Saturday, October 29, 2022

ಕವಲು ದಾರಿಯಲ್ಲಿ ಪತ್ರಿಕೋದ್ಯಮ. ಮಾಧ್ಯಮಗಳು ಪ್ರಾಮಾಣಿಕತೆಯನ್ನು ಸಾಬೀತುಪಡಿಸಬೇಕಾಗಿದೆ,,,


 ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುದ್ದಿ.. ಇದು ಅಧಿಕಾರಸ್ಥರು ಮಾಧ್ಯಮ ಪ್ರತಿನಿಧಿಗಳಿಗೆ ದೀಪಾವಳಿ ಸಿಹಿ ಕೊಟ್ಟಿದ್ದು.. ಕೇವಲ ಸಿಹಿ ಕೊಟ್ಟಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ದೀಪಾವಳಿ ಸಂದರ್ಭದಲ್ಲಿ ಹೀಗಿ ಸಿಹಿ ಕೊಟ್ಟಿದ್ದು ಹೊಸದಲ್ಲ.. ಆದರೆ ಸಿಹಿಯ ಜೊತೆಗೆ ಲಕ್ಷಾಂತರ ರೂಪಾಯಿ ನಗದು ಕೊಟ್ಟಿದ್ದಾರೆ ಎಂಬುದು ಹೊಸದು.. ಇದೇ ವಿವಾದಕ್ಕೆ ಕಾರಣವಾಯಿತು..ಕೆಲವು ಪತ್ರಿಕೆಗಳ ಸಂಪಾದಕರು ಈ ಕೊಡುಗೆಯನ್ನು ನಿರಾಕರಿಸಿದರು. ಹೀಗೆ ನಿರಾಕರಿಸಿದವರ ಹೆಸರು ಬಹಿರ್ಂಗವಾಯಿತು. ಆದರೆ ಇಯರು ಯಾರು ಈ ನಗದು ಹಣವನ್ನು ತೆಗೆದುಕೊಂಡರು ಎಂಬ ವಿವರ ಪ್ರಕಟವಾಗಲಿಲ್ಲ.

ಇದರೊಂದಿಗೆ ಮಾಧ್ಯಮದ ಪ್ರಾಮಾಣಿಕತೆ ಚರ್ಚೆಗೆ ಗ್ರಾಸವನ್ನು ಒದಗಿಸಿತು,, ಸಾಮಾಜಿಕ ಜಾಲ ತಾಣಗಳಲ್ಲಿ ಜನ ಮಾಧ್ಯಮವನ್ನು ಉಗಿದು ಉಪ್ಪಿನ ಕಾಯಿ ಹಾಕಿದರು.. ಆಡಳಿತಾರೂಢ ಪಕ್ಷ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದಂತೆ ಮಾಧ್ಯಮವನ್ನು ಖರೀದಿ ಮಾಡುತ್ತಿದೆ ಎಂಬ ಆರೋಪವೂ ಕೇಳಿ ಬಂತು,, ಮಾಧ್ಯಮದ ಮೇಲೆ ಇಂತಹ ದಾಳಿ ನಡೆಯುತ್ತಿರುವಾಗಲೂ ಮಾಧ್ಯಮವನ್ನು ಪ್ರತಿನಿಧಿಸುವ ಸಂಘಟನೆಗಳು ತುಟಿ ಪಿಟಕ್ ಎನ್ನಲಿಲ್ಲ. ಹಾಗೆ ಬಿಜೆಪಿಯಿಂದಲಾಗಲೀ ಮುಖ್ಯಮಂತ್ರಿ ಕಚೇರಿಯಿಂದಾಗಲಿ ಯಾವುದೇ ಸ್ಪಷ್ಟೀಕರಣ ಬರಲಿಲ್ಲ. ಯಾರೂ ಈ ಘಟನೆಯನ್ನು ಖಂಡಿಸಲಿಲ್ಲ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಗ್ಗೆ ಹೇಳಿಕೆ ನೀಡುತ್ತಾರೆ ಎಂದು ನಾನು ಕಾಯುತ್ತಿದ್ದೇನೆ. ನನ್ನ ಕಚೇರಿ ಈ ಕೆಲಸ ಮಾಡಿದ್ದು ತಪ್ಪು ಎಂದು ಹೇಳುತ್ತಾರೆ  ಎಂಬುದು ನನ್ನ ನಿರೀಕ್ಷೆ..ಆದರೆ ಮಾಹಿತಿಗಳ ಪ್ರಕಾರ ನಗುದು ಬಹುಮಾನವನ್ನು ತಿರಸ್ಕರಿಸಿದ ಪತ್ರಿಕಾ ಸಂಪಾದಕರಿಗೆ ಫೋನ್ ಮಾಡಿ ಸಾರಿ ಕೇಳಿದರು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾರೂ ಏನೂ ಹೇಳಲಿಲ್ಲ.

ಮಾಧ್ಯಮ ಕ್ಷೇತ್ರ ಮತ್ತು ರಾಜಕೀಯ ವಲಯದ ನಿಗೂಢ ಮೌನ ನನಗೆ ಆಶ್ಚರ್ಯವನ್ನು ಉಂಟು ಮಾಡಿದೆ.. ಜೊತೆಗೆ ಹಲವು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಮೂಡಿದೆ..ಈ ನಗುದು ಬಹುಮಾನ ನೀಡಿರುವುದರಲ್ಲಿ ಯಾವ ವಿಶೇಷವೂ ಇಲ್ಲ ಎಂಬುದು ಈ ಮೌನದ ಹಿಂದಿರುವ ಕಾರಣವಾಗಿರಬಹುದೆ ? ಕೆಲವು ದಿನ ಚರ್ಚೆ ನಡೆಯುತ್ತಾರೆ, ನಂತರ ಎಲ್ಲರೂ ಸುಮ್ಮನಾಗುತ್ತಾರೆ ಎಂಬುದೂ ಈ ನಿಗೂಢ ಮೌನದ ಹಿಂದಿನ ಗುಟ್ಟಾಗಿರಬಹುದೆ ?

ಇರಬಹುದು,, ಆದರೆ ಮಾಧ್ಯಮ ಮತ್ತು ರಾಜಕೀಯ ವ್ಯವಸ್ಥೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು..ಇದು ಸಾಮಾನ್ಯ ಇದು ನಡೆಯುತ್ತಲೇ ಬಂದಿದೆ ನಡೆಯುತ್ತಲೇ ಇರುತ್ತದೆ ಎಂಬ ಸಿನಿಕತ ಒಳ್ಳೆಯದಲ್ಲ..

ಬೊಮ್ಮಾಯಿಯವರಿಗೆ ಹಬ್ಬದ ಸಂದರ್ಭದಲ್ಲಿ ಸಿಹಿ ಕೊಡಬೇಕು ಎಂದು ಅನ್ನಿಸಿದರೆ ಅದು ತಪ್ಪಲ್ಲ..ಸಿಹಿ ಹಂಚುವುದು ಸಂಪ್ರದಾಯ. ಎಲ್ಲ ಹಬ್ಬಗಳ ಸಂದರ್ಭದಲ್ಲೂ ಸಿಹಿ ಹಂಚಬಹುದು. ಆದರೆ ಈ ನಿಲುವಿನ ಹಿಂದೆಯೂ ಪ್ರಶ್ನೆಗಳಿವೆ...

