತ್ತಿಕೊಂಡಿತು. ಆಡ್ವಾಣಿ ರಥ ಯಾತ್ರೆ ನಡೆಸಿದರು. ಅವರು ರಾಮನಂತೆ ಬಿಲ್ಲು ಬಾಣ ಹಿಡಿದು ಕಿರೀಟ ಧರಿಸಿದ ಬೃಹತ್ ಕಟ್ ಔಟ್ ಗಳು ದೇಶಾದ್ಯಂತ ವಿಜ್ರುಂಭಿಸತೊಡಗಿದವು. ರಾಮನ ಜಪ ಮಾಡುತ್ತ ಮಸೀದಿಯನ್ನು ಉರುಳಿಸಲಾಯಿತು. ಎಲ್ಲೆಡೆ ಕೇಸರಿ. ಕೈಯಲ್ಲಿ ಆಯುಧ ದೊಣ್ಣೆ. ಇದೆಲ್ಲ ನಿಜವಾದ ಹಿಂದೂಗಳ ಭಯಪಡುವಂತಾಯಿತು. ಧಾರ್ಮಿಕ ಭಯೋತ್ಪಾದನೆ ಅದು. ಕೇಸರಿ ಬಣ್ಣ ನೋಡಿದರೆ ಭಯ ಪಡುವ ಸ್ಥಿತಿ ಅದು.
ಬಾಬ್ರೀ ಮಸೀದಿ ಉರುಳಿದ ಮೇಲೆ ಈ ದೇಶ ತನ್ನ ಧರ್ಮ ನಿರಪೇಕ್ಷ ಗುಣಧರ್ಮ ಕಳೆದುಕೊಂಡು ಉಗ್ರ ಹಿಂದುತ್ವದ ಫಸಲು ಬೆಳೆಯಲು ಹದಗೊಂಡಿತು. ಈ ನೆಲದಲ್ಲೇ ತನ್ನ ರಾಜಕೀಯ ಬೆಳೆ ಬೆಳೆಯಲು ಸನ್ನದ್ಧಗೊಂಡಿದ್ದು ಬಿಜೆಪಿ. ಅಲ್ಪಸಂಖ್ಯಾತರನ್ನು ದೇಶ ವಿರೋಧಿಗಳು ಎಂದು ಪ್ರತಿಬಿಂಬಿಸುತ್ತ ಬಹುಸಂಖ್ಯಾತರನ್ನು ತನ್ನತ್ತ ಸೆಳೆದುಕೊಳ್ಳುವ ಅಪಾಯಕಾರಿ ರಾಜಕಾರಣವನ್ನು ಬಿಜೆಪಿ ಪ್ರಾರಂಭಿಸಿಯಾಗಿತ್ತು. ಆದರೆ ಇದರ ಅಪಾಯ ಕಾಂಗ್ರೆಸ್ ಪಕ್ಷಕ್ಕೆ ಅರಿವಾಗಲೇ ಇಲ್ಲ. ಜೊತೆಗೆ ರಾಮಜನ್ಮ ಭೂಮಿ ಬಾಬ್ರಿ ಮಸೀದಿ ವಿವಾದದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟತೆ ಇರಲಿಲ್ಲ. ಸೈಧ್ದಾಂತಿಕ ನಿಲುವು ತೆಗೆದುಕೊಳ್ಳುವುದಕ್ಕೂ ಆ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಇಂದೂ ಕೂಡ ಕಾಂಗ್ರೆಸ್ ಪಕ್ಷದ್ದು ಅದೇ ಸ್ಥಿತಿ. ಇದು ಮತ ರಾಜಕಾರಣದ ಪರಿಣಾಮ.
