Saturday, July 8, 2023

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?




ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ಹಲವು ರೀತಿಯ ವಿಮರ್ಶೆಗಳು ಬಂದಿವೆ. ಈ ಒಣ್ದು ವಾರದ ಅಧಿವೇಶನದಲ್ಲಿ ಹೇಳುವಂತಹ ಮಹತ್ತರ ಚರ್ಚೆ ಸದನದಲ್ಲಿ ನಡೆದಿಲ್ಲ. ಗ್ಯಾರಂಟಿ ಯೋಜನೆಗೆ ಸಂಬಂಧಿಸಿದಂತೆ ಪ್ರತಿ ಪಕ್ಷಗಳು ಸಲ್ಲಿಸಿದ್ದ ನಿಲುವಳಿ ಸೂಚಾನೆ ಕುರಿತು ಸದನದಲ್ಲಿ ಗದ್ದಲ ನಡೆಯಿತು. ಎಲ್ಲ ಅಧಿಕೃತ ಕಲಾಪವನ್ನು ಬದಿಗೊತ್ತಿ ಈ ನಿಲುವಳಿ ಸೂಚನೆಯ ಮೇಲಿನ ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕು ಎಂಬು ಪ್ರತಿ ಪಕ್ಷಗಳ ಒತ್ತಾಯವಾಗಿತ್ತು.. ಸ್ಪೀಕರ್ ಖಾದರ್ ಈ ಒತ್ತಾಯಕ್ಕೆ ಮಣಿಯಲಿಲ್ಲ. ಇದಕ್ಕಾಗಿ ಸಭಾಧ್ಯಕ್ಷರ ಮುಂದಿನ  ಸ್ಥಳದಲ್ಲಿ ಬಿಜೆಪಿ ಸದಸ್ಯರು ಧರಣಿ ನಡೆಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಹಾಲಿ ಮುಖ್ಯಮಂತ್ರಿ ಸಿದರಾಮಯ್ಯ ನಡುವೆ ನಡೆದ ಜಗಳದಲ್ಲಿ ಏಕ ವಚನ ಪ್ರಯೋಗ ಕೂಡ ಆಯಿತು..

ಇದರ ನಡುವೆ ಬಹುಮುಖ್ಯವಾದ ಪ್ರಶ್ನೆ ಎಂದರೆ ಪ್ರತಿ ಪಕ್ಷದ ನಾಯಕ ಆಯ್ಕೆ,  ಈ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಪ್ರತಿ ಪಕ್ಷದ ನಾಯಕರೇ ಇಲ್ಲದ ಸ್ಥಿತಿ. ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಇಂತಹ ಸಂದರ್ಭ ಬಂದ ಬೇರೆ ಉದಾಹರಣೆ ಇದ್ದಂತಿಲ್ಲ.. ಕಳೆದ ಒಂದು ತಿಂಗಳ ಸತತ ಪ್ರಯತ್ನದ ನಂತರವೂ ಬಿಜೆಪಿ ಪ್ರತಿ ಪಕ್ಷದ ನಾಯಕರನ್ನು ನೇಮಿಸಿಲ್ಲ.. ಹಲವು ಹೆಸರುಗಳು ತೇಲಿ ಬಂದರೂ ಅದೆಲ್ಲ ಗಾಳಿ ಸುದ್ದಿಯಾಗಿಯೇ ಉಳಿದಿದೆ.. ಮೊದಲು ಹಲವು ಹೆಸರುಗಳು ಕೇಳಿ ಬಂದರೂ ಕೊನೆಗೆ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಆದರೆ ಬಿಜೆಪಿಯಲ್ಲಿರುವ ಹಲವು ಗುಂಪುಗಳು ತಮ್ಮದೇ ಆದ ಒತ್ತಡ ಹೇರುತ್ತಿರುವುದರಿಂದ ಬಿಜೆಪಿ ವರಿಷ್ಠರು ಕೈಕಟ್ಟಿ ಕುಳಿತಿದ್ದಾರೆ. ನಮಗೇನು ಅರ್ಜೆಂಟ್ ಇಲ್ಲ ಎಂಬ ಸಂದೇಶವನ್ನು ರಾಜ್ಯ ಬಿಜೆಪಿ ನಾಯಕರಿಗೆ ನೀಡುತ್ತಿದ್ದಾರೆ, 