ಸಾಧಾರಣವಾಗಿ ಊರಿಗೆಲ್ಲ ಸಿಹಿ ಹಂಚುವುದು ಸಾಧ್ಯವಿಲ್ಲ. ಯಾರೇ ಆಗಲಿ ತಮಗೆ ಬೇಕಾದವರಿಗೆ ಆಪ್ತರಾದವರೆ ಸಿಹಿ ಹಂಚುವುದು ಸಾಮಾನ್ಯ..ಹಾಗಿದ್ದರೆ ಪತ್ರಕರ್ತರು ರಾಜಕಾರಣಿಗಳಿಗೆ ಬೇಕಾದವರೂ ಆಪ್ತರು ಆಗಲು ಸಾಧ್ಯವಿಲ್ಲ.. ಮಾಧ್ಯಮ ಪ್ರತಿ ಪಕ್ಷವಾಗಿ ಕೆಲಸ ಮಾಡಬೇಕು ಎನ್ನುವುದು ಪತ್ರಿಕೋದ್ಯಮದ ಧರ್ಮ..ಈ ಧರ್ಮವನ್ನು ಮಾಧ್ಯಮ ಪಾಲಿಸಿದರೆ ಆಪ್ತರಾಗುವುದು ಬೇಕಾದವರೂ ಆಗುವುದು ಸಾಧ್ಯವೇ ಇಲ್ಲ. ಜೊತೆಗೆ ರಾಜಕಾರಣಿಗಳಿಗೆ ಮಾಧ್ಯಮಗಳ ಮೇಲೆ ಭಯ ಮಿಶ್ರಿತವಾದ ಗೌರವ ಇರಬೇಕು.. ಆದರೆ ಇಲ್ಲಿ ಮಾಧ್ಯಮಗಳ ಬಗ್ಗೆ ಬೊಮ್ಮಾಯಿಯವರಿಗೆ ಮತ್ತು ಅವರ ಸರ್ಕಾರಕ್ಕೆ ಭಯ ಮಿಶ್ರಿತ ಗೌರವ ಇಲ್ಲ. ಅವರಿಗೆ ಮಾಧ್ಯಮ ಅವರ ಆಪ್ತ ವಲಯಕ್ಕೆ ಸೇರಿದೆ ಎಂಬುದು ಅವರ ವರ್ತನೆ ತೋರಿಸಿಕೊಡುತ್ತದೆ.. ಈ ಆಪ್ತತೆ ಬರುವುದು ನೀವು ಅವರ ಪರವಾಗಿ ಕೆಲಸ ಮಾಡಿದಾಗ ಮಾತ್ರ ಸಾಧ್ಯ,,ಹೀಗಾಗಿ ಮಾಧ್ಯಮ ಪ್ರತಿನಿಧಿಗಳಿಗೆ ನಗದು ಬಹುಮಾನ ಕೂಡುವಷ್ಟು ಸ್ವಾತಂತ್ರ್ಯವನ್ನು ಮುಖ್ಯಮಂತ್ರಿಗಳ ಕಚೇರಿ ತೆಗೆದುಕೊಂಡಿದೆ..ಹೀಗೆ ಸ್ವಾತಂತ್ರ್ಯ ತೆಗೆದುಕೊಂಡು ನಗದು ಬಹುಮಾನ ಕೊಡುವುದಕ್ಕೆ ಮೊದಲು ಇದು  ಮುಖ್ಯಮಂತ್ರಿಗಳ ಗಮನಕ್ಕೆ ಬಂದಿಲ್ಲ ಎಂಬುದನ್ನು ನಂಬುವುದು ಕಷ್ಟ. ಮುಖ್ಯಮಂತ್ರಿಗಳ ಗಮನಕ್ಕೆ ತರದೇ ಅವರ ಸಿಬ್ಬಂದಿಗಳು ಮಾಧ್ಯಮಗಳಿಗೆ ನಗದು ಬಹುಮಾನ ನೀಡುವ ತೀರ್ಮಾನ ತೆಗೆದುಕೊಂಡಿದ್ದರೆ ತಮ್ಮ ಸಿಬ್ಬಂದಿಗಳ ಮೇಲೆ ಮುಖ್ಯಮಂತ್ರಿಗಳಿಗೆ ನಿಯಂತ್ರಣ ಇಲ್ಲ ಎಂದುಕೊಳ್ಳಬೇಕಾಗುತ್ತದೆ.. ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಗದು ಹಂಚುವ ಕೆಲಸ ಮಾಡಿದ್ದರೆ ಇದಕ್ಕೆ ಮುಖ್ಯಮಂತ್ರಿಗಳೇ ಸಂಪೂರ್ಣ ಜವಾಬ್ದಾರರಾಗಬೇಕಾಗುತ್ತದೆ,