ಕಾಂಗ್ರೆಸ್ ಪಕ್ಷದ ಈ ಇಬ್ಬಂದಿ ನೀತಿಯಿಂದಾಗಿ ಬಿಜೆಪಿ ಉಗ್ರ ಹಿಂದುತ್ವದ ಪ್ರತಿಪಾದನೆ ಮಾಡುತ್ತ ಅವರ ಧಾರ್ಮಿಕ ಭಾವನೆಗಳ ಜೊತೆ ಆಟವಾಡುತ್ತ ತನ್ನ ರಾಜಕೀಯ್ ಬೇಳೆ ಬೆಯಿಸಕೊಳ್ಳತೊಡಗಿತು. ಅಲ್ಪಸಂಖ್ಯಾತರ ತುಷ್ಟೀಕರಣದ ಮಾತನಾಡುತ್ತ ಅವರಿಗೆ ಸಿಗಬೇಕಾದ ನ್ಯಾಯಬದ್ಧವಾದ ಹಕ್ಕನ್ನು ನಿರಾಕರಿಸುವ ರಾಜಕಾರಣವೂ ಪ್ರಾರಂಭವಾಯಿತು. ಆಗಲೇ ಬಿಜೆಪಿಯ ಅಜೆಂಡಾ ಸ್ಪಷ್ಟವಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಅಜೆಂಡಾವೇ ಇರಲಿಲ್ಲ. ಬಿಜೆಪಿ ಯಾರು ಒಪ್ಪಲೀ ಬಿಡಲಿ ಬಹುಸಂಖ್ಯಾತರನ್ನು ಒಗ್ಗೂಡಿಸಿ ರಾಜಕೀಯ ಲಾಭ ಪಡೆಯುವ ಸಿದ್ಧಾಂತವನ್ನು ಬಹಿರಂಗವಾಗಿ ಪ್ರತಿಪಾದಿಸತೊಡಗಿತು. ಆದರೆ ಕಾಂಗ್ರೆಸ್ ಪಕ್ಷ ಯಾವುದೇ ಸಿದ್ಧಾಂತ ಇಲ್ಲದ ಎಡಬಿಡಂಗಿ ರಾಜಕಾರಣಕ್ಕೆ ಕಟ್ಟು ಬಿತ್ತು. ಕಾಂಗ್ರೆಸ್ ಪಕ್ಷದ ಎಡಬಿಡಂಗಿ ಮತ್ತು ನೆಹರೂ ಕುಟುಂಬ ರಾಜಕಾರಣದ ಹೊಲಸಿನಲ್ಲಿ ಬಿಜೆಪಿ ಕೋಮುವಾದಿ ರಾಜಕಾರಣದ ಕಮಲ ಅರಳತೊಡಗಿತು. ಬಿಜೆಪಿ ರಾಮನ ಜೊತೆ ದೇಶ ಭಕ್ತಿ ಮತ್ತು ದೇಶದ ರಕ್ಷಣೆಯಂತಹ ಭಾವನಾತ್ಮಕ ವಿಚಾರಗಳನ್ನು ತನ್ನ ಅಜೆಂಡಾದ ಪ್ರಮುಖ ವಿಚಾರವನ್ನಾಗಿ ಸೇರಿಸಿಕೊಂಡಿತು.
೨೦೧೪ ರಲ್ಲಿ ಗುಜರಾಥ್ ರಾಜಕಾರಣವನ್ನು ದೇಶದ ಬಿಜೆಪಿ ರಾಜಕಾರಣವನ್ನಾಗಿ ಪರಿವರ್ತಿಸಿ ಅದನ್ನೆ ಪ್ರಮುಖ ಅಸ್ತ್ರವನ್ನಾಗಿ ಬಳಸತೊಡಗಿದ್ದು ಇನ್ನೊಂದು ಮಹತ್ತರ ಘಟ್ಟ. ರಾಜ್ಯ ರಾಜಕಾರಣದಿಂದ ದೇಶದ ರಾಜಕಾರಣಕ್ಕೆ ಆಮದಾದ ಮೋದಿ ಮತ್ತು ಅವರ ಜೊತೆಗಾರ ಅಮಿತ್ ಶಾ ಗುಜಾರಾಥ್ ರಾಜಕಾರಣದ ಮಾಧರಿಯನ್ನು ಅನುಷ್ಟಾನಗೊಳಿಸತೊಡಗಿದರು. ಅದು ಒಂದು ರೀತಿಯಲ್ಲಿ ಇಂದಿರಾ ರಾಜಕಾರಣದ ಮಾಧರಿಯೇ. ಈ ಮಾಧರಿಯಲ್ಲಿ ಇಂದಿರಾ ಗಾಂಧಿ ಬಡವರು, ಅಲ್ಪಸಂಖ್ಯಾತರ ಭಾವನೆಗಳನ್ನು ಬಳಸಿಕೊಂಡಿದ್ದರೆ ಮೋದಿ ಷಾ ಜೋಡಿ ಬಹುಸಂಖ್ಯಾತರನ್ನು ಬಳಸಿಕೊಂಡು ಸಂಘ ಪರಿವಾರದ ಮೂಲ ತತ್ವಕ್ಕೆ ಅನುಗುಣವಾಗಿ ಮತ ಬ್ಯಾಂಕ್ ರಾಜಕಾರಣವನ್ನು ಪ್ರಾರಂಭಿಸಿತು. ಈ ಮಾಧರಿಯಲ್ಲಿ ಅಭಿವೃದ್ಧಿಯ ಮುಖವಾಡ ಪ್ರಮುಖವಾಗಿತ್ತು. ಅಭಿವೃದ್ಧಿಯ ಬಗ್ಗೆ ಮಾತನಾಡುತ್ತ ದಲಿತರು ಮತ್ತು ಹಿಂದುಳಿದ ವರ್ಗದ ಯುವಕರನ್ನು ಹಿಂದುತ್ವದ ಅಜೆಂಡಾದ ಅನುಷ್ಟಾನಕ್ಕೆ ಬಳಸಿಕೊಳ್ಳುವ ಹುನ್ನಾರ ಅದಾಗಿತ್ತು. ಇದೌ ೨೦೧೪ ರ ಚುನಾವಣೆಯಲ್ಲಿ ಬಿಜೆಪಿಗೆ ಫಲ ನೀಡಿತು.
ಈಗ ೨೦೧೯ ರಲ್ಲಿ ಬಿಜೆಪಿ ಹೊಸ ರೂಪ ತಾಳಿದೆ. ಅಭಿವೃದ್ಧಿಯ ಮಾತು ೫ ವರ್ಷಗಳ ವಿಫಲ ಆಡಳಿತದಿಂದಾಗಿ ಮತ ನೀಡುವುದಿಲ್ಲ ಎಂದು ಅರಿತುಕೊಂಡ ಬಿಜೆಪಿ ನಾಯಕತ್ವ ದೇಶ ಭಕ್ತಿ ಮತ್ತು ದೇಶದ ರಕ್ಷಣೆಯ ವಿಚಾರವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸುತ್ತಿದೆ. ಭಾರತೀಯರಲ್ಲಿ ಇರಬಹುದಾದ ಮುಸ್ಲೀಂ ಮತ್ತು ಪಾಕಿಸ್ಥಾನ ವಿರೋಧವನ್ನು ಬಳಸಿಕೊಂಡು ರಾಜಕಾರಣ ಮಾಡುತ್ತಿದೆ. ಸೈನ್ಯ ಮತ್ತು ದೇಶ ಭಕ್ತಿ ಎಂದರೆ ಮೋದಿ ಎಂದು ಸಮೀಕರಿಸಿ ಮೋದಿ ಅವರ ವೈಫಲ್ಯವನ್ನು ಮುಚ್ಚಿ ಹಾಕುವ ಯತ್ನ ನಡೆಸುತ್ತಿದೆ. ಈ ಯತ್ನದಲ್ಲಿ ಬಿಜೆಪಿ ಯಶಸ್ವಿಯಾದರೂ ಆಗಬಹುದುಆಅದರೆ ಕೊನೆಗೆ ಅನ್ನಿಸುವುದು ಕಾಂಗ್ರೆಸ್ ಬದಲಾಗಬೇಕು. ಅದು ದೇಶದ ದೃಷ್ಟಿಯಿಂದ ಬಹುಮುಖ್ಯ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಈ ಅರಿವು ಇದ್ದಂತಿಲ್ಲ. ಇದು ದೇಶದ ಅತಿ ದೊಡ್ಡ ದುರಂತ.


No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...