ಆದರೆ ಜನತಂತ್ರ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಕ್ಕೆ ಇರುವಷ್ಟೇ ಮಹತ್ವ ಪ್ರತಿಪಕ್ಷಗಳಿಗೂ ಇದೆ. ಹಾಗೆ ಪ್ರತಿ ಪಕ್ಷದ ನಾಯಕನ ಸ್ಥಾನ. ಸರ್ಕಾರವನ್ನು ಪ್ರಶ್ನಿಸುವ, ತಪ್ಪುಗಳನ್ನು ಎತ್ತಿ ತೂರಿಸಿ ಸರಿ ದಾರಿಗೆ ತರುವ ಹೊಣೆಗಾರಿಕೆ ಪ್ರತಿ ಪಕ್ಷದ್ದು ಆಗಿರುವುದರಿಂದ ಪ್ರತಿ ಪಕ್ಷದ ನಾಯಕ ಇದರ ನಾಯಕತ್ವ ಒಹಿಸಬೇಕು. ಹೀಗಾಗಿಯೇ ಪ್ರತಿ ಪಕ್ಷದ ನಾಯಕರಿಗೆ ಸಚಿವರ ಸ್ಥಾನ ಮಾನ ಒದಗಿಸಲಾಗಿದೆ. ಸಚಿವರಿಗೆ ಸಿಗುವ ಸರ್ಕಾರಿ ಸೌಲಭ್ಯ ಪ್ರತಿ ಪಕ್ಷದ ನಾಯಕರಿಗೂ ದೊರಕುತ್ತಿದೆ. ಐರೋಪ್ಯ ದೇಶಗಳ ಜನತಂತ್ರ ವ್ಯವಸ್ಥ್ಎ ಹೇಗಿದೆ ಎಂದರೆ ಅಲ್ಲಿ ಶಾಡೋ ಕ್ಯಾಬಿನೆಟ್ ಕೂಡ ಇರುತ್ತದೆ. ಶ್ಯಾಡೋ ಕ್ಯಾಬಿನೆಟ್ ಅಂದರೆ ಸಚಿವ ಸಂಪುಟದ ನೆರಳೋ ನೆರಳಿನ ಸಂಪುಟ ಎಂದು ಕರೆಯಬಹುದೋ ಗೊತ್ತಿಲ್ಲ.. ಸಚಿವ ಸಂಪುಟ ಇದ್ದ ಹಾಗೆ ಪ್ರತಿ ಪಕ್ಷಗಳು ಒಂದು ಸಂಪುಟ ರಚಿಸಿಕೊಂಡಿರುತ್ತಾರೆ. ಆಯಾ ಇಲಾಖೆಗಳ ಜ್ನಾನ ತಿಳುವಳಿಕೆ ಎಲ್ಲವೂ ಪರಿಗಣನೆಗೆ ಬಂದಿರುತ್ತದೆ. ಜೊತೆಗೆ ಇಲಾಖೆಗಳ ಕುರಿತು ಜ್ನಾನ ತಿಳುವಳಿಕೆ ಎಲ್ಲವನ್ನೂ ಇವರು ಪಡೆಸಿರುತ್ತಾರೆ. ಪ್ರತಿ ಪಕ್ಷ ಅಧಿಕಾರಕ್ಕೆ ಬಂದಾಗ ಇವರೆಲ್ಲ ಆಯಾ ಇಲಾಖೆಯನ್ನು ನಿರ್ವಹಿಸುವುದು ಸುಲಭವಾಗುತ್ತದೆ. ಆದರೆ ನಮ್ಮ ಯೋಗ್ಯತೆಗೆ  ಪ್ರತಿ ಪಕ್ಷದ ನಾಯಕನನ್ನು ಆರಿಸುವುದಕ್ಕೂ ನಮಗೆ ರಾಜಕೀಯ ಅಡ್ಡಿಯಾಗುತ್ತದೆ. ಪ್ರತಿ ಪಕ್ಷ್ಜದ ನಾಯಕನ ಆಯ್ಕೆಗೆ ಹೇಗೆ ರಾಜಕೀಯ ಕಾರಣಗಳು ಇರುತ್ತವೆಯೋ, ಹಾಗೆ ನೇಮಿಸದಿರುವುದಕ್ಕೂ ರಾಜಕೀಯ ಕಾರಣಗಳಿರುತ್ತದೆ.

ರಾಜ್ಯದಲ್ಲಿ ಪ್ರತಿ ಪಕ್ಷದ ನಾಯಕನ ನೇಮಕವಾಗದಿರುವುದಕ್ಕೆ ಕೂಡ ರಾಜಕೀಯ ಕಾರಣಗಳು ಇರಬೇಕು. ಇದು ಪರಿಪಕ್ವ ಜನತಂತ್ರದ ಲಕ್ಷಣ ಅಲ್ಲ.. ನಮ್ಮದು ಪರಿಪಕ್ವ ಜನತಂತ್ರ ಅಲ್ಲ ಎಂದು ಒಪ್ಪಿಕೊಳ್ಳುವುದಕ್ಕೂ ನಮಗೆ ಹಿಂಜರಿಕೆ ಬೇಕಾಗಿಲ್ಲ.