ಇನ್ನು ಮಾಧ್ಯಮಗಳ ವಿಚಾರಕ್ಕೆ ಬರೋಣ. ಕೆಲವು ಪತ್ರಿಕಾ ಸಂಪಾದಕರು ಈ ನಗದು ಬಹುಮಾನವನ್ನು ತಿರಸ್ಕರಿಸುವ ಮೂಲಕ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿದಿದ್ದಾರೆ. ಒಂದೊಮ್ಮೆ ಇವರೂ ಸಹ ಸುಮ್ಮನಿದ್ದು ಬಿಟ್ಟಿದ್ದರೆ ? ಸತ್ಯ ಹೊರಕ್ಕೆ ಬರುತ್ತಲೇ ಇರುತ್ತಿರಲಿಲ್ಲ.. ಇದಕ್ಕಾಗಿ ನಗದು ಬಹುಮಾನವನ್ನು ತಿರಸ್ಕರಿಸಿದ ಸಂಪಾದಕರನ್ನು ಶ್ಲಾಘಿಸಲೇ ಬೇಕು..

ಇವತ್ತು ಮಾಧ್ಯಮ ಸ್ವತಂತ್ರವಾಗಿಲ್ಲ.. ಪ್ರತಿ ಪಕ್ಷವಾಗಿ ಕೆಲಸ ಮಾಡುವುದಕ್ಕೆ ಬದಲಾಗಿ ಬಹುಫರಾಕ್ ಪತ್ರಿಕೋದ್ಯಮ ವಿಜೃಂಭಿಸುತ್ತಿದೆ.. ಮಾಧ್ಯಮದಲ್ಲಿ ಭಟ್ಟಿಂಗಿ ಪತ್ರಿಕೋದ್ಯಮಿಗಳು ಹೆಚ್ಚುತ್ತಿದ್ದಾರೆ..ಬಿಜೆಪಿ ಮತ್ತು ಸಂಘಪರಿವಾರದ ಎಜೆಂಡಾವನ್ನು ಅನುಷ್ಠಾನಕ್ಕೆ ತರುವ ಕಾಯಕದಲ್ಲಿ ಮಾಧ್ಯಮ ನಿರತವಾಗಿದೆ. ಇದಕ್ಕಾಗಿ ಕೇವಲ ಪತ್ರಿಕೋದ್ಯಮಿಗಳನ್ನು ಮಾತ್ರ ದೂಷಿಸಿ ಪ್ರಯೋಜನ ಇಲ್ಲ..ಯಾವುದೇ ಬದ್ಧತೆ ಇಲ್ಲದ ಮಾಧ್ಯಮಗಳ ಮಾಲೀಕರೂ ಇದರ ಹೊಣೆ ಹೊರಬೇಕು..ಈ ಸಂದರ್ಭದಲ್ಲಿ ಪ್ರಜಾವಾಣಿ ಮಾಲಿಕರನ್ನು ನಾವು ನೆನಪು ಮಾಡಿಕೊಳ್ಳಬೇಕು..ಸಾಮಾಜಿಕ ಬದ್ಧತೆಯ ಪತ್ರಿಕೋದ್ಯಮಕ್ಕೆ ಬುನಾದಿ ಹಾಕಿದವರು ಈ ಪತ್ರಿಕೆಯ ಮಾಲಿಕರು.. ಕರ್ನಾಟಕದ ಎಲ್ಲ ಜನಪರ ಮನುಷ್ಯಪರ ಹೋರಾಟಗಳಿಗೆ ಬೆಂಬಲ ನೀಡುತ್ತಲೇ ಬಂದವರು. ಹೀಗಾಗಿ ಪ್ರಜಾವಣಿ ಉಳಿದ ಪತ್ರಿಕೆ ಮತ್ತು ಪತ್ರಕರ್ತರಷ್ಟು ಕೆಟ್ಟು ಹೋಗಿಲ್ಲ. ಇನ್ನೂ ಕೂಡ ಸಾಮಾಜಿಕ ಬದ್ಧತೆ ಇರುವುದು ಪ್ರಜಾವಾಣಿ ಮಾತ್ರ..


No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...