ಪ್ರತಿ ಪಕ್ಷದ ನಾಯಕನ ಆಯ್ಕೆ ಮಾಡಬೇಕಾದ ಬಿಜೆಪಿಯಲ್ಲಿ ಹತಾಶೆಯ ಕಾರ್ಮೋಡ ಕವಿದಿದೆ. ಸೋಲಿನ ಆಘಾತವನ್ನು ಅವರಿಗೆ ತಾಳಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೋಲಿನ ಹೊಣೆಗಾರಿಕೆಯನ್ನು ಒಬ್ಬರ ಮೇಲೆ ಒಬ್ಬರು ಹಾಕುವ ಕ್ಶುಲ್ಲಕ ರಾಜಕಾರಣ ನಡೆಯುತ್ತಿದೆ.  ಹೊಂದಾಣಿಕೆ ರಾಜಕಾರಣದ ಆರೋಫವೂ ಕೇಳಿಬಂದಿದೆ. ಬಿ. ಎಲ್ ಸಂತೋಷ ರಾಜಯ ಬಿಜೆಪಿ ರಾಜಕಾರಣವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ತಮ್ಮ ಕಾಲಾಳುಗಳನ್ನು ಅಖಾಡಾಕ್ಕೆ ಇಳಿಸಿದ್ದಾರೆ. ಸಿ. ಟಿ. ರವಿ, ಬಸನಗೌಡ ಯತ್ನಾಳ್ ಮೊದಲಾದವರು ಒಂದೆಡೆ ಯಡೀಯೂರಪ್ಪನವರನ್ನು ಇನ್ನೊಂದೆಡೆ ಬಸವರಾಜ್ ಬೊಮ್ಮಾಯಿ ಅವರನ್ನು ಟಾರ್ಗೆಟ್ ಮಾಡಿ ಹೇಳಿಕೆ ನೀಡತೊಡಗಿದ್ದಾರೆ, ಇದು ಬಿಜೆಪಿಯ ಆಂತರಿಕ ಬಿಕ್ಕಟ್ಟು ಉಲ್ಬಣಗೊಂಡಿರುವುದರ ಲಕ್ಷಣ, ಇವರಿಗೆ ಬೆನ್ನೆಲುಬಾಗಿ ಸಂಘ ಪರಿವಾರವೂ ಇದೆ ಎನ್ನುವುದಕ್ಕೆ ಯಾವ ಸಾಕ್ಷ್ಯವೂ ಬೇಕಾಗಿಲ್ಲ..

ಬಿಜೆಪಿ ವರಿಷ್ಠರಾದ ಪ್ರಧಾನಿ ಮತ್ತು ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಕರ್ನಾಟಕ ರಾಜಕಾರಣದ ಒಳ ಸುಳಿಗಳು ಅರ್ಥವಾಗತೊಡಗಿದಂತಿದೆ. ಯಡೀಯೂರಪ್ಪ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬಿಜೆಪಿಯನ್ನು ಕಟ್ಟುವುದು ಸಾಧ್ಯವಿಲ್ಲ ಎಂಬುದು ಅರಿವೆಗೆ ಬಂದಂತಿದೆ. ಹೀಗಾಗಿ ಕಳೆದ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿ ಹೈಕಮಾಂಡ್ ಮಾತುಕತೆ ನಡೆಸಿತು.. ಒಂದಾನೊಂದು ಕಾಲದಲ್ಲಿ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿದ್ದ ಶೋಭಾ ಕರಂದ್ಲಾಜೆ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿಸುವ ಕುರಿತು ಚರ್ಚೆ ನಡೆಯಿತು ಎಂಬುದು ಮಾಹಿತಿ.ಇಂತಹ ಸ್ಥಿತಿಯಲ್ಲಿ ಬಿಜೆಪಿ ಈ ಬಿಕ್ಕಟ್ಟಿನಿಂದ ಹೇಗೆ ಹೊರ ಬರುತ್ತದೆ ಎಂಬುದನ್ನು ನೋಡಬೇಕು. ಇದರ ಮೇಲೆ ರಾಜ್ಯ ಬಿಜೆಪಿಯ ಭವಿಶ್ಯ ನಿಂತಿದೆ ಎಂಬುದು ಸತ್ಯ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...